Monthly Archives: March 2012

ವಕೀಲರನ್ನು, ಪತ್ರಕರ್ತರನ್ನು ಅನುಮಾನದಿಂದ ನೋಡುವಂತೆ ಮಾಡಿದವರ್ಯಾರು?

– ಶಿವರಾಮ್ ಕೆಳಗೋಟೆ

ವಕೀಲರ ಸಂಘದ ಕಾರ್ಯದರ್ಶಿ ಎ.ಪಿ ರಂಗನಾಥ್ ಸುವರ್ಣ ನ್ಯೂಸ್ ವಾಹಿನಿಯ ನೇರ ಪ್ರಸಾರದ ವಾರ್ತಾ ಸಂಚಿಕೆಯಲ್ಲಿ ಸಂಪಾದಕ ಹಮೀದ್ ಪಾಳ್ಯವರಲ್ಲಿ ಒಂದು ಮನವಿ ಮಾಡಿಕೊಂಡರು. ಪೊಲೀಸರು ಹಾಗೂ ಪತ್ರಕರ್ತರಿಂದ ವಕೀಲರ ಮೇಲೆ ನಡೆದ ಹಲ್ಲೆ, ಕೋರ್ಟ್ ಆವರಣದಲ್ಲಿ ನಡೆದ ದಾಂಧಲೆಯ ಸಿಡಿ ಕಳುಹಿಸುತ್ತೇನೆ ದಯವಿಟ್ಟು ಪ್ರಸಾರ ಮಾಡಿ ಎಂದರು. ಹಮೀದ್ ಪಾಳ್ಯ ಒಪ್ಪಲಿಲ್ಲ. ಅದೇ ಹೊತ್ತಿಗೆ ನ್ಯೂಸ್ ರೂಂ ನಿಂದ ಸ್ಟುಡಿಯೋದೊಂದಿಗೆ ಸಂಪರ್ಕದಲ್ಲಿದ್ದ ಅಜಿತ್ ಹನುಮಕ್ಕನವರ್ ‘ನಮಗೆ ಕೋರ್ಟ್ ಆವರಣದಲ್ಲಿ ಹೊಡೆದು ಕಳುಹಿಸಿದ ಮೇಲೆ, ನಿಮ್ಮ ಸುದ್ದಿ ಪ್ರಸಾರ ಮಾಡಬೇಕು ಎಂದು ನಿರೀಕ್ಷಿಸುವುದೇ ಹಾಸ್ಯಾಸ್ಪದ,’ಎನ್ನುತ್ತಾರೆ.

ಸುವರ್ಣ ನ್ಯೂಸ್ ಅಷ್ಟೇ ಅಲ್ಲ, ಯಾವ ಸುದ್ದಿ ವಾಹಿನಿಯೂ ವಕೀಲರ ಬಳಿ ಇರುವ ವಿಡಿಯೋ ಕ್ಲಿಪಿಂಗ್ ಗಳನ್ನು ಪ್ರಸಾರ ಮಾಡಲು ಒಪ್ಪಲಿಲ್ಲ.  ಎಲ್ಲಾ ಚಾನೆಲ್ ಮುಖ್ಯಸ್ಥರು ಕೊಡುವ ಸಮರ್ಥನೆ ‘ನಾವು ಅಲ್ಲಿರಲಿಲ್ಲ. ನಮ್ಮನ್ನು ಅಲ್ಲಿಂದ ಓಡಿಸಿದ್ದಿರಿ..’ ವಾದಕ್ಕೋಸ್ಕರ ಈ ವಾದವನ್ನು ಒಪ್ಪಿಕೊಳ್ಳೋಣ. ಹಾಗಾದರೆ, ಚಾನೆಲ್ ಪ್ರತಿನಿಧಿ ಖುದ್ದು ಹಾಜರಾಗದ ಯಾವ ಘಟನೆಯನ್ನೂ ಪ್ರಸಾರ ಮಾಡುವುದೇ ಇಲ್ಲವೆ? ಖುದ್ದು ವೀಕ್ಷಿಸದ ಯಾವ ಅನ್ಯಾಯವನ್ನು, ಗಲಭೆಯನ್ನೂ, ಕೊಲೆಯನ್ನೂ, ಭ್ರಷ್ಟಾಚಾರವನ್ನೂ ವರದಿ ಮಾಡುವುದೇ ಇಲ್ಲವೆ?

ಅಪರಾಧ ಕಾರ್ಯಕ್ರಮಗಳಲ್ಲಿ ಕೊಲೆಯನ್ನು ‘ಮರು ಸೃಷ್ಟಿ’ ಮಾಡುವ ಕಲೆ ನಿಮಗೆ ಗೊತ್ತು. ಆದರೆ, ಪೊಲೀಸರು ಬೆಂಕಿ ಹಚ್ಚಿ ವಾಹನಗಳನ್ನು ಸುಟ್ಟ ವಿಡಿಯೋಗಳು ಏಕೆ ಬೇಡ? ‘ಪೂರ್ವಗ್ರಹಿಗಳಾಗಿರಬೇಡಿ’ ಎಂಬುದು ನನ್ನನ್ನೂ ಸೇರಿದಂತೆ ಎಲ್ಲಾ ಪತ್ರಕರ್ತರಿಗೆ ಹಿರಿಯರು ಹೇಳಿ ಕೊಟ್ಟ ಮೊದಲ ಪಾಠ. ಆದರೆ ಈ ಹೊತ್ತಿನ ಚಾನೆಲ್, ಪತ್ರಿಕೆ ಮುನ್ನಡೆಸುತ್ತಿರುವ ಹಿರಿಯರಿಗೆ ಈ ಪಾಠ ಬೇಕಿಲ್ಲವೆ? ಏಕೆ ಇಷ್ಟೊಂದು ಹಠ?

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡುತ್ತ ‘ಮೊದಲು ಸಾರ್ವಜನಿಕರು ರಾಜಕಾರಣಿಗಳ ಬಗ್ಗೆ ಸದಾ ಅನುಮಾನದಿಂದ ಮಾತನಾಡುತ್ತಿದ್ದರು. ಆದರೆ ಈಗ ಪತ್ರಕರ್ತರು, ವಕೀಲರು ಮತ್ತು ಪೊಲೀಸರ ಬಗ್ಗೆಯೂ ಹಾಗೆಯೆ ಮಾತನಾಡುವಂತಾಗಿದೆ,’ ಎಂದರು. ಪೊಲೀಸರ ಬಗ್ಗೆ ಅನುಮಾನದಿಂದ ನೋಡುವ ಪರಿಪಾಟ ಬಹಳ ದಿನಗಳ ಹಿಂದಿನಿಂದಲೇ ಇದೆ. ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ಕಾಂಡೋಮ್ ಇಟ್ಟು ಅಮಾಯಕರನ್ನು ಬಂಧಿಸಿದ್ದ ಕೀರ್ತಿ ಇವರದು. ಅದಿರಲಿ. ಆದರೆ, ಪತ್ರಕರ್ತರು ಮತ್ತು ವಕೀಲರು ಸಾರ್ವಜನಿಕರ ದೃಷ್ಟಿಯಲ್ಲಿ ಹೀಗೇಕಾದರು?

ವಕೀಲರು:

ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡಿದ್ದ ಬಹುತೇಕರು ವಕೀಲರು. ಯಾರು ‍ಯಾಕೆ, ಮಹಾತ್ಮ ಗಾಂಧಿ ಮೂಲತಃ ವಕೀಲರು(ಹಾಗೆ ಪತ್ರಕರ್ತರು ಕೂಡ). ಆದರೆ ಈಗಿನ ಎಲ್ಲಾ ವಕೀಲರು ಹಿಂದಿನ ವಕೀಲರಂತೆ ಇಲ್ಲ. ಹಾಗೆ ಇರಲೂ ಸಾಧ್ಯವಿಲ್ಲ.

ಇತ್ತೀಚೆಗೆ ಒಂದು ಲಾ ಕಾಲೇಜಿನ ಪ್ರಾಧ್ಯಾಪಕರು ಖಾಸಗಿ ಮಾತಿನಲ್ಲಿ ಹಂಚಿಕೊಂಡಿದ್ದು ಈ ಹೊತ್ತಿನ ವಕೀಲರ ಸ್ಥಿತಿ, ಮನಸ್ಥಿತಿ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತದೆ. ಕರ್ನಾಟಕದಲ್ಲಿರುವ ಅನೇಕ ಅನುದಾನಿತ ಕಾನೂನು ಕಾಲೇಜುಗಳಿಗೆ ಪ್ರವೇಶ ಪಡೆಯುವವರ ಕೊರತೆ ಇದೆ. ಪ್ರವೇಶಾತಿ ಇಲ್ಲದಿದ್ದರೆ ಅನುದಾನಕ್ಕೆ ಕುತ್ತು ಬೀಳುವ ಆತಂಕದಲ್ಲಿರುವ ಸಂಸ್ಥೆಗಳು ಹೇಗಾದರೂ ಮಾಡಿ ಪ್ರತಿ ವರ್ಷ ಒಂದಿಷ್ಟು ವಿದ್ಯಾರ್ಥಿಗಳನ್ನು ಹುಡುಕಿ ಪ್ರವೇಶ ಕೊಡುತ್ತಾರೆ. ಅವರು ಕಟ್ಟುನಿಟ್ಟಾಗಿ ಕಾಲೇಜಿಗೆ ಬರದಿದ್ದರೂ ಕೇಳುವುದಿಲ್ಲ. ಹಾಜರಾತಿ ಕಡ್ಡಾಯವಿಲ್ಲ. ಪರೀಕ್ಷೆ ಮೌಲ್ಯಮಾಪನ ಶಿಸ್ತುಬದ್ಧವಾಗಿ ನಡೆಯುವುದಿಲ್ಲ. ಸಾಮಾನ್ಯವಾಗಿ ಇಂತಹ ಕಾಲೇಜುಗಳಿಗೆ ಪ್ರವೇಶ ಪಡೆಯುವವರು ಬೇರೆ ಯಾವ ಕೋರ್ಸ್‌ಗೂ ಸೇರಿಕೊಳ್ಳಲು ಅರ್ಹ ಅಂಕಗಳಿಲ್ಲದವರು. ಕೊನೆಗೆ ವಿಧಿ ಇಲ್ಲದೆ ಕಪ್ಪು ಕೋಟು ಹಾಕಿ ಕೋರ್ಟ್ ಪ್ರವೇಶಿಸುತ್ತಾರೆ.– ಇಂಥವರ ಸಂಖ್ಯೆ ಒಟ್ಟು ವಕೀಲರ ಸಂಖ್ಯೆಯಲ್ಲಿ ತೀರಾ ನಗಣ್ಯ. ಆದರೆ ಕಲ್ಲು ಎಸೆಯೋಕೆ, ಪತ್ರಕರ್ತಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿ ಇಡೀ ವಕೀಲ ಸಮುದಾಯದ ಗೌರವಕ್ಕೆ ಧಕ್ಕೆ ಉಂಟು ಮಾಡಲು ಅಷ್ಟುಸಂಖ್ಯೆ ಸಾಕು. ಇವರ ಕಾರಣ ರಾಜ್ಯದ ಎಲ್ಲಾ ವಕೀಲರನ್ನು ಅನುಮಾನದಿಂದ ನೋಡುವಂತಾಗಿದೆ.

ಪತ್ರಕರ್ತರು:

ವಕೀಲರಾದರೂ ಕನಿಷ್ಟ ಕಾನೂನು ಪದವಿ ಪಡೆದಿರಬೇಕು. ಆದರೆ ಪತ್ರಕರ್ತರಿಗೆ ಯಾವ ಪದವಿಯೂ ಕಡ್ಡಾಯವಲ್ಲ. ಸುದ್ದಿ ಗ್ರಹಿಸುವ ಕಲೆ ಗೊತ್ತಿದ್ದರೆ ಸಾಕು. (‘ಸುದ್ದಿ ಗ್ರಹಿಸುವ ಕಲೆ’ ಸಾಪೇಕ್ಷ. ಅದನ್ನು ಅಳೆಯಲು ಒಂದೊಂದು ಸಂಸ್ಥೆ, ಒಬ್ಬೊಬ್ಬ ಸಂಪಾದಕರ ಮಾನದಂಡ ಬೇರೆ ಬೇರೆ.) ಇತ್ತೀಚೆಗೆ ಪತ್ರಿಕೋದ್ಯಮ ಪ್ರವೇಶಿಸುತ್ತಿರುವ ಅನೇಕ ಯುವ ಪತ್ರಕರ್ತರಲ್ಲಿ ಹುಸಿ ಅಹಂ ಸಾಮಾನ್ಯವಾಗಿರುತ್ತದೆ. ‘ನಾವು ಪತ್ರಕರ್ತರು. ಎಲ್ಲಿಗೆ ಬೇಕಾದರೂ ಹೋಗಬಹುದು, ಯಾರನ್ನು ಬೇಕಾದರೂ ಯಾವ ಪ್ರಶ್ನೆ ಬೇಕಾದರೂಕೇಳಬಹುದು’ – ಎಂಬುದನ್ನೇ ತಮ್ಮ ಹಕ್ಕು ಎಂದುಕೊಂಡವರಂತೆ ವರ್ತಿಸುತ್ತಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಗೂಂಡಾಗಿರಿಗೂ ಇಳಿಯುವ ಸಾಹಸ ಮಾಡುತ್ತಾರೆ. ಲಜ್ಜೆ ಬಿಟ್ಟು ಸಾರ್ವಜನಿಕವಾಗಿ ತಮ್ಮ‘ಅಂಗ’ ಪ್ರದರ್ಶನಕ್ಕಿಳಿಯುತ್ತಾರೆ. ಇಂಥವರ ಸಂಖ್ಯೆ ಸಹಜವಾಗಿಯೇ ಸಭ್ಯ ಪತ್ರಕರ್ತರಿಗಿಂತ ಕಡಿಮೆಯೇ. ಆದರೆ ಇಡೀ ಮಾಧ್ಯಮ ಕ್ಷೇತ್ರದ ಬೆಂಬಲ ಗಿಟ್ಟಿಸುವಷ್ಟು ಸಾಮರ್ಥ್ಯ ಅವರಿಗಿದೆ. ಪ್ರಿಂಟ್  ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಎಲ್ಲಾ ಮುಖ್ಯಸ್ಥರು ಒಗ್ಗೂಡಿ ‘ಪತ್ರಕರ್ತರಿಗೆ ನ್ಯಾಯ’ ಕೊಡಿಸಲು ಹೋರಾಡುವಂತೆ ಪ್ರೇರೇಪಿಸುತ್ತಾರೆ. ಹಾಗೆಯೇ ಸಾರ್ವಜನಿಕವಾಗಿ ಪತ್ರಕರ್ತರ ಬಗ್ಗೆ ಕೀಳು ಭಾವನೆ ಮೂಡಿಸುವಲ್ಲಿ ಯಶಸ್ವಿ ಯಾಗುತ್ತಾರೆ.

Deccan Herald - Mining Payments

Deccan Herald - Mining Payments

ಇವರೆಲ್ಲರ ಹೊರತಾಗಿ ಮತ್ತೆ ಕೆಲವರಿದ್ದಾರೆ. ಅವರು ವೃತ್ತಿಯಲ್ಲಿ ಅಗ್ರಗಣ್ಯರು. ಸುಳ್ಳು ದಾಖಲೆ ಕೊಟ್ಟು ಜಿ-ಕೆಟಗರಿ ಸೈಟು ಕೊಳ್ಳುವವರು, ಗಣಿ ಕಪ್ಪ ಪಡೆದು ನಾಚಿಕೆ ಇಲ್ಲದೆ ಸ್ಟುಡಿಯೋದಲ್ಲಿ ನ್ಯಾಯ ನೀತಿ ಅಂತ ಕಾರ್ಯಕ್ರಮ ಮಾಡೋರು, ಸುದ್ದಿಗೆ ಬೆಲೆ ಕಟ್ಟಿ ವೃತ್ತಿ ಘನತೆಯನ್ನು ವ್ಯಾಪಾರಕ್ಕಿಟ್ಟವರು, ತಮ್ಮ ಜಾತಿ ಮತ್ತು ಪಂಥಗಳಿಗಾಗಿ ಸುದ್ದಿಯ ಸ್ಟೇಸ್ ಅನ್ನು ಮಾರಿಕೊಂಡವರು– ಇವರೆಲ್ಲರೂ ಇವತ್ತಿನ ಈ ಸ್ಥಿತಿಗೆ ಕಾರಣ.

ಎಲ್ಲಾ ಸುದ್ದಿಸಂಸ್ಥೆಗಳ ಸಂಪಾದಕರು ಬೀದಿಗಿಳಿದು ‘ಹಲ್ಲೆ ಮಾಡಿದ ವಕೀಲರನ್ನು ಬಂಧಿಸಿ’ ಎಂದು ಒತ್ತಾಯ ಮಾಡಿದರೂ ಪೊಲೀಸ ವ್ಯವಸ್ಥೆ ಏಕೆ ಜಪ್ಪಯ್ಯ ಎನ್ನುತ್ತಿಲ್ಲ ಎನ್ನುವುದಕ್ಕೆ ಕಾರಣವೇನೆಂದರೆ ಪ್ರತಿಭಟನೆ ನೇತೃತ್ವ ವಹಿಸಿರುವ ಅನೇಕರು ನೈತಿಕತೆ ಉಳಿಸಿಕೊಂಡಿಲ್ಲ. ಹಾಗಾಗಿ ಅವರ ಮಾತಿಗೆ ಬೆಲೆ ಇಲ್ಲ. ಹಿಂದೆ ದಾಳಿಕೋರರನ್ನು ಬಂಧಿಸಿ ಎಂದು ನಾಲ್ಕು ಸಾಲು ಸಂಪಾದಕೀಯ ಬರೆದರೂ ಸಾಕಿತ್ತು. ಅದರ ಪರಿಣಾಮ ಮಾರನೆಯ ದಿನವೇ ಕಾಣುತ್ತಿತ್ತು.

ಮುಖ್ಯವಾಗಿ ಈಗ ಆಗಬೇಕಿರುವುದು ದುಷ್ಟರನ್ನು ದೂರ ಇಡುವುದು. ಅವರು ಎಲ್ಲಿಯೇ ಇರಲಿ. ವೃತ್ತಿ ಘನತೆಗೆ ಕುಂದುಂಟುಮಾಡುವವರು ಯಾವ ವೃತ್ತಿಯಲ್ಲೂ ಇರಬಾರದು. ಏನಂತೀರಿ?

ಫೋಟೊ: www.daijiworld.com

ಗೋಹತ್ಯಾ ನಿಷೇಧ ಕಾನೂನು ಹಾಗೂ ವೋಟ್ ಬ್ಯಾಂಕ್ ರಾಜಕೀಯ

-ಆನಂದ ಪ್ರಸಾದ್

ಗೋವನ್ನು ಪವಿತ್ರವೆಂದೂ, ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆಂದೂ ಹೇಳಿ ಹಿಂದೂಗಳಲ್ಲಿ ಒಗ್ಗಟ್ಟು ತರಲು ಗೋವಿನ ವಿಷಯವನ್ನು ಹಿಂದುತ್ವವಾದಿಗಳು ಬಳಸುತ್ತಾ ಬಂದಿದ್ದಾರೆ. ಹೀಗಾಗಿ ಗೋಹತ್ಯೆ ನಿಷೇಧ ಕಾನೂನು ತರುವುದು ಒಂದು ದೊಡ್ಡ ರಾಷ್ಟ್ರಸೇವೆ ಹಾಗೂ ಹಿಂದೂಗಳ ಕಲ್ಯಾಣದ ಮಹತ್ವದ ಹೆಜ್ಜೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಗೋಹತ್ಯಾ ಕಾಯಿದೆಗೆ ತಿದ್ದುಪಡಿ ತಂದು ವಯಸ್ಸಾದ ದನಗಳು, ಕೃಷಿಕರಿಗೆ ಸಾಕಲಾಗದ ಗಂಡು ಕರುಗಳು ಇವುಗಳನ್ನು ಹತ್ಯೆಯ ಉದ್ದೇಶಕ್ಕೆ ಮಾರಲಾಗದಂತೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನೀತಿಯಿಂದ ರೈತರಿಗೆ ಹೊರೆಯಾಗಲಿದೆ. ಬಿಜೆಪಿ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಕಾನೂನಾದರೆ ಕೃಷಿಕರು ವಯಸ್ಸಾದ ದನಗಳನ್ನು ಹಾಗೂ ಗಂಡು ಕರುಗಳನ್ನು ಸಾಕಬೇಕು ಇಲ್ಲವೇ ಇವುಗಳನ್ನು ಗೋ ಆಶ್ರಮಕ್ಕೆ ಸೇರಿಸಬೇಕು ಹಾಗೂ ಅದರ ಸಾಗಣೆ ವೆಚ್ಚ, ಅದನ್ನು ಸಾಕುವ ವೆಚ್ಚವನ್ನು ರೈತರೇ ಭರಿಸಬೇಕೆಂದು ಹೇಳಲಾಗುತ್ತಿದೆ.

ಇಂಥ ಕಾನೂನು ಬಂದರೆ ರೈತರು ತಮ್ಮ ವಯಸ್ಸಾದ ದನಗಳನ್ನು ಹಾಗೂ ಗಂಡು ಕರುಗಳನ್ನು ರಸ್ತೆಯಲ್ಲಿ ಬಿಟ್ಟು ಬರುವ ಪ್ರವೃತ್ತಿ ಬೆಳೆದರೂ ಅಚ್ಚರಿ ಇಲ್ಲ. ಇಂಥ ದನಗಳು ಕಂಡ ಕಂಡವರ ಗದ್ದೆ, ತೋಟಗಳಿಗೆ ನುಗ್ಗಿ ದೊಡ್ಡ ತೊಂದರೆಯೂ ಉಂಟಾಗಬಹುದು. ಈ ಕಾನೂನು ಜಾರಿಯಾದರೆ ಹೈನುಗಾರಿಕೆಯ ವೆಚ್ಚ ಹೆಚ್ಚಲಿದ್ದು ಹಾಲಿನ ದರ ಇನ್ನಷ್ಟು ಹೆಚ್ಚಾಗಬಹುದು. ಏಕೆಂದರೆ ಈ ಕಾನೂನು ಜಾರಿಯಾದರೆ ಕರು ಹಾಕದ ವಯಸ್ಸಾದ ದನಗಳು ಹಾಗೂ ಕೃಷಿಕರು ಸಾಕಲು ಅಸಾಧ್ಯವಾದ ಗಂಡು ಕರುಗಳನ್ನು ಅವು ಸಾಯುವವರೆಗೆ ಒಂದೋ ಕೃಷಿಕರು ಅಥವಾ ಗೋ ಆಶ್ರಮದವರು ಸಾಕಬೇಕಿರುವುದರಿಂದ ಮೇವಿಗೆ ಬೇಡಿಕೆ ಹೆಚ್ಚಿ ಮೇವಿನ ಬೆಲೆ ಹೆಚ್ಚಳವಾಗುತ್ತದೆ. ಮೇವಿನ ಬೆಲೆ ಹೆಚ್ಚಿದಂತೆ ಹಾಲಿನ ಬೆಲೆ ಹೆಚ್ಚಲೇಬೇಕು. ಇಲ್ಲದಿದ್ದರೆ ರೈತರು ಹೈನುಗಾರಿಕೆಯನ್ನು ಮುಂದುವರಿಸುವುದು ಸಾಧ್ಯವಿಲ್ಲ. ಈಗ ಕೃಷಿಕರು ಹೈನುಗಾರಿಕೆಯಲ್ಲಿ ವರ್ಷಕ್ಕೊಂದು ಕರುವನ್ನು ಪಡೆಯುತ್ತಿರುವುದರಿಂದ ಇವುಗಳನ್ನು ಸಾಯುವವರೆಗೆ ಸಾಕಲೇಬೇಕಿರುವುದರಿಂದ ದನಕರುಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಆಗಬಹುದು. ಈ ಹೆಚ್ಚಳದ ಪರಿಣಾಮ ಹಾಲಿನ ಎಲ್ಲ ಬಳಕೆದಾರರ ಮೇಲೆ ಬೀಳಲಿದೆ ಹಾಗೂ ಹಾಲಿನ ಬೆಲೆ ಹೆಚ್ಚಳವನ್ನು ಎಲ್ಲರೂ ಭರಿಸಲೇಬೇಕಾಗುತ್ತದೆ. ಇದು ಹಿಂದೂ ವೋಟ್ ಬ್ಯಾಂಕ್ ರಾಜಕೀಯಕ್ಕೆ ಎಲ್ಲ ಹಿಂದೂಗಳೂ ತೆರಬೇಕಾದ ಬೆಲೆಯಾಗಿದೆ.

ಈಗ ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ ಹಾಗೂ ಇದು ಹೀಗೆ ಮುಂದುವರಿದರೆ ದನಗಳ ಸಂತತಿ ವಿನಾಶವಾಗಲಿದೆ ಎಂಬ ಗುಲ್ಲನ್ನು ಹಿಂದುತ್ವವಾದಿಗಳು ಎಬ್ಬಿಸಿದ್ದಾರೆ. ಈ ವಿಷಯದಲ್ಲಿ ಎಳ್ಳಷ್ಟೂ ಹುರುಳಿಲ್ಲ. ದನಗಳು ಎಲ್ಲಿಯವರೆಗೆ ಹಾಲು ಕೊಡುತ್ತಿರುತ್ತವೆಯೋ ಅಲ್ಲಿಯವರೆಗೆ ಅವನ್ನು ಯಾವ ಕೃಷಿಕರೂ ಹತ್ಯೆಗಾಗಿ ಮಾರುವುದಿಲ್ಲ. ದನಗಳು ವಯಸ್ಸಾದ ನಂತರವಷ್ಟೇ ಅವನ್ನು ಸಾಕಲಾರದೆ ಕೃಷಿಕರು ಮಾರುತ್ತಾರೆ. ಹೀಗಾಗಿ ದನಗಳ ಸಂತತಿ ವಿನಾಶವಾಗುವ ಅಪಾಯ ಇಲ್ಲವೇ ಇಲ್ಲ. ಈಗ ಆಧುನಿಕ ವಿಧಾನಗಳಿಂದ ವರ್ಷಕ್ಕೊಂದು ಕರುವನ್ನು ಪಡೆಯುತ್ತಿರುವುದರಿಂದ ದನಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿರುವ ಸಾಧ್ಯತೆ ಇಲ್ಲ. ಗೋಹತ್ಯೆ ನಿಷೇಧ ಎಂಬುದು ರಾಜಕೀಯದ ಹಿಂದೂ ವೋಟ್ ಬ್ಯಾಂಕ್ ಅವಶ್ಯಕತೆಯೇ ಹೊರತು ದನಗಳ ಸಂತತಿ ಉಳಿಸುವ ಉದ್ದೇಶದಿಂದ ರೂಪುಗೊಂಡಿರುವುದು ಖಂಡಿತ ಅಲ್ಲ. ಇದು ವೋಟ್ ಬ್ಯಾಂಕ್ ವಿಷಯವಾದುದರಿಂದ ಇದನ್ನು ವಿರೋಧಿಸಲು ಯಾವುದೇ ರಾಜಕೀಯ ಪಕ್ಷವೂ ಹಿಂಜರಿಯುವ ಸನ್ನಿವೇಶ ನಿರ್ಮಾಣವಾಗಿದೆ. ಅಂಥ ಸನ್ನಿವೇಶವನ್ನು ಹಿಂದುತ್ವವಾದಿಗಳು ರೂಪಿಸಿದ್ದು ಇದರ ಹೊರೆಯನ್ನು ಹಿಂದೂ ರೈತರೇ ಹೊರುವಂತೆ ಮಾಡಿರುವುದು ವಿಪರ್ಯಾಸ.

ಹಿಂದೂ ಧರ್ಮದಲ್ಲಿರುವ ಮೇಲು ಕೀಳು ಎಂಬ ತಾರತಮ್ಯವನ್ನು ಹಾಗೇ ಉಳಿಸಿಕೊಂಡು ಎಲ್ಲ ಹಿಂದೂಗಳಲ್ಲೂ ಒಗ್ಗಟ್ಟನ್ನು ರೂಪಿಸಲು ಮತ್ತು ಆ ಒಗ್ಗಟ್ಟೇ ವೋಟ್ ಬ್ಯಾಂಕ್ ಆಗಿ ರೂಪುಗೊಳ್ಳಲು ಹಿಂದುತ್ವವಾದಿಗಳು, ಪ್ರತಿಗಾಮಿಗಳು ಬಳಸುವ ಈ ಚಾಣಾಕ್ಷ್ಯ ಉಪಾಯದ ಅರಿವು ಹಿಂದೂಗಳಲ್ಲಿ ಬಹುತೇಕರಿಗೆ ಇಲ್ಲ ಅಥವಾ ಇದ್ದರೂ ದನಕ್ಕೆ ದೇವರ ಸ್ಥಾನವನ್ನು ಆರೋಪಿಸಿರುವುದರಿಂದ ಅಂಥ ಚಿಂತನೆಗಳೂ ಅವರಿಗೆ ಒಪ್ಪಿಗೆಯಾಗುವುದಿಲ್ಲ. ಹೀಗಾಗಿ ಗೋ ಹತ್ಯೆ ನಿಷೇಧ, ಮತಾಂತರ ಹೆಸರಿನಲ್ಲಿ ಬೇರೆ ಧರ್ಮಗಳ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವಂತೆ ಯೋಜನೆ ರೂಪಿಸುವುದು ಹಿಂದೂ ವೋಟ್ ಬ್ಯಾಂಕ್ ರಾಜಕೀಯವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ಹಿಂದುತ್ವವಾದಿಗಳು ನಿರಂತರವಾಗಿ ಚುನಾವಣೆಗಳಲ್ಲಿ ಗೆಲ್ಲಲು ಕಾರಣವಾಗಿದೆ. ಇದಕ್ಕೆ ಹಿಂದುಗಳಲ್ಲಿ ಇರುವ ಅರಿವಿನ ಕೊರತೆಯೇ ಕಾರಣವಾಗಿದೆ. ಇದನ್ನು ಹಿಂದೂಗಳಿಗೆ ತಿಳಿಸಿ ಹೇಳುವ ಪ್ರಯತ್ನ ಮಾಧ್ಯಮಗಳಿಂದ ನಡೆಯುತ್ತಿಲ್ಲ.

ಗೋವಿನ ಮೂತ್ರ ಸರ್ವರೋಗ ಪರಿಹಾರಕ ಎಂಬ ಮೂಢನಂಬಿಕೆಯನ್ನೂ ಇದರ ಜೊತೆಗೆ ಭಿತ್ತಿ ಬೆಳೆಯಲಾಗುತ್ತಿದೆ. ಗೋ ಮೂತ್ರ ಕುಡಿಯುವುದರಿಂದ ಕ್ಯಾನ್ಸರಿನಂಥ ಮಾರಕ ಕಾಯಿಲೆಯನ್ನೂ ಗುಣಪಡಿಸಬಹುದು ಎಂದು ಪ್ರಚಾರ ಮಾಡಲಾಗುತ್ತಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹಾಗಿದ್ದರೂ ಇಂಥ ಪ್ರಚಾರಕ್ಕೆ ಮರುಳಾಗುವ ಹಿಂದೂಗಳಿಗೆ ಕೊರತೆಯಿಲ್ಲ. ಇದನ್ನೆಲ್ಲಾ ನೋಡುವಾಗ ಬಹುತೇಕ ಹಿಂದೂಗಳ ಮೆದುಳಿನಲ್ಲಿ ಯೋಚನೆ ಮಾಡುವ ಭಾಗ ಸರಿಯಾಗಿ ಬೆಳವಣಿಗೆ ಆಗಿಲ್ಲವೆನೋ ಎಂಬ ಅನುಮಾನ ಮೂಡುತ್ತದೆ. ನಾವು ಯಾವ ಅಂಗವನ್ನು ಹೆಚ್ಚು ಉಪಯೋಗ ಮಾಡುತ್ತೇವೆಯೋ ಆ ಅಂಗ ಬೆಳವಣಿಗೆಯಾಗುವುದು ನಿಸರ್ಗ ನಿಯಮ. ನಿಸರ್ಗದಲ್ಲಿ ಸಾವಿರಾರು ವರ್ಷಗಳ ಹಿಂದೆ ನಾಲ್ಕು ಕಾಲಿನಲ್ಲಿ ನಡೆಯುತ್ತಿದ್ದ ಪ್ರಾಣಿಗಳು ಎರಡು ಕಾಲಿನಲ್ಲಿ ನಡೆಯಲು ಶುರು ಮಾಡಿ ಇನ್ನುಳಿದ ಎರಡು ಕಾಲುಗಳನ್ನು ಬೇರೆ ಕೆಲಸಗಳಿಗೆ ತೊಡಗಿಸಿದ್ದು ವಾನರ ಪ್ರಾಣಿಯ ಉಗಮಕ್ಕೆ ಕಾರಣವಾಯಿತು. ಈ ವಾನರ ಪ್ರಾಣಿಯೇ ವಿಕಾಸವಾಗಿ ಇಂದಿನ ಮಾನವನಾಗಿದ್ದಾನೆ. ಇದು ಒಂದು ಅಂಗದ ಬೆಳವಣಿಗೆಗೆ ಅದನ್ನು ಹೆಚ್ಚು ಹೆಚ್ಚು ಉಪಯೋಗ ಮಾಡುವುದರ ಮಹತ್ವವನ್ನು ಹೇಳುತ್ತದೆ. ಪಾಶ್ಚಾತ್ಯರು ಮೆದುಳನ್ನು ಹೆಚ್ಚು ಹೆಚ್ಚು ಬಳಸಿ ಹೊಸ ಹೊಸ ಅವಿಷ್ಕಾರಗಳನ್ನು ಮಾಡಿ ಮುಂದುವರಿಯುತ್ತಿದ್ದಾರೆ ನಾವು ಮಾತ್ರ ಹಿಂದುತ್ವದ ಹೆಸರಿನಲ್ಲಿ ಯೋಚನೆ ಮಾಡುವುದನ್ನೇ ನಿಲ್ಲಿಸಿ ಹಿಂದೂಗಳ ಮೆದುಳು ಹೊಸ ಅನ್ವೇಷಣೆಗಳನ್ನು, ಹೊಸ ಚಿಂತನೆಗಳನ್ನು ಮಾಡಲಾರದ ಜಡ್ಡುಗಟ್ಟಿದ ಸ್ಥಿತಿಗೆ ತಲುಪಿರುವಂತೆ ಕಾಣುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ತನ್ನ #*$% ತೋರಿಸುತ್ತಿರುವ ಈ “ವರದಿಗಾರ” ಯಾರು?

-ಶಿವರಾಮ್

ಈ ವೀಡಿಯೋ ಒಮ್ಮೆ ನೋಡಿ, ನಿಮ್ಮೊಳಗೆ ಅಸಹ್ಯ ಹುಟ್ಟುತ್ತದೆ. ಪತ್ರಕರ್ತರಾಗಿದ್ದಲ್ಲಿ ತಲೆತಗ್ಗಿಸಬೇಕೆನಿಸುತ್ತದೆ. ಸುದ್ದಿ ವಾಹಿನಿಯ ಲೋಗೋವನ್ನು ಬಲಗೈಯಲ್ಲಿ ಹಿಡಿದು ವರದಿಗಾರನೊಬ್ಬ ವಕೀಲ ವೃಂದಕ್ಕೆ ತನ್ನ  #*$%ವನ್ನು ತೋರಿಸಲು ಯತ್ನಿಸುತ್ತಿರುವ ತೀರಾ ಮುಜುಗರ ಹುಟ್ಟಿಸುವ ದೃಶ್ಯವಿದು. ಈ ದೃಶ್ಯವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ವಕೀಲರ ಪ್ರಕಾರ, ಮಾರ್ಚ್ ಎರಡರಂದು ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳಿಗೆ ಇದು ಮೂಲ ಕಾರಣ.

ಈ ಅಸಹ್ಯಕರ ದೃಶ್ಯದಲ್ಲಿ ಹಿಂದುಗಡೆ ಅನೇಕ ಕೆಮರಾಗಳಿವೆ, ಮತ್ತು ಅವು ಸುಸ್ಥಿತಿಯಲ್ಲಿವೆ. ಅದರರ್ಥ ಈ ದೃಶ್ಯದ ನಂತರವಷ್ಟೆ ಪರ್ತಕರ್ತರ ಮೇಲೆ ಹಲ್ಲೆಗಳಾದವು. ‘ಅಲ್ಲಿ ಪತ್ರಕರ್ತರ ಮೇಲೆ ನಡೆದದ್ದು ಅಪ್ರಚೋದಿತ ಹಲ್ಲೆ’ ಎಂದು ಪದೇ ಪದೇ ಹೇಳುತ್ತಿರುವ ದೃಶ್ಯ ಮಾಧ್ಯಮಗಳ ವರದಿಗಾರರು, ಸಂಪಾದಕರು ಈಗಲಾದರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರತಿ ದಿನ ಪತ್ರಕರ್ತರ ಮೇಲೆ ದಾಳಿ ಮಾಡಿದ ವಕೀಲರ ಮುಖಗಳನ್ನು ತೋರಿಸಿ, ‘ಇವರನ್ನು ಇನ್ನೂ ಏಕೆ ಬಂಧಿಸಿಲ್ಲ?’ ಎಂದು ಪ್ರಶ್ನೆ ಕೇಳುವ ಸುದ್ದಿ ವಾಹಿನಿಗಳ ಸಂಪಾದಕರೆ, ಈ ದೃಶ್ಯದಲ್ಲಿರುವ ವರದಿಗಾರ ಮತ್ತು ಅವನ ಜೊತೆಯಲ್ಲಿರುವವರು ಯಾರು? ಅವರನ್ನು ಗುರುತಿಸಲು ನಿಮಗೇಕೆ ಸಾಧ್ಯವಾಗಿಲ್ಲ? “ವಕೀಲರ ಸಂಘ ‘ಗೂಂಡಾ ವಕೀಲರನ್ನು’ ಗುರುತಿಸಲಿ, ಅವರನ್ನು ಶಿಕ್ಷಿಸಲಿ,” ಎಂದು ಕೇಳುವ ಸುದ್ದಿ ವಾಹಿನಿಯವರು, ನಿಮ್ಮೊಳಗಿರುವ ಇಂಥವರನ್ನು (ಗೂಂಡಾ ಎನ್ನಬೇಕೊ, ಪುಂಡ ಎನ್ನಬೇಕೋ ತಿಳಿಯುತ್ತಿಲ್ಲ) ನೀವೇಕೆ ಸರಿದಾರಿಗೆ ತರುವುದಿಲ್ಲ?

ಸರಕಾರ ಈ ಘಟನೆ ಬಗ್ಗೆ ಆರ್.ಕೆ. ದತ್ತಾ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದೆ. ತನಿಖೆ ವೇಳೆ ಇಂತಹ ವೀಡಿಯೋಗಳನ್ನೂ ಪರಿಶೀಲಿಸಬಹುದು.

ಮರ್ಯಾದೆ ಹತ್ಯೆ ಮತ್ತು ಅಂತರ್ಜಾತಿ ವಿವಾಹ

-ಡಾ.ಎಸ್.ಬಿ.ಜೋಗುರ

ಮರ್ಯಾದೆ ಹತ್ಯೆಯ ಬೇರುಗಳ ಹುಡುಕಾಟ…

ಜಾಗತೀಕರಣದ ಸಂದರ್ಭದಲ್ಲಿಯೂ ಜಾತಿ ಪದ್ಧತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆಯೇ? ಎಂಬ ಪ್ರಶ್ನೆಯ ಉತ್ತರ ಒಂದೇ ದಿಕ್ಕಿನತ್ತ, ಎಲ್ಲರೂ ಒಪ್ಪಬಹುದಾದ ರೀತಿಯಲ್ಲಿ ಸಾಧ್ಯವಿಲ್ಲ. ರಾಜಕೀಯ ರಂಗದಲ್ಲಿ ನಿಂತು ಈ ಪ್ರಶ್ನೆಗೆ ಉತ್ತರಿಸುವಾಗ ಸಾಧ್ಯವಾಗಬಹುದಾದ ಸಾರೂಪ್ಯ ಸಂಗತಿಗಳು ಸಾಮಾಜಿಕ, ಆರ್ಥಿಕ ಸಾಂಸ್ಕೃತಿಕ ವಲಯದಲ್ಲಿ ನಿಂತು ಅರ್ಥೈಸುವಾಗ, ಉತ್ತರಿಸುವಾಗ ವಿಭಿನ್ನವಾದ ವಿವರಣೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ. ಸುಮಾರು ಐದಾರು ದಶಕಗಳ ಹಿಂದೆ ಆಧುನಿಕ ಶಿಕ್ಷಣ ಪಡೆದ ಭಾರತೀಯರು ಮುಂದೊಂದು ದಿನ ಬಲಾಢ್ಯ ಪ್ರಜಾಸತತ್ತೆಯ ಹಿನ್ನೆಲೆಯಲ್ಲಿ ಭಾರತದ ಸಾಂಪ್ರದಾಯಿಕ ಜಾತಿ ಎನ್ನುವ ಸಂಸ್ಥೆ ಮಂಕಾಗಬಹುದು ಎಂದು ನುಡಿದ ಭವಿಷ್ಯ ಸುಳ್ಳಾಗಿದೆ. 1957 ರ ಸಂದರ್ಭದಲ್ಲಿ ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್. ಶ್ರೀನಿವಾಸ ಅವರು “ಆಧುನಿಕ ಸಂದರ್ಭದಲ್ಲಿ ಜಾತಿಯ ಒಂದು ಹೊಸ ಬಗೆಯ ಸ್ಥಿತ್ಯಂತರಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ,”  ಎಂದದ್ದು ಮಾತ್ರ ಹುಸಿ ಹೋಗಲಿಲ್ಲ. ಜಾತಿ ಪದ್ಧತಿಯು ತನ್ನ ಪೊರೆ ಕಳಚಿಕೊಳ್ಳುವ ಪ್ರಯತ್ನ ಮಾಡಿರುವುದಿದೆಯೇ ಹೊರತು ಬದಲಾವಣೆ ಹೊಂದಿರುವುದು ತೀರಾ ಕಡಿಮೆ. ಶ್ರೀನಿವಾಸರ ಮಾತಿನ ತಾತ್ಪರ್ಯವೂ ಇದೇ ಆಗಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜಾತಿ ಎನ್ನುವದು ಒಂದು ಪದ್ಧತಿಯಾಗಿ, ಭಾರತೀಯ ಸಮಾಜದ ಒಂದು ಅತ್ಯಂತ ನಿರ್ಣಾಯಕ ಸಂಸ್ಥೆಯಾಗಿತ್ತು. ಈಗಿನಂತೆ ಅದು ಆಗ ರಾಜಕೀಯ ಚಟುವಟಿಕೆಗಳ ಮೂಗುದಾರವಾಗಿರುವ ಬಗ್ಗೆ ಚಾರಿತ್ರಿಕವಾಗಿ ಚರ್ಚಿತವಾದ ಉಲ್ಲೇಖಗಳು ತೀರಾ ಕಡಿಮೆ. ಅದೇನಿದ್ದರೂ ಮಡಿ-ಮೈಲಿಗೆ, ಆಚರಣೆ, ಸಾಮಾಜಿಕ ಸಂಪರ್ಕ, ದೇವಸ್ಥಾನಗಳ ಪ್ರವೇಶ, ಭೌತಿಕ ಸಾಮಿಪ್ಯ, ಭೋಜನ ಇಂಥವುಗಳ ಸುತ್ತಲೇ ಅದು ಹೆಚ್ಚೆಚ್ಚು ಕೇಂದ್ರೀ ಕೃತವಾಗಿರುವುದಿತ್ತು.  ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭದಲ್ಲಿ ಪಾರಂಪರಿಕ ಜಾತಿಯಾಧಾರಿತ ಉದ್ಯೋಗಗಳ ಪ್ರಭಾವ ಕಳೆಗುಂದುತ್ತಾ ಬಂದು ಉದ್ಯೋಗದ ಮುಕ್ತ ಆಯ್ಕೆಗೆ ಅವಕಾಶ ಸಾಧ್ಯವಾಯಿತು. ಪರಿಣಾಮವಾಗಿ ಮೇಲ್ಜಾತಿಯ ಜನರು ಕೂಡಾ ಪಾದರಕ್ಷೆಗಳ ಅಂಗಡಿಯನ್ನು ನಿರ್ವಹಿಸುವಂತಾದರು. ಕುಂಬಾರನ ಮಗ ಕುಂಬಾರ, ಕಂಬಾರನ ಮಗ ಕಂಬಾರ, ಸಿಂಪಿಗನ ಮಗ ಸಿಂಪಿಗ ಹೀಗೆ ಅಪಾರ ಸಾಮರ್ಥ್ಯವಿರುವವರೂ ಜಾತಿಯಾಧಾರಿತ ಉದ್ಯೋಗದ ಪಾರಂಪರಿಕ ಸಂಕೋಲೆಗಳಿಗೆ ಸಿಲುಕಬೇಕಿತ್ತು. ಆಧುನಿಕ ಶಿಕ್ಷಣ ಪಡೆದವರು ಈ ಬಗೆಯ ಸಂಕೋಲೆಗಳನ್ನು ಹರಿದೊಗೆದರು. ಜಾತಿಯಾಧಾರಿತ ಉದ್ಯೋಗ ಇಂದಿನ ಸಂಕೀರ್ಣ ಶ್ರಮ ವಿಭಜನೆಯ ಸಂದರ್ಭದಲ್ಲಂತೂ ಅದು ಸಾಧ್ಯವೂ ಇಲ್ಲ ಸಾಧ್ಯವೂ ಅಲ್ಲ. ಹಾಗೆಯೇ ಉತ್ತರ ಭಾರತದ ಬದಿಗಿದ್ದ ಕಚ್ಚಾ ಆಹಾರ ಹಾಗೂ ಪಕ್ಕಾ ಆಹಾರದ ಪರಿಪಾಠಗಳೂ ಈಗ ಇಲ್ಲ.  (ಕಚ್ಚಾ ಆಹಾರ ನೀರಿನಲ್ಲಿ ತಯಾರಿಸುವ ಆಹಾರ, ಪಕ್ಕಾ ಆಹಾರ ತುಪ್ಪದಲ್ಲಿ ತಯಾರಿಸುವ ಆಹಾರ.)  ಕಚ್ಚಾ ಆಹಾರ ಕೆಳಜಾತಿಗಳು ಹಾಗೂ ಪಕ್ಕಾ ಆಹಾರವನ್ನು ಮೇಲ್ ಜಾತಿಗಳು ಸೇವಿಸಬೇಕು ಎನ್ನುವ ಜಾತಿಯ ನಿರ್ಬಂಧಗಳೂ ಈಗಿಲ್ಲ. ಈ ಬಗೆಯ ಹತ್ತು ಹಲವಾರು ಸಾಮಾಜಿಕ ಧಾರ್ಮಿಕ ದೌರ್ಬಲ್ಯಗಳನ್ನು ಜಾತಿ ಕಳೆದುಕೊಂಡಿದೆಯಾದರೂ ಅದಿನ್ನೂ ಒಂದು ಮುಚ್ಚಿದ ವ್ಯವಸ್ಥೆಯಾಗಿಯೇ ಉಳಿದಿರುವುದು ಈ ಶತಮಾನದ ಬಹುದೊಡ್ಡ ವಿಪರ್ಯಾಸ..!

ಕೇವಲ ಉದ್ಯೋಗದ ಸ್ವಾತಂತ್ರ್ಯ ಆಯ್ಕೆ ಮಾತ್ರವಲ್ಲ ಊಟೋಪಚಾರ, ಸಾಮಾಜಿಕ ಸಂಪರ್ಕ, ಧಾರ್ಮಿಕ ದೌರ್ಬಲ್ಯ, ಸಹಭೋಜನ ಮುಂತಾದ ಸಂಗತಿಗಳಲ್ಲಿ ತಕ್ಕ ಮಟ್ಟಿಗಿನ ಬದಲಾವಣೆಗಳಾಗಿವೆ. (ಹೀಗೆ ಹೇಳುವಾಗ ಮಡೆಸ್ನಾನದಂತಹ ಅನಿಷ್ಟ ಪದ್ಧತಿ ನೆನಪಾಗದೇ ಇರದು.)  ಈ ಊಟೋಪಚಾರ ಹಾಗೂ ಸಾಮಾಜಿಕ ಸಂಪರ್ಕಗಳಲ್ಲಾದ ಬದಲಾವಣೆಯ ವೇಗ ವಿವಾಹ ಎನ್ನುವ ಸಂಸ್ಥೆಯಲ್ಲಿ ಆಗಲಿಲ್ಲ ಎನ್ನುವದು ಅಷ್ಟೇ ಸತ್ಯ. ಜಾತಿಯ ಪ್ರಭಾವಳಿಯನ್ನು ಸಂಪೋಷಿಸಿಕೊಂಡು ಬಂದ ಒಂದು ಪ್ರಮುಖ ಸಂಸ್ಥೆಯಾಗಿ ವಿವಾಹದ ಅಸ್ಥಿತ್ವವಿದೆ.  ಮೂಲತ: ಒಂದು ಒಳಬಾಂಧವ್ಯ ವಿವಾಹ ಸಮೂಹವಾದ ಜಾತಿಪದ್ಧತಿ ಹೊರಬಾಂಧವ್ಯವನ್ನು ಸಹಿಸುವುದಿಲ್ಲ. ರಾಜಕೀಯ ವಲಯವನ್ನು ಮೀರಿಯೂ ಜಾತಿ ತನ್ನ ಗಡುಸುತನವನ್ನು ವಿವಾಹ ಸಂಸ್ಥೆಯಲ್ಲಿ ಕಾಪಾಡಿಕೊಂಡಿದೆ. ಇಂದಿಗೂ ವಧು-ವರರ ಅನ್ವೇಷಣೆಯಲ್ಲಿ ತನ್ನ ಉಪಜಾತಿಯನ್ನು ಕೋಟ್ ಮಾಡಿಯೇ ತಮಗೊಂದು ಕನ್ಯೆ, ವರ ಬೇಕಾಗಿದೆ ಎಂದು ಹೇಳುವುದಿದೆ. 19ನೇ ಶತಮಾನದ ಅಂತ್ಯದವರೆಗೆ ಹಾಗೂ 20ನೇ ಶತಮಾನದ ಆದಿ ಭಾಗದವರೆಗೆ ಜಾತಿಯ ನಿಯಮಗಳನ್ನು ಧಿಕ್ಕರಿಸಿ ಮದುವೆಯಾಗುವುದು ಅತ್ಯಂತ ದುಸ್ಸಾಹಸವಾಗಿತ್ತು. ಹೀಗಿರುವಾಗ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವಿಸಿದ ಕಿರಿಕಿರಿ ಹೇಗಿರಬೇಡ. 19 ಹಾಗೂ 20ನೇ ಶತಮಾನದಲ್ಲಿ ಅಂತರ್ಜಾತಿಯ ಮದುವೆಯಾದವರನ್ನು ಜಾತಿಯಿಂದಲೇ ಬಹಿಷ್ಕರಿಸುವುದಿತ್ತು ಇಲ್ಲವೇ ಊರಿಂದ ಹೊರಹಾಕುವುದಿತ್ತು.  ಕೆಲ ಬಾರಿ ಈಗ ನಾವು ಓದುವ , ಕೇಳುವ ಮರ್ಯಾದೆ ಹತ್ಯೆಗಳೂ ಜರುಗುತ್ತಿದ್ದವೆಂದೇ ಅರ್ಥ.

ಸಾಮಾಜಿಕ ರಚನೆಯಲ್ಲಾಗುವ ಬದಲಾವಣೆಗಳು ಅದು ಒಳಗೊಂಡಿರುವ ಸಂಘ-ಸಂಸ್ಥೆಗಳಲ್ಲಿಯೂ ಬದಲಾವಣೆಯನ್ನು ತರುವುದಿದೆ. ಹೀಗಾಗಿ ಜಾತಿಪದ್ಧತಿ ಮತ್ತು ವಿವಾಹ ಎನ್ನುವ ಸಂಸ್ಥೆ ಈ ಬದಲಾವಣೆಯಿಂದ ತಪ್ಪಿಸಿಕೊಳ್ಳಲಾಗದು. ಇಂದು ಇಂಟರ್ನೆಟ್ ಮೂಲಕ ಸಂಗಾತಿಗಳನ್ನು ಅರಿಸುವಷ್ಟು ನಾವು ಬದಲಾಗಿದ್ದೇವೆ. ಅದೇ ವೇಳೆಗೆ ಈಗೀಗ ಅಂತರ್ಜಾತಿಯ ವಿವಾಹಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಧ್ಯಮ ವರ್ಗದ ಜನರು ಮಾತ್ರ ಇವತ್ತಿಗೂ ಗುರು-ಹಿರಿಯರ ಸಮ್ಮುಖದ ಸಾಂಪ್ರದಾಯಿಕ ಮದುವೆಗಳನ್ನೇ ಇಷ್ಟಪಡುವುದಿದೆ. ವಿವಾಹ ಸಂಸ್ಥೆಯಲ್ಲಿಯ ಬದಲಾವಣೆಗಳಿಗೆ ಸಾಕ್ಷಿಯಾಗಿ ಪತ್ರಿಕೆಗಳಲ್ಲಿ ಬರುವ ವೈವಾಹಿಕ ಅಂಕಣಗಳ ಜಾಹೀರಾತುಗಗಳಿವೆ. ಸಂಗಾತಿಗಳ ಆಯ್ಕೆಯ ವಿಷಯದಲ್ಲಿ ಅಲ್ಲಿ ಸಾಕಷ್ಟು ಸಡಿಲತೆಗಳಿವೆ. ಹಿಂದೆ ಲಿಂಗಾಯಿತನೊಬ್ಬ ವಿವಾಹ ಸಂದರ್ಭದಲ್ಲಿ ತನ್ನದೇ ಉಪಜಾತಿಯಲ್ಲಿ ಮದುವೆಯಾಗಬೇಕಿತ್ತು. ಉದಾಹರಣೆಗೆ ಒಬ್ಬ ಪಂಚಮಸಾಲಿ, ಬಣಜಿಗ, ಗಾಣಿಕ ಯುವಕ ಅದೇ ಜಾತಿಯ ಕನ್ಯೆಯನ್ನು ಮದುವೆಯಾಗಬೇಕಿತ್ತು. ಈಗ ಹಾಗಿಲ್ಲ.  ಕನ್ಯಾನ್ವೇಷಣೆಯ ಸಂದರ್ಭದಲ್ಲಿಯೇ ಬಣಜಿಗ, ಗಾಣಿಗ, ಸಾದರ ಹೀಗೆ ಒಟ್ಟಿನಲ್ಲಿ ಯಾವುದೇ ಲಿಂಗಾಯಿತ ಉಪಜಾತಿಯಾದರೆ ಆಯಿತು ಅನ್ನುವಷ್ಟು ಧಾರಾಳತೆ ಈಗ ಮೂಡಿದೆ. ಇದು ಜಾತಿಯಂಥ ಗಡುಸಾದ ವ್ಯವಸ್ಥೆಯಲ್ಲಿ ಒಂದು ಮಹತ್ತರವಾದ ಬದಲಾವಣೆಯು ಹೌದು.

ಒಳಬಾಂಧವ್ಯ, ಅನುಲೋಮ ವಿವಾಹ  [ಮೇಲ್ಜಾತಿಯ ವರ ಕೆಳಜಾತಿಯ ಕನ್ಯೆ]  ಹಾಗೂ ಪ್ರತಿಲೋಮ ವಿವಾಹ  [ಕೆಳಜಾತಿಯ ವರ ಮೇಲ್ಜಾತಿಯ ಕನ್ಯೆ]  ಈ ಬಗೆಯ ವಿವಾಹಗಳಿಗೆ ಸಂಬಂಧಿಸಿ ಜಾತಿಯಲ್ಲಿ ಅದರದೇಯಾದ ಕೆಲವು ನಿರ್ಬಂಧಗಳಿದ್ದವು. ಈಗಲೂ ಕೂಡಾ ಕೆಲ ಸಮುದಾಯಗಳಲ್ಲಿ ಈ ಬಗೆಯ ಅನುಲೋಮ ಮತ್ತು ಪ್ರತಿಲೋಮ ವಿವಾಹಗಳು ಅಂತರ್ಜಾತಿಯ ವಿವಾಹ ಪದ್ಧತಿಯ ಸ್ವರೂಪದಲ್ಲಿ ಅಸ್ಥಿತ್ವದಲ್ಲಿವೆ. ಆದರೆ ಅವು ಎದುರಿಸಬಹುದಾದ ಒತ್ತಡ ಮತ್ತು ಪರಿಣಾಮಗಳು ಎಲ್ಲ ಸಮುದಾಯ ಮತ್ತು ರಾಜ್ಯಗಳಲ್ಲಿ ಒಂದೇ ತೆರನಾಗಿಲ್ಲ. ಇವತ್ತಿಗೂ ಕೆಲ ಸಮುದಾಯಗಳು ಜಾತಿಯ ನಿರ್ದೇಶನದಂತೆಯೇ ಜೀವನ ವಿಧಾನವನ್ನು ರೂಪಿಸಿಕೊಂಡಿರುವುದಿದೆ. ಜಾತಿಗೆ ವಿರುದ್ಧವಾದ ತೀರಾ ಸಣ್ಣ ಪ್ರಮಾಣದ ಪ್ರತಿರೋಧಗಳು ಕೂಡಾ ಮರ್ಯಾದೆಯ ಹತ್ಯೆಯಲ್ಲಿ ಮುಕ್ತಾಯವಾಗುವುದಿದೆ. ಬಹಳಷ್ಟು ಮರ್ಯಾದೆಯ ಹತ್ಯೆಯಲ್ಲಿ ಜಾತಿ ಒಂದು ಪ್ರಮುಖ ಕಾರಣವಾಗಿ ಕೆಲಸ ಮಾಡಿರುವುದಿದೆ. ಅದರಲ್ಲೂ ಪ್ರಬಲ ಜಾತಿಗಳ ಆರ್ಭಟವೇ ಹೆಚ್ಚು. ಕೆಳ ಜಾತಿಯ ಹುಡುಗ ಇಲ್ಲವೇ ಹುಡುಗಿ ಮೇಲ್ಜಾತಿಯ ಹುಡುಗ ಇಲ್ಲವೇ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ಎಲ್ಲ ಬಗೆಯ ರಿಸ್ಕ್ ಗಳಿಗೂ ತಯಾರಿರಬೇಕು ಎನ್ನುವಂತಹ ಆಹ್ವಾನವನ್ನು ಈ ಜಾತಿಪದ್ಧತಿ ನೀಡುವುದಿದೆ. ಇದನ್ನು ಇತ್ಯಾತ್ಮಕ ಬದಲಾವಣೆ ಅನ್ನಬೇಕೋ ಇಲ್ಲವೇ ನಿಷೇಧಾತ್ಮಕ ಬದಲಾವಣೆ ಅನ್ನಬೇಕೋ ಎನ್ನುವುದೇ ತಿಳಿಯದಾಗಿದೆ. ಪ್ರತಿಗಾಮಿಗಳಿಗೆ ಇದು ಇತ್ಯಾತ್ಮಕವೇ ಹೌದು. ಆದರೆ ಪ್ರಗತಿಗಾಮಿಗಳಿಗಲ್ಲ.

(ಚಿತ್ರಕೃಪೆ: ವಿಕಿಮೀಡಿಯ)

ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ


-ಬಿ. ಶ್ರೀಪಾದ ಭಟ್


 

“ನೀನು ಶ್ರೇಷ್ಟನಾಗುವುದು ಮಹಾತ್ವಾಕಾಂಕ್ಷೆಯಿದ್ದಾಗ. ಅದರೆ ಅದರ ಜೊತೆಗೆ ಬರುವ ಖಾಯಿಲೆಗಳಿಂದ ಮುಕ್ತನಾದಾಗ. ಮಾಡುವ ಕೆಲಸಗಳು ಪವಿತ್ರವಾಗಿರಬೇಕೆಂದು ಅರಿವಾದಾಗ.” – ಲೇಡಿ ಮ್ಯಾಕ್ ಬೆತ್ ( ಅನು.:ರಾಮಚಂದ್ರ ದೇವ )

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಸೌಂದರ್ಯ ಅವನ/ಅವಳ ದೈಹಿಕ ಅಂದದ ಮೂಲಕ ಅಳೆಯುತ್ತೇವೆ. ಅಥವ ಅಳೆಯಲ್ಪಡುತ್ತದೆ. ಅವರ ಬಣ್ಣ, ಎತ್ತರ, ಕಣ್ಣು, ಮೂಗು, ತೂಕ, ಹೀಗೆ ಅನೇಕ ಸಂಗತಿಗಳು ಗಣನೆಗೆ ಒಳಪಡುತ್ತವೆ .ಈ ಬಾಹ್ಯ ಸೌಂದರ್ಯ ಹೆಚ್ಚಾಗಿ ಆಕರ್ಷಣೆಗೆ ಪರಿಗಣಿತವಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಜನಪ್ರಿಯ ವ್ಯಕ್ತಿಗಳಾದ ಅನೇಕ ಸಿನಿಮಾ ನಟ/ನಟಿಯರು, ಆಟಗಾರರು, ಅಥ್ಲೀಟ್ ಗಳು ,ರಾಜಕಾರಣಿಗಳು ಅಥವಾ ನಾವು ದಿನ ನಿತ್ಯ ಮುಖಾಮುಖಿಯಾಗುವ ವ್ಯಕ್ತಿಗಳು, ಹೀಗೆ ಈ ಬಾಹ್ಯ ಸೌಂದರ್ಯದ ಆಕರ್ಷಣೆಗೆ, ಮನಸೋಲುವಿಕೆಗೆ ಅನೇಕ ಮಜಲುಗಳಿವೆ .ಇದು ಸಹಜವಾದದ್ದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ವ್ಯಕ್ತಿಯೊಬ್ಬನ ದೈಹಿಕ ಸೌಂದರ್ಯವನ್ನು ಮೀರಿ, ದೈಹಿಕ ಆಕರ್ಷಣೆಯ ಕೊರತೆಯಿದ್ದರೂ, ತಮ್ಮ ಅನೇಕ ದೈಹಿಕ ನೂನ್ಯತೆಗಳ ನಡುವೆಯೂ ತನ್ನ ಕಾರ್ಯಕ್ಷೇತ್ರದಲ್ಲಿನ ಸಾಧನೆಯಿಂದ ಅವನು/ಅವಳು ಆಕರ್ಷಕವಾಗಿ ಕಂಗೊಳಿಸುವುದು ನಿಜಕ್ಕೂ ವಿಶೇಷವೆನಿಸುತ್ತದೆ.

ಇತ್ತೀಚೆಗೆ “ಪಾನ್ ಸಿಂಗ್ ಟೋಮರ್” ಎನ್ನುವ ಹಿಂದಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಇರ್ಫ಼ಾನ್ ಖಾನ್ ಅತ್ಯಂತ ಸಾಧಾರಣ ರೂಪಿನ ನಟ. ಹತ್ತರಲ್ಲೊಬ್ಬ. ಆದರೆ ತನ್ನ ಶ್ರೇಷ್ಟ ನಟನೆಯ ಮೂಲಕ, ಆ ಚಿತ್ರದ ಗೆಲುವಿನ ಮೂಲಕ, ಇಂದು ಆಕರ್ಷಕ ನಟನಾಗಿ ಮೇಲೇರುತ್ತಿದ್ದಾನೆ. ಇದೇ ಮಾತು ನಾಸಿರುದ್ದೀನ್ ಶಾ ಹಾಗೂ ಓಂಪುರಿ ಅವರಂತಹ ಸಾಧಾರಣ ರೂಪಿನ ಶ್ರೇಷ್ಟ ನಟರಿಗೂ ಅನ್ವಯಿಸುತ್ತದೆ. ಇದೇ ಮಾತು ಸ್ಮಿತಾ ಪಾಟೀಲ್‌ಳಂತಹ ಅದ್ಭುತ ನಟಿಗೆ ಕೂಡ ಅನ್ವಯಿಸುತ್ತದೆ. ಸುಂದರಿಯರಾದ, ಮಾದಕ ರೂಪಿನ ಶ್ರೀದೇವಿ. ಜಯಪ್ರದ ಅವರಿಗಿಂತಲೂ ಕಪ್ಪಗಿನ ಅನಾಕರ್ಷಕ ರೂಪಿನ ಸ್ಮಿತಾ ಪಾಟೀಲ್, ಶಬನ ಅಜ್ಮಿ‌ರಂತಹ ಅದ್ಭುತ ನಟಿಯರು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸಿನ ರಾಣಿಯರಾಗಿದ್ದರು. ಇದಕ್ಕೆ ಕಾರಣ ಅವರ ಮನೋಜ್ನ ಅಭಿನಯದ ಸೌಂದರ್ಯ. ಅವರ ಬುದ್ಧಿಜೀವಿ ವ್ಯಕ್ತಿತ್ವ. ಇದೇ ಮಾತು ನಮ್ಮ ಪಿ.ಟಿ.ಉಷಾ ಎನ್ನುವ ಅದ್ಭುತ ಆಟಗಾರ್ತಿ ಬಗೆಗೂ ನಿಜ. ನೋಡಲಿಕ್ಕೆ ಕಪ್ಪಗೆ, ತೆಳ್ಳಗೆ, ಅತ್ಯಂತ ಸಾಧಾರಣ ರೂಪಿನ ಹುಡುಗಿಯಾಗಿದ್ದ ಈ ಪಿ.ಟಿ.ಉಷಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಗೆಲ್ಲತೊಡಗಿದಾಗ ಅವಳ ವ್ಯಕ್ತಿತ್ವವೇ ಆಕರ್ಷಕವಾಗಿ ಕಂಗೊಳಿಸತೊಡಗಿತು. ಅವಳ ಕಪ್ಪಗಿನ ಸಾಧಾರಣ ರೂಪ ನೇಪಥ್ಯಕ್ಕೆ ಸರೆಯಿತು.

ತನ್ನ ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ದೇಹದಿಂದ ಅನಾಕರ್ಷಕವಾಗಿ ಕಂಡುಬರುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ “ಅಖಿಲೇಶ್ ಸಿಂಗ್ ಯಾದವ್” ತಾನು ಹಗಲಿರುಳೂ ದುಡಿದು ,ಹಾದಿ ತಪ್ಪಿದ, ಸೋತಿದ್ದ ಸಮಾಜವಾದಿ ಪಕ್ಷವನ್ನು ತಳಮಟ್ಟದಿಂದ ,ಕಾರ್ಯಕರ್ತರ ಮೂಲಕ ಮರಳಿ ಅಖಾಡಕ್ಕೆ ಕರೆತಂದು 2012ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸುವಂತೆ ಮಾಡಿ ಮತ್ತೆ ಅಧಿಕಾರವನ್ನು ತಂದು ಕೊಟ್ಟಿದ್ದಾನೆ. ಈ ಮೂಲಕ ಸಮಾಜವಾದಿ ಪಕ್ಷದ ಗೆಲುವಿನ ರೂವಾರಿಯಾಗಿದ್ದಾನೆ. ಇನ್ನು ಮುಂದಿನ ಒಂದು ತಿಂಗಳು ಈ ಅಖಿಲೇಶ ಯಾದವ್ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಈ ಅಖಿಲೇಶ್ ತನ್ನ ಈ ಸ್ವಯಾರ್ಜಿತ ಗೆಲುವಿನ ಮೂಲಕ ಸಹಜವಾಗಿಯೇ ಆಕರ್ಷಕವಾಗಿ ಕಾಣತೊಡಗಿದ್ದಾನೆ. ಮೇಲ್ಕಾಣಿಸಿದ ಆತನ ಸಾಧಾರಣ ರೂಪ ಇಂದು ಅಸಾಧಾರಣವಾಗಿಯೂ, ಸುಂದರವಾಗಿಯೂ ಕಾಣಲ್ಪಡತೊಡಗುತ್ತದೆ. ಎಲ್ಲರೂ ಈ ಅಖಿಲೇಶ್ ಯಾದವ್‌ನಲ್ಲಿ ನಾಯಕನ ರೂಪು ಕಾಣತೊಡಗಿದ್ದಾರೆ.ಇದೇ ಗೆಲುವಿನ ಗಮ್ಮತ್ತು. ಆದೇ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ದೈಹಿಕವಾಗಿ ಆಕರ್ಷಕವಾಗಿದ್ದ, ಕಣ್ಣು, ಮೂಗು, ಬಣ್ಣ, ಎತ್ತರ, ಧ್ವನಿ ಮುಂತಾದವುಗಳೆನ್ನೆಲ್ಲಾ ಸಮರೂಪವಾಗಿ ಪಡೆದಿದ್ದ, ತನ್ನ 42ರ ವಯಸ್ಸಿನಲ್ಲಿಯೂ ಅತ್ಯಂತ ಸುಂದರನಾಗಿ ಕಾಣುತ್ತಿದ್ದ ಈ ರಾಹುಲ್ ಗಾಂಧಿಯ ಡ್ರೆಸ್ ಕೋಡ್ ಕೂಡ ಅತನ ಸುಂದರ ರೂಪಿಗೆ ಮೆರುಗು ನೀಡುತ್ತಿತ್ತು. ಅತನ ಕುರುಚಲು ಗಡ್ದ ಸಹ! ಆದರೆ ಏನಾಯಿತು? ರಾಹುಲ್ ಗಾಂಧಿ ತನ್ನ ರಾಜಕೀಯ ಸ್ಥಾನಮಾನವನ್ನು,ತನ್ನ ಘನತೆಯನ್ನು ಪಣಕ್ಕಿಟ್ಟು ಹೋರಾಡಿದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯವಾಗಿ ಸೋಲನ್ನು ಅನುಭವಿಸಿ ಹೆಚ್ಚೂ ಕಡಿಮೆ ನೆಲ ಕಚ್ಚಿದೆ. ಅಲ್ಲದೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ. ಇದರ ವಿಶ್ಲೇಷಣೆಗೆ ಬೇರೆಯೆದೇ ವೇದಿಕೆ ಬೇಕಾಗುತ್ತದೆ.ಆದರೆ ಇಂದು ಈ ತನ್ನ ಹೀನಾಯ ಸೋಲಿನ ಮೂಲಕ ಸುಂದರನಾದ ರಾಹುಲ್ ಗಾಂಧಿ ಅತ್ಯಂತ ಅನಾಕರ್ಷಕವಾಗಿ ಕಾಣತೊಡಗಿದ್ದಾನೆ. ಈ ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಯುವರಾಜ ರಾಜಕೀಯ ಯುದ್ಧದಲ್ಲಿ ಸೋತಂತಹ ದಿನಗಳಲ್ಲಿ ಇಂದು ಆತನ ಮನಮೋಹಕ ಬಣ್ಣ, ಹೊಳಪು, ಸುಂದರ ಕಾಯ ಯಾವುದೂ ಈತನನ್ನು ಮೇಲಕ್ಕೆತ್ತಲಾರವು. ಗೆಲುವಿಗೆ ಮಾತ್ರ ಆ ಸಾಧ್ಯತೆ ಇತ್ತು. ಇದು ಅಖಿಲೇಶ್ ಯಾದವ್ ಪಾಲಿಗೆ ನಿಜವೆಂದು ಸಾಬೀತಾಗಿದೆ. ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ಅನಾಕರ್ಷಕ ಅಖಿಲೇಶ್ ಯಾದವ್ ತನ್ನ ಗೆಲುವಿನ ಮೂಲಕ ಆಕರ್ಷಕವಾಗಿ ಎಲ್ಲರ ಕಣ್ಮಣಿಯಾಗಿ ಕಂಗೊಳಿಸುತ್ತಿದ್ದರೆ ಆಕರ್ಷಕ, ಸುಂದರ ಪುರುಷ ರಾಹುಲ್ ಗಾಂಧಿ ತನ್ನ ಹೀನಾಯ ಸೋಲಿನೊಂದಿಗೆ ಮೂಲೆಗೆ ತಳ್ಳಲ್ಪಟ್ಟಿದ್ದಾನೆ. ಅನಾಕರ್ಷಕವಾಗಿ ಕಾಣುತ್ತಿದ್ದಾನೆ. ಇದೇ ಪ್ರಾಮಾಣಿಕ ಗೆಲುವಿನ ಮನಮೋಹಕ ಆದರೆ ನಿಷ್ಟುರ ಕಠೋರ ದೃಶ್ಯಗಳು.

ಇಂದು ಯಶಸ್ಸಿನ ಅಲೆಯ ಮೇಲಿರುವ ಅಖಿಲೇಶ್ ಸಿಂಗ್ ಯಾದವ್‌ಗೆ ಮ್ಯಾಕ್ ಬೆತ್ ನಾಟಕದಲ್ಲಿ ಬ್ಯಾಂಕೋ ಹೇಳಿದ “ಹೊಸ ಗೌರವಗಳು ಅವನಿಗೆ ಸಂದಿವೆ, ಅವು ಹೊಸ ಬಟ್ಟೆಗಳಂತೆ; ದೇಹಕ್ಕೆ ಒಗ್ಗುವುದು ಉಪಯೋಗಿಸತೊಡಗಿದ ಮೇಲೆ,”ಎನ್ನುವ ಮನೋಜ್ಞ ಮಾತುಗಳು ಅರ್ಥವಾದರೆ ಎಷ್ಟು ಚೆನ್ನ! ರಾಮ ಮನೋಹರ ಲೋಹಿಯಾ ಅವರನ್ನು ಓದತೊಡಗಿದರೆ ಎಷ್ಟು ಚೆನ್ನ! ಒಂದು ವರ್ಷದ ನಂತರ ಲೋಹಿಯಾರ ಕೆಲವು ಮಾತುಗಳನ್ನು ತನ್ನ ತೊದಲು ನುಡಿಗಳಲ್ಲಿ ಹೇಳುವಂತಾದರೆ ಎಷ್ಟು ಚೆನ್ನ! ಬುಂದೇಲಖಂಡ, ಪೂರ್ವಾಂಚಲದಲ್ಲಿನ ಅನೇಕ ದಲಿತರ ಓಟುಗಳು ಈ ಬಾರಿ ಸಮಾಜವಾದಿ ಪಕ್ಷಕ್ಕೆ ಸಂದಿದ್ದರ ಹಿಂದಿನ ಸಾಮಾಜಿಕತೆ ಈ ಅಖಿಲೇಶ್ ಅರ್ಥ ಮಾಡಿಕೊಂಡರೆ, ಮುಸ್ಲಿಂರ ಓಟ್ ಬ್ಯಾಂಕ್ ಹೇಗೆ ಮತ್ತು ಏಕೆ ಸಂಘಟಿತವಾಗಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿತು ಎನ್ನುವುದನ್ನು ಈ ಅಖಿಲೇಶ್ ಅರಿತರೆ, ಯಾದವರು ಇಂದು ಒಂದು ಹಿಂದುಳಿದ ಜಾತಿಯಾಗಿ ಉಳಿದಿಲ್ಲ ಅದು ಒಂದು ಮಧ್ಯಮ ವರ್ಗದ, ಬಲಿಷ್ಟ ದಬ್ಬಾಳಿಕೆಯ ಜಮೀನ್ದಾರಿ ಜಾತಿಯಾಗಿ ಮೆರೆಯುತ್ತಿದೆ ಎನ್ನುವುದರ ಹಿನ್ನೆಲೆಯ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮನನ ಮಾಡಿಕೊಂಡರೆ, ಎಷ್ಟು ಚೆನ್ನ ಅಲ್ಲವೆ? ಇದೆಲ್ಲದಕ್ಕಿಂತ ಮುಖ್ಯವಾದದ್ದು ಅಖಿಲೇಶ್ ಸಿಂಗ್ ಯಾದವ್ ಎನ್ನುವ ಯುವ ನಾಯಕನಿಗೆ 25 ರಿಂದ 30 ರ ವಯಸ್ಸಿನ ಆಜುಬಾಜಿರುವ ಶೇಕಡ 35 ರಷ್ಟು ಯವ ಜನಾಂಗ ಇಂದು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಯವ ಜನತೆಯ ಬೆಂಬಲವೇ ಇವತ್ತಿನ ಸಮಾಜವಾದಿ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದು, ಬಲು ದೊಡ್ಡ ತಿರುವು ನೀಡಿದ್ದು. ಸಹಜವಾಗಿಯೇ Generation next ಹುಡುಗನಂತಿರುವ ಯುವರಾಜ “ರಾಹುಲ್ ಗಾಂಧಿ”ಯನ್ನು ಏತಕ್ಕೆ ಕೈ ಬಿಟ್ಟು ಅಖಿಲೇಶ್ ಸಿಂಗ್ ಯಾದವ್ ನನ್ನು ಕೈ ಹಿಡಿದರು ಎನ್ನುವುದರ ಒಳ ನೋಟಗಳನ್ನು ಈ ಅಖಿಲೇಶ್ ಅರ್ಥ ಮಾಡಿಕೊಂಡ ದಿನ, ಮುಂದಿನ ಎರಡು ವರ್ಷಗಳಲ್ಲಿ ತನಗೆ ಅರ್ಥವಾದಷ್ಟನ್ನು, ದಕ್ಕಿದಷ್ಟನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳ Blue print ಅನ್ನು ಈ ಅಖಿಲೇಶ್ ಸಿಂಗ್ ಯಾದವ್ ತಯಾರಿಸಿಕೊಂಡ ದಿನ ನಿಜಕ್ಕೂ ಉತ್ತರ ಪ್ರದೇಶದ ಭವಿಷ್ಯದ ಅರ್ಥಪೂರ್ಣ ಕನುಸುಗಳು ಸಾಕಾರಗೊಳ್ಳಬಹುದೇನೋ ಎನ್ನುವ ಅನುಮಾನಗಳ ಬೀಜ ಹುಟ್ಟಿಕೊಳ್ಳುವ ಹೊಸ ಚಿಂತನೆಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಕಡೆಯದಾಗಿ ಈ ಅಖಿಲೇಶ್ ಸಿಂಗ್ ಯಾದವ್, “ನಾನು ಉತ್ತರ ಪ್ರದೇಶದ ಎಲ್ಲಾ ವರ್ಗಗಳ ,ಜಾತಿಗಳ ಪ್ರತಿನಿಧಿ ಆಗಿರುವವರೆಗೂ ಇಲ್ಲಿ ಇನ್ನೆಂದೂ ಗೂಂಡಾ ರಾಜ್ ತಲೆಯತ್ತಲಾರದು, ಇಲ್ಲಿ ಇನ್ನೆಂದೂ ದಲಿತರ ಹತ್ಯಾಕಾಂಡಗಳು ನಡೆಯಲಾರವು, ಸಾಚಾರ್ ಕಮಿಟಿಯನ್ನು ಜಾರಿಗೊಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ,” ಎಂದು ಮೊದಲು ಘೋಷಿಸಿಲೇಬೇಕು. ಏಕೆಂದರೆ ಇದು minimum requirement ಗೆದ್ದ ನಾಯಕನಿಂದ. ಏಕೆಂದರೆ “ನೇತಾಜಿ”ಗೆ ವಯಸ್ಸಾಗಿದೆ. ಅವರು ಇದನ್ನು ಹೇಳುವುದಿರಲಿ ಇಂತಹ ಮಾತುಗಳೂ ಕೂಡ ನೆನಪಿರಲಾರವು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)