– ಆನಂದ ಪ್ರಸಾದ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಸಂಘ ಪರಿವಾರ ಬಿಂಬಿಸಲು ಪ್ರಯತ್ನಿಸುತ್ತಿದ್ದು ಇದನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧಿಸುತ್ತಿದ್ದಾರೆ. ಸಂಘ ಪರಿವಾರ ಮಾತ್ರವಲ್ಲದೆ ಸ್ವತಃ ನರೇಂದ್ರ ಮೋದಿಯೇ ತನ್ನನ್ನು ತಾನೇ ಮುಂದಿನ ಪ್ರಧಾನಮಂತ್ರಿ ಅಭ್ಯಥಿಯಾಗಿ ಬಿಂಬಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಸಂಘದ ಬೆಂಬಲಕ್ಕಿರುವ ಮುಖ್ಯವಾಹಿನಿಯ ಕೆಲವು ಪತ್ರಿಕೆಗಳೂ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವುದನ್ನು ನಾವು ಕಾಣಬಹುದು. ಗುಜರಾತಿನಲ್ಲಿ ನರೇಂದ್ರ ಮೋದಿ ಅಪಾರ ಅಭಿವೃದ್ಧಿಯನ್ನು ಸಾಧಿಸಿದ್ದಾರೆ ಎಂದು ಸಂಘಮುಖೀ ಪತ್ರಿಕೆಗಳು ಭಾರೀ ಪ್ರಚಾರವನ್ನು ಕೈಗೊಳ್ಳುತ್ತಿವೆ. ನರೇಂದ್ರ ಮೋದಿ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಗೋಧ್ರಾ ಗಲಭೆಗಳ ನಂತರ ನಡೆದ ಕೋಮುಗಲಭೆಗಳನ್ನು ನಿಯಂತ್ರಿಸದೆ ಅದರ ರಾಜಕೀಯ ಲಾಭ ಪಡೆದ ಕಳಂಕ ಅವರನ್ನು ಎಂದಿಗೂ ಪ್ರಧಾನ ಮಂತ್ರಿ ಪಟ್ಟಕ್ಕೆ ಹೋಗಲು ಬಿಡಲಾರದು. ಮೋದಿಗೆ ಅಂಟಿರುವ ತೀವ್ರಗಾಮಿ ಹಿಂದುತ್ವವಾದಿ ಇಮೇಜ್ ಅವರನ್ನು ಪ್ರಧಾನಿಯಾಗುವುದನ್ನು ತಡೆಯುವುದು ಖಚಿತ. ಈ ಮೊದಲು ಇಂಥ ತೀವ್ರಗಾಮಿ ಹಿಂದುತ್ವವಾದಿ ಇಮೇಜ್ ಅಡ್ವಾಣಿಯವರಿಗೆ ಇತ್ತು. ಹೀಗಾಗಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದಾಗ ಬಿಜೆಪಿ ಹಿನ್ನಡೆ ಅನುಭವಿಸಿತು. ಹಿಂದಿನ 50 ವರ್ಷಗಳಲ್ಲಿ ಆಗದ ಪ್ರಗತಿ ಬಿಜೆಪಿ ಆಡಳಿತದ 5 ವರ್ಷಗಳ ಆಡಳಿತದಲ್ಲಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಮಾಡಿದರೂ ಅಡ್ವಾಣಿಯವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರದೆ ಇರಲು ಅಡ್ವಾಣಿಯವರಿಗೆ ಇದ್ದ ಉಗ್ರ ಹಿಂದುತ್ವವಾದಿ ಇಮೇಜ್ ಕಾರಣ. ಹೀಗಾಗಿ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮುಂದೊಡ್ಡಿ ಚುನಾವಣೆಗೆ ಹೋದರೆ ಎನ್. ಡಿ. ಎ. ಮೈತ್ರಿಕೂಟಕ್ಕೆ ಹಿನ್ನಡೆ ಆಗುವ ಸಂಭವ ಅಧಿಕ.
ಭಾರತವು ಒಂದು ಬಹುಸಂಸ್ಕೃತಿಗಳ ದೇಶವಾಗಿರುವುದರಿಂದ ಇಲ್ಲಿ ಉಗ್ರವಾದಿ ಹಿಂದುತ್ವ ಪ್ರತಿಪಾದಿಸುವ ಪಕ್ಷಗಳು ಬಹುಮತದಿಂದ ಅಧಿಕಾರಕ್ಕೆ ಬರುವ ಸಂಭವ ಇಲ್ಲ. ಇದನ್ನರಿತೇ ಉಗ್ರಹಿಂದುವಾದಿ ಪಕ್ಷವಾದ ಬಿಜೆಪಿ ತನ್ನ ಉಗ್ರ ಹಿಂದೂವಾದವನ್ನು ಪಕ್ಕಕ್ಕೆ ಇಟ್ಟು ಇತರ ಸಮಯಸಾಧಕ ಅಧಿಕಾರದಾಹೀ ಪಕ್ಷಗಳೊಂದಿಗೆ ಮೈತ್ರಿಕೂಟವನ್ನು ಏರ್ಪಡಿಸಿಕೊಂಡು ಅಧಿಕಾರಕ್ಕೆ ಏರಿತು. ಇಂಥ ಮೈತ್ರಿಕೂಟವನ್ನು ರಚಿಸಲು ಸೌಮ್ಯವಾದಿ ನಾಯಕ ಅಟಲ ಬಿಹಾರಿ ವಾಜಪೇಯಿಯವರ ಇಮೇಜ್ ಬಹಳಷ್ಟು ಸಹಾಯ ಮಾಡಿತು. ಸಂಘ ಪರಿವಾರದ ವ್ಯಕ್ತಿ ಎಂದು ಬಿಜೆಪಿ ಅಧ್ಯಕ್ಷಗಿರಿಗೆ ಗಡ್ಕರಿ ಬಂದ ನಂತರ ಬಿಜೆಪಿಯ ವಿಶ್ವಾಸಾರ್ಹತೆ ಕಡಿಮೆಯಾಯಿತು. ಸಂಘ ಪರಿವಾರಕ್ಕೆ ಉಗ್ರ ಹಿಂದುತ್ವವಾದಿ ಇಮೇಜ್ ಇರುವುದೇ ಇದಕ್ಕೆ ಕಾರಣ. ಗಡ್ಕರಿ ಬಿಜೆಪಿ ಅಧ್ಯಕ್ಷರಾದ ನಂತರ ಸಂಘವು ತನ್ನ ನಿಲುವುಗಳನ್ನು ಪಕ್ಷದ ಮೇಲೆ ಬಲಪಡಿಸುವ ಸಾಧ್ಯತೆ ಹೆಚ್ಚಿರುವುದರಿಂದ ಬಿಜೆಪಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಾ ಬಂದಿದೆ.
ಈ ಹಿನ್ನೆಲೆಯಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಸಮಂಜಸವಲ್ಲ ಎಂದು ಹೇಳಿರುವಂತೆ ಕಾಣುತ್ತದೆ. ಮೋದಿಯವರು ಗುಜರಾತಿನಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಹಾಗೂ ನಿತೀಶ್ ಬಿಹಾರದಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಹೋಲಿಸಿದಾಗ ನಿತೀಶ್ ಸಾಧಿಸಿದ ಅಭಿವೃದ್ಧಿ ಮಹತ್ತರವಾದುದು. ಗುಜರಾತ್ ಮೊದಲಿನಿಂದಲೇ ಉದ್ಯಮಶೀಲರ ನಾಡು. ಹೀಗಾಗಿ ಗುಜರಾತಿನಲ್ಲಿ ಅಭಿವೃದ್ಧಿ ಸಾಧಿಸುವುದು ಬಹಳ ದೊಡ್ಡ ವಿಷಯ ಅಲ್ಲ. ಆದರೆ ಬಿಹಾರ ಕಾನೂನು ಸುವ್ಯವಸ್ಥೆ ಹದಗೆಟ್ಟ ಒಂದು ಗೂಂಡಾರಾಜ್ ವ್ಯವಸ್ಥೆ ಹೊಂದಿತ್ತು. ಇದನ್ನು ತಹಬಂದಿಗೆ ತಂದು ಬಿಹಾರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದು ಮಹತ್ವದ ಸಾಧನೆ ಎನ್ನಲು ಅಡ್ಡಿ ಇಲ್ಲ. ಗುಜರಾತಿನಲ್ಲಿ ಮೋದಿಗೆ ಕೋಮುಗಲಭೆಗಳ ಪರಿಣಾಮವಾಗಿ ಅನಾಯಾಸವಾಗಿ ಬಹುಮತ ಲಭಿಸಿತ್ತು. ಹೀಗಾಗಿ ಏಕಪಕ್ಷದ ಆಡಳಿತದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಆದರೆ ಬಿಹಾರದಲ್ಲಿ ನಿತೀಶ್ ಅವರು ಸೈದ್ಧಾಂತಿಕವಾಗಿ ವಿರೋಧಿ ನಿಲುವಿನ ಬಿಜೆಪಿ ಪಕ್ಷದ ಜೊತೆ ಮೈತ್ರಿ ಸರ್ಕಾರದಲ್ಲಿ ಏಗುತ್ತಾ ಬಿಹಾರವನ್ನು ಅಭಿವೃದ್ಧಿ ಪಥದೆಡೆಗೆ ಮುನ್ನಡೆಸುತ್ತಿರುವುದು ಸಾಧನೆ ಎನ್ನಬೇಕಾಗುತ್ತದೆ. ಸಮಾಜವಾದಿ ಹಿನ್ನೆಲೆಯ ನಿತೀಶ್ ಅನಿವಾರ್ಯವಾಗಿ ಬಿಜೆಪಿಯಂಥ ಕೋಮುವಾದಿ ಪಕ್ಷದೊಂದಿಗೆ ಹೋಗಿರುವಂತೆ ಕಾಣುತ್ತದೆ. ಹೀಗಾಗಿಯೇ ನಿತೀಶ್ ಅವರು ಎನ್. ಡಿ. ಎ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯಂಥ ತೀವ್ರ ಹಿಂದುವಾದಿಯನ್ನು ವಿರೋಧಿಸುತ್ತಿರುವಂತೆ ಕಾಣುತ್ತದೆ.
ಮೋದಿಗೆ ಹೋಲಿಸಿದರೆ ನಿತೀಶ್ ಪ್ರಧಾನಿ ಅಭ್ಯರ್ಥಿಯಾಗಲು ಸಾವಿರ ಪಟ್ಟು ಉತ್ತಮ ರಾಜಕಾರಣಿ. ಏಕೆಂದರೆ ನಿತೀಶ್ ಮೇಲೆ ಮೋದಿಯವರ ಮೇಲೆ ಇರುವಂತೆ ಕಳಂಕ ಇಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟಿ ಚುನಾವಣೆಗಳಲ್ಲಿ ಗೆಲ್ಲುವ ಹಾದಿ ಮೋದಿ, ಅಡ್ವಾಣಿಯವರಂಥ ಸಂಘದ ಹಿನ್ನೆಲೆಯ ರಾಜಕಾರಣಿಗಳಿಗೆ ಸುಲಭವಾಗಿ ಲಭ್ಯವಾಗುವ ಹಾದಿ. ಈ ರೀತಿಯಾಗಿ ಗೆಲ್ಲುವುದು ಶ್ರೇಷ್ಠ ಹಾದಿಯೇನೂ ಅಲ್ಲ ಮತ್ತು ಈ ರೀತಿ ಗೆಲ್ಲಲು ಹೆಚ್ಚಿನ ಶ್ರಮವೂ ಬೇಕಾಗುವುದಿಲ್ಲ. ಆದರೆ ಇಂಥ ಹಾದಿ ಆರಿಸಿಕೊಂಡವರು ಇತಿಹಾಸದಲ್ಲಿ ಶಾಶ್ವತವಾಗಿ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಅಡ್ವಾಣಿಯವರು ತನ್ನ ಇಮೇಜ್ ಅನ್ನು ಸೌಮ್ಯವಾದಿಯಾಗಿ ಬದಲಾಯಿಸಿದರೂ ಜನ ನಂಬದಂತೆ ಆಗಿದೆ ಹಾಗೂ ಅವರ ನೇತೃತ್ವದ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಗಿದೆ. ಇದು ಮೋದಿಯವರಿಗೂ ಅನ್ವಯಿಸುತ್ತದೆ. ಮೋದಿಯವರೂ ಈಗ ಅಭಿವೃದ್ಧಿಯ ಹರಿಕಾರ ಎಂಬ ಇಮೇಜ್ ಧರಿಸಿ ಹೋದರೂ ಜನ ಅವರ ಉಗ್ರ ಹಿಂದೂವಾದಿ ಇಮೇಜ್ ಅನ್ನು ಮರೆಯುವ ಸಾಧ್ಯತೆ ಇಲ್ಲವಾಗಿರುವುದರಿಂದ ಸದ್ಯ ಮುಂದಿನ ಚುನಾವಣೆಗಳಲ್ಲಿ ದೇಶಕ್ಕೆ ಉಗ್ರ ಕೋಮುವಾದದ ಅಪಾಯ ಎದುರಾಗಲಾರದು ಎಂದು ಕಾಣುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪಕ್ಷದ ಮೇಲೆ ಸಂಘ ಪರಿವಾರ ಹೆಚ್ಚಿನ ಹಿಡಿತ ಸಾಧಿಸುತ್ತಿರುವ ಕಾರಣ ಜನ ಅದನ್ನು ನಂಬದಂತೆ ಆಗಿದೆ. ಹೀಗಾಗಿಯೇ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಬಹಳ ಬೊಬ್ಬೆ ಹಾಕಿದರೂ ಅದು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಈ ಕಾರಣದಿಂದಾಗಿ ದೇಶಕ್ಕೆ ಪರ್ಯಾಯ ತೃತೀಯ ರಂಗವೊಂದರ ಅವಶ್ಯಕತೆ ಇದೆ. ಆದರೆ ದುರದೃಷ್ಟವಶಾತ್ ದೇಶದಲ್ಲಿ ತೃತೀಯ ರಂಗದ ನಾಯಕತ್ವ ವಹಿಸಿಕೊಳ್ಳಬಲ್ಲ ಉತ್ತಮ ಪಕ್ಷವೊಂದರ ಕೊರತೆ ಇದೆ. ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದರೂ ತನ್ನ ಹಳೆಯ ಚಾಳಿಯನ್ನು ಬಿಟ್ಟು ಅಭಿವೃದ್ಧಿ ರಾಜಕೀಯದೆಡೆಗೆ ಚಲಿಸುವ ದಿಟ್ಟ ನಿಲುವನ್ನು ತೆಗೆದುಕೊಂಡಂತೆ ಕಾಣುವುದಿಲ್ಲ. ಅಖಿಲೇಶ್ ಯಾದವರಂಥ ಯುವ ನಾಯಕ ಸಮಾಜವಾದಿ ಪಕ್ಷದಲ್ಲಿ ಇದ್ದರೂ ಈ ಕುರಿತು ಮಾರ್ಗದರ್ಶನ ಹಾಗೂ ದೂರದೃಷ್ಟಿ ಅವರಲ್ಲಿ ಇರುವಂತೆ ಕಾಣುವುದಿಲ್ಲ. ಎಡ ಪಕ್ಷಗಳು ತೃತೀಯ ರಂಗದ ಸಾಧ್ಯತೆಗಳ ಬಗ್ಗೆ ಸಂಭವನೀಯ ರಾಜಕೀಯ ಪಕ್ಷಗಳಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯ ಇದೆ. ಉತ್ತಮ ಆಡಳಿತ ನೀಡುವಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಯಶಸ್ವಿಯಾದರೆ ಇದು ತೃತೀಯ ರಂಗದ ರಚನೆಗೆ ನಾಯಕತ್ವ ವಹಿಸಿಕೊಳ್ಳಲು ಸಾಧ್ಯ.