Monthly Archives: December 2013

ಮಂಗಳೂರಿನಲ್ಲಿ “ನುಡಿಸಿರಿ”ಗೆ ಪರ್ಯಾಯವಾಗಿ “ಜನ ನುಡಿ”

ಸ್ನೇಹಿತರೇ,

ಪ್ರತಿವರ್ಷ ಮಂಗಳೂರು ಜಿಲ್ಲೆಯ ಮೂಡಬಿದ್ರೆಯಲ್ಲಿ ಮೋಹನ್‌ ಆಳ್ವ ಎನ್ನುವ ಉದ್ಯಮಿಯ ಶಿಕ್ಷಣ ಸಂಸ್ಥೆಯಲ್ಲಿ “ನುಡಿಸಿರಿ” ಎನ್ನುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಈ ಉತ್ಸವದ ಹಿನ್ನೆಲೆ ಮತ್ತು ಅದರ ನೈಜ ಉದ್ದೇಶದ ಬಗೆ ನಾಡಿನ ಕೆಲವು ಜನರಿಗೆ ಕೆಲವು ಸಂಶಯಗಳಿವೆ. ಕಳೆದ ವರ್ಷ ನಾಡಿನ ಹಿರಿಯ ಸಾಹಿತಿ ಅನಂತಮೂರ್ತಿಯವರು ಈ “ನುಡಿಸಿರಿ” ಕಾರ್ಯಕ್ರಮದ ಉದ್ಘಾಟಕರು ಎಂದು ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆಯವರು ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿಯವರು ಹೋಗುವುದು ಯುಕ್ತವೇ” ಎಂಬ ಲೇಖನ ಬರೆದಿದ್ದರು. ಅದರ ಹಿನ್ನೆಲೆಯಲ್ಲಿ ಇದೇ ವೇದಿಕೆಯಲ್ಲಿ ಕೆಲವು ಚರ್ಚೆಗಳು ಆಗಿದ್ದವು.

ಈ ವರ್ಷದ ನುಡಿಸಿರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಉದ್ಘಾಟಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಿವೇಕ ರೈ‌ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮದ ಅಧ್ಯಕ್ಷರನ್ನು ಅಡ್ಡಪಲ್ಲಕ್ಕಿಯಲ್ಲಿ ಆ ಶಿಕ್ಷಣಸಂಸ್ಥೆಯ ವಿದ್ಯಾರ್ಥಿಗಳು ಹೊರುತ್ತಾರೆ. Alvas-Nudisiri-2010ಈ ಬಾರಿ ವಿವೇಕ ರೈರವರೂ ಸಹ ಆ ಅಡ್ದಪಲ್ಲಕ್ಕಿಯಲ್ಲಿ ಕುಳಿತು ಅಲ್ಲಿಯ ವಿದ್ಯಾರ್ಥಿಗಳಿಂದ ಹೊರೆಸಿಕೊಂಡು, ಮೆರವಣಿಗೆ ಮಾಡಿಸಿಕೊಂಡು, ತದನಂತರ ತಮ್ಮ ಆಶೀರ್ವಚನ ಅಥವ ಪ್ರವಚನ ನೀಡಲಿದ್ದಾರೆ ಎನ್ನಿಸುತ್ತದೆ. ನಾಡಿನಲ್ಲಿ ಅಡ್ದಪಲ್ಲಕ್ಕಿ ಉತ್ಸವಗಳ ಬಗ್ಗೆ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಇದನ್ನು ಕೆಲವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಮತ್ತು ಅದರ ಹಿಂದೆ ಇದ್ದಿರಬಹುದಾದ ಹುನ್ನಾರಗಳನ್ನು ಅರಿತಿರುವ ಮಂಗಳೂರಿನ ಕೆಲವು ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರು ನಾಡಿನ ಹಲವು ಪ್ರಗತಿಪರ ಮನಸ್ಸುಗಳು ಮತ್ತು ಗುಂಪುಗಳೊಡನೆ ಸೇರಿ ಆಳ್ವಾಸ್ ನುಡಿಸಿರಿಗೆ ಪರ್ಯಾಯವಾಗಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವೊಂದನ್ನು ಇದೇ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ.

ಈ ಕಾರ್ಯಕ್ರಮದ ಬಗ್ಗೆ ನಿರ್ವಾಹಕರು ಹಂಚಿಕೊಂಡಿರುವ ಅಭಿಪ್ರಾಯ ಮತ್ತು ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

ಆತ್ಮೀಯರೆ,

ವರ್ತಮಾನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ: ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತಲಿರುವುದು; ಅಷ್ಟೇ ಅಲ್ಲ, ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿರುವುದು. ಸೂಕ್ಷ್ಮಜ್ಞನಾಗುಳಿದು ವ್ಯವಸ್ಥೆಯ ಲೋಪದೋಷಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ-ಸಂಘಟನೆಯ ವ್ಯಕ್ತಿಗಳು ಇಂಥವರ ಮಾರುವೇಷದ ಮರ್ಮ ಅರ್ಥಮಾಡಿಕೊಳ್ಳದೇ ಅದರ ಭಾಗವಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದ ಸಾಹಿತಿ-ಕಲಾವಿದರು ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಇದು ಯುವ ಪೀಳಿಗೆಯದ ದಿಕ್ಕು ತಪ್ಪಿಸುವ, ಗೊಂದಲಗೊಳಿಸುವ ಅಪಾಯ ದಟ್ಟವಾಗಿದೆ.

ಹೀಗಿರುತ್ತ ಸಮಾನ ಮನಸ್ಕರು ಒಂದೆಡೆ ಸೇರಿ, ಜನರಿಂದಲೇ ಹಣ ಸಂಗ್ರಹಿಸಿ, ಜನಪರವಾದ ಚಿಂತನೆಗಳನ್ನು ನಡೆಸಿ ಆ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸುವ ಅಗತ್ಯ ಬಹಳವಾಗಿದೆ.

ಈ ಹಿನ್ನೆಲೆಯೊಂದಿಗೆ, ‘ಅಭಿಮತ, ಮಂಗಳೂರು’ ಎಂಬ ವೇದಿಕೆ ರೂಪುಗೊಂಡಿದ್ದು ಡಿ. 14, 15 ರಂದು ಮಂಗಳೂರಿನಲ್ಲಿ ‘ಜನ ನುಡಿ’ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ. ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿದ್ಧವಾದ ಕಾರ್ಯಕ್ರಮದ ವಿವರಗಳು ಹೀಗಿವೆ:

abhimata-page1
abhimata-page1
abhimata-page1
abhimata-page1
abhimata-page1
ಬನ್ನಿ, ಗೆಳೆಯರೊಂದಿಗೆ.

ನಿಮ್ಮ ಸಹಭಾಗಿತ್ವದ ನಿರೀಕ್ಷೆಯಲ್ಲಿ..
– ಅಭಿಮತ, ಮಂಗಳೂರು

ಆಮ್ ಆದ್ಮಿ ಪಾರ್ಟಿ, ದೆಹಲಿ ಚುನಾವಣೆ, ದೇಶದ ರಾಜಕಾರಣ…


– ರವಿ ಕೃಷ್ಣಾರೆಡ್ಡಿ


 

ಇತ್ತೀಚೆಗೆ ತಾನೆ ಮುಗಿದ ರಾಷ್ಟ್ರದ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಹೊರಬೀಳಲಿದೆ. ಆದರೆ ಈ ಐದು ಚುನಾವಣೆಗಳಲ್ಲಿ ಎರಡನೆ ಕಿರಿಯ ರಾಜ್ಯವಾದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಮಾತ್ರ ದೇಶದ ಬಹುತೇಕ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ. ಇದು ಕೇವಲ ದೆಹಲಿಯ ಚುನಾವಣೆ ಮಾತ್ರವಲ್ಲ, ಬದಲಿಗೆ ದೇಶದ ಪಾಲಿಗೆ ಐತಿಹಾಸಿಕವಾದ ಚುನಾವಣೆಯೂ ಆಗಿದೆ.

ಹಾಗೆಯೇ, ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರುವ, ಪ್ರಜಾಪ್ರಭುತ್ವದಲ್ಲಿ ಮತ್ತು ಈ ದೇಶದ aam-admi-partyಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಜನ ಪಕ್ಷಾತೀತವಾಗಿ (ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ) ತಮ್ಮದಲ್ಲದ ಒಂದು ಪಕ್ಷ ದೆಹಲಿ ಚುನಾವಣೆಯಲ್ಲಿ ಗೆಲ್ಲಲಿ ಎಂದು ಅಪೇಕ್ಷಿಸುತ್ತಿದ್ದಾರೆ. ಬಹುಶಃ ಇದು ಇತ್ತೀಚಿನ ದಶಕಗಳಲ್ಲಿ ಕಂಡುಕೇಳರಿಯದ ವಿದ್ಯಮಾನ. ಆ ಮಟ್ಟಿಗೆ ದೆಹಲಿ ವಿಧಾನಸಭಾ ಚುನಾವಣೆ ಈ ದೇಶದ ರಾಜಕೀಯ. ಸಾಮಾಜಿಕ, ಮತ್ತು ಆರ್ಥಿಕ ಗತಿವಿಧಿಗಳನ್ನು ನಿರ್ದೇಶಿಸುವ ಸಾಮರ್ಥ್ಯ ಪಡೆದುಕೊಂಡಿದೆ.

ಈ ಚುನಾವಣೆಯ ಫಲಿತಾಂಶ  ಇನ್ನೇನು 24 ಗಂಟೆಗಳ ಒಳಗೇ ಗೊತ್ತಾಗುತ್ತದೆ. ಆದರೆ, ಈ ಸಂದರ್ಭದಲ್ಲಿ ಒಮ್ಮೆ ನಿಂತು ನಾವು ಈ ಚುನಾವಣೆ ಅದು ಹೇಗೆ ನಮ್ಮ ದೇಶದ ಭವಿಷ್ಯವನ್ನು ಪ್ರಭಾವಿಸಲಿದೆ ಎಂದು ಒಮ್ಮೆ ಅವಲೋಕಿಸಬೇಕಿದೆ.

ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೆಲವು ವಿಚಾರಗಳನ್ನು ಹೊರತುಪಡಿಸಿದರೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಭ್ರಷ್ಟಾಚಾರ ಮತ್ತು ಅನೈತಿಕತೆಯ ವಿಚಾರಕ್ಕೆ ಎರಡೂ ಪಕ್ಷಗಳಲ್ಲಿ ಯಾವುದೇ ಭೇದ ಇಲ್ಲ. ಸಮಾನ ಭ್ರಷ್ಟರು. ಕಾಂಗ್ರೆಸ್ ಎನ್ನುವ ಪಕ್ಷ rahul_priyanka_soniaಯಾವುದೇ ನಾಚಿಕೆ ಇಲ್ಲದೆ ಗುಲಾಮಗಿರಿಯ ವಂಶರಾಜಕಾರಣವನ್ನು ಪೋಷಿಸುತ್ತ ಬಂದಿದೆ. ಆ ಪಕ್ಷದಲ್ಲಿ ಇರುವ ನಾಯಕರು ಎಷ್ಟೇ ಜ್ಞಾನಿಗಳಾಗಿರಲಿ, ಪ್ರಾಮಾಣಿಕರಾಗಿರಲಿ, ದಕ್ಷರಾಗಿರಲಿ, ಅವರು ಪಕ್ಷದ ರಾಜಕೀಯವನ್ನು ವಿಮರ್ಶಿಸುವ, ಹೈಕಮಾಂಡ್ ಅನ್ನು ವಿಶ್ಲೇಷಿಸುವ, ಮತ್ತು ಅದರ ವಿರುದ್ಧ ಮಾತನಾಡುವ ಹಕ್ಕು ಪಡೆದಿಲ್ಲ. ಸ್ವಾಭಿಮಾನವನ್ನು ಒತ್ತೆಯಿಟ್ಟು ಅಲ್ಲಿ ಕೆಲಸ ಮಾಡಬೇಕಿದೆ. ಈ ಪಕ್ಷ ಇವತ್ತು ದೇಶದ ಅತಿದೊಡ್ಡ ರಾಜಕೀಯ ಪಕ್ಷ ಎನ್ನುವುದು ದೇಶದ ದೌರ್ಭಾಗ್ಯವಾಗಿದೆ. ಇನ್ನು ಎರಡನೆ ದೊಡ್ಡ ಪಕ್ಷವಾದ ಬಿಜೆಪಿಯ ಹಿಂದೆ ಇನ್ನೊಂದು ತರಹದ ಹೈಕಮ್ಯಾಂಡ್ ಇದೆ. ಸಂಕುಚಿತ ದೃಷ್ಟಿಕೋನಗಳುಳ್ಳ ಈ ಹೈಕಮ್ಯಾಂಡ್‌‍ಗೆ ಮಾನವನ ವಿಕಾಸದ ಹಾದಿ ಮತ್ತು ಅವನ ಚರಿತ್ರೆಯ ಪರಿಜ್ಞಾನವಿಲ್ಲ. ಪುರಾಣಗಳನ್ನೇ ಈ ದೇಶದ ಚರಿತ್ರೆ ಎಂದು ಭಾವಿಸಿದೆ. ಕೇವಲ ಕೀಳುತನ ಮತ್ತು ಸ್ವಾರ್ಥದಿಂದ ಕೂಡಿದ, ಮಧ್ಯಾಕಾಲೀನ ಯುಗದ ಚಿಂತನೆಯ ಉಗ್ರ ಹಿಂದುತ್ವವನ್ನು ಅದು ಪ್ರತಿಪಾದಿಸುತ್ತದೆ. ಅದಕ್ಕೆ ಬೇಕಾದಂತೆ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತದೆ. ಮನುಷ್ಯರಲ್ಲಿಯ ಭೇದವನ್ನು ಉಳಿಸಿಕೊಳ್ಳುವುದೇ narender_modi_rssಈ ದೇಶದ ಪ್ರಗತಿ ಎನ್ನುತ್ತದೆ. ಈ ನೆಲದಲ್ಲಿ ಇಲ್ಲಿಯ ಸಮಾಜವನ್ನು ಎತ್ತರಿಸುವ ಮತ್ತು ಜನರನ್ನು ಪ್ರೀತಿ-ಪ್ರೇಮ-ಕರುಣೆ-ಸಮಾನತೆಗಳ ಮಾನವರನ್ನಾಗಿಸಲು ಕಾಲಕಾಲಕ್ಕೆ ಹುಟ್ಟಿಕೊಂಡ ಪ್ರತಿರೋಧ ಮತ್ತು ಹೋರಾಟಗಳನ್ನು ಅದು ಅಣಕಿಸುತ್ತದೆ. ಅದು ಇತಿಹಾಸವಲ್ಲ, ಪುರಾಣಗಳೇ ನಮ್ಮ ಇತಿಹಾಸ ಎನ್ನುವ ಈ ಪಕ್ಷದ ಧೋರಣೆ ಭಾರತೀಯರ ಪ್ರಗತಿ, ಸಮಾನತೆ, ಸಾರ್ಥಕಜೀವನಕ್ಕೆ ದೊಡ್ಡ ಶತ್ರುವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಎರಡು-ಮೂರು ವರ್ಷಗಳ ಹಿಂದೆ ಆರಂಭವಾದ “ಭ್ರಷ್ಟಾಚಾರದ ವಿರುದ್ಧ ಭಾರತ” ಚಳವಳಿ ದೇಶದಲ್ಲಿ ಸಂಚಲನ ಮೂಡಿಸಿತು. ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ, ಮೇಧಾ ಫಾಟ್ಕರ್, ಮತ್ತಿತರ ಜನರ ಅವಿರತ ಶ್ರಮದಿಂದ ದೇಶದಾದ್ಯಂತ ಈ ದೇಶದ ಭವಿಷ್ಯದ ಬಗ್ಗೆ ಜನ ಗಂಭೀರವಾಗಿ ಯೋಚಿಸುವಂತೆ, ಚರ್ಚಿಸುವಂತೆ ಆಗಿದ್ದೇ ಆ ಆಂದೋಳನದ ದೊಡ್ಡ ಯಶಸ್ಸು. ಜಯಪ್ರಕಾಶ್ ನಾರಾಯಣರ “ಸಂಪೂರ್ಣ ಕ್ರಾಂತಿ”ಯ ನಂತರ, (ಸುಮಾರು ಮುವ್ವತ್ತೈದು ವರ್ಷಗಳ ನಂತರ) ದೇಶ ಅಂತಹ ಮತ್ತೊಂದು ಆಂದೋಳನಕ್ಕೆ ಸಾಕ್ಷಿಯಾಯಿತು. ಇದರ ಮಿತಿಗಳು ಏನೇ ಇರಲಿ, ಜೆಪಿಯವರ ಸಂದರ್ಭಕ್ಕಿಂತಲೂ ಹೆಚ್ಚಿನ ಸಿನಿಕತೆಯಿಂದ, ಅಪನಂಬಿಕೆಯಿಂದ, ಭ್ರಷ್ಟಾಚಾರದಿಂದ, ಸ್ವಾರ್ಥದಿಂದ ತುಂಬಿರುವ ಈವತ್ತಿನ ಸಮಾಜದಲ್ಲಿ anna-kejriwal“ಭ್ರಷ್ಟಾಚಾರದ ವಿರುದ್ಧ ಭಾರತ” ಉಂಟುಮಾಡಿದ ಜನಚೈತನ್ಯವನ್ನು ನಾವು ಕೀಳಾಗಿ ಪರಿಗಣಿಸಲಾಗದು. ಅದರ ಮುಂದಿನ ಹೆಜ್ಜೆಯಾಗಿ ರೂಪಿತವಾದ “ಆಮ್ ಆದ್ಮಿ ಪಾರ್ಟಿ”ಯನ್ನು ದೆಹಲಿಯ ಜನತೆ ಹೇಗೆ ಸ್ವೀಕರಿಸಿದ್ದಾರೆ ಎನ್ನುವುದು ನಾಳೆ ಗೊತ್ತಾಗುತ್ತದೆ.

ನನ್ನ ಪ್ರಕಾರ ದೆಹಲಿಯಲ್ಲಿ ಮತದಾನವಾಗುವುದಕ್ಕಿಂತ ಮುಂಚೆಯೇ ಆಮ್ ಆದ್ಮಿ ಪಾರ್ಟಿ ಹಲವಾರು ವಿಷಯಗಳಲ್ಲಿ ಗೆದ್ದುಬಿಟ್ಟಿದೆ. ದೆಹಲಿಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗಿಂತ ಆ ಪಕ್ಷದ ಅರವಿಂದ್ ಕೇಜ್ರಿವಾಲ್‌ ದೆಹಲಿಯ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗಿದ್ದೇ, ತಡಮಾಡದೆ ಬಿಜೆಪಿ ಪಕ್ಷ ಭ್ರಷ್ಟಾಚಾರದ ಸೋಂಕಿಲ್ಲದ ವ್ಯಕ್ತಿ ಈತ ಎಂದು ಒಬ್ಬರನ್ನು ಯಶಸ್ವಿಯಾಗಿ ಬಿಂಬಿಸಿ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಬಿಟ್ಟಿತು. ಅಲ್ಲಿಯವರೆಗೂ ಅಲ್ಲಿ ಆ ಪಕ್ಷವನ್ನು ಮುನ್ನಡೆಸುತ್ತಿದ್ದ ವಿಜಯ್ ಗೋಯಲ್‌ರನ್ನು ಡಮ್ಮಿ ಮಾಡಿತು. ಭ್ರಷ್ಟರನ್ನು ಮತ್ತು ಅದಕ್ಷರನ್ನು ಇಟ್ಟುಕೊಂಡು ನಾವು ಈ ಚುನಾವಣೆ ನಡೆಸಲಾಗದು ಎಂದು ಪ್ರಮುಖ ರಾಜಕೀಯ ಪಕ್ಷವೊಂದು ತೀರ್ಮಾನಕ್ಕೆ ಬರುವುದೇ ಒಂದು ದೊಡ್ಡ ಗುಣಾತ್ಮಕ ಬದಲಾವಣೆ. ಆಪ್ ದೆಹಲಿ ಚುನಾವಣೆಗೆ ಇಳಿಯದೇ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.

ಇನ್ನೊಂದು ದೊಡ್ಡ ಸಾಧನೆ, ಆಪ್ ಚುನಾವಣೆಗಳನ್ನು ಎದುರಿಸಿದ ರೀತಿ. ಯಾವುದೇ ಕಾರಣಕ್ಕೂ ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣಾ ಆಯೋಗದ ಮಿತಿಯಾದ 16 ಲಕ್ಷಕ್ಕಿಂತ ಹೆಚ್ಚು ದುಡ್ಡು ಖರ್ಚು ಮಾಡುವುದಿಲ್ಲ ಎನ್ನುವ ಅದರ ತೀರ್ಮಾನ ಮತ್ತು ಹಾಗೆ ನಡೆದುಕೊಂಡ ರೀತಿ ಅದನ್ನು ಅಲ್ಲಿಯ ಬೇರೆಲ್ಲ ಪಕ್ಷಗಳಿಗಿಂತ ಮೊದಲ ದಿನದಿಂದಲೇ ಭಿನ್ನವಾಗಿಸಿತು. ದೆಹಲಿ ಚುನಾವಣೆಗೆ ಈ ಮಿತಿಯಲ್ಲಿ ಚುನಾವಣೆ ನಡೆಸಲು ನಮಗೆ aap-donationಇಪ್ಪತ್ತು ಕೋಟಿ ಬೇಕಾಗುತ್ತದೆ ಮತ್ತು ಅದೆಲ್ಲವನ್ನೂ ಜನರಿಂದಲೇ ಸಂಗ್ರಹಿಸುತ್ತೇವೆ ಎಂದು ಹೊರಟ ಆ ಪಕ್ಷ, ಅಷ್ಟು ಮೊತ್ತ ಸಂಗ್ರಹವಾದ ತಕ್ಷಣ ಹಣ-ಸಂಗ್ರಹ ಅಭಿಯಾನವನ್ನು ನಿಲ್ಲಿಸಿತು. ಅವರ ಕೋರಿಕೆಗೆ ಈ ದೇಶದ ಜನ ಸ್ಪಂದಿಸಿದ ರೀತಿಯನ್ನು ನಾವು ಪರಿಗಣಿಸದೇ ಇರಲು ಸಾಧ್ಯವಿಲ್ಲ. ತಮಗೆ ಬಂದ ಪ್ರತಿಯೊಂದು ದೇಣಿಗೆಯನ್ನು ಆ ಪಕ್ಷ ತನ್ನ ಅಂತರ್ಜಾಲ ತಾಣದಲ್ಲಿ ತತ್‌ಕ್ಷಣದಲ್ಲಿ ಅಪ್‌ಡೇಟ್ ಮಾಡುತ್ತಿತ್ತು. ದೇಣಿಗೆ ಕೊಟ್ಟವರ ಹೆಸರು, ವಿಳಾಸ, ಮತ್ತು ಮೊತ್ತವನ್ನು ಹೀಗೆ ಕೂಡಲೆ ಪ್ರಕಟಿಸುವ ಮೂಲಕ ಬೇರೆಲ್ಲ ಪಕ್ಷಗಳಿಗೆ ಅದು ಒಂದು ಮಾದರಿಯನ್ನು ತೋರಿಸಿ, ಕೇವಲ ಕಪ್ಪುಹಣದಲ್ಲಿ, ಪತ್ತೆಯಾಗದ ಮೂಲಗಳಿಂದ ಸಂಗ್ರಹಿಸಿದ ಭ್ರಷ್ಟಾಚಾರದ ಹಣದಲ್ಲಿ, ಅಥವ ಕೆಲವರ ವೈಯಕ್ತಿಕ (ಅನೈತಿಕ) ಹಣದಿಂದ ಚುನಾವಣೆ ನಡೆಸುವ ಪ್ರಮುಖ ರಾಜಕೀಯ
ಪಕ್ಷಗಳನ್ನು ಅವಮಾನಗೊಳಿಸಿತು. ನೈತಿಕ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುವವರು ಇದನ್ನು ಪ್ರಶಂಸಿಸದೇ ಇರಲು ಸಾಧ್ಯವೇ ಇಲ್ಲ.

ಹಾಗೆ ನೋಡಿದರೆ, ಆಪ್ ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ತನ್ನ ಸ್ವಂತ ಹಣವನ್ನು ಚುನಾವಣೆಗೆ ಬಳಸಬೇಕಾದ ಪ್ರಮೇಯವೇ ಬರಲಿಲ್ಲ. (ಹಾಗೇನಾದರೂ ಆಗಿದ್ದಲ್ಲಿ ಅದು ಅವರು ಚುನಾವಣೆಗೆ ಮುನ್ನ ಇಷ್ಟೊಂದು ಹಣ ಸಂಗ್ರಹವಾಗದೇನೊ ಎನ್ನುವ ಆತಂಕದಲ್ಲಿ ಪಕ್ಷಕ್ಕೆ ನ್ಯಾಯವಾಗಿಯೇ ದೇಣಿಗೆ ಕೊಟ್ಟಿದ್ದಾಗಿರುತ್ತದೆ.) ದೇಶದಲ್ಲಿ ಈಗಲೂ ಅಲ್ಲೊಬ್ಬರು ಇಲ್ಲೊಬ್ಬರು ಹೀಗೆ ಜನರ ಪಾಲುದಾರಿಕೆಯಲ್ಲಿ ಚುನಾವಣೆ ನಡೆಸುತ್ತಾರೆ. ಆದರೆ, ರಾಜಕೀಯ ಪಕ್ಷವೊಂದು ತನ್ನೆಲ್ಲ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಹೀಗೆ ಜನರ ದುಡ್ಡಿನಿಂದಲೇ ನಿಭಾಯಿಸಿದ್ದು ಮತ್ತು ತಮಗೆ ಇನ್ನು ಹಣ ಬೇಕಿಲ್ಲ ಎಂದಿದ್ದು ಇದೇ ಮೊದಲು. ತಾವು ಚುನಾವಣೆಗೆ ಖರ್ಚು ಮಾಡಿದ ಹಣವನ್ನು ನಮ್ಮ ಜನಪ್ರತಿನಿಧಿಗಳು ವ್ಯವಹಾರಕ್ಕೆ ತೊಡಗಿಸಿದ ಬಂಡವಾಳ ಎಂದುಕೊಂಡಿರುವ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಈ ಸಂಪ್ರದಾಯ ನಮ್ಮ ರಾಜಕಾರಣಿಗಳು ಭ್ರಷ್ಟಾಚಾರ ಮಾಡಲೇಬೇಕಾದ ಪರಿಸ್ಥಿತಿ ಮತ್ತು ಪ್ರಲೋಭನೆಯನ್ನು ತಡೆಗಟ್ಟುವಲ್ಲಿ ದೊಡ್ಡ ಪಾತ್ರ ವಹಿಸಲಿದೆ.

ಮತ್ತೆ ಕೆಲವು ವರದಿಗಳ ಪ್ರಕಾರ ಆಮ್ ಆದ್ಮಿ ಪಕ್ಷ ಇತ್ತೀಚಿನ ದಿನಗಳಲ್ಲಿ ರಾಜಕೀಯ ರಂಗದಲ್ಲಿ ಪ್ರಚಲಿತದಲ್ಲಿರುವ arvind-kejriwal-campaigningಸೋಷಿಯಲ್ ಇಂಜಿನಿಯರಿಂಗ್ ಅನ್ನು ಮಾಡದೇ ಇರಲು ತೀರ್ಮಾನಿಸಿದ್ದು. ಒಂದು ಕ್ಷೇತ್ರದಲ್ಲಿಯ ಜಾತಿ ಮತ್ತು ಮತೀಯರನ್ನು ನೋಡಿಕೊಂಡು ಅದು ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ. ಅದರ ಅನೇಕ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿರುವ ಬಹುಸಂಖ್ಯಾತ ಜನರ ಜಾತಿ ಅಥವ ಮತಗಳಿಗೆ ಸೇರಿದವರಲ್ಲ. ಇದು ಅಪ್ಪಟ ಗಾಂಧಿವಾದದ ರಾಜಕಾರಣ. ಹಾಗೆಯೇ, ಅದರ ನಾಯಕರು ಸುರಕ್ಷಿತ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಅವಕಾಶವಾದಿತನವನ್ನೂ ತೋರಿಲ್ಲ. ಸ್ವತಃ ಅರವಿಂದ್ ಕೇಜ್ರಿವಾಲರು ಕಳೆದ ಹದಿನೈದು ವರ್ಷಗಳಿಂದ ಅಲ್ಲಿ ಮುಖ್ಯಮಂತ್ರಿಯಾಗಿರುವ ಶೀಲಾ ದೀಕ್ಷಿತರ ವಿರುದ್ಧವೇ ಸ್ಪರ್ಧಿಸಿದ್ದಾರೆ. ವೈಯಕ್ತಿಕ ಗೆಲುವಿಗಿಂತ ಪಕ್ಷದ ಅಥವ ಸಿದ್ಧಾಂತದ ಗೆಲುವಿಗೆ ಶ್ರಮಿಸುವವರ ನಡವಳಿಕೆ ಹೀಗೆಯೇ ಇರಲು ಸಾಧ್ಯ.

ಈ ಎಲ್ಲಾ ಯಶಸ್ಸುಗಳ ಜೊತೆಗೆ ಆಮ್ ಅದ್ಮಿ ಪಕ್ಷ ಸಂಖ್ಯಾವಾರು ಯಶಸ್ಸು ಪಡೆಯುತ್ತದೆಯೇ ಎನ್ನುವುದು ಸದ್ಯದ ಕುತೂಹಲ ಮತ್ತು ಭರವಸೆಯ ಕಿರಣ. ಅದು ಶೇ.20 ಕ್ಕಿಂತ ಹೆಚ್ಚಿನ ಮತಪ್ರಮಾಣ ಪಡೆಯಲಿದೆ ಎಂದು ಎಲ್ಲಾ ಸರ್ವೇಗಳು ಹೇಳುತ್ತಿವೆ. ನೆನ್ನೆಯ CNN-IBN ನ ಸರ್ವೆ ಅದು ಕಾಂಗ್ರೆಸ್‌ಗಿಂತ ಹೆಚ್ಚು ಮತಗಳನ್ನು ಪಡೆಯಲಿದೆ ಎಂದು ಹೇಳಿದೆ. ಅದರೆ ಈ ಮತಗಳು ಎಷ್ಟು ಸ್ಥಾನಗಳಾಗಿ ಪರಿವರ್ತಿತವಾಗುತ್ತದೆ ಎಂದು ಹೇಳಲಾಗದು. ಕರ್ನಾಟಕದ ವಿಧಾನಸಭೆಗೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ಪಡೆದಿದ್ದರೂ ಬಿಜೆಪಿಗಿಂತ ಶೇ.10 ರಷ್ಟು ಕಡಿಮೆ ಶಾಸಕ ಸ್ಥಾನಗಳನ್ನು ಪಡೆದಿತ್ತು. ತ್ರಿಕೋನ ಅಥವ ಚತುಷ್ಕೋನ ಸ್ಪರ್ಧೆ ಇರುವ ಕಡೆ ಒಟ್ಟು ಮತಪ್ರಮಾಣಕ್ಕೂ, ಗೆಲ್ಲುವ ಸ್ಥಾನಗಳಿಗೂ ಬಹಳ ಅಂತರವಿರುತ್ತದೆ.

ಆಪ್ ಪಕ್ಷ ದೆಹಲಿ ವಿಧಾನಸಭೆಯಲ್ಲಿ ಬಹುಮತ ಪಡೆದರೆ, ಅಥವ ಅದಾಗದ ಪಕ್ಷದಲ್ಲಿ aap-kejriwal-yogendra-yadavಆ ಪಕ್ಷದ ಬೆಂಬಲವಿಲ್ಲದೆ ಅಲ್ಲಿ ಸರ್ಕಾರ ರಚನೆ ಸಾಧ್ಯವಿಲ್ಲ ಎಂತಾದರೆ, ಮುಂದಿನ ದಿನಗಳಲ್ಲಿ ದೇಶದ ರಾಜಕಾರಣ ತ್ವರಿತಗತಿಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಕಾಣಲಿದೆ ಎಂದರ್ಥ. ಈ ದೇಶದ ರಾಜಕೀಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಕಾಳಜಿ ಇರುವ ಪ್ರಜ್ಞಾವಂತರಿಗೆ ಇದಕ್ಕಿಂತ ಖುಷಿಯ ವಿಚಾರ ಸದ್ಯದ ಸಂದರ್ಭದಲ್ಲಿ ಇನ್ನೊಂದಿರಲಾರದು.

2009 ರ ಲೋಕಸಭಾ ಚುನಾವಣೆಗೆ ಮೊದಲು ಬರೆದ ತಮ್ಮ ಲೇಖನವೊಂದರಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾರವರು, “ವಂಶ ರಾಜಕಾರಣವಿಲ್ಲದ ಕಾಂಗ್ರೆಸ್ ಮತ್ತು ಆರ್‍ಎಸ್‌ಎಸ್ ಹಿಡಿತವಿಲ್ಲದ ಬಿಜೆಪಿ ಈ ದೇಶಕ್ಕೆ ಅಗತ್ಯವಿದೆ” ಎಂದು ಪ್ರತಿಪಾದಿಸುತ್ತಾರೆ. ಮತೀಯ ಪೂರ್ವಾಗ್ರಹಗಳಿಲ್ಲದ ಬಲಪಂಥೀಯ ಪಕ್ಷ ಮತ್ತು ಒಂದೇ ಕುಟುಂಬದ ಹಿಡಿತದಲ್ಲಿಲ್ಲದ ಎಡಪಂಥೀಯ ಧೋರಣೆಗಳ ಪಕ್ಷ ಈ ದೇಶದ ಪ್ರಜಾಪ್ರಭುತ್ವದ ವಿಕಾಸಕ್ಕೆ ಅಗತ್ಯ ಎನ್ನುತ್ತಾರವರು. ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಅದನ್ನೇ ಪ್ರಸ್ತಾಪಿಸುತ್ತ ಕಾಂಗ್ರೆಸ್ ಪಕ್ಷದ ಮೇಲೆ ಒಂದು ಕುಟುಂಬದ ಹಿಡಿತ ಕೈಬಿಡುವ ಸಾಧ್ಯತೆ ಹತ್ತಿರದಲ್ಲೇ ಇದ್ದ ಹಾಗಿದೆ ಎನ್ನುತ್ತಾರೆ ಗುಹಾ. ಹಾಗೆಯೇ, ಬಿಜೆಪಿ ಮೇಲಿನ ಆರ್‍ಎಸ್‌ಎಸ್ ಹಿಡಿತ ತಪ್ಪುವ ದಿನಗಳು ಹತ್ತಿರದಲ್ಲೆಲ್ಲೂ ಕಾಣಿಸುತ್ತಿಲ್ಲ ಎನ್ನುವ ಆತಂಕವನ್ನೂ ವ್ಯಕ್ತಪಡಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಈ ದೇಶದ ಭವಿಷ್ಯಕ್ಕೆ ಮೂಲಭೂತವಾಗಿ ಆಗಬೇಕಾದ ಮೇಲಿನ ಎರಡನ್ನೂ ಸಾಧಿಸಲು ಸಮಾನಮನಸ್ಕರು ಜೊತೆಯಾಗಬೇಕಿದೆ. ರಾಷ್ಟ್ರದಾದ್ಯಂತ ಕೇಂದ್ರದ ಕಾಂಗ್ರೆಸ್ ಮುಖಂಡತ್ವದ ಸರ್ಕಾರದ ವಿರುದ್ಧ ಜನರಿಗೆ ಆಕ್ರೋಶವಿದೆ. indiaಅದನ್ನು ಸಹಜವಾಗಿಯೇ ವಿರೋಧಪಕ್ಷವಾದ ಬಿಜೆಪಿ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಆ ಪಕ್ಷದ ನೀತಿಗಳಾಗಲಿ, ಅದು ಮುಂದೊಡ್ಡುತ್ತಿರುವ ನಾಯಕತ್ವವಾಗಲಿ ಈ ದೇಶಕ್ಕೆ ಒಳ್ಳೆಯ ಪರ್ಯಾಯ ಅಲ್ಲವೇ ಅಲ್ಲ. ಹಾಗಾಗಿಯೇ ಇಲ್ಲಿಯ ಪ್ರಜಾಪ್ರಭುತ್ವವಾದಿ ಪಕ್ಷಗಳು, ವಂಶಪಾರಂಪರ್ಯವನ್ನು ಆಚರಿಸಿದ ಪಕ್ಷಗಳು, ಸಮಾನತೆ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷಗಳು, ಎಲ್ಲಕ್ಕಿಂತ ಹೆಚ್ಚಾಗಿ ಈ ದೇಶದ ಸಂವಿಧಾನವನ್ನು ಗೌರವಿಸುವ ಪಕ್ಷಗಳು ಒಂದು ಗುಂಪಾಗಿ ಹೊರಹೊಮ್ಮಬೇಕಿದೆ. ತಮ್ಮಲ್ಲಿಯೇ ಒಬ್ಬಿಬ್ಬರನ್ನು ನಾಯಕರನ್ನಾಗಿ ಒಪ್ಪಿಕೊಂಡು ತಮ್ಮೆಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಪರ್ಯಾಯವನ್ನು ಕಟ್ಟಬೇಕಿದೆ. ಅಂತಹ ಸಾಧ್ಯತೆಗೆ ದೇಶದ ಜನರ ಒಲವಿದೆ ಎಂದು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಚುನಾವಣಾ ಫಲಿತಾಂಶದ ಮೊದಲೇ ನಿರೂಪಿಸಿದೆ. ಅದಕ್ಕಾಗಿ ನಾಯಕರಾದವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಳನ್ನು ಕೈಬಿಟ್ಟು ಯೋಚಿಸಬೇಕಿದೆ, ಕ್ರಿಯಾಶೀಲರಗಬೇಕಿದೆ. ಹಾಗೆಯೇ ದೇಶದ ಸಾಮಾಜಿಕ ಕಾರ್ಯಕರ್ತರು ಅಂತಹ ಒಂದು ಒಗ್ಗೂಡುವಿಕೆಗೆ ಒತ್ತಡ ತರಬೇಕಿದೆ.

ನಾನು ಮೊದಲೇ ಪ್ರಸ್ತಾಪಿಸಿದಂತೆ ನಮ್ಮ ಸದ್ಯದ ಸಂದರ್ಭ ಅಪನಂಬಿಕೆ, ಸಿನಿಕತೆ, ವೈಯಕ್ತಿಕ ಆಕಾಂಕ್ಷೆಗಳು, ಸ್ವಕೇಂದ್ರಿತ ಚಿಂತನೆಗಳಿಂದ ಕೂಡಿದೆ. ದೆಹಲಿಯ ಫಲಿತಾಂಶ ಅದನ್ನು ಬದಲಿಸಿ ವಿಶಾಲ ಮನೋಭೂಮಿಕೆಯನ್ನು ನಮ್ಮ ರಾಜಕೀಯ ರಂಗದಲ್ಲಿ ಪ್ರತಿಷ್ಠಾಪಿಸಲಿ, ಕಾಂಗ್ರೆಸ್ ಮತ್ತು ಬಿಜೆಪಿಗಳನ್ನೂ ಬದಲಾಯಿಸಲಿ ಎನ್ನುವುದೊಂದು ಆಶಯ.

ನೆಲ್ಸನ್ ಮಂಡೇಲ ಮತ್ತು ಇಂದಿನ ದಕ್ಷಿಣ ಆಫ್ರಿಕ


– ಮುನೀರ್ ಕಾಟಿಪಳ್ಳ


 

ದಕ್ಷಿಣ ಆಫ್ರಿಕಾ ದೇಶದ ಕರಿಯರಿಗೆ ರಾಜಕೀಯ ಅಧಿಕಾರ ಕೊಡಿಸಿದ, ವರ್ಣಭೇದ ನೀತಿಯನ್ನು ಅಧಿಕೃತವಾಗಿ ಕೊನೆಗೊಳಿಸಿದ ಜಗತ್ತು ಕಂಡ ಮಹಾನ್ ನಾಯಕ, ಅಪ್ರತಿಮ ಹೋರಾಟಗಾರ ನೆಲ್ಸನ್ ಮಂಡೇಲಾ ತನ್ನ ಸಾರ್ಥಕ ಬದುಕನ್ನು ಕೊನೆಗೊಳಿಸಿ ಜಗತ್ತಿಗೆ ವಿದಾಯ ಹೇಳಿದ್ದಾರೆ. Nelson_Mandelaಆತನಿಗೊಂದು ಗೌರವಪೂರ್ವಕ ಸಲಾಂ.

ನೆಲ್ಸನ್ ಮಂಡೇಲಾನ ನಾಡು ದಕ್ಷಿಣ ಆಫ್ರಿಕಾ ದೇಶದಲ್ಲಿ ಮೂರು ವರ್ಷದ ಹಿಂದೆ ನಡೆದ ಸಾಮ್ರಾಜ್ಯಶಾಹಿ ವಿರೋಧಿ “ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ“ದಲ್ಲಿ ನಾನು ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ನೆಲ್ಸನ್ ಮಂಡೇಲಾ ಸಮಾವೇಶವನ್ನು ಪರೋಕ್ಷವಾಗಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ನಾನು ಕಂಡ ದಕ್ಷಿಣ ಆಫ್ರಿಕಾ, ಅಲ್ಲಿನ ಕರಿಯರನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದೆರಡು ಮಾತುಗಳು.

“ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ” ಜೋಹಾನ್ಸ್‌ಬರ್ಗ್ ಸಮೀಪದ ಪ್ರಿಟೋರಿಯಾದಲ್ಲಿ ಆಯೋಜಿಸಲಾಗಿತ್ತು. ಅನಾರೋಗ್ಯದ ನಿಮಿತ್ತ ಮಂಡೇಲಾ ಅವರ ಧ್ವನಿ ಮುದ್ರಿತ ಭಾಷಣದ ಮೂಲಕ ಅವರ ಅನುಪಸ್ಥಿತಿಯಲ್ಲಿ ಸಮಾವೇಶವನ್ನು ಉದ್ಘಾಟಿಸಲಾಯಿತು. World-Festival-of-Youth-and-Students((Johannesburg_2010)ಮುದ್ರಿತ ಸಂದೇಶದಲ್ಲಿ ಮಂಡೇಲಾ ಸಂದೇಶದ ಧ್ವನಿ ಕೇಳಿದಾಗ ಜಗತ್ತಿನಾದ್ಯಂತದಿಂದ ಬಂದ ಯುವ ಪ್ರತಿನಿಧಿಗಳಲ್ಲಿ ರೋಮಾಂಚನ, ಅದರಲ್ಲೂ ಆಫ್ರಿಕಾ ಖಂಡದ ಕಪ್ಪು ಯುವಜನತೆಯ ಉತ್ಸಾಹವಂತೂ ಮೇರೆ ಮೀರುತ್ತಿತ್ತು. ಅಂತಹಾ ಅಗಾಧ ಪ್ರಭಾವವನ್ನು ಮಂಡೇಲಾ ಕರಿಯ ಜನತೆಯಲ್ಲಿ ಮೂಡಿಸಿದ್ದಾರೆ.

ನಾನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಹನ್ನೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿ ವರ್ಣಭೇದ ನೀತಿ ಕೊನೆಗೊಂಡ ನಂತರದ ಅಲ್ಲಿನ ಕರಿಯರ ಸ್ಥಿತಿಗತಿಯನ್ನು ಅರಿಯಲು ಒಂದಿಷ್ಟು ಪ್ರಯತ್ನಿಸಿದೆ. ಸದಾ ಹಾಡು ಹೇಳುತ್ತಾ, ಸಣ್ಣ ಮ್ಯೂಸಿಕ್ ಕೇಳಿದರೂ ಸಾಕು ನಿಂತಲ್ಲೇ ಕುಣಿಯಲು ತೊಡಗುವ ಕರಿಯ ಯುವಜನರು ಅಗಾಧ ಜೀವನ ಪ್ರೀತಿ ಉಳ್ಳ ಸ್ನೇಹಜೀವಿಗಳು. ಅಲ್ಲಿನ ಮಹಿಳೆಯರಿಗೆ ಸಾಮಾಜಿಕವಾಗಿ ಸಮಾನ ಸ್ಥಾನಮಾನವಿದೆ. ಹೆಣ್ಣು ಗಂಡು ಎಂಬ ಭೇದಭಾವ ಅಲ್ಲಿ ಕಾಣಿಸುವುದಿಲ್ಲ. ಕರಿಯರಿಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಕರಿಯರೇ ಪ್ರಧಾನಿ, ಅಧ್ಯಕ್ಷರಾಗಿ ದೇಶವನ್ನು ಆಳುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ರಸ್ತೆಗಳು ಅತ್ಯುತ್ತಮವಾಗಿದೆ. ಕಟ್ಟಡಗಳು, ಮಾಲ್‌ಗಳು ಯಾವುದೇ ಫಿಲಂ ಸಿಟಿಯನ್ನು ನಾಚಿಸುವಷ್ಟು ಅದ್ಭುತವಾಗಿದೆ. ಜಗತ್ತಿನ ಎಲ್ಲಾ ಬ್ರಾಂಡ್‌ನ ಐಷಾರಾಮಿ ಕಾರುಗಳು ಅಲ್ಲಿನ ರಸ್ತೆಯಲ್ಲಿ ಓಡಾಡುತ್ತದೆ. ಆದರೆ ಅಂತಹ ಮಾಲ್‌ಗಳಲ್ಲಿ, ಕಾರ್‌ಗಳಲ್ಲಿ ಕರಿಯರು ಕಾಣಸಿಗುವುದು ಅಪರೂಪ. ಜಗತ್ತಿನ ವೈಭವೋಪೋತ ನಗರಗಳಲ್ಲಿ ಒಂದಾಗಿರುವ ಜೋಹಾನ್ಸ್‌ಬರ್ಗ್ ಸಂಜೆ ಐದು ಗಂಟೆಯಾದರೆ ಸಾಕು ಬಾಗಿಲೆಳೆಯತೊಡಗುತ್ತದೆ. Johannesburgಆರು ಗಂಟೆಗೆ ರಸ್ತೆಗಳು ಸಂಪೂರ್ಣ ನಿರ್ಜನ. ನಿರ್ಗತಿಕರಿಗೆ, ನಿರುದ್ಯೋಗಿಗಳಿಗೆ ಪ್ರಿಟೋರಿಯಾ, ಜೋಹಾನ್ಸ್‌ಬರ್ಗ್‌ನಲ್ಲಿ ಗಂಜಿ ಕೇಂದ್ರಗಳಿವೆ. ಅಲ್ಲಿನ ಮಾರುದ್ಧದ ಸರತಿ ಸಾಲಿನಲ್ಲಿ ಬಿಳಿಯರು ಒಬ್ಬರೂ ಕಾಣಸಿಗುವುದಿಲ್ಲ. ಅಲ್ಲಿನ ಆಧುನಿಕ ಡಿಸ್ಕೋತೆಕ್, ಡಿ.ಜೆ. ಡ್ಯಾನ್ಸ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರಾಗಿರುವ ಕರಿಯ ಕುಟುಂಬಗಳ ಕೆಲ ಯುವಜನತೆ ಕಂಡು ಬರುತ್ತಾರೆ. ಅದೇ ಸಂದರ್ಭದಲ್ಲಿ ಕಾಲೇಜು ಓದುವ, ಡಿಗ್ರಿ ಪಡೆದು ನಿರುದ್ಯೋಗಿಗಳಾಗಿರುವ ಕರಿಯ ಯುವತಿಯರು ಚಿಲ್ಲರೆ ದುಡ್ಡಿಗೆ ಯಾವುದೇ ಸಂಕೋಚ ಇಲ್ಲದೆ ಮೈಮಾರುತ್ತಾರೆ. ಯುವಕರು ಲೂಟಿಗಿಳಿದು ಕ್ರಿಮಿನಲ್‌ಗಳಾಗುತ್ತಾರೆ. ಮಾರುಕಟ್ಟೆ ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿಗೆ ತನ್ನತನ, ಪರಂಪರೆಯನ್ನು ಮರೆತು ಬಲಿ ಬಿದ್ದಿದ್ದಾರೆ. ರಾಜಕೀಯ ಅಧಿಕಾರ ದಕ್ಕಿದ್ದರೂ ಉದ್ಯೋಗಗಳು ಕರಿಯರಿಗೆ ದಕ್ಕುತ್ತಿಲ್ಲ. ನಿರುದ್ಯೋಗ ಕರಿಯ ಯುವಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಖಾಸಗೀಕರಣದ ಕಾರುಬಾರಿನಲ್ಲಿ ಸರಕಾರಿ ಉದ್ಯೋಗ ತೀರಾ ಕಡಿಮೆ. ಖಾಸಗಿ ಉದ್ಯೋಗ ದೊರಕುವುದಿಲ್ಲ.

“ಇದೆಲ್ಲಾ ಯಾಕೆ ಹೀಗೆ, ನಿಮ್ಮವರೇ ಅಧಿಕಾರದಲ್ಲಿದ್ದಾರಲ್ಲ? ಇಷ್ಟು ಶ್ರೀಮಂತಿಕೆ ಇದ್ದರೂ ನಿಮಗ್ಯಾಕೆ ಇಂತಹ ಬಡತನ,” south-africa_povertyಅಂತ ಇಂಜಿನಿಯರಿಂಗ್ ಓದಿರುವ ನಮ್ಮ ಕರಿಯ ಟ್ಯಾಕ್ಸಿ ಡ್ರೈವರ್‌ನಲ್ಲಿ ಪ್ರಶ್ನಿಸಿದರೆ ಆತನ ಉತ್ತರ ಹೀಗಿತ್ತು. “ಹೌದು ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮವರೇ ದೇಶ ಆಳುತ್ತಿದ್ದಾರೆ. ಆದರೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಎಲ್ಲವೂ ಖಾಸಗಿ ಒಡೆತನದಲ್ಲಿದೆ. ಜಾಗತೀಕರಣಕ್ಕೆ ನಾವು ಬಹು ಹಿಂದೆಯೇ ತೆರೆದುಕೊಂಡಿದ್ದೇವೆ. ಹೆಚ್ಚಿನ ದೇಶೀಯ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ಬಿಳಿಯರ ಕೈಯ್ಯಲ್ಲಿದೆ. ವರ್ಣಭೇದ ನೀತಿ ಅಧಿಕೃತವಾಗಿ ಇಲ್ಲದಿದ್ದರೂ ಅವರು ನಮ್ಮನ್ನು ಒಳ್ಳೆಯ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ. ಅದು ಬಿಳಿಯರಿಗೆ ಮೀಸಲು. ಇನ್ನು ಉದ್ಯಮಗಳನ್ನು, ವ್ಯಾಪಾರಗಳನ್ನು ನಡೆಸುವಷ್ಟು ಆರ್ಥಿಕವಾಗಿ ನಾವು ಬಲಿಷ್ಠರಲ್ಲ. ಇಲ್ಲಿ ಹೊಟೇಲ್‌ಗಳೆಂದರೆ ’ಕೆಎಫ್‌ಸಿ’ , ’ಮೆಕ್ ಡೋನಾಲ್ಡ್’ ಮಾರುಕಟ್ಟೆಗಳೆಂದರೆ ವಾಲ್ ಮಾರ್ಟ್, ಜೆಸ್ಕೋ ಮುಂತಾದವು. ಇಲ್ಲಿ ಅಪಾರ ಗಣಿ ಸಂಪತ್ತಿದ್ದರೂ ಅದೆಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳ, ಬಿಳಿಯರ ಕೈಯಲ್ಲಿದೆ. ಅಲ್ಲಿ ಯಾವುದೇ ಕಾರ್ಮಿಕ ಕಾನೂನುಗಳಿಗೆ ಬೆಲೆ ಇಲ್ಲ. ಅಲ್ಲಿ ಗುಲಾಮರ ರೀತಿ ನಮ್ಮ ಕಪ್ಪು ಕಾರ್ಮಿಕರು ದುಡಿಯುತ್ತಾರೆ. ಇದರಿಂದಾಗಿ ನಮ್ಮ ಯುವಜನತೆ ಹತಾಶರಾಗಿದ್ದಾರೆ. ಹಸಿವು ಅವರನ್ನು ಕಿತ್ತು ತಿನ್ನುತ್ತಿದೆ. ಆಧುನಿಕ ಮಾಲ್‌ಗಳು, ಡಿಸ್ಕೋತೆಕ್‌ಗಳು ಅವರನ್ನು ಆಕರ್ಷಿಸುತ್ತಿದೆ. ಅಣಕಿಸುತ್ತಿದೆ. ಇದರಿಂದಾಗಿ ಇಲ್ಲಿ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಶ್ರೀಮಂತ ಜೀವನಕ್ಕಾಗಿ ಮಾತ್ರ ಅಲ್ಲ ಒಂದು ತುಂಡು ಬ್ರೆಡ್‌ಗಾಗಿಯೂ ಇಲ್ಲಿ ಕೊಲೆಗಳಾಗುತ್ತವೆ, ಹಾಡುಹಗಲೇ ಅಪಹರಣಗಳಾಗುತ್ತವೆ. ಇದನ್ನು ನಿಭಾಯಿಸಲಾಗದ ಸರಕಾರ ಐದು ಗಂಟೆಗೆ ಮಾರುಕಟ್ಟೆ, ಅಂಗಡಿ, ಮಾಲ್‌ಗಳನ್ನು ಬಂದ್ ಮಾಡಿಸುತ್ತದೆ. ಆರು ಗಂಟೆಯ ನಂತರ ಯಾರೂ ಬೀದಿಗೆ ಬರುವುದಿಲ್ಲ,” ಎಂದು ನಿಟ್ಟುಸಿರು ಬಿಟ್ಟ. ಇದು ಇಂದಿನ ನೆಲ್ಸನ್ ಮಂಡೇಲಾ ನಾಡಿನ ಸ್ಥಿತಿ.

ದಕ್ಷಿಣ ಆಫ್ರಿಕಾದ ಯುವ ತಲೆಮಾರಿನ ಕಾರ್ಯಕರ್ತರಲ್ಲಿ ಈ ಕುರಿತು ಚರ್ಚಿಸಿದಾಗ ಹಲವು ಗಂಭೀರ ವಾದಮಾತುಗಳನ್ನು ತೆರೆದಿಟ್ಟರು. Poverty_and_Policy_in_Post_Apartheid_South_Africaನೆಲ್ಸನ್ ಮಂಡೇಲಾ ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಹೋರಾಟ ನಡೆಸಿದರು. ಆದರೆ ಆರ್ಥಿಕ ಸ್ವಾತಂತ್ರ್ಯದ ಪ್ರಶ್ನೆಯನ್ನು ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ. ಇಂದು ಕರಿಯರ ಸರಕಾರ ಅಧಿಕಾರದಲ್ಲಿ ಇದ್ದರೂ ಆರ್ಥಿಕ ನೀತಿಗಳನ್ನು ರೂಪಿಸುವುದು ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಅಮೇರಿಕಾ ಮುಂತಾದ ಮುಂದುವರಿದ ದೇಶಗಳು. ಇಂದು ಚಿಲ್ಲರೆ ಮಾರುಕಟ್ಟೆ, ಹೊಟೇಲ್‌ಗಳು ಸೇರಿದಂತೆ ಇಲ್ಲಿನ ಗಣಿಗಾರಿಕೆಯನ್ನು, ಆರ್ಥಿಕ ಕ್ಷೇತ್ರವನ್ನು ವಿದೇಶಿಯರು ಆಳುತ್ತಿದ್ದಾರೆ. ಅಲ್ಲಿ ಬಿಳಿಯರದ್ದೇ ಕಾರುಬಾರು. ಆರ್ಥಿಕ ಆಯಾಮವನ್ನು ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ವರ್ಣಭೇದ ನೀತಿ ಕೊನೆಗೊಂಡ ನಂತರವೂ ಎರಡು ದಶಕಗಳ ಆಳ್ವಿಕೆಯಲ್ಲೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಮೇರಿಕನ್ ಪ್ರಣೀತಿ ಬಂಡವಾಳ ಶಾಹಿ ನೀತಿಯನ್ನೇ ಮುಂದುವರಿಸುತ್ತಿದೆ. ಈ ನೀತಿಗಳ ಬದಲಾವಣೆಗೆ ಅವರು ಮುಂದಾಗುತ್ತಿಲ್ಲ ಎಂದು ಆರೋಪಿಸುತ್ತಾರೆ. ಅಷ್ಟೇ ಅಲ್ಲ ಗಣಿಗಳಲ್ಲಿ ಉತ್ತಮ ವೇತನಕ್ಕಾಗಿ, ನಗರಗಳಲ್ಲಿ ಉದ್ಯೋಗಕ್ಕಾಗಿ ಹೋರಾಟಗಳು ನಡೆಯದಂತೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ತಡೆಯುತ್ತಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸಲು, ಜೀವನ ಭದ್ರತೆಗೆ ಸರಕಾರ ಮುಂದಾಗುತ್ತಿಲ್ಲ. ಮಂಡೇಲಾ ಕೂಡಾ ಈ ಕುರಿತು ಏನೂ ಮಾಡುತ್ತಿಲ್ಲ ಎಂಬುದು ಇವರ ಆರೋಪ.

ಹೌದು ಮಂಡೇಲಾ ಒಂದು ಮಹಾನ್ ಹೋರಾಟವನ್ನು ನಡೆಸಿದ್ದಾರೆ. ಅದರಲ್ಲಿ ಮಿತಿಗಳೂ ಇರಬಹುದು. ಆ ಹೋರಾಟದಲ್ಲಿ ಅವರು ಗೆಲ್ಲುವಾಗ ಮುಂದೆ ನಡೆಯಬೇಕಾದ ಹೋರಾಟಗಳನ್ನು ನಡೆಸುವಷ್ಟು ಪ್ರಾಯ, ದೈಹಿಕ ಶಕ್ತಿ ಅವರಲ್ಲಿ ಉಳಿದಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು, ಅದರಲ್ಲಿ ಗೆಲ್ಲುವುದು ಈಗಿನ ಕಾಲಘಟ್ಟದಲ್ಲಿ ಅಷ್ಟು ಸುಲಭ ಅಲ್ಲ. ಅಲ್ಲಿನ ಸರಕಾರ ನೆಲ್ಸನ್ ಮಂಡೇಲಾ ಮನೆಯ ಸಂದರ್ಶನಕ್ಕೂ ಸಹ ದುಬಾರಿ ಶುಲ್ಕ ಇಟ್ಟು ಅದರಲ್ಲೂ mandela-house-ticketಲಾಭ ನಷ್ಟದ ಲೆಕ್ಕಾಚಾರ ನೋಡುತ್ತಿರುವ ಈ ಸಂದರ್ಭದಲ್ಲಿ, ಮಂಡೇಲ ಶಾಂತಿ ಮಂತ್ರವನ್ನು ಪಠಿಸುತ್ತಾ ಕರಿಯರ ಹೋರಾಟದ ಕೆಚ್ಚನ್ನು ಕುಂಠಿತಗೊಳಿಸಿದ್ದಾರೆ ಎಂಬ ಆರೋಪದ ನಡುವೆಯೂ ಮಂಡೇಲಾ ಹೋರಾಟದಿಂದ ಸ್ಫೂರ್ತಿ ಪಡೆದು ಅಲ್ಲಿನ ಕರಿಯ ಯುವಜನತೆ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಹೋರಾಟವನ್ನು ಕಟ್ಟಬೇಕಾಗಿದೆ. ಅದು ಅಪ್ರತಿಮ ನಾಯಕ ನೆಲ್ಸನ್ ಮಂಡೇಲರಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ.

ಯಾರಿಗೆ ಬೇಕಿರಲಿ, ಬೇಡದಿರಲಿ, ಮುಂದೆ ನಡೆಯುವ ಎಲ್ಲಾ ರೀತಿಯ ವಿಮೋಚನಾ ಹೋರಾಟಗಳಲ್ಲಿಯೂ ಮಂಡೇಲಾ ಇದ್ದೇ ಇರುತ್ತಾನೆ. ನಿನಗೊಂದು ಸಲಾಂ, ಸಂಗಾತಿ ನೆಲ್ಸನ್ ಮಂಡೇಲಾ.

ಮಡೆ (ಎಂಜಲು) ಸ್ನಾನ ಆಚರಣೆ ಇರಲಿ ಎನ್ನುವುದಾದರೆ ಬೆತ್ತಲೆ ಸೇವೆಯೂ ಇರಲಿ ಬಿಡಿ


– ಚಿದಂಬರ ಬೈಕಂಪಾಡಿ


 

ಆಧುನಿಕತೆಯನ್ನು ಅಪ್ಪಿಕೊಳ್ಳುವ ಮನಸ್ಸುಗಳು ಕುಕ್ಕೆಯಲ್ಲಿ ಮಡೆ ಮಡೆ ಸ್ನಾನಕ್ಕೆ ಅಂಟಿಕೊಂಡಿರುವುದು ವಿಷಾದನೀಯ. ಬದಲಾವಣೆಯನ್ನು ಬಯಸುತ್ತಲೇ ಒಂದು ಕಾಲದಲ್ಲಿ ಮಾಡಿದ ಕಟ್ಟುಪಾಡುಗಳನ್ನು ಮರು ಮೌಲ್ಯಮಾಪನ ಮಾಡದೆ ಸಂದ್ರದಾಯ ಮತ್ತು ಪಾವಿತ್ರ್ಯ ಎನ್ನುವ ಕಾರಣಕ್ಕೆ ಅನುಸರಿಸಲು ಮುಂದಾಗಿರುವುದು ಮೌಢ್ಯತೆಯ ಪರಾಕಾಷ್ಠೆ.

ಮಡೆ ಮಡೆ ಸ್ನಾನಕ್ಕೆ ದೇವಸ್ಥಾನ ಮಂಡಳಿ ಅಥವಾ ಭಕ್ತರು ಕೊಡುತ್ತಿರುವ ಕಾರಣಗಳನ್ನು ಸರ್ಕಾರವೂ ಕಣ್ಣುಮುಚ್ಚಿ ಒಪ್ಪಿಕೊಂಡಿರುವುದು ದುರಂತ ಮಾತ್ರವಲ್ಲ ತನಗಿರುವ ಅಧಿಕಾರವನ್ನು ಚಲಾಯಿಸಲಾಗದ ಅಪವಾದಕ್ಕೆ ಗುರಿಯಾಗಿದೆ.

ಮೌಢ್ಯಗಳನ್ನು ನಿವಾರಿಸಲು ಸುಧಾರಣೆ ಬಯಸುವ ಸರ್ಕಾರ ಅನಾದಿ ಕಾಲದಿಂದ ಕೆಳ ವರ್ಗ ಅನುಸರಿಸಿಕೊಂಡು ಬರುತ್ತಿರುವ ಅಥವಾ ಅನುಸರಿಸಿಕೊಂಡು ಬರಬೇಕೆಂದು ಒತ್ತಡ ಹಾಕಿರುವ ಮನಸ್ಸುಗಳಿಗೆ ಕಡಿವಾಣ ಹಾಕಲಾಗದೆ ಮಕಾಡೆ ಮಲಗಿತು ಎನ್ನಬೇಕೇ?

ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಕೂಡಾ ದೇವರಿಗೆ ಹರಕೆ ಎನ್ನುವ ವ್ಯಾಖ್ಯೆ ಕೊಡಲಾಗುತ್ತಿತ್ತು. yellamma-neem-leaves-devadasiಬೆತ್ತಲೆ ಸೇವೆ ಅಮಾನವೀಯ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ಎಂಜಲು ಎಲೆಯ ಮೇಲೆ ಹೊರಳಾಡಿ ಹರಕೆ ತೀರಿಸಲು ಅವಕಾಶ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ?

ಮಡೆ ಮಡೆ ಸ್ನಾನ ಮಾಡುತ್ತಿರುವವರು ಕೆಳವರ್ಗದ ಜನರು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ನಾಗಾರಾಧನೆ, ಭೂತಾರಾಧನೆಯನ್ನು ಅನಾದಿ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಈ ಭಾಗದ ಜನರು ಬದಲಾವಣೆಯನ್ನು ನಿರಾಕರಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂಥ ಹರಕೆಯನ್ನು ದೇವರಿಗೆ ಅರ್ಪಿಸಬೇಕು ಎಂದು ಹೇಳಿರುವವರು ಯಾರು, ಯಾವ ಗ್ರಂಥದಲ್ಲಿ ಇಂಥ ಹರಕೆಯನ್ನು ಅನೂಚಾನವಾಗಿ ಅನುಸರಣೆ ಮಾಡಿಕೊಂಡು ಬರಬೇಕೆಂದು ಹೇಳಲಾಗಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ಚರ್ಮ ರೋಗ ವಾಸಿಯಾಗುತ್ತದೆ, ಸಂತಾನ ಭಾಗ್ಯ ಬರುತ್ತದೆ ಎನ್ನುವ ವಾದಗಳನ್ನು ಒಪ್ಪಿಕೊಳ್ಳಲೇ ಬೇಕೆಂಬ ಕಟ್ಟುಪಾಡುಗಳಿಲ್ಲ. ಆದರೆ ಕೆಳವರ್ಗದ ಮನಸ್ಸುಗಳಿಗೆ ಇಂಥ ವಾದಸರಣಿಯನ್ನು ಅರೆದು ಕುಡಿಸಿಬಿಟ್ಟಿದ್ದಾರೆ. ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುವವರು ಸಾಮೂಹಿಕ ಸಹಭೋಜನ ಆಯೋಜಿಸಿ ಎಲ್ಲರೂ ಊಟ ಮಾಡಿ ಉಳಿದ ಎಂಜಲು ಎಲೆಯ ಮೇಲೆ ದಿನಪೂರ್ತಿ ಉರುಳುಸೇವೆ ಮಾಡಲು ಅವಕಾಶ ಮಾಡಿಕೊಡುವರೇ?

ಇಂಥ ಆಚರಣೆಗಳು ಶತಮಾನಗಳ ಹಿಂದೆ ಇದ್ದ ತಲೆ ಮೇಲೆ ಮಲಹೊರುವಂಥ ಮತ್ತು ಮಲತಿನ್ನಿಸುವಂಥ made-snanaಘಟನೆಯಷ್ಟೇ ಅಪಾಯಕಾರಿ.

ಈ ಆಚರಣೆಗಳು ನಿಲ್ಲಬಾರದು ಎನ್ನುವ ಮನಸ್ಸುಗಳು ಕೆಳವರ್ಗದವರ ಬಾಯಿಂದ ಇಂಥ ಮಾತುಗಳನ್ನು ಆಡಿಸುತ್ತಿವೆಯೇ ಹೊರತು ಆ ಜನ ತಮ್ಮ ಹೃದಯಾಂತರಾಳದಿಂದ ಹೇಳುತ್ತಿರುವ ಮಾತುಗಳಲ್ಲ. ಮಡೆಸ್ನಾನದ ಹರಕೆ ಹೇಳಿಕೊಳ್ಳುವ ಜನರು ಯಾವ ವರ್ಗದವರು ಎನ್ನುವುದನ್ನು ಅವಲೋಕಿಸಿದರೆ ಭಯಾನಕ ಸತ್ಯ ಬೆಳಕಿಗೆ ಬರುತ್ತದೆ.

ಇಂಥ ಆಚರಣೆಗಳು ಸರ್ಕಾರದ ಅಧೀನದ ದೇವಸ್ಥಾನದಲ್ಲೇ ನಡೆಯಲು ಅವಕಾಶವಾಗಿರುವುದು ವಿಪರ್ಯಾಸ. ಪುರೋಗಾಮಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಡೆಸ್ನಾನ ನಿಷೇಧಿಸುವ ಎದೆಗಾರಿಕೆ ತೋರಬೇಕಾಗಿದೆ. ಇಲ್ಲವಾದರೆ ನೂರಾರು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಆಚರಣೆಗಳನ್ನು ಮತ್ತೆ ಜಾರಿಗೆ ತಂದು ದೇವರ `ಕೃಪೆ’ಗೆ ಪಾತ್ರರಾಗಲಿ.

ಸ್ವಾತಂತ್ರಕ್ಕಾಗಿ ಜೀವನಪರ್ಯಂತ ನಡೆದ ಮಹಾಪುರುಷ ಇನ್ನಿಲ್ಲ

– ಬಿ.ಶ್ರೀಪಾದ ಭಟ್

“During my lifetime I have dedicated myself to this struggle of the African people. I have fought against white domination, and I have fought against black domination.” – Nelson Mandela

ಮಾನವತಾವಾದಿ, ದಕ್ಷಿಣ ಆಫ್ರಿಕಾದ ಬಾಪೂಜಿ ಎಂದೇ ಪ್ರಖ್ಯಾತರಾಗಿದ್ದ ನೆಲ್ಸನ್ ಮಂಡೇಲ ತಮ್ಮ 95 ರ ಇಳಿ Nelson_Mandelaವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನೆಲ್ಸನ್ ಮಂಡೇಲ ಎಂದರೆ ಒಂದು Legacy, ಪರಂಪರೆ. ವರ್ಣಬೇಧ ನೀತಿಯ ವಿರುದ್ಧ ಮತ್ತು ಆ ಪ್ರಭುತ್ವದ ದೌರ್ಜನ್ಯದ ವಿರುದ್ಧ 1944 ರಿಂದಲೇ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ಪ್ರಭುತ್ವ ತೊಲಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಆರಂಭದಲ್ಲಿ ಗೆರಿಲ್ಲಾ ಮಾದರಿಯ ಸಶಸ್ತ್ರ ಹೋರಾಟಕ್ಕೆ ಒಲವು ತೋರಿಸಿದ ಮಂಡೇಲ ಬಲು ಬೇಗನೆ ಅಂಹಿಸಾ ಮಾರ್ಗಕ್ಕೆ ಹೊರಳಿಕೊಂಡರು. ಎಂಬತ್ತರ ದಶಕದ ವೇಳೆಗೆ ಗಾಂಧಿವಾದಿಯಾಗಿ ರೂಪುಗೊಂಡರು. 1993 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ನೆಲ್ಸನ್ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟ ಮೊದಲ ಸರ್ವ ಜನಾಂಗಗಳನ್ನೊಳಗೊಂಡಂತಹ ಪ್ರಜಾಪ್ರಭುತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಸಾಧಿಸಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಈ ಮಹಾನ್ ನಾಯಕ ಯಾವುದೇ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳದೆ 1999 ರಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದಿದರು. ದಕ್ಷಿಣ ಆಫ್ರಿಕಾದ ಪ್ರಶ್ನಾತೀತ ನಾಯಕನಾಗಿ ಕಡೆ ಉಸಿರಿರುವವರೆಗೂ ಅಧಿಕಾರ ಚಲಾಯಿಸುವ ಎಲ್ಲಾ ಪ್ರಲೋಭನೆಗಳನ್ನು ತಿರಸ್ಕರಿಸಿ ಕೇವಲ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ತುಂಬ ಘನತೆಯಿಂದ ತಮಗೆ ಸಹಜವಾದ ಆದರ್ಶವನ್ನು ನಿರೂಪಿಸಿ ತಮ್ಮ ರಾಜಕೀಯ ಅಧಿಕಾರವನ್ನು ಮೊಟಕುಗೊಳಿಸಿಕೊಂಡರು. ಇವರ ಈ ಸಂಯಮ ನಮ್ಮನ್ನು ಬೆರಗುಗೊಳಿಸುತ್ತದೆ. ಭಾರತೀಯರಿಗೆ ಮತ್ತು ತೃತೀಯ ಜಗತ್ತಿನ ಇತರೆ ಅನೇಕ ರಾಷ್ಟ್ರಗಳ ಸರ್ವಾಧಿಕಾರ ಮತ್ತು ಅಮರಣಾಂತ ಅಧಿಕಾರದ ಹುಚ್ಚಿನ ನಾಯಕರನ್ನು ಕಂಡ ದೇಶಗಳ ಜನತೆಗಂತೂ ಇದೂ ಹೀಗೂ ಉಂಟೆ ಎನ್ನುವ ವಿಸ್ಮಯ!!

“ಬಿಳಿಯರ ದೌರ್ಜನ್ಯದ ವಿರುದ್ಧ ಹೋರಾಡಿದ ನಾನು ಕಪ್ಪು ವರ್ಣೀಯರ ಪ್ರತೀಕಾರದ ದೌರ್ಜನ್ಯದ ವಿರುದ್ಧವೂ ಹೋರಾಡುತ್ತೇನೆ” ಎಂದು ಅಧಿಕಾರ ವಹಿಕೊಂಡಾಗ ಪಣ ತೊಟ್ಟ ಮಂಡೇಲ ಗಾಂಧಿವಾದದ ನಿಜ ನಾಯಕ. ನುಡಿದಂತೆ ನಡೆದ ಮಂಡೇಲ ಮಾದರಿಯಾಗಿ ಬದುಕಿದರು. 1962 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಜೈಲು ಸೇರಿದ ಮಂಡೇಲ ಜೈಲಿನಿಂದ ಬಿಡುಗಡೆಗೊಂಡಿದ್ದು 1990 ರಲ್ಲಿ. Long_Walk_to_Freedomಸುಮಾರು ಇಪ್ಪತ್ತೆಂಟು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದ ಮಂಡೇಲ ಎಲ್ಲಿಯೂ ನೈತಿಕವಾಗಿ ಕುಗ್ಗಲೇ ಇಲ್ಲ. ಯಾವುದೇ ಬಗೆಯ ಸಂಧಾನವನ್ನು ನಿರಾಕರಿಸಿದರು. ಹೋರಾಟದ ಮಾರ್ಗವನ್ನು ಅನುಸರಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ತನ್ನ ಎರಡನೇ ಪತ್ನಿ ವಿನ್ನಿ ಮಂಡೇಲ ಅವರೊಂದಿಗೆ 1996 ರಲ್ಲಿ ವಿಚ್ಛೇದನೆ ಪಡೆದುಕೊಂಡ ಮಂಡೇಲ ಬಿಳಿಯರ ಸರ್ಕಾರದ ಕಾಲಘಟ್ಟದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ, ಕೊಲೆಗಳ ತನಿಖೆ ನಡೆಸಲು ಡೆಸ್ಮಂಡ್ ಟುಟು ನಾಯಕತ್ವದಲ್ಲಿ “Truth and Reconciliation Commission” ಅನ್ನು ಸ್ಥಾಪಿಸಿದರು. ಇದರ ತನಿಖೆಯ ವ್ಯಾಪ್ತಿಗೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜರುಗಿದ ದೌರ್ಜನ್ಯಗಳ ವಿರುದ್ಧವೂ ತನಿಖೆ ನಡೆಸಬೇಕೆಂದು ಆದೇಶಿಸಿದ್ದರು. ಒಂದು ವೇಳೆ ಮಂಡೇಲ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಂತಹ ಸಂದರ್ಭದಲ್ಲಿ ಈ ಬಗೆಯ ಸಮತೋಲನದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಹೋಗಿದ್ದಲ್ಲಿ ಶತಮಾನಗಳಿಂದ ಬಿಳಿಯರ ಕೈಯಲ್ಲಿ ಕ್ರೌರ್ಯಕ್ಕೆ ತುತ್ತಾಗಿದ್ದ ಬಹುಸಂಖ್ಯಾತ ಕಪ್ಪುವರ್ಣೀಯರ ಆಕ್ರೋಶಕ್ಕೆ ಅಲ್ಪಸಂಖ್ಯಾತ ಬಿಳಿಯರು ಗುರಿಯಾಗುತ್ತಿದ್ದರು. ಆದರೆ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ತನ್ನ ಸಮಯಪ್ರಜ್ಞೆ, ರಾಜಕೀಯ ಮುತ್ಸದ್ದಿತನ ಮತ್ತು ಸಮತಾವಾದದ ತತ್ವಕ್ಕೆ ಬದ್ಧರಾಗಿ ಜರುಗಬಹುದಾಗಿದ್ದ ಜನಾಂಗೀಯ ಘರ್ಷಣೆ ಮತ್ತು ಪ್ರತೀಕಾರದ ರಕ್ತಪಾತವನ್ನು ತಡೆದರು. ಇದು ಮಂಡೇಲಾ ಅವರ ಮಹಾನ್ ಸಾಧನೆಗಳಲ್ಲೊಂದು.

“ಮಡಿಬಾ” ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂಡೇಲ ಕುರಿತು ಅವರ ಸಹವರ್ತಿ ಡೆಸ್ಮಂಡ್ ಟುಟು ಕೆಲವು ಗಂಟೆಗಳ ಹಿಂದೆ ಹೇಳಿದ್ದು ಇದು: “He was not only an amazing gift to humankind, he made South Africans and Africans feel good about being who we are. He made us walk tall.”

ಇನ್ನು ಮುಂದಿನ ಕೆಲವು ದಿನಗಳ ಕಾಲ ಜಗತ್ತಿನಾದ್ಯಂತ ಈ “ಮಡಿಬಾ ಮ್ಯಾಜಿಕ್” ಕುರಿತು ಚರ್ಚೆಗಳು ನಡೆಯುತ್ತಿರುತ್ತವೆ. ಇದು ಇಂದು ತುರ್ತಾಗಿ ಅವಶ್ಯಕವಿರುವ ಆಕ್ಸಿಜನ್.