Monthly Archives: April 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-2)


– ಡಾ.ಎನ್.ಜಗದೀಶ್ ಕೊಪ್ಪ


ಕಮ್ಯೂನಿಷ್ಟ್ ವಿಚಾರಧಾರೆಯಲ್ಲಿ ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡಿದ್ದ ಚಾರು ಮುಜಂದಾರ್, ಕನು ಸನ್ಯಾಲ್ ಗೆಳೆಯರಾದ ಮೇಲೆ ಕೃಷಿ ಕೂಲಿಕಾರ್ಮಿಕರ ಹೋರಾಟಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು. ಹತ್ತಾರು ವರ್ಷ ಕೇವಲ ಪ್ರತಿಭಟನೆ ಮತ್ತು ಪೊಲೀಸರ ಬಂಧನದಿಂದ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಮನಗಂಡ ಈ ಇಬ್ಬರು ಗೆಳೆಯರು ನೇರಕಾರ್ಯಾಚರಣೆ (Direct Action) ನಡೆಸಲು ತೀರ್ಮಾನಿಸಿದರು. ಚಾರು ಪ್ರತಿಭಟನೆ ಮತ್ತು ಹೋರಾಟಗಳಿಗೆ ಯೋಜನೆ ರೂಪಿಸುವಲ್ಲಿ ಪರಿಣಿತನಾದರೆ, ಕನುಸನ್ಯಾಲ್  ಸಂಘಟನೆಗೆ ಜನರನ್ನು ಒಗ್ಗೂಡಿಸುವ ವಿಷಯದಲ್ಲಿ ಅದ್ಭುತ ಕ್ರಿಯಾಶೀಲ ವ್ಯಕ್ತಿಯಾಗಿದ್ದ. ಹಾಗಾಗಿ ಈ ಎರಡು ಪ್ರತಿಭೆಗಳ ಸಂಗಮ ಕೃಷಿಕರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿತು.  ಮೂಲಭೂತವಾಗಿ ಈ ಹೋರಾಟ ಹಿಂಸೆಯನ್ನು ಒಳಗೊಳ್ಳುವ ಆಲೋಚನೆಯಿಂದ ಕೂಡಿರಲಿಲ್ಲ. ಆದರೆ, ನಕ್ಸಲ್‍ಬಾರಿ ಹಳ್ಳಿಯ ಪ್ರಥಮ ಪ್ರತಿಭಟನೆ ಒಂದು ಕೆಟ್ಟ ಗಳಿಗೆಯಲ್ಲಿ ಅನಿರೀಕ್ಷಿತವಾಗಿ ತೆಗೆದುಕೊಂಡ ತಿರುವಿನಿಂದಾಗಿ ಇವರೆಲ್ಲರನ್ನು ಹಿಂಸೆಯ ಹಾದಿಯಲ್ಲಿ ಶಾಶ್ವತವಾಗಿ ನಡೆಯುವಂತೆ ಮಾಡಿದ್ದು ಭಾರತದ ಸಾಮಾಜಿಕ ಹೋರಾಟಗಳ ದುರಂತದ ಅಧ್ಯಾಯಗಳಲ್ಲಿ ಒಂದು.

1967 ರ ಮಾರ್ಚ್ ಮೂರರಂದು, ಲಪ, ಸಂಗು, ರೈತ ಎಂಬ ಮೂವರು ಸಣ್ಣ ಹಿಡುವಳಿದಾರರು ನೂರೈವತ್ತುಕ್ಕೂ ಹೆಚ್ಚು ಮಂದಿ ಇದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದಿಂದ ನಕ್ಸಲ್‍ಬಾರಿಯ ಜಮೀನುದಾರನ ಮನೆಗೆ ಬಿಲ್ಲು, ಬಾಣ, ಭರ್ಜಿ ಮುಂತಾದ ಆಯುಧಗಳೊಂದಿಗೆ ದಾಳಿ ಇಟ್ಟು ಮುನ್ನೂರು ಭತ್ತದ ಚೀಲಗಳನ್ನು ಹೊತ್ತೊಯ್ದು ಎಲ್ಲರೂ ಸಮನಾಗಿ ಹಂಚಿಕೊಂಡರು. ಈ ಸಣ್ಣ ಘಟನೆ ಕಮ್ಯೂನಿಷ್ಟ್ ಚಳವಳಿಗೆ ಭಾರತದಲ್ಲಿ ಪ್ರಥಮಬಾರಿಗೆ ಹೊಸ ಆಯಾಮ ನೀಡಿತು.

ನಕ್ಸಲ್‍ಬಾರಿ ಹಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆ ಕಮ್ಯೂನಿಷ್ಟ್ ಪಕ್ಷಕ್ಕೆ ವಿನೂತನವಾಗಿ ಕಂಡರೂ ಇದಕ್ಕೂ ಮೊದಲು ಪಕ್ಷದ ಕಾರ್ಯಕರ್ತರು  ರೈತರ ಪರವಾಗಿ ಧ್ವನಿಯೆತ್ತಿದ್ದರು. ಪಶ್ಚಿಮ ಬಂಗಾಳದ ದಿನಜಪುರ್ ಮತ್ತು ರಂಗ್ಪುರ್ ಜಿಲ್ಲೆಗಳಲ್ಲಿ ಜಮೀನುದಾರರು ಗೇಣಿದಾರರಿಗೆ ಬೇಳೆಯುವ ಫಸಲಿನಲ್ಲಿ ಅರ್ಧದಷ್ಟು ಪಾಲು ಕೊಡಬೇಕೆಂದು ಒತ್ತಾಯಿಸಿ ನಡೆಸಿದ ಹೋರಾಟ, ಬಂಗಾಳದ ಉತ್ತರ ಭಾಗದಿಂದ ದಕ್ಷಿಣದ 24 ಪರಗಣ ಜಿಲ್ಲೆಯವರೆಗೆ ಹಬ್ಬಿತ್ತು. ಇದಕ್ಕಾಗಿ ಕಮ್ಯೂನಿಷ್ಟ್ ಪಕ್ಷದಲ್ಲಿ ಕಿಸಾನ್‍ಸಭಾ ಎಂಬ ಘಟಕವನ್ನು ರಚಿಸಿಕೊಂಡು ಕಾರ್ಯಕರ್ತರು 1946 ರಿಂದ ಸತತ ಹೋರಾಟ ನಡೆಸುತ್ತಾ ಬಂದಿದ್ದರು.

ನೆರೆಯ ಆಂಧ್ರ ಪ್ರದೇಶದಲ್ಲಿಯೂ ಕೂಡ ತೆಲಂಗಾಣ ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ನಿಜಾಮನ ಶೋಷಣೆಯ ವಿರುದ್ಧ ಸ್ಥಳೀಯ ರೈತರು ದಂಗೆಯೆದ್ದರು. ನಿಜಾಮನ ಆಳ್ವಿಕೆ ಹಾಗೂ ಅವನ ಆಡಳಿತದ ಅರಾಜಕತೆಯಿಂದ ಬೇಸತ್ತ ಅಲ್ಲಿನ ಜನತೆ 1946 ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಕಾಡ್ಗಿಚ್ಚು ಆ ಪ್ರಾಂತ್ಯದ ಮೂರು ಸಾವಿರ ಹಳ್ಳಿಗಳಿಗೆ ಹರಡಿ ಪ್ರತಿಯೊಂದು ಹಳ್ಳಿಯೂ ಸ್ವಯಂ ಸ್ವತಂತ್ರ ಘಟಕದಂತೆ ನಡೆಯಲು ಪ್ರಾರಂಭಿಸಿದವು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಸ್ವಾತಂತ್ರ್ಯಾನಂತರದ ಭಾರತದ ಸೇನೆ ಆಂಧ್ರಪ್ರದೇಶಕ್ಕೆ ಧಾವಿಸಿ ಬಂದು, ಹೈದರಾಬಾದ್ ಪ್ರಾಂತ್ಯವನ್ನು ನಿಜಾಮನಿಂದ ಕಿತ್ತುಕೊಳ್ಳುವವರೆಗೂ ನಾಲ್ಕುಸಾವಿರ ಮಂದಿ ರೈತರು ನಿಜಾಮನ ದಬ್ಬಾಳಿಕೆಯಲ್ಲಿ ಹೋರಾಟದ ಹೆಸರಿನಲ್ಲಿ ಮೃತಪಟ್ಟಿದ್ದರು. (ಹೈದರಾಬಾದ್ ನಿಜಾಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕನಂತರ ಹೈದರಾಬಾದ್ ಅನ್ನು ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದನು).

ಕಮ್ಯೂನಿಷ್ಟ್ ಪಕ್ಷದ ಅಂಗವಾದ ಕಿಸಾನ್‍ಸಭಾ ಘಟಕದ ಹೋರಾಟಕ್ಕೆ ನಿಜವಾದ ಹೊಸ ಆಯಾಮ ತಂದುಕೊಟ್ಟವರು ನಕ್ಸಲ್‍ಬಾರಿ ಗ್ರಾಮದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು. ಇವರಿಗೆ ಆಧಾರವಾಗಿ ನಿಂತವರು, ಚಾರು ಮುಜಂದಾರ್, ಕನುಸನ್ಯಾಲ್, ಮತ್ತು ಸ್ಥಳೀಯ ಆದಿವಾಸಿ ನಾಯಕ ಜಂಗಲ್ ಸಂತಾಲ್ ಎಂಬಾತ. ನಕ್ಸಲ್‍ಬಾರಿ ಘಟನೆ ಮೇಲು ನೋಟಕ್ಕೆ ಒಂದು ಸಣ್ಣ ಘಟನೆಯಂತೆ ಕಂಡು ಬಂದರೂ ಅದು ಕಮ್ಯೂನಿಷ್ಟ್ ಪಕ್ಷ ತಾನು ನಂಬಿಕೊಂಡು ಬಂದಿದ್ದ ವಿಚಾರ ಮತ್ತು ತಾತ್ವಿಕ ಸಿದ್ಧಾಂತಕ್ಕೆ ಅತಿ ದೊಡ್ಡ ಸವಾಲನ್ನು ಎಸೆದಿತ್ತು. ಅದು ಅನಿರೀಕ್ಷಿತವಾಗಿ ಸ್ಪೋಟಗೊಂಡರೂ ಸಹ ಅದರ ಹಿನ್ನಲೆಯಲ್ಲಿ ಅನೇಕ ರೈತರ, ಸಿಟ್ಟು, ಸಂಕಟ ಮತ್ತು ನೋವು ಹಿಂಸಾಚಾರದ ಮೂಲಕ ವ್ಯಕ್ತವಾಗಿತ್ತು.

ಇದಕ್ಕೆ ಭಾರತ ಸರ್ಕಾರ 1955 ರಲ್ಲಿ ಜಾರಿಗೆ ತಂದ ಭೂಮಿತಿ ಕಾಯ್ದೆ ಕೂಡ ಪರೋಕ್ಷವಾಗಿ ಕಾರಣವಾಗಿತ್ತು. ಪ್ರತಿಯೊಬ್ಬ ವ್ಯಕ್ತಿ 15 ಎಕರೆ ಕೃಷಿಭೂಮಿ, 25 ಎಕರೆ ಕೃಷಿಗೆ ಯೋಗ್ಯವಲ್ಲದ ಭೂಮಿ ಮತ್ತು ಮನೆ ಹಾಗೂ ಇನ್ನಿತರೆ ಬಳಕೆಗಾಗಿ 5 ಎಕರೆ, ಈಗೆ ಒಟ್ಟು 45 ಎಕರೆಯನ್ನು ಮಾತ್ರ ಹೊಂದಬಹುದಾಗಿತ್ತು. ಆದರೆ, ಪಶ್ಚಿಮ ಬಂಗಾಳ, ಆಂಧ್ರ ಸೇರಿದಂತೆ ದೇಶಾದ್ಯಂತ ಅನೇಕ ಜಮೀನುದಾರರು ಸಾವಿರಾರು ಎಕರೆ ಭೂಮಿ ಹೊಂದಿದ್ದರು. ಸರ್ಕಾರದ ಕಣ್ಣು ಒರೆಸುವ ಸಲುವಾಗಿ ತಮ್ಮ ಭೂಮಿಯನ್ನು ಮುಗ್ದ ರೈತರ ಹೆಸರಿಗೆ ವರ್ಗಾಯಿಸಿ, ಅವುಗಳ ದಾಖಲೆ ಪತ್ರಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು. ಭೂಮಿಯ ಒಡೆಯರಾಗಿದ್ದರೂ ಕೂಡ ರೈತರು ಜಮೀನ್ದಾರರಿಗೆ ಹಾಗೂ ಅವರು ಸಾಕಿಕೊಂಡಿದ್ದ ಗೂಂಡಗಳಿಗೆ ಹೆದರಿ ಗೇಣಿದಾರರಾಗಿ ದುಡಿಯುತ್ತಾ ತಾವು ಬೆಳೆದ ಫಸಲಿನ ಮುಕ್ಕಾಲು ಪಾಲು ಅವರಿಗೆ ನೀಡಿ, ಉಳಿದ ಕಾಲು ಪಾಲನ್ನು ತಾವು ಅನುಭವಿಸುತ್ತಿದ್ದರು.

ಈ ಅಸಮಾನತೆಯ ವಿರುದ್ಧ ನಕ್ಸಲ್‍ಬಾರಿ ಪ್ರದೇಶದಲ್ಲಿ ಸಣ್ಣ ಹಿಡುವಳಿದಾರರು, ಗೇಣಿದಾರರು ಮತ್ತು ಕೃಷಿ ಕೂಲಿಕಾರ್ಮಿಕರ ಪರವಾಗಿ ಕಿಸಾನ್‍ಸಭಾ ಸಂಘಟನೆ 1959 ರಲ್ಲಿ ಪ್ರಥಮ ಬಾರಿಗೆ ಪ್ರತಿಭಟನೆಯ ಬಾವುಟ ಹಾರಿಸಿತ್ತು. ಆದರೆ, ಈ ಹೋರಾಟ 1962 ರವರೆಗೆ ಮುಂದುವರಿದು ಕೆಲವು ನಾಯಕರ ಬಂಧನದೊಂದಿಗೆ ವಿಫಲತೆಯನ್ನು ಅನುಭವಿಸಿತು. ಇಂತಹ ಸೋಲಿನ ಹಿನ್ನಲೆಯಲ್ಲಿ ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಙಾಸೆ ಮೂಡಿಸಿತು. ಪಕ್ಷದ ನಾಯಕರಲ್ಲಿ ಕೆಲವರಿಗೆ ರೈತರ ಸಮಸ್ಯೆಗಳಿಗೆ ಸೈದ್ಧಾಂತಿಕ ನೆಲೆಗಟ್ಟಿನ ಹೋರಾಟದಲ್ಲಿ ಪರಿಹಾರ ಕಂಡುಕೊಳ್ಳುವ ಹಂಬಲವಿತ್ತು. ಆದರೆ, ಈ ಸೌಮ್ಯವಾದಿಗಳ ನಿರ್ಧಾರ ಕೆಲವು ತೀವ್ರವಾದಿ ಮನಸ್ಸಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಒಪ್ಪಿಗೆಯಾಗಲಿಲ್ಲ. ಇವರಲ್ಲಿ ಚಾರು ಮತ್ತು ಕನುಸನ್ಯಾಲ್, ನಾಗಭೂಷಣ್ ಪಟ್ನಾಯಕ್, ಕೊಂಡಪಲ್ಲಿ ಸೀತಾರಾಮಯ್ಯ ಪ್ರಮುಖರು.

1966 ರ ಅಕ್ಟೋಬರ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದಾನ್ ಜಿಲ್ಲೆಯ ಸಟ್‍ಗಚಿಯ ಎಂಬಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಿತು. ಅವರೆಗೂ ಮಾರ್ಕ್ಸ್ ಹಾಗೂ ಲೆನಿನ್ ವಿಚಾರಧಾರೆಯನ್ನು ಅನುಕರಿಸಿಕೊಂಡು ಬಂದಿದ್ದ ಪಕ್ಷಕ್ಕೆ ಹೊಸದಾಗಿ ಚೀನಾದ ಮಾವೋತ್ಸೆ ತುಂಗನ ಕ್ರಾಂತಿಕಾರಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಸಂದಿಗ್ದತೆ ಎದುರಾಯಿತು. ಈ ಸಮಾವೇಶಕ್ಕೆ ಸಿಲುಗುರಿ ಪ್ರಾಂತ್ಯದಿಂದ ಚಾರು ಮುಜಂದಾರ್, ಕನುಸನ್ಯಾಲ್, ಜಂಗಲ್ ಸಂತಲ್ ಸೇರಿದಂತೆ ಎಂಟು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇವರೆಲ್ಲರೂ 1965 ರ ಏಪ್ರಿಲ್ ತಿಂಗಳಿನಲ್ಲಿ ಮುದ್ರಿಸಿದ್ದ ಕರಪತ್ರವೊಂದನ್ನು ಜೊತೆಯಲ್ಲಿ ತಂದಿದ್ದರು. ಕರಪತ್ರದಲ್ಲಿ ರೈತರು, ಗೇಣಿದಾರರು ಮುಂದೆ ಬಂದು ಬಲತ್ಕಾರವಾಗಿ ಜಮೀನ್ದಾರರಿಂದ ಭೂಮಿಯನ್ನು ಕಿತ್ತುಕೊಳ್ಳಲು ಕರೆನೀಡಲಾಗಿತ್ತು. ಅಲ್ಲದೆ, ಸಮಾವೇಶಕ್ಕೆ ಮುನ್ನ ಎರಡು ತಿಂಗಳ ಮುಂಚೆ ಅಂದರೆ, ಆಗಸ್ಟ್ ತಿಂಗಳಿನಲ್ಲಿ ಮುದ್ರಿಸಲಾಗಿದ್ದ ಕರಪತ್ರವನ್ನು ಸಹಾ ಸಿಲಿಗುರಿ ಪ್ರಾಂತ್ಯದ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಹಂಚಿದರು.

ಕರಪತ್ರದಲ್ಲಿ ಹಳ್ಳಿಗಳಲ್ಲಿ ವಾಸವಾಗಿರುವ ರೈತರು ಹಾಗೂ ಕೃಷಿಕೂಲಿ ಕಾರ್ಮಿಕರು ಸಂಘಟಿತರಾಗಲು ಕರೆ ನೀಡಲಾಗಿತ್ತು, ಎರಡನೇದಾಗಿ ದುರಂಕಾರದ ಜಮೀನ್ದಾರರು, ಮತ್ತು ಅವರ ಗೂಂಡಾ ಪಡೆಯನ್ನು ಸಮರ್ಥವಾಗಿ ಎದುರಿಸಲು ಬಿಲ್ಲು, ಬಾಣಗಳಿಂದ ಸಿದ್ಧರಾಗಲು ವಿನಂತಿಸಿಕೊಳ್ಳಲಾಗಿತ್ತು, ಮೂರನೇದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು ಮತ್ತು ಕೂಲಿಕಾರರು, ಅಸಹಾಯಕ ಗೇಣಿದಾರರು ನೆಮ್ಮದಿಯಿಂದ ಬದುಕಬೇಕಾದರೆ, ಕೊಬ್ಬಿದ ಜಮೀನ್ದಾರರನ್ನು ಮಟ್ಟ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದೇ ವಿಚಾರಗಳನ್ನು ಪಕ್ಷದ ಸಮಾವೇಶದಲ್ಲಿ ಚಾರು ಮತ್ತು ಅವನ ಸಂಗಡಿಗರು ಬಲವಾಗಿ ಸಮರ್ಥಿಸಿಕೊಂಡು, ಪಕ್ಷ ಶೀಮಂತ ಜಮೀನ್ದಾರರ ಬಗ್ಗೆ ಕಠಿಣ ನಿಲುವು ತಳೆಯಬೇಕೆಂದು ಆಗ್ರಹಸಿದರು. ಕಮ್ಯೂನಿಷ್ಟ್ ಪಕ್ಷದ ಧುರೀಣರು ಚಾರು ಮತ್ತು ಅವನ ಸಂಗಡಿಗರು ಎತ್ತಿದ ಪ್ರಶ್ನೆಗಳಿಗೆ ಯಾವುದೇ ಸಮಜಾಯಿಸಿ ನೀಡಲು ಸಾಧ್ಯವಾಗದೇ ಮೌನಕ್ಕೆ ಶರಣಾದರು. ಇದು ಪರೋಕ್ಷವಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ತಾವು ನಂಬಿಕೊಂಡು ಬಂದಿದ್ದ ತಾತ್ವಿಕ ಸಿದ್ಧಾಂತಗಳಿಗಾಗಿ ಅಂಟಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಒಟ್ಟಾರೆ, 1966 ರ ಈ ಸಮಾವೇಶ, ಕಮ್ಯೂನಿಷ್ಟ್ ಸಿದ್ಧಾಂತಗಳ ಸಂಘರ್ಷದಿಂದಾಗಿ ಹೋಳಾಗುವ ಸ್ಥಿತಿ ತಲುಪಿತು. ಕೆಲವರು ಮಾರ್ಕ್ಸ್ ಮತ್ತು ಲೆನಿನ್ ಸಿದ್ಧಾಂತಕ್ಕೆ ಅಂಟಿಕೊಂಡರೆ, ಮತ್ತೇ ಕೆಲವರು ತೀವ್ರಗಾಮಿ ಎನಿಸಿದ ಮಾವೋನ ವಿಚಾರಗಳಿಂದ ಪ್ರೇರಿತರಾಗಿ ಮಾವೋನನ್ನು ಆರಾಧಿಸತೊಡಗಿದರು.

(ಮುಂದುವರಿಯುವುದು)

ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲತೆಯ ಕೊರತೆ

– ಆನಂದ ಪ್ರಸಾದ್

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಾಯಕತ್ವ ಹಾಗೂ ಚಿಂತನೆಯ ಕೊರತೆಯಿಂದ ಬಳಲುತ್ತಿದೆ. ಪರಮ ಭ್ರಷ್ಟರನ್ನು ಜಾತಿಯ ಮುಖ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂಬ ಪರೋಕ್ಷ ಸುಳಿವುಗಳು ಇವೆ. ಇದರಿಂದ ಪಕ್ಷಕ್ಕೆ ಹಾನಿಯೇ ಹೊರತು ಲಾಭವಾಗಲು ಸಾಧ್ಯವಿಲ್ಲ. ಇದುವರೆಗೆ ಕರ್ನಾಟಕವು ಕಂಡು ಕೇಳರಿಯದ ಪರಮ ಭ್ರಷ್ಟ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಅವರು ತಮ್ಮ ಮಾತೃ ಪಕ್ಷವನ್ನು ತೊರೆದರೆ ಮತ್ತು ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡರೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಸಿದ್ಧವಿದೆ ಎಂಬ ಸುಳಿವನ್ನು ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷರು ಹೇಳಿರುವ ವರದಿಯಾಗಿದೆ. ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿದ ಕೂಡಲೇ ಭ್ರಷ್ಟರ ಭ್ರಷ್ಟಾಚಾರ ತೊಳೆದು ಹೋಗುತ್ತದೆಯೇ? ಇಂಥ ಸಮಯಸಾಧಕತನದ ಧೋರಣೆಗಳಿಂದ ಪಕ್ಷವು ಜನರ ವಿಶ್ವಾಸ ಗಳಿಸಲಾರದು ಮತ್ತು ಗಳಿಸಿದ ವಿಶ್ವಾಸವೂ ಕಳೆದುಹೋಗಬಹುದು. ಇದೇ ರೀತಿ ಅಕ್ರಮ ಗಣಿವೀರ ಹಾಗೂ ಈಗ ಜೈಲಿನಲ್ಲಿರುವ ದೇಶದ್ರೋಹಿ ಮಾಜಿ ಮಂತ್ರಿಯೊಬ್ಬರನ್ನು ಹಾಗೂ ಅವರ ಅಕ್ರಮ ಗಣಿ ಹಣದಿಂದ ಹೊಸ ಪಕ್ಷ ಕಟ್ಟಿದ ಇನ್ನೊಬ್ಬರನ್ನೂ ಕೂಡ ಸೇರಿಸಿಕೊಳ್ಳಲು ಹಿಂಜರಿಯದ ಮನೋಸ್ಥಿತಿ ಕಾಂಗ್ರೆಸಿನ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಇರುವ ಕಾಂಗ್ರೆಸ್ ಪಕ್ಷವು ಸೂಕ್ತ ಚಿಂತನೆ ಇಲ್ಲದೆ ಬಳಲುತ್ತಿರುವ ಕಾರಣ ಇಂಥ ವಿಕೃತ ಆಲೋಚನೆಗಳು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಹುಟ್ಟಿಕೊಳ್ಳುತ್ತವೆ ಎನ್ನಲು ಅಡ್ಡಿಯಿಲ್ಲ. ಯಾರು ಮೊದಲಿನ ಸರ್ಕಾರದಲ್ಲಿ ಭಾಗಿಯಾಗಿ ಪರಮ ಭ್ರಷ್ಟಾಚಾರ ನಡೆಸಿ ಮತ್ತೆ ಚುನಾವಣೆಗೆ ಹೋಗುತ್ತಾರೋ ಅಂಥ ಸಂದರ್ಭದಲ್ಲಿ ಜನ ಅವರನ್ನು ತಿರಸ್ಕರಿಸುತ್ತಾರೆ ಎಂಬ ಮೂಲಭೂತ ಚಿಂತನೆಯೂ ಇಲ್ಲದ ಕಾಂಗ್ರೆಸ್ಸಿನ ಚಿಂತನೆಯ ದಿವಾಳಿಕೋರತನವೇ ಅದಕ್ಕೆ ಮುಳುವಾಗಬಹುದು.

ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟತೆಯಿಂದ ಜನ ರೋಸಿಹೋಗಿರುವ ಸಂದರ್ಭದಲ್ಲಿ ಉತ್ತಮ ಆಡಳಿತದ ಭರವಸೆಯನ್ನು ನೀಡುವಂಥ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಹೋದರೆ ಗೆಲ್ಲುವ ಸಾಧ್ಯತೆ ಮುಂಬರುವ ಚುನಾವಣೆಗಳಲ್ಲಿ ಇದೆ. ಇದಕ್ಕಾಗಿ ಪರಮ ಭ್ರಷ್ಟರಿಗೂ, ಅಕ್ರಮ ಗಣಿಕಳ್ಳರಿಗೂ, ದೇಶದ್ರೋಹಿಗಳಿಗೂ ಜಾತಿ ಅಥವಾ ಹಣದ ಮುಖ ನೋಡಿ ಮಣೆ ಹಾಕಬೇಕಾದ ಅಗತ್ಯ ಇಲ್ಲ. ನಾಯಕತ್ವದ ಗುಣ ಎಲ್ಲರಲ್ಲೂ ಇರುವುದಿಲ್ಲ ಮತ್ತು ಅದು ಮೂಲಭೂತವಾಗಿ ಹುಟ್ಟಿನಿಂದಲೇ ಬರುವಂಥ ಒಂದು ಗುಣ. ಹೀಗಾಗಿಯೇ ನಾಯಕರನ್ನು ತರಬೇತಿ ಮಾಡಿ ರೂಪಿಸಲು ಆಗುವುದಿಲ್ಲ. ಹೀಗಾಗಿ ಇಂಥ ನಾಯಕತ್ವದ ಗುಣ ಯಾರಲ್ಲಿ ಇದೆಯೋ ಅದನ್ನು ಗುರುತಿಸಿ ಅವರಿಗೆ ನಿರ್ಣಯ ತೆಗೆದುಕೊಳ್ಳುವ ಅವಕಾಶ ಕೊಟ್ಟರೆ ಮತ್ತು ಜನರನ್ನು ತಮ್ಮತ್ತ ಆಕರ್ಷಿಸಿ ಸಂಘಟಿಸುವ ಹೊಣೆಗಾರಿಕೆ ಕೊಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರಿ ಉತ್ತಮ ಆಡಳಿತ ನೀಡುವ ಸಾಧ್ಯತೆ ಇದೆ. ಪ್ರಸಕ್ತ ರಾಜ್ಯದಲ್ಲಿ ಅಂಥ ನಾಯಕತ್ವದ ಸಾಮರ್ಥ್ಯ ಇರುವ ಮುಂಚೂಣಿ ವ್ಯಕ್ತಿ ಎಂದರೆ ಸಿದ್ಧರಾಮಯ್ಯ. ಸಮಾಜವಾದಿ ಹಿನ್ನೆಯಿಂದ ಬಂದಿರುವ ಸಿದ್ಧರಾಮಯ್ಯ ಅಧಿಕಾರಿ ವರ್ಗವನ್ನು ಹದ್ದುಬಸ್ತಿನಲ್ಲಿಟ್ಟು ಉತ್ತಮ ಆಡಳಿತ ನೀಡಬಲ್ಲ ಹಾಗೂ ಅರ್ಥಿಕ ಶಿಸ್ತು ತರಬಲ್ಲ ನಾಯಕ. ಇಂಥ ವ್ಯಕ್ತಿಗೆ ನಾಯಕತ್ವದ ಸ್ಪಷ್ಟ ಭರವಸೆ ಸಿಗದಿರುವ ಅತಂತ್ರ ಸ್ಥಿತಿ ಇರುವ ಕಾರಣ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ತನ್ನನ್ನು ತಾನು ಪೂರ್ಣವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲದಂತೆ ಕಂಡು ಬರುತ್ತದೆ. ಅದೇ ರೀತಿ ಸಿದ್ಧರಾಮಯ್ಯನವರೂ ಒಂದು ಜಾತಿಗೆ ಸೀಮಿತವಾಗದೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಮುತ್ಸದ್ಧಿತನ ತೋರಿದರೆ ರಾಜ್ಯಕ್ಕೆ ಉತ್ತಮ ನಾಯಕತ್ವ ನೀಡುವ ಎಲ್ಲ ಸಾಧ್ಯತೆಯೂ ಇದೆ.

ಚಿಂತನಶೀಲ ಗುಣ ಹಾಗೂ ನಾಯಕತ್ವದ ಗುಣ ಒಂದೇ ವ್ಯಕ್ತಿಯಲ್ಲಿ ಕಂಡುಬರುವುದು ಬಹಳ ಅಪರೂಪ. ಚಿಂತನಶೀಲ ಗುಣ ಇರುವ ಸಾಹಿತಿಗಳು, ವಿಜ್ಞಾನಿಗಳು, ಚಿಂತಕರು, ಪ್ರಾಧ್ಯಾಪಕರು ಮೊದಲಾದವರಲ್ಲಿ ನಾಯಕತ್ವದ ಗುಣ ಇರುವುದಿಲ್ಲ. ಅದೇ ರೀತಿ ನಾಯಕತ್ವದ ಗುಣ ಉಳ್ಳ ರಾಜಕಾರಣಿಗಳು, ಉದ್ಯಮಿಗಳು ಮೊದಲಾದವರಲ್ಲಿ ಸಮರ್ಪಕ ಚಿಂತನೆಯ ಅಭಾವ ಇರುತ್ತದೆ. ಇವೆರಡೂ ಗುಣಗಳು ಒಂದೇ ವ್ಯಕ್ತಿಯಲ್ಲಿ ಬಂದಂಥ ಸಂದರ್ಭದಲ್ಲಿ ಅವರು ಒಂದು ದೇಶ ಅಥವಾ ಜನಾಂಗವನ್ನು ಸರ್ವತೋಮುಖ ಹಾಗೂ ಸಮತೋಲಿತ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲರು. ಹೀಗಾಗಿ ನಾಯಕತ್ವದ ಗುಣ ಉಳ್ಳವರು ಚಿಂತನಶೀಲರಿಂದ ಸಲಹೆಗಳನ್ನು ಪಡೆದುಕೊಂಡು ಮುನ್ನಡೆಯುವುದು ಯಾವಾಗಲೂ ಆರೋಗ್ಯಕರ ಹಾಗೂ ಪ್ರಯೋಜನಕಾರಿ. ಇದರಿಂದ ದೇಶಕ್ಕೆ, ಮಾನವ ಜನಾಂಗಕ್ಕೆ ನಿಸ್ಸಂಶಯವಾಗಿ ಒಳಿತಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲ ಗುಣ ಹಾಗೂ ನಾಯಕತ್ವದ ಗುಣ ಎರಡೂ ಇರುವ ನಾಯಕ ಸಿದ್ಧರಾಮಯ್ಯ ಎಂದರೆ ತಪ್ಪಾಗಲಾರದು. ಸಿದ್ಧರಾಮಯ್ಯನವರು ಮೂಲತಃ ಕಾಂಗ್ರೆಸ್ ನಾಯಕರಲ್ಲದಿದ್ದರೂ ಅವರ ಕೈಗೆ ಮುಂದಿನ ಚುನಾವಣೆಗಳನ್ನು ಮುನ್ನಡೆಸುವ ಜವಾಬ್ದಾರಿ ನೀಡಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ ರಾಜ್ಯಕ್ಕೆ ಉತ್ತಮ ನಾಯಕತ್ವ ಸಿಗಲು ಸಾಧ್ಯ. ಕಾಂಗ್ರೆಸಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಪರಮೇಶ್ವರ್ ಮೊದಲಾದ ನಾಯಕರು ಇದ್ದರೂ ಸಿದ್ಧರಾಮಯ್ಯನವರಂತೆ ಜನರ ಮೇಲೆ ಪ್ರಭಾವ ಬೀರಬಲ್ಲ ವರ್ಚಸ್ಸು ಹೊಂದಿಲ್ಲ. ಇದನ್ನು ಉಳಿದ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಸಾಂಸ್ಕೃತಿಕ ಜಾಗತೀಕರಣ ಹಾಗೂ ಪ್ರತಿರೋಧ

 -ಡಾ.ಎಸ್.ಬಿ. ಜೋಗುರ

ಜಾಗತೀಕರಣದ ಪರವಾಗಿ ಮಾತನಾಡುವವರಷ್ಟೇ ಅದರ ವಿರೋಧವಾಗಿ ಮಾತನಾಡುವವರೂ ಇದ್ದಾರೆ. ಪರ-ವಿರೋಧ ಮಾತನಾಡಲು ಇಬ್ಬರ ಬಳಿಯೂ ಅಷ್ಟೇ ಸಮರ್ಥನೀಯವಾದ ಸಂಗತಿಗಳಿವೆ. ಕೆಲವೊಮ್ಮೆ ಪೂರ್ವಗ್ರಹ ಪೀಡಿತರಾಗಿಯೂ ಈ ಜಾಗತೀಕರಣದ ಬಗೆಗಿನ ಮೇಲ್‍ಮೇಲಿನ ಗ್ರಹಿಕೆಯ ಮಟ್ಟದಲ್ಲಿಯೇ ಮಾತನಾಡುವುದೂ ಇದೆ. ಜಾಗತೀಕರಣದ ಭರಾಟೆಯಲ್ಲಿ ಆಯಾ ಸಮಾಜದ ಸಾಂಸ್ಕೃತಿಕ ಸಂಗತಿಗಳು ಕೂಡಾ ಕೊಚ್ಚಿಹೋಗುವ ಇಲ್ಲವೇ ಅಮೂಲಾಗ್ರವಾಗಿ ಬದಲಾವಣೆ ಹೊಂದುವ ಅಪಾಯಗಳ ನಡುವೆಯೇ ತನ್ನತನವನ್ನು ಕಾಪಾಡುವ ಕಾಳಜಿ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ.

ಜಾಗತೀಕರಣವೆನ್ನುವುದು ಪ್ರಧಾನವಾಗಿ ಆರ್ಥಿಕವಾದ ಪ್ರಕ್ರಿಯೆಯಾಗಿ ಗುರುತಿಸಿಕೊಂಡರೂ ಅನುಷಂಗಿಕವಾಗಿ ಆ ಸಮುದಾಯದ ಸಾಂಸ್ಕೃತಿಕ ಕಾಳಜಿಗಳನ್ನು ಬಾಹ್ಯ ಒತ್ತಡದ ಮೂಲಕ ಪ್ರಭಾವಿಸುವ ಅಂಶವಾಗಿಯೂ ಅದು ಕೆಲಸ ಮಾಡುವುದಿದೆ. ಸಾಂಸ್ಕೃತಿಕವಾದ ಜಾಗತೀಕರಣಕ್ಕೆ ಪ್ರತಿರೋಧ ಒಡ್ಡುವ ಕ್ರಿಯೆ ಅತ್ಯಂತ ಸೂಕ್ಷ್ಮ ಹಾಗೂ ಜಟಿಲವಾದುದು. ಧರ್ಮ, ಭಾಷೆ, ಸಮೂಹ ಮಾಧ್ಯಮ, ಸಾಂಸ್ಕೃತಿಕ ವ್ಯಾಪಾರಗಳೆಲ್ಲವೂ ಸ್ಥಾನಪಲ್ಲಟಗೊಳ್ಳುವ ಇಲ್ಲವೇ ಕಲುಷಿತಗೊಳ್ಳುವ ಕ್ರಿಯೆಯಾಗಿರುವಾಗಲೇ ಸಾಂಸ್ಕೃತಿಕ ಜಾಗತೀಕರಣಕ್ಕೆ ಪ್ರತಿರೋಧಗಳು ಎದುರಾಗುವುದಿದೆ. ಹಾಗೆ ನೋಡಿದರೆ ಜಾಗತೀಕರಣದ ಆರಂಭವೇ ತನ್ನ ಬೆನ್ನ ಹಿಂದೆ ಪ್ರತಿರೋಧವನ್ನು ಕಟ್ಟಿಕೊಂಡ ಚಲನೆಯಾಗಿರುತ್ತದೆ. ವಿಶ್ವದ ಮಾರುಕಟ್ಟೆಯ ಎಲ್ಲೆಗಳು ವಿಸ್ತೃತವಾಗುತ್ತಾ ಬಂದು, ಆರ್ಥಿಕ ವಿದ್ಯಮಾನಗಳು ವ್ಯಾಪಕವಾಗಿ ಹರಡಿ ಆ ಮೂಲಕ ಒಂದು ಬಗೆಯ ಆರ್ಥಿಕ ಉದ್ವೇಗ ಸ್ಥಾಪಿತವಾಗುವ ನಡುವೆ ಭಾವನಾತ್ಮಕವಾದ ಸಮಾಧಾನ ಇಲ್ಲವೇ ಅಭೌತ ಸಾಂಸ್ಕೃತಿಕ ನೆಮ್ಮದಿ ಕೈಗೂಡಲಿಲ್ಲ.

ಜಾಗತೀಕರಣ ತಂದೊಡ್ಡುವ ಬಾಹ್ಯ ಒತ್ತಡಗಳಿಗೆ ನಲುಗಿದ ಆಯಾ ದೇಶದ ಅಸ್ಮಿತೆ ಪರೋಕ್ಷವಾದ ಪ್ರತಿರೋಧಕ್ಕೆ ಮುಂದಾಯಿತು. ತನ್ನ ದೇಶದ ಜೀವನ ವಿಧಾನವೇ ಬುಡ ಮೇಲಾಗುವ ಪ್ರಸಂಗಗಳು ಸನಿಹದಲ್ಲಿವೆ ಎನಿಸತೊಡಗಿದ್ದೇ ಈ ಬಗೆಯ ಸಾಂಸ್ಕೃತಿಕ ಜಾಗತೀಕರಣದ ಪ್ರತಿರೋಧಗಳು ಮೂಡತೊಡಗುತ್ತವೆ. ಆಷ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲಣ ಹಲ್ಲೆಯ ಹಿಂದೆ ತನ್ನ ನೆಲೆಯ ಸಂಸ್ಕೃತಿ ಕಳೆದುಹೋಗುತ್ತದೆ ಎನ್ನುವ ಭಯವೇ ಆಗಿರಲಿಕ್ಕೆ ಸಾಕು. ವಸಹಾತು ಪೂರ್ವ ಮತ್ತು ವಸಾಹತೋತ್ತರ ಸಂದರ್ಭದಲ್ಲಿ ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಗಳು ತನ್ನ ಅನನ್ಯವಾದ ಜೀವನ ವಿಧಾನವನ್ನು ಕಾಪಾಡಲು ಸ್ವದೇಶಿ ಮಂತ್ರ ಪಠಣವನ್ನು ಮಾಡಬೇಕಾಯಿತು. ಈಗಂತೂ ಗ್ಲೋಬಲೈಜೇಷನ್  ಮೂಲಕ ತನ್ನತನವನ್ನು ಎತ್ತಿ ತೋರಿಸುವತ್ತ ಅನೇಕ ರಾಷ್ಟ್ರಗಳು ಮುಂದಾಗಿವೆ. ಮತ್ತೆ ಕೆಲ ರಾಷ್ಟ್ರಗಳು ಈ ಜಾಗತೀಕರಣದ ಹಾವಳಿಯಿಂದ ತನ್ನ ದೇಶದ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವಲ್ಲಿ ಹರಸಾಹಸ ಮಾಡುತ್ತಿವೆ. ಆ ಮೂಲಕ ಕಲುಷಿತವಾಗುವ ಇಲ್ಲವೇ ಸಂಕರಗೊಳ್ಳಲಿರುವ ತಮ್ಮ ಸಂಸ್ಕೃತಿಯನ್ನು ಬಚಾವ್ ಮಾಡುವ ಹವಣಿಕೆಯಲ್ಲಿದ್ದಾರೆ. ಈ ಬಗೆಯ ಪ್ರತಿರೋಧ ಒಂದು ಅಮೂರ್ತವಾದ ಗೋಡೆಯನ್ನು ನಿರ್ಮಿಸುವ ಮೂಲಕವಾದರೂ ಅದನ್ನು ಸಾಧ್ಯ ಮಾಡಬೇಕು ಎಂದು ಹೊರಟಿರುವುದಿದೆ. ಕೆಲ ರಾಷ್ಟ್ರಗಳಂತೂ ತಮ್ಮ ಪ್ರಭುತ್ವದ ಶಕ್ತಿ ಮತ್ತು ಅಧಿಕಾರವನ್ನು ಸಂಚಯಗೊಳಿಸಿ ಸಾಂಸ್ಥಿಕವಾಗಿಯೇ ಸಾಂಸ್ಕೃತಿಕವಾದ ಜಾಗತೀಕರಣವನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ತೊಡಗಿವೆ.

ಸಾಂಸ್ಕೃತಿಕ ಜಾಗತೀಕರಣಕ್ಕೆ ಪ್ರತಿರೋಧವನ್ನು ಕುರಿತು ಮಾತನಾಡುವಾಗ ಜಾಗತೀಕರಣದ ಅಂತರ್ಯದಲ್ಲಿಯೇ ಸೂಕ್ಷ್ಮವಾಗಿ ವಿರೋಧಗಳನ್ನು ಹುಟ್ಟುಹಾಕುವ ಮೂಲಕ ಇಲ್ಲವೇ ಬಾಹ್ಯ ಒತ್ತಡದ ಪ್ರಭಾವವನ್ನು ತಡೆಯಲು ಎಲ್ಲ ಬಗೆಯ ಪ್ರತಿರೋಧಗಳನ್ನು ಒಡ್ಡುವ ಮೂಲಕ ಅದನ್ನು ತಡೆಯುವುದಾಗಿದೆ. ಈ ಬಗೆಯ ಕ್ರಿಯಾತ್ಮಕತೆಯಲ್ಲಿ ಸಂಸ್ಕೃತಿಗಳ ಸಮಂಜನವಾಗಲೀ..  ಸ್ವಾಂಗೀಕರಣವಾಗಲೀ.. ಮುಖ್ಯವಾಗದೇ ಪ್ರತಿರೋಧವೇ ಮುಖ್ಯವಾಗುತ್ತದೆ. ಸಾಂಸ್ಕೃತಿಕ ಕೊಡುಕೊಳ್ಳುವ ಭರಾಟೆಯಲ್ಲಿ ಸ್ಥಾನೀಯ ಸಂಸ್ಕೃತಿ ಬದಲಾಗುವ ಇಲ್ಲವೇ ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ಸಂಸ್ಕೃತಿ ಯಾವಾಗಲೂ ಬದಲಾವಣೆಯನ್ನು ಆಪ್ತವಾಗಿ ಬರಮಾಡಿಕೊಳ್ಳುತ್ತದೆ. ಹೀಗೆ ಮಾಡುವಾಗ ತನ್ನತನವನ್ನು ಮೀರುವ ಅಪಾಯವೂ ಇಲ್ಲದಿಲ್ಲ ಎನ್ನುವ ನಿಟ್ಟಿನಲ್ಲಿಯೇ ಪ್ರಭುತ್ವಗಳು ಸಾಂಸ್ಕೃತಿಕ ಜಾಗತೀಕರಣವನ್ನು ಪ್ರತಿರೋಧಿಸುವ ಧೋರಣೆಯನ್ನು ರೂಪಿಸುವ ಮೂಲಕ ಆಯಾ ರಾಷ್ಟ್ರದ ಜೀವನ ವಿಧಾನವನ್ನು ಕಾಪಾಡುವ ದಿಶೆಯಲ್ಲಿ ಯತ್ನಿಸಬೇಕು ಎನ್ನುವುದನ್ನು ಸಾಂಸ್ಕೃತಿಕ ಸಂಘರ್ಷವನ್ನು ಕುರಿತು ಅಧ್ಯಯನ ಮಾಡಿದ ಹೆಲ್ಮೆಟ್ ನಿಹರ್ ಮತ್ತು ಇಸಾರ್ ಎನ್ನುವ ಚಿಂತಕರು ಅಭಿಪ್ರಾಯ ಪಡುವುದಿದೆ.

ಒಂದು ಪ್ರಬಲ ಸಂಸ್ಕೃತಿಯ ಒಟ್ಟು ಜನಸಮುದಾಯ ಹಾಗೂ ಅಲ್ಲಿಯ ಪ್ರಭುತ್ವ ಹೇಗೆ ಈ ಬಗೆಯ ಜಾಗತೀಕರಣದ ಹಾವಳಿಯಿಂದ ತನ್ನ ಸಂಸ್ಕೃತಿಯನ್ನು ಕಾಪಾಡಬಲ್ಲದು ಎನ್ನುವುದು ಕೂಡಾ ಮುಖ್ಯವಾಗುತ್ತದೆ. ಈ ಕೆಳಗಿನ ಕೆಲವು ಪ್ರಮುಖ ಸಂಗತಿಗಳು ಸಾಂಸ್ಕೃತಿಕ ಜಾಗತೀಕರಣದ ಪ್ರತಿರೋಧಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲವು.

1. ಸಂಘರ್ಷದಿಂದ ಉಂಟಾಗಬಹುದಾದ ಬಾಹ್ಯ ಮತ್ತು ಆಂತರೀಕ ಒತ್ತಡಗಳು.

2. ಆರ್ಥಿಕ ವಿದ್ಯಮಾನಗಳ ಮೂಲಕ ಅನ್ಯ ಸಂಸ್ಕೃತಿಯ ಹೇರಿಕೆಯನ್ನು ತಡೆಯಬೇಕು ಎನ್ನುವ ಪ್ರಬಲ ಇಚ್ಛೆ.

3.  ಸಂಸ್ಕೃತಿಯ ವಿವಿಧ ಆಯಾಮಗಳ ಮೇಲಿನ ದಟ್ಟ ಪ್ರಭಾವದ ಭಯ.

4. ತಮ್ಮ ಸಂಸ್ಕೃತಿಯ ಬಗೆಗೆ ಮೇಲರಿಮೆಯ ಭಾವನೆ.

ಇಂದು ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಅಮೇರಿಕೆಯ ಆರ್ಥಿಕ ಬಾಹುಳ್ಯದ ವಿಸ್ತೃತ ಚಟುವಟಿಕೆಗಳ ಮೂಲಕ ಉಂಟಾಗಬಹುದಾದ ಸಾಂಸ್ಕೃತಿಕ ತೊಡಕುಗಳ ಬಗೆಗಿನ ಜಾಗೃತ ಪ್ರಜ್ಞೆ ಪರೋಕ್ಷವಾಗಿ ಸಾಂಸ್ಕೃತಿಕ ಜಾಗತೀಕರಣದ ಪ್ರತಿರೋಧವೇ ಆಗಿದೆ. ಜೊತೆಗೆ ತನ್ನ ಅನನ್ಯವಾದ ಸಾಂಸ್ಕೃತಿಕ ಆಯಾಮಗಳನ್ನು ಇದ್ದ ಸ್ಥಿತಿಯಲ್ಲಿಯೇ ಸಾಧ್ಯವಾಗದಿದ್ದರೂ ತಕ್ಕಮಟ್ಟಿಗಾದರೂ ಅದರ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವ ಯತ್ನವಾಗಿದೆ. ಕೆನಡಾದಂತಹ ರಾಷ್ಟ್ರಗಳು ತಮ್ಮ ದೇಶದ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳಲು ಅಮೇರಿಕಾದ ಸಂಸ್ಕೃತಿಯ ಪ್ರಭುತ್ವವನ್ನು ನಮ್ರವಾಗಿಯಾದರೂ ವಿರೋಧಿಸುತ್ತವೆ. ಸ್ವಾತಂತ್ರ್ಯಾನಂತರ ಮಲೇಶಿಯಾದಂತಹ ರಾಷ್ಟ್ರ ಚೀನಾ ಮತ್ತು ಭಾರತದ ವಲಸೆಗಾರರಿಂದ ಉಂಟಾಗಬಹುದಾದ ಸಾಂಸ್ಕೃತಿಕ ಸ್ವಾಂಗೀಕರಣದ ತೊಡಕುಗಳನ್ನು ಅನುಲಕ್ಷಿಸಿ ತನ್ನ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಶಾಸನವನ್ನೇ ರೂಪಿಸಿಕೊಳ್ಳಬೇಕಾಯಿತು. ಕಜಖಸ್ಥಾನ ರಷ್ಯಾದ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಪ್ರತಿರೋಧಿಸುತ್ತಲೇ ನಡೆದಿದೆ. ಹೀಗೆ ಜಾಗತೀಕರಣದ ರಭಸದಲ್ಲಿ ಸ್ಪರ್ಧೆಯೊಡ್ಡುವ ಸಾಮರ್ಥ್ಯದ ಜೊತೆಜೊತೆಗೆ ಆಯಾ ರಾಷ್ಟ್ರಗಳು ತಮ್ಮ ನೆಲದ ಸಂಸ್ಕೃತಿಯ ಉಳಿವಿಗಾಗಿ ಹೆಣಗಬೇಕಾಗಿದೆ. ಈ ನಡುವೆ ತಾನು ಸಾಂಸ್ಕೃತಿಕವಾಗಿ ಪರಿಶುದ್ಧವಾಗಿ ಉಳಿಯಬೇಕು ಎನ್ನುವ ಹಂಬಲದೊಳಗಿರುವ ರಾಷ್ಟ್ರಗಳೆಲ್ಲಾ ಎಲ್ಲೋ ಒಂದು ಯುಟೊಪಿಯಾದ ಬೆನ್ನಿಗೆ ಬಿದ್ದಿವೆ ಇಲ್ಲವೇ ಸಾಂಸ್ಕೃತಿಕ ಏಕತಾನತೆಯ ತಹತಹಿಕೆಯ ಆದರ್ಶವನ್ನು ಹಂಬಲಿಸುತ್ತಿವೆ ಎನಿಸುವುದಿಲ್ಲವೇ?

ಸರ್ವಾಧಿಕಾರಿ ಧೋರಣೆಯ ಸರ್ಕಾರ

-ಆನಂದ ಪ್ರಸಾದ್

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂವಿಧಾನಬದ್ಧ ಆಡಳಿತದಲ್ಲಿ ನಂಬಿಕೆ ಇರುವಂತೆ ಕಾಣುವುದಿಲ್ಲ. ಲೋಕಾಯುಕ್ತರ ನೇಮಕ ಮಾಡದೆ ಹುದ್ದೆಯನ್ನು ಖಾಲಿ ಬಿಡಲಾಗಿದೆ. ಎರಡನೇ ಉಪಲೋಕಾಯುಕ್ತರಾಗಿ ನೇಮಕವಾದ ಚಂದ್ರಶೇಖರಯ್ಯ ಅವರ ನೇಮಕವನ್ನು ರಾಜ್ಯ ಹೈಕೋರ್ಟ್ ಅಸಿಂಧುಗೊಳಿಸಿದೆ. ತನ್ನ ಮೂಗಿನ ನೇರಕ್ಕೆ ಲೋಕಾಯುಕ್ತ ಕಾಯ್ದೆಯನ್ನು ಅನ್ವಯಿಸಿಕೊಂಡು ತನಗೆ ಬೇಕಾದವರನ್ನು ಲೋಕಾಯುಕ್ತ, ಉಪ ಲೋಕಾಯುಕ್ತರಾಗಿ ನೇಮಕ ಮಾಡುವ ಸರ್ಕಾರದ ಕ್ರಮ ಸಂವಿಧಾನ ವಿರೋಧಿಯಾಗಿದೆ ಹಾಗೂ ಸರ್ವಾಧಿಕಾರಿ ಧೋರಣೆಯ ಕ್ರಮವಾಗಿದೆ.

ಆಳುವ ಪಕ್ಷದವರಿಗೆ ಮಾತ್ರ ಒಪ್ಪಿಗೆಯಾಗುವ ಲೋಕಾಯುಕ್ತರ ನೇಮಕ ಮಾಡಿದರೆ ಆಡಳಿತ ಪಕ್ಷದ ಹಲವರು ಆರೋಪಿ ಸ್ಥಾನದಲ್ಲಿ ಲೋಕಾಯುಕ್ತರ ಮುಂದೆ ನಿಂತಿರುವಾಗ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುತ್ತದೆ ಎಂದು ಯಾರಾದರೂ ನಂಬಲು ಸಾಧ್ಯವೇ?. ತಾವು ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ನಡೆಸುತ್ತಿದ್ದೇವೆ ಎಂಬ ವಿಷಯ ಆಡಳಿತ ಪಕ್ಷದವರಿಗೆ ಇರುವಂತೆ ಕಾಣುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಜೊತೆ ಸಮಾಲೋಚಿಸದೆ ಉಪಲೋಕಾಯುಕ್ತರ ನೇಮಕ ಮಾಡಲಾಗಿದೆ ಎಂದು ಹೇಳಿದಾಗಲೇ ಉಪಲೋಕಾಯುಕ್ತರಾಗಿ ನೇಮಕಗೊಂಡ ಚಂದ್ರಶೇಖರಯ್ಯನವರು ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಅವರು ಒಬ್ಬ ಅಧಿಕಾರದಾಹೀ ರಾಜಕಾರಣಿಯಂತೆ ತಮ್ಮ ಸ್ಥಾನಕ್ಕೆ ಅಂಟಿ ಕುಳಿತದ್ದು ನ್ಯಾಯಾಧೀಶರಾಗಿ ಕೆಲಸ ಮಾಡಬೇಕಾದವರ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ. ನ್ಯಾಯಾಧೀಶರು ರಾಜಕಾರಣಿಗಳಂತೆ ವರ್ತಿಸಿದರೆ ದೇಶವನ್ನು ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಯಾರು ರಕ್ಷಿಸಬೇಕು?.

ಉಪಲೋಕಾಯುಕ್ತರ ನೇಮಕವನ್ನು ಅಸಿಂಧುಗೊಳಿಸಿದ ರಾಜ್ಯ ಹೈಕೋರ್ಟಿನ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಸಮಂಜಸವಾಗಿಲ್ಲ. ಹೀಗಾಗಿ ಈಗ ಸುಪ್ರೀಂಕೋರ್ಟು ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕದಲ್ಲಿ ಅನುಸರಿಸಬೇಕಾದ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ತೀರ್ಪು ನೀಡಬೇಕಾಗಿರುವುದು ದೇಶದ ಹಿತದೃಷ್ಟಿಯಿಂದ ಅಗತ್ಯ. ಇಲ್ಲದೆ ಹೋದರೆ ಆಡಳಿತ ಪಕ್ಷದವರು ತಮಗೆ ಅನುಕೂಲಕರವೆನಿಸುವ ವ್ಯಕ್ತಿಗಳನ್ನು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರಾಗಿ ನೇಮಿಸುವ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸುವುದರಲ್ಲಿ ಅನುಮಾನವಿಲ್ಲ.

ಹೀಗಾಗಿ ಈ ದೇಶದ ಬಗ್ಗೆ ಕಾಳಜಿ ಇರುವ ಹಿರಿಯ ವಕೀಲರು ಈ ವಿಚಾರವಾಗಿ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲು ಮುಂದಾಗುವುದು ಅಗತ್ಯ ಹಾಗೂ ಈ ವಿಚಾರವಾಗಿ ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಬೇಕಾದ ಅಗತ್ಯ ಇದೆ. ಲೋಕಾಯುಕ್ತ ಹಾಗೂ ಉಪಲೋಕಾಯುಕ್ತ ಹುದ್ದೆಗಳನ್ನು ನಿರ್ದಿಷ್ಟ ಅವಧಿಯ ಒಳಗೆ ತುಂಬಲೇಬೇಕು ಎಂಬ ನಿರ್ಬಂಧವನ್ನು ವಿಧಿಸಬೇಕಾದ ಅಗತ್ಯ ಇದೆ. ಹೀಗೆ ಮಾಡಿದರೆ ಅನಿರ್ದಿಷ್ಟ ಅವಧಿಗೆ ಈ ಹುದ್ದೆಗಳನ್ನು ಖಾಲಿ ಬಿಡುವ ನಿಲುವನ್ನು ತಪ್ಪಿಸಬಹುದು.

ರಾಜ್ಯ ಸರ್ಕಾರವು ಪೊಲೀಸ್ ಮಹಾನಿರ್ದೇಶಕರ ನೇಮಕದಲ್ಲೂ ತನಗೆ ಸಂವಿಧಾನಬದ್ಧ ಆಡಳಿತದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಶಂಕರ ಬಿದರಿ ನೇಮಕ ಮಾಡಿ ತೋರಿಸಿದೆ. ಈ ವಿಚಾರದಲ್ಲೂ ಹೈಕೋರ್ಟ್ ಛೀಮಾರಿ ಹಾಕಿದೆ. ಆದರೂ ಅದರಿಂದ ಪಾಠ ಕಲಿಯದೇ ಈ ವಿಚಾರದಲ್ಲೂ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದೆ. ತಾನು ಮಾಡಿದ್ದೇ ಸರಿ ಮತ್ತು ತಾನು ಏನು ಮಾಡಿದರೂ ನಡೆಯಬೇಕು ಎಂಬ ಇಂಥ ಧೋರಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ತಳೆಯುವುದಿಲ್ಲ. ಇಂಥ ಧೋರಣೆ ರಾಜಪ್ರಭುತ್ವಕ್ಕೆ ಮಾತ್ರ ಹೊಂದುತ್ತದೆ. ರಾಜಪ್ರಭುತ್ವದಲ್ಲಿ ಸಂವಿಧಾನ ಎಂಬುದು ಇರುವುದಿಲ್ಲ ಮತ್ತು ನ್ಯಾಯಾಂಗ ಎಂಬುದೂ ಇರುವುದಿಲ್ಲ. ರಾಜನೇ ಅಲ್ಲಿ ನ್ಯಾಯಾಧೀಶನ ಕೆಲಸ ಮಾಡುತ್ತಾನೆ. ಬಿಜೆಪಿ ಸರ್ಕಾರ ರಾಜಪ್ರಭುತ್ವದ ಗುಂಗಿನಲ್ಲೇ ಇದೆ. ಹೀಗಾಗಿ ಅದಕ್ಕೆ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ವಿಷಯದಲ್ಲೂ ಮೇಲ್ಮನವಿ ಮಾಡಲು ಹೋಗುತ್ತಿದೆ. ಮೇಲ್ನೋಟಕ್ಕೆ ಯಾವುದು ನ್ಯಾಯ ಎಂಬುದು ಸಾಮಾನ್ಯ ಜನರಿಗೂ ಕಂಡು ಬರುವ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಲು ಹೋಗುವುದು ವಿವೇಕವಲ್ಲ.

ತುಂಬಾ ದೀರ್ಘಕಾಲ ಲೋಕಾಯುಕ್ತ ಹುದ್ದೆಯನ್ನು ಖಾಲಿ ಬಿಟ್ಟಿದ್ದರೂ ರಾಜ್ಯದ ಮುಖ್ಯ ವಾಹಿನಿಯ ಮಾಧ್ಯಮಗಳು ಈ ಬಗ್ಗೆ ಚಕಾರ ಎತ್ತುತ್ತಾ ಇಲ್ಲ. ಹೀಗಾದರೆ ಮಾಧ್ಯಮಗಳು ಇರುವುದು ಏಕೆ ಎಂಬ ಪ್ರಶ್ನೆ ಏಳುವುದಿಲ್ಲವೇ? ಎಲ್ಲ ಮಾಧ್ಯಮಗಳೂ ಸೇರಿ ಈ ವಿಷಯದಲ್ಲಿ ಸರ್ಕಾರದ ಮೇಲೆ ನಿರಂತರ ಒತ್ತಡ ನಿರ್ಮಿಸಿದ್ದರೆ ಯಾವಾಗಲೋ ಲೋಕಾಯುಕ್ತರ ನೇಮಕ ಆಗುತ್ತಿತ್ತು. ರಾಜ್ಯದ ಮಾಧ್ಯಮಗಳು ಆಳುವ ಪಕ್ಷದ ಬಗ್ಗೆ ಮೃದು ಧೋರಣೆ ತಳೆಯಲು ಕಾರಣ ಏನು ಎಂಬ ಬಗ್ಗೆ ಜನ ಆಲೋಚಿಸಬೇಕಾದ ಅಗತ್ಯ ಇದೆ.

ಭೀಮಾತೀರದಲ್ಲಿ ಕಂಡ ಕನ್ನಡ ಪತ್ರಿಕೋದ್ಯಮ


– ಪರಶುರಾಮ ಕಲಾಲ್


 

ಭೀಮಾತೀರದಲ್ಲಿ.. ಸಿನಿಮಾ ಈಗ ವಿವಾದದ ವಸ್ತುವಾಗಿದೆ. ನಾನು ಬರೆದ ’ಭೀಮಾ ತೀರದ ಹಂತಕರು’ ಪುಸ್ತಕವನ್ನು ನೋಡಿಯೇ ಈ ಸಿನಿಮಾ ತೆಗೆದಿದ್ದಾರೆ ಎಂದು ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಾದ ಮಾಡಿ, ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ. ಚಿತ್ರನಟ ವಿಜಯ್, ಟಿವಿ9 ಸ್ಟುಡಿಯೋದಲ್ಲಿ ರವಿ ಬೆಳಗೆರೆಯನ್ನು ಕುಳ್ಳರಿಸಿಕೊಂಡೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ ಫೋನ್‌ನಲ್ಲಿಯೇ ರವಿ ಬೆಳಗೆರೆ ಭಾಷೆಯಲ್ಲಿ ಹೇಳುವುದಾದರೆ ಕಂಡಂ ಮಾಡಿ ಹಾಕಿದ್ದಾನೆ. ಸುವರ್ಣ ಚಾನಲ್‌ನಲ್ಲಿ ಪ್ರತಾಪ ಸಿಂಹ ರವಿ ಬೆಳಗೆರೆಯ ಜನ್ಮ ಜಾಲಾಡಿ, ನನ್ನ ಎದುರು ಬಂದು ರವಿ ಬೆಳಗೆರೆ ತನ್ನ ವಿದ್ವತ್ ಪ್ರದರ್ಶಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಎಲ್ಲಾ ಪ್ರಹಸನ ನೋಡಿದ ಮೇಲೆ ಒಂದಿಷ್ಟು ಈ ಬಗ್ಗೆ ಚರ್ಚಿಸಬೇಕು ಎಂದು ಈ ಲೇಖನ ಬರೆಯುತ್ತಿರುವೆ.

ಚಂದಪ್ಪ ಹರಿಜನ ಎನ್ನುವನನ್ನು ಜಗತ್ತಿಗೆ ಪರಿಚಯಿಸಿದವನು ನಾನೇ ಎಂದು ರವಿ ಬೆಳಗೆರೆ ಎದೆತಟ್ಟಿಕೊಂಡು ಹೇಳಿದ್ದಾರೆ. ಎದೆಗೆ ಕಿವಿಗೊಟ್ಟು ಅವರು ಕೇಳಿಕೊಳ್ಳಲಿ ಚಂದಪ್ಪ ಹರಿಜನ ಸಾವಿಗೆ ನಾನೂ ಕಾರಣ ಎಂಬ ಸತ್ಯ ಗೊತ್ತಾಗುತ್ತದೆ.

ಸಾಮಾನ್ಯನಾದ ವ್ಯಕ್ತಿಯೊಬ್ಬ ಸಾಮಾಜಿಕ ಕಾರಣಕ್ಕೂ, ಧ್ವೇಷದ ಕಾರಣಕ್ಕೂ ಅಪರಾಧಿಯಾಗಿ ಬದಲಾವಣೆಯಾದಾಗ ಆತನನ್ನು ಆ ದಾರಿಯಿಂದ ಹೊರ ತಂದು ಹೊಸ ದಾರಿ ತೋರಿಸಬೇಕಾಗಿದ್ದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಅದರ ಬದಲು ಆ ವ್ಯಕ್ತಿಯ ಅಪರಾಧವನ್ನು ವೈಭವಿಕರಿಸಿ, ಆತನನ್ನು ಹೀರೋ ಮಾಡುವ ಮೂಲಕ ಆತನಿಗೆ ಮತ್ತೊಂದು ಭ್ರಮೆಯನ್ನು ಉಣಬಡಿಸುವ ಮೂಲಕ ಆತ ಎನ್‌ಕೌಂಟರ್‌ನಲ್ಲೂ ವೀರನಂತೆ ಹೋರಾಡಲು ಹೋಗಿ ಸಾವನಪ್ಪಿಬಿಡುತ್ತಾನೆ. ಒಂದು ಪತ್ರಿಕೆಯ ಪ್ರಸರಣ ಏರಿಸಲು ಆತನನ್ನು ಹೀರೋ ಮಾಡಿ ಬಳಸಿಕೊಳ್ಳುವ ವಿಧಾನ ಇದೆಯಲ್ಲಾ ಇದು ಅತ್ಯಂತ ಹೇಯವಾದುದ್ದು.

ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಸೋಮ ಎಂಬ ಬಡಕಲು ಪುಡಿ ರೌಡಿಯೊಬ್ಬನಿಗೆ ಡೆಡ್ಲಿ ಸೋಮ ಎಂದು ಕರೆದು, ವರ್ಣಿಸಿ, ವೈಭವೀಕರಿಸಿದ್ದಕ್ಕೆ ಆ ಸೋಮು ಪೊಲೀಸರಿಗೆ ಶರಣಾಗದೇ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಗುಂಡಿಗೆ ಬಲಿಯಾಗಿ ಬಿಟ್ಟ.

ಯಾವುದೋ ಕಮರ್ಷಿಯಲ್ ಚಿತ್ರದ ಬಗ್ಗೆ ಅದರ ಸತ್ಯಾಸತ್ಯತೆಯ ಬಗ್ಗೆ ದಿನಗಟ್ಟಲೇ ಚರ್ಚೆ ಮಾಡುವುದೇ ಮೂಲಭೂತವಾಗಿ ಸರಿಯಾದುದ್ದಲ್ಲ. ಅದು ಪರವಾಗಿ ಇರಲಿ, ವಿರುದ್ಧವಾಗಿಯಾದರೂ ಇರಲಿ. ಅದು ದೊಡ್ಡ ಪಾಂಡಿತ್ಯದ ಚರ್ಚೆಯ ವಿಷಯವೇ? ತಮ್ಮ ತಮ್ಮ ವಿದ್ವತ್ ಎಂದು ಭಾವಿಸಿರುವ ಪೊಲೀಸ್ ರಿಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯ ಇತ್ತೇ?  ಇದು ಸ್ವಪ್ರತಿಷ್ಠೆಗಳ ನಡುವೆ ನಡೆಯುತ್ತಿರುವ ಕದನವಲ್ಲದೇ ಬೇರೇನೋ ಅಲ್ಲ.

ದರ್ಶನ್, ವಿಜಯ್ ಏನೇ ಎಳಸು ಇದ್ದರೂ ಚರ್ಚೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳ ಬಗ್ಗೆ ಎತ್ತಿರುವ ಕೆಲವು ಪ್ರಶ್ನೆಗಳು ಗಂಭೀರ ಪ್ರಶ್ನೆಗಳೇ ಆಗಿವೆ. ಖಾಸಗಿ ಬದುಕಿನ ಘಟನೆಗಳನ್ನು ವರ್ಣರಂಜಿತವಾಗಿ ಬರೆದು, ಅದೇ ಇವತ್ತಿನ ಪ್ರಸ್ತುತ ಸಮಸ್ಯೆ ಎಂದು ಬಿಂಬಿಸುವುದು ಎಷ್ಟು ಸರಿ ಎನ್ನುವ ಅವರ ಮಾತು ಸುದ್ದಿಯನ್ನು ಮಾರಿಕೊಂಡೇ ಜೀವಿಸುವವರು ಕೇಳಿಕೊಳ್ಳಬೇಕಾದ ಮಾತೇ ಆಗಿತ್ತು.

ರಾಜ್ಯದಲ್ಲಿ ಬರಗಾಲ ತೀವ್ರ ರೀತಿಯಲ್ಲಿ ಕಾಡುತ್ತಿದೆ. ಜಾನುವಾರುಗಳಿಗೆ ಮೇವು ಇಲ್ಲ. ಹಳ್ಳಿಗಳ ಜನ ಗುಳೇ ಎದ್ದು ನಗರಗಳಿಗೆ ಹೋಗುತ್ತಿದ್ದಾರೆ. ಬಿಸಿಲು ತೀವ್ರವಾಗಿ ಹೆಚ್ಚಾಗಿದ್ದು, ಕರ್ನಾಟಕದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅನೇಕ ಕಡೆ ಕುಡಿಯುವ ನೀರು ಫ್ಲೊರೆಸೆಸ್‌ನಿಂದ  ಕೂಡಿದೆ. ಈಗ ಆ ನೀರು ಕೂಡಾ ಕುಡಿಯಲು ಸಿಗುತ್ತಿಲ್ಲ. ಜನ ಸಂಕಷ್ಟಗಳನ್ನೇ ಹೊದ್ದುಕೊಂಡು ಜೀವ ಹಿಡಿದು ಬದುಕುತ್ತಿದ್ದಾರೆ. ಇವರ ಬದುಕಿಗೆ ಉತ್ತರದಾಯಿತ್ವವಾಗಬೇಕಾದವರೂ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಒಣ ಪಾಂಡಿತ್ಯದ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಹಕ್ಕುದಾರಿಕೆಯ ಬಗ್ಗೆ, ತಮ್ಮ ಪ್ರತಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ರಾಜಕಾರಣಿಗಳಿಗೂ ಏನು ವ್ಯತ್ಯಾಸವಿದೆ?

ಕನ್ನಡದ ಯಾವ ದಿನ ಪತ್ರಿಕೆಯೂ ಬರಗಾಲದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರಣಿ ವರದಿ ಮಾಡುವ ಹೊಣೆಗಾರಿಕೆಯನ್ನು ಮರೆತು ಬಿಟ್ಟವಾ…? ಪ್ರಜಾವಾಣಿಯಾದರೂ ಈ ಕೆಲಸ ಮಾಡೀತು ಎಂದು ಕೊಂಡಿದ್ದರೆ ಅದು ಹುಸಿಯಾಗಿ ಹೋಗಿದೆ. ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಕಾಲ ಇದಾಗಿದೆಯೆ?

ವಿಜಯ ಸಂಕೇಶ್ವರ ಸಾರಥ್ಯದಲ್ಲಿ ವಿಜಯವಾಣಿ ಎಂಬ ದಿನ ಪತ್ರಿಕೆಯು ಕಾಲಿಟ್ಟಿದೆ. ವಾರ ಪತ್ರಿಕೆಗಳ ಶೈಲಿಯು ದಿನ ಪತ್ರಿಕೆಗೆ ಬಂದು ಬಿಟ್ಟಿತಾ ಅನ್ನುವ ರೀತಿ ಸಾರಥ್ಯ ಬಂದು ಕೂತಿದೆ. ಇನ್ನೂ ಸಾರಥಿಗಳೇ ಎಲಾ, ಭಲರೇ ಎಲೈ ಸಾರಥಿ ನಾವುದಾರು ಎಂದರೆ ಎಂದು ಫರಾಕು ಹೇಳುವ ತಮ್ಮ ಕೀರ್ತಿ, ಅಭಿದಾನ, ಜಾತಿ, ಧರ್ಮ ಎಲ್ಲವನ್ನೂ ಪ್ರದರ್ಶಿಸಿ ಫಲಕ ಹಿಡಿದು ನಿಂತು ಕೊಳ್ಳುವ ಕಾಲಕ್ಕೆ ಬಂದು ನಿಂತಿದೆ ನಮ್ಮ ಕನ್ನಡದ ಪತ್ರಿಕೋದ್ಯಮ.

ಪ್ರಜಾವಾಣಿ, ಕನ್ನಡಪ್ರಭವನ್ನು ಕಟ್ಟಿ ಅದಕ್ಕೊಂದು ಘನತೆ, ಗಾಂಭಿರ್ಯ ತಂದಿರುವ ಮಹನೀಯರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರು ಬೇಜಾರು ಪಟ್ಟುಕೊಳ್ಳುವ ಸಂಭವವಿಲ್ಲ. ನಡೆಯಲಿ ಕರುನಾಟಕ ಪಾವನವಾಗಲಿ ಎಂದೇ ಹೇಳುವುದು ಬಿಟ್ಟು ಬೇರೇನೋ ತೋಚುತ್ತಿಲ್ಲ.

(ಚಿತ್ರಕೃಪೆ: ಚಿತ್ರಲೋಕ.ಕಾಮ್)