-ಅನಂತ ನಾಯಕ್
ದೇಶದ ಸಂವಿಧಾನ ರಚಿತವಾಗಿ 10 ವರ್ಷದೊಳಗೆ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪೂರೈಕೆ ಮುಗಿದಿರಬೇಕೆಂದು ಉದ್ದೇಶಿಸಲಾಗಿತ್ತು. ಈ ಗುರಿಯನ್ನು ತಲುಪಲು ಆಳುವ ಪ್ರಭುತ್ವಗಳಿಂದ ಸಾಧ್ಯವಾಗಲೇ ಇಲ್ಲ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಶಿಕ್ಷಣ ಸಾರ್ವತ್ರೀಕರಣವಾಗಬೇಕೆನ್ನುವ ಚಳವಳಿಯ ಫಲವಾಗಿ ರೂಪಿತವಾದ ಕಾಯ್ದೆಗಳಲ್ಲಿ “ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009” ಕೂಡ ಪ್ರಮುಖವಾದದ್ದು. 2009 ರಿಂದಲೇ ಬಹುತೇಕ ರಾಜ್ಯ ಸರ್ಕಾರಗಳು ಈ ಕಾಯ್ದೆ ಜಾರಿಗೆ ಮುಂದಾದವು, ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ನಿರ್ಲಕ್ಷ್ಯ ತಾಳಿತು. ಸುಪ್ರೀಂಕೋರ್ಟ್ ಮತ್ತು ಜನ ಚಳವಳಿಯ ಒತ್ತಡದಿಂದ ಪ್ರಸಕ್ತ ವರ್ಷ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವಂತೆ ಕಾಣಿಸುತ್ತಿದ್ದರೂ ಖಾಸಗಿ ಶಾಲೆಯವರ ತಾಳಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಕುಣಿಯುತ್ತಿರುವುದು ಸ್ಪಷ್ಟಗೊಂಡಿದೆ.
ಚಳವಳಿಯ ಫಲವಾಗಿ ಶಿಕ್ಷಣ ಹಕ್ಕು:
ಜನ ಚಳವಳಿಯ ಒತ್ತಡದಿಂದ 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿ ಕಲಂ 21(ಎ)ನಲ್ಲಿ ಮಕ್ಕಳ ಶಿಕ್ಷಣದ ಹಕ್ಕನ್ನು ಖಾತ್ರಿ ಗೊಳಿಸಲಾಯಿತು. 2002 ರಲ್ಲಿ ಶಿಕ್ಷಣ ಕೇಂದ್ರಿಯ ಸಲಹಾ ಮಂಡಳಿ (Central Advisory Board for Education)ಯನ್ನು ರಚಿಸಲಾಗಿ ಇದರ ಶಿಫಾರಸ್ಸಿನಂತೆ 2009 ಆಗಸ್ಟ್ 12 ರಂದು ಲೋಕಸಭೆ ‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009’ನ್ನು ಅಂಗಿಕರಿಸಿತು. ಈ ಕಾಯ್ದೆಯಲ್ಲಿ ಮಕ್ಕಳ ಕಡ್ಡಾಯ ದಾಖಲೆ, ನಿರಂತರ ಹಾಜರಾತಿ, ಗುಣಮಟ್ಟದ ಭಾವೈಕ್ಯತಾ ಶಿಕ್ಷಣ, ವಿಕಲಚೇತನರಿಗೆ ಆದ್ಯತೆ, ದೈಹಿಕ-ಮಾನಸಿಕ ದಂಡನೆ ನಿಷೇಧ, ಸರ್ಕಾರ-ಪಂಚಾಯ್ತಿಗಳ, ಪಾಲಕರ ಕರ್ತವ್ಯ, ಜಾತಿ-ಧರ್ಮದ ಹೆಸರಿನಲ್ಲಿ ಪ್ರವೇಶ ನಿರಾಕರಣೆ-ಅವಮಾನಕ್ಕೆ ವಿರೋಧ, ಪ್ರವೇಶ ಪರೀಕ್ಷೆ, ಟ್ಯೂಷನ್ ನಿಷೇಧ, ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಉಚಿತ ಪ್ರವೇಶ ನೀಡಬೇಕೆನ್ನುವುದು ಕಾಯ್ದೆ ಪ್ರಮುಖಾಂಶ. (ಈ ವಿದ್ಯಾರ್ಥಿಗಳ ಶುಲ್ಕಗಳನ್ನು ಸರ್ಕಾರವೇ ಖಾಸಗಿ ಶಾಲೆಗಳಿಗೆ ಭರಿಸಬೇಕು).
ಇದು ಒಂದು ಕ್ರಾಂತಿಕಾರಿ ಕಾಯ್ದೆ ಅಲ್ಲದಿದ್ದರೂ ಮಕ್ಕಳ ಶಿಕ್ಷಣ ಹಕ್ಕಿನ ಖಾತ್ರಿ ಮೂಡಿಸುತ್ತಿರುವುದು ಸಂತೋಷಕರ. ಯಥಾವತ್ತಾಗಿ ಈ ಕಾಯ್ದೆಯ ಜಾರಿ ಸಾದ್ಯವಿಲ್ಲವೆಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿವೆ. “ಶೇ 25 ಬಡ-ಹಿಂದುಳಿದ-ದಲಿತ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ, ಏಕೆಂದರೆ ಅವರು ನಮ್ಮಲ್ಲಿರುವ ಶ್ರೀಮಂತ ಮಕ್ಕಳ ಜೊತೆ ಬೆರೆಯಲು ಸಾಧ್ಯವಿಲ್ಲ”ವೆಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂವಿಧಾನ ವಿರೋಧಿವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ “ಶಾಲೆಗಳು ತಾರತಮ್ಯ ಕೇಂದ್ರಗಳಾಗಬಾರದು. ಮಕ್ಕಳಲ್ಲಿ ಭೇದಭಾವ ತೋರಬಾರದು,” ಎಂದು ಹೇಳಿ 25% ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಪ್ರವೇಶ ನೀಡಬೇಕು ಎಂದು ತೀರ್ಪು ನೀಡಿತು. ಇದನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗುವ ಬದಲು ಬಡ ವಿದ್ಯಾರ್ಥಿಗಳನ್ನು ಗುರುತಿಸುವ ಮಾನದಂಡವಾಗಿ 3.5ಲಕ್ಷ ರೂ.ಗಳ ಆದಾಯ ಮಿತಿಯನ್ನು ನಿಗದಿಗೊಳಿಸುವ ಮೂಲಕ ಖಾಸಗಿಯವರಿಗೆ ಮತ್ತು ಶ್ರೀಮಂತರಿಗೆ ಲಾಭವಾಗುವಂತೆ ನಡೆದುಕೊಂಡಿದೆ. ಸರ್ಕಾರಿ ನಿಯಮದಂತೆ ಬಿಪಿಎಲ್-ಎಪಿಎಲ್ ಪಟ್ಟಿಯ ಆದಾಯ ಪ್ರಮಾಣ 20 ಸಾವಿರದೊಳಗಿರುವುದು ಈ ಸರ್ಕಾರಕ್ಕೆ ಅರಿವಾಗಲಿಲ್ಲ. ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಭಿಗೆ ರಾಜ್ಯ ಸರ್ಕಾರ ಮಣಿದಿದೆ. ಇತರೆ ರಾಜ್ಯಗಳು ಬಡತನ ರೇಖೆಗಿಂತ ಕಡಿಮೆ ಇರುವ (ಬಿಪಿಎಲ್) ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿಯಮ ರೂಪಿಸಿಕೊಂಡಿವೆ. ಸರ್ಕಾರಿ ನಿಯಮದಂತೆ ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಬಿಗೆ ರಾಜ್ಯ ಸರ್ಕಾರ ಮಣಿದು ಕಾಯ್ದೆಯ ವಿರುದ್ಧವಾಗಿ ನಡೆದುಕೊಂಡಿದೆ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದಿಲ್ಲೊಂದು ರೀತಿಯಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿವೆ. ಭೂಮಿ ಖರೀದಿಯಲ್ಲಿ ರಿಯಾಯಿತಿ, ನೀರಿನ ತೆರಿಗೆ ವಿನಾಯತಿ, ವಿದ್ಯುತ್ ತೆರಿಗೆ ವಿನಾಯತಿ, ಸೇವಾ ತೆರಿಗೆ ವಿನಾಯತಿ, ಸೇರಿದಂತೆ ಸರ್ಕಾರದ ವಿವಿಧ ಯೋಜನೆಯ ಲಾಭವನ್ನು ಪಡೆಯುತ್ತಿವೆ. ಹೀಗಾಗಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಬೇಕಾಗಿದೆ. ಹೀಗಿರುವಾಗ ಮತ್ತೆ ಜನತೆಯ ತೆರಿಗೆಯ ಹಣವನ್ನು 25% ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರಿಸಬೇಕು ಎನ್ನುವುದನ್ನು ನೆಪ ಮಾಡಿಕೊಂಡು ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳನ್ನು ಖಾಸಗಿಯವರಿಗೆ ನೀಡಲು ರಾಜ್ಯ ಸರ್ಕಾರ ಹೊರಟಿದೆ. ಪಶ್ಚಿಮ ಬಂಗಾಲ – 3,282, ಮಧ್ಯಪ್ರದೇಶ – 4,423, ಬಿಹಾರ – 4,705, ಗುಜರಾತ್ – 3,949 ಮತ್ತು ಕರ್ನಾಟಕ 11,848 ರೂ. ರಾಜ್ಯದಲ್ಲಿಯೇ ಅತಿಹೆಚ್ಚು ನೀಡುತ್ತಿರುವುದನ್ನು ಗಮನಿಸಿದಾಗ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಖಜಾನೆ ತುಂಬಲು ಮುಂದಾಗಿರುವುದು ಸ್ಪಷ್ಠವಾಗುತ್ತದೆ. ಶಿಕ್ಷಣ ವ್ಯಾಪಾರೀಕರಣದ ಪ್ರಕ್ರಿಯೆಗೆ ಸರ್ಕಾರದ ಅಧಿಕೃತವಾಗಿ ಸಹಕರಿಸುತ್ತಿದೆ. ಕಾಯ್ದೆಯ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರಿ ನಿಯಮದಂತೆ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮೀಸಲು ನಿಯಮದಂತೆ 1,12,474 ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಬೇಕಾಗಿತ್ತು. ಆದರೆ ಕೇವಲ 41,663 (ಅಂದರೆ 37%) ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದ್ದು. ಸುಮಾರು 70,811 ವಿದ್ಯಾರ್ಥಿಗಳನ್ನು ಪ್ರವೇಶದಿಂದ ವಂಚಿಸಲಾಗಿದೆ. ಕಾಯ್ದೆ ಜಾರಿಯಲ್ಲಿ ವಿಫಲವಾಗುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡಬೇಕು; 1 ಲಕ್ಷ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು ಎನ್ನುವ ಸುಪ್ರೀಂ ಕೋರ್ಟ್ನ ತೀರ್ಪಿದ್ದರೂ ಕೂಡ ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೋಟಿಸ್ ನೀಡುವಂತಹ ಕನಿಷ್ಠ ಕೆಲಸವನ್ನು ಮಾಡಿಲ್ಲ. ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ಬೆಂಗಳೂರು ಉತ್ತರದಲ್ಲಿ ಕೇವಲ 11.304(16%) ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ. ಈ ಕಾಯ್ದೆಯನ್ನು ವಿಫಲಗೊಳಿಸುವಲ್ಲಿ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ ಎಂಬುದು ಸಾಬೀತಾಗುತ್ತದೆ.
ಖಾಸಗಿ ಶಾಲೆಗಳ ಕರಾಳ ಮುಖ:
ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದರ ಜೊತೆಗೆ ವಿಫಲಗೊಳಿಸುವಲ್ಲಿ ಕುತಂತ್ರಗಳನ್ನು ನಡೆಸುತ್ತಿವೆ. ನಿಯಮ ಬದ್ಧವಾಗಿ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರ ಬದಲಾಗಿ ಕಿರುಕುಳ ನೀಡಿ ತಮ್ಮ ಕರಾಳಮುಖದ ಪ್ರದರ್ಶನ ಮಾಡಿವೆ. ರಾಜ್ಯವ್ಯಾಪಿ ಕೇವಲ 37% ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ ಖಾಸಗಿ ಶಾಲೆಗಗಳಲ್ಲಿ ರಾಜರೋಷವಾಗಿ ಹಣ ಮಾಡುವ ದಂಧೆ ನಡೆಯುತ್ತಿರುವುದು ಬಹಿರಂಗ ಸತ್ಯ. ಬೆಂಗಳೂರಿನ ನಂದಿನಿ ಲೇಔಟ್ನ ‘ಆಕ್ಸಫರ್ಡ್ ಸ್ಕೂಲ್’ನಲ್ಲಿ ಕಾಯ್ದೆಯ 25% ಬಡ ವಿದ್ಯಾರ್ಥಿಗಳ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಲು ಕೂದಲು ಕತ್ತರಿಸಿ ಅವಮಾನಿಸಲಾಗಿದೆ. ಇನ್ನೊಂದೆಡೆ ವಿದ್ಯಾರ್ಥಿಗಳ ಊಟದ ಡಬ್ಬಿಗಳನ್ನು ಪರೀಕ್ಷಿಸಿ ಮೊಟ್ಟೆ, ಮೀನು, ಮಾಂಸದ ಪದಾರ್ಥದ ಊಟವಾಗಿದ್ದರೆ ಅಂತಹ ವಿದ್ಯಾರ್ಥಿಗಳನ್ನು ವಾಪಸ್ಸು ಕಳಿಸಲಾಗುತ್ತಿದೆ. ವಿವಿಧ ರೀತಿಯ ಅಸ್ಪೃಶ್ಯತಾ ಆಚರಣೆಗೆ ದಲಿತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಶ್ರೀಮಂತ ವಿದ್ಯಾರ್ಥಿಗಳ ಜೊತೆ ಬೆರೆಯಲು ಮುಕ್ತ ಅವಕಾಶ ಕಲ್ಪಿಸದೇ ಪ್ರತ್ಯೇಕತೆಯನ್ನು ಅನುಸರಿಸಲಾಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದೆ “ಮೌನಂ ಸಮ್ಮತಿ ಲಕ್ಷಣ” ಎಂಬಂತೆ ವರ್ತಿಸಿದೆ.
‘ಕುಸ್ಮಾ’ ಪರಿವಾರದ ಪ್ರತಿಷ್ಠೆ:
ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ರಾಜ್ಯ ಸರಕಾರವನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಒಂದು ವಾರಗಳ ಕಾಲ `ಶಾಲೆ ಬಂದ್’ ಮಾಡಲು ಮುಂದಾದರೂ ಅವರ ಮೇಲೆ ಕ್ರಮಕೈಗೊಳ್ಳುವ ಬದಲಾಗಿ ಐಷಾರಾಮಿ ಸಭೆಗಳ ಮೂಲಕ ರಾಜಿ ಸಂಧಾನಕ್ಕೆ ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಕುಸ್ಮಾದ ಅಧ್ಯಕ್ಷರಾಗಿದ್ದ ಜೆ.ಎಸ್.ಶರ್ಮ ‘ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಕೊಳಚೆ ನೀರು ಇದ್ದಂತೆ, ಕೊಳಚೆ ನೀರು ಸಮುದ್ರಕ್ಕೆ ಸೇರಿದರೆ ಸಮುದ್ರ ನೀರು ಮತ್ತು ಸಂಸ್ಕೃತಿ ಹಾಳಾಗುತ್ತದೆ,’ ಎನ್ನುವ ಈ ಹೇಳಿಕೆ ಮನುವಾದಿಯ ಮಲೀನ ಮನಸ್ಸನ್ನು ಅನಾವರಣಗೊಳಿಸಿದೆ. ಅಸ್ಪೃಶ್ಯತೆಯ ಆಚರಣೆಯ ಪ್ರತೀಕವಾಗಿರುವ ಈ ಮಾತನ್ನು ಆಡಿದ ಶರ್ಮರನ್ನು ಬಂಧಿಸಿ ಜೈಲಿನಲ್ಲಿರಿಸಬೇಕಿದ್ದ ಸರಕಾರ ತುಟಿಪಿಟಕ್ಕೆನ್ನದೆ ಮೌನವಾಗಿ ಇರುವುದನ್ನು ನೋಡಿದರೆ ಭಾರತದ ಸಂವಿಧಾನಕ್ಕಿಂತ ಸಂಘ ಪರಿವಾರದ ಅಜೆಂಡಾದ ರಕ್ಷಣೆಯ ಕೆಲಸದಲ್ಲಿ ಸರ್ಕಾರ ತೊಡಗಿರುವುದು ಬಹಿರಂಗಗೊಂಡಿದೆ.
ಕುಸ್ಮಾ ಕರೆ ನೀಡಿದ “ಶಾಲೆ ಬಂದ್” ನಲ್ಲಿ ಆರ್.ಎಸ್.ಎಸ್.ನ ರಾಷ್ಟ್ರೋತ್ಥಾನ ಶಾಲೆಗಳ ಸರಸ್ವತಿ ವಿದ್ಯಾ ಮಂದಿರಗಳು, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಒಡೆತನದ ಶಿವಮೊಗ್ಗದ ಶಾಲೆ ಸೇರಿದಂತೆ ಬಿ.ಜೆ.ಪಿ. ಮುಖಂಡರ ಸಂಸ್ಥೆಗಳು ಮುಂಚೂಣಿಯಲ್ಲಿ ಬಂದ್ ಆಗಿರುವುದನ್ನು ನೋಡಿದರೆ ಅದು ಸರ್ಕಾರಿ ಪ್ರಾಯೋಜಿತ ಹೋರಾಟವೆಂಬುದರಲ್ಲಿ ಸಂಶಯವಿಲ್ಲ. ಖಾಸಗಿ ಶಾಲಾ ಅಡಳಿತ ಮಂಡಳಿಯವರು ಸುಪ್ರೀಂ ಕೋರ್ಟ್ನ ತೀರ್ಪಿನ ಉಲ್ಲಂಘನೆ, ನ್ಯಾಯಾಂಗ ನಿಂಧನೆಯಲ್ಲಿ ತೊಡಗಿದ್ದರೂ ಶಿಕ್ಷಣ ಸಚಿವ ಕಾಗೇರಿ ಮಾತ್ರ ಪ್ರತಿಕ್ರಿಯಿಸದೆ ಮೌನವಾಗಿರುವುದು ಕಾಯ್ದೆ ವಿಫಲಗೊಳಿಸಲು ಖಾಸಗಿಯವರ ಜೊತೆ ಸರ್ಕಾರ ಶಾಮೀಲಾಗಿರುವುದನ್ನು ಮತ್ತು ಖಾಸಗಿ ಶಾಲೆಗಳ ಏಜೆಂಟರಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಖಾಸಗಿ ಶಾಲೆಗಳ ನಿಯಂತ್ರಿಸಲು ಸೂಕ್ತ ಶಾಸನವನ್ನು ರೂಪಿಸಲಿ:
ಈ ಕಾಯ್ದೆಯ ಜಾರಿಯಲ್ಲಿ ಹಿಂದೇಟು ಹಾಕುತ್ತಿರುವ ಶಾಲೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾನ್ಯತೆ ರದ್ದು ಮಾಡಲು ಸರ್ಕಾರ ಸೂಕ್ತ ಶಾಸನ ರಚನೆಗೆ ಮುಂದಾಗಬೇಕು. ಆರ್.ಟಿ.ಇ. ಜಾರಿಗಾಗಿ ಕಾವಲು ಸಮಿತಿ, ಶಾಲಾ ಮಟ್ಟದಲ್ಲಿ ಪಾಲಕರ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಬೇಕಿದೆ. ಬಡ ಮಕ್ಕಳಿಗೆ ಅವಮಾನಿಸುತ್ತಿರುವ ಖಾಸಗಿ ಶಾಲೆಗಳ ಉದ್ಧಟತನವನ್ನು ನಿಲ್ಲಿಸುವಂತಾಗಲು ಹೋರಾಟಗಳು ಬಲಗೊಳ್ಳಬೇಕಿದೆ. ಅಕ್ರಮ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಿ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಲಗೊಳ್ಳಬೇಕಿದೆ.
ಸಂವಿಧಾನ ಬದ್ಧ ಕಾಯ್ದೆ ಜಾರಿಗೊಳಿಸುವಲ್ಲಿ ಸರ್ಕಾರಗಳು ಮುಂದಾಗುವ ಬದಲು ಸರ್ಕಾರಿ ಹಣವನ್ನು ಖಾಸಗಿಯವರತ್ತ ಹರಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಅವಮಾನಿಸುವ, ವಂಚಿಸುವ ಕಾಯಕದಲ್ಲಿ ತೊಡಗಿವೆ. ಈಗ ಇರುವ ಅಂತರಾಷ್ಟ್ರೀಯ, ರಾಷ್ಟ್ರೀಯ, ಕೇಂದ್ರೀಯ, ನವೋದಯ, ರಾಜ್ಯ, ಇನ್ನಿತರ ಹೆಸರಿನ ಪ್ರತ್ಯೇಕ ಪಠ್ಯಕ್ರಮದ ಶಿಕ್ಷಣ ಪದ್ಧತಿಯು ಅಸಮಾನತೆಯ ಮುಂದುವರಿಕೆಯಾಗಿದೆ. ಇದನ್ನು ಸಮಾನ ಶಾಲಾ ಶಿಕ್ಷಣ ಪದ್ಧತಿಗಾಗಿ ಜನ ಚಳವಳಿ ಬಲಗೊಳ್ಳದ ಹೊರತು ಶಿಕ್ಷಣ ಮೂಲಭೂತ ಹಕ್ಕಿಗೆ ಅರ್ಥವಿರದು.
ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ 25% ವಿದ್ಯಾರ್ಥಿಗಳ ಪ್ರವೇಶ ವಿವರ:
ಶೈಕ್ಷಣಿಕ ಜಿಲ್ಲೆ ಮೀಸಲು ಸೀಟು ದಾಖಲಾದವರು ಶೇಕಡವಾರು
- ಬೆಂಗಳೂರು ಉತ್ತರ 11304 1868 16.52
- ಬೆಂಗಳೂರು ದಕ್ಷಿಣ 16656 2408 14.45
- ಬೆಂಗಳೂರು ಗ್ರಾ 1779 948 53.28
- ರಾಮನಗರ 1281 866 67.60
- ತುಮಕೂರು 3868 1436 37.12
- ಮಧುಗಿರಿ 827 463 55.98
- ಕೋಲಾರ 2421 1735 71.66
- ಚಿಕ್ಕಬಳ್ಳಾಪುರ 1882 1411 74.97
- ಚಿತ್ರದುರ್ಗ 5783 943 16.30
- ದಾವಣಗೆರೆ 3234 1560 48.23
- ಶಿವಮೊಗ್ಗ 1650 420 25.45
- ಮೈಸೂರು 5005 80 16.14
- ಚಾಮರಾಜನಗರ 1362 564 41.40
- ಮಂಡ್ಯ 3507 2456 70.03
- ಹಾಸನ 1901 1030 54.18
- ಚಿಕ್ಕಮಗಳೂರು 970 639 65.87
- ಕೊಡಗು 549 220 40.07
- ದಕ್ಷಿಣ ಕನ್ನಡ 1645 763 46.38
- ಉಡುಪಿ 1098 430 39.16
- ಬೆಳಗಾವಿ 2665 530 19.88
- ಬಿಜಾಪುರ 5800 3883 66.94
- ಬಾಗಲಕೋಟೆ 2161 1394 64.50
- ಧಾರವಾಡ 2976 796 26.75
- ಗದಗ 5822 1442 24.76
- ಹಾವೇರಿ 1838 892 48.53
- ಕಾರವಾರ 828 579 69.92
- ಚಿಕ್ಕೋಡಿ 4354 2513 57.71
- ಶಿರಸಿ 305 195 63.93
- ಯಾದಗಿರಿ 1194 437 36.59
- ಬೀದರ್ 8100 1899 23.44
- ರಾಯಚೂರು 2799 1544 55.16
- ಬಳ್ಳಾರಿ 4241 2801 66.04
- ಕೊಪ್ಪಳ 2670 1790 67.04
- ಗುಲ್ಬರ್ಗಾ – ಮಾಹಿತಿ ಸಿಕ್ಕಿಲ್ಲ
- ಒಟ್ಟು 112474 41663 37.04
Good article. Very informative and also shocking
Thanks for the information