Monthly Archives: June 2012

ಮತ್ತೊಂದು ಹೊಸ ಪತ್ರಿಕೆ!

– ರಾಜೇಶ್ ದೇವನಹಳ್ಳಿ

ವಿಜಯ ಸಂಕೇಶ್ವರರ ವಿಆರ್‌ಎಲ್ ಮೀಡಿಯಾ ಲಿಮಿಟೆಡ್ ಮತ್ತಿನ್ನೊಂದು ಹೊಸ ದಿನಪತ್ರಿಕೆಯನ್ನು ಘೋಷಿಸಿದೆ. ಬರಹಗಾರ ಮತ್ತು ದೀರ್ಘಕಾಲಿನ ಪತ್ರಕರ್ತ ಸತೀಶ್ ಚಪ್ಪರಿಕೆ ಇನ್ನೂ ಹೆಸರಿಟ್ಟಿಲ್ಲದ ಈ ಹೊಸ ಪತ್ರಿಕೆಯ ಪ್ರಧಾನ ಸಂಪಾದಕ ಜವಾಬ್ದಾರಿ ಹೊತ್ತಿದ್ದಾರೆ. ನಿನ್ನೆಯಷ್ಟೆ ಅಧಿಕಾರ ವಹಿಸಿಕೊಂಡ ಚಪ್ಪರಿಕೆ ಇಂದು ವಿಜಯವಾಣಿ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿದ್ದಾರೆ. ಸಹಾಯಕ ಸಂಪಾದಕರಿಂದ ಹಿಡಿದು ಟ್ರೈನಿ ಉಪಸಂಪಾದಕರವರೆಗೆ ಎಲ್ಲರೂ ಬೇಕಿದೆ. ಆಸಕ್ತರು ಇನ್ನು ಅರ್ಜಿ ಹಾಕಬಹುದು.

ಎರಡು ತಿಂಗಳ ಹಿಂದೆಯಷ್ಟೇ ವಿಜಯವಾಣಿ ಆರಂಭಿಸಿದ ವಿಆರ್‌ಎಲ್ ಮೀಡಿಯಾ ಲಿಮಿಟೆಡ್‌ನಿಂದ ಇಷ್ಟು ಬೇಗ ಇಂತಹದೊಂದು ಘೋಷಣೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕಾರಣ, ಇನ್ನೂ ವಿಜಯವಾಣಿಯೇ ಗಟ್ಟಿಯಾಗಿ ನೆಲೆಯೂರುವ ಮೊದಲೇ ಇಂತಹದೊಂದು ಇನ್ನೊಂದು ಪತ್ರಿಕೆ..ಎಂದಾಕ್ಷಣ ಅಚ್ಚರಿ ಸಹಜ. ವಿಜಯ ಸಂಕೇಶ್ವರರ ತಲೆಯಲ್ಲಿ ಯಾವ ಯೋಚನೆ ಇದೆಯೋ ಗೊತ್ತಿಲ್ಲ. ಯಾವ ಕೋನದಿಂದ ಯೋಚಿಸಿದರೂ ಸಂಕೇಶ್ವರರ ದೂರದೃಷ್ಟಿ ಏನಿರಬಹುದು ಎಂದು ಗೊತ್ತಾಗುತ್ತಿಲ್ಲ.

ಹಿಂದೆ ವಿಜಯ ಕರ್ನಾಟಕ ಪ್ರಸರಣದಲ್ಲಿ ನಂ.1 ಸ್ಥಾನ ತಲುಪಿದ ನಂತರ ಸಂಕೇಶ್ವರ್ ‘ಉಷಾಕಿರಣ’ ಎಂಬ ಪತ್ರಿಕೆ ಆರಂಭಿಸಿದ್ದರು. ಆಗ ಅವರ ಕಣ್ಣು ಇದ್ದದ್ದು ಜಾಹಿರಾತುಗಳ ಮೇಲೆ. ವಿಜಯ ಕರ್ನಾಟಕದ ಜಾಹಿರಾತು ದರಗಳು ಸಹಜವಾಗಿಯೇ ದುಬಾರಿಯಾಗಿದ್ದವು. ಗ್ರಾಹಕರು ತಮ್ಮ ದರಕ್ಕನುಗುಣವಾಗಿ ಕನ್ನಡಪ್ರಭ ಅಥವಾ ಉದಯವಾಣಿಗೆ ಹೋಗುತ್ತಿದ್ದರು. ಆ ಕಾರಣಕ್ಕೆ ಎರಡನೇ ಪತ್ರಿಕೆ ಆರಂಭಿಸಿ, ಆ ಜಾಹಿರಾತುಗಳನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದರು. ಆದರೆ ಪ್ರಯೋಗ ಯಶಸ್ವಿಯಾಗಲಿಲ್ಲ. ಆ ಹೊತ್ತಿಗಾಗಲೇ ವಿಜಯ ಟೈಮ್ಸ್ ಎಂಬ ಬಿಳಿ ಆನೆ ಸಾಕುವುದು ಕಷ್ಟವಾಗುತ್ತಿತ್ತು. ಆದಾಯ ಮತ್ತು ಖರ್ಚು ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿರಲಿಲ್ಲ. ಹಾಗಾಗಿ ಒಳ್ಳೆಯ ಬೆಲೆಗೇ ಪತ್ರಿಕೆಗಳನ್ನು ಮಾರಿ ಲಾಭ ಮಾಡಿಕೊಂಡರು.

ನಂತರದ ದಿನಗಳಲ್ಲಿ ಅವರಿಗೆ ಪತ್ರಿಕೆ ಇಲ್ಲದೆ ಬೇಸರ ಆಗಿದ್ದು ನಿಜವೇ. ರಾಜಕೀಯವಾಗಿಯೂ ಅವರ ಮಾತಿಗೆ ಬೆಲೆ ಇರಲಿಲ್ಲ. “ಕನ್ನಡ ನಾಡು” ಕಟ್ಟುವ ಭರದಲ್ಲಿ ಶಾಸಕ ಸ್ಥಾನವನ್ನೂ ಗೆಲ್ಲಲಾಗಲಿಲ್ಲ.

ಅನೇಕರು ಗಮನಿಸಿರಬಹುದು, ವಿಜಯವಾಣಿ ಆರಂಭದ ಆಸುಪಾಸಿನಲ್ಲಿಯೇ ಅವರು ಒಮ್ಮೆ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರನ್ನು ಟೀಕಿಸಿ ಹೇಳಿಕೆ ಕೊಟ್ಟರು. ಆ ಮೊದಲು ಹಾಗೆ ಮಾಡಿದ್ದು ಕಡಿಮೆ. ಈಗ ಮತ್ತೆ ರಾಜಕೀಯ ಮನ್ನಣೆ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಯೋಗ ಹೇಗೆ ಸಾಗುತ್ತದೆಯೋ ನೋಡಬೇಕು. ಅಥವಾ ಮುಂದೊಂದು ದಿನ ಈ ಎಲ್ಲಾ ಪತ್ರಿಕೆಗಳನ್ನು ಮಾರುವ ಯೋಚನೆ ಇರಬಹುದೇ?

ರಾಜಕಾರಣಿಯ ನಡೆಯನ್ನು ಊಹಿಸಬಹುದು. ಉದ್ಯಮಿಯ ಹೆಜ್ಚೆಯನ್ನೂ ಗ್ರಹಿಸಬಹುದು. ಆದರೆ ರಾಜಕಾರಣಿ ಮತ್ತು ಉದ್ಯಮಿಯಾಗಿರುವವರ ನಡೆಗಳನ್ನು ವಿಶ್ಲೇಷಿಸುವುದು ಅಷ್ಟು ಸುಲಭವಲ್ಲ.

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ಹತ್ತಿ ಉರಿದು ತಣ್ಣಗಾದ ನಕ್ಸಲ್ ಹಿಂಸಾಚಾರದ ಹೋರಾಟ, ಪಶ್ಚಿಮ ಬಂಗಾಳದಲ್ಲಿ ಫಿನಿಕ್ಸ್ ಹಕ್ಕಿಯಂತೆ ಜನ್ಮ ತಾಳಿತು. ಈ ಬಾರಿಯ ಹೋರಾಟಕ್ಕೆ ಆವೇಶ, ಕೆಚ್ಚು, ಇವುಗಳ ಜೊತೆಗೆ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಮನೋಭಾವ ಎದ್ದು ಕಾಣುತ್ತಿತ್ತು. ಶ್ರೀಕಾಕುಳಂ ಜಿಲ್ಲೆಯ ನಾಯಕರ ಹತ್ಯೆ ಎಲ್ಲರನ್ನು ಕೆರಳಿಸಿತ್ತು ಹಾಗಾಗಿ ಸೈದ್ಧಾಂತಿಕ ವಿಚಾರಗಳನ್ನು ಬದಿಗಿರಿಸಿದ ಇಲ್ಲಿನ ನಾಯಕರು ಸರ್ಕಾರದ ಜೊತೆ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಟಕ್ಕೆ ಮುಂದಾದರು. ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಮಿಡ್ನಾಪುರ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡ, ಪಶ್ಚಿಮ ಬಂಗಾಳದ ನಾಯಕರು, ತಮ್ಮ ಹೋರಾಟವನ್ನು ದೆಬ್ರಾ ಮತ್ತು ಗೋಪಿಬಲ್ಲಬಪುರ್ ಜಿಲ್ಲೆಗಳಿಗೆ ವಿಸ್ತರಿಸಿದರು. ಈ ಜಿಲ್ಲೆಗಳಲ್ಲಿ ಸಂತಾಲ್, ಲೊದಸ್ ಮತ್ತು ಒರಯನ್ ಎಂಬ ಬುಡಕಟ್ಟು ಜನಾಂಗ ಅತಿ ಹೆಚ್ಚು ಪ್ರಮಾಣದಲ್ಲಿ ವಾಸವಾಗಿದ್ದುದು ಕಾರಣವಾಗಿತ್ತು. ಇವರೆಲ್ಲರೂ ಕೃಷಿ ಕೂಲಿಕಾರ್ಮಿಕರಾಗಿದ್ದರು ಜೊತೆಗೆ ಒಂದಿಷ್ಟು ಮಂದಿ ಜಮೀನ್ದಾರರ ಭೂಮಿಯನ್ನು ಗೇಣಿಗೆ ಪಡೆದು ರೈತರಾಗಿ ದುಡಿಯುತ್ತಿದ್ದರು.

ನಕ್ಸಲ್‌ಬಾರಿ ಹೋರಾಟದ ನಂತರ ಪಶ್ಚಿಮ ಬಂಗಾಳದಲ್ಲಿ ಈ ಮೂರು ಜಿಲ್ಲೆಗಳನ್ನು ತಮ್ಮ ಹೋರಾಟಕ್ಕೆ ಆಯ್ದುಕೊಳ್ಳಲು ಹಲವು ಕಾರಣಗಳಿದ್ದವು. ಗೋಪಿಬಲ್ಲಬಪುರ್ ಎಂಬ ಜಿಲ್ಲೆ ಅರಣ್ಯದಿಂದ ಆವೃತ್ತವಾಗಿ, ತನ್ನ ಗಡಿಭಾಗದಲ್ಲಿ ಬಿಹಾರ್ ಮತ್ತು ಒರಿಸ್ಸಾ ರಾಜ್ಯವನ್ನು ಹೊಂದಿತ್ತು. ಪೊಲೀಸರ ದಾಳಿಯ ಸಂದರ್ಭದಲ್ಲಿ ನೆರೆಯ ರಾಜ್ಯಗಳಿಗೆ ನಾಯಕರು ನುಸುಳಿ ಹೋಗಲು ಪ್ರಶಸ್ತವಾಗಿತ್ತು. ಪಕ್ಕದ ಮಿಡ್ನಾಪುರ ಜಿಲ್ಲೆಯಿಂದ ಈ ಜಿಲ್ಲೆಗೆ ಸುವರ್ಣರೇಖ ಎಂಬ ನದಿಗೆ ಕಟ್ಟಲಾಗಿದ್ದ ಸೇತುವೆ ಮಾತ್ರ ಸಂಪರ್ಕದ ಮಾರ್ಗವಾಗಿತ್ತು. ಹಾಗಾಗಿ ಸೇತುವೆ ಬಳಿ ಕಾವಲು ಕೂತರೆ, ಗೋಪಿಬಲ್ಲಬಪುರ್ ಜಿಲ್ಲೆಗೆ ಯಾರು ಬಂದರೂ ನಕ್ಸಲ್ ಚಳವಳಿಗಾರರಿಗೆ ತಿಳಿಯುತ್ತಿತ್ತು. ದೆಬ್ರಾ ಜಿಲ್ಲೆಯು ಕೊಲ್ಕತ್ತಾ-ಮುಂಬೈ ನಗರಗಳ ನಡುವಿನ ಹೆದ್ದಾರಿಯಲ್ಲಿತ್ತು. ಕೊಲ್ಕತ್ತಾ ನಗರದಿಂದ ನಾಯಕರು ಬಂದು ಹೋಗಲು ಈ ಜಿಲ್ಲೆ ಅವರ ಪಾಲಿಗೆ ಪ್ರಶಸ್ತ ಸ್ಥಳವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದುದರಿಂದ ಗೆರಿಲ್ಲಾ ಯುದ್ಧ ತಂತ್ರಕ್ಕೆ ಇಲ್ಲಿ ಸಾಧ್ಯವಿರಲಿಲ್ಲ.

1967 ರಲ್ಲಿ ಸಿಲಿಗುರಿ ಪ್ರಾಂತ್ಯದ ನಕ್ಸಲ್‌ಬಾರಿ ಹೋರಾಟದ ನಂತರ ಕಮ್ಯೂನಿಷ್ಟ್ ಪಕ್ಷ ವಿಭಜನೆಯಾದ ನಂತರ ಮಾವೋವಾದಿ ಕಮ್ಯೂನಿಷ್ಟ್ ಪಕ್ಷಕ್ಕೆ ಬಂದ ಬಹುತೇಕ ನಾಯಕರು ಈ ಮೂರು ಜಿಲ್ಲೆಗಳಿಂದ ಬಂದವರಾಗಿದ್ದು, ಅವರೆಲ್ಲರೂ ಚಾರುಮುಜಂದಾರ್‌ಗೆ ನಿಷ್ಠೆ ತೋರಿಸಿದ್ದರು. ಇವರಲ್ಲಿ ದೆಬ್ರಾ ಜಿಲ್ಲೆಯ ಬಾಬುದೇಬ್ ಮಂಡಲ್ ಎಂಬಾತ ವೃತ್ತಿಯಲ್ಲಿ ವಕೀಲನಾಗಿದ್ದು, 1967 ರ ಅಸೆಂಬ್ಲಿ ಚುನಾವಣೆಯಲ್ಲಿ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವನಾಗಿದ್ದ. ಗೋಪಿಬಲ್ಲಬಪುರ್ ಜಿಲ್ಲೆಯ ಗುಣಧರ್‌ಮುರ್ಮು ಎಂಬಾತ ಸ್ಥಳೀಯ ಬುಡಕಟ್ಟು ಜನಾಂಗದ ನಾಯಕನಾಗಿದ್ದ. ಇವರೆಲ್ಲರಿಗೆ ಸ್ಪೂರ್ತಿಯಾಗಿದ್ದವರು, ಸಂತೋಷ್ ರಾಣಾ ಮತ್ತು ಅಸಿಮ್ ಚಟರ್ಜಿ ಎಂಬ ಯುವ ನಾಯಕರು. ಇವರಲ್ಲಿ ಸಂತೋಷ್ ರಾಣಾ ಕೊಲ್ಕತ್ತಾ ವಿ.ವಿ.ಯಿಂದ ಎಮ್.ಎಸ್ಸಿ ಮತ್ತು ಎಂ.ಟೆಕ್. ಪದವೀಧರನಾದರೆ, ಅಸಿಮ್ ಚಟರ್ಜಿ ಪ್ರಸಿಡೆನ್ಸಿ ಕಾಲೇಜಿನಿಂದ ಬಿ.ಎಸ್ಸಿ. ಪಡೆದು ಹೊರಬಂದಿದ್ದ. (ಅಸಿಮ್ ಚಟರ್ಜಿ ಅವರ ಇತ್ತಿಚೆಗಿನ ಚಿತ್ರ ಗಮನಿಸಿ: ಪಾರ್ಶ್ವವಾಯುಪೀಡಿತರಾಗಿದ್ದಾರೆ.)

ಸಂತೋಷ್ ರಾಣ ಗೋಪಿಬಲ್ಲಬಪುರ ಜಿಲ್ಲೆಯ ನಯಬಸಾನ್ ಎಂಬ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡು, ಅಲ್ಲಿನ ಸಂತಾಲ್ ಬುಡಕಟ್ಟು ಜನಾಂಗದ ರೈತರನ್ನು ಮತ್ತು ಕೃಷಿಕೂಲಿ ಕಾರ್ಮಿಕರನ್ನು ಸಂಘಟಿಸತೊಡಗಿದ. ಅಸಿಮ್ ಚಟರ್ಜಿ ಕೊಲ್ಕತ್ತ ನಗರದ ಯುವ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಪ್ರೆರೇಪಿಸತೊಡಗಿದ. ಈ ಇಬ್ಬರೂ ನಾಯಕರು, ಅಲ್ಲಿ ಜಮೀನ್ದಾರರ ಬಗ್ಗೆ, ಹಾಗೂ ಅಸಮಾನತೆಯಿಂದ ಕೂಡಿದ್ದ ಅವರ ಗೇಣಿ ಪದ್ಧತಿ ಮತ್ತು ಕೂಲಿದರದ ಬಗ್ಗೆ ಅಲ್ಲಿನ ಬುಡಕಟ್ಟು ಜನಕ್ಕೆ ವಿವರಿಸಿ, ಸರ್ಕಾರದ ಪಾಳು ಬಿದ್ದಿರುವ ಜಮೀನನ್ನು ಉಳುಮೆ ಮಾಡಲು ಪ್ರೊತ್ಸಾಹಿಸಿದರು. ಅಸಿಮ್ ಚಟರ್ಜಿಯ ಮಾತುಗಳಿಂದ ಪ್ರೇರಿತರಾದ ಹಲವಾರು ಪದವೀಧರರು ನಗರದ ಬದುಕನ್ನು ತ್ಯೆಜಿಸಿ ಬಂದು, ಹಳ್ಳಿಗಳಲ್ಲಿ ಸಂತಾಲ್ ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದರು. ಇವರಲ್ಲಿ ಅನೇಕ ಮಂದಿ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪದವೀಧರರು ಇದ್ದದು ವಿಶೇಷ. ಇವರುಗಳು. ಸಂತಾಲ್ ಬುಡಕಟ್ಟು ಜನಾಂಗದ ಸಾಮಾನ್ಯ ಕಾಯಿಲೆಗಳಿಗೆ ಉಪಚರಿಸುತ್ತಾ, ಅವರುಗಳ ಔಷಧದ ಖರ್ಚನ್ನು ತಾವೇ ಭರಿಸುತ್ತಾ, ಆದಿವಾಸಿಗಳು ವಾಸಿಸುತ್ತಿದ್ದ ಗುಡಿಸಲು, ರಸ್ತೆಗಳನ್ನು ಸುಧಾರಿಸಿ, ಅವರ ವಿಶ್ವಾಸಕ್ಕೆ ಪಾತ್ರರಾದರು.

ದೆಬ್ರಾ ಜಿಲ್ಲೆಯಲ್ಲಿ ಭೂರಹಿತ ಕೃಷಿ ಕೂಲಿಕಾರ್ಮಿಕರ ವೇತನ ಹೋರಾಟಕ್ಕೆ ನಾಂದಿಯಾಡಿತು. ಈ ಮುನ್ನ ಕಮ್ಯೂನಿಷ್ಟ್ ಪಕ್ಷದಲ್ಲಿದ್ದ ಅಲ್ಲಿನ ನಾಯಕರಾದ, ಗುಣಧರ್ ಮುರ್ಮು ಮತ್ತು ಬಾಬುದೇಬ್ ಮಂಡಲ್ ಇಬ್ಬರನ್ನೂ ಪಕ್ಷ ಉಚ್ಛಾಟಿಸಿದ್ದ ಕಾರಣ ಇವರಿಬ್ಬರೂ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಸೇರಿ ಆದಿವಾಸಿಗಳನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಇವೆಲ್ಲವುಗಳ ಪರಿಣಾಮವಾಗಿ. 1969ರ ಆಗಸ್ಟ್ ತಿಂಗಳಿನಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ನಕ್ಸಲ್ ಹೋರಾಟಗಾರರ ಬಹು ಮುಖ್ಯವಾದ ಕಾರ್ಯಾಚರಣೆ 1969 ರ ಸೆಪ್ಟಂಬರ್ 27 ರಂದು ಆರಂಭಗೊಂಡಿತು. ಗೋಪಿಬಲ್ಲಬಪುರ ಜಿಲ್ಲೆಯಲ್ಲಿ ಸಂತೋಷ್ ರಾಣ ನೇತೃತ್ವದಲ್ಲಿ ಹೋರಾಟಗಾರರು, ನಗೆನ್ ಸೇನಾಪತಿ ಎಂಬ ಜಮೀನ್ದಾರನ ಮನೆ ಮೇಲೆ ದಾಳಿ ಮಾಡಿ, ಅವನ್ನು ಮತ್ತು ಅವನ ಸಹೋದರನನ್ನು ತೀವ್ರವಾಗಿ ಗಾಯಗೊಳಿಸಿ, ಬಂದೂಕು ಮತ್ತು ಭತ್ತದ ಫಸಲನ್ನು ದೋಚಿದರು.

ಅಕ್ಟೋಬರ್ 16 ರಂದು ಸಂತೋಷ್ ರಾಣನ ತಮ್ಮ ಮಿಹಿರ್ ರಾಣನ ನೇತೃತ್ವದ ತಂಡ, ಚೌ ಬಝಾರ್ ಎಂಬ ಹಳ್ಳಿಗೆ ನುಗ್ಗಿ ಅಲ್ಲಿನ ಜಮೀನ್ದಾರನೊಬ್ಬನನ್ನು ಕೊಂದುಹಾಕಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಹನ್ನೆರೆಡು ಜಮೀನ್ದಾರರು ನಕ್ಸಲ್ ಹೋರಾಟಕ್ಕೆ ಬಲಿಯಾದರು. ಇತ್ತ ದೆಬ್ರಾ ಜಿಲ್ಲೆಯಲ್ಲಿ ಗುಣಧರ್ ಮುರ್ಮು ನೇತೃತ್ವದ ಆದಿವಾಸಿ ಹೋರಾಟಗಾರರು, ಏಳು ಮಂದಿ ಜಮೀನ್ದಾರರನ್ನು ಬಲಿತೆಗೆದುಕೊಂಡರು. ಇವರಲ್ಲಿ ಕೆಲವರು, ಹೋರಾಟವನ್ನು ಬಗ್ಗು ಬಡಿಯಲು ಆಗಮಿಸಿದ್ದ ಪೊಲೀಸರಿಗೆ ಆಶ್ರಯ ನೀಡಿದ್ದರು. ಈ ಹಿಂಸಾತ್ಮಕ ಘಟನೆಗಳಿಂದ ಬೆದರಿದ ಜಮೀನ್ದಾರರು ತಮ್ಮ ಮನೆಗಳನ್ನು ತೊರೆದು ಬಂದು, ಮಿಡ್ನಾಪುರ್ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ಪಡೆಯತೊಡಗಿದರು. ಇದರಿಂದ ಎಚ್ಚೆತ್ತುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮಿಡ್ನಾಪುರ್, ದೇಬ್ರಾ, ಮತ್ತು ಗೋಪಿಬಲ್ಲಬಪುರ ಜಿಲ್ಲೆಗಳಿಗೆ ಪೊಲೀಸ್ ತುಕಡಿಗಳನ್ನು ಕಳುಹಿಸಿ, ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಿತು. ಇದು ನಕ್ಸಲ್ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿತು. ಅಲ್ಲಿಯವರೆಗೆ ಜಮೀನ್ದಾರರನ್ನೆ ಗುರಿಯಾಗಿಸಿಕೊಂಡಿದ್ದ ನಕ್ಸಲ್ ಹೋರಾಟ ಪ್ರಪಥಮವಾಗಿ ಸರ್ಕಾರದತ್ತ ತಿರುಗಿತು. ಹೋರಾಟಗಾರರು, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಧ್ವಂಸ ಮಾಡತೊಡಗಿದರು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಸತ್ಯನಾರಾಯಣ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ನಿರ್ಧಯವಾಗಿ ಎನ್ ಕೌಂಟರ್ ಹೆಸರಿನಲ್ಲಿ ಕೊಂದುಹಾಕಿದ್ದರಿಂದ, ಈ ಘಟನೆಯಿಂದ ಕ್ಷುದ್ರಗೊಂಡಿದ್ದ ನೇತಾರ ಚಾರು ಮುಜಂದಾರ್ ಒಂದು ರೀತಿಯಲ್ಲಿ ಸರ್ಕಾರದ ವಿರುದ್ಧ ಯುದ್ಧವನ್ನೇ ಘೋಷಣೆ ಮಾಡಿದ್ದ. 1975 ರ ಒಳಗೆ ನಕ್ಸಲ್ ಹೋರಾಟದ ಮೂಲಕ ಭಾರತದ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಳ್ಳಬೇಕೆಂದು ಆವನ ಗುರಿಯಾಗಿತ್ತು. ಚಾರುವಿನ ಪ್ರೇರಣೆಯಿಂದ ನಕ್ಸಲ್ ಹೋರಾಟ ತೀವ್ರಗೊಂಡ ಕಾರಣ ಮತ್ತಷ್ಟು ಶೋಷಿತ ಜಮೀನ್ದಾರರ ತಲೆಗಳು ಉರುಳಿದವು. ತನ್ನ ಕಾಮುಕತನದಿಂದಾಗಿ ಆದಿವಾಸಿಗಳಿಂದ ರಣಹದ್ದು ಎಂದು ಕರೆಸಿಕೊಳ್ಳುತ್ತಿದ್ದ ಗೋಪಿಬಲ್ಲಬಪುರ ಜಿಲ್ಲೆಯ ಅಶು ಮಹಾಪಾತ್ರ ಎಂಬ ಜಮೀನ್ದಾರನನ್ನು 1970 ಮಾರ್ಚ್ 5 ರಂದು ಅವನ ಮನೆಯೆದುರು ಹತ್ಯೆಗೆಯ್ಯಲಾಯಿತು.

ಇದಾದ ಎರಡುದಿನಗಳಲ್ಲೇ ಇದೇ ಹೋರಾಟಗಾರರು, ಕೇದಾರ್‌ಘೋಶ್ ಎಂಬಾತನನ್ನು ಮತ್ತು ಅವನ ಮಗನನ್ನು ಕೊಂದು ಹಾಕಿದರು.  ಮಾರ್ಚ್ 21 ರಂದು ನಕ್ಸಲ್ ಹೋರಾಟಕ್ಕೆ ಪ್ರತಿಯಾಗಿ ಗೂಂಡಾಪಡೆಯನ್ನು ಕಟ್ಟಿಕೊಂಡು ರಕ್ಷಣೆಪಡೆದಿದ್ದ ನಾರಾಯನ್‌ಪತಿ ಎಂಬ ಜಮೀನ್ದಾರ ಮತ್ತು ಅವನ ಗೂಂಡಾಗಳನ್ನು ಗುಣಧರ್ ಮುರ್ಮು ನೇತೃತ್ವದಲ್ಲಿ ಆದಿವಾಸಿಗಳು, ಮೈ ಮೇಲಿನ ಇರುವೆ ಹೊಸಕಿ ಹಾಕಿದಂತೆ ಹೊಸಕಿ ಹಾಕಿದರು. ಹಿಂದೊಮ್ಮೆ ಹೋರಾಟಗಾರರಿಂದ ತಪ್ಪಿಸಿಕೊಂಡಿದ್ದ, ಕನೈ ಕ್ವಿಟಿ ಎಂಬ ಜಮೀನ್ದಾರ ಕೊನೆಗೂ ದೆಬ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಕ್ಸಲಿಯರ ಸಿಟ್ಟಿಗೆ  ಬಲಿಯಾದ. ಮಾರ್ಚ್ 22 ರಂದು ಹೈಫುದ್ದೀನ್ ಮಲ್ಲಿಕ್ ಎಂಬ ಮುಸ್ಲಿಂ ಜಮೀನ್ದಾರನನ್ನು, ಮಾರುಕಟ್ಟೆಯಿಂದ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ತಡೆದು ನಿಲ್ಲಿಸಿದ ಆದಿವಾಸಿ ಹೋರಾಟಗಾರರು, ಮುಖ್ಯ ರಸ್ತೆಯಲ್ಲಿ ಅವನ ರುಂಡ ಮುಂಡ ಬೇರ್ಪಡುವಂತೆ ಕೊಚ್ಚಿ ಹಾಕಿದರು.

ಪೃಥ್ವಿಯ ಒಡಲೊಳಗೆ ಅಡಿಗಿದ್ದ ಅಗ್ನಿ ಜ್ವಾಲೆಯೊಂದು ಅನಿರೀಕ್ಷಿತವಾಗಿ ಸ್ಪೋಟಗೊಳ್ಳುವಂತೆ ಬುಗಿಲೆದ್ದ ನಕ್ಸಲಿಯರ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸತ್ತಿದ್ದ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಸಂಯುಕ್ತ ಸರ್ಕಾರ ದಿಕ್ಕು ಕಾಣದಂತೆ ತತ್ತರಿಸಿ ಹೋಯಿತು. ಆ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದವರು ಜ್ಯೋತಿಬಸು. ಅವರು ಧರ್ಮ ಸಂಕಟಕ್ಕೆ ಸಿಲುಕಿ ಹೋದರು. ಹೋರಾಟಗಾರರೆಲ್ಲಾ ಅವರದೇ ಪಕ್ಷದಿಂದ ಸಿಡಿದು ಹೋದವರು. ಅವರ ಮೇಲೆ ಹಿಂಸೆಯ ರೂಪದಲ್ಲಿ ಪ್ರತಿಕಾರದ ಸೇಡು ತೀರಿಸಿಕೊಳ್ಳಲು ವ್ಯಯಕ್ತಿವಾಗಿ ಜ್ಯೋತಿಬಸುರವರಿಗೆ ಮನಸ್ಸಿರಲಿಲ್ಲ. ಮಾತುಕತೆಯ ಮೂಲಕ ಹೋರಾಟಕ್ಕೆ ಅಂತ್ಯ ಹಾಕಬೇಕೆನ್ನುವುದು ಅವರ ಗುರಿಯಾಗಿತ್ತು. ಆದರೆ, ಅಂತಿಮವಾಗಿ ಅವರು ಸರ್ಕಾರದ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಬೇಕಾಯಿತು.

ನಕ್ಸಲ್ ಪೀಡಿತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪೊಲೀಸ್ ತುಕುಡಿಗಳನ್ನು ರವಾನಿಸಿದರೂ ಕೂಡ, ಪೊಲೀಸರಿಂದ ಸರ್ಕಾರಿ ಕಟ್ಟಡಗಳನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಸ್ಥಳೀಯ ಜನರ ಜೊತೆ ನಕ್ಸಲ್ ಹೋರಾಟಗಾರರು ಹೊಂದಿದ್ದ ಸುಮಧುರ ಬಾಂಧವ್ಯದಿಂದಾಗಿ, ಪೊಲೀಸರಿಗೆ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ.  ಜೊತೆಗೆ ನಕ್ಸಲಿಯರ ಹೋರಾಟ ಬೀರ್ ಭೂಮಿ ಜಿಲ್ಲೆಗೆ ವಿಸ್ತರಿಸಿತು. ಈ ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದ ಬಡತನ ಮತ್ತು ವಿದ್ಯಾವಂತ ಯುವಕರ ನಿರುದ್ಯೋಗ ಚಳವಳಿಗೆ ಪರೋಕ್ಷವಾಗಿ ಕಾರಣವಾಯಿತು. ಸುದೇವ್ ಬಿಶ್ವಾಸ್ ಎಂಬ ಇಂಜಿನೀರಿಂಗ್ ಪದವೀಧರ, ಕ್ಷಿತೀಶ್ ಚಟರ್ಜಿ ಎಂಬ ಎಂ.ಎಸ್ಸಿ, ಪದವೀಧರ, ಹಾಗೂ ಬಿರೇನ್ ಘೋಷ್ ಎಂಬ ವಿಜ್ಙಾನ ಪದವೀಧರ ಈ ಮೂವರು ಸೇರಿ ಬೀರ್ ಭೂಮಿ ಜಿಲ್ಲೆಯನ್ನು ನಕ್ಸಲ್ ರಣರಂಗವಾಗಿ ಪರಿವರ್ತಿಸಿದರು. ಪಶ್ಚಿಮ ಬಂಗಾಳದಲ್ಲಿ 1970 ರ ಜುಲೈ ತಿಂಗಳಿನಿಂದ 1971 ರ ಜೂನ್‌ವರೆಗೆ ಸಾವಿರಾರು ಹಿಂಸಾತ್ಮಕ ಘಟನೆಗಳು ಜರುಗಿದವು.70 ರ ಡಿಸಂಬರ್‌ವರೆಗೆ ಪ್ರತಿಭಟನೆಯಿಂದ ಕೂಡಿದ್ದ ಚಳವಳಿ 1971ರ ಜನವರಿ ತಿಂಗಳಿನಲ್ಲಿ ಹಿಂಸೆಯ ರೂಪಕ್ಕೆ ತಿರುಗತೊಡಗಿತು. ಜನವರಿಯಲ್ಲಿ 44, ಪೆಬ್ರವರಿಯಲ್ಲಿ 90, ಮಾರ್ಚ್ ತಿಂಗಳಿನಲ್ಲಿ 116, ಏಪ್ರಿಲ್‌ನಲ್ಲಿ 119, ಮೇ ತಿಂಗಳಲ್ಲಿ 76 ಮತ್ತು ಜೂನ್‌ನಲ್ಲಿ 100 ಘಟನೆಗಳು ನಡೆದವು.

ನಕ್ಸಲ್ ಚಟುವಟಿಕೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನ ಮನಗಂಡ ಸರ್ಕಾರ, ಪೊಲೀಸ್ ತುಕಡಿಗಳ ಜೊತೆಗೆ ಅರೆಸೈನಿಕ ಪಡೆ ಸೇರಿದಂತೆ ವಿವಿಧ ಪಡೆಗಳನ್ನು ಕಾರ್ಯಾಚರಣೆಗೆ ಬಳಸಿತು. ರಜಪೂತ್ ಇನ್‌ಪೆಂಟ್ರೆಯ ಐದು ತುಕಡಿಗಳನ್ನು ಸರ್ಕಾರಿ ಕಟ್ಟಡಗಳ ರಕ್ಷಣೆಗೆ ರವಾನಿಸಲಾಯಿತು. ಬೀರ್ ಭೂಮಿ ಜಿಲ್ಲೆಯಲ್ಲಿರುವ ಬೊಲಾಪುರ್ ಸಮೀಪದ ರವೀಂದ್ರನಾಥ ಟ್ಯಾಗರ್‌ರವರ ಶಾಂತಿನಿಕೇತನ ಆಶ್ರಮ ಮತ್ತು ವಿಶ್ವಭಾರತಿ ವಿ.ವಿ.ಯ ಕಟ್ಟಡಗಳಿಗೆ ವಿಶೇಷ ರಕ್ಷಣೆ ಒದಗಿಸಲಾಯಿತು. ಉಳಿದ ತುಕಡಿಗಳು ನಕ್ಸಲಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದವು. ಸರ್ಕಾರದ ನಿಯಂತ್ರಣದ ನಡುವೆಯೂ, ನಕ್ಸಲ್ ಹೋರಾಟ. ಕೊಲ್ಕತ್ತ ನಗರಕ್ಕೆ ಹೊಂದಿಕೊಂಡಂತೆ ಇರುವ 24 ಪರಗಣ ಜಿಲ್ಲೆ ಮತ್ತು ಹೌರ, ಬುರ್ದ್ವಾನ್, ಮಾಲ್ಡ, ಹೂಗ್ಲಿ, ನಾಡಿಯ ಜಿಲ್ಲೆಗಳಿಗೆ ವ್ಯಾಪಿಸಿತು ಅಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಚಾರು ಮುಜಂದಾರನ ಹೋರಾಟಕ್ಕೆ ಕೈಜೋಡಿಸಿದವು.

ಕಾಡ್ಗಿಚ್ಚಿನಂತೆ ಇಡೀ ಪಶ್ಚಿಮ ಬಂಗಾಳವನ್ನು ನಕ್ಸಲ್ ಚಳವಳಿ ಆವರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸರ್ಕಾರದ ಅವಧಿ ಮುಗಿದು 1972 ರಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತು. ಇಂತಹ ಒಂದು ಸಮಯಕ್ಕಾಗಿ ಕಾದು ಕುಳಿತ್ತಿದ್ದ ಪಶ್ಚಿಮ ಬಂಗಾಳ ಪೊಲೀಸರು, ನಕ್ಸಲಿಯರ ಹುಟ್ಟಡಗಿಸಲು, ಆಂಧ್ರ ಪೊಲೀಸರ ಮಾದರಿಯನ್ನು ಅನುಸರಿಸಲು ಮುಂದಾದರು. ಇದರ ಪ್ರಥಮ ಪ್ರಯತ್ನವಾಗಿ ಕೊಲ್ಕತ್ತ ನಗರದಲ್ಲಿ ಭೂಗತನಾಗಿದ್ದ ನಾಯಕ ಚಾರುಮುಜಂದಾರ್‌‍ನನ್ನು ಮುಗಿಸಲು ಸಂಚು ರೂಪಿಸಿದರು. 1972ರ ಜುಲೈ 16 ರಂದು. ಕೊಲ್ಕತ್ತ ನಗರದ ರಹಸ್ಯ ಸ್ಥಳವೊಂದರಲ್ಲಿ ಚಾರುವನ್ನು ಬಂಧಿಸಿ ಲಾಲ್‌ಬಜಾರ್ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ವಿಚಾರಣೆಯ ನೆಪದಲ್ಲಿ ನಿರಂತರ 11 ದಿನಗಳ ಕಾಲ ಚಿತ್ರಹಿಂಸೆ ನೀಡಿ ಜುಲೈ 28ರ ಮಧ್ಯರಾತ್ರಿ ಒಂದುಗಂಟೆಗೆ ಕೊಂದು ಹಾಕಿದರು. ಪೊಲೀಸ್ ಕಸ್ಟಡಿಯಲ್ಲಿದ್ದ 12 ದಿನಗಳ ಕಾಲ ವಕೀಲರಿಗೆ, ಚಾರುವಿನ ಗೆಳೆಯರಿಗೆ, ಮತ್ತು ಅವನ ಬಂಧುಗಳಿಗೆ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ಜುಲೈ 28ರ ರಾತ್ರಿ ಚಾರುಮುಜಂದಾರ್ ಅಸುನೀಗಿದಾಗ, ಮರಣೋತ್ತರ ಶವ ಪರೀಕ್ಷೆಯನ್ನು ಸಹ ಮಾಡಿಸದೆ, ಅವನ ಬಂಧುಗಳನ್ನು ಠಾಣೆಗೆ ಕರೆಸಿ, 29ರ ಬೆಳಗಿನ ಜಾವ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿಬಿಟ್ಟರು.

ಆಗರ್ಭ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಹುಟ್ಟಿ, ಭೂರಹಿತ ಬಡವರಿಗಾಗಿ ಹೋರಾಟ ಮಾಡುತ್ತಾ, ಬಡವನಂತೆ ಬದುಕಿದ ಚಾರುಮುಜಂದಾರ್ ತನ್ನ ಕೊನೆಯ ದಿನಗಳಲ್ಲಿ ಅನಾಮಿಕನಂತೆ ಪೊಲೀಸರ ನಡುವೆ ನಡು ರಾತ್ರಿಯಲ್ಲಿ ಪ್ರಾಣ ಬಿಟ್ಟಿದು ಹೋರಾಟದ ವಿಪರ್ಯಾಸಗಳಲ್ಲಿ ಒಂದು. ವರ್ತಮಾನದಲ್ಲಿ ನಕ್ಸಲಿಯರು ಪೊಲೀಸರ ಮೇಲೆ ಮುಗಿಬಿದ್ದು ಅವರನ್ನು ನಿರ್ಧಯವಾಗಿ ಏಕೆ ಕೊಲ್ಲುತಿದ್ದಾರೆ ಎಂದು ಪ್ರಶ್ನೆ ಕೇಳುವವರಿಗೆ, ಚಾರುವಿನ ಅಮಾನುಷವಾದ ಸಾವಿನಲ್ಲಿ ಉತ್ತರ ಅಡಗಿದೆ. ನಾಯಕರ ಹತ್ಯೆಯ ಮೂಲಕ ಚಳವಳಿಯ ಬೇರು ಕಿತ್ತೊಗೆಯಬಹುದೆಂದು ನಿರೀಕ್ಷಿಸಿದ್ದ ಪೊಲೀಸರಿಗೆ ಮತ್ತು ಸರ್ಕಾರಗಳಿಗೆ ಭವಿಷ್ಯದಲ್ಲಿ ಗಂಡಾಂತರ ಕಾದಿತ್ತು. ಏಕೆಂದರೆ, ಪಶ್ಚಿಮ ಬಂಗಾಳದಲ್ಲಿ ಹೋರಾಟದ ಜ್ವಾಲೆ ಆ ಕ್ಷಣಕ್ಕೆ ನಂದಿ ಹೋದರೂ ಕೂಡ, ಅದು ಆರಿ ಹೋಗುವ ಮುನ್ನ ಪಕ್ಕದ ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಿಗೆ ಅಗ್ನಿ ಸ್ಪರ್ಶ ನೀಡಿ, ಕಾಡ್ಗಿಚ್ಚಿನಂತೆ ಹರಡಲು ಸಹಾಯಕವಾಗಿತ್ತು.

(ಮುಂದುವರೆಯುವುದು)

ಪದವೀಧರರ ಚುನಾವಣೆಯಲ್ಲಿ ನನ್ನ ಬೆಂಬಲ ಯಾರಿಗೆ ಮತ್ತು ಯಾಕಾಗಿ…

ಸ್ನೇಹಿತರೆ,

ನಾನು ಹಿಂದೊಮ್ಮೆ ಪದವೀಧರರ ಕ್ಷೇತ್ರದ ಚುನಾವಣೆ ಬಗ್ಗೆ ಮತ್ತು ಬೆಂಗಳೂರು ಪದವೀಧರರ ಕ್ಷೇತ್ರವನ್ನು ಪ್ತತಿನಿಧಿಸುತ್ತಿರುವ ರಾಮಚಂದ್ರ ಗೌಡ ಎಂಬ ಜನಪ್ರತಿನಿಧಿಯ ಬಗ್ಗೆ ಬರೆದಿದ್ದೆ. ನಿಮಗೆ ಗೊತ್ತಿರುವ ಹಾಗೆ ಇದೇ ಭಾನುವಾರದಂದು (ಜೂನ್ 10, 2012) ಈ ಚುನಾವಣೆ ಜರುಗಲಿದೆ. ಸದ್ಯ ನನಗೆ ಬೇರೆ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಗೊತ್ತಿಲ್ಲ. ಆದ್ದರಿಂದ ನಾನು ಮತ ಚಲಾಯಿಸಲಿರುವ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪಿಸಿ, ನನ್ನ ಓಟು ಯಾರಿಗೆ ಎಂಬುದನ್ನೂ ಬರೆಯಬಯಸುತ್ತೇನೆ. ಇದನ್ನು ಓದುವ ಹಲವರಿಗಾದರೂ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಅಥವ ಭಿನ್ನ ಅಭಿಪ್ರಾಯ ಇರಬಹುದು. ಸಾಧ್ಯವಾದರೆ ಕಮೆಂಟ್‌ಗಳ ಮೂಲಕ ಹಂಚಿಕೊಳ್ಳಿ. ನಿಜವನ್ನು ತಿಳಿದುಕೊಳ್ಳುವುದು ಮತ್ತು ತಿದ್ದಿಕೊಳ್ಳುವುದು ನಮ್ಮೆಲ್ಲರ ಕರ್ತ್ಯವ್ಯ.

ಹಾಲಿ ಎಂಎಲ್‌ಸಿ ರಾಮಚಂದ್ರ ಗೌಡ ಈ ಬಾರಿಯೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ. ಆ ಪಕ್ಷದ ಬಗ್ಗೆಯಂತೂ ಹೇಳಲು ಏನೂ ಉಳಿದಿಲ್ಲ. ಇನ್ನು ಆ ಅಭ್ಯರ್ಥಿಯಂತೂ ಬಿಜೆಪಿಯಂತಹ ಬಿಜೆಪಿಯ ಭ್ರಷ್ಟ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಂಪುಟದಿಂದ ಕೈಬಿಡಲಾದ ವ್ಯಕ್ತಿ. ಅದು ಯಾವ ನ್ಯಾಯ-ನೀತಿ-ಜವಾಬ್ದಾರಿಯುತ ನಡವಳಿಕೆಯ ಆಧಾರದ ಮೇಲೆ ಇವರಿಗೆ ಮತಗಳು ಬೀಳುತ್ತವೊ, ತಿಳಿಯದು. ಪಕ್ಷವೂ ಅಸಹ್ಯ, ವ್ಯಕ್ತಿಯೂ ಅನರ್ಹ.

ಇನ್ನು ಇತರೆ ಮುಖ್ಯಪಕ್ಷಗಳಾದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳ ಅಭ್ಯರ್ಥಿಗಳು. ಬಿಜೆಪಿಯನ್ನೂ ಒಳಗೊಂಡಂತೆ ಈ ಮೂರೂ ಪಕ್ಷಗಳು ಎಷ್ಟು ನೀತಿಭ್ರಷ್ಟವಾಗಿವೆ ಎಂದರೆ ಇಡೀ ರಾಜ್ಯದಲ್ಲಿ ಇವರಿಗೆ ದುಡ್ಡಿರುವ. ಈಗಾಗಲೆ ಭ್ರಷ್ಟರಾಗಿರುವ ಅಥವ ಭ್ರಷ್ಟರಾಗಲು ಹೊರಟಿರುವ, ರಿಯಲ್-ಎಸ್ಟೇಟ್ ಅಥವ ಗಣಿ ಉದ್ದಿಮೆ ಅಥವ ಲಾಭಕೋರ ಶಿಕ್ಷಣ ಸಂಸ್ಥೆ ಅಥವ ಇನ್ನಿತರ ಭ್ರಷ್ಟಮಾರ್ಗಗಳಲ್ಲಿ ದುಡ್ಡು ಮಾಡಿರುವವರನ್ನು ಬಿಟ್ಟು ಬೇರೆಯವರಿಗೆ. ಅರ್ಹರಿಗೆ, ಹೋಗಲಿ ಕನಿಷ್ಟ ಸಜ್ಜನರಿಗಾದರೂ ಟಿಕೆಟ್ ಕೊಡುವ ಸ್ಥಿತಿಯಲ್ಲಿ ಅವು ಇಲ್ಲ. ಈ ಅಭ್ಯರ್ಥಿಗಳ ಫೋಟೋಗಳನ್ನು ನೋಡಿದರೆ ಸಾಕು, ಅವರ ಹಣೆ, ಕುತ್ತಿಗೆ, ಕೈ ಮತ್ತು ಕೈಬೆರಳುಗಳನ್ನು ನೋಡಿ, ಅಲ್ಲ್ರಿರುವ ಕುಂಕುಮ ಮತ್ತು ಚಿನ್ನವನ್ನು, ಅವರು ಧರಿಸುವ ನಾಯಿಚೈನುಗಳನ್ನು ಗಮನಿಸಿದರೆ ಸಾಕು ಅವರ ಇತಿಹಾಸ, ವರ್ತಮಾನ, ಮತ್ತು ಭವಿಷ್ಯ ಹೇಳಬಹುದು. ಹಾಗಾಗಿ ನಾನು ಕಾಂಗ್ರೆಸ್ ಮತ್ತು ಜನತಾದಳದ ಅಭ್ಯರ್ಥಿಗಳ ಬಗ್ಗೆ ಮಾತನಾಡಲೂ ಹೋಗುವುದಿಲ್ಲ. ಬೇಜವಾಬ್ದಾರಿಯುತ, ಘನತೆಯಿಲ್ಲದ ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು. ಸ್ವಾರ್ಥಸಾಧಕರು. ಅದಕ್ಕೆ ಸಮಾಜಸೇವೆಯ ಮುಖವಾಡ ಬೇರೆ. ಛೇ.

ಇನ್ನು ಈ ಚುನಾವಣೆಗೆ ನಿಂತಿರುವ ನನಗೆ ತಿಳಿದಿರುವ ಅಭ್ಯರ್ಥಿಗಳು ಮೂವರು. ಒಬ್ಬರು ಲೋಕಸತ್ತಾ ಪಕ್ಷದ ಅಶ್ವಿನ್ ಮಹೇಶ್, ಇನ್ನೊಬ್ಬರು ಎಡಪಕ್ಷಗಳ ಅಭ್ಯರ್ಥಿಯಾಗಿ ಕೆ.ಎಸ್. ಲಕ್ಷ್ಮಿ. ಮತ್ತೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿರುವ ನಾಗಲಕ್ಷ್ಮಿ ಬಾಯಿ.

ಅಶ್ವಿನ್ ಮಹೇಶ್ ಬೆಂಗಳೂರಿನ IIM-B ಯಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಅವರು ತಮ್ಮ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿರುವಂತೆ ನಗರದ ಬಿಗ್10 ಬಸ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ, ತಿಳಿದುಕೊಂಡಿದ್ದಾರೆ. ಹಾಗೆಯೇ, India Against Corruption ಸಂಘಟನೆಯ ಬೆಂಗಳೂರು ನಾಯಕರಲ್ಲಿ ಪ್ರಮುಖರು. ಮತ್ತು ಲೋಕಸತ್ತಾ ಪಾರ್ಟಿಯ ಕರ್ನಾಟಕ ವಿಭಾಗದ ಮುಖಂಡರೂ ಹೌದು. ಯಾವುದೇ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್-ಜನತಾದಳಗಳ ಅಭ್ಯರ್ಥಿಗಳಿಗಿಂತ ಯೋಗ್ಯವಾದ ವ್ಯಕ್ತಿ. ಆದರೆ, ಇವರು ಮತ್ತು ಇವರ ಹೋರಾಟಗಳು ಧೈರ್ಯವನ್ನು, ಕೆಚ್ಚನ್ನು, ಆತ್ಮವಿಶ್ವಾಸವನ್ನು ತುಂಬಬಲ್ಲವು ಎಂದು ಹೇಳಲಾಗುವುದಿಲ್ಲ. ಕರ್ನಾಟಕದಲ್ಲಿಯಂತೂ ಭ್ರಷ್ಟಾಚಾರದ ಬಗ್ಗೆ ಆಂದೋಳನ ರೂಪಿಸುವುದಕ್ಕೆ ಮತ್ತು ಅನೇಕ ಭ್ರಷ್ಟರನ್ನು ನ್ಯಾಯಾಲಯಕ್ಕೆ ಎಳೆಯುವುದಕ್ಕೆ “ಭ್ರಷ್ಟಾಚಾರದ ವಿರುದ್ದ ಭಾರತ” ಸಂಘಟನೆಗೆ ಮತ್ತು ಲೋಕಸತ್ತಾ ಪಕ್ಷಕ್ಕೆ ಅನೇಕ ಅವಕಾಶಗಳಿದ್ದವು. ಅಮೂರ್ತವಾದ “ಭ್ರಷ್ಟಾಚಾರ” ಎಂಬುದರ ವಿರುದ್ದ ಇವರ ೌಪವಾಸ ಮತ್ತು ಬಾಯಿಮಾತಿನ ಹೋರಾಟ ಯಾವುದೇ ಫಲ ನೀಡದು ಮತ್ತು ಅಷ್ಟೇನೂ ಪ್ರಾಮಾಣಿಕವಲ್ಲದ್ದು ಎಂಬ ಸಾಮಾನ್ಯ ಜ್ಞಾನ ಇವರಿಗೆ ಇದೆ ಎಂದು ಎನಿಸುವುದಿಲ್ಲ. ಇಲ್ಲಿಯವರೆಗೂ ಯಾರ ಹೆಸರನ್ನೂ ಹೇಳದೆ “ಕ್ಷೇಮ” ಹೋರಾಟ ರೂಪಿಸಿಕೊಂಡು ಬಂದವರು ಇವರು. ಯಾವುದೇ ಅಧಿಕಾರಸ್ಥ ರಾಜಕಾರಣಿಯ ವಿರುದ್ಧ, ಇಲ್ಲಿಯ ಆಡಳಿತ ಪಕ್ಷದ ಭ್ರಷ್ಟರ ವಿರುದ್ದ ಇವರು ಹೆಸರು ಹಿಡಿದು ಹೋರಾಟ ಮಾಡಿದ್ದು ಕಾಣಿಸುವುದಿಲ್ಲ. ಅದಕ್ಕೆ ಒಂದೇ ಒಂದು ಅಪವಾದ ಎಂದರೆ ಸಂತೋಷ್ ಹೆಗಡೆಯವರು ಮಾತ್ರ. ಆದರೆ ಅವರು ಆ ಸಂಘಟನೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ಡಾರೆ ಎಂದು ಹೇಳಲಾಗುವುದಿಲ್ಲ. ಹೀಗಾಗಿಯೇ, ಈ ಸಂಘಟನೆಯಲ್ಲಿ ತೊಡಗಿಕೊಂಡಿರುವವರ ಪ್ರಾಮಾಣಿಕತೆ ಪ್ರಶ್ನಾರ್ಹ. ಮತ್ತು ಅವರ ಜೀವನಾನುಭವವೂ.

ಇಷ್ಟೆಲ್ಲ ಇದ್ದರೂ, ರಾಜಕೀಯ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸುವ ಅಹಂಕಾರಿ ಸೋಫಿಸ್ಟಿಕೇಟೆಡ್ ಮೇಲ್ವರ್ಗದ ಮತ್ತು  ಐಟಿ-ಬಿಟಿ ಉದ್ಯಮದ ಜನರನ್ನು ಈ ಪದವೀಧರ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಅಶ್ವಿನ್ ಮಹೇಶ್ ಮತ್ತು ಅವರ ಸಂಗಡಿಗರು ಬಹಳ ಪ್ರಯತ್ನಿಸುತ್ತಿದ್ದಾರೆ. ಪದವೀಧರ ಕ್ಷೇತ್ರದ ಮತದಾರನಾಗಿ ನೊಂದಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳ ಮಾಡುವ ವಿಷಯಕ್ಕೆ ಇವರು ಹೈಕೋರ್ಟಿಗೂ ಹೋಗಿದ್ದರು. ಮೊದಲೇ ಹೇಳಿದಂತೆ, ಮೂರೂ ದೊಡ್ಡ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಇವರು ಉತ್ತಮರು. ಇವರಿಗೆ ಕೊಡುವ ಓಟು ಅನರ್ಹನಿಗೆ ಕೊಡುವ ಓಟು ಎಂದು ಹೇಳಲಾಗದು.

ಕೆ.ಜಿ. ನಾಗಲಕ್ಷ್ಮಿ ಬಾಯಿ ಪತ್ರಕರ್ತೆ ಮತ್ತು ಹೋರಾಟಗಾರ್ತಿ, ಎರಡು-ಮೂರು ಪದವಿಗಳನ್ನು ಪಡೆದಿರುವ ಇವರು ಲಂಬಾಣಿ ತಾಂಡಾಗಳಲ್ಲಿ ಮಕ್ಕಳ ಮಾರಾಟ ಜಾಲ, ಲಿಂಗಪತ್ತೆ-ಭ್ರೂಣಹತ್ಯೆ, ಇತ್ಯಾದಿ ವಿಷಯಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. ರಾಜಕೀಯ ನಾಯಕರ ಕೃಪಾಕಟಾಕ್ಷದಿಂದ ಜಿ-ಕ್ಯಾಟೆಗರಿ ಎಂಬ ಅನೈತಿಕ ಮಾರ್ಗದಿಂದ ಸೈಟು ಹೊಡೆದುಕೊಂಡಿದ್ದವರ ವಿರುದ್ಧ ನ್ಯಾಯಾಲಯಕ್ಕೂ ಹೋಗಿ ಹಲವಾರು ಸೈಟುಗಳ ಅಕ್ರಮ ನೀಡಿಕೆಯನ್ನು ರದ್ದು ಮಾಡಿಸಿ ಸರ್ಕಾರಕ್ಕೆ ಸುಮಾರು 20 ಕೋಟಿ ಆಸ್ತಿ ಉಳಿಸಿಕೊಟ್ಟಿದ್ದಾರೆ. ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಮನೆ ನಿರ್ಮಾಣದಲ್ಲಿ ಅಕ್ರಮಗಳೆಸಗಿರುವುದರ ವಿರುದ್ದ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಗೃಹ ಸಚಿವ ಅಶೋಕರ ವಿರುದ್ಧ ನ್ಯಾಯಾಲಯದಲ್ಲಿ ಹೂಡಲಾಗಿರುವ ಮೊಕದ್ದಮೆಯ ಹಿಂದೆ ಇವರೂ ಇದ್ದಾರೆ. ಈ ಮಟ್ಟದಲ್ಲಿ ಕರ್ನಾಟಕದಲ್ಲಿ ಪ್ರಭಾವಿ ಮತ್ತು ಬಲಿಷ್ಟರನ್ನು ನೇರವಾಗಿ ಎದುರು ಹಾಕಿಕೊಂಡಿರುವ ಇನ್ನೊಬ್ಬ ಹೆಣ್ಣುಮಗಳು ಈಗ ಸದ್ಯಕ್ಕೆ ಕರ್ನಾಟಕದಲ್ಲಿ ಇಲ್ಲ ಎಂದು ಹೇಳಬೇಕು.

ಆದರೆ, ನಾಗಲಕ್ಷ್ಮಿ ಬಾಯಿಯವರು ಪಕ್ಷೇತರರಾಗಿ ನಿಲ್ಲುವುದಕ್ಕಿಂತ ತಮ್ಮ ಧ್ಯೇಯ-ನಿಲುವು-ಸಾಮಾಜಿಕ ಕಾಳಜಿಗಳಿಗೆ ಹತ್ತಿರವಿರುವ ಪಕ್ಷಕ್ಕೆ ಸೇರಿಕೊಂಡು, ಅಲ್ಲಿ ಕಾರ್ಯಕರ್ತೆಯಾಗಿ ದುಡಿದು, ಅಂತಹ ಪಕ್ಷದಿಂದ ಚುನಾವಣೆಗೆ ನಿಲ್ಲುವುದು ಸೂಕ್ತ. ಪಕ್ಷೇತರರಾಗಿ ನಿಂತು ಗೆಲ್ಲುವುದು ಈ ಸಂದರ್ಭದಲ್ಲಿ ಕಷ್ಟವಷ್ಟೇ ಅಲ್ಲ, ಇವರ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳೇನು ಎಂದು ಮತದಾರರಿಗೆ ತಿಳಿಯಪಡಿಸುವುದೂ ಕಷ್ಟ. ಆದರೂ, ಇವರೂ ಸಹ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಚಾರ ಕೈಗೊಂಡಿದ್ಡಾರೆ. ಇವರೂ ಸಹ ಮೂರೂ ದೊಡ್ಡ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಉತ್ತಮರು. ಇವರಿಗೆ ಕೊಡುವ ಓಟು ಸಹ ಅನರ್ಹನಿಗೆ ಕೊಡುವ ಓಟು ಎಂದು ಹೇಳಲಾಗದು.

ಕೆ.ಎಸ್. ಲಕ್ಷ್ಮಿಯವರು ಚಳವಳಿ ಮತ್ತು ಸಂಘಟನೆಗಳಿಂದ ಬಂದವರು. ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೆನೆಟ್ ಸದಸ್ಯರಾಗಿ ಚುನಾಯಿತರಾಗಿ ಕೆಲಸ ನಿರ್ವಹಿಸಿರುತ್ತಾರೆ. ಕಮ್ಯುನಿಸ್ಟ್ ಪಕ್ಷದ ಅಂಗಸಂಸ್ಥೆಯಾದ SFI ನಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈಗ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ಡಾರೆ.

ನಾನು ಹೇಗೆ ಕೋಮುವಾದಿಯಾಗಲಾರೆನೋ, ಹಾಗೆಯೇ ಕಮ್ಯುನಿಸ್ಟನೂ ಆಗಲಾರೆ. ಆದರೆ, ನಮ್ಮ ದೇಶದ ಕಮ್ಯುನಿಸ್ಟರ ಅನೇಕ ವಿಚಾರಗಳಿಗೆ (ಆರ್ಥಿಕ ಮತ್ತು ಅವರ ಪಕ್ಷವ್ಯವಸ್ಥೆಯ ಹೊರತಾಗಿ) ನನ್ನ ಸಹಮತವಿದೆ. ಅವರು ಬಯಸುವ ಸಮಾನತೆಯನ್ನು ನಾನೂ ಬೆಂಬಲಿಸುತ್ತೇನೆ. ಆ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಪ್ರಾಮಾಣಿಕತೆ ಮತ್ತು ಸರಳ ಜೀವನವನ್ನು, ತುಡಿತವನ್ನು, ಪ್ರಶಂಸಿಸುತ್ತೇನೆ. ಕರ್ನಾಟಕದ ಈಗಿನ ವರ್ತಮಾನದಲ್ಲಿ ಒಂದು ಪ್ರಬಲ ರಾಜಕೀಯ ಹೋರಾಟ ರೂಪಿಸುವುದಕ್ಕೆ ಕಮ್ಯುನಿಸ್ಟರಿಗೆ ಅವಕಾಶವಿದೆ. ಆ ಪಕ್ಷಗಳಲ್ಲಿ ಭ್ರಷ್ಟರಾಗದ, ತೀವ್ರನಿಷ್ಠೆಯಿಂದ ದುಡಿಯುವ, ವೈಯಕ್ತಿಕ ಕಷ್ಟಗಳನ್ನು ಮತ್ತು ಆಕಾಂಕ್ಷೆಗಳನ್ನು ಬದಿಗೊತ್ತಿ ಕೆಲಸ ಮಾಡುವ ನಾಯಕ-ಕಾರ್ಯಕರ್ತರ ದೊಡ್ಡ ಗುಂಪೇ ಇದೆ. ಆದರೂ ಈ ಗುಂಪು ಒಂದು ಬಲವಾದ ಸೈದ್ಧಾಂತಿಕ ಹೋರಾಟವನ್ನು ಕರ್ನಾಟಕದಲ್ಲಿ ರೂಪಿಸುವಲ್ಲಿ, ಆ ಮೂಲಕ ಪರ್ಯಾಯವೊಂದನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದ್ರಾರೆ. ಹೆಚ್ಚುಹೆಚ್ಚು ಅಕಡೆಮಿಕ್ ಭಾಷೆಯನ್ನೇ ಮಾತನಾಡುತ್ತ, ಚಿಂತನೆಯನ್ನೇ ಹೇಳುತ್ತ, ಎಲ್ಲರನ್ನೂ ಒಳಗೊಂಡ ಒಂದು ರಾಜಕೀಯ ಪಕ್ಷವನ್ನು ಕಟ್ಟುವ ಕಾರ್ಯಕ್ರಮಗಳಿಗಿಂತ ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ವಿಚಾರಕ್ಕೇ ಹೆಚ್ಚು ಒತ್ತು ನೀಡಿದ್ದಾರೆ ಎನಿಸುತ್ತದೆ. ಇವರೂ ಸಹ ಕರ್ನಾಟಕದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ರೂಪಿಸುವಲ್ಲಿ ಮತ್ತು ಭ್ರಷ್ಟರನ್ನು ನ್ಯಾಯಾಲಯಕ್ಕೆ ಎಳೆಯುವಂತಹ ಕಾರ್ಯ ಮಾಡುವಲ್ಲಿ ವಿಫಲರಾಗಿದ್ದಾರೆ; ಹಲವಾರು ಸಂಘಟನೆಗಳ ಬಲವಿದ್ದೂ.

ಕೆ.ಎಸ್. ಲಕ್ಷ್ಮಿಯವರು ವಿದ್ಯಾರ್ಥಿಯಾಗಿದ್ದಾಗಿನಿಂದ ಹಿಡಿದು ಸೆನೆಟ್ ಸದಸ್ಯರಾಗುವ ತನಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದವರು. ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಮತ್ತು ಕಮ್ಯುನಿಸ್ಟ್ ಪಕ್ಷದವರಾದ್ದರಿಂದ ಸಹಜವಾಗಿಯೇ ವಿಚಾರವಂತರೂ ಸಹ. ಸೈದ್ಧಾಂತಿಕ ನೆಲೆಯಿಂದ ಬಂದವರಾಗಿರುವುದರಿಂದ ವಿಧಾನಪರಿಷತ್‌ನಲ್ಲಿ ಗಟ್ಟಿಯಾಗಿ ದನಿಯೆತ್ತಿ ವಿಷಯ ಮಂಡಿಸಬಲ್ಲವರು ಮತ್ತು ಆ ಸದನ ಬಯಸುವಂತೆ ಉತ್ತಮ ನೀತಿನಿರೂಪಕರಾಗಬಲ್ಲರು ಎಂದು ನಾನು ಭಾವಿಸುತ್ತೇನೆ.

ಹಾಗಾಗಿ ಕೆ.ಎಸ್. ಲಕ್ಷ್ಮಿಯವರಿಗೆ ಕೊಡುವ ಓಟು ಅರ್ಹರಿಗೆ ಕೊಡುವ ಓಟು ಎಂದು ನಾನು ಭಾವಿಸುತ್ತೇನೆ. ಈ ಚುನಾವಣೆಯಲ್ಲಿ ನನ್ನ ಮತ ಮತ್ತು ಬೆಂಬಲ ಇವರಿಗಿದೆ.

– ರವಿ ಕೃಷ್ಣಾರೆಡ್ಡಿ


ಮೊದಲೇ ಹೇಳಿದಂತೆ ನಮ್ಮ ವೆಬ್‌ಸೈಟಿನ ಓದುಗರು ತಮ್ಮ ಒಲವು ಮತ್ತು ಕಾರಣಗಳನ್ನು ಮತ್ತು ನನ್ನ ವಿಶ್ಲೇಷಣೆಯಲ್ಲಿನ ತಪ್ಪುಗಳನ್ನು ಲೇಖನದ ಮೂಲಕ ಅಥವ ಕೆಳಗೆ ಅಭಿಪ್ರಾಯಗಳ ಮೂಲಕ ದಾಖಲಿಸಬಹುದು.

ಎಲ್ಲರೂ ಜಾತಿಗೆ ಜೋತುಬಿದ್ದರೆ ಖರೆ ಖರೆ ಸಮರ್ಥರ ಪಾಡೇನು?


-ಡಾ.ಎಸ್.ಬಿ. ಜೋಗುರ  


 

ಭಾರತೀಯ ಸಾಮಾಜಿಕ ಸ್ತರವಿನ್ಯಾಸದಲ್ಲಿ ಸಂಚಲನೆಯ ಸಾಧನವಾಗಿ ಜಾತಿ ಮುಂಚಿನಿಂದಲೂ ಕೆಲಸ ಮಾಡುವುದಿದೆ. ಈ ಬಗೆಯ ಸಾಮಾಜಿಕ ಸಂಚಲನೆಯಲ್ಲಿ ಇಡಿಯಾಗಿ ಎರಡು ರೂಪಗಳಿವೆ. ಒಂದು ಲಂಬರೂಪದ ಸಂಚಲನೆ, ಮತ್ತೊಂದು ಸಮಾನಾಂತರ ಸಂಚಲನೆ. ಲಂಬರೂಪದ ಸಂಚಲನೆಯಲ್ಲಿಯೇ ಮತ್ತೆರಡು ಪ್ರಬೇಧಗಳಿವೆ ಮೇಲ್ಮುಖ ಹಾಗೂ ಕೆಳಮುಖ ಸಂಚಲನೆಗಳು. ಜಾತಿಯಲ್ಲಿ ಯಾವುದೇ ಬಗೆಯ ಸ್ಥಿತ್ಯಂತರಗಳಾದರೂ ಅದು ಕೇವಲ ಸಮಾನಾಂತರ ಸಂಚಲನೆಗೆ ಎಡೆ ಮಾಡಿಕೊಡುತ್ತದೆಯೇ ಹೊರತು, ಲಂಬರೂಪದ ಸಂಚಲನೆಗೆ ಅವಕಾಶವೀಯುವುದಿಲ್ಲ. ಊಟೋಪಚಾರದಲ್ಲಿ, ವಿವಾಹದಲ್ಲಿ, ಉದ್ಯೋಗದಲ್ಲಿ, ಧಾರ್ಮಿಕ ಆಚರಣೆಗಳಲ್ಲಿ, ಸಾಮಾಜಿಕ ಸಂಪರ್ಕದಲ್ಲಿ ಹೀಗೆ ಇನ್ನೂ ಅನೇಕ ಬಗೆಯ ಸಂಗತಿಗಳಲ್ಲಿ ಅಸಮಾನತೆಯನ್ನು ಪ್ರತಿಪಾದಿಸುವ, ಅದನ್ನೇ ಜಾತಿಯ ಆಚರಣೆ ಎಂದು ಒಪ್ಪಿಕೊಳ್ಳುವ ಮೂಲಕ ಜಾತಿಯೊಂದು ನಿರ್ಬಂಧಿತ ಸಂಸ್ಥೆಯಾಗಿ ಉಳಿದಿರುವುದಿದೆ.

ಮದ್ಯಕಾಲೀನ ಸಮಾಜದಲ್ಲಿ ಒಂದು ಸಾಮಾಜಿಕ ಅನಿಷ್ಟವಾಗಿದ್ದ ಜಾತಿಪದ್ಧತಿ ಇಂದು ಇಷ್ಟವಾಗಿ ಆಯಾ ಜಾತಿಯ ಸತ್ತೆ ಇಲ್ಲವೇ ಬಲ ಪ್ರದರ್ಶನದ ಕುರುಹಾಗಿ ಕೆಲಸ ಮಾಡುತ್ತಿದೆ. ರಾಜಕಾರಣದ ಹಿಂದಿರುವ ಬಹು ಮುಖ್ಯವಾದ ಕಾರಣವಾಗಿ ಜಾತಿ ಕೆಲಸ ಮಾಡುತ್ತಿದೆ. ಜಾತಿ ಬಿಟ್ಟರೆ ಕೆಟ್ಟೇನು ಎನ್ನುವ ಹಾಗೆ ರಾಜಕೀಯ ನಾಯಕರುಗಳು ತನ್ನ ಹಿಂದೆ ತನ್ನ ಜಾತಿಯ ಜನರಿದ್ದಾರೆ ಎನ್ನುವ ಜೊತೆಗೆ ಇತರೆ ಜಾತಿಯವರೂ ತನಗೆ ಬೆಂಬಲವಿದ್ದಾರೆ ಎಂದು ಹೇಳುವ ಮೂಲಕವೇ ಟಿಕೆಟ್ ಗಿಟ್ಟಿಸುವ ಸಂದರ್ಭದಲ್ಲಿ ತಾತ್ವಿಕ ಬದ್ಧತೆಯನ್ನಿಟ್ಟುಕೊಂಡು ರಾಜಕಾರಣ ಮಾಡುವವರನ್ನು ಅದಾಗಲೇ ಮಣ್ಣು ಕೊಟ್ಟಾಗಿದೆ. ಜಾತಿಯ ವಾಸನೆ ಈಗೀಗ ತೀರಾ ದಟ್ಟವಾಗತೊಡಗಿದೆ. ಸಾರ್ವಜನಿಕ ವಲಯದ ಮೂಲೆ ಮೂಲೆಯನ್ನೂ ಸ್ಪರ್ಷಿಸಿದ ಈ ಜಾತಿ ಎಲ್ಲಾ ಕಡೆ ತನ್ನ ಸರ್ವವ್ಯಾಪಕತೆಯನ್ನು ಮೆರೆಯುವ ಮೂಲಕ ಸಮರ್ಥರಿಗೂ ಅನ್ಯಾಯವಾಗುವ ಕೆಲಸವನ್ನು ಮಾಡುತ್ತಲೇ ಮುನ್ನಡೆದಿದೆ.

ಇತ್ತೀಚಿನ ದಿನಗಳಲ್ಲಿ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ, ತನ್ನ ಜಾತಿಯವರನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಕೂಗು ಮತ್ತೆ ಮತ್ತೆ ಕೇಳಿಬರುತ್ತಿದೆ. ಈ ದೇಶದಲ್ಲಿ ಮೂರುಸಾವಿರಕ್ಕಿಂತಲೂ ಹೆಚ್ಚು ಜಾತಿ ಉಪಜಾತಿಗಳಿವೆ. ಪ್ರತಿಯೊಂದು ಜಾತಿಯೂ ತನ್ನದೇಯಾದ ಒಂದು ಪುಟ್ಟ ಪ್ರಪಂಚವನ್ನು ಸ್ಥಾಪಿಸಿಕೊಂಡು ನಡುಗಡ್ಡೆಗಳ ಹಾಗೆ ಗೋಚರವಾಗುವ ಜೊತೆಗೆ, ರಾಷ್ಟ್ರೀಯ ಐಕ್ಯತೆಯಲ್ಲೂ ಪರೋಕ್ಷವಾಗಿ ಗಂಡಾಂತರಕಾರಿಯಾಗುವ ಕೆಲಸವನ್ನು ಮಾಡುತ್ತಿವೆ. ಈ ಸಾವಿರಾರು ಸಂಖ್ಯೆಯಲ್ಲಿರುವ ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗಲು ಶುರು ಮಾಡಿದರೆ ನಿಜವಾಗಿಯೂ ಅನ್ಯಾಯವಾಗಿ ಕೂಗದೇ ಇರುವವರನ್ನು ಕೇಳುವವರು ಯಾರು? ಒಂದು ರಾಷ್ಟ್ರದ ಮಾನವ ಸಂಪನ್ಮೂಲದ ಶಕ್ತಿ ಸಾಮರ್ಥ್ಯಗಳು ನಿರ್ಣಯವಾಗಬೇಕಾದುದು ಹೀಗೆ ಆಯಾ ಜಾತಿಯವರು ತನ್ನ ಜಾತಿಯನ್ನು ಮುಂದಿಟ್ಟುಕೊಂಡು ಮಾಡುವ ಶಿಫಾರಸುಗಳ ಮೂಲಕವಲ್ಲ. ಬದಲಾಗಿ ಯೋಗ್ಯ ವ್ಯಕ್ತಿಗೆ ಯೋಗ್ಯ ಸ್ಥಾನ ಎನ್ನುವ ಮೂಲಕ. ನಾನು [ಅ] ಎನ್ನುವ ಜಾತಿಗೆ ಸಂಬಂಧಿಸಿದವನು ಹಾಗಾಗಿಯೇ ನನಗೆ ಈ ಸ್ಥಾನಮಾನಗಳು ಸಿಗಬೇಕು. ನಾನು [ಬ] ಎನ್ನುವ ಜಾತಿಗೆ ಸಂಬಂಧಿಸಿದವ, ಮತ್ತೊಬ್ಬ [ಸಿ] ಅನ್ನುವ ಜಾತಿಗೆ ಸಂಬಂಧಿಸಿದವ, ಇದು ಹಾಗೇ ಮುಂದುವರೆಯುತ್ತದೆ. ಇದು ನಿನ್ನ ಜಾತಿಯನ್ನು ಮುಂದೆ ಮಾಡಿಕೊಂಡು ಕೇಳುವ ಹಕ್ಕಾಯಿತು. ಅಷ್ಟಕ್ಕೂ ನಿನ್ನಲ್ಲಿರುವ ಸತ್ವವಾದರೂ ಯಾವುದು? ಬರೀ ಅಮೂರ್ತವಾದ ಜಾತಿಯೇ? ಹೀಗೆ ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗಲು ಆರಂಭಿಸಿದರೆ ಆ ಅನ್ಯಾಯ ಪದಕ್ಕೆ ಅರ್ಥವೇ ಇರುವುದಿಲ್ಲ.

ಚಾರಿತ್ರಿಕವಾಗಿ ಸಾವಿರಾರು ವರ್ಷಗಳ ಕಾಲ ಶೋಷಣೆಯನ್ನು ಅನುಭವಿಸಿದ ದಮನಿತ ಜಾತಿಗಳು ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೇಳುವಲ್ಲಿ ಒಂದು ತಥ್ಯವಿದೆ. ಸಾವಿರಾರು ವರ್ಷಗಳಿಂದಲೂ ಎಲ್ಲ ಬಗೆಯ ಗೌರವಾರ್ಹ ಅಂತಸ್ತು ಮತ್ತು ಸೌಲಭ್ಯಗಳನ್ನು ಅನುಭಸಿಯೂ ತನ್ನ ಜಾತಿಗೂ ಅನ್ಯಾಯವಾಗಿದೆ ಎಂದು ಕೂಗುವಲ್ಲಿ ತುಂಬಾ ವ್ಯತ್ಯಾಸಗಳಿವೆ. ಹಾಗೆಂದು ಜಾತಿಯನ್ನಿಟ್ಟುಕೊಂಡು ಸಾಮರ್ಥ್ಯವನ್ನು ಸರಿದೂಗಿಸಿಕೊಳ್ಳುವ ಕ್ರಮ ಯಾವ ಕಾಲಕ್ಕೂ ಸರಿಯಲ್ಲ. ಯಾಕೆಂದರೆ ಯಾವ ಕಾಲಕ್ಕೂ ಖರೆ ಖರೆ ಸಮರ್ಥರಾದವರಿಗೆ ಅನ್ಯಾಯವಾಗಬಾರದು. ಅದು ಜಾತಿ, ಭಾಷೆ, ಜನಾಂಗ ಯಾವುದರ ಮೂಲಕವಾದರೂ ಇರಬಹುದು. ಒಂದು ರಾಷ್ಟ್ರದ ಮಾನವ ಸಂಪನ್ಮೂಲ ಅದು ಹೊಂದಿರುವ ತನ್ನ ಅಂತ:ಸತ್ವದ ಮೂಲಕ ಪ್ರಜ್ವಲಿಸಬೇಕೇ ಹೊರತು ಯಾರೋ ಒಬ್ಬ ಜಾತಿ ಪ್ರತಿನಿಧಿಯ ಹಂಬಲದಿಂದಾಗಲೀ, ಹುನ್ನಾರದಿಂದಾಗಲೀ ಅಲ್ಲ.

ಇಂದು ಎಲ್ಲ ಜಾತಿಗಳಲ್ಲಿ ಸಮರ್ಥರಿದ್ದಾರೆ. ಅವರಿಗಾಗಿ ಆಯಾ ಜಾತಿಯ ಪ್ರತಿನಿಧಿಗಳು ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗುವ ಅವಶ್ಯಕತೆಯಿಲ್ಲ. ಹಾಗೆಯೇ ತನ್ನ ಜಾತಿಯಲ್ಲಿರುವ ಅಸಮರ್ಥರ ಬಗೆಗೂ ಆತ ಕೂಗುವಂತಿಲ್ಲ. ಯಾಕೆಂದರೆ ಅವರ ಅಸಮರ್ಥತೆತನ್ನು ಸಮರ್ಥವಾಗಿ ತುಂಬುವ ಸಾಧನಗಳನ್ನು ಸೃಷ್ಟಿಸುವ ದಿಶೆಯಲ್ಲಿ ಯೋಜಿಸಬೇಕು. ಅನೇಕ ಸಂದರ್ಭಗಳಲ್ಲಿ ಒಬ್ಬ ಪ್ರತಿಭಾವಂತನಿಗೆ ಈ ಜಾತಿಯ ತಾರತ್ಯಮ ಧೋರಣೆಯಿಂದಾಗಿ ಅನ್ಯಾಯವಾಗುವುದಿದೆ. ಆತ ನಿಜವಾಗಿಯೂ ಸಮರ್ಥ, ಅವಕಾಶ ಸಿಕ್ಕರೆ ಮಹತ್ತರವಾದುದನ್ನು ಮಾಡಿ ತೋರುವ ಎಲ್ಲ ಗುಣ-ಸಾಮರ್ಥ್ಯಗಳೂ ಅವನಲ್ಲಿವೆ. ದುರಂತವೆಂದರೆ ಆತ ಯಾವುದೋ ಒಂದು ಜಾತಿಯವರ ತಾತ್ಸಾರಕ್ಕೆ ಒಳಗಾಗಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲೇ ಉಳಿಯುತ್ತಾನೆ. ಇಂಥಾ ಅದೆಷ್ಟೋ ಸಮರ್ಥರು ಸಾಮಾಜಿಕ ಬದುಕಿನ ಅನೇಕ ರಂಗಗಳಲ್ಲಿ ಜಾತಿಯ ಮೂಲಕ ಉಪೇಕ್ಷಿತರಾಗಿದ್ದಾರೆ. ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಲೇ ಇತರೆ ಜಾತಿಗಳನ್ನು ಶೋಷಿಸುವ, ತುಳಿಯುವ ಕುಹಕ ಬುದ್ಧಿಯವರ ನಡುವೆ ಖರೆ ಖರೆ ಪ್ರತಿಭಾವಂತರ ಪರಿಸ್ಥಿತಿ ಏನು?

ಆತ ಯಾರೇ ಆಗಿರಲಿ, ಯಾವುದೇ ಜಾತಿಗೆ ಸಂಬಂಧಿಸಿರಲಿ ಅವನಲ್ಲಿ ಸತ್ವ ಮತ್ತು ಶಕ್ತಿ ಇದೆ ಎಂದರೆ ಅದನ್ನು ನಾವು ಯಾವುದೇ ಜಾತಿಗೆ ಸಂಬಂಧ ಪಟ್ಟವರಾದರೂ ಗೌರವಿಸಲೇಬೇಕು. ಗುಣಕ್ಕೆ ಮತ್ಸರವಿಲ್ಲ ಎಂದವರು ನೀವೇ ಅಲ್ಲವೇ? ಹೀಗಾಗಿ ಗುಣಗೌರವ ಅನಿವಾರ್ಯ. ತಮ್ಮ ತಮ್ಮ ಜಾತಿಯ ತೌಡನ್ನೇ ಗಟ್ಟಿ ಕಾಳು ಎಂದು ಬಿಂಬಿಸುವ ಅನೀತಿಯನ್ನು ಯಾರೂ ಮಾಡಬಾರದು. ಎಲ್ಲರೂ ತನ್ನ ಜಾತಿಯವರಿಗೆ ಮಾತ್ರ ಅನ್ಯಾಯವಾಗಿದೆ ಎನ್ನುವುದನ್ನು ನೋಡಿದರೆ ಎಲ್ಲ ಜಾತಿಗಳು ಸಾಮರ್ಥ್ಯವನ್ನು, ಸಮರ್ಥರನ್ನು ಪೋಷಿಸುವ, ಪೊರೆಯುವ ಪರಿಪಾಠವನ್ನು ಮರೆತಂತಿದೆ. ಪ್ರತಿನಿತ್ಯ ಈ ಹಾಳಾದ ಜಾತಿಪದ್ಧತಿಯಿಂದ ಅನೇಕ ಪ್ರತಿಭಾವಂತರಿಗೆ, ಸಮರ್ಥರಿಗೆ ಅನ್ಯಾಯವಾಗುವುದಿದೆ. ಈ ಬಗೆಯ ಅನ್ಯಾಯ ಮಾತ್ರ ಜಾತ್ಯಾತೀತವಾದುದು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ. ಪ್ರತಿಯೊಬ್ಬರೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಯೋಚಿಸುವ ಬದಲಾಗಿ ಆತ ಯಾವುದೇ ಜಾತಿಯವನಾದರೂ ಆತ ಸಮರ್ಥನಿದ್ದಾನೆ, ಅವನಿಗೆ ಅನ್ಯಾಯವಾಗಬಾರದು ಎಂದು ಯೋಚಿಸುವಂತಾಗಬೇಕು. ಖ್ಯಾತ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಈ ಜಾತಿಯ ಕುರುಡು ಮೋಹದ ಅಪಾಯವನ್ನು ಹೀಗೆ ಹೇಳಿದ್ದಾರೆ. ‘ಪ್ರಸ್ತುತ ಸಂದರ್ಭದಲ್ಲಿ ಒಟ್ಟು ಜನಸಂಖ್ಯೆಯ ತೀರಾ ಕಡಿಮೆ ಪ್ರಮಾಣದ ಬುದ್ಧಿಮತ್ತೆ ಮತ್ತು ಸಾಮರ್ಥ್ಯವನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ, ಇದರಿಂದ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ವ್ಯಯವಾಗುತ್ತದೆ, ಅಲಕ್ಷಿತವಾಗುತ್ತದೆ. ಇದು ಪರೋಕ್ಷವಾಗಿ ಅಪರಾಧವೂ ಹೌದು,’ ಎಂದಿರುವದನ್ನು ನೋಡಿದರೆ ಜಾತಿಯಾಧಾರಿತ ಮಾನವ ಸಂಪನ್ಮೂಲದ ಬಳಕೆಯ ಬದಲಾಗಿ ಸಮರ್ಥತೆಯ ತಳಹದಿಯ ಮೇಲೆ ಅದು ಸಾಧ್ಯವಾಗಬೇಕು.

(ಚಿತ್ರಕೃಪೆ: ದ ಹಿಂದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 23)


– ಡಾ.ಎನ್.ಜಗದೀಶ್ ಕೊಪ್ಪ


 

1925ರ ಡಿಸಂಬರ್ ತಿಂಗಳಿನಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಹಾಗೂ ಒಂದಿಷ್ಟು ವಿಶ್ರಾಂತಿಗಾಗಿ ನೈನಿತಾಲ್‌ಗೆ ಬಂದ ಕಾರ್ಬೆಟ್‌‍ಗೆ ಮತ್ತೇ ರುದ್ರಪ್ರಯಾಗಕ್ಕೆ ಹೋಗಿ ನರಭಕ್ಷಕನನ್ನು ಬೇಟೆಯಾಡಬೇಕೆಂದು ಮನಸ್ಸಿನಲ್ಲಿ ಕೊರೆಯುತಿತ್ತು. ಆದರೆ, ನೈನಿತಾಲ್ ಹಾಗೂ ದೂರದ ತಾಂಜೇನಿಯಾದಲ್ಲಿನ ಅವನ ಕೃಷಿ ಮತ್ತು ಎಸ್ಟೇಟ್ ವ್ಯವಹಾರಗಳು ಅವನಿಗೆ ಅಡ್ಡಿಯಾಗುತಿದ್ದವು. ಜೊತೆಗೆ ಚಳಿಗಾಲದ ಶೀತಗಾಳಿ ಅವನ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಇವತ್ತು ಕೂಡ, ಸಂಜೆ ಆರರ ನಂತರ ನಾವು ನೈನಿತಾಲ್, ಅಲ್ಮೋರ. ರಾಣಿಖೇತ್, ರುದ್ರಪ್ರಯಾಗ ಅಥವಾ ಮನಾಲಿಯಲ್ಲಿ ಗಾಳಿಗೆ ಮೈಯೊಡ್ಡಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇನ್ನು 85 ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ನೀವೇ ಊಹಿಸಿ.

ಕಾರ್ಬೆಟ್‌ ರುದ್ರಪ್ರಯಾಗದಿಂದ ನೈನಿತಾಲ್‌ಗೆ ವಾಪಸ್ ಬಂದ ನಂತರ, ನರಭಕ್ಷಕ ಚಿರತೆ ರುದ್ರಪ್ರಯಾಗದ ಆಸುಪಾಸಿನ ಹಳ್ಳಿಗಳಲ್ಲಿ ಅಸಂಖ್ಯಾತ ಮೇಕೆ, ಹಸುಗಳು ಅಲ್ಲದೇ, ಹತ್ತು ಜನರನ್ನು ಬಲಿತೆಗೆದುಕೊಂಡಿತ್ತು. ಈ ಎಲ್ಲಾ ಸುದ್ಧಿಗಳು ಕಾರ್ಬೆಟ್‌ಗೆ ಇಬ್ಸ್‌ಟನ್ ಮೂಲಕ ತಲಪುತಿದ್ದವು. ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆ ಆರಂಭವಾಗುತಿದ್ದಂತೆ, ಕಾಬೆಟ್ ತನ್ನ ಸಂಗಡಿಗರೊಂದಿಗೆ ಮತ್ತೆ ರುದ್ರಪ್ರಯಾಗಕ್ಕೆ ನರಭಕ್ಷಕನ ಬೇಟೆಗೆ ಹೊರಟ. ಈ ಬಾರಿ ಅವನು ಕಾಲ್ನಡಿಗೆ ಅಥವಾ ಕುದುರೆ ಸವಾರಿ ಬದಲಿಗೆ, ನೈನಿತಾಲ್ ಗಿರಿಧಾಮದ ಕೆಳಗಿರುವ ಕತಂಗೊಂಡಂನಿಂದ ರೈಲಿನಲ್ಲಿ ಹರಿದ್ವಾರ, ಕೋಟದ್ವಾರದ ಮೂಲಕ ರುದ್ರಪ್ರಯಾಗ ತಲುಪಿದನು ಇದರಿಂದಾಗಿ 8-10 ದಿನಗಳ ಕಾಲ್ನಡಿಗೆಯ ಪ್ರಯಾಣದ ಸಮಯ ಉಳಿತಾಯವಾಯಿತು.

ಕಾರ್ಬೆಟ್‌ ತನ್ನ ನೆಚ್ಚಿನ ಭಂಟ ಮಾಧೂಸಿಂಗ್ ಮತ್ತು ಸೇವಕರೊಡನೆ ರುದ್ರಪ್ರಯಾಗ ತಲುಪುವ ವೇಳೆಗೆ, ಛಾರ್ ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಕೇದಾರನಾಥ, ಮತ್ತು ಬದರಿನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಆಗಮಿಸುತಿದ್ದರು. ಎಲ್ಲಾ ಪಟ್ಟಣಗಳು ಮತ್ತು ಯಾತ್ರೆಯ ಹಾದಿಯಲ್ಲಿದ್ದ ಹಳ್ಳಿಗಳು ಭಕ್ತರಿಂದ ತುಂಬಿ ತುಳುಕುತಿದ್ದವು.. ನರಭಕ್ಷಕ ಚಿರತೆ ಯಾತ್ರೆಯ ಹಾದಿಯಲ್ಲಿರುವ ಹಳ್ಳಿಗಳನ್ನ ಗುರಿಯಾಗಿರಿಸಿಕೊಂಡು ನರಬಲಿ ತೆಗೆದುಕೊಳ್ಳುವುದನ್ನು ಆರಂಭಿಸಿತ್ತು.

ಎರಡನೇ ಬಾರಿ ರುದ್ರಪ್ರಯಾಗಕ್ಕೆ ಕಾರ್ಬೆಟ್‌ ಮತ್ತು ಅವನ ತಂಡ ಬಂದಾಗ ಜಿಲ್ಲಾಧಿಕಾರಿ ಇಬ್ಸ್‌ಟನ್ ಬಂದು ಇವರನ್ನು ಸೇರಿಕೊಳ್ಳಲಾಗಲಿಲ್ಲ. ಪೌರಿಯಲ್ಲಿ ಸರ್ಕಾರದ ಕೆಲಸದ ಒತ್ತಡದಿಂದಾಗಿ ವಾರ ಕಳೆದು ಪತ್ನಿ ಜೀನ್ ಬರುವುದಾಗಿ, ಸಂದೇಶ ಕಳಿಸಿ, ಕಾರ್ಬೆಟ್‌ ಮತ್ತು ಅವನ ತಂಡಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದ್ದನು.

ಕಾರ್ಬೆಟ್‌ ಬರುವುದರೊಳಗೆ, ರುದ್ರಪ್ರಯಾಗದ ಸನೀಹದ ಗೋಲಬಾರಿ ಹಳ್ಳಿಯಲ್ಲಿ ನರಭಕ್ಷಕ ಮಧ್ಯವಯಸ್ಸಿನ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ಆ ನತದೃಷ್ಟ ಮಹಿಳೆ ಕತ್ತಲಾದ ಕಾರಣ ತನ್ನ ಹಳ್ಳಿಗೆ ಹಿಂತಿರುಗಲಾರದೆ, ಪಂಡಿತನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಸೋಜಿಗವೆಂದರೆ, ಐವತ್ತಕ್ಕೂ ಪ್ರವಾಸಿಗರು ಮಲಗಿದ್ದ ವಿಶಾಲವಾದ ಜಾಗದಲ್ಲಿ ಎಲ್ಲರನ್ನು ಬಿಟ್ಟು ಈಕೆಯನ್ನು ಮಿಸುಕಾಡಲು ಆಸ್ಪದ ನೀಡದೆ, ಕೊಂದು ಹೊತ್ತೊಯ್ದು ತಿಂದು ಹಾಕಿತ್ತು.

ಈ ಘಟನೆಯ ಹಿಂದಿನ ಐದು ದಿನಗಳ ಹಿಂದೆ ಇದೇ ನರಭಕ್ಷ ಪಕ್ಕದ ಹಳ್ಳಿಯಲ್ಲಿ ರಾತ್ರಿಯ ವೇಳೆ ಜಾನುವಾರುಗಳಿಗೆ ಮೇವನ್ನು ಹಾಕುತಿದ್ದ ರೈತ ಮಹಿಳೆಯ ಮೇಲೆ ದಾಳಿ ಮಾಡಿತ್ತು. ಮೇವು ಕತ್ತರಿಸಲು ಆಕೆ ಕೈಯಲ್ಲಿ ಕುಡಗೋಲು ಇದ್ದ ಕಾರಣ ಅದರ ಮೂತಿಗೆ ಬಲವಾಗಿ ಹೊಡೆದು ತಪ್ಪಿಸಿಕೊಂಡಿದ್ದಳು. ಆದರೂ ಅದು ಅವಳ ಮೊಣಕಾಲಿನ ಹಿಂಬದಿಯ ಮಾಂಸ ಖಂಡವನ್ನು ಬಲವಾಗಿ ಕಚ್ಚಿ ಹಿಡಿದು ಗಾಯಗೋಳಿಸಿತ್ತು. ಇದೇ ರೀತಿ ನರಭಕ್ಷಕ ದಾಳಿಯಿಂದ ಬದುಕುಳಿದ ಇನ್ನೋರ್ವ ವ್ಯಕ್ತಿಯೆಂದರೆ, ಪಂಡಿತ. ಅವನು ಒಮ್ಮೆ ತನ್ನ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಪ್ರವಾಸಿಗರ ಜೊತೆ ಮಲಗಿದ್ದಾಗ, ನಡುರಾತ್ರಿ ಉಸಿರು ಕಟ್ಟಿದ ಅನುಭವವಾಗಿ ಬಾಗಿಲು ತೆರೆದು ಹೊರಗಿನ ಹಜಾರಕ್ಕೆ ಬಂದ ತಕ್ಷಣ ಕಾದು ಕುಳಿತಿದ್ದ ನರಭಕ್ಷಕ ಇವನ ಮೇಲೆ ಎರಗಿತ್ತು. ಕಂಬದ ಬಳಿ ಅವನು ನಿಂತಿದ್ದರಿಂದ ಅದನ್ನು ಬಲವಾಗಿ ತಬ್ಬಿ ಹಿಡಿದು, ಚಿರತೆಯ ಹೊಟ್ಟೆಗೆ ಬಲವಾಗಿ ಒದ್ದು ಅದರ ಹಿಡಿತದಿಂದ ಬಿಡಿಸಿಕೊಂಡಿದ್ದ. ಆದರೆ, ಅದರ ಬಲವಾದ ಉಗುರುಗಳು ಅವನ ಕತ್ತನ್ನು ಸೀಳಿ, ಅನ್ನನಾಳ, ಮತ್ತು ಶ್ವಾಸನಾಳಗಳೆರಡನ್ನು ಘಾಸಿಗೊಳಿಸಿದ್ದವು. ರುದ್ರಪ್ರಯಾಗದ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದನು.

ಈ ಬಾರಿ ನರಭಕ್ಷಕ ಚಿರತೆಯನ್ನು ಅರಸಿಕೊಂಡು ಹಳ್ಳಿಗಳನ್ನು ಸುತ್ತುವ ಬದಲು. ಯಾತ್ರಿಕರ ಹಾದಿಯಲ್ಲಿ ಗಸ್ತು ತಿರುಗುತ್ತಿರುವ ಅದನ್ನು ಹಾದಿಯ ಸಮೀಪದಲ್ಲೇ ಮೇಕೆಯೊಂದನ್ನು ಕಟ್ಟಿ ಕಾಕಿ, ಮರದ ಮೇಲೆ ಕುಳಿತು ಬೇಟೆಯಾಡಬೇಕೆಂದು ಕಾರ್ಬೆಟ್‌ ತೀರ್ಮಾನಿಸಿದನು. ಅಷ್ಟರ ವೇಳೆಗೆ ರುದ್ರಪ್ರಯಾಗಕ್ಕೆ ಆಗಮಿಸಿದ ಇಬ್ಸ್‌ಟನ್ ದಂಪತಿಗಳು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಯಾತ್ರಿಕರ ಹಾದಿಯಲ್ಲಿ ಹೊಂಚು ಹಾಕಿ ಪ್ರತಿ ಐದು ದಿನಕ್ಕೊಮ್ಮೆ ಮನುಷ್ಯರನ್ನು ಬಲಿತೆಗೆದುಕೊಳ್ಳತಿದ್ದ ನರಭಕ್ಷಕನನ್ನು ಹೊಡೆಯಲು, ಗೋಲಬಾರಿ ಹಳ್ಳಿಯ ಪಂಡಿತನ ಮನೆಯ ಮೊಭಾಗದ ಹಳ್ಳದಲ್ಲಿರುವ ಕಾಡಿಗೆ ಸಂಪರ್ಕ ಕಲ್ಪಿಸುವ ಹಾದಿಯೇ ಸೂಕ್ತ ಎಂದು ಕಾರ್ಬೆಟ್‌ ನಿರ್ಧರಿಸಿದನು. ಅಲ್ಲೊಂದು ಮಾವಿನ ಮರವಿದ್ದ ಕಾರಣ ಆ ಸ್ಥಳವನ್ನು ಬೇಟೆಗಾಗಿ ಆಯ್ಕೆ ಮಾಡಿಕೊಂಡನು. ತನ್ನ ಸೇವಕರನ್ನು ಕರೆಸಿ ಮರದ ಮೇಲೆ ಮಚ್ಚಾನು ಕಟ್ಟಿಸಿ, ಪಕ್ಕದ ಹಳ್ಳಿಯೊಂದರಿಂದ ಮೇಕೆಯೊಂದನ್ನು ಖರೀದಿಸಿ ತಂದನು. ಸಾಮಾನ್ಯವಾಗಿ ಮನುಷ್ಯರ ಬೇಟೆಗಾಗಿ ಪಕ್ಕದ ಕಾಡಿನಿಂದ ಚಿರತೆ ಈ ಹಾದಿಯಲ್ಲಿ ಬರುತಿದ್ದುದನ್ನು ಅದರ ಹೆಜ್ಜೆಯ ಗುರುತುಗಳಿಂದ ಕಾರ್ಬೆಟ್‌ ದೃಢಪಡಿಸಿಕೊಂಡಿದ್ದ.

ಈ ಬಾರಿ ನರಭಕ್ಷಕನ ಬೇಟೆ ವಿಫಲವಾದರೆ, ಮತ್ತೇ ನಾನು ರುದ್ರಪ್ರಯಾಗಕ್ಕೆ ಬರಲಾರೆ ಎಂದು ಕಾರ್ಬೆಟ್‌ ಜಿಲ್ಲಾಧಿಕಾರಿ ಇಬ್ಸ್‌ಟನ್‌ಗೆ ತಿಳಿಸಿದ್ದ. ಇದರ ಸಲುವಾಗಿಯೇ ಅವನ ಹಲವಾರು ವ್ಯವಹಾರಗಳು ಕುಂಠಿತಗೊಂಡಿದ್ದವು. ತಾನು ತುರ್ತಾಗಿ ಬೇಟಿ ನೀಡಬೇಕಾಗಿದ್ದ ತಾಂಜೇನಿಯ ಪ್ರವಾಸವನ್ನು ಕಳೆದ ಮೂರು ತಿಂಗಳಿನಿಂದ ಮುಂದೂಡತ್ತಲೇ ಬಂದಿದ್ದನು.

ಕಾರ್ಬೆಟ್‌ ಮೇಕೆಯ ಕೊರಳಿಗೆ ಗಂಟೆಯನ್ನು ಕಟ್ಟಿ ಅದನ್ನು ಮಾವಿನ ಮರದ ಸಮೀಪ ಕೇವಲ 20 ಅಡಿ ದೂರದಲ್ಲಿ ಕಟ್ಟಿ ಹಾಕಿ ಪ್ರತಿದಿನ ಸಂಜೆ ಬಂದು ರಾತ್ರಿಯೆಲ್ಲಾ ನರಭಕ್ಷಕನಿಗೆ ಕಾಯಲು ಆರಂಭಿಸಿದ. ಮಾವಿನ ಮರ ಎತ್ತರವಿದ್ದ ಕಾರಣ ಚಿರತೆಗೆ ಕಾರ್ಬೆಟ್‌ನ ಸುಳಿವು ಸಿಗಲು ಸಾಧ್ಯವಿರಲಿಲ್ಲ. ಹೀಗೆ ಸತತ ಹತ್ತು ರಾತ್ರಿಗಳನ್ನು ಮರದ ಮೇಲೆ ಕುಳಿತು ಕಾದರೂ ಏನೂ ಫಲ ಸಿಗದ ಕಾರಣ ಅವನಲ್ಲಿ ಹತಾಶೆಯ ಮನೋಭಾವ ಮೋಡತೊಡಗಿತು. ಇನ್ನೆರೆಡು ದಿನ ಕಾದು, ಈ ನರಭಕ್ಷಕನ ಶಿಕಾರಿ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿ, ಹೋಗೋಣವೆಂದು ಕಾರ್ಬೆಟ್‌ ಅಂತಿಮವಾಗಿ ದೃಢ ನಿಶ್ಚಯಕ್ಕೆ ಬಂದ. ಆದರೆ, ಅವನ ಕಾಯುವಿಕೆಯನ್ನು ನಿರಾಶೆಗೊಳಿಸದೆ, ಹನ್ನೊಂದನೇ ದಿನದ ರಾತ್ರಿ 9 ಗಂಟೆ ಸುಮಾರಿಗೆ ನರಭಕ್ಷಕ ಚಿರತೆ ಮಾವಿನ ಮರದ ಬಳಿ ಕಟ್ಟಿ ಹಾಕಿದ್ದ ಮೇಕೆಯ ಬಳಿ ಬಂತು. ಈ ಬಾರಿ ನೈನಿತಾಲ್‌ನಿಂದ ಖರೀದಿಸಿ ತಂದಿದ್ದ ನೇರವಾಗಿ ಬೆಳಕು ಚೆಲ್ಲುವ ಟಾರ್ಚ್ ಒಂದನ್ನು ಬಂದೂಕದ ನಳಿಕೆಗೆ ಕಾರ್ಬೆಟ್‌ ಜೋಡಿಸಿಕೊಂಡಿದ್ದ. ಕತ್ತಲೆಯಲ್ಲಿ ಮೈಯೆಲ್ಲವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಂಡು ನೋಡತೊಗಿದ. ಮೇಕೆಯ ಸನೀಹ ಬಂದು ಕುಳಿತ ಚಿರತೆ ಅದರ ಮೇಲೆ ಎರಗುವ ಮುನ್ನ ಸುತ್ತ ಮುತ್ತ ಅಪಾಯವಿರಬಹುದೇ ಎಂಬಂತೆ ಸುತ್ತೆಲ್ಲಾ ನೋಡತೊಡಗಿತು. ಮೇಕೆ ಗಾಬರಿಯಿಂದ ಅಲುಗಾಡಿದ ಪರಿಣಾಮ ಅದರ ಕೊರಳಿದ್ದ ಗಂಟೆಯ ಶಬ್ಧ ಕಾರ್ಬೆಟ್‌ಗೆ ಕೇಳತೊಡಗಿತು. ತಕ್ಷಣವೆ ಟಾರ್ಚ್ ಬೆಳಕು ಬಿಟ್ಟ. ಮೇಕೆ ಮೇಲೆ ಎರಗಲು ಭೂಮಿಯ ಮೇಲೆ ಕವುಚಿ ಹಾಕಿ ಕುಳಿತ ನರಭಕ್ಷಕ ಬೆಳಕು ಬಂದ ಮಾವಿನ ಮರದತ್ತ ನೋಡತೊಡಗಿತು. ಕೂಡಲೇ ಕಾರ್ಬೆಟ್‌ ಗುಂಡು ಹಾರಿಸಿಬಿಟ್ಟ. ಆ ಕತ್ತಲೆಯಲ್ಲಿ ಏನು ಜರುಗಿದೆ ಎಂಬುದು ತಿಳಿಯದ ಸ್ಥಿತಿ. ಗುಂಡಿನ ಶಬ್ಧ ಕೇಳಿ, ಕೇವಲ ನೂರೈವತ್ತು ಅಡಿ ದೂರದಲ್ಲಿದ್ದ ಮನೆಯ ಬಾಗಿಲು ತೆರೆದು ಹೊರಬಂದ ಪಂಡಿತ ಜೋರಾಗಿ ಅರುಚುತ್ತಾ, ’ಸಾಹೇಬ್ ಗುಂಡಿಗೆ ಚಿರತೆ ಸಿಕ್ತಾ?’ ಎಂದು ಕೇಳಿದ. ಕಾರ್ಬೆಟ್‌ಗೆ ಆ ಕ್ಷಣದಲ್ಲಿ ಪಂಡಿತನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತು. ಆವನ ಕೂಗಿಗೆ ಕಾರ್ಬೆಟ್‌ ಉತ್ತರಿಸಲಿಲ್ಲ.

ಆಕಾಶದಲ್ಲಿ ಕತ್ತಲೆಯಿದ್ದ ಕಾರಣ ಚಂದ್ರನ ಬೆಳಕಿಗೆ ಬೆಳಗಿನ ಜಾವ ಮೂರು ಗಂಟೆಯವರೆಗೆ ಕಾಯಬೇಕಿತ್ತು. ಸ್ವಲ್ಪ ಸಮಯದ ನಂತರ ಮೇಕೆಯ ಗಂಟೆ ಸದ್ದು ಮತ್ತೇ ಕೇಳಿದ ನಂತರ ಕಾರ್ಬೆಟ್‌ಗೆ ಕುತೂಹಲ ಹೆಚ್ಚಾಗತೊಡಗಿತು. ಮರದ ಮೇಲಿನ ಭಾಗಕ್ಕೆ ಹೋಗಿ ಸುತ್ತೆಲ್ಲಾ ವೀಕ್ಷಿಸತೊಡಗಿದ. ಏನೂ ಕಾಣಲಿಲ್ಲ. ಬೆಳಗಿನ ಜಾವದವರೆಗೆ ಕಾಯೋಣವೆಂದುಕೊಂಡು ಮರದಮೇಲೆ ನಿದ್ರೆಗೆ ಮೊರೆಹೋದ.

ಬೆಳಗಿನ ಜಾವ ಬೆಳಕರಿದ ಮೇಲೆ ಮರದಿಂದ ಇಳಿದು ಬಂದ ಕಾರ್ಬೆಟ್‌ ಮೇಕೆಯ ಹತ್ತಿರ ಬಂದಾಗ ಅದು ಏನೂ ನಡೆದಿಲ್ಲವೆಂಬಂತೆ ತನ್ನ ಬಳಿ ಇದ್ದ ಸೊಪ್ಪನ್ನು ಮೇಯುತ್ತಲಿತ್ತು. ಆದರೆ, ಅದರ ಬಳಿ ನೆಲದ ಮೇಲೆ ರಕ್ತದ ಕೋಡಿಯೇ ಹರಿದಿತ್ತು. ಮುಂದೆ ಸುಮಾರು ಐವತ್ತು ಅಡಿ ದೂರದಲ್ಲಿ ನರಭಕ್ಷಕ ಸಾವಿಗೀಡಾಗಿ ನೆಲಕ್ಕೊಗಿತ್ತು. ಅದರ ಬಳಿ ಬಂದು ಸಾವನ್ನು ಖಚಿತಪಡಿಸಿಕೊಂಡ ಕಾರ್ಬೆಟ್‌ ತನ್ನ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ಹಿಡಿದು ಜೋರಾಗಿ ಹುರ್ರಾ ಎನ್ನುತ್ತಾ ಒಮ್ಮೆ ಕುಪ್ಪಳಿಸಿಸಿಬಿಟ್ಟ. ಇಡೀ ಗೋಲಬಾರಿ ಗ್ರಾಮಸ್ಥರು ಮತ್ತು ಕಾರ್ಬೆಟ್‌ನ ಸಂಗಡಿಗರು ಓಡೋಡಿ ಬಂದರು. ನಾಲ್ಕು ಮೈಲಿ ದೂರದ ಪ್ರವಾಸಿ ಮಂದಿರದಲ್ಲಿದ್ದ ಇಬ್ಸ್‌ಟನ್‌ಗೆ ಸುದ್ಧಿ ತಲುಪಿದಾಕ್ಷಣ ಕುದುರೆ ಹತ್ತಿ ಸ್ಥಳಕ್ಕೆ ಬಂದ ಅವನು, ತಾನು ಈ ಪ್ರಾಂತ್ಯದ ಜಿಲ್ಲಾಧಿಕಾರಿ ಎಂಬುದನ್ನು ಮರೆತು ಚಿರತೆಯ ಕಳೇಬರದ ಸುತ್ತಾ ಸಂತೋಷದಿಂದ ನರ್ತಿಸಿದನು. ಹಳ್ಳಿಗರ ಪ್ರಶಂಸೆ, ಮತ್ತು ಕೃತಜ್ಙತೆಯ ನಡುವೆ ಮಾತು ಬಾರದ ಮೂಕನಂತೆ ಕುಳಿತಿದ್ದ ಕಾರ್ಬೆಟ್‌, ಅವರು ತಂದುಕೊಟ್ಟ ಚಹಾ ಹೀರುತ್ತಾ, ಉದ್ವೇಗ ತಡೆದುಕೊಳ್ಳಲಾಗದೆ, ಒಂದೇ ಸಮನೆ ಸಿಗರೇಟು ಸೇದತೊಡಗಿದ.

ಸುಮಾರು ಏಳು ಅಡಿ ಉದ್ದ, 180 ಕೆ.ಜಿ. ಗಿಂತಲೂ ಹೆಚ್ಚು ತೂಕವಿದ್ದ ವಯಸ್ಸಾದ ಗಂಡು ನರಭಕ್ಷಕ ಚಿರತೆಯನ್ನು ಕಾರ್ಬೆಟ್‌ ಮತ್ತು ಇಬ್ಸ್‌ಟನ್ ಇಬ್ಬರೂ ಪರಿಶೀಲಿಸತೊಡಗಿದರು. ಪ್ರಥಮ ಬಾರಿಗೆ ರುದ್ರಪ್ರಯಾಗದ ಸೇತುವೆ ಮೇಲೆ ಸಾಗಿ ಬರುತಿದ್ದಾಗ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಹಾರಿಸಿದ್ದ ಗುಂಡಿನಿಂದಾಗಿ ಅದರ ಮುಂಗಾಲಿನ ಎರಡು ಉಗುರು ಕಿತ್ತು ಹೋಗಿದ್ದವು. ಅಲ್ಲದೇ, ಕಾರ್ಬೆಟ್‌ ನ ಗುಂಡಿನಿಂದ ಒಮ್ಮೆ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ ಅದರ ಕುತ್ತಿಗೆ ಭಾಗದಲ್ಲಿ ಗುಂಡು ಸವರಿಕೊಂಡು ಹೋದ ಗಾಯದ ಗುರುತು ಹಾಗೇ ಇತ್ತು. ಸೈನೈಡ್ ಪಾಷಣವನ್ನು ತಿಂದು ಬದುಕುಳಿದ ಪ್ರಯುಕ್ತ ಅದರ ನಾಲಗೆ ಕಪ್ಪಾಗಿತ್ತು. ಇವೆಲ್ಲಾ ಆಧಾರಗಳಿಂದ ಇದೇ ರುದ್ರಪ್ರಯಾಗದ ನರಭಕ್ಷಕ ಎಂಬ ತೀರ್ಮಾನಕ್ಕೆ ಬರಲಾಯಿತು.

ಚಿರತೆಯನ್ನು ಮೆರವಣಿಗೆಯಲ್ಲಿ ರುದ್ರಪ್ರಯಾಗದ ಪ್ರವಾಸಿ ಮಂದಿರಕ್ಕೆ ಹೊತ್ತು ತರಲಾಯಿತು. ಸತತ ಎರಡು ದಿನಗಳ ಕಾಲ ಇಡೀ ಪ್ರಾಂತ್ಯದ ಜನರೆಲ್ಲಾ ಸತ್ತು ಮಲಗಿದ್ದ ಭಯಾನಕ ನರಭಕ್ಷಕನನ್ನು ಒಮ್ಮೆ ನೋಡಿ ಹಿಡಿಶಾಪ ಹಾಕುತ್ತಾ ಹೋದರೆ, ಇದರ ದೆಶೆಯಿಂದ ತಮ್ಮ ಜಾನುವಾರುಗಳು, ಹಾಗೂ ಸಂಬಂಧಿಕರನ್ನು ಕಳೆದುಕೊಂಡ ಜನ ಕಾರ್ಬೆಟ್‌ ನ ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತಿದ್ದರು. ಈ ಸಂಭ್ರಮದ ನಡುವೆ ಬದುಕುಳಿದ ಮೇಕೆ ಕೂಡ ಜಿಮ್ ಕಾರ್ಬೆಟ್‌ನಷ್ಟೇ ಪ್ರಸಿದ್ದಿ ಪಡೆಯಿತು. ಸಕಾರದ ವತಿಯಿಂದ ಇಬ್ಸ್‌ಟನ್ ಅದರ ಕುತ್ತಿಗೆಗೆ ಒಂದು ತಾಮ್ರ ಮತ್ತು ಹಿತ್ತಾಳೆಯ ಪಟ್ಟಿಯೊಂದನ್ನು ಮಾಡಿಸಿ ಹಾಕಿದ. ಅದೃಷ್ಟದ ಮೇಕೆಯೆಂದು ರುದ್ರಪ್ರಯಾಗದ ಪ್ರಾಂತ್ಯದಲ್ಲಿ ಹೆಸರುವಾಸಿದ ಅದನ್ನು ಹಲವಾರು ಜನ ಬಂದು ನೋಡುತಿದ್ದರು. ಅದರ ಯಜಮಾನನಿಗೆ ಮತ್ತೇ ಉಡುಗರೆಯಾಗಿ ಕಾರ್ಬೆಟ್‌ ಮೇಕೆಯನ್ನು ನೀಡಿದ. ಅವನು ಅದು ಸಾಯುವವರೆಗೂ ಮಾಲೀಕ ಅತ್ಯಂತ ಜತನದಿಂದ ನೋಡಿಕೊಂಡಿದ್ದು ವಿಶೇಷ.

ಈ ಒಂದು ನರಭಕ್ಷಕ ಚಿರತೆಯ ಬೇಟೆಯಿಂದಾಗಿ ಕಾರ್ಬೆಟ್‌ ವಿಶ್ವ ಪ್ರಸಿದ್ಧನಾದ. ಅವನ ಸಂದರ್ಶನಕ್ಕಾಗಿ ಜಗತ್ತಿನ ದಿನಪತ್ರಿಕೆಗಳ ವರದಿಗಾರರು ಮುಗಿಬಿದ್ದರು. ಸರ್ಕಾರ ಕೂಡ ಅವನನ್ನು ಅತ್ಯಂತ ಗೌರವದಿಂದ ಸನ್ಮಾನಿಸಿತು. ಅಲ್ಲದೇ ಅವನು ರುದ್ರಪ್ರಯಾಗದ ಚಿರತೆಯನ್ನು ಕೊಂದ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿಲ್ಲಿಸಿತು. ಈಗಲೂ ಕೂಡ ರುದ್ರಪ್ರಯಾಗದ ಸಮೀಪದ ಗೋಲ್ಬಾರಿ ಹಳ್ಳಿಯಲ್ಲಿರುವ ಆ ಸ್ಮಾರಕಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ.

(ಮುಂದುವರೆಯುವುದು)