Monthly Archives: September 2012

ಕೃತಕ ಸೆಕ್ಯುಲರ್‌ತನ ಮತ್ತು ಮಾನವೀಯ ಸಾಂಸ್ಕೃತಿಕ ಒಡಲಿನ ಕಣ್ಮರೆ


-ಬಿ. ಶ್ರೀಪಾದ್ ಭಟ್


“ಆತ್ಮವುಳ್ಳ ಆಡಳಿತ ಮಾತ್ರ ಅಲೆ-ಅಲೆಯಾಗಿ ಬರುತ್ತಿದ್ದ ಓಲಗದ ನೋವಿನ ಸದ್ದು ಕೇಳಬಹುದು. ಭ್ರಷ್ಟನಾದವನು ಆ ಸದ್ದನ್ನು ದೂರ ಇಡುತ್ತಾನೆ. ತನ್ನ ಕಿವಿಗಳನ್ನು ಮುಚ್ಚಿಕೊಂಡು ನೆಮ್ಮದಿಯಾಗಿರುತ್ತಾನೆ.” -ಪಿ.ಲಂಕೇಶ್ (ಟೀಕೆ ಟಿಪ್ಪಣಿ ಸಂಪುಟ 1)

ಅಪಾರ ಭರವಸೆಗಳೊಂದಿಗೆ ಎರಡನೇ ಅವಧಿಗೆ ಚುನಾಯಿತಗೊಂಡ ಯುಪಿಎ ಸರ್ಕಾರ ಇಂದು ತನ್ನ ಆತ್ಮಹತ್ಯಾತ್ಮಕ ಮತ್ತು ಬೌದ್ಧಿಕ ದಿವಾಳಿತನದ ಆಡಳಿತದಿಂದಾಗಿ ಇಂಡಿಯಾ ದೇಶವನ್ನು ಅತ್ಯಂತ ಕಡಿದಾದ ಕವಲು ದಾರಿಗೆ ತಂದು ನಿಲ್ಲಿಸಿದೆ. ಈ ಕಡಿದಾದ ಕವಲುದಾರಿಯಲ್ಲಿ ಯುಪಿಎ ನಾಯಕ ಮನಮೋಹನ್ ಸಿಂಗ್ ಮಾದರಿಯ ಆರ್ಥಿಕ ಪ್ರಗತಿ ಪ್ರಪಾತದೆಡೆಗೆ ಜಾರುತ್ತಿದೆ. ಕಳೆದ 20 ವರ್ಷಗಳಿಂದ ಈ ನವ ಕಲೋನಿಯಲ್ ವ್ಯವಸ್ಥೆಯ ಖಾಂಡವದಹನದಿಂದ ಹೆಚ್ಚೂ ಕಡಿಮೆ ಬಳಲಿ ಬೆಂದು ಹೋಗಿರುವ ಕೆಳವರ್ಗ ಮತ್ತು ಬಡಜನತೆಯ ಜೀವನ ಶೈಲಿ ಈಗ ಒಪ್ಪೊತ್ತಿನ ಊಟ ಹೋಗಲಿ ಘನತೆ ಮತ್ತು ವೈಯುಕ್ತಿಕ ಗೌರವಗಳೂ ಕೈಗೆಟುಕದಷ್ಟೂ ದುರಂತದಲ್ಲಿವೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೈಗೆ ಮುಂದಿನ ಎರಡು ವರ್ಷಗಳೂ ಸುರಕ್ಷಿತವೇ ಎಂಬಂತಹ ಅವಮಾನದ ಪ್ರಶ್ನೆಗಳು ಎದುರಾಗುತ್ತಿವೆ.

2009ರಲ್ಲಿ ‘ಸಿಂಗ್ ಈಸ್ ಕಿಂಗ್’ ಎಂದು ಅಭಿಮಾನದಿಂದ ಬೀಗಿದ ಜನತೆ ಮತ್ತು ಮಾಧ್ಯಮಗಳು ಇಂದು ಕೇವಲ ಮೂರು ವರ್ಷಗಳ ನಂತರ ಅನೇಕ ಅನುಭವೀ ಮಂತ್ರಿಗಳನ್ನು ಒಳಗೊಂಡ ಈ ಯುಪಿಎ ಸರ್ಕಾರ ಇಷ್ಟರ ಮಟ್ಟಿಗೆ ಅಭಧ್ರತೆಯಿಂದ, ಕೀಳರಿಮೆಯಿಂದ, ದಿಕ್ಕುತಪ್ಪಿದ ಮಕ್ಕಳಂತೆ ಆಡಳಿತ ನಡೆಸುತ್ತದೆಯೇ ಎಂದು ಬೆಚ್ಚಿಬೀಳುತ್ತಿವೆ. ಅಲ್ಲದೆ ಈ ಸರ್ಕಾರ ಅಪಾರ ಭ್ರಷ್ಟಚಾರಕ್ಕೆ ತುತ್ತಾಗುತ್ತಿರುವ ಅಪಾದನೆಗಳು ದಿನನಿತ್ಯದ ಉದಾಹರಣೆಗಳಾಗಿರುವುದು ಮತ್ತು  ಭ್ರಷ್ಟಾಚಾರದ ಅಪಾದನೆಗಳಿಗೆ  ಕೇಂದ್ರ ಮಂತ್ರಿಮಂಡಲ ತೋರುತ್ತಿರುವ ಅಪಾಯಕಾರಿ ನಿರ್ಲಕ್ಷಗಳು ಇವರನ್ನು ಅಧಿಕಾರದಿಂದ ಕಿತ್ತೊಗೆಯಲೇಬೇಕೆಂದು ವಿರೋಧ ಪಕ್ಷಗಳಿಗೆ ಮನದಟ್ಟಾಗುವುದಿರಲಿ ಜನಸಮುದಾಯಕ್ಕೇ ಈ ಭಾವನೆ ಮೊಳೆಯುತ್ತಿದೆ. ಆಡಳಿತ ನಿರ್ಧಾರಕ್ಕನುಗುಣವಾಗಿ ಈ ವಿದೇಶಿ ಬಂಡವಾಳ ಹೂಡಿಕೆಯ ಅನುಮೋದನೆ ಪ್ರಕಟಗೊಳ್ಳಬೇಕಾದಂತಹ ಸಂದರ್ಭದಲ್ಲಿ ಇಂದು ಯುಪಿಎ ಸರ್ಕಾರ ಪಲಾಯನವಾದಿಯಂತೆ ಇದನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿರುವುದು ಸಮಕಾಲೀನ ರಾಜಕಾರಣದ ಒಂದು ದೊಡ್ಡ ಜೋಕ್! ಇದಕ್ಕಿಂತಲೂ ಮತ್ತೊಂದು ಮಹಾನ್ ಜೋಕ್ ಎಂದರೆ ಈ ವಿದೇಶಿ ಬಂಡವಾಳ ವಿರೋಧಿಸುವ ಭರದಲ್ಲಿ ಈ ಬಿಜೆಪಿ ಮತ್ತು ಕಮ್ಯುನಿಷ್ಟರು ಒಂದೇ ವೇದಿಕೆಯನ್ನು ಹಂಚಿಕೊಂಡು ನಕಲಿಶ್ಯಾಮರಂತೆ ಸೋತುಹೋದ ಕಳಾಹೀನ ನಾಯಕರಾಗಿ ಕಂಗೊಳಿಸುತ್ತಿದ್ದರು. ಇದಕ್ಕೆ ಸಮಜಾಯಿಷಿ ಬೇರೆ!

ಆದರೆ 2001ರಲ್ಲಿ ಬೆಜೆಪಿಯು ತನ್ನ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಅನೇಕ ವಿರೋಧದ ನಡುವೆಯೂ ಜೀವ ವಿಮಾ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಜಾರಿಗೊಳಿಸಿದರು! ಸರ್ಕಾರಿ ಉದ್ಯಮಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ದಾರಿ ಮಾಡಿಕೊಡಲು ಅನೇಕ ಸರ್ಕಾರಿ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತವನ್ನು ಅರುಣ್ ಶೌರಿಯ ಮುಂದಾಳುತನದಲ್ಲಿ ಅತ್ಯಂತ ವೀರಾವೇಶದಿಂದ ಜಾರಿಗೊಳಿಸಿದ್ದು ಇದೇ ಬಿಜೆಪಿ ಸರ್ಕಾರ. ಇಂತಹ ನಯವಂಚಕರು ಬೇರೆಲ್ಲಾದರೂ ದೊರೆತಾರೆಯೇ? ಇದೇ ಬಿಜೆಪಿಯ ಅಭಿವೃದ್ಧಿಯ ಮುಖವಾಡವಾದ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ಸಾಮ್ರಾಜ್ಯ ಗುಜರಾತ್‌ನಲ್ಲಿ ಇದೇ ವಿದೇಶಿ ಬಂಡವಾಳ ಹೂಡಿಕೆಯ ಹರಿಕಾರನಾಗಿ ಜಗತ್ಪಸಿದ್ಧಿ ಗಳಿಸಿರುವುದು ಈ ಕಮ್ಯುನಿಷ್ಟರಿಗೆ ಮನದಟ್ಟಾಗದಷ್ಟು ಗತಿಗೆಟ್ಟರೆ?  ಮೋದಿಯು ತನ್ನ ವೈಬ್ರೆಂಟ್ ಗುಜರಾತ್‌ಗಾಗಿ ಈತ ಕೊಚ್ಚಿಕೊಳ್ಳತ್ತಿರುವುದು 2003ರಿಂದ 2011ರವರೆಗೆ ತಾನು 800 ಬಿಲಿಯನ್ ಡಾಲರ್‍ಸ್‌‌ನಷ್ಟು ಬಂಡವಾಳವನ್ನು (ಇದರಲ್ಲಿ ವಿದೇಶಿ ಹೂಡಿಕೆದಾರರು ಸೇರಿದ್ದಾರೆ) ಹೂಡಲು ಒಡಂಬಡಿಕೆಯಾಗಿದೆ ಎಂದು. ಆದರೆ ಆರ್‌ಬಿಐನ ಮಾಹಿತಿ ಪ್ರಕಾರ ಮೇಲಿನ ಅವಧಿಯಲ್ಲಿ ಕೇವಲ 5 ಬಿಲಿಯನ್ ಬಂಡವಾಳ ಹೂಡಿಕೆಯ ಒಡಂಬಡಿಕೆಯಾಗಿದೆ. ಆರ್ಥಿಕ ಪ್ರಗತಿಯ ಪರಿಶೀಲನೆಗಾಗಿ ರಚಿತಗೊಂಡ ರಾಷ್ಟ್ರೀಯ ಕೌನ್ಸಿಲ್‌ನ ಅಧ್ಯಯನದ ಪ್ರಕಾರ ಇದೇ ನರೇಂದ್ರ ಮೋದಿಯ ಗುಜರಾತಿನಲ್ಲಿ ಮಕ್ಕಳ ಅಪೌಷ್ಟಿಕತೆಯ ಶೇಕಡವಾರು ಪ್ರಮಾಣ ಶೇಕಡ 45 ರಷ್ಟಿದೆ. ಇದರಲ್ಲಿ ಶೇಕಡಾ 66 ರಷ್ಟು 5 ವರ್ಷದೊಳಗಿನ  ಬಹುಸಂಖ್ಯಾತ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ದೋಷಪೂರಿತ, ರಾಜ್ಯದ ಅಧಿಪತಿಯಾದ ನರೇಂದ್ರ ಮೋದಿಯನ್ನು ಮತ್ತು ಬಿಜೆಪಿ ಪಕ್ಷದ ದೇಶಪ್ರೇಮ ಕುರಿತಾದ ಬದ್ಧತೆಯನ್ನು ಪ್ರಶ್ನಿಸಬೇಕಾಗಿದ್ದ ಈ ಕಮ್ಯುನಿಷ್ಟರು ನಾಚಿಕೆಯಿಲ್ಲದೆ ಈ ಬಿಜೆಪಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಮೂರನೇ ದರ್ಜೆಯ ರಾಜಕಾರಣವಲ್ಲದೆ ಮತ್ತಿನ್ನೇನು?

ಆದರೆ ಕಡೆಗೆ ಇದೆಲ್ಲದರ ಹೊರತಾಗಿಯೂ ಈ ದುರಂತಕ್ಕೆ ಮೂಲಭೂತ ಕಾರಣ ಈ ದೇಶದ ಈಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಾಜಕಾರಣಿ ಅಗಿಲ್ಲದೇ ಇರುವುದು, ಇದರ ಪರಿಣಾಮವಾಗಿ ರಾಜಕೀಯ ಅಧಿಕಾರವಿಲ್ಲದ ಈ ಪ್ರಧಾನ ಮಂತ್ರಿಯ ಕೈಗೆ ಮಂತ್ರಿಮಂಡಲದ ಎಲ್ಲಾ ಮಂತ್ರಿಗಳೂ ಈ ಅಧಿನಾಯಕನ ಹಿಡಿತಕ್ಕೆ ಸಿಲುಕದೇ ಇರುವುದು, ಇದರ ಪರಿಣಾಮವಾಗಿ ಅನಿಶ್ಚತತೆಯೆಂಬುದು ದಿನಿತ್ಯದ ಗೋಳಾಗಿರುವುದು, ಇದರ ಪರಿಣಾಮವಾಗಿ ಕುಸಿದುಬಿದ್ದ ಆಡಳಿತ ಯಂತ್ರ ಇವೆಲ್ಲವೂ ಈ ಅರಾಜಕತೆಗೆ ಮೂಲಭೂತ ಕಾರಣವಾದರೆ ಎರಡನೇ ಮುಖ್ಯ ಕಾರಣ ರಾಜಕಾರಣಿಯಲ್ಲದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ. ಸಾರ್ವಜನಿಕ ಜೀವನದಲ್ಲಿ, ಸಕ್ರಿಯ ರಾಜಕಾರಣದಲ್ಲಿ ಪ್ರಸ್ತುತವಾಗಿರುವುದೆಂದರೆ ನಿರಂತರ ಸಂವಾದದಲ್ಲಿ, ಚರ್ಚೆಗಳಲ್ಲಿ ತೊಡಗಿಕೊಳ್ಳುವುದೇ ಜೀವಂತ ರಾಜಕೀಯದ ಮೊದಲ ಕುರುಹು ಎನ್ನುವ ಮೂಲಭೂತ ಪಾಠವನ್ನು ಕಾಲಕಸದಂತೆ ಕಂಡ ಸೋನಿಯಾ ಗಾಂಧಿಯವರು ಕೇವಲ ತಮ್ಮ ವೈಯುಕ್ತಿಕ ವರ್ಚಸ್ಸು, ತಮ್ಮ ಜಾತ್ಯಾತೀತ ನಡುವಳಿಕೆ ಮತ್ತು ತಮ್ಮ ಸಹಜವಾದ ಪ್ರಶ್ನಾತೀತ ಸೆಕ್ಯುಲರ್ ವ್ಯಕ್ತಿತ್ವಗಳನ್ನು ನೆಚ್ಚಿ ರಾಜಕೀಯ ಮಾಡಲು ಹೊರಟು ಇನ್ನಿಲ್ಲದಂತೆ ಮುಗ್ಗರಿಸುತ್ತಿರುವುದು ಪ್ರಜ್ಞಾವಂತ ನಾಗರಿಕರಿಗೆ ದಿಗ್ಭ್ರಮೆ ಮೂಡಿಸುತ್ತಿದೆ. ಕಡೆಗೆ ಶವದ ಪೆಟ್ಟಿಗೆಗೆ ಮೊಳೆ ಹೊಡೆದಂತೆ 84ರ ಸಿಖ್ ಹತ್ಯಾಕಾಂಡದ ಆರೋಪಿ, ಅತ್ಯಂತ ದುಷ್ಟ ರಾಜಕಾರಣಿ ಜಗದೀಶ್ ಟೈಟ್ಲರ್‌ನನ್ನು ಒರಿಸ್ಸಾ ರಾಜ್ಯಕ್ಕೆ ಕಳುಹಿಸಿ ಅಲ್ಲಿನ ಮುಖ್ಯಮಂತ್ರಿಯ ವಿರುದ್ಧ ಪ್ರತಿಭಟಿಸಲು ನಾಯಕತ್ವ ನೀಡಿದ್ದು ಈ ಸೋನಿಯಾ ಗಾಂಧಿಯವರ ಅತ್ಯಂತ ಅಪಕ್ವ ರಾಜಕೀಯತನವನ್ನು ಬಯಲಿಗೆಳೆಯುತ್ತದೆ. ತನ್ನ ಬ್ರಹ್ಮಾಂಡ ಭ್ರಷ್ಟತೆಯಿಂದ, ದುರಾಡಳಿತದಿಂದ ಈ ಬಿಜೆಪಿ ಹೆಚ್ಚು ಕಡಿಮೆ ಸೋಲುವ 2013ರ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಸಿದ್ಧರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಂಟಿ ನಾಯಕತ್ವ ವಹಿಸಿಕೊಟ್ಟು ಈ ಚುನಾವಣೆಯನ್ನು ಇವರಿಬ್ಬರ ನಾಯಕತ್ವದಲ್ಲಿ ಗೆಲ್ಲಲೇಬೇಕೆಂದು ಇನ್ನುಳಿದ ಕಾಂಗ್ರೆಸ್ ನಾಯಕರಿಗೆ ಅಧಿಕಾರವಾಣಿಯಲ್ಲಿ ತಾಕೀತು ಮಾಡಲಾರದಷ್ಟು ದುರ್ಬಲ ನಾಯಕಿಯಾದರೇ ಈ ಸೋನಿಯಾ? ಒಂದು ವೇಳೆ ಕರ್ನಾಟಕದ ಚುನಾವಣೆಯನ್ನು ಸೋತರೆ ಕಾಂಗ್ರೆಸ್ ಪಕ್ಷದ ರಾಜಕೀಯ ಭವಿಷ್ಯ ಮುಂದಿನ ವರ್ಷಗಳಲ್ಲಿ ರಸಾತಳ ತಲುಪುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಯಾವುದೇ ಬಗೆಯ ನಿರ್ದಿಷ್ಟ ಕಾರ್ಯಸೂಚಿ ಹಾಗೂ ಬದ್ಧತೆಗಳಾಗಲಿ, ದಿನನಿತ್ಯ ಕನಿಷ್ಟ 10 ತಾಸುಗಳ ರಾಜಕೀಯ ಮಾಡುವ ಕಾರ್ಯಕ್ಷಮತೆಯಾಗಲೀ, ಪಾದರಸದ ಚುರುಕಾಗಲೀ ಸಂಪೂರ್ಣ ಬರಡಾಗಿರುವ ಹಿನ್ನೆಲೆಯಲ್ಲಿ ಇದರ ಸೋಲಿನ ಜವಬ್ದಾರಿಯನ್ನು ಅಧಿನಾಯಕಿ ಸೋನಿಯಾ ಗಾಂಧಿಯವರೇ ಹೊರಬೇಕಾಗುತ್ತದೆ.

ಆದರೆ 15 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಈ ಜಾಣೆ ಹೆಣ್ಣುಮಗಳು ಸೋನಿಯಾ ಇಷ್ಟೊಂದು ಅಸಮರ್ಥರೇ ಎಂದು ಆಶ್ಚರ್ಯವಾಗುತ್ತದೆ. ಆದರೆ ಕಾಲವೇ ಬದಲಾದರೂ ಇಂದಿಗೂ ತನ್ನ ಸುತ್ತ ಓಬೀರಾಯನ ಕಾಲದ ಈ ಅಂಬಿಕಾ ಸೋನಿಗಳು, ಅಹ್ಮದ್ ಪಟೇಲ್‌ಗಳು, ಆಜಾದ್‌ಗಳು, ದಿಗ್ವಿಜಯಗಳು, ದ್ವಿವೇದಿಗಳಂತಹ ತಿರಸ್ಕೃತ ಪ್ರಳಯಾಂತಕಾರಿಗಳನ್ನು ನಂಬಿಕಸ್ಥ ಬಂಟರನ್ನಾಗಿ ನೇಮಿಸಿಕೊಂಡಿರುವುದನ್ನು ನೋಡುವಾಗ ಅಯ್ಯೋ ಜೀವವೇ ಎಂದು ಸೋನಿಯಾ ಬಗೆಗೆ ಮರುಗುವಂತಾಗುತ್ತದೆ!! ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುವ ಸ್ಥಿತಿಗೆ ತಲುಪಿರುವ ಸೋನಿಯಾ ಗಾಂಧಿಯವರಿಗೆ ಈ ಕತ್ತಲ ದಾರಿಯಲ್ಲಿ ಮುಂದಿನ ಬೆಳಕಿನ ದಾರಿ ತೋರಿಸುವ ಕೈದೀಪಗಳಾವುವು? ಕಡೆಗೆ ಏನಾದರಾಗಲಿ ಈ ಫ್ಯಾಸಿಸ್ಟ್ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು ಎಂಬ ಏಕಮಂತ್ರದ ಚಿಂತನೆಯೊಂದಿಗೆ ಈ ಭ್ರಷ್ಟ ಯುಪಿಎ ಸರ್ಕಾರವನ್ನು ಅರೆಮನಸ್ಸಿನಿಂದ ಒಪ್ಪಿಕೊಳ್ಳಲು ಹೆಣಗುತ್ತಲಿದ್ದ ಪ್ರಜ್ಞಾವಂತ ಗುಂಪಿಗೆ ಮಾತ್ರ ಇಂದು ಬಲು ದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ.

ಒಂದಂತೂ ಖಚಿತವಾಗಿದೆ. 2019ರ ವರೆಗೆ ಅಂದರೆ ಮುಂದಿನ 7 ವರ್ಷಗಳವರೆಗೆ ಇಂಡಿಯಾದಲ್ಲಿ ರಾಜಕೀಯ ಭವಿಷ್ಯ ಹೆಚ್ಚೂ ಕಡಿಮೆ ನಿರ್ಧಾರವಾಗಿ ಹೋಗಿದೆ. ಯಾವುದೇ ಪ್ರಯತ್ನಗಳು ಇನ್ನು ಈ ದೇಶವು ಫ್ಯಾಸಿಸ್ಟರ ಕೈಗೆ ಜಾರುವುದನ್ನು ತಪ್ಪಿಸಲಾಗದು. ಆ ಫ್ಯಾಸಿಸ್ಟ್ ಶಕ್ತಿಗಳು ಬಿಜೆಪಿ ಇರಬಹುದು ಅಥವಾ ಮುಲಾಯಂ ನೇತೃತ್ವದ ತೃತೀಯ ರಂಗ ಇರಬಹುದು. ಇವೆರೆಡೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಹಿಂದಿನಿಂದಲೂ ಅವಕಾಶವಾದಿ, ಭ್ರಷ್ಟ ರಾಜಕಾರಣಿಯಾದ ಮುಲಾಯಂ ಸಿಂಗ್ ಯಾದವ್ ಭವಿಷ್ಯದ ಪ್ರಧಾನ ಮಂತ್ರಿಯ ಕನಸು ಕಾಣುತ್ತಿರುವುದು, ತನ್ನ ಈ ಕನಸಿನ ಸಾಕಾರಕ್ಕಾಗಿ ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಳ್ಳುವ ಅತ್ಯಂತ ಘಾತುಕತನದ ಕೃತ್ಯಕ್ಕೆ ಕೈ ಹಾಕಿರುವುದು ಈ ದೇಶಕ್ಕೆ ಮುಂದೆ ಕೇಡುಗಾಲ ಕಾದಿರುವುದಕ್ಕೆ ಸಾಕ್ಷಿ. ಇನ್ನು ಎಡಬಿಡಂಗಿತನದ ಕಮ್ಯುನಿಷ್ಟರ ರಾಜಕೀಯ ನಿಲುವುಗಳ ಕುರಿತಾಗಿ ಬರೆಯಲಿಕ್ಕೆ ನನ್ನಂತಹವರಿಗೆ ಶಕ್ತಿಯೂ ಇಲ್ಲ, ವ್ಯವಧಾನವೂ ಇಲ್ಲ. ಎಡಪಂಥೀಯ ರಾಜಕಾರಣದಲ್ಲಿ ಇಂಡಿಯಾದ ಕಮ್ಯುನಿಷ್ಟರು ಸೋತಷ್ಟು ದಯನೀಯವಾಗಿ ಕಮ್ಯುನಿಷ್ಟರು ಜಾಗತಿಕ ಮಟ್ಟದಲ್ಲಿ ಇನ್ನೆಲ್ಲಿಯೂ ಸೋತಿಲ್ಲ. ಇವರಿಗೆ ಸೈದ್ಧಾಂತಿಕ ಬದ್ಧತೆಗಳೊಂದಿಗೆ ರಾಜಕಾರಣವನ್ನು ಹೊಕ್ಕಳುಬಳ್ಳಿ ಸಂಬಂಧವನ್ನು ಸಾಧಿಸುವುದಕ್ಕೆ ಕಳೆದ 65 ವರ್ಷಗಳಿಂದಲೂ ಸಾಧ್ಯವಾಗಿಲ್ಲ. ಅದರ ಫಲವಾಗಿಯೇ ಇಂದು ಎಡಬಿಡಂಗಿಗಳಂತೆ ಮುಲಾಯಂನಂತಹ ಭ್ರಷ್ಟ ರಾಜಕಾರಣಿಯೊಂದಿಗೆ ಕೈಜೋಡಿಸುವ ಅಸಹಾಯಕ, ದಿಕ್ಕೆಟ್ಟ ಮಟ್ಟಕ್ಕೆ ಇಳಿದಿರುವುದು.

ಖ್ಯಾತ ಚಿಂತಕ ‘ಅರ್ವೆಲ್’ ಒಂದು ಕಡೆ ಮೂಲಭೂತವಾದಿಗಳು ಮತ್ತು ಕಮ್ಯುನಿಷ್ಟರು ತಮ್ಮ ಎದುರಾಳಿಗಳನ್ನು ಬುದ್ಧಿವಂತರು ಮತ್ತು ಪ್ರಾಮಾಣಿಕರೆಂದು ಎಂದಿಗೂ ಪರಿಗಣಿಸುವುದಿಲ್ಲ. ಬದಲಾಗಿ ತಮ್ಮ ರಾಜಕೀಯ ಅಖಾಡದಲ್ಲಿ ತಾವು ಸತ್ಯವನ್ನು ಅನಾವರಣಗೊಳಿಸಿದ್ದೇವೆ ಎಂದೇ ಬೀಗುತ್ತಾರೆ. ಈ ಎರಡೂ ವಿಭಿನ್ನ ಸಿದ್ಧಾಂತವಾದಿಗಳು ಬೌದ್ಧಿಕ ಸ್ವಾತಂತ್ರ್ಯವನ್ನು, ವ್ಯಕ್ತಿ ಸ್ವಾತಂತ್ರ್ಯವನ್ನು ಬೂರ್ಜ್ವ ವ್ಯಕ್ತಿತ್ವವಾದಿಗಳ ಹುನ್ನಾರವೆಂದೇ ಒಟ್ಟಾಗಿಯೇ ತಿರಸ್ಕರಿಸುತ್ತಾರೆ. ಇದಕ್ಕಾಗಿ ಅವರು ಬಳಸುವ ಪದಗಳು ಬೇರೆಯಷ್ಟೆ. ಸಂಪ್ರದಾಯನಿಷ್ಟ ಪಕ್ಷವು ಅಧಿಕಾರಕ್ಕೆ ಬಂತೆಂದರೆ ಅಲ್ಲಿ ಮುಕ್ತ ಬರವಣಿಗೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಇಂತಹ ಸಂಪ್ರದಾಯನಿಷ್ಟ ಪಕ್ಷದ ಹಿಡಿತದಲ್ಲಿರುವ ಸಮಾಜವು ಸಹನಾಶೀಲವಾಗಿರುವುದಿಲ್ಲ ಮತ್ತು ಅಲ್ಲಿ ಬೌದ್ಧಿಕ ಖಚಿತತೆ ಇರುವುದಿಲ್ಲ. ಎಂದು ಮಾರ್ಮಿಕವಾಗಿ ಬರೆಯುತ್ತಾನೆ. ಇದು ಇಂದಿನ ಭಾರತಕ್ಕೆ ಸಂಪೂರ್ಣವಾಗಿ ಅನ್ವಯಿಸುತ್ತದೆ.

2014ರಲ್ಲಿ ಕೇಂದ್ರದಲ್ಲಿ ದಿಲ್ಲಿ ಮಾಯಾವಿಯ ಗದ್ದುಗೆ ಇನ್ನೇನು ತಮ್ಮ ಕೈಗೆಟುಕಿದಂತೆಯೇ ಎಂದು ಪುಳಕಿತಗೊಳ್ಳುತ್ತಿರುವ ಬಿಜೆಪಿ ಪಕ್ಷವು ಅಧಿಕಾರ ಕಬಳಿಸುವ ಆತುರದಲ್ಲಿದ್ದರೆ, ತಮ್ಮ 50 ವರ್ಷಗಳ ರಾಜಕಾರಣದಿಂದ ಯಾವುದೇ ಮಾನವೀಯತೆಯನ್ನ, ಸಾಮಾಜಿಕ ಬದ್ಧತೆಯನ್ನು, ಮುತ್ಸದ್ದಿತನವನ್ನ ಮೈಗೂಡಿಸಿಕೊಳ್ಳದ, 90ರ ದಶಕದಲ್ಲಿ ದೇಶದಲ್ಲಿ ಕೋಮುಗಲಭೆಗಳನ್ನು ಹುಟ್ಟುಹಾಕಲು ಪ್ರಮುಖ ಪಾತ್ರ ವಹಿಸಿದ ಕೋಮುವಾದಿ ರಾಜಕಾರಣಿ ಅಡ್ವಾನಿಯವರು ಪ್ರಧಾನಿಯಾಗುವ ಹಪಾಹಪಿತನದಲ್ಲಿದ್ದರೆ, ಸಾವಿರಾರು ಮುಸ್ಲಿಂರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಫ್ಯಾಸಿಸ್ಟ್ , ಮತೀಯವಾದಿ ಮುಖ್ಯಮಂತ್ರಿ ನರೇಂದ್ರ ಮೋದಿ ತಾನು ಮಾತ್ರ ಪ್ರಧಾನ ಮಂತ್ರಿ ಪದವಿಗೆ ಅರ್ಹನಾದವ ಎನ್ನುವ ಠೇಂಕಾರದಲ್ಲಿದ್ದಾರೆ. ಇವರಿಬ್ಬರ ನಡುವೆ ಆರಕ್ಕೇರದ ಮೂರಕ್ಕಿಳಿಯದ ಆದರೆ ಅಪಾಯಕಾರಿ ಪ್ರವೃತ್ತಿಯಲ್ಲಿ, ಮತೀಯವಾದದಲ್ಲಿ ಪಕ್ಕಾ ಆರ್‌ಎಸ್‌ಎಸ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಸುಷ್ಮಾ ಸ್ವರಾಜ್, ಅರುಣ್ ಜೇಟ್ಳಿ, ನಿತಿನ್ ಘಡ್ಕರಿ ತರಹದ ಅನನುಭವಿ, ಅತ್ಯಂತ ಸೀಮಿತ ಆಡಳಿತ ಜ್ಞಾನದ ಮಹತ್ವಾಕಾಂಕ್ಷಿ ರಾಜಕಾರಣಿಗಳಿದ್ದಾರೆ. ಇವರೆಲ್ಲರಿಗೆ ಒಂದು ಸಮಾನ ಎಳೆಯಾಗಿ ಇವರ ಹಿರಿಯಣ್ಣ ಮತೀಯವಾದಿ, ಫ್ಯಾಸಿಸ್ಟ್ ಗುಂಪು ಆರ್‌ಎಸ್‌ಎಸ್ ತನ್ನೆಲ್ಲ ಕೈಚಳಕಗಳನ್ನು,ಗುಪ್ತ ಕಾರ್ಯಸೂಚಿಗಳನ್ನು ಹೊತ್ತುಕೊಂಡು ತುದಿಗಾಲಲ್ಲಿ ನಿಂತಿದೆ.

ಮತ್ತೆ ಆ ಮಾನವ ಸಂಪನ್ಮೂಲ ಖಾತೆಯನ್ನು, ಮತ್ತೆ ಗೃಹ ಇಲಾಖೆಯನ್ನು, ಮತ್ತೆ ವಾರ್ತಾ ಮತ್ತು ಪ್ರಚಾರ ಖಾತೆಯನ್ನು, ಮತ್ತೆ ಸಂಸ್ಕೃತಿ ಇಲಾಖೆಯನ್ನು, ಮತ್ತೆ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಕಬ್ಜಾ ಮಾಡಿಕೊಳ್ಳಲು ಆರ್‌ಎಸ್‌ಎಸ್ ಪುಳಕದಿಂದ, ಆತಂಕದಿಂದ ಮೈಯೆಲ್ಲಾ ಕಣ್ಣಾಗಿ ಹೊಂಚು ಹಾಕುತ್ತಿದೆ. ಈಗ ಇಂದು 21ನೇ ಶತಮಾನದ ಎರಡನೇ ದಶಕದ ನವ ಕಲೋನಿಯಲ್‌ನ ಪ್ರಭಾವದಲ್ಲಿರುವ ಇಂಡಿಯಾ ದೇಶವು ತನ್ನ ವರ್ತಮಾನದ ಆಧುನಿಕತೆಯ ನಾಗಾಲೋಟದ ವರ್ಷಗಳಲ್ಲಿ ಬೀಗುತ್ತಿದ್ದರೆ, ಇಂದಿಗೂ ಹಾಗೆಯೇ ಸಾವಿರಾರು ವರ್ಷಗಳ ಹಿಂದಿನ ಕರ್ಮಠ ಸ್ಥಿತಿಯಲ್ಲೇ ಇರುವ ಈ ಫ್ಯಾಸಿಸ್ಟ್ ಆರ್‌ಎಸ್‌ಎಸ್ ತನ್ನ ಅಭಿಮಾನದ ಭಾರತವನ್ನು ಮರಳಿ ಸನಾತನವಾದಕ್ಕೆ, ಸಾವಿರಾರು ವರ್ಷಗಳ ಹಿಂದಿನ ಮೌಢ್ಯಗಳ ಯುಗಕ್ಕೆ ಮರಳಿ ಸ್ಥಾಪಿಸಲು ಇನ್ನೇನು ಕೈಗೆಟುಕಲಿರುವ ದಿಲ್ಲಿ ಗದ್ದುಗೆಗೆ ಅಪಾರವಾದ ಆಸೆಗಣ್ಣಿನಿಂದ ಕಾಯುತ್ತಿದೆ. ಕಳೆದ 80 ವರ್ಷಗಳಿಂದ ತಮ್ಮ  ಫ್ಯಾಸಿಸ್ಟ್ ಚಿಂತನೆಗಳನ್ನು ಕೊಂಚವೂ ಬದಲಾಯಿಸಿಕೊಳ್ಳದ ಈ ಸಂಘ ಪರಿವಾದವರು ಮತ್ತೆ ಕೋಮುವಾದವನ್ನು ನವೀಕರಿಸುತ್ತಿದ್ದಾರೆ. ಇಂದು ಕೋಮುವಾದ ಮತ್ತೆ ಕ್ರೋಢೀಕರಣಗೊಳ್ಳುತ್ತಿದೆ. ಅದು ಕರ್ನಾಟಕವನ್ನು ಲ್ಯಾಬರೋಟರಿಯನ್ನಾಗಿ ಮಾಡಿಕೊಳ್ಳುವುದರ ಮೂಲಕ, ಅಸ್ಸಾಂನಲ್ಲಿನ ಜನಾಂಗೀಯ ಘರ್ಷಣೆಗಳಿಗೆ ಕೋಮುವಾದದ ಹುಸಿ ಮುಖವಾಡವನ್ನು ತೊಡಿಸುವುದರ ಮೂಲಕ ಹಾಗೂ ಉತ್ತರ ಪ್ರದೇಶದಲ್ಲಿ ಕೋಮು ಗಲಭೆಗಳನ್ನು ನಿರಂತರವಾಗಿ ಹುಟ್ಟು ಹಾಕುವುದರ ಮೂಲಕ ಮತ್ತೆ ಇಡೀ ದೇಶವನ್ನು 90ರ ದಶಕದ ಕೋಮು ಗಲಭೆಗಳ ದುಸ್ಥಿಗೆ ಮರಳಿ ತಂದು ನೆಲೆಗೊಳಿಸಲು ಈ ಸಂಘ ಪರಿವಾರದವರು ಅತ್ಯುತ್ಸಕರಾಗಿದ್ದಾರೆ. ಏಕೆಂದರೆ “ಅಬ್ ದಿಲ್ಲಿ ದೂರ್ ನಹೀಂ ಹೈ”.

ಈ ಕೋಮುವಾದದ ಸಂಘಪರಿವಾರದ ಪುನರಾಗಮನಕ್ಕೆ ನೀರೆರೆದದ್ದು ಮುಸ್ಲಿಂ ಮೂಲಭೂತವಾದಿಗಳ ಶಿಲಾಯುಗದ ಧರ್ಮಾಂಧತೆ. ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದಬ್ಬಾಳಿಕೆಯ ವಿರುದ್ಧ ಅನಗತ್ಯ ಅಸಹನೆಯನ್ನು ವ್ಯಕ್ತಪಡಿಸುವುದರ ಮೂಲಕ ಕುಬ್ಜರಾಗುವುದನ್ನು ನಿರಾಕರಿಸಿ ಬದಲಾಗಿ ಅಪಾರ ಸಹನೆಯನ್ನು ಮೈಗೂಡಿಸಿಕೊಳ್ಳುವುದರ ಮೂಲಕ, ಒಳಗೊಳ್ಳುವ ಪ್ರಕ್ರಿಯೆಯ ಮೂಲಕ, ದಿಟ್ಟವಾದ ಆಧುನಿಕ ಪ್ರಜ್ಞೆಯನ್ನು ಹೊತ್ತುಕೊಳ್ಳುವ ಇಚ್ಛಾಶಕ್ತಿಯ ಮೂಲಕ ಎದುರಿಸುವ ಅವಕಾಶವನ್ನು ಕೈಚೆಲ್ಲಿದ ಈ ಮೂಲಭೂತವಾದಿಗಳು ಅಸಹಾಯಕ, ಮುಗ್ಧ ಮುಸ್ಲಿಂಮರು ಪುನ: Ghettoಗಳಿಗೆ ಮರಳುವಂತೆ ಮಾಡಿದ್ದು ಎಂದಿಗೂ ಕ್ಷಮಿಸಲು ಸಾಧ್ಯವೇ ಇಲ್ಲ. ಇಲ್ಲಿ ಅಸ್ಗರ್ ಅಲಿ ಇಂಜಿನಿಯರ್, ಬಂದೂಕವಾಲಾ, ಬಾನು ಮುಸ್ತಾಕ್, ಹಸಂನಯೀಂ ಸುರಕೋಡರಂತಹವರಂತಹ ಜಾತ್ಯಾತೀತ ಮಾನವತಾವಾದಿಗಳನ್ನು ಸಹ ನಿಸ್ಸಹಾಯಕರಾಗಿಸಿದ್ದಕ್ಕೆ ಈ ಮೂಲಭೂತವಾದಿಗಳು ಹೊಣೆ ಹೊರಬೇಕಾಗುತ್ತದೆ. ವೈವಿಧ್ಯತೆಯನ್ನು, ಸರ್ವಜನಾಂಗದ ಶಾಂತಿಯ ಹಿತವನ್ನು, ಸ್ತ್ರೀ ಸ್ವಾತಂತ್ರ್ಯವನ್ನು ತನ್ನೊಡಳೊಳಗೆ ಇಟ್ಟುಕೊಂಡ ಮಾನವೀಯ ಇಸ್ಲಾಂ ಧರ್ಮವನ್ನು ಬಹಿರಂಗವಾಗಿ ನಿರಂತರ ವಿವಾದಾತ್ಮಕ, ಗೊಂದಲದ ಗೂಡಾಗಿಸಿದ್ದು ಈ ಮೂಲಭೂತವಾದಿಗಳು. ಇವರಿಗೆ ಪೂರಕವಾಗಿಯೇ ಸಹಕರಿಸಿದ್ದು ನಮ್ಮಲ್ಲಿನ ಬಲಪಂಥೀಯ ಚಿಂತಕರು, ಸಾಹಿತಿಗಳು, ಪತ್ರಕರ್ತರು. ಈ ಹೊಣಗೇಡಿಗಳು ಎರಡೂ ಕಡೆಯ ಮತಾಂಧತೆಗೆ ನೀರೆರೆದು ಪೋಷಿಸುತ್ತಿರುವುದು ಇಂದಿಗೂ ನಮ್ಮ ಕಣ್ಣೆದುರಿಗೇ ಜರುಗುತ್ತಿದೆ.

ಮೇಲಿನವರೆಲ್ಲರಿಗಿಂತಲೂ ಹೆಚ್ಚಿನ ಹೊಣೆಗೇಡಿತನದ ಆರೋಪ ಈ ನಾಡಿನ ಪ್ರಜ್ಞಾವಂತರ, ಬುದ್ಧಿಜೀವಿಗಳ, ಎಡಪಂಥೀಯರ, ಕ್ಷಮೆಯಿಲ್ಲದ ನಿರ್ಲಕ್ಷ್ಯ ಧೋರಣೆ ಮತ್ತು ಸಾರ್ವಜನಿಕ ನಿಷ್ಕ್ರಿಯತೆಗೆ ಸಲ್ಲಬೇಕು. ಇವರು ಸಾರ್ವಜನಿಕವಾಗಿ ದಿಟ್ಟ ಹಾಗೂ ನೈಜ ನೆಲಸಂಸ್ಕೃತಿಯ ಸಾಂಸ್ಕೃತಿಕ ಲೋಕವನ್ನು ಕಟ್ಟಲು ವಿಫಲರಾಗಿದ್ದರಿಂದಲೇ ಈ ಸಂಘಪರಿವಾರಕ್ಕೆ ಸಾರ್ವಜನಿಕವಾಗಿ ಈ ಬಗೆಯ ಫ್ಯಾಸಿಸ್ಟ್ ಧೋರಣೆ ಮತ್ತು ಸನಾತನವಾದದ ಧಾರ್ಮಿಕತೆಯನ್ನು ನಿರ್ಲಜ್ಯವಾಗಿ ಬಳಸುವ ಸ್ವಾತಂತ್ರ್ಯ ಸಾಧ್ಯವಾದದ್ದು. ಇಂದು ಕಲ್ಲಡ್ಕ ಪ್ರಭಾಕರ ಭಟ್ಟ ಎನ್ನುವ ಆರ್‌ಎಸ್‌ಎಸ್ ಮುಖಂಡನನ್ನು ಪ್ರಗತಿಪರರು ಮತ್ತು ಪ್ರಜ್ಞಾವಂತರು ದಕ್ಷಿಣ ಕನ್ನಡದ ಬಾಳಾಠಾಕ್ರೆ, ಕರ್ನಾಟಕದ ಫ್ಯಾಸಿಸ್ಟ್ ಮುಖ ಎಂದು ಸಾಕ್ಷಿ ಸಮೇತ ತೀವ್ರವಾಗಿ ಟೀಕಿಸುತ್ತಿದ್ದರೆ ಹಿಂದೂ ಸಂಸ್ಕೃತಿಯ ರಕ್ಷಕನಾಗಿ ಈತನ ಜನಪ್ರಿಯತೆ ಮತ್ತು ಪ್ರಭಾವ ದಕ್ಷಿಣ ಕನ್ನಡವನ್ನು ದಾಟಿ ಬೆಂಗಳೂರಿಗೆ ದಾಪುಗಾಲು ಇಡುತ್ತಿದೆ. ಎಲ್ಲಿದೆ ನಮ್ಮ ಆಸ್ತಿತ್ವ? ಈ ಮಹಿಳಾ ಆಯೋಗದ ಆಧ್ಯಕ್ಷೆಯಾಗಿರುವ ಸಿ.ಮಂಜುಳಾ ಎನ್ನುವವರು ಮೇಲ್ನೋಟಕ್ಕೆ ಮಂಗಳೂರಿನ ಹಲ್ಲೆಯನ್ನು ಖಂಡಿಸಿದ್ದರೂ ತಮ್ಮ ಅಧಿಕಾರದ ಮದದಲ್ಲಿ ಇವರು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚೂ ಕಡಿಮೆ ತೀವ್ರವಾಗಿ ಟೀಕಿಸಿದ್ದು ಹಲ್ಲೆಗೊಳಗಾದ ಅಸಹಾಯಕ ಹೆಣ್ಣುಮಕ್ಕಳು ಹಾಗೂ ಅವರ ಪಾಲಕರನ್ನು. ಈ ಹಲ್ಲೆಗೊಳಗಾದವರನ್ನೇ ಸಂಪೂರ್ಣ ಹೊಣೆಗಾರರೆಂದು ಅತ್ಯಂತ ಬೇಜವಬ್ದಾರಿಯಿಂದ ಮಾತನಾಡಿದ ಈ ಸಿ.ಮಂಜುಳಾ ಅವರ ಸಾಮಾಜಿಕ ಬದ್ಧತೆಯನ್ನು, ಅಮಾನವೀಯ ನೆಲೆಗಳನ್ನು ಪ್ರಶ್ನಿಸುವವರಾರು? ಇಂದು ಕನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರ ವಹಿಸಿಕೊಂಡರೆ ನಮ್ಮೆಲ್ಲರ ಮಾನ ಮರ್ಯಾದೆ ಹರಾಜಾಗುವುದು ಖಂಡಿತ. ಆಗಲೂ ನಾವು ನಿರ್ಲಜ್ಯರಾಗಿ ಮುಖದ ಮೇಲೆ ಉಗುಳಿದರೂ ಮಳೆ ಹನಿಯೆಂದು ಒರೆಸಿಕೊಳ್ಳಬಹುದು!

ವಿಶ್ವವಿದ್ಯಾಲಯಗಳಿಂದ, ನಮ್ಮ ಕಂಫರ್ಟ್ ಸುರಕ್ಷಿತ ಗುಹೆಗಳಿಂದ ಹೊರಬಂದು ತಮ್ಮಲ್ಲಿನ ಬುದ್ಧಿಜೀವಿತನದ ಚಿಂತನೆಗಳನ್ನು ಬಳಸಿಕೊಂಡು ಜನಸಾಮಾನ್ಯರೊಂದಿಗೆ ಬೆರೆತು ಈ ನೆಲದ ಅವೈದಿಕ ಸಂಸ್ಕೃತಿಯನ್ನು ಅದರ ಜಾತ್ಯಾತೀತ ನೆಲೆಗಳನ್ನು ಚಲನಶೀಲಗೊಳಿಸುತ್ತ ಮತ್ತು ಇದನ್ನು ವಿಸ್ತರಿಸುತ್ತ ಇಲ್ಲಿನ ಜನಸಾಮಾನ್ಯರನ್ನು ಸಹ ಬುದ್ಧಿಜೀವಿಗಳನ್ನಾಗಿ ರೂಪಿಸಲು ನಾವೆಲ್ಲ ಸೋತಿದ್ದರಿಂದಾಗಿ, ಜಾತ್ಯಾತೀತ ಹಾಗೂ ಜೀವಪರ ನೆಲೆಯ ಬಹುಮುಖೀ ಸಾಂಸ್ಕೃತಿಕ ಯಜಮಾನ್ಯವನ್ನು ಸ್ಥಾಪಿಸಲು ನಾವೆಲ್ಲ ವಿಫಲಗೊಂಡಿದ್ದರಿಂದಾಗಿಯೇ ಈ ಸಂಘಪರಿವಾರದ ಏಕರೂಪಿ ವಿಕೃತ ಹಿಂದುತ್ವದ ಚಿಂತನೆಗಳು ಸಂಸ್ಕೃತಿಯ ಹೆಸರಿನಲ್ಲಿ ಆ ಖಾಲಿಯಾದ ಜಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡವು. ಪ್ರಜ್ಞಾವಂತರೆಲ್ಲರ ನಿಷ್ಕ್ರಿಯತೆಯಿಂದಾಗಿ ಭಾರತದ ನಿಜವಾದ ಜಾತ್ಯಾತೀತರಾದ ತಳಸಮುದಾಯಗಳ ಬದುಕನ್ನು ವ್ಯವಸ್ಥೆಯ ಒಂದು ನಿರಂತರ ಸಾಂಸ್ಕೃತಿಕ  ಚಟುವಟಿಕೆಯಾಗಿ ನೆಲೆಗೊಳಿಸಲು ಇಂಡಿಯಾ ದೇಶ ಸೋತಿದೆ. ಸಾರ್ವಜನಿಕ ಜೀವನದಲ್ಲಿ ಒಂದು ಬಹುರೂಪಿ, ಜೀವಪರ ಸಾಂಸ್ಕೃತಿಕ ಮಾದರಿ ಲೋಕವನ್ನು ಕಟ್ಟಲು ಅವಶ್ಯಕವಾದ ಶಕ್ತಿಯನ್ನಾಗಿ ಬಳಕೆಯಾಗಬೇಕಾಗಿದ್ದ ತಳಸಮುದಾಯದ ಹುಡುಗರು ಇಂಡಿಯಾ ದೇಶ ಸಂಪೂರ್ಣವಾಗಿ ಸೋತಿದ್ದರಿಂದಲೇ ಇಂದು ಸಮಾಜದಲ್ಲಿ ಲುಂಪೆನ್ ಗುಂಪುಗಳಾಗಿ ಸಂಘಪರಿವಾರದ ಹಿಂದುತ್ವದ ಲ್ಯಾಬೋರೇಟರಿಗೆ ಪ್ರಯೋಗಪಶುಗಳಾಗಿ ಬಳಕೆಗೊಳ್ಳುತ್ತಿದ್ದಾರೆ.

ಚಿಂತಕ ಡಿ.ಆರ್.ನಾಗರಾಜ್ ಅವರು, “ಒಂದು ದೇಶದ ಸಾಂಸ್ಕೃತಿಕ ಸ್ವಂತಿಕೆ ಮತ್ತು ಸ್ವಾಭಿಮಾನದ ಪ್ರಶ್ನೆ ವಿಕಾರವಾದಾಗ ಮತಾಂಧ ರಾಜಕಾರಣವಾಗುತ್ತದೆ. ಗಾಂಧಿಯ ಮಟ್ಟಿಗೆ ಉನ್ನತ ಕಲ್ಪನೆಯಾದ ರಾಮರಾಜ್ಯ ಹಿಂದುತ್ವದ ಪರಿವಾರದ ಕೈಯಲ್ಲಿ ಅಪಾಯಕಾರಿ ಅಸ್ತ್ರವಾಗುತ್ತದೆ. ಸಾಂಸ್ಕೃತಿಕ ಸ್ವಂತಿಕೆ ಮತ್ತು ಸ್ವಾಭಿಮಾನದ ಪ್ರಶ್ನೆಯನ್ನು ಈ ದೇಶದ ಪ್ರಗತಿಪರರು ಚರ್ಚಿಸಬೇಕಾದ ಅಗತ್ಯ ಅಂದಿಗಿಂತ ಇಂದು ಹೆಚ್ಚಾಗಿದೆ. ಪ್ರಗತಿಪರತೆ ಎನ್ನುವುದು ಸರಳವಾದ ಸಾಮಾಜಿಕ ನ್ಯಾಯದ ರಾಜಕಾರಣವಲ್ಲ. ಅದಕ್ಕೆ ಅಧಿಕೃತ ಸಾಂಸ್ಕೃತಿಕ ಒಡಲೂ ಇರಬೇಕಾಗುತ್ತದೆ. ಈ ದೇಶದ ಸಂಸ್ಕೃತಿ ಬಗ್ಗೆ ಅಂತರ್ಮುಖತೆ ಇರದೆ ಕೃತಕವಾಗಿ ಸೆಕ್ಯುಲರ್ ಆದರೆ ಹಿಂದುತ್ವದ ಫ್ಯಾಸಿಸ್ಟ್ ಪರಿವಾರ ಬೆಳೆಯುತ್ತದೆ. ನಿಜವಾಗಿ ದೇಸಿಗರಾದರೆ ಮಾತ್ರ ಹಿಂದುತ್ವ ಪರಿವಾರದ ಹಲ್ಲೆ ತಡೆಗಟ್ಟಲು ಸಾಧ್ಯ.” ಎಂದು 1993ರಲ್ಲಿ ಹೇಳಿದ ಈ ಮನೋಜ್ಞ ಮಾತುಗಳು 19 ವರ್ಷಗಳ ನಂತರ ಇಂದಿಗೂ ಪ್ರಸ್ತುತವಾಗಿವೆ. ಡಿ.ಆರ್. ಹೇಳಿದ ಆ ಅಧಿಕೃತ ಮಾನವೀಯ ಸಾಂಸ್ಕೃತಿಕ ಒಡಲು ಪ್ರಜ್ಞಾವಂತರೆನಿಸಿಕೊಂಡ ನಮ್ಮಲ್ಲಿ ಕಾಣೆಯಾಗಿದೆ. ಸಾಂಸ್ಕೃತಿಕ ಜವಾಬ್ದಾರಿಗಳ ಅಗತ್ಯತೆಗಳ ಕುರಿತಾಗಿ ಕಾಲೇಜುಗಳಲ್ಲಿ, ಸೆಮಿನಾರ್‌ಗಳಲ್ಲಿ  ಅಸ್ಖಲಿತವಾಗಿ ಪಾಠ ಬಿಗಿಯುವ ನಮ್ಮ ಬುದ್ಧಿಜೀವಿಗಳ ಆದರ್ಶಗಳು ಕೇವಲ ಪುಸ್ತಕದ ಬದನೇಕಾಯಿಯೇ ಎಂದು ನಮ್ಮಂತಹ ಜನಸಾಮಾನ್ಯರು ಪ್ರಶ್ನಿಸಿದರೆ ಇದು ನಿಜಕ್ಕೂ ಅಧಿಕಪ್ರಸಂಗಿತನವಲ್ಲ!! ಸಂಶೋಧನೆಗಳಲ್ಲಿ ಬರೆಯಲ್ಪಡುವ, ಸೆಮಿನಾರ್‌ಗಳಲ್ಲಿ ಆಕರ್ಷಕ ಭಾಷಣವಾಗಿ ಕೊರೆಯಲ್ಪಡುವ ಈ ಸಾಂಸ್ಕೃತಿಕ ಅನುಸಂಧಾನ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆ ಎನ್ನುವುದು ವಾಸ್ತವವಾಗಿ ವ್ಯವಸ್ಥೆಯಲ್ಲಿ ಹೇಗೆ ಪ್ರಯೋಗಿಸಲ್ಪಡುತ್ತದೆ ಮತ್ತು ಅದರ ಯಶಸ್ಸಿನ ಉದಾಹರಣೆಗಳಾವುವು? ಇಂದು ಜನಪರ ರಾಜಕೀಯದ ಹಾಗೂ ಆರ್ಥಿಕತೆಯ ಪರ್ಯಾಯ ನೆಲೆಗಳು ಭೌದ್ಧಿಕವಾಗಿ ಮತ್ತು ಸಂಪೂರ್ಣವಾಗಿ ಭ್ರಷ್ಟಗೊಂಡಿರುವಾಗ ಅದರ ಬದಲಾಗಿ ಸಮಾಜದಲ್ಲಿನ ವ್ಯವಸ್ಥಿತ ಕ್ರೌರ್ಯಕ್ಕೆ ನಾವೆಲ್ಲ ಪ್ರತಿಕ್ರಯಿಸಬೇಕಾದ, ಪ್ರತಿಭಟಿಸುತ್ತಲೇ ನಿರಂತರವಾಗಿ ಕಟ್ಟಬೇಕಾದ ಪ್ರತಿರೋಧದ ಸಾಂಸ್ಕೃತಿಕ ನೆಲೆಗಳಾವುವು ಎಂದು ಈ ನಾಡಿನ ಶೋಷಿತರು ಹಾಗೂ ಹಲ್ಲೆಗೊಳಗಾದವರು ಇಂದು ಈ ಬುದ್ಧಿಜೀವಿಗಳನ್ನು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ನಮ್ಮ ಅಂತರಿಕ ತಳಮಳಗಳು ಬಹಿರಂಗ ಪ್ರತಿಭಟನೆಯಾಗಿ ವ್ಯಕ್ತವಾಗಲು ನಿರ್ದಿಷ್ಟವಾದ ಖಚಿತತೆ ಮತ್ತು ನೂರಾರು ಮಾರ್ಗಗಳನ್ನು ನಾವೆಲ್ಲ ನಿರಾಕರಿಸಿದ್ದೇವೆ. ತಮಿಳುನಾಡಿನಲ್ಲಿ ಒಂದು ಕಾಲದಲ್ಲಿ ಪೆರಿಯಾರ್ ರೂಪಿಸಿದ ಈ ದ್ರಾವಿಡ ಸಾಂಸ್ಕೃತಿಕ ರಾಜಕಾರಣದ ಅತಿರೇಕಗಳನ್ನು ಅದರ ಅನೇಕ ಮಿತಿಗಳನ್ನು ಇಂದು ನಿಖರವಾಗಿ ವಿಮರ್ಶಿಸುವ ನಾವೆಲ್ಲ ಇಂದು ನಮ್ಮ ಕರ್ನಾಟಕದಲ್ಲಿ ಪೆರಿಯಾರ್‌ರವರ ಚೈತನ್ಯಶೀಲತೆಯ ಸಾಂಸ್ಕೃತಿಕ ಚಳವಳಿಯ ತಾತ್ವಿಕತೆಯ ಮತ್ತು ಜಾತ್ಯಾತೀತತೆಯ ಪ್ರಖರತೆಯ ಹತ್ತಿರಕ್ಕೂ ಹೋಗಲಾರದಷ್ಟು ಜಡಗೊಂಡಿದ್ದೇವೆ. ಜಾತ್ಯಾತೀತ ನೆಲೆಯ ಸಾಂಸ್ಕೃತಿಕ ರಾಜಕಾರಣವನ್ನು ಒಂದು ಜನಪರ ಚಳವಳಿಯಾಗಿ ರೂಪಿಸಲು ನಾವು ಸೋತಿದ್ದೆಲ್ಲಿ ಎಂದು ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ತೀವ್ರವಾದ ಪ್ರಕ್ಷುಬ್ಧ ಕಾಲವಿದು.

ಬಯಲುಸೀಮೆಯ ಬರಡಲ್ಲಿ ಭಾಗೀರಥಿ…


– ರವಿ ಕೃಷ್ಣಾರೆಡ್ಡಿ


ಕಳೆದ ರಾತ್ರಿ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಮಳೆಯಾಯಿತು. ಕಳೆದ ಕೆಲವು ದಿನಗಳಿಂದ ಇಲ್ಲಿ ಬಿಸಿಲ ಬೇಗೆ ಮತ್ತು ಸೆಕೆ ಬೇಸಿಗೆಯನ್ನು ಮೀರಿಸುತ್ತಿತ್ತು. ಇಂದು ಮತ್ತೆ ಧಗೆ.

ಎರಡು ದಿನಗಳ ಹಿಂದೆ ಊರಿಗೆ ಹೋಗಿದ್ದೆ. ತೋಟದಲ್ಲಿನ ತೆಂಗಿನ ಮರಗಳ ಕೆಳಗೆ ತಿಂಗಳ ಹಿಂದೆ ಹುಲುಸಾಗಿ ಬೆಳೆದಿದ್ದ ಹುಲ್ಲು ಬಾಡಿ ಒಣಗುತ್ತಿತ್ತು. ಕಳೆ ಗಿಡಗಳು ಸಾಯುತ್ತಿದ್ದವು. ಮನೆಯ ಮುಂದಿನ ಶ್ರೀಗಂಧದ ಮರದ ಎಲೆಗಳು ಸುಟ್ಟು ಕರಕಲಾಗುವ ಹಂತ ತಲುಪಿದ್ದವು. ಆ ಮರದ ಎಲೆಗಳನ್ನು ಅಷ್ಟು ದೈನೇಸಿ ಸ್ಥಿತಿಯಲ್ಲಿ ನೋಡಿದ ನೆನಪಿಲ್ಲ. ಇದು ಮಳೆಗಾಲ.

ವರ್ಷದ ಹಿಂದೆ ಸುಮಾರು ಇಪ್ಪತ್ತು ಹಣ್ಣಿನ ಗಿಡಗಳನ್ನು ನೆಟ್ಟಿದ್ದೆ. ಅದರಲ್ಲಿ ಈ ಬೇಸಿಗೆಯಲ್ಲಿ ಸರಿಯಾದ ನೀರಿನ ಆರೈಕೆ ಇಲ್ಲದೆ ಒಂದಷ್ಟು ಗಿಡಗಳು ಸತ್ತಿದ್ದವು. ಎರಡು ಆವೊಕಾಡೊ (ಬೆಣ್ಣೆ ಹಣ್ಣು) ಗಿಡಗಳು ಮತ್ತು ಎರಡು ಅಡಿಕೆ ಗಿಡಗಳಂತೂ ಮೊದಲೆ ಒಣಗಿ ಸತ್ತುಹೋಗಿದ್ದವು. ತಿಂಗಳ ಹಿಂದೆ ಬಿದ್ದಿದ್ದ ಚೂರುಪಾರು ಮಳೆಗೆ ಜೀವ ಉಳಿಸಿಕೊಂಡಿದ್ದ ಗಿಡಗಳಿಗೆ ಎರಡು ವಾರದ ಹಿಂದೆ ಪಾತಿ ಮಾಡಿದ್ದೆ. ಕೊಟ್ಟಿಗೆ ಗೊಬ್ಬರ ಇಲ್ಲದ ಕಾರಣ ಎರಡು ಕೆಜಿ ಯೂರಿಯಾ ತಂದಿದ್ದೆ. ನನ್ನಮ್ಮ ’ಅದನ್ನು ಎಲ್ಲಿಯಾದರೂ ಗಿಡಗಳಿಗೆ ಹಾಕಿಬಿಟ್ಟೀಯಾ, ನೀರು ಹಾಕದೆ ಇದ್ದರೆ ಎಲ್ಲಾ ಸುಟ್ಟು ಹೋಗುತ್ತವೆ’ ಎಂದು ಗದರಿದ್ದಳು. ಹೇಗೂ ಮಳೆ ಬರಲೇಬೇಕು, ಬಂದ ತಕ್ಷಣ ಹಾಕು ಎಂದು ಅವಳಿಗೆ ಹೇಳಿದ್ದೆ. ಈ ವರ್ಷವಾದರೂ ಆ ಹಣ್ಣಿನ ಗಿಡಗಳು ನೆಲದ ಆಳಕ್ಕೆ ಬೇರು ಬಿಟ್ಟುಕೊಂಡು ಬೆಳೆದರೆ ಮುಂದಕ್ಕೆ ಹೇಗೊ ಬದುಕಿಕೊಳ್ಳುತ್ತವೆ ಎನ್ನುವ ಆಶಾವಾದ ನನ್ನದು.

ಆದರೆ, ಈ ಮಳೆ? ಚಿಕ್ಕವರಿದ್ದಾಗ ಜುಲೈನಿಂದ ನವೆಂಬರ್ ತಿಂಗಳುಗಳ ಮಧ್ಯದಲ್ಲಿ ಕೆಸರನ್ನು ತುಳಿದೂ ತುಳಿದೂ ಕಾಲ್ಬೆರಳುಗಳ ಮಧ್ಯೆ ಬರುವ ಕೆಸರು ಗುಳ್ಳೆಗಳ ತುರಿತದ್ದೇ ಸಮಸ್ಯೆ. ಆಗಲೂ ಏಳೆಂಟು ವರ್ಷಗಳ ಅವಧಿಗೆ ಅತಿವೃಷ್ಟಿ-ಅನಾವೃಷ್ಟಿಯ ಚಕ್ರ ಇತ್ತು. ಆದರೆ, ಈ ಮಟ್ಟದಲ್ಲಿ ಮಳೆ ಕೈಕೊಟ್ಟಿದ್ದು ಮತ್ತು ಅದು ಜನರನ್ನು ತಟ್ಟುತ್ತಿರುವುದನ್ನು ನೋಡಿರಲಿಲ್ಲ. ನೆನ್ನೆ ತಾನೆ ಚಿಕ್ಕಮ್ಮಳೊಬ್ಬಳೊಂದಿಗೆ ಮಳೆಯ ಬಗ್ಗೆ ಮಾತನಾಡುತ್ತಿದ್ದಾಗ ಆಕೆ ಹೇಳಿದ ಮಾತು: “ಜನರದ್ದು ಬಿಡು, ದನಕರುಗಳ ಕತೆ ಹೇಳು.”

ಬಯಲುಸೀಮೆಯಲ್ಲಿ ದನಎಮ್ಮೆಆಡುಕುರಿಗಳನ್ನು ಸಾಕುತ್ತಿರುವವರ ಮಾನಸಿಕ ಸ್ಥಿತಿ ಈ ವರ್ಷ ಖಂಡಿತ ಕೆಟ್ಟಿದೆ. ಮನುಷ್ಯ ಹೇಗೋ ಕಾಡಿ-ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಆದರೆ ಆ ಸಾಕುಪ್ರಾಣಿಗಳಿಗೆ? ಒಣಗಿದ ಹುಲ್ಲಿನ ದಾಸ್ತಾನು ಮುಗಿದಿದೆ. ಬಯಲೆಲ್ಲ ಮಣ್ಣಾಗಿದೆ. ಪ್ರಾಣಿಗಳನ್ನು ಸಾಕುತ್ತಿರುವ ಮನೆಯ ಜನ ತಮ್ಮ ದನಕರುಗಳಿಗೆ ಮೇವು ಒದಗಿಸಲಾಗದೆ ದುಗುಡ ಹೆಚ್ಚಿಸಿಕೊಳ್ಳುತ್ತಿದ್ದಾರೆ.

***

ಕಳೆದ ಎರಡು ವರ್ಷಗಳಿಂದ ರಾಜ್ಯದ ಬೇರೆಬೇರೆ ಕಡೆ ಪ್ರಯಾಣ ಮಾಡುತ್ತಿದ್ದಾಗ, ಅದರಲ್ಲೂ ರಾಜ್ಯದ ಬಯಲುಸೀಮೆಯ ಜಿಲ್ಲೆಗಳಲ್ಲಿ ನೀರಾವರಿ ಸಾಧ್ಯವಾಗಿಸಿಕೊಂಡ ಪ್ರಗತಿಪರ ರೈತರ ತೋಟಗಳನ್ನು ನೋಡುತ್ತಿದ್ದಾಗ, ನೀರೊಂದಿದ್ದರೆ ಈ ಜನ ಇಲ್ಲಿ ನಂದನವನ್ನೇ ಸೃಷ್ಟಿಸುತ್ತಾರೆ ಎನ್ನಿಸುತ್ತಿತ್ತು. ಬೆಂಗಳೂರಿನಿಂದ ಹಿಡಿದು ಬಿಜಾಪುರ-ಬೀದರ್‌ಗಳ ಬಯಲುಸೀಮೆಯ ನೆಲದಲ್ಲಿ ಅಷ್ಟಿಷ್ಟು ನೀರಿನ ಆರೈಕೆ ಇದ್ದರೆ ಸಾಕು, ಹಣ್ಣಿನ ಮತ್ತು ತರಕಾರಿ ಬೆಳೆಗಳಂತೂ ಹುಲುಸಾಗಿ ಬೆಳೆಯುತ್ತವೆ. ಅದ್ಭುತ ಇಳುವರಿ ಕೊಡುತ್ತವೆ. ಆದರೆ, ನೀರಾವರಿ ಇಲ್ಲದ ಕಡೆ ನೀರಿನದೇ ಸಮಸ್ಯೆ. ಇದ್ದ ಕಡೆ ಮತಿಯಿಲ್ಲದ ಕೃಷಿಪದ್ದತಿಗಳು.

ಕಳೆದ ವರ್ಷ ಇದೇ ಸಮಯದಲ್ಲಿ ಬಿಜಾಪುರದ ಬಳಿಯ ಸಂಗಾಪುರ ಎನ್ನುವ ಹಳ್ಳಿಯಲ್ಲಿದ್ದೆ. ಅದು ಅಲ್ಲಿಯ ಯಕ್ಕುಂಡಿ ಕೆರೆಗೆ ಹತ್ತಿರದಲ್ಲಿರುವ ಊರು. ಈ ಕೆರೆ ಕೃಷ್ಣಾ ನದಿಗೆ ಕಟ್ಟಲಾಗಿರುವ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಸುಮಾರು ಹದಿನೈದು ಕಿ.ಮೀ. ದೂರದಲ್ಲಿದೆ. ನನಗೆ ಗೊತ್ತಾದ ಮಾಹಿತಿ ಪ್ರಕಾರ ಅಲ್ಲಿಯ ಸ್ಥಳೀಯ ಶಾಸಕ ಎಂ.ಬಿ. ಪಾಟೀಲ್ ಮುತುವರ್ಜಿ ವಹಿಸಿ ಚಿಕ್ಕಪಡಸಲಗಿಯಿಂದ ಏತ ನೀರಾವರಿ ಮೂಲಕ ಯಕ್ಕುಂಡಿ ಕೆರೆಗೆ ನೀರು ಹರಿಸುವ ಯೋಜನೆಗೆ ಓಡಾಡಿದ್ದಾರೆ. ಕಾಲುವೆ, ಪಂಪ್‍ಸೆಟ್ ಕೆಲಸ, ಇತ್ಯಾದಿ ಎಲ್ಲವೂ ಮುಗಿದು ಸುಮಾರು ಒಂದು ವರ್ಷ ಆಗುತ್ತ ಬಂದಿದೆ. ಆದರೆ ಆ ಕೆರೆಗೆ ಇನ್ನೂ ನೀರು ಬಂದಿಲ್ಲ. ಅದರ ಮೇಲಿನ ಕೆರೆಗೆ ಬಂದಿದೆಯಂತೆ. ಒಂದು ಹತ್ತು-ಹದಿನೈದು ದಿನ ಸತತ ವಿದ್ಯುತ್ ಕೊಟ್ಟು ನೀರು ಹರಿಸಿದರೆ ಯಕ್ಕುಂಡಿ ಕೆರೆ ಕೃಷ್ಣಾ ನದಿಯ ನೀರು ಕುಡಿಯುತ್ತದೆ. ಆದರೆ, ಆ ಊರಿನ ನನ್ನ ಸ್ನೇಹಿತ ಹೇಳುವ ಪ್ರಕಾರ ಸಚಿವ ಮುರುಗೇಶ್ ನಿರಾಣಿ ಅದನ್ನು ಬೇಕಂತಲೇ ಆಗಗೊಡುತ್ತಿಲ್ಲ. ಕಾರಣ, ಈ ಯೋಜನೆಯ ಹೆಸರು ಶಾಸಕ ಎಂ.ಬಿ. ಪಾಟೀಲ್‌ಗೆ ಬರುತ್ತದೆ ಎಂದು.

ಇರಲಿ. ಇಂದಲ್ಲ ನಾಳೆ ಸಣ್ಣಮನಸ್ಸಿನ ದುಷ್ಟರೂ ಎಲ್ಲರಂತೆ ಮಣ್ಣಾಗುತ್ತಾರೆ, ಇಲ್ಲವೇ ಕಾಲ ಅದಕ್ಕೂ ಮೊದಲೆ ಕೆಲವರನ್ನು ಗುಡಿಸಿ ಬಿಸಾಕುತ್ತದೆ. ಯಕ್ಕುಂಡಿ ಕೆರೆ ಈ ವರ್ಷವಲ್ಲದಿದ್ದರೆ ಮುಂದಿನ ವರ್ಷವಾದರೂ ಕೃಷ್ಣೆಯ ನೀರು ಕಾಣುತ್ತದೆ.

ಇದೆಲ್ಲದರ ಜೊತೆಜೊತೆಗೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನದಿಯ ನೀರು ತರಬೇಕೆಂದು ಹೋರಾಟ ನಡೆದಿದೆ. ಹೇಮಾವತಿಯ ನೀರು ಶಿರಾ ದಾಟಿ ಮಧುಗಿರಿ ಕಡೆಗೆ ಬಸಿಯುತ್ತಿದೆ. ಕೋಲಾರ ಜಿಲ್ಲೆಗೆ ನೇತ್ರಾವತಿ ನೀರು ತರಬೇಕೆಂದು ಜನಾಭಿಪ್ರಾಯ ರೂಪಿಸುವ ಕೆಲಸ ನಡೆದಿದೆ.

ಆದರೆ, ನನ್ನ ಪ್ರಶ್ನೆ ಇರುವುದು, ಅದಾದ ನಂತರ ಏನು? ಇಷ್ಟೆಲ್ಲ ಕಷ್ಟಪಟ್ಟು, ಜಲಾಶಯ ನಿರ್ಮಿಸಿ, ನೀರನ್ನು ನೂರಾರು ಅಡಿ ಮೇಲೆತ್ತಿ ಹೇಗೆಹೇಗೋ ಸಾಗಿಸಿ ಬಯಲುಸೀಮೆಗೆ ತರುವ ನೀರಿನ ಬಳಕೆ ಹೇಗೆ? ಇದು ಜಲಾಶಯ ಕಟ್ಟುವ ಕನ್‌ಸ್ಟ್ರಕ್ಷನ್ ಕಂಪನಿಗಳ ಸಮಸ್ಯೆ ಅಲ್ಲ. ನಾಡಿನ ಜನರದ್ದು. ಸಾಮಾಜಿಕ ಮತ್ತು ರಾಜಕೀಯ ಮುಖಂಡರದ್ದು. ಆದರೆ ಏನಾಗಿದೆ?

ನಮ್ಮ ರಾಜ್ಯದ ಬಯಲುಸೀಮೆಯಲ್ಲಂತೂ ಊರಿಗೊಂದು ಕೆರೆ ಇದೆ. ಲಕ್ಷಾಂತರ ಜನರನ್ನು ನಿರ್ವಸಿತರನ್ನಾಗಿಸಿ, ನಿಸರ್ಗದ ಮೇಲೆ ಒತ್ತಡ ತಿಂದು ನಿರ್ಮಿಸುವ, ಜಾಗತಿಕ ತಾಪಮಾನ ಹೆಚ್ಚಿಕೆಯಲ್ಲಿ ತಮ್ಮ ಪಾಲೂ ಇರುವ  ಬೃಹತ್ ಅಣೆಕಟ್ಟುಗಳ ನಿರ್ಮಾಣವಿಲ್ಲದೆ ಈ ರಾಜ್ಯಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಿದೆ. ಬಹುಪಾಲು ಎಲ್ಲಾ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಮೇಲಿನ ಕೆರೆಗೆ ನೀರು ಬರುವ ಹಾಗೆ ನೋಡಿಕೊಂಡರೆ ಸಾಕು. ಆ ಕೆರೆ ತುಂಬಿಸಿದಾಕ್ಷಣ ಕೆಳಗಿನ ಕೆರೆಗೆ ನೀರು ಹೋಗುವ ಎಲ್ಲಾ ವ್ಯವಸ್ಥೆಗಳೂ, ಕಾಲುವೆಗಳೂ, ಸಂಪರ್ಕ ಜಾಲಗಳೂ ಇವೆ. ಹೊಸದಾಗಿ ನೂರಾರು ಅಡಿ ಆಳದ ಕಾಲುವೆಗಳನ್ನು ನಿರ್ಮಿಸುವ ಅಗತ್ಯವಿಲ್ಲ.  ಮೇಲೆ ಪ್ರಸ್ತಾಪಿಸಿರುವ ಯಕ್ಕುಂಡಿ ಕೆರೆಗೆ ನೀರು ಹರಿಸುವ ಯೋಜನೆ ಒಂದು ಅದ್ಭುತವಾದ ಕಾರ್ಯರೂಪಕ್ಕೆ ಬಂದಿರುವ ಚಿಂತನೆ . ಆದರೆ, ನೀರಾವರಿ ಎಂದಾಕ್ಷಣ ನಮ್ಮಜನರಿಗೆ, ಬಿಲ್ಡರ್ಸ್‌ಗೆ, ರಾಜಕಾರಣಿಗಳಿಗೆ ನೆನಪಿಗೆ ಬರುವುದು ಬೃಹತ್ ಅಣೆಕಟ್ಟೆಗಳು ಮತ್ತು ಎಡದಂಡೆ ಮತ್ತು ಬಲದಂಡೆ ಕಾಲುವೆಗಳು ಮತ್ತು ಅವುಗಳ ಉಸ್ತುವಾರಿಯಲ್ಲಿ ಲಪಟಾಯಿಸುವ ಕೋಟ್ಯಾಂತರ ರೂಪಾಯಿಗಳು.

ಮತ್ತು, ನೀರಾವರಿ  ಎಂದಾಕ್ಷಣ ರೈತನಿಗೆ ಗೊತ್ತಿರುವುದು, ಕಬ್ಬು ಮತ್ತು ಬತ್ತ.

ನೂರಾರು ಕಿ.ಮೀ.ಗಳ ದೂರದಿಂದ ಬರುವ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಜ್ಞಾನವನ್ನೇ ನಮ್ಮ ರೈತರಿಗೆ ನಮ್ಮ ಸರ್ಕಾರಗಳು ಕೊಡುವುದಿಲ್ಲ. ಅವನಿಗಿರುವ ಜ್ಞಾನ ಕೆಸರು ಗದ್ದೆ ಮಾಡಿ ಬತ್ತ ಬೆಳೆಯುವುದು, ಮತ್ತು ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವುದು. ಪ್ರತಿ ಸಲವೂ ಅದೇ ಬೆಳೆ. ಸಾರ ಹಿಂಗಿಹೋದ ಭೂಮಿಗೆ ಅಪಾರ ಪ್ರಮಾಣದಲ್ಲಿ ಕೃತಕ ರಾಸಾಯನಿಕ ಗೊಬ್ಬರಗಳ ಸುರಿವು. ಒಟ್ಟಾರೆಯಾಗಿ ಇದು ಹೀಗೆ ಎಷ್ಟು ದಿನ ನಡೆಯುತ್ತದೆ, ಮತ್ತು ಅದರಿಂದ ಆಗುವ ಕೆಡಕುಗಳೇನು, ಇನ್ನೂ ಹೆಚ್ಚಿಗೆ ಒಳಿತು ಮಾಡಿಕೊಳ್ಳುವ ಮತ್ತು ನೈತಿಕವಾಗಿ ಬದುಕುವ ಮಾದರಿಯೇ ಇಲ್ಲವೇ, ಎಂಬಂತಹ ಪ್ರಶ್ನೆಗಳು ನಮ್ಮಲ್ಲಿ ಯಾರೂ ಎತ್ತುತ್ತಿಲ್ಲ.

ನಮ್ಮ ದೇಶದ ಸಾಮುದಾಯಿಕ ದೂರದೃಷ್ಟಿ (collective vision) ಯಾಕಿಷ್ಟು ದುರ್ಬಲವಾಗಿದೆ?

ನಮ್ಮ ಸಮಾಜದ ಚಿಂತನೆ, ವಿಶೇಷವಾಗಿ ನೀರಾವರಿ ವಿಷಯಕ್ಕೆ, ಆದಷ್ಟು ಬೇಗ ಬದಲಾಗಬೇಕಿದೆ. ಈಗಾಗಲೆ ಬೆಂಗಳೂರು ಜಿಲ್ಲೆಯ ಪೂರ್ವಭಾಗದಲ್ಲಿ ಮತ್ತು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬೋರ್‌ವೆಲ್‌ಗಳ ಆಳ ಸಾವಿರ ಅಡಿ ಮುಟ್ಟಿ ಅದನ್ನು ದಾಟುತ್ತಿದೆ. ಒಂದು ಬೋರ್‌ವೆಲ್ ಕೊರೆಸಿ ಅದಕ್ಕೆ ಪಂಪ್ ಮತ್ತು ಮೋಟಾರ್ ಅಳವಡಿಸಲು ಎರಡು-ಮೂರು ಲಕ್ಷಕ್ಕೂ ಮೀರಿ ಖರ್ಚಾಗುತ್ತಿದೆ. ಆರುನೂರು ಏಳುನೂರು ಅಡಿಗಳ ಆಳದಿಂದ ನೀರೆತ್ತಲು ಬಹಳ ವಿದ್ಯುತ್ ಖರ್ಚಾಗುತ್ತದೆ. ಈ ಇಡೀ ಪ್ರಕ್ರಿಯೆ ಜಾಗತಿಕ ತಾಪಮಾನದ ದೃಷ್ಟಿಯಿಂದ ವಿಷವರ್ತುಲವನು ಸೃಷ್ಟಿಸುತ್ತಿದೆ. ಇದು ಬದಲಾಗಬೇಕಾದರೆ ಬಯಲುಸೀಮೆಯಲ್ಲಿ ಬೋರ್‌ವೆಲ್ ನೀರಾವರಿ ಮಾಡುವ ರೈತರು ಹನಿನೀರಾವರಿ ವ್ಯವಸ್ಥೆ ಇಲ್ಲದ ಯಾವ ಕೃಷಿಯನ್ನೂ ಮಾಡಬಾರದು. ಹೆಚ್ಚೆಚ್ಚು ನೀರು ಬೇಡುವ ಬೆಳೆಗಳನ್ನು ಇಲ್ಲಿ ಬೆಳೆಸುವುದು ಅನೈತಿಕ ಎನ್ನಿಸುವ ಅರಿವು ಹುಟ್ಟಬೇಕು. ಬೆಂಗಳೂರಿನ ಸುತ್ತಮುತ್ತ ಈಗೀಗ ಹನಿನೀರಾವರಿ ಹೆಚ್ಚುತ್ತಿದೆ. ಆದರೆ ನನಗೆ ತಿಳಿದ ಪ್ರಕಾರ ಅದಕ್ಕೆ ಕೃಷಿ ಕಾರ್ಮಿಕರ ಸಮಸ್ಯೆ ಮತ್ತು ಕಮ್ಮಿಯಾಗುತ್ತಿರುವ ನೀರಿನ ಸಮಸ್ಯೆ ಕಾರಣವೇ ಹೊರತು ಅದು ಪ್ರಜ್ಞಾಪೂರ್ವಕವಾಗಿ ರೈತಸಮುದಾಯ ತೆಗೆದುಕೊಳ್ಳುತ್ತಿರುವ ತೀರ್ಮಾನವಲ್ಲ. ಆದರೆ ಈ ತಿಳುವಳಿಕೆಯನ್ನು ಕೊಡಬೇಕಾದವರು ಯಾರು? ಸರ್ಕಾರವಲ್ಲದೆ ಇನ್ಯಾರು? ಕೃಷಿ ಇಲಾಖೆಗಿಂತ ಪವಿತ್ರವಾದ ಇಲಾಖೆ ಈ ಸರ್ಕಾರಗಳಲ್ಲಿ ಇನ್ನೊಂದಿರಲು ಸಾಧ್ಯವೇ? ಆದರೆ ಎಂತಹವರು ನಮ್ಮ ದೇಶದ ಮತ್ತು ರಾಜ್ಯದ ಕೃಷಿ ಸಚಿವರು?

ಮತ್ತು, ಎಲ್ಲಾ ಕಡೆಯೂ ಮಾಡುವಂತೆ, ಬಿಜಾಪುರದ ಬಳಿಯ ಯಕ್ಕುಂಡಿ ಕೆರೆಗೆ ನೀರು ಬಂದ ತಕ್ಷಣ ಆ ಕೆರೆಗೇ ಮೋಟಾರ್ ಇಟ್ಟು ಅಥವ ಕೆಳಗಿನ ಜಮೀನುಗಳಲ್ಲಿ ಬೋರ್ ಕೊರೆಸಿ ಕಿ.ಮೀ.ಗಟ್ಟಲೆ ನೀರು ಪಂಪ್ ಮಾಡಿ ಅಲ್ಲಿಯ ರೈತರು ಕಬ್ಬು ಬೆಳೆಯಲಿದ್ದಾರೆ. ಸುತ್ತಮುತ್ತ ಕಬ್ಬಿನ ಫ್ಯಾಕ್ಟರಿಗಳೆ ತುಂಬಿಕೊಂಡಿವೆ. ನೀರು ಇದೆ ಅಂದರೆ ಕಬ್ಬು ಬೆಳೆ ಎನ್ನುವ no-brainer ಚಿಂತನೆಗೆ ರೈತ ಅಲ್ಲಿ ಒಗ್ಗಿಹೋಗಿದ್ದಾನೆ. ನನ್ನ ಸ್ನೇಹಿತನೂ ಎರಡು ಕಿ.ಮೀ. ದೂರದ ಕೆರೆಯಿಂದ ತನ್ನ ಜಮೀನಿಗೆ ನೀರು ಪಂಪ್ ಮಾಡುವ ಎಲ್ಲಾ ವ್ಯವಸ್ಥೆ ಮಾಡಿಕೊಂಡು ನೀರಿನ ಬರುವಿಗೆ ವರ್ಷದಿಂದ ಕಾಯುತ್ತಿದ್ದಾನೆ. ಹನಿ ನೀರಾವರಿಯಲ್ಲಿ ಹತ್ತು ಎಕರೆ ಜಮೀನನ್ನು ಸಾಕಬಹುದಾದಷ್ಟು ನೀರನ್ನು ಅರ್ಧ ಎಕರೆ ಕಬ್ಬಿಗೆ ಉಣಿಸಲು ಅವನಂತೆ ಅವನ ಸುತ್ತಮುತ್ತಲ ಹಳ್ಳಿಯ ಜನ ತುದಿಗಾಲಲ್ಲಿ ನಿಂತಿದ್ದಾರೆ.

ಆದರೆ, ಈ ಕೆರೆಯ ನೀರನ್ನು ಹನಿನೀರಾವರಿಗೆ ಮಾತ್ರ ಬಳಸಬೇಕು ಎಂದು ಕಟ್ಟುಪಾಡು ಮಾಡಿದರೆ ಹೇಗೆ? ಕೆರೆಯ ಅಂಗಳದಲ್ಲಿ ಒಂದೆರಡು ಎಕರೆಯಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿ, ಅಲ್ಲಿಯೇ ಉತ್ಪಾದಿಸಿದ ವಿದ್ಯುತ್‌ನಿಂದ ಮೋಟಾರ್‌ಗಳನ್ನು ಓಡಿಸಿ ಸುತ್ತಮುತ್ತಲ ಜಮೀನುಗಳ ಹನಿನೀರಾವರಿ ವ್ಯವಸ್ಥೆಗೆ ಅದನ್ನು ಲಿಂಕ್ ಮಾಡುವ ವ್ಯವಸ್ಥೆಯನ್ನು ಸರ್ಕಾರವೇ  ಮೊದಲು ಮಾಡಿದರೆ ಅದು ಉತ್ತಮವಲ್ಲವೇ? ರೈತರು ಪೋಲು ಮಾಡುವ ವಿದ್ಯುತ್ ಮತ್ತು ನೀರು ಎರಡೂ ಉಳಿಯುತ್ತವೆ ಮತ್ತು ಕೃಷಿಯಲ್ಲಿ ಪರ್ಯಾಯ ಚಿಂತನೆಗಳು ಮತ್ತು ಪ್ರಯೋಗಗಳು ಚಾಲ್ತಿಗೆ ಬರುತ್ತವೆ. ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಯತ್ನಿಸುತ್ತಾರೆ. ಪೂರ್ವಿಕರು ನೂರಾರು ವರ್ಷಗಳ ಪ್ರಯೋಗದಿಂದ ಕಂಡುಕೊಂಡ ಮಿಶ್ರ ಬೆಳೆ ಪದ್ಧತಿಯನ್ನು ಮುಂದುವರೆಸುತ್ತಾರೆ. ನೆಲದ ಸತ್ವ ಉಳಿಯುತ್ತದೆ. ಸಾವಯವವಾಗಿ ಒಂದು ನಾಗರೀಕತೆ ಧನಾತ್ಮಕವಾಗಿ ರೂಪುಗೊಳ್ಳುತ್ತದೆ.

ಹೀಗೆಯೇ ಮಾಡಬೇಕಿಲ್ಲ. ಇದಕ್ಕಿಂತ ಉತ್ತಮವಾದ ಇನ್ನೊಂದು ಮಾರ್ಗವೂ ಇರಬಹುದು. ಇನ್ನೂ ಹಲವಾರೇ ಇರಬಹುದು. ಆದರೆ, ಇಂತಹ ಯೋಚನೆಗಳನ್ನು ಮಾಡದಿದ್ದರೆ ಹೇಗೆ? ಮಾಡಬೇಕಾದವರು ಸರಿಯಾದ ಜಾಗದಲ್ಲಿ ಇರಬೇಕು. ನಮ್ಮ ರಾಜಕಾರಣಿಗಳು ಇಂತಹುದನ್ನು ಚಿಂತಿಸಬೇಕು. ವಿಶ್ವವಿದ್ಯಾಲಯದ ಸಂಬಂದ್ಗಪಟ್ಟ ವಿಭಾಗಗಳ ಪ್ರಾಧ್ಯಾಪಕರುಗಳು  ಕ್ಷೇತ್ರ ಅಧ್ಯಯನ ಮಾಡಬೇಕು.  ಕೃಷಿ ವಿಜ್ಞಾನಿಗಳು ಪರ್ಯಾಯಗಳನ್ನೂ ಪರಿಹಾರಗಳನ್ನೂ ಪರಿಚಯಿಸಬೇಕು. ಸರ್ಕಾರದ ಕೃಷಿ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸಿ ಯೋಗ್ಯವಾದದ್ದನ್ನು ಜಾರಿಗೆ ತರಬೇಕು. ಆದರೆ… ನಮ್ಮ ಇಡೀ ವ್ಯವಸ್ಥೆ ಕೆಟ್ಟಿದೆ. ಒಂದು ಇಲಾಖೆ ಇನ್ನೊಂದರ ಜೊತೆ ಜ್ಞಾನವಿನಿಮಯದ, ಜೊತೆಗೂಡಿ ಕೆಲಸ ಮಾಡುವ ರೀತಿಯಲ್ಲಿ ಸಂಬಂಧ ಇಟ್ಟುಕೊಳ್ಳುವುದಿಲ್ಲ. ಯೋಗ್ಯರು ವಿಶ್ವವಿದ್ಯಾಲಯಗಳ ಕುಲಪತಿಗಳಾಗುತ್ತಿಲ್ಲ. ಆ ಹುದ್ದೆಗಳಂತೂ ಬಿಕರಿಗಿವೆ. ಕೃಷಿ ವಿಶ್ವವಿದ್ಯಾಲಯಗಳು ಏನು ಮಾಡುತ್ತವೆ ಎಂದು ರೈತರಿಗೂ ಗೊತ್ತಾಗುತ್ತಿಲ್ಲ. ನೀರಾವರಿ ಇಲಾಖೆ ಹಳೆ ಕಾಲದ ಡ್ಯಾಮು-ಕೆನಾಲ್ ಮನಸ್ಥಿತಿಯಲ್ಲಿಯೇ ಇದ್ದು ಅದಕ್ಕೆ ಮೀರಿದ ಪರ್ಯಾಯಗಳ ಬಗ್ಗೆ ಯೋಚಿಸುತ್ತಿಲ್ಲ. ಕೃಷಿ ಇಲಾಖೆ ಅತ್ಯಂತ ಜವಾಬ್ದಾರಿಯುತ ಖಾತೆ ಎಂದು ಯಾರಿಗೂ ಅನ್ನಿಸುತ್ತಿಲ್ಲ. ಅಲ್ಲೊಬ್ಬ ವಿಷನರಿ ತರಹದ ಯೋಗ್ಯ ಮನುಷ್ಯ ಇರಬೇಕು ಎಂದು ಯಾರಿಗೂ ಅನ್ನಿಸುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಇಂತಹುದೊಂದು ಸ್ಥಿತಿಗೆ ಅನರ್ಹರನ್ನು ಅಯೋಗ್ಯರನ್ನು ಜನಪ್ರತಿನಿಧಿಗಳಾಗಿ ಆರಿಸಿರುವ ನಾವೇ ಕಾರಣ ಇರಬಹುದೆ ಎನ್ನುವ ಸಂಶಯವೂ ಜನರಿಗೆ ಬರುತ್ತಿಲ್ಲ. ನಾವು ಕಾಣುತ್ತಿರುವ ಯಾವುದೇ ಸಮಸ್ಯೆಗೆ ಅನ್ಯರೇ ಕಾರಣ, ನನ್ನಿಂದ ಯಾವ ತಪ್ಪೂ ಇಲ್ಲ ಎನ್ನುವ ಸ್ಥಿತಿಗೆ ಸಮಾಜ ಮುಟ್ಟಿದೆ. ಎಲ್ಲರೂ ಪ್ರವಾಹಕ್ಕೆ ಮುಳುಗುತ್ತಿರುವ ನಡುಗಡ್ಡೆಗಳಾಗಿದ್ದಾರೆ. ಆದರೆ ಅದು ಸಮಾಜದ ಒಟ್ಟು ಅರಿವಿಗೆ ಬರುತ್ತಿಲ್ಲ.

ಈ ಮಧ್ಯೆ, ಬಯಲುಸೀಮೆಯಲ್ಲಿ ದನಕರುಗಳು ಸಾಯುತ್ತಿವೆ. ತನ್ನನ್ನು ಸರಿಯಾಗಿ ಗೌರವಿಸದ ಹುಲುಮಾನವರ ಮೇಲೆ ಭಾಗೀರಥಿ ಈ ವರ್ಷ ಮುನಿದಿದ್ದಾಳೆ. ಮುಂದಿನ ವರ್ಷಕ್ಕೆ ರಾಗಿ-ಜೋಳ, ಬೇಳೆ-ಕಾಳು, ಅಡಿಗೆ ಎಣ್ಣೆಯ ಬೆಳೆ ಗಗನಕ್ಕೇರಲಿದೆ. ನೂರಾರು, ಸಾವಿರಾರು ಮೈಲುಗಳ ದೂರದಿಂದ ಬರುವ ಅಕ್ಕಿ ಮಾತ್ರ ಎಂದಿನಂತೆ ಯಥೇಚ್ಚವಾಗಿ–ಆದರೆ ಹೆಚ್ಚಿನ ಬೆಲೆಗೆ–ಸಿಗಲಿದೆ. ಬಾಟಲ್ ನೀರಿಗಿಂತ ಕಮ್ಮಿ ಬೆಲೆಯ ಹಾಲಿನ ಬೆಲೆಯೂ ಹೆಚ್ಚಲಿದೆ.  ಮುಂದಿನ ವರ್ಷ ಬಡವನ ಪಾಡು ಈ ವರ್ಷದ ದನಗಳ ಗೋಳಾಗಲಿದೆ. ಅಷ್ಟೊತ್ತಿಗೆ ರಾಜ್ಯದ ಜನತೆ ಈ ಎಲ್ಲಾ ವಿಷಯಗಳನ್ನು ಹೊರಗಿಟ್ಟು ಜಾತಿ-ಹಣದ ಆಧಾರದ ಮೇಲೆ ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಂಡಿರುತ್ತಾರೆ ಮತ್ತು ಹೊಸ ಸರ್ಕಾರ ಬಂದಿರುತ್ತದೆ. ಹೊಸ ವೈದ್ಯ  ಹಳೆಯ ಚಿಕಿತ್ಸೆ ಮುಂದುವರೆಸುತ್ತಾನೆ.

ನಿಸರ್ಗ ಮುನಿಯುವವರೆಗೂ ಇದು ಮುಂದುವರೆಯುತ್ತದೆ. ಆದರೆ, ಸಮುದಾಯವಾಗಿ ನಾವು ಏನಾದೆವು?

ಪ್ರಜಾ ಸಮರ – 3 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲರ ಹೋರಾಟದ ಕಥನವೆಂದರೆ, ಒಂದರ್ಥದಲ್ಲಿ ಇದು ಪರೋಕ್ಷವಾಗಿ, ಬಾಯಿಲ್ಲದವರಂತೆ ಅರಣ್ಯ ಮತ್ತು ಅದರ ಅಂಚಿನಲ್ಲಿ ಬದುಕುತ್ತಿರುವ ಬಡಕಟ್ಟು ಜನಾಂಗ ಮತ್ತು ಗಿರಿಜನರ ನೋವಿನ ಕಥನವೇ ಆಗಿದೆ. ಈವರೆಗೆ ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಮುಚ್ಚಿ ಹೋಗಿರುವ ಇವರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಗಿರಿಜನರನ್ನು ನಿರಂತರ ಶೋಷಿಸುವ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತು ವಂಚನೆಗೆ ಇಷ್ಟೊಂದು ಕರಾಳ ಮುಖಗಳು ಹಾಗೂ ಕೈಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.

ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ಜಮೀನ್ದಾರರು. ಹಣ ಲೇವಿದಾರರು, ಮರದ ವ್ಯಾಪಾರಿಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಬುಡಕಟ್ಟು ಜನಾಂಗ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಲು ತೆರಳಿ, ತಣ್ಣಗೆ ಹೊರಜಗತ್ತಿಗೆ ತಿಳಿಯದ ಹಾಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ವಿದ್ವಾಂಸರು, ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದಾರೆ. ಇವರಲ್ಲಿ ಹೊರ ಜಗತ್ತಿಗೆ ಭಾರತದ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಪರಿಚಯಿಸಿ, ಭಾರತದ ಗಿರಿಜನ ಪ್ರಪಂಚದ ಪಿತಾಮಹ ಎಂದು ಕರೆಸಿಕೊಳ್ಳುತ್ತಿರುವ ವೇರಿಯರ್ ಎಲ್ವನ್ ಎಂಬ ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಮುಂಚೂಣಿಯಲ್ಲಿದ್ದಾನೆ ಎಂದರೆ, ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಕಟು ವಾಸ್ತವದ ಸಂಗತಿ. ಗಿರಿಜನರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸಿದ ವೇರಿಯರ್ ಎಲ್ವಿನ್ ಎಂಬ ವಿದ್ವಾಂಸನ ವಂಚನೆಯ ಪ್ರಪಂಚವನ್ನು ಇಲ್ಲಿ ನಿಮ್ಮೆದುರು ದಾಖಲೆ ಸಹಿತ ಅನಾವರಣಗೊಳಿಸುತ್ತಿದ್ದೇನೆ.

1902 ರಲ್ಲಿ ಇಂಗ್ಲೆಂಡ್‌ನಲ್ಲಿ ಜನಸಿದ ವೇರಿಯರ್ ಎಲ್ವಿನ್ ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಅಲ್ಲಿಯೇ ಕೆಲ ಕಾಲ ಇಂಗ್ಲೀಷ್ ಉಪನ್ಯಾಸಕನಾಗಿದ್ದ. 1927ರಲ್ಲಿ ಪೂನಾ ಮೂಲದ ಮಿಷನರಿ ಸಂಸ್ಥೆಗೆ ಕ್ರೈಸ್ತ ಮಿಷನರಿಯಾಗಿ (ಪಾದ್ರಿ) ಬಂದ ಇವನಿಗೆ ಧರ್ಮ ಪ್ರಚಾರದ ಜೊತೆಗೆ ಮತಾಂತರ ಮಾಡುವ ಜವಾಬ್ದಾರಿಯನ್ನು ವಹಿಸಲಾಯಿತು. 1930-40 ರ ದಶಕದಲ್ಲಿ ಈಶಾನ್ಯ ಭಾರತ ಮತ್ತು ಮಧ್ಯ ಭಾರತದ ಅರಣ್ಯದ ನಡುವೆ ಇದ್ದ ಆದಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಸೇವೆ ನೀಡುವುದರ ಮೂಲಕ ಅವರ ಮನ ಪರಿವರ್ತಿಸಿ, ಕ್ರೈಸ್ತ ಸಮುದಾಯಕ್ಕೆ ಪರಿವರ್ತಿಸುವುದು ಅಂದಿನ ಮಿಷನರಿಗಳ ಗುಪ್ತ ಅಜೆಂಡವಾಗಿತ್ತು. ಈಶಾನ್ಯ ಭಾರತದ ಅಸ್ಸಾಂ, ನಾಗಾಲ್ಯಾಂಡ್. ಮಿಜೋರಾಂ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ಮಿಷನರಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಮಧ್ಯ ಹಾಗೂ ಪೂರ್ವ ಭಾರತದ, ಅಂದಿನ ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವನ್ನು ಪರಿವರ್ತಿಸುವಲ್ಲಿ ಮಿಷನರಿಗಳು ಕಿಂಚಿತ್ತೂ ಯಶಸ್ವಿಯಾಗಲಿಲ್ಲ. ಏಕೆಂದರೆ, ಈ ಪ್ರದೇಶದಲ್ಲಿ ಬದುಕಿದ್ದ ಐನೂರಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳು ತಮ್ಮದೇ ಆದ ನೆಲಮೂಲ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಚರಿಸಿಕೊಂಡು ಬಂದಿದ್ದವು. ಈ ಜನಾಂಗಳಲ್ಲಿ ಗೊಡ, ಕೋಯಾ, ಚೆಂಚೂ, ಕೊಂಡರೆಡ್ಡಿ, ಮರಿಯ, ಜನಾಂಗಗಳು ಪ್ರಮುಖವಾದವು.

1930 ರ ಸಮಯದಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಬಂದ ವೇರಿಯರ್ ಎಲ್ವಿನ್ ಮಿಷನರಿಯ ಪಾದ್ರಿ ವೃತ್ತಿಯನ್ನು ತೊರೆದು, ಭಾರತದ ಬುಡಕಟ್ಟು ಜನಾಂಗಗಳ ಬದುಕು, ಅವರ ನಂಬಿಕೆ, ಆಚಾರ, ವಿಚಾರಗಳ ಬಗ್ಗೆ ಆಸಕ್ತಿ ಬೆಳಸಿಕೊಂಡ. ಜೊತೆಗೆ ಗಾಂಧೀಜಿ ಮತ್ತು ಅವರ ಚಿಂತನೆಗಳಿಂದ ಕೂಡ ಪ್ರಭಾವಿತನಾಗಿದ್ದ. ಈ ಕಾರಣಕ್ಕಾಗಿ ಜಬಲ್‌ಪುರದ ಒಬ್ಬ ಆದಿವಾಸಿಯನ್ನು ಭಾಷಾಂತರಕ್ಕಾಗಿ ಸಹಾಯಕನನ್ನಾಗಿ ಮಾಡಿಕೊಂಡು, ಕ್ಯಾಮರಾ ಮತ್ತು ಟೈಪ್‌ರೈಟರ್ ಜೊತೆ ಆರಣ್ಯಕ್ಕೆ ಬಂದು ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದ. ಒಂದು ದಶಕದ ಕಾಲ ಆದಿವಾಸಿಗಳ ಜೊತೆ ವಾಸಿಸಿ, ಅವರ ಬದುಕನ್ನು ಅಧ್ಯಯನ ಮಾಡತೊಡಗಿದ. ಈ ಕುರಿತಂತೆ ಜಗತ್ತಿನ ಅನೇಕ ಪತ್ರಿಕೆಗಳಿಗೆ ಲೇಖನ ಬರೆಯತೊಡಗಿದ.

ಇದೇ ವೇಳೆ ಬ್ರಹ್ಮಚಾರಿಯಾಗಿದ್ದ ಎಲ್ವಿನ್, ಬುಡಕಟ್ಟು ಜನಾಂಗದ ವಿಶ್ವಾಸಗಳಿಸುವ ನಿಟ್ಟಿನಲ್ಲಿ 1940 ರ ಏಪ್ರಿಲ್ 4 ರಂದು ತನ್ನ 38 ನೇ ವಯಸ್ಸಿನಲ್ಲಿ ತನಗಿಂತ 25 ವರ್ಷ ಚಿಕ್ಕವಳಾದ 13 ವರ್ಷದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ನಾಯಕನೊಬ್ಬನ ಮಗಳಾದ ಕೋಶಿ ಎಂಬಾಕೆಯನ್ನು ಮದುವೆಯಾದ. ಮೊದಲು ಈ ಪ್ರಸ್ತಾಪಕ್ಕೆ ಆಕೆಯ ತಂದೆ ಪ್ರತಿರೋಧ ವ್ಯಕ್ತಪಡಿಸಿದರೂ ನಂತರ ಬಿಳಿಸಾಹೇಬನ ಜೊತೆ ಮಗಳು ಸುಖವಾಗಿರಲಿ ಎಂಬ ಆಸೆಯಿಂದ ಒಪ್ಪಿಗೆ ಸೂಚಿಸಿದ್ದ. ವಿವಾಹದ ನಂತರ ಬಸ್ತರ್ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ ಎಲ್ವಿನ್ ಆಕೆಯ ಜೊತೆ ವಾಸಿಸುತ್ತಾ, ಭಾರತದ ಬುಡಕಟ್ಟು ಜನಾಂಗಗಳು ಮತ್ತು ಅವರ ಸಂಸ್ಕೃತಿಯ ಬಗ್ಗೆ 1940 ರಿಂದ 1947ರ ನಡುವಿನ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿರಚಿಸಿ ಪ್ರಸಿದ್ಧನಾದ.  ಅಲ್ಲಿಯವರೆಗೂ ಹೊರಜಗತ್ತಿಗೆ ಗೊತ್ತಿರದ ಅನೇಕ ಬುಡಟ್ಟು ಜನಾಂಗಗಳ ಸಂಸ್ಕೃತಿಯನ್ನು, ಅವರ ಆಹಾರ, ಉಡುಪು, ವಿಚಾರ, ನಂಬಿಕೆ, ಆಚರಣೆ ಇವುಗಳನ್ನು ವಿವರವಾಗಿ ಶಿಸ್ತು ಬದ್ಧ ಅಧ್ಯಯನದ ಮೂಲಕ ಪರಿಚಯಿಸಿದ. ಇವನ ಆಸಕ್ತಿ ಅಂದಿನ ನಾಯಕರಾದ ನೆಹರೂರವರ ಗೆಳೆತನವನ್ನು ಸಂಪಾದಿಸಿಕೊಟ್ಟಿತು. ಜೊತೆಗೆ ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಕಾರಣ ಭಾರತದ ಬಹುತೇಕ ನಾಯಕರ ನೇರ ಪರಿಚಯ ಅವನಿಗಿತ್ತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ವೇರಿಯರ್ ಎಲ್ವಿನ್ ಭಾರತೀಯ ಪೌರತ್ವ ಸ್ವೀಕರಿಸಿದ. ಈತನ ಭಾರತದ ಪ್ರೀತಿಯನ್ನು ಗಮನಿಸಿದ ಪ್ರಧಾನಿಯಾದ ನೆಹರೂರವರು ವೇರಿಯರ್ ಎಲ್ವಿನ್‌ನನ್ನು ಈಶಾನ್ಯ ಮತ್ತು ಮಧ್ಯ ಹಾಗೂ ಪೂರ್ವ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಮಾರ್ಗದರ್ಶಿಯನ್ನಾಗಿ ನೇಮಕ ಮಾಡಿದರು.

ಹತ್ತು ವರ್ಷಗಳ ಕಾಲ ’ಗೊಂಡ’ ಜನಾಂಗದ ಹೆಣ್ಣು ಮಗಳು ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿದ ವೇರಿಯರ್ ಎಲ್ವಿನ್, ಅವಳಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದ. 1951ರಲ್ಲಿ ಪ್ರಧಾನಿ ನೆಹರೂರವರು ಈತನನ್ನು ಆಂಥ್ರಪಾಲಜಿಕಲ್ ಸರ್ವೆ ಆಫ್ ಇಂಡಿಯಾದ ಡೆಪ್ಯೂಟಿ ಡೈರಕ್ಟರ್ ಹುದ್ದೆಗೆ ನೇಮಕ ಮಾಡಿದಾಗ, ವೇರಿಯರ್ ಎಲ್ವಿನ್‌ನ ವಾಸ್ತವ್ಯ ಬಸ್ತರ್ ಅರಣ್ಯ ಪ್ರದೇಶದಿಂದ ಈಶಾನ್ಯ ಭಾಗದ ನಾಗಾಲ್ಯಾಂಡ್‌ಗೆ ಬದಲಾಯಿತು. ಈ ಸಂದರ್ಭದಲ್ಲಿ ಕೋಶಿಯನ್ನು ತೊರೆದು ತನ್ನ ಹಿರಿಯ ಮಗು ಜವಹರ್ ಸಿಂಗ್‌ನನ್ನು ಎತ್ತಿಕೊಂಡು ನಾಗಲ್ಯಾಂಡ್‌ನತ್ತ ಪಯಣ ಬೆಳಸಿದ. ನಂತರದ ದಿನಗಳಲ್ಲಿ ಎಲ್ವಿನ್ ಕೋಶಿಯತ್ತ ಮತ್ತೆ ತಿರುಗಿ ನೋಡಲಿಲ್ಲ. ಆಕೆ ಅವನ ಪಾಲಿಗೆ ಬಳಸಿ ಬಿಸಾಡಿದ ಬಟ್ಟೆಯಾಗಿದ್ದಳು. ಎಲ್ವಿನ್ ಆಕೆಯನ್ನು ತ್ಯೆಜಿಸಿದಾಗ ತುಂಬು ಗರ್ಭಿಣಿಯಾಗಿದ್ದ ಈ ಬುಡಕಟ್ಟು ಹೆಣ್ಣುಮಗಳು, ಅವನ ನಿರ್ಗಮನದ ನಂತರದ ಕೆಲವೇ ದಿನಗಳಲ್ಲಿ ಮತ್ತೊಂದು ಗಂಡುಮಗುವಿಗೆ ಜನ್ಮವಿತ್ತಳು.

ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿ, ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ, ನೆಹರೂ ಮುಂತಾದವರಿಗೆ ಆಕೆಯನ್ನು ಪತ್ನಿಯೆಂದು ಪರಿಚಯಿಸಿ, ಅವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡು. ನಂತರ ಏಕಾಏಕಿ ಅವಳನ್ನು ಬಿಟ್ಟು ಅನಾಥೆಯನ್ನಾಗಿ ಮಾಡಿ ಹೋದ ವೇರಿಯರ್ ಎಲ್ವಿನ್ ವಿರುದ್ಧ ಆತನಿಗೆ ಬಸ್ತರ್ ಅರಣ್ಯದಲ್ಲಿ ಸಹಾಯಕನಾಗಿ ದುಡಿದಿದ್ದ ಶ್ಯಾಮರಾವ್ ಹಿವಾಳೆ ಎಂಬಾತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ. ಇದರ ಪರಿಣಾಮ ಪ್ರತಿ ತಿಂಗಳು ಕೋಶಿಗೆ 25 ರೂಪಾಯಿ ಮಾಸಿಕ ಜೀವನಾಂಶ ದೊರೆಯುವಂತಾಯಿತು. ಆ ವೇಳೆಗಾಗಲೆ ನಾಗಾಲ್ಯಾಂಡ್‌ನಲ್ಲಿ ನಾಗಾ ಜನಾಂಗದ ಲೀಲಾ ಎಂಬಾಕೆಯನ್ನು ಎಲ್ವನ್ ಎರಡನೇ ವಿವಾಹವಾಗಿದ್ದ.

ಇತ್ತ ಮಧ್ಯಪ್ರದೇಶದ ಜಬಲ್‌ಪುರ್ ಪಟ್ಟಣದಲ್ಲಿ ತನ್ನ ಮಾಜಿ ಪತಿ ಎಲ್ವಿನ್ ನೀಡುತ್ತಿದ್ದ 25 ರೂಪಾಯಿ ಮಾಸಾಶನದಲ್ಲಿ ಬಾಡಿಗೆ ಕೊಂಠಡಿಯಲ್ಲಿ ಕಿರಿಯ ಮಗನ (ವಿಜಯ) ಜೀವನ ದೂಡುತ್ತಿದ್ದ ಕೋಶಿಗೆ 1964ರಲ್ಲಿ ವೇರಿಯರ್ ಎಲ್ವಿನ್ ನಿಧನಾನಂತರ ಮಾಸಾಶನ ನಿಂತು ಹೋಯಿತು. ಇದರಿಂದಾಗಿ ದಿಕ್ಕು ತೋಚದ ಕೋಶಿ ತನ್ನ ಮಗನ ಜೊತೆತನ್ನ ಊರಾದ ಅದೇ ಮಧ್ಯಪ್ರದೇಶದ ದಿಂಡೊರ ಜಿಲ್ಲೆಯ ರೈತ್ವಾರ್ ಎಂಬ ಹಳ್ಳಿಗೆ ಬಂದು ವಾಸಿಸತೊಡಗಿದಳು.

1964ರ ಪೆಬ್ರವರಿ ತಿಂಗಳಿನಲ್ಲಿ ಕಾರ್ಯನಿಮಿತ್ತ ದೆಹಲಿಗೆ ಬಂದಿದ್ದ ವೇರಿಯರ್‌ ಎಲ್ವಿನ್ ತನ್ನ 62ನೇ ವಯಸ್ಸಿನಲ್ಲಿ ಹೃದಯಾಘತದಿಂದ ತೀರಿಕೊಂಡ. ಆವೇಳೆಗೆ ಅವನು ಸಂಪಾದಿಸಿದ್ದ, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಕೊಲ್ಕತ್ತ ನಗರದ ಮನೆ ಮತ್ತು ನಾಗಾಲ್ಯಾಂಡ್‌ನಲ್ಲಿ ಇದ್ದ 60 ಎಕರೆ ಎಸ್ಟೇಟ್ ಎಲ್ಲವೂ ಎರಡನೇ ಪತ್ನಿ ಲೀಲಾಳ ಪಾಲಾದವು. ಎಲ್ವಿನ್ ಸಾಕಿ ಬೆಳಸಿದ್ದ ಹಿರಿಯ ಮಗ ಜವಹರ್ ಸಿಂಗ್ ಭಾರತೀಯ ಸೇನಾ ವಿಭಾಗದ ಅಸ್ಸಾಂ ರೈಫಲ್‌ನಲ್ಲಿ ಸೇವೆಯಲ್ಲಿದ್ದ, ಆದರೆ, ಮಿತಿ ಮೀರಿದ ಮಧ್ಯಪಾನದಿಂದ ಅತಿ ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ. 1964ರಲ್ಲಿ ವೇರಿಯರ್ ಎಲ್ವಿನ್ ಮರಣಾನಂತರ ಅವನ ಮಹತ್ತರ ಕೃತಿ “The tribal world of Verier Elwin” ಪ್ರಕಟವಾಯಿತು. (ಇದನ್ನು ನಮ್ಮ ಕನ್ನಡದ ಜಾನಪದ ತಜ್ಞ ಡಾ.ಹೆಚ್. ಎಲ್.ನಾಗೇಗೌಡ “ವೇರಿಯರ್ ಎಲ್ವಿನ್‌ನ ಗಿರಿಜನ ಪ್ರಪಂಚ” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.)

ಜಬಲ್‌ಪುರದಿಂದ 375 ಕಿಲೋಮೀಟರ್ ದೂರದ ದಿಂಡೋರ ಜಿಲ್ಲೆಯ ಅರಣ್ಯದ ನಡುವೆ ಇರುವ ರೈತ್ವಾರ್ ಎಂಬ ಹಳ್ಳಿಯಲ್ಲಿ ಮಗನ ಜೊತೆ ಇದ್ದ ಬುಡಕಟ್ಟು ಜನಾಂಗದ ಹೆಣ್ಣುಮಗಳು ಕೋಶಿ ಈಗ ಅಕ್ಷರಶಃ ಏಕಾಂಗಿ. ಚಿತ್ರಗಳಿಗೆ ಚೌಕಟ್ಟು (ಪೊಟೋ ಪ್ರೇಮ್) ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎರಡನೇ ಮಗ ವಿಜಯ್ ಕೂಡ ತನ್ನ ಪತ್ನಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಇತ್ತೀಚೆಗೆ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಸೊಸೆ ಮತ್ತು ಮೂವರು ಮೊಮಕ್ಕಳೊಂದಿಗೆ ಬದುಕುತ್ತಿರುವ ವೃದ್ಧೆ ಕೋಶಿಗೆ ಮಧ್ಯ ಪ್ರದೇಶ ಸರ್ಕಾರ ವಿಶೇಷವಾಗಿ ನೀಡುತ್ತಿರುವ 600 ರೊಪಾಯಿ ಮಾಸಾಶನವೇ ಜೀವನಕ್ಕೆ ಆಧಾರವಾಗಿದೆ. ಸೊಸೆ ಕೃಷಿ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಾಳೆ.

ವೇರಿಯರ್ ಎಲ್ವಿನ್ ಇಂದು ಜಗತ್ ಪ್ರಸಿದ್ಧ ಲೇಖಕನಾಗಿ, ಸಮಾಜ ಶಾಸ್ತ್ರಜ್ಞನಾಗಿ ಜಗತ್ತಿಗೆ ಪರಿಚಿತನಾಗಿದ್ದಾನೆ. ಅವನ ಎಪ್ಪತ್ತಕ್ಕೂ ಹೆಚ್ಚಿನ ಕೃತಿಗಳು ಈಗಲೂ ಪ್ರತಿಷ್ಟಿತ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸೇರಿದಂತೆ ಅನೇಕ ಪ್ರಕಾಶನ ಸಂಸ್ಥೆಗಳಿಂದ ಮರು ಮುದ್ರಣಗೊಳ್ಳುತ್ತಿವೆ. ಭಾರತವೂ ಸೇರಿದಂತೆ ಜಗತ್ತಿನ ನೂರಾರು ವಿ.ವಿ.ಗಳಲ್ಲಿ ಅವನ ಕೃತಿಗಳು ಸಮಾಜ ಶಾಸ್ತ್ರದ ಪಠ್ಯಗಳಾಗಿವೆ. ಇದರಿಂದ ಬರುವ ಗೌರವ ಧನ ಎರಡನೇ ಪತ್ನಿ ಲೀಲಾ ಕುಟುಂಬದ ಪಾಲಾಗುತ್ತಿದೆ.ಆದರೆ, ಹತ್ತು ವರ್ಷಗಳ ಕಾಲ ಅವನೊಂದಿಗೆ ಮೈ ಮತ್ತು ಮನಸ್ಸು ಹಂಚಿಕೊಂಡ ಆದಿವಾಸಿ ಹೆಣ್ಣುಮಗಳು, ಕೋಶಿ ಇಂದು ವೃದ್ಧೆಯಾಗಿ ಒಂದು ಹಿಡಿ ಅನ್ನಕ್ಕಾಗಿ ಸರ್ಕಾರ ನೀಡುವ ಹಣಕ್ಕಾಗಿ ಕಾಯುತ್ತಾ ಕೂತ್ತಿದ್ದಾಳೆ. ಅವಳ ಬಳಿ ಇರುವ ಆಸ್ತಿಯೆಂದರೆ, ವೇರಿಯರ್ ಎಲ್ವಿನ್ ನ ಒಂದು ಕಪ್ಪು ಬಿಳುಪಿನ ಭಾವಚಿತ್ರ ಮತ್ತು ಅವನ ಜೊತೆ ಸುತ್ತಾಡಿದ ನೆನಪುಗಳು ಮಾತ್ರ.

ವೇರಿಯರ್ ಎಲ್ವಿನ್ ತನ್ನ ಆತ್ಮ ಕಥನದಲ್ಲಿ ಕೇವಲ ಎರಡು ಸಾಲಿನಲ್ಲಿ, “ನಾನು ಹತ್ತು ವರ್ಷಗಳ ಕಾಲ ಬುಡಕಟ್ಟು ಜನಾಂಗದ ಒಬ್ಬ ಹೆಣ್ಣು ಮಗಳ ಜೊತೆ ಜೀವನ ನಡೆಸಿದ್ದೆ, ಅದು ವಿವರವಾಗಿ ಹೇಳಲಾಗದ ಅವ್ಯಕ್ತ ನೋವಿನ ಕಥೆ,” ಎಂದಷ್ಟೇ ದಾಖಲಿಸಿದ್ದಾನೆ. ಇತಿಹಾಸದ ಕಾಲಗರ್ಭದಲ್ಲಿ ಹೂತುಹೋಗುತ್ತಿದ್ದ ವೇರಿಯರ್ ಎಲ್ವಿನ್‌ನ ಈ ವಂಚನೆಯ ಪ್ರಪಂಚವನ್ನು ಜಗತ್ತಿಗೆ ಮೊದಲ ಬಾರಿಗೆ ತೆರೆದಿಟ್ಟವನು ರಮಣ್ ಕೃಪಾಳ್ ಎಂಬ ಜಬಲ್‌ಪುರ್ ಮೂಲದ ಪತ್ರಕರ್ತ. ಆನಂತರ 2008ರಲ್ಲಿ ಈ ಪತ್ರಕರ್ತನ ಲೇಖನವನ್ನು ಆಧರಿಸಿ, ಕೋಶಿಯನ್ನು ಸಂದರ್ಶನ ಮಾಡಿದ ಲಂಡನ್‌ನಿನ ಬಿ.ಬಿ.ಸಿ. ಚಾನಲ್ “British scholar’s Indian widow in penury” (ಬ್ರಿಟಿಷ್ ವಿದ್ವಾಂಸ ಮತ್ತು ಭಾರತದ ವಿಧವೆಯೊಬ್ಬಳ ಬಡತನ) ಎಂಬ ಹೆಸರಿನಲ್ಲಿ 30 ನಿಮಿಷದ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡಿತು.

ದುರಂತ ಮತ್ತು ನೋವಿನ ಸಂಗತಿಯೆಂದರೆ, ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದ್ದ ಬುಡಕಟ್ಟು ಜನಾಂಗದಿಂದ ಬಂದಿದ್ದ ಕೋಶಿ ಎಂಬ ಆ ಹೆಣ್ಣುಮಗಳಿಗೆ ಇದ್ದ ಬದ್ಧತೆ ವಿದ್ವಾಂಸ ಮತ್ತು ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಎನಿಸಿಕೊಂಡ ವೇರಿಯರ್ ಎಲ್ವಿನ್‌ಗೆ ಇರಲಿಲ್ಲ.

ತನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎಲ್ವಿನ್ ಕೋಶಿಯನ್ನು ಮುಂಬೈ ನಗರಕ್ಕೆ ಕರೆದೊಯ್ದಿದ್ದ. ಅಂದು ರಾತ್ರಿ ಆಕೆ ನೆಹರೂ ಜೊತೆ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಳು. ಗರ್ಭಿಣಿಯಾಗಿದ್ದ ಕೋಶಿಯನ್ನು ನೋಡಿ ಮಾತನಾಡಿಸಿದ ನೆಹರೂರವರು, ‘ಗಂಡು ಮಗುವಾದರೇ, ಏನು ಹೆಸರು ಇಡುತ್ತಿಯಾ?’ ಎಂದು ಕೇಳಿದ್ದರು, ಅದಕ್ಕೆ ಕೋಶಿ, ಗಂಡು ಮಗುವಾದರೆ ನಿಮ್ಮ ಹೆಸರು ಇಡುತ್ತೀನಿ ಎಂದು ಮುಗ್ಧವಾಗಿ ನಕ್ಕು ಹೇಳಿದ್ದಳು. ಅವಳ ಮಾತಿನಿಂದ ಖುಷಿಯಾದ ನೆಹರೂ ಆಕೆಗೆ ಸಾವಿರ ರೂಪಾಯಿಯ ಕೊಡುಗೆ ನೀಡಿದ್ದರು. ಆನಂತರ ಗಂಡು ಮಗುವಾದಾಗ ಕೋಶಿ ನೆಹರೂಗೆ ಕೊಟ್ಟ ಮಾತಿನಂತೆ ತನ್ನ ಮಗುವಿಗೆ ಜವಹರ ಸಿಂಗ್ ಎಂದು ನಾಮಕರಣ ಮಾಡಿದಳು. ಇಂತಹ ಬದ್ಧತೆ ಎಲ್ವಿನ್‌ಗೆ ಇದ್ದಿದ್ದರೆ, ಇಂದು ಕೋಶಿಯ ಬದುಕು ಈ ರೀತಿ ಬೀದಿಗೆ ಬೀಳುತ್ತಿರಲಿಲ್ಲ.

(ಮುಂದುವರಿಯುವುದು)

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ಫಲಿತಾಂಶದ ಘೋಷಣೆ ಕುರಿತು…

ಸ್ನೇಹಿತರೆ,

ವರ್ತಮಾನ.ಕಾಮ್ ನಡೆಸುತ್ತಿರುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012” ಕ್ಕೆ ಕತೆಗಳನ್ನು ಕಳುಹಿಸಲು ಆಗಸ್ಟ್ 31 ಕೊನೆಯ ದಿನವಾಗಿತ್ತು. ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕತೆಗಳು ಬಂದಿದ್ದವು. ಕನ್ನಡದ ಖ್ಯಾತ ಕತೆಗಾರರೊಬ್ಬರನ್ನು ಮೌಲ್ಯಮಾಪನ ಮಾಡಲು ಕೋರಿಕೊಂಡು, ಬಂದಿದ್ದ ಕತೆಗಳಲ್ಲಿ ನಾವು ಸೂಚಿಸಿದ್ದ  ನಿಬಂಧನೆಗಳ ಪರಿಧಿಯೊಳಗಿದ್ದ ಎಲ್ಲಾ ಕತೆಗಳನ್ನು ಅವರಿಗೆ ಕಳುಹಿಸಲಾಗಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ ಮೌಲ್ಯಮಾಪನದ ಕೆಲಸ ಮುಗಿದಿದೆ. ಹಾಗಾಗಿ, ಅಕ್ಟೋಬರ್ ಎರಡರ ಗಾಂಧಿ ಜಯಂತಿಯಂದೇ ಫಲಿತಾಂಶವನ್ನು “ವರ್ತಮಾನ”ದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಕಳುಹಿಸಿರುವವರು ದಯವಿಟ್ಟು ಗಮನಿಸತಕ್ಕದ್ದು. ಫಲಿತಾಂಶದ ನಂತರ ವಿಜೇತ ಕತೆಗಾರರನ್ನು ವೈಯಕ್ತಿವಾಗಿ ಸಂಪರ್ಕಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಸಿರಿಗೆರೆ ಮಠ : ಕಣ್ಣೀರ ಸಾಗರದೊಳಗೆ ಕಂಡ ಒಂದಷ್ಟು ‘ಭಿನ್ನ’ಕಲ್ಲುಗಳು

– ಜಿ.ಮಹಂತೇಶ್

ಸೆಪ್ಟೆಂಬರ್ 24, 2012. ಈ ದಿನ, ಕರ್ನಾಟಕದ “ಧಾರ್ಮಿಕ” ಲೋಕದಲ್ಲಿ ನಿಜಕ್ಕೂ ಅಚ್ಚಳಿಯದೆ ಉಳಿಯುವ ದಿನ. ‘ಸಿರಿಗೆರೆ’ಯಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಸಾಮ್ರಾಜ್ಯದಲ್ಲಿ (ಬೇಕಾದರೇ ಸಾಧು ಲಿಂಗಾಯತ ಸಾಮ್ರಾಜ್ಯ ಎಂದು ಓದಿಕೊಳ್ಳಬಹುದು) ಅನಭಿಷಿಕ್ತ ದೊರೆ ತರಹ ವಿಜೃಂಭಿಸುತ್ತಿರುವ ಸಾಧು ಸದ್ಧರ್ಮ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಇದ್ದಕ್ಕಿದ್ದಂತೆ ಪೀಠದಿಂದ ಕೆಳಗಿಳಿಯಲು ಕೈಗೊಂಡ ನಿರ್ಧಾರವನ್ನು ತುಂಬಿದ ಸಭೆಯಲ್ಲಿ ಹೇಳುತ್ತಿದ್ದಂತೆ ಸಿರಿಗೆರೆ ಭಕ್ತ ಸಾಗರ, ಕಣ್ಣೀರಿನಲ್ಲಿ ಕೈ ತೊಳೆದು ಬಿಟ್ಟಿತು. ಭಕ್ತ ಸಾಗರಕ್ಕೆ ಹರಿದು ಬಂದ ಕಣ್ಣೀರಿನ ನದಿಗೆ ಡಾ.ಯಡ್ಡಿಯೂರಪ್ಪನವರ ಕಣ್ಣಾಲಿಗಳಿಂದಲೂ ಕಣ್ಣೀರು ಹರಿದಿದ್ದು ಇಲ್ಲಿ ವಿಶೇಷ.

ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ರವಿಶಂಕರ್ ಗುರೂಜಿ ಅವರ ರೀತಿ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿ. ವಿದೇಶಗಳಲ್ಲೂ ಸಿರಿಗೆರೆ ಮಠಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಇತರೆ ಕೋಮಿನ ಸ್ವಾಮೀಜಿಗಳಿಗಿಂತ ತುಂಬಾ ಭಿನ್ನ.

ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಧಾರ್ಮಿಕ ಕ್ಷೇತ್ರದಲ್ಲಿ ಇದ್ದ ಆಸಕ್ತಿಗಿಂತ, ಹೆಚ್ಚು ಆಸಕ್ತಿ ಇದ್ದಿದ್ದು ರಾಜಕೀಯದಲ್ಲೇ. ಅವರ ಕಾರ್ಯ ವೈಖರಿಯನ್ನ ನೋಡಿದರೆ ಇದು ಅರ್ಥ ಆಗಬಹುದೇನೋ. ಚಿತ್ರದುರ್ಗ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು ಸೇರಿ ರಾಜ್ಯದ ವಿವಿಧೆಡೆ ನೆಲೆಗೊಂಡಿರುವ ಸಾಧು ಲಿಂಗಾಯತ ಕೋಮಿಗೆ ಸೇರಿರುವ ರಾಜಕಾರಣಿಗಳು, ಶ್ರೀಗಳು ಹಾಕುವ ಗೆರೆಯನ್ನ ದಾಟಲು ಹಿಂದೇಟು ಹಾಕುತ್ತಾರೆ.

ಕಾಂಗ್ರೆಸ್, ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸಾಧು ಲಿಂಗಾಯತ ಕೋಮಿಗೆ ಸೇರಿರುವ ರಾಜಕಾರಣಿಗಳ ಪಾಲಿಗೆ ಸಿರಿಗೆರೆ ಮಠ ಎಂಬುದು ಒಂದು ರೀತಿಯ ಹೈಕಮಾಂಡ್ ಇದ್ದ ಹಾಗೆ. ಅಂದ ಹಾಗೇ, ಇದೇನು ಗುಟ್ಟಿನ ವಿಚಾರವೂ ಅಲ್ಲ. ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್ ಸಿಗಬೇಕೆಂದರೇ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಕೃಪೆ ಇರಲೇಬೇಕು.

ಸಾಧು ಲಿಂಗಾಯತ ಕೋಮಿಗೆ ಸೇರಿರುವ ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ಮತ್ತು ರಾಜಕೀಯದಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂದು ಕಣ್ಣಲ್ಲೇ ಇಶಾರೆ ತೋರುವಷ್ಟರ ಮಟ್ಟಿಗೆ ಪ್ರಭಾವ, ವರ್ಚಸ್ಸನ್ನು ಇವತ್ತಿಗೂ ಉಳಿಸಿಕೊಂಡಿರುವುದು ಇವರ ವಿಶೇಷ.

ಒಮ್ಮೆ ಹೀಗಾಯಿತು, ಬಹುಶಃ ತರಳಬಾಳು ಹುಣ್ಣಿಮೆ ಮಹೋತ್ಸವ ಇರಬೇಕು ಎಂದೆನಿಸುತ್ತದೆ. ವೇದಿಕೆ ಮೇಲೆ ಯಡಿಯೂರಪ್ಪ ಆಸೀನರಾಗಿದ್ದರು.( ಅಂದು ಅವರು ಮುಖ್ಯಮಂತ್ರಿ) ಅದೇ ಸಾಲಿನಲ್ಲಿ ‘ಘನತೆ’ವೆತ್ತ ರೇಣುಕಾಚಾರ್ಯರೂ ಇದ್ದರು. ತಮ್ಮನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಪದೇ ಪದೇ ಬೆಂಬಲಿಗರ ಮೂಲಕ ಒತ್ತಡ ತರುವ ಮೂಲಕ ಖುದ್ದು ಯಡಿಯೂರಪ್ಪನವರನ್ನೇ ಮುಜುಗರಕ್ಕೆ ಸಿಲುಕಿಸಿದ್ದರು.ಸಿ.ಎಂ. ಕುರ್ಚಿಯಲ್ಲೇ ಶಾಶ್ವತವಾಗಿ ಕೂರಬೇಕು ಎಂದು ಸ್ವಯಂ ನಿರ್ಧಾರ ಮಾಡಿಕೊಂಡಿದ್ದ ಯಡಿಯೂರಪ್ಪನವರಿಗೆಆಗುತ್ತಿದ್ದ ಭಿನ್ನಮತದ ಮುಜುಗರ ತಪ್ಪಿಸಬೇಕು ಎಂದು ಸಿರಿಗೆರೆ ಶ್ರೀಗಳಿಗೆ ಅನಿಸಿತೋ ಏನೋ… ಸಾವಿರಾರು ಭಕ್ತರು ನೆರೆದಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲೇ ರೇಣುಕಾಚಾರ್ಯರಿಗೆ ತೋರು ಬೆರಳಿನ ಮೂಲಕ ಗದರಿಸಿ, ಸುಮ್ಮನಾಗಿಸಿದ್ದರು. ಅಷ್ಟೇ ಅಲ್ಲ, ಮರು ಮಾತಾಡಡೆ ಯಡಿಯೂರಪ್ಪನವರ ವಿರುದ್ಧ ದನಿ ಎತ್ತದೇ ಸಹಕರಿಸಿಕೊಂಡು ಹೋಗಬೇಕು ಎಂದು ಹೇಳಿದ್ದರೆನ್ನಲಾದ ಮಾತುಗಳು ಸೂಚನೆ ತರಹ ಕೇಳಿಸಿದ್ದು ಮಾತ್ರ ಸುಳ್ಳಲ್ಲ. ಆ ಸೂಚನೆ ಜೊತೆಗೆ ಮತ್ತಿನ್ನೇನು ಸೂಚನೆಗಳು ಬಂದವೋ, ರೇಣುಕಾಚಾರ್ಯ ಮಠಾಧೀಶರ ಪಕ್ಕದಲ್ಲಿದ್ದ ಯಡಿಯೂರಪ್ಪನವರ ಕಾಲಿಗೂ ನಮಸ್ಕರಿಸಿದ್ದರು. ಶ್ರೀಗಳ ಈ ವರ್ತನೆ ಏನನ್ನ ತೋರಿಸುತ್ತದೆ ಅಂದರೇ, ಆಡಳಿತರೂಢ ಸರ್ಕಾರದ ಮೇಲೆ ಅವರಿಗಿರುವ ಪ್ರಭಾವ, ಪರೋಕ್ಷ ಹಿಡಿತ.

ಇನ್ನೂ ಒಂದು ನಿದರ್ಶನ ಇದೆ. ಕೃಷಿ, ತೋಟಗಾರಿಕೆ, ಸಕ್ಕರೆ ಖಾತೆ ಹೊಂದಿದ್ದ ಎಸ್.ಎ.ರವೀಂದ್ರನಾಥ್ (ಇವರ ಮೇಲೆ ಕಟು ಜಾತಿವಾದಿ ಎನ್ನುವ ಆರೋಪವೂ ಇದೆ) ಅವರು ಇಲಾಖೆಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೇನೂ ಕೆಲಸ ಮಾಡದಿದ್ದರೂ ಅವರನ್ನೇ ಸಂಪುಟದಲ್ಲಿ ಇವತ್ತಿಗೂ ಮುಂದುವರಿದಿದ್ದರೇ ಅದರ ಹಿಂದೆ ಇರುವುದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಭಯ ಹಸ್ತವೇ ಕಾರಣ. ಈ ನಗ್ನ ಸತ್ಯ ಇಡೀ ದಾವಣಗೆರೆ ಜಿಲ್ಲೆಗೇ ಗೊತ್ತಿದೆ.

ಸಿರಿಗೆರೆ ಮಠದ ನಿಷ್ಠಾವಂತ ಭಕ್ತರಾಗಿರುವ ಎಸ್.ಎ. ರವೀಂದ್ರನಾಥ್ರ ಬಗ್ಗೆ ಯಡಿಯೂರಪ್ಪನವರು ಎಲ್ಲಿಯೂ ತುಟಿ ಬಿಚ್ಚಿಲ್ಲ. ಭಿನ್ನಮತ ಸ್ಫೋಟಗೊಂಡ ಸಂದರ್ಭದಲ್ಲಿ ಯಡಿಯೂರಪ್ಪನವರ ಪರ ರವೀಂದ್ರನಾಥರು ನಿಲ್ಲದೇ ಯಡಿಯೂರಪ್ಪನವರ ವಿರೋಧಿ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದರೂ ಸಿರಿಗೆರೆ ಶ್ರೀಗಳ ಕೋಪಕ್ಕೆ ಗುರಿಯಾಗಬಾರದೆಂದು ಅವರ ಕುರ್ಚಿ ಅಲುಗಾಡಿಸಲಿಲ್ಲ ಎನ್ನುವುದು ಇಲ್ಲಿ ವಿಶೇಷ.

ಇನ್ನು, ಸಿರಿಗೆರೆ ಶ್ರೀಗಳ ಹಿಡಿತ ಕೇವಲ ಯಡಿಯೂರಪ್ಪನವರ ಮೇಲಷ್ಟೇ ಅಲ್ಲ. ಈ ಹಿಂದೆ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮೇಲೂ ಇತ್ತು. ಆ ಸಂದರ್ಭದಲ್ಲಿ ಪ್ರದರ್ಶನವಾಗಿದ್ದು ಸಿರಿಗೆರೆ ಶ್ರೀಗಳ ದಾರ್ಷ್ಟ್ಯ. ಸರ್ಕಾರದಿಂದ ಅನುದಾನ ತೆಗೆದುಕೊಳ್ಳುತ್ತಿದ್ದ ಎಲ್ಲಾ ಶಾಲೆಗಳು, ಸರ್ಕಾರಕ್ಕೆ ಲೆಕ್ಕ ಕೊಡಬೇಕು ಎಂದು ಅಂದಿನ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಅವರು ಹೇಳುವ ಮೂಲಕ ಮಠಗಳ ವಲಯದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಇದು, ಸಿರಿಗೆರೆ ಮಠ ಸೇರಿದಂತೆ ಎಲ್ಲಾ ಮಠ ಮಾನ್ಯಗಳ ಅಡಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಿತ್ತು.

ಎಚ್.ವಿಶ್ವನಾಥ್ ಅವರು ಆಡಿದ್ದ ಈ ಮಾತಿನ ಹಿಂದಿನ ಅರ್ಥವನ್ನ ಸಿರಿಗೆರೆ ಶ್ರೀಗಳು ಸರಿಯಾಗಿ ಗ್ರಹಿಸಲಿಲ್ಲ ಎಂದೆನಿಸುತ್ತದೆ. ಮಠದ ಲೆಕ್ಕ ಕೇಳುವಷ್ಟು ದಾರ್ಷ್ಟ್ಯ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಭಾವಿಸಿಯೇ ಕೆಂಡಾಮಂಡಲವಾಗಿಬಿಟ್ಟರು. ಆಗ, ಎಸ್.ಎಂ.ಕೃಷ್ಣ ಅವರು ಶಿಕ್ಷಣ ಖಾತೆಯಿಂದಲೇ ವಿಶ್ವನಾಥ್‌ಗೆ ಕೊಕ್ ಕೊಟ್ಟು ಸಹಕಾರ ಖಾತೆ ಕೊಟ್ಟಿದ್ದನ್ನ ಬಹುಶಃ ಯಾರೂ ಮರೆತಿರಲಾರರು. ಇದೆಲ್ಲ ಏನನ್ನು ತೋರಿಸುತ್ತದೆಂದರೆ, ಮಠಗಳನ್ನು ಯಾವ ಪ್ರಭುತ್ವವೂ ಪ್ರಶ್ನಿಸಬಾರದು ಎಂದು. ಜತೆಗೇ, ವಿಶ್ವನಾಥ್ ಅವರು ಹಿಂದುಳಿದ ಕೋಮಿಗೆ ಸೇರಿದವರು ಎನ್ನುವ ಕಾರಣಕ್ಕೂ ಇರಬೇಕೇನೋ….?

ಯಾಕೆಂದರೆ, ಯಡಿಯೂರಪ್ಪನವರು ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಗಳ ಮಸಿ ಮೆತ್ತಿಕೊಂಡಿದ್ದರೂ ಎಂದಿಗೂ ಆ ಬಗ್ಗೆ ಸಿಟ್ಟಿನಿಂದ ಮಾತನಾಡಿದ್ದಾಗಲಿ, ಕೆಂಡಾಮಂಡಲವಾಗಿದ್ದಾಗಲಿ ಇಲ್ಲಿಯವರೆಗೂ ಕಾಣಿಸಿಲ್ಲ.  ಇದೇ ಸಂದರ್ಭದಲ್ಲಿ ಇನ್ನೂ ಒಂದು ಮಾತಿದೆ.ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಇದೆ ಎಂಬುದು ಗೊತ್ತಿಲ್ಲ. ಆದರೆ ಈ ಮಾತು ದಾವಣಗೆರೆ ಜಿಲ್ಲೆಯಲ್ಲಿ ಇವತ್ತಿಗೂ ಜನಜನಿತ. ಅದೇನೆಂದರೆ, ಯಡಿಯೂರಪ್ಪನವರು ಗಳಿಸಿರುವ ಅಪಾರ ಪ್ರಮಾಣದ ದುಡ್ಡನ್ನ ಸಿರಿಗೆರೆ ಮಠದಲ್ಲಿ ಇಟ್ಟಿದ್ದಾರಂತೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ದೇವೇಗೌಡರು ಹೇಗೆ ಆದಿಚುಂಚನಗಿರಿ ಮಠದಲ್ಲಿ ದುಡ್ಡು ಇಟ್ಟಿದ್ದರು ಎಂಬ ಮಾತು ಕೇಳಿ ಬರುತ್ತಿತ್ತೋ ಅದೇ ರೀತಿ, ಯಡಿಯೂರಪ್ಪನವರು ಮತ್ತು ಸಿರಿಗೆರೆ ಮಠದ ಸಂದರ್ಭದಲ್ಲೂ ಕೇಳಿ ಬಂದಿದೆ. ಮೊದಲೇ ಹೇಳಿದಂತೆ ಇದು ಸತ್ಯವೊ ಸುಳ್ಳೊ ಗೊತ್ತಿಲ್ಲ. ಜನರಾಡಿಕೊಳ್ಳುವ ಮಾತು.

ಹಾಗೇಯೇ, ದಾವಣಗೆರೆ ಮಟ್ಟಿಗೆ ಒಂದು ರೀತಿಯ ಚೈನಾ ಗೋಡೆ ಥರ ಇರುವ ಡಾ.ಶಾಮನೂರು ಶಿವಶಂಕರಪ್ಪನವರ ಮೇಲೂ ಸಿರಿಗೆರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ. ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ನೆಲೆ ನಿಲ್ಲಲು ಅವಕಾಶ ಕೊಡದೇ, ಶಿವಶಂಕರಪ್ಪನವರು ಬಾಪೂಜಿ ಶಿಕ್ಷಣ ಸಂಸ್ಥೆ ಎಂಬ ಬಹುದೊಡ್ಡ ಆಲದ ಮರವನ್ನ ಎದ್ದು ನಿಲ್ಲಿಸಿದ್ದಾರೆಂದರೇ ಅದರ ಹಿಂದೆ ಸಿರಿಗೆರೆ ಶ್ರೀಗಳ ದೊಡ್ಡ ಮಟ್ಟದ ಆಶೀರ್ವಾದ ಇಲ್ಲ ಎಂದು ಹೇಳಲಾಗದು. ಹೀಗೆ ಪ್ರಭಾವಿ, ಹಣಕಾಸಿನ ಸಾಮರ್ಥ್ಯ ಹೊಂದಿರುವ ರಾಜಕಾರಣಿಗಳನ್ನ ಪೋಷಣೆ ಮಾಡುತ್ತಿದ್ದಾರೆ ಎಂದರೆ ಅದು ಅತಿಶಯೋಕ್ತಿ ಆಗಲಾರದು.

ಇಡೀ ನಾಡಿಗೆ ಗೊತ್ತಿದೆ, ಜಾತಿ ಪದ್ಧತಿ ವಿರುದ್ಧ ಪ್ರಬಲವಾಗಿ ಸಿಡಿದೆದ್ದವನು ಬಸವಣ್ಣ ಎಂದು. ಆದರೆ, ಬಸವಣ್ಣನ ವಚನಗಳ ಕಟ್ಟು ಕಟ್ಟುಗಳನ್ನೇ ಹೊಂದಿರುವ ಸಿರಿಗೆರೆ ಮಠ, ಜಾತಿ ಪದ್ಧತಿ ವಿರುದ್ಧ ಪರಿಣಾಮಕಾರಿಯಾಗಿ ಪ್ರತಿಭಟಿಸಲಿಲ್ಲ. ಬದಲಿಗೆ ಸ್ವಜಾತಿ, ಅಂದರೆ ಸಾಧು ಲಿಂಗಾಯತ ಪ್ರಜ್ಞೆಯನ್ನ ಸದ್ದಿಲ್ಲದೇ ಜಾಗೃತಗೊಳಿಸುತ್ತ ಹೋದದ್ದು. ಇದನ್ನು ಕಣ್ಣಾರೆ ಕಾಣಬೇಕೇಂದರೆ ಮತ್ತೆ ನೀವು ದಾವಣಗೆರೆಗೆ ಹೋಗಬೇಕು. ಸಾಧು ಲಿಂಗಾಯತ ಕೋಮಿಗೆ ಸೇರಿರುವ ಪ್ರತಿಯೊಬ್ಬರ ಮನೆ, ಬಹುತೇಕ ವಾಣಿಜ್ಯ ಮಳಿಗೆ ಹಾಗೂ ವಾಹನಗಳ ಮೇಲೆ ಕಂಗೊಳಿಸುವುದು ‘ಶಿವ’ ಎನ್ನುವ ದೊಡ್ಡ ಅಕ್ಷರಗಳು. ಇಲ್ಲಿ ಶಿವ ಎಂದರೇ ಯಾರು ಎಂದು ಮತ್ತೆ ಬಿಡಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂದೆನಿಸುತ್ತದೆ.

ಯಾವಾಗ ‘ಶಿವ’ ಎನ್ನುವ ಅಕ್ಷರಗಳು ಕಂಗೊಳಿಸಿದವೋ ಆಗ ಅದಕ್ಕೆದುರಾಗಿ ಒಂದು ರೀತಿಯಲ್ಲಿ ಸೆಡ್ಡು ಹೊಡೆದಿದ್ದು ‘ಕನಕ’ ಎನ್ನುವ (ಕನಕದಾಸ) ಅಕ್ಷರಗಳು. ಸಮಾಜದಲ್ಲಿ ಜಾತಿ ಪ್ರಜ್ಞೆಯನ್ನ ಹೋಗಲಾಡಿಸಬೇಕಿದ್ದ ಮಠಗಳೇ ಜಾತಿ ಪ್ರಜ್ಞೆಯನ್ನ ಜಾಗೃತಗೊಳಿಸಿದ್ದು ನಿಜಕ್ಕೂ ದುರಂತ ಅಲ್ಲದೇ ಮತ್ತೇನು? ಅಣ್ಣ ಬಸವಣ್ಣನವರ ಆಶಯಗಳಿಗೆ ಪೂರಕವಾಗಿ ಮಠ ನಡೆದಿದ್ದೇ ಆಗಿದ್ದಿದ್ದರೇ ನಿಜಕ್ಕೂ ಇವತ್ತು ಕ್ರಾಂತಿ ಆಗುತ್ತಿತ್ತೇನೋ? ಆದರೆ…

ಸಾಧು ಲಿಂಗಾಯತ ಕೋಮಿನ ಜಾತಿ ಪ್ರಜ್ಞೆ ಹೇಗೆ ಗಟ್ಟಿಯಾಗಿತ್ತು ಎಂದರೆ, ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನ ಸಾಧು ಲಿಂಗಾಯತ ಕೋಮಿಗೆ ಕೊಡಬೇಕು ಎಂಬ ಬೇಡಿಕೆ ಮಂಡಿಸುವಷ್ಟರ ಮಟ್ಟಿಗೆ. ಈ ಬೇಡಿಕೆ ವಿರುದ್ಧ ಪ್ರವರ್ಗ 2ಎ ಯಲ್ಲಿ ಸಿಂಹಪಾಲು ಪಡೆಯುತ್ತಿರುವ ಕುರುಬ ಸಮುದಾಯ ಪ್ರತಿಭಟಿಸಿತು. ಈ ಪ್ರತಿಭಟನೆ ಎಂಬುದು ಎರಡು ಸಮುದಾಯಗಳ ಮಧ್ಯೆ ಜಾತಿ ವೈಷಮ್ಯದ ಬೆಂಕಿ ಕುಲುಮೆಗೆ ಮತ್ತಷ್ಟು ತುಪ್ಪ ಸುರಿದಿತ್ತು. ಈ ಬಗ್ಗೆ ಎಲ್ಲಿಯೂ ಸರ್ಕಾರ ಅಧಿಕೃತವಾಗಿ ಘೋಷಿಸದಿದ್ದರೂ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಸಾಧು ಲಿಂಗಾಯತ ಕೋಮಿಗೆ ಸೇರಿರುವ ಕೆಲವರಿಗೆ ಪ್ರ ವರ್ಗ 2 ಎ ಪ್ರಮಾಣ ಪತ್ರವನ್ನ ಸ್ಥಳೀಯ ತಹಶೀಲ್ದಾರ್ ನೀಡಿ ಮತ್ತಷ್ಟು ವಿವಾದ ಸೃಷ್ಟಿಸಿದ್ದರು. ಇದೆಲ್ಲದರ ಹಿಂದೆ ಅಗೋಚರವಾಗಿ ಕೆಲಸ ಮಾಡಿದ್ದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳೇ.

ಇದೆಲ್ಲದರ ಜೊತೆಗೆ ಇನ್ನೊಂದು ಸಿರಿಗೆರೆಯ “ಜನತಾ ನ್ಯಾಯಾಲಯ”. ಪ್ರಜಾಪ್ರಭುತ್ವದಲ್ಲಿ ಪರ್ಯಾಯ ನ್ಯಾಯಾಲಯಗಳಿಗೆ, ಖಾಜಿ ಪಂಚಾಯಿತಿಗಳಿಗೆ, ಸ್ವಘೋಷಿತ (self-appointed) ನ್ಯಾಯಾಧೀಶರಿಗೆ ಸ್ಥಳವಿರಬಾರದು.  ಆದರೆ, ಸಿರಿಗೆರೆಯ ಮಠಾದೀಶರು ತಮ್ಮ ಕೋರ್ಟ್‌ಗೆ ಬರುವ ವ್ಯಾಜ್ಯಗಳನ್ನು ವಿಚಾರಣೆ ಮಾಡಿ “ನ್ಯಾಯತೀರ್ಮಾನ”ವನ್ನೂ ಕೊಡುತ್ತಾರೆ. ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಧಿಕ್ಕರಿಸುವ ಪಕ್ಕಾ ಫ್ಯೂಡಲ್ ವ್ಯವಸ್ಥೆ.

ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ ಇವೆಲ್ಲ ನೆನಪಾಯಿತು. ಬಸವಣ್ಣನ ಆಶಯಗಳ ಬೆಳಕಿನಲ್ಲಿ ಸಿರಿಗೆರೆ ಮಠವನ್ನು ಮತ್ತು ಅದರ ಮುಖ್ಯಸ್ಥರನ್ನು ನೋಡಲು ಬಯಸಿದ್ದೇ ಈ ಲೇಖನಕ್ಕೆ ಕಾರಣ.