Monthly Archives: May 2012

‘ರಕ್ಷಣೆ’ಗಾಗಿ ಸಹಾಯ ಹಸ್ತ ಬಯಸಿ…

– ಶಿವರಾಂ ಕೆಳಗೋಟೆ

ಹುಣ್ಣಿಮೆಯಂದು ಸಮುದ್ರದ ಅಲೆಗಳು ಉಕ್ಕೇರುವಂತೆ, ರಾಜ್ಯಕ್ಕೆ ಬರ ಅಥವಾ ನೆರೆ ಬಂದಾಗ ಬಿಜೆಪಿಯಲ್ಲಿನ ಭಿನ್ನಮತ ಉಲ್ಬಣಗೊಳ್ಳುತ್ತದೆ. ಈ ಬಾರಿ ಭಿನ್ನಮತದ ಅಲೆಗಳು ತಣ್ಣಗಾಗುವ ಲಕ್ಷಣಗಳಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಮುಂದಿನ ನಿರ್ಧಾರ ಅವರ ರಾಜಕೀಯ ವೃತ್ತಿ ಜೀವನದ ಪ್ರಮುಖ ಘಟ್ಟವಾಗಲಿದೆ. ಇಂದು (ಸೋಮವಾರ) ಬೆಳಗ್ಗೆ ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪ ತನ್ನ ಮುಂದಿನ ನಿರ್ಧಾರವನ್ನು ಸಂಜೆ ಹೊತ್ತಿಗೆ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯೇನಿಲ್ಲ.

ಹೊರನಡೆದರೆ ತನ್ನೊಂದಿಗೆ ಬರುವವರ ಸಂಖ್ಯೆ ಎಷ್ಟು ಎನ್ನುವುದಷ್ಟೇ ಅವರ ಮತ್ತು ಅವರ ಕಟ್ಟಾ ಬೆಂಬಲಿಗರ ಪ್ರಮುಖ ಪ್ರಶ್ನೆ. ಈಗಾಗಲೇ ಏಳೆಂಟು ಸಚಿವರು ತಮ್ಮ ರಾಜೀನಾಮೆ ಪತ್ರಗಳಿಗೆ ಸಹಿ ಹಾಕಿ ಯಡಿಯೂರಪ್ಪನವರಿಗೆ ಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ಕೆಲ ಶಾಸಕರೂ ಇದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ಒಂದು ವರ್ಷವಷ್ಟೇ ಬಾಕಿ ಇರುವಾಗ ರಾಜೀನಾಮೆ ಕೊಡಬೇಕೆ, ಬೇಡವೇ ಎನ್ನುವ ಜಿಜ್ಞಾಸೆಯಲ್ಲಿ ಹಲವರು ಇರಬಹುದು. ಮತ್ತೊಂದು ಅವಧಿಗೆ ಆಯ್ಕೆಯಾಗುವ ವಿಶ್ವಾಸ ಎಲ್ಲರಲ್ಲೂ (ಎಷ್ಟೇ ದೊಡ್ಡ ನಾಯಕರಾದರೂ) ಇಲ್ಲ. ಜನರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಈಗಲೇ ಊಹಿಸುವ ತಂತ್ರಜ್ಞಾನ ಸದ್ಯಕ್ಕಂತೂ ಚಾಲ್ತಿಯಲ್ಲಿಲ್ಲವಲ್ಲ. ಕೆಲವು ಶಾಸಕರು ರಾಜಿನಾಮೆ ಕೊಟ್ಟಾರು. ಆದರೆ ಸಂಸಂದರು! ಅವರಿಗಿನ್ನೂ 2014ರ ವರೆಗೆ ಕಾಲಾವಕಾಶ ಇದೆ. ಈಗ ರಾಜೀನಾಮೆ ಕೊಟ್ಟರೆ ಗತಿ ಏನು? ತಾಂತ್ರಿಕವಾಗಿ ಬಿಜೆಪಿ ಜೊತೆ ಇದ್ದು ಮಾನಸಿಕವಾಗಿ ಯಡಿಯೂರಪ್ಪನವರ ಜೊತೆ ಇರಲು ಸಾಧ್ಯವೆ?

ಈಗಾಗಲೇ ಯಡಿಯೂರಪ್ಪನ ಬೆಂಬಲಿಗರು ಅಲ್ಲಲ್ಲಿ ಸೂಚನೆ ನೀಡಿರುವಂತೆ ಪಕ್ಷದಿಂದ ಹೊರನಡೆದು ಹೊಸ ಪಕ್ಷ ಕಟ್ಟುವ ಯೋಚನೆ ಅವರಲ್ಲಿದೆ. ಹಾಗೆ ಮಾಡಿದರೆ ‘ದೇಶದ ಒಳಿತಿಗೆ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕು’ ಎಂದು ಪದೇ ಪದೇ ಜೆಡಿಎಸ್ ಪಕ್ಷವನ್ನು ತಿವಿಯುತ್ತಿದ್ದ ಯಡಿಯೂರಪ್ಪನವರೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ‘ದೇಶದ ಒಳಿತಿಗೆ’ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ. ಪ್ರಜಾವಾಣಿಯಲ್ಲಿ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ಅಂಕಣದಲ್ಲಿ (ದಿನಾಂಕ ಮೇ.14 ರ ಅನಾವರಣ) ಬರೆದಿರುವಂತೆ ಸಿಬಿಐ ತೂಗುಗತ್ತಿಯ ಅಡಿ ಜೀವಿಸುವವರಿಗೆ ರಾಷ್ಟ್ರೀಯ ಪಕ್ಷಗಳು ಮಣೆ ಹಾಕುವುದು ದುಸ್ತರ ಎನ್ನುವುದನ್ನು ಮನಗಂಡು ಪ್ರಾದೇಶಿಕ ಪಕ್ಷದ ಕನಸು ಕಾಣುತ್ತಿರಬಹುದು. ಪ್ರಾದೇಶಿಕ ಪಕ್ಷ ಆದರೆ, ಅವರದೇ ಆಡಳಿತ. ಆಗ ರಾಜಕೀಯ ನೈಪುಣ್ಯ, ಜನಪ್ರಿಯತೆ ಯಾವುದರಲ್ಲೂ ಸರಿಸಮ ಅಲ್ಲದಿರುವ ನಿತಿನ್ ಗಡ್ಕರಿಯಂತಹವರ ಎದುರು ಕೈ ಕಟ್ಟಿ ಕುಳಿತುಕೊಳ್ಳುವುದಾಗಲಿ, ಆಗಾಗ ಕಪ್ಪ ಕೊಡುವ ಪ್ರಮೇಯ ಇರುವುದಿಲ್ಲ ನೋಡಿ.

ಆದರೆ ಅಂತಹದೊಂದು ಪ್ರಯತ್ನದ ಉದ್ದೇಶವೇನು? ಎಂತಹ ರಾಜಕೀಯ ಅನಕ್ಷರಸ್ಥನಿಗೂ ಅರ್ಥವಾಗುವ ಸತ್ಯವೆಂದರೆ ಜೆಡಿಎಸ್ ಸೇರಿದಂತೆ ರಾಜ್ಯದ ಯಾವುದೇ ಪ್ರಾದೇಶಿಕ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಇದು ಯಡಿಯೂರಪ್ಪ ಮತ್ತು ಅವರ ಹಿಂಬಾಲಕರಿಗೆ ಸ್ಪಷ್ಟವಾಗಿ ಗೊತ್ತು. ಆದರೆ ಬಿಜೆಪಿ ಅಭ್ಯರ್ಥಿಗಳು ಬಹುಭಾಗದಲ್ಲಿ ಸೋಲಿಸುವಲ್ಲಿ ಪ್ರಾದೇಶಿಕ ಪಕ್ಷ ಯಶಸ್ವಿಯಾಗಬಹುದು. ಲಿಂಗಾಯುತರ ಪ್ರಾಬಲ್ಯ ಇರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿ ಅಧಿಕಾರದ ಗದ್ದುಗೆಯಿಂದ ಬಹುದೂರ ಉಳಿಯಬಹುದು.

ಆದರೆ, ಯಡಿಯೂರಪ್ಪನವರ ಉದ್ದೇಶ ಅಷ್ಟಕ್ಕೇ ಸೀಮಿತವಾದಂತಿಲ್ಲ. ಬಿಜೆಪಿಯನ್ನು ಸೋಲಿಸುವುರ ಜೊತೆಗೆ ತಾನು ಮತ್ತು ತನ್ನನ್ನು ನಂಬಿ ಬಂದವರಿಗೆ ಅಧಿಕಾರ ಬೇಕಲ್ಲ. ಆ ಕಾರಣಕ್ಕಾಗಿಯೇ ಅವರು ಸೋನಿಯಾ ಗಾಂಧಿಯತ್ತ ಮುಖ ಮಾಡಿದ್ದಾರೆ. ನಿನ್ನೆಯ ಭಾಷಣದಲ್ಲಿ ಅವರು ಮಾತನಾಡುತ್ತ ಸೋನಿಯಾ ಗಾಂಧಿಯವರನ್ನು ‘ಆರೋಪ ರೂಪದ ಹೊಗಳಿಕೆ’ ಮಾಡಿದ್ದು ಇದೇ ಕಾರಣಕ್ಕೆ. ಯಡಿಯೂರಪ್ಪ ಹೇಳಿದ್ದು ‘ತಮ್ಮ ಪಕ್ಷದ ಯಾರ ಮೇಲಾದರೂ ಆರೋಪ ಬಂದರೆ, ಸೋನಿಯಾ ಗಾಂಧಿ ಮೊದಲು ಅವರ ರಕ್ಷಣೆ ಮಾಡುತ್ತಾರೆ. ಆದರೆ ನಮ್ಮಲ್ಲಿ ಹಾಗಲ್ಲ’. ಯಡಿಯೂರಪ್ಪನವರಿಂದ ಈ ಮಾತು ಕೇಳಿ ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ ಕೂಡಾ ‘ಸದ್ಯ ಈಗಲಾದರೂ ಯಡಿಯೂರಪ್ಪನವರಿಗೆ ನಮ್ಮ ಪಕ್ಷದ ಮಹತ್ವ ಅರ್ಥವಾಯಿತಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಆರೋಪಿಗಳನ್ನು ರಕ್ಷಣೆ ಮಾಡುವುದು ಸ್ತುತ್ಯಾರ್ಹವೇ? ಪರಮೇಶ್ವರರು ಯಡಿಯೂರಪ್ಪನ ಮಾತನ್ನು ಒಪ್ಪಿಕೊಳ್ಳುತ್ತಾರೆಂದರೆ ಅವರ ಪಕ್ಷ ‘ಆರೋಪಿಗಳನ್ನು ರಕ್ಷಿಸುತ್ತದೆ’ ಎಂದು ಒಪ್ಪಿಕೊಂಡಂತೆ.

ಯಡಿಯೂರಪ್ಪನವರ ಈ ಮಾತಿನ ಹಿಂದೆ ಎರಡು ಉದ್ದೇಶಗಳಿರಬಹುದು. ಒಂದು: ಸೋನಿಯಾ ಗಾಂಧಿಯನ್ನು ಹೊಗಳುವ ಮೂಲಕ ತಾನೂ ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎಂದು ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ಕೊಡುವುದು. ಎರಡನೆಯದು: ತನಗೆ ಸದ್ಯ ಬೇಕಿರುವುದು ರಕ್ಷಣೆ. ಅದು ಸೋನಿಯಾ ಗಾಂಧಿ ಪಕ್ಷದಲ್ಲಿ ದೊರಕುವುದೇ ಎಂದು ಕಾಂಗ್ರೆಸ್ ನೇತಾರರನ್ನು ಕೇಳುವುದು. ಮುಂದಿನ ದಿನಗಳಲ್ಲಿ ಈ ಸಂದೇಶಗಳು ಮತ್ತಷ್ಟು ಸ್ಪಷ್ಟವಾಗಲಿವೆ.

ಕಾಂಗ್ರೆಸ್ ಗೆ ಸದ್ಯ ಹಿಂದುಳಿದ ಮತ್ತು ದಲಿತರ ಬೆಂಬಲವಿದೆ. ಮುಂದುವರಿದ ಜಾತಿಗಳಲ್ಲಿ ಒಂದಾದ ಲಿಂಗಾಯುತರು ಕಾಂಗ್ರೆಸ್ ನಿಂದ ದೂರವಿದ್ದಾರೆ ಎನ್ನುವುದನ್ನು ಇತ್ತೀಚಿನ ಚುನಾವಣೆಗಳು ನಿರೂಪಿಸಿವೆ. ಈ ಕಾರಣ ಕಾಂಗ್ರೆಸ್ ಗೆ ಲಿಂಗಾಯುತ ಮತಗಳು ಯಡಿಯೂರಪ್ಪನ ಮೂಲಕ ಬಂದರೂ ಸರಿಯೆ. ಹಾಗಂತ ಅವರು ಈಗಲೇ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಪಕ್ಷದ ಒಳಗೆ ಕರೆತಂದು ಗೊಂದಲ ಸೃಷ್ಟಿಸುವುದಿಲ್ಲ. ಬದಲಿಗೆ, ಅವರ ಪಾಡಿಗೆ ಅವರು ಒಂದು ಪ್ರಾದೇಶಿಕ ಪಕ್ಷ ಕಟ್ಟಿ ತಮ್ಮ ಸಾಮರ್ಥ್ಯ ನಿರೂಪಿಸುವವರೆಗೂ ಕಾಯಬಹುದು. ಮುಂದೆ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರಲು ಒಂದಷ್ಟು ಸೀಟುಗಳ ಅಗತ್ಯ ಬಿದ್ದಾಗ ನೆರವಿಗೆ ಇರಲಿ ಎನ್ನುವುದೂ ಅವರ ದೂರಾಲೋಚನೆ ಇರಬಹುದಲ್ಲವೇ?

ಒಂದಂತೂ ಸತ್ಯ ರಾಜ್ಯದಲ್ಲಿ ಬರ ಇರಲಿ ನೆರೆ ಇರಲಿ ವ್ಯಥೆಪಡಬೇಕಾದವನು ಮತದಾರ ಮಾತ್ರ.

ಫೋಟೋ: indiavision.com

ವ್ಯಂಗ್ಯಚಿತ್ರ ಮತ್ತು ಇತಿಹಾಸದ ವ್ಯಂಗ್ಯ!


-ಬಿ. ಶ್ರೀಪಾದ ಭಟ್


 

ಈ ನರಕಕ್ಕೆ ಕೊನೆಯೇ ಇಲ್ಲವೆನಿಸುತ್ತದೆ. 1949ರಲ್ಲಿ ವ್ಯಂಗಚಿತ್ರಕಾರ ಶಂಕರ ಅವರು ರಚಿಸಿದ ಅಂಬೇಡ್ಕರ್ ಅವರು ಬಸವನ ಹುಳುವಿನ ಮೇಲೆ ಕುಳಿತ ಹಾಗು ನೆಹರೂ ಅವರು ಅದನ್ನು ಚಾಟಿಯಿಂದ ಬೀಸುತ್ತಿರುವ ವ್ಯಂಗ್ಯಚಿತ್ರವನ್ನು NCERT ಪಠ್ಯದಲ್ಲಿ ಮುದ್ರಿಸಿರುವುದರ ಬಗೆಗೆ ಇಂದು ವಿವಾದ ಸೃಷ್ಟಿಯಾಗಿದೆ.

ಇದನ್ನು ದಲಿತರು ತಮ್ಮ ಆತ್ಮಾಭಿಮಾನದ ಪ್ರಶ್ನೆಯನ್ನಾಗಿ ಪರಿಗಣಿಸಿ 63 ವರ್ಷಗಳ ನಂತರ ಈಗ ಪ್ರತಿಭಟಿಸಿದ್ದರೆ ಬಹುಪಾಲು ಮಾಧ್ಯಮಗಳು ಮತ್ತು ಅನೇಕ ಪ್ರಜ್ನಾವಂತರು ಇದನ್ನು ಅಂಬೇಡ್ಕರ್ ಅವರ ಮೇಲಿನ ಕುರುಡು ಅಭಿಮಾನದ ಪ್ರತೀಕವೆಂದೂ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ಪ್ರತಿಭಟಿಸುವುದರ ಅಗತ್ಯತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಇವರಿಗೇಕೆ ಈ ದುರಂತಗಳು ಅರ್ಥವಾಗುತ್ತಿಲ್ಲ? ಇಂದಿನ ಜಾಗತೀಕರಣದ ದಿನಗಳಲ್ಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಗೊಂದಲಗಳಲ್ಲಿ, ತಿರಸ್ಕಾರದಲ್ಲಿ ಸೋತಂತಹ ದಿನಗಳಲ್ಲಿ, ಪ್ರತಿಯೊಂದು ಪ್ರಬಲ ಜಾತಿಗಳೂ ಒಂದಾಗಿ ಸಬಲೀಕರಣಗೊಳ್ಳುತ್ತಿದ್ದರೆ ಶೋಷಿತ ಸಮುದಾಯಗಳು ತಮ್ಮೊಳಗಿನ ಅಸಮಾನತೆಯಿಂದಾಗಿ ಛಿದ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಉತ್ತರ ಪ್ರದೇಶದಲ್ಲಿ ಮಾಯವತಿ ಅಧಿಕಾರದಿಂದ ಕೆಳಗಿಳಿದ ಕೇವಲ ಎರಡು ವಾರಗಳಲ್ಲಿ ದಲಿತರ ಮೇಲಿನ ಅತ್ಯಾಚಾರ ಹಾಗೂ ಹಲ್ಲೆಗಳು ಪುನರಾರಂಭಗೊಂಡ ವಿಷಮತೆಯ ಘಳಿಗೆಯಲ್ಲಿ ಅಂದಕಾಲತ್ತಿನ ಈ ತರಹದ ವ್ಯಂಗಚಿತ್ರಗಳು ಈ ಕಾಲದಲ್ಲಿ ದಲಿತರ ತಲ್ಲಣಗಳನ್ನು ಇನ್ನಷ್ಟು ಗೋಜಲುಗೊಳಿಸುತ್ತವೆ ಎಂಬ ಕಾರಣಕ್ಕೆ ಇಲ್ಲಿನ ಪ್ರತಿಭಟನೆಯ ನಿಜವಾದ ಆತಂಕವಿರುವುದು. ಅದರ ಹೊರತಾಗಿ ಕೇವಲ ಅಭಿಮಾನದ ಉದ್ವೇಗದಿಂದ ಮಾತ್ರವಲ್ಲ. ಇದಕ್ಕಿಂತಲೂ ಮೊದಲು ಮೊನ್ನೆ ಯವನಿಕದಲ್ಲಿ ನಡೆದ ಸಂಕಿರಣದಲ್ಲಿ ಭಾಗವಹಿಸಿ ಅಲ್ಲಿ ದಲಿತ ಚಿಂತಕ ಕಂಚಾಲಯ್ಯ ಅವರ ಮಾತುಗಳನ್ನು ಕೇಳಿದಾಗ, ಅತಿಯಾದ, ಕಳೆದ 20 ವರ್ಷಗಳಿಂದ ಕೊಂಚವೂ ಭಿನ್ನ ಜಾಡು ಹಿಡಿಯದ ಅವರ ರಾಡಿಕಲ್ ಚಿಂತನೆಗಳು ನಿಜಕ್ಕೂ ದಲಿತರಿಗಾಗಲಿ, ಹಿಂದುಳಿದ ಜಾತಿಗಳಿಗಾಗಲಿ ಯಾವುದೇ ಹೊಸ ಮಾರ್ಗಗಳನ್ನು, ಗುರಿಗಳನ್ನು ತೆರೆದಿಡುವುದಿಲ್ಲ ಎಂದು ನನಗೂ ಹಾಗು ನನ್ನ ಗೆಳೆಯರಿಗೆ ಮನವರಿಕೆಯಾಯಿತು.

1930ರ ದಶಕದಲ್ಲಿ ಅಂತರ್ಜಾತೀಯ ವಿವಾಹಗಳು ಜಾತೀಯತೆಯನ್ನು ಹೆಚ್ಚೂ ಕಡಿಮೆ ನಾಶಮಾಡಬಲ್ಲವು ಎಂದು ನಂಬಿದ್ದ ಅಂಬೇಡ್ಕರ್ ಅವರು 1950ರ ದಶಕದ ವೇಳೆಗೆ ಇಂಡಿಯಾದ ಒಟ್ಟು ದಮನಿತ ಗುಣದ ಬಗೆಗೆ ತೀವ್ರ ನಿರಾಸೆ ಹೊಂದಿದ್ದರು. ಜಾತಿ ವಿನಾಶದ ಆಶಯವನ್ನೇ ಬಿಟ್ಟುಕೊಟ್ಟರು. ಇಲ್ಲಿ ಮೊದಲು ತುಳಿಯುವವರು ಬದಲಾಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ಅವರಿಗೆ 50ರ ದಶಕದ ವೇಳೆಗೆ ಅದರ ಸಾಧ್ಯತೆಗಳೇ ಇಲ್ಲವೆನ್ನುವುದು ಮನವರಿಕೆಯಾಗಿ ಈ ಹಿಂದೂ ಧರ್ಮವೇ ಒಂದು ದುಷ್ಟ ಕೂಪ ಎಂದು ಕರೆದು ಬೌದ್ಧ ಧರ್ಮದ ಕಡೆಗೆ ನಡೆದರು. ವೈದಿಕ ಧರ್ಮವನ್ನು ಖಂಡಿಸಿದ ಬೌದ್ಧ ಧರ್ಮದ ಚಿಂತನೆಗಳೇ ಅಂಬೇಡ್ಕರ ಅವರಿಗೆ ದಲಿತರಿಗೆ ಹಿಂದೂ ಧರ್ಮದ ಶೋಷಣೆಯಿಂದ ಬಿಡುಗಡೆಗೆ ಹೊಸ ಬೆಳಕು ಗೋಚರಿಸಿತು. ಅವಮಾನದ ಸಂಸ್ಕೃತಿಯನ್ನೇ ಹಾಸಿ ಹೊದ್ದಿರುವ ದಲಿತ ಸಮುದಾಯಕ್ಕೆ  ಅವಮಾನ, ಆತ್ಮಾವಹೇಳನ, ದ್ವೇಷ, ಮೇಲು ಜಾತಿಗಳ ನಿರಂತರ ಅತ್ಯಾಚಾರ ಇವೆಲ್ಲ ವಿಷಪ್ರವೃತ್ತಿಗಳಿಂದ ದಲಿತರಿಗೆ ಬಿಡುಗಡೆ ಕೊಡಿಸಿ ಹೊಸ ಸಂಸ್ಕೃತಿ ಹಾಗೂ ಹೊಸ ಮೌಲ್ಯಗಳನ್ನು ಪಡೆದುಕೊಳ್ಳುವ ಮಾರ್ಗಗಳ  ಹುಡುಕಾಟದಲ್ಲಿ ತೊಡಗಿದ್ದ ಅಂಬೇಡ್ಕರ ಅವರಿಗೆ ಮಾಕ್ರ್ಸವಾದದ ಅತಿ ಬೌತಿಕವಾದ ಒಪ್ಪಿ ಕೊಳ್ಳಲು ಸಾಧ್ಯವೇ ಆಗಲಿಲ್ಲ. ಈ ಎಡಪಂಥೀಯ ನೆಲಗಟ್ಟಿನ ವರ್ಗ ಸಂಘರ್ಷದ ಮಾದರಿ ಎಂದೂ ತಳಸಮುದಾಯಗಳನ್ನು ಒಳಗೊಳ್ಳುವುದೇ ಇಲ್ಲ ಎಂದು ಅಂಬೇಡ್ಕರ್ ಅವರಿಗೆ ಸಂಪೂರ್ಣ ಮನದಟ್ಟಾಗಿತ್ತು. ಈ ಮಾಕ್ರ್ಸವಾದದ ಆರ್ಥಿಕ ಮಾರ್ಗಗಳು ಕಡೆಗೂ ಸೃಷ್ಟಿಸುವುದು ಕೊಳ್ಳುಬಾಕುತನವನ್ನು ಮತ್ತು ಜೊತೆಜೊತೆಗೇ ಅಪ್ರಜ್ನಾಪೂರಕವಾಗಿ ಜಾತೀಯತೆಯನ್ನು ಮಾತ್ರ ಎಂಬುದನ್ನು ಮನನ ಮಾಡಿಕೊಂಡ ಅಂಬೇಡ್ಕರ್ ದಲಿತರಿಗೆ ದೊಡ್ಡದಾದ ಪಾರಂಪರಿಕ ನೆಲೆಯನ್ನು, ಭದ್ರ ಬುನಾದಿಯನ್ನು, ಶೋಷಣೆರಹಿತ ವ್ಯವಸ್ಥೆಯನ್ನು, ಶಾಂತಿಯ ತೋಟವನ್ನು ಕಟ್ಟಿಕೊಡುವ ನೆಲೆಯಾಗಿಯೇ ಬೌದ್ಧ ಧರ್ಮದ ಕಡೆಗೆ ನಡೆದರು.

ಚಿಂತಕ ದಿವಂಗತ ಡಿ.ಆರ.ನಾಗರಾಜ ಪ್ರಕಾರ ಏಷ್ಯಾ ಖಂಡದ 20ನೇ ಶತಮಾನದ ಬೌದ್ಧ ಧರ್ಮದಲ್ಲಿ ಇಬ್ಬರು ತುಂಬ ಮುಖ್ಯರು. ಥಾಯ್ಲೆಂಡಿನ ಬುದ್ಧದಾಸ ಭಿಕ್ಕು ಮತ್ತು ಭಾರತದ ಬಾಬಾ ಸಾಹೇಬ ಅಂಬೇಡ್ಕರ್. ಅವರಿಬ್ಬರೂ ನಿಜವಾದ ಬೌದ್ಧ ಬಿಕ್ಷುಗಳು. ಇವರಿಬ್ಬರೂ 20ನೇ ಶತಮಾನದ ಸಮಾಜವದಿ ಮೌಲ್ಯಗಳು ಮತ್ತು ಬೌದ್ಧ ಧರ್ಮದ ನಡುವೆ ಅತ್ಯಂತ ಅರ್ಥಪೂರ್ಣ ಸಂವಾದ ನಡೆಸಿದರು. ಅಂಬೇಡ್ಕರರ ಉರಿಯುವ ಛಲ ಹೆಚ್ಚು ಆಳವಾದ ನೆಲೆಗೆ ತಲುಪುವ ಹಠವುಳ್ಳದ್ದು. ಭಾರತೀಯ ನಾಗರೀಕತೆಯ ಮೂಲಕ್ಕೆ ತಮ್ಮ ಹೋರಾಟವನ್ನು ಒಯ್ಯುವ ಹಠ ಅಂಬೇಡ್ಕರರದು. ಹೀಗಾಗಿ ಅಸ್ಪೃಶ್ಯತೆಯ ಚರಿತ್ರೆ ಮತ್ತು ಬೌದ್ಧ ಧರ್ಮದ ನಡುವೆ ಹೊಸ ರೀತಿಯ ಸಂಬಂಧಗಳನ್ನು ಅಂಬೇಡ್ಕರ ಕಂಡರು. ಅಸ್ಪೃಶ್ಯ ಸಂಸ್ಕೃತಿಹೀನನಲ್ಲ. ಬದಲಾಗಿ ದೀರ್ಘವಾದ, ಉದಾತ್ತವಾದ ಹಿನ್ನೆಲೆ ಉಳ್ಳವನು ಎಂದು ವ್ಯಾಖ್ಯಾನಿಸುವ ಮೂಲಕ ವರ್ತಮಾನದ ಹೋರಾಟಕ್ಕೆ ಹೊಸ ನೆಲೆ ಕೊಡಲು ಪ್ರಯತ್ನಿಸಿದರು.

ಅಂಬೇಡ್ಕರ ಅವರ ಮೂಲ ಆಶಯವಾಗಿದ್ದ ದಲಿತರಿಗೆ ತಮ್ಮ ಹಕ್ಕುಗಳ ಪರವಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೋರಾಟಕ್ಕೆ ರಾಜಕೀಯ ಆಯಾಮವೂ ಹೆಗಲುಕೊಡುತ್ತಾ ಸಹಭಾಗಿತ್ವ ನೀಡಲೇಬೇಕೆನ್ನುವ ಮಹಾತ್ವಾಕಾಂಕ್ಷೆಯಿಂದ ಕಟ್ಟಿದ ಪಕ್ಷವು ಅವರ ನಿಧನದ ನಂತರ ಅಂಬೇಡ್ಕರ ಅವರ ಉತ್ತರದಾಯತ್ವವನ್ನು ದೀರ್ಘ ಕಾಲವಧಿಯವರೆಗೆ ನಿಭಾಯಿಸಲು ಸೋತಿತು. ದಲಿತರಿಗೆ ಸಾಮಾಜಿಕ ಹೋರಾಟವನ್ನು ಬಳಸಿಕೊಂಡು ರಾಜಕೀಯ ಅಧಿಕಾರ ತಂದುಕೊಡುವ ಆ ಮೂಲಕ ಅಸ್ಪೃಶ್ಯ ಜಾತಿಗಳು ಕಾಲಕ್ರಮೇಣ ವರ್ಗಗಳಾಗಿ ಬದಲಾಗಬೇಕೆಂಬ ಅಂಬೇಡ್ಕರರ ಮಹಾತ್ವಾಕಾಂಕ್ಷೆಯ ಆಶಯಗಳನ್ನು ಬೇರು ಮಟ್ಟದಲ್ಲಿ ನೀರೆರೆದು ಬೆಳೆಸಲು ಬೇಕಾದ ಅಪಾರ ಸಹನೆ, ಬದ್ಧತೆ ಹಾಗೂ ಪರಸ್ಪರ ತಿಳುವಳಿಕೆಗಳ ಕೊರತೆಯಿಂದ ಈ ಪಕ್ಷವು ಸೊರಗತೊಡಗಿತು. ಇಲ್ಲಿನ ಹಳೆಯ ಮಂದಿ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಉತ್ಸುಕರಾಗಿದ್ದರೆ, ಹೊಸ ತರುಣ ಜನಾಂಗ ನಗರ ಕೇಂದ್ರಿತ ಚಳುವಳಿಯನ್ನು ನಡೆಸಲು ಹೊರಟಿದ್ದರು. ಈ ತಲೆಮಾರಿನ ನಡುವಿನ ಭಿನ್ನತೆ 1962ರಲ್ಲಿ ಖಕ ಪಕ್ಷದಲ್ಲಿ ಬಿರುಕನ್ನು ಹುಟ್ಟಿ ಹಾಕಿತು. ಈ ವಿಭಜನೆಯ ನಂತರ ನಗರ ಕೇಂದ್ರಿತ ಹೊಸ ತಲೆಮಾರಿನ ತರುಣರ ಗುಂಪು ಹೆಚ್ಚು ಪ್ರಭಾವಶಾಲಿಯಾಗಿ ಹೊಸ ಹುರುಪಿನಿಂದ ದಲಿತ ಚಳುವಳಿಗಳನ್ನು ರೂಪಿಸತೊಡಗಿತು. ಚುನಾವಣಾ ರಾಜಕೀಯದಲ್ಲೂ ಭಾಗವಹಿಸಿ ವಿದಾನಸಭಾ ಚುನಾವಣೆಗಳಲ್ಲಿ ಕೆಲವು ಸ್ಥಾನಗಳನ್ನೂ ಸಹ ಪಡೆಯುವಲ್ಲಿ ಯಶಸ್ವಿಯಾಯಿತು. ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಆ ಕಾಲದಲ್ಲಿ ಉತ್ರರ ಪ್ರದೇಶಕ್ಕೂ ಖಕ ಪಕ್ಷ ತನ್ನ ಪ್ರಭಾವವನ್ನು ವ್ಯಾಪಿಸಿಕೊಂಡಿತ್ತು. ಖಕ ಪಕ್ಷದ ಸೀಮಿತ ಪ್ರಭಾವಕ್ಕೆ ಉತ್ತರವೇನೋ ಎಂಬಂತೆ ಅಮೇರಿಕಾದ ಬ್ಲಾಕ ಪ್ಯಾಂಥರ್ಸನ ಸ್ಪೂರ್ಥಿಯಿಂದಾಗಿ 1970ರಲ್ಲಿ ಮಹಾರಾಷ್ಟದಲ್ಲಿ ದಲಿತ ಪ್ಯಾಂಥರ್ಸ ಎನ್ನುವ ಸಂಘಟನೆ ಹುಟ್ಟಿಕೊಂಡಿತು. ಆಗ ಜೆ.ಪಿ. ಚಳುವಳಿ ತನ್ನ ಬಿರುಸನ್ನು, ವ್ಯಾಪ್ತಿಯನ್ನು ದೇಶದಾದ್ಯಾಂತ ವ್ಯಾಪಿಸಿಕೊಳ್ಳುತ್ತಿದ್ದಂತಹ ಕಾಲ. ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಜೆ.ಪಿ.ಯವರು ಆ ಕಾಲಕ್ಕೆ ಅತ್ಯಂತ ಪ್ರಭಾವಿಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಪ್ರಬಲ ಸವಾಲನ್ನು ಒಡ್ಡಿದ್ದರು. ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದ, ಬಹುಪಾಲು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗಗಳನ್ನ ಆಕರ್ಷಿಸಿದ್ದ ಜೆ.ಪಿ ಯವರ ನವನಿರ್ಮಾಣ ಚಳುವಳಿಗೆ, ನವ ಅಂಬೇಡ್ಕರವಾದಿಗಳ ತರುಣರ ಗುಂಪಾದ ದಲಿತ ಪ್ಯಾಂಥರ್ಸ ತಮ್ಮ ಸಹಯೋಗದ ಕೊಂಡಿಯನ್ನು ಜೋಡಿಸಿಕೊಳ್ಳಲು ವಿಫಲವಾಯಿತು.

ಈ ಜಾತ್ಯಾತೀತ ಪ್ರಗತಿಪರ ಗುಂಪು ಅತ್ತ ಎಡಪಂಥೀಯರೊಂದಿಗೂ ಗುರುತಿಸಿಕೊಳ್ಳದೆ, ಇತ್ತ ನವ ನಿರ್ಮಾಣದ ಜೆ.ಪಿ.ಚಳುವಳಿಯೊಂದಿಗೂ ಗುರತಿಸಿಕೊಳ್ಳದೆ ತಠಸ್ಥವಾಗುಳಿದಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್ಸ ಸಂಘಟನೆಯನ್ನೂ ಸಹ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾಕ್ರ್ಸವಾದದ ನೆಲೆಗಟ್ಟಿನಲ್ಲಿ,  ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ.

ಇಲ್ಲಿ ಢಸಾಳರು ಮಾಕ್ರ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು. ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು 1977ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್ಸ ಇಬ್ಭಾಗವಾಯಿತು. ನಂತರ ಮಹಾರಾಷ್ಟ್ರದಲ್ಲಿನ ದಲಿತ ಚಳುವಳಿಗಳು ಮತ್ತು ಸಂಘಟನೆಗಳು ಸೂಕ್ತವಾದ ರಾಜಕೀಯ ನೆಲೆ ದೊರಕದೆ ಅತಂತ್ರರಾಗಿ ಹೋರಾಟ ನಡೆಸಬೇಕಾಯಿತು. ಇವರ ಹೋರಾಟಕ್ಕೆ ಅಪಾರ ಜನಬೆಂಬಲ ಹಾಗೂ ಜನಪ್ರಿಯತೆ ದೊರಕಿದ್ದರೂ ಒಂದು ಗಟ್ಟಿಯಾದ ಕೇಂದ್ರ, ಸೂಕ್ತವಾದ ರಣನೀತಿ ದೊರೆಯದೆ ಒಂದು ಬಿಡಿಯಾದ ಸಂಘಟನೆಗಳಾಗಿ ಉಳಿದುಕೊಂಡವು. ಕಡೆಗೆ ನಾಮದೇವ ಢಸಾಳರು ಸಿನಿಕರಾಗಿ ಹತಾಶೆಯಿಂದ ಅತ್ಯಂತ ನಿರಾಶೆಯ ಸ್ಥಿತಿಯಲ್ಲಿ, ಏಕಾಂಗಿ ಭಾವದಲ್ಲಿ, ಅಸಹಾಯಕರಾಗಿ 90ರ ದಶಕದಲ್ಲಿ ಶಿವಸೇನೆಯನ್ನು ಸೇರಿದ್ದು ಇಡೀ ಪ್ರಗತಿಪರ ದಲಿತ ಚಳುವಳಿಯ ಒಂದು ದೊಡ್ಡ ಸೋಲಾಗಿತ್ತು. ಅದು ರಾಜ್ಯದ ಎಲ್ಲಾ ಬುದ್ದಿಜೀವಿಗಳ, ಎಡಪಂಥೀಯ ಚಿಂತಕರ ಸೋಲಾಗಿತ್ತು.

ಆದರೆ 70ರ ದಶಕದ ಈ ತಲ್ಲಣಗಳು ಹಾಗೂ ದಲಿತ ಸಂಘಟನೆಗಳ ವಿಘಟನೆಗಳ ನಡುವೆಯೇ ಮರಾಠಿ ದಲಿತ ಲೇಖಕರು ಅತ್ಯಂತ ದಿಟ್ಟವಾಗಿ, ಸ್ಪಷ್ಟವಾಗಿ ಬರೆಯತೊಡಗಿದರು. ಅಂಬೇಡ್ಕರವಾದವನ್ನು ತಮ್ಮೊಳಗೆ ಬೇರು ಮಟ್ಟದಲ್ಲಿ ಬಿಟ್ಟುಕೊಂಡು ಇದರ ಸ್ಫೂರ್ತಿಯಿಂದ 70 ಹಾಗು 80ರ ದಶಕಗಳಲ್ಲಿ ಶ್ರೇಷ್ಟ ದಲಿತ ಸಾಹಿತ್ಯವನ್ನು ಬರೆದರು. ಹೊಸ ಚಿಂತನೆಯನ್ನೇ ರೂಪಿಸಿದರು.ಇದು ಅತ್ಯಂತ ಸೃಜನಶೀಲ ಸಾಹಿತ್ಯದ, ಜೀವಪರ ಸಾಹಿತ್ಯದ ಕಾಲಘಟ್ಟವಾಗಿತ್ತು. ದಲಿತ ಅಕ್ಷರಸ್ಥರಲ್ಲಿ ಹೊಸ ಚಿಂತನೆಗಳನ್ನು, ಬರವಣಿಗೆಯ, ಭಾಷೆಯ ಹೊಸ ನುಡಿಕಟ್ಟನ್ನೂ ಕಟ್ಟಿಕೊಟ್ಟಿತು. ಒಂದು ಹೊಸ ಪ್ರಜ್ನಾವಂತ ತಲೆಮಾರನ್ನೇ ರೂಪಿಸಿತು ಇವರ ಈ ಸಾಹಿತ್ಯದ ಮಾದರಿ ನಂತರ ಕನ್ನಡದ ದಲಿತ ಪ್ರಜ್ನೆಯೊಳಗೂ ತನ್ನ ಪ್ರಭಾವವನ್ನು ಬೀರಿತು.
ಕರ್ನಾಟಕದಲ್ಲಿ ದಲಿತ ನಾಯಕ ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿರುವುದೆಲ್ಲ ಬೂಸ ಎಂದು ಸಾರ್ವಜನಿಕವಾಗಿ ಹೇಳುವುದರ ಮೂಲಕ ಈ ಬೂಸ ಚಳುವಳಿ ದಲಿತ ಚಳುವಳಿಗೆ ತನ್ನ ಎಲ್ಲಾ ಬಾಗಿಲುಗಳನ್ನು ತರೆಯಿತು. ಆಗ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಹುಟ್ಟಿಕೊಂಡ ದಲಿತ ಲೇಖಕರ ಸಂಘಟನೆ ಮುಂದೆ ದಲಿತ ಸಂಘರ್ಷ ಸಮಿತಿಯಾಗಿ ನಂತರ 20 ವರ್ಷಗಳ ಕಾಲ 90ರ ದಶಕದುದ್ದಕ್ಕೂ ಒಂದು ದೊಡ್ಡ ಪ್ರಗತಿಪರ, ಜಾತ್ಯಾತೀತ ಸಂಘಟನೆಯಾಗಿ ಬೆಳೆಯಿತು. ಅನೇಕ ದಲಿತ ಲೇಖಕರಲ್ಲಿ ಅನಾಥ ಪ್ರಜ್ನೆಯನ್ನು ತೊಡೆದು ಹಾಕಿತು.

ಆ ಕಾಲಘಟ್ಟದ ಈ ದಲಿತ ಚಳುವಳಿಗೆ ದಕ್ಕಿದ ವೈಚಾರಿಕತೆಯ ಆಯಾಮ, ಸಿದ್ಧಾಂತದ ಹಿರಿಮೆ ನಿಜಕ್ಕೂ ಬೆರಗುಗೊಳಿಸುತ್ತದೆ. ಇದಕ್ಕೆ ಕಾರಣರಾದ ಬಿ.ಕೃಷ್ಣಪ್ಪ, ದೇವನೂರು ಮಹದೇವರವರು ತಮ್ಮಲ್ಲಿನ್ನ ನೆಲ ಸಂಸ್ಕೃತಿಯ ಜೀವಂತಿಕೆಯನ್ನು ವೈಚಾರಿಕತೆಯೊಂದಿಗೆ ಬೆರೆಸಿ ಆ ಕಾಲಘಟ್ಟದ ದಲಿತ ಚಳುವಳಿಗೆ ಧಾರೆಯೆರೆದರು. ಅಂಬೇಡ್ಕರವಾದ ಹಾಗೂ ಲೋಹಿಯಾವಾದದ ಈ ಎರಕ ಎಪ್ಪತ್ತರ ಹಾಗೂ ಎಂಬತ್ತರ ದಲಿತ ಚಳುವಳಿಗೆ ನಿರಂತರ ಚಿಲುಮೆಯ ಧಾರೆಯಾಗಿತ್ತು. ಹಾಗೂ ಆ ಕಾಲಘಟ್ಟದಲ್ಲಿ ಸಮಾಜವಾದಿ ಚಳುವಳಿಗಳನ್ನು ನಿರಂತರವಾಗಿ ನಡೆಸಿದ ಎಂ.ಡಿ.ನಂಜುಂಡಸಾಮಿ, ಲಂಕೇಶ, ತೇಜಸ್ವಿ, ರಾಮದಾಸ ಅವರ ವೈಚಾರಿಕತೆ ಹಾಗೂ ಆದರ್ಶಗಳು ಈ ಚಳುವಳಿಗೆ ನೀರೆರೆದವು. ತನ್ನ ಒಳಗೊಳ್ಳುವಿಕೆಯ ನೀತಿಯಿಂದ ಸಾಮಾಜಿಕವಾಗಿಯೂ ಹಾಗೂ ರಾಜಕೀಯವಾಗಿಯೂ ಇದರ ಪ್ರಬಾವ ನಿರ್ಣಾಯಕವಾಗಿತ್ತು.

ಎಂಬತ್ತರ ದಶಕದ ಕರ್ನಾಟಕದ ದಲಿತ ಚಳುವಳಿಯ ಮತ್ತೊಂದು ಮಹ್ವದ ಸಾಧನೆಯೆಂದರೆ ತನ್ನ ಪ್ರಖರ ವೈಚಾರಿಕತೆಯ ಮೂಲಕ ದಲಿತೇತರ ಲೇಖಕರು, ಹಾಗೂ ಸಮಾನಮನಸ್ಕರನ್ನೂ ಸಹ ದಲಿತ ಪ್ರಜ್ನೆಯ ಬಗೆಗೆ, ದಲಿತ ಸಂಸ್ಕೃತಿಯ ಬಗೆಗೆ ಚಿಂತಿಸಲು ಬಲು ದೊಡ್ಡ ಪ್ರೇರಕ ಶಕ್ತಿಯಾಗಿದ್ದು. ಇದು ಕಡಿಮೆ ಸಾಧನೆಯೇನಲ್ಲ. ಆದರೆ ಈ ವೈಚಾರಿಕತೆ, ಸಾಮಾಜಿಕ ಬದ್ಧತೆ, ಸೆಕ್ಯುಲರ ನೀತಿ, ಆದರ್ಶಗಳನ್ನು ಸದಾಕಾಲ ಜೊತೆಜೊತೆಗೇ ಕೊಂಡೊಯ್ಯುವ ಬಲು ದೊಡ್ಡ ಜವಬ್ದಾರಿ ಈ 20 ವರ್ಷಗಳ ಕಾಲಘಟ್ಟ ಬಲು ಧೀರ್ಘವೇ ಆಯಿತೆನಿಸುತ್ತದೆ. ಅಂಬೇಡ್ಕರ ಹಾಗೂ ಅಂಬೇಡ್ಕರವಾದವನ್ನು ಪದೇ ಪದೇ ನವೀಕರಿಸುವ, ಜಾಗತೀಕರಣಕ್ಕೆ ತಕ್ಕಂತೆ ಹೊಸ ನುಡಿಕಟ್ಟಿನಲ್ಲಿ ಮಾತನಾಡುವ, ಅಂಬೇಡ್ಕರ ಅವರನ್ನು ಸವರ್ಣೀಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಬೇರೂರುವಂತೆ ಮಾಡಬೇಕಾದ ಒಳಗೊಳ್ಳುವಿಕೆಯ ಮಾರ್ಗಗಳೇನು ಎಂಬುದರ ಚಿಂತನೆಗಳನ್ನು ನಮ್ಮ ದಲಿತ ಚಳುವಳಿಗಳು ಕೈಗೆತ್ತಿಕೊಳ್ಳಲೇ ಇಲ್ಲ. ಇದಕ್ಕೇ ಕೇವಲ ದಲಿತ ಸಂಘಟನೆಗಳು ಮಾತ್ರ ಹೊಣೆಯೆಲ್ಲ ರಾಜ್ಯದ ಎಲ್ಲಾ ಪ್ರಜ್ನಾವಂತರು, ಪ್ರಗತಿಪರ ಚಿಂತಕರು ಈ ಹೊಸ ರೂಪದ, ಭಿನ್ನ ಮಾದರಿಯ ಚಿಂತನೆಗಳನ್ನು ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ರೂಪಿಸಲು ಪ್ರಯತ್ನಿಸಲೇ ಇಲ್ಲ. ಎಲ್ಲದ್ದಕ್ಕೂ ದಲಿತ ಚಳುವಳಿಗಳನ್ನು ಮಾತ್ರ ದೂಷಿಸುವ ನಾವೆಲ್ಲ ನಮ್ಮೆಲ್ಮರ ಕೆಲಸಗಳನ್ನು ಕ್ಷಣಕಾಲ ಬದಿಗಿಟ್ಟು ನೇರವಾಗಿ ಚಳುವಳಿಯೊಳಗೆ ಗುರುತಿಸಿಕೊಂಟು ತಪ್ಪಾದಾಗಲೆಲ್ಲ ಎಚ್ಚರಿಸಿ ಮುನ್ನಡೆಸುವ ಗುರುತರ ಜವಾಬ್ದಾರಿಯುತ ಕಾರ್ಯಕ್ಕೆ ಧುಮುಕಲೇ ಇಲ್ಲವೆನಿಸುತ್ತದೆ. ನಮ್ಮ ಪ್ರಗತಿಪರ ಚಿಂತಕರ ಹಾಗೂ ದಲಿತ ಚಳುವಳಿಗಳೊಂದಿಗಿನ ಸಂಬಂಧ ಕೇವಲ ಸೆಮಿನಾರಗಳಲ್ಲಿ, ಅಕಡೆಮಿಕ ಚಿಂತನೆಗಳಲ್ಲಿ, ವೈಯುಕ್ತಿಕ ಸ್ನೇಹಗಳಲ್ಲಿ ಮಾತ್ರ ಸೀಮಿತವಾಯಿತೇನೋ ಎನಿಸುತ್ತದೆ. ಇದನ್ನು ನಾನು ಅತ್ಯಂತ ಎಚ್ಚರಿಕೆಯಿಂದ ಹೇಳುತಿದ್ದೇನೆ. ಅಲ್ಲದೆ ದಲಿತ ಚಳುವಳಿಗಳ ವಿಘಟನೆಗೆ ಸಿದ್ಧಾಂತದ ಭಿನ್ನಾಭಿಪ್ರಾಯಕ್ಕಿಂತಲೂ ವೈಯುಕ್ತಿಕ ನೆಲೆಯಲ್ಲಿನ ಬೇಧಗಳೇ ಮೂಲಭೂತ ಕಾರಣವಿದೆಯೆನಿಸುತ್ತದೆ. ಮೇಲ್ಕಾಣಿಸಿದ ಚಿಂತನೆಗಳ ಒಜ್ಜೆಗೆ ದಲಿತ ಚಳುವಳಿ ನಿಜಕ್ಕೂ ದಣಿದಿತ್ತು. ವಿಘಟನೆ ಅನಿವಾರ್ಯ ಎನ್ನುವ ಪರಿಸ್ಥಿತಿ ಉದ್ಭವಿಸಿತು.

90ರ ದಶಕದ ನಂತರ ನಡೆದಿದ್ದೆಲ್ಲಾ ಈಗ ಇತಿಹಾಸದ ದುರಂತ ಅಧ್ಯಾಯ. ಮಹಾರಾಷ್ಟ್ರದಂತೆ ಕರ್ನಾಟಕದ ದಲಿತ ಚಳುವಳಿ ಸಹ ನಗರ, ಪಟ್ಟಣ ಕೇಂದ್ರಿತವಾಗಿತ್ತು. ಹಳ್ಳಿಗಳ ಜಾತೀಯತೆ ಮತ್ತು ಕ್ರೂರತೆ, ಮಧ್ಯಮ ಜಾತಿಗಳಿಂದ ಅಲ್ಲಿ ನಡೆಯುವ ಅಮಾನುಷ ಹತ್ಯೆಗಳು, ತಳಸಮುದಾಯಗಳ ಅಸಹಾಯಕತೆ ಮತ್ತು ಒಬ್ಬಂಟಿತನಕ್ಕೆ ನಮ್ಮಲ್ಲಿನ ದಲಿತ ಸಂಘಟನೆಗಳ ಬಳಿ ಮಂತ್ರದಂಡವೇ ಇರಲಿಲ್ಲ ಅಥವಾ ಅತ್ಯಂತ ಸೀಮಿತವಾಗಿತ್ತು. ಇಲ್ಲಿ ಸಂಘಟನೆಗಳು ದಲಿತರ ಮೇಲಿನ ದೌರ್ಜನ್ಯಗಳಿಗೆ ಪ್ರತಿಕ್ರಿಯಾತ್ಮವಾಗಿಯೇ ಹೋರಾಡಬೇಕಾಯಿತು ಹೊರತಾಗಿ ಕ್ರಿಯಾತ್ಮಕವಾಗಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಬೇಕಾದ ಮಂತ್ರದಂಡ ಇವರ ಕೈಗೆ ದಕ್ಕಲೇ ಇಲ್ಲವೆನಿಸುತ್ತದೆ ಹಾಗೂ ಇದಕ್ಕೆ ಬೇಕಾದ ಸಿದ್ಧ ಮಾದರಿಗಳನ್ನು, ಆಯಾ ಕಾಲಮಾನಕ್ಕೆ ತಕ್ಕಂತೆ ಹೊಸ ಮಾರ್ಗಗಳನ್ನು ದಲಿತೇತರ ಪ್ರಗತಿಪರರು ದಲಿತ ಚಳುವಳಿಗೆ ಕಟ್ಟಿಕೊಡಲು ಸೋತರು. ನಾವೆಲ್ಲ ಜಾಗತೀಕರಣಕ್ಕೆ ತರೆದುಕೊಂಡಿದ್ದು ಸೀಮಿತ ನೆಲೆಯಲ್ಲಿ ಮಾತ್ರ ಎಂದೆನಿಸುತ್ತದೆ.

ಏತಕ್ಕೆ ಇಂಡಿಯಾದಲ್ಲಿ ಸಾಮಾಜಿಕ ನ್ಯಾಯ ಇಂದು ಸೋತಿದೆ ? ನಮ್ಮ ಬಹುಪಾಲು ಸಂಸ್ಕೃತಿ ಚಿಂತಕರು, ಪ್ರಗತಿಪರ ಹೋರಾಟಗಾರರು ಸಾಮಾಜಿಕ ನ್ಯಾಯದ ಮೂಲಭೂತ ಆಶಯಗಳನ್ನು, ಆದ್ಯತೆಗಳನ್ನು ಅತ್ಯಂತ ಸೀಮಿತ ಅರ್ಥದಲ್ಲಿ ಗ್ರಹಿಸಿದ್ದು, ಅಂಬೇಡ್ಕರ ಪ್ರತಿಪಾದಿಸಿದ ಜಾತಿವಿನಾಶ ಮತ್ತು ಸಹಬಾಳ್ವೆಯ ಮೂಲಭೂತ ಆಶಯಗಳನ್ನು ವ್ಯವಸ್ಥೆಯೊಳಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೇಕಾದ ಮಂತ್ರದಂಡದ ಹುಡುಕಾಟ ಇನ್ನೂ ನಡೆದಿರುವುದು ಬಲು ದೊಡ್ಡ ಸೋಲು, ದಲಿತರ ಹಕ್ಕಿನ ಬಗ್ಗೆ ಮಾತನಾಡುವಾಗ ಕೇವಲ ಅಕಡೆಮಿಕ್ ಶ್ರೇಷ್ಟತೆಯನ್ನು ಬಲವಾಗಿ ನೆಚ್ಚಿ ಅವರ ನೆಲಸಂಸ್ಕೃತಿಯನ್ನು, ಮೂಲ ಅವೈದಿಕ ಪರಂಪರೆಯನ್ನು ತಮ್ಮ ಚಿಂತನೆಯ ಮೂಸೆಯೊಳಗೆ ಒಳಗೊಳ್ಳದೇ ಹೋಗಿದ್ದು ಮತ್ತು ಈ ಅವೈದಿಕ ಪರಂಪರೆಯ ಬಗೆಗೆ ಅನೇಕ ಬಗೆಯ ಅಪಾಯಕಾರಿ ವಿಸ್ಮೃತಿಗೆ ನಮ್ಮನ್ನೆಲ್ಲಾ ಒಡ್ಡಿಕೊಂಡಿದ್ದು. ದಲಿತರಿಗೆ ಸಾಂಸ್ಕೃತಿಕ ಆಯಾಮ ಕೊಡುವ ಭರದಲ್ಲಿ ಭವಿಷ್ಯದಲ್ಲಿ ಈ ಸಾಂಸ್ಕೃತಿಕ ಎಚ್ಚರದ ಹಣತೆ ಸದಾ ಕಾಲ ಜೀವಂತವಾಗಿ ಉರಿಯುವಂತೆ ಅದಕ್ಕೆ ಬೇಕಾದ ಮೌಲ್ಯಾಧಾರಿತ ಆರ್ಥಿಕತೆಯ ತಳಹದಿಯನ್ನು ರೂಪಿಸುವಲ್ಲಿ ನಾವೆಲ್ಲಾ ಎಡವಿದ್ದು. ಗ್ರಾಮೀಣ ಭಾರತ ಹಾಗು ನಗರ ಭಾರತ ಎನ್ನುವ ಎರಡು ದಡಗಳಲ್ಲಿ ಬದುಕಬೇಕಾಗಿರುವ ದಲಿತರ ಮಾನಸಿಕ ತಯಾರಿ ಒಂದೇ ಮಟ್ಟದ್ದೇ ಅಥವಾ ವಿಭಿನ್ನವೇ ಇದಕ್ಕೆ ಉತ್ತರ ಹಾಗೂ ಪರಿಹಾರಗಳಲ್ಲಿ ಪ್ರಖರವಾದ ತೀಕ್ಷಣತೆಯ ಗ್ರಹಿಕೆಯ ಕೊರತೆ. ಈಗಾಗಲೇ ದಬ್ಬಾಳಿಕೆ ನಡೆಸುತ್ತಿರುವ ಹಳೆಯ ದಮನಕಾರಿ ನೀತಿಯನ್ನು ಸಮರ್ಥವಾಗಿ ಅರ್ಥೈಸುವಲ್ಲಿ ಯಶಸ್ವಿಯಾದ ದಲಿತ ಚಳುವಳಿ ಹಾಗೂ ಚಿಂತಕರು ಹೊಸ ರೀತಿಯ, ಜಾಗತೀಕರಣಗೊಂಡ ದೇಶದಲ್ಲಿ ಕ್ಷಣ ಕ್ಷಣಕ್ಕೂ ಹುಟ್ಟಿಕೊಳ್ಳುವ ಸವಾಲುಗಳಿಗೆ, ಅಸಮಾನತೆಗೆ, ದಮನಕಾರಿ ಪ್ರವೃತ್ತಿಗೆ ಸಮಂಜಸ ಉತ್ತರ ಹುಡುಕುವಲ್ಲಿ ಸೋತಿದ್ದು, ಜಾತಿ ಮತ್ತು ವರ್ಗವೆನ್ನುವ ಎರಡು ನೆಲೆಗಳನ್ನು ವೈಜ್ನಾನಿಕವಾಗಿ ವಿಶ್ಲೇಷಿಸುವಲ್ಲಿ ಅನಗತ್ಯ ಗೊಂದಲಗಳಿರುವುದು, ಒಂದೇ ನಾಣ್ಯದ ಎರಡು ಮುಖಗಳಾದ ಗಾಂಧೀವಾದ ಮತ್ತು ಅಂಬೇಡ್ಕರವಾದಕ್ಕೆ ದಿವಂಗತ ಡಿ.ಆರ್. ನಾಗರಾಜ ಕೊಟ್ಟ ಅದ್ಭುತ ಚಿಂತನೆಯಾದ ಗಾಂಧಿ ಗ್ರಾಮದಿಂದ ಹೊರಕ್ಕೆ ನಗರದ ಕಡೆಗೆ ನಡೆಯಬೇಕು ಮತ್ತು ಅಂಬೇಡ್ಕರ್ ನಗರದಿಂದ ಗ್ರಾಮದ ಕಡೆಗೆ ಚಲಿಸಬೇಕುಎನ್ನುವ ಮಾರ್ಗಕ್ಕೆ ನಿರ್ಲಕ್ಷ್ಯ ತೋರಿದ್ದು.

ಎಡಪಂಥೀಯ ಚಿಂತನೆ ಹಾಗು ಚಳುವಳಿ ದಲಿತ ಚಳುವಳಿ ಒಂದಕ್ಕೊಂದು ಸಹಭಾಗಿತ್ವದಲ್ಲಿ ಬೆರೆಯದೇ ಹೋದದ್ದು, ದಿವಂಗತ ಡಿ.ಆರ್.ಎನ್. ಹೇಳಿದಂತೆಭಾರತೀಯ ಬಂಡವಾಳಶಾಹಿ ಮತ್ತು ಜಾತಿಪದ್ಧತಿಗಳ ನಡುವಣ ಸಂಕೀರ್ಣ ಸಂಬಂಧಗಳನ್ನು ಅಂಬೇಡ್ಕರ ಅಷ್ಟು ಪ್ರಖರವಾಗಿ ಗ್ರಹಿಸಲಾಗಲಿಲ್ಲ. ಭಾರತೀಯ ಬಂಡವಾಳಶಾಹಿಯ ತರ್ಕ, ಮೂಲಭೂತವಾಗಿ ಮೇಲುಜಾತಿಗಳನ್ನು ಬಲಪಡಿಸುವಂತದ್ದು, ಭಾರತೀಯ ಬಂಡವಾಳಶಾಹಿ ದಲಿತರಿಗೆ ಕೆಲವು ತುಣುಕುಗಳನ್ನು ನೀಡಿ ಮೇಲುಜಾತಿಗಳಿಗೆ ಭರ್ಜರಿ ಔತಣವನ್ನು ಮುಂದುವರೆಸಿತು. ಭಾರತೀಯ ಬಂಡವಾಳಶಾಹಿ ಸಮಾಜದ ಆಯಕಟ್ಟಿನ ಕ್ಷೇತ್ರಗಳ ನಾಯಕತ್ವ ಮೇಲುಜಾತಿಯಲ್ಲೇ ಮುಂದುವರೆಯಿತು. ಮೇಲುಜಾತಿಗಳು ಮತ್ತು ಬಂಡವಾಳಶಾಹಿಗಳ ಹೊಂದಾಣಿಕೆಯನ್ನು ಅಂಬೇಡ್ಕರರಿಗಿಂತ ಲೋಹಿಯಾ ಹೆಚ್ಚು ಸೂಕ್ಷ್ಮವಾಗಿ ಗ್ರಹಿಸಿದ್ದರು. ಇಲ್ಲಿ ಅಂಬೇಡ್ಕರರವರ ಮಿತಿಯನ್ನು ನಾವೂ ಸಹ ಮೀರಲು ಸೋತೆವು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ದಲಿತರಿಗೆ ರಾಜಕೀಯವಾಗಿ ಹಕ್ಕಿನಿಂದ ಮಾತನಾಡುವ, ಕನಿಷ್ಟ ಎರಡಂಕಿಯ ಶಾಸಕ ಸ್ಥಾನಗಳನ್ನು ಗಳಿಸುವ ಬಿಎಸ್ಪಿ ಮಾದರಿ ಸಹ ಇಲ್ಲಿ ಸೋತು ಹೋಗಿದ್ದು, ಹಾಗು ಸಾಮಾಜಿಕ ನ್ಯಾಯದ ತಕ್ಕಡಿಯ ಅಡಿಯಲ್ಲಿ ಮೀಸಲಾತಿಯನ್ನು ಬಳಸಿಕೊಂಡು ವ್ಯವಸ್ಥೆಯ ಶ್ರೇಣೀಕೃತ ಮೆಟ್ಟಿಲುಗಳನ್ನು ಏರಿದ ಬಹುಪಾಲು ಅಕ್ಷರಸ್ಥ ದಲಿತರು ನಂತರ ತಮ್ಮ ಜನಾಂಗದ ಶೋಷಿತ ಬದುಕನ್ನೇ, ಶೋಷಿತರನ್ನೇ ಕಡೆಗಣಿಸಿ, ತಾವು ನಡೆದ ಬಂದ ದಾರಿಯನ್ನೇ ಮರೆತು ನವ ಭ್ರಾಹ್ಮಣರಾದದ್ದು. ಕೆಲವು ದಲಿತ ನಾಯಕರ ಅನುಕೂಲಸಿಂದು, ಅವಕಾಶವಾದಿ ರಾಜಕಾರಣ, ಕಡೆಗೆ ಅಂಬೇಡ್ಕರ ಅವರ ಚಲನಶೀಲ ರಾಜಕಾರಣವನ್ನು ಅರ್ಥೈಸಿಕೊಳ್ಳಲು ಸೋತಿದ್ದು. ಇವೆಲ್ಲವೂ ಪರಸ್ಪರ ಪೂರಕವಾಗಿಯೇ ಬೆಸೆದುಕೊಂಡು ತಳ ಸಮುದಾಯಗಳ ಬದುಕಿನ ಮೇಲೆ ಅತ್ಯಂತ ಖುಣಾತ್ಮಕ ಪರಿಣಾಮವನ್ನೇ ಬೀರಿದವು.

ಅತ್ಯಂತ ಮುಖ್ಯವಾಗಿ ಜಾಗತೀಕರಣಗೊಂಡ ಭಾರತದೊಳಗೆ ಈ ಹೆಮ್ಮಾರಿಯನ್ನು ಎದುರಿಸಲು ಇಲ್ಲಿನ ಪ್ರಗತಿಪರ ಚಿಂತಕರು ಅತ್ಯಂತ ವೈಜ್ನಾನಿಕವಾಗಿ ಕೇವಲ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿತ್ತೇನೂ ಅನಿಸುತ್ತದೆ.
ಮೊದಲನೆಯದಾಗಿ ದಣಿದ, ವಿಘಟನೆಗೊಂಡ ಚಳುವಳಿಗಳ ಪುನ ಸೃಷ್ಟಿಯ ಮೂಲಕ ದಲಿತರ ಸಬಲೀಕರಣ ಹಾಗು ಆತ್ಮಾಭಿಮಾನದ, ಇತರ ಜಾತಿಗಳಂತೆ ಆರ್ಥಿಕವಾಗಿ ನೆಮ್ಮದಿಯ ಬಾಳು ತಂದುಕೊಡಲು ಸಾಧ್ಯವೇ? ಯಜಮಾನ್ಯ ಸಂಸ್ಕೃತಿಗೆ ಸೆಡ್ಡು ಹೊಡೆಯುವ ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಈ ಅತ್ಯಂತ ಹಳೆಯ ಮಾರ್ಗ ಇಂದು ತೆವಳುತ್ತಿದೆ. ಏಕೆಂದರೆ ಇದು ದಲಿತರಿಗೆ ಕ್ರಿಯಾತ್ಮಕವಾಗಿ ಪರ್ಯಾಯ ನೆಲೆಯನ್ನು, ಬಾಳನ್ನು ನೀಡಲು ಸಾಧ್ಯವಿಲ್ಲ.  ಇಲ್ಲಿನ ಕ್ರಾಂತಿಕಾರಿ ಆಶಯಗಳು ಪ್ರಭುತ್ವದೊಂದಿಗೆ ಇಲ್ಲಾ ಸೆಣೆಸಾಡುತ್ತಾ ಸಾಧಿಸಬೇಕು ಇಲ್ಲವೇ ಪ್ರಭುತ್ವದೊಂದಿಗೆ ಹಂಚಿಕೊಂಡು ಸಾಧಿಸಬೇಕು. ಮೊದಲನೇಯ ಮಾರ್ಗಕ್ಕೆ ಬದ್ಧತೆಯುಳ್ಳ ತಂಡದ ಕೊರತೆಯಿದ್ದರೆ, ಎರಡನೇ ಮಾರ್ಗಕ್ಕೆ ನೈತಿಕತೆಯ ಬಲು ದೊಡ್ಡ ಕೊರತೆಯಿದೆ. ಈ ಕತ್ತಲ ದಾರಿ ಬಲು ದೂರ ಎನ್ನುವಂತಹದ್ದೂ ಸೂರ್ಯಸ್ಪಷ್ಟ. ಇದು ನಿರಂತರವಾಗಿ ನಡೆದರೆ ಮಾತ್ರ ಇದರ ಫಲ ಎರಡು ಅಥವಾ ಮೂರು ತಲೆಮಾರುಗಳಿಗೆ ದೊರಕಬಹುದು.

ಎರಡನೇಯದಾಗಿ ಉತ್ತರ ಪ್ರದೇಶದ ಮಾದರಿಯಲ್ಲಿ ದಲಿತ ರಾಜಕೀಯ ನೆಲೆಗಟ್ಟನ್ನು ನಮ್ಮ ಕರ್ನಾಟಕದಲ್ಲಿ ಸ್ಥಾಪಿಸಲು ಸಾಧ್ಯವೇ ? ಎಪ್ಪತ್ತರ ದಶಕದಲ್ಲಿ ತಮ್ಮ ಸರ್ಕಾರಿ ಉದ್ಯೋಗವನ್ನು ತ್ಯಜಿಸಿ ಅಡಿಗಡಿಗೂ ಮೇಲ್ಜಾತಿಗಳ, ಮಧ್ಯಮವರ್ಗಗಳ ಹೀಯಾಳಿಕೆಯನ್ನು ಅನುಭವಿಸುತ್ತಾ ಬಿಎಸಪಿ ಎನ್ನುವ ದಲಿತರಿಗಾಗಿಯೇ ಒಂದು ರಾಜಕೀಯ ಪಕ್ಷವನ್ನು ಕಟ್ಟಿದವರು ಕಾನ್ಸೀರಾಮ್. ಆಗ ಕಾನ್ಸೀರಾಮ್ ಅವರು ತಮ್ಮ ಸ್ನೇಹಿತ ಖಾರ್ಪಡೆ ಅವರೊಂದಿಗೆ ಸೇರಿ 40 ವರ್ಷಗಳ ಹಿಂದೆ ಅಂಬೇಡ್ಕರ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ, ಚಳುವಳಿ ಎನ್ನುವ ಧ್ಯೇಯ ಮಂತ್ರವನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಅಖಿಲ ಭಾರತ ದಲಿತ ಹಾಗೂ ಆದಿವಾಸಿ ಹಾಗೂ ಹಿಂದುಳಿದವರ ಒಕ್ಕೂಟ ನಂತರ ದಲಿತ ಮತ್ತು ಅಲ್ಪ ಸಂಖ್ಯಾತ ಒಕ್ಕೂಟ ಸ್ಥಾಪಿಸಿದರು. ಇದಕ್ಕಾಗಿ ತಮ್ಮ ಜೀವಮಾನವನ್ನೆ ಮುಡಿಪಾಗಿಟ್ಟ ಕಾನ್ಸೀರಾಮ ತಮ್ಮ ಸಂಘಟನಾ ಚಾತುರ್ಯವನ್ನು ಬಳಸಿ ರಾಷ್ಟ್ರ ಮಟ್ಟದಲ್ಲಿ ದಲಿತರಿಗೆ ಒಂದು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಗಟ್ಟಿಯಾದ ಐಡೆಂಟಿಟಿಯನ್ನು ತಂದುಕೊಡಲು ಹಗಲಿರುಳೂ ದುಡಿದರು.

ಇಲ್ಲಿ ನಿಸ್ವಾರ್ಥವಿತ್ತು. ಎಪ್ಪತ್ತರ ಹಾಗೂ ಎಂಬತ್ತರ ದಶಕದಲ್ಲಿ ಕಾನ್ಸೀರಾಮ ಅವರು ಸೈಕಲ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ತಮ್ಮ ದಣಿವರಿಯದ ತಿರುಗಾಟ ಹಾಗೂ ಅಧ್ಯಯನದಿಂದ ಇಡೀ ಉತ್ತರ ಭಾರತದ ಒಟ್ಟು ಜನಸಂಖ್ಯೆಯ ವಿವರಗಳು, ಇದರಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಯವರೆಷ್ಟು, ಹಿಂದುಳಿದವರ ಹಾಗೂ ದಲಿತರ ಶೇಕಡವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗತಿಗಳು ಎಲ್ಲ ಮಾಹಿತಿಯನ್ನು ಕಲೆಹಾಕಿದರು. ಇದು ಕಾನ್ಸೀರಾಮ್ ಅವರ ಶೈಲಿ. 1984 ರಲ್ಲಿ ಬಿಎಸಪಿ ಎನ್ನುವ ತಮ್ಮ ಮಹಾತ್ವಾಕಾಂಕ್ಷೀ ರಾಜಕೀಯ ಪಕ್ಷವನ್ನು ಸ್ಥಾಪಿಸುವಷ್ಟರಲ್ಲೇ ಇಡೀ ಉತ್ರರ ಭಾರತದ ಸಾಮಾಜಿಕ ಹಾಗೂ ರಾಜಕೀಯ ಸ್ವರೂಪಗಳು, ಜಾತಿ ವ್ಯವಸ್ಥೆ, ಅವುಗಳ ಆಳ ಸ್ವರೂಪಗಳು ಎಲ್ಲವನ್ನೂ ಅರೆದು ಕುಡಿದಿದ್ದರು ಕಾನ್ಸೀರಾಮ್. ಆಗ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ದಲಿತರ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯಾತ್ಮಕವಾದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿದ್ದರೆ ಉತ್ತರ ಭಾರತದಲ್ಲಿ ಕಾನ್ಸೀರಾಮ ಅವರು ಕ್ರಿಯಾತ್ಮಕವಾಗಿ 90ರ ದಶಕದಲ್ಲಿ ದಲಿತ ನಾಯಕ ಅಥವಾ ನಾಯಕಿ ಉತ್ತರ ಭಾರತದ ಮುಖ್ಯಮಂತ್ರಿಯ ಪಟ್ಟವನ್ನು ಗಳಿಸಲೇಬೇಕು ಎನ್ನುವ ಅತ್ಯಂತ ಸ್ಪಷ್ಟವಾದ ರಾಜಿಕೀಯ ಮಹಾತ್ವಾಕಾಂಕ್ಷೆಯೊಂದಿಗೆ ಮುನ್ನುಗಿದ್ದರು.

ಇಲ್ಲಿ ಅಕಡೆಮಿಕ ಚಿಂತನೆಗಳು, ಸಾಮಾಜಿಕ ಸಂಘಟನೆಗಳು, ಬೌದ್ಧಿಕ ಕಸರತ್ತುಗಳು, ಎಡಪಂಥೀಯ ನೆಲೆಯ ಚಿಂತನ ಮಂಥನಗಳು ಯಾವ ಕಾಲಕ್ಕೂ ದಲಿತರಿಗೆ ರಾಜಕೀಯ ಸ್ಥಾನಮಾನಗಳನ್ನು ದಕ್ಕಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ನಂಬಿದ್ದ ಕಾನ್ಸೀರಾಮ ಕಡೆವರೆಗೂ ಪ್ರಗತಿಪರ ಚಿಂತಕರನ್ನು, ಎಡಪಂಥೀಯ ಬುದ್ಧಿಜೀವಿಗಳನ್ನು ತಮ್ಮ ಬಳಿ ಹಾಗೂ ಪಕ್ಷದ ಹತ್ತಿರಕ್ಕೂ ಸಹ ಬಿಟ್ಟುಕೊಳ್ಳಲಿಲ್ಲ. ಇದೇನಾದರೂ ಸಾಧ್ಯವಾಗಿದ್ದರೆ ಮಾಯಾವತಿ ನಾಯಕತ್ವದ ಬಿಎಸಪಿ ಪಕ್ಷ ಇಂದು ಸೈದ್ಧಾಂತಿಕವಾಗಿ ಈಗಿನ ಕೆಳಮಟ್ಟಕ್ಕೆ ತಲುಪುತ್ತಿರಲಿಲ್ಲವೇನೋ. ಅದೇ ರೀತಿ ಈಗಲಾದರೂ ಒಂದು ಕಾಲದಲ್ಲಿ ವೈಚಾರಿಕ ಬದ್ಧತೆಯನ್ನು, ಬುದ್ಧಿಜೀವಿ ವ್ಯಕ್ತಿತ್ವವನ್ನು ತಮ್ಮೊಳಗೆ ಆಳವಾಗಿ ಬಿಟ್ಟುಕೊಂಡಿದ್ದ ಕರ್ನಾಟಕದ ದಲಿತ ಸಂಘಟನೆಗಳು ಆ ಸೈದ್ಧಾಂತಿಕ ವ್ಯಕ್ತಿತ್ವವನ್ನೇ ನೆಚ್ಚಿಕೊಂಡು ಕಾನ್ಸೀರಾಮ ಮಾದರಿಯ ರಾಜಕೀಯ ಪ್ರೇರಿತ ಕ್ರಿಯಾತ್ಮಕ ರಾಜಕೀಯವನ್ನು ಇಂದು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಂಬೇಡ್ಕರ ಜನ್ಮ ದಿನದಂದು ಒಟ್ಟುಕೂಡಿ ಪ್ರಜಾ ಪ್ರಗತಿರಂಗವೆನ್ನುವ ರಾಜಕೀಯ ಪಕ್ಷವನ್ನು ಕಟ್ಟಿರುವ ಅನೇಕ ದಲಿತ ಹಾಗೂ ಅಲ್ಪ ಸಂಖ್ಯಾತ ಸಂಘಟನೆಗಳು ಕಾನ್ಸೀರಾಮ ಮಾದರಿಯನ್ನು ಅರಿತುಕೊಂಡಂತಿದೆ. ಇಲ್ಲಿ ಗೊಂದಲಗಳಿಲ್ಲ. ಇವರಲ್ಲಿ ಅಹಿಂದ ಸಮುದಾಯಕ್ಕೆ ಇಂದು ರಾಜಕೀಯವೊಂದೇ ಪಯರ್ಯಾ ಮಾರ್ಗ ಎನ್ನುವ ಸ್ಪಷ್ಟ ತಿಳುವಳಿಕೆಯಿದೆ. ಮುಂದಿನ ದಿನಗಳಲ್ಲಿ ಪ್ರಜಾ ಪ್ರಗತಿರಂಗದ ಸ್ಪಷ್ಟ ನಡೆಗಳು ಗೊತ್ತಾಗಲಿದೆ. ಸದ್ಯಕ್ಕೆ ಇದು ಅತ್ಯಂತ ವಾಸ್ತವ ಮಾರ್ಗ.
ಮೂರನೆಯದಾಗಿ ಆರ್ಥಿಕ ಸ್ವಾವಲಂಬನೆಯ, ಸಂಪೂರ್ಣ ಪಶ್ಚಿಮ ಮಾದರಿಯ ಬಂಡವಾಳಶಾಹಿಯ ಯಾವುದೇ ಗೊಂದಲಗಳಿಲ್ಲದ ಸ್ಪಷ್ಟವಾದ ಬೆಳಕಿನ ದಾರಿ. ದಲಿತರು ವಿಮುಕ್ತಿಯನ್ನು ಎತ್ತಿಹಿಡಿಯುವ, ಸಮಬಾಳು ಸಮಪಾಲು ತತ್ವದಡಿ ಕೆಲಸ ಮಾಡುವ, ಆಸ್ತಿಯನ್ನು ಸಮನಾಗಿ ಹಂಚುವ ಎಡಪಂಥೀಯ ಸಿದ್ಧಾಂತಗಳನ್ನು ತಮ್ಮೊಳಗೆ ಬಿಟ್ಟುಕೊಂಡಿದ್ದಾರೆ. ಆದರೆ ಬಹುಪಾಲು ಎಡಪಂಥೀಯ ಬುದ್ದಿಜೀವಿಗಳು ದಲಿತ ಸಂವೇದನೆಯನ್ನು, ಅಂಬೇಡ್ಕರವಾದವನ್ನು ತಮ್ಮೊಳಗೆ ಬಿಟ್ಟುಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಕಮ್ಯುನಿಷ್ಟ ಸರ್ಕಾರಗಳಿದ್ದ ಕೇರಳ ಹಾಗು ಪಶ್ಚಿಮ ಬಂಗಾಳದ ರಾಜ್ಯಗಳು. ಕೆಲಸ ಕೊಡುವವರಾಗಿ, ಕೆಲಸ ಕೇಳುವವರಾಗಬೇಡಿ ಎನ್ನುವ ಸ್ವಾಯತ್ತತೆಯ, ಸ್ವಾವಲಂಬನೆಯ ಘೋಷಣೆಯೊಂದಿಗೆ ಹುಟ್ಟಿಕೊಂಡ ದಲಿತ ಉದ್ಯಮಿಗಳು ಅರ್ಥತ ದಲಿತ ಛೇಂಬರ್ಸ ಆಫ ಕಾಮರ್ಸ ಹಾಗೂ ಕಳೆದ 20 ವರ್ಷಗಳಿಂದ ಇದರ ಪರವಾಗಿ ಚಿಂತಿಸಿದ ಖ್ಯಾತ ದಲಿತ ಚಿಂತಕ ಚಂದ್ರಬಾನು ಪ್ರಸಾದ ಇದರ ಕಟ್ಟಾ ಪ್ರತಿಪಾದಕರು. ಚಂದ್ರಬಾನು ಪ್ರಸಾದರು ದಲಿತರು ಹಾಗೂ ಆದಿವಾಸಿಗಳನ್ನು ಸಮಾಜದ ಮಖ್ಯವಾಹಿನಿಗೆ ತರಲು ದಿಗ್ವಿಜಯಸಿಂಗ ರವರ ನಾಯಕತ್ವದಲ್ಲಿ ಐತಿಹಾಸಿಕ ಭೂಪಾಲ ದಾಖಲೆಯನ್ನು ರೂಪಿಸಿದವರು. ಈ ಮೂಲಕ ಸರ್ಕಾರವು ದಲಿತ ಹಾಗೂ ಆದಿವಾಸಿಗಳ ಉದ್ಯಮಗಳಿಂದ ಶೇಕಡಾ 30ರಷ್ಟನ್ನು ಕೊಳ್ಳಬೇಕು ಎನ್ನುವ ಭೂಪಾಲ ಘೋಷಣೆ ಮಾಡಲಾಯಿತು. ಇಲ್ಲಿಯೂ ಸಹ ಯಾವುದೇ ಗೊಂದಲಗಳಿಲ್ಲ. ಸಮಾಜದ ಮುಖ್ಯವಾಹಿನಿಗೆ ದಲಿತರು ಪ್ರವೇಶ ಪಡೆಯಲೇಬೇಕಾದರೆ ದಲಿತ ಮಧ್ಯಮ ವರ್ಗ ಸೃಷ್ಟಿಯಾಗಬೇಕು, ನಂತರ ಇದೇ ದಲಿತ ಮಧ್ಯಮ ವರ್ಗ ಮುಂದೆ ಬೆಳೆದು ದಲಿತ ಉದ್ಯಮಿಗಳಾಗಬೇಕು ಎನ್ನುವ ಘೋಷಣೆ ಹಾಗು ಚಿಂತನೆ ಇಲ್ಲಿನ ಮೂಲ ಆಶಯ. ಚಿಂತಕ ಚಂದ್ರಬಾನು ಪ್ರಸಾದ ಅವರ ಪ್ರಕಾರ ಕಳೆದ 30 ವರ್ಷಗಳಲ್ಲಿ ಶೈಕ್ಷಣಿಕವಾಗಿ ಮೀಸಲಾತಿಯನ್ನು ಬಳಸಿಕೊಂಡು ನಂತರ ಸ್ವಾವಲಂಬನೆಯ ಮೂಲಕ, ಸತತ ಪರಿಶ್ರಮದ ಮೂಲಕ ಇಂದು ದಲಿತ ಉದ್ಯಮಿಯಾಗಿ ಬೆಳದ ಪ್ರಮುಖರೆಂದರೆ ಮಿಲಿಂದ ಕಾಂಬ್ಳೆ, ಅಶೋಕ ಖಡೆ, ಮಾಲ್ಕಿಯತ ಚಂದ, ಕಲ್ಪನಾ ಸರೋಜ, ಸುನೀಲ ಜೋಡೆ, ಕೋಬ್ರಗಡೆ, ಪ್ರಸಾದ ದಹಪುತೆ,ರಾಜೇಶ ಪಾಸ್ವಾನ ಮುಂತಾದವರು.

ಇವರೆಲ್ಲರೂ ಇಂದು ಕೋಟಿ ರೂಪಾಯಿಗಳ ತೆರಿಗೆಯನ್ನು ಕಟ್ಟಬಲ್ಲಷ್ಟು ಸಮರ್ಥರು. ಇದು ದಲಿತ ಹಕ್ಕುಗಳ ಚಳುವಳಿಗಳ ಯಶಸ್ಸಲ್ಲದೇ ಮತ್ತಿನ್ನೇನು ಎಂದು ಅತ್ಯಂತ ಹೆಮ್ಮೆಯಿಂದ ಪ್ರಶ್ನಿಸುತ್ತಾರೆ ಚಂದ್ರಬಾನು ಪ್ರಸಾದ. ಇದು ನಿಜವಲ್ಲವೇ? ಯಾವುದನ್ನು ನಾವೆಲ್ಲ ದಲಿತರ ಸಬಲೀಕರಣ ಎಂದು ಕರೆಯುತ್ತೇವೆಯೋ, ಯಾವುದನ್ನು ನಾವೆಲ್ಲ ದಲಿತರು ಸವರ್ಣೀಯರೊಂದಿಗೆ ಸಮಸಮವಾಗಿ ಹೆಜ್ಜೆ ಹಾಕಬೇಕೆಂದು ಕನಸಿದ್ದೆವೋ ಆ ಕನಸಿನ ಸಾಕಾರ ರೂಪವಲ್ಲವೇ ಈ ದಲಿತ ಉದ್ಯಮ ಹಾಗೂ ಉದ್ಯಮಿಗಳ ಯಶಸ್ಸು. ಇಲ್ಲಿ ಚಂದ್ರಬಾನು ಪ್ರಸಾದರು ಪ್ರತಿಪಾದಿಸುವುದು ವಲಸೆಯನ್ನು. ಅಂದರೆ ಗ್ರಾಮಗಳಲ್ಲಿನ ದಲಿತರು ಪಟ್ಟಣಕ್ಕೆ, ಪಟ್ಟಣಗಳಲ್ಲಿನ ದಲಿತರು ನಗರಕ್ಕೆ ವಲಸೆ ಹೋಗಲೇಬೇಕು, ಆ ಮೂಲಕ ಒಂದು ಚಲನಶೀಲತೆಯನ್ನು ಸೃಷ್ಟಿಸಬೇಕು, ಕಡೆಗೆ ಅಂಬೇಡ್ಕರ ಅವರು ಸಹ ನಗರಗಳಿಗೆ ವಲಸೆ ಹೋಗುವುದು ಹೊಸ ಜೀವನ ಚಳುವಳಿ ಎಂದೇ ಅಂಬೇಡ್ಕರ ವಿಶ್ಲೇಷಿಸಿದ್ದರು ಎಂದು ಚಂದ್ರಬಾನು ಪ್ರಸಾದ ಹೇಳುತ್ತಾರೆ. ಕಡೆಗೆ ಚಂದ್ರಭಾನು ಪ್ರಸಾದರು ಹೇಳುವುದು ಭಾರತದ ಸರ್ಕಾರ ದಲಿತೇತರರನ್ನು ದಲಿತರೊಂದಿಗೆ ಸಹ ಭೋಜನ ಮಾಡುವಂತೆ ಎಂದೂ ಒತ್ತಾಯ ಮಾಡುವುದಿಲ್ಲ, ಆದರೆ ಮುಕ್ತ ಮಾರುಕಟ್ಟೆ ಈ ಸಹಭೋಜನಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ದಲಿತರು ಹಾಗು ಸವರ್ಣೀಯರನ್ನು ಒಂದೇ ಊಟದ ಟೇಬಲಗೆ ತರುವಂತಹ ಶಕ್ತಿಯನ್ನು ಮುಕ್ತ ಮಾರುಕಟ್ಟೆಗೆ ಇದೆ.

2049ರ ವೇಳೆಗೆ ಭಾರತ ತನ್ನ ಸಂವಿಧಾನತ್ಮಕತೆಯ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ದಲಿತರು ಅಂಬೇಡ್ಕರ ರೂಪಿಸಿದ ಸಂವಿಧಾನ, ಪ್ರಜಾಸತ್ತೆ ಮತ್ತು ಮುಕ್ತ ಮಾರುಕಟ್ಟೆ ಇವು ತಮ್ಮ ಸಮುದಾಯಕ್ಕೆ ಆಶ್ಚರ್ಯಕರ ಅಭಿವೃದ್ಧಿಯನ್ನು ತಂದಿವೆ ಎಂದು ಸಾಬೀತುಪಡಿಸಬೇಕು. ಆ ದಿಸೆಯಲ್ಲಿ ದಲಿತರು ಮೀಸಲಾತಿ, ರೇಷನ ಕಾರ್ಡ್, ಸ್ಕಾಲರಶಿಪಗಳಿಂದ ಹೊರಬರಬೇಕು. ಎಲ್ಲಾ ದಲಿತರು ಒಂದು ಹಾಗೂ ಎರಡನೇ ದರ್ಜೆ ಅಧಿಕಾರಿಗಳು, ಡಾಕ್ಟರುಗಳೂ, ಇಂಜಿನಿಯರಗಳೂ, ಬ್ಯಾಂಕರಗಳೂ, ಸಂಸತ ಸದಸ್ಯರೂ, ವಿಧಾನ ಮಂಡಳಿ ಸದಸ್ಯರೂ ತಮ್ಮ ಮಕ್ಕಳು ಮೀಸಲಾತಿ ಉಪಯೋಗಿಸದಂತೆ ನೋಡಿಕೊಳ್ಳಬೇಕು. ಇದು ಮೀಸಲಾತಿ ಸ್ವತಂತ್ರಗೊಳಿಸುತ್ತದೆ ಎಂಬುದನ್ನು ಸಾಬೀತುಗೊಳಿಸುತ್ತದೆ. ಇದು ಮೀಸಲಾತಿ ವಿರೋಧಿಗಳನ್ನು ಬಾಯಿ ಮುಚ್ಚಿಸುತ್ತದೆ. ( ಆಧಾರ: ದಲಿತ ಡೈರಿ: ಸಂವಾದ ಮಾಸ ಪತ್ರಿಕೆ ).

ಆದರೆ ಈ ಚಂದ್ರಬಾನು ಪ್ರಸಾದರ ಈ ವಿಶಾಲ ಮನೋಭಾವದ, ದಲಿತರ ಆಧುನೀಕರಣದ ಚಲನಶೀಲತೆಯನ್ನು ಎಡಪಂಥೀಯ ಚಿಂತಕರು ತೀವ್ರವಾಗಿ ವಿರೋಧಿಸುತ್ತಾರೆ. ಇವರ ವಿರೋಧಕ್ಕೆ ಮೂಲಭೂತ ಕಾರಣಗಳು ಹಲವು. ಮೊದಲನೆಯದಾಗಿ ಈ ಜಾಗತೀಕರಣದ, ನವವಸಾಹತುಶಾಹಿಯ ಜಗತ್ತಿನಲ್ಲಿ ದಲಿತರು ಇದರೊಂದಿಗೆ ಹೆಜ್ಜೆ ಹಾಕಿದರೆ ಈ ಪೆಡಂಭೂತದ ಹರಿಕಾರರು ಕಾಲಕ್ರಮೇಣ ದಲಿತರನ್ನು ಬಳಸಿಕೊಂಡು ಉಂಡನಂತರ ಬಾಳೆ ಎಲೆಯನ್ನು ಬಿಸಾಡುವಂತೆ ಬಿಸಾಡುತ್ತಾರೆ ಎನ್ನುವ ಆತಂಕ. ಸಾವಿರಾರು ವರ್ಷಗಳಿಂದ ಅಸಮಾನತೆಯನ್ನು, ಅಸ್ಪೃಶ್ಯತೆಯನ್ನು ಪ್ರತಿಪಾದಿಸಿದ ಭಾರತದ ಸಮಾಜ ಸಲೀಸಾಗಿ ದಲಿತರು ತಮ್ಮ ಸಮನಾಗಿ ಆಧುನಿಕರಾಗಿ ಬೆಳೆಯುವುದನ್ನು ಅನುಮೋದಿಸುವುದೇ ಇಲ್ಲ ಆಗ ದಲಿತರು ಸಂಪೂರ್ಣವಾಗಿ ಅತಂತ್ರರಾಗುತ್ತಾರೆ ಎನ್ನುವ ಕಳಕಳಿ.ಇವರ ಈ ಆತಂಕ ನಿಜಕ್ಕೂ ಸಹಜವಾದದುದೇ. ಆದರೆ ಆದರೆ ಸಂವಿಧಾನವನ್ನು ಗೌರವಿಸುವ ನಮ್ಮ ಬುದ್ಧಿಜೀವಿಗಳಿಗೆ ಅತ್ಯಂತ ಮಗ್ಧ ಹಾಗೂ ಕೆಲವು ಸರಳ ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಳ್ಳಲು ನಿರಾಕರಿಸುತ್ತಾರೆ. ಅತ್ಯಂತ ಮುಖ್ಯ ಪ್ರಶ್ನೆ 90ರ ದಶಕದ ನಂತರದ ಭಾರತದಲ್ಲಿ, ಸಂಪೂರ್ಣ ಜಾಗತೀಕರಣ ಹಾಗೂ ವಸಾಹುತೀಕರಣಗೊಂಡ ಭಾರತದಲ್ಲಿ ಸರ್ಕಾರೀ ನೇಮಕಾತಿಗಳು ಕುಸಿಯುತ್ತಾ ಕ್ರಮೇಣವಾಗಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ದಲಿತರು ಎಲ್ಲಿ ನಿಲ್ಲುತ್ತಾರೆ ಹಾಗೂ ಇವರ ಪ್ರಕಾರ ಎಲ್ಲಿ ನಿಲ್ಲಬೇಕು ?

ಖಾಸಗೀ ಕ್ಷೇತ್ರಗಳಲ್ಲಿ ನಮಗೂ ಮೀಸಲಾತಿಯನ್ನು ಕೊಡಿ ಎಂದು ನಿರಂತರ, ದಣಿವಾಗುವ ತನಕ ಹೋರಾಟ ಮಾಡುತ್ತಿರಬೇಕೇ ? ಇದಕ್ಕೆ ಯಾರು ಭೌತಿಕವಾಗಿ ಜೊತೆಗೂಡುತ್ತಾರೆ?  ಕೇವಲ ಸೆಮಿನಾರಗಳಲ್ಲಿ ಖಾಸಗೀ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪ್ರತಿಪಾದಿಸುವ ಬುದ್ಧಿಜೀವಿಗಳು ಇದರ ಪರವಾಗಿ ಆಕ್ಟಿವಿಸಂನಲ್ಲಿ ದಲಿತ ಸಂಘಟನೆಗಳೊಂದಿಗೆ ಬೀದಿಗಳಲ್ಲಿ ಭಾಗವಹಿಸುವುದರ ಸಾಧ್ಯತೆಗಳು ಈ ಕಾಲಘಟ್ಟದಲ್ಲಿ ಸಂಪೂರ್ಣ ಕಡಿಮೆ. ಅಲ್ಲದೇ ಆಕ್ಟಿವಿಸಂ ಸಹ ಹೆಚ್ಚೂ ಕಡಿಮೆ ಕ್ಷೀಣಿಸಿರುವ ಇಂದಿನ ದಿನಗಳಲ್ಲಿ, ಇಂದು ಇಂಡಿಯಾ ದೇಶ ಸಂಪೂರ್ಣವಾಗಿ ಜಾಗತಿಕರಣಗೊಂಡು ಮೇಲು ಹಾಗೂ ಮಧ್ಯಮ ಜಾತಿಗಳು ಮತ್ತು ಮೇಲ್ವರ್ಗಗಳು ಮಾತ್ರ ಅದರ ಸಂಪೂರ್ಣ ಲಾಭವನ್ನು ಹೊಡೆದುಕೊಂಡರೆ ತಳಸಮುದಾಯಗಳು ಮತ್ತು ಆದಿವಾಸಿಗಳು ಬೀದಿಗೆ ಬಿದ್ದು ಮತ್ತೆ ಮತ್ತೆ ತಮ್ಮ ಹಕ್ಕುಗಳಿಗಾಗಿ ಸರ್ಕಾರದ ಕಡೆಗೆ, ಚಳುವಳಿಗಳ ಕಡೆಗೆ ಅಸಹಾಯಕತೆಯ, ದೈನ್ಯತೆಯ ನೋಟ ಬೀರಬೇಕಾಗಿ ಬಂದಿರುವ ದುಸ್ಥಿತಿಯಲ್ಲಿ ದಲಿತರು ಇವೆಲ್ಲವನ್ನು ಮೀರಿ ಚಾಲ್ತಿಯಲ್ಲಿರುವ ಜಾಗತೀಕರಣದ ನಡೆಗಳೊಂದಿಗೆ ಜೊತೆಜೊತೆಯಾಗಿ ಹೆಜ್ಜೆ ಹಾಕಿ ಈಗಾಗಲೇ ಅದು ತೆರೆದು ತೋರಿಸಿದ ಹೆಬ್ಬಾಗಿಲುಗಳ ಮೂಲಕ ತಾವೂ ಅದರೊಳಗಿನ ಭಾಗವಾಗುವುದು ಆತ್ಮಾಭಿಮಾನದ ಬದುಕಲ್ಲವೇ?  ಇದು ವಿವೇಕದ ಮಾತಲ್ಲವೇ? ? ಇದಕ್ಕೆ ಬುದ್ಧಿಜೀವಿಗಳು ಈ ರೀತಿಯಾಗಿ ದಲಿತರು ಬಂಡವಾಳಶಾಹಿಗಳಾಗುವುದೆಂದರೆ ತಮ್ಮ ದಲಿತ ಸಂಸ್ಕೃತಿಯನ್ನು ನಾಶಪಡಿಸಿಕೊಂಡಂತೆಯೇ ಸರಿ ಹಾಗೂ ಇದು ದಲಿತ ಪರಂಪರೆಗೆ ವಿರೋಧವಾದದ್ದು ಎಂದು ಎಚ್ಚರಿಸುತ್ತಾರೆ.

ಹಾಗಿದ್ದರೆ ಯಾವುದು ದಲಿತ ಪರಂಪರೆ ? ಮನುವಾದವೇ ? ( ದಲಿತರು ಆಸ್ತಿಯನ್ನು ಹೊಂದುವಂತಿಲ್ಲ) ವರ್ಣಾಶ್ರಮವೇ ? ( ದಲಿತರು ಶಿಕ್ಷಣ ಹಾಗೂ ಮೇಲುಸ್ಥರದಲ್ಲಿ ಬದುಕಲು ಅರ್ಹರಲ್ಲ) ಅಥವ ಮಧ್ಯಮ ಜಾತಿಗಳಿಂದ ದೈಹಿಕವಾಗಿ ನಿರಂತರವಾಗಿ ಹಲ್ಲೆಗೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವ ಗ್ರಾಮ ಪರಂಪರೆಯೇ ? ಅಥವಾ ಚಮ್ಮಾರ ಪರಂಪರೆಯೇ, ಸತ್ತ ದನವನ್ನು ಎತ್ತುವ ಪರಂಪರೆಯೇ, ಜೀತದ ಪರಂಪರೆಯೇ, ಮಲ ಹೊರುವ ಪರಂಪರೆಯೇ? ನಾವೆಲ್ಲ ಯಾವುದು ಅವೈದಿಕ ಪರಂಪರೆ, ಯಾವುದನ್ನು ದಲಿತರು ಸಂಸ್ಕೃತಿಯೆಂದು ಮುನ್ನಡೆಸಿಕೊಂಡು ಹೋಗಬೇಕೆಂದು ನಮ್ಮ ಬುದ್ಧಿಜೀವಿಗಳಿಗೆ ಇನ್ನೂ ಸ್ಪಷ್ಟತೆಯೇ ಇಲ್ಲ. ಏಕೆಂದರೆ ಉದಾಹರಣೆಗೆ ದಲಿತರ ನಿಜದ ಪರಂಪರೆಯಾದ ಮುಂಟೇಸ್ವಾಮಿಯ ಸಂಸ್ಕೃತಿಯ ಬಗೆಗೆ ಇದುವರೆಗೂ ದಲಿತರೇ ಮಾತಾನಾಡಿದ್ದು ಮತ್ತು ಚಿಂತಿಸಿದ್ದು. ದಲಿತೇತರ ಚಿಂತಕರು ಮುಂಟೇಸ್ವಾಮಿ ಪರಂಪರೆಯನ್ನು ಎತ್ತಿಕೊಂಡು ಚಿಂತಿಸಿದ್ದಾಗಲಿ, ಸಂಶೋದಿಸಿದ್ದಾಗಲಿ ಉದಾಹರಣೆಗಳಿಲ್ಲ. ಹೀಗಿದ್ದ ಮೇಲೆ ಹೇಗೆ ಈ ಬುದ್ದಿಜೀವಿಗಳನ್ನು ನೆಚ್ಚಿಕೊಂಡು ದಲಿತರು ಮತ್ತು ಆದಿವಾಸಿಗಳು ಪರಂಪರೆಯ ರಕ್ಷಣೆಗೆ ಹೋರಾಡಬೇಕು ?

ನನ್ನ ಪ್ರಕಾರ ನಮ್ಮ ಬುದ್ಧಿಜೀವಿಗಳಿಗೆ ಶ್ರಮ ಪರಂಪರೆಯ ಬಗೆಗೆ ಅಪಾರ ಅಜ್ನಾನವಿದೆ. ಉದಾಹರಣೆಗೆ ಇಂದಿನ ಉದ್ಯಮಗಳಲ್ಲಿ ಇಂಜಿನಿಯರಗಳು ಹಾಗೂ ಗುಮಾಸ್ತರು ಸವರ್ಣೀಯರಾದರೂ ಕೆಳಹಂತಗಳಲ್ಲಿ ಅಂದರೆ ವರ್ಕ್ ಶಾಪಗಳಲ್ಲಿ, ಯಂತ್ರಗಳ ಮೇಲೆ ಕೆಲಸ ಮಾಡಲು ದಲಿತ, ಆದಿವಾಸಿಗಳೇ ಬೇಕು. ಈ ಕೆಳ ಹಂತದಿಂದ ಮೇಲಿನ ಹಂತವಾದ ಇಂಜಿನಿಯರಗಳು ಹಾಗೂ ಗುಮಾಸ್ರರು ಹಾಗೂ ಮುಂದೊಂದು ದಿನ ಮಾಲೀಕರೂ ಆಗುವ ಪ್ರಕ್ರಿಯೆಯೇ ಇಂದಿನ ಖಾಸಗಿಕರಣದ ದಿನಗಳಲ್ಲಿ ಬಂಡವಾಳಶಾಹಿಗಳೊಂದಿಗೆ ಜೊತೆಜೊತೆಯಾಗಿ ನಡೆಯುವುದು ಎಂದರ್ಥ. ಇದು ಶ್ರೇಣೀಕೃತ ಸಮಾಜದಲ್ಲಿ ದಲಿತರು ಮೇಲಿನ ಮೆಟ್ಟಿಲುಗಳನ್ನೇರುವುದಲ್ಲದೆ ಮತ್ತಿನ್ನೇನು? ಇದಕ್ಕೇಕೆ ಬುದ್ಧಿಜೀವಿಗಳು ತಗಾದೆ ಎತ್ತುತ್ತಾರೆ? ಕಠಿಣವಾಗಿ ಹೇಳಬೇಕೆಂದರೆ ಒಂದುವೇಳೆ ದಲಿತರು ಈ ರೀತಿಯಾಗಿ ಮೇಲೇರುತ್ತಾ ಮೇಲುಸ್ಥರವನ್ನು ತಲುಪುತಿದ್ದರೆ ಮುಂದಿನ ವರ್ಷಗಳಲ್ಲಿ ತಮ್ಮ ಸೆಮಿನಾರಗಳ ಭೂಗತಲೋಕ್ಕೆ ಖಠಿಚಿಛಿಜ ಸಿಗುವದು ಕಷ್ಟವೆಂದೇನಾದರೂ ಚಿಂತೆಯೇ? ಇದನ್ನು ವಿಸ್ತೃತವಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಬಡತನದಲ್ಲಿ ಸೂಚ್ಯಾಂಕದಲ್ಲಿ, ದೌರ್ಜನ್ಯಕ್ಕೆ ಒಳಗಾದವರ ಸೂಚ್ಯಾಂಕದಲ್ಲಿ, ಅತ್ಯಾಚಾರಕ್ಕೆ ಒಳಗಾದವರ ಸೂಚ್ಯಾಂಕದಲ್ಲಿ ಇಂದಿಗೂ ದಲಿತ/ಆದಿವಾಸಿ ಜನತೆ ಕಂಡುಬರುತ್ತಾರೆ.ಇದಕ್ಕೆ ಬಿಡುಗಡೆಗೆ ಈ ದಲಿತ ಆರ್ಥಿಕ ಮಾರ್ಗವೂ ಸಹ ಬಿಡುಗಡೆಗೆ ದಾರಿ. ಇಷ್ಟೆಲ್ಲ ಹೇಳಿದ ನಂತರವೂ ನಾವೆಲ್ಲ ಚಂದ್ರಬಾನು ಪ್ರಸಾದರ ಚಿಂತನೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕೆಂದೇನಿಲ್ಲ. ಅನುಮೋದಿಸುವುದೂ ಕಷ್ಟ. ಆದರೆ ಚರ್ಚಿಸಲು ಯಾಕೆ ಹಿಂದೇಟು. ನಮ್ಮ ಬುದ್ಧಿಜೀವಿಗಳ ಈ ಅಸ್ಪೃಶ್ಯತೆ ಅರ್ಥವಾಗುತ್ತಿಲ್ಲ.

ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ?


– ಪರಶುರಾಮ ಕಲಾಲ್  


 

ಪತ್ರಿಕೆಗಳ ವಿಶ್ವಾಸಾರ್ಹತೆಯು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾವ ಪತ್ರಿಕೆಯನ್ನು ವಿಶ್ವಾಸಾರ್ಹ ಎನ್ನುವುದು? ಅತ್ಯಂತ ಜನಪ್ರಿಯ ದಿನಪತ್ರಿಕೆ ಎಂದು ಹಾಕಿಕೊಳ್ಳುತ್ತಿದ್ದ ಪ್ರಜಾವಾಣಿ, ವಿಜಯ ಕರ್ನಾಟಕ ಬಂದ ಮೇಲೆ ಅದನ್ನು ತೆಗೆದು ಹಾಕಿ ಆ ಜಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಎಂದು ಹಾಕಿಕೊಂಡಿತು.

ಪ್ರಜಾವಾಣಿಯನ್ನು ನೆನೆದರೆ ದುಃಖ, ವಿಷಾದ ಎರಡೂ ಆಗುತ್ತದೆ. ಕೆ.ಎನ್.ಹರಿಕುಮಾರ್ ಇದ್ದಾಗ ಪ್ರಜಾವಾಣಿ ಹೇಗಿತ್ತು? ದಲಿತರ, ಹಿಂದುಳಿದ ವರ್ಗಗಳ ಪಾಲಿಗೆ ಎಲ್ಲಾ ಬಾಗಿಲು ತೆರೆದು ಪತ್ರಿಕೋದ್ಯಮದಲ್ಲಿ ಅವಕಾಶ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹರಿಕುಮಾರ್ ಅವರಿಗಿದ್ದ ಬದ್ಧತೆ, ದೂರದೃಷ್ಠಿ, ಸಾಮಾಜಿಕ ನ್ಯಾಯದ ಕಲ್ಪನೆ ಅನುಕರಣೀಯವಾಗಿತ್ತು. ಇದು ಹರಿಕುಮಾರ್‌ರ ನಂತರದ ದಿನಗಳಲ್ಲಿ ಪ್ರಜಾವಾಣಿಯಲ್ಲಿ ಕಂಡು ಬರಲಿಲ್ಲ. ಸಂಪಾದಕೀಯ ಹೊಣೆ ಹೊತ್ತವರು ಅದನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಇದು ನಮ್ಮ ಕೆಲಸ ಅಲ್ಲ ಎಂದುಕೊಂಡರು. ಹೀಗಾಗಿ ಪತ್ರಿಕೆ ಹೊಣೆ ಹೊತ್ತ ಸಂಪಾದಕರು ಮಾಲೀಕರ ಸಂಪ್ರೀತಿ ಗಳಿಸುವ ಕೆಲಸ ನಡೆಸಿದರು. ಈ ಲೋಪವೇ ಪ್ರಜಾವಾಣಿಯ ಇವತ್ತು ಈ ಸ್ಥಿತಿ ಮುಟ್ಟಲು ಕಾರಣವಾಗಿದೆ.

ಹರಿಕುಮಾರ್ ನಂತರ ಬಂದ ಕೆ.ಎನ್. ತಿಲಕ್‌ಕುಮಾರ್, ಶಾಂತಕುಮಾರ್ ಅವರು ಹರಿಕುಮಾರರಷ್ಟು ಬುದ್ಧಿವಂತರಲ್ಲ. ಅವರು ತುಂಬಾ ಒಳ್ಳೆಯವರು. ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಸಂಪಾದಕೀಯ ಬಳಗ ತನ್ನ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾ ಬಂತು. ಇದರಿಂದಾಗಿಯೇ, ಅತ್ಯಂತ ಜನಪ್ರಿಯವಾಗಿದ್ದ ಪತ್ರಿಕೆಯೊಂದು ವಿಜಯ ಕರ್ನಾಟಕ ಬಂದ ಮೇಲೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ ಎಂದು ಕರೆದುಕೊಳ್ಳಬೇಕಾಯಿತು. ಈಗ ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ಜಯಂತಿಯಂದು ದೇವನೂರು ಮಹಾದೇವರ ಅತಿಥಿ ಸಂಪಾದಕತ್ವದಲ್ಲಿ ವಿಶೇಷ ಸಂಚಿಕೆ ರೂಪಿಸಿ ಸಾಂಸ್ಕೃತಿಕ ಲೋಕದವರಿಂದ ಭೇಷ್ ಅನ್ನಿಸಿಕೊಳ್ಳುತ್ತಿದೆ.

ಆದರೆ, ಇದೊಂದು ಸರ್ಕಸ್ ಎನ್ನುವುದು ಪ್ರಜಾವಾಣಿಯನ್ನು ಬಲ್ಲ ಎಲ್ಲರಿಗೂ ಗೊತ್ತು.

ಪ್ರಜಾವಾಣಿ ಮುಟ್ಟಿರುವ ದುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ಥಳೀಯವಾಗಿ ಎರಡು ಅಥವಾ ಕೆಲವು ಕಡೆ ಮೂರು ಇರುವ ಸ್ಥಳೀಯ ಫೇಜ್‌ಗಳತ್ತ ಒಮ್ಮೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಅಲ್ಲಿಯ ಭಾಷಾ ಶೈಲಿ, ಸುದ್ದಿಗಳ ಸಾರ ಎಲ್ಲವನ್ನೂ ಗಮನಿಸಿದರೆ ಪ್ರಜಾವಾಣಿಯ ಬಣ್ಣ ಬಯಲಾಗುತ್ತದೆ. ಪ್ರಜಾವಾಣಿಯಲ್ಲಿರುವ ಸ್ಥಾಪಿತ ಹಿತಾಸಕ್ತಿಗಳು ಇದನ್ನು ಮಾಲೀಕರಿಗೆ ಅನಿವಾರ್ಯ ಎಂದು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿವೆ. ಬರುತ್ತಿವೆ ಕೂಡಾ.

ಇಷ್ಟೆಲ್ಲದರ ನಡುವೆಯೂ ಪ್ರಜಾವಾಣಿ ರಾಜ್ಯಮಟ್ಟದಲ್ಲಿ ಇವತ್ತಿಗೂ ವಿಶ್ವಾಸಾರ್ಹ ಪತ್ರಿಕೆಯೇ. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ನಮ್ಮ ಆಯ್ಕೆ ಎನ್ನುವಂತಾಗಿದೆ.

ಪ್ರಜಾವಾಣಿಗೆ ಈಗಲೂ ಬದಲಾಗುವ ವಿಪುಲ ಅವಕಾಶಗಳಿವೆ. ಪ್ರಜಾವಾಣಿಯು ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದರೆ ಕರ್ನಾಟಕದಲ್ಲಿ ಅದು ಮತ್ತೇ ನಂಬರ್ ವನ್ ಆಗಲಿದೆ. ಆದರೆ ಇದಕ್ಕಾಗಿ ಕೆ.ಎನ್. ಶಾಂತಕುಮಾರ್ ತಮ್ಮ ಸುತ್ತಮುತ್ತಲು ಇರುವ ಬಹುಪರಾಕ್ ಜನರಿಂದ ಹೊರ ಬರಬೇಕಿದೆ. ಅವರು ಪ್ರಜಾವಾಣಿಯ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಸಹಜವಾಗಿ ಯೋಚಿಸಿದರೆ ಸಾಕು, ಸಾಕಷ್ಟು ಬದಲಾವಣೆಗಳು ಘಟಿಸುತ್ತವೆ. ಕರ್ನಾಟಕದ ಇವತ್ತಿನ ಪರಿಸ್ಥಿತಿಯಲ್ಲಿ ಪ್ರಜಾವಾಣಿಯು ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದು ವಿಶ್ವಾಸಾರ್ಹತೆ ಎನ್ನುವುದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಮತ್ತು ಅದಕ್ಕಾಗಿ ಸರ್ಕಸ್ ಮಾಡಬೇಕಿಲ್ಲ. ಅದು ತಾನು ತಾನಾಗಿಯೆ ರೂಪಗೊಳ್ಳಬೇಕು.

ಪ್ರಜಾವಾಣಿಯ ಜೊತೆ ಗುರುತಿಸಿಕೊಂಡೆ ಬೆಳೆದಿರುವ ನಮ್ಮಂತವರ ಹಾರೈಕೆ ಇದು. ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ ಎಂಬುದೇ ಇವತ್ತಿನ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ.

ಸಚಿವ ಮುರುಗೇಶ್ ನಿರಾಣಿ ಮತ್ತು ಆಲಂ ಪಾಷ

– ಬಿ.ಎಸ್. ಕುಸುಮ

ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

“ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರ ವಿರುದ್ದ ಭೂಹಗರಣ (ಡಿ-ನೋಟಿಫಿಕೇಷನ್) ಹಾಗೂ ಗಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಸುಮಾರು 16 ಮೊಕದ್ದಮೆಗಳು ದಾಖಲಾಗಿದ್ದವು. ಅದೇ ಸಮಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವುಂಟುಮಾಡಿದ್ದಾರೆ, ಇಬ್ಬರು ಆರೋಪಿಗಳ ಮೇಲೆ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು,” ಎಂದು “ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್”ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉದ್ಯಮಿ ಆಲಂ ಪಾಷಾ ಲೋಕಾಯುಕ್ತ ನ್ಯಾಯಾಲಯದಲ್ಲಿ 21/10/2011 ರಂದು ಖಾಸಗಿ ದೂರನ್ನು ದಾಖಲಿಸಿದ್ದರು.

2010 ರಲ್ಲಿ ಆರಂಭಗೊಂಡ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ (GIM -Global Investors meet)ದಲ್ಲಿ  ಉದ್ಯಮಿ ಆಲಂ ಪಾಷ ಸಹಾ ಭಾಗವಹಿಸಿದ್ದರು.  ಅರಮನೆ ಮೈದಾನದಲ್ಲಿ ಜೂನ್ 3 ಮತ್ತು 4 ರಂದು ನಡೆದ ಸಮಾವೇಶದಲ್ಲಿ ಪಾಷ ತಮ್ಮ ಯೋಜನೆಯನ್ನು ಸರ್ಕಾರದ ಮುಂದೆ ಇಟ್ಟಿದರು. ಸರ್ಕಾರ ಜಮೀನು ಮಂಜೂರು ಮಾಡುವುದಾಗಿ ಒಂಪ್ಪದ ಮಾಡಿಕೊಂಡಿತ್ತು. ಜಿಮ್ ಹೆಸರಿನಲ್ಲಿ  2010 ರಂದು ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇವನಹಳ್ಳಿ ಅಂತಾರಾಷ್ಟೀಯ ವಿಮಾನ ನಿಲ್ಡಾಣದ ಬಳಿ ವಿಶೇಷ ಆರ್ಥಿಕ ವಲಯ (SEZ) ಸ್ಥಾಪನೆಗೆ 6000 ಎಕರೆ ಭೂಸ್ವಾಧೀನ ಮಾಡಿಕೊಂಡು ಬಂಡವಾಳ ಹೂಡಿಕೆಗೆ ರಾಷ್ಟೀಯ ಮತ್ತು ಬಹು ರಾಷ್ಟೀಯ ಕಂಪನಿಗಳಿಗೆ ಇಲ್ಲಿ ಜಮೀನು ನೀಡಲಾಗಿದೆ. ಆದರೆ, ಈ ಬಂಡವಾಳ ಹೂಡಿಕೆಯಲ್ಲಿ ಬಹಳಷ್ಟು ಕಂಪನಿಗಳು ಮೋಸಹೋಗಿವೆ. ಅವುಗಳಲ್ಲಿ  “ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್” ಕೂಡ ಸೇರಿದೆ ಎನ್ನುವುದು ಆಲಂ ಪಾಷ ಅವರ ಪ್ರಕರಣದ ಹಿನ್ನೆಲೆ.

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಷ ಕಂಪನಿಗೆ ಐಟಿ ಪಾರ್ಕ್, ಏರೊಸ್ಪೇಸ್ ಪಾರ್ಕ್ ಮತ್ತು ಹಾರ್ಡ್‌ವೇರ್ ಪಾರ್ಕ್‌ನಲ್ಲಿ 26 ಎಕರೆ ಜಮೀನು ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಮನೆಯನ್ನು ನಿರ್ಮಿಸುವ ಯೋಜನೆಯನ್ನು ಆಲಂ ಪಾಷ ರೂಪಿಸಿದ್ದರು. ಯೋಜನೆಯನ್ನು ಜಾರಿಗೆ ತರಲು ವಿದೇಶಿ ಕಂಪನಿಗಳ ಜೊತೆ ಒಂಪ್ಪದವನ್ನು ಸಹಾ ಮಾಡಿಕೊಂಡಿದ್ದರು. ಇದಕ್ಕೆ 2010 ರಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸರ್ಕಾರದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿತ್ತು. ಅದರಂತೆ ಪಾಷ ಜಿಓ ನಂ ಸಿಐ-365-2010 ಅಧಿಸೂಚನೆಯಂತೆ 26 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿಗೆ ಅರ್ಜಿಯನ್ನು ಸಲ್ಲಿಸಿದರು. ಕೆಐಎಡಿಬಿ ಜಮೀನನ್ನು ಪಾಷರವರಿಗೆ ಹಸ್ತಾಂತರಿಸಬೇಕು ಎನ್ನುವಷ್ಟರಲ್ಲಿ, “ಸರ್ಕಾರದ ಜೊತೆಗಿನ ಒಪ್ಪಂದದಂತೆ ಯೋಜನೆಯನ್ನು ಮುಂದುವರಿಸುವುದು ಇಷ್ಟವಿಲ್ಲ ಎಂದು ತಾವು ಪತ್ರ ಬರೆದಿರುವುದರಿಂದ ಜಮೀನನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ” ಎಂದು ಕೆಐಎಡಿಬಿ ಕೊಟ್ಟ ಉತ್ತರದಿಂದ ಪಾಷ ಗೊಂದಲಕ್ಕೆ ಒಳಗಾದರು.

ನಾನು ಸರ್ಕಾರಕ್ಕೆ ಯೋಜನೆಗೆ ಸಂಬಂಧ ಪಟ್ಟಂತೆ ಯಾವ ಪತ್ರವನ್ನು ಬರೆದಿಲ್ಲ. ಹಾಗೂ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆ ರದ್ದುಪಡಿಸಿರುವುದರ ಬಗ್ಗೆ ಕೂಡ ನನಗೆ ಯಾವುದೇ ಮಾಹಿತಿ ಇಲ್ಲ. ಆದರೇ ಜಮೀನನ್ನು ನೀಡಲು ಸರ್ಕಾರ ಏಕೆ ವಿಳಂಬ ಮಾಡುತ್ತಿದೆ. ಎಂದು ಕಾರಣ ತಿಳಿಯದೆ. ಅನುಮಾನದಿಂದ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದರು. ಮಾಹಿತಿ ಪಡೆದ ನಂತರ ಪಾಷ ಗಾಬರಿಯಾದರು. ನಾನು ಯಾವ ಪತ್ರವನ್ನು ಕೆಐಎಡಿಬಿ ಬರೆದಿಲ್ಲ. ಆದರೇ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದ ನಮ್ಮ ಕಂಪನಿಯ ಲೆಟರ್‌ಹೆಡ್‌ನ್ನು ನಕಲಿ ಮಾಡಿ “ಯೋಜನೆ ಅನುಷ್ಟಾನಕ್ಕೆ ಆಸಕ್ತಿ ಇಲ್ಲ” ಎಂದು ಬರೆದುಕೊಂಡು,  ನನ್ನ ಸಹಿ ಮತ್ತು ಮೊಹರನ್ನು ಸ್ಕ್ಯಾನ್ ಮಾಡಿ,  2011ರ ಜನವರಿ 20 ರಂದು ನಾನು ಪತ್ರ ಬರೆದಿರುವುದಾಗಿ ಹೇಳಿ ನಕಲಿ ದಾಖಲೆಯನ್ನು ಸೃಷ್ಟಿಸಿ ಯೋಜನೆಯನ್ನು ಹಿಂಪಡೆದಿದ್ದಾರೆ ಎಂದು ಪಾಷ ದೂರಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿರಾಣಿ ಅಕ್ರಮ ಡಿ-ನೋಟಿಫೈ ಮಾಡಿದ್ದಾರೆ ಎಂದು ಸಹಾ ಪಾಷ ದೂರಿನಲ್ಲಿ ದಾಖಲಿಸಿದ್ದಾರೆ. ಅದಕ್ಕೆ ಸಂಬಂಧ ಪಟ್ಟಂತೆ ದಾಖಲೆಗಳನ್ನು ಒದಗಿಸಿದ್ದಾರೆ. ಸಚಿವರಾಗಿರುವ ನಿರಾಣಿ ಕೆಐಎಡಿಬಿ ಹಾಗೂ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಛೇರ್‌ಮೆನ್ ಆಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೈಗಾರಿಕಾ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಜಮೀನನ್ನು ಕಾನೂನು ಬಾಹಿರವಾಗಿ ಡಿ-ನೋಟಿಫೈ ಮಾಡಿದ್ದಾರೆ. ದೇವನಹಳ್ಳಿ ಅಂತಾರಾಷ್ಟೀಯ ವಿಮಾನ ನಿಲ್ಡಾಣದ ಸಮೀಪ ಪಾರ್ಕ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿದ್ದ 1000 ಎಕರೆ ಭೂಮಿಯನ್ನು ಅಭಿವೃದ್ದಿ ಪಡಿಸಿ ಮೂಲಭೂತ ಸೌಕರ್ಯ ಕಲ್ಲಿಸಿ 20 ಎಕರೆಯನ್ನು ಡಿ-ನೋಟಿಫೈ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 27 ಕೋಟಿ ನಷ್ಟವಾಗಿದೆ. ಹಾಗೂ ಡಾಬಸ್‌‌ಪೇಟೆ ಬಳಿ ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆ ಜಮೀನನ್ನು ಡಿ-ನೋಟಿಫೈ ಮಾಡಿದ್ದಾರೆ. ನೊಂದಣಿಯಾಗದ ಒಟ್ಟು ನಾಲ್ಕು ನಕಲಿ ಕಂಪನಿಗೆ ಸುಮಾರು 1100 ಎಕರೆ ಜಮೀನನ್ನು ಲಪಾಟಯಿಸಿದ್ದಾರೆ.

  • ಎಮ್.ಆರ್.ಎನ್ ಶುಗರ್ – 300 ಎಕರೆ
  • ಸಾಯಿ ಪ್ರಿಯ – 300 ಎಕರೆ
  • ವಿಜಯ ಸ್ಟೀಲ್ ಕಂಪನಿ
  • ಶಕ್ತಿ ಸ್ಟೀಲ್ ಕಂಪನಿ – (ಎರಡೂ ಸ್ಟೀಲ್ ಕಂಪನಿಗಳಿಗೆ ಒಟ್ಟು 500 ಎಕರೆ)

ಅಲ್ಲದೆ ಈ ಜಮೀನುಗಳನ್ನು ಖಾಸಗಿ ಬ್ಯಾಂಕಿನಲ್ಲಿ ಅಡವಿಟ್ಟು 500 ಕೋಟಿ ಹಾಗೂ ಅಪೆಕ್ಸ್ ಬ್ಯಾಂಕ್‌ನಲ್ಲಿ 66 ಕೋಟಿ ಸಾಲ ಪಡೆದು ವಂಚನೆ ಮಾಡಿದ್ದಾರೆ. ಮೂರೂ ಕೂಡ ಒಬ್ಬರ ಮಾಲೀಕತ್ವದಲ್ಲಿ ಇರುವುದಾಗಿ ಪಾಷ ಲೊಕಾಯುಕ್ತ ಸಂಸ್ಥೆಗೆ ಸೆಪ್ಟೆಂಬರ್ 5, 2011 ರಂದು ದಾಖಲೆಗಳ ಸಮೇತ ದೂರನ್ನು ಸಲ್ಲಿಸಿದ್ದರು.

ತಮಿಳುನಾಡಿನ ವಾಣಂಬಾಡಿಯವರಾದ ಪಾಷ ಬಿಕಾಂ ಪದವಿಧರರು. ತಂದೆ ಮತ್ತು ತಾಯಿ ಕೃಷಿಕರು. ಪಾಷ ಅವರ ತಾತ ಫಜಲ್ ಸಹೇಬ್ ಸ್ವಾತಂತ್ರ್ಯ ಹೋರಟಗಾರರು. ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ತರಬೇತಿ ಪಡೆಯಲು ಬೆಂಗಳೂರಿಗೆ ಬಂದವರು. ನಂತರ ಉದ್ಯಮಿಯಾಗಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನಿಟ್ಟು ಕೊಂಡು ದೂರು ಸಲ್ಲಿಸುವುದನ್ನು ಮೈಗೂಡಿಸಿಕೊಂಡರು. ಇದಕ್ಕೂ ಮೊದಲು ಪಾಷ ಕರ್ನಾಟಕದಲ್ಲಿರುವ 18 ಗುಟ್ಕಾ ತಯಾರಿಕೆ ಕಂಪನಿಗಳನ್ನು ರದ್ದು ಮಾಡುವಂತೆ ಸರ್ಕಾರದ ವಿರುದ್ದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟದಲ್ಲಿ ತೊಡಗಿದ್ದರು. ತಮಿಳುನಾಡಿನ ರೈತರ ಉತ್ಪನ್ನಗಳಿಗೆ ನೆರವಾಗುವ ಉದ್ದೇಶದಿಂದ “ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್” ಅನ್ನು ಹುಟ್ಟುಹಾಕಿದರು. ರೈತರ ಪರ ಮಾಡಿದ ಒಳ್ಳೆಯ ಕೆಲಸಕ್ಕಾಗಿ ತಮಿಳುನಾಡಿನ ಸರ್ಕಾರ ಹೊಸೂರು ಬಳಿ 30 ಎಕರೆ ಜಮೀನನ್ನು ನೀಡಿತು. ಪಾಷ ಆ ಜಮೀನಿನಲ್ಲಿ ರೈತರಿಗೆ ನೆರವಾಗುಂತೆ ಪಾರ್ಕ್ ‌ನಿರ್ಮಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಬೆಂಗಳೂರಿನ ಇಂದಿರಾನಗರದಲ್ಲಿ ಪಾಷ ಸ್ವೇಸ್ ಆಡಳಿತ ಕಚೇರಿ ಹೊಂದಿರುವ ಆಲಂ ಪಾಷ, ಕರ್ನಾಟಕದಲ್ಲಿ ಕೈಗೆತ್ತಿಕೊಂಡ ಎರಡನೇ ಯೋಜನೆ ಭೂವಿವಾದದಲ್ಲಿ ಸಿಲುಕಿದ ಹಿನ್ನೆಯಲ್ಲಿ ದಾಖಲೆಗಳನ್ನು ಸಂಗ್ರಹಿಸಿ ವಕೀಲರ ಸಹಾಯ ಇಲ್ಲದೆ ನೇರವಾಗಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದಾರೆ.

2010 ರಿಂದ ನಡೆಯುತ್ತಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಈ ವರ್ಷದ ವಾರ್ಷಿಕ ಸಮಾವೇಶವನ್ನು ಜೂನ್ 7 ಮತ್ತು 8 ರಂದು ಬೆಂಗಳೂರು ಅಂತರರಾಷ್ಟೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದಾರೆ. ಆದರೆ 2010ರ ಸಮಾವೇಶದಲ್ಲಿ ನಡೆದ ಅವ್ಯವಹಾರ ಮತ್ತು ಅಕ್ರಮಗಳ ವಿರುದ್ದ ಸಮರ ಸಾರಿರುವ ಪಾಷ ಅವರಿಗೆ ನ್ಯಾಯ ದೊರಕುವುದೇ ಎಂದು ಕಾದು ನೋಡಬೇಬೇಕಿದೆ.


ಮೇಲಿನ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ “ವರ್ತಮಾನ”ದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾದ ಲೇಖನ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…”ಕ್ಕೆ ಇಲ್ಲಿ ಕ್ಲಿಕ್ ಮಾಡಿ.

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-6)


– ಡಾ.ಎನ್. ಜಗದೀಶ್ ಕೊಪ್ಪ  


 

ಪ್ರಯೋಗ ಮತ್ತು ಸಿದ್ಧಾಂತ ಹಾಗೂ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ ಜೊತೆ ಜೊತೆಗೆ ಸ್ವಯಂ ವಿಮರ್ಶೆಯನ್ನು ಗುರಿಯಾಗಿಟ್ಟುಕೊಂಡು ರಚಿತವಾದ ನೂತನ ಪಕ್ಷವನ್ನು ಪಕ್ಷದ ಫೈರ್ ಬ್ರಾಂಡ್ ನಾಯಕನೆಂದೇ ಹೆಸರಾಗಿದ್ದ ಕನುಸನ್ಯಾಲ್ ನೇತೃತ್ವದಲ್ಲಿ ಘೋಷಿಸಲಾಯಿತು. ಪಕ್ಷದ ಕಾರ್ಯಕರ್ತರ ಮೊದಲ ರ್‍ಯಾಲಿಯನ್ನು 1969 ರ ಮೇ ಒಂದನೇ ತಾರೀಖು ಕೊಲ್ಕತ್ತ ನಗರದಲ್ಲಿ ಆಯೋಜಿಸಲಾಗಿತ್ತು. ಮಾವೋತ್ಸೆ ತುಂಗನ ವಿಚಾರಧಾರೆಗಳಿಂದ ಪ್ರಣೀತವಾಗಿದ್ದ ನೂತನ ಕಮ್ಯೂನಿಷ್ಟ್ ಪಕ್ಷ, ಇನ್ನು ಮುಂದೆ ಭಾರತದಲ್ಲಿ ಹೊಸ ಸೂರ್ಯ ಮತ್ತು ಚಂದ್ರ ಉದಯಿಸಲಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿತ್ತು. ದುರಂತವೆಂದರೆ, ಪಕ್ಷದ ಮೊದಲ ರ್‍ಯಾಲಿ ಗಲಭೆಯಲ್ಲಿ ಆರಂಭಗೊಂಡು, ಹಿಂಸಾಚಾರದ ನಡುವೆ ಮುಕ್ತಾಯಗೊಂಡಿತು. ಪಕ್ಷದ ಕಾರ್ಯಕರ್ತರು ಮತ್ತು ಆಡಳಿತಾರೂಢ ಪಕ್ಷಗಳಾದ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಕಾರ್ಯಕರ್ತರು ರ್‍ಯಾಲಿಯ ಮೇಲೆ ಕಲ್ಲು ಇಟ್ಟಿಗೆ ಮತ್ತು ಪೆಟ್ರೊಲ್ ಬಾಂಬ್ ತೂರುವುದರ ಮೂಲಕ ಹೊಸ ಪಕ್ಷದ ರ್‍ಯಾಲಿಯನ್ನು ವಿಘ್ನಗೊಳಿಸಿದರು. ಗಲಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇವರಲ್ಲಿ ಐವತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾದವು.

ಹೀಗೆ ಹಿಂಸೆಯಲ್ಲಿ ಆರಂಭಗೊಂಡ ನೂತನ ಕಮ್ಯೂನಿಷ್ಟ್ ಪಕ್ಷದ ನಾಯಕರ ನಡುವೆಯೂ ಹಲವು ಬಗೆಯ ಭಿನ್ನಾಭಿಪ್ರಾಯಗಳು ಆರಂಭದಿಂದಲೂ ಇದ್ದವು. ಇವೆಲ್ಲವೂ ಈ ಸಂದರ್ಭದಲ್ಲಿ ಸ್ಪೋಟಗೊಂಡವು. ಹಲವು ಟ್ರೇಡ್ ಯೂನಿಯನ್ ಸಂಘಟನೆಗಳ ನಾಯಕನಾಗಿದ್ದ ಪರಿಮಳ್‌ದಾಸ್ ಗುಪ್ತಾರವರನ್ನು ಯಾವೊಂದು ಸಂದರ್ಭದಲ್ಲೂ ಪಕ್ಷ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಗೆರಿಲ್ಲಾ ಯುದ್ದ ತಂತ್ರಕ್ಕೆ ದಾಸ್ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದರು. ಚೆಗೇವಾರನ ಈ ಗೆರಿಲ್ಲಾ ಯುದ್ಧ ತಂತ್ರ ಎಲ್ಲಾ ರಾಷ್ಡ್ರಗಳಿಗೆ ಅನ್ವಯವಾಗುವುದಿಲ್ಲ ಎಂಬುದು ಗುಪ್ತಾರವರ ನಿಲುವಾಗಿತ್ತು.  ಭಾರತದಂತಹ ಸಂದರ್ಭದಲ್ಲಿ ಗುಡ್ಡಗಾಡು ಇರುವ ಪ್ರದೇಶಗಳನ್ನು ಹೊರತು ಪಡಿಸಿದರೆ, ಬೇರೆಲ್ಲೂ ಇದು ಯಶಸ್ವಿಯಾಗುವುದಿಲ್ಲ ಎಂಬುದು ಹಲವು ನಾಯಕರ ನಂಬಿಕೆಯಾಗಿತ್ತು.

ಕೊಲ್ಕತ್ತ ನಗರದಲ್ಲಿ ನಡೆದ ರ್‍ಯಾಲಿಯ ಅಧ್ಯಕ್ಷತೆವಹಿಸಿದ್ದ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಸಿತ್‌ಸೇನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಟ್ಟಿತು ಎಂದು ಆರೋಪಿಸಿದರು. ಹೀಗೆ ಹಲವು ಭಿನ್ನಾಭಿಪ್ರಾಯಗಳ ನಡುವೆ ತೀವ್ರಗಾಮಿ ಧೋರಣೆಗಳನ್ನು ಹೊಂದಿದ ನೂತನ ಪಕ್ಷ ಕೊನೆಗೂ ಅಸ್ತಿತ್ವ ತಾಳಿತು.

ಚಾರುಮುಜಂದಾರ್‌ನ ಬೆಂಕಿಯುಂಡೆಯಂತಹ ಮಾತುಗಳು ಪಕ್ಷಕ್ಕೆ ಹಲವಾರು ಬಿಸಿರಕ್ತದ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. 1971 ರ ವೇಳೆಗೆ ಈಶಾನ್ಯ ಭಾರತದ ರಾಜ್ಯಗಳು, ಗೋವಾ, ಪಾಂಡಿಚೇರಿ, ಅಂಡಮಾನ್ ನಿಕೋಬಾರ್, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ. ದೇಶದ ಬಹುತೇಕ ರಾಜ್ಯಗಳಲ್ಲಿ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ನೆಲೆಯೂರಿತು. ವರ್ಗ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಧನಧಾಹಿ ಶ್ರೀಮಂತರು ಮತ್ತು ಜಮೀನ್ದಾರರ ಬಿಸಿ ನೆತ್ತರಿನಲ್ಲಿ ಕೈ ಅದ್ದದೆ ಇರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತನಾಗಿ ಇರಲು ಅನರ್ಹ ಎಂಬ ಚಾರು ಮುಜಂದಾರನ ವಿವಾದಾತ್ಮಕ ಹೇಳಿಕೆ ಹಲವು ಆಕ್ಷಪೇಣೆಗಳ ನಡುವೆಯೂ ಕಾರ್ಯಕರ್ತರಿಗೆ ಸ್ಪೂರ್ತಿಯ ಮಾತಾಗಿ ಪರಿಣಮಿಸಿತು.

ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ  ಕೃಷಿಕರನ್ನು ಮತ್ತು ಕೂಲಿಗಾರರನ್ನು ಶೋಷಿಸಿಕೊಂಡು ಬಂದಿದ್ದ ಜಮೀನ್ದಾರರು, ಮಾವೋವಾದಿ ಕಮ್ಯೂನಿಷ್ಟರ ಹಿಂಸೆ ಮತ್ತು ಭಯಕ್ಕೆ ಹೆದರಿ ಇರುವ ಆಸ್ತಿಯನ್ನು ಬಿಟ್ಟು ನಗರಗಳಿಗೆ ಪಲಾಯನಗೈದರು. ಅವರ ಗೂಂಡಾಪಡೆ ಹೇಳಹೆಸರಿಲ್ಲದಂತೆ ನಾಶವಾಯಿತು. ಮಾವೋವಾದಿಗಳು ಶಾಖೆ ತೆರದ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ, ವರ್ಗವ್ಯವಸ್ಥೆ, ಇದ್ದಕ್ಕಿದ್ದಂತೆ ಕರಗತೊಡಗಿತು. ಶತಮಾನಗಳ ಕಾಲ ವ್ಯವಸ್ಥೆಯ ಕಪಿಮುಷ್ಟಿಯ ಕೈಯಲ್ಲಿ ನಲುಗಿ ಹೋಗಿದ್ದ ಬಡವರು, ಶ್ರಮಿಕರು, ನೆಮ್ಮದಿಯ ಬದುಕು ಕಟ್ಟಿಕೊಂಡು ಬದುಕಲು ಸಾಧ್ಯವಾಯಿತು. ಇಂತಹ ವಾತಾವರಣ ಪರೋಕ್ಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಾವೋವಾದಿಗಳ ಬಗ್ಗೆ  ರೈತರು, ಕೂಲಿಕಾರ್ಮಿಕರು, ಆದಿವಾಸಿಗಳು, ಅನುಕಂಪ. ಪ್ರೀತಿ ಹುಟ್ಟಲು ಕಾರಣವಾಯಿತು.

ಹಳ್ಳಿಗಳಲ್ಲಿ ಅಧಿಕ ಬಡ್ಡಿಗೆ ಹಣ ನೀಡಿ, ಬಡವರನ್ನು ಶೋಷಿಸುತ್ತಿದ್ದ ಲೇವಾದೇವಿಗಾರರು, ಪೊಲೀಸ್ ಮಾಹಿತಿದಾರರನ್ನು  ಹಿಡಿದು ಗಲ್ಲಿಗೇರಿಸುವ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಮಾವೋವಾದಿಗಳು ನಿರ್ಮಿಸಿದರು. ಘೋಷಿತ ಯದ್ಧದಲ್ಲಿ ಶಾಸ್ತಸ್ತ್ರಗಳು ಅತ್ಯಗತ್ಯ ಎಂಬ ಮಾವೋನ ಮಾತುಗಳನ್ನು ಅಕ್ಷರಶಃ ಪ್ರಯೋಗಕ್ಕೆ ಇಳಿಸಿದರು. ಅಲ್ಲದೆ, ಬಿಲ್ಲು, ಬಾಣ, ಭರ್ಜಿ ಮುಂತಾದ ಸಾಂಪ್ರದಾಯಿಕ ಆಯುಧಗಳನ್ನು ತೈಜಿಸಿ, ಬಂದೂಕುಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಭಾರತ ಸರ್ಕಾರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಇವರು ಹೊಸ ಸವಾಲೊಂದನ್ನು ಒಡ್ಡಿದರು.

ಚಾರು ಮುಜಂದಾರ್ ನೇತೃತ್ವದ ಹೋರಾಟವನ್ನು ಚೀನಾದ ಕಮ್ಯುನಿಷ್ಟ್ ಪಕ್ಷದ ಮುಖವಾಣಿ ಪತ್ರಿಕೆಯಾದ “ದ ಲಿಬರೇಷನ್” ಪತ್ರಿಕೆ ಮುಕ್ತ ಕಂಠದಿಂದ ಹೊಗಳುವುವುದರ ಮತ್ತಷ್ಟು ಹುರಿದುಂಬಿಸಿತು. ಚಾರು ಮುಜಂದಾರ್ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಗೆರಿಲ್ಲಾ ಯುದ್ಧತಂತ್ರಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಿದನು. ಭೂರಹಿತ ಬಡ ಗೇಣಿದಾರರು, ಕೃಷಿಕೂಲಿ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಸಂಘಟನೆಗೆ ಚಾರು ಮತ್ತು ಅವನ ಸಂಗಡಿಗರು ಮುಂದಾದರು.

ಭೂಮಾಲೀಕರ ದಬ್ಬಾಳಿಕೆ ಅತಿಯಾಗಿದ್ದ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ನಿರೀಕ್ಷೆ ಮೀರಿ ಒಲವು ವ್ಯಕ್ತವಾಯಿತು. ಇದಕ್ಕಾಗಿ ನಾಲ್ಕು ಅಂಶದ ಕಾರ್ಯಕ್ರಮವನ್ನು ರೂಪಿಸಲಾಯಿತು. ಅವುಗಳೆಂದರೆ.

  1. ಭೂಮಾಲೀಕರ ಒಡೆತನ ಮತ್ತು ದಬ್ಬಾಳಿಕೆ ಇರುವ ಪ್ರದೇಶಗಳನ್ನು ಮುಕ್ತಗೊಳಿಸಿ, ಅವುಗಳನ್ನು ಸಣ್ಣ ಹಿಡುವಳಿದಾರರ ಸುಪರ್ದಿಗೆವಹಿಸುವುದು.
  2. ಕೆಂಪು ಭಯೋತ್ಪಾದನೆ ಮೂಲಕ (ಹಿಂಸೆ) ಜಮೀನ್ದಾರರನ್ನು ಮಣಿಸಿ, ನೆಮ್ಮದಿಯ ವಾತಾವರಣ ಸೃಷ್ಟಿ ಮಾಡುವುದು.
  3. ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಚಳವಳಿಯ ನಾಯಕತ್ವವನ್ನು ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ನಾಯಕರಿಂದ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವರ್ಗಾಯಿಸುವುದು.
  4. ಜನಸಾಮಾನ್ಯನನ್ನು, ಜಮೀನ್ದಾರರು, ಬಡ್ಡಿ ವ್ಯಾಪಾರದ ಲೇವಾದೇವಿದಾರರು ಇವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಭಯದಿಂದ ಮುಕ್ತರಾಗಿ ಬದುಕುವಂತೆ ಪ್ರೇರೇಪಿಸುವುದು.

ಚಾರು ಮತ್ತು ಸಂಗಡಿಗರ ಈ ಕಾರ್ಯಚರಣೆ ಕೆಲವು ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತಾದರೂ, ಅದೊಂದು ಸಾಮಾಜಿಕ ಚಳವಳಿಯಾಗಿ ಎಲ್ಲ ವರ್ಗವನ್ನು ಒಳಗೊಳ್ಳುವಲ್ಲಿ ವಿಫಲವಾಯಿತು. ಒಂದು ವರ್ಷದ ನಂತರ ಸ್ವತಃ ಚಾರು ಮುಜಂದಾರ್ ಇದನ್ನು ಒಪ್ಪಿಕೊಂಡನು. ಮಾವೋತ್ಸೆ ತುಂಗನ ವಿಚಾರಗಳನ್ನು ಅನಕ್ಷರಸ್ತ ಕೂಲಿಕಾರ್ಮಿಕರಿಗೆ ಆದಿವಾಸಿಗಳಿಗೆ ತಲುಪಿಸುವಲ್ಲಿ ಪಕ್ಷ ಸೋತಿದೆ ಎಂದು ಸ್ವಷ್ಟೀಕರಣ ನೀಡಿದನು. 1970 ರ ಮೇ ತಿಂಗಳಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಸರ್ಕಾರದ ನೀತಿ ಹಾಗೂ ಧೋರಣೆಗಳನ್ನು ಖಂಡಿಸಿ, ಭಾರತವು ಗಳಿಸಿರುವುದು ನಾಚಿಕೆಗೇಡಿನ ಸ್ವಾತಂತ್ರ್ಯಎಂದು ಬಣ್ಣಿಸಿ. ಹೊಸ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಹೊಸದಾಗಿ ಕೆಲವು ರಾಜಕೀಯ ಗುರಿಗಳನ್ನು ಸೇರಿಸಲಾಯಿತು. ಇದಕ್ಕಾಗಿ ಪ್ರಜಾಸಮರ (peoples War) ಯುದ್ಧ ಘೋಷಿಸಲಾಯಿತು. ಪಕ್ಷದ ಈ ತೀರ್ಮಾನ ಹಲವು ನಾಯಕರಿಗೆ ಒಪ್ಪಿಗೆಯಾಗಲಿಲ್ಲ. ಇವರುಗಳನ್ನು ಹಲವು ಗೊಡ್ಡು ವಿಚಾರಗಳಿಗೆ ಜೋತುಬಿದ್ದ ಕೇಂದ್ರೀಕೃತ ವ್ಯಕ್ತಿಗಳು ಎಂದು ಟೀಕಿಸಿದ ಚಾರು ಮುಜಂದಾರ್, ಸಮಾಜದಲ್ಲಿ ತಾಂಡವವಾಡುತ್ತಿರುವ ವರ್ಗವ್ಯವಸ್ಥೆಯ ವಿರುದ್ಧ ಹೋರಾಟವನ್ನು ಎಲ್ಲಾ ನೆಲೆಗಳಿಗೆ ವಿಸ್ತರಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದ. ಅವನ ಸಂದೇಶ, ಮುಂದಿನ ದಿನಗಳಲ್ಲಿ  ಆಂಧ್ರ, ಶ್ರೀಕಾಕುಳಂ, ಪಶ್ಚಿಮ ಬಂಗಾಳದ, ದೇಬ್ರ ಮತ್ತು ಗೋಪಿಬಲ್ಲಬಪುರ ಜಿಲ್ಲೆ, ಬಿಹಾರದ ಮುರ್ಶರಾಯ್ ಜಿಲ್ಲೆ, ಉತ್ತರಪ್ರದೇಶದ ಲಕ್ಷ್ಮೀಪುರ ಜಿಲ್ಲೆಯ ಪುಲಿಯ ಎಂಬಲ್ಲಿ ಅಗ್ನಿಪರ್ವತದಂತೆ ಸ್ಪೋಟಗೊಂಡಿತು.

(ಮುಂದುವರೆಯುವುದು)