ಗಾಂಧೀಜಿಯ ಪ್ರತಿಬಿಂಬಗಳು : ಜಾರ್ಜ್ ಆರ್ವೆಲ್

ಮೂಲ : ಜಾರ್ಜ್ ಆರ್ವೆಲ್
ಅನುವಾದ : ಬಿ.ಶ್ರೀಪಾದ ಭಟ್

(1949ರಲ್ಲಿ, ಗಾಂಧಿ ತೀರಿಕೊಂಡ ನಂತರದ ದಿನಗಳಲ್ಲಿ ಬರೆದ ಲೇಖನ.)

ದೋಷಿಯೆಂದು ತೀರ್ಮಾನವಾಗುವವರೆಗೂ ಪ್ರವಾದಿಗಳನ್ನು ಮುಗ್ಧರೆಂದೇ ಪರಿಗಣಿಸಲಾಗುತ್ತದೆ. ಆದರೆ ಇದಕ್ಕಾಗಿ ಸಾಮಾನ್ಯ ಜನರು ಒಳಪಡುವ ಅಗ್ನಿಪರೀಕ್ಷೆ ಈ ಪ್ರವಾದಿಗಳಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಾಂಧಿಯ ವಿಷಯದಲ್ಲಿ ನನ್ನ ಕೆಲವು ಪ್ರಶ್ನೆಗಳು:

ಆಧ್ಯಾತ್ಮದ ಚಿಂತನೆಗಳನ್ನು ಮೈಗೂಡಿಸಿಕೊಂಡು ತನ್ನನ್ನು ತಾನು ಬೆತ್ತಲೆ ಫಕೀರ ಹಾಗೂ ವಿನಯಶೀಲನೆಂದು ಅತ್ಯಂತ ಎಚ್ಚರಿಕೆಯ ಸ್ಥಿತಿಯಲ್ಲಿ ಕರೆದುಕೊಳ್ಳುತ್ತಲೇ ಒಂದು ದೊಡ್ಡ ಸಾಮ್ರಾಜ್ಯವನ್ನು ಅಲ್ಲಾಡಿಸಿದ ಗಾಂಧಿಯ ಈ ಕ್ರಾಂತಿಯಲ್ಲಿ ಒಣಹೆಮ್ಮೆಯ ಬಂಡಾಯದ ಪಾಲೆಷ್ಟು? ಅಥವಾ ಇದೆಲ್ಲ ಮಾಯೆಯೇ?

ಈ ಸ್ವಾತಂತ್ರ್ಯ ಹೋರಾಟವನ್ನು ತೀವ್ರವಾಗಿ ಹುಟ್ಟುಹಾಕುವ ಕಾಲಘಟ್ಟದಲ್ಲಿನ ಈ ಸಂದರ್ಭದಲ್ಲಿ ರಾಜಕೀಯವನ್ನು ನೇರವಾಗಿ ಪ್ರವೇಶಿಸುವ ಭರದಲ್ಲಿ ಗಾಂಧಿಯು ತನ್ನ ಸಿದ್ಧಾಂತಗಳೊಂದಿಗೆ ಎಷ್ಟರಮಟ್ಟಿಗೆ ರಾಜಿ ಮಾಡಿಕೊಂಡರು? ಇದರಲ್ಲಿ ಬಲಪ್ರಯೋಗದ ಮನಸ್ಸು ಮತ್ತು ಕುಟಿಲತಂತ್ರದ ಯೋಜನೆಗಳು ಎಷ್ಟರಮಟ್ಟಿಗೆ ಒಂದಕ್ಕೊಂದು ಬೆಸೆದುಕೊಂಡಿವೆ?

ಇದಕ್ಕೆಲ್ಲ ಉತ್ತರಕ್ಕಾಗಿ ನಾವು ಗಾಂಧಿಯ ವ್ಯಕ್ತಿತ್ವ ಹಾಗೂ ಈ ವ್ಯಕ್ತಿತ್ವವನ್ನು ಆಧರಿಸಿದ ಅವರ ಸಾರ್ವಜನಿಕ ನಡವಳಿಕೆಗಳು ಮತ್ತು ಇವೆರಡನ್ನು ಬೆಸೆದಂತಹ ಅವರ ಬರವಣಿಗೆಗಳನ್ನು ಅತ್ಯಂತ ಆಳವಾಗಿ ಅಭ್ಯಾಸ ಮಾಡಲೇಬೇಕಾಗುತ್ತದೆ. ಬಹುಶ ಇದಕ್ಕೆ ಉತ್ತರ 20ರ ದಶಕದಲ್ಲಿ ಬರೆದ ಗಾಂಧಿಯ ಅಪೂರ್ಣ ಆತ್ಮಚರಿತ್ರೆಯಲ್ಲಿ ದೊರಕಬಹುದೇನೊ. ಏಕೆಂದರೆ ತನ್ನ ಸ್ವಭಾವದಿಂದ ಹಾಗೂ ಪ್ರತಿಭೆಯಿಂದ  ಬಲು ದೊಡ್ಡ ಉದ್ಯಮಿಯಾಗಿಯೋ, ವಕೀಲರಾಗಿಯೋ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗುವ ಅವಕಾಶಗಳಿದ್ದ ಗಾಂಧಿಯು ಅದು ಹೇಗೆ ಈ ಪ್ರವಾದಿತನಕ್ಕೆ ಸಿಲುಕಿಕೊಂಡರು, ಯಾವ ಘಟ್ಟದಲ್ಲಿ ತನ್ನ ಜೀವನವನ್ನು ಹೆಚ್ಚು ಕಡಿಮೆ ಒಂದು ತೀರ್ಥಯಾತ್ರೆಯ ಮಾದರಿಗೆ ರೂಪಿಸಿಕೊಂಡರು ಎನ್ನುವುದನ್ನು ಸಹ ಅಭ್ಯಸಿಸಬೇಕಾಗುತ್ತದೆ.

20ರ ದಶಕದಲ್ಲಿ ಗಾಂಧಿಯವರಿಗಿದ್ದ ಚರಕದಿಂದ ನೇಯ್ದ ಬಟ್ಟೆಗಳ ಕುರಿತಾದ ಕುರುಡು ವ್ಯಾಮೋಹ, ಪವಿತ್ರ ಶಕ್ತಿಗಳ ಕುರಿತು ಅಪಾರವಾಗಿ ನಂಬಿಕೆ, ಸಸ್ಯಹಾರಿ ಆಹಾರ ಪದ್ಧತಿಯ ಕುರಿತಾಗಿ ಅತಿಯಾದ ಪ್ರಚಾರ ಅಷ್ಟಾಗಿ ನನ್ನನ್ನು ಸೆಳೆದಿರಲಿಲ್ಲ. ಹಸಿವಿನಿಂದ ಬಳಲುತ್ತಿದ್ದ, ದಿನೇ ದಿನೇ ಜನಸಂಖ್ಯೆಯ ಹೆಚ್ಚಳದಿಂದ ನಲಗುತ್ತಿದ್ದ ಇಂಡಿಯಾದ ಜನತೆಗೆ ಗಾಂಧಿ ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೂ ಪ್ರತಿಪಾದಿಸುವ ಮಧ್ಯಕಾಲೀನ ಘಟ್ಟದ ಆಹಾರ ಪದ್ಧತಿಗಳು ಎಂದಿಗೂ ಉತ್ತರವಾಗಿರಲಿಲ್ಲ. ಈ ಮೇಲ್ವರ್ಗದ ಶ್ರೀಮಂತರಿಗೆ ತಮ್ಮ ಅಪಾರ ಸಂಪತ್ತನ್ನು ಅವಕಾಶ ಸಿಕ್ಕರೆ ದೇಶದ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಹಂಚಿಬಿಡುತ್ತೇವೆ ಎನ್ನುವ ಸಿದ್ಧಾಂತದ ಸಮಾಜವಾದಿಗಳು ಮತ್ತು ಕಮ್ಯುನಿಷ್ಟರಿಗಿಂತ ಪ್ರತಿಯೊಂದು ಅಪರಾಧಕ್ಕೂ ಮತ್ತು ಅನೈತಿಕತೆಗೆ ಶಿಕ್ಷೆಯ ರೂಪವಾಗಿ ಕ್ಷಮೆಯನ್ನು ಮತ್ತು ಪ್ರಾಯಶ್ಚಿತ್ತವನ್ನು ಮಾತ್ರ  ಪ್ರತಿಪಾದಿಸುತ್ತಿದ್ದ ಗಾಂಧಿಯನ್ನು ಇಂಡಿಯಾದ ಶ್ರೀಮಂತರು ಓಲೈಸುತ್ತಿದ್ದರು.

ಗಾಂಧಿಯವರ ‘ಮೋಸಗಾರರು ಕಡೆಗೆ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ’ ಎನ್ನುವ ಸರಳೀಕೃತ ಗ್ರಹಿಕೆ ಯಾವುದೇ ದೂರಗಾಮಿ ಪರಿಣಾಮಗಳನ್ನು, ಸಂಚಲನಗಳನ್ನು ಉಂಟುಮಾಡದಿರುವುದಕ್ಕಾಗಿ ಗಾಂಧೀಯ ಈ ತತ್ವಗಳು ಈ ಮೇಲ್ವರ್ಗಕ್ಕೆ ಅಪ್ಯಾಯಮಾನವಾಗಿದ್ದು. ಆದರೆ ಬ್ರಿಟಿಷರು ಸಹ ಗಾಂಧಿಯವರ ಸಮ್ಮೋಹನಕ್ಕೆ ಒಳಗಾಗಿದ್ದುದನ್ನು ನಾವು  ಅಲ್ಲಗೆಳೆಯುವಂತಿಲ್ಲ. ಇದಕ್ಕೆ ಗಾಂಧೀಯವರು ತಮ್ಮ ಇಡೀ ಜೀವನದಲ್ಲಿ ಯಾವ ಸಂದರ್ಭದಲ್ಲಿಯೂ ಭ್ರಷ್ಟರಾಗಿರಲಿಲ್ಲ ಎನ್ನುವ ಮುಖ್ಯವಾದ ವ್ಯಕ್ತಿತ್ವ ಹಾಗೂ ಸರಳೀಕೃತಗೊಂಡರೂ ವಿಕೃತಗೊಳ್ಳದ ಅವರ ಚಿಂತನೆಗಳು ಬ್ರಿಟಿಷರಿಗೆ ಅವರ ಕುರಿತಾಗಿ ಮೆಚ್ಚುಗೆಯ ಭಾವನೆಯನ್ನು ಹುಟ್ಟಿಹಾಕಿದ್ದವು. ವೈಯಕ್ತಿಕ ಜೀವನದಲ್ಲಿ ಪ್ರತಿಯೊಂದು ನಡೆಗೂ, ಪ್ರತಿಯೊಂದು ನಿರ್ಧಾರಗಳಿಗೂ ಮೇಲ್ಮಟ್ಟದ, ನೈತಿಕತೆಯ ಗೆರೆಯನ್ನು ಎಳೆದುಕೊಳ್ಳುತ್ತಿದ್ದ ಗಾಂಧಿಯ ವ್ಯಕ್ತಿತ್ವ ಹಾಗೂ ಅವರ ಈ ಶ್ರೇಷ್ಠವೆನ್ನಬಹುದಾದ ಆದರ್ಶ ಅವರ ಶತ್ರುಗಳನ್ನು ಸಹ ಮೀರಿ ದೇಶಾದ್ಯಾಂತ ವ್ಯಾಪಿಸಿಕೊಳ್ಳುತ್ತಿತ್ತು.

ಇದು ಗಾಂಧಿಯ ಸಾವಿನಲ್ಲಿ ನಿಚ್ಛಳವಾಗಿ ಗೋಚರಿಸುತ್ತದೆ. ಬ್ರಿಟಿಷರಿಗೆ ತಮ್ಮ ಹಿಪೋಕ್ರಸಿ ಹೇಗೆ ಅವರ ಸಾಧನವಾಗಿತ್ತೋ ಗಾಂಧಿಯವರಿಗೆ ಮೇಲೆ ಉದಾಹರಿಸಿದ ಆದರ್ಶವೇ ಬಲು ದೊಡ್ಡ ಸಾಧನವಾಗಿತ್ತು. ತನ್ನ ಹರೆಯದಲ್ಲಿ ದಕ್ಷಿಣ ಅಫ್ರಿಕಾದಲ್ಲಿ ತನ್ನ ಕಪ್ಪು ವರ್ಣದ ಕಾರಣಕ್ಕಾಗಿ ಜನಾಂಗೀಯ ತಿರಸ್ಕಾರಕ್ಕೆ ಗುರಿಯಾಗಬೇಕಾಗಿ ಬಂದದ್ದು ಗಾಂಧಿಯಲ್ಲಿ ಕೀಳರಿಮೆಯನ್ನು ಮೂಡಿಸುವುದರ ಬದಲಾಗಿ ವಿಸ್ಮಯಗೊಳಿಸಿತ್ತು. ಪ್ರತಿಯೊಂದು ಅವಹೇಳನಗಳಿಗೆ, ಹಲ್ಲೆಗಳಿಗೆ ವಿಸ್ಮಯಗೊಳ್ಳುವ ತಮ್ಮೊಳಗಿನ ಈ ವಿಶಿಷ್ಟ ಗುಣದಿಂದಾಗಿ ಗಾಂಧಿಯು ತನ್ನ ಪೀಚಲು ದೇಹವನ್ನೇ ಬಂಡವಾಳ ಮಾಡಿಕೊಂಡು ದಕ್ಷಿಣ ಆಫ್ರಿಕಾದಲ್ಲಿ ಈ ಜನಾಂಗ ನಿಂದನೆ ಮತ್ತು ವರ್ಣದ್ವೇಷದ ವಿರುದ್ಧ ಯಶಸ್ವೀ ಹೋರಾಟವನ್ನು ಹುಟ್ಟು ಹಾಕಿದರು. ಅಲ್ಲಿ ಇವರು ತಮ್ಮ ಹೋರಾಟಕ್ಕೆ ಯುರೋಪಿಯನ್ ಸ್ನೇಹಿತರ ಬೆಂಬಲವನ್ನು ಸಹ ಗಳಿಸಿದ್ದರೆ ಇದಕ್ಕೆ ಮೂಲಭೂತ ಕಾರಣ ಗಾಂಧಿಯವರ ಸಮಾಜದ ಎಲ್ಲ ಸ್ತರದ ಜನರನ್ನು ಒಳಗೊಳ್ಳುವ ಪ್ರಕ್ರಿಯೆ.

ಪತ್ರಿಕೆಯೊಂದರ ಧಾರವಾಹಿಯಾಗಿ ಬರೆಯಲ್ಪಟ್ಟ ಅವರ ಆತ್ಮಕಥೆಯು ಸಾಹಿತ್ಯಕವಾಗಿ ಯಾವುದೇ ವಿಶಿಷ್ಟತೆಯನ್ನು, ಶ್ರೇಷ್ಠತೆಯನ್ನು, ಅದ್ಭುತವೆನ್ನಬಹುದಾದ ನುಡಿಕಟ್ಟುಗಳನ್ನು ಒಳಗೊಳದಿದ್ದರೂ ಅದರ ಸರಳತೆಯೇ ಬಲು ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು. ಅವರ ಬಾಲ್ಯವು ಎಲ್ಲರಂತೆ ಸಹಜವಾಗಿತ್ತು, ಯೌವನದಲ್ಲಿ ಸಾಮಾನ್ಯ ಜನರಂತೆಯೇ ಅವರ ಆಸೆಗಳಿದ್ದವು. ತಮ್ಮ ಬಾಲ್ಯಕಾಲ ಹಾಗೂ ಯೌವನದ ದಿನಗಳಲ್ಲಿ ಕೆಲವು ಪಾಪಗಳನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಘಟನೆಗಳಾದ ಸಿಗರೇಟು ಸೇದಿದ್ದು, ಮಾಂಸ ಸೇವಿಸಿದ್ದು, ಕೆಲವು ನಾಣ್ಯವನ್ನು ಕಳ್ಳತನ ಮಾಡಿದ್ದು, ವೇಶ್ಯಾವಾಟಿಕೆಗೆ ಹೋಗಿ ಏನನ್ನು ಮಾಡದೇ ಹಿಂತಿರುಗಿದ್ದು, ಇತ್ಯಾದಿ ಘಟನೆಗಳು ಅಂತಹ ಬಲು ದೊಡ್ಡ ತಪ್ಪುಗಳೇನಲ್ಲ. ಆದರೆ ಮುಂದೆ ತನ್ನ ಪಾಪನಿವೇದನೆಯ ಸಂದರ್ಭದಲ್ಲಿ ಈ ಸಣ್ಣ ಘಟನೆಗಳನ್ನೇ ದೊಡ್ಡ ದೋಷಗಳನ್ನಾಗಿ ಪರಿವರ್ತಿಸಿ ಆ ಪಾಪನಿವೇದನೆಯ ಸಂದರ್ಭವನ್ನು ಔನ್ಯತೀಕರಿಸಿದ್ದು ಗಾಂಧಿಯ ಚಾಣಾಕ್ಷತೆಯನ್ನು ತೋರುತ್ತದೆ. ಅವರು ತಮ್ಮನ್ನು ನಾನೂ ನಿಮ್ಮಂತೆ ಸಣ್ಣವನೇ ಎನ್ನುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಿವುದರ ಹಿಂದೆ ಮಧ್ಯಮ ವರ್ಗದ ವ್ಯಾಪಾರ ಮನೋಭಾವದ ನಡಾವಳಿಯಿದೆ. ತಮ್ಮ ಈ ಚಕಿತಗೊಳಿಸುವ, ಪ್ರಾಮಾಣಿಕವಾದ ವ್ಯಕ್ತಿತ್ವದ ಮೂಲಕ ಗಾಂಧಿಯು ಪ್ರತಿಪಾದಿಸಿದ ಸರಳತೆ ಎಲ್ಲಿಯೂ ಕಳಂಕಿತಗೊಂಡಿರಲಿಲ್ಲ. ಇದರ ಪಾವಿತ್ರ್ಯತೆಯ ಪ್ರಭಾವ ಎಷ್ಟಿತ್ತೆಂದರೆ ಇದು ಅವರ ಶತೃಗಳನ್ನು ಸಹ ತಲೆದೂಗಿಸುವಷ್ಟು.

ಗಾಂಧಿಯನ್ನು ಪಶ್ಚಿಮದ ಎಡಪಂಥೀಯ ಚಳವಳಿಯ ಬೆಂಬಲಗಾರನನ್ನಾಗಿ ಬಳಸಿಕೊಳ್ಳುತ್ತಿರುವುದು ಇವರ ನಿಧನದ ನಂತರದ ವರ್ಷಗಳಲ್ಲಿ ಒಂದು ಫ್ಯಾಷನ್ ಆಗಿ ಬೆಳೆದಿದೆ. ಅರಾಜಕತಾವಾದಿಗಳೂ ಮತ್ತು ಶಾಂತಿವಾದಿಗಳು ಗಾಂಧಿಯನ್ನು ತಮ್ಮ ಚಿಂತನೆಯ ಆಸ್ತಿ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಗಾಂಧಿಯ ಸತ್ಯಾಗ್ರಹ ನೀತಿಯ ಪಾಲೆಷ್ಟು, ಪ್ರಭುತ್ವದ ಹಿಂಸೆಯನ್ನು ಕಟುವಾಗಿ ವಿರೋಧಿಸಿದ್ದರ ಪಾಲೆಷ್ಟು ಎಂದು ಹೇಳುವುದು ಕಷ್ಟ. ಏಕೆಂದರೆ ದೇವರ ಆಸ್ತಿತ್ವವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಈ ಜಗತ್ತಿನ ಕೊಳ್ಳುಬಾಕುತನದ ಆಕರ್ಷಣೆಯನ್ನು ಮೀರುವುದಕ್ಕಿಂತಲೂ ಅದಕ್ಕೆ ಹೊಂದಿಕೊಂಡು ಬದುಕಬೇಕು ಎಂದು ಆಧ್ಯಾತ್ಮದ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಪಾದಿಸಿದ್ದು ನಿಜಕ್ಕೂ ಕುತೂಹಲಕರ. ಈ ಜೀವನ ಶೈಲಿಯಲ್ಲಿ ಬದುಕುವ ವ್ಯಕ್ತಿಯ ಪ್ರತಿಯೊಂದು ನಡುವಳಿಕೆಯೂ, ವ್ಯವಹಾರವೂ ಪರೀಕ್ಷೆಗೆ, ನಿದರ್ಶನಕ್ಕೆ ಒಳಪಡುತ್ತದೆ ಎನ್ನುವಂತಹ ಚೌಕಟ್ಟನ್ನು ಹಾಕಿರುವುದರಿಂದಲೇ ಗಾಂಧಿ ತತ್ವ ಯಶಸ್ಸನ್ನು ಸಾಧಿಸಿತೆನ್ನಬಹುದೇನೋ. ಹತ್ತಿರದ ಬಾಂಧವ್ಯಗಳನ್ನು, ಸಂಬಂಧಗಳನ್ನು ಇಟ್ಟುಕೊಳ್ಳುವುದನ್ನು ಗಾಂಧಿ ತೀವ್ರವಾಗಿ ವಿರೋಧಿಸುತ್ತಿದ್ದರು. ಏಕೆಂದರೆ ಈ ಖಾಸಗೀ ಗೆಳೆತನವು ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಮೌಲ್ಯಗಳನ್ನು ನಿರ್ಧರಿಸುವುದಕ್ಕೆ ತೊಡರುಗಾಲಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಗಾಂಧಿಯವರ ಈ ಮಾದರಿ ಚಿಂತನೆಗಳ ಮಹತ್ವ ಬಹು ಬೆಲೆಯುಳ್ಳದ್ದು ಎಂದು ನನ್ನ ಅನಿಸಿಕೆ. ಏಕೆಂದರೆ ಮೇಲಿನ ಸಂದರ್ಭಗಳು ಮನುಷ್ಯನನ್ನು ಅಸಹಾಯಕತೆಗೆ ದೂಡುತ್ತದೆ, ತದನಂತರ ಈ ಅಸಹಾಯಕತೆಯೇ ಸಮಾಜದಲ್ಲಿ ಅಶಾಂತತೆಯನ್ನು ಹುಟ್ಟುಹಾಕುತ್ತದೆ ಎನ್ನುವುದು ಸರ್ವಕಾಲಿಕ ಸತ್ಯ. ಪರಿಪೂರ್ಣತೆಯನ್ನು ಬಯಸದಿರುವುದೇ ಮನುಷ್ಯತ್ವದ ಘನತೆ. ಏಕೆಂದರೆ ಈ ಪರಿಪೂರ್ಣತೆಯ ನಿಷ್ಠೆಗಾಗಿ ಮನುಷ್ಯ ತಪ್ಪುಗಳನ್ನು ಮಾಡಲೂ ಹಿಂದುಮುಂದು ನೋಡಲಾರ. ಈ ವೈರಾಗ್ಯದ ಅಂತಿಮ ಘಟ್ಟಕ್ಕೆ ತಲಪುವ ಹುಚ್ಚಿನಲ್ಲಿ ಮಾನವ ಸಂಬಂಧಗಳಿಗೇ ಕುತ್ತು ಉಂಟಾಗುತ್ತದೆ. ನಿಜ, ಹೆಂಡ, ತಂಬಾಕು ಮುಂತಾದವುಗಳು ಪ್ರವಾದಿಯೊಬ್ಬನು ದೂರವಿಡಬೇಕಾದಂತಹ ವಸ್ತುಗಳೇ, ಆದರೆ ಮನುಷ್ಯನು ಸಂತತನವನ್ನು ಸಹ ದೂರವಿಡಲೇಬೇಕಾಗುತ್ತದೆ. ಅಂದರೆ ಸಾಮಾನ್ಯ ಮನುಷ್ಯನ ಬದುಕು ಸೋತ ಸಂತನ ಜೀವನವೇ. ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ ಯಾರಾದರೂ ಸಂತನ ಶ್ರೇಷ್ಠತೆಯನ್ನು ತಲುಪಿದರೆ ಆ ವ್ಯಕ್ತಿ ಮನುಷ್ಯತ್ವದ ತುಡಿತವನ್ನು ಕಡೆದುಕೊಳ್ಳುತ್ತಾನೆ. ಅಥವಾ ಇದು ಸಹ ಪೂರ್ಣ ಸತ್ಯವಿರಲಾರದು. ಅಥವಾ ಪ್ರತಿಯೊಬ್ಬನೂ ದೇವರು ಮತ್ತು ಮನುಷ್ಯನ ನಡುವೆ ಆಯ್ಕೆ ಮಾಡಿಕೊಳ್ಳಬೇಕು, ಪ್ರಗತಿಪರ ಲಿಬರಲ್ ಮತ್ತು ಅರಾಜಕತಾವಾದಿಯ ನಡುವಿನ ಆಯ್ಕೆ ಮಾಡಿಕೊಳ್ಳಬೇಕು.

ಗಾಂಧಿಯ ಆಧ್ಯಾತ್ಮವೂ ಸಹ ಒಣ ಬೌದ್ಧಿಕ ಕಸರತ್ತಾಗಿರದೆ ಅದು ರಾಜಕೀಯ ಫಲಿತಾಂಶಗಳನ್ನು ಪಡೆಯಲು ಒಂದು ತಂತ್ರ ಮತ್ತು ಪದ್ಧತಿ ಕೂಡ ಆಗಿತ್ತು. ದ್ವೇಷವನ್ನು, ತಿರಸ್ಕಾರವನ್ನು ಹುಟ್ಟಿಹಾಕದೆ ನಿಶ್ಚಿತ ಫಲಿತಾಂಶಗಳನ್ನು ಪಡೆಯಲು ಗಾಂಧಿ ಬಳಸಿದ ಸತ್ಯಾಗ್ರಹವೆನ್ನುವ ಆಯುಧ ಸತ್ಯದಲ್ಲಿ ಅಪಾರ ನಂಬುಗೆ ಎನ್ನುವ ತತ್ವದ ಅಡಿಯಲ್ಲಿ ರೂಪಿತಗೊಂಡಿತ್ತು. ಇದಕ್ಕಾಗಿ ಹರತಾಳಗಳನ್ನು, ರಸ್ತೆ ತಡೆ, ರೈಲು ರೋಖೋ ಚಳವಳಿಗಳನ್ನು ಹಮ್ಮಿಕೊಳ್ಳುವುದು, ಉಪವಾಸ ಮುಷ್ಕರಗಳನ್ನು ನಡೆಸುವುದು ಎಲ್ಲವೂ ಸತ್ಯದ ಪ್ರತಿಪಾದನೆಗಳು ಮತ್ತು ನ್ಯಾಯಗಳಿಸುವ ಹಂಬಲದ ಮಾರ್ಗಗಳು ಎಂದು ಗಾಂಧಿ ನಂಬಿದ್ದರು ಅಥವಾ ಭಾರತವನ್ನು ಹಾಗೆ ನಂಬಿಸಿದ್ದರು. ಏಕೆಂದರೆ ಗಾಂಧಿಗೆ ನಿಷ್ಕ್ರಿಯ ಪ್ರತಿಭಟನೆಯಲ್ಲಿ ಕಿಂಚಿತ್ತೂ ವಿಶ್ವಾಸವಿರಲಿಲ್ಲ. ಅದರೆ ವಿಪರ್ಯಾಸವೆಂದರೆ 1869ರಲ್ಲಿ ಜನಿಸಿದ ಗಾಂಧಿಯು ಏಕಚಕ್ರಾಧಿಪತ್ಯದ ಸ್ವರೂಪವನ್ನು ಅದರ ಸಮಗ್ರ ಪ್ರಭಾವ ವಲಯವನ್ನು ಅರ್ಥ ಮಾಡಿಕೊಂಡಿರಲಿಲ್ಲ. ಗಾಂಧಿಗೆ ತನ್ನ ಸತ್ಯಾಗ್ರಹವನ್ನು ಬಳಸಿಕೊಂಡು ಜಗತ್ತನ್ನು ಎಚ್ಚರಗೊಳಿಸಲು ಹೋರಾಡುತ್ತಿದ್ದೇನೆ ಎಂಬ ಮುಗ್ಧ ನಂಬುಗೆಯಿತ್ತು. ಆದರೆ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿಯ ಯಶಸ್ಸು ಅನುಮಾನಾಸ್ಪದವೇ. ಏಕೆಂದರೆ ಆಕ್ರಮಿತ ದೇಶದ ವಿರುದ್ಧದ ಹೋರಾಟಕ್ಕೂ ತಮ್ಮದೇ ಸರ್ಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಉದಾಹರಣೆಗೆ ರಷ್ಯಾದಲ್ಲಿ ಗಾಂಧಿಯ ಸತ್ಯಾಗ್ರಹ ಮಾದರಿ ಯಶಸ್ಸನ್ನುಗಳಿಸುವುದು ಬಲು ಕಷ್ಟ. ಏಕೆಂದರೆ ಕೃತಜ್ಞತೆ ಎನ್ನುವುದು ಸಹ ಅಂತರಾಷ್ಟ್ರೀಯ ರಾಜಕೀಯದ ಲಕ್ಷಣಗಳಲ್ಲೊಂದು.

ಮೇಲಿನ ಪ್ರಶ್ನೆಗಳು ನಿರಂತರ ಚರ್ಚೆಗೊಳಬೇಕಾಗಿದೆ. ಏಕೆಂದರೆ ನಾಗರಿಕ ಸಮಾಜವು ಮತ್ತೊಂದು ಯುದ್ಧವನ್ನು, ಹಿಂಸೆಯನ್ನು ತಾಳಿಕೊಳ್ಳಲಾರದು. ಹಾಗೆಯೇ ಇದಕ್ಕೆ ಅಹಿಂಸೆಯೊಂದೇ ಪರಿಹಾರಮಾರ್ಗವೆನ್ನುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಗಾಂಧಿಯವರು ಆಧುನಿಕತೆಯ ಅನೇಕ ಪ್ರಶ್ನೆಗಳನ್ನು, ಸಂಧಿಗ್ಧತೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಟೀಕಿಸುವುದಕ್ಕಿಂಲೂ ತನಗೆ ಹೊಳೆದ, ತಾನು ನಂಬಿದ ಸತ್ಯವನ್ನು ಪ್ರಾಮಾಣಿಕವಾಗಿ ಬಹಿರಂಗವಾಗಿ ಬರೆಯಲು, ಸಾರ್ವಜನಿಕವಾಗಿ ಚರ್ಚಿಸಲು ಗಾಂಧಿ ಎಂದೂ ಹಿಂಜರಿಯುತ್ತಿರಲಿಲ್ಲ ಎನ್ನುವುದೇ ಹೆಚ್ಚು ಸಮಂಜಸ. ನಾನು ವೈಯುಕ್ತಿಕವಾಗಿ ಗಾಂಧಿಯವರ ಚಿಂತನೆಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡದಿದ್ದರೂ ಒಬ್ಬ ರಾಜಕೀಯ ಚಿಂತಕನಾಗಿ ಗಾಂಧಿಯು ಯಶಸ್ವಿಯಾಗಿದ್ದಾರೆ ಎಂದೇ ನನ್ನ ಅನಿಸಿಕೆ. ಗಾಂಧಿಯವರು ಹತ್ಯೆಗೀಡಾದಾಗ ಅವರ ಅಪಾರ ಅಭಿಮಾನಿಗಳು ಶೋಕತಪ್ತರಾಗಿ ತಮ್ಮ ಪ್ರೀತಿಯ ನಾಯಕನು ತಾನೇ ನಾಯಕತ್ವ ವಹಿಸಿಕೊಂಡು ಹೋರಾಟ ನಡೆಸಿ ಪಡೆದ ಸ್ವಾತಂತ್ರ್ಯವು ಜನಾಂಗೀಯ ಘರ್ಷಣೆಗೆ ಬಲಿಯಾಗಿದ್ದಕ್ಕೆ ದುಂಖಿಸುತ್ತಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವ ಉದ್ದೇಶದ ಜೊತೆಜೊತೆಗೆ ಹಿಂದೂಮುಸ್ಲಿಂರ ನಡುವಿನ ಸೌಹಾರ್ದವೂ ಗಾಂಧಿಯವರಿಗೆ ಪ್ರಮುಖ ಆದ್ಯತೆಯಾಗಿತ್ತು. ತಮ್ಮ ಅಹಿಂಸಾತ್ಮಕ ಹೋರಾಟವನ್ನು ದ್ವೇಷಕ್ಕೆ ಹೊರಳಲು ಗಾಂಧಿಯವರು ಎಲ್ಲಿಯೂ ಅವಕಾಶ ನೀಡಲಿಲ್ಲ. ಆದರೆ ಅವರ ಜೀವಿತ ಕಾಲದಲ್ಲೇ ಭಾರತವು ಎಂದೂ ಕಂಡರಿಯದ ಕೋಮುಗಲಭೆಗಳಿಗೆ ತುತ್ತಾಗಿದ್ದಕ್ಕೆ ಅದು ಯಾರ ಸೋಲು ಎನ್ನುವ ಪ್ರಶ್ನೆಗೆ ಮುಂದಿನ ವರ್ಷಗಳಲ್ಲಿ ಉತ್ತರ ದೊರೆಯಬಹುದು. ಆದರೆ ಅವರ ರಾಜಕೀಯ ಹೋರಾಟವು ಎಂದಿಗೂ ನಂಜನ್ನು ಹೊಂದಿರಲಿಲ್ಲ. ಇಂಡಿಯಾ ದೇಶವು ಗಾಂಧಿಗೆ ಸಂತನ ಪಟ್ಟವನ್ನು ಕೊಟ್ಟರೂ ಸ್ವತಃ ಗಾಂಧಿ ಎಂದೂ ಸಂತನ ಗುಣಗಳನ್ನು ತಮಗೆ ಅರೋಪಿಸಿಕೊಂಡಿರಲಿಲ್ಲ. ನಮ್ಮ ಕಾಲಘಟ್ಟದ ಇತರ ಸಮಾಕಾಲೀನ ರಾಜಕೀಯ ನಾಯಕರುಗಳ ಜೀವನ ವೃತ್ತಾಂತವನ್ನು ಅಧ್ಯಯನ ಮಾಡಿದಾಗ ಗಾಂಧಿ ನಮ್ಮ ನಡುವೆ ಬಿಟ್ಟು ಹೋದ ಮಧುರ, ಸ್ವಚ್ಛ ಸುವಾಸನೆಯನ್ನು ಎಂದಿಗೂ ಮರೆಯಲಾಗದು.

Leave a Reply

Your email address will not be published. Required fields are marked *