Monthly Archives: December 2013

ಮಂಗಳೂರಿನಲ್ಲಿ “ಜನನುಡಿ” ಸಮಾವೇಶ ಆರಂಭ

ಎರಡು ದಿನಗಳ “ಜನನುಡಿ” ವಿಚಾರ ಸಂಕಿರಣ ಡಾ.ಎಚ್.ಎಸ್. ಅನುಪಮ ಅವರ ಆಶಯ ಮಾತುಗಳೊಂದಿಗೆ ಕೆಲ ಹೊತ್ತಿಗೆ ಮೊದಲು ಆರಂಭವಾಯಿತು. ಅವರ ಮಾತುಗಳ ಕೆಲ ತುಣುಕುಗಳು ಇಲ್ಲಿವೆ:

  • ಬಂಡವಾಳಶಾಹಿಯ ಮೂಲಗುಣ ತನ್ನ ಇಡುಗಂಟನ್ನು ಕಾಪಿಟ್ಟುಕೊಳ್ಳುವುದು. ಇಡುಗಂಟನ್ನು ಕಾಯ್ದುಕೊಳ್ಳಲು ಯಾವುದೇ ರಾಜಿಗೂabhimata-page5 ಸಿದ್ಧವಾಗುವುದು ಅದರ ಚಾಳಿ. ಇಂದು ಅದೇ ಬಂಡವಾಳಶಾಹಿ ಸಾಹಿತ್ಯ ಕ್ಷೇತ್ರಕ್ಕೂ ಪ್ರವೇಶಿಸಿರುವುದು ಅಪಾಯಕಾರಿ. ಅರಸ, ದೇವರು ಮತ್ತು ದಾನಿಗಳ ದೃಷ್ಟಿ ಸಾಹಿತ್ಯ ಕ್ಷೇತ್ರದ ಮೇಲೆ ಬೀಳಬಾರದು. ಅಂತಹ ಬೆಳವಣಿಗೆಗಳನ್ನು ವಿರೋಧಿಸುವ ಚಾರಿತ್ರಿಕ ಕಾರಣಕ್ಕಾಗಿ ಸಮಾನ ಮನಸ್ಕ ಸಂಘಟನೆಗಳೆಲ್ಲ ಒಟ್ಟಿಗೆ ಸೇರಬೇಕಿದೆ.
  • ಜನನುಡಿ ಸಂಘಟನೆ ಹುಟ್ಟಿಕೊಳ್ಳಲು ಆಳ್ವಾಸ್ ನುಡಿಸಿರಿ ಲಾಂಚಿಗ್ ಪ್ಯಾಡ್ ಎನ್ನುವುದು ನಿಜವೇ ಆದರೂ, ಜನನುಡಿಯ ಆಶಯ, ಉದ್ದೇಶ ನುಡಿಸಿರಿಯ ಆಚಿನದ್ದು. ಬಹಳ ವಿಶಾಲವಾದದ್ದು.
  • ಈ ಕಾರ್ಯಕ್ರಮದ ಉದ್ದೇಶ ಎಲ್ಲರನ್ನು ಒಳಗೊಳ್ಳುವ ಒಂದು ಪ್ರಯತ್ನ. ಇಂತಹ ಒಂದು ಸಂಘಟನೆಯನ್ನು ಇರುವೆ ಗೂಡು ಕಟ್ಟುವ ಹಾಗೆ ಕಟ್ಟಬೇಕಿದೆ.
  • ಸತ್ಯ ಹೇಳಲು ಹಿಂಜರಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನಮ್ಮ ಇಂತಹ ಪ್ರಯತ್ನದಿಂದ ತಮ್ಮ ಗುರುಗಳಾದ ವಿವೇಕ್ ರೈ ಅವರಿಗೆ ಅಗೌರವ ಸೂಚಿಸಿದಂತಾಗುತ್ತದೇನೋ ಎಂದು ಹಲವರು ಯೋಚಿಸುತ್ತಿದ್ದಾರೆ. ಗುರುವಿನ ಬಗ್ಗೆ ಗೌರವ ಇಟ್ಟುಕೊಂಡೇ ಅವರ ತಪ್ಪು ಹೆಜ್ಜೆ ಇಟ್ಟಾಗ ವಿಮಶರ್ಿಸುವ ಅಗತ್ಯ ಇದೆ. ಸಂಪೂರ್ಣ ಶರಣಾಗತಿ ಗುರುಭಕ್ತಿ ಅಲ್ಲ.
  • ನಾನು ವೈಯಕ್ತಿಕವಾಗಿ ಈ ವೇದಿಕೆ ಮೂಲಕ ಒಂದು ನಿರ್ಣಯ ತೆಗೆದುಕೊಳ್ಳುತ್ತಿದ್ದೇನೆ. ಎಂದಿಗೂ ಕೋಮುವಾದಿ ವ್ಯಕ್ತಿ, ಸಂಘಟನೆ ಅಥವಾ ಸರಕಾರ ನಡೆಸುವ ಕಾರ್ಯಕ್ರಮ, ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ. ಅಂತಹ ವ್ಯಕ್ತಿ, ಸಂಘಟನೆ ಮತ್ತು ಸರಕಾರ ನೀಡುವ ಪ್ರಶಸ್ತಿ ಸ್ವೀಕರಿಸುವುದಿಲ್ಲ.

ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ತಮ್ಮ ಮಾತುಗಳಿಂದ ಸಮಾವೇಶಕ್ಕೆ ಚಾಲನೆ ನೀಡಿದರು. ಅವರ ಮಾತುಗಳ ಆಯ್ದ ಭಾಗಗಳು:

  • ಕೆಲವು ವರ್ಷಗಳ ಹಿಂದೆ ನಾವು ಜಾಗತೀಕರಣ ಸೃಷ್ಟಿಸುವ ಮಾರುಕಟ್ಟೆಯಲ್ಲಿ ಕಾವ್ಯಕ್ಕೆ ಸ್ಥಾನ ಇರುವುದಿಲ್ಲ ಎಂದು ತಪ್ಪಾಗಿ ಭಾವಿಸಿದ್ದೆವು. ಆದರೆ ಈಗ ಈ ಜಾಗತೀಕರಣ ಕಾವ್ಯ, ಸಾಹಿತ್ಯಗಳೆಲ್ಲವೂ ತನ್ನ ಮನರಂಜನೆಗಾಗಿ ಅಗತ್ಯ ಎಂದು ಮುನ್ನೆಲಗೆ ತಂದು ಅವನ್ನು ಕ್ಷುಲ್ಲಕಗೊಳಿಸುತ್ತಿದೆ. (ಟ್ರಿವಿಯಲೈಸ್)
  • ಸಾಹಿತ್ಯ ಇಂದು ಅನುಸರಿಸಬೇಕಾದ್ದು ಅಂಬೇಡ್ಕರ್ ಸೂಚಿಸಿದ ಮಾರ್ಗ. ಅದು ಅವ್ಯಕ್ತ ಹಿಂಸೆಗಳನ್ನು ವ್ಯಕ್ತಪಡಿಸುವುದು.
  • ನಮ್ಮೆದುರು ನಡೆಯುವ ಘಟನೆಗಳನ್ನು ಸೂಕ್ತ ಪದಗಳಲ್ಲಿ ಗುರುತಿಸುವುದೂ ಬಹುಮುಖ್ಯ ಕರ್ತವ್ಯವಾಗಿ ಕಾಣುತ್ತಿದೆ. ಜನಾಂಗಿಯ ಕಗ್ಗೊಲೆಯಾದರೆ, ಅದನ್ನು ದೊಂಬಿ ಎಂದು ಕರೆಯದೆ ಜನಾಂಗಿಯ ಕಗ್ಗೊಲೆ ಎಂದೇ ಕರೆಯಬೇಕು.
  • ನಾವು ಇಂದು ಮಧ್ಯಮ ವರ್ಗ ಅಲ್ಲ, ಮಾಧ್ಯಮ ವರ್ಗ ಆಗಿದ್ದೇವೆ.
  • ದೇಶ ವಿಭಜನೆಯ ಕತೆಗಳನ್ನು ಕೇಳಿದ ಮೇಲೂ ಇಂದು ಅಂತಹ ಸನ್ನಿವೇಶಗಳ ಪುನರಾವರ್ತನೆಯನ್ನು ಬಯಸುವ ಅನೇಕರು ನಮ್ಮ ಸುತ್ತಲಿದ್ದಾರೆ. ಜಾಗತಿಕ ಹಿಂಸೆಗೆ ಪುರುಷ ಪ್ರಧಾನ ಸಮಾಜ ಕಾರಣ ಎಂದು ಅರಿತಿದ್ದ ಗಾಂಧಿಯ ಬಗ್ಗೆ ನಮಗೆ ಅರಿವಿದ್ದೂ, ಇಂದು ಪುರುಷರಷ್ಟೇ ಅಲ್ಲ, ಲೋಹ ಪುರುಷರ ಅಗತ್ಯವಿದೆ ಎಂದು ವಾದಿಸುತ್ತೇವೆ.
  • ಎಂತಹ ವ್ಯಕ್ತಿ ಜನಾಂಗಿಯ ಕಗ್ಗೊಲೆಗೆ ಕಾರಣನಾದನೋ, ಅವನನ್ನೇ ಮುಂದಿನ ನಾಯಕ ಎಂದು ಘೋಷಿಸುವ ಮೂಲಕ ‘they declared war against all oppressed groups.

ವಿವಾಹ ನೋಂದಣಿ ಬಾಲ್ಯವಿವಾಹಕ್ಕೊಂದು ತಡೆಗೋಡೆ


– ರೂಪ ಹಾಸನ


 

ಯೂನಿಸೆಫ್‌ನ “ಸ್ಟೇಟ್ ಆಫ್ ದಿ ವರ್ಲ್ಡ್ ಚಿರ್ಲ್ಡನ್”-2009 ರ ವರದಿ, ‘47% ಭಾರತೀಯ ಹೆಣ್ಣುಮಕ್ಕಳು ಕಾನೂನಿಗೆ ವಿರುದ್ಧವಾಗಿ 18 ವರ್ಷದೊಳಗೇ ವಿವಾಹವಾಗುತ್ತಿದ್ದಾರೆ, ಇದರಲ್ಲಿ 56% ರಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ’ ಎಂದು ಹೇಳುತ್ತದೆ. ಹಾಗೇ ಇದೇ ವರ್ಷದ ಫೆಬ್ರವರಿಯಲ್ಲಿ ದೆಹಲಿಯ “ಪಾಪುಲೇಷನ್ ಕೌನ್ಸಿಲ್” ಹಾಗೂ ಮುಂಬಯಿಯ “ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಪಾಪುಲೇಷನ್ ಸೈನ್ಸ್” ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ 15 ವರ್ಷದೊಳಗೆ ಮದುವೆಯಾಗುವ ಹೆಣ್ಣುಮಕ್ಕಳ ಸಂಖ್ಯೆ ಶೇ.50 ಕ್ಕೂ ಹೆಚ್ಚು ಎಂದು ವರದಿ ಮಾಡಿದೆ.

ಸಾಮೂಹಿಕ ವಿವಾಹದಲ್ಲಿ ನಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ Child_marriage_in_Indiaವಿವಾಹ ಕುರಿತು ಮೊನ್ನೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದನ್ನು ಕಂಡಾಗ ಮತ್ತೆ ಇದೆಲ್ಲಾ ನೆನಪಾಯ್ತು. ಬಾಲ್ಯ ವಿವಾಹ ನಮ್ಮ ದೇಶಕ್ಕೆ ಅಂಟಿದ ದೊಡ್ಡ ಶಾಪ. ಇದಕ್ಕೆ ಮುಖ್ಯ ಕಾರಣ ಬಡತನ, ನಿರಕ್ಷರತೆ, ಅಜ್ಞಾನ ಮತ್ತು ಕೆಲ ಮಟ್ಟಿನ ಮೂಢನಂಬಿಕೆ ಎಂಬುದು ನಿರ್ವಿವಾದ. ಬಾಲ್ಯ ವಿವಾಹ ನಿಷೇಧ ಕಾಯ್ದೆ 1929 ರಲ್ಲೇ ಜಾರಿಯಾಗಿದ್ದರೂ ಅದು ಇನ್ನೂ ಜೀವಂತವಿರುವುದು, ಜ್ವಲಂತ ಸಮಸ್ಯೆಯಾಗಿರುವುದು ಮೇಲಿನ ಅಂಕಿ ಅಂಶಗಳಿಂದ ತಿಳಿಯುತ್ತದೆ. ಜೊತೆಗೆ 2010 ನೇ ವರ್ಷದ “ವಿಶ್ವ ಮಕ್ಕಳ ದಿನಾಚರಣೆ”ಯನ್ನು “ಬಾಲ್ಯ ವಿವಾಹ ತಡೆಗಟ್ಟಿ” ಎಂಬ ಘೋಷಣೆಯೊಂದಿಗೆ ಆಚರಿಸಿದ್ದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ಹಿಡಿದಿದೆ.

ಬಾಲ್ಯವಿವಾಹದಿಂದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮೊದಲು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ. ಬಾಲ್ಯದಲ್ಲಿಯೇ ಮದುವೆಯಾಗುವ ಕಾರಣದಿಂದ ಶಿಕ್ಷಣದ ಕೊರತೆಯುಂಟಾಗಿ, ಸಮರ್ಪಕ ಉದ್ಯೋಗ ಸಿಗದೇ ದೀರ್ಘಕಾಲದ ಬಡತನಕ್ಕೆ ತುತ್ತಾಗುತ್ತಾರೆ. ಜೊತೆಗೆ ಅರಿವಿನ ಕೊರತೆ, ಅಜ್ಞಾನ, ಮೂಢನಂಬಿಕೆಗಳು ಅವರಲ್ಲಿ ಮುಂದುವರೆಯುತ್ತದೆ. ತಮ್ಮ ಸ್ಥಾನಮಾನದ ಅರಿವಿರದ, ಸಬಲರಾಗಿಲ್ಲದ ಮತ್ತು ಇನ್ನೂ ಪ್ರೌಢಾವಸ್ಥೆಯನ್ನು ಹೊಂದದ ಚಿಕ್ಕ ಹುಡುಗಿಯರು ಪತಿಯ ಮನೆಯಲ್ಲಿ ದೌರ್ಜನ್ಯ, ಲೈಂಗಿಕ ಶೋಷಣೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಗುರಿಯಾಗುತ್ತಾರೆ. childmarriageಇದರಿಂದ ನಿಷ್ಕಾರಣವಾದ ಅಸಮಾನತೆ, ಖಾಯಿಲೆ ಹಾಗೂ ನಿಕೃಷ್ಟತೆಗೂ ಒಳಗಾಗುತ್ತಾರೆ. ಎಳೆವಯಸ್ಸಿನಲ್ಲಿಯೇ ಮದುವೆಯಾಗುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಬಲಿಷ್ಠರಾಗಿಲ್ಲದಿರುವುದರಿಂದ ಬಸಿರು, ಹೆರಿಗೆ ಸಮಯದಲ್ಲಿನ ಸಾವಿನ ಪ್ರಮಾಣ ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಶು ಮರಣ ಹಾಗೂ ಅಶಕ್ತ ಮಕ್ಕಳ ಜನನ ಕೂಡ ಅತ್ಯಂತ ಸಾಮಾನ್ಯ ಸಂಗತಿಯಾಗಿರುತ್ತದೆ. ಅಧಿಕ ಪ್ರಮಾಣದ ಬಾಲ್ಯವಿವಾಹದ ಕಾರಣದಿಂದಲೇ ಗರ್ಭಿಣಿ ಸಾವು ಹಾಗು ಶಿಶು ಮರಣ ಪ್ರಮಾಣದಲ್ಲಿ ಕೂಡ ಭಾರತವೇ ಅಗ್ರ ಸ್ಥಾನದಲ್ಲಿರುವುದನ್ನು ಅತ್ಯಂತ ಸಂಕಟದಿಂದ ನೆನಪಿಸಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ಅಸಮ ವಯಸ್ಸಿನ ಗಂಡಿಗೆ ವಿವಾಹ ಮಾಡುವುದರಿಂದ ಬಾಲ್ಯವೈಧವ್ಯ ಉಂಟಾಗುತ್ತದೆ. ಕಿರಿಯ ವಯಸ್ಸಿನಲ್ಲೇ ಸಂಸಾರ, ಮಕ್ಕಳ ಜವಾಬ್ದಾರಿಯನ್ನು ಹೊರಬೇಕಾದಾಗ ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿರುವುದರಿಂದ ಇಂತಹ ಹೆಣ್ಣುಮಕ್ಕಳು ಅನೈತಿಕ ಮಾರ್ಗಗಳಿಂದ ಸಂಪಾದಿಸುವುದೂ ಅನಿವಾರ್ಯವಾಗುತ್ತಿದೆ.

ಇನ್ನು ಸಾಮೂಹಿಕ ವಿವಾಹಗಳು ನಮ್ಮ ಸಮಾಜಕ್ಕೆ ಹೊಸದೇನೂ ಅಲ್ಲ. ಕೆಲವು ಜಾತಿ, ಧರ್ಮ, ಜನಾಂಗಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಾ ಬಂದಿವೆ. ಆಧುನಿಕ ಸಮಾಜದಲ್ಲಿ ಮದುವೆಗಳ ಮೂಲಕ ನಡೆಯುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು, Mass_Marriage_Couplesಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು, ಮುಖ್ಯವಾಗಿ ಬಡ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಮಾಜಿಕ ಸುಧಾರಣೆಯ ಒಂದು ಮಾರ್ಗವಾಗಿ ಸಾಮೂಹಿಕ ವಿವಾಹಗಳು ನೆರವಾಗಿವೆ. ವಿಧವೆಯರಿಗೆ, ವಿವಾಹ ವಿಚ್ಛೇದಿತರಿಗೆ, ಅಂಗವಿಕಲರಿಗೆ, ಅನಾಥರಿಗಾಗಿಯೂ ವಿಶೇಷ ಸಾಮೂಹಿಕ ವಿವಾಹಗಳು ಏರ್ಪಟ್ಟು ದಾಖಲೆಗಳನ್ನೇ ನಿರ್ಮಿಸಿದೆ.

ಆದರೆ ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತ ಬಾಲಕಿಯರ ವಿವಾಹ ನಡೆಯುತ್ತಿರುವುದು ಮಾತ್ರ ಕಾಯ್ದೆಯ ಕಣ್ಣಲ್ಲಿ ಅಕ್ಷಮ್ಯ ಅಪರಾಧವಾಗಿದೆ. ಸಾಮೂಹಿಕ ವಿವಾಹಗಳಲ್ಲಿ ಬಾಲಕಿಯರ ವಿವಾಹ ಅತ್ಯಂತ ಸಾಮಾನ್ಯವೆಂಬಂತೆ ನಡೆಯುತ್ತಲೇ ಬಂದಿದೆ. ಇದು ಹೊಸದೇನೂ ಅಲ್ಲ. ಇಂತಹ ಸಾಮೂಹಿಕ ವಿವಾಹಗಳನ್ನು ಸಂಘಟಿಸುವವರು ರಾಜಕಾರಣಿಗಳು ಮಠಾಧೀಶರು, ಕೆಲವು ಪಟ್ಟಭದ್ರಹಿತಾಸಕ್ತಿಗಳು ಎಂಬುದನ್ನು ಮುಖ್ಯವಾಗಿ ಗಮನಿಸಬೇಕಿದೆ. ಇತ್ತೀಚೆಗೆ ಇಂತಹ ವಿವಾಹಗಳ ಹಿಂದೆ ಹಣ, mass-marriage-sriramuluರಾಜಕೀಯ, ಜಾತಿ, ದಾಖಲೆ ಮಾಡುವ ಹುಚ್ಚು…… ಹೀಗೆ ಬೇರೆ ಬೇರೆ ಹಿತಾಸಕ್ತಿಗಳು ಕೆಲಸ ಮಾಡುವುದರಿಂದ ಅದರ ನಿಜವಾದ ಉದ್ದೇಶ ಮರೆಯಾಗಿ, ಪರಸ್ಪರ ಗಂಡು ಹೆಣ್ಣು ಮನ ಒಪ್ಪಿ ಮದುವೆಗೆ ಸಿದ್ಧರಾಗುವುದಕ್ಕಿಂತಾ ಸಂಘಟಕರಿಗೆ ತಮ್ಮ ನಿಗದಿತ ಗುರಿ ಮುಟ್ಟಲು ಪೋಷಕರ ಮನವೊಲಿಸಿ ಮದುವೆ ಮಾಡುವುದನ್ನು ಕಾಣುತ್ತಿದ್ದೇವೆ. ಬಹಳಷ್ಟು ಬಾರಿ ಇಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇರುವುದಿಲ್ಲ ಎಂದು ದೆಹಲಿಯ ಪಾಪ್ಯುಲೇಷನ್ ಕೌನ್ಸಿಲ್ ಇಂತಹ ಅಪ್ರಾಪ್ತ ನವವಧುಗಳನ್ನು ಸಮೀಕ್ಷೆ ಮಾಡಿ ದೃಢಪಡಿಸಿದೆ. ಇದನ್ನು ಕಂಡಾಗ 1975-77 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನುಷವಾಗಿ ಮತ್ತು ಬಲವಂತದಿಂದ ನಡೆಸಲಾದ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆಗಳು ನೆನಪಾಗುತ್ತವೆ. ಇದಕ್ಕೂ ಇಂತಹ ಬಾಲ್ಯವಿವಾಹಗಳಿಗೂ ಯಾವ ವ್ಯತ್ಯಾಸಗಳೂ ಇಲ್ಲವೇನೋ!

ವರದಕ್ಷಿಣೆ ಹಾಗೂ ವಿವಾಹಕ್ಕಾಗಿ ವಿನಿಯೋಗಿಸುವ ವಿಪರೀತದ ಖರ್ಚನ್ನು ಭರಿಸಲಾಗದ ಹೆಚ್ಚಿನ ಬಡ ಕುಟುಂಬಗಳು, ತಮ್ಮ ಹೆಣ್ಣುಮಕ್ಕಳ ಹೊರೆಯನ್ನು ಇಲ್ಲಿ ಸುಲಭವಾಗಿ ಕಳೆದುಕೊಳ್ಳಬಹುದೆಂದು ಸಾಮೂಹಿಕ ವಿವಾಹದ ಮೊರೆ ಹೋಗುತ್ತಾರೆ. ಇದು ತಪ್ಪೇನೂ ಅಲ್ಲ. ಆದರೆ ಸಾಮೂಹಿಕ ವಿವಾಹದ ನೆವದಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆ ಮಾಡುವುದು ಮಾತ್ರ ಕಾನೂನಿನ ರೀತಿಯಲ್ಲಿ ಅಪರಾಧವೇ ಆಗಿದೆ. ಇಂತಹ ವಿವಾಹಗಳು ಕೂಡ ಸಂಘಟಕರಿಗೆ ಲಾಭಕಾರಕ ವ್ಯಾಪಾರವಾಗಿರುವುದನ್ನು ಕಾಣುತ್ತಿದ್ದೇವೆ. ಇದರ ಹಿಂದೆ ಪ್ರತಿಷ್ಠಿತ ಗಣ್ಯವ್ಯಕ್ತಿಗಳು, ಸಂಸ್ಥೆಗಳಿರುವುದರಿಂದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹ ನಡೆಯುತ್ತಿದ್ದರೂ ಇದರ ವಿರುದ್ಧ ಯಾರೂ ದನಿಯೆತ್ತದಂತಾ ಸ್ಥಿತಿ ನಿರ್ಮಾಣವಾಗಿದೆ. ನಕಲಿ ವಯೋಮಾನ ದೃಢೀಕರಣ ಪತ್ರಗಳೂ ಇಂದು ಹಣಕ್ಕೆ ಮಾರಾಟವಾಗುವುದರಿಂದ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೂ, ಸಾಮಾಜಿಕ ಕಾರ್ಯಕರ್ತರೂ ವಿಫಲರಾಗುವ ಜೊತೆಗೆ ಪೇಚಿಗೆ ಸಿಕ್ಕಿಹಾಕಿಕೊಂಡು ತಾವೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಬೇಕಾಗಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಪ್ರಾಪ್ತ ಬಾಲಕಿಯರ ಮದುವೆ ಮಾಡಿಸುವ ಪೋಷಕರನ್ನು ಮೊದಲು ಶಿಕ್ಷಿಸಬೇಕೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಪೋಷಕರೂ ಬಹಳಷ್ಟು ವೇಳೆ ಮುಗ್ಧರೂ, ಅಶಿಕ್ಷಿತರು, ಬಡವರು ಆಗಿರುತ್ತಾರೆ. child-marriage-indiaಶಿಕ್ಷಿತರಲ್ಲಿ ಇಂತಹ ನಿರ್ಧಾರಕ್ಕೆ ಬರುವವರು ಕಡಿಮೆ. ಆದ್ದರಿಂದ ಕಾನೂನಿನ ಅರಿವಿದ್ದೂ, ವಿದ್ಯಾವಂತರಾಗಿದ್ದೂ ವಿವೇಚನೆಯಿಲ್ಲದೇ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಮಾಡಲು ಮುಂದಾಗುವ ಸಂಘಟಕರನ್ನು ಮೊದಲು ಶಿಕ್ಷಿಸಬೇಕು. ಪರಿಷ್ಕೃತಗೊಂಡ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರ ಅನ್ವಯ ಬಾಲ್ಯ ವಿವಾಹ ಸಾಬೀತಾದರೆ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗುವ ಪುರುಷ, ಹುಡುಗಿಯ ಪೋಷಕರು, ಹಾಗೂ ಇಂತಹ ಮದುವೆಯನ್ನು ನೆರವೇರಿಸುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿಗಳಿಗೆ ಎರಡು ವರ್ಷ ಸೆರೆವಾಸ ಹಾಗೂ ಒಂದು ಲಕ್ಷದವರೆಗೆ ಜುಲ್ಮಾನೆ ವಿಧಿಸಲಾಗುತ್ತದೆ. ತಪ್ಪಿತಸ್ಥರು ಶಿಕ್ಷೆಗೀಡಾದರೆ ಇಂತಹ ಅಪರಾಧಗಳ ಸಂಖ್ಯೆ ತಗ್ಗುತ್ತದೆ ಎಂಬುದು ನಿಜ ಆದರೆ ಬಲವಂತದಿಂದ, ತಮ್ಮ ದುರುದ್ದೇಶ ಸಾಧನೆಗಾಗಿ ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಮಾಡಿಸುವ ಸಂಘಟಕರಿಗೆ ಅತಿ ಹೆಚ್ಚಿನ ಪ್ರಮಾಣದ ಶಿಕ್ಷೆಯಾಗುವಂತೆ ಕಾನೂನು ತಿದ್ದುಪಡಿಯಾಗಬೇಕಿರುವುದು ಇಂದಿನ ತುರ್ತು.

ಬಾಲ್ಯ ವಿವಾಹ ಪದ್ಧತಿಯನ್ನು ನಿಯಂತ್ರಿಸಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಹಿಮಾಚಲಪ್ರದೇಶ ರಾಜ್ಯಗಳು ಮದುವೆಯಾಗುವ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢಪಡಿಸಲು ಮತ್ತು ನ್ಯಾಯಬದ್ಧಗೊಳಿಸಲು ವಿವಾಹವನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಿವೆ. ಯಾವುದೇ ಧರ್ಮದ ಅಥವಾ ಜಾತಿಯವರಾಗಿರಲಿ ಕಡ್ಡಾಯವಾಗಿ ಸರ್ಕಾರಿ ನೋಂದಣಿ ಕಚೇರಿಯಲ್ಲಿ ಮದುವೆಗಳು ದಾಖಲಾಗಲೇಬೇಕು ಎಂಬ ಕಾನೂನು ದೇಶದಾದ್ಯಂತ ಜಾರಿಗೆ ಬಂದಿದೆ. ಅದನ್ನು ಈಗ ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದಕ್ಕೂ ಮೊದಲು ಜನನ ಹಾಗೂ ಮರಣದ ದಾಖಲಾತಿ ಕಡ್ಡಾಯ ಎಂಬುದರ ಅರಿವನ್ನು ಜನರಿಗೆ ಮೂಡಿಸಬೇಕು. ಸಾಮೂಹಿಕ ವಿವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವ, ಮಾಡಿಸದಿದ್ದರೆ ಶಿಕ್ಷೆಗೊಳಪಡಿಸುವ ಕಾನೂನು ಜಾರಿ ಆಗಲೇ ಬೇಕು. ಇದರಿಂದ ಮದುವೆಯಾಗಬಯಸುವ ಗಂಡು ಮತ್ತು ಹೆಣ್ಣುಗಳ ವಯಸ್ಸು ನಿಖರವಾಗಿ ತಿಳಿದು ಬರುತ್ತದೆ. ತನ್ಮೂಲಕ ಬಾಲ್ಯವಿವಾಹ ಹತೋಟಿಗೆ ಬಂದು, ಆ ಕಾರಣದಿಂದ ನಮ್ಮ ಹೆಣ್ಣುಮಕ್ಕಳು ಅನುಭವಿಸುವ ಅನೇಕ ಸಮಸ್ಯೆಗಳು ಕಡಿಮೆಯಾಗಬಹುದು.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆ – ದೇಶಕ್ಕೆ ಹೊಸ ಸಂದೇಶ ನೀಡುವಲ್ಲಿ ಯಶಸ್ವಿ

– ಆನಂದ ಪ್ರಸಾದ್

ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಹಿನ್ನೆಲೆಯೇನೂ ಇಲ್ಲದ ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ ಸ್ಪರ್ಧಿಸಿ 70 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆದ್ದು 30% ಮತಗಳನ್ನು ಪಡೆದು ಎರಡನೆಯ ಸ್ಥಾನದಲ್ಲಿ ನಿಂತಿರುವುದು ಒಂದು ಅತ್ಯುತ್ತಮ ಸಾಧನೆ ಎನ್ನಲು ಅಡ್ಡಿ ಇಲ್ಲ. ಇದು ಏಕೆ ಮುಖ್ಯ ಸಾಧನೆಯಾಗುತ್ತದೆ ಎಂದರೆ ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನತೆಯ ದೇಣಿಗೆಯಿಂದಲೇ ಅತ್ಯಂತ ನ್ಯಾಯಯುತ ಮಾರ್ಗದಿಂದಲೇ ಪಾರದರ್ಶಕವಾಗಿ ಪಡೆಯಲಾಗಿದೆ ಹಾಗೂ ಚುನಾವಣಾ ಆಯೋಗದ ಮಿತಿಯೊಳಗೇ AAP Launchಚುನಾವಣಾ ಖರ್ಚುಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಇಂಥ ಸಾಧನೆಯನ್ನು ಆಮ್ ಆದ್ಮಿ ಪಕ್ಷವು ಮಾಡಿದೆ. ಎಲ್ಲಿಯೂ ಮತದಾರರಿಗೆ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಒಡ್ಡಿ ಮತ ಖರೀದಿಸದೆಯೂ ಇಂಥ ಸಾಧನೆ ಮಾಡಿರುವುದು ಮರುಭೂಮಿಯ ನಡುವಿನ ಓಯಸಿಸ್ನಂತೆ ಭಾರತದ ಪ್ರಜ್ಞಾವಂತರೆಲ್ಲರೂ ಸಮಾಧಾನ ಪಡುವ ವಿಷಯವಾಗಿದೆ. ಆಮ್ ಆದ್ಮಿ ಪಕ್ಷವು ಬಿಜೆಪಿಯಂತೆ ಧರ್ಮ ಹಾಗೂ ದೇವರ ವಿಷಯದಲ್ಲಿ ಅಮಾಯಕ ಜನತೆಯನ್ನು ಕೆರಳಿಸಿ ತನ್ಮೂಲಕ ಅದರ ದುರ್ಲಾಭವನ್ನು ರಾಜಕೀಯವಾಗಿ ಪಡೆದುಕೊಂಡು ಬೆಳೆಯುವ ಕುಟಿಲ ನೀತಿಯನ್ನು ಅಳವಡಿಸಿಕೊಳ್ಳದೆ ಈ ಸಾಧನೆಯನ್ನು ಮಾಡಿದೆ. ಇದಕ್ಕಾಗಿಯೂ ಆಮ್ ಆದ್ಮಿ ಪಕ್ಷದ ಸಾಧನೆ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ಬಿಜೆಪಿ ಪಕ್ಷವು ಅಮಾಯಕ ಜನರನ್ನು ಧರ್ಮ ಹಾಗೂ ದೇವರ ಹೆಸರಿನಲ್ಲಿ ಕೆರಳಿಸಿ ಅವರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಕಾನೂನನ್ನು ಕೈಗೆ ತೆಗೆದುಕೊಂಡು ಉರುಳಿಸಿ ಆಗ ಉಂಟಾದ ಮಹಾ ರಕ್ತಪಾತದ ರಾಜಕೀಯ ಲಾಭವನ್ನು ಪಡೆದುಕೊಂಡು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಥ ರಕ್ತಪಾತದ ಹಿನ್ನೆಲೆ ಇಲ್ಲದೆಯೂ ಬಲಿಷ್ಠ ರಾಜಕೀಯ ಪಕ್ಷಗಳ ಎದುರು ನಿಂತು ಆಮ್ ಆದ್ಮಿ ಪಕ್ಷವು ಮೊದಲ ಪ್ರಯತ್ನದಲ್ಲಿಯೇ ಗಮನಾರ್ಹ ಯಶಸ್ಸನ್ನು ಸಾಧಿಸಿರುವುದು ಭಾರತದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬುದರ ಮುನ್ಸೂಚನೆಯಾಗಿದೆ. ಇದಕ್ಕಾಗಿಯೂ ಈ ಯಶಸ್ಸು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ಯಶಸ್ಸನ್ನು ಕಾಣಲು ವಿಫಲವಾದಾಗ ಬದಲಾವಣೆಗೆ ರಾಜಕೀಯ ರಂಗಕ್ಕೆ ನೇರವಾಗಿ ಇಳಿಯುವ ಅನಿವಾರ್ಯತೆ ಕೇಜ್ರಿವಾಲ್ ಅವರಿಗೆ ಎದುರಾಯಿತು. ಈ ವಿಷಯದಲ್ಲಿ ಅಣ್ಣಾ ಹಜಾರೆಯವರ ಸಹಕಾರ kejriwal_aap_pti_rallyಕೇಜ್ರಿವಾಲರಿಗೆ ದೊರೆಯದಿದ್ದರೂ ಅವರು ಇದನ್ನು ಸವಾಲಾಗಿ ತೆಗೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಮಾಧ್ಯಮಗಳೂ ಕೂಡ ರಾಜಕೀಯ ಹೋರಾಟದ ಹಾದಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅದು ಪ್ರತಿಪಾದಿಸಿದ ಸ್ವಚ್ಛ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ಯಾವುದೇ ಬೆಂಬಲ ಕೊಡಲಿಲ್ಲ. ದೈತ್ಯ ಬಂಡವಾಳಶಾಹೀ ಸಂಸ್ಥೆಗಳ ಸಹಕಾರ ಪಡೆದು ಅಬ್ಬರದ ಪ್ರಚಾರ ನಡೆಸಿದ ಮೋದಿಯ ಮಹಾ ಅಲೆಯಿದೆಯೆಂದು ಹೇಳಲಾಗಿದ್ದರೂ ದೆಹಲಿಯಲ್ಲಿ ಮಾಧ್ಯಮಗಳ ಸಹಕಾರವಿಲ್ಲದೆಯೂ ಆಮ್ ಆದ್ಮಿ ಪಕ್ಷ ಸಾಧಿಸಿದ ಈ ಯಶಸ್ಸು ಇಡೀ ದೇಶಕ್ಕೆ ನಿಧಾನವಾಗಿ ಹಬ್ಬಿದರೆ ಭಾರತದ ಭವಿಷ್ಯವು ಬದಲಾಗಲಿರುವುದು ಖಚಿತ.

ಇದೀಗ ದೆಹಲಿಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವಾಗ ಆಮ್ ಆದ್ಮಿ ಪಕ್ಷವು ಬಿಜೆಪಿಯ ಜೊತೆಗೂಡಿ ಸರ್ಕಾರ ರಚಿಸಬೇಕೆಂದು ಕೆಲವು ಮಾಧ್ಯಮಗಳು ಆಮ್ ಆದ್ಮಿ ಪಕ್ಷಕ್ಕೆ ಒತ್ತಡ ಹಾಕುತ್ತಿವೆ. ಆದರೆ ಈ ಒತ್ತಡಕ್ಕೆ ಆಮ್ ಆದ್ಮಿ ಪಕ್ಷವು ಮಣಿಯದಿರಲು ನಿರ್ಧರಿಸಿರುವುದು ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂಥ ನಿರ್ಧಾರಕ್ಕೆ ಬಂದು ಕೋಮುವಾದಿ ಹಿನ್ನೆಲೆ ಇರುವ ಪ್ರತಿಗಾಮಿ ರಾಜಕೀಯ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷದ ಬೆಳವಣಿಗೆಗೆ ತೊಂದರೆಯಾಗಲಿರುವುದು ಖಚಿತ. ಸಂಘ ಪರಿವಾರದ ಹಿಡಿತದಲ್ಲಿ ಇರುವ ಹಾಗೂ ಸಂಘ ಪರಿವಾರ ನಿರ್ದೇಶಿತ ಬಿಜೆಪಿಯ ರಾಜಕೀಯ ಚಟುವಟಿಕೆಗಳು ಆಮ್ ಆದ್ಮಿ ಪಕ್ಷದ ಉದಾರ ಹಾಗೂ ಜಾತ್ಯತೀತ ನಿಲುವಿಗೆ ವಿರೋಧವಾಗಿದ್ದು ಇದರಿಂದ ಆಮ್ ಆದ್ಮಿ ಪಕ್ಷ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ಹೀಗಾಗಿ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಚಾರಿತ್ರಿಕ ಪ್ರಮಾದವಾದೀತು. ಪ್ರತಿಗಾಮಿ ಕಾರ್ಯಸೂಚಿ ಹೊಂದಿರುವ ಬಿಜೆಪಿಯ ಪೂರ್ವಾವತಾರವಾಗಿದ್ದ ಜನಸಂಘದ ಜೊತೆ ಜನತಾ ಪರಿವಾರ ಹೊಂದಾಣಿಕೆ ಮಾಡಿ ವಿಫಲವಾದ ಇತಿಹಾಸವೇ ಇದೆ. aap-kejriwal-yogendra-yadavಹೀಗಾಗಿ ಬಿಜೆಪಿ ಜೊತೆ ಕೈಜೋಡಿಸದಿರುವ ಆಮ್ ಆದ್ಮಿ ಪಕ್ಷದ ನಿಲುವು ಅತ್ಯಂತ ವಿವೇಚನೆಯಿಂದ ಕೂಡಿದೆ ಎಂದೇ ಹೇಳಬೇಕಾಗುತ್ತದೆ. ಬಿಜೆಪಿ ಆಮ್ ಆದ್ಮಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪರೋಕ್ಷವಾಗಿ ಕಿರಣ್ ಬೇಡಿಯ ಮಧ್ಯಸ್ಥಿಕೆಯ ಮೂಲಕ ಪ್ರಯತ್ನಿಸಿತು. ಆದರೆ ಬದಲಾವಣೆಗಾಗಿ ರಾಜಕೀಯಕ್ಕೆ ಇಳಿದ ಆಮ್ ಆದ್ಮಿ ಪಕ್ಷ ಇಂಥ ಹೊಂದಾಣಿಕೆಗೆ ನಿರಾಕರಿಸಿರುವುದು ಸಮಂಜಸವಾಗಿಯೇ ಇದೆ. ಇದಕ್ಕೂ ಮೊದಲು ಚುನಾವಣಾ ಫಲಿತಾಂಶ ಬರುವ ಮುನ್ನಾ ದಿನವೇ ಆಮ್ ಆದ್ಮಿ ಪಕ್ಷದ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತೆಂದು ಆಮ್ ಆದ್ಮಿ ಪಕ್ಷ ಹೇಳಿದೆ, ಆದರೆ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ಬದ್ಧರಾದ ಅವರನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಇಂಥ ನೈತಿಕ ಹಾಗೂ ಮೌಲ್ಯಾಧಾರಿತ ದೃಢತೆ ಇದ್ದಾಗ ಮಾತ್ರ ಏನಾದರೂ ಬದಲಾವಣೆ ಮಾಡಿ ತೋರಿಸಲು ಸಾಧ್ಯ. ಹೀಗಾಗಿಯೇ ಬಿಜೆಪಿಯು ಬೇರೆ ಕಡೆಗಳಲ್ಲಿ ಕುದುರೆ ವ್ಯಾಪಾರ ಹಾಗೂ ‘ಆಪರೇಶನ್ ಕಮಲ’ ಎಂಬ ರಾಜಕೀಯ ಅನೈತಿಕತೆಯನ್ನು ಪ್ರೋತ್ಸಾಹಿಸಿದ ಇತಿಹಾಸ ದೆಹಲಿಯಲ್ಲಿ ತಾನು ಸರ್ಕಾರ ರಚಿಸುವುದಿಲ್ಲ ಹಾಗೂ ಕುದುರೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಹೀಗೆ ಹೇಳುವ ಅನಿವಾರ್ಯತೆಗೆ ಸಿಲುಕಲು ಕಾರಣವಾಗಿರುವುದು ಆಮ್ ಆದ್ಮಿ ಪಕ್ಷದ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದ ದೃಢ ನಿಲುವು. ಕುದುರೆ ವ್ಯಾಪಾರಕ್ಕೆ ಆಮ್ ಆದ್ಮಿ ಪಕ್ಷದ ಗೆದ್ದ ಅಭ್ಯರ್ಥಿಗಳು ಬಗ್ಗುವುದಿಲ್ಲ ಎಂದಾದ ನಂತರ ವಿಷಯಾಧಾರಿತ ಮೈತ್ರಿಯ ಮಾತನ್ನು ಬಿಜೆಪಿ ಪರೋಕ್ಷವಾಗಿ ಕಿರಣ್ ಬೇಡಿಯ ಮೂಲಕ ತೇಲಿ ಬಿಟ್ಟಿದೆ. ಇದಕ್ಕೆ ಕಾರಣವೂ ಇದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ದೆಹಲಿಯಿಂದ ಹೊರಗೆ ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಪಕ್ಷವು ಸ್ಪರ್ಧಿಸಿದರೆ ದೆಹಲಿಯಲ್ಲಿ ಆದಂತೆ ಮತದಾರರಿಗೆ ಮೂರನೆಯ ಪರ್ಯಾಯವೊಂದು ದೊರಕಿ ಮೋದಿಗೆ ಬರುವ ಮತಗಳಿಗೆ ಪೆಟ್ಟು ಬೀಳಬಹುದು ಎಂಬ ಚಿಂತೆಯೇ ಇಂಥ ಮೈತ್ರಿಯ ಮಾತು ಆಡಲು ಕಾರಣ. ಆದರೆ ಪ್ರತಿಭಾವಂತರೂ, ಚಿಂತನಶೀಲರೂ, ರಾಜಕೀಯದಲ್ಲಿ ಸಂದರ್ಭಕ್ಕೆ ತಕ್ಕ ದೃಢ ನಿರ್ಧಾರ ತೆಗೆದುಕೊಳ್ಳುವ ವಿವೇಕ ಹೊಂದಿರುವ ಕೇಜ್ರಿವಾಲರು ಇಂಥ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ರಕ್ತಪಾತ ಹಾಗೂ ಧಾರ್ಮಿಕ ವಿಷಯಗಳಲ್ಲಿ ಜನರನ್ನು ಕೆರಳಿಸಿಯೇ ದೇಶದಲ್ಲಿ ಕ್ಷಿಪ್ರವಾಗಿ ಬೆಳೆದ ಪ್ರತಿಗಾಮಿ ರಾಜಕೀಯ ಪಕ್ಷವಾದ ಬಿಜೆಪಿಯ ಕಳಂಕಿತ ಹಾಗೂ ಭ್ರಷ್ಟ ಇತಿಹಾಸದ ಅರಿವು ಇರುವ ಕೇಜ್ರಿವಾಲರು ಕಾಂಗ್ರೆಸ್ಸನ್ನು ದೂರ ಇರಿಸಿದಂತೆ ಬಿಜೆಪಿಯನ್ನು ದೂರ ಇರಿಸುವ ನಿರ್ಧಾರ ಮಾಡಿ ಗಟ್ಟಿ ನಿಲುವು ತಳೆದಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಹಾಗೂ ಮೌಲ್ಯಾಧಾರಿತ ನೈತಿಕ ರಾಜಕೀಯವನ್ನು ಬೆಳೆಸುವ ದೃಷ್ಟಿಯಿಂದ ಅತ್ಯಂತ ಸೂಕ್ತವೇ ಆಗಿದೆ.

ಬಿಜೆಪಿ ಪಕ್ಷ ಹಾಗೂ ಅದರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಬ್ಬರೂ ಕೇಜ್ರಿವಾಲ್ anna-kejriwalಅಣ್ಣಾ ಹಜಾರೆಯವರಿಗೆ ಬೆನ್ನಿಗೆ ಚೂರಿ ಹಾಕಿ ನಂಬಿಕೆದ್ರೋಹ ಮಾಡಿದ್ದಾರೆ ಎಂದು ಅಪಪ್ರಚಾರದಲ್ಲಿ ತೊಡಗಿರುವುದು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ತಮಗೆ ನಿರಾಯಾಸವಾಗಿ ದೊರೆಯಬಹುದಾದ ನಗರಗಳ ಮಧ್ಯಮ ವರ್ಗಗಳ ಮತ ಆಮ್ ಆದ್ಮಿ ಪಕ್ಷಕ್ಕೆ ಹೋಗಬಹುದು ಎಂಬ ಭೀತಿಯಿಂದಲೇ ಎಂಬುದು ಕಂಡುಬರುತ್ತದೆ. ಅಣ್ಣಾ ಹಜಾರೆಯವರಿಗೆ ಕೇಜ್ರಿವಾಲ್ ದ್ರೋಹ ಬಗೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ದೆಹಲಿ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಅಣ್ಣಾ ಅವರ ಸತ್ಯಾಗ್ರಹದ ಹಾದಿ ವಿಫಲವಾದ ನಂತರವಷ್ಟೇ ಕೇಜ್ರಿವಾಲ್ ರಾಜಕೀಯ ಹೋರಾಟದ ನಿರ್ಣಯ ತೆಗೆದುಕೊಂಡಿರುವ ಕಾರಣ ಕೇಜ್ರಿವಾಲ್ ಅಣ್ಣಾ ಹಜಾರೆಗೆ ಮೋಸ ಮಾಡಿದರು ಎಂಬ ಮಾತು ಅರ್ಥಹೀನ ಹಾಗೂ ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂಬುದು ಕಂಡುಬರುತ್ತದೆ. ಅಣ್ಣಾ ಹಜಾರೆಯವರು ಪಕ್ಷರಹಿತ ರಾಜಕೀಯದ ಮಾತಾಡುತ್ತಾರೆ ಆದರೆ ಅದು ಸಾಧ್ಯವಾಗದು. ಪಕ್ಷರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದೇಶದಲ್ಲಿಯೂ ಇಲ್ಲ. ಅಣ್ಣಾ ಹಜಾರೆಯವರಿಗೆ ಸ್ಪಷ್ಟವಾದ ರಾಜಕೀಯ ಚಿಂತನೆ ಇಲ್ಲ. ಪಕ್ಷ ರಾಜಕೀಯ ಸಂವಿಧಾನಬಾಹಿರ ಎಂಬ ಅಣ್ಣಾ ಹಜಾರೆ ಮಾತಿನಲ್ಲಿ ಹುರುಳಿಲ್ಲ ಏಕೆಂದರೆ ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ರಾಜಕೀಯ ಪಕ್ಷ ಕಟ್ಟಿದ್ದರು. ಅಧ್ಯಕ್ಷೀಯ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ರಾಜಕೀಯ ಪಕ್ಷಗಳು ಇರುತ್ತವೆ. ಪಕ್ಷರಹಿತ ವ್ಯವಸ್ಥೆ ಇದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಆಗುವುದಿಲ್ಲ, ಅದು ರಾಜಪ್ರಭುತ್ವವಷ್ಟೇ ಆದೀತು. ಸಮಾನ ಚಿಂತನೆ, ಕಾರ್ಯಕ್ರಮ ಇರುವವರು ಒಟ್ಟಿಗೆ ಸೇರಿ ಜನರನ್ನು ಸಂಘಟಿಸಿ ಕೆಲಸ ಮಾಡಲು ರಾಜಕೀಯ ಪಕ್ಷಗಳು ಇರಲೇಬೇಕಾಗುತ್ತದೆ. ಪಕ್ಷ ರಹಿತ ರಾಜಕೀಯ ವ್ಯವಸ್ಥೆ ಕಟ್ಟುವುದು ಸಾಧ್ಯವಿಲ್ಲ. ಹೀಗಾಗಿ ಹಜಾರೆಯವರ ಚಿಂತನೆಗಳು ಎಡಬಿಡಂಗಿ ಚಿಂತನೆಗಳಲ್ಲದೆ ಬೇರೇನೂ ಅಲ್ಲ. ಅಣ್ಣಾ ಹಾಗೂ ಇತರರು ರಾಜಕೀಯ ಪಕ್ಷ ಕಟ್ಟಿ ಹೋರಾಡುವ ಪ್ರಯತ್ನಕ್ಕೆ ಬೆಂಬಲ ಕೊಟ್ಟಿದ್ದರೆ ದೆಹಲಿಯಲ್ಲಿ ಮೂರನೇ ಎರಡು ಬಹುಮತ ಪಡೆಯಲು ಸಾಧ್ಯವಿತ್ತು. ಅಣ್ಣಾ ಹಾಗೂ ಇತರರ ಅಸಹಕಾರದಿಂದ ಅಂಥ ಸುವರ್ಣ ಅವಕಾಶವೊಂದು ಕಳೆದುಹೋಯಿತು ಎಂದರೆ ತಪ್ಪಾಗಲಾರದು.

ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹದಿಂದ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ anna-hazareಮೂಡಿದರೂ ಆಳುವ ಪಟ್ಟಭದ್ರ ಹಿತಾಸಕ್ತಿಗಳು ಉಪವಾಸ ಸತ್ಯಾಗ್ರಹವನ್ನು ಕುಟಿಲ ತಂತ್ರಗಳ ಮೂಲಕ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದೋ ಅವರು ಆಶ್ವಾಸನೆ ನೀಡಿ ಕಾಲಹರಣ ಮಾಡುತ್ತಾರೆ ಅಥವಾ ಕಣ್ಣೊರೆಸುವ ದುರ್ಬಲ ಹಾಗೂ ಹಲ್ಲು ಕಿತ್ತ ಹಾವಿನಂಥ ಮಸೂದೆಯನ್ನು ತಂದು ಹೋರಾಟವನ್ನು ಶಮನಗೊಳಿಸುತ್ತಾರೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವವರನ್ನು ಬಲತ್ಕಾರವಾಗಿ ಆಸ್ಪತ್ರೆಗೆ ಸೇರಿಸಿ ನಳಿಕೆಯ ಮೂಲಕ ಆಹಾರ ನೀಡಿ ಕೊನೆಗೊಳಿಸುತ್ತಾರೆ. ಸರಕಾರ ಹೀಗೆ ಮಾಡಿದರೆ ಉಪವಾಸ ಸತ್ಯಾಗ್ರಹ ತನ್ನ ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಹಾಗೂ ಸಶಕ್ತ ಕಾಯಿದೆ ತರಬೇಕಾದರೆ ರಾಜಕೀಯ ವ್ಯವಸ್ಥೆಯ ಒಳಗೆ ಇಳಿದು ಸಂಸತ್ತಿಗೆ ಜನರಿಂದ ಆಯ್ಕೆಯಾಗಿ ಹೋಗಿ ಶಾಸನಗಳನ್ನು ರೂಪಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಹಾದಿ. ಇದು ಅಣ್ಣಾ ಹಜಾರೆ ಹಾಗೂ ಇತರರಿಗೆ ಅರ್ಥವಾಗದೆ ಇರುವುದು ಶೋಚನೀಯ.

ಕೇಜ್ರಿವಾಲ್ ಹಾಗೂ ಸಂಗಡಿಗರು ರೂಪಿಸಿದ ಆಮ್ ಆದ್ಮಿ ಪಕ್ಷ ಬೇರೆ ರಾಜಕೀಯ ಪಕ್ಷಗಳಲ್ಲಿ ಇಲ್ಲದ ಆಂತರಿಕ ಲೋಕಪಾಲ್ ವ್ಯವಸ್ಥೆಯನ್ನು ಹೊಂದಿರುವುದು ಪಕ್ಷದ ಒಳಗಿನ ವ್ಯಕ್ತಿಗಳು ತಪ್ಪು ಮಾಡುವುದನ್ನು ತಡೆಯಲು ಒಂದು ಉತ್ತಮ ವ್ಯವಸ್ಥೆಯಾಗಿದೆ. ಈ ಆಂತರಿಕ ಲೋಕಪಾಲಕ್ಕೆ ನಿಷ್ಪಕ್ಷಪಾತ ಹಾಗೂ ನ್ಯಾಯವನ್ನು ಎತ್ತಿ ಹಿಡಿಯುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ಒಳಗೆ ತಪ್ಪುಗಳು ಆಗುವುದನ್ನು ಸಾಕಷ್ಟು ತಡೆಗಟ್ಟಬಹುದು. ಅಧಿಕಾರಕ್ಕೆ ಬಂದ ನಂತರ ರಾಜಕೀಯ ಧುರೀಣರು ತಪ್ಪು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಧಿಕಾರ ಬಂದ ನಂತರ ಸರಳವಾಗಿದ್ದ ಜನರು ವೈಭೋಗದ ಜೀವನಕ್ಕೆ ಮರುಳಾಗಿ ಬೂರ್ಜ್ವಾ ಆಗಿ ಪರಿವರ್ತನೆಯಾಗುವುದನ್ನು ನಾವು ಸಾಕಷ್ಟು ಕಾಣುತ್ತಿದ್ದೇವೆ. ಅತ್ಯಂತ ತತ್ವಬದ್ಧ ಜನರೂ ಒಮ್ಮೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಇತರ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಲ್ಲಿ ಇರುವಂತೆಯೇ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿ, ಕೋಮುಗಳ ಓಲೈಕೆ, ಸಿದ್ಧಾಂತಗಳನ್ನು ಗಾಳಿಗೆ ತೂರುವುದನ್ನು ಮಾಡುವುದನ್ನು ತಡೆಯಲು ಇಂಥ ಆಂತರಿಕ ಲೋಕಪಾಲ್ ವ್ಯವಸ್ಥೆ ಕಡಿವಾಣ ಹಾಕಬಲ್ಲದು. ಈ ನಿಟ್ಟಿನಲ್ಲಿ arvind-kejriwal-campaigningಆಮ್ ಆದ್ಮಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂದು ಕಂಡುಬರುತ್ತದೆ. ಅಲ್ಲದೆ ಚುನಾವಣೆ ಎದುರಿಸಲು ಹಾಗೂ ಪಕ್ಷ ಕಟ್ಟಲು ಜನರಿಂದಲೇ ಹನಿಗೂಡಿ ಹಳ್ಳ ಎಂಬ ರೀತಿಯಲ್ಲಿ ನ್ಯಾಯಯುತ ಮಾರ್ಗದಲ್ಲಿ ದೇಣಿಗೆ ಪಡೆಯುವ ಮತ್ತು ಅದನ್ನು ಪಾರದರ್ಶಕವಾಗಿ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸುವ ಮೂಲಕ ಇದು ತಾನು ಭಿನ್ನ ಎಂದು ತೋರಿಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆಯುವ ಹಣವೇ ಎಲ್ಲ ಭ್ರಷ್ಟಾಚಾರಗಳ ತಾಯಿಯಾಗಿರುವ ಕಾರಣ ಅದನ್ನು ನಿವಾರಿಸಿದ ಆಮ್ ಆದ್ಮಿ ಪಕ್ಷ ದೇಶಕ್ಕೆ ಒಳಿತು ಮಾಡುವ ಸಾಧ್ಯತೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದು ಮಾತ್ರವಲ್ಲದೆ ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಯೋಗ್ಯ ಅಭ್ಯರ್ಥಿಗಳು ಕಣದಲ್ಲಿ ಇಲ್ಲದೆ ಇದ್ದರೆ ‘ಯಾರಿಗೂ ಇಲ್ಲ’ ಎಂಬ ಮತವನ್ನು ನೀಡುವ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳು ಗೆದ್ದ ಅಭ್ಯರ್ಥಿಯು ಪಡೆದ ಮತಗಳಿಗಿಂತ ಹೆಚ್ಚಾದರೆ ಪುನಃ ಚುನಾವಣೆ ನಡೆಸುವ ವ್ಯವಸ್ಥೆ, ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ ಇತ್ಯಾದಿ ಕ್ರಾಂತಿಕಾರಕ ಸುಧಾರಣೆಗಳನ್ನು ತರುವ ಬದ್ಧತೆಯನ್ನು ತೋರಿಸುವ ಮಾತನ್ನು ಹೇಳುತ್ತಿದೆ. ಇವೆಲ್ಲಾ ಜಾರಿಗೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಾಂತಿಕಾರಕವಾಗಿ ಸುಧಾರಣೆಯಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಈ ಪಕ್ಷವನ್ನು ದೇಶಾದ್ಯಂತ ಯುವಜನ ಬೆಳೆಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

ಜನ ಅಧ್ಯಾತ್ಮ ಎಂದು ತಮ್ಮ ಸ್ವಾರ್ಥ ಸಾಧನೆಯ ವೈಯಕ್ತಿಕ ನಿರರ್ಥಕ ಹಾದಿಯಲ್ಲಿ ಹೋಗುವ ಬದಲು ದೇಶದ ಹಾಗೂ ಜನರ ಪರಿಸ್ಥಿತಿ ಸುಧಾರಣೆಗೆ ತೊಡಗುವುದು ಹೆಚ್ಚು ಸಾರ್ಥಕ ಹಾದಿಯಾಗಿದೆ. ದೇವರು ದಿಂಡರು ಎಂದು ದೇವಸ್ಥಾನಗಳಿಗೆ ಕಾಣಿಕೆ ಹಾಕುವ ಬದಲು ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸುವ ಸಲುವಾಗಿ ಆಮ್ ಆದ್ಮಿಯಂಥ ಪಕ್ಷಗಳಿಗೆ ದೇಣಿಗೆ ನೀಡುವುದರಲ್ಲಿ ದೇಶದ ಹಿತ ಹಾಗೂ ಜನಸಾಮಾನ್ಯರ ಹಿತ ಅಡಗಿದೆ. Arvind_Kejriwal_party_launchವಿದೇಶಗಳಿಗೆ ಹೋಗಿ ಕೋಟ್ಯಂತರ ಹಣ ಗಳಿಸಿರುವ ಭಾರತೀಯರು ಇದೀಗ ಭಾರತಕ್ಕೆ ಮರಳಿ ದೇಶಸೇವೆಗೆ ಸಜ್ಜಾಗಬೇಕಾಗಿದೆ. ವಿದೇಶಗಳಿಗೆ ಹೋಗಿ ಹತ್ತಾರು ವರ್ಷ ದುಡಿದು ಕೋಟಿಗಟ್ಟಲೆ ಸಂಪಾದಿಸಿದ ಹಣವನ್ನು ಇಲ್ಲಿ ಬ್ಯಾಂಕುಗಳಲ್ಲಿ ನಿಗದಿತ ಠೇವಣಿ ಇರಿಸಿ ಅದರ ಬಡ್ಡಿಯಿಂದಲೇ ಉತ್ತಮ ಮಧ್ಯಮ ವರ್ಗದ ಜೀವನ ತೆಗೆಯಲು ಹಾಗೂ ತಮ್ಮ ಸಮಯವನ್ನು ದೇಶಸೇವೆಗೆ ಮೀಸಲಿಡಲು ಅನಿವಾಸಿ ಭಾರತೀಯರಿಗೆ ಸಾಧ್ಯವಿದೆ. ಈ ರೀತಿ ವಿದೇಶಗಳಿಂದ ಆದರ್ಶವಾದಿ ಭಾರತೀಯರನ್ನು ಭಾರತದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಪ್ರೇರೇಪಿಸಿದರೆ ಪಕ್ಷದ ಯಶಸ್ವೀ ಬೆಳವಣಿಗೆಗೆ ಸಹಾಯವಾಗಬಹುದು. ಇದು ಇಂದು ಆಗಬೇಕಾಗಿರುವ ಕಾರ್ಯ.

ಭಾರತದ ಮಾಧ್ಯಮಗಳು ಯಾವುದೇ ಆದರ್ಶ ಹಾಗೂ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯವನ್ನು ದೇಶದಲ್ಲಿ ಬೆಳೆಸುವಲ್ಲಿ ಮುಂದೆ ಬರುವುದಿಲ್ಲ ಹಾಗೂ ಹಾಗೆ ನಿಸ್ವಾರ್ಥವಾಗಿ ಮುಂದೆ ಬರುವವರಿಗೂ ಪ್ರೋತ್ಸಾಹ ನೀಡುವುದಿಲ್ಲ ಎಂಬುದು ಆಮ್ ಆದ್ಮಿ ಪಕ್ಷದ ವಿಷಯದಲ್ಲಿ ನಿಜವಾಗಿದೆ. ಹೀಗಾಗಿ ಇಂದು ಹೊಸ ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕೀಯ ಪಕ್ಷವನ್ನು ದೇಶಾಧ್ಯಂತ ಕಟ್ಟುವುದು ಬಹಳ ಸಮಯವನ್ನು ಹಾಗೂ ಶ್ರಮವನ್ನು ಬೇಡುತ್ತದೆ. ಮಾಧ್ಯಮಗಳ ಅಸಹಕಾರದ ನಡುವೆಯೂ ಇಂಥ ಒಂದು ಕಾರ್ಯ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ ಮಾಡಿ ತೋರಿಸಿದೆ. ಆಮ್ ಆದ್ಮಿ ಪಕ್ಷದ ಈ ಸಾಧನೆಯ ಹಾದಿಯಲ್ಲಿ ಅಂತರ್ಜಾಲ ಮಾಧ್ಯಮವು ಜನರ ಸಂಪರ್ಕ ಸೇತುವಾಗಿ ಮಹತ್ವದ ಕಾಣಿಕೆ ನೀಡಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ದೈತ್ಯ ದೃಶ್ಯಮಾಧ್ಯಮಗಳ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಅಂತರ್ಜಾಲ ಮಾಧ್ಯಮವು ಆಮ್ ಆದ್ಮಿ ಪಕ್ಷಕ್ಕೆ ಬಹಳಷ್ಟು ನೆರವಾಗಿದೆ. ಅಂತರ್ಜಾಲ ಇಲ್ಲದೆ ಹೋಗಿದ್ದರೆ ಪಟ್ಟಭದ್ರ ಹಿತಾಸಕ್ತಿ ಉಳ್ಳ ಬಂಡವಾಳಗಾರರು ಹಾಗೂ ರಾಜಕೀಯ ಶಕ್ತಿಗಳು ದೈತ್ಯ ದೃಶ್ಯ ಮಾಧ್ಯಮಗಳಲ್ಲಿ ನಡೆಸುವ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನು ಕಟ್ಟುವಲ್ಲಿಯೂ ಅಂತರ್ಜಾಲ ಮಾಧ್ಯಮ ಬಹಳ ಪ್ರಮುಖ ಪಾತ್ರ ವಹಿಸುವುದು ಖಚಿತ. ಆಮ್ ಆದ್ಮಿ ಪಕ್ಷವು ಸಾಧಿಸಲು ಅಸಾಧ್ಯವಾದ arvind-kejriwal-delhi-electionsಆಶ್ವಾಸನೆಗಳನ್ನು ನೀಡಲು ಹೋಗಲೇಬಾರದು. ಹೀಗೆ ಮಾಡಿದರೆ ಅದರ ವಿಶ್ವಾಸಾರ್ಹತೆಗೆ ಧಕ್ಕೆಯಾದೀತು. ಜನರಿಗೆ ಹೆಚ್ಚಿನ ಆಶ್ವಾಸನೆ ಬೇಕಾಗಿಲ್ಲ. ಜನರಿಗೆ ಬೇಕಾಗಿರುವುದು ಪ್ರಾಮಾಣಿಕ ಆಡಳಿತ ನೀಡುವ ವಿಶ್ವಾಸಾರ್ಹ ಜನ. ಅಷ್ಟನ್ನು ನೀಡಿದರೂ ಸಾಕು, ಕಾರ್ಯಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡಬೇಕಾದ ಅಗತ್ಯ ಇಲ್ಲ.

ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಇದುವರೆಗೆ ಭಾರತದಲ್ಲಿ ರೂಪುಗೊಂಡ ಪಕ್ಷಗಳಲ್ಲೇ ಉತ್ತಮವಾದ ಪಕ್ಷ ಎಂಬುದು ಅದರ ನಿಲುವುಗಳನ್ನು ನೋಡಿದರೆ ತಿಳಿಯುತ್ತದೆ. ಹೀಗಿದ್ದರೂ ಅದರ ಧ್ಯೆಯೋದ್ಧೇಶಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಪ್ರಧಾನ ವಾಹಿನಿಯ ಮಾಧ್ಯಮಗಳು ಮಾಡಿಲ್ಲ, ಮಾಡುತ್ತಿಲ್ಲ. ಇದೇಕೆ ಹೀಗೆ? ಮಾಧ್ಯಮ ಕ್ಷೇತ್ರದ ತರುಣ್ ತೇಜಪಾಲ್ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹೊರಗೆ ಬಂದಾಗ ಮಾಧ್ಯಮ ಕ್ಷೇತ್ರವನ್ನೂ ಒಳಗೊಂಡು ಎಲ್ಲ ಕ್ಷೇತ್ರಗಳ ಜನರೂ ಈ ಅತ್ಯಾಚಾರವನ್ನು ಖಂಡಿಸಿದರು. ಆದರೆ ಮಾಧ್ಯಮಗಳು ದಿನನಿತ್ಯ ಮೌಲ್ಯಗಳ ಮೇಲೆ ಎಸಗುತ್ತಿರುವ ಅತ್ಯಾಚಾರದ ಬಗ್ಗೆ ಯಾರೂ ಏಕೆ ಚಕಾರ ಎತ್ತುತ್ತಿಲ್ಲ. ಏಕೆ ಹೀಗೆ? ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯವನ್ನು ದೇಶದಲ್ಲಿ ಬೆಳೆಸಲು ಆಮ್ ಆದ್ಮಿ ಪಕ್ಷ ಅಪಾರ ಶ್ರಮ ಹಾಕಿ ದುಡಿಯುತ್ತಿರುವಾಗ ದೃಶ್ಯ ಮಾಧ್ಯಮಗಳು ಆಮ್ ಆದ್ಮಿ ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಕೊಂಡದ್ದೂ ಕಂಡುಬಂತು. ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯುತ್ತಿರುವ ಆಮ್ ಆದ್ಮಿ ಪಕ್ಷದ ಮೇಲೆ ಅಪಪ್ರಚಾರ ಮಾಡುವುದು ಮಾಧ್ಯಮ ಕ್ಷೇತ್ರದ ಮೌಲ್ಯಗಳ ಮೇಲೆ ನಡೆಸಿದ ಅತ್ಯಾಚಾರವಲ್ಲವೇ ಎಂಬ ಬಗ್ಗೆ ಮಾಧ್ಯಮಗಳ ಮಂದಿ ಯೋಚಿಸದಿದ್ದರೆ ಇನ್ನು ಯಾರು ಯೋಚಿಸಬೇಕು? ಮಾಧ್ಯಮ ಕ್ಷೇತ್ರದ ದೊರೆಗಳು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇಂದು ಇದೆ. ಮೋದಿಗೆ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ದೊರಕಿದ ಪ್ರಚಾರದ ನೂರರಲ್ಲಿ ಒಂದು ಪಾಲು ಕೂಡ ಆಮ್ ಆದ್ಮಿ ಪಕ್ಷಕ್ಕೆ ದೊರೆಯಲಿಲ್ಲ. ಇದೂ ಕೂಡ ಮಾಧ್ಯಮ ಕ್ಷೇತ್ರದ ಮಂದಿ ಮೌಲ್ಯಗಳ ಮೇಲೆ ಮಾಡುತ್ತಿರುವ ಅತ್ಯಾಚಾರವೇ ಸರಿ. ಇದರ ಬಗ್ಗೆಯೂ ಮಾಧ್ಯಮಗಳಲ್ಲಿ ಚರ್ಚೆ ಆಗಲಿ.

ಆಮ್ ಆದ್ಮಿ ಪಾರ್ಟಿ ಮತ್ತು ರಾಜಕೀಯ


– ಚಿದಂಬರ ಬೈಕಂಪಾಡಿ


 

ಐದು ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶವನ್ನು ದೆಹಲಿ ಮೂಲಕ ಆಮ್ ಆದ್ಮಿ ಪಾರ್ಟಿ ರವಾನಿಸಿದೆ. ಇಂಥ ಫಲಿತಾಂಶವನ್ನು ಸ್ವತ: ಆಮ್ ಆದ್ಮಿ ಕೂಡಾ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಅಂಥ ಫಲಿತಾಂಶವನ್ನು ದಾಖಲಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ಇದು ಸಾಧ್ಯವಾದದ್ದು ಹೇಗೆ ಎನ್ನುವ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ.

ಸಧ್ಯ ದೆಹಲಿಯಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಅಸ್ಪಷ್ಟವಾದರೂ ಕೂಲದೆಳೆ ಅಂತರದಲ್ಲಿ ಆಮ್ ಆದ್ಮಿ ಅಧಿಕಾರ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.

ಆಮ್ ಆದ್ಮಿ ಜನಸಾಮಾನ್ಯರ ಶಕ್ತಿ ಕೇಂದ್ರವೆಂದು ಈಗ ಇಡೀ ದೇಶದ ಗಮನ ಸೆಳೆದಿದೆ. aam-admi-partyರಾಜಕೀಯ ಪಕ್ಷವಾಗಿ ಆಮ್ ಆದ್ಮಿ ಗುರುತಿಸಿಕೊಳ್ಳುವುದು ಸಾಧ್ಯವಾಗಿರುವುದಕ್ಕೆ ದೆಹಲಿಯಲ್ಲಿ ಮೂರು ಅವಧಿಗೆ ಆಡಳಿತ ಮಾಡಿದ ಕಾಂಗ್ರೆಸ್ ಮತದಾರರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ಮನೋಭಾವ ಬೆಳೆಸಿಕೊಂಡದ್ದು. ಬಿಜೆಪಿಯನ್ನು ವಿರೋಧಿಸಿ ಎನ್ನುವ ಸಂದೇಶ ನೀಡುತ್ತಲೇ ಕಾಲ ಕಳೆದ ಕಾಂಗ್ರೆಸ್ ತನ್ನನ್ನು ಯಾಕೆ ಆಯ್ಕೆ ಮಾಡಬೇಕು ಎಂದು ಹೇಳುವುದನ್ನು ಮರೆತೇ ಬಿಟ್ಟಿತು.

ನಿರಂಕುಶ ಆಡಳಿತವನ್ನು ಸಹಿಸಿಕೊಳ್ಳುವುದಕ್ಕೂ ಮಿತಿ ಇರುತ್ತದೆ ಎನ್ನುವುದನ್ನು ಕಾಂಗ್ರೆಸ್ ಮರೆತು ತಪ್ಪೆಸಗಿತು. ಆ ತಪ್ಪನ್ನು ತನ್ನ ಅಸ್ತ್ರವಾಗಿಸಿಕೊಂಡದ್ದು ಆಮ್ ಆದ್ಮಿ. ಮತದಾರ ತನ್ನ ತೆಕ್ಕೆಯಲ್ಲೇ ಇರುತ್ತಾನೆ, ಅವನಿಗೆ ಬೇರೆ ಪಕ್ಷಗಳಿಲ್ಲ ಎನ್ನುವ ವೈಯಕ್ತಿಕ ತೀರ್ಮಾನಕ್ಕೆ ಬಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಅತ್ತ ಬಿಜೆಪಿ ಕೂಡಾ ಆಂತರಿಕ ಭಿನ್ನಮತದಿಂದ ನಲುಗಿ ಸುಧಾರಿಸಿಕೊಳ್ಳುವಷ್ಟರಲ್ಲಿ ಚುನಾವಣೆ ಕಾಲಿಟ್ಟಿತು. ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿ ಮಾಡುವ ಸಿಂಗಲ್ ಪಾಯಿಂಟ್ ಘೋಷಣೆಯೊಂದಿಗೆ ಬಿಜೆಪಿ ಕಾಲಹರಣ ಮಾಡಿತು. ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಲು ಹೇಳಿದ ಬಿಜೆಪಿ ಆಮ್ ಆದ್ಮಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಮತ್ತು ಆನಂತರದ ಬೆಳವಣಿಗೆಗಳಲ್ಲಿ ಆಮ್ ಆದ್ಮಿಯ ಕೇಜ್ರಿವಾಲ್ ತಂಡ ಸಕ್ರಿಯವಾಗಿ ಗುರುತಿಸಿಕೊಂಡಿತು. ದೆಹಲಿ ಸುರಕ್ಷಿತ ನಗರವಲ್ಲ ಎನ್ನುವ ಭಾವನೆ ಯುವಕರಲ್ಲಿ ಮತ್ತು ಯುವತಿಯರಲ್ಲಿ ಅದರಲ್ಲೂ ಹೆಂಗಸರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಗ್ಯಾಂಗ್ ರೇಪ್ ನಂತರವೂ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಓರ್ವ ಹೆಣ್ಣಾಗಿ ಅಂತಹ ಭಯದ ವಾತಾವರಣವನ್ನು ನಿಗ್ರಹಿಸುವಂಥ ಕಾಳಜಿ ತೋರಲಿಲ್ಲ ಎನ್ನುವ ಅಪವಾದವನ್ನು ಹೊತ್ತುಕೊಳ್ಳಬೇಕಾಯಿತು. ಇದು ಕೇವಲ ಅಪವಾದವಾಗಿರದೇ ವಾಸ್ತವವಾಗಿತ್ತು.

ಜನಸಾಮಾನ್ಯರ ಸಮಸ್ಯೆಗಳನ್ನು ಕಾಂಗ್ರೆಸ್ ಕಡೆಗಣಿಸಿತ್ತು, ಅದನ್ನು ಗುರುತಿಸಿ ತಮ್ಮ ಪಕ್ಷದ ಘೋಷಣೆಯನ್ನಾಗಿ arvind-kejriwal-campaigningಮಾಡಿಕೊಂಡವರು ಕೇಜ್ರಿವಾಲ್. ಮಧ್ಯಮ ಮತ್ತು ಕೆಳಸ್ಥರದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಕೇಜ್ರಿವಾಲ್ ಅವರ ಸಮಸ್ಯೆಗಳಿಗೆ ಧ್ವನಿಯಾದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದು ಮುಖ್ಯವೆನಿಸಲಿಲ್ಲವೋ ಆ ಸಂಗತಿಗಳೇ ಆಮ್ ಆದ್ಮಿಗೆ ಮುಖ್ಯವೆನಿಸಿದವು. ಐಟಿ, ಬಿಟಿ ಯುವಕ, ಯುವತಿಯರು ಆಮ್ ಆದ್ಮಿಯತ್ತ ಮುಖಮಾಡಲು ಕೇಜ್ರಿವಾಲ್ ಅವರ ಶ್ರಮವೂ ಕಾರಣ. ಹೈಫೈ ರಾಜಕಾರಣಕ್ಕಿಳಿಯದೇ ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವ ಸರಳ ಗುಣಕ್ಕೆ ದಿಲ್ಲಿಯ ಜನ ಮತ ಹಾಕಿದರು. ಕೈಯಲ್ಲಿದ್ದ ಅಧಿಕಾರವನ್ನು ಪೊರಕೆಗೆ ಕೊಡಬೇಕೆನ್ನುವ ತೀರ್ಮಾನವನ್ನೇನೂ ಅವರು ಮಾಡಿರಲಿಲ್ಲ, ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವ ನಂಬಿಕೆಯಲ್ಲೇ ಮತ ಹಾಕಿದರು. ಅದು ಈ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವ ಕಲ್ಪನೆ ಆಮ್ ಆದ್ಮಿ ಪಕ್ಷಕ್ಕೂ ಪೂರ್ಣವಾಗಿ ಹೊಳೆದಿರಲಿಲ್ಲ.

ಒಂದು ವೇಳೆ ಅಣ್ಣಾ ಹಜಾರೆ ಆಮ್ ಆದ್ಮಿಯಲ್ಲಿ ಸಕ್ರಿಯರಾಗಿದಿದ್ದರೆ ದಿಲ್ಲಿ ಗದ್ದುಗೆ ಅನಾಯಾಸವಾಗಿ ಆಮ್ ಆದ್ಮಿ ವಶಕ್ಕೆ ಬರುತ್ತಿತ್ತು ಅನ್ನಿಸುತ್ತಿದೆ ಈಗ. ಸ್ವತಃ ಅಣ್ಣಾ ಹಜಾರೆಗೂ ಅನ್ನಿಸಿರಬಹುದು. ಹಾಗೆಂದು ಇಂಥ ಬೆಳವಣಿಗೆ ಎಲ್ಲ ಕಾಲದಲ್ಲೂ ಘಟಿಸುವುದಿಲ್ಲ.

ಅಸ್ಸಾಂ ವಿದ್ಯಾರ್ಥಿಗಳು ಹುಟ್ಟು ಹಾಕಿದ್ದ ಅಸ್ಸಾಂ ಗಣಸಂಗ್ರಾಮ ಪರಿಷತ್ ಪ್ರಫುಲ್ಲ ಕುಮಾರ್ ಮೊಹಂತ ಅವರ ಸಾರಥ್ಯದಲ್ಲಿ ಆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಇಂಥ ಸಾಧನೆ ಮಾಡಿದೆ.

ರಾಜಕೀಯದಲ್ಲಿ ಅಂತಿಮವಾಗಿ ಗೆಲ್ಲುವುದು ಅಧಿಕಾರವೇ. ಅಂಥ ಅಧಿಕಾರದ ಹಗ್ಗ ಹಿಡಿಯುವ ಸನಿಹಕ್ಕೆ ಬಂದಿರುವ ಆಮ್ ಆದ್ಮಿ ಇದೇ ಟ್ರೆಂಡ್ ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡುವುದು ಈ ಕ್ಷಣಕ್ಕೆ ಸಾಧ್ಯವಿಲ್ಲ. ಒಂದು ಸಂಘಟನೆಗೆ ಸಂಘಟನೆಯ ಗುಣಗಳಿರುತ್ತವೆಯೇ ಹೊರತು ರಾಜಕೀಯ ಪಕ್ಷದ ಉಸಿರಿರುವುದಿಲ್ಲ. ಆಮ್ ಆದ್ಮಿಯೊಳಗೂ ರಾಜಕೀಯದ ಉಸಿರಿಲ್ಲ, ಕವಚ ಮಾತ್ರ ಇದೆ.

“ನುಡಿಸಿರಿ”ಯ ಡಾ.ಮೋಹನ ಆಳ್ವರಿಗೆ ಸಬಿಹಾ ಭೂಮಿಗೌಡರ ಬಹಿರಂಗ ಪತ್ರ

ಡಾ. ಮೋಹನ ಆಳ್ವ ಅವರಿಗೆ,

ಮೂಡಬಿದಿರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗದೆ ಹೋಗಿದ್ದಿದ್ದರೆ, ಅದರ ವ್ಯವಸ್ಥೆಯ ಹೊಣೆಗಾರಿಕೆಯನ್ನು ನೀವು ಹೊತ್ತುಕೊಳ್ಳದೆ ಹೋಗಿದ್ದಿದ್ದರೆ, ಅಚ್ಚುಕಟ್ಟುಪ್ರಿಯರೂ ಸೊಗಸುಗಾರರೂ ಆದ ನಿಮಗೆ ಆ ಸಮ್ಮೇಳ ಅತೃಪ್ತಿಯನ್ನು ಉಂಟುಮಾಡದೆ ಹೋಗಿದ್ದಿದ್ದರೆ, ಬಹುಶ: ನುಡಿಸಿರಿ ಹುಟ್ಟುತ್ತಿರಲಿಲ್ಲ. ನುಡಿಸಿರಿ ಸಮ್ಮೇಳನ ಶುರುವಾದಾಗಿನಿಂದ ನಿಮ್ಮ ತಂಡದಲ್ಲಿ ಒಬ್ಬಳಾಗಿದ್ದು ನಿಮ್ಮ ಕಾರ್ಯವೈಖರಿ, alvas-nudisiri-2ವಿನಯ, ಆದರವನ್ನು ಕಂಡವಳಾದರೂ ಈಗ ಅದರೊಳಗೆ ಒಬ್ಬಳಾಗಲು ಮನಸ್ಸು ಸಂಕೋಚ ಪಡುವಂಥ, ನಿರಾಕರಿಸುವಂಥ ಸ್ಥಿತಿ ಉಂಟಾಗಿದೆ. ಯಾವ ಕಾರಣಗಳೂ, ಯಾವ ಸಮರ್ಥನೆಗಳೂ ನನ್ನನ್ನು ನಿಮ್ಮ ಜೊತೆ ನಿಲ್ಲುವಂತೆ ಮಾಡದಂಥ ಸ್ಥಿತಿ ಈಗ ನಿರ್ಮಾಣಗೊಂಡಿದೆಯಾದರೂ ನಿಮ್ಮ ಮೇಲಿನ ನನ್ನ ಗೌರವ, ವಿಶ್ವಾಸಗಳೇ ಈ ಪತ್ರದ ಹಿಂದಿನ ಆಶಯವೂ ಆಗಿದೆ.

ಇದು ಏಕಾಏಕಿ ಆದ ಬೆಳವಣಿಗೆ ಅಲ್ಲ. ನುಡಿಸಿರಿ ಸಮ್ಮೇಳನದ ಆರಂಭಿಕ ಸಭೆಗಳಿಂದ ನಿಮ್ಮ ಜೊತೆಗಿದ್ದ ನನಗೆ ಮೊದಲೆರಡು ವರ್ಷಗಳ ಕಾಲ ಸಮ್ಮೇಳನದ ಅಚ್ಚುಕಟ್ಟುತನ, ವೈಭವ, ಆತಿಥ್ಯದ ವೈಖರಿ, ಸನ್ಮಾನಿತರ ಸನ್ಮಾನದ ವೇಳೆ ನೀವು ತೋರುವ ಪ್ರೀತಿ ಮತ್ತು ವಿನಯಗಳ ಕುರಿತು, ಸಂಭ್ರಮ, ಬೆರಗು ಹುಟ್ಟಿತ್ತು. ಸಮ್ಮೇಳನಾಧ್ಯಕ್ಷರನ್ನು ಮತ್ತು ವಿಶೇಷ ಕಲಾವಿದರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರೆಸುವುದರ ಬಗ್ಗೆ ನನಗಾಗ ಪ್ರಶ್ನೆಯೇ ಎದ್ದಿರಲಿಲ್ಲ. ಕೆಲವರು ಪಲ್ಲಕ್ಕಿಯಲ್ಲಿ ಕುಳಿತ ಸಂದರ್ಭದಲ್ಲಿ ಕಣ್ಮುಚ್ಚಿ ಧನ್ಯತೆಯಿಂದ, ವಿನಯದಿಂದ ಸಭೆಗೆ, ಸಭಿಕರಿಗೆ ವಂದಿಸುತ್ತ ಸಾಗಿದಾಗ ಅವರ ಸಾಧನೆಗೆ ಅವರ ಬದುಕಿನಲ್ಲಿ ಈ ಕ್ಷಣ ಅವಿಸ್ಮರಣೀಯವಾಗಿ ಉಳಿಯುತ್ತದೆ ಎಂದು ಮಾತ್ರ ಯೋಚಿಸಿದ್ದೆ. ಕೆಲವರು ಪಲ್ಲಕ್ಕಿಯಲ್ಲಿ ಕುಳಿತು ತನ್ನವರು ಎಲ್ಲಿದ್ದಾರೆ ಎಂದು ಹುಡುಕಿದಾಗ, ಅವರನ್ನು ಕರೆಸಲು ಕರೆ ನೀಡಿದಾಗ, ತನ್ನನ್ನು ಬಿಟ್ಟರೆ ಈ ಜಗದಲ್ಲಿ ಇನ್ನೋರ್ವ ಸಾಧಕರಿಲ್ಲ ಎಂಬಂತೆ ಹಮ್ಮು ತೋರಿ ಬೀಗಿದಾಗ, ಅಂಥವರ ಬಗ್ಗೆ ಹೇವರಿಕೆ ಉಂಟಾಗಿತ್ತು. ಅನಂತರದ ವರ್ಷಗಳಲ್ಲಿ ಪಲ್ಲಕ್ಕಿಯಲ್ಲಿ ಕೂತವರ ಕಡೆಗಿಂತ ಅದನ್ನು ಹೊತ್ತವರ ಕಡೆ ನನ್ನ ದೃಷ್ಟಿ ಹರಿದಾಗ, ಹೊತ್ತವರ ಮೈಮೇಲೆ ಮೂಡಿದ ಮತ್ತು ಹರಿದ ಬೆವರಿನ ಸ್ನಾನವು ’ಪಲ್ಲಕ್ಕಿಸಂಸ್ಕೃತಿ’ಯ ಇನ್ನೊಂದು ಮುಖವನ್ನು ಪರಿಚಯಿಸಿತು. ’ನಾಲ್ಕು ಜನರ ಮೇಲೆ ಹೊರಿಸಿಕೊಳ್ಳುವ ಸಂದರ್ಭ ಪ್ರತಿಯೊಬ್ಬರಿಗೂ ಒಂದು ದಿನ ಬಂದೇ ಬರುತ್ತದೆ; ಅದು ಅವರ ಕೊನೆಯ ಯಾತ್ರೆ’ ಎಂದು ನನ್ನ ಪ್ರೀತಿಯ ಪಂಡಿತಾರಾಧ್ಯ ಮೇಷ್ಟ್ರು ಹೇಳಿದ್ದ ಮಾತು ಆ ಕ್ಷಣದಲ್ಲಿ ಧುತ್ತೆಂದು ನೆನಪಾಗಿ ಇಡೀ ’ಪಲ್ಲಕ್ಕಿಸಂಸ್ಕೃತಿ’ಯ ಕುರಿತು ನನ್ನಲ್ಲಿ ವಿಮುಖತೆ ಆರಂಭವಾಯ್ತು.

ನಾಡಿನ ಬೇರೆಬೇರೆ ಕಡೆಗಳಿಂದ ಸಾಹಿತಿ-ಕಲಾವಿದರನ್ನು ಕರೆಸಿಕೊಂಡು, ಅವರ ನಿರೀಕ್ಷೆಗೆ ಮೀರಿದ ಉಪಚಾರ, ಉಡುಗೊರೆ ನೀಡಿ, ನಿಮ್ಮ ಔದಾರ್‍ಯವನ್ನು ಅವರೆಲ್ಲ ಕೊಂಡಾಡುವಂತೆ ಮಾಡಿದಿರಿ. ಅದರಿಂದ ಅವರನ್ನು ನಿಮ್ಮ ಮತ್ತು ನಿಮ್ಮ ಶಿಕ್ಷಣ ಸಂಸ್ಥೆಯ ರಾಯಭಾರಿಗಳನ್ನಾಗಿ ಮಾಡಿದಿರಿ; ಕ್ರಮೇಣ ಹಾಗೆ ಬಂದವರಲ್ಲಿ ಕೆಲವರು ತಮಗೆ ಕೊಟ್ಟದ್ದು ಸಾಕಾಗಲಿಲ್ಲ ಎಂಬ ತಕರಾರು ಎತ್ತಿದ ವಿಚಾರ ನನ್ನ ಕಿವಿಗೆ ಬಿದ್ದಾಗಲೆಲ್ಲ ಅಂಥ ಸಾಹಿತಿಗಳ ಬಗ್ಗೆ ಹೇವರಿಸಿಕೊಂಡೆನೇ ಹೊರತು, ನಿಮ್ಮ ವ್ಯವಸ್ಥೆಯು ಅವರನ್ನು ಭ್ರಷ್ಟಗೊಳಿಸಿದ್ದನ್ನು ಅರಿಯಲಾಗದೆ ಹೋದೆ. ಅಪನುಡಿ ಬಾರದಂತೆ ನೋಡಿಕೊಳ್ಳುವುದನ್ನೇ ಆದ್ಯತೆಯಾಗಿಸಿದ ನೀವು ಸಾಹಿತಿಗಳ ಇಂಥ ತಕರಾರುಗಳಿಗೆ ’ಕೇಳಿದಷ್ಟು ನೀಡಿ’ ಹಿಂದಿನಿಂದ ’ಒಟ್ಟು ಕಲಾವಿದ ಮತ್ತು ಸಾಹಿತಿಗಳೇ ಹೀಗೆ’ ಎಂದು ರೇಜಿಗೆಗೊಂಡು ಸಣ್ಣ ಮಾತುಗಳನ್ನಾಡುವ ಸ್ಥಿತಿ ಬಂದಿತು.

ಆದರೆ ಪೂರ್ವಭಾವಿ ಸಭೆಗಳಲ್ಲಿ ಇಂಥ ವಿಚಾರಗಳ ಕುರಿತು ಮುಕ್ತ ಚರ್ಚೆಯನ್ನು ಮಾಡಲು ಸಾಧ್ಯವಾಗದಿರುವುದಕ್ಕೆalvas-nudisiri-3 ಹಲವು ಕಾರಣಗಳಿವೆ. ಒಂದು, ನಿಮ್ಮ ಆಪ್ತ ಬಳಗದ ಭಟ್ಟಂಗಿಗಳ ಕೋಟೆ ದಾಟಿ ನನ್ನಂಥವರ ಮಾತು ನಿಮ್ಮ ವಲಯವನ್ನು ಪ್ರವೇಶಮಾಡುವುದು ಅಸಾಧ್ಯವಾಗಿತ್ತು. ಎರಡು, ಸಾಹಿತ್ಯ ಸಮ್ಮೇಳನದ ಇಡೀ ಖರ್ಚನ್ನು ನೀವೆ ಹಾಕಿಕೊಂಡು ಮಾಡುವಾಗ, ಸಾರ್ವಜನಿಕರ ಹಣದಿಂದ ನಡೆಸುವ ಕಾರ್ಯಕ್ರಮಗಳ ಸಂಘಟನೆಯಲ್ಲಿ ನಡೆಸುವಂಥ ಮುಕ್ತ ಮತ್ತು ನಿಷ್ಠುರ ಚರ್ಚೆ ಅಲ್ಲಿ ಅಸಾಧ್ಯವೆಂಬ ಭಾವ ನನ್ನಂತೆ ಸಭೆಗಳಿಗೆ ಬರುತ್ತಿದ್ದ ಬಹುತೇಕ ಎಲ್ಲರದೂ ಆಗಿರುತ್ತಿತ್ತು. ಹೀಗಾಗಿ ಬಂದವರಲ್ಲಿ ಹಲವರು ನಿಮ್ಮ ಅಂತರಂಗದ ವಲಯದವರ ನಿಲುವುಗಳಿಗೆ ಪೂರಕವಾಗಿ ನಿಂತು, ಇಲ್ಲವೇ ತಮ್ಮ ಭಿನ್ನಮತವನ್ನು ನುಂಗಿಕೊಂಡು, ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಪ್ರಕ್ರಿಯೆಗಳಲ್ಲಿ ಮಾತ್ರ ಭಾಗವಹಿಸುವಂತಾಗಿತ್ತು.

ಅಂಥ ಸಮಾಲೋಚನಾ ಸಭೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕ್ರಮೇಣ ತೀರಾ ಸೊರಗಿದಾಗಲೂ ಅದು ನಿಮಗೆ ಪ್ರಶ್ನೆಯಾಗಿ ಯಾವತ್ತೂ ಕಾಡಿದ್ದಿಲ್ಲ. ನಿಮಗೆ ಅಲಂಕಾರಕ್ಕೆ, ಶೋಭೆಗೆ ಮಹಿಳೆಯರು ಬೇಕಾಗಿತ್ತು ಮತ್ತು ಅವರನ್ನು ಪರಿಧಿಗೆ ಸರಿಸಿಲ್ಲ ಎಂದು ತೋರಿಸಲು ಬೇಕಿತ್ತು. ಕಾವ್ಯ, ಕತೆಗಳನ್ನು ಬಿಟ್ಟು ಚಿಂತನೆಯ ಕ್ಷೇತ್ರ ಅವರದಲ್ಲ ಎಂಬ ನಿಲುವು ಈ ಒಂಬತ್ತು ವರ್ಷಗಳ ನುಡಿಸಿರಿಯ ಉದ್ದಕ್ಕೂ ಗಾಢವಾಗಿಯೇ ಕಂಡಿದೆ.

ಈ ಕರಾವಳಿಯಲ್ಲಿ ಇಲ್ಲಿನ ಜನಜೀವನವು ತಲ್ಲಣಿಸುವಂಥ ಎಷ್ಟು ವಿದ್ಯಮಾನಗಳು ಜರುಗಿಲ್ಲ? ಅದರೆ ಸಮ್ಮೇಳನ ಅದ್ದೂರಿಯಾಗಿ ಆಗಬೇಕು; ವಿವಾದಾತೀತ ಆಗಿರಬೇಕು ಎಂಬುದೇ ನಿಮ್ಮ ಆದ್ಯತೆ ಆಗಿದ್ದಾಗ, ಈ ನೆಲದ ಜನಸಾಮಾನ್ಯರ ಬದುಕು, ಚಿಂತನೆ, ಸಂವೇದನೆಗಳು ಸಹಜವಾಗಿ ಪರಿಧಿಯಾಚೆಗೇ ಉಳಿದುಬಿಟ್ಟಿವೆ. ಒಮ್ಮೆ ಈವರೆಗೆ ’ಕನ್ನಡ ಮನಸ್ಸು’ ಎಂದಿಟ್ಟುಕೊಂಡು ಆಯೋಜಿಸಿದ ನುಡಿಸಿರಿಗಳನ್ನು ಹಿಂತಿರುಗಿ ನೋಡಿ. ಸಮಕಾಲೀನ ಸಮಸ್ಯೆಗಳು, ಜನಸಾಮಾನ್ಯರ ಬಿಕ್ಕಟ್ಟುಗಳು, ಕರಾವಳಿಯ ಸಾಮಾಜಿಕ, ಸಾಂಸ್ಕೃತಿಕ ವಲಯಗಳ ತಲ್ಲಣಗಳು-ಇಂಥ ಯಾವ ವಿಷಯಗಳ ಕುರಿತು ಚರ್ಚೆಗೆ ನುಡಿಸಿರಿಯು ವೇದಿಕೆಯನ್ನು ನೀಡಿದೆ? ಕಳೆದೆರಡು ವರ್ಷಗಳಿಂದ ಪದೇ ಪದೇ ಸಮಾಲೋಚನಾ ಸಭೆಗಳಲ್ಲಿ ಈ ಬಗ್ಗೆ ನಾನು ಮತ್ತು ನನ್ನಂಥ ಕೆಲವರು ಒತ್ತಿ ಹೇಳಲು ಯತ್ನಿಸಿದರೂ ಅದಕ್ಕೆ ಮಾನ್ಯತೆ ದೊರೆಯದೆ ನಿಮಗೆ ಭಿನ್ನ ದನಿಗಳು ’ಒಡಕು ದನಿ’ಗಳಾಗಿ ಕೇಳಿಸಿದವು.

ಶಿಕ್ಷಣ ಸಂಸ್ಥೆಯ ಒಡೆಯರಾಗಿ, ಬಂಡವಾಳಶಾಹಿಯ ಪ್ರತಿನಿಧಿಯಾಗಿ, ಊಳಿಗಮಾನ್ಯ ವ್ಯವಸ್ಥೆಯ ಕೊಂಡಿಯಾಗಿ Alvas-Nudisiri-2010ಇಂಥ ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡುವುದು ನಿಮಗೆ ಕಷ್ಟವಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕರಾವಳಿಯ ಅವಳಿ ಜಿಲ್ಲೆಗಳು ಕೋಮುವಾದಿಗಳ ಆಡುಂಬೊಲವಾದ ಬಗ್ಗೆ ನಿಮಗೆ ಏನೂ ಅನ್ನಿಸುವುದಿಲ್ಲವೇ? ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಒಂದು ವರ್ಷದ ಅವಧಿಯಲ್ಲೇ ನಾಲ್ನೂರಕ್ಕೂ ಹೆಚ್ಚು ಯುವತಿಯರು ನಾಪತ್ತೆಯಾಗಿರುವ, ಮಾನವ ಕಳ್ಳಸಾಗಣೆಗೆ ತುತ್ತಾಗಿರುವ ಅಪಾಯವು ಸಮಕಾಲೀನ ತುರ್ತು, ಬಿಕ್ಕಟ್ಟು ಎಂದು ನಿಮಗೆ ಇನ್ನೂ ಅನಿಸಿಲ್ಲವೆ? ಮಡೆಮಡೆಸ್ನಾನ, ಪಂಕ್ತಿಭೇದದಂಥ ಆಚರಣೆಗಳು ಜಾರಿಯಲ್ಲಿದ್ದರೂ ಇಂಥ ಯಾವ ವಿಚಾರಗಳ ಚರ್ಚೆಗೆ ನುಡಿಸಿರಿಯು ವೇದಿಕೆಯನ್ನು ಒದಗಿಸಿದೆ? ಲವ್ ಜಿಹಾದ್ ನೆಪದಲ್ಲಿ ವಿಭಿನ್ನ ಕೋಮಿಗೆ ಸೇರಿದ ಹುಡುಗ-ಹುಡುಗಿಯರು ಜೊತೆಯಾಗಿ ಮಾತನಾಡುವುದು ಕಷ್ಟವಾಗಿರುವುದು; ಹೋಂ ಸ್ಟೇ ಪ್ರಕರಣ; ಅತ್ಯಾಚಾರ; ಇವೆಲ್ಲ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸುವ ಘನ ವಿಷಯ ಆಗಲಾರದೇ? (ಅ)ನೈತಿಕ ಪೊಲೀಸರ ಬಗೆಗೆ ನೀವಾಗಲೀ, ನುಡಿಸಿರಿಯಾಗಲೀ ದನಿ ಎತ್ತಬೇಕಲ್ಲವೇ?

ಜನಸಾಮಾನ್ಯರಲ್ಲಿ ಮೂಢನಂಬಿಕೆಗಳನ್ನು ಬಿತ್ತಿ, ಅವರ ಬೆವರಿನ, ದುಡಿಮೆಯ ಫಲವಾಗಿ ಬರುವ ’ಕಾಣಿಕೆ’ಗಳಿಂದ ಬದುಕುವ, ನಾಲ್ಕುನೂರಾ ಅರವತ್ತೇಳು ಹೆಣ್ಣುಮಕ್ಕಳ ಅಸಹಜ ಸಾವು ಮತ್ತು ದುರ್ಮರಣಗಳಿಗೆ ಕಾರಣವಾದ, ಅವು ಬಯಲಿಗೆ ಬಾರದಂತೆ ಮಾಡಿದ ಅಧರ್ಮಸ್ಥಳದ ’ಧರ್ಮಾಧಿಕಾರಿ’ಯನ್ನು-ನಿಮ್ಮ ಮಾತಿನಲ್ಲೇ ಹೇಳುವುದಾದರೆ, ’ಖಾವಂದರ’ನ್ನು-ನೀವು ಹೆಚ್ಚು ಹೆಚ್ಚು ಅವಲಂಬಿಸುತ್ತಿರುವುದೇ ನೀವು ಯಾರ ಜೊತೆ ನಿಂತಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಇಡೀ ಬೆಳ್ತಂಗಡಿ ತಾಲೂಕಿನ ಜನತೆ ತಮ್ಮ ಸಹನೆಯ ಕಟ್ಟೆಯೊಡೆದು, ಬೀದಿಗಿಳಿದು ಸೌಜನ್ಯಳಿಗೆ ನ್ಯಾಯ ದೊರಕಿಸಲು ಹೋರಾಟ ನಿರತರಾಗಿದ್ದಾರೆ. ಅಂದು ಪದ್ಮಲತಾ, ಮೊನ್ನೆ ವೇದವಲ್ಲಿ, ನಿನ್ನೆ ಸೌಜನ್ಯ, ನಾಳೆ ಇನ್ನು ಯಾರ ಬಲಿ ಎಂದು ಜನ ಕೇಳುತ್ತಿದ್ದಾರೆ. ಎಲ್ಲ ಸಾಕ್ಷ್ಯಗಳನ್ನೂ ವ್ಯವಸ್ಥಿತವಾಗಿ ನಾಶಮಾಡುತ್ತಿರುವ ದುಷ್ಕರ್ಮಿಗಳ ಕುರಿತು ಚಕಾರ ಎತ್ತದ ವ್ಯಕ್ತಿಯ ಕೈಗಳಿಂದ ಈ ಬಾರಿಯ ವಿಶ್ವನುಡಿಸಿರಿಯನ್ನು ಉದ್ಘಾಟಿಸುತ್ತಿದ್ದೀರಿ ಎಂದಾದರೆ ನಿಮ್ಮ ಸಾಮಾಜಿಕ ಕಾಳಜಿ ಯಾವ ಮಟ್ಟದ್ದು ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ.

ನನಗೆ ಪಾಠ ಹೇಳಿದ, ಈ ಕರಾವಳಿ ಜಿಲ್ಲೆಯ ಬಲಪಂಥೀಯ ಚಟುವಟಿಕೆಗಳ ಕುರಿತು ನಿರಂತರ ಕಕ್ಕುಲಾತಿಯಿಂದ ಮಾತನಾಡುತ್ತಿದ್ದ,  Alvas Nudisiri ಜಾತಿಯ ಚೌಕಟ್ಟಿನಲ್ಲಿ ತಾನೆಂದೂ ಸಿಲುಕಿಯೇ ಇಲ್ಲ ಎಂದು ಅಭಿಮಾನಪಡುತ್ತಿದ್ದ, ಆ ಮೂಲಕ ನಮ್ಮೆಲ್ಲರಿಗೆ ಒಂದಿಷ್ಟು ಮಾದರಿ ಎನಿಸಿದ್ದ ಜಾನಪದ ತಜ್ಞ ಪ್ರೊ.ಬಿ.ಎ.ವಿವೇಕ ರೈ ಅವರು ಇಂಥ ವಿಶ್ವನುಡಿಸಿರಿಯ ಸರ್ವಾಧ್ಯಕ್ಷರು ಎಂಬುದು ನನಗೆ ಆಶ್ಚರ್ಯ ಮತ್ತು ನೋವಿನ ಸಂಗತಿ. ಹೆತ್ತವರೇ ಆಗಲಿ, ಅಧ್ಯಾಪಕರೇ ಆಗಲಿ, ತಪ್ಪೆಸಗಿದಾಗ ಅವರ ತಪ್ಪನ್ನು ಮತ್ತು ಮಿತಿಯನ್ನು ಹೇಳುವುದು ಮಕ್ಕಳ/ಶಿಷ್ಯರ ಆದ್ಯ ಕರ್ತವ್ಯ ಮತ್ತು ಅದು ಹಿರಿಯರಿಗೆ ಪ್ರೀತಿ ತೋರುವ ಒಂದು ವಿಧಾನ ಎಂಬ ರಾಜಕಾರಣದಲ್ಲಿ ನಂಬಿಕೆ ಇಟ್ಟ ಕಾರಣ ನಾನು ಈ ಮಾತುಗಳನ್ನು ಹೇಳಬೇಕಾಗಿ ಬಂದಿದೆ.

ಇದೆಲ್ಲದರ ಬಗ್ಗೆ ಎಚ್ಚರಿಕೆ ಹೇಳಿದ/ಹೇಳಬೇಕಾದ ದನಿಗಳು ಪೂರ್ವಭಾವಿ ಸಭೆಗಳಲ್ಲಿ ಕ್ಷೀಣವಾಗಿ ಬಿಟ್ಟವು. ಕೊನೆಯ ಪ್ರಯತ್ನವಾಗಿ ’ಸಂಪನ್ಮೂಲ ವ್ಯಕ್ತಿ’ಗಳ ಆಯ್ಕೆಯ ನೆಲೆಯಲ್ಲಿ ಕೆಲವು ಪ್ರಯತ್ನವನ್ನು ನಡೆಸಿದ್ದೆ. ಹೀಗೆ ನಾನು ಸೂಚಿಸಿದ, ನಿಮ್ಮ ಸಭೆಯಲ್ಲಿ ಅಂಗೀಕಾರಗೊಂಡ ಕವಯಿತ್ರಿಯರು ನುಡಿಸಿರಿಗೆ ಬಂದಾಗ ನಡೆದುದಾದರೂ ಏನು? ಓರ್ವ ಗೆಳತಿಯನ್ನು ಕವಿಸಮಯಕ್ಕೆ ಕರೆಸಿ, ಅವಳಲ್ಲಿ ಅಪರಾಧಿ ಪ್ರಜ್ಞೆಯನ್ನು ಹುಟ್ಟುಹಾಕಿದಂತಾಯ್ತು. ಅವಳು ತನ್ನೂರಿಗೆ ಹೋಗಿ ನಿಮ್ಮಿಂದ ಪಡೆದ ಹಣವೆಲ್ಲವನ್ನೂ ಕಾರಣವನ್ನೊಳಗೊಂಡ ಪತ್ರ ಬರೆದು ಹಿಂದಿರುಗಿಸಿದ್ದು ಯಾರ ಗಮನಕ್ಕೂ ಬರಲೇ ಇಲ್ಲ. ಇನ್ನೋರ್ವ ಗೆಳತಿ ಕರಾವಳಿಯ ತಲ್ಲಣಗಳ ಪರವಾಗಿ ನುಡಿಸಿರಿ ವೇದಿಕೆಯಲ್ಲಿ ದನಿಯೆತ್ತಿ ಸುದ್ದಿ ಮಾಡಿದರೂ ಅದು ನಿಮಗೆ ’ಒಡಕು ದನಿ’ಯಾಗಿ ಕೇಳಿಸಿತೇ ಹೊರತು ಭಿನ್ನದನಿಗೆ ಬೆಲೆ ನೀಡಬೇಕು ಎಂದು ಅನ್ನಿಸಲೇ ಇಲ್ಲ.

ನಮ್ಮ ಗುರಿಯಷ್ಟೇ ನಾವು ಹೋಗುವ ದಾರಿಯೂ ಮುಖ್ಯ ಎಂಬ ಮಾತು ನಿಮಗೂ ಹೊಸದಿರಲಾರದು. ಕರ್ನಾಟಕದ ಮೂಲೆಮೂಲೆಗಳಲ್ಲಿ ಹಾಗೂ ವಿದೇಶಗಳಲ್ಲಿ ನುಡಿಸಿರಿಯ ಘಟಕಗಳನ್ನು ತೆರೆಯಲು ನೀವು ಲಕ್ಷಾಂತರ ಹಣವನ್ನು ವ್ಯಯಿಸಿದ್ದೀರಿ. ಈಗ ಕೋಟಿಗಳ ಲೆಕ್ಕದಲ್ಲಿ ವಿಶ್ವನುಡಿಸಿರಿಯನ್ನು ಆಯೋಜಿಸುತ್ತಿದ್ದೀರಿ. abhimata-page5ಇಲ್ಲಿಯವರೆಗೆ ಸಮ್ಮೇಳನದ ಖರ್ಚನ್ನು ನೀವು ನಿಭಾಯಿಸುತ್ತಿದ್ದ ಕ್ರಮದ ಬಗ್ಗೆ ನನಗೆ ಬೆರಗು ಇತ್ತು. ಈಗ ಹತ್ತಾರು ಪ್ರಶ್ನೆಗಳಿವೆ. ಡಿಸೆಂಬರ್ 14 ಮತ್ತು 15 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಕರ್ನಾಟಕದ ಪ್ರಗತಿಪರ ಸಂಘಟನೆಗಳೆಲ್ಲ ಸೇರಿ ಕೆಲವೇ ಕೆಲವು ಸಾವಿರಗಳಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಾಧ್ಯ ಎಂದು ತೋರುತ್ತಿದ್ದಾರೆ; ಆ ಮೂಲಕ ನಿಮಗೊಂದು ಉತ್ತರವನ್ನು ಕೊಡುವುದಕ್ಕೂ ಸಿದ್ಧರಾಗಿದ್ದಾರೆ.

ನಿಮ್ಮ ಸಿರಿವಂತ ಸಾಹಿತ್ಯ ಸಮ್ಮೇಳನಕ್ಕೆ ನಾನು ಮತ್ತು ನನ್ನಂಥ ಸಮಾನ ಮನಸ್ಕ ಜನರು ಬರಲಾರೆವು. ಆದರೆ ಸರಳ, ಜನಪರ, ಜನರ ತಲ್ಲಣಗಳಿಗೆ ದನಿಯಾಗಲು ಹೊರಟಿರುವ ಸಾಹಿತ್ಯ ಸಮ್ಮೇಳನಕ್ಕೆ ನೀವೂ ಬನ್ನಿ ಎಂದು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ. ‘ನಮಗೆ ನುಡಿಯು ಸಿರಿಯಲ್ಲ, ಬದುಕು’ ಎಂಬುದು ಸಮ್ಮೇಳನದ ಧ್ಯೇಯ ವಾಕ್ಯ. ಇದು ನಮ್ಮ ಪ್ರೀತಿಯ ಕರೆಯೋಲೆ.

– ಡಾ. ಸಬಿಹಾ ಭೂಮಿಗೌಡ