Monthly Archives: March 2012

ಖಾನ್ ಅಕ್ಯಾಡೆಮಿಯಲ್ಲಿ ಕಲಿಯುತ್ತಿರುವ ಕಿರಿಹಿರಿಯರು

– ರವಿ ಕೃಷ್ಣಾರೆಡ್ಡಿ

ಈ ಸಲ್ಮಾನ್ ಖಾನ್ (ಸ್ಯಾಲ್ ಖಾನ್) ಅಮೆರಿಕದಲ್ಲಿ ಬಂಗಾಳಿ ದಂಪತಿಗಳಿಗೆ ಹುಟ್ಟಿದವನು. ತಾಯಿ ಕೊಲ್ಕತ್ತದವಳು, ಅಪ್ಪ ಬಾಂಗ್ಲಾ ದೇಶಿ. ಇಂದು ಅಮೆರಿಕ ಮತ್ತು ಭಾರತವೂ ಸೇರಿದಂತೆ ಲಕ್ಷಾಂತರ ಶಾಲಾ ಮಕ್ಕಳಿಗೆ, ಅಧ್ಯಾಪಕರಿಗೆ, ಮತ್ತು ನನ್ನಂತಹ ವಯಸ್ಕರಿಗೂ ಈತ ಕಲಿಸುವ ಮೇಷ್ಟ್ರು. ಈತನ ಶಾಲೆಯ ಹೆಸರು “ಖಾನ್ ಆಕ್ಯಾಡೆಮಿ”.

ಹೆಚ್ಚಿಗೆ ಬರೆಯಲು ಹೋಗುವುದಿಲ್ಲ. ಖಾನ್‌ನ ಹಿನ್ನೆಲೆ, ಅಕ್ಯಾಡೆಮಿಯ ಆರಂಭ, ಆತ ಮಾಡುತ್ತಿದ್ದ ಮತ್ತು ಮಾಡುತ್ತಿರುವ ಕೆಲಸ, ಆತನ ಬೆನ್ನಿಗೆ ನಿಂತವರು, ಪ್ರತಿದಿನವೂ ಆತನಿಂದ ಪ್ರಾಥಮಿಕ ಹಂತದ ಶಿಕ್ಷಣದಿಂದ ಕ್ಲಿಷ್ಟ ಮತ್ತು ಗಹನ ವಿಷಯಗಳ ಬಗ್ಗೆ ಕುರಿತು ಪಾಠ ಕಲಿಯುತ್ತಿರುವ ಪ್ರಪಂಚದಾದ್ಯಂತದ ಲಕ್ಷಾಂತರ, ಕೋಟ್ಯಾಂತರ ಜನರ ಬಗ್ಗೆ ಈ ಕೆಳಗಿನ CBS – 60 Minutes ವಿಡಿಯೋ ಹೇಳುತ್ತದೆ:

ಇದು ಖಾನ್ ಅಕ್ಯಾಡೆಮಿಯ ವಿಕಿಪೀಡಿಯ ಕೊಂಡಿ: http://en.wikipedia.org/wiki/Khan_Academy

www.khanacademy.org ಖಾನ್ ಅಕ್ಯಾಡೆಮಿಯ ವೆಬ್‌ಸೈಟ್.

ಮಾಧ್ಯಮ ಮಿತ್ರರು ಇದನ್ನು ತಮ್ಮ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಳಲ್ಲಿ ಇದರ ಬಗ್ಗೆ ಬರೆಯುವುದು ಈಗ ಸಕಾಲ. ಮಕ್ಕಳಿಗೆ ಇನ್ನೇನು ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗಲಿದೆ. ಅವಕಾಶ ಮತ್ತು ಸೌಲಭ್ಯ ಇರುವ ಮಕ್ಕಳು ಕಂಪ್ಯೂಟರ್ ಮುಂದೆ ಕುಳಿತು ರಜೆಯಲ್ಲಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಈ ವೆಬ್‌ಸೈಟ್‌ನಲ್ಲಿ ಸುಮಾರು 3000ಕ್ಕಿಂತ ಹೆಚ್ಚಿನ ವಿಡಿಯೋಗಳಿವೆ. ಆದರಲ್ಲಿ ಸುಮಾರು ಮುಕ್ಕಾಲು ಪಾಲಿಗಿಂತ ಹೆಚ್ಚಿನವು ನಮ್ಮ ಮಕ್ಕಳಿಗೂ ಸೂಕ್ತವಾದವುಗಳೆ.

ಅಂದ ಹಾಗೆ, ಖಾನ್ ಅಕ್ಯಾಡೆಮಿ ಇದನ್ನು ಇಂಗ್ಲಿಷ್ ಮಾತ್ರವಲ್ಲದೆ ಬೇರೆ ಭಾಷೆಗಳಿಗೂ ಭಾಷಾಂತರಿಸುವ ಕೆಲಸ ಮಾಡುತ್ತಿದೆ. ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳು ಇದರತ್ತ ಒಮ್ಮೆ ಗಮನಹರಿಸುವುದು ಸೂಕ್ತ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ತಮಾನದಲ್ಲಿ ಇದಕ್ಕಿಂತ ಒಳ್ಳೆಯ ಯೋಜನೆ ಸಿಗುವುದು ಅಪರೂಪ. ಆದರೆ ಮೂರ್ಖರಿಗೆ ಹೇಳುವವರು ಯಾರು? ಆಧುನಿಕ ಪ್ರಪಂಚದ ಅಆಇಈಗಳೇ ಗೊತ್ತಿಲ್ಲದವರಿಂದ ಏನನ್ನು ನಿರೀಕ್ಷಿಸುವುದೂ ಸಾಧುವಲ್ಲ.

ಇದು ಖಾನ್ ಸೂರ್ಯ ಮತ್ತು ಭೂಮಿಯ ಗಾತ್ರ ಮತ್ತು ದೂರದ ಕುರಿತು ಮಾಡುತ್ತಿರುವ ಪಾಠ:

ಇದು ಗುಣಾಕಾರದ ಪ್ರಾಥಮಿಕ ಪಾಠ:

ಈ ಪಾಠದಲ್ಲಿ ಸಲ್ಮಾನ್ ಖಾನ್ ಬಂಡವಾಳವಾದ ಮತ್ತು ಸಮಾಜವಾದದ ಬಗ್ಗೆ ಮಾತನಾಡುತ್ತಾನೆ:

ಇದು ಹೃದಯ ಸಂಬಂಧಿ ಕಾಯಿಲೆ ಮತ್ತು ಹೃದಯಾಘಾತಕ್ಕೆ ಸಂಬಂಧಿಸಿದ ಪಾಠ:

ಇದು ಖಾನ್ ಕಳೆದ ವರ್ಷ ಟೆಡ್‌ನಲ್ಲಿ ಮಾತನಾಡಿದ್ದ ವಿಡಿಯೋ:

ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

-ಡಾ.ಎಸ್.ಬಿ.ಜೋಗುರ

ಕಳೆದ ವರ್ಷವಿಡೀ  ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟ ಜನಲೋಕಪಾಲ್ ಮಸೂದೆ ಸಿಡಿಯದಿರುವ ಪಟಾಕಿಯಂತೆ ಟುಸ್… ಎಂದದ್ದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಕೊಂಚ ನಿರಾಶೆಯನ್ನುಂಟು ಮಾಡಿರುವುದು ಸ್ವಾಭಾವಿಕವೇ ಆದರೂ ರಾಜಕೀಯ ಶಕ್ತಿಗಳು ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳಲು ತಯಾರಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಅವೇನಿದ್ದರೂ ಬಾಯಿ ಮಾತಿನ ಮೂಲಕವೇ ರಾಜಕೀಯ ವಿಪ್ಲವಗಳನ್ನು ಹುಟ್ಟುಹಾಕಬಲ್ಲವೇ ಹೊರತು ಕಾರ್ಯಾತ್ಮಕವಾಗಿ ಅಲ್ಲ. ಹಾಗಾಗಿಯೇ ರಾಜ್ಯಸಭೆಯಲ್ಲಿ ಅದಕ್ಕೆ ಗ್ರೀನ್ ಸಿಗ್ನಲ್ ಸಿಗದಿರುವುದು ನಿರೀಕ್ಷಿತವೇ ಎನ್ನುವಂತಿದೆ. ಆಳುವ ಮತ್ತು ವಿರೋಧ ಪಕ್ಷಗಳೆರಡೂ ಚುನಾವಣೆಯ ಸಂದರ್ಭದಲ್ಲಿ ಕೋಮಾ ಸ್ಥಿತಿಯಲ್ಲಿರುವ ಈ ಲೋಕಪಾಲ್ ಮಸೂದೆಯ ಬಗ್ಗೆ ತಮಗೆ ತಿಳಿದಂತೆ ಮತದಾರನ ಎದುರು ವಿವರಿಸಿ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ಈ ಲೋಕಪಾಲ ಬಿಲ್ ರಾಜ್ಯಸಭೆಯವರೆಗೂ ಬಂದು ಅಟಕಾಯಿಸಿಕೊಂಡಿರುವುದು ಇದೇ ಮೊದಲಂತೂ ಅಲ್ಲ. ಈ ಮುಂಚೆ ಸುಮಾರು ಹನ್ನೊಂದು ಬಾರಿ ಈ ಮಸೂದೆಯು ಸದ್ಯದ ಹಂತದವರೆಗೆ ಬಂದು ತಲುಪಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಿದೆ. 1968 ರಿಂದಲೂ ಈ ಬಗೆಯ ಮರಳಿ ಯತ್ನವ ಮಾಡುವ ಕೆಲಸ ನಿರಂತರವಾಗಿ ನಡದೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದೆನ್ನುವಾಗಲೇ ಅದು ಕೋಮಾ ಹಂತವನ್ನು ತಲುಪುವ ಸ್ಥಿತಿ ಮಾಮೂಲಾಗಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿಯಾದ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತ್ತಾದರೂ ಅವರ ಅಂತಿಮ ಉದ್ದೇಶ ಮಾತ್ರ ಸಾಕಾರಗೊಳ್ಳದಿರುವುದು ವಿಷಾದನೀಯವೇ ಹೌದು. ಜಾರಿಗೊಳಿಸುವುದಿದ್ದರೆ ಬಲಿಷ್ಟ ಜನಲೋಕಪಾಲ ಜಾರಿಗೊಳಿಸಿ, ಇಲ್ಲದಿದ್ದರೆ ಬೇಡ ಎಂದು ಪಟ್ಟು ಹಿಡಿದ ಅಣ್ಣಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿಯೂ ಹೋರಾಟ, ಸತ್ಯಾಗ್ರಹವನ್ನು ಆರಂಭಿಸಿರುವುದಿತ್ತು. ಅಣ್ಣಾನ ಹೋರಾಟಕ್ಕೆ ಸಿಕ್ಕ ಬೆಂಬಲ ಆಳುವ ಪಕ್ಷದ ಸಾಮರ್ಥ್ಯವನ್ನೇ ಕೆಣಕಿದಂತಿತ್ತು. ಹೀಗಾಗಿ ಅಣ್ಣಾನನ್ನು ಬಂಧಿಸಿ ಬಿಡುಗಡೆ ಮಾಡಿಯೂ ಆಯಿತು. ನಂತರ ಬಿಡುಗಡೆ ಮಾಡಿ ಅವರ ಸತ್ಯಾಗ್ರಹಕ್ಕೆ ರಾಮಲೀಲಾದಂತಹ ಚಾರಿತ್ರಿಕವಾದ ಸ್ಥಳವನ್ನೇ ನೀಡಿತು.

ಅಣ್ಣಾ ಒಡ್ಡುವ ಶರತ್ತುಗಳನ್ನು ಒಪ್ಪಿಕೊಂಡು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರ ರಾಜ್ಯಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುವುದರಲ್ಲಿ ಅದರದೇಯಾದ ಕೆಲ ರಾಜಕೀಯ ಕಾರಣಗಳು ಇರಬಹುದಾದರೂ ಆ ಮೂಲಕ ಪರೋಕ್ಷವಾಗಿ  ಅಣ್ಣಾ ಹೋರಾಟದ ಸತ್ವ ಕಡಿಮೆ ಮಾಡುವಲ್ಲಿಯೂ ಅವರ ರಾಜಕೀಯ ಧೋರಣೆ ಕಾರಣವಾಯಿತು. ಅದೇ ವೇಳೆಗೆ ಈ ಜನಲೋಕಪಾಲ ಮಸೂದೆಯನ್ನು ಯಾರು ವಿರೋಧಿಸಿದರು ಎನ್ನುವುದಕ್ಕಿಂತಲೂ ರಾಜಕೀಯ ಹಿತಾಸಕ್ತಿಗಳ ಗಮನವೇ ಇಲ್ಲಿ ಮುಖ್ಯವಾಗಿ ಬಲಿಷ್ಟ ಲೋಕಪಾಲ ಮಸೂದೆ ಸೊರಗುವಂತಾಯಿತು. ಅದೇ ವೇಳೆಗೆ ಅಣ್ಣಾ ಬಳಗದಲ್ಲಿಯ ಕೆಲವರ ಮಾತುಗಳಲ್ಲಿ ಗೊಂದಲಗಳು, ರಾಜಕೀಯ ಪಕ್ಷವೊಂದರ ಪರವಾದ ಮಾತುಗಳಂತೆ ಕೇಳಬರತೊಡಗಿದವು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಅಣ್ಣಾ ಟೀಮಿಗೆ ಇದ್ದ ನಾಯಕತ್ವದ ರಭಸ ವರ್ಷದ ಅಂತ್ಯದಲ್ಲಿ ತನ್ನ ಗಡುಸುತನವನ್ನು ಕಳೆದುಕೊಳ್ಳತೊಡಗಿತು.

ಜನತೆಗೆ ಅದರಲ್ಲೂ ದುಡಿದು ಬದುಕುವ ಸಾಮಾನ್ಯರಿಗೆ ಈ ಲೋಕಪಾಲ ಮಸೂದೆಯ ಜಾರಿಗೊಳ್ಳುವಿಕೆ, ಜಾರಿಯಾಗದಿರುವಿಕೆ ಎರಡೂ ಅಷ್ಟಾಗಿ ಬಾಧಿಸುವುದಿಲ್ಲ. ಹಾಗೆಯೇ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ನಿರಂತರವಾಗಿ ನೆನಪಿಟ್ಟು ಆ ದಿಶೆಯಲ್ಲಿ ನಡೆಯಬೇಕಾದ ನಿರಂತರ ಹೋರಾಟವನ್ನು ರೂಪಿಸುವಷ್ಟು ಇವರ ಬದುಕು ಸುಭದ್ರವಾಗಿಲ್ಲ. ಈಗ ಅದೇ ಅಣ್ಣಾ ಮತ್ತೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರೆ ಸಾಮಾನ್ಯ ಮಧ್ಯಮವರ್ಗದ ಜನ ಮೊದಲಿನ ಹುರುಪಿನಲ್ಲಿಯೇ ಅಣ್ಣಾ ಕೂಗಿಗೆ ಸ್ಪಂದಿಸುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ ಸಾಮಾನ್ಯನ ಬದುಕೇ ಹಾಗಿದೆ. ಆತ ಯಾವುದನ್ನೂ ತುಂಬಾ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲಾರ. ಜೊತೆಗೆ ಅತ್ಯಂತ ಬೇಗ ಆತ ಒಂದು ವ್ಯವಸ್ಥೆಯ ಬಗ್ಗೆ ಸಿನಿಕತನವನ್ನು ಹೊಂದುವುದೂ ಇದೆ.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ತಮ್ಮ ಕರಾಳ ವ್ಯವಹಾರಗಳಿಗೆ ಕುತ್ತು ಬರುವಂತಹ ಯಾವ ನಿಯಮಗಳನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿರುವುದು ತೀರಾ ಅಪರೂಪ. ಅಂತಹದರಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡು ಎಲ್ಲರೂ ಲೋಕಪಾಲ ಮಸೂದೆಗೆ ಒಳಪಡಬೇಕು ಎನ್ನುವ ಅಣ್ಣಾನ ಒತ್ತಾಸೆ ಈಡೇರುವದಾದರೂ ಹೇಗೆ..?

ಅಣ್ಣಾ ಜನಲೋಕಪಾಲ ಮಸೂದೆಯ ವಿಷಯದಲ್ಲಿ ತನ್ನ ಮಿತಿಗಳನ್ನೂ ಮೀರಿ ಹೋರಾಟ ಮಾಡಿದ. ಹಾಗೆಯೇ ಹಿಂದೆಂದೂ ಯಾರಿಗೂ ಸಿಗದ ಅಪಾರ ಪ್ರಮಾಣದ ಜನಬೆಂಬಲವೂ ಅವನಿಗೆ ದೊರೆಯಿತು. ಅಂತಿಮವಾಗಿ ಆಗಬೇಕಾದ ಮಹತ್ತರವಾದ ಕೆಲಸವೊಂದು ಹಾಗೇ ಉಳಿದುಹೋಯಿತು. ಪರೋಕ್ಷವಾಗಿ ಈ ಬಗೆಯ ಬಲಿಷ್ಟ ಲೋಕಪಾಲ ಮಸೂದೆ ಬಹುತೇಕ ರಾಜಕಾರಣಿಗಳಿಗೆ ಬೇಕಾಗದಿರುವಂತೆ, ಭ್ರಷ್ಟ ಅಧಿಕಾರಿ ಸಮೂಹಕ್ಕೂ ಬೇಕಾಗಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ಜನಸಾಮಾನ್ಯ ಮಾತ್ರ ತನ್ನ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಎಂದಿನಂತೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದಾನೆ. ಮತ್ತೆ ಅಣ್ಣಾ ಒಂದೊಮ್ಮೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆ ನೀಡಿದರೆ ಭ್ರಷ್ಟಾಚಾರ ವಿಷಯದಲ್ಲಿ ಅಪಾರ ಪ್ರಮಾಣದಲ್ಲಿ ಮಾತಾಡಿ, ಆ ಬಗ್ಗೆ  ಕೇಳಿ ಯಥಾಸ್ಥಿತಿಯನ್ನೇ ಅನುಭವಿಸುವಂತಾದ ಜನ ಅದೇ ಮೊದಲಿನ ಪ್ರಮಾಣದಲ್ಲಿ ಅಣ್ಣಾಗೆ ಸಾಥ್ ನೀಡುತ್ತಾರೆಂದು ನನಗನಿಸದು.

ರಾಮಕೃಷ್ಣ ಹೆಗ್ಡೆಯ ನುಡಿಗಳು ಮತ್ತು ಯಡಿಯೂರಪ್ಪನ ನಡೆಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಇದು 2003ರ ಡಿಸೆಂಬರ್ ತಿಂಗಳ ಒಂದು ಘಟನೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುಧಾ ಮೂರ್ತಿಯವರ ಪ್ರವಾಸಕಥನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿ ಕುರಿತ ಎರಡು ಕೃತಿಗಳನ್ನು ಪ್ರಕಟಿಸಿ, ಬಿಡುಗಡೆಗಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರನ್ನು ಆಹ್ವಾನಿಸಿತ್ತು. ಅಂದಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾವಳಿ ಈಗಿನ ಹಾಗೆ ಇರಲಿಲ್ಲ. ನಾಲ್ಕು ದಿನಪತ್ರಿಕೆ ಹಾಗೂ ಎರಡು ಚಾನಲ್‌ಗಳು ಮಾತ್ರ ಇದ್ದವು.

ಸಂಜೆ 6 ಗಂಟೆಗೆ ಪತ್ರಿಕೆಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾವು ಆರು ಮಂದಿ ಪತ್ರಕರ್ತರು ಸುಮಾರು 5:30ರ ವೇಳೆಗೆ ಕಾರ್ಯಕ್ರಮಕ್ಕೆ ಹಾಜರಾದಾಗ ಪತ್ರಿಕೆಯ ಟ್ರಸ್ಟ್ ಅಧ್ಯಕ್ಷರ ಕಚೇರಿಯಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು. ಆ ವೇಳೆಗಾಗಲೇ ಆಗಮಿಸಿದ್ದ ರಾಮಕೃಷ್ಣ ಹೆಗ್ಡೆ ನಮ್ಮೊಂದಿಗೆ ತಿಂಡಿ ತಿನ್ನುತ್ತಾ ಇದ್ದಕ್ಕಿದ್ದಂತೆ ತಮ್ಮ ಒಂದು ಬಾಲ್ಯದ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟರು. ಅವರ ಮಾತಿನ ಲಹರಿ ಹೀಗಿತ್ತು:

ನನಗಾಗ ಕೇವಲ ಆರು ಅಥವಾ ಏಳು ವರ್ಷವಿರಬಹುದು. ಸಿದ್ದಾಪುರದ ಗದ್ದೆಯ ನಡುವೆ ಇದ್ದ ನಮ್ಮ ಮನೆ ಆ ಕಾಲಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ರೀತಿಯಲ್ಲಿ ತಂಗುದಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಗಡಿಭಾಗದಲ್ಲಿದ್ದ ನಮ್ಮ ಮನೆ ಸ್ವಾತಂತ್ರ್ಯ ಹೋರಾಟಗಾರರು ಪೋಲಿಸರಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು.

ಶಿವಮೊಗ್ಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೇಲಿ ನೆಗೆದು ನಮ್ಮ ಮನೆಗೆ ಬಂದರೆ ಹಿಡಿಯುವಂತಿರಲಿಲ್ಲ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆ ಪೋಲಿಸರು ಬಂದರೆ ಸಲೀಸಾಗಿ ಬೇಲಿ ನೆಗೆದು ಶಿವಮೊಗ್ಗ ಗಡಿಪ್ರದೇಶಕ್ಕೆ ತೆರಳಬಹುದಾಗಿತ್ತು. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಮಹಾಬಲೇಶ್ವರ ಹೆಗಡೆ ಯಾರೇ ನಮ್ಮ ಮನೆಗೆ ಬಂದರೂ ಜಾತಿ ಧರ್ಮ ಬೇಧವಿಲ್ಲದೆ ಆತಿಥ್ಯ ನೀಡುತಿದ್ದರು. ನನ್ನ ತಾಯಿ ಸರಸ್ವತಿ ಹೆಗಡೆ ಕೂಡ ಅಕ್ಷರಶಃ ಅನ್ನಪೂರ್ಣೆಯಂತೆ ನಡೆದುಕೊಳ್ಳುತಿದ್ದರು.

ನಮ್ಮ ಮನೆ ಬ್ರಿಟೀಷರಿಗೆ ತಲೆನೋವಾದ ಕಾರಣ ಸರ್ಕಾರ ಗದ್ದೆಯ ಬಯಲಿನಲ್ಲಿ ಇದ್ದ ನಮ್ಮ ಮನೆಯನ್ನು ಧ್ವಂಸ ಮಾಡುವಂತೆ ಪೋಲಿಸರಿಗೆ ಆದೇಶ ಜಾರಿ ಮಾಡಿತು. ಒಂದು ಬೆಳಗಿನ ಜಾವ ಮನೆಗೆ ಬಂದ ಪೋಲಿಸರು ನಮ್ಮ ಹೆಂಚಿನ ಮನೆ, ಅದರೊಳಗೆ ಅತಿಥಿಗಳಿಗಾಗಿ ನಿರ್ಮಿಸಿದ್ದ ಅಟ್ಟ, ಪಾತ್ರೆ, ದಿನಸಿ ಸಾಮಾನುಗಳನ್ನು ನಾಶ ಮಾಡಿ ಹೊರಟು ಹೋಯಿತು.

ನನ್ನ ಅಪ್ಪ, ಅಮ್ಮ, ನಾನು, ನನ್ನ ಸಹೋದರ ಎಲ್ಲರೂ ಬಯಲಿಗೆ ಬಿದ್ದೆವು. ದೃತಿಗೆಡೆದ ನನ್ನಪ್ಪ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ನಾವು ಸಂತೆಯಿಂದ ಬರುವ ವೇಳೆಗೆ ನಮ್ಮೂರಿನ ಸುತ್ತ ಮುತ್ತಲಿನ ಜನ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ಸಾಂಬಾರ್ ಪುಡಿ ಹೀಗೆ ಹಲವು ವಸ್ತುಗಳನ್ನು ಅಮ್ಮನ ಬಳಿ ಕೊಟ್ಟು ಹೋಗಿದ್ದರು. ಆ ದಿನ ನನ್ನಮ್ಮ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಅಡುಗೆ ಮಾಡಿ ನಮಗೆ ಬಡಿಸಿದಳು. ಆದಿನ ನಾನು ನನ್ನ ಕುಟುಂಬ ತಿಂದ ಅನ್ನ, ಬೇಳೆ ಅಥವಾ ಉಪ್ಪು ಯಾರ ಮನೆಯದು, ಯಾರ ಜಾತಿಯದು, ಯಾವ ಧರ್ಮದ್ದೆಂದು ನಾವ್ಯಾರು ಕೇಳಲಿಲ್ಲ. ಎಲ್ಲಾ ಧರ್ಮದ, ಎಲ್ಲ ಜಾತಿಯ ಋಣ ನನ್ನ ರಕ್ತದಲ್ಲಿ ಹರಿಯುತ್ತಿದೆ. ಹಾಗಾಗಿ ನಾನು ಇವುಗಳ ಬಗ್ಗೆ ಎಂದೂ ವಕಾಲತ್ತು ವಹಿಸಲಾರೆ.

ಅತ್ಯಂತ ತಾಳ್ಮೆಯಿಂದ ಯಾವುದೇ ಭಾವೋದ್ರೇಕವಿಲ್ಲದೆ, ತಣ್ಣನೆಯ ದನಿಯಲ್ಲಿ ಅವರು ಮಾತನಾಡುತ್ತಿದ್ದಾಗ ಅವರ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿದ್ದ ನೀರು ಅವರ ಕುರುಚಲು ಗಡ್ಡದಲ್ಲಿ ಲೀನವಾಗುತಿತ್ತು. ಅವರ ಮಾತುಗಳನ್ನು ಕೇಳುತ್ತಿದ್ದ ನಮ್ಮ ಕಣ್ಣುಗಳು ಸಹ ಒದ್ದೆಯಾಗಿದ್ದವು.

ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಬೇರೆಲ್ಲೂ ನನ್ನ ಅಂಡು ಸ್ಥಳವೂರಲಾರದು ಎಂಬಂತೆ ವರ್ತಿಸುತ್ತ ಹಲವು ಅವತಾರಗಳನ್ನು ತಾಳುತ್ತಿರುವ ಯಡಿಯೂರಪ್ಪ ಎಂಬ ಅವಿವೇಕಿ ಮತ್ತು ಜಾತಿಯ ಹೆಸರಿನಲ್ಲಿ ಅವನ ಭಟ್ಟಂಗಿಗಳು ಮತ್ತು ಚೇಲಾಗಳು ಕರ್ನಾಟಕದಲ್ಲಿ ನಡೆಸುತ್ತಿರುವ ರಾಜಕೀಯ ವರಸೆ ನೋಡಿ ಏಕೋ ಏನೋ ರಾಮಕೃಷ್ಣ ಹೆಗ್ಡೆ ನೆನಪಾದರು.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -11)


– ಡಾ.ಎನ್.ಜಗದೀಶ್ ಕೊಪ್ಪ


 

ಹತ್ತೊಂಬತ್ತನೇ ಶತಮಾನದ ಅಂತ್ಯ ಮತ್ತು ಇಪ್ಪತ್ತನೇ ಶತಮಾನದ ಆದಿಯಲ್ಲಿ ನೈನಿತಾಲ್ ಎಂಬ ಪ್ರಸಿದ್ದ ಗಿರಿಧಾಮವಾದ ಪಟ್ಟಣದಲ್ಲಿ ಫ್ರೆಡರಿಕ್ ಮ್ಯಾಥ್ಯು ಎಂಬುದು ಅತ್ಯಂತ ಪ್ರಸಿದ್ದವಾದ ಹೆಸರು. ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಕಬ್ಬಿಣ ಮತ್ತು ದಿನಸಿ ಅಂಗಡಿಯ ವ್ಯಾಪಾರದ ಮೂಲಕ ಸ್ಥಳೀಯರಿಗೆ ಮತ್ತು ಯುರೋಪಿಯನ್ನರಿಗೆ ಅತ್ಯಂತ ಪ್ರೀತಿ ಪಾತ್ರನಾಗಿದ್ದ. ಆ ಕಾಲಕ್ಕೆ ಅವನ ಅಂಗಡಿಯಲ್ಲಿ ಸಿಗದೇ ಇರುವ ವಸ್ತುಗಳು ಇರಲಿಲ್ಲ. ಮ್ಯಾಥ್ಯು, ಜಿಮ್ ಕಾರ್ಬೆಟ್‍ನ ತಾಯಿ ಮೇರಿ ಕಾರ್ಬೆಟ್‍ಳ ವ್ಯವಹಾರಕ್ಕೆ ನೆರವಾಗುವುದರ ಮೂಲಕ ಆಕೆಗೆ ನಿವೇಶನ ಕೊಡಿಸುವುದು, ಮಾರಾಟ ಮಾಡುವುದು ಇವುಗಳಲ್ಲಿ ಭಾಗಿಯಾಗುತಿದ್ದ.

ಮಕ್ಕಳಿಲ್ಲದ ಮ್ಯಾಥ್ಯು ತನಗೆ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯಾಪಾರದಲ್ಲಿ ಬರುವ ಬಹುತೇಕ ಲಾಭವನ್ನು ಧರ್ಮ ಜಾತಿ ಎಂಬ ಭೇಧ ಭಾವವಿಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ  ಆರೋಗ್ಯಕ್ಕೆ ವಿನಿಯೋಗಿಸುತಿದ್ದ. ಈ ಕಾರಣಕ್ಕಾಗಿ  ಅವನನ್ನು ನೈನಿತಾಲ್ ಪುರಸಭೆಗೆ ಅವಿರೋಧವಾಗಿ ಆಯ್ಕೆ ಮಾಡುತಿದ್ದರು. ವಯಸ್ಸಾದಂತೆ ತನ್ನ ವ್ಯವಹಾರಕ್ಕೆ ಯಾರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಯೋಚನೆ ಸದಾ ಮ್ಯಾಥ್ಯುವನ್ನು ಕಾಡುತಿತ್ತು. ಇಂತಹ ಸಂದರ್ಭದಲ್ಲಿ ಅವನ ಮನಸ್ಸಿಗೆ ಬಂದವನು ಜಿಮ್ ಕಾರ್ಬೆಟ್. ಮ್ಯಾಥ್ಯು ಬಾಲ್ಯದಿಂದಲೂ ಕಾರ್ಬೆಟ್‍ನನ್ನು ಗಮನಿಸುತಿದ್ದ. ಮೊಕಮೆಘಾಟ್‍ನಲ್ಲಿ ದುಡಿಯುತ್ತಿದ್ದ ವೇಳೆಯಲ್ಲಿ ಹಣವನ್ನು ದುಂದು ವೆಚ್ಚ ಮಾಡದೇ ತನ್ನ ತಾಯಿಯ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಂಡವಾಳವಾಗಿ ವಿನಯೋಗಿಸುತ್ತಿದ್ದುದ್ದನ್ನು ಗಮನಿಸುತ್ತಾ ಬಂದಿದ್ದ ಮ್ಯಾಥ್ಯು, ಕಾರ್ಬೆಟ್‍ನನ್ನು ತನ್ನ ವ್ಯವಹಾರಕ್ಕೆ ಪಾಲುದಾರನನ್ನಾಗಿ 1905 ರಲ್ಲಿ ನೇಮಕ ಮಾಡಿಕೊಂಡ.

ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದ ಸಂದರ್ಭದಲ್ಲೇ  ಈ ಎಲ್ಲಾ ಘಟನೆಗಳು ಜರುಗಿದವು. 1905 ರಲ್ಲಿ ಕಾರ್ಬೆಟ್, ಮ್ಯಾಥ್ಯು ಒಡೆತನದ ಎಫ್.ಮ್ಯಾಥ್ಯು ಅಂಡ್ ಕಂಪನಿಯ ವ್ಯವಹಾರಕ್ಕೆ ಪಾಲುದಾರನಾದ. ಇದಾದ ಎರಡೇ ವರ್ಷಗಳಲ್ಲಿ ಅಂದರೆ, 1907 ರಲ್ಲಿ ಮ್ಯಾಥ್ಯು ಮರಣ ಹೊಂದಿದ. ಆ ವೇಳೆಗಾಗಲೆ ಅವನ ರಿಯಲ್ ಎಸ್ಟೇಟ್ ಕಂಪನಿಯ ಮೇಲೆ ಅಲಹಬಾದ್ ಬ್ಯಾಂಕಿನಲ್ಲಿ ಸ್ವಲ್ಪ ಮಟ್ಟಿನ ಸಾಲವೂ ಇತ್ತು.

ಮ್ಯಾಥ್ಯು ತಾನು ಸಾಯುವ ಮುನ್ನವೇ ಉಯಿಲು ಬರೆದಿಟ್ಟು ತನ್ನ ಈ ಸಮಗ್ರ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯವಹಾರಕ್ಕೆ ಕಾರ್ಬೆಟ್ ಉತ್ತರಾಧಿಕಾರಿ ಎಂಬುದಾಗಿ ನಮೂದಿಸಿದ್ದ. ಅಂಗಡಿಯಲ್ಲಿ ಸುಮಾರು 10 ಸಾವಿರ ಬೆಲೆ ಬಾಳುವ ವಸ್ತುಗಳಿದ್ದವು. ಬ್ಯಾಂಕಿನ ಸಾಲ 60 ಸಾವಿರದಷ್ಟಿತ್ತು. ಇದರ ಪರಿಹಾರಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ಸುತ್ತಮುತ್ತ ಕಂಪನಿಯ ಹೆಸರಿನಲ್ಲಿದ್ದ 14 ಎಕರೆ ಪ್ರದೇಶವನ್ನು ಮಾರುವುದರ ಜೊತೆಗೆ, ತನ್ನ ಉಳಿತಾಯದ ಹಣವನ್ನು ಸೇರಿಸಿ ಬ್ಯಾಂಕ್ ಸಾಲ ತೀರಿಸಿದ. ಮ್ಯಾಥ್ಯುವಿನ ವಯಸ್ಸಾದ ಪತ್ನಿಗೆ ಕಂಪನಿಯಲ್ಲಿ ಶೇರು ನೀಡಿ ಆಕೆಗೆ ತಿಂಗಳಿಗೆ ಸುಮಾರು ಒಂದೂವರೆ ಸಾವಿರ ರೂಪಾಯಿ ಆದಾಯ ಬರುವಂತೆ ಮಾಡಿ ಜೀವನೋಪಾಯಕ್ಕೆ ದಾರಿ ಮಾಡಿದ್ದ. ಇಡೀ ವ್ಯವಹಾರವೆಲ್ಲಾ ಜಿಮ್ ಕಾರ್ಬೆಟ್ ಒಡೆತನಕ್ಕೆ ಸೇರಿದ ನಂತರವೂ ಕಂಪನಿಯ ಹೆಸರು ಬದಲಾಯಿಸದೆ, ಮ್ಯಾಥ್ಯು ಅಂಡ್ ಕಂಪನಿ ಹೆಸರಿನಲ್ಲಿ ವ್ಯವಹಾರ ಮುಂದುವರಿಯಿತು. ಅವನ ಸಹೋದರಿ ಮ್ಯಾಗಿ ವ್ಯವಹಾರದ ಉಸ್ತುವಾರಿ ಹೊತ್ತಿದ್ದಳು. ಹೀಗೆ ಕುಟುಂಬ ನಿರ್ವಹಣೆ ಮತ್ತು ತನ್ನ ಭವಿಷ್ಯದ ಬದುಕಿಗೆ ಭದ್ರ ಬುನಾದಿಯನ್ನೆ ಹಾಕಿಕೊಂಡಿದ್ದ ಕಾರ್ಬೆಟ್ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ತಿಲಾಂಜಲಿ ನೀಡಿದಾಗ ಅವನ ನೆಮ್ಮದಿಯ ಜೀವನಕ್ಕೆ ಯಾವುದೇ ಅಡ್ಡಿ ಇರಲಿಲ್ಲ.

ನೈನಿತಾಲ್ ಪಟ್ಟಣಕ್ಕೆ ವಾಪಸ್ ಬಂದ ಜಿಮ್ ಕಾರ್ಬೆಟ್ ತನ್ನ ಮೆಚ್ಚಿನ ಹವ್ಯಾಸವಾಗಿದ್ದ  ಶಿಕಾರಿಯೊಂದಿಗೆ ವ್ಯವಹಾರವನ್ನು ಅಭಿವೃದ್ಧಿಪಡಿಸಿದ. ಜೊತೆಗೆ 1924 ರಿದ 1928 ರ ಅವಧಿವರೆಗೆ ಅಲ್ಲಿನ ಪುರಸಭೆಯ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿ ಇಡೀ ಪಟ್ಟಣವನ್ನು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ. ಮನೆಗಳಿಂದ ಹೊರಬೀಳುವ ತ್ಯಾಜ್ಯ ನೀರು ನೈನಿ ಸರೋವರ ಸೇರದಂತೆ, ನೀಲನಕ್ಷೆ ತಯಾರಿಸಿ ಪ್ರಥಮ ಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಿಸಿಕೊಟ್ಟ. (ವರ್ತಮಾನದ ದುರಂತವೆಂದರೆ, ಈಗ ನೈನಿತಾಲ್ ಪುರಸಭೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಅಲ್ಲಿನ ಸಿಬ್ಬಂದಿಗೆ ಜಿಮ್ ಕಾರ್ಬೆಟ್ ಎಂದರೆ ಯಾರೂ ಎಂಬುದು ಸಹ ತಿಳಿದಿಲ್ಲ.)

ಇದೇ ವೇಳೆಗೆ ವಿಂದಮ್ ಎಂಬ ಬ್ರಿಟಿಷ್ ಅಧಿಕಾರಿ ಕುಮಾವನ್ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದ. 1886 ರಲ್ಲಿ ಇಂಗ್ಲೆಂಡಿನ  ಆಕ್ಸ್‌ಫರ್ಡ್ ಕಾಲೇಜಿನ ಪದವೀಧರನಾದ ಈತ 1889 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ ಭಾರತಕ್ಕೆ ಬಂದವನು. ಪ್ರಾರಂಭದಲ್ಲಿ ಪಾಕ್ ಮತ್ತು ಆಪ್ಘನಿಸ್ಥಾನದ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸಿ, ನಂತರ ಔದ್ ಪ್ರಾಂತ್ಯದಲ್ಲಿ ಉಪವಿಭಾಗಾಧಿಕಾರಿಯಾಗಿ, ಬನಾರಸ್ ಸಂಸ್ಥಾನದ ಉಸ್ತುವಾರಿ ಅಧಿಕಾರಿಯಾಗಿ, ಕಂದಾಯ ಆಯುಕ್ತನಾಗಿ,  ಹೀಗೆ ಭಾರತದ ವಿವಿಧೆಡೆ ಸೇವೆ ಸಲ್ಲಸಿ, ಇಲ್ಲಿನ ಬಹುಮುಖಿ ಸಂಸ್ಕೃತಿ ಮತ್ತು ವಿವಿಧ ಭಾಷೆಗಳನ್ನು ಅರಿತವನಾಗಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಸೇರಿದಂತೆ ಹಲವಾರು ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಪ್ರತಿಭೆಯನ್ನು ಹೊಂದಿದ್ದ.

ಜಿಮ್ ಕಾರ್ಬೆಟ್‍ನಂತೆ ಈತ ಕೂಡ  ಅವಿವಾಹಿತನಾಗಿದ್ದ. ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ಒಬ್ಬ ಸಂಸ್ಥಾನದ ಮಾಂಡಲೀಕನಂತೆ ಹಲವಾರು ನೌಕರರನ್ನು ನೇಮಕ ಮಾಡಿಕೊಂಡಿದ್ದ. ಅತ್ಯಂತ ಮುಂಗೋಪಿಯಾಗಿದ್ದ ವಿಂದಮ್ ಸಣ್ಣ ಪುಟ್ಟ ವಿಷಯಗಳಿಗೆ ಎಲ್ಲರೆದುರು ಸಿಡಿದೇಳುತಿದ್ದ. ಆದರೆ, ಮರು ಕ್ಷಣವೇ ಶಾಂತನಾಗುತಿದ್ದ. ತನ್ನ ಬಳಿ ಕೆಲಸ ಮಾಡುವ ನೌಕರರ ಕಷ್ಟ ಸುಖಗಳಿಗೆ ಧಾರಳವಾಗಿ ನೆರವು ನೀಡುತಿದ್ದ. ಸಿಟ್ಟಿನ ನಡುವೆಯೂ ಅವನು ಎಂತಹ ಹೃದಯವಂತನೆಂದರೆ, ತನ್ನ ಕೈಕೆಳಗಿನ ಅಧಿಕಾರಿಗಳು ಅಥವಾ ನೌಕರರು ಭ್ರಷ್ಟಾಚಾರ ಇಲ್ಲವೆ ಕೆಲಸದಲ್ಲಿ ನಿರ್ಲಕ್ಷ್ಯತನ ತೋರಿದರೆ, ಉಳಿದ ಬ್ರಿಟಿಷ್ ಅಧಿಕಾರಿಗಳಂತೆ ಅವರನ್ನು ಕೆಲಸದಿಂದ ತೆಗೆಯುತ್ತಿರಲಿಲ್ಲ, ಬದಲಾಗಿ ಅವರಿಗೆ ಹಿಂಬಡ್ತಿ ನೀಡಿ ಉದ್ಯೋಗದಲ್ಲಿ ಮುಂದುವರಿಸುತಿದ್ದ. ಈ ಕುರಿತಂತೆ ಪ್ರತಿಕ್ರಿಯಿಸುತ್ತಾ  ಅವರ ಕುಟುಂಬದ ಅನ್ನವನ್ನು ಕಸಿಯಬಾರದು ಎಂದು ವಿಂದಮ್ ಮಾರ್ಮಿಕವಾಗಿ ನುಡಿಯುತಿದ್ದ. ತನ್ನ ನಿಷ್ಠುರ ಹಾಗೂ ಮಾನವೀತೆಯ ಮುಖವುಳ್ಳ ವ್ಯಕ್ತಿತ್ವದ ನಡುವೆಯೂ ವಿಂದಮ್‍ಗೆ ಶಿಕಾರಿಯ ಬಗ್ಗೆ ಹುಚ್ಚಿತ್ತು.

ಅದರಲ್ಲೂ ಹುಲಿ ಬೇಟೆಯೆಂದರೆ, ವಾರಗಟ್ಟಲೆ ಅರಣ್ಯಗಳಲ್ಲಿ ತನ್ನ ಸಿಬ್ಬಂದಿ ಕೊತೆ ಗುಡಾರದಲ್ಲಿ ಬೀಡು ಬಿಡುತಿದ್ದ. ಈತನಿಗೂ ಕಾರ್ಬೆಟ್‍ಗೂ ಹುಲಿ ಬೇಟೆಯಲ್ಲಿ ಇದ್ದ ಪ್ರಮುಖ ವ್ಯತ್ಯಾಸವೆಂದರೆ, ಕಾರ್ಬೆಟ್ ಕೇವಲ ನರಭಕ್ಷಕ ಹುಲಿಗಳನ್ನು ಮರದ ಮೇಲೆ ಕುಳಿತು, ಅವುಗಳು ಬೇಟೆಯಾಡಿದ ಮಾನವರ ಕಳೇಬರಗಳನ್ನು ತಿನ್ನಲು ಬಂದಾಗ ಮಾತ್ರ ಕೊಲ್ಲುತಿದ್ದ. ಆದರೆ, ವಿಂದಮ್ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮಸ್ಥರನ್ನು  ಅರಣ್ಯಕ್ಕೆ ಕಳಿಸಿ ಹುಲಿ ಇರುವ ಜಾಗ ಪತ್ತೆ ಮಾಡಿಸಿ ಆನೆ ಮೇಲೆ ಸವಾರಿ ಮಾಡುತ್ತಾ ಗ್ರಾಮಸ್ಥರು ಮತ್ತು ತನ್ನ ಸೇವಕರ ನೆರವಿನಿಂದ ಬೇಟೆಯಾಡುತಿದ್ದ. ಈ ಶಿಕಾರಿ ಹವ್ಯಾಸ ಮುಂದಿನ ದಿನಗಳಲ್ಲಿ ಈ ಇಬ್ಬರನ್ನು ಆತ್ಮೀಯ ಮಿತ್ರರನ್ನಾಗಿ ಮಾಡಿತು.

ವಿಂದಮ್ ನೈನಿತಾಲ್ ಪ್ರಾಂತ್ಯಕ್ಕೆ ಬಂದೊಡನೆ ಆ ಪ್ರದೇಶದ  ಸುತ್ತಮುತ್ತ ದಂತಕಥೆಯಾಗಿ ಹೋಗಿದ್ದ ಜಿಮ್ ಕಾರ್ಬೆಟ್ ಬಗ್ಗೆ ತಿಳಿದು ತಾನೇ ಮುಂದಾಗಿ ಸ್ನೇಹ ಹಸ್ತ ಚಾಚುವುದರ ಮೂಲಕ ಕಾರ್ಬೆಟ್‍ನನ್ನು ಗೆಳೆಯನನ್ನಾಗಿ ಮಾಡಿಕೊಂಡ. ಕಾರ್ಬೆಟ್ ಮೊಕಮೆಘಾಟ್‍ನಿಂದ ರಜೆಗೆ ಊರಿಗೆ ಬಂದಾಗಲೆಲ್ಲಾ ವಿಂದಮ್‍ನನ್ನು ಭೇಟಿಯಾಗುತಿದ್ದ ಇಬ್ಬರೂ ಕೂಡಿ ಶಿಕಾರಿ ಬಗ್ಗೆ ಚರ್ಚಿಸುವುದು ಇಲ್ಲವೇ ಅರಣ್ಯಕ್ಕೆ ತೆರಳಿ ಶಿಕಾರಿ ಮಾಡುವುದು ನಿರಂತರವಾಗಿ ನಡೆದಿತ್ತು.

ಕಾರ್ಬೆಟ್ ನಿವೃತ್ತಿ ಪಡೆದ ನಂತರ ಈ ಜೋಡಿ ವಾರಗಟ್ಟಲೆ ಕಾಡಿನಲ್ಲಿ ಬಿಡಾರ ಹೂಡಿ ಅಲೆಯುತಿದ್ದರು. ಶಿಕಾರಿ ಕುರಿತಂತೆ ಇಬ್ಬರ ಅನುಭವ ಭಿನ್ನವಾಗಿತ್ತು. ಕಾರ್ಬೆಟ್ ಬಳಿ ಜೋಡಿ ನಳಿಕೆಯ ಹಾಗೂ ಸಿಂಗಲ್ ಬ್ಯಾರಲ್ ಬಂದೂಕಗಳಿದ್ದವು. ಆದರೆ, ವಿಂದಮ್ ಬಳಿ ಆತ್ಯಾಧುನಿಕ ಬಂದೂಕಗಳಿದ್ದವು. ಅವುಗಳಲ್ಲಿ ಆನೆ ಮೇಲೆ ಕುಳಿತು ಹುಲಿ ಅಥವಾ ಚಿರತೆಗಳನ್ನು ಬೇಟೆಯಾಡಲು ಬಳಸುವ, ಬಂದೂಕದ ಮುಂಭಾಗದ ನಳಿಕೆಗಳು ಬಾಗಿರುವಂತಹ ವಿಶೇಷ ಬಂದೂಕಗಳಿದ್ದವು.

ಕಾರ್ಬೆಟ್, ವಿಂದಮ್‍ಗೆ ನೆಲದಲ್ಲಿ ನಿಂತು ಬೇಟೆಯಾಡುವ ಕಲೆ ಹಾಗೂ ಅಪಾಯಕಾರಿ ಪ್ರಾಣಿಗಳ ಕುರಿತಂತೆ ತೆಗೆದುಕೊಳ್ಳಬೇಕಾದ ಎಚ್ಚರಕೆ ಇವುಗಳನ್ನು ವಿವರಿಸುತಿದ್ದ. ಹುಲಿಗಳು ಮನುಷ್ಯನ ಇರುವನ್ನು ವಾಸನೆ ಮೂಲಕ ಕಂಡು ಹಿಡಿದು, ಸುಳಿವು ಸಿಗದಂತೆ ಸನಿಹಕ್ಕೆ ಬಂದು ಮನುಷ್ಯರ ಮೇಲೆ ಎರಗುವ ಬಗ್ಗೆ ರೋಚಕವಾಗಿ ಮನಮುಟ್ಟುವಂತೆ ಹೇಳುತಿದ್ದ. ಅದೇ ರೀತಿ ವಿಂದಮ್ ಸಹ  ಆನೆಯ ಮೇಲೆ ಕುಳಿತು ಬೇಟೆಯಾಡುವಾಗ ಬರುವ ತೊಂದರೆಗಳು, ಆನೆಯ ಮಾವುತನ ಧೈರ್ಯ ಮತ್ತು ವಿವೇಚನೆಗಳ ಮೇಲೆ ನಿರ್ಧಾರವಾಗುತಿದ್ದ ಶಿಕಾರಿ ಇಂತಹ ಅನುಭವಗಳನ್ನು ಕಾರ್ಬೆಟ್  ಜೊತೆ  ಹಂಚಿಕೊಳ್ಳುತ್ತಿದ್ದ.

(ಮುಂದುವರಿಯುತ್ತದೆ.)

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹೊಸ ಕವಲುಗಳು


-ಶ್ರೀಮತಿ ದೇವಿ


ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ ಸುದೀರ್ಘ ಪರಂಪರೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ಬೆಳಗಿ ಮರೆಯಾಗಿದ್ದಾರೆ. ಸಂಗೀತ, ನೃತ್ಯಗಳಿಗೆ ಸಮಾಜದಲ್ಲಿ ಯಾವುದೇ ರೀತಿಯ ಪ್ರೋತ್ಸಾಹ, ಗೌರವಯುತವಾದ ಸ್ಥಾನ ಇಲ್ಲದ ಕಾಲದಲ್ಲಿ ಈ ಕಲಾವಿದರು ತಮ್ಮ ಜೀವನದುದ್ದಕ್ಕೂ ಉತ್ತಮ ಸಂಗೀತಕ್ಕಾಗಿ, ಅದನ್ನು ಕೇಳಬಲ್ಲ ಸಹೃದಯಿ ಶ್ರೋತೃಗಳ ಒಂದು ಪುಟ್ಟ ಗುಂಪಿಗಾಗಿ, ಸಮಾಜದಲ್ಲಿ ಶಾಸ್ತ್ರೀಯ ಸಂಗೀತಕ್ಕೊಂದು ಅಸ್ತಿತ್ವ ಕಲ್ಪಿಸಿ ಕೊಡುವುದಕ್ಕಾಗಿ ಹಂಬಲಿಸಿ, ದುಡಿದು ಇಂದು ನಾವು ನಿಂತಿರುವ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಟ್ಟಿದ್ದಾರೆ.

ಯಾವುದೇ ಒಂದು ವಿಚಾರವನ್ನು ಪ್ರತಿಕೂಲಗಳಿಗೆ ಎದುರಾಗಿ ನಿಂತು ಹೆಣಗಾಡಿ, ಹೋರಾಡಿ ಸ್ಥಾಪಿಸುವುದು ತುಂಬಾ ಕಠಿಣವಾದ ಕೆಲಸ. ಆದರೆ ಅಷ್ಟೇ ಸವಾಲಿನಿಂದ ಕೂಡಿದ್ದು, ಹಾಗೆ ಸ್ಥಾಪಿಸಿದ ವಿಚಾರವನ್ನು ಅದರ ಮೂಲ ಸತ್ವಕ್ಕೆ ಧಕ್ಕೆ ಬಾರದಂತೆ ಬಹಳಕಾಲ ಜನಮಾನಸದಲ್ಲಿ ಉಳಿಸಿಕೊಂಡು ಮುನ್ನಡೆಸುವುದು. ಹಾಗೆಯೇ ಏಕತಾನತೆ ಎಂದೂ ಅನಿಸದಂತೆ ಕಾಲಕ್ಕನುಗುಣವಾಗಿ ವಿಚಾರದಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡುವುದೂ ಅಷ್ಟೇ ಮುಖ್ಯವಾಗುತ್ತದೆ. ಒಂದು ದೇಶದ ಸಾಂಸ್ಕೃತಿಕ ಚರಿತ್ರೆಯ ಯಾವುದೇ ಒಬ್ಬ ವಿದ್ಯಾರ್ಥಿಗೆ ಇದರ ಅಧ್ಯಯನ ಬಹಳ ಮಹತ್ವಪೂರ್ಣವಾದದ್ದು ಎಂದೆನಿಸುತ್ತದೆ.

ಭಾರತೀಯ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮುಂತಾದ ನೃತ್ಯ ಪ್ರಕಾರಗಳು, ಶಿಲ್ಪಕಲೆ ಇವುಗಳೆಲ್ಲಾ ಬಹಳ ಪುರಾತನ, ಪಾರಂಪರಿಕ ಹಾಗೂ ದೈವಿಕ ಕಲೆಗಳು ಎಂದು ನಂಬಲ್ಪಟ್ಟವು. ಕಲಿಯ ಬಯಸುವವನ ಸಂಪೂರ್ಣ ಸಮರ್ಪಣೆಯನ್ನು ಬೇಡುವಂಥವು.

ಹಿಂದುಸ್ಥಾನೀ ಸಂಗೀತವು ನಾದಪ್ರಧಾನವಾಗಿದ್ದು ‘ಶಬ್ದಕ್ಕೆ ಮೀರಿದ’ ಸಂಗೀತವೆಂದು ಗುರುತಿಸಲ್ಪಟ್ಟಿದೆ. ಹಿಂದಿನ ಗುರುಶಿಷ್ಯ ಪರಂಪರೆಯಲ್ಲಿ ಲೇಖನಿ ಪುಸ್ತಕಗಳು ಇಲ್ಲದ ಕಾಲದಲ್ಲಿ ಗುರುವಿನಿಂದ ಶಿಷ್ಯನಿಗೆ ಬಾಯ್ದೆರೆಯಾಗಿ ಬಂದಿಷ್‍ಗಳ ಪಾಠಾಂತರವಾಗುತ್ತಿತ್ತು. ಸಾವಿರಾರು ಬಂದಿಷ್ ಗಳನ್ನು ನೆನಪಿಟ್ಟುಕೊಂಡು ಹಾಡುವ ಉಸ್ತಾದ್‍ಗಳು, ಗವಾಯಿಗಳು ಇದ್ದರು.

ಹೀಗೆ ಮೌಖಿಕ ಪರಂಪರೆಯನ್ನು ಹೊಂದಿ, ಶಬ್ದಕ್ಕೆ ಮೀರಿದ ‘ಅಮೂರ್ತ’ವಾದ ನಮ್ಮ ಸಂಗೀತ, ವೀಡಿಯೋ, ಮೈಕ್ರೋಫೋನ್, ರೆಕಾರ್ಡರ್‌ಗಳಿಂದ ಕೂಡಿದ ಸಂಪೂರ್ಣವಾಗಿ ದಾಖಲೆಗೊಳಗಾಗಿರುವ (documentation) ಇಂದಿನ ಯುಗದವರೆಗೆ ಸಾಗಿ ಬಂದ ಪಯಣದಲ್ಲಿ ತನ್ನ ‘ಶಬ್ದದಾಚೆಗಿನ ತುಡಿತ’ವನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕವೂ ಒಮ್ಮೊಮ್ಮೆ ನಮ್ಮನ್ನು ಕಾಡುತ್ತದೆ.

ಜಾನಪದ ಸಂಗೀತದ ತಳಹದಿಯಿಂದ ಮೈದಳೆದ ಈ ಸಂಗೀತ ಇವತ್ತು ಅತ್ಯಂತ ಕ್ರಮಬದ್ಧವಾಗಿ, ಪರಿಷ್ಕೃತವಾಗಿ, ‘ಶಾಸ್ತ್ರೀಯ’ ಎಂಬ ಹೆಸರಿನೊಂದಿಗೆ ವೇದಿಕೆ ಏರಿ ಕುಳಿತ ಪರಿ ಅಚ್ಚರಿ ಮೂಡಿಸುತ್ತದೆ. ಆದರೆ ಅದರೊಂದಿಗೇ ಒಬ್ಬ ಮಹಿಳೆ ತಾನು ಗೌರವಯುತವಾಗಿ ಸಂಸಾರದ ಚೌಕಟ್ಟಿನೊಳಗೆ ಇದ್ದುಕೊಂಡು ಉತ್ತಮವಾದ ಸಾಮಾಜಿಕ ಜೀವನವನ್ನೂ ಕಾಪಾಡಿಕೊಂಡು ಸಂಗೀತ ಕಲಿಯ ಬಹುದಾದ ಹಾಗೂ ವೇದಿಕೆ ಏರಬಹುದಾದ ವಾತಾವರಣ ಇಂದು ನಿರ್ಮಾಣಗೊಂಡಿದೆ. ಹಾಗೇಯೇ ಸಮಾಜದ ಮುಖ್ಯವಾಹಿನಿಯಲ್ಲಿ ವೈದ್ಯರು, ಶಿಕ್ಷಕರು, ಇಂಜಿನಿಯರುಗಳು ಮೊದಲಾದವರೊಂದಿಗೆ ಸಮಾನವಾಗಿ ಸಂಗೀತಗಾರರೂ ಗುರುತಿಸಿಕೊಳ್ಳುವಂತಾದದ್ದು ಸಮಾಧಾನವನ್ನು ನೀಡುತ್ತದೆ.

ಸಂಗೀತ ಕ್ಷೇತ್ರದ ಈ ಎಲ್ಲಾ ಬದಲಾದ ಸಂದರ್ಭದಲ್ಲಿ ನಿಂತು, ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿರುವ ಪ್ರತಿಭಾವಂತ ಯುವ ಗಾಯಕರುಗಳನ್ನು ಗುರುತಿಸಲು ಹೊರಟಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ, ಶಾಸ್ತ್ರೀಯ ಸಂಗೀತದ ಮುಖ್ಯ ಪ್ರವಾಹಕ್ಕೆ ಬಂದು ಸೇರುತ್ತಲೇ ಇರುವ ಚಿಕ್ಕ ಚಿಕ್ಕ ಧಾರೆ, ಒಳ ಹರಿವುಗಳ ಅನುಭವವೂ ಆಯಿತು. ಈ ಧಾರೆ, ಹರಿವುಗಳನ್ನು ‘ಮಾಡರ್ನ್ ಟ್ರೆಂಡ್ಸ್’ ಅಥವಾ ‘ವೈಯಕ್ತಿಕ ಕೊಡುಗೆ’ ಎಂಬ ಹೆಸರಿನಡಿಯೂ ಗುರುತಿಸಬಹುದೇನೋ… ಆದರೆ ನಾನು, ನನ್ನ ಕೇಳ್ಮೆ ಹಾಗೂ ಅರ್ಥೈಸಿಕೊಳ್ಳುವ ಮಿತಿಯೊಳಗೆ ಕೇವಲ ಗಾಯನ ಪ್ರಕಾರದಲ್ಲಿ ಉಂಟಾಗುತ್ತಿರುವ ಕೆಲವು ಗುರುತಿಸಲೇಬೇಕಾದ ಬದಲಾವಣೆಗಳನ್ನು, ಹೊಸದಾರಿಯಲ್ಲಿ ಸಾಗಿ ಬರುತ್ತಿರುವ ಕೆಲವು ಚಿಂತನೆಗಳನ್ನು, ನನ್ನ ಮನಮುಟ್ಟಿದ ಕೆಲವು ಅಪರೂಪದ ಪ್ರತಿಭೆಗಳನ್ನು ಈ ಬರಹದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಹೊರಟಿದ್ದೇನೆ.

ಹಿಂದೂಸ್ಥಾನಿ ಸಂಗೀತದ ಇತಿಹಾಸವನ್ನು ಸಂಪೂರ್ಣವಾಗಿ ಗಮನಿಸಿದಾಗ, ಇದು ಹೆಚ್ಚಾಗಿ ಪುಣೆ, ಮುಂಬೈ, ಕಲ್ಕತ್ತಾ, ಬನಾರಸ್, ಲಖ್ನೊ, ಗ್ವಾಲಿಯರ್, ಧಾರವಾಡ, ಗೋವಾ ಮುಂತಾದ ಪಟ್ಟಣಗಳಲ್ಲೇ ಬೆಳೆದು ಬಂದಿರುವುದು ಕಂಡು ಬರುತ್ತದೆ. ಈ ಪಟ್ಟಣಗಳು ಸಂಗೀತವನ್ನು ಬಯಸಿ ಬರುವ ಗ್ರಾಮೀಣ ಪ್ರದೇಶದ, ಏನೂ ಸಂಗೀತದ ಹಿನ್ನಲೆಯಿಲ್ಲದಿರುವ ವಿದ್ಯಾರ್ಥಿಗಳಿಗೂ ನೂರಾರು ವರ್ಷಗಳಿಂದ ಅನ್ನ, ವಿದ್ಯೆ ನೀಡಿ ಪೊರೆದಿವೆ, ಪೊರೆಯುತ್ತಿವೆ. ಸಂಗೀತದ ತೀರ್ಥಸ್ಥಾನಗಳು ಎನಿಸಿದ ಫುಣೆ, ಕಲ್ಕತ್ತಾ, ಮುಂಬಯಿ, ಗ್ವಾಲಿಯರ್ ಇತ್ಯಾದಿ ನಗರಗಳ ಇಂದಿನ ಸಂಗೀತದ ವಾತಾವರಣವನ್ನು ನೋಡಿದಾಗ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ಯಾವತ್ತೂ ಹೇಳುತ್ತಿದ್ದ ‘ಸಂಗೀತವೆಂದರೆ ತೊಟ್ಟಿಲು ಇದ್ದ ಹಾಗೆ. ನಾವು ತೂಗುವುದು ನಿಲ್ಲಿಸಿದರೆ, ನಮ್ಮ ಹಿಂದೆ ಬಂದವರು ತೊಟ್ಟಿಲಿಗೆ ಕೈ ಹಚ್ಚುತ್ತಾರೆ’ ಎಂಬ ಮಾತು ನಿಜವೆನಿಸುತ್ತದೆ. ಈಗಿರುವ ಹಿರಿಯ ತಲೆಮಾರಿನ ಸಂಗೀತಗಾರರಾದ ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ ದೇಶಪಾಂಡೆ, ವೀಣಾ ಸಹಸ್ರಬುಧ್ಧೆ, ಉಲ್ಲಾಸ್ ಕಶಾಲ್ಕರ್, ಮಾಲಿನಿ ರಾಜುರ್ಕರ್, ರಶೀದ್ ಖಾನ್, ಅಜಯ್ ಚಕ್ರವರ್ತಿ, ಜಸ್‍ರಾಜ್, ಪದ್ಮಾ ತಲ್ವಾಲ್ಕರ್, ಸಂಜೀವ್ ಅಭ್ಯಂಕರ್ ಇವರೆಲ್ಲರ ನಂತರದ ತಲೆಮಾರಿನ ಗಾಯಕರಲ್ಲಿ ಹಲವರು ಭರವಸೆಯನ್ನು ಮೂಡಿಸುತ್ತಾರೆ.

ಈ ನಿಟ್ಟಿನಲ್ಲಿ ಗುರುತಿಸಲೇಬೇಕಾದ ಕೆಲವು ಹೆಸರುಗಳನ್ನು ಕೆಳಗೆ ಚರ್ಚಿಸಿದ್ದೇನೆ.

ಕೌಶಿಕಿ ಚಕ್ರವರ್ತಿ: ಪಂ.ಅಜಯ್ ಚಕ್ರವರ್ತಿ ಅವರ ಮಗಳೂ ಹಾಗೂ ಶಿಷ್ಯೆಯೂ ಆದ ಕೌಶಿಕಿಯ ಹೆಸರು ಕೇಳದ ಸಂಗೀತ ಪ್ರಿಯರಿಲ್ಲ. ಎಳೆವೆಯಿಂದಲೇ ಸಂಗೀತದ ಗಂಭೀರ ಅಭ್ಯಾಸ ನಡೆಸಿ, ಕಲ್ಕತ್ತಾದಲ್ಲಿರುವ ಪ್ರಸಿದ್ಧ ಸಂಗೀತ ಸಂಸ್ಥೆಯಾದ ಐಟಿಸಿಯ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಠಿತ ಸಂಗೀತ ಸಭೆಗಳಲ್ಲೆಲ್ಲಾ ಹಾಡಿ, ಅನೇಕ ಬಾರಿ ವಿದೇಶ ಪ್ರಯಾಣವನ್ನೂ ಮಾಡಿದವರು ಕೌಶಿಕಿ. ಶಾಸ್ತ್ರೀಯ ಸಂಗೀತದಷ್ಟೇ ಸಮರ್ಥವಾಗಿ ಠುಮ್ರಿ, ದಾದ್ರಾಗಳನ್ನೂ ಹಾಡಬಲ್ಲವರು. ಲಯದ ಮೇಲಿನ ಪ್ರಭುತ್ವ, ತಮ್ಮ ಕಂಠಸಿರಿಯನ್ನು ದುಡಿಸಿಕೊಂಡ ರೀತಿ ಶ್ಲಾಘನೀಯವದುದು. ಇವರು ಪಟಿಯಾಲ ಘರಾಣೆಯ ಹಾಡುಗಾರ್ತಿ.

ಅರ್ಶದ್ ಅಲಿ ಖಾನ್: ಅರ್ಶದ್ ಐ.ಟಿ.ಸಿ ಯಿಂದ ಹೊರಬಂದ ಮತ್ತೋರ್ವ ಪ್ರತಿಭೆ. ಸಾರಂಗಿ ಮಾಂತ್ರಿಕ ಎನಿಸಿದ್ದ ಉ.ಶಕೂರ್ ಖಾನರ ಮೊಮ್ಮಗ, ಇವರು.  4 ವರ್ಷದ ಬಾಲಕನಾಗಿದ್ದಾಗಲೇ 40ರಾಗಗಳ ಪರಿಚಯ ಹೊಂದಿದ್ದರು.  8 ವರ್ಷದವನಾದಾಗ ಕಲ್ಕತ್ತಾದ ಐಟಿಸಿ ಸಂಸ್ಥೆ ಸೇರಿ, ಅಲ್ಲಿ ಉ.ಮಶ್ಕುರ್ ಅಲಿ ಖಾನ್ ಹಾಗೂ ಉ.ಮುಬಾರಕ್ ಅಲಿ ಖಾನ್ ಅವರ ಬಳಿ ಕಿರಾಣಾ ಸಂಪ್ರದಾಯದಲ್ಲಿ ಸಂಗೀತಾಭ್ಯಾಸ ಮಾಡಿದರು. ತಮ್ಮ ಘರಾಣೆಯ ವೈಶಿಷ್ಟ್ಯಗಳನ್ನು ಗಾಯನದಲ್ಲಿ ಯಶಸ್ವಿಯಾಗಿ ಪಡಿಮೂಡಿಸುತ್ತಾರೆ.

ಪುಶ್ಕರ್ ಲೇಲೆ: ಗುರುಮುಖೇನ ಪಡೆದ ವಿದ್ಯೆಯನ್ನು ತಮ್ಮ ಪ್ರತಿಭೆಯ ಮೂಸೆಯಲ್ಲಿ ತಿದ್ದಿ, ಸಂಗೀತವಾಗಿ ಹೊರತಂದವರು, ಪುಶ್ಕರ್. ಆರಂಭದಲ್ಲಿ ಶ್ರೀ ಗಂಗಾಧರ ಬುವಾ ಪಿಂಪಳ್ಕರ್  ಇವರ ಬಳಿ ಗ್ವಾಲಿಯರ್ ಶೈಲಿಯಲ್ಲಿ ಅಭ್ಯಾಸ ಆರಂಭಿಸಿ, ಮುಂದೆ ಶ್ರೀ ವಿಜಯ್ ಕೊಪರ್ಕರ್ ಹಾಗೂ ಹಲವಾರು ವರ್ಷ ಶ್ರೀ ವಿಜಯ್ ಸರದೇಶ್‍ಮುಖ್ ಅವರ ಬಳಿ ಅಭ್ಯಾಸ ಮಾಡಿದ್ದಾರೆ. ಸರದೇಶ್‍ಮುಖ್  ಅವರು ಸಂಗೀತದ ಆಧುನಿಕ ಯುಗದ ನೇತಾರರಾದ ಪಂ.ಕುಮಾರ ಗಂಧರ್ವರ ಪ್ರಮುಖ ಶಿಷ್ಯರಾಗಿದ್ದಾರೆ. ಇಂದಿನ ದಿನಮಾನದಲ್ಲಿ ಇರುವ ಕೆಲವೇ ಟಪ್ಪಾ ಗಾಯಕರಲ್ಲಿ ಪುಶ್ಕರ್ ಕೂಡಾ ಒಬ್ಬರು. ಸಂಗೀತಕ್ಕೆ ಸಂಬಂಧಿಸಿದ ಅನೇಕ ಉತ್ತಮ ವಿಚಾರಗಳನ್ನು ಹೊಂದಿರುವ ಇವರು, ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಪೂರ್ವ ಗೋಖಲೆ: ಅಪೂರ್ವ, ಗ್ವಾಲಿಯರ್ ಘರಾಣೆಯ ಹಿರಿಯ ಗಾಯಕ-ವಯೋಲಿನ್ ವಾದಕ-ಶ್ರೇಷ್ಠ ಗುರುವೂ ಆಗಿದ್ದ ಪಂ.ಗಜಾನನ ಬುವಾ ಜೋಶಿ ಅವರ ಮೊಮ್ಮಗಳು. ತಮ್ಮ ಅಜ್ಜನ ಬಳಿಯೇ ಅಭ್ಯಾಸ ಆರಂಭಿಸಿ, ನಂತರ ಮಾವ ಮಧುಕರ್ ಜೋಶಿ ಅವರ ಬಳಿ ಮುಂದುವರಿಸಿದರು. ಉನ್ನತ ಅಭ್ಯಾಸವನ್ನು ಪಂ.ಉಲ್ಲಾಸ್ ಕಶಾಲ್ಕರ್ ಅವರ ಬಳಿ ಮಾಡಿ, ಸದ್ಯ ಅಶ್ವಿನಿ ಭಿಡೆ ಅವರ ಮಾರ್ಗದರ್ಶನದೊಂದಿಗೆ ಮುಂದೆ ಸಾಗುತ್ತಿದ್ದಾರೆ. ತಮ್ಮ ಸಹೋದರಿ ಪಲ್ಲವಿ ಜೋಶಿ ಜೊತೆಗೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಸಹೋದರಿಯರಿಬ್ಬರೂ ಪ್ರತಿಭಾವಂತರಾಗಿದ್ದು ಪಾರಂಪರಿಕ ಝುಮ್ರಾ, ತಿಲವಾಡ ತಾಳಗಳಲ್ಲಿ ರಾಗಗಳನ್ನು ಸುಂದರವಾಗಿ ಹಿಡಿದಿಡುತ್ತಾರೆ.

ಮಂಜೂಷಾ ಕುಲಕರ್ಣಿ ಪಾಟೀಲ್: ಆಗ್ರಾ-ಗ್ವಾಲಿಯರ್ ಘರಾಣೆಯ ಗಾಯಕಿ, ಮಂಜೂಷಾ. ಚಿಂಟುಬುವಾ ಮೈಸ್ಕರ್ ಹಾಗೂ ಡಿ.ವಿ. ಖಾನೆಬುವಾ ಅವರ ಬಳಿ, ಗುರು-ಶಿಷ್ಯ ಪರಂಪರೆಯಲ್ಲಿ ಹಲವಾರು ವರ್ಷ ಅಭ್ಯಾಸ ಮಾಡಿ, ಪ್ರಸ್ತುತ ಶ್ರೀ ವಿಕಾಸ ಕಶಾಲ್ಕರ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರ ಗಾಯನ, ಶಕ್ತಿಯುತವಾದ ಗಾಯನವೆಂದೇ ಗುರುತಿಸಲ್ಪಡುತ್ತದೆ. ಇವರ ಗಾಯನದಲ್ಲಿ ಲಯದ ಬಗೆಗಿನ ಆತ್ಮ ವಿಶ್ವಾಸ, ರಾಗಶುದ್ಧತೆ, ತಾನ್‍ಗಳ  ಸಂಕೀರ್ಣತೆ ಎದ್ದು ಕಾಣುತ್ತದೆ. ಉತ್ತಮವಾಗಿ ಮರಾಠಿ ನಾತ್ಯ ಗೀತೆಗಳನ್ನು, ಅಭಂಗಗಳನ್ನು ಹಾಡುತ್ತಾರೆ.

ಶಾಶ್ವತಿ ಮಂಡಲ್-ಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್, ಸಂಗೀತದ ಪ್ರಮುಖ ಘರಾಣೆಗಳಲ್ಲಿ ಒಂದಾದ ಗ್ವಾಲಿಯರ್ ಘರಾಣೆಯ ಜನ್ಮ ಭೂಮಿ. ಇಂಥಹ ಗ್ವಾಲಿಯರ್ ಹಾಗೂ ಅದರ ನೆರೆಯ ಭೋಪಾಲ್ ಶಾಶ್ವತಿಯ ಕರ್ಮಭೂಮಿ. ಶಾಶ್ವತಿ, ಆರಂಭದ ಶಿಕ್ಷಣವನ್ನು ತಮ್ಮ ತಾಯಿ ಕಮಲಾ ಮಂಡಲ್ ಬಳಿ ಪಡೆದರು. ನಂತರ, ಘರಾಣೆಯ ಹಿರಿಯ ಗಾಯಕರಾದ ಬಾಳಾ ಸಾಹೇಬ ಪೂಛ್‍ವಾಲೆ ಅವರ ಬಳಿ ಖ್ಯಾಲ್  ಹಾಗೂ ಟಪ್ಪಾ ಗಾಯಕಿಯ ಅಭ್ಯಾಸ ಮಾಡಿದರು. ಕೆಲವು ಕಾಲ ಗುಂಡೇಚಾ ಸಹೋದರರಿಂದಲೂ ಮಾರ್ಗದರ್ಶನ ಪಡೆದಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರು, ಟಪ್ಪಾ ಗಾಯನದಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ.

ಸಾವನಿ ಶೆಂಡೆ: ಪ್ರಸ್ತುತ ವೀಣಾ ಸಹಸ್ರಬುದ್ಧೆ ಅವರಿಂದ ಉನ್ನತ ಮಾರ್ಗದರ್ಶನ ಪಡೆಯುತ್ತಿರುವ ಸಾವನಿ ಜನಿಸಿದ್ದು ಸಂಗೀತಗಾರರ ಮನೆಯಲ್ಲೇ. ಇವರ ಅಜ್ಜಿ ಹಿರಿಯ ಖ್ಯಾಲ್ ಹಾಗೂ ಠುಮ್ರಿ ದಾದ್ರಾಗಳ ಗಾಯಕಿ, ಕುಸುಮ್ ಶೆಂಡೆ. ಸಾವನಿಯ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರೂ, ಅತ್ಯುತ್ತಮ ಗಾಯಕರು. ಹೀಗೆ ಎಳವೆಯಿಂದಲೇ ಆರಂಭಗೊಂಡ ಸಂಗೀತಾಭ್ಯಾಸ ಇಂದು ಆಕೆಯನ್ನು ಉತ್ತಮ ಕಲಾವಿದೆಯನ್ನಾಗಿ ಮಾಡಿದೆ. ಸಾವನಿ, ಹಲವಾರು ಮರಾಠಿ ಸಿನಿಮಾಗಳಿಗೆ ಕಂಠ ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವು, ಸಾವಲೀ, ಕೈರೀ ಇತ್ಯಾದಿ. ಜಸರಾಜ್ ಗೌರವ ಪುರಸ್ಕಾರ, ಮಾಣಿಕ್ ಭಿಡೆ ಪ್ರಶಸ್ತಿ, ಸುರಮಣಿ ಮುಂತಾದ ಹಲವು ಪುರಸ್ಕಾರ ಪಡೆದಿದ್ದಾರೆ.

ಮಂಜಿರಿ ಅಸಾನಾರೆ ಕೇಳ್ಕರ್: ಮರಾಠಿ ಭಾಷೆಯ ಹೆಸರಾಂತ ಲೇಖಕರಾದ ಪು.ಲಾ.ದೇಶಪಾಂಡೆ ಅವರು ಮಂಜಿರಿಯನ್ನು ‘ಭವಿಷ್ಯದ ಕೇಸರಿಬಾಯಿ’ ಎಂದು ಗುರುತಿಸಿದ್ದಾರೆ. ಇವರ ತಂದೆ ಆನಂದ ಕೇಳ್ಕರ್, ತಬಲಾ ವಾದಕರು. ಮಂಜಿರಿ ತಮ್ಮ ಸಂಗೀತದ ಆರಂಭವನ್ನು, ಜೈಪುರ್ ಅತ್ರೌಲಿ ಘರಾಣೆಯ ಬುರ್ಜಿ ಖಾನರ ಶಿಷ್ಯರಾದ ಪಂ.ಖಾನೆಟಕರ್ ಬುವಾ ಅವರ ಬಳಿ ಆರಂಭಿಸಿದರು. ಮುಂದೆ ಸಿ ಟಿ ಮೈಸ್ಕರ್ ಅವರ ಬಳಿ ಮುಂದುವರಿಸಿದರು. ಇಂದು ತಮ್ಮ ಯಾವುದೇ ರೀತಿಯ ಚಮತ್ಕಾರಗಳಿಲ್ಲದ, ಶುದ್ಧ ಸಂಗೀತದಿಂದ ಹೆಸರಾಗಿರುವ ಮಂಜಿರಿ, ಮೂಲತಃ ಉತ್ತಮ ಕಥಕ್ ನೃತ್ಯಗಾರ್ತಿ. ತಮ್ಮ ಗಾಯನದ ಮುಂದುವರಿಕೆಗಾಗಿ, ಜೈಪುರ್ ಘರಾಣೆಯ ಮೇರು ಕಲಾವಿದೆ, ಸ್ವರಶ್ರೀ ಕೇಸರಬಾಯಿ ಕೇರ್ಕರ್ ವಿದ್ಯಾರ್ಥಿ ವೇತನವನ್ನೂ ಪಡೆದಿದ್ದಾರೆ.

ಶೌನಕ್ ಅಭಿಶೇಕಿ: ಶೌನಕ್,  ಪಂ.ಜಿತೇಂದ್ರ ಅಭಿಶೇಕಿ ಅವರ ಮಗ ಹಾಗೂ ಶಿಷ್ಯ. ಆಗ್ರಾ-ಜೈಪುರ್ ಘರಾಣೆಯ ಗಾಯಕ. ತಮ್ಮ ತಂದೆಯ ರಚನೆಗಳನ್ನು ಆಧರಿಸಿದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ. ಸರಸ್ವತಿ ರಾಣೆ ಪುರಸ್ಕಾರ್, ಪುಣೆ ಕಿ ಆಶಾ ಇತ್ಯಾದಿ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ.

ಅನುರಾಧಾ ಕುಬೇರ್: ಇಂದು ಹೆಚ್ಚು ಪ್ರಸಿದ್ಧಿಯಲ್ಲಿ ಇಲ್ಲದ ‘ಬೆಂಡಿ ಬಜಾರ್ ಘರಾಣೆ’ಯ ಗಾಯಕಿ, ಅನುರಾಧಾ. ಶಾಂತವಾದ ರಾಗ ವಿಸ್ತಾರ, ಸ್ವರದೆಡೆಗಿನ ಪ್ರೀತಿಯಿಂದ ಕೇಳುಗರ  ಮನಸ್ಸನ್ನು ಗೆದ್ದಿದ್ದಾರೆ. ಸುಮಾರು 15 ವರ್ಷಗಳ ಕಾಲ, ಘರಾಣೆಯ ಪಂ. ಟಿ ಡಿ ಜನೋರಿಕರ್ ಬುವಾ ಬಳಿ ಉತ್ತಮವಾದ ತಾಲೀಮನ್ನು ಪಡೆದಿದ್ದಾರೆ. ಪ್ರಸ್ತುತ ಶ್ರೀ ಅರವಿಂದ ಥಟ್ಟೆ ಯವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಗಾಯಕಿ. ತಮ್ಮ ಘರಾಣೆಯ ಖಾಸ್ ಬಂದಿಷ್‍ಗಳನ್ನು ಸಮರ್ಥವಾಗಿ ಹಾಡಬಲ್ಲವರು, ಅನುರಾಧಾ.

ಜಯತೀರ್ಥ ಮೇವುಂಡಿ: ಕರ್ನಾಟಕದ ಹೆಸರನ್ನು ದೇಶಾದ್ಯಂತ ಮೆರೆಸುತ್ತಿರುವ  ಅಪರೂಪದ ಕಲಾವಿದ, ಮೇವುಂಡಿ. ಕಿರಾಣಾ ಸಂಪ್ರದಾಯದ ತಾಲೀಮು ಹಾಗೂ ತಮ್ಮ ಪ್ರತಿಭೆ ಎರಡರ ಅದ್ಭುತವಾದ ಪಾಕವನ್ನು ಪ್ರತೀ ಕಾರ್ಯಕ್ರಮದಲ್ಲೂ ಉಣಬಡಿಸುತ್ತಿದ್ದಾರೆ.  ಆರಂಭಿಕ ಶಿಕ್ಷಣವನ್ನು, ಗಾನಭಾನು ಎಂದೇ ಹೆಸರಾಗಿದ್ದ, ಕಿರಾಣಾ ಘರಾಣೆಯ ಪಂ. ಅರ್ಜುನ್‍ಸಾ ನಾಕೋಡ್ ಅವರ ಬಳಿ ಪಡೆದು, ಮುಂದೆ ಭೀಮಸೇನ್ ಜೋಶಿ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ್ ಅವರ ಶಿಷ್ಯತ್ವ ಮಾಡಿದರು. ಗಂಭೀರವಾದ ಅಲಾಪ್, ತಾನ್‍ಗ‍ಳ ಕುಸುರಿ ಕೆಲಸ, ಮಧುರವಾದ ಅಭಂಗ್‍ಗಳಿಂದ ಸಭೆ ಗೆಲ್ಲಬಲ್ಲವರು, ಮೇವುಂಡಿ. ಜಸರಾಜ್ ಪ್ರಶಸ್ತಿ, ಐ ಟಿ ಸಿ ನೀಡುವ ಗೌರವ, ಹೀಗೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಗೌರಿ ಪಠಾರೆ: ಮುಂಬೈ ನಿವಾಸಿಯಾಗಿರುವ ಗೌರಿ, ಆರಂಭಿಕ ಅಭ್ಯಾಸವನ್ನು ಪಂ. ಗಂಗಾಧರ ಪಿಂಪಳ್ಕರ್ ಅವರ ಬಳಿ ಮಾಡಿದ್ದಾರೆ. ಮುಂದೆ ಆರು ವರ್ಷಗಳ ಕಾಲ ಜಿತೇಂದ್ರ ಅಭಿಶೇಕಿ ಅವರಲ್ಲಿ ಅಭ್ಯಾಸ ಮಾಡಿ, ಪ್ರಸ್ತುತ 10-15 ವರ್ಷಗಳಿಂದ ಪುಣೆಯ ಪದ್ಮಾ ತಲವಾಲ್ಕರ್ ಅವರ ಬಳಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇವರ ಗಾಯನದ ಗತ್ತುಗಾರಿಕೆ, ಗಾಯನದಿಂದ ಸಭೆಯನ್ನು ತುಂಬುವ ರೀತಿ ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ರಾಮಕೃಷ್ಣ ಬುವಾ  ವಝೆ ಪ್ರಶಸ್ತಿಯೇ ಮೊದಲಾದ ಹಲವು ಗೌರವಗಳನ್ನು ಗೌರಿ ಪಡೆದಿದ್ದಾರೆ.

ಚೇತನಾ ಬನಾವತ್: ಕಿರಾಣಾ ಘರಾಣೆಯ ಹಿರಿಯ ಗಾಯಕಿ ಡಾ.ಪ್ರಭಾ ಅತ್ರೆಯವರ ಶಿಷ್ಯೆಯಾಗಿರುವ ಚೇತನಾ ಜನಿಸಿದ್ದು, ಉದಯಪುರದಲ್ಲಿ. ಆರಂಭಿಕ ಶಿಕ್ಷಣವನ್ನು ತಮ್ಮ ತಾಯಿ ಮದನಾ ಬನಾವತ್ರಿಂದ ಪಡೆದು, ನಂತರದಲ್ಲಿ ಪ್ರಭಾ ತಾಯಿಯ ಶಿಷ್ಯೆಯಾಗಿ ಇಂದು ದೇಶದೆಲ್ಲೆಡೆ ಹೆಸರಾಗಿದ್ದಾರೆ. ಪ್ರಭಾ ಅತ್ರೆಯವರು ರಚಿಸಿದ ಬಂದಿಷ್‍ಗಳು ಇರುವ ಸಿ.ಡಿಯಾದ ‘ಸ್ವರಾಂಗಿನಿ’ ಹಾಗೂ ‘ಸ್ವರಾಂಜಿನಿ’ ಗಳಲ್ಲಿ ಪ್ರಭಾ ತಾಯಿಯವರು, ಚೇತನಾ ಅವರಿಂದಲೇ ಹಾಡಿಸಿರುವುದು, ಅವರ ಪ್ರತಿಭೆಗೆ ನಿದರ್ಶನ. ಚೇತನಾ ಸಂಗೀತ ನಾಟಕ ಅಕಾಡೆಮಿಯ ಯುವ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ಸಾನಿಯಾ ಪಾಠನ್ಕರ್: ಜೈಪುರ್-ಅತ್ರೌಲಿ ಘರಾಣೆಯ ಮೇರು ಕಲಾವಿದೆಯಾದ ಅಶ್ವಿನಿ ಭಿಡೆ ದೇಶ್‍ಪಾ0ಡೆ ಅವರ ಶಿಷ್ಯೆಯಾದ ಸಾನಿಯಾ, ಸಿ.ಎಸ್ ಮುಗಿಸಿದ್ದಾರೆ. ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಸಾನಿಯಾ, ಭವಿಷ್ಯದಲ್ಲಿ ಹೆಸರಾಂತ ಉತ್ತಮ ಗಾಯಕಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾನಿಯಾ, ವಿಷ್ಣು ದಿಗಂಬರ ಪ್ರಶಸ್ತಿ, ಜಸರಾಜ್ ಪ್ರಶಸ್ತಿ, ರಾಮಕೃಷ್ಣ ಬುವಾವಝೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ರಿಯಾಲಿಟಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಠುಮ್ರಿ ದಾದ್ರಾಗಳನ್ನೂ ಸಮರ್ಥವಾಗಿ ಹಾಡ ಬಲ್ಲವರು.

ಶಶಾಂಕ್ ಮಕ್ತೇದಾರ್:  ಪ್ರಸ್ತುತ ಗೋವಾದ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶಶಾಂಕ್, ವಿದ್ವಜ್ಜನರ ಹಾಗೂ ಸಹೃದಯಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದ ಕಲಾವಿದರು. ತಂದೆ ಶಾಮರಾವ್ ಮಕ್ತೇದಾರ್ ರಿಂದ ಆರಂಭಿಕ ಶಿಕ್ಷಣ ಪಡೆದು, 1991ರಲ್ಲಿ ಐ ಟಿ ಸಿ ಸೇರಿ, ಉಲ್ಲಾಸ್ ಕಶಾಲ್ಕರ್ ಅವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದರು.  ತಮ್ಮ ಗುರುಗಳ ಗುರುಗಳಾದ ‘ಪಂ.ಗಜಾನನ ಬುವಾ ಜೋಶಿ ಅವರ ಸಾಂಗೀತಿಕ ಕೊಡುಗೆ’ ಎಂಬುದು ಅವರ  ಪಿಹೆಚ್‍ಡಿ ಅಧ್ಯಯನದ ವಿಷಯ.

ಕುಮಾರ್ ಮರಡೂರ್: ಪ್ರಸ್ತುತ ಕಲ್ಕತ್ತಾದ ಐ ಟಿ ಸಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ್, ಧಾರವಾಡದ ಮಣ್ಣಿನ ಮಗ. ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ಸಂಗೀತಾಸಕ್ತರ ಗಮನ ಸೆಳೆದವರು. ಕುಮಾರ್ ತಮ್ಮ ತಂದೆ ಪಂ.ಸೋಮನಾಥ ಮರಡೂರ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ. ಸವಾಯ್ ಗಂಧರ್ವ ಉತ್ಸವವೇ ಮೊದಲಾದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕುಮಾರ್ ತಬಲಾ ವಾದನವನ್ನೂ ಚೆನ್ನಾಗಿ ಬಲ್ಲವರು. ಇವರ ಕಂಠವು ಕಂಚಿನ ಗಟ್ಟಿತನ, ಗಂಭೀರತೆ ಗಳ ಜೊತೆಗೆ ಹೂವಿನ ಮೃದುತ್ವವನ್ನೂ ಹೊಂದಿದೆ.

ಆರತಿ ಠಾಕೂರ್ ಕುಂಡಲ್ಕರ್:  ಪುಣೆ ನಿವಾಸಿಯಾದ ಆರತಿ, ಭರವಸೆ ಮೂಡಿಸುತ್ತಿರುವ ಗಾಯಕಿ. ಡಾ.ಪ್ರಭಾ ಅತ್ರೆ ಅವರ ಶಿಷ್ಯೆ. ಕಿರಾಣಾ ಘರಾಣೆಯ ಪದ್ಧತಿಯಲ್ಲಿ ಕಲಿತ ಇವರು ಖ್ಯಾಲ್ ಜೊತೆಗೆ ಠುಮ್ರಿ, ದಾದ್ರಾಗಳನ್ನೂ ಹಾಡುತ್ತಾರೆ. ಇವರ ಪತಿ ಸುಯೋಗ್ ಕುಂಡಲ್ಕರ್, ಪ್ರತಿಭಾವಂತ ಯುವ ಹಾರ್ಮೋನಿಯಂ ವಾದಕ.

ಇವರಷ್ಟೇ ಅಲ್ಲದೇ ತುಶಾರ್ ದತ್ತ್, ಶಿವಾನಿ ಮಾರುಲ್ಕರ್, ರುಚಿರಾ ಕೇದಾರ್, ಗಾಯತ್ರಿ ವೈರಾಗ್ಯಕರ್, ಯಶಸ್ವಿ ಸಾಠೆ, ರಂಜನಿ ರಾಮಚಂದ್ರನ್, ಶೌನಕ್ ಚಟರ್ಜಿ ಮುಂತಾದವರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ.  ಇಲ್ಲಿ, ಯಾವುದೇ ಸಂಗೀತವು ‘ಆಧುನಿಕ’ ಎಂದು ಕರೆಯಲ್ಪಡುವುದು ಕೇವಲ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಅಲ್ಲ. ಯಾರೇ ಒಬ್ಬ ಸಂಗೀತಗಾರ ಪರಂಪರೆ ಹೇಳುವ ಶಿಸ್ತು, ನಿಯಮಗಳನ್ನು ಉಳಿಸಿಕೊಂಡೂ ಹೆಚ್ಚು ಸಂವೇದನಾ ಶೀಲವಾದ, ಹಾಗೆಯೇ ಹೆಚ್ಚು ಪ್ರಸ್ತುತವೆನಿಸುವ ಹೊಸತೊಂದನ್ನು ಕಂಡುಕೊಂಡಾಗ ಆತ ಮತ್ತೆ ಪ್ರಸ್ತುತನಾಗುತ್ತಾ ಹೋಗುತ್ತಾನೆ. ಹೀಗಾಗಿ ಆಧುನಿಕತೆ ಎನ್ನುವುದು ಮನೋಧರ್ಮಕ್ಕೆ ಸಂಬಂಧಿಸಿದ್ದು. ಹೀಗೆ ತನ್ನ ಬೇರನ್ನು ಭದ್ರವಾಗಿಟ್ಟುಕೊಂಡೇ, ಆಧುನಿಕತೆಯೆಡೆಗೆ ಸಾಗುತ್ತಿರುವ ಇವತ್ತಿನ ಸಂಗೀತದಲ್ಲಿ ಉಂಟಾಗಿರುವ ಕೆಲವು ಉತ್ತಮವಾದ, ನನಗೆ ಧನಾತ್ಮಕ ಎನಿಸಿದ ಮಾರ್ಪಾಟುಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇನೆ.

ನನಗನಿಸುವಂತೆ ಇಂದಿನ ಹಲವು ಗಾಯಕರಿಗೆ ‘ಬಂದಿಶ್’ ಬಗ್ಗೆ ಒಲವು ಹೆಚ್ಚುತ್ತಿದೆ. ಹಲವಾರು ಸಂದರ್ಭಗಳಲ್ಲಿ ಅಶ್ಲೀಲ, ಅಸಹ್ಯ ವೆನಿಸುವ ಅರ್ಥವನ್ನು ಕೊಡುವ ಹಳೆಯ ಬಂದಿಷ್‍ಗಳ ಬದಲಿಗೆ ಒಳ್ಳೆಯ ಅರ್ಥದ ಹೊಸ ಬಂದಿಷಗಳ ಹುಡುಕಾಟ ನಡೆಯುತ್ತಿದೆ. ಇದರಿಂದಾಗಿ ಪಾರಂಪರಿಕ ಬಂದಿಷ್‍ಗಳ ಜೊತೆ ಸೇರಿ ಹೋದ ಕುಮಾರಜಿ, ನಾತು ಬುವಾ, ರಾತಾಂಜನಕರ್, ರತ್ನಕಾಂತ್ ರಾಮನಾಥಕರ್ ಮುಂತಾದವರ ಬಂದಿಷ್‍ಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಿವೆ. ಇವುಗಳೊಂದಿಗೆ ಶಂಕರ ಅಭ್ಯಂಕರ್, ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ, ಪ್ರಭಾ ಅತ್ರೆ ಮೊದಲಾದವರ ಅನೇಕ ವಿಶಿಷ್ಟ ರಚನೆಗಳೂ ಪ್ರಸಿದ್ಧಿ ಪಡೆಯುತ್ತಿವೆ. ಹೊಸದಾದ ‘ಭಾವ ಸೌಂದರ್ಯವಾದ’ವನ್ನು ಪ್ರತಿಪಾದಿಸುವ ನಾರಾಯಣ ಪಂಡಿತರಂಥವರ ಬಂದಿಷ್‍ಗಳು ಸಂಗೀತದ ‘ಆಧುನಿಕತೆ’ಗೆ ಸಂದ ದೊಡ್ಡ ಕೊಡುಗೆ. ಯುವಪೀಳಿಗೆಯಲ್ಲಿ ಇಂಥಹ ಕಾರ್ಯ ಮುಂದುವರಿಸಿ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವವರು ಪುಣೆಯ ಯುವ ಹಾರ್ಮೋನಿಯಂ ವಾದಕ-ವಾಗ್ಗೇಯ ಕಾರರಾದ ಶ್ರೀ ಚೈತನ್ಯ ಕುಂಟೆ. ಇವರು ಹಲವಾರು ಬಂದಿಷ್‍ಗಳ ರಚನೆ ಮಾಡುವುದರೊಂದಿಗೆ, ಹಲವಾರು ವಿಚಾರಾಧಾರಿತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗಾಗಿ; ಮೆಘ್-ರಂಗ್, ಬಸಂತ್-ರಂಗ್, ನಾಯಿಕಾ ಭಾವ-ತರಂಗ್, ಭೈರವಿ ದರ್ಶನ್, ಸಾಜ್ ಠುಮರೀಚಾ ಇತ್ಯಾದಿ. ಕಥಕ್ ಹಾಗೂ ಭರತನಾಟ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿರುವ ಇವರು, ಟಪ್ಪಾ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದಾರೆ.

ಇಂದಿನ ಹೆಚ್ಚಿನ ಯುವ ಗಾಯಕರು ಸಂಗೀತದ ಕ್ಷೇತ್ರಕ್ಕೆ ಸಂಪೂರ್ಣ ಸಮರ್ಪಣೆ ಮಾಡಿಕೊಂಡಿದ್ದರೂ, ಉನ್ನತ ಮಟ್ಟದ ಔಪಚಾರಿಕ ಶಿಕ್ಷಣವನ್ನೂ ಪಡೆದವರಾಗಿದ್ದಾರೆ. ಸಾಹಿತ್ಯ, ಗಣಿತ, ವಿಜ್ಞಾನ ಹೀಗೆ ವಿಭಿನ್ನ ವಿಭಾಗದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದಿದ್ದು, ಈ ತಿಳುವಳಿಕೆಯಿಂದ ಅವರು ಸಂಗೀತವನ್ನು ನೋಡುವ ದೃಷ್ಟಿಯೂ ಬದಲಾಗುತ್ತಿರುವುದನ್ನು ಗುರುತಿಸಬಹುದಾಗಿದೆ. ತಮ್ಮ ಈ ಔಪಚಾರಿಕ ಶಿಕ್ಷಣದಿಂದ ಉತ್ತಮವಾದ ವಿಶ್ಲೇಷಣಾ ಶಕ್ತಿ ಹಾಗೂ ಘನತೆಯಿಂದ ಹಾಡುವುದು, ಬದುಕುವುದು ಇವುಗಳನ್ನು ಪಡೆದುಕೊಂಡಿದ್ದಾರೆ.

ಧ್ವನಿ ವರ್ಧಕ ಇಲ್ಲದ ಕಾಲದಲ್ಲಿ ರೂಪುಗೊಂಡ ‘ಜೋರ್‌ದಾರ್’ ಗಾಯನ ಅದರ ಕುರುಡು ಅನುಕರಣೆಯಿಂದ ಮುಂದಿನ ಪೀಳಿಗೆಗೂ ಸಾಗಿ ಬಂದದ್ದನ್ನು ಕಾಣುತ್ತೇವೆ. ಈ ಅಂಶ ಇಂದಿನ ಕಾಲದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಮೈಕ್ ಅನ್ನು ಬಳಸಿ ಸಂಗೀತದಲ್ಲಿ ಮಾಡಬಹುದಾದ ಬದಲಾವಣೆ, ಅದರಿಂದಾಗುವ ಉಪಯೋಗ ಇವೆಲ್ಲವನ್ನೂ ಅಭ್ಯಾಸ ಮಾಡಿ ಸ್ವರಸಂಸ್ಕಾರ (voice culture) ಕ್ಷೇತ್ರದಲ್ಲಿ ಮಹತ್ವಪೂರ್ಣವಾದ ಬದಲಾವಣೆಯನ್ನು ಮಾಡಲಾಗಿದೆ.

ಪುರುಷರು ಗುರುಗಳಾಗಿದ್ದಾಗ, ಅವರಿಂದ ಕಲಿಯುತ್ತಿದ್ದ ಸ್ತ್ರೀಯರ ಶಾರೀರ ತನ್ನ ಮೂಲ ಸ್ವರೂಪಕ್ಕೆ ಹೊರತಾದ, ಹೆಣ್ಣು ಕಂಠಕ್ಕೆ ಶೋಭಿಸದ ಗಮಕಗಳು, ತಾನ್‍ಗಳು ಇತ್ಯಾದಿಗಳನ್ನು ಅನುಕರಿಸುತ್ತದೆ. ಇವುಗಳನ್ನೆಲ್ಲಾ ಗುರುತಿಸಿ, ಪರಿಷ್ಕರಿಸಿ ‘ femininity’’ ಎಂಬ ಹೆಸರಿನಡಿ ಇಂದು ಗುರುತಿಸಲಾಗಿದೆ. ಹೆಚ್ಚಿನ ಗಮಕಗಳಿಂದ ಸ್ತ್ರೀಕಂಠದ ಮೇಲೆ ಬೀಳುವ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿಯೇ ಸ್ವರವನ್ನು ಕಳೆದುಕೊಳ್ಳುವುದು ತಪ್ಪುತ್ತದೆ ಎಂದೂ ಗುರುತಿಸಲಾಗಿದೆ.

ಇಂದಿನ ಮಲ್ಟಿಮೀಡಿಯ ಯುಗದಲ್ಲಿ ಹಿಂದಿನ ಉಸ್ತಾದ್, ಗವಾಯಿಗಳು ಮಾಡುತ್ತಿದ್ದ ಹಾವಾಭಿನಯಗಳ ಅಬ್ಬರ ಕಡಿಮೆಯಾಗಿ ಸೂಕ್ಷ್ಮತೆ ಜಾಗ ಪಡೆಯುತ್ತಿದೆ. ಶಾರೀರದ ಅದೇ ಬಾಗು ಬಳುಕುಗಳನ್ನು ಆಂಗಿಕ ಅಭಿನಯ, ಅಬ್ಬರಗಳಿಲ್ಲದೆ ನಯವಾಗಿ ಸಾಧಿಸುವ ಬಗೆ ಇಂದಿನ ಸಂಗೀತಗಾರರಲ್ಲಿ ಕಾಣುತ್ತದೆ. ಪಾರಂಪರಿಕ ಧೀಮಾ, ಏಕ್ತಾಲ್, ತ್ರಿತಾಲ್‍ಗಳೊಂದಿಗೆ ಇಂದಿನ ವೇಗದ ಯುಗದಲ್ಲಿ ಮಧ್ಯ ಲಯದ ಝಪ್ತಾಲ್, ರೂಪಕ್‍ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಮಧ್ಯಲಯದ ತಾಳಗಳಿಂದ ರಾಗನಿರೂಪಣೆಯಲ್ಲಿ ಚುಟುಕು ಹಾಗೂ ಚುರುಕುತನಗಳು ಬರುವುದರೊಂದಿಗೆ ರಾಗದ ಸಾರವನ್ನು ಸಂಗ್ರಹಿಸಿ ಸುಂದರವಾಗಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ಹಳೆ ಬೇರಿನಿಂದ ಚಿಗುರೊಡೆದ ಹೊಸ ಕವಲುಗಳು ಕೆಳಗೆ ಭದ್ರವಾಗಿ ಬೇರೂರಿಕೊಂಡೇ ಗಗನಗಾಮಿಯಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿ ಕಂಡುಬರುತ್ತದೆ. ಎಲ್ಲ ಸಂಗತಿಗಳ ಜೊತೆಗೆ ಕಲೆಯೂ ಒಂದು ‘ಮಾರಾಟದ ಸರಕಾಗಿ’ ಬಿಡುವ ಎಚ್ಚರದಲ್ಲೇ ಇವರು ಕಲೆಯ ಮೂಲಕ ತಮ್ಮತನದ ಹುಡುಕಾಟದ ಇಕ್ಕಟ್ಟಿನಲ್ಲಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಇವುಗಳ ನಡುವೆಯೇ ಪರಂಪರೆಯ ನೆಲಗಟ್ಟಿನೊಂದಿಗೆ ಬಹುಮಾಧ್ಯಮಗಳ ಸಾಧ್ಯತೆಗಳನ್ನು ದುಡಿಸಿಕೊಂಡು ಕಲೆಯನ್ನು ಹಲವು ಆಯಾಮಗಳಲ್ಲಿ ಯುವ ಗಾಯಕರು, ವಾದಕರು ಬೆಳೆಸುತ್ತಿದ್ದಾರೆ; ಕಾಲದ ಗತಿಯಲ್ಲಿ ದನಿಗೂಡಿಸುತ್ತಾ ನಡೆಯುತ್ತಿದ್ದಾರೆ.