Monthly Archives: July 2012

ಮಾಧ್ಯಮಗಳು ಮತ್ತು ಅವತಾರಗಳು


– ಡಾ.ಎನ್.ಜಗದೀಶ್ ಕೊಪ್ಪ


[ಕಳೆದ ನವಂಬರ್ ನಲ್ಲಿ ಮಂಡ್ಯ ನಗರದಲ್ಲಿ ಹಾಸ್ಯ ಸಾಹಿತಿ, ಲಂಕೇಶರ ಒಡನಾಡಿ, ಪ್ರಗತಿಪರ ಚಿಂತಕ ಪ್ರೊ. ಹೆಚ್.ಎಲ್.ಕೆ. ಯವರ 73ನೇ ವರ್ಷದ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ಎರಡು ದಿನಗಳ ಕಾಲ ನಡೆದ “ಕರ್ನಾಟಕ ಮುನ್ನಡೆ” ವಿಚಾರ ಸಂಕಿರಣದಲ್ಲಿ ಮಾಡಿದ ಮಾಧ್ಯಮ ಗೋಷ್ಟಿಯ ಅಧ್ಯಕ್ಷ ಭಾಷಣದ ಲಿಖಿತ ರೂಪ.]

ಎಲ್ಲರಿಗೂ ನಮಸ್ಕಾರ. ಗೆಳೆಯರೇ ನಾನು ಇಲ್ಲಿಗೆ ಮಾತನಾಡಲು ಬಂದಿರಲಿಲ್ಲ, ಪ್ರೊ. ಹೆಚ್.ಎಲ್.ಕೆ. ಅವರ ಮೇಲಿನ ಗೌರವದಿಂದ ದೂರದ ಧಾರವಾಡದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತ್ರ ಬಂದಿದ್ದೆ. ನನ್ನ ಬರೆವಣಿಗೆ ಮತ್ತು ಚಿಂತನೆಯ ಹಿಂದೆ ಈ ಮಂಡ್ಯ ಜಿಲ್ಲೆಯ ಎರಡು ದೈತ್ಯ ಪ್ರತಿಭೆಗಳ ಪ್ರಭಾವವಿದೆ. ಅವರಿಂದ ಪ್ರೇರಿತನಾಗಿ, ಅವರ ಜೊತೆ ಒಡನಾಡಿ ಬೆಳೆದವನು ನಾನು. ಅಷ್ಟೇ ಅಲ್ಲ, ನನ್ನನ್ನು ಅಕ್ಷರ ಲೋಕಕ್ಕೆ ಕೈಹಿಡಿದು ಕರೆತಂದು ಇಲ್ಲಿಯವರೆಗೆ ಬೆಳೆಸಿದ ಕೀರ್ತಿ ಈ ನೆಲದ ಡಾ. ಬೆಸಗರಹಳ್ಳಿ ರಾಮಣ್ಣ ಮತ್ತು ಪ್ರೊ. ಹೆಚ್.ಎಲ್. ಕೇಶವಮೂರ್ತಿಯವರಿಗೆ ಸಲ್ಲಬೇಕು. ಹಾಗಾಗಿ ಈ ಇಬ್ಬರೂ ಮಹನೀಯರು ನನ್ನ ಪಾಲಿಗೆ ಗುರುಗಳು, ಮಾರ್ಗದರ್ಶಿಗಳು, ಗೆಳೆಯರೂ ಎಲ್ಲರೂ ಆಗಿದ್ದಾರೆ. ಜೊತೆಗೆ, ಈಗಲೂ ನನ್ನ ಆತ್ಮ ಸಾಕ್ಷಿಯ ಪ್ರಜ್ಙೆಯಂತೆ ಇದ್ದಾರೆ.

ಈ ಮಾಧ್ಯಮ ಗೋಷ್ಠಿಗೆ ನಾನು ಸಿದ್ಧನಾಗಿ ಬಂದವನಲ್ಲ, ಹೆಚ್.ಎಲ್.ಕೆ.ಯವರ ಮಾತಿಗೆ ಮಣಿದು ಈ ಗೋಷ್ಠಿಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಈಗ ನಿಮ್ಮೆದುರು ನನ್ನ ಪತ್ರಕರ್ತ ಜೀವನದ ಕೆಲವು ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಮಾತು ಕಠಿಣವಾಗಿದ್ದರೆ, ಕ್ಷಮೆಯಿರಲಿ. ಬದುಕಿನುದ್ದಕ್ಕೂ ಬೆಂಕಿಯ ಕೆಂಡ ನುಂಗಿದವನಂತೆ ಮಾತನಾಡವುದು, ಬರೆಯುವುದು, ನನ್ನ ಶೈಲಿ ಮತ್ತು ದೌರ್ಬಲ್ಯ. ತುಟಿಗೆ ತುಪ್ಪ ಹಚ್ಚಿಕೊಂಡು ಮಾತನಾಡುವುದು ನನ್ನ ಜಾಯಮಾನವಲ್ಲ. ಕೆಲವು ನನ್ನ ಕೆಲವು ಇತ್ತೀಚೆಗಿನ ಅನುಭವಗಳೊಂದಿಗೆ ಮಾತನ್ನು ಆರಂಭಿಸುತ್ತೇನೆ.

ಎರಡು ವರ್ಷದ ಹಿಂದೆ ಮೈಸೂರಿನ ಜೆ.ಎಸ್.ಎಸ್. ಮಠದ ಕೆಲವು ಪದಾಧಿಕಾರಿಗಳು ಹುಬ್ಬಳ್ಳಿ ನಗರಕ್ಕೆ ಬಂದು, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪ್ರಸ್ತಾಪ ಮಾಡಿದರು. ಆ ವೇಳೆ, ನಾನು ಮತ್ತು ನನ್ನ ಮಿತ್ರರಾದ ಹಿಂದೂ ಪತ್ರಿಕೆಯ ಸ್ಥಾನಿಕ ಸಂಪಾದಕ ಗಿರೀಶ್ ಪಟ್ಟಣಶೆಟ್ಟಿ, ಉದಯವಾಣಿಯ ಸ್ಥಾನಿಕ ಸಂಪಾದಕ ಸುರೇಶ್ ಕೆಲವು ಸಲಹೆಗಳನ್ನು ಅವರ ಮುಂದಿಟ್ಟೆವು. ಉತ್ತರ ಕರ್ನಾಟಕಕ್ಕೆ ನಿಮ್ಮ ಮಠದ ವತಿಯಿಂದ ಮೈಸೂರಿನಲ್ಲಿರುವಂತೆ ಇಂಜಿನೀಯರಿಂಗ್, ವೈದ್ಯಕೀಯ ಅಥವಾ ದಂತ ವಿಜ್ಙಾನ ಶಿಕ್ಷಣ ಸಂಸ್ಥೆಗಳು ಅವಶ್ಯಕತೆಯಿಲ್ಲ. ಬದಲಾಗಿ ಈ ಪ್ರದೇಶದಲ್ಲಿ ಎಸ್.ಎಸ್,ಎಲ್.ಸಿ. ಮತ್ತು ಪಿ.ಯು.ಸಿ. ನಂತರ ಶಿಕ್ಷಣಕ್ಕೆ ತಿಲಾಂಜಲಿ ಇತ್ತ ಯುವಕರು ಬಹಳ ಮಂದಿ ಇದ್ದಾರೆ. ಅವರ ಉದ್ಯೋಗಕ್ಕೆ ನೆರವಾಗುವ ದೃಷ್ಟಿಯಲ್ಲಿ ವೃತ್ತಿ ನಿರತ ಕೋರ್ಸ್‌ಗಳನ್ನು ಪ್ರಾರಂಭಿಸಿ, ಎಂಬುದು ನಮ್ಮ ಸಲಹೆಯಾಗಿತ್ತು. ಉದಾಹರಣೆಗೆ, ನೀರು ಎತ್ತುವ ವಿದ್ಯುತ್‌ಮೋಟಾರ್, ಮೊಬೈಲ್, ಮಿಕ್ಸಿ, ಗ್ರೈಂಡರ್‌ಗಳ ದುರಸ್ತಿ, ಮರಗೆಲಸ, ಹೊಸಮನೆಗಳಿಗೆ ವಿದ್ಯುತ್ ವೈರಿಂಗ್ ಮಾಡಲು ಬೇಕಾದ ಕುಶಲತೆ, ಕಟ್ಟಡ ನಿರ್ಮಾಣ, ಮೋಟಾರ್ ವಾಹನ, ದ್ವಿಚಕ್ರ ವಾಹನ ದುರಸ್ತಿ ಇತ್ಯಾದಿ ಅದೇ ರೀತಿ ಮಹಿಳೆಯರಿಗೆ ಟೈಲರಿಂಗ್ ಕಸೂತಿ ಮುಂತಾದ ಜೀವನಕ್ಕೆ ಆಧಾರವಾಗಬಲ್ಲ ತರಬೇತಿ ನೀಡುವ ತರಬೇತಿ ನೀಡುವ ಸಂಸ್ಥೆಗಳನ್ನು ತೆರೆಯುವಂತೆ ಸೂಚನೆ ನೀಡಿದೆವು. ನಮ್ಮ ಸಲಹೆ ಅವರಿಗೂ ಇಷ್ಟವಾಯಿತು.

ಮುಂದಿನ ತಿಂಗಳು ಮಠಾಧೀಶರು ಧಾರವಾಡಕ್ಕೆ ಬರುತಿದ್ದು ನಿಮ್ಮ ಸಲಹೆಗಳನ್ನು ಅವರ ಮುಂದೆ ಇಡಬೇಕೆಂದು ಜೆ.ಎಸ್.ಎಸ್. ಮಠದ ಪದಾಧಿಕಾರಿಗಳು ನಮ್ಮಲ್ಲಿ ವಿನಂತಿಸಿಕೊಂಡಾಗ ನಾವೂ ಸಹ ಒಪ್ಪಿಗೆ ಸೂಚಿಸಿದೆವು. ಅದರಂತೆ ಮುಂದಿನ ಒಂದು ತಿಂಗಳಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಸ್ವಾಮೀಜಿ ತಮ್ಮ ಸಂಸ್ಥೆಯ ಸಲಹೆಗಾರರ ಜೊತೆ ಧಾರವಾಡಕ್ಕೆ ಬಂದರು. ನಾನು ಮತ್ತು ನನ್ನ ಇಬ್ಬರು ಗೆಳೆಯರನ್ನು ಧಾರವಾಡದ ತಮ್ಮ ಕಛೇರಿಗೆ ಕರೆಸಿಕೊಂಡು ನಮ್ಮ ಸಲಹೆ ಕೇಳತೊಡಗಿದರು. ಅದಕ್ಕೂ ಮುನ್ನ ಅವರ ಸಂಸ್ಥೆಯ ಪದಾಧಿಕಾರಿಗಳನ್ನು ನಮಗೆ ಪರಿಚಯಿಸಿದರು. ಅವರೆಲ್ಲಾ ಕರ್ನಾಟಕ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಹಿರಿಯ ಐ.ಎ.ಎಸ್. ಅಧಿಕಾರಿಗಳು. ನಿವೃತ್ತ ಮುಖ್ಯ ಇಂಜಿನಿಯರ್‌ಗಳು ಮತ್ತು ವಿ.ವಿ. ಗಳ ನಿವೃತ್ತ ಉಪಕುಲಪತಿಗಳಾಗಿದ್ದರು. ನಾವು ಕೂಡ ಪರಿಚಯ ಮಾಡಿಕೊಂಡೆವು. ಅದೇ ವೇಳೆ ನನ್ನನ್ನ್ನು ಸ್ವಾಮೀಜಿಗೆ ವಿಶೇಷವಾಗಿ ಪರಿಚಯಿಸಿದ ಮೈಸೂರು ನಗರದ ಗೆಳೆಯ ಜಂಬುಕೇಶ್ವರ, ಇವರು ಮಂಡ್ಯ ಜಿಲ್ಲೆಯವರು, ಜಾಗತೀಕರಣ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ ಎಂದು ತಿಳಿಸಿದ. ಇದರಿಂದ ಕುತೂಹಲಗೊಂಡ ಸ್ವಾಮೀಜಿ, ಜಾಗತೀಕರಣ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ನನ್ನನ್ನು ಪ್ರಶ್ನಿಸಿದರು.

ಜಾಗತೀಕರಣದ ಕಡು ವಿರೋಧಿಗಳಲ್ಲಿ ನಾನೂ ಒಬ್ಬ ಎಂದು ತಿಳಿಸಿ, ಅದರ ವಂಚನೆಯ ನಾನಾ ಮುಖಗಳನ್ನು ಸ್ವಾಮೀಜಿಗೆ ಸಂಕ್ಷಿಪ್ತವಾಗಿ ವಿವರಿಸಿದೆ. ನನ್ನ ವಿವರಣೆಯಲ್ಲಿ ರೈತರಿಗೆ ಆಗುತ್ತಿರುವ ವಂಚನೆಗಳು, ಬಹು ರಾಷ್ಟ್ರೀಯ ಕಂಪನಿಗಳ ಎಂಜಲು ಕಾಸಿಗೆ ಕೈಯೊಡ್ಡಿರುವ ಈ ದೇಶದ ಕೃಷಿ ವಿ.ವಿ.ಗಳು ಮತ್ತು ಅಲ್ಲಿನ ವಿಜ್ಙಾನಿಗಳು ಸೃಷ್ಟಿಸುತ್ತಿರುವ ಅವಾಂತರಗಳು ಈ ಬಗ್ಗೆ ಕೆಲವು ಅಂಕಿ ಅಂಶಗಳ ಮೂಲಕ ಅವರಿಗೆ ಮನವರಿಕೆ ಮಾಡಿಕೊಟ್ಟೆ.

ನನ್ನ ಈ ಮಾತುಗಳಿಂದ ಅಪಮಾನಿತರಾದಂತೆ ಕಂಡುಬಂದ ಸ್ವಾಮೀಜಿ ಪಕ್ಕದಲ್ಲಿ ಕುಳಿತಿದ್ದ ಧಾರವಾಡ ಕೃಷಿ ವಿ.ವಿ.ಯ ಮಾಜಿ ಉಪಕುಲಪತಿ, ಭತ್ತದ ತಳಿ ವಿಜ್ಙಾನಿ ಹಾಗೂ ಪದ್ಮಶ್ರಿ ಪ್ರಶಸ್ತಿ ವಿಜೇತ ಡಾ. ಮಹಾದೇವಪ್ಪ ನನ್ನ ಜೊತೆ ವಾದಕ್ಕೆ ಇಳಿದರು. ಅವರ ವಾದಕ್ಕೆ ಉತ್ತರವೆಂಬಂತೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ 2002 ರ ರಾಷ್ಟ್ರೀಯ ಜೀವ ವೈವಿಧ್ಯ ಹಾಗೂ ಕರ್ನಾಟಕದ 2006 ರ ಜೀವ ವೈವಿಧ್ಯ ಕಾಯ್ದೆಯನ್ನು ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟುಗುಳ್ಳ ಎಂಬ ದೇಶಿ ಬದನೆ ಸೇರಿದಂತೆ ಕರ್ನಾಟಕದ ಆರು ದೇಶಿ ಬದನೆತಳಿಗಳನ್ನು ಕುಲಾಂತರಿ ಪ್ರಯೋಗಕ್ಕೆ ಒಡ್ಡಿರುವುದನ್ನು ವಿವರಿಸಿದೆ. ಜೊತೆಗೆ ಈ ಪ್ರಯೋಗಕ್ಕೆ ಅಮೇರಿಕಾ ಮೂಲದ ಮಾನ್ಸೆಂಟೊ ಕಂಪನಿ ತನ್ನ ಭಾರತದ ಸಹಭಾಗಿತ್ವದ ಕಂಪನಿಯಾದ ಮಹಿಕೊ ಸಂಸ್ಥೆ ಮೂಲಕ ಕೃಷಿ ವಿ.ವಿ.ಗೆ ಮತ್ತು ಅಲ್ಲಿನ ವಿಜ್ಙಾನಿಗಳಿಗೆ ಅಪಾರ ಪ್ರಮಾಣದ ಹಣ ಪಡೆದಿರುವುದನ್ನು ಸಹ ನಾನು ಪ್ರಸ್ತಾಪಿಸಿದೆ. ಸೋಜಿಗದ ಸಂಗತಿಯೆಂದರೆ, ಧಾರವಾಡದ ಕೃಷಿ ವಿ.ವಿ. ಸೇರಿದಂತೆ ತಮಿಳು ನಾಡು ಮತ್ತು ಚಂಡಿಘರ್ ಕೃಷಿ ವಿ.ವಿ.ಗಳು ಬದನೆ, ಭತ್ತ, ಗೋಧಿ ಹಾಗು ಇತರೆ ಬೆಳೆಗಳ ಪ್ರಯೋಗಕ್ಕೆ ಕೇಂದ್ರ ಸರ್ಕಾರದ ಅಥವಾ ವಿ.ವಿ. ಹಣಕಾಸು ಆಯೋಗದಿಂದ (ಅಪಾಯಕಾರಿ ಪ್ರಯೋಗಳಿಗೆ) ಅನುಮತಿ ಪಡೆದಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಸವಿವರವಾಗಿ ನಾನು ಅವರ ಮುಂದಿಟ್ಟಾಗ, ಡಾ. ಮಹಾದೇವಪ್ಪನವರ ಬಳಿ ಉತ್ತರವಿರಲಿಲ್ಲ. ಕ್ಷಣ ಹೊತ್ತು ಮೌನ ವಹಿಸಿದ ಅವರು, ಇದ್ದಕ್ಕಿದ್ದಂತೆ ನನ್ನ ವೃತ್ತಿಯ ಮೇಲೆ ಧಾಳಿ ಮಾಡಿದರು. “ಜಗದೀಶ್ ವಿಜ್ಙಾನಿಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುವ ನೀವು, ಅಂದರೆ ಪತ್ರಕರ್ತರು, ಸಾಚಾಗಳಾ?” ಎಂದು ಕೇಳಿದರು. ನಾನು ಸಾವಧಾನದಿಂದ ನಿಮ್ಮ ವಿಜ್ಙಾನಿಗಳ ಸಮುದಾಯದಂತೆ ನಮ್ಮ ಪತ್ರಕರ್ತ ಸಮುದಾಯ ಕೂಡ ಕೆಟ್ಟು ಕೆರಹಿಡಿದಿದೆ. ಅದರಲ್ಲಿ ಎರಡು ಮಾತಿಲ್ಲ ಎಂದೆ. ಜೊತೆಗೆ ಇವತ್ತಿನ ಪತ್ರಿಕೋದ್ಯಮದ ವೃತ್ತಿ ಹೆಂಗಸರನ್ನು ಅಡ್ಡದಾರಿಗೆ ನೂಕುವ ತಲೆಹಿಡುಕುತನದ ವೃತ್ತಿಗೆ ಸಮೀಪವಾಗಿದೆ. ಈ ವೃತ್ತಿಯ ಬಗ್ಗೆ ನನಗೆ ಬೇಸರವಿದ್ದರೂ, ಈವರೆಗೆ ಆತ್ಮಸಾಕ್ಷಿಗೆ ಧಕ್ಕೆಯಾಗದಂತೆ, ಘನತೆಯಿಂದ ಈ ವೃತ್ತಿಯನ್ನು ನಿರ್ವಹಿಸಿದ್ದೇನೆ ಎಂದು ಶಾಂತವಾಗಿ ಆದರೆ, ಕಟುವಾಗಿ ಉತ್ತರಿಸಿದೆ. ನನ್ನ ಮಾತುಗಳಿಂದ ಶಾಕ್‌ಗೆ ಒಳಗಾದವರಂತೆ ಕಂಡು ಬಂದ ಸ್ವಾಮೀಜಿ ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಿ ವೃತ್ತಿ ತರಬೇತಿ ಸಂಸ್ಥೆ ಆರಂಭಿಸುವ ಬಗ್ಗೆ ನಮ್ಮಗಳ ಸಲಹೆ ಕೇಳತೊಡಗಿದರು.

ನಂತರ ಊಟದ ಸಮಯದಲ್ಲಿ ನನ್ನ ಬಳಿ ಬಂದ ಡಾ. ಮಹಾದೇವಪ್ಪ, “ಕ್ಷಮಿಸಿ ಜಗದೀಶ್, ಆವೇಶದಲ್ಲಿ ಕೆಲವು ಮಾತನಾಡಿದೆ. ನೀವು ಎತ್ತಿದ ಕೆಲವು ವಿಷಯಗಳಲ್ಲಿ ಸತ್ಯಾಂಶ ಇದೆ. ಕೆಲವು ವಿಜ್ಙಾನಿಗಳು ಹಣದ ಹಿಂದೆ ಬಿದ್ದು ರೈತರ ಹಿತಾಸಕ್ತಿಗೆ ಮಾರಕವಾಗಿದ್ದಾರೆ,” ಎಂದು ಒಪ್ಪಿಕೊಂಡರು. ಅವರನ್ನು ಸಮಾಧಾನಿಸಿ, “ನೀವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್. ಪತ್ರಕರ್ತರು ನಿಮ್ಮ ಊಹೆಗಿಂತ ದುಪ್ಪಟು ಭ್ರಷ್ಟರಾಗಿದ್ದಾರೆ,” ಎಂದೆ.

ಮಿತ್ರರೇ, ಯಾಕೆ ಇಷ್ಟೊಂದು ವಿವರವಾಗಿ ಈ ಸಂಗತಿಯನ್ನು ಚರ್ಚಿಸಿದೆ ಎಂದರೆ, ಇವತ್ತಿನ ನಮ್ಮ ಕಣ್ಣೆದುರಿನ ಮಾಧ್ಯಮ ಮತ್ತು ಅದರ ಅಂಗವಾಗಿರುವ ನಮ್ಮಗಳ ಬಗ್ಗೆ ಮಾತನಾಡುವುದೇ ನಾಚಿಕೆಗೇಡಿನ ಸಂಗತಿಯಾಗಿದೆ. ಜನಸಾಮಾನ್ಯರಲ್ಲಿ ಕೇವಲ ಅಧಿಕಾರಿಶಾಹಿ ಮತ್ತು ಆಡಳಿತಶಾಹಿ ಮಾತ್ರ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಜೊತೆ ಕೈ ಜೋಡಿಸಿರುವ ಪತ್ರಿಕೋದ್ಯಮ ಸತ್ಯ ಮತ್ತು ಪ್ರಾಮಾಣಿಕತೆಯ ಮುಖವಾಡದಲ್ಲಿ ಅಕ್ಷರದ ಹಾದರತನಕ್ಕೆ ಇಳಿದಿದೆ. ಈ ಮಾತನ್ನು ಅತ್ಯಂತ ಕಠಿಣವಾದ ಶಬ್ದಗಳಲ್ಲಿ ಹೇಳುತ್ತಿರುವುದಕ್ಕೆ ನಿಮ್ಮ ಕ್ಷಮೆ ಇರಲಿ.

Deccan Herald - Mining Payments

Deccan Herald – Mining Payments

ಅದೊಂದು ಕಾಲವಿತ್ತು, ಪತ್ರಿಕೋದ್ಯಮ ಮತ್ತು ಪತ್ರಕರ್ತರೆಂದರೆ, ಗೌರವದಿಂದ ನೋಡುವ, ಮಾತನಾಡಿಸುವ, ಪ್ರೀತಿಸುತಿದ್ದ ಆದಿನಗಳು ಈಗ ಕೇವಲ ನೆನಪುಗಳು ಮಾತ್ರ. ಪತ್ರಕರ್ತರೆಂದರೆ ಪವರ್ ಬ್ರೋಕರ್ ಎಂದು ಕರೆಯುವ ಕಾಲ ಇದಾಗಿದೆ. ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಅಕ್ರಮ ಸಂಪತ್ತಿನ ಬಗ್ಗೆ ಪುಟಗಟ್ಟಲೆ ಮುದ್ರಿಸುವ, ಗಂಟೆಗಟ್ಟಲೆ ಭಿತ್ತರಿಸುವ ನಮ್ಮ ಸುದ್ಧಿ ಮಾಧ್ಯಮಗಳು, ಕಳೆದ ಒಂದು ದಶಕದಿಂದೀಚೆಗೆ ಪತ್ರಕರ್ತರ ಆಸ್ತಿ ಯಾವ ಮಟ್ಟದಲ್ಲಿ ಬೆಳೆದಿದೆ ಎಂದು ಎಂದಾದರೂ ಆತ್ಮಾವಲೋಕನ ಮಾಡಿಕೊಂಡ ಸಂಗತಿಯನ್ನು ನೀವ್ಯಾರಾದರೂ ಬಲ್ಲಿರಾ? ಇವತ್ತು ಪತ್ರಕರ್ತರು ಓಡಾಡುವ ಕಾರು, ಅವರು ಕಟ್ಟಿಕೊಂಡಿರುವ ಮನೆ, ನಗರದ ಹೊರವಲಯದಲ್ಲಿ ನಿರ್ಮಿಸಿಕೊಂಡಿರುವ ಕೃಷಿತೋಟಗಳು, ಇವುಗಳೆಲ್ಲಾ ಅವರ ಸಂಬಳದಿಂದ ಸಾಧ್ಯವೆ? ಎಂಬುದನ್ನು ಪ್ರಜ್ಞಾವಂತ ನಾಗರೀಕರು ಒಮ್ಮೆ ಯೋಚಿಸಬೇಕು. ತಾವೇ ಬೌದ್ಧಿಕವಾಗಿ, ನೈತಿಕವಾಗಿ ದಿವಾಳಿಯೆದ್ದು ಹೋಗಿರುವಾಗ ಇಂತಹ ಸಮುದಾಯದಿಂದ ಏನನ್ನು ನಿರಿಕ್ಷಿಸಲು ಸಾಧ್ಯ ಹೇಳಿ?

ತಮ್ಮ ಕಣ್ಣ ಮುಂದೆ ನಡೆಯುವ ಕೊಲೆ, ಅತ್ಯಾಚಾರಗಳ, ಹಿಂಸೆಗಳನ್ನು ಮಸಾಲೆ ಹಾಕಿ ಅರೆದು ರುಬ್ಬಿ ವೀಕ್ಷರಿಗೆ ಉಣ ಬಡಿಸುವ ಸುದ್ದಿಚಾನಲ್ ಗಳು ಒಂದು ಕಡೆಯಾದರೆ, ಕೆಟ್ಟ ಮತ್ತು ಅನೈತಿಕ ರಾಜಕಾರಣದ ಸುತ್ತಾ ಗಿರಕಿ ಹೊಡೆಯುತ್ತಾ, ಚಮತ್ಕಾರದ ತಲೆ ಬರೆಹ ನೀಡುತ್ತಾ ನಿಂತಲ್ಲೆ ನಿಂತಿರುವ ಪತ್ರಿಕೋದ್ಯಮ ಇನ್ನೊಂದು ಕಡೆ ನಮ್ಮ ಮುಂದಿದೆ. ಈ ಸ್ಥಿತಿಯಲ್ಲಿ ಕೆಟ್ಟು ಕೆರವಾಗಿರುವ ಈ ಮಾಧ್ಯಮಗಳೇ ನಮ್ಮಗಳ ಅನಿವಾರ್ಯ ಆಯ್ಕೆ ಎಂಬಂತಾಗಿದೆ.

ನಾನು ಉತ್ತರ ಕರ್ನಾಟಕಕ್ಕೆ ಹೋಗಿ 11 ವರ್ಷ ಕಳೆದು, 12ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲಿನ ಬಡತನ, ಬದುಕು, ನನಗೆ ಮೂರು ಜನ್ಮಕ್ಕೆ ಆಗುವಷ್ಟು ಪತ್ರಿಕೋದ್ಯಮದ ಪಾಠವನ್ನು ಕಲಿಸಿದೆ. ಕಳೆದ ವರ್ಷ ಇಡೀ ಉತ್ತರ ಕರ್ನಾಟಕ ಬರದ ಬವಣೆಯಲ್ಲಿ ತತ್ತರಿಸಿ ಹೋಯಿತು, ಅದರಾಚೆಗಿನ ವರ್ಷ ಅತೀವೃಷ್ಟಿಯಲ್ಲಿ ಮುಳುಗಿ ನಲುಗಿಹೋಯಿತು. ಬಿಜಾಪುರ ಜಿಲ್ಲೆಯಲ್ಲಿ ಕಳೆದ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆಬಿದ್ದಿದೆ ಎಂದರೆ ನೀವು ನಂಬುತ್ತೀರಾ? ನಂಬುವುದಿಲ್ಲ, ಏಕೆಂದರೆ, ಯಾವುದೇ ಸುದ್ದಿಮಾಧ್ಯದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಅಥವಾ ಸುದ್ಧಿಯಾಗಿಲ್ಲ. ಇಂತಹ ಬಡತನದ ನಡುವೆ ಅಲ್ಲಿನ ಜನಕ್ಕೆ ಬದುಕುವ ಕಲೆಗೊತ್ತಿದೆ. ರಾತ್ರೋರಾತ್ರಿ ರೈಲುಗಳನ್ನ ಹತ್ತಿ ಗೋವಾ, ಮುಂಬೈ ನಗರಗಳನ್ನು ತಲುಪಿ, ಕಟ್ಟಡ ಕಾರ್ಮಿಕರಾಗಿ ದುಡಿಯಲು ಅಲ್ಲಿನ ಕೊಳೇಗೇರಿಗಳಲ್ಲಿ ಜಮೆಯಾಗುತ್ತಾರೆ. ಆದರೆ, ಅವರು ಬಿಟ್ಟುಹೋದ ಅಮಾಯಕ ಮೂಕಪ್ರಾಣಿಗಳ ನೋವು ಮಾತ್ರ ಹೇಳತೀರಲಾಗದು.

ಕಳೆದ ತಿಂಗಳು ಬಿಜಾಪುರ ನಗರದಿಂದ 70 ಕಿ.ಮಿ. ದೂರದ ಗಡಿಭಾಗದ ಊರಾದ ಚಡಚಣದ ನನ್ನ ಆತ್ಮೀಯ ಮಿತ್ರನೊಬ್ಬನ ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ರಾತ್ರಿ ಬಿಜಾಪುರದಲ್ಲಿ ಊಟ ಮಾಡಿ, ಜಮಖಂಡಿ, ರಾಮದುರ್ಗ ಮಾರ್ಗವಾಗಿ ಕಾರಿನಲ್ಲಿ ಗೆಳೆಯರ ಜೊತೆ ವಾಪಾಸ್ ಬರುತ್ತಿರಬೇಕಾದರೆ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ರಾಮದುರ್ಗ-ಸವದತ್ತಿ ನಡುವೆ ಬರುವ ಮುಳ್ಳಳ್ಳಿ ಘಾಟ್ ರಸ್ತೆಯಲ್ಲಿ ರೈತನೊಬ್ಬ ಧಾರವಾಡದ ಕಸಾಯಿಖಾನೆಗೆ ದನಗಳನ್ನು ಹಿಡಿದುಕೊಂಡು ಸಾಗುತ್ತಿದ್ದ. ಅವನನ್ನು ತಡೆದು ನಿಲ್ಲಿಸಿ ಕೇಳಿದೆ. (ಇತ್ತೀಚೆಗೆ ಹಿಂದು ಸಂಘಟನೆಗಳ ಪ್ರತಿಭಟನೆಗೆ ಹೆದರಿ ರಾತ್ರಿ ವೇಳೆ ದನಗಳನ್ನು ಸಾಗಿಸುವ ಪದ್ಧತಿಯಿದೆ.) ನನ್ನನ್ನು ನೋಡಿ ಪೊಲೀಸ್ ಅಧಿಕಾರಿ ಇರಬೇಕೆಂದು ಊಹಿಸಿ, ಬೆಚ್ಚಿದ ಆತ ದನಗಳ ಹಗ್ಗ ಹಿಡಿದ ತನ್ನ ಎರಡು ಕೈಗಳನ್ನು ಜೋಡಿಸಿ ಮುಗಿಯುತ್ತಾ “ಸಾಹೇಬ್ರ, ದಿನಕ್ಕೆ ಒಂದು ಎತ್ತಿಗೆ ಎರಡು ಕೊಡಪಾನ ನೀರು ಬೇಕು, ಎಮ್ಮಿಗೆ ಮೂರು ಕೊಡಪಾನ ನೀರು ಬೇಕಾಗೈತಿ ನಮಗ ಕುಡಿಲಿಕ್ಕೆ ನೀರಿಲ್ಲ, ಇವುಗಳಿಗೆ ನೀರು ಎಲ್ಲಿಂದ ತರಲಿ ನೀವೆ ಹೇಳ್ರಲಾ? ಇವಕ್ಕೆ ನೀರು ಮೇವು ಕೊಡ್ರಲಾ ಸಾಕು, ರೊಕ್ಕ ಬೇಡಾ ತಗೋರಿ ಇವುಗಳನ್ನ,” ಎನ್ನುತ್ತಾ ಅವುಗಳ ಹಗ್ಗವನ್ನು ನನಗೆ ನೀಡಲು ಬಂದಾಗ ಅವನಿಗೆ ಏನು ಉತ್ತರಿಸಬೇಕು ಎಂಬುದೇ ನನಗೆ ತೋಚಲಿಲ್ಲ. ನಾನು ಒಬ್ಬ ರೈತನ ಮಗನಾಗಿ ಹುಟ್ಟಿ, ದನ ಕರುಗಳ ಜೊತೆ ಒಡನಾಡಿ ಬೆಳೆದವನಾಗಿದ್ದರೂ, ಒಂದು ಎತ್ತು, ಅಥವಾ ಎಮ್ಮೆ ಎಷ್ಟು ಪ್ರಮಾಣದ ನೀರು ಕುಡಿಯುತ್ತವೆ ಎಂಬ ಜ್ಙಾನವಿರಲಿಲ್ಲ. ನೀರಿನ ಮಹತ್ವ ಗೊತ್ತಿರುವ ಆ ಮಂದಿಗೆ ಇದು ಗೊತ್ತಿದೆ. ಇಂತಹ ನಾವು ಕಾಣಲಾಗದ, ಕೇಳಲಾಗದ ರೈತರ ಬವಣೆಗಳು ಸುದ್ದಿಮಾಧ್ಯಗಳಿಗೆ ಆದ್ಯತೆಯ ವಿಷಯಗಳೇ ಅಲ್ಲ.

ನಿಮಗೆಲ್ಲಾ ಗೊತ್ತಿರುವಂತೆ ಕರ್ನಾಟಕದಲ್ಲಿ ಗಣಿ ಉದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಪ್ರತಿದಿನ ಬಳ್ಳಾರಿಯಿಂದ ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗವಾಗಿ ಕಾರವಾರ ಬಂದರಿಗೆ ಆರು ಸಾವಿರ ಲಾರಿಗಳು ಸಂಚರಿಸುತಿದ್ದವು. ಎಷ್ಟೋ ಹಳ್ಳಿಗಳಲ್ಲಿ ಮಾನಸಿಕ ಅಸ್ವಸ್ತರಾದ ವ್ಯಕ್ತಿಗಳನ್ನು ಸಾಕಲಾರದ ಕುಟುಂಬಗಳು, ಲಾರಿಯ ಚಾಲಕನಿಗೆ ನೂರು ರೂಪಾಯಿ ನೀಡಿ ಎಲ್ಲಿಯಾದರೂ ಇಳಿಸಿಬಿಡು ಎಂದು ನತದೃಷ್ಟರನ್ನು ಸಾಗಹಾಕುತಿದ್ದರು. ಅದರ ಪರಿಣಾಮವಾಗಿ ಇವತ್ತಿಗೂ ಹುಬ್ಬಳ್ಳಿ-ಕಾರವಾರ ರಸ್ತೆಯ ಹೆದ್ದಾರಿಯಲ್ಲಿ ಕಲಘಟಗಿ ಪಟ್ಟಣದ ನಂತರ ಬರುವ ಕಿರುವತ್ತಿ ಎಂಬ ಊರನ್ನು ದಾಟಿದ ಮೇಲೆ ಸಿಗುವ ಕಾಡಿನ ನಡುವೆ ಕಾರವಾರದ ವರೆಗೆ ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಓಡಾಡುವ ಇವರನ್ನು ಕಾಣಬಹುದು. ಅಲ್ಲಿನ ಮಳೆ, ಚಳಿ, ಗಾಳಿ ಎನ್ನದೆ ರಸ್ತೆ ಬದಿ ನತದೃಷ್ಟರು ಕುಳಿತಿರುವುದನ್ನು ನೋಡಿದರೆ, ಕರಳು ಕಿವುಚಿದಂತಾಗುತ್ತದೆ.

ಎರಡು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳ್ಳಿಯೊಂದರ ಐವತ್ತು ವರ್ಷದ ವಿಧವೆ ಹೆಣ್ಣು ಮಗಳೊಬ್ಬಳು ತನ್ನ 18 ವರ್ಷದ ಮಾನಸಿಕ ಅಸ್ವಸ್ಥ ಮಗನೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಹೆತ್ತ ತಾಯಿಯ ಎದುರು ಮಗ ಅರಿವಿಲ್ಲದೆ ಬೆತ್ತಲೆಯಾಗಿ ನಿಲ್ಲುವುದನ್ನು ನೋಡಲಾಗದ ಆ ತಾಯಿ ಬಾವಿಯಲ್ಲಿ ನೀರು ಸೇದುವ ಹಗ್ಗದಲ್ಲಿ ತನ್ನ ದೇಹದ ಜೊತೆ ಮಗನ ದೇಹವನ್ನು ಬಂಧಿಸಿ, ಬಿಗಿಯಾಗಿ ಕಟ್ಟಿಕೊಂಡು ಸಮುದ್ರಕ್ಕೆ ಹಾರಿದ ಆ ಹೃದಯ ವಿದ್ರಾವಕ ಘಟನೆಗೆ ಆ ದಿನ ಕುಮಟಾ ಪ್ರವಾಸಿ ಮಂದಿರದಲ್ಲಿದ್ದ ನಾನು ಸಾಕ್ಷಿಯಾಗಿದ್ದೆ. ಬಡತನಕ್ಕೆ ಎಷ್ಟೊಂದು ಕರಾಳ ಮುಖಗಳಿವೆ ಎಂಬುದಕ್ಕೆ ಉದಾಃಹರಣೆಯಾಗಿ ಇವುಗಳನ್ನು ನಿಮಗೆ ನಾನು ಹೇಳಬೇಕಾಯಿತು. ಆರು ಕೋಟಿ ಜನಸಂಖ್ಯೆ ದಾಟಿರುವ ಕರ್ನಾಟಕದಲ್ಲಿ ಇಂದು ಲಕ್ಷಾಂತರ ಮಂದಿ ಮಾನಸಿಕ ಅಸ್ವಸ್ಥರಿದ್ದಾರೆ. ಆದರೆ, ಇರುವುದು ಎರಡೇ ಆಸ್ಪತ್ರೆಗಳು, ಒಂದು ಬೆಂಗಳೂರು, ಮತ್ತೊಂದು ಧಾರವಾಡದಲ್ಲಿ. ಇವುಗಳ ಸ್ಥಿತಿ ಕೂಡ ನರಕ ಸದೃಶ್ಯ ಎಂದರೆ ತಪ್ಪಾಗಲಾರದು. ಇಂತಹ ಮನಕಲಕುವ ಸುದ್ದಿಗಳು ಯಾಕೆ ಸಾರ್ವಜಿನಿಕರ, ಅಥವಾ ಸಮಾಜದ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎಂಬುದರ ಬಗ್ಗೆ ಪತ್ರಕರ್ತರಾದ ನಾವು ಒಮ್ಮೆ ನಮ್ಮ ಆತ್ಮ ಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು.

ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಒಂದುವಾರ ಕೇರಳ ಮತ್ತು ತಮಿಳುನಾಡು ಪ್ರವಾಸದಲ್ಲಿದ್ದೆ. ತಿರುವನಂತಪುರದಲ್ಲಿದ್ದಾಗ ಹಿಂದೂ ಪತ್ರಿಕೆಯಲ್ಲಿ ಕರ್ನಾಟಕದ ಅಘಾತಕಾರಿ ಸುದ್ಧಿಯೊಂದು ರಾಷ್ಟ್ರೀಯ ಸುದ್ಧಿಯಾಗಿ ಪ್ರಕಟವಾಗಿತ್ತು. ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ 10 ವರ್ಷಗಳ ಅನುಭವ ಇರುವ ವಕೀಲರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. 528 ವಕೀಲರು ಪರೀಕ್ಷೆ ತೆಗೆದುಕೊಂಡು ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪಾಸಾಗಿದ್ದ. ಮಾರನೇ ದಿನ ನಾನು ಮಧುರೈ ನಗರಕ್ಕೆ ಬಂದಾಗ ಅಲ್ಲಿನ ಇಂಡಿಯನ್‌ ಎಕ್ಸ್‌ಪ್ರೆಸ್ ದಿನಪತ್ರಿಕೆ ಈ ಕುರಿತು ಸಂಪಾದಕೀಯ ಬರೆದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ಶಾಲೆ ಇದ್ದೂ ಕೂಡ ವಕೀಲರ ಬುಧ್ಧಿಮತ್ತೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿ, ಇದೊಂದು ಅಘಾತಕಾರಿ ಬೆಳವಣಿಗೆ ಎಂದು ಲೇಖನ ಬರೆದಿತ್ತು. ಪ್ರವಾಸ ಮುಗಿಸಿ ಬಂದ ನಾನು, ಕನ್ನಡದ ಅಷ್ಟೂ ಪತ್ರಿಕೆಗಳನ್ನು ತೆಗೆದು ಹುಡುಕಿದರೆ ಈ ಸುದ್ದಿ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಂತರ ನಾನೇ “ನಿಂತ ನೀರಾಗಿ ಕೊಳೆತವರು” ಎಂಬ ತಲೆ ಬರಹದ ಅಡಿ ಒಂದು ಲೇಖನವನ್ನು ಬರೆದು ಅಂತರ್ಜಾಲ ಪತ್ರಿಕೆ ವರ್ತಮಾನದಲ್ಲಿ ಪ್ರಕಟಿಸಿದೆ. ಈ ಲೇಖನ ತೀವ್ರ ಚರ್ಚೆಗೆ ಗ್ರಾಸವಾಯಿತು. ನಂತರ ಇದೇ ಲೇಖನವನ್ನು ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಬರುವ ಸಂಗತ ವಿಭಾಗಕ್ಕೆ ಕಳಿಸಿಕೊಟ್ಟೆ. ಆದರೆ, ಪತ್ರಿಕೆ ನನ್ನ ಲೇಖನವನ್ನು ಪ್ರಕಟಿಸಲಿಲ್ಲ. ಬದಲಾಗಿ ಅದನ್ನು ಆಧಾರವಾಗಿಟ್ಟುಕೊಂಡು ವಕೀಲರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲರ ಅಭಿಪ್ರಾಯದೊಂದಿಗೆ ಒಂದು ವಾರದ ನಂತರ ಮುಖಪುಟ ಸುದ್ದಿಯಾಗಿ ಪ್ರಕಟಿಸಿತು.

ಇತ್ತೀಚೆಗೆ ನಮ್ಮ ಮಾಧ್ಯಮಗಳ ಆದ್ಯತೆಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ತಿಳಿಸಲು ಇದನ್ನು ಪ್ರಸ್ತಾಪಿಸಿದೆ.

ಇನ್ನೊಂದು ಇಂಗ್ಲೀಷ್ ದಿನ ಪತ್ರಿಕೆಯ ಹೀನ ಇತಿಹಾಸವನ್ನು ನಾನು ನಿಮ್ಮೆದುರು ಪ್ರಸ್ತಾಪಿಸಲೇಬೇಕು. ಬಿರ್ಲಾ ಒಡೆತನಕ್ಕೆ ಸೇರಿದ ದೆಹಲಿ ಮೂಲದ ಹಿಂದೂಸ್ತಾನ್ ಟೈಮ್ಸ್ ಎಂಬ ಇಂಗ್ಲೀಷ್ ದಿನಪತ್ರಿಕೆಯೊಂದಿದೆ. ಅದು ಮುಂಬೈ ಆವೃತ್ತಿಯನ್ನು ಇತ್ತೀಚೆಗೆ ಪ್ರಾರಂಭಿಸಿತು. ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಸ್ಕೂಪ್ ವರದಿಯೊಂದಿಗೆ ತನ್ನ ಮುಂಬೈ ಆವೃತ್ತಿಯನ್ನು ಆರಂಭಿಸಿತು. ಈಗ ದೇಶದ ಬಹು ದೊಡ್ಡ ಹಗರಣಗಳಲ್ಲಿ ಒಂದಾಗಿರುವ, ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜಿನಾಮೆಗೆ ಕಾರಣವಾದ ಆದರ್ಶ ಹೌಸಿಂಗ್ ಸೊಸೈಟಿ ಹಗರಣವನ್ನು ಈ ಪತ್ರಿಕೆ ಬಯಲಿಗೆ ತರುವ ಮೂಲಕ ಮಹಾರಾಷ್ಟ್ರದಲ್ಲಿ ಸಂಚಲನವನ್ನು ಉಂಟುಮಾಡಿತು.

ಇಂತಹದ್ದೇ ಸ್ಕೂಪ್ ಸುದ್ಧಿಯ ಮೂಲಕ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಆವೃತ್ತಿ ತರಲು ಹೋದೀ ಪತ್ರಿಕೆ ತೀವ್ರ ಮುಖಭಂಗ ಅನುಭವಿಸಿತು. ಇಂದೂರ್ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಅವೈಜ್ಙಾನಿಕ ವರದಿಯೊಂದನ್ನು ಪ್ರಕಟಿಸಿದ ಹಿಂದೂಸ್ಥಾನ್ ಟೈಮ್ಸ್, ಕೇಂದ್ರ ಮತ್ತು ಮಧ್ಯಪ್ರದೇಶದ ರಾಜ್ಯ ಸರ್ಕಾರಗಳಿಗೆ ಮುಜುಗರವನ್ನುಂಟು ಮಾಡಿತು. ಎರಡು ಸರ್ಕಾರಗಳು ತನಿಖೆಗೆ ಕೂಡ ಆದೇಶಿಸಿದ್ದವು. ಆದರೆ, ಹಿಂದೂ ಇಂಗ್ಲೀಷ್ ದಿನ ಪತ್ರಿಕೆ ಈ ಕುರಿತು ವಿಶ್ವದ ನಾನಾ ದೇಶಗಳಲ್ಲಿರುವ ಮಕ್ಕಳ ತಜ್ಙರನ್ನು ಸಂಪರ್ಕಿಸಿ, ಅವರ ಸಂದರ್ಶನವನ್ನು ಪ್ರಕಟಿಸಿ, ಎಳೆಯ ಮಕ್ಕಳ ಲಿಂಗ ಪರಿವರ್ತನೆ ಅಸಾಧ್ಯ ಎಂಬುದನ್ನ ಸಾಬೀತು ಪಡಿಸಿತು. ಇದಕ್ಕಾಗಿ ಭಾರತವೂ ಸೇರಿದಂತೆ ನೂರೈವತ್ತುಕ್ಕೂ ಹೆಚ್ಚು ತಜ್ಙರನ್ನು ಅದು ಸಂಪರ್ಕಿಸಿತ್ತು. ಈ ಕುರಿತು ಲೇಖನ ಬರೆದು, ಸಂದರ್ಶನಗಳ ಜೊತೆ ಪ್ರಕಟಿಸಿತು. ಅಲ್ಲದೆ, ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯೊಂದು ಜನತೆಯನ್ನು ತಪ್ಪು ಹಾದಿಯಲ್ಲಿ ಕೊಂಡೊಯ್ಯುವಾಗ ಓದುಗರಿಗೆ ವಾಸ್ತವ ಸತ್ಯ ತಿಳಿಸುವುದು ನಮ್ಮ ಕರ್ತವ್ಯ ಎಂದು ಒಂದು ಅಡಿ ಟಿಪ್ಪಣಿಯನ್ನು ಸಹ ಬರೆಯಲಾಗಿತ್ತು. ಇದರ ಪರಿಣಾಮವಾಗಿ ವರದಿ ಮಾಡಿದ್ದ ಓರ್ವ ವರದಿಗಾರ್ತಿ ಮತ್ತು ಸ್ಥಳೀಯ ಸ್ಥಾನಿಕ ಸಂಪಾದಕ ಇಬ್ಬರೂ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಇಂದೋರ್ ಆವೃತ್ತಿ ಪ್ರಾರಂಭವಾದ ಮಾರನೇ ದಿನ ಕೆಲಸ ಕಳೆದುಕೊಂಡರು. ಇದನ್ನೆಲ್ಲಾ ನೋಡುತಿದ್ದರೆ, ನನ್ನ ಗುರು ಸಮಾನರಾದ ವಡ್ಡರ್ಸೆ ರಘುರಾಮ ಶೆಟ್ಟರು ಸುದ್ಧಿ ಕುರಿತಂತೆ ಪದೇ ಪದೇ ಹೇಳುತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. “ಆಳವಾಗಿ ಯೋಚಿಸಿ. ಸುದ್ಧಿಯ ಸತ್ಯಾಂಶವನ್ನು ವಿವಿದ ಮೂಲಗಳಿಂದ ಖಚಿತಪಡಿಸಿಕೊಂಡು ಬರೆಯ ಬೇಕು. ಇದು ಹೇಗಿರಬೇಕೆಂದರೆ, ಒಟ್ಟಿಗೆ ಎಲ್ಲವನ್ನು ವಾಂತಿ ಮಾಡಿದಂತಿರಬೇಕು, ಆದರೆ, ಮಾಡಿದ ವಾಂತಿಯನ್ನು ಮಾತ್ರ ಮತ್ತೇ ತಿನ್ನುವಂತಾಗಬಾರದು.” ಇದು ಶೆಟ್ಟರ ಅನುಭವದ ಮಾತು.

ಇತ್ತೀಚೆಗೆ ತಮ್ಮ ಪ್ರಸಾರ ಹೆಚ್ಚಿಸಿಕೊಳ್ಳಲು ಪತ್ರಿಕೆಗಳು ಮತ್ತು ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ಸುದ್ಧಿವಾಹಿನಿಗಳು ಎಂತಹದ್ದೇ ಅಡ್ಡ ಹಾದಿ ಹಿಡಿಯಲು ಸಿದ್ಧವಾಗಿವೆ. ನೀವೇ ಗಮನಿಸಿದ್ದೀರಿ ಎಂದು ಭಾವಿಸಿದ್ದೇನೆ. ಕನ್ನಡದ ದಿನ ಪತ್ರಿಕೆಯೊಂದು ಯಡಿಯೂರಪ್ಪ ಜೈಲಿಗೆ ಹೋದಾದ ಇಡೀ ಮುಖಪುಟದ ತುಂಬ ಸರಳುಗಳ ಹಿಂದೆ ಯಡಿಯೂರಪ್ಪ ಕುಳಿತಿರುವ ಚಿತ್ರವನ್ನು ಪ್ರಕಟಿಸಿತು. ಅದೇ ಪತ್ರಿಕೆ ಆತ ಜೈಲಿನಿಂದ ಬಿಡುಗಡೆಯಾದಾಗ ಆತ್ಮಾವಲೋಕನ ಎಂಬ ತಲೆಬರಹದ ಅಡಿ ಆತನ ಸಂದರ್ಶನವನ್ನು ಪ್ರಕಟಿಸಿ, ಅನುಕಂಪದ ಲೇಖನವನ್ನು ಬರೆಯಿತು. ನೀವೇ ಹೇಳಿ ಇದನ್ನು ಹೇಗೇ ಅರ್ಥೈಸಿಕೊಳ್ಳಬೇಕು? ರಾಜಕಾರಣಿ ಹಾಗೂ ಬೆಳಗಾವಿ ಮೂಲದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಕೋರೆ ಎಂಬ ವ್ಯಕ್ತಿ ಅದೇ ಪತ್ರಿಕೆಯಲ್ಲಿ ತನ್ನ ಶಿಕ್ಷಣ ಸಂಸ್ಥೆಯ ಬಗ್ಗೆ ಅಂಕಣ ಬರೆಯುತಿದ್ದಾರೆ. ಎದೆ ಸೀಳಿದರೂ ನಾಲ್ಕು ಕನ್ನಡ ಅಕ್ಷರ ಬರೆಯಲು ಬಾರದ ಕೋರೆ ಇಂದು ಅಂಕಣಕಾರ. ನಿಮಗೊಂದು ಸತ್ಯ ಹೇಳುತ್ತೇನೆ. ಒಂಬತ್ತು ವರ್ಷದ ಹಿಂದೆ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಬಗ್ಗೆ ಉದಯ ಟಿ.ವಿ. ಗಾಗಿ ನಾನು 10 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದೆ. ಆ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಸಂಸ್ಥೆಯ ಅತಿಥಿ ಗೃಹದಲ್ಲಿ ಮೂರು ದಿನ ತಂಗಿ ಎಲ್ಲರನ್ನೂ ಸಂದರ್ಶನ ಮಾಡಿದ್ದೆ. ಸಂಸ್ಥೆಯ ಒಂಬತ್ತು ನಿರ್ದೆಶಕರಲ್ಲಿ ಐದು ಮಂದಿಗೆ ಕನ್ನಡವೇ ಗೊತ್ತಿರಲಿಲ್ಲ. ಪ್ರಭಾಕರ ಕೋರೆ ಮರಾಠಿ ಛಾಯೆಯ ಕನ್ನಡ ಮಾತನಾಡಬಲ್ಲರೇ ಹೊರತು ಬರೆಯುವ ವ್ಯಕ್ತಿ ಅಲ್ಲ. ಇದೇ ಪತ್ರಿಕೆಯಲ್ಲಿ ಶ್ರೀಮಂತ ರಾಜಕಾರಣಿಗಳು ( ಆರ್.ವಿ. ದೇಶಪಾಂಡೆ, ಮುರುಗೇಶ್ ನಿರಾಣಿ ಮುಂತಾದವರು) ಕೂಡ ತಮ್ಮ ಪೋಟೊ ಛಾಪಿಸಿಕೊಂಡು ಅಂಕಣ ಬರೆಯುತಿದ್ದಾರೆ. ಇವರುಗಳು ತಾವು ಪ್ರತಿನಿಧಿಸುವ ತಮ್ಮ ಕ್ಷೇತ್ರಗಳ ಸಮಸ್ಯೆಯ ಬಗ್ಗೆ ನನ್ನೆದುರು ಒಂದು ಪುಟದ ಲೇಖನ ಬರೆದು ಕೊಟ್ಟರೆ, ಆ ಕ್ಷಣಕ್ಕೆ ನಾನು ಪತ್ರಿಕೋದ್ಯಮಕ್ಕೆ ವಿದಾಯ ಹೇಳಲು ಸಿದ್ಧನಿದ್ದೇನೆ.

ನಾವು ಪತ್ರಕರ್ತರು ಎಷ್ಟರ ಮಟ್ಟಿಗೆ ಕುಲಗೆಟ್ಟುಹೋಗಿದ್ದೇವೆ ಎಂದರೆ, ನಮಗೆ ಕುಡಿಯಲು ವಿಸ್ಕಿ, ಊಟ ಮತ್ತು ಹೋಟೇಲ್ ಕೊಠಡಿ ಕೊಡುವ ಮಾಲಿಕರು, ಕುಡಿತಕ್ಕೆ ನೆಂಚಿಕೊಳ್ಳಲು ಎಂ.ಟಿ.ಆರ್. ಬ್ರಾಂಡ್ ನಂತಹ ಕುರುಕಲು ತಿಂಡಿಗಳಾದ ಚಕ್ಕುಲಿ, ಕೋಡುಬಳೆ, ಗೋಡಂಬಿ ಸರಬರಾಜು ಮಾಡುವ ಗಿರಾಕಿಗಳು, ಇಲ್ಲವೇ ನಮ್ಮಗಳ ವಿಮಾನ ಪ್ರಯಾಣಕ್ಕೆ ಟಿಕೇಟ್ ತೆಗೆಸಿಕೊಡುವ ಭ್ರಷ್ಟರಾಜಕಾರಣಿಗಳು ಇವರುಗಳನ್ನು ನಾವು ಪತ್ರಿಕೆಗಳ ಮುಖಾಂತರ ದಿನ ಬೆಳಗಾಗುವದರೊಳಗೆ ಅಂಕಣಕಾರರನ್ನಾಗಿ ಮಾಡಬಲ್ಲೆವು. ಇವರು ಅಂಕಣಕಾರರೋ? ಅಥವಾ ಅಂಕಣಕೋರರೋ? ಎಂಬುದನ್ನ ಮುಂದಿನ ದಿನಗಳಲ್ಲಿ ಇತಿಹಾಸ ನಿರ್ಧರಿಸುತ್ತದೆ. ಆದರೆ, ನನ್ನ ಪ್ರಶ್ನೆ ಇಷ್ಟೇ ನಮ್ಮ ಪತ್ರಿಕೆಗಳ ಆದರ್ಶ, ನೈತಿಕತೆ, ಮೌಲ್ಯ, ಬದ್ಧತೆಗಳು ಎಲ್ಲಿ ಮರೆಯಾಗಿ ಹೋದವು?

ಕೇವಲ ಒಂದು ದಶಕದ ಹಿಂದೆ ಯಾವ ಕಾರಣಕ್ಕೂ ಪತ್ರಿಕೆಗಳ ಮುಖಪುಟದಲ್ಲಿ ಕಾಲುಪುಟಕ್ಕಿಂತ ಹೆಚ್ಚು ಜಾಹಿರಾತು ಬಳಸಬಾರದು ಎಂಬ ಅಲಿಖಿತ ನಿಯಮವೊಂದು ಜಾರಿಯಲ್ಲಿತ್ತು. ಇದು ಯಾರೋ ಹಾಕಿದ ನಿಬಂಧನೆಯಾಗಿರಲಿಲ್ಲ. ತಾವಾಗಿಯೇ ಮಾಲಿಕರು ಹಾಕಿಕೊಂಡಿದ್ದ ಲಕ್ಷ್ಮಣ ರೇಖೆಯಾಗಿತ್ತು. ಇಂದು ಇಡೀ ಪುಟವೇಕೆ? ಅಷ್ಟೂ ಪತ್ರಿಕೆಯ ಪುಟಗಳನ್ನು ಜಾಹಿರಾತಿಗೆ ಒತ್ತೆ ಇಡಲು ತಯಾರಿದ್ದಾರೆ. ಮಾಧ್ಯಮಗಳು ಇತ್ತೀಚೆಗೆ ಭ್ರ್ರಷ್ಟ ಮತ್ತು ಶ್ರೀಮಂತ ರಾಜಕಾರಣಿಗಳ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪಾಲಾಗುತ್ತಿರುವ ಪರಿಣಾಮವಿದು. ಉತ್ಪನ್ನ ವೆಚ್ಚ ಅಧಿಕವಾದ ಕಾರಣ ಜಾಹಿರಾತು ಅನಿವಾರ್ಯ ಎಂಬ ವಾದವನ್ನು ಇವರು ನಮ್ಮ ಮುಂದೆ ಮಂಡಿಸುತಿದ್ದಾರೆ. ಅವರ ಮಾತನ್ನೂ ನಾವು ಗೌರವಿಸೊಣ, ಆದರೆ, ಜಾಹಿರಾತುಗಳನ್ನ ಪ್ರಕಟಿಸುವಾಗ ಸಾಮಾಜಿಕ ಜವಾಬ್ದಾರಿ ಬೇಡವೆ? ಇತ್ತೀಚೆಗೆ ಪತ್ರಿಕೆಗಳಲ್ಲಿ ಮೂರನೇ ದರ್ಜೆ ಸಂಸ್ಕೃತಿಯ ಜಾಹಿರಾತುಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿದಾಗ ಭಾರತದ ಪುರುಷರೆಲ್ಲಾ ನಪುಂಷಕರು ಇಲ್ಲವೇ ಷಂಡರೆನೋ ಎಂಬ ಸಂಶಯ ಕಾಡುತ್ತದೆ. ಇವಿಷ್ಟೆಯಲ್ಲ, ಹೆಂಗಸರಿಗೆ ಸ್ತನ ದೊಡ್ಡದು ಮಾಡುವುದಕ್ಕೆ, ಗಂಡಸರ ಬೋಳುತಲೆಯಲ್ಲಿ ಕೂದಲು ಬೆಳೆಯುವುದಕ್ಕೆ, ಸಣ್ಣಗಿರುವವರು ದಪ್ಪವಾಗುವುದಕ್ಕೆ, ದಪ್ಪಗಿದ್ದವರು ಸಣ್ಣಗಾಗುವುದಕ್ಕೆ ಎಲ್ಲಾ ಬಗೆಯ ಜಾಹಿರಾತಿಗೂ ಇಲ್ಲಿ ಅವಕಾಶಗಳಿವೆ. ಕ್ಯಾನ್ಸರ್ ರೋಗ ವಾಸಿ ಮಾಡುವ ಕಡ್ಡಿಪುಡಿ ವೈದ್ಯರು ಪತ್ರಿಕೆಗಳಲ್ಲಿ ರಾರಾಜಿಸತೊಡಗಿದ್ದಾರೆ. ಇದೇ ಕರ್ನಾಟಕದಲ್ಲಿ ಲಂಕೇಶ್‌ರವರು ಜಾಹಿರಾತು ನಿರಾಕರಿಸಿ ಪತ್ರಿಕೆಯನ್ನು ಹುಟು ಹಾಕಿ ಆ ಮೂಲಕ ರಾಜ್ಯದ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಬದುಕನ್ನು ಬದಲಾಯಿಸಿದ ಇತಿಹಾಸವಿದೆ. ಅದನ್ನು ನಾವೀಗ ಮರೆತಿದ್ದೆವೆ. ಎಲ್ಲರೂ ಇಂದಿನ ಮಾಲಿಕರ ರೀತಿಯಲ್ಲಿ ಯೋಚಿಸಿದ್ದರೆ, ಕರ್ನಾಟಕದಲ್ಲಿ ಪ್ರಜಾವಾಣಿ ದಿನಪತ್ರಿಕೆ ಹುಟ್ಟುತ್ತಿರಲಿಲ್ಲ. ಮದ್ರಾಸ್ ನಗರದಲ್ಲಿ ಹಿಂದೂ ಎಂಬ ಇಂಗ್ಲೀಷ್ ದಿನಪತ್ರಿಕೆ ಹುಟ್ಟುತ್ತಿರಲಿಲ್ಲ. ಮುಂಬಯನಗರದಲ್ಲಿ ಇಂಡಿಯನ್ ಎಕ್ಸ್ ಪ್ರಸ್ ಪತ್ರಿಕೆ ಹುಟ್ಟುತ್ತಿರಲಿಲ್ಲ.

ಪ್ರಜಾವಾಣಿಯ ಸಂಸ್ಥಾಪಕ ಕೆ.ಎನ್. ಗುರುಸ್ವಾಮಿ ಅವರ ಮಾತೃಬಾಷೆ ತೆಲುಗು. ಅವರು ಮೂಲತಃ ಆಂಧ್ರ್ರದ ಆಧೋನಿ ಪಟ್ಟಣದವರು. ಈಡಿಗ ಸಮುದಾಯಕ್ಕೆ ಸೇರಿದ ಅವರ ಕುಟುಂಬದ ವೃತ್ತಿ ಹೆಂಡ, ಸಾರಾಯಿ ಮಾರುವದಾಗಿತ್ತು.ಅವರು ಅದನ್ನು ಬಿಟ್ಟು 1948 ರಲ್ಲಿ ಬೆಂಗಳೂರಿನಲ್ಲಿ ಪ್ರಥಮವಾಗಿ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ದಿನಪತ್ರಿಕೆ ತೆಗೆದರು, ಮರುವರ್ಷ ಪ್ರಜಾವಾಣಿ ಪತ್ರಿಕೆ ಪ್ರಾರಂಭಿಸಿದರು. ಶತಮಾನದ ಹಿಂದೆ ಅಂದಿನ ಮದ್ರಾಸ್ ನಗರದಲ್ಲಿ ನಾಲ್ವರು ಬ್ರಾಹಣ ವಕೀಲರು ಸೇರಿ ಆರಂಭಿಸಿದ ಹಿಂದು ಇಂಗ್ಲೀಷ್ ದಿನಪತ್ರಿಕೆಗೆ ಇಡೀ ಭಾರತದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ವೃತ್ತಿಯಲ್ಲಿ ಮಾರವಾಡಿ ಕುಟುಂಬದಿಂದ ಬಂದ ರಾಮನಾಥ ಗೋಯಂಕಾ, ಮುಂಬೈನಲ್ಲಿ ಆರಂಭಿಸಿದ ಇಂಡಿಯನ್ ಎಕ್ಸ್‌ಪ್ರೆಸ್ ಇಂಗ್ಲೀಷ್ ಪತ್ರಿಕೆಗೂ ಒಂದು ದೊಡ್ಡ ಇತಿಹಾಸವಿದೆ. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸಮರವನ್ನೆ ಸಾರಿದ್ದ ಈ ಪತ್ರಿಕೆಯ ಅಂದಿನ ವರದಿಗಳು ಭಾರತದ ಪತ್ರಿಕೋದ್ಯದಲ್ಲಿ ಮೈಲಿಗಲ್ಲು. ಇವರುಗಳು ಲಾಭವನ್ನೇ ಪ್ರಧಾನ ಗುರಿಯಾಗಿಸಿಕೊಡವರಲ್ಲ. ವ್ಯವಹಾರದ ಜೊತೆಜೊತೆಗೆ ಆದರ್ಶವನ್ನು ಮೈಗೂಡಿಸಿಕೊಂಡವರು.

ನನ್ನ ಪ್ರಶ್ನೆ ಇಷ್ಟೆ; ವ್ಯವಹಾರದ ಜೊತೆ ಜೊತೆಗೆ ನೈತಿಕತೆ ಇಲ್ಲದಿದ್ದರೆ ಹೇಗೆ? ನಿಮಗೆ ಲಾಭ ಮಾಡುವ ದೃಷ್ಟಿಕೋನವಿದ್ದರೆ, ಈ ವಲಯಕ್ಕೆ ಏಕೆ ಬರುತ್ತೀರಿ? ಬೇರೆ ವ್ಯಾಪಾರ ಮಾಡಿ.

ಈ ಸಂದರ್ಭದಲ್ಲಿ ಒಂದು ಘಟನೆ ನೆನಪಿಗೆ ಬರುತ್ತಿದೆ: ದಶಕದ ಹಿಂದೆ ವಿಜಯ ಸಂಕೇಶ್ವರರು ‘ವಿಜಯ ಕರ್ನಾಟಕ’ ಪತ್ರಿಕೆ ಹುಟ್ಟು ಹಾಕಿದಾಗ, ಜೊತೆಯಲ್ಲಿ ‘ನೂತನ’ ಎಂಬ ವಾರಪತ್ರಿಕೆ ಹಾಗೂ ‘ಭಾವನಾ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ತರಂಗ ಪತ್ರಿಕೆಯ ಸಂಪಾದಕರಾಗಿದ್ದ ಸಂತೂಷ್ ಕುಮಾರ ಗುಲ್ವಾಡಿ ಸಂಪಾದಕರಾಗಿದ್ದ ವಾರಪತ್ರಿಕೆಯನ್ನ ಕೇವಲ 12 ವಾರಗಳಲ್ಲಿ ಮುಚ್ಚಿಹಾಕಲಾಯಿತು. ಮಿತ್ರರಾದ ಜಯಂತ್ ಕಾಯ್ಕಿಣಿ ಇವರ ಸಂಪಾದಕತ್ವದಲ್ಲಿ ಭಾವನಾ ಮಾಸಪತ್ರಿಕೆ ಹತ್ತು ತಿಂಗಳು ಕಾಲ ನಡೆದು ಕನ್ನಡದ ಮಾಸಪತ್ರಿಕೆಗಳಲ್ಲಿ ಹೊಸ ಶಕೆಯನ್ನು ಆರಂಭಿಸಿತ್ತು. ಒಂದು ದಿನ ಕಾಯ್ಕಿಣಿ ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿಯೊಬ್ಬ ‘ಸಾರ್. ಮುಂದಿನ ತಿಂಗಳಿನಿಂದ ಭಾವನಾ ಪತ್ರಿಕೆ ಬರೋದಿಲ್ಲ, ನೀವು ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಕೆಲಸ ಮಾಡಬೇಕೆಂತೆ,’ ಎಂದು ಹೇಳಿದಾಗ, ಏಕಂತೆ ಎಂದು ಕಾಯ್ಕಿಣಿ ಪ್ರಶ್ನಿಸಿದರು. ಪತ್ರಿಕೆ ಲಾಭ ತರುತ್ತಿಲ್ಲ ಎಂದು ಅವನು ಉತ್ತರಿಸಿದಾಗ, ಕುಪಿತಗೊಂಡ ಕಾಯ್ಕಿಣಿ, ‘ನಿಮ್ಮ ಮಾಲಿಕನಿಗೆ ಲಾಭ ಬೇಕಿದ್ದರೆ, ಬೆಂಗಳೂರು ನಗರದಲ್ಲಿ ವೈನ್ ಶಾಪ್ ತೆರಯಲಿಕ್ಕೆ ಹೇಳು,’ ಎನ್ನುತ್ತಾ ಆದಿನ ಕುರ್ಚಿಯಿಂದ ಎದ್ದು ಬಂದರು.

ವರ್ತಮಾನದ ಪತ್ರಿಕೋದ್ಯಮ ಯಾವ ಹಂತ ತಲುಪಿದೆ ಎಂಬುವುದರ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಒಮ್ಮೆ ನೀವು ಬೆಂಗಳೂರಿನ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಬೇಟಿ ಕೊಡುವುದು ಒಳಿತು. ಬೆಂಗಳೂರು ನಗರವೊಂದರಲ್ಲೇ ಇನ್ನೂರಕ್ಕೂ ಹೆಚ್ಚು ವಾರಪತ್ರಿಕೆಗಳಿವೆ. ಪ್ರತಿ ಕೌನ್ಸಿಲರ್‌ಗೆ ಬಕೆಟ್ ಹಿಡಿಯಲು ಎರಡೆರಡು ಪತ್ರಿಕೆಗಳಿವೆ. ನನ್ನ ಮಿತ್ರ ಡಾ. ಕೆ. ಪುಟ್ಟಸ್ವಾಮಿ ಅಲ್ಲಿ ಅಧಿಕಾರಿಯಾಗಿದ್ದಾಗ‍ ಬೇಟಿ ಮಾಡಲು ಹೋಗಿದ್ದ ನನಗೆ ಈ ಸಂಗತಿ ತಿಳಿಯಿತು. ಸಂಪಾದಕರು ಎನಿಸಿಕೊಂಡ ಆ ಮಹಾಶಯರ ಗತ್ತು, ದೌಲತ್ತು ಇವುಗಳನ್ನ ನೋಡುವುದೇ ಚೆಂದ. ಇನ್ನು ನಾಲ್ಕು ವರ್ಷ ನನ್ನ ಮಿತ್ರ ಅಲ್ಲೇ ಇದ್ದಿದ್ದರೆ, ಆತ ಸಂತನಾಗುವ ಅವಕಾಶವಿತ್ತು. ಏಕೆಂದರೆ, ಆ ರೋಲ್ ಕಾಲ್ ಗಿರಾಕಿಗಳಿಗೆ ಪುಟ್ಟಸ್ವಾಮಿ ತಾಳ್ಮೆಯಿಂದ ಉತ್ತರಿಸುತಿದ್ದ ರೀತಿ ನೋಡಿ ನಾನೇ ಬೆರಗಾಗಿದ್ದೀನಿ. ನಾನು ಮಿತ್ರನ ಆ ಸ್ಥಾನದಲ್ಲಿದ್ದಿದ್ದರೆ ಕಚೇರಿಯಲ್ಲಿ ನಾಲ್ಕು ಹೆಣ ಬಿದ್ದು, ಇಷ್ಟರಲ್ಲಿ ನಾನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಬೇಕಿತ್ತು.

ಇದು ಕೇವಲ ಮುದ್ರಣ ಮಾದ್ಯಮದ ಅವತಾರವಷ್ಟೇ ಅಲ್ಲ, ಇವರನ್ನೂ ಮೀರಿಸುವ ಹಲಾಲುಕೋರರು ನಮ್ಮ ದೃಶ್ಯ ಮಾಧ್ಯದಲ್ಲೂ ಕೂಡ ಇದ್ದಾರೆ. ಕಳೆದ ವರ್ಷ ಬೆಳಗಾವಿ ನಗರದಲ್ಲಿ 45 ವರ್ಷದ ಮಕ್ಕಳಿಲ್ಲದ ವಿಧವೆಯೊಬ್ಬಳು ನೆರೆ ಮನೆಯ ಹನ್ನೊಂದು ವರ್ಷದ ಗಂಡು ಮಗುವನ್ನು ಮುದ್ದಿಸಿದ ಏಕೈಕ ಕಾರಣಕ್ಕಾಗಿ, “ಆಂಟಿ ಬಲು ತುಂಟಿ” ಎಂಬ ಹೆಸರಿನಲ್ಲಿ ಸುದ್ದಿ ಚಾನಲ್ ಒಂದು ವಿಧವೆಯೊಬ್ಬಳು ಲೈಂಗಿಕ ತೃಷೆಗಾಗಿ ಬಾಲಕನೊಬ್ಬನನ್ನು ಬಳಸಿಕೊಂಡಳು ಎಂಬಂತೆ ಇಡೀ ದಿನ ಸುದ್ದಿ ಪ್ರಸಾರ ಮಾಡಿತು. ಹನ್ನೊಂದು ವರ್ಷದ ಮಗುವಿಗೆ ಲೈಂಗಿಕ ವಿಷಯಗಳ ಬಗ್ಗೆ ಅರಿವು ಇರುವುದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಈ ಅಯೋಗ್ಯರಿಗೆ ಬೇಡವೇ? ಆ ಹೆಣ್ಣು ಮಗಳ ಖಾಸಗಿ ಬದುಕು ಏನಾಗಿರಬೇಡ, ನೀವೆ ಯೋಚಿಸಿ?

ಮಾಧ್ಯಮದ ಮೇಲೆ, ಇದರ ಭಾಗವಾಗಿರುವ ನಮ್ಮಗಳ ಮೇಲೆ ಯಾವುದೇ ಹಿಡಿತವಿಲ್ಲದೇ ಇರುವುದು ಇಂತಹ ದುರಂತಗಳಿಗೆ ಕಾರಣವಾಗಿದೆ. ನೈತಿಕತೆಯನ್ನ, ಪ್ರಾಮಾಣಿಕತೆಯನ್ನ ಸಮಾಜಕ್ಕೆ ಬೋಧಿಸುವ ಮೊದಲು ನಾವು ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಮಿತ್ರರೆ, ಮೂರು ದಶಕಗಳಿಂದ ಈ ವೃತ್ತಿಯಲ್ಲಿರುವ ನಾನು ಮಾಧ್ಯಮದ ಸಹದ್ಯೋಗಿಗಳ ಬಗ್ಗೆ ಪ್ರೀತಿಯನ್ನಾಗಲಿ, ದ್ವೇಷವನ್ನಾಗಲಿ ಇಟ್ಟುಕೊಂಡವನಲ್ಲ. ಅಂದ ಮಾತ್ರಕ್ಕೆ ಕಣ್ಣೆದುರುಗಿನ ವಂಚನೆಗಳನ್ನು ಮುಚ್ಚಿಟ್ಟುಕೊಂಡವನೂ ಅಲ್ಲ. ಇದ್ದದನ್ನು ಇದ್ದ ಹಾಗೆ, ಎದೆಗೆ ಒದ್ದ ಹಾಗೆ ಹೇಳುವುದು ನನ್ನ ಮಂಡ್ಯದ ಮಣ್ಣಿನ ಗುಣ. ಅದರ ಭಾಗವಾಗಿರುವ ನಾನು ನನಗೆ ಅನಿಸದ್ದನ್ನು ಇಲ್ಲಿ ನಿಮ್ಮೆದುರು ಹಂಚಿಕೊಂಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಇರಲಿ.

ಸ್ಕಾರ್ಫ್ ನಿಷೇಧ – ಕೋಮುವಾದಿ ಕಾಲೇಜುಗಳ ಸಮಾನತೆಯ ನಿಯಮ

– ನವೀನ್ ಸೂರಿಂಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸ್ಕಾರ್ಫ್ ವಿವಾದ ಬುಗಿಲೆದ್ದಿದೆ. ಪುತ್ತೂರಿನ ರಾಮಕುಂಜೇಶ್ವರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ್ದು 45 ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ತರಗತಿಗೆ ಗೈರು ಹಾಜರಾಗಿದ್ದಾರೆ. ಹಿಂದುತ್ವ ಪ್ರಚೋದಿಸುವ ಕೋಮುವಾದಿಗಳು ಶಾಲಾ ಕಾಲೇಜುಗಳಲ್ಲಿ ಸಮಾನತೆಯ ನೆಪದಲ್ಲಿ ಮುಸ್ಲಿಂ ವಿರೋಧಿಯಾಗಿ ಸ್ಕಾರ್ಫ್ ನಿಷೇಧಕ್ಕೆ ಬೆಂಬಲ ಸೂಚಿಸಿದರೆ, ಕಮ್ಯೂನಿಸ್ಟರು ಮತ್ತು ಪ್ರಗತಿಪರರು “ಸ್ಕಾರ್ಫ್ ತೊಡಲೇ ಬೇಕು ಎನ್ನುವುದು ಮೂಲಭೂತವಾದಿಗಳ ಹುನ್ನಾರವಾಗಿರುವುದರಿಂದ ವಿದ್ಯಾರ್ಥಿನಿಯರು ಸ್ಕಾರ್ಫ್ ತೊರೆಯಬೇಕು” ಎನ್ನುತ್ತಾರೆ. ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಜಮಾ ಅತೆ ಇಸ್ಲಾಮೀ ಹಿಂದ್ ನಂತಹ ಮುಸ್ಲಿಂ ಸಂಘಟನೆಗಳು ಕಾಲೇಜಿಗೆ ತೆರಳೋ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಕಡ್ಡಾಯ ಎಂಬ ನಿಲುವಿಗೆ ಬದ್ಧವಾಗಿದೆ. ಒಟ್ಟಾರೆ ಇಷ್ಟೊಂದು ವಿಷಯಗಳ ಜಂಜಾಟದ ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿರುವವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು. ಪ್ರಗತಿಪರವಾದ ವೈಚಾರಿಕವಾದ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಧರ್ಮಾತೀತ ಮತ್ತು ಜಾತ್ಯಾತೀತ ಮನೋಭಾವನೆ ಬೆಳೆಯುವ ರೀತಿಯಲ್ಲಿ ಶಿಕ್ಷಣ ನೀಡದೆ ಏಕಾಏಕಿ ಸ್ಕಾರ್ಫ್ ನಿಷೇಧಿಸುವುದು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದಂತಾಗುತ್ತದೆ.

“ಶಿಕ್ಷಣದಲ್ಲಿ ಧರ್ಮ ಬೆರೆಸಲು ಸಾಧ್ಯವಿಲ್ಲ. ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿನಿಯರು ಪ್ರತ್ಯೇಕರಾಗಿ ಕಾಣುವುದರಿಂದ ವಿದ್ಯಾರ್ಥಿಗಳಲ್ಲಿ ಅಸಮಾನ ಭಾವನೆ ಬರುತ್ತದೆ. ಸ್ಕಾರ್ಫ್ ಬೇಕು ಎನ್ನುವ ವಿದ್ಯಾರ್ಥಿನಿಯರಿಗೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಬೆಂಬಲವಿದೆ” ಎಂದು ಮಾಮೂಲಾಗಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕಾರ್ಫ್ ನಿಷೇಧ ಮಾಡಲಾಗಿದೆ. ಸ್ಕಾರ್ಫ್ ನಿಷೇಧ ಮಾಡಿರೋ ಕಾಲೇಜುಗಳು ಯಾವುದು ಮತ್ತು ಅಲ್ಲಿರುವ ಶಿಕ್ಷಣ ವ್ಯವಸ್ಥೆ ಯಾವ ತರಹದ್ದು ಎಂಬುದನ್ನು ಅವಲೋಕಿಸಿದರೆ ಸ್ಕಾರ್ಫ್‌ನ್ನು ಏಕಾಏಕಿ ನಿಷೇಧಿಸುವುದು ಸರಿಯೇ ಎಂಬುದರ ಬಗ್ಗೆ ಸರಳವಾಗಿ ನಿರ್ಣಯಕ್ಕೆ ಬರಬಹುದು.

ತರಗತಿಯಲ್ಲಿ ಮೊದಲ ಬಾರಿಗೆ ಸ್ಕಾರ್ಫ್ ನಿಷೇಧ ಮಾಡಿದ್ದು ಬಂಟ್ವಾಳದ ಎಸ್ವಿಎಸ್ ಕಾಲೇಜು. ಅಂದರೆ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು. ಹೆಸರೇ ಹೇಳುವಂತೆ ಇದೊಂದು ಸಮುದಾಯ ಮತ್ತು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿನ ಎಲ್ಲಾ ತರಗತಿ ಕೊಠಡಿಗಳಲ್ಲಿ ಹಿಂದೂ ದೇವರ ಫೋಟೋ ಇದೆ. ಸಾಲದ್ದಕ್ಕೆ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಕಂಡವರ ಫೋಟೋಗಳೂ ಇವೆ. ಅದಕ್ಕಿಂತಲೂ ಮುಖ್ಯವಾಗಿ ಆರೆಸ್ಸೆಸ್ ಮತ್ತು ಹಿಂದೂ ಸಂಘಟನೆಗಳಲ್ಲಿ ಮುಖ್ಯಸ್ಥರಾಗಿರುವವರೇ ಇಲ್ಲಿನ ಆಡಳಿತ ಮಂಡಳಿ ಸದಸ್ಯರು. ಇವರ್ಯಾಕೆ ಸ್ಕಾರ್ಫನ್ನು ಏಕಾಏಕಿ ನಿಷೇಧ ಮಾಡಿದರು ಎಂಬುದನ್ನು ಊಹಿಸಲು ಕಷ್ಟಸಾಧ್ಯವೇನಲ್ಲ. ಅದಕ್ಕಿಂತಲೂ ಮುಖ್ಯವಾಗಿ ಎಸ್ವಿಎಸ್ ಕಾಲೇಜಿನ ಪ್ರತೀ ತರಗತಿಯಲ್ಲಿ ಹಿಂದೂ ದೇವರ ಫೋಟೋ ಇಟ್ಟು, ವೈಚಾರಿಕ, ಸಂವಿಧಾನಿಕ ಬದ್ಧತೆಯ ಪಾಠ ನಿರೀಕ್ಷೆಯೇ ಸಾಧ್ಯವಿಲ್ಲ.

ಎಸ್ವಿಎಸ್ ನಂತರ ಸುದ್ಧಿಯಾಗಿದ್ದು ಮೂಡಬಿದ್ರೆಯ ಜೈನ್ ಕಾಲೇಜು. ಇದೂ ಕೂಡಾ ಖಾಸಾಗಿ ಕಾಲೇಜಾಗಿದ್ದು ಒಂದು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿ ಜೈನ ಸಂಪ್ರದಾಯಗಳನ್ನು ನಾಜೂಕಾಗಿ ವಿದ್ಯಾರ್ಥಿಗಳ ಮೇಲೆ ಹೇರುವ ಎಲ್ಲಾ ಯತ್ನಗಳನ್ನು ಕಾಲೇಜು ಮಾಡುತ್ತದೆ. ಇಲ್ಲಿನ ಪ್ರಾರ್ಥನೆಯಿಂದ ಹಿಡಿದು ಕಾಲೇಜಿನ ಕಾರ್ಯಕ್ರಮಗಳ ಮೂಲಕ ಜೈನ ಜೀವನ ಪದ್ಧತಿಯನ್ನು ಅನುಷ್ಠಾನ ಮಾಡುವ ಯತ್ನ ನಡೆಸಲಾಗುತ್ತದೆ. ಇಲ್ಲಿನ ತರಗತಿಯ ಕೊಠಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಫೋಟೋ ಇದೆ.

ನಂತರ ಸ್ಕಾರ್ಫ್ ವಿವಾದ ತಲೆದೋರಿದ್ದು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ. ಇದೊಂದು ಕ್ರಿಶ್ಚಿಯನ್ ಧರ್ಮಪ್ರಾಂತ್ಯದ ಅಡಿಯಲ್ಲಿ ಬರೋ ಶಿಕ್ಷಣ ಸಂಸ್ಥೆ. ಇಲ್ಲಿನ ಪ್ರತೀ ಕೊಠಡಿ ಮಾತ್ರವಲ್ಲ ಒಂದು ಸೆಂಟಿ ಮೀಟರ್ ಜಾಗ ಇದ್ದರೂ ಅಲ್ಲೆಲ್ಲಾ ಶಿಲುಬೆಗಳನ್ನು ನೇತಾಡಿಸಿದ್ದಾರೆ. ಎಲ್ಲೆಲ್ಲಿ ಗೋಡೆ ಖಾಲಿ ಇದೆಯೋ ಅಲ್ಲಲ್ಲಿ “ಏ ಪರಲೋಕದಲ್ಲಿರುವ ಪ್ರಭುವೇ……” ಎಂಬ ಉದ್ಘಾರಗಳನ್ನು ಹಾಕಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬಾರದು ಎಂದು ಹೇಳುವ ಇಲ್ಲಿನ ಪ್ರಾಂಶುಪಾಲರು ಒರ್ವ ಪಾದ್ರಿ. ಅವರು ಪಾದ್ರಿಗಳು ತೊಡುವ ಬಿಳಿ ನಿಲುವಂಗಿ ತೊಟ್ಟೇ ಬರುತ್ತಾರೆ. ಇಲ್ಲಿನ ಶಿಕ್ಷಕಿಯರಲ್ಲಿ ಅನೇಕರು ನನ್‌ಗಳಾಗಿದ್ದು ಅವರ ಧಾರ್ಮಿಕ ತೊಡುಗೆ ಹಾಕಿಕೊಂಡೇ ಪಾಠ ಮಾಡುತ್ತಾರೆ.

ಇದೀಗ ಸ್ಕಾರ್ಫ್ ವಿವಾದ ಏರ್ಪಟ್ಟಿದ್ದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಾರ್ಗದರ್ಶಕರಾಗಿರೋ ಪುತ್ತೂರು ರಾಮಕುಂಜೇಶ್ವರ ಕಾಲೇಜಿನಲ್ಲಿ. ಹೇಳಿಕೇಳಿ ಇಲ್ಲಿನ ಹೋರ್ಡಿಂಗ್‌ನಿಂದ ಹಿಡಿದು ಎಲ್ಲಾ ತರಗತಿ ಕೊಠಡಿಗಳಲ್ಲಿ ಪೇಜಾವರ ಶ್ರೀಗಳ ಫೋಟೋ ಅಳವಡಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕರ ಕೈಯ್ಯಲ್ಲಿ ಕೇಸರಿ ದಾರ ಇದೆ. ಇಲ್ಲಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಿಂದೂ ಸಂಘಟನೆಗಳಿಗೆ ಸೇರಿದವರು. ಈ ಎಲ್ಲಾ ಕಾಲೇಜು ಆಡಳಿತ ಮಂಡಳಿಯವರು ಯಾವ ರೀತಿ ಸಮಾನತೆಯ ಹರಿಕಾರರು ಎಂಬುದನ್ನು ಊಹಿಸಬಹುದು.

ಮೇಲೆ ಹೇಳಿರುವ ಕಾಲೇಜುಗಳನ್ನು ಹೊರತು ಪಡಿಸಿ ಬೇರಾವುದೇ ಕಾಲೇಜುಗಳಲ್ಲಿ ಸ್ಕಾರ್ಫ್ ಅಥವಾ ಶಿರವಸ್ತ್ರ ನಿಷೇಧ ಮಾಡಿಲ್ಲ. ಈ ಕಾಲೇಜುಗಳು ಸ್ಕಾರ್ಫ್ ನಿಷೇಧಿಸುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಅಸಂವಿಧಾನಿಕವಾಗುತ್ತದೆ.

ತರಗತಿಯಲ್ಲಿ ಸ್ಕಾರ್ಫ್ ಏಕಾಏಕಿ ನಿಷೇದಿಸಿದರೆ ಮೂಲಭೂತವಾದಿಗಳಿಗೆ ಪೆಟ್ಟು ನೀಡಿದಂತಾಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿಯಾಗುತ್ತದೆ. ಸ್ಕಾರ್ಫ್ ನಿಷೇಧ ಮೂಲಭೂತವಾದಿಗಳಿಗೆ ಲಾಭವೇ ಹೊರತು ನಷ್ಠವಲ್ಲ. ಹರೆಯಕ್ಕೆ ಬಂದ ಮುಸ್ಲಿಂ ಹುಡುಗಿ ಮನೆ ಹೊಸ್ತಿಲು ದಾಟುವುದೇ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸೋ ವಿಷಯ. ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಒಪ್ಪಲು ಸಾದ್ಯವೇ ಇಲ್ಲ. ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಕಟ್. ಮೂಲಭೂತವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಇನ್ನು ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಬೇರೆ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ತೊಕ್ಕೊಟ್ಟಿನ ಹಿರಾ ದಂತಹ ಮುಸ್ಲಿಂ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಬೇರೆ ಸಮುದಾಯದ ವಿದ್ಯಾರ್ಥಿನಿಯರಿಗೆ ಪ್ರವೇಶ ಇಲ್ಲ. ಇಂತಹ ಕಾಲೇಜಿನಲ್ಲಿ ಬುರ್ಕಾ ಕಡ್ಡಾಯ. ಇಲ್ಲಿ ಯುವಕರಿಗೆ ಪ್ರವೇಶ ಇಲ್ಲ. ಇಲ್ಲಿ ಕಲಿತ ವಿದ್ಯಾರ್ಥಿನಿಯರು ಅದೆಷ್ಟು ಸಂಕುಚಿತವಾಗಿ ಶಿಕ್ಷಣ ಪಡೆಯಬೇಕಾಗುತ್ತದೆ ಎಂಬುದೇ ದುರಂತ. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಬ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ.

ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಅಥವಾ ಸ್ಕಾರ್ಫ್ ಬೇಕೇ ಬೇಡವೇ ಎಂಬ ಒಂದೇ ಪ್ರಶ್ನೆ ಕೇಳುವುದಾದರೆ ವಿದ್ಯಾರ್ಥಿನಿಯರಿಗೆ ಮಾತ್ರ ಅಲ್ಲ ಯಾವುದೇ ವ್ಯಕ್ತಿಯ ಬಟ್ಟೆಯನ್ನು ಯಾವುದೋ ಒಂದು ಧರ್ಮ ಅಥವಾ ವ್ಯಕ್ತಿ ನಿರ್ಧಾರ ಮಾಡುವುದೇ ಅಸಂವಿಧಾನಿಕ. ವಿದ್ಯಾರ್ಥಿನಿಯರಲ್ಲಿ ಸ್ಕಾರ್ಫ್ ಹಾಕಲೇ ಬೇಕು ಎಂಬ ಹಠದ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಇದೆ ಎಂಬ ವಾದ ಸತ್ಯವಾದರೂ ಅಂತಹ ಮೂಲಭೂತವಾದಿತನವನ್ನು ಹೋಗಲಾಡಿಸುವ ಬಗ್ಗೆ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಸಮಾನತೆ ಎಂದರೆ ಯೂನಿಫಾರಂ ಹಾಕುವುದಲ್ಲ. ಒಟ್ಟಿಗೆ ಕುಳಿತು ಊಟ ಮಾಡುವುದೂ ಅಲ್ಲ. ಅದೊಂದು ಮನಸ್ಥಿತಿ. ವಿದ್ಯಾರ್ಥಿಗಳಲ್ಲಿ ಅಂತಹ ಸಮಾನತೆಯ ಮನಸ್ಥಿತಿಯನ್ನು ಬೆಳೆಸಲು ಸ್ಕಾರ್ಫ್ ನಿಷೇಧಿಸಿರುವ ಈ ಕಾಲೇಜುಗಳು ಏನು ಕೆಲಸ ಮಾಡಿವೆ?

ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಕಾಲೇಜು ತರಗತಿ ಕೊಠಡಿಯಲ್ಲಿರುವ ಸ್ವಾಮೀಜಿಗಳ, ಧರ್ಮಾಧಿಕಾರಿಗಳ ಫೋಟೋ, ಶಿಲುಬೆಗಳನ್ನು ಕಿತ್ತು ತೆಗೆಯಲಿ. ಶಿಕ್ಷಕರು ಶಿಕ್ಷಕರಂತೆಯೇ ತರಗತಿಗೆ ಬಂದು ಪಾಠ ಮಾಡಲಿ. ವೈಚಾರಿಕವಾದ, ಸಂವಿಧಾನದ ಆಶಯಗಳನ್ನು ಸಾರುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ನಾಜೂಕಾಗಿ ತುಂಬುವಂತಹ ಬೋಧನೆಗಳನ್ನು ಮಾಡಲಿ. ಇಂತಹ ಪ್ರಗತಿಪರ ಮನಸ್ಸುಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ನಂತರ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬೇಡಿ ಎಂದು ಹೇಳುವುದರ ಹಿಂದೆ ಒಂದು ಅರ್ಥ ಇದೆ ಎನ್ನಬಹುದು.

ಕೃಷಿಕರ ಸರ್ಕಾರ ಬರಬೇಕು

-ಆನಂದ ಪ್ರಸಾದ್

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅತ್ಯಂತ ದೊಡ್ಡ ಸಮುದಾಯ ಇಂದಿಗೂ ಕೃಷಿಕ ಸಮುದಾಯವೇ ಆಗಿದೆ. ಕೃಷಿಕರ ಹಾಗೂ ಕೃಷಿ ಕಾರ್ಮಿಕರೆಲ್ಲರ ಸಂಖ್ಯೆ ದೇಶದ ಜನಸಂಖ್ಯೆಯ ಶೇಕಡಾ 60ರ ಆಸುಪಾಸು ಇಂದಿಗೂ ಇದೆ. ಪರಿಸ್ಥಿತಿ ಹೀಗಿರುವಾಗ ಕೃಷಿಕ ಹಾಗೂ ಕೃಷಿ ಕಾರ್ಮಿಕರೆಲ್ಲರೂ ಒಂದು ಸಮುದಾಯವಾಗಿ ತಮ್ಮದೇ ಆದ ಒಂದು ಪಕ್ಷಕ್ಕೆ ವೋಟು ಹಾಕಿದರೆ ಕೃಷಿಕರ ಸರ್ಕಾರವೊಂದನ್ನು ತರಲು ಸಾಧ್ಯವಾಗಬೇಕಲ್ಲವೆ? ಇಂಥ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಜನಪರವಾದ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಾಧ್ಯವಿದೆಯಲ್ಲವೇ? ಜನ ಜಾತಿ ಆಧಾರಿತವಾಗಿ ಓಟು ಹಾಕುವ ಬದಲು ಉದ್ಯೋಗಾಧಾರಿತವಾಗಿ ಓಟು ಹಾಕಿದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಕೃಷಿಕರಿಗೆ ಬೇಕಾದ ಕ್ರಾಂತಿಕಾರಕ ನೀತಿಗಳನ್ನು ಜಾರಿಗೆ ತರಬಹುದು. ಇಂಥ ಪರಿಕಲ್ಪನೆ ಏಕೆ ದೇಶದಲ್ಲಿ ಅಥವಾ ರಾಜ್ಯದಲ್ಲಿ ಮೂಡುವುದಿಲ್ಲ?

ದೇಶವು ಸ್ವಾತಂತ್ರ್ಯ ಪಡೆದು 65 ವರ್ಷಗಳು ಕಳೆದರೂ ಪ್ರತಿಯೊಬ್ಬ ವಯಸ್ಕ ಪ್ರಜೆಗೂ ಮತದಾನದ ಹಕ್ಕಿರುವಾಗ ದೇಶದ ಅತ್ಯಂತ ದೊಡ್ಡ ಸಮುದಾಯವಾದ ಕೃಷಿಕರ ಸರ್ಕಾರ ಒಮ್ಮೆಯೂ ಬರಲಿಲ್ಲ. ಒಮ್ಮೆ ಇಂಥ ಸರ್ಕಾರ ಬಂದಿದ್ದರೂ ದೇಶದಲ್ಲಿ ಮಹತ್ತರ ನೀತಿಗಳ ಮಾರ್ಪಾಡು ತರಲು ಸಾಧ್ಯವಾಗುತ್ತಿತ್ತು. ಭಾರತವು ನಿಜವಾದ ಪ್ರಜಾಪ್ರಭುತ್ವ ದೇಶ ಎಂದೆನಿಕೊಳ್ಳಬೇಕಾದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಕೃಷಿಕನೇ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕು. ಹೀಗಾಗಬೇಕಾದರೆ ಕೃಷಿಕರು ಎಚ್ಚೆತ್ತುಕೊಳ್ಳಬೇಕು, ತಮ್ಮ ಮತಾಧಿಕಾರವನ್ನು ಒಂದು ಸಮುದಾಯವಾಗಿ ಒಟ್ಟಿಗೆ ತಮ್ಮದೇ ಆದ ಒಂದು ಪಕ್ಷಕ್ಕೆ ಚಲಾಯಿಸುವ ಅಗತ್ಯವನ್ನು ಮನಗಾಣಬೇಕು. ಇದಕ್ಕಾಗಿ ದೇಶಾದ್ಯಂತ ಒಂದೇ ರೈತ ಸಂಘಟನೆ ಹಾಗೂ ಒಂದೇ ರೈತ ಪಕ್ಷ ಇರಬೇಕು. ಕೃಷಿಕರ ನಡುವೆ ಜಾತಿ, ಮೇಲು ಕೀಳು, ಬಡವ ಬಲ್ಲಿದ ಮೊದಲಾದ ಭೇದಭಾವ ಬರದಂತೆ ಎಚ್ಚರ ಮೂಡಬೇಕು.

ಕೃಷಿಕ ಹಾಗೂ ಕೃಷಿ ಕಾರ್ಮಿಕರು ಒಗ್ಗಟ್ಟಿನ ಸಂಘಟನೆ ರೂಪಿಸಿದರೆ ನಿಜವಾದ ಅರ್ಥದಲ್ಲಿ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಪ್ರಜಾಪ್ರಭುತ್ವ ಯಶಸ್ವಿಯಾಗಬಹುದು. ಈಗ ಕೃಷಿಕರು ಒಂದು ಸಮುದಾಯವಾಗಿ ಓಟು ಹಾಕುವುದನ್ನು ಕಲಿತಿಲ್ಲ. ಕೃಷಿಕರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಬೇರೆ ಬೇರೆ ರಾಜಕೀಯ ಪಕ್ಷಗಳ ರೈತ ಘಟಕಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಹೀಗಾಗಿ ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾದರೂ ಅವರ ಮಾತಿಗೆ, ಅವರ ಬೇಡಿಕೆಗಳಿಗೆ, ಅವರ ಹಿತಾಸಕ್ತಿ ಪೂರೈಕೆಗೆ ಸರ್ಕಾರದ ಮಟ್ಟದಲ್ಲಿ ಮೂರು ಕಾಸಿನ ಬೆಲೆಯೂ ಇಲ್ಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹಳ ದೊಡ್ಡ ವ್ಯಂಗ್ಯ ಹಾಗೂ ನಮ್ಮ ನಾಗರೀಕತೆಗೆ ನಾಚಿಕೆಗೇಡಿನ ವಿಚಾರವಾಗಿದೆ. ಸರ್ಕಾರದ ನೀತಿ ನಿರ್ಧಾರಗಳು ಬೃಹತ್ ಬಂಡವಾಳಗಾರರ ಲಾಭ ಹೆಚ್ಚಿಸುವ ರೀತಿ ರೂಪುಗೊಳ್ಳುತ್ತವೆಯೇ ಹೊರತು ಕೃಷಿಕರ ಉತ್ಪನ್ನಗಳಿಗೆ ಅವರ ಶ್ರಮಕ್ಕೆ ತಕ್ಕ ದರ ದೊರಕಿಸುವಂತೆ ರೂಪುಗೊಳ್ಳುವುದಿಲ್ಲ.

ಕೃಷಿಕರ ಬಳಿ ತಮ್ಮದೇ ಆದ ಮಾಧ್ಯಮಗಳಿಲ್ಲ, ತಮ್ಮದೇ ಆದ ಟಿವಿ ಚಾನೆಲ್ ಇಲ್ಲ. ಹೀಗಾಗಿ ಕೃಷಿಕರ ನಡುವೆ ಎಚ್ಚರ, ಜಾಗೃತಿ ತಿಳುವಳಿಕೆ ಮೂಡುತ್ತಿಲ್ಲ. ಇರುವ ಮಾಧ್ಯಮಗಳು, ಟಿವಿ ವಾಹಿನಿಗಳು ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾಗಿದ್ದರೂ ಕೃಷಿಕರಿಗೆ ಮೂರು ಕಾಸಿನ ಆದ್ಯತೆಯನ್ನೂ ನೀಡುತ್ತಿಲ್ಲ. ಇದನ್ನು ತಪ್ಪಿಸಬೇಕಾದರೆ ಕೃಷಿಕರು ದೇಶಾದ್ಯಂತ ಒಂದು ಘಟಕವಾಗಿ ಒಗ್ಗಟ್ಟಾಗಬೇಕು. ತಮ್ಮದೇ ಆದ ಒಂದು ಸಣ್ಣ ಕರಪತ್ರದಂಥ ಹೆಚ್ಚು ವೆಚ್ಚವಿಲ್ಲದ ಪತ್ರಿಕೆಯನ್ನು ತರಬೇಕು. ಅದನ್ನು ದೇಶದ ಎಲ್ಲ ಭಾಷೆಗಳಲ್ಲೂ ಪ್ರಕಟವಾಗುವಂತೆ ಮಾಡಿ ದೇಶದ ಪ್ರತಿ ಕೃಷಿಕನಿಗೂ ಅದು ತಲುಪುವಂತೆ ಮಾಡಬೇಕು. ದೇಶದ ಪ್ರತಿಯೊಬ್ಬ ಕೃಷಿಕನೂ ಅದಕ್ಕೆ ಚಂದಾದಾರನಾಗುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಕೃಷಿಕರ ನಡುವೆ ಒಗ್ಗಟ್ಟು, ಅರಿವು ಬೆಳೆದು ಅವರದೇ ಆದ ಒಂದು ಸರ್ಕಾರ ತರಲು ಸಾಧ್ಯವಿದೆ. ಹೀಗಾದರೆ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು, ಟಿವಿ ವಾಹಿನಿಗಳ ಹಾಗೂ ಜಾಹೀರಾತುಗಾರರ ಹಂಗಿಲ್ಲದೆ ಜಾಗೃತಿ ಮೂಡಿಸಲು ಸಾಧ್ಯ.

ಹೀಗಾಗಬೇಕಾದರೆ ದೇಶದ ಪ್ರತಿ ಕೃಷಿಕನೂ ಸದಸ್ಯನಾಗಿರುವ ಒಂದೇ ರೈತ ಸಂಘಟನೆ ರೂಪುಗೊಳ್ಳಬೇಕು. ಸಂಘಟನೆಯ ಮೂಲಕ ಸಂದೇಶಗಳು ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳ ಹಂಗಿಲ್ಲದೆ ಒಬ್ಬರಿಂದೊಬ್ಬರಿಗೆ ರವಾನೆಯಾಗಬೇಕು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳು ಇಲ್ಲದೆ ಇದ್ದ ಕಾಲದಲ್ಲಿ ನಾಯಕರ ಸಂದೇಶಗಳು ಹೀಗೆ ರವಾನೆಯಾಗುತ್ತಾ ಇದ್ದವು ಹಾಗೂ ಇಡೀ ದೇಶದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಗಾಂಧೀಜಿಯವರ ‘ಹರಿಜನ’, ‘ಯಂಗ್ ಇಂಡಿಯಾ’ದಂಥ ಸಣ್ಣ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಂದೇಶಗಳು ಇಡೀ ದೇಶದಲ್ಲಿ ಜನರಿಂದ ಜನರಿಗೆ ದಾಟಿ ದೇಶವ್ಯಾಪಿಯಾಗಿ ಪ್ರಸಾರವಾಗುತ್ತಿದ್ದವು. ಇಂದಿನ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ ಅಟ್ಟಹಾಸವನ್ನು ಮಟ್ಟಹಾಕಬೇಕಾದರೆ ಹಿಂದೆ ಯಶಸ್ವಿಯಾದ ಇಂಥದೇ ಸೂತ್ರಗಳನ್ನು ರೈತ ಸಂಘಟನೆಗಳು ದೇಶಾದ್ಯಂತ ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ.

ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ಜನಸ್ನೇಹಿಯಾದ ಗಣಿಗಾರಿಕೆ ನೀತಿ ತಂದು ದೇಶದ ನೈಸರ್ಗಿಕ ಸಂಪತ್ತಿನ ಲೂಟಿ ತಡೆದು ಅದರ ಪ್ರಯೋಜನ ಎಲ್ಲರಿಗೂ ಲಭ್ಯವಾಗುವಂತೆ ನೀತಿ ರೂಪಿಸಬಹುದು. ಕೃಷಿಕರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ನಿಗದಿ ನೀತಿ ಜಾರಿಗೆ ತರಬಹುದು. ಬಂಡವಾಳಶಾಹಿ ಲಾಭಕೋರ ನೀತಿಯನ್ನು ಹತ್ತಿಕ್ಕಿ ಜನಪರ ನೀತಿಯನ್ನು ಜಾರಿಗೆ ತರಬಹುದು. ಉದಾಹರಣೆಗೆ ಇಂದು ಔಷಧ ಕಂಪನಿಗಳು ಕೆಲವು ಔಷಧಿಗಳನ್ನು ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುವ ನೀತಿ ಅನುಸರಿಸುತ್ತಿವೆ. ಕೃಷಿಕರ ಸರ್ಕಾರವೊಂದು ಬಂದರೆ ಇಂಥ ಅನ್ಯಾಯ ಹಾಗೂ ಅಧರ್ಮಗಳನ್ನು ತಡೆಯಲು ಸಾಧ್ಯವಿದೆ. ಇಂಥ ಬಂಡವಾಳಶಾಹಿ ಲಾಭಕೋರತನ, ಅಧರ್ಮ ಹಾಗೂ ಅನ್ಯಾಯಗಳು ಸರ್ಕಾರದ ಅಸಮರ್ಪಕ ನೀತಿಗಳ ಫಲವಾಗಿಯೇ ರೂಪುಗೊಂಡು ಬೆಳೆದಿವೆ. ಕೃಷಿಕರ ಸರ್ಕಾರ ಬಂದರೆ ವಿಷಕಾರಿ ಕೀಟನಾಶಕಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸಲು ಸಾಧ್ಯ. ಬಂಡವಾಳಗಾರರ ಹಿತ ಕಾಯುವ ಇಂದಿನ ಸರ್ಕಾರಗಳಿಂದ ಇಂಥ ದಿಟ್ಟ ನಿರ್ಧಾರ ರೂಪುಗೊಳ್ಳಲು ಸಾಧ್ಯವಿಲ್ಲ.

ದೇಶದಲ್ಲಿ ಹಲವಾರು ಜನಸ್ನೇಹಿ ಸುಧಾರಣೆಗಳು, ಕಾನೂನುಗಳು ಬರಬೇಕಾದ ಅಗತ್ಯವಿದ್ದು ಅವನ್ನು ಇಂದು ಅಧಿಕಾರದಲ್ಲಿರುವ ಅಥವಾ ಮುಂದೆ ಬರುವ ಬಂಡವಾಳಗಾರರ ಬೆಂಬಲದ ಯಾವುದೇ ಸರ್ಕಾರಗಳೂ ತರುವ ಸಂಭವ ಇಲ್ಲ. ಇಂಥವುಗಳನ್ನು ತರಬೇಕಾದರೆ ಕೃಷಿಕರ ಸರ್ಕಾರ ದೇಶದಲ್ಲಿ ರೂಪುಗೊಳ್ಳಬೇಕಾಗಿರುವುದು ಅಗತ್ಯ. ಇದೇ ರೀತಿ ವಿದೇಶಗಳಲ್ಲಿ ನಮ್ಮ ದೇಶದ್ರೋಹಿ ಭ್ರಷ್ಟ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ಇಟ್ಟಿರುವ ಕಪ್ಪು ಹಣ ವಾಪಸು ತರುವ ಬಗ್ಗೆ ಹಾಗೂ ವಿದೇಶಗಳಿಗೆ ಕಪ್ಪು ಹಣದ ಹರಿವನ್ನು ನಿಯಂತ್ರಿಸುವ ಸೂಕ್ತ ಕಾನೂನು ತರುವುದು, ಚುನಾವಣಾ ಸುಧಾರಣೆಗಳನ್ನು ತರುವುದು, ನ್ಯಾಯಾಂಗಕ್ಕೆ ಸೂಕ್ತ ಸುಧಾರಣೆಗಳನ್ನು ತರುವುದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಸ್ವತಂತ್ರ ಲೋಕಪಾಲ್ ವ್ಯವಸ್ಥೆ ತರುವುದು, ನಿಷ್ಪಕ್ಷಪಾತ ತನಿಖೆ ನಡೆಸಲು ಸ್ವತಂತ್ರ ರಾಷ್ಟ್ರೀಯ ತನಿಖಾ ಸಂಸ್ಥೆಯ ಸ್ಥಾಪನೆ ಮೊದಲಾದ ಮಹತ್ವದ ಕೆಲಸಗಳನ್ನು ಮಾಡಲು ಜನಪರವಾದ ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕಾದ ಅಗತ್ಯ ಇದೆ. ಈಗ ಅಸ್ತಿತ್ವದಲ್ಲಿರುವ ಭ್ರಷ್ಟ ರಾಜಕಾರಣಿಗಳ ಹಾಗೂ ಬಂಡವಾಳಗಾರರ, ಲೂಟಿಕೋರರ ಸರ್ಕಾರದಿಂದಾಗಲಿ ಅಥವಾ ಇನ್ನು ಮುಂದೆ ಬರುವ ಇಂಥದೇ ಇನ್ನೊಂದು ಪಕ್ಷದ ಸರ್ಕಾರದಿಂದಾಗಲೀ ಯಾವುದೇ ಸುಧಾರಣೆಗಳು ಸಾಧ್ಯವಾಗುವ ಸಂಭವ ಕಾಣುವುದಿಲ್ಲ.

 

 

ಪಶ್ಚಿಮ ಘಟ್ಟಗಳಿಗೆ ಯುನೆಸ್ಕೊ ನೀಡಿದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ

– ಕಲ್ಕುಳಿ ವಿಠ್ಠಲ ಹೆಗಡೆ

ಪಶ್ಚಿಮ ಘಟ್ಟದ 39 ತಾಣಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ನೈಸರ್ಗಿಕ ತಾಣಗಳ ಪಟ್ಟಿಗೆ ಸೇರಿಸಿರುವ ಬಗ್ಗೆ ಈಗ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ನಮ್ಮ ಕಡೆ ಒಂದು ಗಾದೆ ಇದೆ, “ಅತ್ತೆನ ಮಾವಂಗೇ ದಾನ ಮಾಡಿದಂಗೆ” ಅಂತ. ಹಂಗೆ ಮಾಧ್ಯಮಗಳಲ್ಲಿ ಇವತ್ತು ವಿದೇಶದ ದುಡ್ಡಿನ ಆಸೆಗೆ ಪರಿಸರ ಬಗ್ಗೆ ಮಾತನಾಡುವವರು, ಸರ್ಕಾರದ ಪ್ರತಿನಿಧಿಗಳು ಎಲ್ಲ ತಮ್ಮಷ್ಟಕ್ಕೆ ತಾವೇ ಇದು ಸರಿಯೋ, ತಪ್ಪೋ ಅಂತ ಚರ್ಚೆ ಮಾಡ್ತಾ ಇದ್ದಾರೆ. ಯಾರೂ ಸ್ಥಳೀಯರು ಏನೆನ್ನುತ್ತಾರೆ, ಅವರ ಅಭಿಪ್ರಾಯ ಏನು ಅಂತ ಕೇಳ್ತಾನೇ ಇಲ್ಲ.

ರಾಜ್ಯದ ಹತ್ತು ತಾಣಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಿದ್ದು ಇದ್ದಕ್ಕಿದ್ದ ಹಾಗೆ ನಡೆದ ಪ್ರಕ್ರಿಯೆಯೇನೂ ಅಲ್ಲ. ಹೋದವರ್ಷವೇ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸ್ಥಳೀಯರು ವಿರೋಧಿಸಿದ್ದು ಆಗಿತ್ತು. ಆದರೆ ಅವತ್ತು ನಾವು ಎತ್ತಿದ ಯಾವ ಪ್ರಶ್ನೆಗೂ ಉತ್ತರ ಕೊಡದೇ ಕೇಂದ್ರ ಸರ್ಕಾರ ಮತ್ತೊಮ್ಮೆ ಈ ಬಗ್ಗೆ ಪ್ರಸ್ತಾಪನ್ನು ಕಳಿಸಿ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ. ಹೋಗಲಿ ಈಗಲಾದರೂ ಸ್ಪಷ್ಟವಾಗಿ ಎಲ್ಲ ವಿಷಯಗಳನ್ನು ಪಾರದರ್ಶಕವಾಗಿ ಜನರ ಮುಂದಿಡುತ್ತಿದೆಯೇ ನೋಡಿದ್ರೆ ಅದೂ ಇಲ್ಲ. (ಮಾಧವ್ ಗಾಡ್ಗೀಳ್ ನೇತೃತ್ವದ ತಂಡ ಪಶ್ಚಿಮ ಘಟ್ಟದ ಬಗ್ಗೆ ನೀಡಿರುವ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲು ಎಷ್ಟೆಲ್ಲಾ ಹೋರಾಟ ಮಾಡಬೇಕಾಗಿ ಬಂದಿತು ಎಂಬುದು ಎಲ್ಲರಿಗೂ ಗೊತ್ತಿದೆ ಅಂದುಕೊಳ್ಳುತ್ತೇನೆ.)

ತುಂಬಿದ ಕುಟುಂಬದಲ್ಲಿ ಏನಾದ್ರೂ ವಿಶೇಷವಾದ ಕೆಲ್ಸವನ್ನು ಹೇಳಿದಾಗ ಕಿರಿಮಗ ಕೊಸರಾಡುತ್ತಾನಲ್ಲ, “ಅದು ನಂಗಾಗಲ್ಲ, ಇದನ್ನು ಕೊಟ್ರೆ ಅದನ್ನ ಮಾಡ್ತೀನಿ, ನಾನಂತೂ ಮಾಡೋಲ್ಲ,” ಅಂತ. ಹಂಗೆ ನಮ್ಮ ರಾಜ್ಯಸರ್ಕಾರ ಈಗ ವಿರೋಧವೇನೋ ಮಾಡ್ತಾ ಇದೆ. ಯಜಮಾನ ಗದರಿಸುವವರೆಗೂ ಈ ಕೊಸರಾಟ ನಡೀಬಹುದು. ಹಾಗಾಗಿ ಸರ್ಕಾರದ ಈ ವಿರೋಧ ಎಲ್ಲಿಯವರೆಗೆ, ಎಷ್ಟುದಿನ ನೆಡೆಯುತ್ತೆ ಅಂತ ಹೇಳೋಕ್ಕಾಗಲ್ಲ. ಅಲ್ದೆ ಈಗ ವಿರೋಧ ಮಾಡ್ತಾ ಇರೋ ರಾಜ್ಯ ಸರ್ಕಾರವೇ ನಮ್ಮಲ್ಲಿ (ಕುದುರೆಮುಖ ಅಭಯರಣ್ಯದಲ್ಲಿ) ತಲೆ-ಬುಡವಿಲ್ಲದ ಹುಲಿ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಕೊನೆಗೆ ಎಲ್ಲದಕ್ಕೂ ತಲೆಕೊಡಬೇಕಾದವರು ನಾವೇ…ಅಂದ್ರೆ ಸ್ಥಳೀಯರೇ.

ಯುನೆಸ್ಕೊ ನೀಡಿರುವ ಈ ಮಾನ್ಯತೆಯನ್ನು ಮುಂದಿಟ್ಟುಕೊಂಡು ವಿದೇಶಿ ಹಣದಲ್ಲಿ ನಡೆಯುವ ಎನ್‌ಜಿಒಗಳವರು ಮಾತ್ರ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಲೇ ಇದ್ದಾರೆ. ಯಾವ ಪತ್ರಿಕೆ ನೋಡಿದರೂ ಅವರದ್ದೇ ಅಭಿಪ್ರಾಯ. ಸ್ಥಳೀಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಂಗ್ಲಿಷ್ ಪತ್ರಿಕೆಗಳು ಪರಿಸರದ ಬಗ್ಗೆ ಏನಾದರೂ ಚರ್ಚೆ ನಡೆಯುವಾಗ ಎನ್‌ಜಿಒಗಳ ಅಭಿಪ್ರಾಯವನ್ನಷ್ಟೇ ಪ್ರಕಟಿಸುತ್ತವೆ. ಈ ರೋಗ ಈಗ ಕನ್ನಡದ ರಾಜ್ಯಮಟ್ಟದ ಪತ್ರಿಕೆಗಳಿಗೂ ಬಂದಂತಿದೆ.

ಯುನೆಸ್ಕೊ ಈ ರೀತಿಯ ಮಾನ್ಯತೆ ನೀಡುತ್ತಿರುವುದು ಹೊಸದೇನೂ ಅಲ್ಲ. ನಮ್ಮ ಹಂಪೆಗೇ ಈ ಮಾನ್ಯತೆ ದೊರಕಿದೆ. ಈಗಾಗಲೇ ನಮ್ಮ ದೇಶದಲ್ಲಿ ಐದು ನೈಸರ್ಗಿಕ ತಾಣಗಳೂ ಈ ಮಾನ್ಯತೆ ಪಡೆದಿವೆ. ಹೀಗಿರುವಾಗ ಇದರಿಂದ ಏನಾಗುತ್ತದೆ, ಒಳ್ಳೆಯದೋ, ಕೆಟ್ಟದೋ ಎಂಬುದನ್ನು ತಿಳಿಯಲು ಕಷ್ಟಪಡಬೇಕಾಗಿಲ್ಲ. ಹಾಗೆಯೇ ಈ ವಿದೇಶಿ ಏಜೆಂಟರು ಹೇಳುವ ಮಾತನ್ನು ಸಂಪೂರ್ಣವಾಗಿ ನಂಬಬೇಕಾಗಿಯೂ ಇಲ್ಲ. ಅಲ್ಲವೇ?

ಹಂಪೆಯ ಕತೆ ನೋಡೋಣ, 1986ರಲ್ಲಿಯೇ ಇದನ್ನು ಪಾರಂಪರಿಕ ಪಟ್ಟಿಗೆ ಸೇರಿಸಲಾಗಿತ್ತು. 1999ರಲ್ಲಿ ಸ್ಥಳೀಯ ಜನರು ಓಡಾಡಲೆಂದು ಆನೆಗುಂದಿ ಸೇರಿದಂತೆ ಎರಡು ಸೇತುವೆಗಳನ್ನು ನಿರ್ಮಿಸಲು ನಮ್ಮ ರಾಜ್ಯ ಸರ್ಕಾರ ನಿರ್ಧರಿಸುತ್ತಿದ್ದಂತೆಯೇ ಯುನೆಸ್ಕೊ ಏನು ಮಾಡಿತು? ಹಂಪೆಯನ್ನು ಡೇಂಜರ್ ಲೀಸ್ಟ್‌ಗೆ ಸೇರಿಸಿತು. ಆಮೇಲೆ ಸರ್ಕಾರ ಹಂಪೆಯನ್ನು ಈ ಪಟ್ಟಿಯಿಂದ ಹೊರಗಿಡುವಂತೆ ಮಾಡಲು ಏನೆಲ್ಲಾ ಸರ್ಕಸ್ ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆನೆಗುಂದಿ ಸೇತುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಏಕೆ ನಡೆಯಿತು? ಅದು ಬಿದ್ದಿದ್ದೇಕೆ? ಎಲ್ಲ ಈ ನಾಟಕ ನೋಡಿದವರಿಗೆ ಅರ್ಥವಾಗುವಂತದ್ದೇ. 2006ರಲ್ಲಿ ಹಂಪೆಯನ್ನು ಡೇಂಜರ್ ಪಟ್ಟಿಯಿಂದ ಹೊರಗಿಡಲಾಯಿತು. 2009ರಲ್ಲಿ ಆನೆಗುಂದಿ ಸೇತುವೆಯೂ ಬಿದ್ದು ಹೋಯಿತು. ಆಮೇಲೆ ನಿರಂತರವಾಗಿ ಈ ಸೇತುವೆಯ ಅವಶೇಷಗಳನ್ನು ತೆಗೆದು ಹಾಕುವಂತೆ ಯುನೆಸ್ಕೊ ಸೂಚಿಸುತ್ತಲೇ ಬಂದಿದೆ. ಈ ಬಗ್ಗೆ ಅನುಮಾನವಿದ್ದವರು ಯುನೆಸ್ಕೊದ ವೆಬ್‌ಸೈಟ್‌ನಲ್ಲಿರುವ 2010 ಮತ್ತು 2011 ರ ಡಿಶಿಷನ್‌ಗಳನ್ನು ನೋಡಬಹುದು.

ಇಷ್ಟೇ ಅಲ್ಲ, ಹಂಪೆಯಲ್ಲಿನ ವಸತಿ ಹೀನರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಹೊರಟಿದ್ದರೆ ಅದನ್ನು ಯುನೆಸ್ಕೊ ಕಾನೂನು ಬಾಹಿರ (ಇಲ್ಲೀಗಲ್) ಕ್ರಮಗಳು ಎಂದು ಅದನ್ನು ಜಾರಿಗೆ ತರದಂತೆ ಸೂಚನೆ ನೀಡಿದೆ. (ನೋಡಿ: Stop illegal constructions within the property and the buffer zone area (namely in Hampi Village and Virupapura Gada Island), and control and manage other planned developments, such as social housing projects, to ensure that they do not have a negative impact on the integrity of the landscape;- Decision – 34COM 7B.67 – Group of Monuments at Hampi (India) (C 241) ) ಸಾಮಾಜಿಕ ವಸತಿ ಯೋಜನೆಗಳನ್ನು ಜಾರಿಗೆ ತರಬೇಡಿ ಎಂದರೆ ಅಲ್ಲಿರುವವರ ಗತಿ ಏನು? ಈ ಸೂಚನೆ ಪಾಲಿಸದೇ ಇದ್ದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ಹೋಗುತ್ತದೆಯೆಂದೂ ಒತ್ತಡ ಬಾರದೇ ಇರುತ್ತದೆಯೇ? ಹಂಪೆಯ ಅವಶೇಷಗಳು ಉಳಿಯ ಬೇಕು ನಿಜ, ಆದೇ ರೀತಿಯಾಗಿ ಅಲ್ಲಿಯೇ ತಲತಲಾಂತರಗಳಿಂದ ಅವುಗಳೊಂದಿಗೇ ಬಾಳಿ ಬದುಕಿದವರಿಗೆ ಬದುಕುವ ಹಕ್ಕೂ ಕೂಡ ಇರಬೇಕು ತಾನೆ?

ಹಂಪೆಯಂತೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅದರ ದಕ್ಷಿಣ ತುದಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ನ್ನು ಅಪ್‌ಗ್ರೇಡ್ ಮಾಡುವುದು ಸ್ಥಳೀಯರ ಹಿತ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಅದಕ್ಕೂ ಯುನೆಸ್ಕೊ ಕಲ್ಲು ಹಾಕಿದೆ. ಕೊನೆಗೆ ಅಸ್ಸಾಂ ಸರ್ಕಾರ ಈ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಹಾಕಿಕೊಂಡ ಯೋಜನೆಗಳನ್ನೆಲ್ಲಾ ಕೈಬಿಟ್ಟಿತು. ಈಗ ಈ ಉದ್ಯಾನವನದ ಸಮೀಪವಿರುವ ಕರ್ಬಿ ಪರ್ವತಶ್ರೇಣಿಯನ್ನು ಹೇಗೆ ಕಾಪಾಡಬೇಕು, ಸುತ್ತಮುತ್ತಾ ಏನೆಲ್ಲಾ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸುತ್ತಿದೆ.

ಈ ಉದ್ಯಾನವನಕ್ಕೆ ಯುನೆಸ್ಕೊ ಪಟ್ಟಿಗೆ ಸೇರಿಸಿದ್ದರಿಂದ ಪ್ರವಾಸೋದ್ಯಮ ಮಾತ್ರ ಜೋರಾಗಿ ಬೆಳೆಯುತ್ತಿದೆ. 2004-05 ನೇ ಸಾಲಿನಲ್ಲಿ 74 ಸಾವಿರ ಪ್ರವಾಸಿಗರು ಇಲ್ಲಿಗೆ ಬಂದಿದ್ದರು. 2009-10 ನೇ ಸಾಲಿನಲ್ಲಿ ಈ ಸಂಖ್ಯೆ 1.15 ಲಕ್ಷಕ್ಕೆ ಏರಿದೆ. ಇವರ ಅನುಕೂಲಕ್ಕಾಗಿ 32 ಹೊಟೇಲ್‌ಗಳಾಗಿವೆ. ಸ್ಥಳೀಯರು ಅವರ ಸೇವೆಯನ್ನೇ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಥೈಲೆಂಡ್‌ನ ಸ್ಥಿತಿ ಅಲ್ಲಿ ನಿರ್ಮಾಣವಾಗುತ್ತಿದೆ.

1974 ರಲ್ಲಿ ನಡೆದ ಚಿಪ್ಕೋ (ಅಪ್ಪಿಕೋ) ಚಳವಳಿ ಬಗ್ಗೆ ನಿಮಗೆ ಗೊತ್ತೇ ಇದೆ. ಉತ್ತರಾಂಚಲದ ರೇನಿ ಮತ್ತು ಲಾಟಾ ಹಳ್ಳಿಗಳ ಜನರು ಅರಣ್ಯ ಕಡಿಯಲು ಬಂದ ಸರ್ಕಾರವನ್ನು ಹಿಮ್ಮೆಟ್ಟಿಸಿದ್ದರು. ಗೌರಿದೇವಿ ಎಂಬಾಕೆಯ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಸ್ಥಳೀಯರು ಮರವನ್ನು ಬಿಗಿಯಾಗಿ ಅಪ್ಪಿಕೊಂಡು ಕಡಿಯಲು ಬಂದ ಸರ್ಕಾರಿ ಪಡೆಯನ್ನು ಓಡಿಸಿದ್ದರು. ಈ ಪ್ರದೇಶ ನಂದಾದೇವಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರುತ್ತದೆ. ಇದೂ ಕೂಡ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ. ಇದರಿಂದಾಗಿ ಅಲ್ಲಿ ಅಂದು ಯಾರು ಕಾಡನ್ನು ಉಳಿಸಿದ್ದರೋ ಅವರೇ ಕಾಡಿಗೆ ಹೋಗುವಂತಿಲ್ಲ ಎಂಬ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅವರ ಕಾಡಿನ ಮೇಲಿನ ಹಕ್ಕನ್ನು ಎತ್ತಿಹಿಡಿಯಬೇಕಾಯಿತು. ಈಗ ಅಲ್ಲಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಅಂದು ಕಾಡು ಉಳಿಸಿದವರು ಇಂದು ಪ್ರವಾಸಿಗರಿಗೆ ಕಾಡು ತೋರಿಸುವ ಕೆಲಸ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಯುನೆಸ್ಕೊ ಉತ್ತೇಜಿಸುತ್ತಿದ್ದು, ಸ್ಥಳೀಯರಿಗೆ ಇಕೋ ಟೂರಿಸಂ ಬಗ್ಗೆ, ರಾಕ್ ಕ್ಲೈಂಬಿಂಗ್ ಬಗ್ಗೆ ಮಾಹಿತಿ ಕೊಡಿ ಅಂತ ಉತ್ತರಾಂಚಲ ಸರ್ಕಾರಕ್ಕೆ ಸಲಹೆ ಸೂಚನೆ ನೀಡುತ್ತಿದೆ!

ಇವನ್ನೆಲ್ಲಾ ಇಲ್ಲಿ ಏಕೆ ಪ್ರಸ್ತಾಪ ಮಾಡಿದ್ದೇನೆ ಎಂದರೆ ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾದರೆ ಅನುಕೂಲವೂ ಇಲ್ಲ, ಅನಾನೂಕೂಲವೂ ಇಲ್ಲ. ಇದು ಬರೀ ಮಾನ್ಯತೆ ಮಾತ್ರ ಎಂದು ಎನ್‌ಜಿಒಗಳವರು ವಾದಿಸುತ್ತಿರುವುದು ಹಸಿ ಹಸಿ ಸುಳ್ಳು ಎಂಬುದನ್ನು ಎತ್ತಿ ತೋರಿಸಲು.

ಯುನೆಸ್ಕೊ ಎಂದರೆ ಹಣಕೊಡುವ, ಆಡಳಿತ ನಡೆಸುವ ಸಂಸ್ಥೆ ಅಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಪಾರಂಪರಿಕ ಪಟ್ಟಿಯಲ್ಲಿರುವ ಸ್ಥಳಗಳ ರಕ್ಷಣೆಗೆ ಅದು ದೇಣಿಗೆ ನೀಡುತ್ತದೆ. ನಮ್ಮ ಹಂಪೆಗೇ ಇದುವರೆಗೆ ಒಟ್ಟು 1,09,740 ಅಮೆರಿಕನ್ ಡಾಲರ್ ನೀಡಿದೆ. ಇದು ಹೇಗೆ, ಯಾವುದಕ್ಕೆ ಬಳಕೆಯಾಗಿದೆಯೋ ವಿರೂಪಾಕ್ಷಗೇ ಗೊತ್ತು.

ವಿದೇಶಿ ದುಡ್ಡಿನಾಸೆಗಾಗಿ ಪರಿಸರದ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಎನ್‌ಜಿಒಗಳು ಇದರ ಪರ ವಕಾಲತ್ತು ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಇದರಿಂದ ನೇರವಾಗಿ ದುಡ್ಡು ಬಾರದೇ ಇರಬಹುದು. ಆದರೆ ಯುನೆಸ್ಕೊ, ಪರಿಸರ ರಕ್ಷಣೆಗೆ ಹಣ ಕೊಡುವ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಪರಿಸರ ರಕ್ಷಣೆಯ ನಾಟಕವಾಡುವ ಈ ಎನ್‌ಜಿಒಗಳ ನಡುವಿನ ದಳ್ಳಾಳಿಯಂತೆ ಕೆಲಸ ಮಾಡುತ್ತದೆ.

ಉದಾಹರಣೆಗೆ 2008 ರಲ್ಲಿ ಯುನೆಸ್ಕೊ “ವರ್ಲ್ಡ್ ಹೆರಿಟೇಜ್ ಬಯೋಡೈವರ್ಸಿಟಿ ಪ್ರೋಗ್ರಾಮ್ ಫಾರ್ ಇಂಡಿಯಾ” (WHBPI) ಎಂಬ ಯೋಜನೆ ಜಾರಿಗೆ ತಂದಿತ್ತು. ಇದರಡಿ ಅಸ್ಸಾಂನ ಮಾನಸ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಬಹುಕಾಲ ನಿರ್ವಹಿಸುವ ಹಾಗೂ ರಕ್ಷಿಸುವ ತಂತ್ರಗಾರಿಕೆ ರೂಪಿಸಲು ಬೆಂಗಳೂರಿನ ಏಟ್ರಿ ಎಂಬ ಎನ್‌ಜಿಒಗೆ 6,42,180 ಅಮೆರಿಕನ್ ಡಾಲರ್ ನೀಡಿದೆ. ಈ ಹಣ ಎಲ್ಲಿಂದ ಬಂತು ಗೊತ್ತೇ, ಫೋರ್ಡ್ ಪೌಂಡೇಷನ್ ಮತ್ತು ಎಸ್.ಎಂ.ಸೆಹಗಲ್ ನೀಡಿದ್ದು! ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುವ ಕಾಜಿರಂಗ ನ್ಯಾಷನಲ್ ಪಾರ್ಕ್ ರಕ್ಷಿಸಲು ಬೆಂಗಳೂರಿನ ಎನ್‌ಜಿಒಗೆ ಜವಾಬ್ದಾರಿ ವಹಿಸಲಾಗುತ್ತದೆ. ಸ್ಥಳೀಯರಿಗೆ ಇಲ್ಲದ ತಿಳುವಳಿಕೆ ಈ ಎನ್‌ಜಿಒನ ತಜ್ಞರಿಗೆ ಅದೇನಿದೆಯೋ… ಈ ವರ್ಷವೂ ಅಲ್ಲಿ ಪ್ರವಾಹಕ್ಕೆ ಸಿಲುಕಿ 560 ಪ್ರಾಣಿಗಳು ಸತ್ತಿವೆ. ಇದಕ್ಕೆ ಫೋರ್ಡ್ ಫೌಂಡೇಷನ್ ದುಡ್ಡು ನೀಡುತ್ತದೆ, ಈ ಯೋಜನೆ ಜಾರಿಗೆ ಬರುವುದು ಯುನೆಸ್ಕೊದಿಂದ!

ಇದೇ ಏಟ್ರಿ ಸಂಸ್ಥೆ ನೀಡಿರುವ ವರದಿಯನ್ನು ಆಧರಿಸಿಯೇ ಈಗ ನಮ್ಮ ಪಶ್ಚಿಮ ಘಟ್ಟಕ್ಕೂ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ದೊರಕಿರುವುದು. ಬಹುಶಃ ಅವರಿಗೇ ಹೆಚ್ಚಿನ ಪ್ರಾಜೆಕ್ಟ್‌ಗಳು ದೊರೆಯುವಂತೆ ಕಾಣುತ್ತಿದೆ. ಇದಕ್ಕೇ ಮಾನ್ಯ ಸಂಜಯ್ ಗುಬ್ಬಿ ಯವರು ಪ್ರಜಾವಾಣಿಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಈ ಎನ್‌ಜಿಒ ವಿರುದ್ಧ ಕೆಂಡಕಾರಿಕೊಂಡಿರುವುದು!

ಕುದುರೆಮುಖ ರಾಷ್ಟ್ರೀಯ ಉದ್ಯನವನ್ನು ವಿರೋಧಿಸುವ ಸಂದರ್ಭದಲ್ಲಿ ಇದರ ಹಿಂದಿರುವ ಸಾಮ್ರಾಜ್ಯಶಾಹಿಗಳ ಕುತಂತ್ರವನ್ನು ಹೇಳಿಕೊಂಡೇ ಬಂದಿದ್ದೇವೆ. ಆದರೂ ಉದ್ಯಾನವನ ಆಯಿತು. ಈಗ ಅದರ ಮುಂದುವರೆದ ಭಾಗವಾಗಿ ಈ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

ಗಿರಿಜನರನ್ನು ಎತ್ತಂಗಡಿ ಮಾಡಲಾಗುತ್ತದೆ, ಜೀವ ವೈವಿಧ್ಯತೆಯ ಲೂಟಿಯಾಗುತ್ತದೆ, ಪ್ರವಾಸೋದ್ಯಮಕ್ಕೆ ಆದ್ಯತೆ ದೊರೆಯುತ್ತದೆ, ಔಷಧಿ ಸಸ್ಯಗಳ ಮತ್ತು ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕನ್ನು ಸ್ಥಳೀಯರು ಕಳೆದುಕೊಳ್ಳಬೇಕಾಗುತ್ತದೆ, ಎಂಬ ನಾಲ್ಕು ಕಾರಣಗಳಿಂದ ನಾವು ಮುಖ್ಯವಾಗಿ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿದ್ದೆವು. ಅವೇ ಕಾರಣಗಳನ್ನು ಮುಂದಿಟ್ಟುಕಂಡು ಈಗಲೂ ಈ ಮಾನ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ.

ಪರಿಸರವಾದಿ ಶ್ರೀಯುತ ಪಾಂಡುರಂಗ ಹೆಗಡೆಯವರು ತಮ್ಮ ಲೇಖನವೊಂದರಲ್ಲಿ ಈ ಮಾನ್ಯತೆಯನ್ನು ಭಾರತ ರತ್ನಕ್ಕೆ ಹೋಲಿಸಿದ್ದಾರೆ. ಭಾರತ ರತ್ನ ಕೊಡಲಿ ಸಂತೋಷ. ಆದರೆ ನಿಮಗೆ ಈ ಪ್ರಶಸ್ತಿ ದೊರೆತಿರುವುದರಿಂದ ನೀವು ಹೀಗೇ ಮಾತಾಡಬೇಕು, ಇಷ್ಟೇ ತಿನ್ನಬೇಕು, ನಾವು ಹೇಳಿದ ಕಾರ್ಯಕ್ರಮಗಳಿಗೆ ಮಾತ್ರ ಹೋಗಬೇಕು, ಅಲ್ಲಿ ಹೀಗೆಯೇ ವರ್ತಿಸಬೇಕು ಎಂದೆಲ್ಲಾ ಕಟ್ಟು-ಪಾಡು ವಿಧಿಸುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.

ರಾಜ್ಯದ ಹತ್ತು ತಾಣಗಳು ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಯಾವುದಕ್ಕೆಲ್ಲಾ ಅಡ್ಡಿಯಾಗುತ್ತದೆ, ಸ್ಥಳೀಯರು ಯಾವ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸುತ್ತಾ ಹೋದರೆ ಅದೇ ದೊಡ್ಡ ಲೇಖನವಾದೀತು. ಸರಳವಾಗಿ ಒಂದೇ ಉದಾಹಣೆ ನೀಡುತ್ತೇನೆ. ಕರಾವಳಿಗೂ ಕರ್ನಾಟಕದ ಇತರ ಭಾಗಕ್ಕೂ ಸಂಪರ್ಕ ಕಲ್ಪಿಸಲು ಘಾಟಿಗಳಿವೆ. ಇಲ್ಲಿಯ ರಸ್ತೆಗಳೆಲ್ಲಾ ಅಂಕು-ಡೊಂಕಾಗಿದೆ. ಇದರಿಂದ ಅಪಘಾತ ಸರ್ವೇ ಸಾಮಾನ್ಯ. ಮುಂದೊಮ್ಮೆ ವೈಜ್ಞಾನಿಕವಾಗಿ ಈ ರಸ್ತೆಯನ್ನು ನೇರವಾಗಿ ಮಾಡಲು ಸಾಧ್ಯವಾದರೂ ಆ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಘಾಟಿ ರಸ್ತೆಗಳೆಲ್ಲಾ ಹಾಗೇ ಇರಬೇಕು! ಹಾಗೆಯೇ ಈ ತಾಣಗಳ ವ್ಯಾಪ್ತಿಯಲ್ಲಿ ಬರುವ ಮನೆಗಳು, ರಸ್ತೆಗಳು ಎಲ್ಲ… ಯಥಾಸ್ಥಿತಿ ಕಾಪಾಡುವುದು ಎಂದರೆ ಇದೇ.

ಯುನೆಸ್ಕೊ ಪಟ್ಟಿಗೆ ಸೇರಿರುವ ಪಶ್ಚಿಮಘಟ್ಟವನ್ನು ಜೋಪಾನವಾಗಿ ಕಾಪಾಡಲು ಅಂತರಾಷ್ಟ್ರೀಯ ಮಟ್ಟದ ಉಸ್ತುವಾರಿ ಅಗತ್ಯ ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಸಲಹೆ ನೀಡಿದೆ. ಈ ಸಲಹೆ ಜಾರಿಗೆ ಬಂದಲ್ಲಿ ರಾಜ್ಯ ಸರ್ಕಾರ ಅದರ ಕೈಗೊಂಬೆಯಾಗಬೇಕಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಹಿಂದೆ ಬ್ರಿಟೀಷರು ಕಾಫಿ, ಏಲಕ್ಕಿ ಎಸ್ಟೇಟ್ ಮಾಡಿದ ಹಾಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಶ್ರೀಗಂಧದ ಎಸ್ಟೇಟ್ ಮಾಡಲು ಹೊರಟಿದ್ದರು. ಸ್ಥಳೀಯ ಗಿರಿಜನರಿಗೆ ಶ್ರೀಗಂಧದ ಬೀಜ ನೀಡಿ ಬಿತ್ತುವಂತೆ ಸೂಚಿಸಿದ್ದರು. ಬೀಜ ಬಿತ್ತದಿದ್ದರೆ ದೊರೆಗಳ ಆಜ್ಞೆ ಉಲ್ಲಂಘಿಸಿದಂತಾಗುತ್ತದೆ, ಬಿತ್ತಿದರೆ ಕಾಡು ನಮ್ಮದಾಗಿ ಉಳಿಯುವುದಿಲ್ಲ ಎಂದು ಲೆಕ್ಕಹಾಕಿದ ಗಿರಿಜನರು ಕೊನೆಗೆ ಉಪಾಯ ಮಾಡಿ ಬ್ರಿಟಿಷ್ ಅಧಿಕಾರಿಗಳು ನೀಡಿದ ಗಂಧದ ಬೀಜವನ್ನು ರಾತ್ರೋರಾತ್ರಿ ಹುರಿದು, ಹಗಲಿನಲ್ಲಿ ಬ್ರಿಟೀಷ್ ಅಧಿಕಾರಿಗಳ ಎದುರಿಗೇ ಬಿತ್ತಿ ಅವು ಹುಟ್ಟದಂತೆ ನೋಡಿಕೊಂಡಿದ್ದರು, ಜೀವ ವೈವಿಧ್ಯತೆಯ ಆಗರವನ್ನು ಉಳಿಸಿಕೊಂಡಿದ್ದರು.

ನಾವು ಹೇಳುತ್ತಿರುವುದು ಗಿರಿಜನರ ಈ ಪರಂಪರೆಯನ್ನು ಉಳಿಸೋಣ ಎಂದು. ಯುನೆಸ್ಕೊ ಪರಂಪರೆಯ ಪಟ್ಟಿಗೆ ಸೇರಿಸಿ ನೀಡುವ ಮಾನ್ಯತೆಗಿಂತ ಈ ಪರಂಪರೆ ದೊಡ್ಡದು. ಪಶ್ಚಿಮ ಘಟ್ಟ ಎಷ್ಟು ಸೂಕ್ಷ್ಮ ಪ್ರದೇಶ ಮತ್ತು ಇದನ್ನು ಕಾಪಾಡುವುದು ಎಷ್ಟು ಅಗತ್ಯ ಎಂಬುದು ನಮಗೆ ಗೊತ್ತಿದೆ. ಯುನೆಸ್ಕೊ “ಔಟ್‌ಸ್ಟ್ಯಾಂಡಿಂಗ್ ಯುನಿವರ್ಸಲ್ ವ್ಯಾಲ್ಯೂ” ಎಂದು ದೊಡ್ಡ ದೊಡ್ಡ ಶಬ್ದಗಳಲ್ಲಿ ವರ್ಣಿಸಿದ ಮಾತ್ರಕ್ಕೆ ಇದರ ಪ್ರಾಮುಖ್ಯತೆಯೇನೂ ಹೆಚ್ಚುವುದಿಲ್ಲ. ಪರಿಸರ ಎಂದರೆ ಪ್ರತಿಯೊಬ್ಬರಿಗೂ ಸೇರಿದ್ದು, ಎಲ್ಲರೂ ಕೂಡಿ ಉಳಿಸಬೇಕು, ಪರಿಸರ ಸಹ್ಯ ಜೀವನ ಶೈಲಿ ರೂಢಿಸಿಕೊಳ್ಳಬೇಕೇ ಹೊರತು, ಶೋಕೇಸ್‌ನಲ್ಲಿ ಇಡುವ ಅಲಂಕಾರಿಕ ವಸ್ತುವಂತೆ ಎಲ್ಲೋ ಒಂದಿಷ್ಟು ಜಾಗವನ್ನು ಉಳಿಸುತ್ತೇವೆ ಎಂದರೆ ಭೂಲೋಕ ಉಳಿಯದು.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-28)


– ಡಾ.ಎನ್.ಜಗದೀಶ್ ಕೊಪ್ಪ


ಜಿಮ್ ಕಾರ್ಬೆಟ್ ಭಾರತ ತೊರೆಯುವ ಮುನ್ನ ಕೊನೆಯ ದಿನಗಳಲ್ಲಿ ಬರೆದ ಎರಡು ಕೃತಿಗಳಿಂದ ವಿಶ್ವ ಪ್ರಸಿದ್ಧನಾದ. ಆತನ ಮೊದಲ ಕೃತಿಯನ್ನು (ಜಂಗಲ್ ಸ್ಟೊರೀಸ್) ಇಂಗ್ಲೆಂಡ್ ಮೂಲದ ‘ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್’ ಪ್ರಕಟಿಸಲು ಮುಂದೆ ಬಂದಿತು. ಭಾರತದ ಓದುಗರಿಗಾಗಿ ಮದ್ರಾಸ್ ಶಾಖೆಯ ಮುಖಾಂತರ ಪುಸ್ತಕವನ್ನು ಪ್ರಕಟಿಸಿದ ಸಂಸ್ಥೆ ನಂತರ ಅದನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಪ್ರಕಟಿಸಿತು. ಜಿಮ್ ಕಾರ್ಬೆಟ್‌ನ “ಜಂಗಲ್ ಸ್ಟೊರೀಸ್” ಕೃತಿ ನಿರೀಕ್ಷೆಗೂ ಮೀರಿ ಆತನಿಗೆ ಮತ್ತು ಪ್ರಕಟಿಸಿದ “ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್” ಸಂಸ್ಥೆಗೆ ಯಶಸ್ಸನ್ನು ತಂದುಕೊಟ್ಟಿತು. ಕೇವಲ ಒಂದು ವರ್ಷದಲ್ಲಿ ಐದು ಲಕ್ಷ ಪ್ರತಿಗಳು ಮಾರಾಟವಾದವು. ಇಂಗ್ಲೆಂಡಿನಲ್ಲಿ ಪರಿಸರ ಕ್ಲಬ್ ರಚಿಸಿಕೊಂಡಿದ್ದ ಕೆಲವರು, ಈ ಕೃತಿಯನ್ನು ಕೊಂಡು ಸದಸ್ಯರಿಗೆ ಉಚಿತವಾಗಿ ಹಂಚಿದರು.

ಮತ್ತೇ ಆಕ್ಸ್‌ಫರ್ಡ್ ಪ್ರಕಾಶನ ಸಂಸ್ಥೆ, ಶಿಕಾರಿಯ ಅನುಭವನ್ನು ಬರೆದುಕೊಡುವಂತೆ  ಜಿಮ್ ಕಾರ್ಬೆಟ್‌ಗೆ ಮನವಿ ಮಾಡಿತು. ಇದರ ಫಲವಾಗಿ  ಕಾರ್ಬೆಟ್‌ನಿಂದ “ಮ್ಯಾನ್ ಈಟರ್ ಆಪ್ ಕುಮಾವನ್” ಎಂಬ ಕೃತಿ ಹೊರಬಂದಿತು. ಅವನ ಮೊದಲ ಕೃತಿ “ಜಂಗಲ್ ಸ್ಟೊರೀಸ್”, ಕಾಡಿನ ಅನುಭವಗಳ ಲೇಖನಗಳ ಸಂಕಲನವಾಗಿದ್ದರೆ, ಎರಡನೇ ಕೃತಿ ತಾನು ಬೇಟೆಯಾಡಿದ ನರಭಕ್ಷಕ ಚಿರತೆಯ ಒಂದು ಸುಧೀರ್ಘ ರೋಚಕ ಕಥನವಾಗಿತ್ತು. ಒಂದು ರೊಮಾಂಚಕಾರಿ ಪತ್ತೆದಾರಿ ಮಾದರಿಯಲ್ಲಿ ತಾನು ಬೇಟೆಯಾಡಿದ ನರಭಕ್ಷಕ ಹುಲಿಯ ಬಗ್ಗೆ ಪ್ರತಿ ಪುಟದಲ್ಲೂ ಓದುಗರಿಗೆ ಕುತೂಹಲವಿರುವಂತೆ ರೋಚಕತೆಯ ಅಂಶವನ್ನು ಕಾಪಾಡಿಕೊಂಡು ಬರೆದದ್ದು ಕಾರ್ಬೆಟ್‌ನ ವಿಶೇಷವಾಗಿತ್ತು.

ಈ ಕೃತಿ ಕೂಡ ಅಭೂತ ಪೂರ್ವ ಯಶಸ್ಸನ್ನು ಕಂಡಿತು. ಇದರಿಂದ ಪ್ರೇರಿತನಾದ ಕಾರ್ಬೆಟ್ ಮುಂದೆ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿದ ಅನುಭವವನ್ನು  “ದ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್” ಎಂಬ ಹೆಸರಿನಲ್ಲಿ ಪ್ರಕಟಿಸಿದ. ಈ ಕೃತಿ ಇಂದಿಗೂ ಕೂಡ ಜಗತ್ತಿನ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಗೆ ಸೇರಿದೆ. ಎರಡು ಸಾವಿರದ ಇಸವಿಯ ಅಂತ್ಯದ ವೇಳೆಗೆ ಈ ಕೃತಿ  ಜಗತ್ತಿನಾದ್ಯಂತ 56 ಲಕ್ಷ ಪ್ರತಿ ಮಾರಾಟವಾಗಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದ ಹಾಗೆ ಸ್ಥಳಿಯ ಭಾಷೆಗಳಲ್ಲಿ ಪ್ರಕಟವಾಗಿದೆ, (ಕನ್ನಡದಲ್ಲಿ ತೇಜಸ್ವಿ ಅನುವಾದ ಮಾಡಿರುವ ಈ ಕೃತಿ ಹದಿನಾಲ್ಕಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ)

1946ರ ಮಾರ್ಚ್‌ನಲ್ಲಿ ಅಮೇರಿಕಾದ “ಯೂನಿವರ್ಸಲ್ ಪಿಕ್ಚರ್ಸ್ ಸಂಸ್ಥೆ” ಜಿಮ್ ಕಾರ್ಬೆಟ್‌ನಿಂದ ಹಕ್ಕು ಪಡೆದು, “ಮ್ಯಾನ್ ಈಟರ್ ಆಪ್ ಕುಮಾವನ್” ಚಿತ್ರವನ್ನು ನಿರ್ಮಿಸಿತು. ಭಾರತದ ಮೂಲದ ನಟ ಸಾಬು ನಾಯಕನಾಗಿದ್ದ ಈ ಚಿತ್ರಕ್ಕೆ ಭಾರತ ಸರ್ಕಾರ ಭಾರತದ ಅರಣ್ಯದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡಲಿಲ್ಲ. ಹಾಗಾಗಿ ಹಾಲಿವುಡ್‌ನಲ್ಲಿ  ಸೆಟ್ ನಿರ್ಮಿಸಿ ಈ ಚಿತ್ರವನ್ನು ತಯಾರಿಸಲಾಯಿತು. ಹೀಗೆ ಭಾರತ ತೊರೆಯುವ ಮುನ್ನ ಅಪ್ಪಟ ಪರಿಸರ ಪ್ರೇಮಿಯಾಗಿದ್ದ ಕಾರ್ಬೆಟ್‌ಗೆ ಸಂಧಿಗ್ದ ಸ್ಥಿತಿಯೊಂದು ಎದುರಾಯಿತು. ತನ್ನ ಶಿಕಾರಿಯ ಅನುಭವಗಳನ್ನು ದಾಖಲಿಸುತ್ತಾ ಜಗತ್ ಪ್ರಸಿದ್ಧ ಲೇಖಕನಾಗಿ ಹೊರಹೊಮ್ಮಿದ ಕಾರ್ಬೆಟ್ ಅನಿರೀಕ್ಷಿತವಾಗಿ ಮಲೇರಿಯಾ ರೋಗಕ್ಕೆ ತುತ್ತಾಗಿ ತಿಂಗಳು ಗಟ್ಟಲೆ ಹಾಸಿಗೆ ಹಿಡಿದ. ಅದೃಷ್ಟವಶಾತ್ ಆ ವೇಳೆಗೆ ಅವಿಷ್ಕಾರಗೊಂಡಿದ್ದ ಪೆನ್ಸಿಲಿನ್ ಔಷಧದಿಂದಾಗಿ ಚೇತರಿಸಿಕೊಂಡ. ಆದರೆ, ಅವನಿಗೆ ಗಂಟಲು ಬೇನೆ ಕಾರ್ಬೆಟ್‌ಗೆ ಕಾಣಿಸತೊಡಗಿತು. ತಮ್ಮನ ಅನಾರೋಗ್ಯವನ್ನು ನೋಡಿ, ಹೆದರಿದ ಅಕ್ಕ ಮ್ಯಾಗಿ ಭಾರತ ತೊರೆಯುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಳು. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಮ್ಮ ಆಸ್ತಿಗಳನ್ನು ಭಾರತ ಮುಟ್ಟುಗೋಲು ಹಾಕಿಕೊಂಡರೆ, ಏನು ಮಾಡುವುದು ಎಂಬ ಅವನ ಪ್ರಶ್ನೆಗೆ ಮ್ಯಾಗಿ ಬಳಿ ಉತ್ತರವಿರಲಿಲ್ಲ. ಆಕೆಗಂತೂ ನೈನಿತಾಲ್ ತೊರೆದು ಹೋಗುವುದು ಸಂಕಟದ ವಿಷಯವಾಗಿತ್ತು.

ಗಾರ್ನಿ ಹೌಸ್ ಬಂಗಲೆಯನ್ನು ಮಾರಿದ ನಂತರ ಒಂದು ವಾರ ಆ ಮನೆಯಲ್ಲಿದ್ದು. ಮನೆ ತೊರೆದು ಬರುವಾಗ, ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕೈಮುಗಿಯುತ್ತಾ ಗೇಟಿನ ಮುಂದೆ ತಲೆತಗ್ಗಿಸಿ ನಿಂತಿದ್ದರು. ಅವರ ಕೆನ್ನೆಗಳು ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಕಾರ್ಬೆಟ್ ಮತ್ತು ಮ್ಯಾಗಿ ಅವರನ್ನು ಸಂತೈಸುವ ಶಕ್ತಿ ಕಳೆದುಕೊಂಡು, ಕಣ್ಣೀರು ಹಾಕುತ್ತಾ ನೈನಿತಾಲ್ ಪರ್ವತವನ್ನು ಇಳಿದು, ಕಲದೊಂಗಿಯ ಮನೆ ಸೇರಿಕೊಂಡಿದ್ದರು. ಬರುವಾಗ ಆ ಎರಡು ವೃದ್ಧ ಜೀವಗಳು ಪರಸ್ಪರ ಕೈ ಹಿಡಿದುಕೊಂಡು ಹಸ್ತವನ್ನು ಅದುಮುವುದರ ಮೂಲಕ ಒಬ್ಬರಿಗೊಬ್ಬರು ಸಂತೈಸಿಕೊಳ್ಳತ್ತಿದ್ದರು. ನೈನಿತಾಲ್, ಮ್ಯಾಗಿ ಮತ್ತು ಕಾರ್ಬೆಟ್‌ಗೆ ಕೇವಲ ಗಿರಿಧಾಮ ಮಾತ್ರವಲ್ಲ, ತಾಯಿ ನೆಲವಾಗಿತ್ತು. ಅಲ್ಲಿಯೇ ಹುಟ್ಟಿ, ಆ ನೆಲದ ಜೊತೆ ಸುಧೀರ್ಘ ಒಡನಾಡಿದ ಆ ಹಿರಿಯ ಜೀವಗಳ ಬಾಲ್ಯದ ನೆನಪುಗಳು ಅಲ್ಲಿನ ಕಲ್ಲು, ಮಣ್ಣು, ಗಿಡ, ಮರ, ಪಕ್ಷಿ, ನೀರು, ಗಾಳಿ ಎಲ್ಲವುಗಳ ಜೊತೆ ತಳಕು ಹಾಕಿಕೊಂಡಿದ್ದವು. ಇನ್ನೆಂದೂ ತಿರುಗಿ ಈ ನೆಲಕ್ಕೆ ನಾವು ಬಾರೆವು ಎಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸಿತು. ಕೀನ್ಯಾಕ್ಕೆ ತೆರಳುವ ಮುನ್ನ ಕಾರ್ಬೆಟ್ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ, ಅಕ್ಕ ಮ್ಯಾಗಿಯ ಜೊತೆ ಸಿಷೆಲ್ಸ್ ದ್ವೀಪಕ್ಕೆ ಹೋಗಿ ಮೂರು ತಿಂಗಳು ವಿಶ್ರಾಂತಿ ಪಡೆದು ಮರಳಿ ಭಾರತಕ್ಕೆ ಬಂದ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಲಾರ್ಡ್‌ ಮೌಂಟ್‌ಬ್ಯಾಟನ್‌ನನ್ನು ವೈಸ್‌ರಾಯ್ ಆಗಿ ನೇಮಕ ಮಾಡಿತು. ಆಗಸ್ಟ್ 15 ಕ್ಕೆ ಮುಂಚಿತವಾಗಿ ಬ್ರಿಟಿಷ್ ಸರ್ಕಾರ ಭಾರತದ ಸರ್ಕಾರದ ಮುಂದೆ ಹಲವಾರು ನಿಬಂಧನೆಗಳನ್ನು ವಿಧಿಸಿತ್ತು. ಅವುಗಳಲ್ಲಿ ಭಾರತದಲ್ಲಿರುವ ಬ್ರಿಟಿಷರ ಆಸ್ತಿ ಮತ್ತು ಅವರ ಜೀವಗಳಿಗೆ ಧಕ್ಕೆಯಾಗಬಾರದು ಎಂಬುದು ಒಂದಾಗಿತ್ತು. ಈ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರವೂ ಬ್ರಿಟಿಷ್ ಸೇನೆ ಭಾರತದಲ್ಲಿ ಇರುತ್ತದೆ ಎಂಬ ಷರತ್ತನ್ನು ವಿಧಿಸಲಾಗಿತ್ತು. ಸ್ವಾತಂತ್ರ್ಯದ ದಿನಗಳು ಹತ್ತಿರವಾದಂತೆ ದೇಶಾದ್ಯಂತ ನೆಲೆಸಿದ್ದ ಬ್ರಿಟಿಷರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇವೆಲ್ಲವನ್ನು ಕುತೂಹಲದಿಂದ ಎದುರು ನೋಡುತ್ತಿದ್ದ ಕಾರ್ಬೆಟ್ ಮತ್ತು ಮ್ಯಾಗಿಗೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಉತ್ತರಭಾರತದಲ್ಲಿ, ವಿಶೇಷವಾಗಿ ಪಂಜಾಬ್ ಲಾಹೋರ್ ನಗರಗಳಲ್ಲಿ ಸಂಭವಿಸಿದ ಗಲಭೆಯಿಂದ ಆತಂಕಕ್ಕೆ ಒಳಗಾದರು. ಹಿಂಸೆಯಿಂದ ಭಯಭೀತರಾದ ಇಬ್ಬರೂ ಕೂಡಲೇ ಭಾರತ ತೊರೆಯಲು ನಿರ್ಧರಿಸಿದರು.

ಕೀನ್ಯಾದಲ್ಲಿ ಕಾರ್ಬೆಟ್‌ನ ಹಿರಿಯ ಸಹೋದರ ಟಾಮ್ ಕಾರ್ಬೆಟ್ ಮತ್ತು ಸಹೋದರಿಯ ಮಗ ನೆಸ್ಟರ್ ಇದ್ದುದರಿಂದ ಇವರಿಬ್ಬರ ವಾಸಕ್ಕೆ ಅಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆ ವೇಳೆಗೆ ತಾಂಜೇನಿಯಾದಲ್ಲಿದ್ದ ಕೃಷಿತೋಟವನ್ನು, ಪಾಲುದಾರ ಮತ್ತು ಕುಮಾವನ್ ಪ್ರಾಂತ್ಯದ ಮಾಜಿ ಜಿಲ್ಲಾಧಿಕಾರಿ ವಿಂದಮ್ ವಾಪಸ್ ಇಂಗ್ಲೆಂಡಿಗೆ ತೆರಳಿದ ಕಾರಣ ಮಾರಾಟ ಮಾಡಲಾಗಿತ್ತು. ಕಾರ್ಬೆಟ್ ತನ್ನ ಪಾಲಿನ ಹಣವನ್ನು ಅಕ್ಕನ ಮಗ ನೆಸ್ಟರ್‌ಗೆ ನೀಡಿ ಕೀನ್ಯಾದಲ್ಲಿ ತೋಟ ಮತ್ತು ಮನೆ ಸಿದ್ಧಪಡಿಸಲು ಕೇಳಿಕೊಂಡಿದ್ದನು. ತಾವು ಭಾರತ ತೊರೆಯುತ್ತಿರುವ ವಿಷಯವನ್ನು ಚೋಟಿ ಹಲ್ದಾನಿ ಹಳ್ಳಿಯ ಜನಕ್ಕೆ ತಿಳಿಸಲಾಗದೆ, ಅಣ್ಣನ ಮನೆಗೆ ಹೋಗಿ ಬರುತ್ತೀವಿ ಎಂದು ತಿಳಿಸಿ, ಅವರಿಗೆ ನಂಬಿಕೆ ಬರುವ ಹಾಗೆ ಮನೆಯ ಬೀಗದ ಕೀಲಿಯನ್ನು ಅವರಿಗೆ ಒಪ್ಪಿಸಿ, ಲಕ್ನೊ ಮಾರ್ಗವಾಗಿ ಬಾಂಬೆಗೆ ರೈಲಿನಲ್ಲಿ ತೆರಳಿದರು.

ಕಾರ್ಬೆಟ್ ಮತ್ತು ಮ್ಯಾಗಿ ಭಾರತ ತೊರೆಯುತ್ತಿರುವುದು ಅವರ ಆಪ್ತ ಸೇವಕ ರಾಮ್‌ಸಿಂಗ್‌ಗೆ ಮಾತ್ರ ತಿಳಿದಿತ್ತು ಅವನಿಗೆ ಚೋಟಿ ಹಲ್ದಾನಿ ಹಳ್ಳಿಯಲ್ಲಿ ಮನೆ ನಿರ್ಮಿಸಿಕೊಟ್ಟು, ಪ್ರತಿ ತಿಂಗಳು ತಿಂಗಳಿಗೆ 10 ರೂ. ಮಾಸಾಶನ ಸಿಗುವಂತೆ ಕಾರ್ಬೆಟ್ ವ್ಯವಸ್ಥೆ ಮಾಡಿದ್ದ. ಲಕ್ನೊ ರೈಲು ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಬಂದಿದ್ದ ರಾಮ್‌ಸಿಂಗ್‌ ರೈಲು ಹೊರಡುತ್ತಿದ್ದಂತೆ ಪ್ಲಾಟ್ ಫಾರಂ ಮೇಲೆ ಕುಕ್ಕರುಗಾಲಿನಲ್ಲಿ ಬಿಕ್ಕಳಿಸಿ ಅತ್ತುಬಿಟ್ಟ. ಅವನಿಗೆ ವಿದಾಯ ಹೇಳಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಕಾರ್ಬೆಟ್ ಮತ್ತು ಮ್ಯಾಗಿಯ ಕಣ್ಣುಗಳು ತೇವವಾದವು.

ಬಾಂಬೆ ತಲುಪಿದ ಕಾರ್ಬೆಟ್ ಮತ್ತು ಅವನ ಸಹೋದರಿ, 1947ರ ಡಿಸಂಬರ್ 15ರಂದು ಹಡಗಿನ ಮೂಲಕ ಮೊಂಬಸ ಪಟ್ಟಣ ತಲುಪಿದರು. ಅಲ್ಲಿಂದ ರೈಲಿನಲ್ಲಿ ರಾಜಧಾನಿ ನೈರೋಬಿ ನಗರಕ್ಕೆ ಬಂದಿಳಿದರು. ಆ ವೇಳೆಗಾಗಲೇ  ಜಿಮ್ ಕಾರ್ಬೆಟ್‌ನ ಜೀವದ ಗೆಳೆಯ ಹಾಗೂ ರುದ್ರ ಪ್ರಯಾಗದ ಜಿಲ್ಲಾಧಿಕಾರಿಯಾಗಿದ್ದ ಇಬ್ಬೊಟ್ ಸನ್ ಸೇವೆಯಿಂದ ನಿವೃತ್ತನಾಗಿ ಬ್ರಿಟಿಷ್ ಸರ್ಕಾರದಿಂದ ಸರ್ ಪದವಿ ಪಡೆದು ತನ್ನ ಪತ್ನಿ ಜೀನ್ ಜೊತೆ ನೈರೋಬಿಯಲ್ಲಿ ವಾಸವಾಗಿದ್ದ. ಒಂದು ವಾರ ಅಕ್ಕ ತಮ್ಮ ಇಬ್ಬರೂ ಇಬ್ಬೊಟ್ ಸನ್ ಮನೆಯಲ್ಲಿ ತಂಗಿ ವಿಶ್ರಾಂತಿ ಪಡೆದರು. ಇಬ್ಬೊಟ್ ಸನ್ ಮತ್ತು ಕಾರ್ಬೆಟ್ ಇಬ್ಬರೂ ಕುಳಿತು ಭಾರತದಲ್ಲಿದ್ದ ಸಂದರ್ಭದಲ್ಲಿ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲಲು ತಾವುಗಳು  ಅನುಭವಿಸಿದ ಬವಣೆಗಳನ್ನು ಮೆಲುಕು ಹಾಕಿದರು.

ಇತ್ತ ಕಾಬೆಟ್‌ನ ಅಕ್ಕನ ಮಗ ನೆಸ್ಟರ್ ತನ್ನ ಸೋದರ ಮಾವ ಕಾರ್ಬೆಟ್ ಮತ್ತು ಚಿಕ್ಕಮ್ಮ ಮ್ಯಾಗಿ ಇವರುಗಳ ವಿಶ್ರಾಂತಿ ಜೀವನಕ್ಕಾಗಿ ಕೀನ್ಯಾದ ಕಿಪ್ ಕರೆನ್ ಎಂಬಲ್ಲಿ 650 ಎಕರೆ ಕಾಫಿ ತೋಟ ಖರೀದಿಸಿ, ಅವರಿಗಾಗಿ ಒಂದು ಸುಂದರ ಹಾಗೂ ಚಿಕ್ಕದಾದ ಕಾಟೇಜ್ ನಿರ್ಮಾಣ ಮಾಡಿದ್ದ. ಈ ಪ್ರದೇಶ ಮತ್ತು ಪರಿಸರ ಕಾರ್ಬೆಟ್‌ಗೆ ಇಷ್ಟವಾದರೂ ಅಕ್ಕ ಮ್ಯಾಗಿಗೆ ಇಷ್ಟವಾಗಲಿಲ್ಲ. ನಗರ ಮತ್ತು ಪಟ್ಟಣಗಳಿಂದ ಬಹು ದೂರದಲ್ಲಿದ್ದ ಈ ತೋಟದಲ್ಲಿ ಇರುವುದು ಕಷ್ಟ ಎಂಬ ಭಾವನೆ ಮ್ಯಾಗಿಗೆ ಕಾಡತೊಡಗಿತು. ಇಬ್ಬರೂ ಎಪ್ಪತ್ತು ದಾಟಿದ್ದ ವಯೋವೃದ್ಧರಾದ್ದರಿಂದ ಅನಾರೋಗ್ಯಕ್ಕೆ ತುತ್ತಾದರೆ, ವೈದ್ಯರಾಗಲಿ, ಆಸ್ಪತ್ರೆಗಳಾಗಲಿ ಹತ್ತಿರದಲ್ಲಿ ಇರದಿರುವುದು ಮ್ಯಾಗಿಯ ಬೇಸರಕ್ಕೆ ಕಾರಣವಾಗಿತ್ತು. ಸಹೋದರಿಯ ಮಾತಿಗೆ ಎದುರಾಡದ ಕಾರ್ಬೆಟ್ ಗೊಂದಲಕ್ಕೆ ಸಿಲುಕಿದ. ನಂತರ ಅವಳ ಇಚ್ಛೆಯಂತೆ ಆ ಮನೆ ಮತ್ತು ಕಾಫಿ ತೋಟವನ್ನು ತೊರೆದು ಅವನ ಹಿರಿಯಣ್ಣ ಟಾಮ್ ಕಾರ್ಬೆಟ್‌ನ ಎಸ್ಟೇಟ್‌ಗೆ ತನ್ನ ವಾಸ್ತವ್ಯವನ್ನು ಬದಲಿಸಿದ.

ಭಾರತವನ್ನು, ವಿಶೇಷವಾಗಿ ನೈನಿತಾಲ್ ತೊರೆದು ಬಂದಿರುವುದು ಮ್ಯಾಗಿಯ ಮಾನಸಿಕ ಕ್ಲೇಶಕ್ಕೆ ಕಾರಣವಾಗಿದೆ ಎಂದು ಊಹಿಸಿದ ಕಾರ್ಬೆಟ್ ಹಿರಿಯಣ್ಣನ ಸನೀಹದಲ್ಲಿ ನೈನಿತಾಲ್ ಗಿರಿಧಾಮದ ಬಾಲ್ಯದ ನೆನಪುಗಳ ಜೊತೆ ಅಕ್ಕ ಮ್ಯಾಗಿ ನೆಮ್ಮದಿಯಿಂದ ಇರುತ್ತಾಳೆ ಎಂದು ನಂಬಿದ್ದ. ಆದರೆ, ಇಲ್ಲಿಯೂ ಬಹಳ ಕಾಲ ಇರಲು ಮ್ಯಾಗಿ ತಕರಾರು ತೆಗೆದಳು. ನೈನಿತಾಲ್‌ನ ವಿಶಾಲವಾದ ಬಂಗಲೆಯಲ್ಲಿ ತಣ್ಣನೆಯ ವಾತಾವರಣ, ಸ್ವಚ್ಛಂಧ ಪರಿಸರದ ಬದುಕಿನಲ್ಲಿ ಹುಟ್ಟಿ ಬೆಳೆದು, ಜೀವನ ಬಹುತೇಕ ಭಾಗವನ್ನು ಕಳೆದಿದ್ದ ಮ್ಯಾಗಿಗೆ ಕೀನ್ಯಾದ ಗ್ರಾಮಾಂತರ ಪ್ರದೇಶ, ಮತ್ತು ಪುಟ್ಟ ಮನೆಯ ವಾಸಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಅಂತಿಮವಾಗಿ ಕೀನ್ಯಾದ ಹಿಮ ಪರ್ವತದ ತಪ್ಪಲಿನಲ್ಲಿ ಇದ್ದ ಹೊಟೇಲ್ ಒಂದರಲ್ಲಿ ವಿಶಾಲವಾದ ಕಾಟೇಜ್ ಅನ್ನು ಬಾಡಿಗೆ ಪಡೆದು ಕಾರ್ಬೆಟ್ ಮ್ಯಾಗಿ ಇಬ್ಬರೂ ವಾಸಿಸತೊಡಗಿದರು. ಪರ್ವತದ ಇಳಿಜಾರಿನಲ್ಲಿ ಇದ್ದ ಹೊಟೇಲ್‌ನ ಕೊಠಡಿಯಿಂದ ಕಾಣುತ್ತಿದ್ದ ಹಿಮ ಪರ್ವತ ಅರಣ್ಯ ಇವೆಲ್ಲವೂ ಮ್ಯಾಗಿಯ ಪಾಲಿಗೆ ನೈನಿತಾಲ್ ಗಿರಿಧಾಮದ ವಾತಾವರಣದಂತೆ ಕಂಡು ಬಂದವು. ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಯಸಿ, ತಂಗಿದ್ದ ಕೊಠಡಿಯನ್ನು ದೀರ್ಘಾವಧಿಗೆ ಒಪ್ಪಂದದ ಆಧಾರದ ಮೇಲೆ ಪಡೆದುಕೊಂಡರು.

(ಮುಂದುವರಿಯುವುದು)