Monthly Archives: March 2012

ನಾಡಿನ ನಕ್ಸಲ್ ನಿಗ್ರಹ ದಳದಿಂದ ಕಾಡಿನ ಅಮಾಯಕ ವಿದ್ಯಾರ್ಥಿಯ ಬಂಧನ

-ನವೀನ್ ಸೂರಿಂಜೆ

ಕರ್ನಾಟಕದ ನಕ್ಸಲ್ ನಿಗ್ರಹ ದಳದ ಅಟ್ಟಹಾಸಕ್ಕೆ ಇದೀಗ ಅಮಾಯಕ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ಬಲಿಪಶುವಾಗಿದ್ದಾನೆ. ನಕ್ಸಲ್ ಬೆಂಬಲಿಗರೆಂಬ ಆರೋಪದಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬೆಳ್ತಂಗಡಿಯ ಕುತ್ಲೂರು ಪರಿಸರದಲ್ಲಿ ಕಳೆದ ಶನಿವಾರ ಬಂಧಿಸಿರುವ ಮೂವರಲ್ಲಿ ಓರ್ವನಾದ ವಿಠ್ಠಲ ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ನೂರು ಶೇಕಡಾ ತರಗತಿ ಹಾಜರಾತಿಯನ್ನು ಹೊಂದಿರುವ ಬುದ್ದಿವಂತ ವಿದ್ಯಾರ್ಥಿ ನಕ್ಸಲ್ ಪೀಡಿತ ಗ್ರಾಮದ ಮಲೆಕುಡಿಯ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಜೈಲಲ್ಲಿ ಕೊಳೆಯುವಂತಾಗಿದೆ.

ನಕ್ಸಲ್ ವಿರೋಧಿ ಎಡಪಕ್ಷವಾದ ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನಲ್ಲಿ ಸಕ್ರಿಯನಾಗಿದ್ದ ವಿಠ್ಠಲ ಕಳೆದ ಆಗಸ್ಟ್ ತಿಂಗಳಿನಿಂದ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಆರಂಭಿಸಿದ್ದ. ತನ್ನ ಹುಟ್ಟೂರಿನಲ್ಲಿ ನಕ್ಸಲ್ ಚಟುವಟಿಕೆಗಳಿಂದ ಬೇಸತ್ತಿದ್ದ ವಿಠ್ಠಲ್, ಎಡ ಪಕ್ಷದ ಅಂಗ ಸಂಘಟನೆಯಾದ ದಲಿತ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯನಾಗಿಸಿಕೊಂಡಿದ್ದ. ವಿಶೇಷವೆಂದರೆ ಮಲೆಕುಡಿಯ ಜನಾಂಗಕ್ಕೆ ಸೇರಿದ ವಿಠ್ಠಲ ಕುತ್ಲೂರಿನ ಮಲೆಕುಡಿಯ ಸಮುದಾಯದಲ್ಲಿ ಎಸ್ಎಸ್ಎಲ್‌‍ಸಿಗಿಂತ ಮೇಲ್ಮಟ್ಟದ ವಿದ್ಯಾಭ್ಯಾಸದ ಹಂತವನ್ನು ತಲುಪಿರುವ ಏಕೈಕ ಯುವಕ. ಕಾಡಿನಲ್ಲಿ ಶತ ಶತಮಾನಗಳಿಂದ ಬದುಕಿದ್ದವರನ್ನು ಒಕ್ಕಲೆಬ್ಬಿಸಲು ಪ್ರತೀ ಕುಟುಂಬಕ್ಕೆ ಹತ್ತು ಲಕ್ಷ ನೀಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದಾಗ ಅದನ್ನು ವಿರೋಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿರುವಲ್ಲಿ ವಿಠ್ಠಲ್ ಪಾತ್ರ ಪ್ರಮುಖವಾದುದು. ಅಲ್ಲಿಯವರೆಗೆ ಅಧಿಕಾರಿಗಳು ತೋರಿಸಿದ ಕಾಗದಕ್ಕೆ ಹೆಬ್ಬೆಟ್ಟು ಒತ್ತುತ್ತಿದ್ದವರು ವಿಠ್ಠಲ್‍ನ ವಿದ್ಯಾಬ್ಯಾಸದ ನಂತರ ಚಿತ್ರಣ ಬದಲಾಗಿತ್ತು. ಈ ಕಾರಣದಿಂದಾಗಿಯೇ ಇಂದಿಗೂ ನಲ್ವತ್ತು ಕುಟುಂಬಗಳನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಇದು ಎಎನ್ಎಫ್ ಮತ್ತು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿತ್ತು.

ಮಂಗಳೂರು ವಿವಿಯ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದುಕೊಂಡು ಕಳೆದ ಒಂದು ವರ್ಷದಿಂದೀಚೆಗೆ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ವಿಠ್ಠಲನಿಗೆ ಪತ್ರಿಕೋಧ್ಯಮ ಕ್ಷೇತ್ರವನ್ನು ಆಯ್ದುಕೊಳ್ಳುವಂತೆ ಸಲಹೆ ನೀಡಿದ್ದೇ ಮಂಗಳೂರಿನ ಪತ್ರಕರ್ತರು. ನಾನೂ ಸೇರಿದಂತೆ ಮಂಗಳೂರಿನ ಪತ್ರಕರ್ತ ಮಿತ್ರರೆಲ್ಲಾ ನಕ್ಸಲ್ ಪೀಡಿತ ಪ್ರದೇಶಕ್ಕೆ ವರದಿಗಾಗಿ ತೆರಳಿದ್ದ ಸಂದರ್ಭ ಪದವಿ ಶಿಕ್ಷಣ ಮುಗಿಸಿದ್ದ ವಿಠ್ಠಲ ಕಣ್ಣಿಗೆ ಬಿದ್ದಿದ್ದ. ನಂತರ ಹಲವಾರು ಬಾರಿ ಕುತ್ಲೂರು ಪ್ರದೇಶಕ್ಕೆ ವರದಿಗಾಗಿ ನಾವು ತೆರಳಿದ್ದ ಸಂಧರ್ಭ ನಮಗೆಲ್ಲಾ ಕಾಡಿನಲ್ಲಿ ಆಶ್ರಯ ನೀಡಿದ್ದು ಇದೇ ವಿಠ್ಠಲ್ ಮನೆ. ನಂತರ ವಿಠ್ಠಲ್ ನಮ್ಮವನಾಗಿದ್ದ. ನಮ್ಮ ವರದಿಗಾರಿಕೆಯ ಕೆಲಸಗಳನ್ನು ಮೌನವಾಗಿ ಗಮನಿಸುತ್ತಿದ್ದ ವಿಠ್ಠಲ್‍ಗೆ ತಾನೂ ಪತ್ರಕರ್ತನಾಗಬೇಕು ಎಂಬ ಆಶೆ ಮೊಳಕೆಯೊಡೆದಿತ್ತು. ಅದನ್ನು ನಮ್ಮ ಬಳಿ ಹೇಳಿಕೊಂಡಿದ್ದ. ನಾವು ತಕ್ಷಣ ಅದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದೆವು. ನೇರ ಮಂಗಳೂರಿಗೆ ಕರೆಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿ ವ್ಯವಸ್ಥೆಗಳನ್ನು ಮಾಡಿದ್ದೆವು.

ಪತ್ರಕರ್ತ ಮಿತ್ರರೆಲ್ಲಾ ಸೇರಿ ಪುಸ್ತಕಗಳ ವ್ಯವಸ್ಥೆಯನ್ನೂ ಮಾಡಿಕೊಟ್ಟೆವು. ನಂತರ ವಿಠ್ಠಲ್ ತಿರುಗಿ ನೋಡಿದ್ದೇ ಇಲ್ಲ. ಕಾಲೇಜಿನಲ್ಲಿ ನೀಡೋ ಎಸೈನ್‍ಮೆಂಟ್‍ಗಳನ್ನು ಅಸ್ಥೆಯಿಂದ ನಿರ್ವಹಿಸುತ್ತಿದ್ದ. ಯಾವುದೇ ಸುದ್ಧಿಯ ಎಸೈನ್‍ಮೆಂಟ್ ನೀಡಿದರೂ ನೇರ ನನ್ನಲ್ಲಿಗೆ ಬಂದು ಸಲಹೆಗಳನ್ನು ಪಡೆದುಕೊಂಡು ಪರಿಪೂರ್ಣ ವರದಿ ತಯಾರಾಗುವಂತೆ ನೋಡಿಕೊಳ್ಳುತ್ತಿದ್ದ. ಆತ ಕಾಲೇಜಿಗೆ ಸೇರಿದ ದಿನದಿಂದ ಒಂದೇ ಒಂದು ತರಗತಿಯನ್ನೂ ತಪ್ಪಿಸಿಲ್ಲ. ನೂರು ಶೇಕಡಾ ಹಾಜರಾತಿ ಇದೆ ಎಂದು ಕಾಲೇಜು ದಾಖಲೆಗಳು ದೃಢೀಕರಿಸುತ್ತದೆ. ರಜೆಯ ಸಂಧರ್ಭದಲ್ಲಿ ಎಲ್ಲೆಲ್ಲಿ ವಿಚಾರ ಸಂಕಿರಣಗಳಿವೆ ಎಂದು ನನ್ನಲ್ಲಿ ತಿಳಿದುಕೊಂಡು ಹಾಜರಾಗುತ್ತಿದ್ದ. ಒಟ್ಟಾರೆ ಆತನೊಬ್ಬ ಭರವಸೆಯ ಪತ್ರಕರ್ತನಾಗಿ ಎಲ್ಲಾ ರೀತಿಯಲ್ಲೂ ರೂಪುಗೊಳ್ಳುತ್ತಿದ್ದ ಎಂದು ನನಗನ್ನಿಸುತ್ತಿತ್ತು.

ಕಳೆದ ಎರಡು ವಾರದಿಂದ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಕೂಂಬಿಕ್ ಕಾರ್ಯಾಚರಣೆ ನಡೆಯುತ್ತಿದೆ. ಕುತ್ಲೂರಿನಲ್ಲಿ ಕೂಂಬಿಕ್ ನಡೆಸಿದ ಎಎನ್ಎಫ್ ತಂಡವು ಚೀಂಕ್ರ ಮಲೆಕುಡಿಯನನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿತ್ತು. ನಂತರ ಎಎನ್ಎಫ್ ತಂಡವು ನೇರವಾಗಿ ವಿಠ್ಠಲ್ ಮನೆಗೆ ತೆರಳಿ ವಿಠ್ಠಲ್ ತಂದೆ ಲಿಂಗಣ್ಣ ಮಲೆಕುಡಿಯರನ್ನು ವಿಚಾರಣೆ ನಡೆಸಿತು. ರಾತ್ರಿಯಿಡೀ ಗೃಹ ಬಂಧನದಲ್ಲಿರಿಸಿದ ಎಎನ್ಎಫ್ ತಂಡವು ವೃದ್ಧ ಲಿಂಗಣ್ಣರಿಗೆ ಬೇಕಾಬಿಟ್ಟಿ ಥಳಿಸಿತ್ತು. ಇದನ್ನು  ಮರುದಿನ ಬೆಳಿಗ್ಗೆ ಪಕ್ಕದ ಮನೆಯ ಪೂವಪ್ಪ ಮಲೆಕುಡಿಯ ವಿಠ್ಠಲ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಮರುದಿನ ಬೆಳಗ್ಗೆ ಕುತ್ಲೂರಿಗೆ ಹೊರಟು ನಿಂತ ವಿಠ್ಠಲ ಈ ಬಗ್ಗೆ ನನಗೆ ಮತ್ತು ಆತನ ಪರಿಚಯದ ಕೆಲ ಮಾಧ್ಯಮ ಮಿತ್ರರಿಗೂ ತನ್ನ ತಂದೆಯ ಬಗ್ಗೆ ಮಾಹಿತಿ ನೀಡಿದ್ದ. “ತಂದೆಯನ್ನು ನೋಡಲೇ ಬೇಕೆಂದಿದ್ದರೆ ಹೋಗು. ಇಲ್ಲದೆ ಇದ್ದರೆ ಪೂವಪ್ಪ ಮತ್ತು ಇತರರು ತಂದೆಯನ್ನು ಆಸ್ಪತ್ರೆಗೆ ದಾಖಲಿಸುವಂತೆ ನಾನು ಹೇಳುತ್ತೇನೆ” ಎಂದು ಅವನಿಗೆ ನಾನೇ ಹೇಳಿದ್ದೆ. ಆದರೂ ಆತನ ಮನಸ್ಸು ತಂದೆ ಮತ್ತು ತಾಯಿಯನ್ನು ನೋಡಬೇಕು ಎಂದು ಹಂಬಲಿಸುತ್ತಿರುವುದನ್ನು ನಾನು ಬಲ್ಲವನಾದೆ.” ಸರಿ ಹೋಗು. ಆದರೆ ನಿನ್ನ ಕಾಲೇಜಿನ ಗುರುತು ಪತ್ರವನ್ನು ತೆಗೆದುಕೊಂಡು ಹೋಗು. ಮತ್ತು ಕಾಡಿನಲ್ಲಿ ಎಎನ್ಎಫ್ ಪೊಲೀಸರು ಎದುರಾದರೆ ನೀನಾಗಿಯೇ ಗುರುತು ಪತ್ರ  ತೋರಿಸಿ ಮಾತನಾಡು. ನಂತರ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಅವಕಾಶ ನೀಡುವಂತೆ ಕೇಳಿಕೊ” ಎಂದು ಅತನಿಗೆ ಸಲಹೆಗಳನ್ನು ನೀಡಿದ್ದೆ.

ಬಸ್ಸು ಇಳಿದು ಎರಡು ಗಂಟೆಗಳ ಕಾಲ ದಟ್ಟ ಅರಣ್ಯದಲ್ಲಿ ಎಲ್ಲೂ ಕೂಡಾ ಎಎನ್ಎಫ್ ಸಿಬ್ಬಂದಿಗಳು ವಿಠ್ಠಲ್‍ಗೆ ಸಿಕ್ಕಿಲ್ಲ. ಎತ್ತರದ ಗುಡ್ಡ ಸಿಕ್ಕಾಗೆಲ್ಲಾ ಆತನ ಮೊಬೈಲ್ ನೆಟ್‍ವರ್ಕ್ ಸಿಗುತ್ತಿತ್ತು. ಆಗೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದ. ನಾನು ಇನ್ನಷ್ಟೂ ಸಲಹೆಗಳನ್ನು ನೀಡುತ್ತಿದ್ದೆ. ಮಧ್ಯಾಹ್ನದ ವೇಳೆಗೆ ಕುತ್ಲೂರಿನ ದಟ್ಟ ಅರಣ್ಯದ ನಡುವಿನ ತನ್ನ ಮನೆಗೆ ತಲುಪಿದ್ದ ವಿಠ್ಠಲನನ್ನು ವಿಚಾರಣೆಯ ನೆಪದಲ್ಲಿ ತಂದೆ ಲಿಂಗಣ್ಣನ ಜೊತೆ ಎಎನ್ಎಫ್ ತಂಡ ಬಂಧಿಸಿ ಕರೆದೊಯ್ದು ಎಫ್ಐಆರ್ ದಾಖಲಿಸಿ ಜೈಲಿಗಟ್ಟಿದೆ.

ಎಎನ್ಎಫ್ ತಂಡವು ಬಂಧಿತ ವಿಠ್ಠಲನ ಮನೆಯಲ್ಲಿ ಕರಪತ್ರ, ಬೈನಾಕ್ಯುಲರ್‌ನಂತಹ ಸಲಕರಣೆಗಳು ದೊರಕಿವೆ ಎಂಬುದಾಗಿ ಹೇಳಿಕೊಂಡಿದೆ. ವಿಠ್ಠಲನ ಬಳಿ ನಕ್ಸಲ್ ಪರವಾದ ಲೇಖನಗಳು, ನಕ್ಸಲ್ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹಾಗೂ ನಕ್ಸಲರು ಮೃತರಾದ ವರದಿಗಳ ಪತ್ರಿಕಾ ಸಂಗ್ರಹ ಕೂಡಾ ಇತ್ತು ಎಂಬ ಆರೋಪವನ್ನೂ ಹೊರಿಸಿದೆ. (ಮಾಮೂಲಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಂಗಳೂರು ನಗರದಲ್ಲಿರುವ ಮೂನ್ಶೈನ್ ಎಂಬ ಬ್ಯೂಟಿ ಪಾರ್ಲರಿನ ಡ್ರಾವರ್‌‌‌‌‌‌ನಲ್ಲಿ ಕಾಂಡೋಮ್ ಪ್ಯಾಕೇಟ್ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಮಹಿಳಾ ಕಾರ್ಮಿಕರನ್ನು ಅರೆಸ್ಟ್ ಮಾಡಿದವರಿಗೆ ಕರಪತ್ರ ಇಡೋದೇನೂ ಮಹಾಸಂಗತಿಯಲ್ಲ ಬಿಡಿ.)

ಈ ನಡುವೆ, ವಿಠ್ಠಲ ಮತ್ತು ಆತನ ತಂದೆಯ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಬೆಳ್ತಂಗಡಿಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಎನ್ಎಫ್ ತಂಡವು ಸುಳ್ಳು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ವಿಠ್ಠಲನನ್ನು ಹತ್ತಿರದಿಂದ ಬಲ್ಲ ಸಹಪಾಠಿಗಳು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಚಿನ್ನಪ್ಪ ಗೌಡರಿಗೆ ವಿವಿ ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ವಿಠ್ಠಲನ ತಂದೆ ವಯೋವೃದ್ಧರಾದ ಲಿಂಗಣ್ಣ ಮಲೆಕುಡಿಯರಿಗೆ ಪೊಲೀಸರು ನೀಡಿರುವ ದೈಹಿಕ ದೌರ್ಜನ್ಯದಿಂದಾಗಿ ಕಾಲಿನ ಮಣಿಗಂಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರನ್ನೀಗ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ವಿವಿ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದು ತರಗತಿಯಲ್ಲಿ ನೂರು ಶೇಕಡಾ ಹಾಜರಾತಿಯನ್ನು ಹೊಂದಿದ್ದ ವಿಠ್ಠಲ್ ಮೇಲೆ ಪೊಲೀಸರು ಸೆಕ್ಷನ್ 10 ಮತ್ತು 13(2) ಅನ್ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಷನ್) ಆ್ಯಕ್ಟ್ ಮೂಲಕ ರಾಜದ್ರೋಹದ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಉಜ್ವಲ ಭವಿಷ್ಯದ ಕನಸು ಹೊತ್ತಿದ್ದ ಯುವಕ ಮತ್ತಾತನ ಮನೆಯವರಿಗೆ ಇದೀಗ ಎಎನ್ಎಫ್ ತಂಡವು ನಕ್ಸಲ್ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟಿರುವುದು ನಿಜಕ್ಕೂ ವಿಷಾದನೀಯ.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.

ಮರ್ಯಾದೆ ಹತ್ಯೆಯ ಬೇರುಗಳ ಹುಡುಕಾಟ…

-ಡಾ.ಎಸ್.ಬಿ.ಜೋಗುರ

ಸಾಂಪ್ರದಾಯಿಕ ಭಾರತೀಯ ಸಮಾಜದ ಅಂತ:ಸತ್ವದ ಹಾಗೆ ಮೂರು ಪ್ರಮುಖ ಸಂಗತಿಗಳು ನಮ್ಮನ್ನು ಸಾವಿರಾರು ವರ್ಷಗಳಿಂದ ಪ್ರಭಾವಿಸುತ್ತಲೇ ಬಂದಿವೆ.  ಅವುಗಳಲ್ಲಿ ಮುಖ್ಯವಾಗಿ ಜಾತಿಪದ್ಧತಿ, ಅವಿಭಕ್ತ ಕುಟುಂಬ ಮತ್ತು ಇಲ್ಲಿಯ ಗ್ರಾಮೀಣ ಜೀವನ.  ಹಾಗಾಗಿಯೇ  ಕೆ.ಎನ್. ಪಣಿಕ್ಕರ್ ಎನ್ನುವ ಚಿಂತಕರು ಭಾರತೀಯ ಸಮಾಜ ಈ ಮೇಲಿನ ಮೂರು ಸಂಗತಿಗಳನ್ನು ಆಶ್ರಯಿಸಿಯೇ ಸಾಗಿ ಬಂದಿದೆ ಎಂದಿರುವರು. ಆಯಾ ಕಾಲಮಾನಕ್ಕನುಗುಣವಾದ ಬದಲಾವಣೆಗಳ ನಡುವೆಯೂ ಈ ಮೂರು ಸಂಗತಿಗಳು ನಮ್ಮ ಸಮಾಜದ ರಚನೆ ಮತ್ತು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು, ನಿರ್ಧರಿಸಿಕೊಂಡು, ನಿಯಂತ್ರಿಸಿಕೊಂಡು ಬಂದಿದೆ. ಈ ಮೂರರಲ್ಲಿಯೇ ಮೀರಿದ ಮತ್ತು ಗಡುಸಾಗಿ ಉಳಿದುಕೊಂಡು ತನ್ನ ಪ್ರಭಾವವನ್ನು ಹಿಂದೆಂದಿಗಿಂತಲೂ ವಿಭಿನ್ನವಾಗಿ ಮತ್ತು ಸಂಘಟಿತವಾಗಿ ನಿರ್ವಹಿಸಿಕೊಂಡು ಬರುತ್ತಿರುವ ಪ್ರಮುಖ ಸಂಸ್ಥೆಯೆಂದರೆ ಜಾತಿಪದ್ಧತಿಯಾಗಿದೆ. ಅದು ಸಡಿಲಾಗಿದೆ ಎನ್ನುವಾಗಲೇ ಹೊಸ ಬಗೆಯ ತೊಡಕುಗಳನ್ನು ಅಂತರ್ಗತಗೊಳಿಸಿಕೊಂಡು ನಿರಾಯಾಸವಾಗಿ ಅದು ಸಾಗಿ ಬರುತ್ತಿದೆ. ಪರಂಪರೆಯ ಸಹವಾಸದಲ್ಲಿರುವ ಯಾವುದೇ ಬಗೆಯ ಸಂಸ್ಥೆಗಳಿರಲಿ ಅವು ತಮ್ಮ ಬೇರುಗಳನ್ನು ಸಡಿಲಿಸಿಕೊಂಡರೂ ರೆಂಬೆ, ಕೊಂಬೆ, ಹೀಚು, ಕಾಯಿ, ಹಣ್ಣುಗಳನ್ನು ಸಮೃದ್ಧವಾಗಿ ಸುರಿಯುವಲ್ಲಿ ಹಿಂದೆಬಿದ್ದಿಲ್ಲ. ಜಾತಿಯಲ್ಲಿ ಮಹತ್ತರವಾದ ಬದಲಾವಣೆಗಳಾಗಿಲ್ಲ. ಬದಲಾವಣೆಗಳಾದಂತೆ ಕಾಣುವುದೆಲ್ಲಾ ಕೇವಲ ಸಮಾನಾಂತರ ಸಂಚಲನೆ ಮಾತ್ರ. ಹಾಗಾಗಿ ಅದು ಎಂದಿನಂತೆ ಮಾನವನ ಬದುಕನ್ನು ನಿಯಂತ್ರಿಸಿ, ನಿರ್ದೇಶಿಸುವ ದಿಶೆಯಲ್ಲಿ ತನ್ನ ಉತ್ತರದಾಯಿತ್ವವನ್ನು ಬಿಟ್ಟುಕೊಡದೇ ಮೆರೆಯುತ್ತಲೇ ಇದೆ. ಮದನ್ ಮತ್ತು ಮಜುಮದಾರ್ ಎನ್ನುವ ಚಿಂತಕರು ಹೇಳುವಂತೆ ಜಾತಿಯು ಭಾರತೀಯ ಸಮಾಜದಲ್ಲಿ ಒಂದು ನಿರ್ಬಂಧಿತ ಸಮೂಹವಾಗಿ ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡ ಬೇಕಾಗಿದೆಯೋ ಅದೆಲ್ಲವನ್ನೂ ಸಂಪ್ರದಾಯ ಮತ್ತು ಆಚರಣೆಗಳ ಹೆಸರಲ್ಲಿ ನಿರಾತಂಕವಾಗಿ ಮುಂದುವರೆಸಿಕೊಂಡು ಬರುತ್ತಿದೆ. ದಿನ ಬೆಳಗಾದರೆ ಹುಟ್ಟಿಕೊಳ್ಳುತ್ತಿರುವ ಜಾತಿವಾರು ಕಲಹಗಳು, ಸಂಘಟನೆಗಳು, ಮಠಗಳು, ಮಠಾಧೀಶರು ಮೇಲಿನ ಮಾತಿಗೆ ಸಾಕ್ಷಿಯಾಗುತ್ತಿದ್ದಾರೆ.

ಜಾತಿಪದ್ಧತಿ ನಮ್ಮ ಊಟ, ಆಟ, ಮದುವೆ, ದೈವ, ದೇವರು, ಸಂಬಂಧ, ಸ್ನೇಹ, ಅಡುಗೆ, ಬಟ್ಟೆ, ಭಾಷೆ, ಮನೆಗಳ ರಚನೆ ಮುಂತಾದ ಸಂಗತಿಗಳ ಮೇಲೆ ಪ್ರಭಾವ ಬೀರಿ ಅದು ನಿರ್ದೇಶಿಸುವ ಹಾಗೆ ನಮ್ಮ ವ್ಯವಹಾರಗಳನ್ನು ಸಾಮಾಜಿಕ ಅನುಮತಿಗಳಿಗೆ ತಕ್ಕಂತೆ ನಿರ್ವಹಿಸಿದರೆ ಜಾತಿಯೆಂಬ ಸಂಸ್ಥೆಯಲ್ಲಿ ತಕ್ಕ ಮಟ್ಟಿನ ಸ್ಥಾನಮಾನಗಳು ಲಭ್ಯವಾಗುತ್ತವೆ. ತಪ್ಪಿ ನೀವು ಜಾತಿಯ ನಿರ್ಬಂಧಗಳನ್ನು ಮೀರಿ ವ್ಯವಹರಿಸಿದರೆ ಮೂದಲಿಕೆಯ ಮಾತುಗಳು, ನಿಂದನೆ, ಬಹಿಷ್ಕಾರದಂತಹ ಶಿಕ್ಷೆಗೂ ನೀವು ರೆಡಿಯಾಗಬೇಕು. ಇಂಥಾ ಜಾತಿಯ ನಿರ್ಬಂಧಗಳನ್ನು ಮುರಿದು, ಅತ್ಯಂತ ಕರ್ಮಠವಾಗಿರುವ 12ನೇ ಶತಮಾನದ ಸಂದರ್ಭದಲ್ಲಿ ಬಸವೇಶ್ವರರು ಅಂತರ್ಜಾತಿಯ ವಿವಾಹವನ್ನು ಮಾಡಿಸಿ ಸೈ ಎನಿಸಿಕೊಂಡು ಚರಿತ್ರೆಯಾದರೂ ಅವರು ಅನುಭವಿಸಿರುವ ತೊಂದರೆಗಳನ್ನು ಕಲ್ಪಿಸಬಹುದೇ ಹೊರತು ಮೀರಿ, ಅನುಭವಿಸಿ ಮಾತನಾಡುವಂತಿಲ್ಲ. ಇಂದಿಗೂ ಅಂತರ್ಜಾತಿಯ ವಿವಾಹವಾಗುವವರಿಗೆ ಅದರಲ್ಲೂ ದಲಿತ ಕನ್ಯೆಯನ್ನು ವಿವಾಹವಾಗುವವರಿಗೆ ಇರಬಹುದಾದ ತೊಡಕುಗಳನ್ನು ನೋಡಿದರೆ ಸಮಾಜದ ಆಂತರಿಕ ರಚನೆ ನಾವು ಮಾತನಾಡುವ ವೇಗದಲ್ಲಿ ಬದಲಾವಣೆ ಹೊಂದಿಲ್ಲ ಎನ್ನುವುದು ಸತ್ಯ. ಇನ್ನು ಈ ಜಾತಿಯನ್ನು ಅದರ ಆಚರಣೆಯನ್ನು ಒಂದು ಮೌಲ್ಯದ ಹಾಗೆ ಸಂಪೋಷಿಸಿಕೊಂಡು ಬಂದ ಅವಿಭಕ್ತ ಕುಟುಂಬ ಎನ್ನುವ ವ್ಯವಸ್ಥೆ ಪರೋಕ್ಷವಾಗಿ ಜಾತಿಯ ಆಚರಣೆಗಳು ಫಲಪ್ರದವಾಗಿ ನಡೆಯುವಲ್ಲಿ ನೆರವಾಯಿತೆಂದೇ ಹೇಳಬೇಕು.

ಕುಟುಂಬದ ಘನತೆ ಗೌರವದ ಸಲುವಾಗಿ ಯಾವ ಹಂತಕ್ಕಾದರೂ ಹೋಗಬಹುದು ಎನ್ನುವ ಮನೋಭೂಮಿಕೆ ಸಿದ್ಧವಾದದ್ದೇ ಇಲ್ಲಿ.  ಪಿ.ಎಚ್. ಪ್ರಭು ಎನ್ನುವ ದಾರ್ಶನಿಕರು ತಮ್ಮ “ಹಿಂದು ಸೋಶಿಯಲ್ ಅರ್ಗನ್ಶೆಜೇಶನ್” ಎನ್ನುವ ಕೃತಿಯಲ್ಲಿ ಅವಿಭಕ್ತ ಕುಟುಂಬದಲ್ಲಿ  ‘ಅಗ್ನಿ’ ಎನ್ನುವುದನ್ನು ಒಂದು ಮೌಲ್ಯ ಇಲ್ಲವೇ ಘನತೆ ಎಂದು ಅದನ್ನು ಕಾಯಬೇಕು.  ಆ ‘ಅಗ್ನಿ’ ಇಲ್ಲವೇ ಜ್ಯೋತಿಗೆ ಧಕ್ಕೆ ಬರುವಂತಿದ್ದರೆ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ ಅದನ್ನು ಸಂರಕ್ಷಿಸಬೇಕು,  ಎಂದು ಹೇಳಿರುವ ಮಾತಿನ ಹಿಂದೆ ಕುಟುಂಬದ ಘನತೆಗೆ ಧಕ್ಕೆ ಬರಲು ಬಿಡಬಾರದು ಎನ್ನುವ ಒಂದು ಅಘೋಷಿತ ಕರಾರಿದೆ. ಹಾಗೆ ಕಾಯುವುದು ಅತಿ ಮುಖ್ಯವಾಗಿ ಅಲ್ಲಿಯ ಕರ್ತನ ಹೊಣೆಗಾರಿಕೆ.  ಡೇವಿಡ್ ಜಿ.ಮೆಂಡಲ್ಬಾಮ್ ಎನ್ನುವ ಚಿಂತಕರು ಕೂಡಾ ಈ ವಿಚಾರವನ್ನು ಕುರಿತು ಚರ್ಚಿಸಿದ್ದಾರೆ. ಅಂದರೆ ಜಾತಿ ಹಾಗೂ ಜನಾಂಗ ಸಂಕರವನ್ನು ಅವಿಭಕ್ತ ಕುಟುಂಬ, ಜಾತಿ ಪದ್ಧತಿಗಳೆರಡೂ ಆಗ ಸಹಿಸುತ್ತಿರಲಿಲ್ಲ, ಈಗಲೂ ಸಹಿಸುವುದಿಲ್ಲ. ಈಗ ನಮ್ಮ ಮಧ್ಯೆ ಆಗಾಗ ಕೇಳಿ ಬರುವ ಮರ್ಯಾದೆ ಹತ್ಯೆಯ ಪ್ರಕರಣಗಳ ಮೂಲ ಬೇರುಗಳು ಜಾತಿಯ ಏಣಿಶ್ರೇಣಿ ವ್ಯವಸ್ಥೆಯ ತುತ್ತ ತುದಿ ಹಾಗೂ ಕೆಳತುದಿಯ ಮಧ್ಯೆ ನಡೆಯುವ ಸಾಮಾಜಿಕ ಸಂಪರ್ಕ ಮತ್ತು ಕುಟುಂಬದ ಘನತೆ ಎರಡನ್ನೂ ಆಧರಿಸಿದೆ. ಸಮಾಜ ಸುಧಾರಣಾ ಆಂದೋಲನದಲ್ಲಿ  ಬ್ರಹ್ಮ ಸಮಾಜದ ಮೂಲಕ ಸತಿ ಸಹಗಮನವನ್ನು ನಿಷೇಧಿಸಲು ಹೆಣಗಿದ ರಾಜಾರಾಮ ಮೋಹನರಾಯ್‍ರ ಆಶಯ ಈ ಬಗೆಯ ಸಾಂಪ್ರದಾಯಿಕ, ಪರಂಪರೆಯ ಹೆಸರಲ್ಲಿ ನಡೆಯುವ ಸ್ತ್ರೀ ಹತ್ಯೆಯ ನಿಷೇಧವೇ ಆಗಿತ್ತು.

 ‘ಮರ್ಯಾದೆ’ ಎನ್ನುವುದು ಒಂದು ಅಮೂರ್ತವಾದ ಸಂಗತಿ ಅದು ನಮ್ಮ ನಮ್ಮ ಸಮಾಜದ ಮನೋಭೂಮಿಕೆಯನ್ನು ಆಧರಿಸಿರುವಂಥದು. ನಮಗೆ ಮರ್ಯಾದೆ,  ಘನತೆ ಅನಿಸುವ ವಿಷಯ ವಿದೇಶಿಯರಿಗೆ ಒಂದು ಸಾಮಾಜಿಕ ಅನಿಷ್ಟ ಎನಿಸಬಹುದು. ಹಾಗೆಯೇ ಅವರ ಕೆಲ ಆಚರಣೆಗಳು ಕೂಡಾ ನಮ್ಮವರ ತಾತ್ಸಾರಕ್ಕೂ ಕಾರಣವಾಗಬಹುದು. ಅತಿ ಮುಖ್ಯವಾಗಿ ಜಾತಿ ಪದ್ಧತಿ ಎನ್ನುವದು ಭಾರತೀಯ ಸಮಾಜದ ಏಕಮೇವ ಲಕ್ಷಣವಾಗಿದ್ದು, ಇಲ್ಲಿ ಮಾತ್ರ ಇದರ ಅಪರಂಪಾರ ರೂಪಗಳು ನೋಡಲು ಸಾಧ್ಯ. ನಮ್ಮ ಪರಂಪರೆಯಲ್ಲಿ ಈ ಬಗೆಯ ಮರ್ಯಾದೆ ಹತ್ಯೆಯ ಪ್ರಕರಣಗಳು ಜಾನಪದ ಕಥೆಗಳಲ್ಲೂ ಅಲ್ಲಲ್ಲಿ ಬೆಳಕು ಕಂಡಿರುವುದಿದೆ. ಕಲ್ಲನಕೇರಿ ಮಲ್ಲನಗೌಡ ತನ್ನ ಸೊಸೆ ಭಾಗೀರತಿಯನ್ನು ಕೆರೆಗೆ ಆಹಾರವನ್ನಾಗಿ ನೀಡಿದ್ದು ಮೇಲ್ನೋಟಕ್ಕೆ ಒಂದು ಸಮೂಹ ಪ್ರೇರಿತ ಕ್ರಿಯೆ ಎನಿಸಿದರೂ ಅದು ಊರ ಒಳಿತಿಗಾಗಿ ಜರುಗಿದ ಕ್ರಿಯೆ ಎಂದೆನಿಸಿದರೂ ಎಲ್ಲೋ ಒಂದೆಡೆ ಆ ಗೌಡನ ಪ್ರತಿಷ್ಠೆಯ ಪ್ರಶ್ನೆಯೂ ಅಲ್ಲಿ ಅಡಕವಾಗಿರುವುದು ಹೌದು. ಅದೇ ವೇಳೆಗೆ ಈ ಮರ್ಯಾದೆ, ಶೀಲ, ಚಾರಿತ್ರ್ಯ ದ ಕೊರತೆಗಳೆಲ್ಲಾ ಇವತ್ತಿಗೂ ಹೆಣ್ಣಿನ ಇಲ್ಲವೇ ಕೆಳಸ್ತರದ ಜೀವಗಳನ್ನು ಬಲಿಕೊಡುವ ಮೂಲಕವೇ ಇತ್ಯರ್ಥವಾಗಬೇಕಾದ ಕ್ರಮ ಅತ್ಯಂತ ವಿಷಾದನೀಯವಾದುದು. ಹತ್ಯೆಯ ಮೂಲಕ ಮರ್ಯಾದೆಯ ಕಾಪಾಡುವಿಕೆ ಎನ್ನುವ ವಿಚಾರವೇ ಅತ್ಯಂತ ಬಾಲಿಶವಾದುದು. ಅತ್ಯಂತ ವೇಗವಾದ ನಾಗರಿಕತೆಯ ನಡುವೆಯು ಈ ಬಗೆಯ ಮರ್ಯಾದೆ ಹತ್ಯೆಯ ಪ್ರಕರಣಗಳು ದಿನಬೆಳಗಾದರೆ ಸುದ್ಧಿಯಾಗುವುದು ಮನುಷ್ಯನಲ್ಲಿರುವ ಮೃಗತ್ವದ ಮೇಲೆ ಬೆಳಕು ಹರಿಸಿದಂತಿರುತ್ತದೆ.

ಅಂತರ್ಜಾತಿಯ ಮದುವೆಗಳು ಸಾಂಪ್ರದಾಯಿಕ ಜಾತಿ ಪದ್ಧತಿಯ ನಿರ್ಮೂಲನೆಯಲ್ಲಿ ಒಂದು ರಾಮಬಾಣವಿದ್ಧಂತೆ. ಪ್ರತಿಗಾಮಿಗಳಿಗೆ ಈ ಬಗೆಯ ರಾಮಬಾಣಕ್ಕಿಂತಲೂ ತಟಸ್ಥವಾಗಿರುವ ಬಿಲ್ಲಿನ ಬಗ್ಗೆಯೇ ಹೆಚ್ಚು ಆಸ್ಥೆ. ಹಾಗಾಗಿ ಜಾತಿ ಪದ್ಧತಿ ನಮ್ಮ ಸಮಾಜದ ಅತಿ ಪ್ರಮುಖವಾದ ಒಂದು ಪರಂಪರೆಯಾಗಿ ಮುಂದುವರೆಯುತ್ತದೆ. ಅದೇ ವೇಳೆಗೆ ಈ ಸಾಂಪ್ರದಾಯಿಕ ಜಾತಿ ತುಂಡಾಗುವಲ್ಲಿಯೇ ಅನೇಕರ ಉದರದೆದುರಿನ ಪ್ರಶ್ನೆಯೂ ಅಲ್ಲಿ ಅಡಕವಾಗಿರುವುದರಿಂದ ಅತ್ಯಂತ ಜಾಣತನದಿಂದ ಜಾತಿ ಪದ್ಧತಿಯನ್ನು ಪೋಷಿಸಿಕೊಂಡು ಬರುವ ವ್ಯವಸ್ಥಿತ ಹುನ್ನಾರಗಳೂ ಇವೆ. ಇನ್ನು ಮರ್ಯಾದೆ ಹತ್ಯೆಗಳು ಸಾಮಾನ್ಯವಾಗಿ ಮಹಿಳೆಯನ್ನು ಮಾತ್ರ ಬಾಧಿಸುವುದೇ ಹೆಚ್ಚು, ಅದರಲ್ಲೂ ದಲಿತ ಹುಡುಗ-ಹುಡುಗಿಯರನ್ನಂತೂ ಅದು ಬೆಂಬಿಡದೇ ಪೀಡಿಸುವ ಭೂತವಿದ್ದಂತೆ. ಮದುವೆಯಾಗಿ ಮಕ್ಕಳಾಗಿ ತಮ್ಮ ಬದುಕನ್ನು ತಮ್ಮಿಷ್ಟದಂತೆ ದೂಡುವಾಗಲೇ ದುತ್ತನೇ ಎದುರಾಗುವ ದುರುಳರ ನಾಲಿಗೆಗೆ ನೆತ್ತರವಾಗುವ ಅಮಾಯಕರನ್ನು ನೋಡಿದರೆ ಮಾನವೀಯ ಕಾಳಜಿ ಇರುವ ಯಾರೇ ಆಗಲಿ ಕರಗುತ್ತಾರೆ. ಕೊರಗುತ್ತಾರೆ. ಒಂದಂತೂ ಸತ್ಯ ಈ ಮರ್ಯಾದೆ ಹತ್ಯೆಯ ಬೀಜಗಳು ಜಾತಿಪದ್ಧತಿ ಮತ್ತು ಅವಿಭಕ್ತ ಕುಟುಂಬದ ಘನತೆ ಮತ್ತು ಗೌರವ ಸಂರಕ್ಷಣೆಯ ನಡುವೆ ಥಳಕು ಹಾಕಿಕೊಂಡಿರುವದಿದೆ. ಮಿಕ್ಕಂತೆ ಧರ್ಮ, ಪ್ರಾದೇಶಿಕತೆ, ಜನಾಂಗಗಳು ಬರಬಹುದಾದರೂ ಮರ್ಯಾದೆ ಹತ್ಯೆಯ ಮೂಲ ಜಾತಿಯ ಜಿಗುಟುತನ ಮತ್ತು ಅವಿಭಕ್ತ ಕುಟುಂಬದ ಕರ್ಮಠ ರಚನೆಯನ್ನು ಆಧರಿಸಿದೆ.

(ಚಿತ್ರಕೃಪೆ: ವಿಕಿಪೀಡಿಯ)

ವಕೀಲರು, ಪತ್ರಕರ್ತರು ಮತ್ತು ಫ್ಯಾಂಟಮ್ ಭೂತ


– ಪರಶುರಾಮ ಕಲಾಲ್


 

ಮಾಧ್ಯಮಗಳು ಮತ್ತು ವಕೀಲರ ನಡುವೆ ನಡೆದ ಯುದ್ಧವನ್ನು ನಾವು ಎಲ್ಲರೂ ನೋಡಿದ್ದೇವೆ. ನೋಡಿದ್ದೇವೆ ಏನು ಬಂತು ರೇಸಿಗೆಯಾಗುವಷ್ಟು ದೃಶ್ಯಮಾಧ್ಯಮಗಳು ಉಣ ಬಡಿಸಿವೆ. ವಕೀಲರದು ಸರಿಯೇ ? ಮಾಧ್ಯಮದ್ದು ಸರಿಯೇ ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದಕ್ಕಿಂತ ಇದು ಯಾಕೇ ನಡೆಯಿತು ? ಏನು ಸಮಸ್ಯೆ ಇದಕ್ಕೆ ಕಾರಣ ಎಂದು ಎಲ್ಲರೂ ಯೋಚಿಸಬೇಕಿದೆ.

ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿದ ಸಂದರ್ಭದಲ್ಲಿ ನ್ಯಾಯಾಂಗ ಒಂದಿಷ್ಟು ಮಾನವಂತ ಕೆಲಸ ಮಾಡಿತು ಎನ್ನುವದನ್ನು ಒಪ್ಪುವ ಒಂದು ವರ್ಗ ಇದೆ. ಚರ್ಚೆಯನ್ನು ಇಲ್ಲಿಂದಲೇ ಆರಂಭಿಸೋಣ. ಅಣ್ಣಾ ಹಜಾರೆ ಭೃಷ್ಠಾಚಾರದ ವಿರುದ್ಧ ಹೋರಾಟದವರೆಗೆ ಇದನ್ನು ಎಳೆದುಕೊಂಡು ಹೋಗಬಹುದು. ಗಣಿ ಹಗರಣ ಕುರಿತಂತೆ ಆಂಧ್ರ ಹಾಗೂ ಕರ್ನಾಟಕದಲ್ಲಿ  ಸಿಬಿಐ ತನಿಖೆ ನಡೆಸುತ್ತಿರುವುದು. ಯಡಿಯೂರಪ್ಪ ಗಣಿ ಕಪ್ಪ ಪಡೆದ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಲು ಸಾಧ್ಯವೇ ವರದಿ ನೀಡಲು ಸಿಇಸಿ (ಕೇಂದ್ರ ಉನ್ನತಾಧಿಕಾರಿಗಳ ತಂಡ) ಸೂಚಿಸಿದೆ. ಇಲ್ಲಿ ಮಾಧ್ಯಮಗಳಿಗಿಂತ ನ್ಯಾಯಾಂಗ ಇಡೀ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಂಗವೆಂದರೆ ನ್ಯಾಯಾಧೀಶರು ಮಾತ್ರವಲ್ಲ, ಅಲ್ಲಿ ವಕೀಲರು ಇರುತ್ತಾರೆ. ಅವರ ಪಾತ್ರವೂ ಸಹ ಬಹಳ ಮುಖ್ಯ.

ಮತ್ತೊಂದು; ನಾವು ದೃಶ್ಯ ಮಾಧ್ಯಮಗಳ ಕಡೆ ನೋಡೋಣ. ದೃಶ್ಯಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಬಂದ ಮೇಲೆ ರೋಚಕ ಸುದ್ದಿಗಳಿಗೆ ಹೆಚ್ಚು ಗಮನ ಕೊಟ್ಟವು. ಮತ್ತೊಂದು ಕಡೆ ಇವೇ ನ್ಯಾಯಾಲಯಗಳಾಗಿ ಕೆಲಸ ಮಾಡ ತೊಡಗಿದವು. ಆರೋಪಿಗಳನ್ನು ಆರೋಪಿಗಳೆಂದು ಕರೆಯದೇ ಈ ಕೃತ್ಯವೆಸಗಿದ ಪಾತಕಿಗಳು, ದುಷ್ಟರು, ಖೂಳರು ಎಂದೇ ಚಿತ್ರಿಸಿದವು. ಎಷ್ಟೋ ಸಾರಿ ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡಿದ ರೀತಿಯಲ್ಲಿ ವರದಿ ಮಾಡಿದ್ದು ಇದೆ. ಇದು ಸಾಲದು ಎಂಬಂತೆ ಚಿತ್ರನಟಿಯರನ್ನು ಕುಳ್ಳರಿಸಿ, ಕುಟುಂಬ ನ್ಯಾಯಾಲಯವನ್ನು ತೆರೆದು ಗಂಡ-ಹೆಂಡತಿ ಜಗಳ ಬಿಡಿಸುವ ನ್ಯಾಯಾಧೀಶರ ಪಾತ್ರ ನೀಡಿದರು. ಜನರಿಗೆ ಮನರಂಜನೆ ನೀಡುತ್ತಾ ಕೆಳ ಮಧ್ಯಮವರ್ಗದವರ ಬದುಕು ಬೀದಿಪಾಲಾಗಿಸಿ, ಎಷ್ಟೋ ಪ್ರಕರಣಗಳಲ್ಲಿ ನೇರವಾಗಿ ಹೊಡೆದಾಡಿಸುವ ದೃಶ್ಯಗಳನ್ನು ಸಹ ಲೈವ್ ಆಗಿಯೇ ಬಿತ್ತರಿಸಿದವು. ಈಗ ಕುಟುಂಬ ಜಗಳವಿರಲಿ, ಏನೋ ಸಮಸ್ಯೆ ಇರಲಿ ಎಲ್ಲರೂ ಈ ದೃಶ್ಯಮಾಧ್ಯಮಗಳ ಬಾಗಿಲು ತಟ್ಟುವಂತೆ ಮಾಡಿ ಬಿಟ್ಟಿವೆ. ಯಾರಿಗೂ ನಾವು ಹೆದುರುವುದಿಲ್ಲ. ನಾವು ಮಾಧ್ಯಮದವರು. ಏನು ಬೇಕಾದರೂ ಮಾಡುತ್ತೇವೆ ಎಂಬ ದುಸ್ಸಾಹಸದ ಮಾತುಗಳನ್ನು ಆಡಿದವು.

ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರೂ ಇದೇ ದುಸ್ಸಾಹಸದ ಮಾತುಗಳನ್ನು ಖಾಸಗಿಯಾಗಿ ಆಡುತ್ತಾರೆ. ಆಡಿಕೊಳ್ಳಲಿ ಬಿಡಿ. ಎಷ್ಟೇ ಆಗಲಿ, ಅದು ಅವರ ಖಾಸಗಿ ಮಾತು ಎನ್ನಬಹುದು. ದೃಶ್ಯ ಮಾಧ್ಯಮದವರು, ಮುದ್ರಣ ಮಾಧ್ಯಮದವರು ಇದೇ ಮಾತನ್ನು ಆಡಿದಾಗ ಭಯ ಆವರಿಸುತ್ತೆ . ಯಾಕೆಂದರೆ ಅದು ಸಾರ್ವಜನಿಕವಾಗಿ ಆಡಿ ಬಿಟ್ಟಾಗ. ಖಾಸಗಿಯಾಗಿ ಏನೋ ಬೇಕಾದರೂ ಹೇಳಿಕೊಳ್ಳಲಿ, ಆದರೆ ಅದನ್ನು ಪತ್ರಿಕೆಗಳಲ್ಲಿ ಬರೆದು, ದೃಶ್ಯಮಾಧ್ಯಮದಲ್ಲಿ ಆಡಿ ತೋರಿಸಿದಾಗ ಇವರೆಲ್ಲಾ ಏನು ಮಾಡುತ್ತಿದ್ದಾರೆ ? ಏನು ಮಾಡಬೇಕು ಎಂದುಕೊಂಡಿದ್ದಾರೆ ? ವಕೀಲರು ಹಾಗೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು ಇವರಿಬ್ಬರಿಗೆ ಸುಪ್ರಮಸಿ ಸಮಸ್ಯೆ ಕಾಡುತ್ತಿದೆ. ಇದು ಒಂದು ರೀತಿಯ ಫ್ಯಾಂಟಮ್ ಭೂತ ಆವರಿಸಿಕೊಂಡಿದೆ. ನಾವೇ ಸೂಪರ್ ಮ್ಯಾನ್ ಎನ್ನುವ ಎರಡು ಸೂಪರ್ ಮ್ಯಾನ್‌ಗಳ ನಡುವೆ ನಡೆಯುತ್ತಿರುವ ಯುದ್ಧವಿದು. ಇದಕ್ಕಿಂತ ಬೇರೇನೂ ಇದರ ಹಿಂದೆ ಇಲ್ಲ.

ಇದಕ್ಕೆ ಮುದ್ರಣ ಮಾಧ್ಯಮವೂ ಕೈಗೊಡಿಸಿದೆ. ಮುದ್ರಣ ಮಾಧ್ಯಮವೂ ಈಗ ರೋಚಕ ಸುದ್ದಿಗೆ, ಟ್ಯಾಬ್ಲಾಯ್ಡ್  ಭಾಷೆಗೆ ಒಳಗಾಗಿರುವ ಹೊತ್ತಿನಲ್ಲಿ ಅದನ್ನೇ ದೊಡ್ಡ ತನಿಖೆ ವರದಿ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಅವರು ಬೆಂಬಲಿಸಲೇಬೇಕು. ಬೆಂಬಲಿಸಿದ್ದಾರೆ. ಅವರು ಯುದ್ಧವನ್ನು ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್  ಕೋರ್ಟ್ ಆವರಣ ಬಿಟ್ಟು ದೃಶ್ಯಮಾಧ್ಯಮದ ಕಣ್ಣು ಬೇರೆ ಕಡೆ ಹೋಗಲೇ ಇಲ್ಲ. ಇಡೀ ದಿನ ಕರ್ನಾಟಕವೇ  ಹತ್ತಿ ಉರಿಯುತ್ತಿದೆ ಎಂಬ ಚಿತ್ರಣವನ್ನು ನೀಡಿದರು. ರೆಡ್ಡಿಯನ್ನು ಅದುವರೆಗೆ ಹೊಸ ಬಟ್ಟೆ, ಧರಿಸಿದ್ದರು. ಇಡ್ಲಿ ತಿಂದರು, ಕಾಫಿ ಕುಡಿದರು ಎಂದೆಲ್ಲಾ ವರ್ಣಿಸುತ್ತಿದ್ದ  ದೃಶ್ಯ ಮಾಧ್ಯಮಗಳು ರೆಡ್ಡಿಯನ್ನು ಕೈ ಬಿಟ್ಟು ಬಿಟ್ಟರು. ಇದು ರೆಡ್ಡಿ ಗ್ಯಾಂಗ್ಗೂ, ಸರ್ಕಾರಕ್ಕೂ  ಸ್ವಲ್ಪ ಖುಷಿಯ ವಿಷಯ. ಈ ಘಟನೆಯಾಗದಿದ್ದರೆ ಗಣಿ ಹಗರಣದಲ್ಲಿ ಯಾರಿರಬಹುದು ಎಂದು ಎಲ್ಲರ ಹೆಸರನ್ನು ಇರಬಹುದು ಎಂದು ಹೇಳಲಾಗುತ್ತಿದೆ ಎಂದು ಅವರೇ ತೀರ್ಪು  ನೀಡಿ ಬಿಡುತ್ತಿದ್ದರು.

ಕೊನೆ ಗುಟುಕು : ಒಬ್ಬ ಪೊಲೀಸ್ ಪೇದೆ ಮಹದೇವಯ್ಯ ವಕೀಲರ ಕಲ್ಲು ತೂರಾಟದಿಂದ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೇ ಸತ್ತು ಹೋಗಿ ಬಿಟ್ಟ ಎಂದೇ ಬಹುತೇಕ ದೃಶ್ಯ ಮಾಧ್ಯಮಗಳು ಹೇಳಿಯೇ ಬಿಟ್ಟವು. ಅದು ಸುಳ್ಳಾಗಿತ್ತು. ಸುಳ್ಳಾಗಿದ್ದರ ಬಗ್ಗೆ ಯಾವ ಕ್ಷಮೆಯನ್ನೂ ಕೇಳದೇ ಇರುವುದನ್ನು ನೋಡಿದರೆ ಇದು ನಿರ್ಲಜ್ಜೆಯ  ಪರಮಾವಧಿ ಎನ್ನದೇ ಬೇರೆ ಪದವೇ ಇಲ್ಲ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ರೈಲ್ವೆ ಇಲಾಖೆಯಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೂ ಸಹ ಅವನಲ್ಲಿ ತನ್ನ ತಾಯಿನಾಡಾದ ಬ್ರಿಟೀಷರ ಪರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಬಹುದಿನಗಳಿಂದ ಮನೆ ಮಾಡಿತ್ತು.

1902 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಸ್ಥಳೀಯ ಬಿಳಿಯರು ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದಾಗ (ಬೋರ್ ‌ಯುದ್ಧ) ಸೇನೆಯಲ್ಲಿ ಸೇವೆ ಸಲ್ಲಿಸಲು ಕಾರ್ಬೆಟ್ ಅರ್ಜಿ ಸಲ್ಲಿಸಿದ್ದ. ಆದರೆ ಸರ್ಕಾರ ಅವನ ಅರ್ಜಿಯನ್ನು ತಿರಸ್ಕರಿಸಿತು. ಕಾರ್ಬೆಟ್‍ನನ್ನು ಸೇನೆಗೆ ನಿಯೋಜಿಸಿದರೆ, ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಮೊಕಮೆಘಾಟ್ ಮತ್ತು ಸಮಾರಿಯಘಾಟ್ ನಿಲ್ದಾಣಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಗೆ ಅಡ್ಡಿಯಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು. ಕಾರ್ಬೆಟ್ ಸೇನೆಗೆ ಸೇರುವ ವಿಷಯದಲ್ಲಿ ಆತನ ತಾಯಿಗೂ ಇಷ್ಟವಿರಲಿಲ್ಲ. ಮಗನಿಗೆ ಮದುವೆ ಮಾಡಬೇಕೆಂಬ ಚಿಂತೆ ಮಾತ್ರ ಅವಳನ್ನು ಸದಾ ಕಾಡುತಿತ್ತು. ಒಮ್ಮೆ ಕಾರ್ಬೆಟ್ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದಾಗ, ಇಂಗ್ಲೆಂಡ್‍ನಿಂದ  ಸಂಬಂಧಿಕರ ಮನೆಗೆ ಬಂದಿದ್ದ ಒರ್ವ ತರುಣಿಯ ಜೊತೆ ಸ್ನೇಹ ಉಂಟಾಗಿ, ಅದು ಮದುವೆ ಹಂತದವರೆಗೆ ಬೆಳದು ಆನಂತರ  ಅನಿರೀಕ್ಷಿತವಾಗಿ ನಿಂತು ಹೋಯಿತು. ಸದಾ ಜನಜಂಗುಳಿಯಿಂದ ದೂರ ಉಳಿದು ಏಕಾಂಗಿಯಾಗಿ ಇರ ಬಯಸುತಿದ್ದ ಕಾರ್ಬೆಟ್, ಪ್ರಾಣಿ ಮತ್ತು ಪರಿಸರದ ಮೇಲಿನ ಅನನ್ಯ ಪ್ರೀತಿಯಿಂದ ನಂತರದ ದಿನಗಳಲ್ಲಿ  ಮದುವೆ ವಿಷಯಕ್ಕೆ ತಿಲಾಂಜಲಿ ನೀಡಿದ.

ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದಾಗಲೇ ಕಾರ್ಬೆಟ್‍ಗೆ ಸೇನೆಗೆ ಸೇರುವ ಅವಕಾಶ ಅನಿರೀಕ್ಷಿತವಾಗಿ ಒದಗಿ ಬಂತು. 1914 ರ ಜುಲೈ ತಿಂಗಳಲ್ಲಿ ಪ್ರಾರಂಭವಾದ ಮೊದಲ ವಿಶ್ವ ಮಹಾಯುದ್ಧದ ಪರಿಣಾಮ ಬ್ರಿಟಿಷ್ ಸೇನೆಯಲ್ಲಿ ಸೈನಿಕರ ಕೊರತೆ ಎದ್ದು ಕಾಣುತಿತ್ತು. ಇಂಗ್ಲೆಂಡ್ ತನ್ನ ವಸಾಹತು ಪ್ರದೇಶಗಳಲೆಲ್ಲಾ ಸೇನೆಯನ್ನು ನಿಯೋಜಿಸಿದ್ದರಿಂದ ಅದನ್ನು ವಾಪಸ್ ಕರೆಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಭಾರತದಿಂದ ಹೊಸದಾಗಿ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ಆಸಕ್ತಿ ತಾಳಿತ್ತು. ತನ್ನ ಅನುಪಸ್ಥಿತಿಯಲ್ಲಿ ಕೂಡ ಕಾರ್ಮಿಕರು ಕೆಲಸ ಮಾಡುತ್ತಾರೆ ಎಂಬ ಭರವಸೆಯನ್ನು ಕಾರ್ಬೆಟ್ ಸರ್ಕಾರಕ್ಕೆ ನೀಡಿದ ಮೇಲೆ ಆತನನ್ನು ಸೇನೆಗೆ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆ ವೇಳೆಗಾಗಲೇ ಕಾರ್ಬೆಟ್‍ಗೆ ನಲವತ್ತು ವರ್ಷ ಮೀರಿದ್ದರಿಂದ ಆತನನ್ನು ಯುದ್ಧಭೂಮಿಗೆ ಬದಲಾಗಿ ಸೈನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯವನ್ನು ವಹಿಸಲಾಯಿತು. ಕಾರ್ಬೆಟ್‍ಗೆ ಮೊದಲಿಗೆ ಈ ವಿಷಯದಲ್ಲಿ ನಿರಾಸೆಯಾದರೂ, ಸೇನೆಗೆ, ಅದಕ್ಕಿಂತ ಹೆಚ್ಚಾಗಿ  ತನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದುದ್ದಕ್ಕಾಗಿ ತೃಪ್ತಿಪಟ್ಟುಕೊಂಡ.

ಯುದ್ಧಭೂಮಿಯಲ್ಲಿ ಸೈನಿಕರಿಗೆ ತಾತ್ಕಾಲಿ ಶೆಡ್ ನಿರ್ಮಾಣ ಮಾಡುವುದು, ರಸ್ತೆ, ಸೇತುವೆ ನಿರ್ಮಿಸುವುದು, ಅವರಿಗೆ ಆಹಾರ, ಇನ್ನಿತರೆ ವಸ್ತುಗಳನ್ನು ರೈಲು ಇಲ್ಲವೆ ವಾಹನಗಳ ಮೂಲಕ ಸರಬರಾಜು ಮಾಡುವ ಜವಬ್ದಾರಿ ಇವೆಲ್ಲವನ್ನು ಕಾರ್ಬೆಟ್ ನಿರ್ವಹಿಸಬೇಕಾದ್ದರಿಂದ ಅವನಿಗೆ ಬೇಕಾದ 500 ಜನರ ತಂಡವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ‍ವನ್ನು ಅವನಿಗೆ ನೀಡಲಾಯಿತು. ಹಾಗಾಗಿ ನೈನಿತಾಲ್ ಪಟ್ಟಣಕ್ಕೆ ಬಂದ ಕಾರ್ಬೆಟ್ ಸುತ್ತಮುತ್ತಲಿನ ಹಳ್ಳಿಗಳ ಧೃಡಕಾಯದ ಯುವಕನ್ನು ಸೇನೆಯ ಸೇವೆಗಾಗಿ ಆಯ್ಕೆಮಾಡಿಕೊಂಡ. ಬ್ರಿಟಿಷ್ ಸರ್ಕಾರ ಕಾರ್ಬೆಟ್‍ನ ತಂಡಕ್ಕೆ ಕುಮಾವನ್-70 ಎಂದು ನಾಮಕರಣ ಮಾಡಿತು.

ಕಾರ್ಬೆಟ್ ಮೊಕಮೆಘಾಟ್‍ಗೆ ಹೋಗಿ ಸ್ಟೇಶನ್ ಮಾಸ್ಟರ್ ಸೇರಿದಂತೆ, ಎಲ್ಲರಿಗೂ ಕೆಲಸದ ಜವಬ್ದಾರಿ ವಹಿಸಿ, ಅವರ ಪ್ರಾರ್ಥನೆ, ಹಾರೈಕೆಗಳೊಂದಿಗೆ ಮರಳಿ ನೈನಿತಾಲ್‍ಗೆ ಬಂದು ತನ್ನ ತಂಡದೊಂದಿಗೆ ಬಾಂಬೆಗೆ ತೆರಳಿದ. 1917 ರ ಜೂನ್ ತಿಂಗಳಿನಲ್ಲಿ ಅವನ ತಂಡ ಹಡಗಿನಲ್ಲಿ ಇಂಗ್ಲೆಂಡ್‍ನತ್ತ ಪ್ರಯಾಣ ಬೆಳಸಿತು. 500 ಜನರಿದ್ದ ಅವನ ತಂಡದಲ್ಲಿ ಹಲವು ಜಾತಿಯ ಹಾಗೂ ಹಲವು ಧರ್ಮದ ಜನರಿದ್ದುದು ವಿಶೇಷ. ಅವರೆಲ್ಲಾ ಸಮುದ್ರದ ಮೂಲಕ ಭಾರತ ಬಿಟ್ಟು ತೆರಳುತಿದ್ದಂತೆ ತಮ್ಮ ಜಾತಿ, ಧರ್ಮದ ನೆಲೆಗಳನ್ನು ಮರೆತು, ಭಾರತೀಯರು ಎಂಬ ಭಾವನೆ ಅವರುಗಳ ಎದೆಯಲ್ಲಿ ಚಿಗುರೊಡೆದಿತ್ತು. ಕಾರ್ಬೆಟ್‍ಗೂ ಕೂಡ ಇದು ಅವನ ಪಾಲಿಗೆ ಮೊದಲ ವಿದೇಶ ಪ್ರವಾಸವಾಗಿತ್ತು. ತನ್ನ ಕುಟುಂಬ, ವೃದ್ಧ ತಾಯಿ, ಸಹೋದರಿ ಇವರೆಲ್ಲರನ್ನು ಅಗಲಿ ಹೋಗುವ ಸಂದರ್ಭದಲ್ಲಿ ಅವನೂ ಕೂಡ ಭಾವುಕನಾಗಿದ್ದ. ಅದರೆ ಅವನಲ್ಲಿ ತನ್ನ ಮೂಲ ನೆಲೆಯಾದ ಇಂಗ್ಲೆಂಡ್, ಅದರಲ್ಲೂ ವಿಶೇಷವಾಗಿ ಐತಿಹಾಸಿಕ  ಲಂಡನ್ ‍ನಗರ ನೋಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು.

ಅವನ ತಂಡ ಸುಮಾರು 30 ದಿನಗಳ ಪ್ರಯಾಣದ ನಂತರ ಇಂಗ್ಲೆಂಡಿನ ಸೌತ್ ಹ್ಯಾಂಪ್ಟೆನ್ ನಗರವನ್ನು ತಲುಪಿತು. ಒಂದು ವಾರ ಕಾಲ ಬಂದರಿನಲ್ಲಿ ಬೀಡು ಬಿಟ್ಟಿದ್ದ ಕಾರ್ಬೆಟ್ ನೇತೃತ್ವದ ಕುಮಾವನ್-70 ತಂಡವನ್ನು ಅಂತಿಮವಾಗಿ ಫ್ರಾನ್ಸ್ ನ ಯುದ್ದ ಭೂಮಿಗೆ ಕಳಿಸಿಕೊಡಲಾಯಿತು. ಅಲ್ಲಿನ ವಾತಾವರಣ, ಚಳಿ, ವಿವಿಧ ಬಗೆಯ ಸೊಳ್ಳೆಗಳು, ಅನಿರೀಕ್ಷಿತವಾಗಿ ಬಂದೆರಗುವ ಸಾಂಕ್ರಾಮಿಕ ರೋಗಗಳು ಇವೆಲ್ಲವೂ ಕಾರ್ಬೆಟ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಮಸ್ಯೆ ಎದುರಾಯಿತು. ಸೇನೆಯಲ್ಲಿ ಯಥೇಚ್ಚವಾಗಿ ಸರಬರಾಜು ಮಾಡುತಿದ್ದ ದನದ ಮತ್ತು ಹಂದಿಯ ಮಾಂಸ ಹಾಗೂ ವಿಸ್ಕಿ, ರಮ್ ‍ಅನ್ನು ತಿನ್ನುವ ಅಥವಾ ಕುಡಿಯುವ ಅಭ್ಯಾಸ ಯಾರಿಗೂ ಇರಲಿಲ್ಲ. ಆದರೆ ತಂಬಾಕನ್ನು ಬಳಸುವ ಅಭ್ಯಾಸವಿತ್ತು. ಕಾರ್ಬೆಟ್‍ನ ಮನವಿ ಮೇರೆಗೆ ಮಾಂಸದ ಬದಲು ಆಲೂಗೆಡ್ಡೆ, ಬಟಾಣಿ ಮುಂತಾದ ಹಸಿರು ತರಕಾರಿಗಳು, ಮತ್ತು ಅಕ್ಕಿ ಹಾಗೂ ಗೋಧಿಹಿಟ್ಟನ್ನು ತಂಡಕ್ಕೆ ಸರಬರಾಜು ಮಾಡಲಾಯಿತು. ಇದಕ್ಕೆ ಕಾರಣ ಬಹುತೇಕ ಸದಸ್ಯರು ಸಸ್ಯಹಾರಿಗಳಾಗಿದ್ದದ್ದು.

ಯುದ್ಧಭೂಮಿಯಲ್ಲಿ ತೂರಿ ಬರುವ ಗುಂಡು ಹಾಗೂ  ಫಿರಂಗಿಯ ಶೆಲ್‍ಗಳ ನಡುವೆ, ಸೈನಿಕರಿಗೆ ಕಂದಕ ತೋಡುವುದು, ಅವರಿಗೆ ಬಂಕರ್ ನಿರ್ಮಿಸಿ ಕೊಡುವುದು ಇಲ್ಲವೆ ಕೇಬಲ್ ತಂತಿಯ ಜಾಲ ನಿರ್ಮಿಸಿ ಕೊಡುವ ಕೆಲಸವನ್ನು ಕಾರ್ಬೆಟ್ ತಂಡ ಯಶಸ್ವಿಯಾಗಿ ನಿರ್ವಹಿಸಿತು. ಎಷ್ಟೋಬಾರಿ ತುರ್ತು ವೇಳೆಯಲ್ಲಿ ಹಗಲು ಇರುಳು ಎಂಬ ಪರಿವಿಲ್ಲದೆ ಸೇತುವೆ ಮತ್ತು ರೈಲ್ವೆ ಮಾರ್ಗವನ್ನು ಸಹ ಈ ತಂಡ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಬೆಟ್ ತನ್ನ ತಂಡದ ಸದಸ್ಯರ ಪಾಲಿಗೆ ಕೇವಲ ನಾಯಕನಾಗಿರದೆ, ಸಂತನಂತೆ, ಸಹೋದ್ಯೋಗಿಯಂತೆ ವರ್ತಿಸುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಕೆಲಸ ಮಾಡುವ ರೀತಿ ಅಲ್ಲಿನ ಇತರೆ ಸೈನ್ಯದ ಅಧಿಕಾರಿಗಳಿಗೆ ವಿಸ್ಮಯವನ್ನುಂಟು ಮಾಡಿತ್ತು. ಸೈನಿಕರೆಲ್ಲಾ ಚಳಿ ತಡೆಯಲು ರಮ್‍ನಂತಹ ಮಾದಕ ದ್ರವ್ಯಕ್ಕೆ ಮೊರೆ ಹೋದರೆ, ಭಾರತದ ಕಾರ್ಬೆಟ್ ತಂಡದ ಸದಸ್ಯರು ತಮ್ಮ ಎರಡು ಅಂಗೈಗಳನ್ನು ಉಜ್ಜಿಕೊಳ್ಳುತ್ತಾ, ಚಳಿಯನ್ನು ನಿಯಂತ್ರಿಸುವ ಬಗೆ ಅವರಲ್ಲಿ ಅಚ್ಚರಿ ಉಂಟು ಮಾಡಿತ್ತು.

ನೈನಿತಾಲ್ ಮತ್ತು ಕುಮಾವನ್ ಪರ್ವತ ಗಿರಿ ಶ್ರೇಣಿಗಳಲ್ಲಿ ಬೆಳೆದು ಬಂದಿದ್ದ ಕಾರ್ಬೆಟ್ ತಂಡದ ಸದಸ್ಯರಿಗೆ ಚಳಿಯ ವಾತಾವರಣದ ನಡುವೆ ಬದುಕುವ ಕಲೆ ಕರಗತವಾಗಿತ್ತು. ಹಾಲಿಲ್ಲದ ಕಪ್ಪು ಚಹಾ ಮತ್ತು ಚುಟ್ಟಾ,  ಈ ಎರಡು ವಸ್ತುಗಳಿದ್ದರೆ ಆಹಾರವಿಲ್ಲದೆ ದುಡಿಯುವ ಶಕ್ತಿ ಅವರಲ್ಲಿತ್ತು. 1918 ರ ಜನವರಿ ತಿಂಗಳಿನಲ್ಲಿ ಒಮ್ಮೆ ಇವರ ಬಿಡಾರಕ್ಕೆ ಆಗಮಿಸಿ, ಇವರ ಕಾರ್ಯ ಚಟುವಟಿಕೆ, ಆಹಾರ ಸಂಸ್ಕೃತಿ ಎಲ್ಲವನ್ನು ಕೂಲಂಕುಶವಾಗಿ ವೀಕ್ಷಿಸಿದ, ಬ್ರಿಟೀಷ್ ಸರ್ಕಾರದಲ್ಲಿ ವಿದೇಶಿ ಸೈನ್ಯ ಪಡೆಗಳ ಉಸ್ತುವಾರಿ ಹೊತ್ತಿದ್ದ ಲಾರ್ಡ್ ಅಂಪ್ತಿಲ್ ಸರ್ಕಾರಕ್ಕೆ ಪತ್ರ ಬರೆದು ಕಾರ್ಬೆಟ್ ತಂಡದ ಶ್ರಮವನ್ನು ಪ್ರಶಂಸಿಸಿದ. ಅಲ್ಲದೆ ನಂತರದ ದಿನಗಳಲ್ಲಿ ಕಾರ್ಬೆಟ್‍ನನ್ನು ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. (ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಹೋರಾಟ ನಡೆಸುತಿದ್ದಾಗ, ಗಾಂಧಿಯ ಮೇಲೆ ಶಿಸ್ತು ಕ್ರಮ ಕೈಗೊಂಡ ಅಧಿಕಾರಿಗಳಲ್ಲಿ ಲಾರ್ಡ್ ಅಂಪ್ತಿಲ್ ಕೂಡ ಒಬ್ಬ.)

ಗಂಗಾನದಿಯ ತಟದ ಮೊಕಮೆಘಾಟ್‍ನಲ್ಲಿ ಉರಿವ ಬಿಸಿಲು, ಕೊರೆವ ಚಳಿ, ಅಥವಾ ಸುರಿವ ಮಳೆಯೆನ್ನದೆ ಕಾರ್ಮಿಕರನ್ನು ಹುರಿದುಂಬಿಸುತ್ತಾ ವರ್ಷಾನುಗಟ್ಟಲೆ ಕಠಿಣ ಕೆಲಸ ಮಾಡಿದ್ದ ಅನುಭವಗಳು ಕಾರ್ಬೆಟ್ ಪಾಲಿಗೆ ಯುದ್ಧಭೂಮಿಯ ಮೂಲಭೂತ ಸೌಕರ್ಯಗಳ ರಚಾನಾತ್ಮಕ ಕೆಲಸಗಳಿಗೆ ವರವಾಗಿ ಪರಿಣಮಿಸಿದವು. 1918 ರಲ್ಲಿ ವಿಶ್ವದ ಮೊದಲ ಮಹಾಯುದ್ಧ ಮುಗಿದಾಗ ಲಂಡನ್ ನಗರಕ್ಕೆ ಕಾರ್ಬೆಟ್ ತಂಡವನ್ನು ಕರೆಸಿಕೊಂಡ ಬ್ರಿಟಿಷ್ ಸರ್ಕಾರ ಪ್ರತಿಯೊಬ್ಬ ಸದಸ್ಯನಿಗೂ ಶೌರ್ಯ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿತು. ಜಿಮ್ ಕಾರ್ಬೆಟ್‍ನ ಹುದ್ದೆಯನ್ನು ಕ್ಯಾಪ್ಟನ್ ದರ್ಜೆಯಿಂದ ಮೇಜರ್ ದರ್ಜೆಗೆ ಏರಿಸಿ ವಿಶೇಷವಾಗಿ ಸನ್ಮಾನಿಸಿತು.

ಭಾರತಕ್ಕೆ ಹಿಂತಿರುಗುವ ಮುನ್ನ ಕಾರ್ಬೆಟ್ ಲಂಡನ್ ನಗರದಲ್ಲಿ ಉಳಿದು, ತನ್ನ ಕನಸಿನ ಲಂಡನ್ ಗೋಪುರ, ಬಂಕಿಂಗ್ ಹ್ಯಾಮ್ ಅರಮನೆ, ಪಾರ್ಲಿಮೆಂಟ್ ಭವನ ಮುತಾಂದ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡ. ಥೇಮ್ಸ್ ನದಿಯ ದಡದಲ್ಲಿ ಏಕಾಂಗಿ ಮನೊಸೋಇಚ್ಛೆ ನಡೆದಾಡಿದ. ನೈನಿತಾಲ್ ಅರಣ್ಯ ಪ್ರದೇಶದಲ್ಲಿ ಮೈಲಿಗಟ್ಟಲೆ ಒಡಾಡಿದ ಅನುಭವ ಇದ್ದ ಕಾರ್ಬೆಟ್ ಲಂಡನ್ ನಗರವನ್ನು ಕಾಲ್ನಡಿಗೆಯಲ್ಲೇ ವೀಕ್ಷಣೆ ಮಾಡಿದ. ತನ್ನ ಕುಮಾವನ್-70 ತಂಡದೊಂದಿಗೆ ಹಡಗಿನಲ್ಲಿ ವಾಪಾಸಾಗುತಿದ್ದಾಗ, ಈಜಿಪ್ಟನಲ್ಲಿ ಹಡಗು ಎರಡು ದಿನ ಲಂಗರು ಹಾಕಿದ ಪ್ರಯುಕ್ತ ಕಾರ್ಬೆಟ್ ತನ್ನ ಸದಸ್ಯರೊಂದಿಗೆ ಕೈರೊ ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ. ಪಿರಮಿಡ್‍ಗಳನ್ನು ನೋಡಿ ಅವುಗಳ ರಚನೆ ಮತ್ತು ಅಗಾಧತೆಗೆ ಕಾರ್ಬೆಟ್ ಬೆರಗಾದ. ತನ್ನ ಸಹೋದರಿ ಮ್ಯಾಗಿ ಮತ್ತು ತಾಯಿಗೆ ಒಂದಿಷ್ಟು ಹತ್ತಿಯ ಬಟ್ಟೆಗಳನ್ನು ಖರೀದಿಸಿ ಬಾಂಬೆಯತ್ತ ಪ್ರಯಾಣ ಬೆಳಸಿದ. ತಾನು ಕರೆದುಕೊಂಡು ಹೋಗಿದ್ದ 500 ಮಂದಿ ಸದಸ್ಯರಲ್ಲಿ ಒರ್ವ ವ್ಯಕ್ತಿ ಮಾತ್ರ ಭಾರತಕ್ಕೆ ಹಿಂತಿರುಗುತಿದ್ದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹಡಗಿನಲ್ಲೇ ಮೃತಪಟ್ಟ. ಉಳಿದವರೆಲ್ಲರೂ ಕಾರ್ಬೆಟ್ ಜೊತೆ ಸುರಕ್ಷಿತವಾಗಿ ಬಾಂಬೆ ನಗರದ ಮೂಲಕ ತಮ್ಮ ಊರುಗಳಿಗೆ ಹಿಂರುಗಿದರು.

ಕಾರ್ಬೆಟ್ ಎರಡು ತಿಂಗಳ ಕಾಲ ರಜೆ ಹಾಕಿ ತನ್ನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ. ಆ ವೇಳೆಗೆ 43 ವರ್ಷ ದಾಟಿದ್ದ ಕಾರ್ಬೆಟ್ ತನ್ನ ಎಲ್ಲ ಉದ್ಯೋಗಗಳಿಗೆ ತಿಲಾಂಜಲಿ ಇತ್ತು ತನ್ನ ವೃದ್ಧ ತಾಯಿ ಮತ್ತು ಅವಿವಾಹಿತೆ ಅಕ್ಕನೊಂದಿಗೆ ಇದ್ದು ಬಿಡಬೇಕೆಂದು ಯೋಚಿಸಲಾರಂಭಿಸಿದ್ದ. ರಜೆಯ ಅವಧಿ ಮುಗಿಯುವ ಮುನ್ನವೇ ಕಾರ್ಬೆಟ್ ಮತ್ತೆ ತನ್ನ ತಂಡದೊಂದಿಗೆ ಆಫ್ಪಾನಿಸ್ಥಾನಕ್ಕೆ ತೆರಳಬೇಕೆಂದು ಸರ್ಕಾರದಿಂದ ಆದೇಶ ಬಂದಿತು. ಆಗಿನ ಅವಿಭಜಿತ ಭಾರತ (ಪಾಕ್ ಮತ್ತು ಭಾರತ,) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತಾದರೂ, ನೈರುತ್ಯ ಭಾಗದ ಆಫ್ಫಾನಿಸ್ಥಾನ, ಬಲೂಚಿಸ್ತಾನ ಸ್ವತಂತ್ರ್ಯವಾಗಿದ್ದು ಹಲವು ಬುಡಕಟ್ಟು ನಾಯಕರ ಆಳ್ವಿಕೆಗೆ ಒಳಪಟ್ಟಿದ್ದವು. ಬುಡಕಟ್ಟು ನಾಯಕರ ಆಂತರಿಕ ಹೋರಾಟದ ಲಾಭವನ್ನು ಪಡೆಯಲು ಬಯಸಿದ ಬ್ರಿಟಿಷ್ ಸರ್ಕಾರ ಇಡೀ ಪ್ರಾಂತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ  ಹಲವು ನಾಯಕರಿಗೆ ಪರೋಕ್ಷ ಬೆಂಬಲ ಸೂಚಿಸಿತ್ತು. ಅಲ್ಲದೆ ಸೈನ್ಯದ ಸಹಾಯವನ್ನೂ ನೀಡಿತ್ತು.

ಆಫ್ಫಾನಿಸ್ತಾನ ಕಾಬೂಲ್, ತಾಲ್, ವಜೀರಿಸ್ತಾನ್ ಮುಂತಾದ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳು ಕಾರ್ಯ ನಿರ್ವಹಿಸಿದ ಕಾರ್ಬೆಟ್, ತನ್ನ ತಂಡದ ಸದಸ್ಯರು  ಹಾಗೂ ಪಂಜಾಬ್ ಬೆಟಾಲಿಯನ್ ತಂಡದ ಜೊತೆಗೂಡಿ ಪಾಕಿಸ್ತಾನದ ಗಡಿ ಭಾಗದಲ್ಲಿ ಸಮಾರು 50 ಕಿ.ಮಿ ಉದ್ದದ ರೈಲ್ವೆ ಮಾರ್ಗ ನಿರ್ಮಿಸಿ ಮಿಲಿಟರಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟ.  1918 ರ ನವಂಬರ್ ವೇಳೆಗೆ ವಾಪಸ್ ನೈನಿತಾಲ್‍ಗೆ ಬಂದ ಕಾರ್ಬೆಟ್ ಮುಂದಿನ ದಿನಗಳನ್ನು ನಿವೃತ್ತಿಯ ದಿನಗಳಾಗಿ ಕಳೆಯಬೇಕೆಂದು ನಿರ್ಧರಿಸಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ. ನೈನಿತಾಲ್‍ನಿಂದ ನೇರವಾಗಿ ಮೊಕಮೆಘಾಟ್‍ಗೆ ತೆರಳಿ ಸರಕು ಸಾಗಾಣಿಕೆ ಕಾರ್ಯಗಳನ್ನು ತನ್ನ ಬಳಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ವಹಿಸಿ, ಶಾಲೆಯ ಜವಬ್ದಾರಿಯನ್ನು ಸ್ಟೇಶನ್ ಮಾಸ್ಟರ್ ರಾಮ್‍ಶರಣ್‍ಗೆ ವಹಿಸಿ, ತನ್ನ ಎರಡು ದಶಕದ ಗಂಗಾನದಿಯ ತಟದ ಏಕಾಂಗಿ ಬದುಕಿಗೆ ವಿದಾಯ ಹೇಳಿ, ಬಾಲ್ಯದಿಂದಲೂ ತನಗೆ ಪ್ರಿಯವಾದ ನೈನಿತಾಲ್ ಪರಿಸರದ ಕಾಡಿನತ್ತ ತೆರಳಲು ಸಿದ್ಧನಾದ.

(ಮುಂದುವರೆಯುವುದು)