Monthly Archives: February 2013

ಮಂಗಳೂರಿನಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”

– ತೇಜ ಸಚಿನ್ ಪೂಜಾರಿ

ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಕೋಮುವಾದ, ಮೋರಲ್ ಪೋಲಿಸಿಂಗ್, ಮಡೆಸ್ನಾನ, ಹೀಗೆ ನಾನಾ ನೇತ್ಯಾತ್ಮಕ ಕಾರಣಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾರ್ತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುತ್ತಿದೆ.

ಹಾಗೆ ನೋಡಿದಲ್ಲಿ ನಮ್ಮೂರಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”. ಇಲ್ಲಿ ನಮ್ಮನ್ನು ನಾವೇ ಸುಟ್ಟುಕ್ಕೊಳ್ಳುತ್ತಿದ್ದೇವೆ. ನಮ್ಮ ಹಿರೀಕರು ವಿಕಸಿಸಿದ ಸಾಮರಸ್ಯದ, ಸಹಿಷ್ಣುತೆಯ ಬಳುವಳಿಯನ್ನು ತ್ಯಜಿಸಿ ಅಹಂಕಾರದ ಹಾಗೂ ಅಧಃಪತನದ ಹಾದಿಯನ್ನು ಅನುಸರಿಸುತ್ತಿದ್ದೇವೆ. ಧರ್ಮ ಸಂಸ್ಕೃತಿಗಳ ಪಾಳೇಗಾರರ ಪಿತೂರಿಯ ದನಿಗಳಿಗೆ ಕಿವಿಯಾಗಿ ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮದೇ ನೆಲದಲ್ಲಿ ಸಾವಿರಾರು ವರ್ಷಗಳಲ್ಲಿ ಅರಳಿದ ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶಮಾಡಿ ಯಾವುದೋ ಅನ್ಯಾಯದ ವ್ಯವಸ್ಥೆಯು ಹೇರುತ್ತಿರುವ ಏಕತ್ವದ ವ್ಯವಸ್ಥೆಯೊಳಗೆ ಸ್ವಯಂ ಬಂಧಿಯಾಗುತ್ತಿದ್ದೇವೆ. kambala-mangaloreತುಳುವ, ಬ್ಯಾರಿ, ಕ್ರೈಸ್ತ, ಜೈನ, ಹೀಗೆ ಪ್ರತಿಯೊಬ್ಬ ಜನಾಂಗವೂ ತಲ ತಲಾಂತರದಿಂದ ಇಲ್ಲೇ ಇದ್ದು ಇಲ್ಲಿಗೇ ವಿಶೇಷವಾದ ಸಾಂಸ್ಕೃತಿಕ ಅಂಶಗಳನ್ನು ಬೆಳೆಸಿಕೊಂಡಿವೆ. ಆದರೆ ಅವೆಲ್ಲವನ್ನೂ ಆಯಾ ಧರ್ಮಗಳ ಹೊರಗಿನ ಸಾಂಸ್ಥಿಕ ಯಜಮಾನಿಕೆಯ ಕೈಗೆ ಒಪ್ಪಿಸುತ್ತಿದ್ದೇವೆ. ಹಾಗೆ ಮಾಡುತ್ತಾ ನಮ್ಮ ದುರ್ವಿಧಿಯನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ನಮ್ಮ ವರ್ತಮಾನ ಹಾಗೂ ಭವಿತವ್ಯಗಳನ್ನು ಕೇವಲ ಹಿಂಸೆಯ ಅಧ್ಯಾಯಗಳನ್ನಾಗಿ ರೂಪಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಸಮರ ಸನ್ನಾಹದ, ಉಸಿರುಗಟ್ಟುವ ಭವಿಷ್ಯವೊಂದನ್ನು ನಿರ್ಮಿಸಿ ಕೊಡುತ್ತಿದ್ದೇವೆ. ತುಳು, ಬ್ಯಾರಿ ಹಾಗೂ ಕೊಂಕಣಿ ಭಾಷೆಗಳ ಇಂಪು ಒಂದೆಡೆ ಕೇಳಿಸದಂತಹ ಪ್ರತ್ಯೇಕತೆಯ ಅನಾಹುತಕಾರಿ ಸನ್ನಿವೇಶವನ್ನು ಕಟ್ಟುತ್ತಿದ್ದೇವೆ. “ಪ್ರಕ್ಷುಬ್ದ”, “ಗಲಭೆಪೀಡಿತ”, “ಅತಿ ಸೂಕ್ಷ್ಮ” ಇವೇ ಮೊದಲಾದ ವಿಶೇಷಣಗಳನ್ನು ನಮ್ಮ ಊರಿಗೇ ನಾವೇ ಗಳಿಸಿ ಕೊಟ್ಟು ಕೊರಳ ಕುಣಿಕೆಯನ್ನು ಬಿಗಿಗೊಳಿಸುತ್ತಿದ್ದೇವೆ.

***

ಪ್ರಸ್ತುತ ಮಂಗಳೂರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥೈಸುವಲ್ಲಿ ಇಲ್ಲಿಯ ಆರ್ಥಿಕ ಅಭಿವೃಧ್ಧಿಯ ಸ್ವರೂಪದ ಅಧ್ಯಯನ ಅವಶ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಭೌತಿಕ ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇಲ್ಲಿ ಆರ್ಥಿಕ ಮೂಲಸೌಕರ್ಯಗಳು ಸಾಕಷ್ಟು ಬೆಳೆದಿವೆ. ಸಮುದ್ರ ತೀರ, ಮಳೆ, ಶಿಕ್ಷಣ, ಹಣಕಾಸು ಸಂಸ್ಥೆಗಳು, ಇವೇ ಮೊದಲಾದ ಪ್ರೇರಕ ಅಂಶಗಳು ವಿವಿಧ Industrial_Mangaloreಉದ್ಯಮಗಳ ಏಳಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿವೆ. ಹೀಗಾಗಿ ಸಹಜವಾಗಿಯೇ ಮಂಗಳೂರು ಆರ್ಥಿಕ ಪ್ರಗತಿಯ ಹಾದಿಯಲ್ಲಿದೆ. ಆದರೆ, ದುರಾದೃಷ್ಟವಶಾತ್ ಸದ್ಯದ ಜಗತ್ತಿನಲ್ಲಿ ಪ್ರತಿಪಾದನೆಯಾಗುತ್ತಿರುವ ಅಭಿವೃದ್ಧಿ ಪರಿಕಲ್ಪನೆಯ ಅಂತರ್ಯದಲ್ಲೇ ಹಲವು ಸಮಸ್ಯೆಗಳಿವೆ. ಅದು ಸಮಾನ ಹಾಗೂ ಸಾರ್ವತ್ರಿಕ ಏಳಿಗೆಗೆ ಕಾರಣವಾಗದೆ ಕೇವಲ ಅಸಮತೆಗಳನ್ನು ಸೃಷ್ಟಿಸುತ್ತಿದೆ. ಉಳ್ಳವರು ಹಾಗೂ ಇಲ್ಲದವರ ನಡುವಿನ ಭೇದವನ್ನು ಇನ್ನಷ್ಟು ವಿಸ್ತರಿಸಿ ಅದನ್ನು ಸಾಂಸ್ಥೀಕರಿಸುತ್ತಿದೆ. ಮಂಗಳೂರಿನಲ್ಲಿ ಇಂತಹ ಪ್ರವೃತ್ತಿಗಳು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿವೆ. ಶ್ರೀಮಂತರು ಆರ್ಥಿಕ ಪ್ರಗತಿಯ ಭರಪೂರ ಲಾಭ ಪಡೆದುಕೊಂಡು ಇನ್ನಷ್ಟು ಸಿರಿವಂತರಾಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಡವರು ಸಮರ್ಪಕ ನೆರವಿನ ಕೊರತೆಯಿಂದ ವೇಗದ ಜಗತ್ತಿನಲ್ಲಿ ಸ್ಪರ್ಧಿಸಲಾಗದೆ ಸೋತು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳಲ್ಪಡುತ್ತಿದ್ದಾರೆ. ಅಭಿವೃದ್ಧಿಯ ಇವೆರಡೂ ದ್ವಂದ್ವಗಳು ಮಂಗಳೂರಿನಲ್ಲಿ ಜೊತೆ ಜೊತೆಯಾಗಿಯೇ ಅಸ್ತಿತ್ವದಲ್ಲಿವೆ. ಹೀಗಾಗಿ, ದೃಗ್ಗೋಚರ ಆರ್ಥಿಕ ಅಸಮಾನತೆಗಳು ಬಡವರ್ಗಗಳಲ್ಲಿ ಅಸಮಧಾನವನ್ನು ಸೃಷ್ಟಿಸುತ್ತಿವೆ. ಅವರಲ್ಲಿ ಸುಪ್ತವಾದ ಅಸಹನೆಯು ಸಂಚಿತಗೊಳ್ಳುತ್ತಿದೆ.

ಸಾಮಾನ್ಯವಾಗಿ ಇಂತಹ ಮನೋನಿರ್ಮಿತಿಯು ಕ್ರಾಂತಿಕಾರಿ ಬದಲಾವಣೆಗೆ ಪೂರಕವಾದ ವೇದಿಕೆಯನ್ನು ಒದಗಿಸುತ್ತದೆ. udupi-mangaloreಆದರೆ ಮಂಗಳೂರಿನಲ್ಲಿ ಬಡವರ ಬೇಗುದಿ ಬಳಕೆಯಾಗುತ್ತಿರುವ ರೀತಿಯೇ ಭಿನ್ನವಾಗಿದೆ. ಇಲ್ಲಿ ಅದನ್ನು ದುಡಿಸಿಕೊಳ್ಳುತ್ತಿರುವುದು ದರ್ಪಿಷ್ಟ ಪ್ರತಿಗಾಮಿ ಸಾಂಸ್ಕ್ರತಿಕ ಯಜಮಾನಿಕೆ. ಬಡವರ ಅಸಮಧಾನ, ಸಿಟ್ಟು ಹಾಗೂ ಆಕ್ರೋಶದ ಸುಪ್ತಭಾವನೆಗಳನ್ನು ಮೇಲ್ವರ್ಗದ ಕೋಮುವಾದಿಗಳು ಹಾಗೂ ಪ್ರತಿಗಾಮಿಗಳು ಜಾತಿ, ಧರ್ಮ ಹಾಗೂ ಸಂಸ್ಕೃತಿಯ ನೆಲೆಯಲ್ಲಿ ಹಿಂಸೆಯಾಗಿ ಪರಿವರ್ತಿಸುತ್ತಿದ್ದಾರೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಸಹನೆಗೆ ಒಂದು ನಿಯಂತ್ರಿತ ಔಟ್ಲೆಟ್ ಒದಗಿಸುತ್ತಿದ್ದಾರೆ. ಹೀಗಾಗಿಯೇ ಶ್ರೀಮಂತಿಕೆ ಅಥವಾ ಹೊಸದಾದ ಆರ್ಥಿಕ ಸ್ಥಾನಮಾನವನ್ನು ಪ್ರತಿನಿಧಿಸುತ್ತಿರುವ ಅಮ್ನೇಶಿಯಾ, ಹೋಂಸ್ಟೇಯಂತಹ ತಾಣಗಳು ಮತ್ತೆ ಮತ್ತೆ ದಾಳಿಗೊಳಗಾಗುತ್ತಿವೆ. ಮತ್ತು ದಾಳಿಕೋರರು ಬಹುತೇಕ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿರುವ, ಕೂಲಿಕೆಲಸಗಳಿಗೆ ಹೋಗುವ, ಡ್ರೈವರ್ ಕಂಡಕ್ಟರ್ ಮೊದಲಾದ ಸಣ್ಣ ಆದಾಯದ ಕೆಲಸಗಳನ್ನು ಮಾಡುತ್ತಿರುವ ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ. ಇದು ಇನ್ನೊಂದು ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ವೈಫಲ್ಯವನ್ನೂ ಸಂಕೇತಿಸುತ್ತದೆ.

***

ಆಧುನಿಕ ಜಗತ್ತಿನ ಬದುಕಿನಲ್ಲಿ ಮಧ್ಯಮ ವರ್ಗ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಪ್ರೆಂಚ್ ಕ್ರಾಂತಿಯಿಂದ ಹಿಡಿದು ಹಿಂದಿನವರೆಗೆ ಸಮಾಜದ ಹಲವು ಬದಲಾವಣೆಗೆ ಅದು ಕಾರಣವಾಗಿದೆ. ನಮ್ಮ ದೇಶದ ಇತಿಹಾಸದಲ್ಲೂ ಮಧ್ಯಮ ವರ್ಗವು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ವಿಚಾರ ನಮಗೆಲ್ಲಾ ತಿಳಿದಿದೆ. ಆದರೆ ಮಧ್ಯಮ ವರ್ಗ ಸಹಜವಾಗಿಯೇ ಬಹಳ ವೊಲಟೈಲ್ ಆಗಿರುತ್ತದೆ. ಸೃಷ್ಟಿ ಹಾಗೂ ಲಯ ಇವೆರಡನ್ನೂ ಒಡಲಲ್ಲಿಟ್ಟುಕೋಂಡೇ ಅದು ವ್ಯವಹರಿಸುತ್ತದೆ. ಅಂತೆಯೇ ಸ್ವಾತಂತ್ರ್ಯ ಆಂದೋಲನದ ಜತೆಜತೆಗೇ ಅದು ಕೋಮುವಾದವನ್ನೂ ಕೂಡಾ ಬೆಳೆಸಿದ್ದನ್ನು ನಾವು ಕಂಡಿದ್ದೇವೆ. ಹೀಗಾಗಿಯೇ ಸ್ವಾತಂತ್ರ್ಯ ಸಾಧನೆ ಹಾಗೂ ದೇಶ ವಿಭಜನೆ, ಇವೆರಡೂ ಮಧ್ಯಮ ವರ್ಗದ ಕೃತ್ಯಗಳು ಎಂಬುದಾಗಿ ಹಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಧ್ಯಮ ವರ್ಗದ ಅನಾಹುತಕಾರಿ ಗುಣಗಳು ಸ್ವಾತಂತ್ರ್ಯೋತ್ತರ ಭಾರತದಲಲ್ಲಿ ಇನ್ನಷ್ಟು ವಿಸ್ತರಿಸಿದ್ದನ್ನು ನಾವು ಕಾಣುತ್ತಿದ್ದೇವೆ. ಐತಿಹಾಸಿಕ ಹಾಗೂ ತಾತ್ವಿಕ ನೆಲೆಯಲ್ಲಿ ನೋಡಿದಾಗ ತಕ್ಕ ಮಟ್ಟಿನ ಜಾತ್ಯಾತೀತತೆ ಮತ್ತು ಅನ್ಯತೆಗೆ ಗೌರವ- ಇವು ಮಧ್ಯಮ ವರ್ಗದ ಮೂಲಭೂತ ಮೌಲ್ಯಗಳಾಗಿರುತ್ತವೆ. ಆದರೆ ನಮ್ಮ ಇಂದಿನ ಮಧ್ಯಮ ವರ್ಗ ಅಂತಹ ತತ್ವಗಳಿಗೆ ವ್ಯತಿರಿಕ್ತವಾಗಿ ಆಘಾತಕಾರಿ ನೆಲೆಯಲ್ಲಿ ಬೆಳೆಯುತ್ತಿದೆ. ಅತಿ ರಾಷ್ಟ್ರೀಯತೆ, ಕೋಮುವಾದ, ನಿರಂಕುಶತೆ ಮೊದಲಾದ ಅಪಸವ್ಯಗಳನ್ನು ಪೋಷಿಸುತ್ತಾ ಮುನ್ನಡೆಯುತ್ತಿದೆ. ಗುಜರಾತ್‌ನಲ್ಲಿ ಮಧ್ಯಮ ವರ್ಗದ ಸ್ವರೂಪವನ್ನು ಚರ್ಚಿಸುತ್ತಾ ಚಿಂತಕ ಆಶಿಶ್ ನಂದಿಯವರು “ಸದ್ಯ ಮಧ್ಯಮ ವರ್ಗವನ್ನು ಪ್ರವೇಶಿಸುತ್ತಿರುವ ಜನರು ಮಧ್ಯಮ ವರ್ಗದ ಯಾವುದೇ ಮೌಲ್ಯಗಳನ್ನು ಹೊಂದಿರುವುದಿಲ್ಲ. ಬದಲಿಗೆ ಅವರು ಕೇವಲ ಮಧ್ಯಮ ವರ್ಗದ ಆದಾಯವನ್ನು ಹೊಂದಿರುತ್ತಾರೆ; ಮಧ್ಯಮ ವರ್ಗದ ಕೊಳ್ಳುಬಾಕತನವನ್ನು ಹೊಂದಿರುತ್ತಾರೆ.” ಎಂದು ವಿಶ್ಲೇಷಿಸಿದ್ದರು. Indian_Middle_Classಇದು ಕೇವಲ ಗುಜರಾತ್ ಮಾತ್ರವಲ್ಲದೆ ಇಡೀ ಭಾರತದ ಮಧ್ಯಮ ವರ್ಗದ ಸ್ವರೂಪವೂ ಆಗಿದೆ.

ಮಂಗಳೂರಿನಲ್ಲಿ ಕೂಡಾ ಇಂತಹದ್ದೇ ಸ್ವರೂಪದ ಬಲಿಷ್ಟ ಮಧ್ಯಮವರ್ಗವೊಂದು ಅಸ್ತಿತ್ವದಲ್ಲಿದೆ. ಅದು ತಮ್ಮ ಶ್ರೀಮಂತಿಕೆಯ ಫಲವಾಗಿ ಸಾಮಾಜಿಕ ಶ್ರೇಣೀಕರಣದಲ್ಲಿ ನಿಧಾನವಾಗಿ ಮೇಲೇರುತ್ತಿದೆ. ಮುಖ್ಯವಾಹಿನಿಯ ಧರ್ಮಗಳ ಯಜಮಾನಿಕೆಯೂ ಕೂಡಾ ಇಂತಹ ಹೊಸ ಸಮೃದ್ಧ ವರ್ಗಗಳ ಆಗಮನವನ್ನು ಸ್ವಾಗತಿಸುತ್ತಿದೆ. ಹೀಗಾಗಿ ತಮ್ಮ ಹೊಸದಾದ ಆರ್ಥಿಕ ಸ್ಥಾನಮಾನಗಳನ್ನು ಒಪ್ಪುತ್ತಾ ತಮಗೆ ವಿಶೇಷ ಗೌರವವನ್ನು ನೀಡುತ್ತಿರುವ ಮುಖ್ಯವಾಹಿನಿಯ ಧರ್ಮಗಳ ಕಡೆಗೆ ಅವರ ನಿಷ್ಟೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಅದರ ರಕ್ಷಣೆಯ ನೂತನ ಚಾಂಪಿಯನ್‌ಗಳಾಗಲು ಮೇಲ್ ಮಧ್ಯಮ ವರ್ಗವು ಹೊರಟಿದೆ. ಪುರೋಹಿತಶಾಹಿಯ ಜತೆಗಿನ ಸಾಹಚರ್ಯ ಅವರಿಗೆ ಇನ್ನಷ್ಟು ಹುರುಪು ನಿಡುತ್ತಿದೆ. ಕರಾವಳಿಯಲ್ಲಿ ಆಗಾಗ್ಗೆ ನಡೆಯುತ್ತಿರುವ ಜೀರ್ಣೋದ್ಧಾರ, ನಾಗಮಂಡಲ, ಸಮಾಜೋತ್ಸವಗಳು ಇಂತಹದ್ದೇ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಧಾರ್ಮಿಕ ಗೌರವ ಹಾಗೂ ಸ್ವೀಕರಣೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅದು ಧರ್ಮದ ಆಚರಣೆ, ಭೋಧನೆ ಹಾಗೂ ರಕ್ಷಣೆಯ ಕಾರ್ಯತಂತ್ರದಲ್ಲಿ ಮತ್ತಷ್ಟು ಕರ್ಮಠವಾಗುತ್ತಿದೆ.

***

ಮಂಗಳೂರು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ತ್ರಪ್ತಿಕರ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. Alvas-Campusದೊಡ್ಡ ಸಂಖ್ಯೆಯಲ್ಲಿ ವಿವಿಧ ಶಿಸ್ತುಗಳನ್ನು ಭೋಧಿಸುವ ಶಿಕ್ಷಣ ಸಂಸ್ಥೆಗಳಿವೆ. ಆದಾಗ್ಯೂ ಕರಾವಳಿಯ ಶೈಕ್ಷಣಿಕ ಸಾಧನೆ ಅದರ ಸಾಮಾಜಿಕ ನಡಾವಳಿಯಲ್ಲಿ ಪ್ರತಿಫಲಿತವಾಗುತ್ತಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಮಂಗಳೂರು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮಿತಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ನಮ್ಮ ಶೈಕ್ಷಣಿಕ ಸಂರಚನೆಯು ಬೌದ್ಧಿಕತೆಯ ಪ್ರಚೋದನೆಗೆ ಪ್ರಾಶಸ್ತ್ಯ ನೀಡದೆ ಕೇವಲ ಮಾಹಿತಿ ಜ್ಞಾನದ ಪ್ರಸರಣಕ್ಕೆ ಮಹತ್ವ ನೀಡುತ್ತದೆ. ಬೌದ್ಧಿಕತೆಯು ಚಿಂತನಾಶೀಲ ವೈಚಾರಿಕತೆಯನ್ನು ದಯಪಾಲಿಸುತ್ತದೆ. ಅದು ಪ್ರಶ್ನಾ ಮನೋಧರ್ಮವನ್ನು ಉದ್ದೀಪನ ಮಾಡುತ್ತದೆ. ಮಾಹಿತಿ ಜ್ಞಾನ ಕೇವಲ “ಯಥಾವತ್ ಸ್ವೀಕರಣೆ”ಯ ಆಯಾಮವನ್ನು ಹೊಂದಿರುತ್ತದೆ. ಹೀಗಾಗಯೇ ನಮ್ಮಲ್ಲಿ ಮಹಾ ಸುಳ್ಳಿನ ಕಂತೆಗಳಾದ ಕೋಮು ಭಾಷಣಗಳು ಅಥವಾ ಅವೈಜ್ಞಾನಿಕ ಮೌಡ್ಯ ಆಚರಣೆಗಳು ಯಾವುದೇ ಪ್ರಶ್ನೆಯಿಲ್ಲದೆ ಸ್ವೀಕರಣೆಯಾಗುತ್ತಿವೆ. ಮಡೆಸ್ನಾನ, ಬುರ್ಖಾದಂತಹ ಪದ್ದತಿಗಳು ಸಾಕ್ಷಾತ್ ಪೀಡಿತರಿಂದಲೇ ಸಮರ್ಥನೆಗೊಳ್ಳುತ್ತಿವೆ.

ಎರಡನೆಯದ್ದಾಗಿ, ಕರಾವಳಿಯ ಶೈಕ್ಷಣಿಕ ರಂಗವು ಅಲ್ಲಿಯ ಧಾರ್ಮಿಕ ಯಜಮಾನಿಕೆಯ ಕಪಿಮುಷ್ಟಿಯಲ್ಲಿದೆ. ದೇಗುಲ, ಪ್ರಾರ್ಥನಾ ಮಂದಿರಗಳು, ಧಾರ್ಮಿಕ ಸಂಸ್ಥಾಪನೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಧಾರ್ಮಿಕೇತರ ನೆಲೆಯಲ್ಲಿ ನಡೆಯುತ್ತಿರುವ ಸಂಸ್ಥೆಗಳೂ ಕೂಡಾ ಸಾಂಸ್ಕ್ರತಿಕ ಯಜಮಾನಿಕೆಯ ಸ್ಪಷ್ಟ ನಿಯಂತ್ರಣದಲ್ಲಿವೆ. ಇಂತಹ ಎಕ್ಸ್‌ಕ್ಲೂಸಿವ್ ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆ, ಪ್ರಗತಿಶೀಲತೆಯಂತಹ ಉನ್ನತಿಗಳನ್ನು ಅಪೇಕ್ಷಿಸುವುದು ಅಸಾಧ್ಯ. ಶಿಕ್ಷಣ, ವ್ಯಕ್ತಿತ್ವ ರೂಪಣೆಯ ಮೂಲಭೂತ ಅಂಶ. ಹಿಗಾಗಿ ಅದನ್ನೇ ನಿಯಂತ್ರಣದಲ್ಲಿಟ್ಟುಕೊಂಡು ಸಾಂಸ್ಕೃತಿಕ ಮೂಲಭೂತವಾದವು ಮುನ್ನಡೆಯುತ್ತಿದೆ.

***

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇರುವ ಕರಾವಳಿ ಪ್ರಾಂತ್ಯವನ್ನು ವಿವಿಧ ಸಾಂಸ್ಕ್ರತಿಕ ಕೂಟಗಳ ದರ್ಪಿಷ್ಟ ಯಜಮಾನಿಕೆಯು ಅಂಕೆಯಲ್ಲಿ ಹಿಡಿದುಕೊಳ್ಳಲು ಹವಣಿಸುತ್ತಿದೆ. ಧರ್ಮ, ಸಂಸ್ಕೃತಿ, ಕಲೆ, ಶಿಕ್ಷಣ ಹೀಗೆ ಸಾಂಸ್ಕ್ರತಿಕ ಬದುಕಿನ ಅಷ್ಟೂ ಕ್ಷೇತ್ರಗಳನ್ನು ಅದು ವ್ಯಾಪಿಸಿಕೊಂಡಿದೆ. ಹೀಗಾಗಿಯೇ ಮಠಮಂದಿರಗಳು ಇಲ್ಲಿಯ ಜನರ ಬದುಕಿನಲ್ಲಿ ಕೇಂದ್ರಸ್ಥಾನವನ್ನು ಪಡೆಯುತ್ತಿವೆ. ಮೂಲಭೂತವಾದಿ ಸ್ವರೂಪವನ್ನು ಹೊಂದಿರುವ ಯಜಮಾನಿಕೆಯು ಉಗ್ರ ಅಸಹಿಷ್ಣು ವ್ಯವಸ್ಥೆಯನ್ನು ನಿರ್ಮಿಸಲು ಯತ್ನಿಸುತ್ತಿದೆ. ವೈವಿಧ್ಯತೆಯನ್ನು ಕೆಡವಿ ಹಾಕಿ ಏಕತತ್ವವನ್ನು ಸ್ಥಾಪಿಸ ಹೊರಟಿದೆ. ತನ್ನದೇ ಅನುಕೂಲಕ್ಕೆ mangalore-attackತಕ್ಕಂತೆ ರೂಪಿತವಾದ ಶಾಸ್ತ್ರ ಪರಂಪರೆಯನ್ನು ಸಂವಿಧಾನಕ್ಕೆ ಪರ್ಯಾಯವಾಗಿ ಪ್ರಚುರ ಪಡಿಸುತ್ತಿದೆ. ಅಂತರ್ಜಾತಿ-ಅಂತರ್ಮತೀಯ ವಿವಾಹ ಆಥವಾ ಸಾಹಚರ್ಯಗಳ ವಿರೋಧ, ಮೋರಲ್ ಪೋಲಿಸಿಂಗ್‌ನಂತಹ ಪೃವ್ರತ್ತಿಗಳು, ದಬ್ಬಾಳಿಕೆಯ ಯಜಮಾನಿಕೆಗಳು, ಕರಾವಳಿಯಲ್ಲಿ ರೂಪಿಸಿದ ವ್ಯವಸ್ಥೆಯು ಬಲಗೊಂಡದ್ದನ್ನು ಸಂಕೇತಿಸುತ್ತದೆ. ಸಿರಿವಂತಿಕೆ, ಪ್ರಭುತ್ವ, ಹಾಗೂ ಮಾಧ್ಯಮದ ಜೊತೆಗಿನ ಅದರ ಕೂಡಾಟ ಅಪಾಯದ ಸಾಧ್ಯತೆಗಳನ್ನು ಇಮ್ಮಡಿಗೊಳಿಸಿದೆ. ಸಮಾವೇಶ ಹಾಗೂ ಸಂಸ್ಥೆಗಳನ್ನು ಸಂಘಟಿಸುವ ಮೂಲಕ ಜನಾನುರಾಗಿ ನೆಲೆಯನ್ನು ಪಡೆದುಕೊಳ್ಳುವ ಪ್ರಯತ್ನವನ್ನೂ ಕೂಡಾ ಅದು ಮಾಡುತ್ತಿದೆ. ತಾನು ಹಿನ್ನೆಲೆಯಲ್ಲಿದ್ದುಕೊಂಡೇ ಬಡ ಯುವಕರನ್ನು ದಾಳವಾಗಿ ಪ್ರಯೋಗಿಸುವ ಕಲೆಯನ್ನು ಅದು ಕರಗತ ಮಾಡಿಕೊಂಡಿದೆ.

ಕರಾವಳಿಯ ವಾತವರಣವನ್ನು ಕೆಡಿಸುವಲ್ಲಿ ವ್ಯವಸ್ಥೆ ಹಾಗೂ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸರಕಾರಗಳ ವೈಫಲ್ಯದಿಂದಾಗಿ ನಮ್ಮ ವ್ಯವಸ್ಥೆಯನ್ನು ರೂಪಿಸಿರುವ ಸಂವಿಧಾನದ ಆಶಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬರದೆ ಹಾಗೆಯೇ ಉಳಿದುಕೊಂಡಿವೆ. ದಬ್ಬಾಳಿಕೆಯ ಯಾಜಮಾನ್ಯದ ವಿರುದ್ಧ ಬಂಡಾಯದ ದನಿಯೆತ್ತಿದವರನ್ನೇ ಹತ್ತಿಕ್ಕುವ ಪ್ರಯತ್ನಗಳನ್ನು ಪ್ರಭುತ್ವವು ಮಾಡುತ್ತಲಿದೆ. Mutalik-in-Mangaloreಮಾಧ್ಯಮಗಳು ಟಿಆರ್‌ಪಿ ಸಾಧನೆಗೈಯುವ ಸಲುವಾಗಿ ಮಿಥ್ಯೆಗಳು ಹಾಗೂ ಮೌಢ್ಯಗಳನ್ನು ಪ್ರಸರಿಸುತ್ತಿವೆ. ಟಿವಿ ವಾಹಿನಿಗಳ ಚರ್ಚಾಕೂಟಗಳಲ್ಲಿ ಪ್ರಮೋದ್ ಮುತಾಲಿಕ್‌ರಂತಹ ಮತೀಯ ಅತಿರೇಕವಾದಿಗಳೇ ವಿಜೃಂಭಿಸುತ್ತಿದ್ದಾರೆ. ಅವರ ಉದ್ರೇಕಕಾರಿ ಮಾತುಗಳೇ ನಮ್ಮ ಮಾಧ್ಯಮಗಳ ಬಂಡವಾಳವಾಗಿದೆ. ಪ್ರಗತಿಪರ ಸಂಘಟನೆಗಳು ಇಂತಹ ಪ್ರವೃತ್ತಿಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಿವೆಯಾದರೂ ಕೆಲವು ಬುದ್ದಿಜೀವಿ ಗುಂಪುಗಳು ಪ್ರತಿಭಟನೆಗೆ ಮೂಲಭೂತವಾದಿಗಳಷ್ಟೇ ಉಗ್ರತೆಯ ಮಾರ್ಗವನ್ನು ಅನುಸರಿಸುತ್ತಿವೆ. ಶ್ರೀಸಾಮಾನ್ಯರು ಪ್ರಾಮಾಣಿಕವಾಗಿ ಅನುಸರಿಸುತ್ತಾ ಬಂದಿರುವ ಧರ್ಮ ಸಂಸ್ಕೃತಿಗಳನ್ನೇ ಅವಮಾನಿಸುವ ಮಾತುಗಳನ್ನಾಡುತ್ತಿವೆ. ಇಂತಹ ಕೃತ್ಯಗಳು ಒಟ್ಟಾರೆ ಬುದ್ದಿಜೀವಿ ವರ್ಗದ ಮೆಲೆ ಜನಸಮೂಹದ ವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಿವೆ.

ಇವೆಲ್ಲದರ ಪರಿಣಾಮವೆಂಬಂತೆ ಇಂದು ಕರಾವಳಿಯ ದೌರ್ಭಾಗ್ಯವು ಇಮ್ಮಡಿಗೊಂಡಿದೆ.

ಸ್ವಘೋಷಿತ ಬುರುಡೇ ದಾಸರೂ ಮತ್ತವರ ಕ್ಯಾಕ್ಟಸ್ ಗುಂಪುಗಳೂ

– ಬಿ.ಶ್ರೀಪಾದ ಭಟ್

“ಏನೋ ಮಾಡಲು ಹೋಗಿ ಏನು ಮಾಡಿದೆ ನೀನು” ಎನ್ನುವ ಹಾಡಿನ ಸಾಲಿನಂತೆ ಆಯಿತೇ ಬುದ್ಧಿಜೀವಿ ಮತ್ತು ಚಿಂತಕ ಆಶೀಶ್ ನಂದಿಯವರ ಪರಿಸ್ಥಿತಿ? ಬಹುಶಃ ಇರಲಾರದು. ಏಕೆಂದರೆ ಆ ರೀತಿಯಾಗಿ ತಾನಂದುಕೊಂಡಿದ್ದು ಮತ್ತೊಂದು ಬಗೆದಾಗ, ಅದರ ಪರಿಣಾಮವಾಗಿ ಪಶ್ಚತ್ತಾಪದಲ್ಲಿ ಬೇಯುವವರಿಗೆ ಮಾತ್ರ ಮೇಲಿನ ಮಾತು ಅನ್ವಯಿಸುತ್ತದೆ. ಆದರೆ ಸಧ್ಯಕ್ಕೆ ಆಶೀಶ್ ನಂದಿಯವರು ಅಂತಹ ಪ್ರಾಯಶ್ಚಿತ್ತದಲ್ಲಿ ತೊಳಲಾಡುತ್ತಿರುವಂತೆ ಕಾಣಿಸುತ್ತಿಲ್ಲ. Nandy_ashisಜೊತೆಗೆ ಇಂಡಿಯಾದ ಖ್ಯಾತ ಚಿಂತಕರು, ಜ್ಞಾನಪೀಠಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಗಳ ಹಿಡಿದುಕೊಂಡು “ಹಮ್ ಹೈ ಆಪಕೆ ಸಾಥ್” ಎಂದು ಆಶೀಶ್ ನಂದಿಯವರ ಬೆಂಬಲಕ್ಕೆ ನಿಂತಾಗ ಇನ್ಯಾತಕ್ಕೆ ಭಯ??

ಆಭಿವ್ಯಕ್ತಿ ಸ್ವಾತಂತ್ರ್ಯದ ಆಯಧವನ್ನು ಹಿಡಿದುಕೊಂಡು ಮುನ್ನುಗ್ಗುವವರಿಗೆ ತಾವು ದಿಟ್ಟತನದವರೆಂಬ ಅಪಾರ ಆತ್ಮವಿಶ್ವಾಸವಿರುತ್ತದೆ. ಇದು ವಿಚಿತ್ರವಾದರೂ ಸತ್ಯ. ಈ ಸತ್ಯವು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ, ಆ ಮೂಲಕ ಹಿಂಸೆ, ಕೊಲೆಗಳಿಗೆ ಕಾರಣವಾಗುವ ಎಲ್ಲಾ ಧರ್ಮದ ಮೂಲಭೂತವಾದಿಗಳಿಗೆ ಮತ್ತು ಲುಂಪೆನ್ ಗುಂಪಿಗೆ ಅನ್ವಯಿಸಿದ ಹಾಗೆ ಸೆಕ್ಯುಲರ್ ಚಿಂತಕರಾದ, ಮಾನವತಾವಾದಿ ಬುದ್ಧಿಜೀವಿ ಆಶೀಶ್ ನಂದಿಯಂತಹವರಿಗೂ ಅನ್ವಯಿಸುತ್ತದೆ. ಇಲ್ಲದಿದ್ದರೆ ಭ್ರಷ್ಟಾಚಾರಕ್ಕೆ ಜಾತಿ ಎಂಬುದಿಲ್ಲ, ಭ್ರಷ್ಟಾಚಾರವೇ ಒಂದು ಜಾತಿಯೆಂದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಗೊತ್ತಿರುವಂತಹ ಸತ್ಯವನ್ನು ಬುದ್ಧಿಜೀವಿಗಳೆಂದು ಖ್ಯಾತರಾದ ಆಶೀಶ್ ನಂದಿಯವರಿಗೂ ಗೊತ್ತಾಗದೇ ಹೋಯಿತೆ?? ಸಾಧ್ಯವಿಲ್ಲ. ಗೊತ್ತಿರುತ್ತದೆ. ಆದರೆ ಅನೇಕ ಸಂಧಿಗ್ಧ ವಿಷಯಗಳನ್ನು ಸರಳವಾಗಿ ಚಿಂತಿಸಬೇಕಾದಂತಹ ಅಗತ್ಯದ ಸಂದರ್ಭದಲ್ಲಿ ಈ ಆಶೀಶ್ ನಂದಿ ತರಹದವರು ಸಂಕೀರ್ಣವಾಗಿ ಮಾತನಾಡಿ ಜನಸಾಮಾನ್ಯರು ತಲೆ ಕರೆದುಕೊಳ್ಳುವಂತೆ, ಕಣ್ಣು ಕಣ್ಣು ಬಿಡುವಂತೆ ಮಾಡುತ್ತಾರೆ. ಆದರೆ ಈ ಭ್ರಷ್ಟಾಚಾರಕ್ಕೆ ಕೂಡ ಜಾತಿ ಇದೆ ಎನ್ನುವ ಸಂಕೀರ್ಣ ಚರ್ಚೆಯನ್ನು ಓಬಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹೆಚ್ಚು ಭ್ರಷ್ಟರು ಎಂದು ಸರಳಗೊಳಿಸಿ ಹೇಳಿಕೆ ನೀಡಿ ಈ ರೀತಿ ಪ್ರಜ್ಞಾವಂತರಿಂದ ಟೀಕೆಗೊಳಗಾದ ಆಶೀಶ್ ನಂದಿಯವರ ಕುರಿತಾಗಿ ಸಧ್ಯಕ್ಕೆ ಅನುಕಂಪವಂತೂ ಹುಟ್ಟುತ್ತಿಲ್ಲ.

ಮೇಲ್ಜಾತಿಗೆ ಸೇರಿದವರ ಭ್ರಷ್ಟತೆ ಕಣ್ಣಿಗೆ ಕಾಣದಂತೆ ಮರೆಮೋಸದಿಂದ ಹಾಗೂ ಅದನ್ನು ಜಾಣ ಕಿವುಡು, ಜಾಣ ಕುರುಡುತನದಿಂದ ಅಲ್ಲಲ್ಲಿಯೇ ಮುಚ್ಚಿಹಾಕಿ ಕಾಲಕ್ರಮೇಣ ಅದು ತಂತಾನೆ ಸಾಯುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಕೆಲವು ಉದಾಹರಣೆಯಾಗಿ ಚಿಮ್ಮನ್ ಚೋರ್ ಎಂದು ಕುಪ್ರಸಿದ್ದರಾದ ಚಿಮನ್‌ಭಾಯಿ ಪಟೇಲ್, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಭ್ರಷ್ಟತೆ ನಡೆಸಿದರೆಂದು ಆರೋಪಕ್ಕೆ ಒಳಗಾಗಿದ್ದ ಪ್ರಮೋದ್ ಮಹಾಜನ್, ಸತೀಶ್ ಶರ್ಮ, ಪಿ.ವಿ.ನರಸಿಂಹ ರಾವ್, Jagan-reddyyeddyurappa-SirigereTaralabaluತೊಂಬತ್ತರ ದಶಕದ ಆರಂಭದಲ್ಲಿ ದೇಶದ ಆರ್ಥಿಕತೆಯ ಮಹಾನ್ ಭ್ರಷ್ಟತೆಯ ಕರ್ಮಕಾಂಡಕ್ಕೆ ಕಾರಣನಾದ ಹರ್ಷದ ಮೆಹ್ತ, ಹವಾಲಾದ ಕೇತನ್ ಮೆಹ್ತ, ಭ್ರಷ್ಟಾಚಾರದ ಆರೋಪಕ್ಕೆ ಒಳಗಾದ ಅಟಲ್ ಬಿಹಾರಿ ವಾಜಪೇಯಿಯವರ ಅಳಿಯ, ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳಿರುವ ಶರದ್ ಪವಾರ್ ಮತ್ತು ಅವರ ಮಗಳು ಮತ್ತು ಅಳಿಯ, ಆದರ್ಶ ಹೌಸಿಂಗ್ ಹಗರಣದ ಅಶೋಕ್ ಚೌಹಾಣ್, ದಿವಂಗತ ವಿಲಾಸ್ ರಾವ್ ದೇಶಮುಖ್, ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕಾಗಿ ಲಂಚದ ಆರೋಪ ಎದುರಿಸುತ್ತಿರುವ ಮೇಲ್ಜಾತಿಯ ಸಂಸದರು, ಅಮರ್ ಸಿಂಗ್ ಅವರ ಕರ್ಮಕಾಂಡಗಳು, ಲಲಿತ್ ಮೋದಿ, ಸುರೇಶ್ ಕಲ್ಮಾಡಿ, ಯಾವ ಮೇಲ್ಜಾತಿಗೂ ಕಡಿಮೆ ಇಲ್ಲದ ಮಾರನ್ ಸೋದರರೂ, ಸುಖರಾಮ್, ವೀರಭದ್ರ ಸಿಂಗ್, ಶ್ರೀಪ್ರಕಾಶ್ ಜೈಸ್ವಾಲ್, ಜಗನ್‌ಮೋಹನ್ ರೆಡ್ಡಿ, ಕನಾಟಕವನ್ನು ಭ್ರಷ್ಟತೆಯ ಕಾರಣಕ್ಕಾಗಿ ಕುಪ್ರಸಿದ್ದಗೊಳಿದ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ, ಇವರೆಲ್ಲ ಕೇವಲ ಉದಾಹರಣೆಗಳು. ಇನ್ನೂ ಅಸಂಖ್ಯಾತರಿದ್ದಾರೆ.

ಈ ಭ್ರಷ್ಟತೆಯ ಅಪಾದನೆಗಗೊಳಗಾಗಿರುವ ಮೇಲಿನವರೆಲ್ಲ ಬ್ರಾಹ್ಮಣ, ಬನಿಯಾ, ಕ್ಷತ್ರಿಯ, ರಾಜಪುತ್, ಠಾಕೂರ್, ರೆಡ್ಡಿಗಳು, ಲಿಂಗಾಯತರು, ಹೀಗೆ ಅನೇಕ ಬಗೆಯ ಸವರ್ಣೀಯ ಜಾತಿಗೆ ಸೇರಿದವರು. ಇವರಲ್ಲನೇಕರು ತಮ್ಮ ಭ್ರಷ್ಟತೆಗೆ ಟೀಕೆಗೊಳಗಾಗಿದ್ದಾರೆ ನಿಜ, ಆದರೆ ಅದಕ್ಕೂ ಮಿಗಿಲಾಗಿ ಸಮಾಜವು ಇವತ್ತಿಗೂ ಇವರನ್ನು ತಿರಸ್ಕರಿಸದೆ, ಬದಲಾಗಿ ಕಿಂಗ್ ಮೇಕರ್‌ಗಳೆಂದೇ ಗುರುತಿಸುತ್ತದೆ. ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ನಡೆದರೂ ಗೆದ್ದು ಬರುತ್ತಾರೆ ಮತ್ತು ತಮ್ಮ ಸಹಚರರನ್ನೂ ಗೆಲ್ಲಿಸುತ್ತಾರೆ ಎಂದು ಮಾಧ್ಯಮದವರೂ, ಅವರ ಕ್ಷೇತ್ರದ ಜನತೆ ಒಕ್ಕೊರಲಿಂದ ಪ್ರತಿಪಾದಿಸುತ್ತಾರೆ. ಅನೇಕ ವೇಳೆ ಈ ಪ್ರತಿಪಾದನೆಯಲ್ಲಿ ಹೆಮ್ಮೆ ತುಳುಕಾಡುತ್ತಿರುತ್ತದೆ. ಇದೇಕೆ ಹೀಗೆ?

ಇದಕ್ಕೆ ಉತ್ತರವೂ ಸಂಕೀರ್ಣವೇನೋ.ಮೊದಲನೆಯ ಕಾರಣವೇನೆಂದರೆ ಶ್ರೇಣೀಕೃತ ಸಮಾಜಕ್ಕೆ, ವರ್ಣಾಶ್ರಮದ ವ್ಯವಸ್ಥೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಬಹುಪಾಲು ಭಾರತೀಯರ ಮನಸ್ಥಿತಿ. ಈ ಮೇಲ್ಜಾತಿಯವರ ಭ್ರಷ್ಟತೆಯನ್ನು ಸಮಾಜವು ಮೊದಲಿಗೆ ಟೀಕಿಸಿದರೂ ಕ್ರಮೇಣ ಇನ್ನೇನು ಮಾಡಲಾಗುತ್ತದೆ, ವ್ಯವಸ್ಥೆಯೇ ಭ್ರಷ್ಟಗೊಂಡಿದೆಯಲ್ಲವೇ ಎಂದು ತಮ್ಮಷ್ಟಕ್ಕೇ ತಾನೇ ಸಮಾಜಾಯಿಷಿಕೊಳ್ಳುತ್ತ ತಮ್ಮ ತಮ್ಮ ಜಾತಿಯ ಭ್ರಷ್ಟರನ್ನು ವ್ಯವಸ್ಥೆಯ ಪಿತೂರಿಗೆ ಬಲಿಯಾದವರೆಂದೇ ವ್ಯಾಖ್ಯಾನಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ. ಎರಡನೇಯದಾಗಿ ಈ ಮೇಲ್ಜಾತಿಯ ಭ್ರಷ್ಟಾಚಾರದ ಸಂಕೀರ್ಣತೆ. ಈ ಭ್ರಷ್ಟ ವ್ಯವಹಾರವೂ ಅನೇಕ ಮಜಲುಗಳಲ್ಲಿ, ಬೇನಾಮಿಯಾಗಿ ನಡೆದಿರುತ್ತದೆ. ಇದರ ಚಹರೆಗಳು ಅಗೋಚರವಾಗಿರುತ್ತವೆ. ಇವರ ಲಂಚಗುಳಿತನದ ಚರ್ಚೆ ಅನಿವಾರ್ಯವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಅಧಿಕಾರದಲ್ಲಿರುವ ಸಂಬಂಧಪಟ್ಟ ವ್ಯಕ್ತಿ ಎಲ್ಲಿಯೂ ನೇರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವುದಿಲ್ಲ. ಬದಲಾಗಿ ಈತನ ಸಂಬಂಧಿಕರು, ಮಕ್ಕಳು ಅರೋಪಗಳಿಗೆ ಒಳಗಾಗಿರುತ್ತಾರೆ. ಮತ್ತು ಹಣಕಾಸಿನ ವಹಿವಾಟು ಸಹ ಎಲ್ಲಿಯೂ ಮುಕ್ತವಾಗಿರುವುದಿಲ್ಲ, ದಾಖಲೆಗಳು ಶೋಧನೆಗೆ ದಕ್ಕವುದಿಲ್ಲ. ಲಂಚದ ಸ್ವರೂಪವು ಅನೇಕ ವೇಳೆ ಉಡುಗೊರೆಗಳ ರೂಪದಲ್ಲಿರುತ್ತದೆ. ಈ ರೀತಿಯಾಗಿ ಉಡುಗೊರೆಗಳ ರೂಪದಲ್ಲಿ ದೊರೆತ ಕೋಟ್ಯಾಂತರ ಬೆಲೆಬಾಳುವ ಜಮೀನುಗಳು, ಬಂಗಲೆಗಳು, ಉದ್ಯಮಗಳನ್ನು ಲಂಚವೆಂದು ಸಾಬೀತುಗೊಳಿಸಲು ನ್ಯಾಯಾಂಗದಲ್ಲಿ ಬೆವರಿಳಿಸಿ ಸೆಣೆಸಬೇಕಾಗುತ್ತದೆ.graft-corruption ಏಕೆಂದರೆ ಮೇಲಿನ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಜಾತಿಯ ಕಾರಣಕ್ಕಾಗಿ ಮತ್ತು ಹಣದ ಬಲದಿಂದ ದೇಶದ ಖ್ಯಾತಿವೆತ್ತ ವಕೀಲರನ್ನು ನೇಮಿಸಿಕೊಳ್ಳುವಷ್ಟು ಛಾತಿ ಇರುತ್ತದೆ. ಇವರನ್ನು ಮುಕ್ತಗೊಳಿಸಲು ಇವರ ಹಿಂದೆ ಅನೇಕ ನುರಿತ ಸಿಎಗಳ, ಆರ್ಥಿಕ ತಜ್ಞರ ಪಡೆಯೇ ತಯಾರಿರುತ್ತದೆ. ಹೀಗಾಗಿ ಇಡೀ ಅವ್ಯವಹಾರವೇ ಸಂಕೀರ್ಣಗೊಂಡು ವಿಚಾರಣೆಯು ವರ್ಷಗಳವರೆಗೆ ನಡೆದು ಕಾಲಕ್ರಮೇಣ ಜನಸಾಮಾನ್ಯರ ಮನಸ್ಸಿನಿಂದ ಮರೆಯಾಗುತ್ತದೆ.

ಆದರೆ ಓಬಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಬಹುಪಾಲು ಅಧಿಕಾರಿಗಳು ಮತ್ತು ರಾಜಕಾರಣಿಗಳ ಭ್ರಷ್ಟಾಚಾರ ಇಷ್ಟೊಂದು ಕಗ್ಗಂಟಾಗಿರುವುದಿಲ್ಲ. ಸರಳ ಮತ್ತು ನೇರ. ಈ ವರ್ಗಕ್ಕೆ ಸೇರಿದ ಭ್ರಷ್ಟರು ನೇರವಾಗಿ ಹಣವನ್ನು ಪಡೆದು, ನೇರವಾಗಿ ಅದನ್ನು ತಮ್ಮ ಬ್ಯಾಂಕಿನಲ್ಲಿ ಜಮಾವಣೆ ಮಾಡುತ್ತಾರೆ. ಮೊನ್ನೆಯವರೆಗೂ ವಠಾರಗಳಲ್ಲಿ, ಕೇರಿಗಳಲ್ಲಿ ಜೀವಿಸುತ್ತಿದ್ದ ಇವರ ಬದುಕು ಅಧಿಕಾರದಿಂದ ಗಳಿಸಿದ ಭ್ರಷ್ಟತೆಯಿಂದ ದಿನಬೆಳಗಾಗುವುದರಲ್ಲಿ ಕಣ್ಣು ಕುಕ್ಕುವಂತೆ ಐಷಾರಾಮಿ ಜೀವನಕ್ಕೆ ರೂಪಾಂತರಗೊಳ್ಳುವುದು ಸಹಜವಾಗಿಯೇ ಪ್ರತಿಯೊಬ್ಬರಿಗೂ ದಿಗ್ಭ್ರಮೆ ಹುಟ್ಟಿಸುತ್ತದೆ. ಇದೂ ಸಹ ಹೇಳಿದಷ್ಟು ಸರಳವಲ್ಲ. ಅನೇಕ ಸಂಕೀರ್ಣ ಮಜಲುಗಳನ್ನೊಳಗೊಂಡಿದೆ. ಮತ್ತು ಬಹು ಮುಖ್ಯವಾಗಿ ಜಾತೀಯತೆಯಿಂದ ಮಲಿನಗೊಂಡ ಭಾರತೀಯ ಮನಸ್ಸುಗಳೆಂದೂ ತಳ ಸಮುದಾಯಗಳೂ ಐಶ್ವರ್ಯವಂತರಾಗುವುದನ್ನು, ತಮ್ಮ ಸಮಸಮಕ್ಕೆ ಬದುಕುವುದನ್ನು ಅರಗಿಸಿಕೊಳ್ಳಲಾರವು. ಇಂತಹ ತಳಸಮುದಾಯವು ವ್ಯಾಪಕ ಭ್ರಷ್ಟ್ಟಾಚಾರದ ಆರೋಪವನ್ನು ಎದುರಿಸಿದಾಗ ನೋಡಿ ನಾನು ಹೇಳಲಿಲ್ಲವೇ ಎನ್ನುವ ಮುಖಭಾವವನ್ನು ವ್ಯಕ್ತಪಡಿಸುತ್ತದೆ ಇಂಡಿಯಾದ ಜಾತೀಯತೆಯ ಮನಸ್ಸು.

ಮತ್ತೊಂದು, ಮುಖ್ಯವಾಗಿ ಇಂದು ಮೇಲ್ಜಾತಿಗಳಿಗೆ ಸೇರಿದವರೆಲ್ಲ ಕಳೆದೆರಡು ದಶಕಗಳಿಂದ ಖಾಸಗೀ ಕ್ಷೇತ್ರಗಳ ಕಾರ್ಪೋರೇಟ್ ಗೂಡುಗಳಿಗೆ ವಲಸೆ ಹೋಗಿದ್ದರೆ, ತಳ ಸಮುದಾಯದ ಗುಂಪು ಸರ್ಕಾರಿ ಹುದ್ದೆಗಳಿಗೆ ಭರ್ತಿಯಾಗಿದ್ದಾರೆ. ಅದೊಂದೇ ಅವರಿಗಿರುವ ಆರ್ಥಿಕ ಭದ್ರತೆಯ ತಂಗುದಾಣ. meritocracyಸರ್ಕಾರಿ ವಲಯಗಳಲ್ಲಿ ಸಂಪೂರ್ಣವಾಗಿ ನೆಲೆಗೊಂಡಿರುವ ಭ್ರಷ್ಟಾಚಾರದ ತೆಕ್ಕೆಗೆ ಜಾತಿ ಬೇಧವಿಲ್ಲದೆ ಪ್ರತಿಯೊಬ್ಬರೂ ಸಹಜವಾಗಿಯೇ ಬಿದ್ದಿದ್ದಾರೆ. ಆದರೆ ತಳಸಮುದಾಯಗಳು ಮತ್ತು ಓಬಿಸಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರೂ ಸಹ ಸಹಜವಾಗಿಯೇ ಭ್ರಷ್ಟರೆಂದೇ ಪರಿಗಣಿಸಲ್ಪಡುತ್ತಾರೆ. ಸರ್ಕಾರಿ ಮತ್ತು ಖಾಸಗೀ ಕ್ಷೇತ್ರಗಳ ನಡುವಿನ ಕಾರ್ಯ ವೈಖರಿಗಳು, ಬಿಕ್ಕಟ್ಟುಗಳು, ಶೈಲಿಗಳು ಸಂಪೂರ್ಣ ವಿಭಿನ್ನವಾಗಿವೆ. ಇದನ್ನು ವಿವರಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಇಂದು ಸರ್ಕಾರಿ ವಲಯಗಳಲ್ಲಿ ಇರುವಷ್ಟೇ ಭ್ರಷ್ಟತೆ ಖಾಸಗೀ ಕ್ಷೇತ್ರಗಳಲ್ಲೂ ಇದೆ. ಇದನ್ನು ಇಂದು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ನನ್ನಂತಹವರು ವೈಯುಕ್ತಿಕವಾಗಿ,ಕಣ್ಣಾರೆ ಕಂಡಿದ್ದೇವೆ. ಆದರೆ ಸರ್ಕಾರಿ ಕ್ಷೇತ್ರದ ವ್ಯಾಪ್ತಿ ಮತ್ತು ಹರಹು ನೇರವಾಗಿ ಸಾರ್ವಜನಿಕರನ್ನು ಒಳಗೊಳ್ಳುವುದರಿಂದ ಇಲ್ಲಿನ ಭ್ರಷ್ಟತೆ ನೇರ ಮತ್ತು ಪಾರದರ್ಶಕ ಮತ್ತು ಲಂಚದ ಕೈಗಳಿಗೆ ಹೆಜ್ಜೆ ಹೆಜ್ಜೆಗೂ ಮುಖಾಮುಖಿಯಾಗುತ್ತಿರುತ್ತೇವೆ. ಇದು ಸಹಜವಾಗಿಯೇ ಸಮಾಜದಲ್ಲಿ ಆಕ್ರೋಶವನ್ನು ಹುಟ್ಟು ಹಾಕುತ್ತದೆ. ಆದರೆ ಖಾಸಗೀ ವಲಯಗಳಲ್ಲಿ ಇದರ ಅವಶ್ಯಕತೆಯೇ ಇರುವುದಿಲ್ಲವಾದ್ದರಿಂದ ಇಲ್ಲಿನ ಭ್ರಷ್ಟಾಚಾರದ ವ್ಯಾಪ್ತಿ ಸೀಮಿತವಾಗಿರುತ್ತದೆ. ಹಾಗೂ ಸಾರ್ವಜನಿಕರಿಗೆ ಗೋಚರಿಸುವುದಿಲ್ಲ. ಅನುಭವಿಸುವುದೂ ಇಲ್ಲ.

ಆದರೆ ನಮ್ಮ ಮಾನಸಿಕ ಭ್ರಷ್ಟತೆ ಎಷ್ಟಿದೆಯೆಂದರೆ ಈ ಕ್ಷಣಕ್ಕೂ ದಲಿತರಿಗೆ ಖಾಸಗೀ ವಲಯದ ಬಾಗಿಲನ್ನು ತೆರೆದೇ ಇಲ್ಲ!! ಇಂದಿಗೂ ಖಾಸಗೀ ವಲಯಗಳಲ್ಲಿ ದಲಿತ ನಿದೇಶಕರಾಗಲೀ, ಸಿಇಓಗಳಾಗಲಿ, ಜನರಲ್ ಮ್ಯಾನೇಜರ್‌ಗಳಾಗಲೀ, ಮ್ಯಾನೇಜರ್‌ಗಳಾಗಲಿ ಕಾಣುವುದೂ ಇಲ್ಲ!! ಖಾಸಗೀ ವಲಯದ, ಕಾರ್ಪೋರೇಟ್ ಜಗತ್ತಿನ ಈ ಅಸ್ಪೃಶ್ಯತೆಯ ಆಚರಣೆಯನ್ನು ಆಶೀಶ್ ನಂದಿಯಂತಹ ಸಮಾಜ ವಿಜ್ಞಾನಿಗಳು ವಿವರವಾಗಿ ವಿವರಿಸಬೇಕಾಗಿತ್ತು. ಆದರೆ ಇದನ್ನು ಮಾಡಲಿಲ್ಲ. ಇದಕ್ಕೆ ಬಹು ಮುಖ್ಯ ಕಾರಣ ಆಶೀಶ್ ನಂದಿಯಂತಹ ಸಮಾಜ ವಿಜ್ಞಾನಿಗಳು ಎಂದೂ ಸಹ ತಮ್ಮನ್ನು ಕಾರ್ಯ ಕ್ಷೇತ್ರಗಳ ಪ್ರಯೋಗರಂಗದಲ್ಲಿ (Field Experiments) ತೊಡಗಿಸಿಕೊಳ್ಳಲೇ ಇಲ್ಲ. ಸಮಾಜದ ಸಂರಚನೆ, ಅದರ ನಡಾವಳಿಗಳು ಮತ್ತು ಬಹಿರಂಗವಾಗಿ ವ್ಯಕ್ತಗೊಳ್ಳುವ ಅನೇಕ ಮಾದರಿಗಳನ್ನು, ಚಹರೆಗಳನ್ನು, ಊಳಿಗ ಮಾನ್ಯತೆಯನ್ನು ನಮಗೆಲ್ಲ ವಿಶದವಾಗಿ ಪರಿಚಯಿಸಲು ನೇರವಾಗಿ ಕಾರ್ಯ ಕ್ಷೇತ್ರಗಳಿಗೆ ತೆರಳಿ ಕೈ, ಮೈಗಳನ್ನು ಕೊಳೆ ಮಾಡಿಕೊಳ್ಳಬೇಕಾಗಿದ್ದ ಆಶೀಶ್ ನಂದಿಯಂತಹ ಸಮಾಜ ಶಾಸ್ತ್ರಜ್ಞರು ಅಲ್ಲಿಗೆ ತೆರಳುವುದಿರಲಿ, ಕಾರ್ಯಕ್ಷೇತ್ರಗಳ ಮುಖಗಳನ್ನೇ ನೋಡಿದಂತಿಲ್ಲ. ಇವರೆಲ್ಲ ಎಷ್ಟು ಬಾರಿ ನಗರದ ಕೊಳಗೇರಿಗಳಿಗೆ ಭೇಟಿ ಕೊಟ್ಟಿದ್ದಾರೆ? ಎಷ್ಟು ಬಾರಿ ಪಟ್ಟಣಗಳ ಸ್ಲಂಗಳನ್ನು ಅಧ್ಯಯನ ಮಾಡಿದ್ದಾರೆ? ಈ ಸೋ ಕಾಲ್ಡ್ ಸಮಾಜ ಶಾಸ್ತ್ರಜ್ಞರಿಗೆ ಗ್ರಾಮಗಳ ಕೇರಿಗಳ ಸ್ವರೂಪಗಳೇನಾದರೂ ಗೊತ್ತೇ? ಇವಾವುದನ್ನು ಮಾಡದೆ ಕೇವಲ ನಾಲ್ಕು ಗೋಡೆಗಳ ನಡುವೆ ವಿಶ್ವದ ಖ್ಯಾತ ಪಂಡಿತರೆನ್ನಲ್ಲ ಆಧ್ಯಯನ ಮಾಡಿ, ಅರಗಿಸಿಕೊಂಡು ನಮಗೆ ದೇಶ, ಕಾಲ, ಸಮಾಜದ ಕುರಿತಾಗಿ ಅಸ್ಖಲಿತವಾಗಿ ಬೋಧಿಸುವ ಇವರೆಲ್ಲರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗುತ್ತದೆ. ಇವರೆಷ್ಟೇ ಪ್ರಾಮಾಣಿಕರಾಗಿದ್ದರೂ ಸಹ ಇವರ ಪಾಂಡಿತ್ಯವೆಲ್ಲ ಪಾಮರರಿಗೆ ಬಂಡ್ವಾಳಿಲ್ಲದ ಬಡಾಯಿಯಂತೆ ಗೋಚರಿಸಲಾರಂಬಿಸುತ್ತದೆ.

ಕಳೆದ ನಲ್ವತ್ತು ವರ್ಷಗಳಿಂದ ಚಿಂತಕರೆಂದು ಖ್ಯಾತರಾಗಿರುವ ಆಶೀಶ್ ನಂದಿ ಮಾದರಿಯ ಸಮಾಜ ವಿಜ್ಞಾನಿಗಳಿಗೆ ಅಂಬೇಡ್ಕರ್ ಶಾಲೆ ಎಂದಿಗೂ ಅರಿವಾಗಲೇ ಇಲ್ಲ. ಒಂದು ವೇಳೆ ಅರಿವಾಗಿದ್ದರೆ ಇಪ್ಪತ್ತೊಂದನೇ ಶತಮಾನದಷ್ಟೊತ್ತಿಗೆ Young_Ambedkarಅಂಬೇಡ್ಕರ್ ಮತ್ತವರ ಮಾದರಿ ಚಿಂತನೆಗಳು ಸಮಾಜದ ಮುನ್ನಲೆಗೆ ಬರುತ್ತವೆ ಮತ್ತು ಮಿಕ್ಕೆಲ್ಲ ಅಧ್ಯಯನಗಳು ಬಾಬಾ ಸಾಹೇಬರ ಸುತ್ತಲೇ ಸುತ್ತುತ್ತಿರುತ್ತವೆ ಎಂದು ಎಂಬತ್ತರ ದಶಕದಲ್ಲೇ ಈ ಪಂಡಿತರು ಹೇಳಬೇಕಾಗಿತ್ತು. ಆದರೆ ಇವರೆಂದೂ ಅಂಬೇಡ್ಕರ್ ಅವರನ್ನು ಓದಿಕೊಂಡಿಯೇ ಇಲ್ಲವಾದ್ದರಿಂದ ಈ ಆಶೀಶ್ ನಂದಿ ಮಾದರಿಯ ಸಮಾಜ ವಿಜ್ಞಾನಿಗಳಿಂದ ಈ ಮಟ್ಟವನ್ನು ನಿರೀಕ್ಷಿಸುವುದೂ ತಪ್ಪೇನೋ. ಇವರದೇನಿದ್ದರೂ ಎಡಪಂಥೀಯ ಇಲ್ಲ ಬಲಪಂಥೀಯ ಜಿಜ್ಞಾಸೆಗಳ ಒಣ ಚರ್ಚೆಗಳಷ್ಟೆ. ಈ ಎರಡು ಇಸಂಗಳ ಪ್ರಲೋಭನೆಯಿಂದ ಹೊರಬರಲಾರದೆ ಅಲ್ಲಿಯೇ ಗೊರಕೆ ಹೊಡೆಯುತ್ತಿರುವ ಈ ಗುಂಪಿಗೆ ಸತ್ಯದ ಪ್ರತಿಪಾದನೆಯ ಮುಖ್ಯ ಮುಖಗಳು ಇಂದಿಗೂ ಗೊತ್ತಿಲ್ಲ. ತಾವು ಮಾತನಾಡಿದ್ದೆಲ್ಲವೂ ಚಾರಿತ್ರಿಕ ಸತ್ಯಗಳೆಂದೇ ನಂಬಿರುವ ಈ ಪಂಡಿತರಷ್ಟು ನಗೆಪಾಟಲಿಗೀಡಾದಷ್ಟು ಚಿಂತಕರು ಮತ್ತೆಲ್ಲಿಯೂ ಸಿಗಲಾರರೇನೋ.

ಮಸಾಲಾ ಸುದ್ದಿಯ ಸರಕಾಗುತ್ತಿರುವ ಯುವಕರು

– ಡಾ.ಎಸ್.ಬಿ.ಜೋಗುರ

ವಿಶ್ವದ ಬೇರೆ ಬೇರೆ ರಾಷ್ಟ್ರಗಳನ್ನು, ಅವುಗಳ ಜನಸಂಖ್ಯಾ ಸಂಯೋಜನೆಯಲ್ಲಿಯ ಯುವಕರ ಪ್ರಮಾಣವನ್ನು ಗಮನಿಸಿ ಮಾತನಾಡುವದಾದರೆ, ಭಾರತ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರುತ್ತದೆ. ಯುವಕರು ಎನ್ನುವದು ಒಂದು ನಿರ್ದಿಷ್ಟವಾದ ಮಯೋಮಾನದ ಗುಂಪಿಗೆ ಸಂಬಂಧಪಡುವ ಹಾಗೆಯೇ ಆ ವಯೋಮಾನವನ್ನು ಮೀರಿಯೂ ಹೊತ್ತಿರುವ ಯುವಮನಸಿನ ಸ್ತರಗಳಿಗೂ ಅನ್ವಯವಾಗುತ್ತದೆ. ಕೆಲಬಾರಿಯಂತೂ ಹರೆಯದ ವಯಸು ಮತ್ತು ಮುದುಕರ ಮನಸು ಮೇಳೈಸಿರುವದೂ ಇರುತ್ತದೆ. youthವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 15-24 ರ ವಯೋಮಿತಿಯಲ್ಲಿ ಬರುವ ಜನಸಮೂಹವನ್ನು ಯುವಕರೆಂದು ಕರೆಯಲಾಗುವದು. ಈ ವಯೋಮಾನದ ಹಂಗು ಹರಿದು, ಅದರಾಚೆಗೂ ಯುವಕರ ಮನ:ಸ್ಥಿತಿಯನ್ನು ಉಳಿಸಿಕೊಂಡವರಿರಬಹುದು. ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಖುಷವಂತಸಿಂಗ್ ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡ, ಪಾಟೀಲ ಪುಟ್ಟಪ್ಪರಂಥವರನ್ನು ವಯಸ್ಸಾದವರೆಂದು ಸಂಬೋಧಿಸಬಹುದಾದರೂ ಈಗಲೂ ಕ್ರೀಯಾಶೀಲರಾಗಿರುವ ಅವರ ಮನಸಿಗೆ ಆ ಮುಪ್ಪು ಅನ್ವಯಿಸುವದಿಲ್ಲ. ಅವರಿಗೆ ವಯಸ್ಸಾಯಿತು ಎನ್ನುವ ಮಾತು ಅವರ ವಯೋಮಾನದ ಮಿತಿಗೆ ಸಂಬಂಧಿಸಿದ್ದೇ ಹೊರತು ಮನಸ್ಸಿಗಲ್ಲ.

ಭಾರತದಂತಹ ಅಪಾರ ಮಾನವಸಂಪನ್ಮೂಲ ಹೊಂದಿರುವ ನೆಲದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪರಾಧಿ ಕೃತ್ಯಗಳನ್ನು, ಆ ಬಗೆಯ ಅಪವರ್ತನೆಯಲ್ಲಿ ತೊಡಗಿರುವವರ ಹಿನ್ನೆಲೆ, ಮುನ್ನೆಲೆಯನ್ನು ಗಮನಿಸಿದಾಗ ಆತಂಕ ಪಡಬಹುದಾದ ಸತ್ಯವೊಂದು ಎದುರಾಗುತ್ತದೆ. ಇವರೆಲ್ಲರೂ ಬಹುತೇಕವಾಗಿ ಯುವಕರು ಎನ್ನುವದೇ ಒಂದು ಬಹು ದೊಡ್ದ ಬಿಕ್ಕಟ್ಟಾಗಿ ನಮ್ಮನ್ನು ಕಾಡುತ್ತದೆ. ನಮ್ಮ ಯುವಕರು ಹೊರಟಿರುವ ಮಾರ್ಗ, ಇಡುತ್ತಿರುವ ಹೆಜ್ಜೆ ಎರಡೂ ಸರಿಯಾಗಿಲ್ಲ. ದೇಶ ಕಟ್ಟುವ ಕೈಂಕರ್ಯದಲ್ಲಿ ಮುಂದಡಿ ಇಡಬೇಕಾದವರು ದಿನನಿತ್ಯದ ಮಾಧ್ಯಮಗಳ ಮಸಾಲಾ ಸುದ್ಧಿಯ ಸರಕಾಗುತ್ತಿರುವದು ಒಂದು ದೊಡ್ದ ವಿಪರ್ಯಾಸ. youth_criminalsನಿರ್ಮಾಣದಲ್ಲಿ ತೊಡಗಬೇಕಾದ ಅವರ ಮೈ-ಮನ ನಿರ್ನಾಮದೆಡೆಗೆ ವಾಲುತ್ತಿರುವದನ್ನು ನೋಡಿದರೆ, ಯುವಜನಾಂಗದ ಬಗ್ಗೆ ಭರವಸೆ ಇರುವ ಯಾರಿಗಾದರೂ ಬೇಸರವಾಗುತ್ತದೆ. ತೀರಾ ಅಪಾರ ಪ್ರಮಾಣದ ಜನಸಂಖ್ಯೆ ಇರುವ ನಮ್ಮಂಥಾ ರಾಷ್ಟ್ರಗಳಲ್ಲಿ ಈ ಪ್ರಮಾಣದ ಯುವಕರ ಅಪವರ್ತನೆ ಸಾಮಾನ್ಯ ಎಂದು ಉದಾಸೀನ ಮಾಡಿಬಿಡುವಷ್ಟು ಹಗುರವಾದ ವರ್ತನೆಗಳು ಇವಲ್ಲ. ಕೊಲೆ, ದರೋಡೆ, ವಾಹನಕಳ್ಳತನ, ಸಾಮೂಹಿಕ ಅತ್ಯಾಚಾರ ಮುಂತಾದವುಗಳಲ್ಲಿ ಯುವಕರದ್ದೇ ಸಿಂಹಪಾಲು.

ಅತ್ಯಾಚಾರದ ಪ್ರಕರಣ, ಕಾರುಗಳ ಮುಂದಿನ ಎಂಬ್ಲೆಮ್ ಕೀಳುವದು, ಮಹಿಳೆಯರ ಕತ್ತಿನ ಚೈನು ಹರಿಯುವದು, ರಸ್ತೆಯ ಬದಿ ನಿಲ್ಲಿಸಿದ ಕಾರಿನ ಟೈರು ಲಪಟಾಯಿಸುವದು, ಬೈಕುಗಳಿಂದ ಪೆಟ್ರೊಲ್ ಕದಿಯುವದು, ಇಂಥಾ ಹತ್ತಾರು ಬಗೆಯ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವ ನಮ್ಮ ಯುವಕರು ತಮ್ಮ ಭವಿಷ್ಯದ ಬಗ್ಗೆ ಒಟ್ಟಾರೆ ಯೋಚಿಸದವರು. ಜೀವನ ಮೂರು ತಾಸುಗಳಿಗೆ ಸೀಮಿತವಾಗಿರುವ ಒಂದು ಬಾಲಿವುಡ್ ಸಿನೇಮಾ ಎಂದು ತಿಳಿದ ಬುದ್ಧಿಗೇಡಿ ಯುವಕರ ಹೊಣೆಗೇಡಿತನವೂ ಈ ಬಗೆಯ ಕೃತ್ಯಗಳಿಗೆ ಕಾರಣ. ಯಾರದೋ ಬೈಕಿನ ಅರ್ಧ ಲೀಟರ್ ಪೆಟ್ರೊಲ್ ಕದ್ದು ಚಟ ಮಾಡುವ ಸಂತಾನ ಖಂಡಿತಾ ಆ ದೇಶದ ಪಾಲಿಗೆ ಸೈತಾನ ಇದ್ದಂತೆ. ಇಂಥವರ ಸಂಖ್ಯೆಯೇ ಹೆಚ್ಚಾಗುತ್ತಾ ನಡೆದರೆ ಇವರನ್ನಾಶ್ರಯಿಸಿರುವ ರಾಷ್ಟಕ್ಕೂ ಭವಿಷ್ಯವಿಲ್ಲ. ಕರ್ತೃತ್ವ ಶಕ್ತಿಯನ್ನು ಮೈಗೂಡಿಸಿಕೊಂಡು ಆತ್ಯಂತಿಕವಾದ ಚೈತನ್ಯವಿರುವ ಹಂತದಲ್ಲಿಯೇ ಪಟಿಂಗತನದ ಪರಮಾವಧಿಯ ತುತ್ತ ತುದಿ ಏರಹೊರಟರೆ ಮುಗ್ಗರಿಸಿಬೀಳುವದು ಗ್ಯಾರಂಟಿ.

ಇಂದಿನ ಯುವಕರ ಮುಂದೆ ಸೂಕ್ತವಾದ ಆದರ್ಶಗಳಿಲ್ಲ, ಮಾದರಿಗಳಿಲ್ಲ. youth-arrestedಸರಿ-ತಪ್ಪುಗಳನ್ನು ನೆತ್ತಿಗೆ ಕುಕ್ಕಿ ಹೇಳಿ ಕೊಡುವವರಿಲ್ಲ. ಹೇಳಿದರೂ ಕೇಳುವ ವ್ಯವಧಾನವಿಲ್ಲ. ತಾನು ಮಾಡಿದ್ದೆಲ್ಲಾ ಸರಿ ಎನ್ನುವ ಭಂಡತನ ಇವರಲ್ಲಿ ಮೈಗೂಡಿಕೊಳ್ಳುತ್ತಿದೆ. ಹಿರಿಯರ ಬಗೆಗಿನ, ಹೆತ್ತವರ ಬಗೆಗಿನ ಗೌರವ, ನೆರೆಹೊರೆಯವರೊಂದಿಗಿನ ಪ್ರೀತಿ, ವಿನಯ ಎಲ್ಲವೂ ಮಾಯವಾಗುತ್ತಿವೆ. ಪಾಲಕರ ಮೊದ್ದುತನದಲ್ಲಿಯೇ ಇವರು ಮೊಂಡಾಗುತ್ತಿದ್ದಾರೆ. ಕಿವಿ ಹಿಂಡಿ ಹೇಳುವ ಪಾಲಕರಾಗಲೀ, ಶಿಕ್ಷಕರಾಗಲೀ, ನೆರೆಹೊರೆಯಾಗಲೀ ಈಗಿಲ್ಲ. ಎಲ್ಲರೂ ಅವರವರದೇ ಆದ ಜಗತ್ತಿನಲ್ಲಿ ಬ್ಯುಜಿ. ಯಾರಿಗೂ ಪುರಸೊತ್ತಿಲ್ಲ. ಪರಿಣಾಮ ಈ ಯುವಕರು ಆಡಿದ್ದೇ ಆಟ ನೋಡಿದ್ದೇ ನೋಟ ಎನ್ನುವಂತಾಗಿದೆ. ಯುವಶಕ್ತಿ ಒಂದು ಬಲಾಡ್ಯ ಫ಼ೋರ್ಸ್ ಇದ್ದಂತೆ. ಹೇಗೆ ಒತ್ತರಿಸಿ ಹರಿಯುವ ನೀರಿಗೆ ಆಣೆಕಟ್ಟನ್ನು ಕಟ್ಟಿ ರಚನಾತ್ಮಕವಾಗಿ ಬಳಸಿಕೊಳ್ಳಲಾಗುತ್ತದೆಯೋ, ಹಾಗೆಯೇ ಯುವಕರ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ. ಆ ಯುವಕರೇ ಹಾಗೆ, ಆ ವಯಸ್ಸೇ ಅಂಥದು ಎನ್ನುವ ಸಿನಿಕತನದ ಮಾತುಗಳ ಬದಲಾಗಿ ಅವರನ್ನು ಒಂದು ಅದಮ್ಯ ಶಕ್ತಿಯಾಗಿ, ಸಂಪನ್ಮೂಲವಾಗಿ ರೂಪಿಸುವತ್ತ ನಾವು ನೀವೆಲ್ಲಾ ಯತ್ನಿಸಬೇಕಿದೆ. ಇಲ್ಲದಿದ್ದರೆ ಒಂದು ದೊಡ್ಡ ತಲೆಮಾರು ನಿರರ್ಥಕವಾದ, ಅಪಾಯಕಾರಿಯಾದ ಮಾರ್ಗದಲ್ಲಿ ಸಾಗಬಹುದಾದ ಸೂಚನೆಗಳಿವೆ.

ಜೈಪುರ ಸಮ್ಮೇಳನದಲ್ಲಿ ಭ್ರಷ್ಟಾಚಾರದ ಹಣೆಪಟ್ಟಿ

– ಮಹಾದೇವ ಹಡಪದ

ಪರಂಪರೆಯಲ್ಲಿ ಕೆಟ್ಟದ್ದೂ ಒಳ್ಳೆಯದೂ ಇದ್ದೇ ಇರುತ್ತದೆ. ಒಳ್ಳೆಯದರ ನಡೆಯಲ್ಲಿ ಮಾನವೀಯ ಮೌಲ್ಯಗಳು ಜಾಗ ಮಾಡಿಕೊಂಡಿರುತ್ತವೆ. ಕೆಟ್ಟದರ ನಡೆಯು ಮಾತ್ರ ಬಹಬೇಗ ವಿಸ್ತಾರಗೊಳ್ಳುವ, ವಿಕಾರಗಳನ್ನು ಹೆರುವ ಶಕ್ತಿಯುಳ್ಳದ್ದಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರಾವಧಿಯ ಆಯಸ್ಸು ಅಲ್ಪಾವಧಿಯದ್ದಾಗಿರುವ ಕಾರಣ ಈ ಎರಡು ಸಮಾಜ ವಿಜ್ಞಾನಗಳನ್ನು ಸಮತೂಕದಲ್ಲಿಟ್ಟು ಆಡಳಿತದ ಹೊರೆ ಹೊರುವ ಸಮಾನತೆಯ ಆಶಯ ಮತ್ತೆಮತ್ತೆ ವ್ಯವಸ್ಥೆಯಿಂದ ನುಣುಚಿಕೊಳ್ಳುತ್ತಲೇ ಇರುತ್ತದೆ. ಕೆಟ್ಟ ಪರಂಪರೆಯು ರಿವೈವಲೈಜ್ ಆಗುವಷ್ಟು ಒಳ್ಳೆಯ ನಡೆ ಬಹಳ ದಿನ ಬದುಕಲಾರದು.

ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ಈ ನೆಲದ ಗುಣದಲ್ಲಿದೆ (ಪರಧರ್ಮ ಸಹಿಷ್ಣುತೆ…) ಎಂದು ಹೇಳುವ ಆಧ್ಯಾತ್ಮವಾದಿಗಳ ಅತ್ಯುತ್ಸಾಹದ ಮಾತುಗಾರಿಕೆಯಲ್ಲಿ ಎಲ್ಲಿಯತನಕ ವಾಸ್ತವದ ಅರಿವಾಗುವುದಿಲ್ಲವೋ ಅಲ್ಲಿಯತನಕ ಭಾರತದಲ್ಲಿನ ಸಮಾಜ ವ್ಯವಸ್ಥೆಯ ಮೂಲಬೇರಿನಲ್ಲಿ ಕವಲೊಡೆದ ಕೆಟ್ಟ ಪರಂಪರೆ ತನ್ನ ಪಥ ಬದಲಿಸಲಾರದು. ಒಬ್ಬರನ್ನೊಬ್ಬರು ಅನುಮಾನಿಸುತ್ತ, ಅಪಮಾನಿಸುತ್ತ, ದೂಷಿಸುತ್ತ ತಿರಸ್ಕರಿಸುವ ಚಾಳಿ ಬೆಳೆದು ಬಂದಂತೆಲ್ಲ ಅಸ್ಪೃಶ್ಯತೆಯ ಕಾಂಡ ಗಟ್ಟಿಗೊಳ್ಳುತ್ತಲೇ ಬಂದಿತು. ನಿಜವಾಗಿಯೂ ಈ ಹೂತು ಹೋದ ಮರದ ನೀಚತನದ ಬುಡಕ್ಕೆ ಕೈ ಹಾಕಿ ಇಡೀ ಗಿಡವನ್ನೇ ಅಲ್ಲಾಡಿಸಲು ಹವಣಿಸಿದವರು Young_Ambedkarಬಾಬಾಸಾಹೇಬರು, ಆ ಪ್ರಯುಕ್ತವಾಗಿ ಒಂದಷ್ಟು ಎಲೆ-ಹಣ್ಣು-ಕಾಯಿ-ಬೇರುಗಳಲ್ಲಿ ಉಸಿರಾಡುವ ಜಾಗಗಳು ಸಿಕ್ಕವು. ಅಷ್ಟಕ್ಕೆ ತೃಪ್ತರಾಗದ ವೈಚಾರಿಕರು ವೈಜ್ಞಾನಿಕವಾಗಿ ಸಂಸ್ಕೃತಿಯ ಒಳ-ಹೊರಗನ್ನು ಕೆಣಕತೊಡಗಿದರು. ಆಗ ಕೈಕಾಲಿಗೆಲ್ಲ ತೊಡರಿದ ಹಿಂದೂ ಎಂದು ಗುರುತಿಸಲ್ಪಟ್ಟ ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕು ಬೀಳತೊಡಗಿತು. ಹಳೆಯ ದಫ್ತರಿನಲ್ಲಿ ದಾಖಲಾಗಿರುವ, ದಾಖಲಾಗದೇ ಉಳಿದಿರುವ ಸಮಾಜ ವಿಜ್ಞಾನದ ನ್ಯೂನ್ಯತೆಗಳು ಪಟಪಟನೆ ಅನಾವರಣಗೊಳ್ಳತೊಡಗಿದವು.

ಬದುಕಿನ ಕೌಶಲಗಳು ಕುಲ ಕಸಬುಗಳಾಗಿ, ಜಾತಿಗಳಾಗಿ, ಪಂಗಡಗಳಾಗಿ, ಒಳಪಂಗಡಗಳಾಗಿ, ಬಣ-ಬಳ್ಳಿ-ಕುಲಗೋತ್ರಗಳಾಗಿ ಒಂದರ ಒಳಗೊಂದು ಬೆಸೆದುಕೊಂಡ ಹೆಣಿಗೆಗಳಾಗಿ ವರ್ಣಾಶ್ರಮವನ್ನು ಸಾಕಿಕೊಂಡು ಬಂದಿರುವುದನ್ನು ಕಾಣುವಂತಾಯಿತು. ಹುಲಿ ಸವಾರಿ ಮಾಡುವವ, ನಾಯಿಯನ್ನು ಪಳಗಿಸಿ ಬೇಟೆಗೆ ಬಳಸಿದವ, ಕುರಿಗಳ ಸಾಕಿ, ದನಗಳ ಮೇಯಿಸಿ, ಹೊಲಗದ್ದೆಗಳ ಉತ್ತಿಬಿತ್ತಿ ಬೆಳೆದವ, ಹಾವಿನ ಹಾಸಿಗೆಯಲ್ಲಿ ಮಲಗಿದವ. ಹೀಗೆ ಕೂಡು ಬಾಳಿನ ಸಮುದಾಯ ಪ್ರಜ್ಞೆಗೆ ನೆರಳಾದವರು ಜನಾಂಗಗಳಿಗೆ ನಾಯಕರಾಗಿ, ಸತ್ತ ಮೇಲೆ ದೇವರಾಗಿ ಕಂಕಣ ಗೋತ್ರಗಳನ್ನು ಬೆಳೆಸಿದ್ದರು. ಈ ಎಲ್ಲ ತಿಳವಳಿಕೆಯನ್ನು ಪ್ರಕೃತಿಯಿಂದ ಕಲಿತ ಕೆಲವೇ ಜನರು ಒಟ್ಟು ಸಮುದಾಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ವರ್ಣವ್ಯವಸ್ಥೆಯನ್ನು ಸೃಷ್ಟಿಸಿದರು. ಅಂಕೆಗೆ ಒಳಪಟ್ಟವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎನ್ನುವುದು ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು ಎಂಬಂತೆ ಮಹಾನ್ ಪರಂಪರೆಯಲ್ಲಿ ಸೇರಿಕೊಂಡಿತು.

ಈಗ ಕೆಟ್ಟ ಪರಂಪರೆ ವಿಲಕ್ಷಣ ರೂಪಗಳು ಮತ್ತೆ ಹೊಸ ಅವತಾರಗಳಲ್ಲಿ ಜೀವಂತಗೊಳ್ಳುತ್ತಿರುವ ಅನುಮಾನಗಳು ಗಟ್ಟಿಗೊಳ್ಳುತ್ತಿವೆ. ದಲಿತ ಮತ್ತು ಇತರೆ ಹಿಂದುಳಿದ ಸಮುದಾಯಗಳ ಕುರಿತಾಗಿ ಎಲ್ಲಿಲ್ಲದ ಅಸಮಾಧಾನಗಳು ಹೊಗೆಯಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದು ಕಾಲಕ್ಕೆ ಅಸ್ಪೃಶ್ಯರು, ಬಹಿಷ್ಕೃತರು, ನೀಚರು, ಲಂಪಟರು, ಅಪನಂಬಿಕಸ್ಥರು, ಕೊಳಕರು, ಗುನ್ಹೇಗಾರರು, ಜಾತಿಹೀನರು ಎಂದು ದೂಷಿಸಲ್ಪಟ್ಟವರನ್ನು ಇಂದಿನ ಪರಿಭಾಷೆಯಲ್ಲಿ ಭ್ರಷ್ಟರು ಭ್ರಷ್ಟಾಚಾರದ ಕಾರಣಕರ್ತರೆಂದು ಕರೆಯಲು ಆರಂಭಿಸಿರುವುದು ಕೂಡ ರಿವೈವಲಿಜಂನ ಲಕ್ಷಣದಂತೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭ್ರಷ್ಟರನ್ನು ಪರಿಶಿಷ್ಟ ಜಾತಿ, ವರ್ಗ ಮತ್ತು ಅತಿ ಹಿಂದುಳಿದ ವರ್ಗಗಳಲ್ಲಿ ಕಾಣಬಹುದು ಎಂಬಂತಹ ಹೇಳಿಕೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬಹುದು.

ಇತಿಹಾಸದ ಕರಾಳಪುಟಗಳಲ್ಲಿ ಇತರ ಸಮುದಾಯಗಳ ನೆನಪು ಬರೀ ಕಹಿಯಾಗಿ ಉಳಿದಿದೆ. ಹಾಗೆಂದ ಮಾತ್ರಕ್ಕೆ ಇದು ಭ್ರಷ್ಟಾಚಾರದ ಸಮರ್ಥನೆ ಮಾಡುವುದಾಗುವುದಿಲ್ಲ. ಆ ನೆನಪುಗಳಿಂದ ಬಿಡಿಸಿಕೊಳ್ಳಲು ವಾಮಮಾರ್ಗ ಹಿಡಿಯುವ ಇರಾದೆ ಯಾವ ಹಿಂದುಳಿದ ವರ್ಗಗಳ ಹಿತಾಸಕ್ತಿಯಾಗಿರುವುದಿಲ್ಲ ಅನ್ನುವುದನ್ನು ಸಮಾಜವಿಜ್ಞಾನಿಗಳು ಅರಿತುಕೊಂಡಿದ್ದಿದ್ದರೆ ಈ ತೆರನಾದ ದೂಷಣೆಯನ್ನು ಮಾಡುತ್ತಿರಲಿಲ್ಲ. ಇಲ್ಲಿಯತನಕವೂ ಬದುಕುವ ಹಕ್ಕಿಗಾಗಿ ಹೋರಾಟದ ಮುಖಾಂತರ ನ್ಯಾಯ ದೊರಕಿಸಿಕೊಂಡ ಸಮುದಾಯಗಳು ಈಗ ಅಧಿಕಾರಕ್ಕೆ ಬಂದ ತಕ್ಷಣ ಭ್ರಷ್ಟಾಚಾರದ ಪೋಷಕರಾಗಿ ಕಾಣಿಸಿಬಿಟ್ಟರೇ? ಕಾನೂನಿನ ಮುಖೇನ, ನೈತಿಕ ಪ್ರಜ್ಞೆಯನ್ನು ಬೆಳೆಸಿದ ಅಂಬೇಡ್ಕರ್ ಅವರ ಚಿಂತನೆಗಳು ನಿಮ್ಮ ರಾಜಕೀಯ, ಸಾಮಾಜಿಕ ಧೃವೀಕರಣದಿಂದ ಕೊನೆಗೊಳ್ಳಲಾರವು. ಹಿಂದುಳಿದ ವರ್ಗದ ಒಬ್ಬನೇ ಒಬ್ಬ ಸಮಾಜ ವಿಜ್ಞಾನಿಗೂ ಅನ್ನಿಸದ ಅಂಶ ನಿಮ್ಮ ಗಮನಕ್ಕೆ ಬಂದಿದೆ ಅಂದರೆ ಅದರರ್ಥ ನೀವು ಪರಂಪರೆಯನ್ನು ಹೇಗಿತ್ತೋ ಹಾಗೆ ಉಳಿಸಿಕೊಳ್ಳಲು ಹೇಳಿದ ಮಾತಿದು ಅನಿಸುತ್ತಿದೆ.

ಹಿಂದುಳಿದ ವರ್ಗಗಳವರಲ್ಲಿ ಬೆಳೆದುಬಂದ ಸಮಾಜವಿಜ್ಞಾನದಲ್ಲಿ ಆತ್ಮವಿಮರ್ಶೆಗೆ ಬಹುಮುಖ್ಯಸ್ಥಾನವನ್ನು ನೀಡಲಾಗಿದೆ. ತೀಕ್ಷ್ಣವಾಗಿ ತಿರಸ್ಕರಿಸುವ ಮತ್ತು ಸ್ವೀಕರಿಸುವ ಎರಡು ಸಮತೂಕದ ಗುಣಗಳ ನಡುವೆ ಭಾರತದಲ್ಲಿ ಅಂಬೇಡ್ಕರವಾದ ರಾಜಕೀವಾಗಿ, ಸಾಂಸ್ಕೃತಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ನೆಲೆಯಾಗಿರುವಂಥದ್ದು. ಹಾಗಾಗಿ ಇಲ್ಲಿನ ಚಾಟಿಯೇಟುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ರೀತಿಯಲ್ಲಿ ನಿಮಗೆ ಗೋಚರಿಸುತ್ತವೆ. ಅಭಿಪ್ರಾಯಗಳನ್ನು ರೂಪಿಸುತ್ತಲೇ ಸಮಾಜ ವ್ಯವಸ್ಥೆಯನ್ನು ಕಟ್ಟುವ ಕ್ರಮ ವೇದಕಾಲೀನ ಕ್ರಿಯೆ, ಅದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಹುಸಂಖ್ಯಾತರ ಭಾವನೆಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತೀರಿ. ಇಂದು ನಾಳೆ ಹೀಗೆ ಮುಂದಿನ ಭವಿಷ್ಯದಲ್ಲಿ ಹಿಂದಿನ ಸಮಾಜದ ಪರಿಕಲ್ಪನೆಯೇ ಸರಿಯೆಂದು ಸಮರ್ಥಿಸುವುದಕ್ಕೂ ಆ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತೀರಿ. ಇದೆಲ್ಲದಕ್ಕು ಬೆನ್ನೆಲುಬಾಗಿ ನಿಮ್ಮ ಸೈದ್ಧಾಂತಿಕ ಹಿನ್ನೆಲೆಗಳು, ಚರ್ಚೆಗಳು ಬೆಳೆದು ಬರುತ್ತಿರುವುದು ವಿಪರ್ಯಾಸ.

ಜನಪರವಾಗಿದ್ದದ್ದು ಜನಪ್ರಿಯವಾಗುತ್ತಿದ್ದಂತೆ ಸಮಷ್ಠಿ ಪ್ರಜ್ಞೆಯ ಆಶಯಗಳನ್ನು ಕೊಂದುಕೊಳ್ಳುತ್ತದೆ. Nandy_ashisನೊಂದವರ ಪರವಾಗಿದ್ದ ಮಾತು ಮೌನವಾಗಿ ಕೇಸರಿಮಯವಾಗಿರುವ ಸಂಶೋಧಕ ಮಹಾಶಯರ ಮುದಿತಲೆಗಳ ಕೀಟಲೆಗಳನ್ನು ಕರ್ನಾಟಕದಲ್ಲಂತೂ ಕಾಣುತ್ತಿದ್ದೇವೆ. ಅವರಿಗೆ ಇತಿಹಾಸವನ್ನು ತಿದ್ದುವ ಹಟದಲ್ಲಿ ಮನುಷ್ಯತ್ವದ ನೆಲೆಗಳೂ ಕಾಣದಾಗಿವೆ. ಅಂಥದೇ ರೀತಿಯಲ್ಲಿ ಇಂಥ ಹೇಳಿಕೆಗಳನ್ನು ಸೈದ್ಧಾಂತಿಕವಾಗಿ ಸಮರ್ಥಿಸಿಕೊಳ್ಳುವ ಕುರುಡು ಅಭಿಮಾನಗಳೂ ಅಲ್ಲಲ್ಲಿ ಭ್ರಷ್ಟಾಚಾರವನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಇತ್ಯಾದಿಯಾಗಿ ಹೇಳುತ್ತ ಸನಾತನ ಸಂಸ್ಕೃತಿಯನ್ನು ಪುನಃ ವೇದಕಾಲದ ನೈತಿಕ ನೆಲೆಗಟ್ಟಿನ ಮೂಲಕ ನೋಡುತ್ತಿರುವುದು ಇನ್ನೂ ದುರಂತ. ಖಾಸಗಿಯಾಗಿದ್ದ ಬದುಕುವ ಸ್ವಾತಂತ್ರ್ಯದಲ್ಲಿ ಏಕಾಕಿ ಪ್ರವೇಶಿಸಿ ನೀವು ಹೀಗೆ ಬದುಕಬೇಕು, ಇಂಥದನ್ನೆ ನೀವು ಆಯ್ದುಕೊಳ್ಳಬೇಕು, ಇದನ್ನೆ ತಿನ್ನಬೇಕು, ಹೀಗೆ ಉಡಬೇಕು-ಉಳಿಸಬೇಕು ಎಂಬಿತ್ಯಾದಿಯಾಗಿ… ತಾವಂದುಕೊಂಡಂತೆ ಸಮಾಜವನ್ನು ರೂಪಿಸುತ್ತಿರುವ ಕಾರ್ಪೋರೇಟ್ ಜಗತ್ತಿನ ಇಂದಿನ ಆರ್ಥಿಕ ನೀತಿಗಳು ಮನುಷ್ಯನ ಸಂವೇದನೆಯನ್ನು ಹತ್ತಿಕ್ಕುತ್ತಿರುವ ಈ ಹೊತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದೆಲ್ಲ ಬೊಬ್ಬಿಡುವ ಇವರು ಆಳವಾದ ಸಾಮಾಜಿಕ ಏರುಪೇರುಗಳಿಗೆ ಆಹಾರವನ್ನು ಒದಗಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಯಾವ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದಿದೆ ಅನ್ನುವುದು ಸ್ಪಷ್ಟವಾಗಿದೆ.

ಪ್ರಿಯ ಆಶೀಶ್ ನಂದಿಯವರೇ, ನೀವು ಆಡಿರುವ ಮಾತುಗಳನ್ನು ಮುಂದಿನ ಪೀಳಿಗೆಯ ನಿಮ್ಮ ಮೊಮ್ಮಗ ಸಮರ್ಥಿಸಿಳ್ಳುತ್ತಾನೆಂಬ ಅರ್ಥದಲ್ಲಿ ನಿಮ್ಮ ಹಿಂಬಾಲಕರು ಆತ್ಮವಿಮರ್ಶೆಯ ಮಾತುಗಳನ್ನಾಡುತ್ತಿದ್ದಾರೆ. ಭ್ರಷ್ಟಾಚಾರ ಇಂದು ಜಾತಿಗಳನ್ನೂ ಮೀರಿದ ವ್ಯಾಪ್ತಿಯನ್ನು ಹೊಂದಿರುವುದರ ಅರಿವು ಇದ್ದೂ ದಲಿತ ಹಿಂದುಳಿದ ವರ್ಗಗಳ ಹಣೆಗೆ ಕಟ್ಟುತ್ತಿರುವ ನೀವೂ ಸಹಿತ ಕೆಳವರ್ಗಗಳ ಮೇಲೆ ಆರೋಪ ಮಾಡುವ ಮೂಲಕ ಮೇಲ್ವರ್ಗದ ಕೆಟ್ಟಪರಂಪರೆಗಳನ್ನು ಪೋಷಿಸಿದ್ದೀರಿ. ಈಗ ನೀವು ಏನೇ ಸಮಜಾಯಿಷಿ ಕೊಟ್ಟರೂ, ಯಾವುದೇ ಪುರಾವೆಗಳನ್ನು ಒದಗಿಸಿದರೂ ನನಗೆ ಮಾತ್ರ ನೀವು ಪುನರುತ್ಥಾನವಾದಿಗಳ ಹಾಗೆ ಕಾಣಿಸುತ್ತಿದ್ದೀರಿ.


 

ಪೂರಕ ಓದಿಗೆ:

ಆಶೀಶ್ ನಂದಿಯವರ ಜೈಪುರ ಭಾಷಣ:


Ashis Nandy’s full statement on what he really meant:

This is not what I meant or what I wanted to say. This is what I actually transpired.

I endorsed the statement of Tarun Tejpal, Editor of Tehelka, that corruption in India is an equalising force. I do believe that a zero corruption society in India will be a despotic society.

I also said that if people like me or Richard Sorabjee want to be corrupt, I shall possibly send his son to Harvard giving him a fellowship and he can send my daughter to Oxford. No one will think it to be corruption. Indeed, it will look like supporting talent.

But when Dalits, tribals and the OBCs are corrupt, it looks very corrupt indeed.

However, this second corruption equalizes. It gives them access to their entitlements. And so, as long as this equation persists, I have hope for the Republic.

I hope this will be the end of the matter. I am sorry if some have misunderstood me. Though there was no reason to do so. As should be clear from this statement, there was neither any intention nor any attempt to hurt any community. If anyone is genuinely hurt, even if through misunderstanding, I am sorry about that, too.

Ashis Nandy

ರತನ್ ಟಾಟಾ ಎಂಬ ಅಪ್ಪಟ ಮನುಷ್ಯನ ಕುರಿತು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಇಪ್ಪತ್ತೈದು ವರ್ಷಗಳಿಂದ ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ಭಾರತದ ವಾಣಿಜ್ಯ ಮತ್ತು ಕೃಷಿ ಮತ್ತು ಕೈಗಾರಿಕೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವನು ನಾನು. ಕೈಗಾರಿಕೋದ್ಯಮಿಗಳ ನಡೆ, ನುಡಿಗಳು ನನ್ನ ಆಸಕ್ತಿಯ ಅಂಶಗಳಲ್ಲಿ ಒಂದು. ಭಾರತದ ಅತಿ ದೊಡ್ಡ ಉದ್ಯಮವಾದ ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷನಾಗಿ ಇಪ್ಪೊತ್ತೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ; ಮೊನ್ನೆ ಮೊನ್ನೆ ನಿವೃತ್ತರಾದ ರತನ್ ಟಾಟಾ ಬಗ್ಗೆ ಮೊದಲಿನಿಂದಲೂ ನನಗೆ ಕುತೂಹಲವಿತ್ತು. ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದು ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಿವೃತ್ತರಾದ ರತನ್ ಟಾಟಾ ಮೊನ್ನೆ ಮುಂಬೈ ನಗರದಿಂದ ತಮ್ಮ ಖಾಸಗಿ ವಿಮಾನವನ್ನು ತಾವೇ ಹಾರಿಸಿಕೊಂಡು ಹುಬ್ಬಳ್ಳಿ ನಗರಕ್ಕೆ ಬಂದಿದ್ದರು. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಭಿಕರೊಂದಿಗೆ ಮುಕ್ತವಾಗಿ ತಮ್ಮ ಬದುಕಿನ ಕೆಲವು ವಿಚಾರ ಮತ್ತು ವಿಷಾದಗಳನ್ನು ಹಂಚಿಕೊಂಡರು. ಅವರ ಮಾತುಗಳನ್ನು ಕೇಳಿದಾಗ ಈ ದೇಶದಲ್ಲಿ ನಂಬಿಕೆಗೆ ಅರ್ಹರಾದ ವ್ಯಕ್ತಿಗಳಲ್ಲಿ ರತನ್‌ಟಾಟಾ ಕೂಡ ಒಬ್ಬರು ಎಂದು ನನಗೆ ಕೂಡಲೇ ಅನಿಸಿತು.

ಬಂಡವಾಳಶಾಹಿ ಜಗತ್ತು ಮತ್ತು ಅದರ ವಾರಸುದಾರರ ಮಾತುಗಳನ್ನು ಅಷ್ಟು ಸುಲಭವಾಗಿ ಒಪ್ಪಬಾರದೆಂಬುದು ನನ್ನ ನಿಲುವು. ಆದರೆ ರತನ್ ಟಾಟಾ ಅವರ ಮಾತುಗಳಲ್ಲಿ ಕಪಟತನವಿರಲಿಲ್ಲ. ಅವರು ಆಡಿದ ಪ್ರತಿಮಾತುಗಳು ಹೃದಯದಿಂದ ಬಂದ ನುರಿತ ಅನುಭವಿ ದಾರ್ಶನಿಕನೊಬ್ಬನ ಮಾತುಗಳಂತಿದ್ದವು.

ಹುಬ್ಬಳ್ಳಿ ನಗರದಲ್ಲಿ ದೇಶಪಾಂಡೆ ಪೌಂಡೆಶನ್ ಆಯೋಜಿಸಿದ್ದ “ಅಭಿವೃದ್ಧಿಯ ಸಂವಾದಗಳು” ಕಾರ್ಯಕ್ರಮದಲ್ಲಿ ರತನ್ ಟಾಟಾ ಪಾಲ್ಗೊಂಡಿದ್ದರು. RatanTataತಮ್ಮ ಬಾಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಅತ್ಯಂತ ನೋವು ಮತ್ತು ವಿಷಾದದಿಂದ ಉತ್ತರಿಸಿದ ಟಾಟಾ, ನನಗೆ ಬಾಲ್ಯವೆಂಬುದೇ ಇರಲಿಲ್ಲ, ಎಲ್ಲಾ ಮಕ್ಕಳಂತೆ ಬಾಲ್ಯದ ಸುಖ ಅನುಭವಿಸುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಹೇಳಿದರು. ಚಿಕ್ಕ ವಯಸ್ಸಿನಲ್ಲೇ ದೂರದ ಅಮೇರಿಕಾಕ್ಕೆ ಹೋಗಿ ಶಿಕ್ಷಣ ಕಲಿತಿದ್ದು, ಅಲ್ಲಿ ವಿಧ್ಯಾಭ್ಯಾಸ ಮುಗಿಸಿ ಇಪ್ಪತ್ತೊಂದನೇ ವಯಸ್ಸಿಗೆ ಭಾರತಕ್ಕೆ ಬಂದು ಟಾಟಾ ಕಂಪನಿಯಲ್ಲಿ ತೊಡಗಿಸಿಕೊಂಡು ತಮ್ಮ ಬಾಲ್ಯ, ಯೌವನ ಕಳೆದು ಹೋದದ್ದನ್ನು ಹೇಳಿ, ಬಾಲ್ಯ ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಿಮಗಿದ್ದ ಬಾಲ್ಯ ಎಂದೂ ನನಗೆ ದಕ್ಕಲಿಲ್ಲ ಎಂದರು.

ನಿವೃತ್ತಿ ನಂತರದ ದಿನಗಳನ್ನು ಅತ್ಯಂತ ಖುಷಿಯಿಂದ ಹೇಳಿಕೊಂಡ ರತನ್, ನಿವೃತ್ತಿಯಾದ ಮೇಲೆ ನನಗಿಂತ ನನ್ನ ಮುದ್ದಿನ ಎರಡು ನಾಯಿಗಳು ಹೆಚ್ಚು ಖುಷಿಯಾಗಿವೆ ಎಂದು ಹೇಳುತ್ತಾ ನಕ್ಕರು. ಮುಂಬೈ ನಗರದ ತನ್ನ ಬಂಗಲೆಯಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾ, ಸಮಾಜ ಸೇವೆಯಲ್ಲಿ ತೊಡಗಿರುವ ಬಗ್ಗೆ ತಿಳಿಸಿದರು.

ಒಬ್ಬ ದಕ್ಷ ಆಡಳಿತಗಾರನಾಗಿ, ಟಾಟಾ ಕಂಪನಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ ರತನ್ ಟಾಟಾಗೆ ಭಾರತದ ಹಳ್ಳಿಗಳ ಕುರಿತು ಇರುವ ಕಾಳಜಿ ಮತ್ತು ಈವರೆಗೆ ಸದುಪಯೋಗವಾಗದೆ ಉಳಿದಿರುವ ಗ್ರಾಮೀಣ ಜಗತ್ತಿನ ಮಾನವ ಸಂಪನ್ಮೂಲಗಳ ಕುರಿತಂತೆ ತುಂಬಾ ಒಳ್ಳೆಯ ಒಳನೋಟಗಳಿವೆ.

ಸಧೃಡ ಭಾರತ ನಿರ್ಮಾಣವಾಗಬೇಕಾದರೆ ನಾವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಇಂಜಿನಿಯರ್‌ಗಳು ಮತ್ತು ತಂತ್ರಜ್ಙರನ್ನು ರೂಪಿಸಬೇಕು, ಇದಕ್ಕಾಗಿ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಹಳ್ಳಿಗಳ ಯುವಕರಿಗೆ ಉನ್ನತ ಶಿಕ್ಷಣ ನೀಡುವಾಗ ಮಾನವೀಯ ಮುಖಗಳನ್ನು ಹೊಂದಿರಬೇಕು ಎಂದು ರತನ್ ಟಾಟಾ ಪ್ರತಿಪಾದಿಸುತ್ತಿದ್ದಾಗ, ನನಗೆ ಅವರ ಅಜ್ಜ ನೆನಪಾದರು. ರತನ್ ಕೂಡ ಟಾಟಾ ಕುಟುಂಬದ ಕುಡಿಯಲ್ಲವೆ? ಎಂದು ಮನಸ್ಸಿಗೆ ಅನಿಸತೊಡಗಿತು. ಇಂತಹದ್ದೇ ದೃಷ್ಟಿಕೋನ ಇವರ ತಾತ ಜೇಮ್ಸ್ ಶೇಟ್‌ಜಿ ಟಾಟಾರಿಗೆ ಇದ್ದ ಕಾರಣ ಜಗತ್ತಿನ ಅತಿಶ್ರೇಷ್ಠ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ತಲೆ ಎತ್ತಲು ಸಾಧ್ಯವಾಯಿತು. 1907 ರಲ್ಲಿ ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಉಚಿತವಾಗಿ ಸ್ಥಳ ನೀಡಿದ ಫಲವಾಗಿ ನಾನೂರು ಎಕರೆ ಪ್ರದೇಶದಲ್ಲಿ 1909 ರ ಮೇ 27 ರಂದು ಟಾಟಾ ಇನ್ಸಿಟ್ಯೂಟ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ತಲೆ ಎತ್ತಿತು. IIScಭಾರತದ ನೆಲದಲ್ಲಿ ದೇಶೀಯ ಪ್ರತಿಭೆಗಳನ್ನು ತಯಾರು ಮಾಡಬೇಕೆಂಬ ಟಾಟಾ ಅವರ ಕನಸು ಈಗ ನೆನಸಾಗಿದೆ. ಹಲವು ಶಾಖೆಗಳಾಗಿ ಬೆಳೆದಿರುವ ಈ ಸಂಸ್ಥೆಯ ಆವರಣದಲ್ಲಿ ಗಿಡ ಮರಗಳ ಹಸಿರಿನ ನಡುವೆ ಓಡಾಡುವುದು ಮನಸ್ಸಿಗೆ ಮುದ ನೀಡುತ್ತದೆ.

ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಸೇವೆ ಕುರಿತಂತೆ ಖಚಿತ ನಿಲುವು ಹೊಂದಿರುವ ರತನ್ ಟಾಟಾ, ಸಿರಿವಂತರು, ಅಥವಾ ಉದ್ಯಮ ಸಂಸ್ಥೆಗಳು ಕೇವಲ ಹಣವನ್ನು ಧಾನ ಮಾಡಿದರೆ ಸಮಾಜ ಸೇವೆಯಾಗುವುದಿಲ್ಲ, ನೀಡಿದ ಹಣ ಸದ್ಭಳಕೆಯಾಗುವ ಹಾಗೆ ನಿಗಾ ವಹಿಸಬೇಕು ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾಗಿರುವುದು ಸಮಾಜ ಸೇವೆಯ ಕರ್ತವ್ಯಗಳಲ್ಲಿ ಒಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ತಮ್ಮ ಕನಸಿನ ಕೂಸಾದ ನ್ಯಾನೊ ಕಾರು ಮಾರುಕಟ್ಟೆಯಲ್ಲಿ ವಿಫಲವಾದುದಕ್ಕೆ ಮತ್ತು ಮಧ್ಯಮ ವರ್ಗದ ಮನ ಗೆಲ್ಲಲಾಗದ ನೋವಿನ ಕಥನವನ್ನು ವಿವರಿಸಿದರು. ನ್ಯಾನೊ ಕಾರು ರತನ್ ಟಾಟಾ ಅವರ ಕನಸು. ಮಳೆಗಾಲದ ಒಂದು ರಾತ್ರಿ ಕಂಪನಿಯ ಕೆಲಸ ಮುಗಿಸಿ ತಮ್ಮ ಐಷಾರಾಮಿ ಕಾರಿನಲ್ಲಿ ರತನ್ ಟಾಟಾ ಮನೆಗೆ ವಾಪಾಸ್ಸಾಗುತ್ತಿದ್ದರು. ಆದಿನ ಮುಂಬೈ ನಗರದಲ್ಲಿ ಜೋರು ಮಳೆ. ಮಧ್ಯಮ ವರ್ಗದ ದಂಪತಿಗಳಿಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾದ ತಮ್ಮ ಮಗುವನ್ನು ಸುರಿಯುತ್ತಿರುವ ಮಳೆಯಲ್ಲೇ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವುದನ್ನು ನೋಡಿದರು. ಆ ಕ್ಷಣವೆ ಮಧ್ಯಮ ವರ್ಗಕ್ಕೆ ಕೈಗೆಟುಕುವ ಬೆಲೆಯಲ್ಲಿ ಕಾರು ತಯಾರಿಸಬೇಕೆಂಬ ಕನಸು ಅವರೆದೆಯಲ್ಲಿ ಚಿಗುರೊಡೆಯಿತು. ಕನಸನ್ನು ನೆನಸಾಗಿಸಲು ಅವರು ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಿದರು. ಇವುಗಳಲ್ಲಿ ಕಾರು ತಯಾರಿಕಾ ಘಟಕಕ್ಕೆ ಸಂಬಂಧಿಸದಂತೆ ಸರ್ಕಾರ ಭೂಮಿ ನೀಡಿದ ವಿಚಾರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟ ಒಂದು ದೊಡ್ಡ ಅಧ್ಯಾಯ.

ಎಲ್ಲಾ ಅಡೆ ತಡೆಗಳನ್ನು ದಾಟಿ ಗುಜರಾತಿನ ಘಟಕದ ಮೂಲಕ ಅಂತಿಮವಾಗಿ ಕಾರು ಮಾರುಕಟ್ಟೆಗೆ ಬಂದಾಗ ಟಾಟಾ ಅವರ Tata-with-Nanoನಿರೀಕ್ಷೆ ಸುಳ್ಳಾಯಿತು. ಬಟ್ಟೆ ಬದಲಿಸುವಂತೆ ಕಾರು, ಟಿವಿ, ರೆಪ್ರಿಜೇಟರ್, ಮೊಬೈಲ್ ಹೀಗೆ ಎಲ್ಲವನ್ನು ಬದಲಿಸುವ ಹುಚ್ಚಿಗೆ ಬಲಿ ಬಿದ್ದಿರುವ ಮಧ್ಯಮ ವರ್ಗದ ಜನಕ್ಕೆ ನ್ಯಾನೊ ಇಷ್ಟವಾಗಲಿಲ್ಲ. ಇದರಿಂದ ವಿಚಲಿತಗೊಂಡ ರತನ್‌ ಟಾಟಾ ಈ ಕುರಿತು ಸಮೀಕ್ಷೆ ನಡೆಸಿದಾಗ, “ನ್ಯಾನೊ ಕಾರು ಕೊಂಡರೆ ಸಮಾಜದಲ್ಲಿ ನಮ್ಮನ್ನು ಕೀಳಾಗಿ ನೋಡುತ್ತಾರೆ. ಈ ಕಾರಣಕ್ಕಾಗಿ ಸಾಲಮಾಡಿ ಒಳ್ಳೆಯ ಕಾರು ಖರೀದಿಸಲು ಇಷ್ಟ ಪಡುತ್ತೇವೆ,” ಎಂಬ ಮಧ್ಯಮ ವರ್ಗದ ಜನರ ಭ್ರಮೆ ನೋಡಿ ಅವರಿಗೆ ತೀವ್ರ ವಿಷಾದವಾಯಿತು.

ಇಂತಹ ಒಂದು ಸೋಲನ್ನು ಯಾವುದೇ ಮುಚ್ಚು ಮರೆಯಿಲ್ಲದೆ ರತನ್ ಟಾಟಾ ಹೇಳಿಕೊಂಡಾಗ ನನಗೆ ಅವರ ಬಗ್ಗೆ ಇದ್ದ ಗೌರವ ಇಮ್ಮಡಿಸಿತು. ಜೊತೆ ಜೊತೆಗೆ ಸದಾ “ನಾನೇ ಸೃಷ್ಟಿ ಬ್ರಹ್ಮ” ಎಂಬಂತೆ ಮಾತನಾಡುವ ನಮ್ಮ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ನೆನಪಾದರು.