Monthly Archives: January 2012

ನಮ್ಮ ಪರಿಸರ – ನೆಲ ಜಲ : 1

– ಪ್ರಸಾದ್ ರಕ್ಷಿದಿ

ನೀರಿನ ಬೆಲೆ ಹಾಲಿಗಿಂತ ದುಬಾರಿ ಯಾಕೆ?  ಶುಂಠಿ ಬೇಸಾಯ ಯಾರಿಗೆ ಆದಾಯ? ಎಂಡೋಸಲ್ಫಾನ್ ಬಳಕೆಯಿಂದ ನರಕವಾದ “ಸ್ವರ್ಗ” (ಸ್ವರ್ಗ ಎನ್ನುವುದು ಕಾಸರಗೋಡು ತಾಲ್ಲೂಕಿನ ಒಂದು ಊರು). ಇತ್ಯಾದಿ ಶೀರ್ಷಿಕೆ-ಬರಹಗಳನ್ನು, ನಾವು ಪ್ರತಿನಿತ್ಯ ಪತ್ರಿಕೆಗಳಲ್ಲಿ ಕಾಣುತ್ತೇವೆ. ಇತರೆ ಮಾಧ್ಯಮಗಳಲ್ಲೂ, ಹಾಳಾಗುತ್ತಿರುವ ನಮ್ಮ ನೆಲ, ಜಲ, ಗಾಳಿ, ಪರಿಸರ, ಆರೋಗ್ಯಗಳ ಬಗ್ಗೆ, ವರದಿಗಳು ಚರ್ಚೆಗಳು, ನುಡಿಚಿತ್ರಗಳು, ಜೊತೆಗೆ ದಿನನಿತ್ಯ ಅದಕ್ಕೆಂದೇ ಮೀಸಲಾದ ಕಾರ್ಯಕ್ರಮಗಳು, ಇವುಗಳಿಗೆಲ್ಲ ಲೆಕ್ಕವೇ ಇಲ್ಲ. ಇವೆಲ್ಲದರ ಜೊತೆಯಲ್ಲಿ ಇದೇ ವಿಷಯಗಳ ಬಗ್ಗೆ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆಯೂ ಕಡಮೆಯೇನಲ್ಲ.

ಇವುಗಳ ಜೊತೆಗೆ ನೆಲ, ಜಲ, ಪರಿಸರ ಸಂರಕ್ಷಣೆಯನ್ನೇ ಕಾಯಕವನ್ನಾಗಿಸಿಕೊಂಡ ಅನೇಕ ವ್ಯಕ್ತಿಗಳು ಹಲವು ಸಂಘಸಂಸ್ಥೆಗಳು ಇವೆ. ಇವುಗಳಲ್ಲಿ ಕೆಲವು ಸದ್ದಿಲ್ಲದೆ ಕೆಲಸ ಮಾಡುತ್ತ ಇನ್ನುಕೆಲವು ಬರೀ ಸದ್ದನ್ನೇ ಮಾಡುತ್ತ ಮುಂದುವರಿಯುತ್ತಿವೆ. ಪರಿಸರ ಸಂರಕ್ಷಣೆಗೆಂದೇ ಕೇಂದ್ರ ಸರ್ಕಾರದ ಸಂಪುಟ ದರ್ಜೆ ಸಚಿವಾಲಯವೂ ಇದೆ. ಈ ವರ್ಷ ಕರ್ನಾಟಕ  ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಹಲವು ಕೋಟಿ ರೂಪಾಯಿಗಳ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆಯೆಂಬ ಸುದ್ದಿಯೂ ಇತ್ತೀಚೆಗೆ ಕೇಳಿ ಬಂದಿದೆ. ಅದರ ಅನುಷ್ಠಾನಕ್ಕಾಗಿಯೇ ಹಲವಾರು ಸಂಸ್ಥೆಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಇವೆ.

ಇನ್ನು ನಮ್ಮಲ್ಲಿ ‘ಫುಕುವೋಕಾ’ನ ಶಿಷ್ಯರು, ತದ್ರೂಪಿಗಳು, ಸಮರ್ಥಕರು ಹಾಗೂ ವಿರೋಧಿಗಳು ಇವರುಗಳಿಗೇನೂ ಕೊರತೆಯಿಲ್ಲ.  Do nothing Farming ಎನ್ನುವುದನ್ನು ಅಪಹಾಸ್ಯಕ್ಕೀಡಾಗುವಷ್ಟು ಅಧ್ವಾನವನ್ನು ಇವರಲ್ಲಿ ಹಲವರು ಈಗಾಗಲೇ ಎಬ್ಬಿಸಿದ್ದಾರೆ. ಈ ಬಗ್ಗೆ ಮುಂದೆ ಬರೆಯುತ್ತೇನೆ. ಆದರೆ ‘ಫುಕುವೋಕಾ’ನ ವಿಚಾರ ನಮಗೆ ಹೊಸದೇನಲ್ಲ. ನಮ್ಮಜ್ಜನ ಕಾಲದಲ್ಲಿ ಹೀಗೆಯೇ ಕೃಷಿ ನಡೆದಿತ್ತು, ನಮ್ಮ ಹಳೆಯ ಗ್ರಂಥದಲ್ಲಿ ಹೀಗೆ ಹೇಳಿದೆ ಎಂದು ಒಳ್ಳೆಯದೇನಾದರೂ ವಿಚಾರ ಬಂದರೆ ಅದು ನಮ್ಮಲ್ಲಿ ಹಿಂದೆಯೇ ಇತ್ತು ಎಂದೂ ಕೆಟ್ಟದ್ದೇನಾದರೂ ಇದ್ದರೆ ಅದು ಹೊರಗಿನವರಿಂದ ಬಂತು ಎಂದು ಹೇಳುತ್ತ ಭಾರತದ ಗತಕಾಲದ ಶ್ರೇಷ್ಟತೆಯಲ್ಲೇ ಇಂದೂ ಮುಳುಗಿರುವವರ ಬಗ್ಗೆ ಹೇಳದಿರುವುದೇ ಕ್ಷೇಮ. ಆದರೆ ನಮ್ಮಲ್ಲಿ ಒಳ್ಳೆಯದೇನೂ ಇರಲೇ ಇಲ್ಲವೆಂದು ನನ್ನವಾದವಲ್ಲ. ಆ ಒಳ್ಳೆಯದನ್ನು ನಮಗೆ ಯಾಕೆ ಉಳಿಸಿಕೊಂಡು ಬರಲಾಗಲಿಲ್ಲ, ಅದಕ್ಕೆ ಕಾರಣಗಳೇನು? ಇತ್ಯಾದಿಗಳನ್ನೆಲ್ಲ ನಮ್ಮ ನಡುವೆಯೇ ಹುಡುಕಬೇಕಲ್ಲವೇ? ಇದು ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ.

ನಮ್ಮ ಪರಿಸರ ಎಂದಾಗ, ನಮಗೆ ತಟ್ಟನೆ ಮನಸ್ಸಿಗೆ ಬರುವುದು ನಮ್ಮ ಕಾಡುಗಳು, ಹೊಳೆ, ನದಿ ಕೆರೆ, ಸಮುದ್ರ, ಗಾಳಿ, ಆಕಾಶ, ಅನಂತರ ಪ್ರಾಣಿಗಳು, ಮತ್ತು ಕೊನೆಯದಾಗಿ ಮನುಷ್ಯನೆಂಬ ಪ್ರಾಣಿ. ಇವುಗಳಲ್ಲಿ ಯಾರ ಅಂಕೆಯಲ್ಲೂ ಇಲ್ಲದ  ಆದರೆ ಎಲ್ಲವನ್ನೂ ಕಾಲಬದ್ಧ, ನಿಯಮಬದ್ಧವಾಗಿ ನಡೆಸುವ ಪ್ರಕೃತಿ ಒಂದೆಡೆಯಾದರೆ, ತನ್ನ ಅಲ್ಪಜ್ಞಾನವನ್ನೇ ಮಹಾನ್ ಸಾಧನೆಯೆಂದು ನಂಬಿ ಪ್ರಕೃತಿಯನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಿರುವ ಮನುಷ್ಯ ಇನ್ನೊಂದೆಡೆಯಲ್ಲಿದ್ದಾನೆ.  ಪ್ರಕೃತಿ ತನ್ನ ಅಗಾಧವಾದ ಸಾಮರ್ಥ್ಯದೊಡನೆ ಪ್ರಕೋಪ-ವಿಕೋಪಗಳನ್ನುಂಟುಮಾಡುತ್ತ ಮತ್ತೆ ಅದೇ ಅದ್ಭುತ ರೀತಿಯಲ್ಲಿ ತನ್ನನ್ನು ತಾನೇ ಪುನಶ್ಚೇತನಗೊಳಿಸಿಕೊಳ್ಳುತ್ತ, ಬೇಡವಾದದ್ದನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಿಕೊಳ್ಳುತ್ತ, ಬೇಕಾದ ಹೊಸತನ್ನು ಸೃಷ್ಟಿಸಿಕೊಳ್ಳುತ್ತ ಇದೆ. ಆದರೆ ಮನುಷ್ಯನೆಂಬ ಪ್ರಾಣಿ ಜಗತ್ತಿನ ಎಲ್ಲವೂ ತನ್ನ ಉಪಯೋಗಕ್ಕಾಗಿಯೇ ಇದೆಯೆಂಬ ಅಹಂಕಾರದಿಂದ ಮಾಡಿರುವ, ಮಾಡುತ್ತಿರುವ ಅನಾಹುತಗಳು ಬಲುದೊಡ್ಡವು.  ನಾವು ಯೋಚಿಸಬೇಕಿರುವುದು, ಪ್ರಕೃತಿಗೆ ಇರುವ-ತನಗೆ ಬೇಡವಾದದ್ದನ್ನು  ನಿರ್ದಾಕ್ಷಿಣ್ಯವಾಗಿ ನಿವಾರಿಸಿಬಿಡುವ ಅಗಾಧ ಶಕ್ತಿಯ ಬಗ್ಗೆ. ಆದ್ದರಿಂದ ಪ್ರಕೃತಿಗೆ ಬೇಡವಾದದ್ದರಲ್ಲಿ ಮನುಷ್ಯನೇ ಮೊದಲಿಗನಾಗನಹುದೆಂಬ ಭಯ ಮತ್ತು ಎಚ್ಚರದಿಂದ ನಾವು ವರ್ತಿಸಬೇಕಾಗಿದೆ.

ಪ್ರಕೃತಿಯಲ್ಲಿ ಒಂದಾಗಿ, ಸಹಜವಾಗಿ ಇತರ ಪ್ರಾಣಿಗಳಂತೆ ಬದುಕುವುದನ್ನು ಬಿಟ್ಟು ಈ ಮನುಷ್ಯ ಬಹಳದೂರ ಬಂದಿದ್ದಾನೆ. ಅತ್ಯಂತ ಜಟಿಲ ಹಾಗೂ ಸಂಕೀರ್ಣ ಜೀವನಕ್ರಮದ ಬುದ್ಧಿವಂತನೆನಿಸಿದ್ದಾನೆ. ಈಗ ಮನುಷ್ಯನಿಗೆ ಸಾಮಾಜಿಕ,  ಆರ್ಥಿಕ,  ಸಾಂಸ್ಕೃತಿಕವಾದ ಭಿನ್ನತೆಗಳು ಮತ್ತು ಕಾಲ ದೇಶಗಳ ವೈವಿದ್ಯತೆಗಳೂ ಸೇರಿಕೊಂಡಿವೆ. ಹಾಗಾಗಿ ನಾವು ಪರಿಸರದ ಬಗ್ಗೆ ಮಾತಾಡುವಾಗಲೆಲ್ಲ ಈ ವಿಷಯಗಳನ್ನೆಲ್ಲ ಮರೆತು ಅಥವಾ ಬಿಟ್ಟು ಆಯಾ ಸಂದರ್ಭದಲ್ಲಿ ಒಂದೊಂದೇ ವಿಷಯವನ್ನು ಪ್ರತ್ಯೇಕವಾಗಿ ಕಂಡುಕೊಂಡು ಪರಿಹಾರ ಹುಡುಕುತ್ತಾ ಹೋದರೆ ರೋಗಕ್ಕಿಂತ ಚಿಕಿತ್ಸೆಯೇ ಭಯಾನಕವಾದೀತು. ಹಾಗಾಗಿ ನಮ್ಮ ಪರಿಸರ ಪ್ರಜ್ಞೆಯೂ ಕೂಡಾ ನಮ್ಮ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳೊಂದಿಗೆ, ಪ್ರತಿಯೊಂದನ್ನು ಸಮಗ್ರವಾಗಿ ಗ್ರಹಿಸುತ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೃಷಿ, ಉದ್ಯಮ, ವಿದ್ಯಾಭ್ಯಾಸ, ಆಡಳಿತ, ಆರ್ಥಿಕತೆ,  ಮತ್ತು ಸಾಂಸ್ಕೃತಿಕ ರೂಪುರೇಷೆಗಳನ್ನು ಪುನರ್ ಪರಿಶೀಲಿಸುತ್ತ  ಪುನರ್ರಚಿಸುತ್ತ ಸಾಗಬೇಕಾಗಿದೆ.

ಮೊದಲನೆಯದಾಗಿ ನಮ್ಮ ಕೃಷಿವಲಯದ ಬಗ್ಗೆ ಯೋಚಿಸೋಣ. ಸಧ್ಯದಲ್ಲಿ ಪರಿಸರ ಪ್ರಿಯರೆಲ್ಲರ ಬಾಯಲ್ಲಿ ಯಾವಾಗಲೂ ಕೇಳುತ್ತಿರುವ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವ ವಿಷಯವೆಂದರೆ  ” ಸಹಜ ಕೃಷಿ”. ಇದೊಂದು ಆದರ್ಶಸ್ಥಿತಿ. ಧ್ಯಾನದಂತಹ ಕ್ರಿಯೆ. ನೀರಿನಲ್ಲಿ ಮೀನಿನಂತೆ ಸಹಜವಾಗಿ ಬದುಕುವ ಗತಿ. ಇಲ್ಲಿ ಕೃಷಿಕ ಸಂಪೂರ್ಣವಾಗಿ ಪ್ರಕೃತಿಯ ಭಾಗವೇ ಆಗಿರುತ್ತಾನೆ. ಈ ಸಹಜ ಕೃಷಿಯು ನಮ್ಮ ಇಂದಿನ ಪರಿಸ್ಥಿತಿಯಲ್ಲಿ  ಕೆಲವೇ ಕೆಲವರಿಗೆ (ಅದೂ ಕೂಡಾ ಪೂರ್ಣವಾಗಿ ಅಲ್ಲ) ಸಾಧ್ಯವಾಗಬಹುದು. ಇಂತಹವರಲ್ಲಿ ಜಪಾನಿನ ‘ಫಕುವೋಕಾ’ ನಮ್ಮವರೇ ಆದ ‘ಚೇರ್ಕಾಡಿ ರಾಮಚಂದ್ರರಾಯರು’ ಬರುತ್ತಾರೆ.

ಚೇರ್ಕಾಡಿ ರಾಮಚಂದ್ರರಾಯರು

ಯಾಕೆಂದರೆ ಇವರು ಯಾವುದೇ ಆಧುನಿಕ ಸೌಲಭ್ಯಗಳನ್ನು ಬಯಸದೆ ಎಣ್ಣೆದೀಪ ಉರಿಸುತ್ತ,ಬಾವಿಯಿಂದ ನೀರನ್ನು ಸೇದಿ ಬಳಸುತ್ತ, ತಮ್ಮ ಆಹಾರವನ್ನು ತಾವೇ ಬೆಳೆದುಕೊಂಡು ಎಲ್ಲ ಕೆಲಸಗಳನ್ನು ತಾವೇಮಾಡುತ್ತ ನಮ್ಮ ಪ್ರಾಚೀನ ಕಾಲದ ಋಷಿಮುನಿಗಳಂತೆ ಬದುಕಿದವರು. ಆದ್ದರಿಂದಲೇ ಇರಬೇಕು ಫುಕುವೋಕಾ ಹೇಳಿದ್ದು ನನ್ನ ತೋಟ, ಮನೆ ಆಧುನಿಕರಿಗೆ ಎಷ್ಟು ಕುತೂಹಲ ತಂದಿದೆಯೋ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ವ್ಯಕ್ತಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು. (ನಮ್ಮ ಮಠ ಮಾನ್ಯರುಗಳು ಈ ಆಧ್ಯಾತ್ಮಿಕ ಗುಂಪಿಗೆ ಸೇರುವುದಿಲ್ಲ) ಹಾಗಾಗಿ ಈ ‘ಸಹಜ ಕೃಷಿ’ ಒಂದು ಆದರ್ಶವಾಗಿ ಉಳಿದೀತೆ ಹೊರತು, ಸಾರ್ವತ್ರಿಕ ಆಚರಣೆಗೆ ಬರುವುದು ಕಷ್ಟ,

ಎರಡನೆಯದಾಗಿ ನಾವೀಗ ಎಲ್ಲಡೆ ಕಾಣುವ- ಕೇಳುವ, ಇತ್ತೀಚೆಗಂತೂ ಕಿವಿಗೆ ಅಪ್ಪಳಿಸುತ್ತಿರುವ ‘ಹೈಟೆಕ್ ತಂತ್ರಜ್ಞಾನ’ ಮತ್ತು ‘ಹೈಟೆಕ್ ಕೃಷಿ’ ಈ ಹೈಟಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ.

ಒಂದುಕಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ ಈ ಹೈಟೆಕ್ ಕೃಷಿಗೆ ನೀಡುತ್ತಿರುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಸರ್ಕಾರ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಜಾನರು ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ   ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್ ಮಾಡಿ ಸರ್ಜರಿ ಆಪರೇಷನ್ಗೆಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’ , ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗುದೆಯೇ? ಎಂದು.

ಅನ್ನಿಸದೆ ಇರದು. ಆದರೆ ಹೌದು ಅವರ ಪಾಲಿಗೆ ನಮ್ಮ ಕೃಷಿಕ್ಷೇತ್ರ ಖಂಡಿತವಾಗಿಯೂ ಸಮೃದ್ಧವಾಗಿದೆ! ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’  ‘ಕೃಷಿಉದ್ಯಮ’  ಜೊತೆಗೆ  ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು,  ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ,  ಗದ್ದೆ, ಹೊಲಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2

-ಎನ್.ಎಸ್. ಶಂಕರ್

‘ರೈತಸಂಘ ರೈತರ ಸಮಸ್ಯೆಗಳನ್ನು ಇಡೀ ರಾಜ್ಯದ ಆರ್ಥಿಕ ಸಂದರ್ಭದಲ್ಲಿಟ್ಟು ಕೃಷಿ ಮತ್ತು ಕೈಗಾರಿಕೆ, ರೈತ ಮತ್ತು ಸರ್ಕಾರದ ಸಂಬಂಧಗಳನ್ನು ಮೊತ್ತ ಮೊದಲ ಬಾರಿಗೆ ವಿಶ್ಲೇಷಿಸಿತು… ಆದರೆ ರೈತಸಂಘ ಪ್ರಬಲಗೊಂಡಂತೆಲ್ಲ ಅದರ ಪ್ರಾಬಲ್ಯವೇ ಕೆಲವು ರಾಜಕೀಯ ಪ್ರಶ್ನೆಗಳನ್ನು ಹುಟ್ಟು ಹಾಕಿತು… ರೈತರ ಹೋರಾಟ ಉಗ್ರವಾಗತೊಡಗಿದಷ್ಟೂ ಗ್ರಾಮದ ಇತರರ ತೊಳಲಾಟ ಹೆಚ್ಚಾಗಿದ್ದು ಈ ಹೋರಾಟದ ರಾಜಕೀಯ ಪ್ರತಿಧ್ವನಿಯಂತಿದೆ…’ ಎಂದು ಲಂಕೇಶ್ “ಟೀಕೆ ಟಿಪ್ಪಣಿ”ಯಲ್ಲಿ ಬರೆದರು (ರೈತರು: ಒಂದು ರಾಜಕೀಯ ಟಿಪ್ಪಣಿ). ಅವರು ಎತ್ತಿಕೊಂಡ ಉದಾಹರಣೆ- ಶಿವಮೊಗ್ಗದ ಕೆಲವು ಹಳ್ಳಿಗಳಲ್ಲಿ ರೈತರು ‘ಗ್ರಾಮಕ್ಕೆ ಅಧಿಕಾರಿಗಳ ಪ್ರವೇಶ ಸಂಜೆ 4ರಿಂದ 5’ ಎಂದು ಹಾಕಿದ ದಿಟ್ಟ ಬೋರ್ಡ್ ಗಳದ್ದು. ಅಂದರೆ ಗ್ರಾಮದ ಇತರ ಅಸಹಾಯಕರ ನರಕವನ್ನು ಈ ಬೋರ್ಡ್ ಇನ್ನೂ ಘೋರವಾಗಿಸಬಲ್ಲುದು ಎಂಬುದು ಲಂಕೇಶರ ಆತಂಕವಾಗಿತ್ತು. ಅವರ ಈ ವಾದವನ್ನು ಮೊದಲು ಪ್ರಶ್ನಿಸಿದ್ದು ತೇಜಸ್ವಿ.

‘ರೈತಸಂಘದಲ್ಲಿ ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ ಕಡಿಮೆ ಎಂದಿದ್ದೀರ. ಆದರೆ ರೈತಸಂಘ ಮೂಲಭೂತವಾಗಿ ಆರಂಭವಾದದ್ದು ಒಂದು ಕಸುಬಿನವರ ಅಂದರೆ ರೈತರ ಸಂಘಟನೆಯಾಗಿ ಅಲ್ಲವೆ? ಜಾತಿಗಳ ಪ್ರಕಾರ ಉದ್ಯೋಗ ಹಂಚಿರುವ ಈ ದೇಶದಲ್ಲಿ ಚಪ್ಪಲಿ ಮಾಡುವವರ ಸಂಘಟನೆ ಮಾಡಿದರೂ ಯಾವುದೋ ಒಂದು ಜಾತಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದಿಲ್ಲವೆ?

‘ರೈತಸಂಘ ಇತರರ ಮುಖವಾಣಿಯಾಗಲು ಯತ್ನಿಸಬೇಕೆಂದು ಹೇಳಿದ್ದೀರಿ. ಆದರೆ ನನ್ನ ದೃಷ್ಟಿಯಲ್ಲಿ ಇದು ಅನಗತ್ಯ. ಯಾವ ಸಂಘಟನೆಯಾದರೂ ತನಗೆ ಸಂಬಂಧಿಸಿಲ್ಲದ ಜನರ ಮುಖವಾಣಿಯಂತೆ ಯಾಕೆ ನಾಟಕವಾಡಬೇಕು?…  ಎಂದರೆ ಪ್ರತಿ ಸಂಘಟನೆಯೂ ಗ್ರಾಮದ ಇತರರ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗದಂತೆ ನಿಲುವನ್ನು ತಗೊಂಡರೆ ಸಾಕೆಂದು ನನ್ನ ಚಿಂತನೆ. ನೀವು ಕೊಟ್ಟ ಬೋರ್ಡ್ನ ಉದಾಹರಣೆಯೂ ಸರಿಯಾದುದೆಂದು ನನಗನ್ನಿಸುವುದಿಲ್ಲ. ನಮ್ಮ ಗ್ರಾಮಗಳಿಗೆ ಯಾರಾದರೂ ಸರ್ಕಾರಿ ಅಧಿಕಾರಿ ಯಾವುದೇ ಜಾತಿಯವನ ಅಥವಾ ಕಸುಬಿನವನ ಯೋಗಕ್ಷೇಮ ಕೇಳಲು ಬರುತ್ತಿದ್ದಾನೆಂದು ತಿಳಿದಿದ್ದೀರಾ? ರೈಡ್ ಮಾಡಲು, ಶರಾಬು ಕಾಯಿಸುವವರನ್ನು ಹಿಡಿಯಲು, ಸಾಲ ವಸೂಲಿ, ಮನೆ ಜಫ್ತಿ, ಇಂತಹುವಲ್ಲದೆ ಇನ್ಯಾವ ಕಾರಣಕ್ಕಾದರೂ ಯಾವನಾದರೂ ಸರ್ಕಾರಿ ಅಧಿಕಾರಿ ಗ್ರಾಮಗಳ ಪರಿಧಿಯೊಳಕ್ಕೆ ಕಾಲಿಟ್ಟ ಉದಾಹರಣೆ ಇದೆಯೆ?…

‘ರೈತಸಂಘ ರಚನಾತ್ಮಕ ಕಾರ್ಯಕ್ರಮಗಳ ಮೇಲೆ ತನ್ನ ಸಂಘಟನೆಯನ್ನು ಬೆಳೆಸಲಿಲ್ಲ ಎನ್ನುವ ನಿಮ್ಮ ವಾದದಲ್ಲಿ ತಿರುಳಿದೆ. ಆದರೆ ಇಡೀ ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಪರಿವರ್ತನೆಗೆ ಯತ್ನಿಸಬೇಕೆಂದು ನೀವು ಹೇಗೆ ಆಶಿಸುತ್ತೀರ? ಜೀವನದ ಎಲ್ಲ ರಂಗಗಳಲ್ಲೂ ಅವರು ರಣಕಹಳೆ ಊದಿ ಯುದ್ಧ ಆರಂಭಿಸಲು ಶಕ್ಯವೇ?…’ ಎಂದು ಕಿಚಾಯಿಸಿದರು ತೇಜಸ್ವಿ.

ಇದಕ್ಕೆ ಲಂಕೇಶ್ ನೀಡಿದ ಮಾರುತ್ತರವನ್ನೂ ನೋಡಬೇಕು. ‘ಅತ್ಯಂತ ವೈಜ್ಞಾನಿಕವಾದ’ ವೆಂಕಟಸ್ವಾಮಿ ವರದಿ ಪರವಾಗಿ ನಂಜುಂಡಸ್ವಾಮಿ ಮತ್ತು ರಾಮದಾಸ್ ಎಷ್ಟು ವಾದಿಸಿದರೂ (ತೇಜಸ್ವಿ ಬರೆದ ಪ್ರಕಾರ ‘ರೈತರೆದುರು ತಮ್ಮ ನಿಲುವನ್ನು ವಿವರಿಸಿ ಅವರಿಂದ ಬೈಸಿಕೊಂಡು ಬಂದರೂ’) ಬಹುಪಾಲು ರೈತಸಂಘ, ವರದಿಯ ವಿರುದ್ಧವೇ ಆರ್ಭಟಿಸಿ ಗದ್ದಲವೆಬ್ಬಿಸಿತ್ತು. (ಅಂದರೆ ವರದಿ ವಿಷಯದಲ್ಲಿ ದೇವೇಗೌಡರ ನಿಲುವಿಗೂ, ರೈತಸಂಘದ ನಿಲುವಿಗೂ ವ್ಯತ್ಯಾಸವಿರಲಿಲ್ಲ!) ಜೊತೆಗೆ, ಜಿಲ್ಲೆಯೊಂದರಲ್ಲಿ ರೈತಸಂಘದ ಪದಾಧಿಕಾರಿಗಳು ಮತ್ತು ದಲಿತರಿಗೆ ಮಾರಾಮಾರಿ ನಡೆದು ಹರಿಜನರ ಕೈ ಕಾಲು ಮುರಿದದ್ದು; ಇನ್ನೊಂದು ಜಿಲ್ಲೆಯಲ್ಲಿ ರೈತ ಮುಖಂಡರು ಹಣ ಎತ್ತುವ ಹಾಗೂ ಕಳ್ಳನಾಟಾ ಸಾಗಾಟದ ಆಪಾದನೆಗೆ ಒಳಗಾಗಿದ್ದು; ಮತ್ತು ನಿಂತಲ್ಲೆಲ್ಲ ಚುನಾವಣೆಯಲ್ಲಿ ಸೋತಿದ್ದು- ಈ ನಾಲ್ಕು ಅಂಶಗಳನ್ನು ಉಲ್ಲೇಖಿಸುವ ಲಂಕೇಶರು ‘ನಾವು ರೈತ ಚಳವಳಿಯ ಮೂಲೋದ್ದೇಶಗಳನ್ನು ಹೇಗೆ ಮರೆಯಬಾರದೋ, ಹಾಗೆಯೇ ಸರ್ಕಾರದ ಮೂಲೋದ್ದೇಶಗಳನ್ನೂ ಮರೆಯಬಾರದು. ಸರ್ಕಾರ ಇರಬೇಕಾದ್ದು ರೈತರಿಗೆ ನೆರವಾಗುವುದಕ್ಕೆ ಎಂಬುದು ನಿಜ. ಸರ್ಕಾರ ಇರಬೇಕಾದ್ದು ರಕ್ಷಣೆಯೇ ಇಲ್ಲದ ಜನಕ್ಕೆ, ನಿಲ್ಲಲು ನೆಲೆಯಿಲ್ಲದೆ ಹಳ್ಳಿಗಳಲ್ಲಿನ ಉಳ್ಳವರ ಗರ್ಜನೆಗೆ ನಡುಗುವ ಜನಕ್ಕೆ ರಕ್ಷಣೆ ನೀಡಲು ಕೂಡ ಎಂಬುದು ಅಷ್ಟೇ ನಿಜ’ ಎಂದು ನೆನಪಿಸಿದರು.

ಆಗ ನಮಗೂ ಬಿಸಿರಕ್ತದ ‘ಸಹಜ ಅವಿವೇಕದ’ ವಯಸ್ಸು. ಲಂಕೇಶ್ ಪತ್ರಿಕೆಯಲ್ಲಿ ಈ ವಾಗ್ವಾದವನ್ನು ಓದಿಕೊಂಡಾಗ ನಮ್ಮ ಕಣ್ಣಿಗೆ ಲಂಕೇಶರು ಪೂರ್ವಗ್ರಹ ಪೀಡಿತರಾಗಿಯೂ, ತೇಜಸ್ವಿ ಹೀರೋ ಆಗಿಯೂ ಕಂಡಿದ್ದರು. ಈಗ ಯೋಚಿಸಿದರೆ, ಲಂಕೇಶ್ ಚಿಂತನೆಯ ಹಿಂದಿನ ವಿವೇಕ ಮನ ತಟ್ಟುತ್ತದೆ. ಇದರ ಎದುರು ತೇಜಸ್ವಿ, ಯಾವ ಜ್ವಲಂತ ಪ್ರಶ್ನೆಗಳ ಗೋಜಿಗೂ ಹೋಗದೆ ರೈತಸಂಘದ ಸಮರ್ಥಕರಾಗಿ ಒಳಗಿನಿಂದ ವಾದ ಹೂಡಿದಂತೆ ತೋರುತ್ತದೆ. ತೇಜಸ್ವಿ ನಿಲುವನ್ನು ದೇವನೂರ ಮಹಾದೇವರ ‘…ರೈತಸಂಘವು ಅಸ್ಪೃಶ್ಯ ಕೂಲಿ ನಾಯಕತ್ವ ಪಡೆಯದೆ, ಹಾಗೇ ದಲಿತ ಸಂಘವು ಜಲಗಾರ ನಾಯಕತ್ವ ಪಡೆಯದೆ, ಅವು ಎಷ್ಟೇ ಬೊಬ್ಬೆ ಹಾಕಿದರೂ ಅಷ್ಟೊ ಇಷ್ಟೊ ದಕ್ಕಿಸಿಕೊಳ್ಳಬಹುದೇ ಹೊರತು, ಅಂದರೆ ಅರೆ ಹೊಟ್ಟೆಯ ರೈತಸಂಘ ಮುಕ್ಕಾಲು ಹೊಟ್ಟೆ ತುಂಬಿಸಿಕೊಳ್ಳಬಹುದೇ ಹೊರತು, ಹಾಗೆ ಹೊಟ್ಟೆಗಿಲ್ಲದ ದಲಿತಸಂಘ ಕಾಲು ಹೊಟ್ಟೆ ತುಂಬಿಸಿಕೊಳ್ಳಬಹುದೇ ಹೊರತು ಈ ನಾಡ ಕಟ್ಟುವ ಸಂಘಟನೆಗಳಾಗವು’ ಎಂಬ ಆಶಯದ ಜತೆ ಇಟ್ಟು ನೋಡಿದರೆ, ತೇಜಸ್ವಿ ವಾದದ ಸಮೀಪದೃಷ್ಟಿದೋಷ ಮನವರಿಕೆಯಾಗುತ್ತದೆ…

ಬರೀ ಇಷ್ಟನ್ನೇ ಹೇಳಿದರೆ, ರೈತಚಳವಳಿಯ ‘ವಿರುದ್ಧ ದಡ’ದಲ್ಲಿ ನಿಂತು ಒಮ್ಮುಖ ವಾದ ಹೂಡಿದಂತಾಗಬಹುದು. ಬೇಡ, ಈ ಎರಡೂ ಸಂಘಟನೆಗಳ ಪ್ರಾಮಾಣಿಕ ಮನುಷ್ಯ ಪ್ರಯತ್ನಗಳನ್ನು ಪರಿಶೀಲಿಸೋಣ. ಯಾಕೆಂದರೆ ಆಗ ಏನು ಸಾಧ್ಯವಿತ್ತು, ಏನು ಸಾಧ್ಯವಾಯಿತು ಎಂಬುದನ್ನು ಗಮನಿಸಿ ಮಾತಾಡದಿದ್ದರೆ ಎಲ್ಲ ಆರಾಮಕುರ್ಚಿ  ಕಲಾಪವಾಗಬಹುದು.

ನಿದರ್ಶನವಾಗಿ ಇಲ್ಲಿ ಎರಡೂ ಸಂಘಟನೆಗಳ ನೈತಿಕ ಸ್ಥೈರ್ಯವನ್ನು ಒರೆಗೆ ಹಚ್ಚಿದ ಬಾಳ್ಳುಪೇಟೆ ಘಟನೆಯನ್ನು ನೋಡೋಣ. ರೈತಸಂಘದ ಮುಂದಾಳುಗಳಲ್ಲಿ ಒಬ್ಬರಾಗಿದ್ದು ನಂತರ ದಲಿತ ಸಂಘಟನೆ ಕಡೆ ವಾಲಿದ ಕಲಾವಿದ ಗೆಳೆಯ ಕೆ.ಟಿ. ಶಿವಪ್ರಸಾದ್ ಗೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯೇ ಕಾರ್ಯಕ್ಷೇತ್ರವಾಗಿತ್ತು. ಶಿವಪ್ರಸಾದ್ ಒಂದು ರೀತಿಯಲ್ಲಿ ಎರಡೂ ಸಂಘಟನೆಗಳ ಸಜೀವ ಕೊಂಡಿಯಾಗಿದ್ದವರು. ಮತ್ತು ಬಾಳ್ಳುಪೇಟೆ ರೈತ ದಲಿತರಿಬ್ಬರ ಒಗ್ಗಟ್ಟಿನ ಹೋರಾಟಕ್ಕೆ ಉತ್ತಮ ಮಾದರಿಯೂ ಆಗಿತ್ತು. ಅಲ್ಲಿಗೆ ಹತ್ತಿರದ ರಾಜೇಂದ್ರಪುರ ಎಂಬ- ಕೇವಲ ದಲಿತರೇ ಇದ್ದ- ಊರಿನಲ್ಲಿ ಪಕ್ಕದ ಎಸ್ಟೇಟ್ ಮಾಲೀಕನೊಬ್ಬ ಇಬ್ಬರು ಹರಿಜನರ ಮನೆಗಳೂ ಸೇರಿ ಜನ ತಿರುಗಾಡುವ ದಾರಿಯೆಲ್ಲ ಸೇರಿಸಿಕೊಂಡು ಬೇಲಿ ಹಾಕಿಬಿಟ್ಟ. ಪರಿಣಾಮ ಅಲ್ಲಿನ ದಲಿತರಿಗೆ ನಾಗರಿಕ ಸಂಪರ್ಕವೇ ತಪ್ಪಿ ಹೋಗುವಂತಾಯಿತು. ಆಗ ಇದರ ವಿರುದ್ಧ ಹೋರಾಡಿದ್ದು ರೈತಸಂಘ. ಹೋರಾಡಿದ್ದಷ್ಟೇ ಅಲ್ಲ, ಗೆದ್ದು ಪ್ಲಾಂಟರ್ಗಳಿಗೆ ದಂಡ ಹಾಕಿದ್ದೂ ಆಯಿತು. ಶಿವಪ್ರಸಾದ್ ಹೇಳುವಂತೆ- ಇದು ಪಾಳೇಗಾರರಿಗೊಂದು ‘ಥ್ರೆಟ್’ ಆಯಿತು. ಇದು ಹಾಗೂ ಇಂಥವೇ ಘಟನೆಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಕಾಯುತ್ತಿದ್ದ ಪ್ಲಾಂಟರ್ಗಳಿಗೆ ಬಾಳ್ಳುಪೇಟೆಯಲ್ಲಿ ಅವಕಾಶ ಸಿಕ್ಕಿಬಿಟ್ಟಿತು.ಮುಂದಿನದನ್ನು ಶಿವಪ್ರಸಾದ್ ಬಾಯಲ್ಲೇ ಕೇಳಬಹುದು (ಪಂಚಮ ವಿಶೇಷಾಂಕ):

…ಏಕೋ ರೈತಸಂಘ ನಮ್ಮ ವಿರುದ್ಧವಾಗಿ ತಲೆ ಎತ್ತುತ್ತಾ ಇದೆ, ಇದ್ನ ಮಟ್ಟ ಹಾಕ್ಬೇಕು ಅಂತ ಯೋಚ್ನೆ ಮಾಡ್ಕಂಡು ಪ್ಲಾಂಟರ್ಗಳು ಕಾಯ್ತಾ ಇದ್ರು. ಬಾಳ್ಳುಪೇಟೆ ಹರಿಜನರೆಲ್ಲ ರೈತಸಂಘದಲ್ಲೇ ಇದ್ರು. ಇದೇ ಸಮಯಕ್ಕೆ ರೋಟರಿ ಕ್ಲಬ್ ನವರು, ಅಂದ್ರೆ ಈ ಪ್ಲಾಂಟರ್ಗಳೇ, ಹರಿಜನೋದ್ಧಾರದ ಹೆಸರ್ನಲ್ಲಿ ಹರಿಜನರಿಗೆ ಬಟ್ಟೆ ಹಂಚಿದರು. (1983 ಮಾರ್ಚ್ 5). ಹಳೆ ಬಟ್ಟೆ ಹಂಚಿದರು ಅಂತ ಹರಿಜನರ ಕಡೆಯಿಂದ ಸ್ವಲ್ಪ ಗೊಂದಲ ಆಯ್ತು. ಇದೆಲ್ಲ ಹಾಸನದ ಜನತಾ ಮಾಧ್ಯಮ ಪತ್ರಿಕೇಲಿ ದೊಡ್ಡದಾಗಿ ಬಂತು. ವಾತಾವರಣ ಸ್ವಲ್ಪ ಬಿಸಿಯಾಯ್ತು. ಇದರಿಂದ ಪ್ಲಾಂಟರ್ಗಳೆಲ್ಲ ತಮ್ಮದೇ ಒಂದು ಕಮಿಟಿ ಮಾಡ್ಕಂಡು, 83 ಮಾರ್ಚ್ ನಲ್ಲಿ, ಸುಮಾರು ನೂರೈವತ್ತು ಜನ ಇದ್ರು ಅಂತ ಕಾಣುತ್ತೆ, ‘ಹೊಲೆಯರಿಗೆ ಧಿಕ್ಕಾರ’ ಅಂತ ಕೂಗ್ಕೊಂಡು ನಾಯಿ ಅಟ್ಟಿಸ್ಕಂಡು ಹೋದಂಗೆ ಬೀದಿ ಬೀದಿಲೆಲ್ಲ ಹರಿಜನರಿಗೆ ಹೊಡೆದರು. ಮಾರನೆ ದಿನ ಪೊಲೀಸಿನವರು ಬಂದು, ಹೊಡೆದವರ ಮೇಲೆ ಏನೂ ಕೇಸಾಕದೆ ಶಾಂತಿ ಸಭೆ ಕರೀಬೇಕು ಅಂದ್ರು. ಅಷ್ಟೊತ್ತಿಗೆ ದಲಿತ ಸಂಘರ್ಷ ಸಮಿತಿಯ (ಚಂದ್ರ ಪ್ರಸಾದ್) ತ್ಯಾಗಿಯೂ ಅಲ್ಲಿಗೆ ಬಂದರು. ನಾನು ಮತ್ತು ತ್ಯಾಗಿ ಹೊಡೆದವರ ಮೇಲೆ ಏನೂ ಕೇಸಾಕದೆ ಶಾಂತಿ ಸಭೆ ಕರೆಯೋದು ತಪ್ಪು ಅಂದ್ವಿ. ರೈತಸಂಘದ (ಮಂಜುನಾಥ) ದತ್ತ ಅಲ್ಲೇ ಒಂದು ಭಾಷಣ ಮಾಡಿ ಪ್ಲಾಂಟರುಗಳೆಲ್ಲ ನನ್ನ ಬೂಟಿಗೆ ಸಮಾನ ಅಂದ. ಇದರಿಂದ ಶಾಂತಿ ಸಮಿತಿಯೂ ಆಗಲಿಲ್ಲ. ರೈತಸಂಘದ ನಾಯಕರುಗಳೂ ಅವರವರ ಮನೆಗಳಿಗೆ ಹೊರಟೋದರು. ಆದರೆ ಅಲ್ಲಿದ್ದ ನಾವು ಪರಿಣಾಮ ಎದುರಿಸಬೇಕಾಯಿತು. ‘ದೊಂಬಿ ಕೇಸು’ ಅಂತ ಮಾಡಿ ಹೊಡಸ್ಕಂಡ ಹರಿಜನರನ್ನೆ ಅರೆಸ್ಟು ಮಾಡಿ ಮೈಸೂರು ಜೈಲಿಗೆ ಹಾಕಿದರು. ಈ ಬಗ್ಗೆ ರೈತಸಂಘ ಏನೇನೂ ಮಾಡ್ಲಿಲ್ಲ. ಅಂತೂ ದಲಿತ ಸಂಘರ್ಷ ಸಮಿತಿ ಜೊತೆ ಸೇರ್ಕಂಡು ನಾವೇ ಇದನ್ನೆಲ್ಲ ಎದುರಿಸಿದ್ವಿ. ಒಂದಿನ ನಮ್ಮ ಸಕಲೇಶಪುರ ತಾಲ್ಲೂಕು ರೈತಸಂಘದ ಅಧ್ಯಕ್ಷ ವಿಶ್ವನಾಥನ್ನ ಯಾಕೆ ಎಲ್ಲ ಗೊತ್ತಿದ್ದೂ ನೀವು ಈ ಮೇಲ್ಜಾತಿಯವರ ದಬ್ಬಾಳಿಕೇನ ವಿರೋಧಿಸ್ತಾ ಇಲ್ಲ? ಒಂದು ಪತ್ರಿಕೆ ಹೇಳಿಕೆನಾದ್ರೂ ಕೊಡಿ ಅಂತ ಕೇಳಿದೆ. ಅದಕ್ಕೆ ವಿಶ್ವನಾಥ- ಇಲ್ಲಿ ಲಿಂಗಾಯಿತ್ರು ದೌರ್ಜನ್ಯ ಮಾಡಿರೋದ್ರಿಂದ ಇವರ ವಿರುದ್ಧ ಪೇಪರ್ ಸ್ಟೇಟ್ಮೆಂಟ್ ಕೊಟ್ರೆ ಲಿಂಗಾಯಿತ್ರೆಲ್ಲ ರೈತಸಂಘ ಬಿಟ್ಟುಹೋಗ್ತಾರೆ ಎಂದು ಹೇಳಿ ನನ್ನನ್ನು ದಂಗುಬಡಿಸಿದ…

ಇದು ಇಲ್ಲಿಗೆ ನಿಲ್ಲಲಿಲ್ಲ. ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಅಂತಿಮವಾಗಿ ಶಿವಪ್ರಸಾದ್ರ ‘ಕಥೆಯನ್ನೇ ಮುಗಿಸುವ’ ಸಂಚು ರೂಪುಗೊಂಡು ಅವರು ಬಾಳ್ಳುಪೇಟೆಯನ್ನೇ ಬಿಡಬೇಕಾಯಿತು. ಶಾಂತಿಸಭೆ ಮುರಿದು ಬಿದ್ದ ಮೇಲೆ ಆ ಊರಿನಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಾಯಿತು. ಮುಂದೆ:

…ಎರಡು ಪೊಲೀಸ್ ಜೀಪುಗಳು ಬಾಳ್ಳುಪೇಟೆಯಲ್ಲಿ ಮೊಕ್ಕಾಂ ಹೂಡಿದವು. ರಾತ್ರಿ ವೇಳೆ ದಲಿತರು ಹೊರಬರಲು ಹೆದರುತ್ತಿದ್ದರು. ಶ್ರೀಮಂತ ಪ್ಲಾಂಟರ್ಗಳು ಮತ್ತೆ ಹಲ್ಲೆಗೆ ಪ್ರಚೋದನೆ ನೀಡಬಹುದೆಂಬ ಸಂದೇಹವನ್ನು ಶಿವಪ್ರಸಾದ್ ವ್ಯಕ್ತಪಡಿಸಿದರು. ಇದನ್ನು ಹೇಗಾದರೂ ಮಾಡಿ ಸರಿಪಡಿಸಬೇಕೆಂದು ಹೆಣಗಿದರು. ದಲಿತ ಯುವಕರಿಗೆ ಸಂಯಮ ಬೋಧಿಸಿದರು. ಶಾಂತಿಯುತ ಹೋರಾಟದ ಮೂಲಕ ಘಟನೆಯ ಮುಖ್ಯ ಸೂತ್ರಧಾರಿಗಳನ್ನು ಬಂಧಿಸಲು ಒತ್ತಡ ಹೇರಲು ಹವಣಿಸಿದರು. ರಾಜ್ಯ ಡಿ.ಎಸ್.ಎಸ್. ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೆ ದೇವಯ್ಯ ಹರವೆ ಬಂದು ಇದಕ್ಕೊಂದು ಪರಿಹಾರ ಕಂಡು ಹಿಡಿಯಲು ರೈತನಾಯಕರನ್ನು ಕೋರಿದರು. ಶಿವಪ್ರಸಾದ್ ರೈತಸಂಘ ತೊರೆದಿದ್ದರಿಂದ ಹಾಗೂ ಅವರು ಘಟನೆಯ ಸ್ಥಳದಲ್ಲೇ ಇರುವುದರಿಂದ ರೈತಸಂಘದವರೂ ಹೆಚ್ಚಿನ ಆಸಕ್ತಿಯನ್ನು ತೋರಲಿಲ್ಲ. ಹಾಸನದಿಂದ ಮೈಸೂರಿಗೆ ಹೋದ ದೇವಯ್ಯ ಹರವೆ ಅಕಾಲ ಮರಣಕ್ಕೀಡಾದರು… ಈ ನಡುವೆ ದಲಿತರಿಗೆ ನೆರವು ನೀಡುತ್ತಿರುವ ಶಿವಪ್ರಸಾದ್ ಮೇಲೆ ಹಲ್ಲೆಯಾಗುವ ಸೂಚನೆಗಳು ಕಾಣತೊಡಗಿದವು. ಒಮ್ಮೆ ಗೆಳೆಯ ಮರ್ಕಲಿ ಶಿವಕುಮಾರ್ ಮತ್ತು ನಾನು ಹಾಸನದಿಂದ ಕಾರು ಮಾಡಿಕೊಂಡು ಹೋಗಿ ಅವರನ್ನು ರಹಸ್ಯವಾಗಿ ಹಾಸನಕ್ಕೆ ಕರೆ ತಂದೆವು… ಬಾಳ್ಳುಪೇಟೆಯಲ್ಲಿ ದಾಖಲೆ ಅರು ತಿಂಗಳು ನಿಷೇಧಾಜ್ಞೆ ಜಾರಿಯಲ್ಲಿತ್ತು. ಕಡೆಗೆ ಯಾವ ನಿರ್ದಿಷ್ಟ ಪರಿಹಾರವೂ ಇಲ್ಲದೆ, ಸಮಸ್ಯೆ ತಂತಾನೇ ಅಂತ್ಯವಾಯಿತು. (ಕೆ.ಟಿ. ಶಿವಪ್ರಸಾದ್ ಕುರಿತ ಸಂಚಿಕೆ ಕಲ್ಲರಳಿ ಹೂವ್ವಂತೆಯಲ್ಲಿ ಕೆ. ಪುಟ್ಟಸ್ವಾಮಿ)

ಇದು ನಮ್ಮ ಸಂಘಟನೆಗಳ ಒಟ್ಟು ಪ್ರಯಾಸಗಳನ್ನು (-ದಣಿವು ಎಂಬ ಅರ್ಥದಲ್ಲೂ ಪ್ರಯಾಸ) ಹಲವು ಬಣ್ಣಗಳಲ್ಲಿ ತೋರಿದ ಘಟನೆ. ಅಲ್ಲಿ ಏನೆಲ್ಲ ಇತ್ತು!

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1

-ಎನ್.ಎಸ್. ಶಂಕರ್

1982ರ ಮಾತು. ತಿಂಗಳು ಮರೆತಿದ್ದೇನೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ರೈತ ಚಳವಳಿ ಕುರಿತು ರಾಜ್ಯ ರೈತಸಂಘ ವಿಚಾರ ಸಂಕಿರಣ ಏರ್ಪಡಿಸಿತ್ತು. ಶಿವಮೊಗ್ಗ, ಹಾಸನ ಮತ್ತಿತರ ಕಡೆಗಳಿಂದ ಸಾಕಷ್ಟು ಮಂದಿ ರೈತಮಿತ್ರರು ಬಂದಿದ್ದರು. ಸಭೆಯಲ್ಲಿ ಮಾತಾಡಲು ಗೆಳೆಯರಾದ ಇಂದೂಧರ ಹೊನ್ನಾಪುರ ಹಾಗೂ ಕೋಟಿಗಾನಹಳ್ಳಿ ರಾಮಯ್ಯನವರನ್ನೂ ಕರೆದಿದ್ದರು.

ಪ್ರೊ. ಎಂ.ಡಿ. ನಂಜುಂಡಸ್ವಾಮಿ ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂಬ ಪೀಠಿಕೆಯ ಮೂಲಕ ಸಭೆಗೆ ಚಾಲನೆ ಕೊಟ್ಟರು. ಅಂದು ಸುಮಾರು ಜನ ಭಾಷಣಕಾರರಿದ್ದರೂ, ಈ ತಾತ್ವಿಕ ವಿವರಣೆಯನ್ನು, ಮೂರ್ತವಾದ ಸಂಶಯಗಳ ಮೂಲಕ ಎದುರಿಸಿ, ಕೆಲವು ಸ್ಪಷ್ಟನೆ ಪಡೆಯಲು ಮತ್ತು ನೀಡಲು ಯತ್ನಿಸಿದವರು ರಾಮಯ್ಯ ಮತ್ತು ಇಂದೂಧರ ಇಬ್ಬರೇ. ವೇದಿಕೆ ಮೇಲೆ ರಾಮಯ್ಯ ತುಸು ಅಳುಕಿನಿಂದ ಮತ್ತು ಇಂದೂಧರ ಇನ್ನಷ್ಟು ಗಟ್ಟಿ ದನಿಯಲ್ಲಿ ಹೇಳಿದ್ದಿಷ್ಟೇ:

“ರೈತ ಚಳವಳಿ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾದ ಟ್ರೇಡ್ ಯೂನಿಯನ್ ಹೋರಾಟಗಳ ಥರ ಆಗಬಾರದು. ತನ್ನ ಸದಸ್ಯರ ಆಂತರಿಕ ಶಿಸ್ತು ಮತ್ತು ಮನುಷ್ಯತ್ವದ ಬೆಳವಣಿಗೆಗೂ ಮಹತ್ವ ಕೊಡಬೇಕು. ಹಾಗಾಗದಿದ್ದರೆ, ಈಗಿನ ಸ್ಥಿತಿಯಲ್ಲೇ ಹಳ್ಳಿಗಳಿಗೆ ಹೆಚ್ಚಿನ ಅಧಿಕಾರ ಕೊಡುವುದೆಂದರೆ (ರೈತಸಂಘದ ಬೇಡಿಕೆಗಳಲ್ಲಿ ಇದೂ ಒಂದು) ಅದು ಮೇಲ್ವರ್ಗದ ಪಾಲಾಗಿ, ದಲಿತರು ಇನ್ನಷ್ಟು ತುಳಿತಕ್ಕೆ ಒಳಗಾಗುತ್ತಾರೆ…”- ಇದು ಅವರಿಬ್ಬರ ವಾದದ ಸಾರ.

ನಿಜಕ್ಕೂ ಸಭೆಯ ನಡಾವಳಿ ಕೌತುಕಮಯವಾದದ್ದು- ಈ ಮಾತುಗಳು ಹೊರಬಿದ್ದ ಮೇಲೆ. ಒಮ್ಮೆಲೇ ಹೆಚ್ಚೂಕಮ್ಮಿ ಇಡೀ ಸಭೆ ಎದ್ದು ನಿಂತು ‘ರೈತಚಳವಳಿಗೂ, ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರತಿಭಟಿಸತೊಡಗಿತು. ಅದೂ ವ್ಯವಸ್ಥಿತವಾದ, ತಾಳ್ಮೆ, ಸೌಜನ್ಯಗಳ ಗಡಿ ದಾಟದ ಸಹೃದಯ ಭಿನ್ನಾಭಿಪ್ರಾಯವೂ ಅಲ್ಲ. ಹೋ ಎಂಬ ಅರಚಾಟ; ಒಬ್ಬರ ಮಾತುಗಳು ಇನ್ನೊಬ್ಬರ ಕೂಗಿನೊಡನೆ ಕಲಸಿ ಬಿದ್ದಾಡುವ ಮಹಾ ಗೊಂದಲದ ಗದ್ದಲ. ಆ ಗದ್ದಲದಲ್ಲೇ ಸಭೆಯಿಂದ ಕೇಳಿ ಬಂದ ಮಾತು: ‘ಎರಡು ಕರಿಮೀನು ಬಂದವೆ. ಎಳಕಳ್ರೋ, ಹುರ್ಕೊಂಡು ತಿಂದುಬಿಡಣ…’! ಸ್ವಲ್ಪ ಹೊತ್ತಾದ ಮೇಲೆ ಇದೇ ಗಲಾಟೆಯ ಹಿನ್ನೆಲೆಯಲ್ಲಿ ಸಭಿಕರ “ಸಂದೇಹಗಳಿಗೆ” ಉತ್ತರ ಕೊಡಲು ಮತ್ತೆ ಕರೆದಾಗ ಆ ‘ಕರಿಮೀನು’ಗಳಲ್ಲೊಂದಾದ ಇಂದೂಧರ ಇಡೀ ದೃಶ್ಯವನ್ನು ವರ್ಣಿಸಿದ್ದು ಹೀಗೆ: “ನಮ್ಮೂರಲ್ಲಿ ನಮ್ಮಕ್ಕ ತಂಗಿಯರನ್ನು ಯಾರಾದರೂ `ದೊಡ್ಡವರು’ ಕೆಡಿಸಿದಾಗ ನಾವು ಪ್ರತಿಭಟನೆ ತೋರಿದರೆ, ನಮ್ಮ ಧ್ವನಿಯನ್ನು ಮುಚ್ಚಿಹಾಕಲು ಏಳುವ ಗದ್ದಲದ ಹಾಗಿದೆ ನಿಮ್ಮ ಕೂಗು. ಇದು ನಿಮ್ಮ ಶತಮಾನಗಳ ಕೊಬ್ಬು ಮತ್ತು ಅಹಂಕಾರದ ಫಲ…” ಆ ಮಾತಿನಲ್ಲಿ, ಬೇಕೆಂದೇ ಕೆಣಕುವ ಸವಾಲಿನ ದನಿ ಇದ್ದುದು ನಿಜ. ಆದರೆ ನೇರ ಮರ್ಮಕ್ಕೆ ನಾಟುವ ಇಂಥ ಮಾತು ಕೂಡ ಸಭೆಯನ್ನು ಇನ್ನಷ್ಟು ರೊಚ್ಚಿಗೆಬ್ಬಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ನಂಜುಂಡಸ್ವಾಮಿಯವರ ಕೆಲವು ಸಹಾನುಭೂತಿಯ ಹೇಳಿಕೆಗಳ ಹೊರತಾಗಿ ಇನ್ನಾರೂ ಇಂದೂಧರ, ರಾಮಯ್ಯನ ನಿಲುವು ಒಪ್ಪುವುದಿರಲಿ, ಅವರನ್ನು ಅರ್ಥ ಮಾಡಿಕೊಳ್ಳಲೂ ತಯಾರಿರಲಿಲ್ಲ.

ಸಭಾಂಗಣದಲ್ಲಿ ರಾಮಯ್ಯ, ಇಂದೂಧರನ ಮೇಲೆ ಹರಿಹಾಯ್ದವರು ಅವರಿಬ್ಬರನ್ನೂ ಚೆನ್ನಾಗಿ ಬಲ್ಲ ಗೆಳೆಯರೇ ಎಂಬುದೇನೂ ಅನಿರೀಕ್ಷಿತವಲ್ಲ. ಆ ಗೆಳೆಯರು ಸಭಿಕರಾಗಿದ್ದಾಗ- ಮಬ್ಬಾದ ಒಂದು ನಿರಾಕಾರ ಮಂದೆಯಾಗಿದ್ದಾಗ ಪ್ರತಿನಿಧಿಸುತ್ತಿದ್ದುದು ಗುಂಪಿನ ಸ್ವಭಾವವನ್ನು; ಅಂದರೆ ಜಾತಿ- ಒಂದು ಸಮೂಹದ ಮನೋಧರ್ಮವಾಗಿ ತಳೆಯುವ- ‘ನಿತ್ಯಸಹಜ’ ಎನ್ನಬಹುದಾದ- ನಿಷ್ಕರುಣೆಯನ್ನು. ಸಭೆ ಮುಗಿಯಿತು. ಎಲ್ಲ ಆಚೆ ಬಂದರು. ಸೆನೆಟ್ ಹಾಲ್ ಹೊರಗಿನ ಮಬ್ಬುಗತ್ತಲಲ್ಲಿ ಈ ಗೆಳೆಯರೇ ಇಂದೂಧರನ ಜೊತೆ ಮತ್ತೆ ವಾದ ಮುಂದುವರೆಸುವಾಗ ಅವರ ನೋಟ ಬದಲಾಗದಿದ್ದರೂ, ಧಾಟಿ ಬದಲಾಗಿತ್ತು! ಒಳಗೆ ಏರುದನಿಯಲ್ಲಿ ದಬಾಯಿಸುವ ಗತ್ತಿನಲ್ಲಿದ್ದವರೇ ಇಲ್ಲಿ ನಯವಾಗಿ ಒಪ್ಪಿಸುವ ಧಾಟಿಗಿಳಿದಿದ್ದರು! ಅಂದರೆ ಮಂದೆಯ ಮನೋವೃತ್ತಿ ಕರಗಿ ಅವರ ವ್ಯಕ್ತಿಗತ ಔದಾರ್ಯ ಮರುಕಳಿಸಿತ್ತು…

ಇದೊಂದು ಕ್ಷುಲ್ಲಕ ಪ್ರಕರಣವೆಂದು ನಾನು ಬಲ್ಲೆ. ರೈತ, ದಲಿತ ಚಳವಳಿಗಳನ್ನು ಕುರಿತು ಪಂಚಮ 1983ರಲ್ಲಿ ಹೊರತಂದ ವಿಶೇಷಾಂಕದಲ್ಲಿ ಇದೇ ಘಟನೆಯನ್ನು ಉಲ್ಲೇಖಿಸಿ ನಾನು ಆಗ ಟಿಪ್ಪಣಿಯೊಂದನ್ನು ಬರೆಯದೇ ಹೋಗಿದ್ದಿದ್ದರೆ ಪ್ರಾಯಶಃ ಈಗ ನನಗೂ ಮರೆತುಹೋಗಿರುತ್ತಿತ್ತು! ಆದರೆ ಇಷ್ಟು ವರ್ಷಗಳ ನಂತರ, ಇದೀಗ ಚಳವಳಿಗಳನ್ನು ಒಟ್ಟಾರೆಯಾಗಿ ವಿವೇಚಿಸಲು ಯತ್ನಿಸುವಾಗ ಈ ಜುಜುಬಿ ಪ್ರಸಂಗವೇ ಹಲವು ಇಂಗಿತಗಳನ್ನು ಧ್ವನಿಸಬಲ್ಲ ಘಟನೆಯಂತೆ ಕಾಣುತ್ತಿದೆ. ಯಾಕೆಂದರೆ ರೈತಸಂಘಟನೆ, ಆಗ ಸ್ವತಃ ಸಮಾನತೆಗಾಗಿ, ಅನ್ಯಾಯದ ವಿರುದ್ಧ ಹೊಡೆದಾಡುತ್ತಿದ್ದರೂ ಹಳ್ಳಿಗಾಡಿನ ಚೌಕಟ್ಟಿನಲ್ಲಿ ಯಜಮಾನ ಸಮೂಹವನ್ನು ಪ್ರತಿನಿಧಿಸುತ್ತಿತ್ತು. ಹಾಗಾಗಿ ರೈತಸಂಘಟನೆಯ ಆಂತರ್ಯದಲ್ಲೇ ಒಂದು ವಿರೋಧಾಭಾಸವಿತ್ತು. ಮಧ್ಯಮಜಾತಿಗಳ ರೈತಸಮೂಹ ಹಳ್ಳಿಯಲ್ಲಿ ದಲಿತನನ್ನು ತುಳಿಯುತ್ತ, ಪಟ್ಟಣಕ್ಕೆ ಬಂದಾಗ ಸಮಾನ ವೇದಿಕೆಗಾಗಿ ಕೈ ಚಾಚುತ್ತಿತ್ತು! ಮತ್ತು ಎಂದೂ ಈ ದ್ವಂದ್ವದಿಂದ ಮುಕ್ತಿ ಸಿಗಲೇ ಇಲ್ಲವಾದ್ದರಿಂದ ರೈತಸಂಘ ಉದ್ದಕ್ಕೂ, ದಲಿತ ಸಂಘಟನೆಯಿಂದ ಆತ್ಮಸಾಕ್ಷಿ ಕೆಣಕುವ, ಮುಜುಗರದ ಪ್ರಶ್ನೆಗಳನ್ನು ಎದುರಿಸುತ್ತಲೇ ಹೋಗಬೇಕಾಯಿತು.

ಅದೇ ಪಂಚಮ ವಿಶೇಷಾಂಕದಲ್ಲಿ ಪ್ರೊ. ನಂಜುಂಡಸ್ವಾಮಿಯವರನ್ನು ದೇವನೂರ ಮಹಾದೇವ ಕೇಳಿದರು:

ರೈತಸಂಘದಲ್ಲಿ ಲಿಂಗಾಯಿತ ಒಕ್ಕಲಿಗ ಜನತೆಯೇ ಹೆಚ್ಚಾಗಿದ್ದು ಈ ರೈತ ಜನಸ್ತೋಮವು ಅಸ್ಪೃಶ್ಯ ಜನಾಂಗವನ್ನು ಅವಮಾನಿಸುತ್ತ, ವಂಚಿಸುತ್ತ, ತುಳಿಯುತ್ತ, ಕೊಲ್ಲುತ್ತ ಬರುತ್ತಿರುವ ಜಟಿಲ ಪರಿಸ್ಥಿತಿಯನ್ನು ಮಾನವೀಯಗೊಳಿಸುವ ಕಡೆ ತಮ್ಮ ಚಿಂತನೆ, ಕಾರ್ಯಕ್ರಮಗಳೇನು?

 ಪ್ರೊ. ನಂಜುಂಡಸ್ವಾಮಿ: ನಮ್ಮ ಹಳ್ಳಿಯ ಆಸ್ತಿ ಸಂಬಂಧವನ್ನು ಬದಲಾವಣೆ ಮಾಡುವುದೇ ನಿಮ್ಮ ಮೇಲಿನ ಪ್ರಶ್ನೆಗೆ ಉತ್ತರ. ಸಾಮಾಜಿಕ ಅಸಮಾನತೆ ನಿವಾರಣೆಗೆ ಶೋಷಕ- ಶೋಷಿತ ಇಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ…

ಅಂದರೆ ಇಂಥ ಮುಜುಗರದ ಪ್ರಶ್ನೆಗೆ, ಪ್ರೊಫೆಸರ್ ತಕ್ಷಣಕ್ಕೇನು ಮಾಡಬಹುದು, ತಲೆ ಕೆಡಿಸಿಕೊಳ್ಳಲೇ ಇಲ್ಲ; ಬದಲಿಗೆ ಅಷ್ಟೇನೂ ವಾಸ್ತವಿಕವಲ್ಲದ ಉನ್ನತ ಆದರ್ಶದ ಉತ್ತರ ನೀಡಿ ನುಣುಚಿಕೊಂಡಂತಿಲ್ಲವೇ?! ಇದಷ್ಟೇ ಅಲ್ಲ, ಇಡೀ ಸಂದರ್ಶನವೇ ಆ ಧಾಟಿಯಲ್ಲಿದೆ! ಮಹಾದೇವ ಎತ್ತಿದ ಜಾತಿ ವೈಷಮ್ಯದ ಎಲ್ಲ ಪ್ರಶ್ನೆಗಳಿಗೂ ಪ್ರೊಫೆಸರ್ ತಾವು ಪಡೆದ ಸಮಾಜವಾದಿ ತರಬೇತಿಯ ‘ಕಲಿತ’ ಉತ್ತರಗಳ ಮೂಲಕವೇ ಸಂಭಾಳಿಸುವಂತೆ ಕಾಣುತ್ತಾರೆಯೇ ಹೊರತು, ಹಳ್ಳಿಗಾಡಿನ ಮೂಲ ಮಾರ್ಪಾಡುಗಳ ಬಗ್ಗೆ ಗಂಭೀರವಾಗಿ ಧ್ಯಾನಿಸಿ, ಪರದಾಡಿದವರಂತಲ್ಲ.

ಪ್ರಶ್ನೋತ್ತರದ ಇನ್ನೂ ಕೆಲವು ತುಣುಕುಗಳು:

…ದಲಿತನೇನಾದರೂ ಧ್ವನಿ ಎತ್ತರಿಸಿದರೆ ರೈತಸಂಘ ಬಯಸುವ ‘ಹಳ್ಳಿಯೇ ಒಂದು ಘಟಕ’ ನಡೆಯುವುದಿಲ್ಲವಲ್ಲ?

ನಿಜ, ದಲಿತ ಸಮಾನತೆಗೆ ನಿಂತಾಗ ಅಲ್ಲಿ ಸಾಮರಸ್ಯ ಹೋಗಿಬಿಡ್ತದೆ….

ಹಾಗಾದರೆ ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿ ಆಚರಣೆಗೆ ತರುವ ತಾಕತ್ತು ರೈತಸಂಘಕ್ಕೆ ಇದೆಯೇ?

ಸಾವಿರಾರು ವರ್ಷದ ಜಡ್ಡನ್ನು ಒಂದೆರಡು ದಿನದಲ್ಲಿ ನಾಶ ಮಾಡುವ ಆಶಾವಾದವನ್ನೂ ನಾನು ಇಟ್ಟುಕೊಂಡಿಲ್ಲ. ಮೊದಲು ನಾನು ಉದಾಹರಣೆ ಆಗುವ ಮೂಲಕ…

ನೀವು ಬ್ಯಾಡ್ರಪ್ಪ. ಒಂದ್ಸಲ ಉಂಡಾದ ಮೇಲೆ ಸಾಕು. ನಾವು ಎಲ್ಲಿಂದ ತಂದಿಕ್ಕುವ? ನಾನು ಕೇಳ್ತಾ ಇರೋದು ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಆಚರಣೆಗೆ ಹೊರಟರೆ ರೈತಸಂಘಕ್ಕೆ ನುಂಗಲಾರದ ತುತ್ತಾಗುವುದಿಲ್ಲವೇ? ರೈತಸಂಘವೇ ಇಲ್ಲದಂತೂ ಆಗಬಹುದಲ್ಲವೇ?

ಆ ಮಟ್ಟಕ್ಕೆ ರೈತಸಂಘ ಹೋಗಿಲ್ಲ. ಇದು ನುಂಗಲಾರದ ತುತ್ತಾದರೂ ಮಾಡಲೇಬೇಕು. ಭಯಪಡಬೇಕಾಗಿಲ್ಲ…

ಕೆಲವು ಕಡೆ ರೈತಸಂಘದವರೇ ಅಸ್ಪೃಶ್ಯರಿಗೆ ಬಹಿಷ್ಕಾರ ಹಾಕಿರುವುದಾಗಿ ಸುದ್ದಿ ಇದೆಯಲ್ಲ?

ಎಲ್ಲಿ? ವಿವರ ಕೊಡಿ. We are not allowing such things to happen. We will expel that village from ರೈತಸಂಘ. ಗೊತ್ತೇನು?…

ಅದೇ ಪ್ರೊಫೆಸರ್ ಶೈಲಿ! ನಾವೆಲ್ಲ ಮೆಚ್ಚಿದ ಶೈಲಿ…

ವಾಸ್ತವವೆಂದರೆ, ಈ ಜಾತಿ ಸಂಬಂಧಗಳ ಕಗ್ಗಂಟನ್ನು ರೈತಸಂಘಟನೆ ಎಂದೂ ಕ್ರಿಯಾಶೀಲವಾಗಿ ಎದುರುಗೊಳ್ಳಲೇ ಇಲ್ಲ. ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂದು ನಂಜುಂಡಸ್ವಾಮಿಯವರು ಘೋಷಿಸಿದರೂ, ಅದು ಕೇವಲ ಮಾತಿನ ಶೈಲಿಯಾಯಿತೇ ಹೊರತು ರೈತಸಂಘದ ಕಾರ್ಯಕ್ರಮವಲ್ಲ. ಚಳವಳಿಯ ಉಚ್ಛ್ರಾಯ ಸ್ಥಿತಿಯಲ್ಲಿ ಸಂಘಟನೆ ಆಶ್ರಯದಲ್ಲಿ ಅನೇಕ ಅಂತರ್ಜಾತಿ ಮದುವೆಗಳು ನಡೆದಿದ್ದು ಹೌದು. ಅವನ್ನೇ ರೈತಸಂಘದ ಜಾತಿವಿನಾಶ ಕಾರ್ಯಕ್ರಮವಾಗಿ ಕಾಣುವವರೂ ಇದ್ದಾರೆ. ಆದರೆ ಒಂದು ಕಡೆ ಇದು, ರೈತ- ದಲಿತ ಚಳವಳಿಗಳೆರಡೂ ಪರಸ್ಪರ ಸೆಣೆಸುತ್ತ, ಬೆನ್ನುಜ್ಜಿಕೊಳ್ಳುತ್ತ, ಕೆರೆಯುತ್ತ ಒಂದರಿಂದೊಂದು ಕೊಟ್ಟು ಪಡೆದು ಮಾಡಿದ್ದರ ಪರಿಣಾಮವಾಗಿದ್ದಂತೆಯೇ ಮತ್ತೊಂದೆಡೆ ರೈತ ಮುಖಂಡರ ಸಮಾಜವಾದಿ ತಿಳುವಳಿಕೆಯೂ ಇದರ ಬೆನ್ನಿಗಿತ್ತು. ಆದರೆ ಅದರಾಚೆಗೆ ಜಾತಿ ತಾರತಮ್ಯದ ಪ್ರಶ್ನೆ ರೈತಸಂಘಟನೆಗೆ ಎಂದೂ ಜೀವನ್ಮರಣದ ಕಾಳಜಿ ಆಗಲೇ ಇಲ್ಲ. 1980ರಲ್ಲಿ ಲಂಕೇಶರು ರೈತಚಳವಳಿ ಬಗ್ಗೆ ಬರೆಯುವಾಗ ಚರ್ಚೆಗ ಎತ್ತಿಕೊಂಡ ಪ್ರಶ್ನೆಗಳಿಗೆ ಇದೇ ಹಿನ್ನೆಲೆಯಿತ್ತು.

(ಮುಂದುವರೆಯುವುದು)

ಜೀವನದಿಗಳ ಸಾವಿನ ಕಥನ – 19

ಡಾ. ಎನ್.ಜಗದೀಶ್ ಕೊಪ್ಪ 

ಜಗತ್ತಿನಾದ್ಯಂತ 1960 ರಲ್ಲಿ ಭಾರತವೆಂದರೆ, ಹಸಿದವರ, ಅನಕ್ಷರಸ್ತರ, ಸೂರಿಲ್ಲದವರ, ಹಾವಾಡಿಗರ, ಬಡವರ ದೇಶವೆಂದು ಪ್ರತಿಬಿಂಬಿಸಲಾಗುತಿತ್ತು. ಅಂದಿನ ದಿಗಳಲ್ಲಿ ಅಮೇರಿಕಾ ಭಾರತದ ಮಕ್ಕಳಿಗಾಗಿ ಕೇರ್ ಎಂಬ ಸಂಸ್ಥೆ ಅಡಿಯಲ್ಲಿ ಗೋಧಿ ಮತ್ತು ಹಾಲಿನ ಪುಡಿಯನ್ನು ಪೂರೈಕೆ ಮಾಡುತಿತ್ತು. ಇದನ್ನು ಶಾಲಾ ಮಕ್ಕಳಿಗೆ ಮಧ್ಯಾದ ಉಪಹಾರವಾಗಿ ಉಪ್ಪಿಟ್ಟು ಹಾಗು ಹಾಲನ್ನು ವಿತರಿಸಲಾಗುತಿತ್ತು. (1966 ರಿಂದ 1969 ರವರೆಗೆ 5, 6, ಮತ್ತು 7ನೇ ತರಗತಿಯಲ್ಲಿ ಓದುತಿದ್ದ ಈ ಲೇಖಕ ಕೂಡ ಇದರ ಫಲಾನುಭವಿಗಳಲ್ಲಿ ಒಬ್ಬ.)

ಆವತ್ತಿನ ಸಂಕಷ್ಟದ ದಿನಗಳಲ್ಲಿ ಭಾರತದ ಹಸಿದ ಹೊಟ್ಟೆಗಳ ಹಾಹಾಕಾರಕ್ಕೆ ಆಸರೆಯಾಗಿ ಬಂದದ್ದು ಹಸಿರು ಕ್ರಾಂತಿಯೋಜನೆ. ಅದೇ ತಾನೆ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದ ನೂತನ ಗೋಧಿ ತಳಿ ಮತ್ತು  ಪಿಲಿಪೈನ್ಸ್ ನಲ್ಲಿ ಬಿಡುಗಡೆಯಾಗಿದ್ದ ಅಧಿಕ ಇಳುವರಿ ಕೊಡುವ ಭತ್ತದ ತಳಿ ಭಾರತದ ಪಾಲಿಗೆ ಅಕ್ಷಯ ಪಾತ್ರೆಯಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು.

ಅಧಿಕ ಇಳುವರಿ ನೀಡುವ ಹೈಬ್ರಿಡ್ ತಳಿಗಳ ಅವಿಷ್ಕಾರ ರೈತರ ಬದುಕಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು ನಿಜ, ಆದರೆ ಈ ಉಲ್ಲಾಸ ಬಹಳ ದಿನ ಉಳಿಯಲಿಲ್ಲ. ಉತ್ತರಭಾರತದಲ್ಲಿ ನಿರ್ಮಾಣವಾದ ಬೃಹತ್ ಅಣೆಕಟ್ಟುಗಳ ಮೂಲಕ ಸಹಸ್ರಾರು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು. ಪಾಕಿಸ್ತಾನದಲ್ಲೂ ಕೂಡ ಇಂತಹದ್ದೇ ಕ್ರಾಂತಿ ಜರುಗಿತು. ಕಾಲುವೆ ಮುಖಾಂತರ ರೈತರ ಭೂಮಿಗೆ ಹರಿಸಿದ ನೀರು ಅವರ ಬದುಕಿನ ಅಧ್ಯಾಯವನ್ನು ಬದಲಿಸಿತು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ ಏಕೆಂದರೆ, ಹೈಬ್ರಿಡ್ ತಳಿಗಳು ಬೇಡುವ ಅಧಿಕ ಮಟ್ಟದ ನೀರು, ರಸಾಯನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ಇಳುವರಿ ಕುಂಠಿತಗೊಂಡಿತು. ಆಧುನಿಕ ತಳಿಗಳ ಬೇಸಾಯ ರೈತರನ್ನು ಬಸವಳಿಯುವಂತೆ ಮಾಡಿತು.

ಹೈಬ್ರಿಡ್ ತಳಿಗಳ ಬಗ್ಗೆ ನಮ್ಮ ತಕರಾರುಗಳು ಏನೇ ಇದ್ದರೂ ಕೂಡ ರೈತರು ಅವುಗಳನ್ನೇ ಆಶ್ರಯಿಸಿದ್ದಾರೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ನಾಟಿ ಬಿತ್ತನೆ ತಳಿಗಳು ಹೈಬ್ರಿಡ್ ತಳಿಗಳ ಸಂಕರದಿಂದಾಗಿ ನಾಶವಾಗತೊಡಗಿವೆ. ಪ್ರಾರಂಭದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 10 ಟನ್ ಭತ್ತದ ಇಳುವರಿ ನೀಡುತಿದ್ದ ಹೈಬ್ರಿಡ್ ಬೀಜಗಳಿಂದ ಈಗ ಏಷ್ಯಾ ಖಂಡದ ದೇಶಗಳಲ್ಲಿ ಕೇವಲ 2.6 ರಿಂದ 3.7 ಟನ್ ಇಳುವರಿ ಸಾಧ್ಯವಾಗಿದೆ. ಈ ಕುರಿತು ಸೃಷ್ಟೀಕರಣ ನೀಡಿರುವ ಪಿಲಿಪೈನ್ಸ್ ದೇಶದ ಮನಿಲಾದ ಭತ್ತದ ಸಂಶೋಧನಾ ಸಂಸ್ಥೆಯ ವಿಜ್ಙಾನಿಗಳು, ವರ್ಷವೊಂದಕ್ಕೆ ಒಂದು ಬೆಳೆ ತೆಗೆಯುತಿದ್ದ ಭೂಮಿಯಲ್ಲಿ ಎರಡು ಅಥವಾ ಮೂರು ಬೆಳೆ ತೆಗೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ನಾಶವಾಗತೊಡಗಿದ್ದು ಇಳುವರಿ ಕಡಿಮೆಯಾಗಿರುವುದಕ್ಕೆ ಕಾರಣ ಎಂದಿದ್ದಾರೆ. ಇಂತಹ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಹೇಗೆ ಸಾಮಾಜಿಕ ಪರಿಣಾಮಗಳನ್ನು ಬೀರಬಲ್ಲವು ಎಂಬುದಕ್ಕೆ ಸಣ್ಣ ಉದಾಹರಣೆ ಮಾತ್ರ.

ಆಧುನಿಕ ನೀರಾವರಿ ಪದ್ಧತಿಯಿಂದಾಗಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಸಂಭವಿಸಿದ್ದು  ಈ ಕುರಿತಂತೆ ಸಮಾಜಶಾಸ್ತ್ರಜ್ಙರು ಜಗತ್ತಿನಾದ್ಯಂತ ಅಧ್ಯಯನ ನಡೆಸುತಿದ್ದಾರೆ. ಈಗಾಗಲೆ ಕೆಲವು ಅಂಶಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಆಧುನಿಕ ನೀರಾವರಿ ಪದ್ಧತಿ ಬಳಕೆಗೆ ಬಂದ ನಂತರ ಕೃಷಿ ಕುರಿತಂತೆ ರೈತರಿಗೆ ಇದ್ದ ಅನೇಕ ಹಕ್ಕುಗಳು ಮತ್ತು ಚಿಂತನೆಗಳು ನಾಶವಾದವು. ಈ ಮೊದಲು ರೈತ ತನ್ನ ಭೂಮಿಯಲ್ಲಿ ಯಾವ ಬೆಳೆಯನ್ನು ಯಾವ ಕಾಲದಲ್ಲಿ ಬೆಳೆಯ ಬೇಕು ಎಂದು ನಿರ್ಧರಿಸುತಿದ್ದ. ಈಗ ಇವುಗಳನ್ನು ನೀರಾವರಿ ಇಲಾಖೆ ಇಲ್ಲವೆ ಸರಕಾರಗಳು ನಿರ್ಧರಿಸುತ್ತಿವೆ.

ನಮ್ಮ ಪ್ರಾಚೀನ ಭಾರತದ ದೇಶಿ ಕೃಷಿ ಪದ್ಧತಿಯ ನೀರಾವರಿ ಚಟುವತಿಕೆಗಳನ್ನು ಆಯಾ ರೈತ ಸಮುದಾಯ ನಿರ್ಧರಿಸುತಿತ್ತು. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ  ನೀರು ಹಂಚಿಕೆ ಕುರಿತು ಇದ್ದ ಪದ್ಧತಿಯನ್ನು ಕಂಡು ಬ್ರಿಟೀಷರು ಬೆರಗಾಗಿದ್ದರು. ಆಯಾ ಕೆರೆಗಳಿಂದ ಹಿಡಿದು ಕಾಲುವೆಗಳ ದುರಸ್ತಿ, ನಿರ್ವಹಣೆ ಎಲ್ಲವನ್ನು ರೈತರೇ ನಿರ್ವಹಿಸುತಿದ್ದರು. ಇದು ಚೋಳರ, ಪಾಂಡ್ಯರ ಆಡಳಿತ ಕಾಲದಿಂದಲೂ ನಡೆದುಬಂದ ಪದ್ಧತಿಯಾಗಿತ್ತು. ಇಂತಹದೆ ಪದ್ಧತಿ ಏಷ್ಯಾದ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಇಂಡೊನೇಷಿಯಾದ ಬಾಲಿ ದ್ವೀಪದ ರೈತರು ಸುಬಕ್ ಎಂಬ ವ್ಯವಸ್ಥೆಯ ಹೆಸರಿನಡಿ ಭತ್ತದ ಬೆಳೆಗೆ ನೀರನ್ನು ಹಂಚಿಕೊಳ್ಳುವ ಪದ್ಧತಿಯನ್ನು ನಾವು ಇಂದಿಗೂ ಕಾಣಬಹುದು.

ಜಲಾಶಯದ ನೆಪದಲ್ಲಿ ಆಧುನಿಕ ನೀರಾವರಿ ಯೋಜನೆಗಳು ಜಾರಿಗೆ ಬಂದ ನಂತರ ರೈತರ ಹಕ್ಕುಗಳು ಮತ್ತು ಪರಿಸರಕ್ಕೆ ಪೂರಕವಾಗಿದ್ದ ದೇಶಿ ತಂತ್ರಜ್ಞಾನಗಳು ಮರೆಯಾಗಿ ರೈತರೆಲ್ಲರೂ ಸರಕಾರಗಳ ಗುಲಾಮರಂತೆ ಬದುಕಬೇಕಾಗಿದೆ. ಇದಕ್ಕೆ ಸೂಡಾನ್ ದೇಶದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸೂಡಾನ್ ನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೊಳ, ಗೆಣಸು, ಅನೇಕ ಬಗೆಯ ಕಿರುಧಾನ್ಯಗಳನ್ನು ಬೆಳೆಯುತಿದ್ದ ರೈತರನ್ನು, ಅಲ್ಲಿ ಹೊಸದಾಗಿ ಜಾರಿಗೆ ಬಂದ ಹಾಲ್ಪ ಎಂಬ ಸರಕಾರದ ನೀತಿಯಿಂದಾಗಿ ರೈತರು ಬಲವಂತವಾಗಿ ಹತ್ತಿ ಬೆಳೆಯುವಂತಾಯಿತು. ತುಟ್ಟಿಯಾದ ಬಿತ್ತನೆ ಬೀಜದ ಬೆಲೆ, ಗೊಬ್ಬರ, ಕೀಟನಾಶಕ ಇವುಗಳಿಂದ ತತ್ತರಿಸಿ ಹೋದ ರೈತರು ಲಾಭ ಕಾಣದೆ ಕಂಗಾಲಾದರು. ಇಂತಹದ್ದೇ ಸ್ಥಿತಿ ಅಂದಿನ ಸೋವಿಯತ್ ಒಕ್ಕೂಟದಲ್ಲೂ ಸಹ ಜಾರಿಯಲ್ಲಿತ್ತು. ಕಮ್ಯೂನಿಷ್ಟ್ ಸರಕಾರದ ಈ ನಿರ್ಧಾರಗಳನ್ನು ಆಗ ಕಜಕಿಸ್ಥಾನದ ಇಬ್ಬರು ಪಕ್ಷದ ಪದಾಧಿಕಾರಿಗಳು ಬಲವಾಗಿ ಖಂಡಿಸಿ ಇದು ರೈತರ ಹಕ್ಕುಗಳನ್ನು ಧಮನ ಮಾಡುವ ಸರ್ವಾಧಿಕಾರದ ನೀತಿ ಎಂದು ಪ್ರತಿಭಟಿಸಿದ್ದರು.

ನೀರಾವರಿ ಯೋಜನೆಗಳಲ್ಲಿ ಸರಕಾರಗಳು ನೇರವಾಗಿ ಹಸ್ತಕ್ಷೇಪ ಮಾಡುವುದರಿಂದ ಹಲವಾರು ಬಾರಿ ಯೋಜನೆಗಳು ತಮ್ಮ ಮೂಲ ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿರುವುದುಂಟು. 1970 ರ ದಶಕದಲ್ಲಿ ಇರಾನಿನ ಅತ್ಯಂತ ಎತ್ತರದ ಅಣೆಕಟ್ಟು ಡೆಜ್ ಜಲಾಶಯದಿಂದ 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರಮಾನದಲ್ಲಿ ಸಣ್ಣ ಹಿಡುವಳಿದಾರರಿದ್ದರು. ಆದರೆ, ಆಗಿನ ದೊರೆಯಾಗಿದ್ದ ಷಾ ಇಡೀ ಯೋಜನೆಯ ರೂಪು ರೇಷೆಗಳನ್ನು ಬದಲಿಸಿ ಅಮೇರಿಕಾದ ಬಹುರಾಷ್ಟೀಯ ಕಂಪನಿಗಳ ಬೃಹತ್ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಿದರು. ಇದರ ಲಾಭ ಪಡೆದ ಕಂಪನಿಗಳೆಂದರೆ, ಶೆಲ್ , ಡೆಲ್ ಅಂಡ್ ಕೊ, ಮತ್ತು ಟ್ರಾನ್ಸ್‌ವರ್ಲ್ಡ್  ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಇತ್ಯಾದಿ ಕಂಪನಿಗಳು. ಇಂತಹದ್ದೇ ಕಥನಗಳು ಜಗತ್ತಿನ ಹಲವಾರು ದೇಶಗಳಲ್ಲಿ ಜರುಗಿವೆ.

ಇದು 70 ದಶಕದಲ್ಲಿ ಭಾರತದಲ್ಲಿ ನಡೆದ ಘಟನೆ. ರಾಜಸ್ಥಾನದಲ್ಲಿ ನಿರ್ಮಿಸಲಾದ ಇಂದಿರಾಗಾಂಧಿ ಬೃಹತ್ ನಾಲುವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ರೈತ ಕುಟಂಬಗಳೂ ಸೇರಿ ಹಲವಾರು ಭೂಹೀನ ರೈತರಿಗೆ ತಲಾ 2 ರಿಂದ 5 ಹೆಕ್ಟೇರ್ ಜಮೀನು ನೀಡಿ, ಅವರ ಭೂಮಿಗೆ ಉಚಿತವಾಗಿ ನೀರು, ಸಬ್ಸಿಡಿ ರೂಪದಲ್ಲಿ ಬೀಜ ಗೊಬ್ಬರ ಒದಗಿಸಲಾಗುವುದೆಂದು ಆಶ್ವಾಸನೆ ನೀಡಲಾಗಿತ್ತು. ಅದರಂತೆ ಈ ಪ್ರದೇಶಕ್ಕೆ ನೀರೂ ಹರಿಯಿತು. ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಭೂಮಿಯೆಲ್ಲಾ  ಪ್ರಭಾವಿ ರಾಜಕಾಣಿಗಳ, ಶ್ರೀಮಂತರ, ದಲ್ಲಾಳಿಗಳ ಪಾಲಾಗಿ ಅಲ್ಲಿನ ರೈತರು ತಮ್ಮದೇ ಭೂಮಿಯಲ್ಲಿ ಜೀತದಾಳುವಿನಂತೆ ದುಡಿಯುತಿದ್ದರು. 1989 ರಲ್ಲಿ ಸಮೀಕ್ಷೆ ನಡೆಸಿದಾಗ ಕೇವಲ ಶೇ.30 ರಷ್ಟು ರೈತರು ಮಾತ್ರ ಭೂಮಿ ಉಳಿಸಿಕೊಂಡಿದ್ದರು.

ಉತ್ತರ ಪ್ರದೇಶದ ಸದರ್ಲಾರ್ ಸಹಾಯಕ್ ಕಾಲುವೆಯ ಫಲಾನುಭವಿಗಳು ಕೂಡ ಅತಿ ದೊಡ್ಡ ಶ್ರೀಮಂತ ಜಮೀನಿದಾರರಾಗಿದ್ದಾರೆ. ಇವರೆಲ್ಲಾ ನೀರು ಉಪಯೋಗಿಸಿದ ನಂತರ ಉಳಿದ ನೀರನ್ನು ಕಾಲುವೆ ಕೊನೆ ಭಾಗದ ಸಣ್ಣ ಹಿಡುವಳಿದಾರರು ಬಳಸುವ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ.

ಕರ್ನಾಟಕದ ತುಂಗಭದ್ರಾ, ಕಾವೇರಿ, ತಮಿಳುನಾಡಿನ ಮೆಟ್ಟೂರು ಜಲಾಶಯಗಳ ಕೃಷಿ ಚಟುವಟಿಕೆ ಕುರಿತು ಅಧ್ಯಯನ ನಡೆಸಿರುವ ನ್ಯೂಯಾರ್ಕ್ ನಗರದ ಸಿರಾಕಸ್ ವಿ.ವಿ.ಯ ಪ್ರೀತಿ ರಾಮಚಂದ್ರನ್ ಎಂಬಾಕೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದ ಮಹಿಳೆ ಬೇಸಾಯದಿಂದ ವಿಮುಖವಾಗಿರುವುದನ್ನು ಗುರುತಿಸಿದ್ದಾರೆ.

ಅಮೇರಿಕಾದ ಬಹುತೇಕ ಕೃಷಿ ಚಟುವಟಿಕೆ ಬೃಹತ್ ಕಂಪನಿಗಳ ಇಲ್ಲವೆ ಶ್ರೀಮಂತರ ಪಾಲಾಗಿದೆ. ಅಲ್ಲಿನ ಫೆಡರಲ್ ಸರ್ಕಾರದ ನೀರಾವರಿ ಯೋಜನೆ ಕುರಿತಂತೆ ಮಸೂದೆಯನ್ನು ಜಾರಿಗೆ ತಂದಿತ್ತು. ಇದರ ಅನ್ವಯ 160 ಎಕರೆ ಮಿತಿಯೊಳಗೆ ಇರುವ ರೈತರಿಗೆ ಸಬ್ಸಿಡಿ ರೂಪದಲ್ಲಿ ನೀರು ಒದಗಿಸಲಾಗುತಿತ್ತು. ನಂತರ   ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದ ಸಕಾðರ ಭೂಮಿತಿಯನ್ನು 900 ಎಕರೆಗೆ ವಿಸ್ತರಿಸಿತು. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಇಂತಹ ಅವಕಾಶಗಳನ್ನು  ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಬೃಹತ್ ಕಂಪನಿಗಳು ಸಮರ್ಥವಾಗಿ ಬಳಸಿಕೊಂಡವು.

ನಮ್ಮನ್ನು ಆಳುವ ಸರ್ಕಾರಗಳ ಇಂತಹ ದ್ವಂದ್ವ ನಿಲುವಿನಿಂದಾಗಿ ಹಲವೆಡೆ ಹಿಂಸೆ ಸಾವಿನ ಘಟನೆಗಳು ಜರುಗಿವೆ. ಪಶ್ಚಿಮ ಆಫ್ರಿಕಾದ ಸೆನಗಲ್ ಮತ್ತು ಮಾರಿಷೇನಿಯಾ ನಡುವೆ ಹರಿಯುವ ನದಿಗೆ ಮಿನಂಟಾಲಿ ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಮೊದಲು ನದಿಯು ತಂದು ಹಾಕುತಿದ್ದ ಮೆಕ್ಕಲು ಮಣ್ಣಿನ ಕಣಜ ಭೂಮಿಯಲ್ಲಿ ಸೆನಗಲ್ ದೇಶದ ಕರಿಯ ವರ್ಣದ ರೈತರು ಬೇಸಾಯ ಮಾಡುತಿದ್ದರು. ಜಲಾಶಯ ನಿರ್ಮಾಣವಾದ ನಂತರ ಮಾರಿಷೇನಿಯದ ಬಿಳಿಯ ಬಣ್ಣದ ಅರಬ್ಬರು ಬೃಹತ್ ಮಟ್ಟದಲ್ಲಿ ಕೃಷಿ ಚಟುವಟಿಕೆಗೆ ತೊಡಗಿಕೊಂಡದ್ದರಿಂದ ನೀರಿಲ್ಲದೆ  ನದಿ ಕೆಳಗಿನ ಪ್ರಾಂತ್ಯದ ಸೆನಗಲ್ ರೈತರು ದಂಗೆಯೆದ್ದ ಪರಿಣಾಮ 250 ಮಂದಿ ಅರಬ್ಬರು ಅಸುನೀಗಿದರು. ಮಾರಿಷೇನಿಯಾದಲ್ಲಿದ್ದ ಸಾವಿರಾರು ಸೆನಗಲ್ ದೇಶದ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ನಂತರ ಉಭಯ ದೇಶಗಳು ಜಂಟಿಯಾಗಿ ನಡೆಸಿದ ವಿಚಾರಣೆಯಲ್ಲಿ 600 ಮಂದಿ ರೈತರನ್ನು ನೇಣು ಹಾಕಲಾಯಿತು. ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಸಮಿತಿಯ ವರದಿಯ ಪ್ರಕಾರ, ಇಂದು ಸೆನಗಲ್ ದೇಶದ ಲಕ್ಷಾಂತರ ಹೆಕ್ಟೇರ್ ರೈತರ ಭೂಮಿ ಅಮೇರಿಕಾದ ಬೃಹತ್ ಕಂಪನಿಗಳ ಪಾಲಾಗಿದೆ. ಇವುಗಳ ಸಂರಕ್ಷಣೆಗೆ ಅಲ್ಲಿನ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ರೈತರು ಅತಂತ್ರರಾಗಿ ಕಡಿಮೆ ಕೂಲಿ ದರಕ್ಕೆ ಕಂಪನಿಗಳಲ್ಲಿ ಜೀತದಾಳುಗಳಂತೆ ದುಡಿಯುತಿದ್ದಾರೆ.

(ಮುಂದುವರಿಯುವುದು)

nayakanuru-1.jpg

ನವಿಲು ಕಣ್ಣಿನ ಗಾಯದ ಚಿತ್ರಗಳು

ವೀರಣ್ಣ ಮಡಿವಾಳರ

ಊರು ಎನ್ನುವ ಪದ ಎಲ್ಲ ಸಮುದಾಯಗಳನ್ನು ಒಳಗೊಂಡ ತಾಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಅದು ಮಾನಸಿಕವಾಗಿ ಕೇರಿಯಿಂದ ಬೇರ್ಪಟ್ಟ ಜಾಗ ಮಾತ್ರ. ಇದು ಇವತ್ತಿನ ಸ್ಥಿತಿಯೋ ಅಥವಾ ಯಾವತ್ತಿಗೂ ಹೀಗೆಯೇ ಇತ್ತೋ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. `ಗ್ರಾಮೀಣಕೇರಿ` ಎನ್ನುವ ಸಮುದಾಯ ಅದು ಒಂದು ಜೀವ ಸಮುದಾಯವಾಗಿಯೂ ಸಹ nayakanuru-1.jpgಇವತ್ತು ನಮ್ಮನ್ನಾಳುವ ಪ್ರಭುಗಳಿಗೆ ತೋರುತ್ತಿಲ್ಲ. ಇದೇ ಸಮುದಾಯದ ಪ್ರತಿನಿಧಿಗಳಾಗಿ ರಾಜಕೀಯ ಮುಖಂಡರಾದವರೂ ಸಹ ಅಲ್ಲಿಯೂ ಮತ್ತೊಂದು ರೀತಿಯ ದಾಸ್ಯದಲ್ಲಿಯೇ ಮುಂದೆ ನಡೆದಿದ್ದಾರೆ. ತಾವು ಹುಟ್ಟಿ ಬೆಳೆದ, ತಮಗೆ ಬದುಕು ಕೊಟ್ಟ ಹಳ್ಳಿಗಳ ಕೇರಿ ಇಂದವರಿಗೆ ಅಪರಿಚಿತ. ಗ್ರಾಮೀಣಕೇರಿಗಳ ತಳಮಳವನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದ ಸ್ಥಿತಿಗೆ ತಳಸಮುದಾಯದ ಪ್ರತಿನಿಧಿಗಳು ತಲುಪಿರಬೇಕಾದರೆ, ಇನ್ನು `ಒಬ್ಬ ಏಕಲವ್ಯನಿಗಾಗಿ ಹಾಸ್ಟೆಲ್‌ಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ` ಎನ್ನುವ ನಾಡ ಪ್ರಭುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಭೋಜದಲ್ಲಿ ಮುರಿದು ಬಿದ್ದ ಕೇರಿ ಬದುಕು

ಊರಿಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ತುದಿಯಲ್ಲಿರುವ ಈ ಭೋಜ ಕರ್ನಾಟಕದ ಗಡಿಯಲ್ಲಿರುವ ಒಂದು ಹಳ್ಳಿ. ಇತ್ತೀಚೆಗೆ ಒಂದು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಅಂದಾಜು ಐನೂರಕ್ಕೂ ಹೆಚ್ಚು ಜನ ಕೇರಿಯ ಮೇಲೆ ದಾಳಿ ಇಟ್ಟರು. ಅದೀಗ ನಿದಿರೆಗೆ ಜಾರುತ್ತಿದ್ದ ಜೀವಗಳ ಜೀವ ಕೈಗೆ ಬಂದು ತಲ್ಲಣದಲ್ಲಿ ಮುದುಡಿ ಹೋದವು.

ದಾಳಿಕೋರರು ತೂರಿದ ಕಲ್ಲುಗಳ ಬಾಯಿಗೆ ಕರುಣೆಯಿರಲಿಲ್ಲ. ಆ ಕಲ್ಲುಗಳಿಗೆ ಮೊದಲು ಬಲಿಯಾದದ್ದು ಆ ಕೇರಿಯ ಬೆಳಕು. ಬೀದಿಯ ಕಂಬದ ದೀಪಗಳೆಲ್ಲ ಉದುರಿ ಹೋದವು. ಒಮ್ಮಿಂದೊಮ್ಮೆಗೆ ಕೇರಿಯ ತುಂಬ ಕತ್ತಲು. ಕಿವಿಗಡಚಿಕ್ಕುವ ಬೈಗುಳಗಳು. ಮನೆ ಮನೆಯ ಕದಗಳೆಲ್ಲ ಮುರಿದುಬಿದ್ದವು. ಮನೆಯೊಳಗಿನ ಜೀವಗಳು ಬೇಟೆಗಾರರಿಗೆ ಹೆದರಿದ ಮಿಕಗಳಂತೆ ನಡುಗುತ್ತಾ ಮೂಲೆ nayakanuru-2.jpgಸೇರಿದವು. ಇವರ ಕ್ರೌರ್ಯಕ್ಕೆ ಬಲಿಯಾಗದ ವಸ್ತುಗಳೇ ಉಳಿಯಲಿಲ್ಲ. ನಾಲ್ಕಾರು ಬೈಕ್‌ಗಳು ನಜ್ಜುಗುಜ್ಜಾದವು. ಗುಡಿಸಲುಗಳು ನಡಮುರಿದುಕೊಂಡು ನೆಲಕ್ಕೆ ಒರಗಿದವು. ಗೋಡೆಗಳೆಲ್ಲ ಅಂಗಾತ ಮಲಗಿದವು ವಯಸ್ಸಾದ ಮುದುಕರಂತೆ. ಒಳಕ್ಕೆ ಬಂದು ಕೈಗೆ ಸಿಕ್ಕು ಒಡೆದು ಹೋದ ವಸ್ತುಗಳಲ್ಲಿ ಟಿ.ವಿ., ಡಿ.ವಿ.ಡಿ, ಕುರ್ಚಿಗಳು ತಾವೇ ಸೇರಿದವು. ಈ ರೀತಿ ಹಾಳು ಮಾಡುವ ಮನಸ್ಸುಗಳಿಗೆ ಬಲಿಯಾದ ವಸ್ತುಗಳ ಆಯ್ಕೆಯಲ್ಲಿಯೇ ತಿಳಿಯುತ್ತದೆ ಇವರ ಅಸಹನೆ ಎಂಥದ್ದು ಎಂಬುದು. ವಸ್ತುಗಳನ್ನು ಮತ್ತೆ ಕೊಳ್ಳಬಹುದು, ಆದರೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಹದಿನಾರು ವರುಷದ ಹುಡುಗನಿಗೆ ಆದ ತೊಂದರೆ ತುಂಬಿಕೊಡುವರಾರು?  ಕೆಟ್ಟ ಆಕ್ರೋಶದ ಮನಸ್ಸು ಒದ್ದ ರಭಸಕ್ಕೆ ಕದದ ಹಿಂದೆ ಆತು ನಿಂತಿದ್ದ ಗರ್ಭಿಣಿ ಹೆಣ್ಣುಮಗಳು ನೆಲಕ್ಕೆ ಬಿದ್ದು ಅನುಭವಿಸಿದ ಹಿಂಸೆಗೆ ಹೊಣೆ ಯಾರು?

ಕೇರಿಗೆ ಸೇರಿದ ಕೆಲ ಹುಡುಗರು ರಸ್ತೆಯಲ್ಲಿ ವಾಲಿಬಾಲ್ ತೂರಾಡುತ್ತಾ ಬರುತ್ತಿದ್ದಾಗ ಒಬ್ಬ ಅಜ್ಜನಿಗೆ ಚೆಂಡು ಬಡಿದಿದೆ. ಈ ತಪ್ಪಿಗೆ ಹುಡುಗರನ್ನು ಹಿಡಿದು ಬಡೆದದ್ದಾಗಿದೆ. ತಪ್ಪು ಮಾಡಿದ ಹುಡುಗರ ತಂದೆತಾಯಿಗಳು ಅಜ್ಜನ ಮನೆಗೆ ಹೋಗಿ ಕೈಮುಗಿದು ಕ್ಷಮೆ ಕೇಳಿ ಬಂದದ್ದಾಗಿದೆ. ಮತ್ತೊಂದು ದಿನ ಕೇರಿಯವನೊಬ್ಬ ದಾರಿಯಲ್ಲಿ ಕುಡಿದು ಓಲಾಡುತ್ತ ಬರುತ್ತಿದ್ದಾಗ ಒಬ್ಬ ಹೆಣ್ಣುಮಗಳಿಗೆ ಕೈ nayakanuru-3.jpgತಾಗಿಸಿದ್ದಾನೆ. ಆ ಹೆಣ್ಣುಮಗಳು ಕುಡಿದವನನ್ನು ಬಾರಿಸಿದ್ದಾಳೆ. ಕುಡಿದ ಅಮಲಿನ ಅವಿವೇಕದ ವ್ಯಕ್ತಿ ಮರಳಿ ಆ ಮಹಿಳೆಗೆ ಹೊಡೆದು ಪರಾರಿಯಾಗಿದ್ದಾನೆ. ಇದು ಘಟನೆಯ ಸ್ಥಳದಲ್ಲಿ ಈ ಹಲ್ಲೆಗೆ ತಿಳಿದು ಬಂದ ಕಾರಣ. ವಿಷಾದದ ಸಂಗತಿಯೆಂದರೆ ಮೇಲ್ಜಾತಿಯವರೇ ಸಾಮೂಹಿಕವಾಗಿ ತಪ್ಪು ಮಾಡಿದರೂ, ಅವರ ತಪ್ಪಿಗೆ ಕೇರಿಯೇ ಸಾಮೂಹಿಕವಾಗಿ ಶೋಷಣೆಗೆ ಬಲಿಯಾಗಬೇಕಾಗುತ್ತದೆ. ಕೇರಿಯವ ಒಬ್ಬನೇ ತಪ್ಪು ಮಾಡಿದರೂ, ಇಡೀ ಕೇರಿಯೇ ಆ ತಪ್ಪಿಗೆ ಬಲಿಯಾಗಬೇಕಾಗುತ್ತದೆ. ಭೋಜಕ್ಕೆ ಸಂಬಂಧಿಸಿದಂತೆ ಇಲ್ಲಿ ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇರೆ ದಾರಿಗಳಿರಲಿಲ್ಲವೆ? ಕರ್ನಾಟಕದ ಗ್ರಾಮೀಣಕೇರಿಗಳ ವಾಸ್ತವಗಳೇ ಹೀಗೆ ಎನಿಸುತ್ತದೆ.

ಹೇಗಿದೆ ನಾಯಕನೂರು?

ಊರಿನ ಜಮೀನ್ದಾರನ ಕೆಂಗಣ್ಣಿಗೆ ಬಲಿಯಾಗಿ, ಬಹಿಷ್ಕಾರಕ್ಕೆ ಒಳಗಾಗಿದ್ದ ನಾಯಕನೂರಿನ ಕೇರಿಯ ಜನ ಸರ್ಕಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಸಮಾಧಾನದಿಂದಿದ್ದರು. ಎಷ್ಟೆಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಹೋಗಿ ಕೆಲವು ತಿಂಗಳೇ ಆದರೂ ಇಲ್ಲಿಯ ಪರಿಸ್ಥಿತಿ ವಿಷಾದ ಹುಟ್ಟಿಸುತ್ತದೆ. ಇವರನ್ನು ಮಾತನಾಡಿಸಿದಾಗ ಅವರ ಮನದಾಳದಿಂದ ಹೊರ ಬೀಳುವ nayakanuru-4.jpgಮಾತುಗಳು ಆರ್ದ್ರತೆ ತರಿಸುತ್ತವೆ. ಇನ್ನೇನು ಬಿದ್ದೇ ಬಿಡುತ್ತವೆ ಎನ್ನಿಸುವಂಥ ಮನೆಗಳು, ಇಕ್ಕಟ್ಟಾದ ಸಂದಿಗಳಲ್ಲಿ ಮೈಯೆಲ್ಲ ಗಾಯ ಮಾಡಿಕೊಂಡು ನಿಂತುಕೊಂಡಿವೆ. ಈ ಕೇರಿಯಲ್ಲಿ ಸುಮಾರು 37 ಕುಟುಂಬಗಳಿವೆ. ಒಬ್ಬರಿಗೂ ಹೇಳಿಕೊಳ್ಳಲೂ ಸಹ ತುಂಡು ಭೂಮಿಯಿಲ್ಲ. ಯಾವ ಮನೆಗೂ ಶೌಚಾಲಯವೇ ಇಲ್ಲವೆಂದ ಮೇಲೆ `ಗ್ರಾಮ ನೈರ್ಮಲ್ಯ` ಎಲ್ಲಿಂದ ಬರಬೇಕು. ಕೆಲವು ಕಡೆ ಮಾಡಲು ಕೆಲಸಗಳಿವೆ, ಆದರೆ ಕೈಗಳಿಲ್ಲ. ನಾಯಕನೂರಿನ ಈ ಕೇರಿಯಲ್ಲಿ ದುಡಿಯಲು ಕೈಗಳು ಸಿದ್ಧ ಇವೆ, ಕೆಲಸ ಕೊಡುವ ಮನಸ್ಸುಗಳಿಲ್ಲ. ತಿಪ್ಪಣ್ಣ ಮಾದರ ಯಾವಾಗಲೋ ನಿರ್ಮಿಸಲಾಗಿರುವ ತನ್ನ ಮನೆಯಲ್ಲಿ 20 ಜನರ ತನ್ನ ಕುಟುಂಬದೊಂದಿಗೆ ಒಟ್ಟಿಗೆ  ವಾಸಿಸುತ್ತಿರುವುದಾಗಿ ಹೇಳುತ್ತಾನೆ. `ಮನೆಗೆ ಅಳಿಯ ಬಂದರೆ ದುರ್ಗಮ್ಮನ ಗುಡಿಯೇ ಗತಿ` ಎನ್ನುತ್ತಾನೆ. ಇದು ತಿಪ್ಪಣ್ಣನ ಕಥೆ ಮಾತ್ರವಲ್ಲ. ಹಲವು ಜನರದ್ದು ಇದೇ ವ್ಯಥೆ. ಕರಿಯಪ್ಪ ತಾಯಿ ಯಲ್ಲವ್ವ ಮಾದರ ಎಂಬ ಅಜ್ಜನಿಗೆ ಎಂಟು ತಿಂಗಳಿನಿಂದ ವೃದ್ಧಾಪ್ಯ ವೇತನ ಬಂದಿಲ್ಲ. ಕರಿಯಪ್ಪ ತಾಯಿ ಕರಿಯವ್ವ ಮಾದರ ಎಂಬ ಅಜ್ಜನ ಸ್ಥಿತಿಯೂ ಇದೆ. ಈ ಇಳಿವಯಸ್ಸಿನಲ್ಲಿಯೂ ಕೆಲಸ ಹುಡುಕಿಕೊಂಡು ದುಡಿದು ತಿನ್ನದೆ ಗತ್ಯಂತರವಿಲ್ಲದ ಸ್ಥಿತಿಯಲ್ಲಿ ಈ ಅಜ್ಜಂದಿರಿದ್ದಾರೆ.

ಈ ಕೇರಿ ಅಸಮಾನ ಅಭಿವೃದ್ಧಿಯ ಚಿತ್ರದಂತಿದೆ. ಇಲ್ಲಿ ತಲೆತಲಾಂತರದಿಂದ ಇಂದಿನವರೆಗೂ ಒಬ್ಬನೇ ಒಬ್ಬನಿಗೂ ನೌಕರಿ ಸಿಕ್ಕಿಲ್ಲವೆಂದರೆ, ಮೀಸಲಾತಿ ಮರೀಚಿಕೆಯೇ ಅಲ್ಲವೇ? ಸ್ವಾತಂತ್ರ್ಯ nayakanuru-5.jpgಬಂದು ಆರು ದಶಕಗಳೇ ಆಗಿದ್ದರೂ ನಮ್ಮ ಕೇರಿಗಳು ಇನ್ನೂ ಅಲ್ಲೇ ಇವೆ. ಆಶ್ರಯ ಯೋಜನೆ ಯಾರಿಗೆ ಆಶ್ರಯ ಕೊಟ್ಟಿದೆ? ಸಂಧ್ಯಾ ಸುರಕ್ಷಾ ಯಾರ ರಕ್ಷಣೆಗೆ ನಿಂತಿದೆ? ನಡುಮಧ್ಯಾಣ ತಲೆ ಮೇಲೆ ಕೈ ಹೊತ್ತು ಗುಂಪಾಗಿ ಕುಳಿತ ಮಹಿಳೆಯರನ್ನು ಮಾತನಾಡಿಸಿದರೆ- `ಇಷ್ಟು ದಿನ ಉದ್ಯೋಗ ಖಾತ್ರಿ ಒಳಗ ಕೆಲಸಕ್ಕ ಹೊಕ್ಕಿದ್ವಿರಿ, ಈಗ ಅದು ಮುಗಿದೈತಿ. ಕೆಲಸಕ್ಕ ಯಾರೂ ಕರಿ ಒಲ್ರು, ಬುದ್ದಿ ಬರಬೇಕ ನಿಮ್ಗ ಅಂತಾರೀ.. ಅದ್ಕ ಚಿಂತ್ಯಾಗೇತ್ರಿ`.

ಈ ಊರಿನಲ್ಲಿ ಕಾಯಿಲೆ ಬಿದ್ದರೆ ಔಷಧಿಗಾಗಿ ಪಕ್ಕದ ಊರಿಗೆ ಹೋಗಬೇಕಾದ ಸ್ಥಿತಿ ಹಳ್ಳಿಗರದು. ನೀವು ಜಾತ್ರೆ ಮಾಡುವುದಿಲ್ಲವೆ ಎಂದರೆ, `ಅಲ್ರಿ… ಒಂದು ಸಾರಿ ಎಲ್ಲಾರೂ ಸೇರಿ ನಮ್ಮ ಕೇರಿ ದುರ‌್ಗವ್ವನ ಜಾತ್ರಿ ಮಾಡೋಣಂತ ನಿರ್ಧಾರ ಮಾಡಿದ್ವಿ. ಆದ್ರ ನಮ್ಮ ದುರ‌್ಗವ್ವಗ ಯಾರೂ ಬನ್ನಿ ಮುಡಿಯಾಕ ತಮ್ಮ ಹೊಲದೊಳಗ ಬಿಟ್ಟುಕೊಳ್ಳಲಿಲ್ರಿ. ಅದ್ಕ ಬಿಟ್ಟು ಬಿಟ್ವಿರಿ` ಎನ್ನುತ್ತಾರೆ. ಶೋಷಣೆ ಸಾಂಸ್ಕೃತಿಕವಾಗಿಯೂ ಇರಬಹುದೆ?

ಈ ಬಹಿಷ್ಕಾರದ ಘಟನೆ ನಡೆದ ನಂತರ ಬಂದ ಜನ ಪ್ರತಿನಿಧಿಗಳು ಎಲ್ಲರ ಮನೆ ರಿಪೇರಿ ಮಾಡಿಸಿಕೊಡುವುದಾಗಿಯೂ, ವಾರಕ್ಕೊಮ್ಮೆ ಬಂದು ಯೋಗಕ್ಷೇಮ ವಿಚಾರಿಸುವುದಾಗಿಯೂ ಹೇಳಿ ಹೋದದ್ದೇ ಬಂತು, ಅವರಿಗಾಗಿ ಇವರು ಕಾಯುತ್ತಿದ್ದಾರೆ. ಭೂಮಿ ಕೊಡುವುದಾಗಿ ಹೇಳಿದ್ದನ್ನು ಕನವರಿಸುತ್ತಿದ್ದಾರೆ.

nayakanuru-6.jpgನಾಯಕನೂರಿನ ಕೇರಿಯ ಜನ ಐವತ್ತು ಲಕ್ಷ ರೂಪಾಯಿ ಅನುದಾನ ಬಂದಿರುವುದನ್ನು ಅಧಿಕಾರಿಗಳಿಂದ ತಿಳಿದು ಆ ದುಡ್ಡಿನಲ್ಲಿ ತಮಗೊಂದು ವಸತಿ ಪ್ರದೇಶ, ಅದರಲ್ಲಿ ಕನಿಷ್ಠ ಅಗತ್ಯಗಳಾದರೂ ಇರುವ ಮನೆಗಳು ಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಹೇಳುತ್ತಾರೆ. ಯಾರ ಮೇಲೂ ಅವಲಂಬಿತರಾಗದೆ ತಮ್ಮ ಅನ್ನ ತಾವೇ ದುಡಿದುಕೊಳ್ಳಲು, ದುರ್ಗವ್ವನಿಗೆ ಬನ್ನಿ ಮುಡಿಸಲು, ಭೂಮಿಗಾಗಿ ಹಂಬಲಿಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ನೈತಿಕ ಇಚ್ಛಾಶಕ್ತಿ ಇರುವವರಾರು?

ಮತ್ತೆ ಮತ್ತೆ ಏಕಲವ್ಯ

ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಇದು ತಳಸಮುದಾಯಗಳ ಅಳಿವಿನ ಕಾಲ ಎನ್ನಿಸುತ್ತದೆ. ನಮ್ಮ ಊರುಗಳ ಶಾಲೆಗಳನ್ನು ಕೋರ್ಟಿಗೆ ಹೋಗಿ ಉಳಿಸಿಕೊಳ್ಳಲು ಹೆಣಗುತ್ತಿರುವಾಗಲೇ, 154 ಪರಿಶಿಷ ್ಟ ಜಾತಿ ಪಂಗಡಗಳ ಹಾಸ್ಟೆಲ್‌ಗಳನ್ನು ಮುಚ್ಚುತ್ತಿರುವ ಸುದ್ದಿ ಬಂದಿದೆ. ಕೆಲವು ಹಾಸ್ಟೆಲ್‌ಗಳಲ್ಲಿ, ಕೊಠಡಿಯೊಂದರಲ್ಲಿ ಹಿಡಿಸಲಾರದಷ್ಟು ಹುಡುಗರು ತುಂಬಿಕೊಂಡು ಓದುತ್ತಿರುವುದಕ್ಕೆ ಇನ್ನೂ 200 ಹಾಸ್ಟೆಲ್‌ಗಳ ಬೇಡಿಕೆ ಸರಕಾರದ ಮುಂದಿರುವಾಗಲೇ ಈ ನಿರ್ಧಾರ! ಅಂದರೆ, ನಮ್ಮನ್ನಾಳುವ ಪ್ರಭುಗಳ ನೀತಿ ದಲಿತ ವಿರೋಧಿ ಮಾತ್ರವಲ್ಲ, ಮುಖ್ಯವಾಗಿ ಅಸ್ಪೃಶ್ಯರ ವಿರೋಧಿ ಎನಿಸುತ್ತದೆ.

ಏಕಲವ್ಯರು ಮತ್ತೆ ಮತ್ತೆ ಅನಾಥರಾಗುತ್ತಿದ್ದಾರೆ. ಜಮಖಂಡಿಯ ಹಾಸ್ಟೆಲ್‌ವೊಂದರಲ್ಲಿ ತಿನ್ನಬಹುದಾದ ಅನ್ನಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿ ಬಂದಿರುವಾಗ ಹಾಸ್ಟೆಲ್‌ಗಳೇ ಮುಚ್ಚಿದರೆ ಮುಂದೇನು? ಅಕ್ಷರದಿಂದಲೇ ಅನ್ನದ ಕನಸು ಕಾಣುವ ಕಣ್ಣುಗಳಿಗೆ ಭರವಸೆಗಳೇ ಉಳಿಯುತ್ತಿಲ್ಲ. ಆಧುನಿಕತೆಯ ನಾಗಾಲೋಟದಲ್ಲಿ ಶಿಕ್ಷಣ ದುಬಾರಿ ಸರಕಾಗಿರುವಾಗ ನಾಯಕನೂರಿನಂಥ ಕೇರಿಗಳಿಂದ ಬರುವ ಕಣ್ಣೀರು ಮಾರುವ ಹುಡುಗರು ಕೊಳ್ಳುವುದೆಲ್ಲಿಂದ ಬಂತು? ಅಕ್ಷರದಿಂದ ಬದುಕಿಗೆ ಬೆಳಕು ಹುಡುಕುವ ಹುಡುಗರ ಆಸೆಗಳು ಕೇರಿಯಲ್ಲೇ ಕಮರಬೇಕೆ?

ಗಾಯಕ್ಕೆ ಮುಲಾಮು ಹುಡುಕುತ್ತಾ…

ಈಗೀಗ ನವಿಲಿನ ಅಷ್ಟೂ ಕಣ್ಣಿನಲ್ಲಿ ತೋರಲಾಗದ ಗಾಯದ ಚಿತ್ರಗಳು. ಕೇರಿ ಅಲ್ಲೇ ಕಾಲು ಮುರಿದುಕೊಂಡು ಬಿದ್ದಿದೆ. ಸಾಂವಿಧಾನಿಕ ಮೀಸಲಾತಿ ಅಸಮಾನತೆಯ ಅಭಿವೃದ್ಧಿಗೆ ಬಲಿಯಾಗಿದೆ. ಈ nayakanuru-7.jpgಗಾಯಗಳು ಕೇವಲ ನಿರ್ಗತಿಕತೆಯಿಂದ ಆದವುಗಳಲ್ಲ, ಯಾರೋ ಬಾರಿಸಿದ ಗಾಯಗಳೂ ಸೇರಿವೆ. ಸಾವಿರ ಸಾವಿರ ಕೋಟಿಯ ಲೆಕ್ಕದಲ್ಲಿ ಮಾತನಾಡುವ ನಮ್ಮ ಸರ್ಕಾರದ ಅಭಿವೃದ್ಧಿ ನೀತಿ ಯಾರ ಪರವಾಗಿದೆ ಅಥವಾ ಯಾರ ಹೆಸರಿನಲ್ಲಿ ಯಾರಿಗೆ ದೊರೆಯುತ್ತಿದೆ ಎಂಬುದನ್ನು ಅವಲೋಕಿಸಿದಾಗ ಸಿಕ್ಕ ಕೆಲವು ಚಿತ್ರಗಳು ಮಾತ್ರ ಇವು. ದುಡಿಯಲು ಜನರಿಲ್ಲ ಎಂಬ ಕೊರಗು ನಾಯಕನೂರಿನಂತಹ ಊರುಗಳಲ್ಲಿ ಎಷ್ಟು ನಿಜ. ಊರು ಮತ್ತು ಕೇರಿಯ ನಡುವಿನ ಅಂತರ ಬರಬರುತ್ತಾ ಕಡಿಮೆಯಾಗುವುದರ ಬದಲಾಗಿ ಆಧುನಿಕತೆಯ ಧಾವಂತದಲ್ಲಿ ಕೇರಿಯನ್ನು ಮರೆತ ಊರು ಬಹಳ ದೂರ ಬಂದು ಬಿಟ್ಟಿದೆ, ಅಲ್ಲಿಯೇ ಉಳಿದವರಿಗೆ ತೆವಳಲೂ ಸಾಧ್ಯವಾಗುತ್ತಿಲ್ಲ.

ಜಾತಿ ಮಾತ್ರ ಇಂದು ತನ್ನ ಕ್ರೌರ್ಯ ಪ್ರದರ್ಶಿಸುತ್ತಿಲ್ಲ, ಭೋಗದ ವಾರಸುದಾರರ ಆಳದ ಸ್ವಾರ್ಥ ಇಲ್ಲಿ ತನ್ನ ಕರಾಳತೆ ಮೆರೆಯುತ್ತಿದೆ. ಇಂದು ದಲಿತ ಲೋಕ ಸಮಾನ ಆಭಿವೃದ್ಧಿಗೆ ಹಪಿಹಪಿಸುತ್ತಿಲ್ಲ, ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಅನ್ನ, ವಸತಿ, ಬಟ್ಟೆಗಳು ಕಡಿಮೆಯಾದರೂ ವಿದ್ಯೆಗೇ ಕುತ್ತು ಬಂದರೆ ಹೇಗೆ ಬದುಕುವುದು?

ಇವೆಲ್ಲದರ ನಡುವೆ ಸವಣೂರಿನ ಭಂಗಿ ಬಂಧುಗಳು ನಡೆಸಿದ ಎರಡು ವರ್ಷದ ನಿರಂತರ ಹೋರಾಟದ ಛಲದಿಂದ, ಕಡಿಮೆಯಾದರೂ ಇರಬಹುದಾದ ಕೆಲವು ಸಾಂಸ್ಕೃತಿಕ, ಸಾಹಿತ್ಯಿಕ, ತಳಸಮುದಾಯದ ನಾಯಕರ ಚಿಂತನೆಯ ಇಚ್ಛಾಶಕ್ತಿಯ ಸಾಥ್‌ನಿಂದ ಎಂಟು ಜನ ಭಂಗಿ ಬಂಧುಗಳಿಗೆ ನೌಕರಿ ದೊರೆತು, ಅನ್ನಕ್ಕೆ ದಾರಿಯಾಗಿದೆ. ಆದರೆ ಮ್ಯಾನ್ ಹೋಲ್‌ಗಳಲ್ಲಿ ಬಿದ್ದು nayakanuru-8.jpgಪೌರಕಾರ್ಮಿಕರು ಸಾಯುತ್ತಲೇ ಇದ್ದಾರೆ. ಕೆಲವು ಜೀವಗಳನ್ನೇ ಕಳೆದುಕೊಂಡ ಕೆಜಿಎಫ್‌ನ ಕುಟುಂಬಗಳು ಅನಾಥವಾಗಿ, ಹೊತ್ತಿನ ಗಂಜಿಗೂ ಪರದಾಡುತ್ತಿವೆ.

ಭೋಜ, ನಾಯಕನೂರು, ಹಾಳಕೇರಿಯಂಥ ಊರುಗಳು ಮಾತ್ರ ಅಸಮಾನತೆಯ ದಳ್ಳುರಿಯಲ್ಲಿ ಬದುಕನ್ನು ಸುಟ್ಟುಕೊಳ್ಳುತ್ತಿಲ್ಲ. ಒಂದೇ ಬಿಕ್ಕಿನ ಹಲವು ಮರುದನಿಗಳು ಯಾವುದೇ ಊರಿಗೆ ಹೋದರೂ ಕೇಳಿಸುತ್ತವೆ, ಕರುಣೆ ಇರುವ ಮನಸ್ಸುಗಳಿಗೆ ಮಾತ್ರ. ಶೋಷಣೆಯ ಮುಖಗಳನ್ನು ಹೇಗೆ ವಿಭಾಗಿಸುವುದು? ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ- ನಮ್ಮ ವಿಂಗಡಣೆಗಳನ್ನು ಅಣಕಿಸುವಂತೆ ಕಾಲ ಮುನ್ನಡೆಯುತ್ತಿದೆ. ಕೇರಿಯೊಂದಿಗಿನ ಊರಿನ ಅಸಹನೆಯನ್ನು ತಾಳಿಕೊಳ್ಳುವ ದಲಿತ ಲೋಕದ ಚೈತನ್ಯವನ್ನು ಹೊಗಳುವುದೋ? ಕಂಬಾಲಪಲ್ಲಿಯಲ್ಲಿಯೇ ಅಪರಾಧಿಗಳು ಬಿಡುಗಡೆಯಾಗಿರುವಾಗ ಬಹಿಷ್ಕಾರ ಹಾಕಿದವರಿಗಾಗಲೀ, ಕೇರಿಯ ಮೇಲೆ ದೊಡ್ಡ ದೊಡ್ಡ ಕಲ್ಲು ತೂರಿದವರಿಗಾಗಲೀ ಶಿಕ್ಷೆ ಹೇಗೆ ನಿರೀಕ್ಷಿಸಬಹುದು? ಒಂದು ಹಂತಕ್ಕೆ ಕೇರಿಯ ಜೀವಗಳಿಗೆ ಮನೆ ಕೊಡಬಹುದು, ಭೂಮಿ ಕೊಡಬಹುದು, ಆದರೆ ಅಂದು ರಾತ್ರಿ ಮನೆಯ ಮೇಲೆ ಕಲ್ಲುಗಳು ಬಿದ್ದಾಗ ಅನುಭವಿಸಿದ ತಲ್ಲಣಗಳಿಗೆ, ಬಿದ್ದ ಹೊಡೆತಕ್ಕೆ, ಶತಶತಮಾನದಿಂದಲೂ ಅನುಭವಿಸುತ್ತಲೇ ಬಂದು ಮನಸ್ಸಿನೊಳಗೆ ಉಂಟಾಗಿರುವ ಮಾಯದ ಗಾಯಗಳಿಗೆ ಮುಲಾಮು ಯಾರು, ಹೇಗೆ ಕೊಡಲು ಸಾಧ್ಯ.nayakanuru-9.jpg

ಕೃಪೆ: ಪ್ರಜಾವಾಣಿ
ಚಿತ್ರಗಳು: ಲೇಖಕರವು