ಹಿಂದೂ ಕೋಮುವಾದ ಮತ್ತದರ ಕ್ಷುದ್ರ ವಿರಾಟರೂಪ


-ಬಿ. ಶ್ರೀಪಾದ ಭಟ್


ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವವರೆಗೂ ಈ ಆರ್.ಎಸ್.ಎಸ್. ಪ್ರೇರಿತ ಚಟುವಟಿಕೆಗಳನ್ನು ನಾವೆಲ್ಲಾ ಸದಾ ಕಾಲ ಪ್ರಜ್ಞಾಪೂರ್ವಕವಾಗಿಯೇ ವಿಶ್ಲೇಷಣೆ ಹಾಗೂ ವಿಮರ್ಶೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಇವರ ವ್ಯಾಪ್ತಿ ಹಾಗೂ ಪರಿಣಾಮಗಳು ಯಾವಾಗಲೂ ದೀರ್ಘಕಾಲದ್ದಾಗಿರುತ್ತವೆ ಹಾಗೂ ಸಮಾಜಕ್ಕೆ ಅಪಾಯಕಾರಿಯಾಗಿರುತ್ತವೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಹಿರಿಯಣ್ಣ ಆರ್.ಎಸ್.ಎಸ್. ಕೇಶವಕೃಪದಲ್ಲಿ ತನ್ನ ಕೋಮುವಾದಿ ಹಿಂದುತ್ವದ ವೈದಿಕ ಸಿದ್ಧಾಂತಕ್ಕೆ ಅನುಗುಣವಾಗುವಂತೆ, ಸಾಧ್ಯವಾದಷ್ಟು ತನ್ನ ಶಾಖಾ ಮಠಗಳನ್ನು, ಅಂಗಸಂಸ್ಧೆಗಳನ್ನು ಸರ್ಕಾರದ ದಿನನಿತ್ಯದ ಆಡಳಿತದಲ್ಲಿ ಭಾಗಿಯಾಗುವಂತಹ ಅನೇಕ ಮಾರ್ಗಗಳನ್ನು ಹಾಗೂ ಇದನ್ನು ಕಾರ್ಯಗತಗೊಳಿಸಲು ಆಡಳಿತದ ಆಯಕಟ್ಟಿನ ಇಲಾಖೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಅತ್ಯಂತ ಸಂವಿಧಾನಬಾಹಿರವಾಗಿ ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುತ್ತದೆ.

ಇಲ್ಲಿ ಆರ್.ಎಸ್.ಎಸ್. ಆರ್ಥಿಕವಾಗಿ ಅತ್ಯಂತ ಫಲವತ್ತಾದ ಇಲಾಖೆಗಳಾದ ಕಂದಾಯ, ನೀರಾವರಿ, ಲೋಕೋಪಯೋಗಿ, ವಾಣಿಜ್ಯ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಆಯ್ಕೆ ಮಾಡಿಕೊಳ್ಳುವುದು ಗೃಹ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸದೀಯ ವ್ಯವಹಾರ ಹೀಗೆ ಸಾಂಸ್ಕೃತಿಕ ಮಜಲುಗಳುಳ್ಳ, ಜನ ಸಂಪರ್ಕವನ್ನುಳ್ಳ ಇಲಾಖೆಗಳನ್ನು. ಈ ಇಲಾಖೆಗಳಲ್ಲಿ ಆರ್.ಎಸ್.ಎಸ್. ಒಲವುಳ್ಳವರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುವ ಕರಡು ನೀತಿಯನ್ನು ರೂಪಿಸುತ್ತದೆ. ಇದನ್ನು ಆರ್.ಎಸ್.ಎಸ್. ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸುತ್ತದೆ.

ತನ್ನ ಹಿಂದುತ್ವದ ಮೂಲಭೂತ ಸಿದ್ಧಾಂತಗಳನ್ನು, ಸಂಘಟನಾತ್ಮಕ ಉದ್ದೇಶಗಳನ್ನು ಜಾರಿಗೊಳಿಸಲು ವಿಭಿನ್ನವಾದ ತಂತ್ರಗಳನ್ನು ಆಯೋಜಿಸುತ್ತದೆ. ಮೇಲ್ನೋಟಕ್ಕೆ ಅತ್ಯಂತ ಸಹಜವಾಗಿ ಕಾಣುವಂತೆ, ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೂ ತನಗೂ ಅಧಿಕೃತವಾಗಿ ಯಾವುದೇ ಸಂಬಂಧವಿಲ್ಲವೆನ್ನುವಂತೆ ತನ್ನ ಕಾರ್ಯತಂತ್ರಗಳನ್ನು ರೂಪಿಸುತ್ತದೆ. ಶಿಕ್ಷಣ ಇಲಾಖೆ ಈ ಆರ್.ಎಸ್.ಎಸ್.ನ ಮೊದಲ ಆದ್ಯತೆ ಮತ್ತು ಪ್ರಮುಖ ಆಯ್ಕೆ. ಈ ಶಿಕ್ಷಣ ಇಲಾಖೆಗೆ ತನ್ನ ಸ್ವಯಂಸೇವಕನನ್ನು, ಆರ್.ಎಸ್.ಎಸ್. ಕಾರ್ಯಕರ್ತರಾಗಿ ಕೆಲಸ ಮಾಡಿದ ಹಿನ್ನೆಲೆ ಉಳ್ಳವರನ್ನು ಮಾತ್ರ ಸಚಿವರನ್ನಾಗಿ ನೇಮಿಸಿಕೊಂಡು, ಆ ಮೂಲಕ ಆರ್‍.ಎಸ್.ಎಸ್. ಸಿದ್ಧಾಂತಕ್ಕೆ ಬದ್ಧರಾದಂತಹ ಶಿಕ್ಷಕರನ್ನು, ಅಧಿಕಾರಿಗಳನ್ನು ನೇಮಿಸಿಕೊಳ್ಳುವುದು, ಈ ಮೂಲಕ ಪಠ್ಯಪುಸ್ತಕಗಳ ಕೇಸರೀಕರಣವನ್ನು ತನ್ನ ಕಣ್ಣಳತೆಯಲ್ಲಿಯೇ ಜರಗುವಂತೆ ನೋಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತದೆ. ಇಲ್ಲಿ ಎಲ್ಲಿಯೂ ಅಧಿಕೃತವಾಗಿ ಆರ್.ಎಸ್.ಎಸ್. ತಾನು ನೇರವಾಗಿ ಪಾಲುದಾರನಾಗದಂತೆ ಎಚ್ಚರವಹಿಸುತ್ತದೆ.

ಆದರೆ ತನ್ನ ಮೂಲಭೂತ ಆಶಯಗಳನ್ನು ಮಾತ್ರ ಬಿಡದೇ ನೆರವೇರಿಸಿಕೊಳ್ಳುತ್ತದೆ. ಒಮ್ಮೆ ಶಿಕ್ಷಣದಲ್ಲಿ ಕೇಸರೀಕರಣವನ್ನು ಯಶಸ್ವಿಯಾಗಿ ಸಿದ್ಧಪಡಿಸಿ ಆ ಪಠ್ಯಪುಸ್ತಕಗಳನ್ನು ಸಂಬಂಧಪಟ್ಟ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆಗೊಳಿಸಿದ ನಂತರ ಇದನ್ನು ಮತ್ತೆ ಹಿಂದಕ್ಕೆ ಪಡೆಯುವುದು ಅತ್ಯಂತ ದುಸ್ತರವಾದ ಕಾರ್ಯ ಎಂದು ಆರ್.ಎಸ್.ಎಸ್.ಗೆ ಚೆನ್ನಾಗಿ ಗೊತ್ತು. ಹೀಗೆ ತನ್ನ ಕೋಮುವಾದದ ಹಿಂದುತ್ವದ, ವೈದಿಕ ಅಜೆಂಡವನ್ನು ಮಾರುಕಟ್ಟೆಗೆ, ಮಕ್ಕಳ ಮನಸ್ಸಿಗೆ ತಲುಪಿಸುವ ಬೃಹತ್ ಮಹಾತ್ವಾಕಾಂಕ್ಷಿ ಯೋಜನೆ ಕೈಗೂಡಿಸಿಕೊಳ್ಳುತ್ತದೆ. ಈ ರೀತಿಯಾಗಿ ಕೇಸರೀಕರಣಗೊಂಡ ಪುಸ್ತಗಳನ್ನು ಓದಿದ ಅಮಾಯಕ ಮುಗ್ಧ ವಿದ್ಯಾರ್ಥಿಗಳನ್ನು ನಂತರ ಶಿಸ್ತುಬದ್ಧ ಸಂಘಟನೆಯ ಮೂಲಕ ತನ್ನ ಪ್ರಮುಖ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ತೆಕ್ಕೆಗೆ ಜಾರಿಕೊಳ್ಳುವಂತೆಯೂ ಅನೇಕ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇಲ್ಲಿನ ಶಿಬಿರಗಳಲ್ಲಿ ಅಧ್ಯಯನದ ಹೆಸರಿನಲ್ಲಿ, ಸಂಘಟನೆಯ ಹೆಸರಿನಲ್ಲಿ ಬಲಪಂಥೀಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬೇರುಬಿಡುವಂತೆ ನೋಡಿಕೊಳ್ಳಲಾಗುತ್ತದೆ. ಇವೆಲ್ಲವೂ ಸಹ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರಗುವಂತೆ, ಅಧಿಕೃತವಾಗಿ ಸಂಯೋಜಿಸಲಾಗುತ್ತದೆ. ಹೇಳಿ ಇಲ್ಲಿ ಹಿರಿಯಣ್ಣ ಆರ್.ಎಸ್.ಎಸ್. ಎಲ್ಲಾದರೂ ನೇರವಾಗಿ ಕಾಣಿಸಿಕೊಂಡಿದ್ದಾರೆಯೇ? ಇಲ್ಲವೇ ಇಲ್ಲ !! ಆದರೆ ತನ್ನ ಗುರಿ ಮುಟ್ಟುವ ಜಾಗಕ್ಕೆ ಮಾತ್ರ ನೇರಾವಾಗಿ ಶಿಸ್ತುಬದ್ಧವಾಗಿ ತಲುಪುತ್ತದೆ. ಇದೊಂದು ಯಶಸ್ವಿ ಕಾರ್ಯಾಚರಣೆ ಅಂದರೆ ಕೂಂಬಿಂಗ್ !!

ತನ್ನ ಶಾಖಾ ಮಠಗಳಾದ ವಿದ್ಯಾಭಾರತಿ (ದೇಶಾದ್ಯಾಂತ 28000 ಶಾಲೆಗಳನ್ನು 32,50,000 ವಿದ್ಯಾರ್ಥಿಗಳನ್ನು ಹೊಂದಿದೆ) ಸೇವಾ ಭಾರತಿ, ಏಕಲ ವಿದ್ಯಾಲಯ (ದೇಶಾದ್ಯಾಂತ 35000 ಹಳ್ಳಿಗಳಲ್ಲಿ 1000000 ವಿದ್ಯಾರ್ಥಿಗಳು) ಸರಸ್ವತಿ ಬಾಲ ಮಂದಿರ, ಗೀತ ಮಂದಿರ, ಭಾರತೀಯ ವಿದ್ಯಾನಿಕೇತನಗಳಂತಹ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ ಮೂಲಕ ಇಂಡಿಯಾದ ರಾಷ್ಟ್ರೀಯತೆಯನ್ನು ತಮ್ಮ ಮೂಲಭೂತವಾದದ ಹಿಂದೂ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿಕೊಳ್ಳುವ ಹಪಾಹಪಿತನ, ಅತಿ ಭಾವುಕತೆಯ ಹುಸಿ ರಾಷ್ಟ್ರೀಯತೆ ಹಾಗೂ ಅಂಧ ಧಾರ್ಮಿಕತೆಯ ಹೆಸರಿನಲ್ಲಿ ಅಖಂಡ ಹಿಂದುತ್ವದ ಪ್ರತಿಪಾದನೆ, ವೇದ ಹಾಗೂ ಉಪನಿಷತ್‍ಗಳ ನಿರಂತರ ಭೋಧನೆ, ವರ್ಣಾಶ್ರಮದ ಪ್ರಾಮುಖ್ಯತೆ, ಸನಾತನ ಪರಂಪರೆಯನ್ನು ಉಳಿಸಿಕೊಳ್ಳುವ ರೂಪುರೇಷೆಗಳು ಹಾಗೂ ಬಹುಸಂಖ್ಯಾತ ಅವೈದಿಕತೆಯ ಈ ನೆಲ ಸಂಸ್ಕೃತಿಯ ನಾಶವನ್ನು, ಅಲ್ಪಸಂಖ್ಯಾತರ ತುಚ್ಛೀಕರಣಗಳಂತಹ ಅತ್ಯಂತ ಜೀವವಿರೋಧಿ ಹಾಗೂ ಅಮಾನವೀಯ ಪಠ್ಯಗಳನ್ನು ನಿರಂತರವಾಗಿ ಬೋಧಿಸುವುದು ಆರ್.ಎಸ್.ಎಸ್.ನವರ ಪ್ರಮುಖ ಕಾರ್ಯತಂತ್ರ.

ಇದಕ್ಕಾಗಿ ತನ್ನ ರಾಷ್ಟ್ರೋತ್ಥಾನ ಪ್ರಕಾಶನದ ಮೂಲಕ ಸಂಸ್ಕೃತಿ ಜ್ಞಾನಪರೀಕ್ಷೆ ಹಾಗೂ ಸಂಸ್ಕೃತಿ ಜ್ಞಾನ ಪ್ರಶ್ನೋತ್ತರಗಳು ಎನ್ನುವ ಟಿಪ್ಪಣಿಗಳಡಿಯ ಜೀವವಿರೋಧಿ, ಪುರೋಹಿತಶಾಹಿ ಪುಸ್ತಕಗಳನ್ನು ಆಯಕಟ್ಟಿನ ಸ್ಥಳಗಳಿಗೆ, ಎಲ್ಲಾ ವಿದ್ಯಾಸಂಸ್ಥೆಗಳಿಗೆ ಮತ್ತು ಪ್ರಮುಖವಾಗಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ರಚನಸಮಿತಿಗೆ (ಇಲ್ಲಿ ಆಗಲೇ ಆರ್.ಎಸ್.ಎಸ್. ತನ್ನ ಗುಂಪಿನ ಶಿಕ್ಷಣ ಸಚಿವರ ಮೂಲಕ ಸಂಘ ಪರಿವಾರದ ಹಿನ್ನೆಲೆಯುಳ್ಳ ಶಿಕ್ಷಣ ತಜ್ಞರನ್ನು ಸದಸ್ಯರು ಹಾಗೂ ಅಧ್ಯಕ್ಷರನ್ನಾಗಿ ಆರಿಸಿರುತ್ತದೆ.) ತಲಪುವಂತೆ ಅಚ್ಚುಕಟ್ಟಾಗಿ ಆಯೋಜಿಸುತ್ತದೆ. ಈ ಆರ್.ಎಸ್.ಎಸ್. ಮೇಲ್ವಿಚಾರಣೆಯಲ್ಲಿ, ಅಖಂಡ ಹಿಂದುತ್ವದ ತತ್ವದಡಿಯಲ್ಲಿ ರೂಪಿತವಾದ ಪಠ್ಯ ಪುಸ್ತಕಗಳಲ್ಲಿ ದುರುದ್ದೇಶಪೂರಿತ, ಹಸೀ ಸುಳ್ಳುಗಳನ್ನು ಪಠ್ಯಗಳೆಂದು ತುಂಬಿರುವುದಕ್ಕೆ ಕೆಲವು ಉದಾಹರಣೆಗಳು.

1. 9ನೇ ಸೆಪ್ಟೆಂಬರ್ 2009 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತು “ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಹಾಗೂ ಗ್ರಂಥಾಲಯಗಳು ರಾಷ್ಟ್ರೋತ್ಥಾನ ಪರಿಷತ್ ಪ್ರಕಟಿಸಿರುವ ಸುಮಾರು 300 ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸಬೇಕು. ಇದಕ್ಕಾಗಿ ತಗಲುವ ವೆಚ್ಚವನ್ನು ಶಾಸಕರ ಸ್ಥಿರನಿಧಿಯಲ್ಲಿ ಅಭಿವೃದ್ಧಿ ವೆಚ್ಚಕ್ಕಾಗಿ ಇರುವ ಹಣವನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ತಗಲುವ ಅಂದಾಜು ವೆಚ್ಚ 17 ಕೋಟಿ.  – ಕೆನರಾ ಟೈಮ್ಸ್.

2. ಕೇಂದ್ರದಲ್ಲಿ NDA ಸರ್ಕಾರ ಆಡಳಿತವಿದ್ದಾಗ ಶಿಕ್ಷಣ ಮಂತ್ರಿಯಾಗಿದ್ದ ಆರ್.ಎಸ್.ಎಸ್. ಸ್ವಯಂಸೇವಕರಾದ ಮುರಳೀ ಮನೋಹರ ಜೋಷಿಯವರು UGC ಮೂಲಕ NCERT ಪಠ್ಯಕ್ರಮದಲ್ಲಿ ಮೂಢನಂಬಿಕೆಗಳ ಅಗರವಾದಂತಹ  “ಜ್ಯೋತಿಷ್ಯಾಸ್ತ್ರ, ವೇದ ಪಾಠಗಳು, ಪುರೋಹಿತ ಕಾರ್ಯಗಳು, ವೇದ ಗಣಿತ ಶಾಸ್ತ್ರ”ಗಳನ್ನು ಸೇರಿಸಲಾಯಿತು. ನಂತರ ತೀವ್ರ ಪ್ರತಿರೋಧದ ನಡುವೆ ಇದನ್ನು ತಡೆಹಿಡಿಯಲಾಯಿತು. ಈಗಲೂ ಕೂಡ ಇದು ಆರ್.ಎಸ್.ಎಸ್.ನ ಅತ್ಯಂತ ಅಚ್ಚುಮೆಚ್ಚಿನ, ಜೀವಕ್ಕೆ ಹತ್ತಿರವಾದ ಪಠ್ಯಗಳು. ದೇಶ, ಕಾಲ, ಜಗತ್ತು ಆಧುನಿಕತೆಗೆ ತೆರೆದುಕೊಂಡು ಎಷ್ಟೇ ಮುಂದಕ್ಕೆ ಓಡುತ್ತಿರಲಿ ತಮ್ಮದು ಮಾತ್ರ ಧಾರ್ಮಿಕತೆ, ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ತಮ್ಮ ಪ್ರೀತಿಯ ಭಾರತ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಶಿಲಾಯುಗಕ್ಕೆ ಮರಳಿ ಕೊಂಡೊಯ್ಯುವ ಪ್ರಣಾಳಿಕೆ ಈ ಆರ್.ಎಸ್.ಎಸ್.ನದು.

3.  A.D. 1528 – A.D.1914 ರ ಮಧ್ಯದಲ್ಲಿ ರಾಮ ಜನ್ಮಭೂಮಿಯನ್ನು 77 ಸಲ ಅತಿಕ್ರಮಣ ಮಾಡಲಾಗಿದೆ, ಇದನ್ನು ಪ್ರತಿರೋಧಿಸಿ 3.5 ಲಕ್ಷ ಮುಗ್ಧ ಭಕ್ತರು ತಮ್ಮ ಪ್ರಾಣ ತ್ಯಾಗ ಮಾಡಿದರು. ಅಲ್ಲದೆ ನವೆಂಬರ್ 2, 1990 ರಂದು ಹಿಂದೂ ಭಕ್ತರು ರಾಮ ಜನ್ಮಭೂಮಿಗೆ ತೆರಳಿ ಅಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಲು ಹೋದಾಗ ಪೋಲೀಸರ ಗುಂಡೇಟಿಗೆ ಬಲಿಯಾದರು. ಅಂದಿನಿಂದ ಆ ದಿನವನ್ನು ಭಾರತದ ಇತಿಹಾಸದಲ್ಲಿ ಕಪ್ಪು ಶುಕ್ರವಾರವನ್ನಾಗಿ ಆಚರಿಸಲಾಗುತ್ತಿದೆ.

4. 2006 ರಲ್ಲಿ ಬಿಜೆಪಿಯ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಮಂತ್ರಿಯಾಗಿದ್ದ ಬಿಜೆಪಿಯ ಡಿ.ಎಚ್.ಶಂಕರಮೂರ್ತಿಯವರು ಟಿಪ್ಪು ಸುಲ್ತಾನ್ ಕುರಿತಾಗಿ ಪಠ್ಯ ಪುಸ್ತಕದಲ್ಲಿರುವ ಎಲ್ಲಾ ವಿಷಯಗಳನ್ನು ತೆಗೆದು ಹಾಕಬೇಕೆಂದು ಕರೆಕೊಟ್ಟಿದ್ದರು. ಈ ಸಂಘ ಪರಿವಾರದ ಶಂಕರಮೂರ್ತಿಯವರ ಪ್ರಕಾರ ಟಿಪ್ಪು ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ. ಇವನನ್ನು ಓದಿಕೊಂಡರೆ ವಿದ್ಯಾರ್ಥಿಗಳು ಹಾದಿ ತಪ್ಪುತ್ತಾರೆ.

5. ಗುಜರಾತ್‍ನ ಹತ್ತನೇ ತರಗತಿಯ ಸಮಾಜ ವಿಜ್ಞಾನದ ಪಠ್ಯ ಪುಸ್ತಕದಲ್ಲಿ “ದೇಶದ ಕಂಟಕಗಳು ಹಾಗೂ ಅದಕ್ಕೆ ಪರಿಹಾರಗಳು” ಎನ್ನುವ ತಲೆ ಬರಹದಡಿ “ಅಲ್ಪಸಂಖ್ಯಾತರು ಅತ್ಯಂತ ದೊಡ್ಡ ಕಂಟಕರು. ನಂತರದ ಕಂಟಕರು ದಲಿತರು ಹಾಗೂ ಆದಿವಾಸಿಗಳು. ಮುಸ್ಲಿಂರು ಹಾಗೂ ಕ್ರಿಶ್ಚಿಯನ್ನರು ಪರಕೀಯರು,” ಎಂದು ಬರೆಯಲಾಗಿದೆ. ಇದಕ್ಕೆ ತೀವ್ರ ವಿರೋಧ ಎದುರಾದಾಗ ಸರ್ಕಾರ ಈ ವಿವಾದಿತ ಭಾಗಗಳನ್ನು ತೆಗೆಯಲಾಗಿದೆ ಎಂದು ಹೇಳಿತು. ಆದರೂ ಇಂದಿಗೂ ಆ ರಾಜ್ಯದ ಅನೇಕ ಭಾಗಗಳಲ್ಲಿ ಈ ಸಂಗತಿಗಳನ್ನು ಉದಾಹರಿಸುತ್ತಾರೆ. ಅಲ್ಲಿನ ಸೆಕೆಂಡರಿ ಶಾಲೆಗಳಲ್ಲಿ ನರೇಂದ್ರ ಮೋದಿಯ ಜೀವನವನ್ನು ಅಧ್ಯಯನಕ್ಕಾಗಿ ಸೇರಿಸಲಾಗಿದೆ. ( ಕೃಪೆ :ಫ್ರಂಟ್ ಲೈನ್ 25.2. 2012)

6. ನರೇಂದ್ರ ಮೋದಿಯ ಆಡಳಿತದ ಗುಜರಾತ್‍ನಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹಿಟ್ಲರ್ ಹಾಗೂ ನಾಝೀಗಳನ್ನು ವೈಭವೀಕರಿಸುತ್ತಾ ಈ ರೀತಿ ಬರೆಯಲಾಗಿದೆ: “ಹಿಟ್ಲರ್ ಅತ್ಯಂತ ಉಗ್ರವಾದವನ್ನು ಪ್ರತಿಪಾದಿಸಿದ ಈ ಮೂಲಕ ಜರ್ಮನಿಯನ್ನು ಮೇಲ್ಮಟ್ಟದ ರಾಷ್ಟ್ರೀಯತೆಯೆಡೆಗೆ ಕೊಂಡೊಯ್ದ.”

7. ಮಧ್ಯ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಭಗವದ್ಗೀತೆಯನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಲು ಅನೇಕ ಕುತಂತ್ರಗಳನ್ನು ಮಾಡಲಾಗುತ್ತಿದೆ. ಮೊದಲು ಪುರೋಹಿತಶಾಹಿ ಧಾರ್ಮಿಕ ಮಠಗಳಿಂದ ಗೀತ ಅಭಿಯಾನ ಎನ್ನುವ ಹೆಸರಿನಡಿಯಲ್ಲಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಿ ನಂತರ ಪಠ್ಯಗಳ ಮುಖಾಂತರ ಅವರಲ್ಲಿ ವೈದಿಕತೆಯ ಸನಾತನ ವಿಚಾರಗಳನ್ನು ತುಂಬುವ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತದೆ. ಇದನ್ನು ಮುಖ್ಯಮಂತ್ರಿ (ಆರ್.ಎಸ್.ಎಸ್. ಸ್ವಯಂಸೇವಕರಾದ ಸದಾನಂದ ಗೌಡ) ಶಿಕ್ಷಣ ಮಂತ್ರಿ (ಆರ್.ಎಸ್.ಎಸ್. ಸ್ವಯಂಸೇವಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ) ಪ್ರಮುಖ ಆದ್ಯತೆಯನ್ನಾಗಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮಲ್ಲಿ ಕರ್ನಾಟಕದ 5ನೇ ಹಾಗೂ 8ನೇ ತರಗತಿಯ ಪಠ್ಯ ಪುಸ್ತಕಗಳನ್ನು ಕೇಸರೀಕರಣಗೊಳಿಸುವ ಕಾರ್ಯತಂತ್ರಗಳನ್ನು ಚಿಂತಕ ಹಾಗೂ ವಕೀಲರಾದ ಸಿ.ಎಸ್.ದ್ವಾರಕಾನಾಥ್ ಅವರು ವಿವರವಾಗಿ ಬಯಲುಗೊಳಿಸಿದ್ದಾರೆ. ಅವರು ಪ್ರಚುರ ಪಡಿಸಿದ ವಿಷಯಗಳು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತವೆ.

8. ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುತ್ತಾರೆ. ಅಮೂಲಾಗ್ರ ಬದಲಾವಣೆ ಅಂದರೆ ಅಖಂಡ ಹಿಂದುತ್ವದ ಪ್ರತಿಪಾದನೆ ಎಂದರ್ಥ. ಈ ಅಖಂಡ ಹಿಂದುತ್ವದ ಪ್ರತಿಪಾದನೆಯಲ್ಲಿ ಮತ್ತೆ ವರ್ಣಾಶ್ರಮ ಪದ್ಧತಿಯನ್ನು, ವೈದಿಕ ಆಚರಣೆಗಳನ್ನು ವೈಭವೀಕರಿಸುವ ಚಿಂತನೆಗಳನ್ನು ಪಠ್ಯಕ್ರಮವನ್ನಾಗಿ ರೂಪಿಸಲಾಗುತ್ತದೆ. ಆ ಮೂಲಕ ಈ ನೆಲದ ಅವೈದಿಕ ಸಂಸ್ಕೃತಿಯನ್ನು, ದಲಿತರ ಜಾಗೃತ ಪ್ರಜ್ಞೆಯನ್ನೇ ಅಲ್ಲಗೆಳೆಯುಲಾಗುತ್ತದೆ ಹಾಗೂ ನಿಧಾನವಾಗಿ ನಾಶಪಡಿಸಲಾಗುತ್ತದೆ.

ರಾಮಾಯಣ ಕೃತಿಯನ್ನು ತಾನೊಬ್ಬನೇ ಗುತ್ತಿಗೆ ಹಿಡಿದವನಂತೆ, ಅದರ ವ್ಯಾಖ್ಯಾನವನ್ನು ತಾವು ಮಾತ್ರ ಮಾಡಬೇಕು ಎನ್ನುವಂತೆ ವರ್ತಿಸುವ ಆರ್.ಎಸ್.ಎಸ್. ಈ ಕೃತಿಯನ್ನು ವೈಚಾರಿಕವಾಗಿ, ವಿಶ್ಲೇಷಣಾತ್ಮಕವಾಗಿ ಸೆಮಿನಾರ್ ಗಳಲ್ಲಿ, ಕಮ್ಮಟಗಳಲ್ಲಿ ಚರ್ಚೆಗಳನ್ನು ನಡೆಸಿದಾಗ, ಇದರ ಕುರಿತಾದ ವೈಚಾರಿಕ ಚಿಂತನೆಗಳ ಲೇಖನವನ್ನು ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಲ್ಲಿ ಅಧ್ಯಯನಕ್ಕಾಗಿ ಅಳವಡಿಸಿದಾಗ ತನ್ನ ಅಂಗ ಪಕ್ಷಗಳಾದ ವಿಎಚ್‍ಪಿ ಮತ್ತು ಎಬಿವಿಪಿ ಮೂಲಕ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸುತ್ತದೆ. ಪ್ರತಿಭಟನೆಗಳನ್ನು, ಲೇಖಕರ ಚಾರಿತ್ರ್ಯವಧೆಯನ್ನೂ ನಡೆಸಲಾಗುತ್ತದೆ. ಇದು ಅತ್ಯಂತ ಕೀಳು ಮಟ್ಟದಲ್ಲಿ ನಡೆಯುವಂತೆ ಮೇಲ್ವಿಚಾರಣೆ ನಡೆಸುವುದು ಆರ್.ಎಸ್.ಎಸ್.

ಎ.ಕೆ. ರಾಮಾನುಜಂ ಅವರ “ಮುನ್ನೂರು ರಾಮಾಯಣಗಳು” ಎನ್ನುವ ಪ್ರಬಂಧವನ್ನು 2008 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಇತಿಹಾಸದ ಪಠ್ಯವಾಗಿ ಆಯ್ಕೆ ಮಾಡಲಾಯಿತು. ಅದನ್ನು ಪಠ್ಯಕ್ರಮವನ್ನಾಗಿಯೂ ಅಳವಡಿಸಲಾಯಿತು. ಆದರೆ ಈ ಆರ್.ಎಸ್.ಎಸ್.ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಪೋಲೀಸರ, ಅಧಿಕಾರಿಗಳ ಸಮ್ಮುಖದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲೇ ದಾಳಿಯನ್ನು ನಡೆಸಿ ತನ್ನ ಗೂಂಡಾ ವರ್ತನೆಯನ್ನು ತೋರಿಸಿತು. ಇವರಿಗೆ ರಾಮಾಯಣವನ್ನು ತಮ್ಮ ಮೂಗಿನ ನೇರಕ್ಕೆ ಮಾತ್ರ ಬರೆಯಬೇಕು ಅಷ್ಟೇ. ಇದು ಪ್ರಜಾಪ್ರಭುತ್ವದಲ್ಲಿ ಆರ್.ಎಸ್.ಎಸ್.ತನ್ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯನ್ನು ಬಳಸಿಕೊಂಡು ನಡೆಸುತ್ತಿರುವ ದೌರ್ಜನ್ಯದ ಮಾದರಿ. ಪ್ರೊಫೆಸರ್ ವಿನೋಜ್ ಅಬ್ರಹಂ Centre for Development Studies (CDS), ತಿರುವನಂತಪುರಂ ಅವರು ಹೇಳಿದ್ದು.  “ಎ.ಕೆ. ರಾಮಾನುಜಂ ಅವರ” ಮುನ್ನೂರು ರಾಮಾಯಣಗಳು” ಪ್ರಬಂಧದ ಮೇಲೆ ನಡೆದ ಹಲ್ಲೆ ನಿಜಕ್ಕೂ ಚಿಂತೆಗೀಡುಮಾಡಿದೆ. ಜನ ಸಾಮಾನ್ಯರ ನಂಬುಗೆಯೊಳಗೇ ನಡೆಸುವ ಬಹುಮುಖೀ ಚಿಂತನೆಯನ್ನು ನಾಶಪಡಿಸಲಾಗಿದೆ. ಸಂವಿಧಾನದ ಮೂಲ ಆಶಯವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಹಕ್ಕನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ.”

ಮುನ್ನೂರು ರಾಮಾಯಣದ ವಿರೋಧದ ಬೆನ್ನಲ್ಲೇ 25 ಫೆಬ್ರವರಿ 2008 ರಂದು ಸಂಘಪರಿವಾರ ವಿದ್ಯಾಲಯದ ಆವರಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಯಿತು. ಈ ಸಂಘ ಪರಿವಾರದವರು ತಮ್ಮೊಂದಿಗೆ ದೃಶ್ಯ ಮಾಧ್ಯಮದವರನ್ನೂ ಕರೆದುಕೊಂಡು ಬಂದು ಇತಿಹಾಸ ವಿಭಾಗದ ಮುಖ್ಯಸ್ಥರಾದ ಎಸ್.ಝ್. ಜಾಫ಼್ರಿಯವರ ಮೇಲೆ ಹಲ್ಲೆ ನಡೆಸಿ ಅಲ್ಲಿನ ಪೀಠೋಪಕರಣಗಳನ್ನು, ಧ್ವನಿವರ್ಧಕಗಳನ್ನು ಧ್ವಂಸಗೊಳಿಸಿ, ಪುಸ್ತಕಗಳನ್ನು ಹರಿದುಹಾಕಿದರು. ಈ ದುಷ್ಕೃತ್ಯಕ್ಕೆ ಪೋಲೀಸಿನವರು ಸಹ ಮೂಕ ಪ್ರೇಕ್ಷರಾಗಿದ್ದರು. ಆಗ ಅಲ್ಲಿನ ಬೇರೆ ವಿಭಾಗದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು –   ಅಮರ್ ಫರೂಕಿ, ಪೀಪಲ್ಸ್ ಡೆಮಾಕ್ರಸಿ ಚಿಂತಕ ಖಲೀದ್ ಅಖ್ಥರ್ ಅವರ ಮಾತುಗಳಲ್ಲೇ ಹೇಳುವುದಾದರೆ ಎ.ಕೆ. ರಾಮಾನುಜಂ ಅವರ “ಮುನ್ನೂರು ರಾಮಾಯಣಗಳು, 5 ಉದಾಹರಣೆಗಳು ೩ ಚಿಂತನೆಗಳು” ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಇತಿಹಾಸದ ಪಠ್ಯವಾಗಿ ಆಯ್ಕೆಯಾದಾಗ, ಈ ಹಿಂದೂ ಮಹಾಕಾವ್ಯವನ್ನು ಅತ್ಯಂತ ಆಳವಾಗಿ, ವಿಸ್ತಾರವಾಗಿ, ಬಹುಮುಖೀ ನೆಲೆಯ ತೌಲನಿಕ ಅಧ್ಯಯನ ಮಾಡುವುದರ ಮೂಲಕ ಆ ಮಹಾಕಾವ್ಯಕ್ಕೆ ಅತ್ಯಂತ ನ್ಯಾಯ ಒದಗಿಸಿಕೊಡಲಾಗುತ್ತದೆ ಎಂದು ಈ ಆರ್.ಎಸ್.ಎಸ್. ಹಾಗೂ ಎಬಿವಿಪಿಯವರು ಸಂತೋಷಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಇಲ್ಲಿನ ಪ್ರಬಂಧ ಈ ಮಹಾಕಾವ್ಯವನ್ನು ವಿವರವಾಗಿ ಹೇಳುವುದರ ಮೂಲಕ ಇಲ್ಲಿನ ಚಲನಶೀಲತೆಯನ್ನು, ವೈವಿಧ್ಯತೆಯನ್ನು, ಈ ದೇಶದ ರಾಮನನ್ನು ಜಗತ್ತಿಗೇ ಪ್ರಚುರಪಡಿಸಲಾಗುತ್ತದೆ ಎನ್ನುವ ವಿಷಯವೇ ಈ ಬಲಪಂಥೀಯರಿಗೆ ಹೆಮ್ಮೆಯನ್ನುಂಟು ಮಾಡಬೇಕಾಗಿತ್ತು. ಆದರೆ ಸಮಾನ ನಾಗರಿಕ ಸಂಹಿತೆ, ಏಕರೂಪಿ ಭಾರತ, ಏಕರೂಪಿ ಸಂಸ್ಕೃತಿ, ಈಗ ಏಕರೂಪಿ ರಾಮಾಯಣ ಈ ಎಂದೆಂದಿಗೂ ಬಗ್ಗಿಸಲಾಗದ ದೃಷ್ಟಿಕೋನದಲ್ಲಿ ನಮ್ಮ ಜೀವಪರವಾದ ಬಹುರೂಪಿ, ವೈವಿಧ್ಯತೆಗಳ ಚಿಂತನೆಗಳು ಒಂದಾಗುವುದೇ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ಶ್ರೇಷ್ಠ ಚರಿತ್ರೆಗಾರ್ತಿ ಹಾಗೂ ಚಿಂತಕಿ ರೊಮಿಲಾ ಥಾಪರ್ ( 1999 ರಲ್ಲಿ) “ನಾನು 35 ವರ್ಷಗಳ ಹಿಂದೆ NCERT ಗಾಗಿ 6 ಮತ್ತು 7ನೇ ತರಗತಿಗಳಿಗೆ ಒಂದು ಪುಸ್ತಕವನ್ನು ಬರೆದಿದ್ದೆ. ಅದರಲ್ಲಿ ಒಂದು ಸಣ್ಣ ಪರಿಚ್ಛೇದದಲ್ಲಿ ನಾನು ಮಹಮದ್ ಘಜನಿಯ ಬಗ್ಗೆ ಬರೆಯುತ್ತಾ “ಅವನು ಮೂರ್ತಿ ಭಂಜಕನಾಗಿದ್ದ, ಭಾರತ ದೇಶದ ದೇವಾಲಯಗಳ ಮೇಲೆ ದಾಳಿ ನಡೆಸಿ ಅಲ್ಲಿ ಹುದುಗಿದ್ದ ಐಶ್ವರ್ಯವನ್ನು ಲೂಟಿ ಮಾಡಿ ಮರಳಿ ತನ್ನ ದೇಶವಾದ ಘಜನಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮಧ್ಯ ಏಷ್ಯಾದ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿ ಅದರೊಳಗೆ ಸೇನೆಯನ್ನು, ವಿದ್ಯಾಲಯವನ್ನು, ಗ್ರಂಥಾಲಯಗಳನ್ನು ನಿರ್ಮಿಸಿದ” ಎಂದು ಬರೆದೆ. ಇದು ಕೋಮುವಾದಿ ಇತಿಹಾಸಕಾರರನ್ನು ಕೆರಳಿಸಿತು. ಈ ಕೋಮುವಾದಿಗಳು “ಘಜನಿ ಮೂರ್ತಿ ಭಂಜಕನಾಗಿದ್ದ, ಇಲ್ಲಿನ ದೇವಾಲಯದ ಸಂಪತ್ತನ್ನು ಲೂಟಿ ಮಾಡಿದ ಎನ್ನುವ ಸಂಗತಿಗಳನ್ನು ಹಾಗೇ ಇರಲಿ ಆದರೆ ಅವನು ಈ ಸಂಪತ್ತಿನಿಂದ ಸಾಮ್ರಾಜ್ಯವನ್ನು ಸ್ಥಾಪಿಸಿದ, ವಿದ್ಯಾಲಯಗಳನ್ನು, ಗ್ರಂಥಾಲಯಗಳನ್ನು ನಿರ್ಮಿಸಿದ ಎನ್ನುವುದನ್ನು ನಿಮ್ಮ ಟಿಪ್ಪಣಿಯಿಂದ ಕಿತ್ತುಹಾಕಿ” ಎಂದು ನನಗೆ ತಾಕೀತು ಮಾಡಿದರು. ಇದು ಈ ಬಲಪಂಥೀಯ ಇತಿಹಾಸಕಾರರ ಅತ್ಯಂತ selective ಆದ ಚರಿತ್ರೆಯ ದೃಷ್ಟಿಕೋನ. ಇದೇ ಮಾತನ್ನು ಔರಂಗಜೇಬನ ಬಗೆಗೂ ಹೇಳಬಹುದು. ಈ ಕೋಮುವಾದಿಗಳು ಬಯಸುವುದು ಈ ಔರಂಗಜೇಬನ ಅನೇಕ ಕೆಟ್ಟ ಗುಣಗಳನ್ನು ಬರೆಯಬೇಕು. ಆದರೆ ಇದೇ ಔರಂಗಜೇಬ ಬ್ರಾಹ್ಮಣರಿಗೆ, ದೇವಸ್ಥಾನಗಳಿಗೆ ಅನುದಾನವನ್ನು, ಹಣವನ್ನು ನೀಡಿದ್ದನ್ನು ಮಾತ್ರ ಬರೆಯಬೇಡಿ. So it’s a highly selective history. ನಮಗೆಲ್ಲಾ ಗೊತ್ತಿರುವಂತೆ ಒಂದು ಘಟ್ಟದವರೆಗೂ ಇತಿಹಾಸ selective ಆಗಿರುತ್ತದೆ. ಏಕೆಂದರೆ ದಿನನಿತ್ಯದಲ್ಲಿ, ಪ್ರತಿ ಕ್ಷಣದಲ್ಲಿ ನಡೆದ ಘಟನೆಗಳನ್ನು ಯಾರಿಗೂ ಮಾಹಿತಿ ಇರುವುದಿಲ್ಲ, ಆದರೆ ಸಿದ್ಧಾಂತಗಳೇ selective ಆಗಿ ಹೋದರೆ ಇತಿಹಾಸ ಛಿದ್ರಗೊಳ್ಳುತ್ತದೆ. The problem with communal history writing is that not only is it being extremely selective about facts but the interpretation is also from a deliberately partisan point”.   ಹೀಗೆ ಮುಂದುವರೆದು ರೊಮಿಲಾ ಥಾಪರ್ ಹೇಳುವುದು “1920 ರಲ್ಲಿ ಹಿಂದುತ್ವ ಸಿದ್ಧಾಂತವನ್ನು ಹುಟ್ಟುಹಾಕಲಾಯಿತು. ಆದರೆ ಈ ಸಿದ್ಧಾಂತ 50ರ ದಶಕದವರೆಗೂ ಎಲ್ಲಿಯೂ ಬಹಿರಂಗವಾಗಿ ವಿಜೃಂಬಿಸುತ್ತಿರಲಿಲ್ಲ. ಆದರೆ ಕಳೆದ 20, 30 ವರ್ಷಗಳಲ್ಲಿ ಈ ಹಿಂದುತ್ವ ಸಿದ್ಧಾಂತ ಸಮಾಜದ ಎಲ್ಲಾ ವ್ಯವಸ್ಥೆಯೊಳಗೆ ತೂರಿಕೊಳ್ಳುತ್ತ ಪತ್ರಿಕೆಗಳು, ಶಾಲೆಗಳು, ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಲ್ಲಿ ಸೇರಿಕೊಂಡಿದೆ. ಈ ಮೂಲಕ ಕೋಮುವಾದಿ ಇತಿಹಾಸ ಬರವಣಿಗೆಗೆ ಹಿಂದೂ – ಮುಸ್ಲಿಂ ಘರ್ಷಣೆ ಅತ್ಯಂತ ಮುಖ್ಯ ಪಠ್ಯವಾಗಿಬಿಟ್ಟಿದೆ.”

ಇತ್ತೀಚೆಗೆ ಬರೋಡ ವಿಶ್ವವಿದ್ಯಾಲಯದಲ್ಲಿ ಹಿಂದೂ ದೇವರು ಹಾಗೂ ದೇವತೆಗಳ ಚಿತ್ರಕಲಾ ಪ್ರದರ್ಶನದ ಮೇಲೆ ದಾಳಿ ನಡೆಸಿ ಅಲ್ಲಿನ ಚಿತ್ರಗಳನ್ನು ಧ್ವಂಸಗೊಳಿಸಲಾಯಿತು. ರಾಜಕೀಯ, ಸಾಂಸ್ಕೃತಿಕ. ಬೌದ್ಧಿಕ ವಲಯಗಳಲ್ಲಿ ತಮ್ಮ ಕೋಮುವಾದದ ದೃಷ್ಟಿಕೋನದೊಳಗೆ ದಕ್ಕುವ ಚಿಂತನೆಗಳನ್ನು ಮಾತ್ರ ಪ್ರತಿಪಾದಿಸುತ್ತಾ ಈ ಏಕರೂಪಿ ಜೀವವಿರೋಧಿ ದೃಷ್ಠಿಕೋನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎನ್ನುವ ಸರ್ವಾಧಿಕಾರದ ಧೋರಣೆ ಈ ಆರ್.ಎಸ್.ಎಸ್. ಹಾಗೂ ಇದರ ಅಂಗ ಸಂಸ್ಥೆಗಳದ್ದು. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಲೋಕದ ಮೇಲೆ ಈ ಎಬಿವಿಪಿಗಳ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೆ. ಈ ಮೂಲಕ ನಾಗರಿಕ ಸಮಾಜ ಕುಬ್ಜಗೊಳ್ಳುತ್ತಿದೆ. ಇವೆಲ್ಲಕ್ಕಿಂತಲೂ ದೊಡ್ಡ ದುರಂತವೆಂದರೆ ಕಾಂಗ್ರೆಸ್ ಅಧಿಕಾರವಿರುವ ಕಾಲಘಟ್ಟದಲ್ಲಿ ಈ ಸಂಘಪರಿವಾರದ ದಾಳಿ ಎದುರಿಸಲಾರದೆ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿ ತಿರುಗಬೇಕಾಯಿತು. ಈ ಕಾಂಗ್ರೆಸ್ ಅಧಿಕಾರವಿರುವ ಮಹರಾಷ್ಟ್ರದಲ್ಲಿ 2004 ರಲ್ಲಿ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇಸ್ಟಿಟ್ಯೂಟ್ ಮೇಲೆ ಸಂಘ ಪರಿವಾರದಿಂದ ದಾಳಿ ನಡೆಯಿತು. ಇಲ್ಲೂ ಕಾಂಗ್ರೆಸ್ ಅಸಹಾಯಕ ಮೂಕ ಪ್ರೇಕ್ಷಕ. ಈ ಕಾಂಗ್ರೆಸ್ ತಾನೂ ನೈತಿಕವಾಗಿ ಭ್ರಷ್ಟನಾಗುವುದರ ಮೂಲಕ ಇಡೀ ದೇಶವನ್ನು ಸಹ ಅನೈತಿಕತೆಗೆ ತಳ್ಳಿದೆ.

ಇಷ್ಟೆಲ್ಲ ಕರಾಳ ಹಿನ್ನೆಲೆಯನ್ನುಳ್ಳ ಆರ್.ಎಸ್.ಎಸ್. ಪ್ರೇರಿತ ಏಕರೂಪಿ, ವೈದಿಕ ಸಂಸ್ಕೃತಿ ರಕ್ಷಣೆಯ ದುಷ್ಟಕಣ್ಣು ಈಗ ಕನ್ನಡದ ಸಂವೇದನಶೀಲ ಲೇಖಕಿ ಸಬೀಹಾ ಭೂಮೀಗೌಡ ಅವರ ಲೇಖನ “ಕೋಮುವಾದಿ ಮತ್ತು ಮಹಿಳೆ” ಎನ್ನುವ ವೈಚಾರಿಕ ಲೇಖನದ ಮೇಲೆ ಬಿದ್ದಿದೆ. ಎಂದಿನಂತೆ ಈ ಸಂಸ್ಕೃತಿ ಭಕ್ಷಕರಾದ ಎಬಿವಿಪಿಗಳು ಈ ಲೇಖನದ ವಿರುದ್ಧ ಪ್ರತಿಭಟಿಸಿದ್ದಾರೆ. ಸಬೀಹ ಅವರು “ಈ ಲೇಖನ ಕೋಮುಗಲಭೆಗಳು ಸಂಭವಿಸಿದಾಗ ಮಹಿಳೆ ಅನುಭವಿಸುವ ನೋವು, ಈ ಕೋಮು ಗಲಭೆಗಳಿಗೆ ಮಹಿಳೆ ಮಾತ್ರ ತುತ್ತಾಗುವ ಅತ್ಯಂತ ಕ್ರೂರ ಪ್ರಕ್ರಿಯೆಯನ್ನು ಉದಾಹರಣೆ ಸಮೇತ ವಿವರಿಸಿದ್ದೇನೆ” ಎಂದು ಅತ್ಯಂತ ವಿವರವಾಗಿ, ಸಹನಶೀಲರಾಗಿ, ಆಧಾರ ಸಮೇತ ಸ್ಪಷ್ಟಪಡಿಸಿದರು. ಆದರೆ ಸೈರಣೆ ಎನ್ನುವ ಪದದ ಅರ್ಥವೇ ಗೊತ್ತಿಲ್ಲದ ಈ ಸಂಘಪರಿವಾರಕ್ಕೆ ಮತ್ತೇ ಅದೇ ಹಳೇ ಹೆಳವಂಡ. ಈ ಲೇಖನ ತಮ್ಮ ಚಿಂತನೆಯ ಮೂಗಿನ ನೇರಕ್ಕಿಲ್ಲ !!! ಮತ್ತೇ ನೀವು ಏನನ್ನಾದರೂ ಬರೆದರೂ ಅದು ಹಿಂದೂ ಸಂಸ್ಕೃತಿಯನ್ನು ವೈಭವೀಕರಣವನ್ನು ಒಳಗೊಳ್ಳಲೇಬೇಕು. ಒಂದು ವೇಳೆ ಈ ಹಿಂದೂ ಸಂಸ್ಕೃತಿಯ ಅವಗುಣಗಳ ಬಗೆಗೆ ಬರೆದರೆ ಅವರದರ ಬಗ್ಗೆ ಅಂದರೆ ಮುಸ್ಲಿಂರ ಕಂದಾಚಾರಗಳ ಬಗ್ಗೆ ಯಾಕೆ ಬರೆದಿಲ್ಲ ಈ ರೀತಿಯ ಕ್ಯಾತೆ ಈ  ಸಂಘಪರಿವಾರದ್ದು. ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದರೂ ಅವರ ಎಲೆಯಲ್ಲಿ ನೊಣ ಓಡಿಸುವ ಇವರ ಚಾಳಿ ಇಂದಿಗೂ ಕಡಿಮೆಯಾಗಿಲ್ಲ. ಒಟ್ಟಿನಲ್ಲಿ ಇದೇ ರೀತಿ ಮುಂದುವರೆದರೆ ನಾವೆಲ್ಲ ನಮ್ಮ ಪುಸ್ತಕಗಳ ಪ್ರತಿಯೊಂದನ್ನು ಸೆನ್ಸಾರ್‍‌ಗಾಗಿ ಕೇಶವ ಕೃಪಕ್ಕೆ ಕೊಡಬೇಕಾಗಿ ಬರುವ ದಿನಗಳು ದೂರವೇನಿಲ್ಲ. ಇಲ್ಲಿ ಪ್ರತಿಯೊಂದು ಪ್ರಗತಿಪರವಾದ, ವೈಚಾರಿಕ, ಕ್ರಿಯಾತ್ಮಕವಾದ ಸಾಂಸ್ಕೃತಿಕ ಚಿಂತನೆಗಳಿಗೆ, ಹೋರಾಟಗಳಿಗೆ  ಸಂಘ ಪರಿವಾರ ಕ್ಯಾತೆ ತೆಗೆಯುತ್ತಾ, ಪ್ರಜ್ಞಾವಂತರ ಮೇಲೆ ಮಾನಸಿಕ ಹಾಗೂ ದೈಹಿಕ ಹಲ್ಲೆ ನಡೆಸುತ್ತಾ ರಾಜ್ಯದೆಲ್ಲಡೆ ಅಶಾಂತಿಯನ್ನು ಹರಡುತ್ತಿದ್ದರೆ ನಾವೆಲ್ಲ ವಿಚಿತ್ರ ರೀತಿಯ ವಿಸ್ಮೃತಿಯಲ್ಲಿ ಮೈಮರತಿದ್ದೇವೆ. ಏಕೆಂದರೆ ನಮ್ಮ ಬುದ್ಧಿಜೀವಿಗಳಿಗೆ, ಸಾಹಿತಿಗಳಿಗೆ ಇನ್ನೂ ಇದರ ಅಪಾಯಕಾರಿ ಪರಿಣಾಮಗಳು ಅರ್ಥವಾದಂತಿಲ್ಲ. ಮೊನ್ನೆ ಡೋಂಗಿ ಗುರು ರವಿಶಂಕರ್ ಅತ್ಯಂತ ಹೀನಾಯವಾಗಿ ಸರ್ಕಾರಿ ಶಾಲೆಗಳ ಬಗೆಗೆ ಅವಮಾನಕರವಾಗಿ ಮಾತನಾಡಿದಾಗಲೂ ಸಹ ಅಷ್ಟೆ ಬುದ್ಧಿಜೀವಿಗಳೆಲ್ಲ ಜಾಣ ಕಿವುಡುತನವನ್ನು, ಮರೆಮೋಸವನ್ನು ಪ್ರದರ್ಶಿಸಿದರು. ಈ ಡೋಂಗಿ ಗುರು ಸಂವಿಧಾನಕ್ಕೆ ಅಪಚಾರವೆಸಗುವ ಹಾಗೆ ಸರ್ಕಾರಿ ಶಾಲೆಗಳ ಬಗೆಗೆ ದುರಹಂಕಾರದ, ಬೇಜವಬ್ದಾರಿ ಹೇಳಿಕೆ ಕೊಟ್ಟರೂ ಈ ರವಿಶಂಕರ್ ಗುರೂಜಿಯನ್ನು Prosecution ಮಾಡುವರಿಲ್ಲ. ಎರಡೂ ಘಟನೆಗಳಲ್ಲಿ ಮತ್ತೆ SFI ಗೆಳೆಯರು ಮಾತ್ರ ಪ್ರತಿಭಟಿಸಿದರು. ಪ್ರಗತಿಪರ ವಿದ್ಯಾರ್ಥಿ ವೇದಿಕೆ ಇದರ ಕುರಿತಾಗಿ ಒಂದು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತು. ಆದರೆ ಇದು ಸಹ ಸಾಂಕೇತಿಕವಾಗುತ್ತಿದೆ.

2008 -2011 ರ ಮೂರು ವರ್ಷಗಳ ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ, ಹಿಂದುಳಿದವರ ಮೇಲೆ ಸಂಘ ಪರಿವಾರ ನಡೆಸಿದ ಹಲ್ಲೆಗಳು ಅರ್ಥಾತ್ “ಅಲ್ಪಸಂಖ್ಯಾತ ಆಯೋಗದ ವರದಿ”  (ಆಧಾರ ; 25.2.2012 ತೆಹೆಲ್ಕ ಇಂಗ್ಲಿಷ್ ವಾರ ಪತ್ರಿಕೆ)

  • 19.8.2008: ರೈತರಾದ ಸದಾನಂದ ಪೂಜಾರಿ ಉಡುಪಿಯಲ್ಲಿ ಹತ್ಯೆಗೀಡಾದರು.
  • 7.8.2008 : ರೂಪಶ್ರೀ ಮತ್ತು ವಿಕಾರ್ ಅಹಮದ್ ಇಬ್ಬರ ಮೇಲೆ ವಿಟ್ಲದಲ್ಲಿ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದರು. ಮಂಗಳೂರಿನಲ್ಲಿ ದೀಪ ಹಾಗೂ ಅಬ್ದುಲ್‍ವಾಹಿದ್ ಅವರನ್ನು ಬಸ್ಸಿನಿಂದ ಎಳೆದು ಹಲ್ಲೆ ನಡೆಸಿದರು.
  • 15.12.2008: 24 ಮುಸ್ಲಿಂ ಯುವಕರು ಭಟ್ಕಳಕ್ಕೆ ಪಿಕ್ನಿಕ್‍ಗೆ ಹೋದಾಗ ನೂರಾರು ಕಾರ್ಯಕರ್ತರು ಈ ಮುಸ್ಲಿಂ ಗುಂಪಿನ ಮೇಲೆ ಹಲ್ಲೆ ನಡೆಸಿದರು. ಈ ಹಲ್ಲೆಯಲ್ಲಿ ಒಬ್ಬನು ಸಾವಿಗೀಡಾದ.
  • 24.1.2009: ಮಂಗಳೂರು ಪಬ್‍ನಲ್ಲಿ ಮಹಿಳೆಯರ ಮೇಲೆ ಹಲ್ಲೆ.
  • 16.8.2009: ಬಂಟ್ವಾಳದ ಬಳಿಯ ಮದರಾಸದಲ್ಲಿ ಹಂದಿಯ ಮಾಂಸವನ್ನು ಎಸೆದರು.
  • 3.11.2009: ಉಪ್ಪಿನಂಗಡಿಯ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಿಂದು ಮುಸ್ಲಿಂ ನಡುವೆ ಘರ್ಷಣೆ.
  • 19.11.2009: ಹಿಂದು ಹುಡುಗಿಗೆ ಪತ್ರ ಬರೆದ ಆರೋಪದ ಮೇಲೆ ಮಂಗಳೂರಿನ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ.
  • 25.1.2010 : ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚರ್ಚ್ ಮೇಲೆ ಧಾಳಿ ಹಾಗೂ ಮೇರಿ ಪ್ರತಿಮೆ ಧ್ವಂಸ.
  • 5.1.2011: ಗಲಭೆಕೋರರು ಮಂಗಳೂರಿನ ಪೋಲೀಸ್ ಸ್ಟೇಷನ್‍ಗೆ ದಾಳಿ.
  • 1.2.2011: ಬಂಟ್ವಾಳ ಪಟ್ಟಣದ ಅಭಿವೃದ್ದಿ ಛೇರ್ಮನ್ ಆದ ಗೋವಿಂದ ಪ್ರಭು ಅವರನ್ನು ಅವಮಾನಿಸಿದರು ಎಂದು ಪುತ್ತೂರು ಎ.ಎಸ್.ಪಿ ಅಮಿತ್ ಸಿಂಗ್ ಮೇಲೆ ಕೆಂಗಣ್ಣು. ಸುಮಾರು 200 ಜನ MP ನಳಿನ್ ಕುಮಾರ್ ಕಟೀಲ್ ಮತ್ತು MLA  ಮಲ್ಲಿಕ ಪ್ರಸಾದ್ ನೇತೃತ್ವದಲ್ಲಿ  ಎ.ಎಸ್.ಪಿ ಅಮಿತ್ ಸಿಂಗ್ ಮನೆಯನ್ನು ಕಬ್ಜಾ ಮಾಡಿದರು. ಕಡೆಗೆ ಪೋಲೀಸ್ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಯಿತು. 16.3.2011: ಕಾರ್ ಮೆಕ್ಯಾನಿಕ್ ಆಗಿದ್ದ ಬದೃದ್ದೀನ್ ಅನ್ನು ಹಿಂದು ಹುಡುಗಿಯನ್ನು ಪ್ರೇಮಿಸುತ್ತಿರುವ ಅಪಾದನೆಯ ಮೇಲೆ ಕೊಲೆ ಮಾಡಲಾಯಿತು. ವಿಚಾರಣೆಯ ವೇಳೆ ಹುಡುಗಿಯ ತಂದೆಯನ್ನು ಬಂಧಿಸಲಾಯಿತು.
  • 23.3.2011: ತನ್ನ ಗಂಡ ಮಹಮದ್ ಅಲಿ ಹಾಗೂ ಮಗ ಜಾವೆದ್ ಅಲಿ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಉಲ್ಲಾಳದ ಮೈಮೂನ ತನಿಖೆಗಾಗಿ ಸರ್ಕಾರವನ್ನು ಕೋರಿದ್ದಳು.
  •  26.2.2011: ಕಡಬದ ಜ್ಯೂಸ್ ಅಂಗಡಿಯ ಬಳಿ ಮುಸ್ಲಿಂ ಹುಡುಗ ಹಾಗೂ ಹಿಂದು ಹುಡುಗಿಯ ಮೇಲೆ ಹಲ್ಲೆ ನಡೆಸಿದರು.
  • 8.7.2011: ಜಾನುವಾರು ಸಾಗಣಿಕೆ ಆಪಾದನೆಯ ಮೇಲೆ ಪೆರಲ್‍ನ ನಿತ್ಯಾನಂದ ಅವರ ಮೇಲೆ ಹಲ್ಲೆ.
  • 18.7.2011 : ನಾಲ್ಕು ಮಕ್ಕಳ ತಾಯಿಯಾದ ಮಂಗಳೂರಿನ ಬುಶ್ರ ಅನ್ನು ಬಲವಂತವಾಗಿ ಹಿಂದು ಧರ್ಮಕ್ಕೆ ಮತಾಂತರಗೊಳಿಸಲಾಯಿತು.
  • 30.10.2011: ಸಂಘಪರಿವಾರದ ಮುಖವಾಣಿ “ಹೊಸ ದಿಗಂತ” ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆಯ ಸ್ಥಾನವನ್ನು ಸರ್ಕಾರದಿಂದ ನೀಡಲಾಯಿತು.
  •  26.12.2011: ಸಕಲೇಶಪುರದ ಆಸಿಫ್ ತಾನು ಪ್ರೇಮಿಸಿದ ಹಿಂದು ಹುಡುಗಿಯೊಂದಿಗೆ ಬೆಂಗಳೂರಿಗೆ ಓಡಿ ಬಂದಿದ್ದ. ಇವರಿಬ್ಬರನ್ನು ಹುಡುಕಿ ಅಪಹರಣ ಹಾಗೂ ಅತ್ಯಾಚಾರದ ಅಪಾದನೆಯ ಮೇಲೆ ಆಸಿಫ್ ಅನ್ನು ಬಂಧಿಸಲಾಯಿತು.
  • 28.12.2011:  ಮಂಗಳೂರಿನ ಹೆಬ್ರಾನ್ ದೇವರ ಚರ್ಚ್ ಮೇಲೆ ದಾಳಿ ಕಟ್ಟಡವನ್ನು ಧ್ವಂಸಗೊಳಿಸಲು ಯತ್ನ .

13 thoughts on “ಹಿಂದೂ ಕೋಮುವಾದ ಮತ್ತದರ ಕ್ಷುದ್ರ ವಿರಾಟರೂಪ

  1. abhilash

    ಅಲ್ಲಾ ಸ್ವಾಮಿ… ನಿಮ್ಮ ಈ ಲೇಖನವನ್ನು ಓದಿ ನಗಬೇಕೋ,ಅಳಬೇಕೋ ಅ೦ತ ಗೊತ್ತಾಗುತ್ತಿಲ್ಲ ನನಗೆ..!! ಹೀಗೆ ಪೂರ್ವಗ್ರಹಪೀಡಿತವಾಗಿ ಬರೆಯಲು ಕಾರಣವಾದರೂ ಏನು ಎ೦ದು ಸ್ಪಷ್ಟಪಡಿಸುವಿರಾ?.. ಸ್ವಾಮಿ.. ನಿಮ್ಮ ಮಾತನ್ನೆ ನ೦ಬುವುದಾದರೆ ಈ ಭಾರತಭೂಮಿ ಕೇವಲ ‘ಹಿ೦ದೂ ಸಾಮ್ರಾಜ್ಯ’ವಾಗಿ ಯಾವತ್ತೋ ರೂಪುಗೊಳ್ಳಬೇಕಾಗಿತ್ತು!! ಈ ದೇಶದಲ್ಲಿ ಮುಸ್ಲಿಮರು,ಕ್ರಿಶ್ಚಿಯನರು ಗಮನಾರ್ಹ ಸ೦ಖ್ಯೆಯಲ್ಲಿ ಇದ್ದಾರೆ೦ದರೆ ಅದಕ್ಕೆ ಕಾರಣ ಹಿ೦ದೂ ಸಮಾಜದ ಧರ್ಮ ಸಹಿಷ್ಣುತೆ. ಆರ್ ಎಸ್ ಎಸ್ ಅನ್ನು ಹೀಗೆ ದೂರುವ ನೀವು ತಾಕತ್ತಿದ್ದರೆ ಕೆ ಎಫ್ ಡಿ ಯನ್ನು ಅಥವ ಅದರ ಅ೦ಗಸ೦ಸ್ಥೆಗಳನ್ನು ದೂರಿ!! ನಿಮ್ಮಿ೦ದ ಅದು ಸಾದ್ಯವಿಲ್ಲ.. ಕಾರಣ ಆರ್ ಎಸ್ ಎಸ್ ನಿಮ್ಮ ಹೇಳಿಕೆಗಳನ್ನು ಸಹಿಸಿಕೊಳ್ಳುತ್ತದೆಯೆ೦ದು ನಿಮಗೆ ಚೆನ್ನಾಗಿ ಗೊತ್ತು!! ಆರ್ ಎಸ್ ಎಸ್ ಎಷ್ಟಾದರೂ ಹಿ೦ದೂ ಸ೦ಘಟನೆಯಲ್ಲವೆ.. ಹಿ೦ದೂ ಸಮಾಜದ ವೈಶಿಶ್ಟ್ಯತೆಯೇ ಅದು,ಔದಾರ್ಯತೆ!! ಏನು ಹೇಳಿದಿರಿ ನೀವು? ಧಾರ್ಮಿಕ ಮತಾ೦ಧತೆಯನ್ನು ಆರ್ ಎಸ್ ಎಸ್ ಹರಡಿಸುತ್ತಿದೆಯೆ೦ದೆ? ಸ್ವಾಮಿ, ಒ೦ದು ಕ್ಷಣ ನಿಮ್ಮ ಮೆದುಳನ್ನು ಉಪಯೋಗಿಸಿಕೊ೦ಡು ಯೋಚಿಸಿ, ದೇಶದೊಳಗೆ ಅಲ್ಲೆಲ್ಲೊ ಇಲ್ಲೆಲ್ಲೊ ಒ೦ದಿಷ್ಟು ಭಯೋತ್ಪಾದಕರು ಸೇರಿಕೊ೦ಡು ಅಷ್ಟೆಲ್ಲಾ ಉತ್ಪಾತ ಸೃಷ್ಟಿಸಬಲ್ಲರಾದರೆ,ಅಖ೦ಡ ಭಾರತದಾದ್ಯ೦ತ ವ್ಯಾಪಿಸಿರುವ ಆರ್ ಎಸ್ ಎಸ್ ಮನಸು ಮಾಡಿದಲ್ಲಿ ಏನೆಲ್ಲಾ ಆಗಬಹುದು?.. ಇಷ್ಟಕ್ಕೂ ಆರ್ ಎಸ್ ಎಸ್ ಗೆ ‘ಹಿ೦ದೂ ರಾಷ್ಟ್ರ’ ಎ೦ಬ ಕಲ್ಪನೆಯಲ್ಲಿ ಯಾವ ಗೊ೦ದಲವೂ ಇಲ್ಲ.. ಆದರೆ,ನಿಮ್ಮ೦ತಹ ಸೋ ಕಾಲ್ಡ್ ಬುದ್ಧಿಜೀವಿಗಳಿಗೆ, ಸೊ ಕಾಲ್ಡ್ ಜಾತ್ಯಾತೀತರಿಗೆ ಮಾತ್ರ ಈ ವಿಷಯದಲ್ಲಿ ಗೊ೦ದಲವಿದೆ,ಅಲ್ಲವೆ? ನಿಮಗೊ೦ದು ವಿಷಯ ಗೊತ್ತಾ..ಪಾಶ್ಚಿಮಾತ್ಯ ದೇಶಗಳಲ್ಲಿ ನೀವು ಪೂರ್ವನಿರ್ಧಾರಿತವಾಗದೆ ಪಕ್ಕದ ಮನೆಗೆ ಭೇಟಿ ಕೊಟ್ಟರೆ ನಿಮಗೆ ಅಲ್ಲಿ ಸಿಗುವುದು ‘ಇನ್ಫಾರ್ಮೇಶನ್ ಕೊಟ್ಟು ನಾಳೆ ಬನ್ನಿ’ ಎ೦ಬ ಸ್ವಾಗತ!! ಆದರೆ ನಮ್ಮಲ್ಲಿ ಅದೇ ಥರ ಮಾಡಿದರೆ ಸಿಗುವುದು ಸ೦ತೃಪ್ತಿಯ ಮುಗುಳ್ನಗೆಯ ಸ್ವಾಗತ!! ಇದು ನಮ್ಮ ‘ಹಿ೦ದೂ ಸ೦ಸ್ಕೃತಿ’ಯೆ೦ದರೆ!! ಇಸ್ಲಾಮಿಕ್ ದೇಶಗಳಲ್ಲಿ ನಮ್ಮ ದೇಶದ ಮುಸ್ಲಿಮನನ್ನು ಸ೦ಭೋಧಿಸೋದು ‘ಹಿ೦ದೂಸ್ಥಾನಿ’ಯೆ೦ದೇ!! ಹಿ೦ದೂ ಎ೦ದರೆ ಅದು ಜಾತಿ,ಮತ,ಪ೦ಗಡ ಎಲ್ಲವನ್ನೂ ಮೀರಿದ ಸಮಷ್ಟಿಭಾವ..ಅದು ಜೀವನ ಧರ್ಮ… ಇ೦ಥಹ ನೈತಿಕತೆಯನ್ನೇ ಆರ್ ಎಸ್ ಎಸ್ ತನ್ನವರಿಗೆ ಭೋದಿಸುವುದು.. ಅ೦ದಮಾತ್ರಕ್ಕೆ ಅದು ಕೇಸರೀಕರಣ ಹೇಗಾಗುತ್ತೆ ಸ್ವಾಮಿ? ಹಾಗದರೆ ಈ ದೇಶದಲ್ಲೇ ಹುಟ್ಟಿ,ಇಲ್ಲಿಯೇ ಬೆಳೆದು,ಇಲ್ಲಿಯದೇ ನೀರು ಕುಡಿದು,ಇಲ್ಲಿಯದೇ ಅನ್ನ ತಿ೦ದು ‘ನಮ್ಮ ದೇಶ ಪಾಕಿಸ್ತಾನ,ನಮ್ಮ ಅಜೆ೦ಡಾ ಇಸ್ಲಾ೦ ರಾಷ್ಟ್ರ’ ಅ೦ತ ಭೋದಿಸುವ ಅನೇಕಾನೇಕ ಮದ್ರಸಗಳು ನಿಮ್ಮ ದೃಷ್ಟಿಯಲ್ಲಿ ಏನು? ನೀವು ಹೇಳಿದಿರಿ,ಟಿಪ್ಪು ಸುಲ್ತಾನನು ದೇಶಭಕ್ತ ಎ೦ದು. ಸರಿ ಸ್ವಾಮಿ,ಅದನ್ನು ನಿರೂಪಿಸಿ!! ಅವನು ಬ್ರಿಟಿಷರ ವಿರುದ್ಧ ಹೋರಾಡಿದ ಏಕೈಕ ಕಾರಣ ಅವನ ಸ್ವಾರ್ಥವೆ ಹೊರತು ಬೇರೇನಲ್ಲ. ಭಾರತಾದ್ಯ೦ತ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸುವ ಇರಾದೆಯಲ್ಲಿದ್ದ ಅವನು.. ಅವನ ದಾಳಿಗೆ ಸಿಲುಕಿದ ಅದೆಷ್ಟೋ ಹಿ೦ದೂ ದೇವಸ್ಥಾನಗಳು ಇ೦ದಿಗೂ ಅದಕ್ಕೆ ಸಾಕ್ಷಿಯಾಗಿವೆ, ಅದೆಷ್ಟೋ ಹಿ೦ದೂ ತರುಣಿಯರು ಅವನ ಅ೦ತಃಪುರ ಸೇರಿ ಬಲವ೦ತವಾಗಿ ಮತಾ೦ತರವಾದರು.. ಒ೦ದು ವೇಳೆ,ಬ್ರಿಟಿಷರು ಆಕ್ರಮಣ ನಡೆಸದೇ ಇದ್ದಿದ್ದರೆ ಇತಿಹಾಸ ಇನ್ನಷ್ಟು ಘೋರವಾಗಿರುತಿತ್ತು!!ಬಹುಶಃ ನಿಮ್ಮ ಹೆಸರು ಕೂಡ ಶ್ರೀಪಾದ ಭಟ್ ಅ೦ತ ಇರದೆ,ಇನ್ಯಾವುದೊ ಭಟ್ಟ್ ಅಥವ ಮಹಮ್ಮದ್,ಖಾನ್ ಅ೦ತ ಇರುತಿತ್ತು!! ಕಾ೦ಗ್ರೆಸ್ ಆಳ್ವಿಕೆಯಲ್ಲಿಯೇ ನಮ್ಮ ಇತಿಹಾಸಗಳೆಲ್ಲ ಹೇಗೆ ತಿರುಚಲ್ಪಟ್ಟವು ಅ೦ತ ಗೊತ್ತಾ? ನಮ್ಮ ದೇಶದ ಮೇಲೆ ದ೦ಡೆತ್ತಿ ಬ೦ದ ಘೋರಿ,ಘಜಿನಿಗಳು ನಮ್ಮ ಮಕ್ಕಳ ಪಠ್ಯದಲ್ಲಿ ‘ಮಹಾನ್ ಸೇನಾನಿಗಳು’ ಎ೦ದು ಬಿ೦ಬಿಸಲ್ಪಟ್ಟರು, ಅದೇ ದ೦ಡುಕೋರರಿಗೆ ಎದಿರೇಟು ನೀಡಿದ ಪೃಥ್ವಿರಾಜ ಚೌಹಾನನ೦ತಹ ಕಲಿಗಳು ಇತಿಹಾಸದ ಪುಟಗಳಲ್ಲಿ ಅಜ್ನ್ಯಾತವಾಗಿಯೆ ಉಳಿದರು.. ‘ಅಲೆಕ್ಸಾ೦ಡರ್ ದ ಗ್ರೇಟ್’ ಎ೦ದು ಭೋಧಿಸಲ್ಪಡಲಾಯಿತೇ ಹೊರತು ಅವನಿಗೆ ಮಣ್ಣು ಮುಕ್ಕಿಸಿದ ಏಕೈಕ ವೀರ ಪುರೂರವ ಯಾರೆ೦ದೇ ಹೆಚ್ಚಿನವರಿಗೆ ಗೊತ್ತಿಲ್ಲ!! ಅದನ್ನೆಲ್ಲಾ ಇ೦ದಿನ ಮಕ್ಕಳಿಗೆ ಹೇಳಿಕೊಡುವ ಆರ್ ಎಸ್ ಎಸ್ ನ ಯೋಜನೆಯೇ ‘ರಾಷ್ಟ್ರೋತ್ಥಾನ ಸಾಹಿತ್ಯ’. ಇತಿಹಾಸವನ್ನು ಸರಿಯಾಗಿ ಹೇಳಿಕೊಡುವುದು ಕೋಮುವಾದವೆ? ಇಷ್ಟಕ್ಕೂ ಬೇರೆ ಸಮುದಾಯದ ಮೇಲೆ ಧಾಳಿ ನಡೆಸದ ಜಗತ್ತಿನ ಏಕೈಕ ಸಮುದಾಯವೆ೦ದರೆ ಅದು ಹಿ೦ದೂ ಸಮುದಾಯ… ಬೇರೆ ದೇಶದ ಮೇಲೆ ಧಾಳಿ ನಡೆಸದ ರಾಷ್ಟ್ರ ನಮ್ಮ ಭಾರತ… ಹೇಳಿ ಸ್ವಾಮಿ, ಆರ್ ಎಸ್ ಎಸ್ ನನ್ನಾಗಲೀ,ಹಿ೦ದೂ ಸಮಾಜವನ್ನಾಗಲಿ ದೂರುವುದಕ್ಕೆ ನಿಮಗೆ ಜರೂರತ್ತಾದರೂ ಏನು? ಗುಜರಾತಿನಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ ಎ೦ದು ನೀವೆಲ್ಲಾ ಬೊ೦ಬ್ಡಾ ಹೊಡೆಯುತಿದ್ದೀರಿ,ಆದರೆ ಸ್ವತಹ ಗುಜರಾತಿನ ಮುಸ್ಲಿಮರು ಮೋದಿಯನ್ನು ತಮ್ಮ ನಾಯಕನೆ೦ದು ಹೃತ್ಪೂರ್ವಕವಾಗಿ ಒಪ್ಪಿಕೊ೦ಡು ಅದೆಷ್ಟೋ ವರ್ಷಗಳೇ ಕಳೆದಿವೆ… ಅದೇ ರಾಜ್ಯದ ಖತೀಬನೊಬ್ಬ ಮೋದಿಯನ್ನು ಶ್ಲಾಘಿಸುತ್ತಾನೆ, ಬೇರಾವುದೋ ರಾಜ್ಯದಲ್ಲಿ ಕುಳಿತ ನಿಮ್ಮ೦ತಹವರು ‘ಗುಜರಾತಿನಮುಸ್ಲಿಮರಿಗೆ ಅನ್ಯಾಯವಾಗಿದೆ’ ಎ೦ದು ಪು೦ಗಿ ಊದುತ್ತಿದ್ದೀರಿ…!! ಎ೦ತಹ ವಿಚಿತ್ರ ಅಲ್ಲವೆ? ಪ್ರಪ೦ಚದಾದ್ಯ೦ತ ಭುಸುಗುಡುತ್ತಿರುವುದು ಇಸ್ಲಾಮಿಕ್ ಭಯೋತ್ಪಾದನೆಯೇ ಹೊರತು ಹಿ೦ದೂ ಮತಾ೦ಧತೆಯಲ್ಲ.. ಬಹುಶ ‘ಹಿ೦ದೂ ಮತಾ೦ಧತೆ’ ಎ೦ಬ ಕಾಲ್ಪನಿಕ ಪದ ಹುಟ್ಟು ಹಾಕಿದ್ದೇ ನಿಮ್ಮ೦ತಹವರು!! ಇನ್ನು ಎ೦ ಎಫ್ ಹುಸೈನ್ ಬಗ್ಗೆ ಹೇಳಬೇಕೆ೦ದರೆ,ನೀವು ಹೇಳಿದಿರಿ ಅವರು ಹಿ೦ದೂ ಸ೦ಘಟನೆಗಳಿಗೆ ಹೆದರಿ ದೇಶಭ್ರಷ್ಟರಾದರು ಎ೦ದು. ಸ್ವಾಮಿ ಅವರು ತಪ್ಪು ಮಾಡಿಲ್ಲವೆ೦ದಾದಲ್ಲಿ ಪಲಾಯನ ಮಾಡಿದ್ದೇಕೆ? ಮು೦ಬೈಯಲ್ಲಿ ನಡೆದ ಪೈಶಾಚಿಕ ದಾಳಿಯ ಸೂತ್ರಧಾರ ಕಸಬ್ ನಿಗೆ ಅಷ್ಟೆಲ್ಲಾ ಭದ್ರತೆ ಒದಗಿಸಿದ ನಮ್ಮ ಘನ ಸರಕಾರ ಯಕಶ್ಚಿತ್ ಹುಸೈನರಿಗೆ ರಕ್ಷಣೆ ಕೊಡಲಾರದೆ?! ಹುಸೈನರ ಬಗ್ಗೆ ಹೇಳುವ ನೀವು ಅದೇ ಸಮುದಾಯದ ಇನ್ನೊಬ್ಬ ದಿಗ್ಗಜ ಸಲ್ಮಾನ್ ರಶ್ದಿ ಬಗ್ಗೆ ಜಾಣ ಮೌನ ತಾಳಿದ್ದೇಕೆ? ಆದರೆ ರಶ್ದಿ ಹುಸೈನರ೦ತೆ ಪಲಾಯನ ಮಾಡಲಿಲ್ಲ, ‘ತಾನು ತಪ್ಪು ಮಾಡಿಲ್ಲ’ ಎ೦ದು ಖಚಿತವಾಗಿ ಹೇಳಿಕೊ೦ಡರು..ಮಾತ್ರವಲ್ಲ ನಿರ್ಭೀತಿಯಿ೦ದಲೇ ಭಾರತಕ್ಕೆ ಬ೦ದು ಹೋಗುತ್ತಿದ್ದರಲ್ಲಾ?..ತಪ್ಪು ಮಾಡದವನ ಲಕ್ಷಣವೇ ಅದು!! ಹುಸೈನರು ತಪ್ಪು ಮಾಡಿಲ್ಲವೆ೦ದಾದಲ್ಲಿ ಅವರು ಕೂಡ ರಶ್ದಿಯ೦ತೆ ನಿರ್ಭೀತಿಯಲ್ಲೇ ಇರಬಹುದಿತ್ತಲ್ಲಾ? ಇಷ್ಟಕ್ಕೂ ಹುಸೈನರ ಮೇಲೆ ‘ಫತ್ವಾ’ದ೦ತಹ ಆದೇಶವೇನಿರಲಿಲ್ಲ.. ಜನರು ಅವರಿ೦ದ ಬಯಸಿದ್ದು ಕೇವಲ ಕ್ಷಮೆಯನ್ನು… ಅಷ್ಟೆ! ಆದರೆ, ರಶ್ದಿ ಮೇಲೆ ಮೌಲ್ವಿಗಳು ಹೇರಿದ್ದು ‘ಫತ್ವಾ”.!! ಈಗ ನಿಮ್ಮನ್ನೇ ಕೇಳಿಕೊಳ್ಳಿ ಯಾರು ಮತಾ೦ಧರು ಎ೦ದು!! ಜ್ಯೋತಿಃಶಾಸ್ತ್ರ ಪೊಳ್ಳು ಎ೦ಬ ನಿರ್ಧಾರಕ್ಕೆ ಬರುವ ಮು೦ಚೆ ಒಮ್ಮೆ ಯೋಚಿಸಿ, ವೈಜ್ನ್ಯಾನಿಕವಾಗಿ ವಿವರಿಸಲ್ಪಡುವ ಪ್ರತಿಯೊ೦ದು ನೈಸರ್ಗಿಕ ಘಟನಾವಳಿಗಳೂ ಅದು ಹೇಗೆ ಒ೦ದು ಪ೦ಚಾ೦ಗದೊಳಗೆ ಅಷ್ಟೊ೦ದು ಕರಾರುವಕ್ಕಾಗಿ ಬಿಡಿಸಲ್ಪಟ್ಟಿವೆ?.. ಕಾಲಮಾನದ ಪ್ರತಿ ಘಳಿಗೆಯೂ ಕೂಡ ಅಲ್ಲಿ ಅತ್ಯ೦ತ ಸ್ಫುಟವಾಗಿ ವಿವರಿಸಲ್ಪಟ್ಟ ಬಗೆಯೆ೦ತು?.. ಇಷ್ಟಕ್ಕೂ ಮೂಢನ೦ಬಿಕೆಗಳೇನು ಹಿ೦ದೂ ಸಮಾಜದಲ್ಲಿ ಮಾತ್ರ ಇರುವ೦ತೆ ಢ೦ಗೂರ ಹೊಡೆಯುತ್ತಿದ್ದೀರಲ್ಲಾ, ಉಳಿದ ಸಮುದಾಯಗಳಲ್ಲೇನು ಎಲ್ಲಾ ಸರಿಯಾಗಿದೆಯೆ? ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎ೦ದು ಹೇಳಿದ ಗೆಲಿಲಿಯೋನನ್ನು ಕೊ೦ದು ಹಾಕಿದ್ದು ಚರ್ಚ್ ಆಢಳಿತ…
    ಸ್ವಾಮಿ.. ಮೊದಲು ವಾಸ್ತವವನ್ನು ಅರಿಯಿರಿ. ಆರ್ ಎಸ್ ಎಸ್ ಆಗಲಿ,ಅದರ ಅ೦ಗಸ೦ಸ್ಥೆಗಳಾಗಲೀ ಯಾವತ್ತೂ ಮತಾ೦ಧತೆಯನ್ನು ಹರಡುವುದಿಲ್ಲ.. ಆದರೆ ಧರ್ಮ ಪ್ರಜ್ನ್ಯೆಯನ್ನು ಮೂಡಿಸುವ ಕೈ೦ಕರ್ಯವನ್ನು ನಿಷ್ಟೆಯಿ೦ದ ಮಾಡುತ್ತಿವೆ.. ಅದು ತಪ್ಪು ಎ೦ದು ನಿಮಗನಿಸಿದಲ್ಲಿ ಮೊದಲು ಮದ್ರಸಗಳು,ಚರ್ಚ್ ಗಳು ನಡೆಸುತ್ತಿರುವ ಅ೦ತಹದ್ದೇ ಕಾರ್ಯಗಳನ್ನು ತಡೆದು ಬನ್ನಿ… ಯಾಕೆ೦ದರೆ, ಇದುವರೆಗೂ ನಮ್ಮ ದೇಶದಲ್ಲಿ ಬಲವ೦ತವಾಗಿ ಮತಾ೦ತರವಾಗುತ್ತಿರುವವರು ಹಿ೦ದೂಗಳೇ ಹೊರತು ಅನ್ಯಮತೀಯರಲ್ಲ.. ಅದಕ್ಕೆ ಕಾರಣ ನಾನು ಬಿಡಿಸಿ ಹೇಳಬೇಕಿಲ್ಲವಷ್ಟೆ?..
    ಧರ್ಮೋ ರಕ್ಷತೀ ರಕ್ಷಿತಃ ಎನ್ನುವ ಹಿ೦ದೂ ಸಮಾಜ ಚಿರಾಯು… ಅದರ ಸೇವಾ ಕಾರ್ಯ ಮಾಡುತ್ತಿರುವ ಆರ್ ಎಸ್ ಎಸ್ ನಿಜವಾದ ದೇಶಪ್ರೇಮಿ ಸ೦ಘ.
    ಹೇಳುವುದಿದ್ದಲ್ಲಿ,ಸ೦ದೇಹಗಳಿದ್ದಲ್ಲಿ ನಿಸ್ಸ೦ಕೋಚವಾಗಿ ಕೇಳಿ..

    Reply
  2. ಅತಿ ಬುದ್ದಿವಂತ

    ಆನೆಯನ್ನು ವಿವರಿಸು ಎಂದು ಕುರುಡನಿಗೆ ಹೇಳಿದರೆ ನಿಮ್ಮ ಹಾಗೆ ವಿವರಣೆ ಕೊಡುವುದು ಶ್ರೀಪಾದರೆ

    Reply
  3. jagadishkoppa

    ಅಭಿಲಾಷ್ ಅವರೇ, ಆವೇಶದಲ್ಲಿ ಆರ್. ಎಸ್. ಎಸ್. ಅನ್ನು ಸಮರ್ಥಿಸುವ ಮುನ್ನ ಭಾರತದ ಚರಿತ್ರೆಯನ್ನ ಮುಕ್ತ ಮನಸ್ಸಿನಿಂದ ಓದಿ. ಸಾಧ್ಯವಾದರೆ, ಆದಿತ್ಯ ಮುಖರ್ಜಿ ಮತ್ತು ಮೃದುಲಾ ಮುಖರ್ಜಿ ಇವರು ಸಂಪಾದಿಸಿರುವ R.S.S. Texts And Murder Of Mahatma ಕೃತಿಯನ್ನ ಗಮನಿಸಿ. ಈ ಕೃತಿಯಲ್ಲಿ ಈ ದೇಶದ 50ಕ್ಕೂ ಹೆಚ್ಚು ಇತಿಹಾಸ ತಜ್ಞರು ಸಂಶೋಧನೆ ಮಾಡಿ ಕಲೆ ಹಾಕಿರುವ ಅಂಕಿ ಅಂಶಗಳಿವೆ. ಇದರ ಪ್ರಕಾಶಕರು, Sage Publication New Delhi
    ಡಾ. ಎನ್ ಜಗದೀಶ್ ಕೊಪ್ಪ, ಧಾರವಾಡ

    Reply
    1. manjunath bandi

      as we under stand our mother,, you try to understand Hindustan,,,,,, compare what we had, what we have.

      Reply
  4. Naveen

    LoL!! Article is funny! Writer trying to push as much as possible against RSS. Seems he is one of the UGC scaled professor of an university who has all the time in this world to make research against RSS!

    Reply
  5. venu

    hindu samaja esto pettu tinnutta beLedide, nimmantha ghora viddhwamsarenu adakke lekka illa, nimmanthahavara moodalike odida matrakke nijavada hindu dharma kadaladu, adu innastu dhrudavaguttade…

    Reply
  6. RAMESH M

    ಕೆಲವು ಕೆಲಸವಿಲ್ಲದ ಜನ, ಸಮಾಜದಲ್ಲಿ ಏನನ್ನೋ ಹೇಳಿ ಯಾರನ್ನೋ ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಹಾಗೇ ಸಮಾಜದಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುತ್ತಾರೆ. ಮಾನ್ಯ ಬಿ. ಶ್ರೀಪಾದ ಭಟ್ ರವರ ಮಾಹಾನ್ ಸಂಶೋದನೆಯ ಉದ್ದೇಶವೂ ಅಷ್ಟೇ ಅನ್ನಿಸುತ್ತದೆ. ಆರ್. ಎಸ್. ಎಸ್ ಅನ್ನು ತೆಗಳಿ , ಇತ್ತೀಚಿಗೆ ಬೆಳೆಯುತ್ತಿರುವ ಬುದ್ದಿ ಜೀವಿ (?) ವರ್ಗದಲ್ಲಿ ಗುರುತಿಸಿ ಕೊಂಡು , ಸಮಾಜಕ್ಕೆ ನಯಾ ಪೈಸೆಯಷ್ಟು ಉಪಯೋಗವಾಗದಿದ್ದರೂ ಏನೋ ಸಾಧಿಸಿದ್ದೇವೆ ಎಂದು ಗರ್ವ ಪಟ್ಟು ಬ್ರಾಮಕ ಲೋಕದಲ್ಲಿ ಸಂಭ್ರನಿಸಿ ಒಂಥರಾ ಖುಷಿ ಪಡುವುದು.

    Reply
  7. ದೊಡ್ಡಿ ಮೂರ್ತಿ

    ಮಾನ್ಯ ಆರ್.ಎಸ.ಆಸ್. ಅಬಿಮಾನಿಗಳಿಗೆ ನನ್ನದೊಂದು ಪ್ರಶ್ನೆ ಇದೆ.
    ನಿಮ್ಮ ಮುಂದೆ ಒಬ್ಬ ಮನುಷ್ಯ ಇದ್ದಾನೆ ಎಂದಿಟ್ಟುಕೊಳ್ಳಿ. ಆತನಿಗೆ ತಿನ್ನಲು ಅನ್ನವಿಲ್ಲದೆ, ಸರಿಯಾದ ಸೂರಿಲ್ಲದೆ, ಕಂಗೆಟ್ಟಿರುತ್ತಾನೆ ಎಂದುಕೊಳ್ಳಿ. ಆಗ ತಾವುಗಳು ಆತನಿಗಾಗಿ ಏನು ಮಾಡುತ್ತೀರಿ? ಸರಿ. ಅದು ಹಾಗಿರಲಿ, ಇಡೀ ದೇಶದ ಬಹುಸಂಖ್ಯಾತ ಜನರು ಅಂಥದೇ ಸ್ಥಿತಿಯಲ್ಲಿದ್ದಾಗ ನಿಮ್ಮಂಥ ಅಪ್ಪಟ ದೇಶ ಭಕ್ತರು, ಧರ್ಮೋದ್ಧಾರಕರು ಏನು ಮಾಡಬಹುದು? ನೀವು ಮಾಡುತ್ತಾ ಬಂದಿರುವುದೇನೆಂದರೆ ಅಂತ ಜನರ ಬಳಿ ಹೋಗಿ ಅವರ ದುಸ್ಥಿತಿಗೆ ಆ ನೆರೆಮನೆಯವನೆ ಕಾರಣ ಎಂದು ನಂಬಿಸಿ ಎತ್ತಿಕಟ್ಟುವುದು ಮತ್ತು ಅವನಿಗೆ ಒಂದು ಪೊಳ್ಳು ಧರ್ಮ ಬೋಧನೆ ಮಾಡಿ ಅವನ ದುಸ್ಥಿತಿಯನ್ನು ನಿಮ್ಮ (ಕ್ಷಮಿಸಿ, ನಾನು ಇಲ್ಲಿ ಪಟ್ಟಭದ್ರರ ಬಗ್ಗೆ ಮಾತಾಡುತ್ತಿದ್ದೇನೆ.) ರಾಜಕೀಯ ತೆವಲುಗಳಿಗೆ ಬಲಿಪಶುಗಳನ್ನಾಗಿ ಮಾಡಿ, ಬೇಳೆ ಬೇಯಿಸಿಕೊಳ್ಳುವುದು. ಕಳೆದ 80 ವರ್ಷಗಳ ಇತಿಹಾಸ ನಮಗೆ ಅನುಮಾನಕ್ಕೆ ಎಡೆ ಇಲ್ಲದಂತೆ ರುಜುವಾತುಪಡಿಸಿರುವ ಸತ್ಯ ಸಂಗತಿಯಿದು.
    ನಿಮಗೆ ಅಗತ್ಯವಿಲ್ಲದೆ, ಅರ್ಥವಾಗದ ಪ್ರಶ್ನೆ ಇದು ಅಂತ ನನಗೆ ಚನ್ನಾಗಿ ಗೊತ್ತು. ಯಾಕೆಂದರೆ ನಿಮ್ಮ ಪರಿವಾರ ಸ್ತಾಪನೆಯಾದ 80 ವರ್ಷಗಳಿಂದಲೂ ಅದನ್ನು ಆದ್ಯತೆಯ ವಿಚಾರವಾಗಿಟ್ಟುಕೊಂಡಿಲ್ಲ.ಈ ದೇಶದ ಅಸ್ಪೃಶ್ಯತೆ, ಜಾತಿವಾದ, ನಿರುದ್ಯೋಗ, ಬಡತನ, ಮಹಿಳಾ ಶೋಷಣೆ ಮುಂತಾದ ಪಿಡುಗುಗಳು ಎಂದಿಗೂ ಅವರ ಅಜೆಂಡಾ ಗೆ ಬರುವುದೇ ಇಲ್ಲ,
    ಅದೂ ಹೋಗಲಿ, ಭ್ರಷ್ಠಾಚಾರದ ವಿಷಯ. ದೆಹಲಿಯ ಭ್ರಷ್ಠರ ಬಗ್ಗೆ ಒಬ್ಬ ಸ್ವಾಮಿಯನ್ನು ಮತ್ತೊಬ್ಬ ಗಾಂಧಿವಾದಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ ಹೊರಟ ತಾವುಗಳು, ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಅತ್ಯಂತ ಭ್ರಷ್ಠ ಸರ್ಕಾರ ಏನೆಲ್ಲಾ ಮಾಡುತ್ತಿದ್ದರೂ ಇದೇ ಭ್ರಷ್ಠರು ಕೊಟ್ಟ ಕಡುಬನ್ನು ಬಾಯಿಗೆ ತುರುಕಿಕೊಂಡು ತೆಪ್ಪಗೆ ಕೂತುಬಿಟ್ಟಿದ್ದಾರೆ. ನಾಚಿಕೆಗೇಡು!
    ಹೀಗೆ ಹಾಡಹಗಲೇ ಅವರ ಬಂಡವಾಳ ಬಯಲಾಗುತ್ತಿದ್ದರೂ ಕೂಡ ಕೆಲವು ಹಿಂದೂ ಅಬಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ, ಅದು ಹೇಗಿದೆ ಎಂದರೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ರೀತಿ. ಒಂದೋ ಅವರು ತಮ್ಮ ಸ್ವಂತ ಮೆದುಳನ್ನು ಆರ್. ಎಸ್.ಎಸ್.ನವರಿಗೆ ಬಾಡಿಗೆ ಕೊಟ್ಟಿರಬೇಕು. ಅಥವಾ ಅತವಾ ಅವರಿಗೆ ಆರ್.ಎಸ್.ಎಸ್. ಬೆಂಬಲದಿಂದ ವಿಶೇಷ ಲಾಭಗಳಿರಬೇಕು.ಎರಡೂ ಇಲ್ಲವಾದರೆ ಅವರು ಸಮಾಧಾನಚಿತ್ತದಿಂದ ತಮ್ಮ ಸುತ್ತಲಿನ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ತಮ್ಮ ಎರಡೂ ಕಣ್ಣುಗಳನ್ನು ತೆರೆದು ಮುಕ್ತವಾಗಿ ಗಮನಿಸಬೇಕು. ನಿಮ್ಮ ಪೂರ್ವಾಗ್ರಹ ಪೀಡಿತ ದೃಷ್ಟಿಕೊನವನ್ನು ಬದಲಾಯಿಸಿಕೊಳ್ಳಬೇಕಾಗಿ ವಿನಂತಿ. ಇಲ್ಲವಾದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ.

    Reply
  8. manjunath bandi

    respected sir,
    due to our attitude and chaorector we have under the control of Moguls, dutch, french, British, since from more than 500 years. but in present politicians are planing to divide our India based on cast system . but r s s is working for unity of Hindus.commenting on r s s shows your mental ebility.

    Reply
  9. manjunath bandi

    the communist charector of Indians like you sir,, we have been slaves since from 500 years under………
    what you say…. mera bharath mahan

    Reply
  10. B.sripad bhat

    ನಿಜದ ನೆಲೆಗಟ್ಟಿನಲ್ಲಿ ಸತ್ಯವನ್ನು ಅನ್ವೇಷಿಸ ಬಯಸುವವರು ಈ ಕೆಳಗಿನ ಕೆಲವು ಪುಸ್ತಕಗಳನ್ನು ಓದಿ
    ಎ.ಜಿ.ನೂರಾನಿ ಅವರ ““ BJP : Child of RSS and Heir to Hindu Mahasabha”
    ಅಚಿನ್ ಪಟ್ನಾಯಕ್ ಅವರ ” “ The Enemy within”
    ಪ್ಯಾರೇಲಾಲ್ ಅವರ ” “ Mahatma Gandhi : The Last Phase”
    ಕಾಂಚ ಐಲಯ್ಯ ಅವರ ““Why I am not a hindu”
    ಪ್ರಳಯ್ ಕನುಂಗೋ ಅವರ ““ Review of RSS’s Tryst with politics From hegdevaar to sudarshan

    ರೊಮಿಲಾ ಥಾಪರ್ ಅವರ ““History of India”

    Reply
    1. shrikanth

      ree mahashayare neevu kotta booksgalannu naavu yake oda beku..? romila thapar obba edapanthiya chintaki annodu jagattige gottide. siddantagalige antikollada vastavavadigala books iddare heli odona

      Reply

Leave a Reply to manjunath bandi Cancel reply

Your email address will not be published. Required fields are marked *