Monthly Archives: May 2012

ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ

– ಆನಂದ ಪ್ರಸಾದ್

ದಲಿತರು, ಹಿಂದುಳಿದವರಿಗೆ ಭಾರತದ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಕಡಿಮೆ ಅಥವಾ ಇಲ್ಲವೆಂದರೂ ಸರಿಯೇನೋ. ಬಹುತೇಕ ಮಾಧ್ಯಮಗಳು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಹಿಡಿತದಲ್ಲಿ ಇವೆ. ಹೀಗಾಗಿ ದಲಿತರ, ಹಿಂದುಳಿದವರ ಧ್ವನಿ ಮಾಧ್ಯಮ ಲೋಕದಲ್ಲಿ ಕೇಳಿಬರುವುದು ಕಡಿಮೆಯೇ. ಪುರೋಹಿತಶಾಹಿ ಮಾಧ್ಯಮಗಳನ್ನು ಸ್ಥಾಪಿಸಿ ನಡೆಸುವುದು ಕಡಿಮೆಯಾದರೂ ಬಂಡವಾಳಶಾಹಿಗಳು ಸ್ಥಾಪಿಸಿದ ಮಾಧ್ಯಮಗಳಲ್ಲಿ ಪುರೋಹಿತಶಾಹಿ ಮನಸ್ಸಿನ ವ್ಯಕ್ತಿಗಳು ಆಯಕಟ್ಟಿನ ನಿಯಂತ್ರಕ ಸ್ಥಾನವಾದ ಪ್ರಧಾನ ಸಂಪಾದಕ, ಸಂಪಾದಕ ಸ್ಥಾನದಲ್ಲಿ ಆಸೀನರಾಗಿರುವುದು ಭಾರತದಾದ್ಯಂತ ಕಂಡುಬರುವ ವಿದ್ಯಮಾನ. ಇದರಿಂದಾಗಿ ಭಾರತದ ಮಾಧ್ಯಮಗಳಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಲೇ ಇಲ್ಲ ಮತ್ತು ದೊರಕುವ ಸಾಧ್ಯತೆಯೂ ಇಲ್ಲ. ಭಾರತದಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಿದ್ದಿದ್ದರೆ ಭಾರತದ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.

ದಲಿತರು, ಹಿಂದುಳಿದವರಿಗೆ ಧ್ವನಿ ಸಿಗಬೇಕಾದರೆ ದಲಿತರು, ಹಿಂದುಳಿದರು ತಮ್ಮದೇ ಆದ ಮಾಧ್ಯಮಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ಜಂಟಿ ನಿಯಂತ್ರಣದಲ್ಲಿ ಇರುವ ಪ್ರಸಕ್ತ ಮಾಧ್ಯಮಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಧ್ವನಿ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ತಮ್ಮದೇ ಆದ ಪ್ರತ್ಯೇಕ ಟಿವಿ ವಾಹಿನಿಗಳು ಹಾಗೂ ಮುಖ್ಯವಾಹಿನಿಯ ಪತ್ರಿಕೆಗಳನ್ನು ಕಟ್ಟಿಕೊಳ್ಳುವುದು ಅಗತ್ಯ. ಇಂಥ ಪ್ರಯತ್ನಗಳಿಗೆ ದಲಿತ, ಹಿಂದುಳಿದ ವರ್ಗದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಮುಂದಾಗುವುದು ಅಗತ್ಯ.

ಇಂದು ದಲಿತ ಉದ್ಯಮಿಗಳು ತಮ್ಮದೇ ಆದ ’ದಲಿತ್ ಚೇಂಬರ್ ಆಫ್ ಇಂಡಸ್ಟ್ರಿ’ ಹಾಗೂ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ತಮ್ಮದೇ ಆದ ಹಣಕಾಸು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು ಇದೇ ರೀತಿ ದಲಿತ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳನ್ನೂ ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಹಾಗೂ ಪುರೋಹಿತಶಾಹಿ ಚಿಂತನೆಗಳಿಂದ ದಲಿತ, ಹಿಂದುಳಿದ ವರ್ಗಗಳನ್ನು ಬಿಡಿಸುವುದು ಈ ಮಾಧ್ಯಮಗಳ ಪ್ರಧಾನ ಗುರಿಯಾಗಿರಬೇಕು. ದಲಿತರು ಹೆಚ್ಚು ವೈಚಾರಿಕವಾದ ಮೂಲ ಬೌದ್ಧ ಧರ್ಮದೆಡೆಗೆ ಸಾಗುವಂತೆ ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಆ ಮಾಧ್ಯಮಗಳು ಮಾಡಬೇಕು. ಆಗ ಇಡೀ ಭಾರತದಲ್ಲಿ ವೈಚಾರಿಕ ಕ್ರಾಂತಿ ಸಾಧ್ಯವಾಗಬಹುದು.

ಮಾಯಾವತಿಯಂಥ ದಲಿತ ರಾಜಕಾರಣಿಗಳು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾದರೂ ದಲಿತರ ಹಾಗೂ ಹಿಂದುಳಿದವರಿಗೆ ಧ್ವನಿ ನೀಡುವ ಹಾಗೂ ಅವರಲ್ಲಿ ಜಾಗೃತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸಲು ನೆರವಾಗಬಲ್ಲಂಥ ರಾಷ್ಟ್ರ ಮಟ್ಟದ ಒಂದು ಟಿವಿ ವಾಹಿನಿ ಹಾಗೂ ಪತ್ರಿಕೆಯನ್ನು ಕಟ್ಟಲು ಸಾಧ್ಯವಿತ್ತು. ಇಂಥ ಒಂದು ರಚನಾತ್ಮಕ ಕೆಲಸ ಮಾಡುವ ಬದಲು ಮಾಯಾವತಿಯವರು ನಿರ್ಜೀವ ಕಲ್ಲು ಪ್ರತಿಮೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿರುವುದು ವ್ಯರ್ಥ. ಇದೇ ಕೋಟ್ಯಂತರ ರೂಪಾಯಿ ಹಣವನ್ನು ಒಂದು ದಲಿತ ಟಿವಿ ವಾಹಿನಿಯೋ, ಪತ್ರಿಕೆಯನ್ನೋ ಕಟ್ಟಲು ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು.

ದಲಿತ ರಾಜಕಾರಣಿಗಳಲ್ಲಿ ಚಿಂತನೆಯ ಕೊರತೆ ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ. ಹೀಗಾಗಿ ಅಧಿಕಾರ ದೊರೆತರೂ ಅದನ್ನು ಬಳಸಿ ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ದಲಿತ ರಾಜಕಾರಣಿಗಳು ಆದ್ಯತೆ ನೀಡದೆ ತಮ್ಮದೇ ಆದ ಪ್ರತಿಮೆಗಳ ಸ್ಥಾಪನೆ ಹಾಗೂ ಆಡಂಬರ, ಅಬ್ಬರದ ಜೀವನಶೈಲಿಗೆ ಮರುಳಾಗಿರುವುದು ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ದಲಿತರಲ್ಲಿ, ಹಿಂದುಳಿದವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ದಲಿತ ನಾಯಕರ ಪ್ರಧಾನ ಆದ್ಯತೆ ಆಗಿರಬೇಕಾಗಿತ್ತು. ಆದರೆ ಅಂಥ ಜಾಗೃತಿ ದಲಿತ ನಾಯಕರಲ್ಲಾಗಲಿ, ದಲಿತ ಉದ್ಯಮಿಗಳಲ್ಲಾಗಲಿ ಮೂಡಲೇ ಇಲ್ಲ. ದಲಿತರು ಮತ್ತು ಹಿಂದುಳಿದವರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವುದು ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಅಗತ್ಯವಾದ ಭೂಮಿಕೆ ಆಗಿದೆ. ಈ ಕೆಲಸವನ್ನು ಮಾಡಲು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು, ಉದ್ಯಮಿಗಳು ಪ್ರಧಾನ ಆದ್ಯತೆ ನೀಡಬೇಕಾದ ಅಗತ್ಯ ಇಂದು ಬಹಳಷ್ಟಿದೆ. ದಲಿತರು ಪುರೋಹಿತಶಾಹಿ ಚಿಂತನೆಗಳಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಮನೋಭಾವ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾದರೆ ಭಾರತವು ಪುರೋಹಿತಶಾಹಿ ಚಿಂತನೆಗಳ ಕಬಂಧಬಾಹುಗಳಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಸಾಧ್ಯವಿದೆ.

ಶ್ರಮ ಸಂಸ್ಕೃತಿ ಮತ್ತು ಆರ್ಥಿಕ ಸ್ಥಿತ್ಯಂತರಗಳು


-ಡಾ.ಎಸ್.ಬಿ. ಜೋಗುರ


 

ಜಗತ್ತಿನ ಮುಕ್ಕಾಲು ಭಾಗ ಜನಸಮೂಹ ಒಂದಿಲ್ಲಾ ಒಂದು ಬಗೆಯ ಅಸಂತುಷ್ಟಿ ಹಾಗೂ ತಲ್ಲಣಗಳ ಮಧ್ಯೆ ಸುತ್ತಿ ಸುಳಿಯುವಾಗ, ಶ್ರಮ ಅಥವಾ ಕೆಲಸ ಎನ್ನುವುದು ಅದ್ಯಾವ ಬಗೆಯ ಸ್ವರೂಪ ಮತ್ತು ಅರ್ಥವಂತಿಕೆಯನ್ನು ಉಳಿಸಿಕೊಂಡಿದೆ ಎನ್ನುವುದೇ ಒಂದು ಬಹು ದೊಡ್ಡ ಜಿಜ್ಞಾಸೆ. ಸಣ್ಣ ಮೀನೊಂದು ದೊಡ್ಡ ಮೀನಿನ ಬಾಯಿಗೆ ತುತ್ತಾಗುವ ಕ್ರಿಯೆ ಸ್ವಾಭಾವಿಕ ಎನ್ನುವ ಮಟ್ಟದಲ್ಲಿಯೇ ಮನುಷ್ಯನಿಂದ ಮನುಷ್ಯನ ಶೋಷಣೆಯೂ ಸ್ವೀಕೃತ ಎನ್ನುವ ಹಂತದಲ್ಲಿರುವ ನಮಗೆ ನಿಸರ್ಗದ ಒಟ್ಟು ವ್ಯಾಪಾರವನ್ನು ಮನುಷ್ಯ ಶೋಷಿಸಿ, ಲೂಟಿ ಮಾಡಿ ಬದುಕಿದರೂ ಅದು ಸಹ್ಯವೇ ಎನ್ನುವ ಮನ:ಸ್ಥಿತಿಯ ಕಾಲಘಟ್ಟದಲ್ಲಿರುವ ಜನಸಮೂಹಕ್ಕೆ ಶ್ರಮ ಎನ್ನುವುದು ಸಂಸ್ಕೃತಿಯ ಮೂಲದಿಂದ ವಿಚಲಿತವಾಗಿ ಆರ್ಥಿಕ ಮೌಲ್ಯದ ಭಾಗವಾಗುವವರೆಗಿನ ಬೆಳವಣಿಗೆಯಾಗಿ ತೋರುವುದಿದೆ.

ಒಟ್ಟು ಜೀವಸಂಕುಲದ ತುತ್ತ ತುದಿಯ ಸ್ತರದಲ್ಲಿ ವಿರಾಜಮಾನನಾಗಿರುವ ಮನುಷ್ಯನ ಸಾಧನೆಯ ಹಿಂದೆ ಈ ಶ್ರಮ ಮಾಡುವ ಗುಣವೇ ಅಡಕವಾಗಿದೆ. ಈ ಶ್ರಮ ಎನ್ನುವುದು ಮನುಷ್ಯನ ಐಹಿಕ ಅಬ್ಯುದಯಕ್ಕೆ ನೆರವಾಗಿರುವ ಜೊತೆಗೆ ಆತನನ್ನು ಸೃಷ್ಟಿ ಕಾರ್ಯದಲ್ಲಿ ತೊಡಗಿಸಿ, ಅವನನ್ನು ಸಮಾಜ ಸ್ವೀಕೃತ ವ್ಯಕ್ತಿಯನ್ನಾಗಿ ಮಾರ್ಪಡಿಸುವಲ್ಲಿಯೂ ನೆರವಾಗಿರುವುದಿದೆ. ಮಾನವ ತನ್ನ ಬುದ್ಧಿಶಕ್ತಿಯ ಅಳವಡಿಕೆಯ ಮೂಲಕ ನಿಸರ್ಗದ ಎಲ್ಲ ಮಗ್ಗಲುಗಳನ್ನು ಶೋಷಿಸಿ, ಬಳಸಿ ಅದ್ಭುತವಾದ ನಾಗರಿಕತೆಯನ್ನು ಕಟ್ಟಿರುವುದಿದೆ. ಮನುಷ್ಯ ಮಾತ್ರ ಏಕೈಕ ಆರ್ಥಿಕ ಜಗತ್ತಿನ ಉದ್ಪಾತಕ ಜೀವಿ ಎನ್ನುವ ಹೆಗ್ಗಳಿಕೆಗೆ ಕಾರಣವಾಗಿರುವುದಿದೆ. ಪ್ರಾಚೀನ ಕಾಲದ ಸರಳ ಸಮಾಜದ ’ಒಲೆಗೆ ಸ್ತ್ರೀ ಹೊಲಕ್ಕೆ ಪುರುಷ’ ಎನ್ನುವ ಅತ್ಯಂತ ಪ್ರಾಥಮಿಕ ಹಂತದ ಶ್ರಮ ವಿಭಜನೆಯಿಂದ ಮೊದಲ್ಗೊಂಡು ಆಧುನಿಕ ಸಂದರ್ಭದ ಬೃಹತ್ ನೌಕರಶಾಹಿ ವ್ಯವಸ್ಥೆಯಲ್ಲಿಯ ಅತ್ಯಂತ ತೀಕ್ಷ್ಣವಾದ ಶ್ರಮದವರೆಗೂ ಆತ ಬಂದು ತಲುಪಿರುವುದಿದೆ. ಸರಳ ಬದುಕಿನ ಉತ್ತರವಾಗಿ ಆರಂಭವಾದ ಶ್ರಮ ಜೀವನ ನಂತರ ಅದು ಕಲೆ ಮತ್ತು ಸೌಂದರ್ಯೋಪಾಸನೆಗೂ ಎಡೆ ಮಾಡಿ ಕೊಟ್ಟಿರುವ ಬಗ್ಗೆ ವಿಶ್ವದ ಎಲ್ಲ ನಾಗರಿಕತೆಗಳು ತೋರಿಸಿಕೊಟ್ಟಿವೆ. ಗುಹೆಗಳಿರಬಹುದು, ಗೋಡೆಯ ಮೇಲಿನ ಚಿತ್ರಗಳಿರಬಹುದು, ಕಲ್ಲಿನ ಮೇಲಿನ ಕೆತ್ತನೆ, ಬಟ್ಟೆಯ ಮೇಲಿನ ವಿನ್ಯಾಸ, ದೇಗುಲಗಳ ನಿರ್ಮಾಣ, ಅಲ್ಲಿರುವ ಶಿಲ್ಪಗಳು ಮುಂತಾದ ಕಲಾಭಿವ್ಯಕ್ತಿಗಳು ಹೊಸ ಬಗೆಯ ಶ್ರಮ ಸಂಸ್ಕೃತಿಯ ಶಾಖೆಗಳಾಗಿ ಆವಿರ್ಭವಿಸಿದವು.

ಪಾಶ್ಚಾತ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಈ ಬಗೆಯ ಕಲಾಭಿವ್ಯಕ್ತಿ ಮತ್ತು ರಚನೆ ಶ್ರಮದ ಭಾಗವಾಗಿ ಒಂದು ಮೂರ್ತರೂಪದಲ್ಲಿ ಅತ್ಯಂತ ಉಚ್ಚ್ರಾಯ ಸ್ಥಿತಿಯನ್ನು ತಲುಪಿರುವ ಅವಧಿ 14 ನೇ ಶತಮಾನ. ಸಿ.ರೈಟ್ ಮಿಲ್ಸ್ ಹೆಳುವಂತೆ ’ಶ್ರಮ ಎನ್ನುವುದು ಆ ಸಂದರ್ಭದಲ್ಲಿ ಶ್ರಮಿಕನನ್ನು ಅವನ ಉತ್ಪಾದನೆಯಿಂದ ವಿಚಲಿತಗೊಳಿಸುವ, ಅವನನ್ನು ಅಸಂತುಷ್ಟಗೊಳಿಸುವ ಮಟ್ಟದಲ್ಲಿರದೇ ಶ್ರಮ ಮತ್ತು ಆತನ ಉತ್ಪಾದನೆ ಎರಡೂ ಬಿಡಿಸಲಾಗದ ಸಾರೂಪ್ಯಗಳಾಗಿದ್ದವು. ಆಗ ಒಬ್ಬ ಶ್ರಮಿಕ ತನ್ನ ಶ್ರಮವನ್ನು ಸ್ವಾಯತ್ತವಾಗಿ ನಿಯಂತ್ರಿಸುವ ಸಾಧ್ಯತೆಯಿತ್ತು. ತನ್ನ ಶ್ರಮದ ಜೊತೆ ಜೊತೆಗೆ ತನ್ನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಎಲ್ಲ ಅವಕಾಶಗಳಿದ್ದವು’ ಎಂದಿರುವುದನ್ನು ನೋಡಿದರೆ ಆ ಹಂತದಲ್ಲಿ ಶ್ರಮ ಎನ್ನುವುದು ಸಂಸ್ಕೃತಿಯ ಬಹುಮುಖ್ಯವಾದ ಭಾಗವೇ ಆಗಿತ್ತು. ಅದೊಂದು ಹೊಟ್ಟೆಪಾಡಿನ ವೃತ್ತಿಯಾಗಿರದೇ ಒಂದು ಜೀವನ ಮಾರ್ಗವೇ ಆಗಿತ್ತು.

ಮಧ್ಯಯುಗದ ಶ್ರಮ ಸಂಸ್ಕೃತಿಯ ರಾಚನಿಕ ಚೌಕಟ್ಟು ಆಧುನಿಕ ಉತ್ಪಾದನಾ ವಿಧಾನಗಳ ಆಗಮನದೊಂದಿಗೆ ಬದಲಾವಣೆ ಹೊಂದಿ, ತನ್ನ ಮೂಲ ಅಸ್ಥಿತ್ವವನ್ನು ಇಲ್ಲವಾಗಿಸಿಕೊಂಡಿತು. ಮುಂಚಿನ ಶ್ರಮದ ಸ್ವರೂಪವೇ ಬದಲಾಯಿತು. ಈ ಹಂತದ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮಾರ್ಕ್ಸ್ ಉತ್ಪಾದನಾ ವಿಧಾನಗಳು ಮತ್ತು ಉದ್ದಿಮೆ ಪ್ರಧಾನ ವ್ಯವಸ್ಥೆಯಲ್ಲಿ ಕಾರ್ಮಿಕರು ಶ್ರಮವಿಭಜನೆಯ ತೀವ್ರತೆಯನ್ನು ಅನುಭವಿಸುವ ಜೊತೆಗೆ ಒಂದು ಬಗೆಯ ಪರಕೀಯ ಪ್ರಜ್ಞೆಯನ್ನು ಅನುಭವಿಸುತ್ತಾರೆ. ಈ ಬಗೆಯ ಅತೃಪ್ತಿ ತಾನು ಉತ್ಪಾದಿಸುವ ವಸ್ತುಗಳಿಂದ, ಅಲ್ಲಿಯ ಪರಿಸರದಿಂದ ಉದ್ಭವವಾಗುವ ಬಗ್ಗೆ ಮಾರ್ಕ್ಸ್ ಮಾತನಾಡಿರುವುದಿದೆ.

ವರ್ಗ ಸಂಘರ್ಷಕ್ಕೆ ಈ ಬಗೆಯ ಸಂಕೀರ್ಣ ಶ್ರಮವಿಭಜನೆ ಕಾರಣವಾಗುವ ಜೊತೆಯಲ್ಲಿ ವರ್ಗ ರಹಿತ ಸಮಾಜದ ಸ್ಥಾಪನೆಯವರೆಗೂ ಅದು ಕ್ರಮಿಸುವ ಬಗ್ಗೆ ಆತ ಭವಿಷ್ಯವನ್ನೇ ನುಡಿದಿರುವುದಿತ್ತು. ದುಡಿಮೆಯನ್ನು ತನ್ನ ಬದುಕಿನ ಭಾಗ ಎಂದು ಸಂತೋಷದಿಂದ ತನ್ನನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಾರ್ಮಿಕ ಆಧುನಿಕ ಶ್ರಮದ ಸಂದರ್ಭದಲ್ಲಿ ಶ್ರಮ ಸಂಸ್ಕೃತಿಯ ಜಾಗೆಯಲ್ಲಿ ಕರ್ತವ್ಯ ಪ್ರಜ್ಞೆ ಎನ್ನುವಂತಹ ಒಂದು ಔಪಚಾರಿಕ ಪರಿಕಲ್ಪನೆಯನ್ನೇ ಪರಿಚಯಿಸಿದ. ದುಡಿಮೆ ಎನ್ನುವುದು ಸಂಪತ್ತಿನ ಗಳಿಕೆಯ ಸಾಧನ ಎನ್ನುವ ಅರ್ಥಕ್ಕೆ ಸೀಮಿತವಾಗಿ ಉಳಿಯುವಂತಾಯಿತು. ಜರ್ಮನಿಯ ಚಿಂತಕ ಮ್ಯಾಕ್ಸ್ ವೆಬರ್ ಹೇಳುವಂತೆ ’ಆಧುನಿಕ ಸಂದರ್ಭದ ಶ್ರಮ ಮನುಷ್ಯನನ್ನು ಅಪಾರ ಜನಸಂದಣಿಯ ನಡುವೆಯೂ ಏಕಾಂಗಿಯಾಗಿರುವ ಮನ:ಸ್ಥಿತಿಯನ್ನು ತಂದುಕೊಟ್ಟಿತು’ ಎಂದಿರುವುದನ್ನು ನೋಡಿದರೆ ಆಧುನಿಕ ಶ್ರಮದ ಕಲ್ಪನೆ ಹುಟ್ಟುಹಾಕಿರುವ ಮಾನಸಿಕ ಸ್ತರಗಳ ಬಗ್ಗೆ ಯೋಚಿಸಬಹುದು.

ಆಧುನಿಕ ಸಂದರ್ಭದ ಶ್ರಮ ಎನ್ನುವುದು ಮಧ್ಯಮ ಮತ್ತು ಮೇಲ್ವರ್ಗದ ಜನಗಳ ಪಾಲಿಗೆ ಐಹಿಕ ಅಬ್ಯುದಯದ ಒಂದು ಸಾಧನವಾದರೆ, ಕೆಳ ವರ್ಗದ ಕಾರ್ಮಿಕನ ಪಾಲಿಗೆ ಮಾತ್ರ ಅದೊಂದು ಒತ್ತಾಯವಾದ ದುಡಿಮೆಯಾಗಿ, ಬದುಕಿನ ನಿರ್ವಹಣೆಗೆ ನಿರ್ವಾಹವಿಲ್ಲದ ಒಂದು ಮಾರ್ಗವಾಗಿ ಪರಿಣಮಿಸಿತು. ಆರಕ್ಕೇರದ ಮೂರಕ್ಕಿಳಿಯದ ಮಿತಿಯ ಮಧ್ಯೆ ತೊಳಲಾಡುವ ಸನ್ನಿವೇಶವನ್ನು ಕೆಳವರ್ಗದ ಕಾರ್ಮಿಕನ ಪಾಲಿಗೆ ಆಧುನಿಕ ಸಂದರ್ಭದ ಸಂಕೀರ್ಣ ಶ್ರಮವಿಭಜನೆ ತಂದಿಟ್ಟಿರುವುದು ಕಟು ವಾಸ್ತವ. ಹೀಗೆ ಸಂಸ್ಕೃತಿಯಾಗಿದ್ದ ಶ್ರಮ ಒತ್ತಡವಾಗಿ ಸ್ಥಿತ್ಯಂತರ ಹೊಂದಿದ್ದೇ ಒಂದು ದೊಡ್ದ ದುಡಿಯುವ ಜನಸಮೂಹ ಪರಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡದ್ದು ಕೂಡಾ ಸತ್ಯವೇ. ಇನ್ನೊಂದು ಬದಿ ಮೇಲವರ್ಗ ಮತ್ತು ಮಧ್ಯಮವರ್ಗಗಗಳು ಈ ಕೆಳಗಿನ ದುಡಿಯುವ ಜನಸಮೂಹವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಯ ಈಡೇರಿಕೆಯಲ್ಲಿ ಮತದಾರನನ್ನು ಸದ್ಯದ ಸಂದರ್ಭದ ರಾಜಕಾರಣಿಗಳು ಬಳಸಿಕೊಳ್ಳುವಷ್ಟೇ ಯತಾರ್ಥವಾಗಿ ಕೆಳ ವರ್ಗಗಳ ಕಾರ್ಮಿಕರನ್ನು ಮೇಲಿನ ವರ್ಗಗಳು ಬಳಸಿಕೊಂಡು ಬೆಳೆದದ್ದು, ಬಲಿತದ್ದು ಸರ್ವ ವಿಧಿತವೇ.

ನಾವೀಗ ಬದುಕಿರುವ ಸಂದರ್ಭದಲ್ಲಂತೂ ಶ್ರಮ ಎನ್ನುವುದು ಇನ್ನಷ್ಟು ತೀಕ್ಷ್ಣವಾಗಿ ಕಾರ್ಮಿಕನನ್ನು ಯಂತ್ರದ ಬಿಡಿಭಾಗದಷ್ಟೇ ಗೌಣವಾಗಿ ಕಾಣುವ ಸ್ಥಿತಿ ಉದ್ಭವವಾಯಿತು. ಏನೋ ಒಂದರ ಉತ್ಪಾದನೆಗಾಗಿ ದಿನದ ಎಂಟು ಘಂಟೆಗಳ ಕಾಲ ಒಬ್ಬ ಶ್ರಮಿಕ ಅನಿವಾರ್ಯವಾಗಿ ದುಡಿಯಲೇಬೇಕಾದ ಒತ್ತಡವನ್ನು ತಂದಿಟ್ಟ ಕೊಡುಗೆ ಈ ಬೃಹತ್ ಗಾತ್ರದ ಯಂತ್ರಗಳಿಗೆ ಮತ್ತು ಅಲ್ಲಿ ಹೂಡಲಾದ ಬಂಡವಾಳಕ್ಕೆ ಸಲ್ಲುತ್ತದೆ. ತಾನೇ ಉತ್ಪಾದಿಸಿದ ವಸ್ತುವೊಂದು ತನ್ನಿಂದ ಯಾವುದೇ ರೀತಿಯ ನಿಯಂತ್ರಣಕ್ಕೊಳಪಡಲಾಗದ, ಸಂವೇದನಾರಹಿತ ಸ್ಥಿತಿ ಅದರ ಸೃಷ್ಟಿಕರ್ತನಲ್ಲಿ ಅತೃಪ್ತ ಮನೋಭಾವವನ್ನು ಬೆಳೆಸಿದ್ದು ಸ್ವಾಭಾವಿಕವೇ. ಶ್ರಮಿಕನೋರ್ವ ತನಗೆ ಇಷ್ಟವಿರುವ ಉತ್ಪಾದನೆಯ ಬದಲಾಗಿ ಸೂಚಿತ ಉತ್ಪಾದನೆಗಾಗಿರುವ ಯಂತ್ರವಾಗಿ ಮಾರ್ಪಟ್ಟಿರುವುದು ಕೂಡಾ ಆಧುನಿಕ ಸಂದರ್ಭದ ಅನಿವಾರ್ಯತೆಯೇ ಹೌದು. ಯಂತ್ರಗಳು ಮಾನವನನ್ನು ನಿಯಂತ್ರಿಸುವ, ಅವನ ಸಂವೇದನೆಗಳ ಮೇಲೆ ಸವಾರಿ ಮಾಡುವ ಕ್ರಿಯೆ ಆರಂಭವಾಯಿತು. ಯಂತ್ರಗಳಿಂದ ನಿರ್ವಹಿಸಲಾಗದ ಕಾರ್ಯಗಳಿಗಾಗಿ ಮಾತ್ರ ಮನುಷ್ಯ ಸೀಮಿತನಾಗಿ ಉಳಿದ. ಸದ್ಯದಲ್ಲಿ ಶ್ರಮ ಎನ್ನುವುದು ಹಣಕ್ಕೆ ಪರ್ಯಾಯವಾಗಿ ಮಾರಿಕೊಳ್ಳುವ ಒಂದು ದುಡಿಮೆಯಾಗಿ ಉಳಿಯಿತು. ಉದ್ದಿಮೆಗಳಲ್ಲಿ ಕೆಲಸ ಮಾಡುವವರಿಗಿಂತಲೂ ಉದ್ದಿಮೆ ಮುಖ್ಯವಾಗುವ ಸನ್ನಿವೇಶ ನಿರ್ಮಾಣವಾಯಿತು. ಈ ಬಗೆಯ ಪರಿವರ್ತನೆಗಳ ಹೊಡೆತಕ್ಕೆ ವಿಶ್ವದಲ್ಲಿ ಒಂದು ದೊಡ್ಡ ದುಡಿಯುವ ಜನಸಮೂಹ ಅಸಂತುಷ್ಟ ಸ್ಥಿತಿಯಲ್ಲಿಯೇ ಉಳಿಯಬೇಕಾಯಿತು.

ಪ್ರಸ್ತುತ ಸಂದರ್ಭದಲ್ಲಿ ಶ್ರಮ ತನ್ನ ತೀವ್ರತೆಯ ಮೂಲಕ ಎರಡು ಅತಿ ಮುಖ್ಯವಾದ ಪರಿಣಾಮಗಳನ್ನು ಸಮಷ್ಟಿಯ ಮೇಲೆ ಉಂಟು ಮಾಡಿರುವುದಿದೆ.

  1. ಬಳಕೆದಾರರಿಗೆ ಉತ್ಕೃಷ್ಟವಾದುದನ್ನು ಕೊಡಬೇಕು ಎಂದು ಪೈಪೋಟಿಗಿಳಿದ ಉದ್ದಿಮೆಗಳು ಪರೋಕ್ಷವಾಗಿ ಅವರನ್ನು ಆಲಸಿಗಳನ್ನಾಗಿ ಮಾಡುವ ಮೂಲಕ ಅವರಲ್ಲಿಯ ಕ್ರಿಯಾತ್ಮಕತೆಯನ್ನು ಕೊಲ್ಲತೊಡಗಿದವು. ನಮ್ಮ ಮನೆಗಳಲ್ಲಿಯ ಅಡುಗೆ ಸಾಧನಗಳನ್ನು ಗಮನಿಸಿದರೂ ಸಾಕು ಈ ಮಾತಿನ ತಾತ್ಪರ್ಯ ಮನದಟ್ಟಾಗುತ್ತದೆ. ಕೇವಲ ಐದೇ ನಿಮಿಷಗಳಲ್ಲಿ ಅಡುಗೆ ರೆಡಿ ಎನ್ನುವ ಜಾಹೀರಾತುಗಳು, ತರಹೇವಾರಿ ಉಪಕರಣಗಳು ಅಡುಗೆ ಮಾಡುವವರಲ್ಲಿಯ ಕೌಶಲ್ಯವನ್ನು ಕುಲಗೆಡಿಸಿ ಅವರನ್ನು ಕಿರುತೆರೆಯ ಮುಂದೆ ಕುಕ್ಕರು ಬಡಿದದ್ದು ಸುಳ್ಳಂತೂ ಅಲ್ಲ. ಕೇವಲ ಅಡುಗೆ ಮನೆಗೆ ಮಾತ್ರ ಇದು ಸೀಮಿತವಲ್ಲ.
  2. ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ.

“ಭೂಮಿ ಹುಟ್ಟಿದ್ದು ಹೇಗೆ” ಬಗ್ಗೆ ಪ್ರಜಾವಾಣಿಯಲ್ಲಿ

ಇದು ಕಳೆದ ಭಾನುವಾರ (6/5/12) ಪ್ರಜಾವಾಣಿಯ “ಸಾಪ್ತಾಹಿಕ ಪುರವಣಿ”ಯಲ್ಲಿ ಪ್ರಕಟವಾದ ಲೇಖನ.

ಮತ್ತಷ್ಟು ವಿವರಗಳು “ವರ್ತಮಾನ”ದ ಈ ಪುಟದಲ್ಲಿ ಲಭ್ಯವಿವೆ.

ಹಾಗೆಯೇ, ಇದನ್ನು ಆನ್‌ಲೈನ್‌ನಲ್ಲಿ ನೋಡಬಯಸುವವರು ಕೆಳಗಿನ ವಿಡಿಯೋ ನೋಡಬಹುದು.

ಇನ್ನೂ ಮುಟ್ಟಿಸಿಕೊಳ್ಳದ ಭಾರತೀಯ ಮಾಧ್ಯಮಗಳು

– ರಾಬಿನ್ ಜೆಫ್ರಿ
ಕನ್ನಡಕ್ಕೆ: ಕೆ.ಎಲ್.ಚಂದ್ರಶೇಖರ್ ಐಜೂರ್

1992ರಲ್ಲಿ ಹಾಗೆ ಸುಮ್ಮನೆ ಇಣುಕಿ ನೋಡಿದ್ದೆ, ಅವತ್ತೂ ಅಲ್ಲೊಬ್ಬ ದಲಿತ ಸಿಗಲಿಲ್ಲ; ಇವತ್ತೂ ಅಲ್ಲಿ ಸಿಗಲಾರ. ಅದು ಭಾರತೀಯ ಮಾಧ್ಯಮ ರಂಗ. ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳಲು ಹೆಣಗುತ್ತಿರುವ ಬೃಹತ್ ಮಾಧ್ಯಮ. ಇಂಡಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟಿರುವ ದಲಿತರ ಬದುಕನ್ನು ಸಣ್ಣ ಕುತೂಹಲಕ್ಕಾದರೂ ನೋಡುವುದಿರಲಿ, ಭಾರತೀಯ ಮಾಧ್ಯಮ ತನ್ನ ಸುದ್ದಿಮನೆಗಳಿಂದಲೇ ದಲಿತರನ್ನು ದೂರವಿಟ್ಟಿದೆ.

ದಲಿತರನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ದೂರವಿಡಲು ಕಾರಣಗಳೇನು? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂವಿಧಾನದ ಮೂಲಧರ್ಮವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಈ ದೇಶದ ಎಲ್ಲ ರಂಗಗಳು ನಿರಾಕರಿಸಿರುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ನಿರಾಕರಿಸಿದೆ. ಹೀಗಾಗಿಯೇ ಮಾಧ್ಯಮದ ಮಂದಿ ಮಾಧ್ಯಮದಲ್ಲಿ ಭ್ರಾತೃತ್ವ ಎಂದರೆ ದೂರ ಸರಿಯುತ್ತಾರೆ.ಎರಡನೆಯದು, ಸುದ್ದಿಮನೆಗಳಲ್ಲಿರುವ ಮಂದಿ ಸದಾ ರೋಚಕತೆಗೆ ಮಣೆಹಾಕಿ ಹೆಚ್ಚು ಜನರನ್ನು ಆಕರ್ಷಿಸುವುದರತ್ತಲೇ ಗಮನಕೊಡುವುದರಿಂದ, ಮಾಧ್ಯಮದ ವ್ಯಾಪಾರಿ ಜಗತ್ತಿಗೆ ದೇಶದ ಕಾಲುಭಾಗದಷ್ಟಿರುವ ದಲಿತರು ಯಾವತ್ತೂ ಮಾರಾಟದ ಸರಕಾಗುವುದಿಲ್ಲ. ಸದಾ ಸಾರ್ವಜನಿಕ ಸಮ್ಮತಿ ಉತ್ಪಾದಿಸುವುದರತ್ತಲ್ಲೇ ಹೆಚ್ಚು ಚಡಪಡಿಸುವ ಈ ಮಾಧ್ಯಮ, ಸಮಾಜದ ಅಂಚಿನಲ್ಲಿದ್ದು ದಿವ್ಯನಿರ್ಲಕ್ಷ್ಯಕ್ಕೊಳಗಾಗಿರುವ ದಲಿತರ ತಾರತಮ್ಯದ ಪ್ರಶ್ನೆಗಳನ್ನು ಇದುವರೆವಿಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೂರ್ವ ಮತ್ತು ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ದೊಡ್ಡಪ್ರಮಾಣದಲ್ಲಿ ಜನಪರ ಹೋರಾಟಗಳು ನಡೆದರೂ ಇಂಡಿಯಾದ ಪತ್ರಿಕೆಗಳಿಗೆ ಅವು ಸುದ್ದಿಯೇ ಅನ್ನಿಸಿಲ್ಲ.

ಮೂರನೆಯದು, ಬಹಳ ಹಿಂದೆ ಅಮೆರಿಕಾದ ಕಟ್ಟಾ ಮಾಧ್ಯಮದ ಮಂದಿ ಸುದ್ದಿ ಅನ್ನಿಸುವುದೆಲ್ಲ ಪ್ರಿಂಟಾಗಬೇಕು ಎನ್ನುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಟ್ಯಾಗ್‌ಲೈನನ್ನು ಹೆಚ್ಚು ನಂಬಿಕೊಂಡಿದ್ದರು. ಆದರೆ ದೇಶದ ಕಾಲುಭಾಗದಷ್ಟು ಜನರನ್ನು ಅವರ ಮೇಲೆ ಯಾವುದಾದರೂ ಹಿಂಸೆ, ಬರ್ಬರ ಅನ್ನಿಸುವ ಕೃತ್ಯಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಮುಟ್ಟಿ ನಂತರ ಅವರನ್ನು ಮಾಧ್ಯಮದ ಗಡಿಗಳಿಂದಲೇ ದೂರ ನೂಕುವ ಪತ್ರಿಕೆಗಳು ಹೆಚ್ಚುಕಾಲ ನೆಲೆನಿಲ್ಲಲಾರವು ಎಂಬ ಪರಮಸತ್ಯ ಇದೇ ಮಾಧ್ಯಮದ ಮಂದಿಗೆ ಬಹುಬೇಗ ಗೊತ್ತಾಯಿತು.

ಭಾರತೀಯ ಮಾಧ್ಯಮಗಳಲ್ಲಿ ದಲಿತರ ಗೈರುಹಾಜರಿ ಕುರಿತ ಚರ್ಚೆಗಳು ೧೯೯೬ರಿಂದ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಖುದ್ದು ಒಬ್ಬ ಆಫ್ರೋ-ಅಮೆರಿಕನ್ ಆಗಿರುವ ವಾಷಿಂಗ್ಟನ್ ಪೋಸ್ಟ್ನ ವರದಿಗಾರರಾದ ಕೆನ್ನೆತ್ ಜೆ.ಕೂಪರ್ ಮೊದಲಿಗೆ ದೆಹಲಿಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದರು. ಅವರ ಹುಡುಕಾಟದಲ್ಲಿ ಅಂಥ ಲಾಭವೇನೂ ಆಗಲಿಲ್ಲ. ಕಡೆಗೆ ಅವರು ಬೇಸತ್ತು ಪಾಯ್‌ನೀರ್ ಪತ್ರಿಕೆಗೆ ಬರೆದ ತನಿಖಾ ಲೇಖನವನ್ನು ಬಿ.ಎನ್.ಉನಿಯಾಲ್ ಪ್ರಕಟಿಸಿದರು. ಲೇಖನದ ಕೊನೆಗೆ ಕೂಪರ್ ನೊಂದು ಬರೆದಿದ್ದರು: ನನ್ನ ಮೂವತ್ತು ವರ್ಷಗಳ ಜರ್ನಲಿಸ್ಟ್ ಬದುಕಿನಲ್ಲಿ ಒಬ್ಬೇ ಒಬ್ಬ ದಲಿತನನ್ನು ಇಂಡಿಯಾದ ಸುದ್ದಿಮನೆಗಳಲ್ಲಿ ನೋಡಲು ಸಾಧ್ಯವೇ ಆಗಲಿಲ್ಲ.

ಒಬ್ಬ ದಲಿತನೂ ಸಿಗಲಿಲ್ಲ…

ನಾನು 2000ದಲ್ಲಿ ಇಂಡಿಯಾದ ಪತ್ರಿಕಾ ಕ್ರಾಂತಿ ಎಂಬ ಪುಸ್ತಕ ಬರೆದಾದ ನಂತರವೂ ಇಲ್ಲಿ ಅಂಥ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಕೂಪರ್-ಉನಿಯಾಲ್ ತನಿಖಾ ವರದಿಯಲ್ಲಿ ಹೇಳಿರುವಂತೆ ಭಾರತದ ಮೂನ್ನೂರಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬೇ ಒಬ್ಬ ಪತ್ರಕರ್ತ ಸಿಗುವುದಿಲ್ಲ. ಆ ವರದಿಗೆ 2006ರಲ್ಲಿ ಹತ್ತು ವರ್ಷಗಳು ತುಂಬಿದವು. ಕಳೆದ ವರ್ಷವಷ್ಟೇ ತಮಿಳು ಪತ್ರಕರ್ತ ಜೆ.ಬಾಲಸುಬ್ರಹ್ಮಣ್ಯಮ್ ಇಂಗ್ಲಿಷ್ ದೈನಿಕವೊಂದರ ಸಂದರ್ಶನದಲ್ಲಿ ತಮಗಾದ ಹಸಿಹಸಿ ಅನುಭವಗಳನ್ನು ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದುಕೊಂಡಿದ್ದರು. ಬಾಲಸುಬ್ರಹ್ಮಣ್ಯಮ್ ದಲಿತ ಅನ್ನುವ ಕಾರಣಕ್ಕೆ ಹಾಗೂ ಅವರು ಸಂದರ್ಶನಕ್ಕೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ದಲಿತರ ಪರವಾದ ಲೇಖನಗಳು ಅವರ ಪಾಲಿಗೆ ಆ ಇಂಗ್ಲಿಷ್ ದೈನಿಕದ ಬಾಗಿಲು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತು.

ಕೆನೆತ್ ಕೂಪರ್ ಈ ಸದ್ಯ ಬೋಸ್ಟನ್‌ನಲ್ಲಿ ನೆಲೆಗೊಂಡಿದ್ದು, ಆಫ್ರಿಕನ್-ಅಮೆರಿಕನ್ ಜನರ ಬದುಕನ್ನು ಬಿಂಬಿಸುತ್ತಿರುವ ಸೆಂಟ್ ಲೂಯಿಸ್ ಅಮೆರಿಕನ್ ಎಂಬ ಯಶಸ್ವಿ ಪತ್ರಿಕೆಗೆ ಸಂಪಾದಕರಾಗಿದ್ದಾರೆ. ಇಂಡಿಯಾದ ದಲಿತರು, ಆಫ್ರಿಕಾ-ಅಮೆರಿಕಾ ದೇಶಗಳ ಕಪ್ಪು ಜನಾಂಗದವರು ಒಂದೇ ಬಗೆಯ ತಾರತಮ್ಯ ಮತ್ತು ಅವಮಾನಗಳನ್ನು ಸಾಮಾಜಿಕವಾಗಿ ಅನುಭವಿಸಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಎಬೋನಿ, ಎಸ್ಸೆನ್ಸ್, ಸೆಂಟ್ ಲೂಯಿಸ್ ಅಮೆರಿಕನ್ ಮತ್ತು ಚಿಕಾಗೋ ಡಿಫೆಂಡರ್ ತರಹದ ಪತ್ರಿಕೆಗಳು ಅಲ್ಲಿನ ಶೋಷಿತರನ್ನು ಹತ್ತಿರಕ್ಕೆ ಬಿಟ್ಟುಕೊಂಡಂತೆ ಇಂಡಿಯಾದ ಪತ್ರಿಕೆಗಳಿಗೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಕಣ್ಣೆದುರು ಬಂದು ನಿಲ್ಲುತ್ತದೆ.

ಇದಕ್ಕೆ ಉತ್ತರವೂ ಇದೆ. ಇಂಡಿಯಾದ ದಲಿತರು ಮುಟ್ಟದ ಜಗತ್ತೊಂದನ್ನು ಅಮೆರಿಕಾದ ಶೋಷಿತರು 1920ರಲ್ಲಿ ಮುಟ್ಟಿದರು. ಬಹಳ ಮುಖ್ಯವಾಗಿ ಈ ದಶಕದಲ್ಲಿ ಕಪ್ಪು ಜನಾಂಗದಿಂದ ಮಧ್ಯಮ ವರ್ಗವೊಂದು ರೂಪುಗೊಂಡು ಅನೇಕ ಅಂಗಡಿ, ವ್ಯಾಪಾರ-ವಹಿವಾಟುಗಳ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಮಧ್ಯಮ ವರ್ಗದ ಈ ಪುಟ್ಟ ಕಪ್ಪು ಜನಾಂಗವೇ ಮುಂದೆ ಕಪ್ಪು ಅಮೆರಿಕವಾಗಿ ತನ್ನ ಹೊಸ ಹುಟ್ಟನ್ನು ಪಡೆದುಕೊಂಡಿತು. ಈ ವರ್ಗ ತನ್ನ ಆರ್ಥಿಕ ಯಶಸ್ಸಿಗೆ ಆಯ್ದುಕೊಂಡದ್ದು ಪತ್ರಿಕೆಗಳ ಜಾಹೀರಾತು. ಜಾಹೀರಾತು ಪಡೆಯುವ ಸಲುವಾಗಿಯಾದರೂ ಅಮೆರಿಕಾದ ಪತ್ರಿಕೆಗಳು ಈ ಕಪ್ಪು ಮಧ್ಯಮ ವರ್ಗದ ಎದುರು ಮಂಡಿಯೂರಿ ನಿಂತಿತು. ಇಡೀ ಅಮೆರಿಕಾ ಉಸಿರಾಡುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಅಲ್ಲಿನ ಶೋಷಿತರು ಕಷ್ಟಪಟ್ಟು ತಮ್ಮದಾಗಿಸಿಕೊಂಡರು. ಆ ಭಾಷೆಯ ಸಂಪರ್ಕದಿಂದಾಗಿ ಚರ್ಚ್‌ನ ಒಳಗೆ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಹೊರಗಿದ್ದ ಶೋಷಿತರಿಗೆ ತಲುಪಿತು. ಇಂಥ ಹೊತ್ತಲ್ಲೇ ಅಲ್ಲೊಬ್ಬ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿಕೊಂಡದ್ದು. ತಮ್ಮ ಚರ್ಮಗಳು ಎಷ್ಟೇ ಭಿನ್ನ ದನಿ ಹೊರಡಿಸಿದರೂ ಕಪ್ಪು ಅಮೆರಿಕಾದ ಆಳದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳಲಿಲ್ಲ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಈಗ ಜನಾಂಗೀಯ ತಾರತಮ್ಯ ಅನ್ನುವುದು ಮೊದಲಿನಂತೆ ಗುಣಪಡಿಸಲಾಗದ ಗಾಯದಂತೇನೂ ಇಲ್ಲ.

ಮಾಧ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಪ್ರಶ್ನೆಗಳು ಬಂದಾಗಲೆಲ್ಲ ಇಂಡಿಯಾದ ಮಾಧ್ಯಮಗಳು ಎರಡು ಸಿದ್ಧ ಉತ್ತರಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುತ್ತವೆ: ಒಳ್ಳೆಯ ಪತ್ರಕರ್ತ ಸುದ್ದಿಯ ವಸ್ತುನಿಷ್ಠತೆಯನ್ನು ನೋಡುತ್ತಾನೆಯೇ ಹೊರತು ಜಾತಿಯನ್ನಲ್ಲ  ಮತ್ತು ಮೀಸಲಾತಿ ಎನ್ನುವುದು ಆಧುನಿಕ ಭಾರತಕ್ಕೆ ಮಾರಕ, ಜಾತಿಯನ್ನು ಪಕ್ಕಕ್ಕಿಟ್ಟು ಪ್ರತಿಭೆಯನ್ನಷ್ಟೆ ಪರಿಗಣಿಸಬೇಕು. ಬ್ರಿಟಿಷ್ ಆಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇಲ್ಲಿನ ಪುರಾತನ ಶ್ರೀಮಂತರು ದಿ ಸ್ಟೇಟ್ಸ್‌ಮ್ಯಾನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದೇನಾದರೂ ತಿಳಿದಿರುವಿರಾ? ಖಂಡಿತ ಇಲ್ಲ. ದಿ ಹಿಂದೂ, ಅಮೃತಾ ಬಜಾರ್ ಪತ್ರಿಕಾ, ಹಿಂದೂಸ್ತಾನ್ ಟೈಮ್ಸ್, ಯಂಗ್ ಇಂಡಿಯಾ ಮೊದಲಾದ ಪತ್ರಿಕೆಗಳು ಇಲ್ಲಿನ ಶೋಷಿತರನ್ನು ಅಷ್ಟಾಗಿ ಪ್ರತಿನಿಧಿಸಲಿಲ್ಲ ಎಂಬುದನ್ನು ಆ ಪತ್ರಿಕೆಗಳು ದಕ್ಕಿಸಿಕೊಂಡ ವ್ಯಾಪಾರಿ ಯಶಸ್ಸಿನಿಂದಲೇ ಅಂದಾಜಿಸಬಹುದು. ನಿಮ್ಮ ಕೈಯಲ್ಲೊಂದು ಪತ್ರಿಕೆ ಇದ್ದರೆ ನೀವು ರಾತ್ರೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಲ್ಲಿ ಹೆಚ್ಚು ಸತ್ಯವಿದೆ.

ಎರಡು ಸಲಹೆಗಳು…

ಹಾಗಿದ್ದರೆ ಇಂಡಿಯಾದ ಮಾಧ್ಯಮಗಳಲ್ಲಿ ದಲಿತರನ್ನು ಕಾಣುವುದು ಹೇಗೆ? ಎರಡು ಸಲಹೆಗಳಿವೆ. ಬಹುಶಃ ಇವು ಉತ್ತರವಾಗಲಾರವು; ಆದರೆ ಇವೆರಡು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬಹುದು. 1978ರಲ್ಲಿ ಸುದ್ದಿಮನೆಯೊಳಗಿನ ಭಿನ್ನತೆಯನ್ನು ಗಣತಿ ಮಾಡಲು ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಯಿತು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30ರಷ್ಟಿದ್ದರೂ ಆ ವರ್ಷ ಶೇಕಡಾ 4ರಷ್ಟು ಕಪ್ಪು ವರ್ಣೀಯರು ಅಲ್ಲಿನ ಸುದ್ದಿಮನೆಗಳಲ್ಲಿ ಕೆಲಸಮಾಡುತ್ತಿದ್ದರು. 2000ದ ಹೊತ್ತಿಗೆ ಗುರಿ ಶೇಕಡಾ 20 ಮುಟ್ಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಗುರಿ ಮುಟ್ಟಲಿಲ್ಲ. 2011ರಲ್ಲಿ ಅಮೆರಿಕಾದ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಕಪ್ಪು ವರ್ಣೀಯರು ಶೇಕಡಾ 13ರಷ್ಟು ಹುದ್ದೆಗಳನ್ನು ಅಮೆರಿಕಾದ ಸುದ್ದಿಮನೆಗಳಲ್ಲಿ ಪಡೆದುಕೊಂಡಿದ್ದರು. ಈಗ ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿನ ಶೋಷಿತರು ಶೇಕಡಾ 36ರಷ್ಟಿದ್ದಾರೆ. ಇದರಲ್ಲಿ ಆಫ್ರಿಕನ್-ಅಮೆರಿಕನ್, ಲ್ಯಾಟಿನೋಸ್, ನೇಟಿವ್ ಅಮೆರಿಕನ್ಸ್ ಮತ್ತು ಏಷ್ಯಾದವರು ಸೇರಿದ್ದಾರೆ. ಈಗ ನ್ಯೂಸ್ ಎಡಿಟರ್ಸ್ ಸಂಸ್ಥೆ  ತನ್ನ ಗುರಿಯನ್ನು 2020ಕ್ಕೆ ನಿಗದಿಪಡಿಸಿಕೊಂಡಿದೆ.

ಬಹುಶಃ ಈ ತರಹದ ಗುರಿ ನಿಗದಿಪಡಿಸುವ ವಿಚಾರಗಳು ಇಂಡಿಯಾದಲ್ಲಿ ಕಷ್ಟ. (ನೆನಪಿಡಿ, ಇಲ್ಲಿ ಗುರಿಯನ್ನು ಕುರಿತು ಮಾತನಾಡುತ್ತಿದ್ದೇನೆ, ಮೀಸಲಾತಿ ಅಥವಾ ಕೋಟಾ ಕುರಿತಾಗಲಿ ಅಲ್ಲ). ಇಂಡಿಯಾದಲ್ಲಿ ಜಾತಿ ಅನ್ನುವುದು ತುಂಬಾ ಸೂಕ್ಷ್ಮವಾದ ಸಂಗತಿ. ಈ ದೇಶಕ್ಕೆ ಈಗ ಒಂದು ಸಾಮಾಜಿಕ ಅಕೌಂಟೆಬಲಿಟಿ ನಡೆಸುವ ಸಂಸ್ಥೆಯೊಂದರ ಅಗತ್ಯವಿದೆ. ಇದಕ್ಕೆ ದೊಡ್ಡ ಸಂಸ್ಥೆಯ ಅಗತ್ಯವಿದೆ. ಇಂಡಿಯಾದ ಸುದ್ದಿಮನೆಗಳಲ್ಲಿನ ಭಿನ್ನತೆ ಅಂದರೆ ಇಲ್ಲಿರುವ ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಬೇಕಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಇದನ್ನು ಖಂಡಿತ ಒಪ್ಪಲಾರವು. ಬೇಕಿದ್ದರೆ ಜಾತಿವಾರು ಪತ್ರಕರ್ತರ ಮಾಹಿತಿ ನೀಡಿದ ಮತ್ತು ನೀಡದ ಮಾಧ್ಯಮ ಸಂಸ್ಥಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಯಲಿ.

ಪಿರಮಿಡ್ ಆಕಾರದಲ್ಲಿರುವ ಇಂಡಿಯಾದ ಸಮಾಜದೊಳಗೆ ನಿಧಾನವಾಗಿಯಾದರೂ ಮಧ್ಯಮ ವರ್ಗವೆಂಬುದು ಬೆಳೆಯುತ್ತಿದೆ. ಪಿರಮಿಡ್‌ನ ತಳದಲ್ಲಿರುವ ದಲಿತರಿಗೆ ಅವರ ಜಗತ್ತನ್ನು ಅವರದೇ ಕಣ್ಣಿನಿಂದ ಪ್ರಕಟಪಡಿಸಲು ಅಮೆರಿಕಾದ ಎಬೋನಿ, ಎಸ್ಸೆನ್ಸ್‌ನಂತಹ ಪತ್ರಿಕೆಗಳ ಅಗತ್ಯವಿದೆ. ಈ ಎರಡು ಪತ್ರಿಕೆಗಳು ಕಪ್ಪು ಅಮೆರಿಕಾದ ಯಶಸ್ಸಿನ ಮುಖವಾಣಿಯಾಗಿವೆ.

ನವಯಾನಗಳು ಬೇಕು…

ಭಾರತೀಯ ಮಾಧ್ಯಮಗಳು ದಲಿತರನ್ನು ಒಳಗೊಳ್ಳದ ಇದೇ ಸಂದರ್ಭದಲ್ಲಿ ದಲಿತಪರ ಕಾಳಜಿಯನ್ನು ಕೇಂದ್ರೀಕರಿಸಿ ನವಯಾನ ಪ್ರಕಾಶನ ಹೊರತರುತ್ತಿರುವ ಅನೇಕ ಪುಸ್ತಕಗಳ ಕುರಿತು ನಾವು ಗಂಭೀರವಾಗಿ ನೋಡಬೇಕಿದೆ. ಈ ತರಹದ ಪ್ರಕಾಶನ ಸಂಸ್ಥೆಗಳು ಮಧ್ಯಮ ವರ್ಗದ ದಲಿತರ ಆರ್ಥಿಕ ಬೆಂಬಲದಿಂದ ಟ್ರಸ್ಟ್‌ನಂತೆ ಬೆಳೆಯಬೇಕಾದ ಅನಿವಾರ್ಯವಿದೆ. ಆದರೂ ಇಂಥ ಸಂಸ್ಥೆ ಕಟ್ಟಲು ಬರೀ ದಲಿತರ ಹಣವೇ ಸಾಲದು. ತಳ ಸಮುದಾಯಗಳ ಕುರಿತು ನಿಜವಾದ ಪ್ರೀತಿ ಹೊಂದಿರುವ ಎಲ್ಲ ಜಾತಿ ಸಮುದಾಯಗಳಿಂದಲೂ ಹಣ ಸಂಗ್ರಹಿಸಿ, ಸಾಧ್ಯವಾದರೆ ಸರ್ಕಾರದಿಂದ ಹಣದ ಸೌಲಭ್ಯ ಸಿಗುವುದಾದರೆ ಅಲ್ಲಿಂದಲೂ ಪಡೆದು ಅದನ್ನು ಟ್ರಸ್ಟ್‌ನಲ್ಲಿ ಕಾರ್ಪಸ್ ರೂಪದಲ್ಲಿ ಸಂಗ್ರಹಿಸಿ ಇಡಬೇಕಿದೆ. ಹೀಗೆ ಕೂಡಿಟ್ಟ ಹಣದಿಂದ ಮಾತ್ರ ಪ್ರಕಾಶನದಂತಹ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಸಾಧ್ಯ.

ಮುದ್ರಣ ಮಾಧ್ಯಮವಾಯಿತು, ಈ ಟಿ.ವಿ. ಮಾಧ್ಯಮಗಳ ಕತೆ ಏನು? 1967ರಲ್ಲಿ ನಾನು ಮೊದಲ ಸಲ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ಟಲಿವಿಷನ್ ಮಾಧ್ಯಮದ ಕುರಿತು ಪಶ್ಚಿಮ ಕೆನಡಾದ ಸಣ್ಣ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಅಷ್ಟೊತ್ತಿಗಾಗಲೇ ನಾನು ಕೆನಡಾ ಮತ್ತು ಅಮೆರಿಕಾದ ಅನೇಕ ಟಿ.ವಿ. ಕಾರ್ಯಕ್ರಮಗಳನ್ನು ನೋಡಿದ್ದೆ. ಆಗ ಕಪ್ಪು ಮುಖಗಳೇ ನನಗೆ ಟಿ.ವಿ.ಯಲ್ಲಿ ಕಾಣಲಿಲ್ಲ. 1970ರಲ್ಲಿ ನಾನು ಉತ್ತರ ಅಮೆರಿಕಾಗೆ ಹಿಂತಿರುಗಿದಾಗ ಫ್ಲಿಪ್ ವಿಲ್ಸನ್ ಎಂಬ ಆಫ್ರಿಕನ್-ಅಮೆರಿಕನ್ ಹಾಸ್ಯ ಕಲಾವಿದ ಟಿ.ವಿ. ಶೋಗಳಲ್ಲಿ ಬಹಳ ಜನಪ್ರಿಯನಾಗಿರುವುದನ್ನು ಕಂಡೆ. ಮುಂದೆ ಅಮೆರಿಕಾ ನೆಲದಲ್ಲೇ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಕಪ್ಪು ಜನರನ್ನು ಟಿ.ವಿ.ಯಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಮೆರಿಕಾ ದೇಶವೇ 38 ವರ್ಷಗಳ ನಂತರ ಕಪ್ಪು ಜನಾಂಗಕ್ಕೆ ಸೇರಿದ ಅಧ್ಯಕ್ಷನನ್ನು ಪಡೆಯಿತು.

ಇಂಡಿಯಾದ ಟಿ.ವಿ. ಚಾನಲ್‌ಗಳಲ್ಲಿ ದಲಿತರು ಯಾವುದಾದರೂ ಕಾರ್ಯಕ್ರಮದ ನಿರೂಪಕರಾಗಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದ್ದಾರೆಯೇ? ನನ್ನ ಸಂಪರ್ಕದಲ್ಲಿದ್ದ ಅನೇಕರನ್ನು ವಿಚಾರಿಸಿದೆ. ಇಲ್ಲ ಎಂಬ ಉತ್ತರ ಬಂತು. ಮಾಧ್ಯಮಗಳು ದಲಿತರನ್ನು ಮುಟ್ಟಿಸಿಕೊಂಡ ದಿನ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತೆಂದೇ ಅರ್ಥ.

ನನಗನ್ನಿಸುತ್ತಿದೆ ಆಫ್ರಿಕನ್-ಅಮೆರಿಕನ್ ಕಪ್ಪು ಜನ ತುಳಿದ ಕಷ್ಟದ ಹಾದಿಗಿಂತಲೂ ಇಂಡಿಯಾದಲ್ಲಿ ದಲಿತರ ಹಾದಿ ಕಡುಕಷ್ಟದಲ್ಲಿದೆ. ಇಲ್ಲಿ ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾಣುವುದು ಅಷ್ಟ ಸಲೀಸಲ್ಲ. ಇಲ್ಲಿ ಎಲ್ಲವೂ ಛಿದ್ರಗೊಂಡಿದೆ, ದಲಿತರಿಗೆ ಇಲ್ಲಿ ದಕ್ಕುವ ಸಂಪನ್ಮೂಲ ಕಮ್ಮಿಯಾದರೆ ತಾರತಮ್ಯ ಮುಗಿಲು ಮುಟ್ಟಿದೆ. ಸಂವಿಧಾನದ ಆಶಯಗಳು ಅಷ್ಟು ಸುಲಭವಾಗಿ ಜಾರಿಯಾಗಲಾರವೇನೋ. ಸಾಮಾಜಿಕ ನ್ಯಾಯದ ಮೇಲೆ ರಾಷ್ಟ್ರದ ಸ್ವ-ಹಿತಾಸಕ್ತಿಗಳು ನಿಂತರೆ ಮಾತ್ರ ಮಾಧ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ದಲಿತರನ್ನು ನಾವೆಲ್ಲ ಕಾಣಬಹುದೇನೋ.

(ರಾಬಿನ್ ಜೆಫ್ರಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪೂರ್‌ನ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಮತ್ತು ಏಷ್ಯಾ ಸಂಶೋಧನಾ ಸಂಸ್ಥೆಯಲ್ಲಿ ಸಂದರ್ಶಕ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನ ಜೆಫ್ರಿಯವರು 31ನೇ ಮಾರ್ಚ್ 1012ರಂದು ನವದೆಹಲಿಯ ರಾಜೇಂದ್ರ ಮಾಥೂರ್ ನೆನಪಿನ ಕಾರ್ಯಕ್ರಮದಲ್ಲಿ ಮಂಡಿಸಿದ ಭಾಷಣದ ಬರಹರೂಪ.)

ಪಬ್ಲಿಕ್ ಟಿವಿಯ ಡಬ್ಬಿಂಗ್ ಚರ್ಚೆ, ಅನಕೃ, ಭೈರಪ್ಪ ಮತ್ತು ಸಂಸ್ಕೃತಿಯ ಹುಸಿರಕ್ಷಣೆ

– ಆನಂದ್ ಅಶ್ವಿನಿ

ಕಳೆದ ಭಾನುವಾರ ಪಬ್ಲಿಕ್ ಟಿವಿಯ “ಬೆಂಕಿ-ಬಿರುಗಾಳಿ” ಸಂವಾದ ಕಾರ್ಯಕ್ರಮದಲ್ಲಿ ನಡೆದ ಡಬ್ಬಿಂಗ್ ಪರ-ವಿರೋಧದ ಚರ್ಚೆ ಅಂದುಕೊಂಡ ಮಟ್ಟಿಗೆ ವಾದಮಂಡನೆಗೆ ಪರ ವಿರೋಧ ಎರಡೂ ನೆಲೆಯ ಕಟಕಟೆಯಲ್ಲಿ ನಿಂತಿದ್ದವರಿಗೆ ಸಾಧ್ಯವಾಗದೇ ಇದ್ದುದು ಬೇಸರದ ಸಂಗತಿ. ಪಬ್ಲಿಕ್ ಟಿವಿಯಲ್ಲಿ ನೇರಪ್ರಸಾರವಾದ ಈ ಸಂವಾದವನ್ನು ಟೀವಿಯಲ್ಲಿ ನೋಡಿದಮೇಲೆ ಒಂದು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಳ್ಳಲೂ ಸಹ ಇವತ್ತಿನ ಸಿನಿಮಾಮಂದಿ ತಕ್ಕಷ್ಟು ತಯಾರಿಯಿಲ್ಲದೆ ಕನ್ನಡ, ಸಂಸ್ಕೃತಿ, ನಾಡು, ನೆಲ ಹೋರಾಟದಂತಹ ಎಮೋಷನಲ್ ಟ್ರಿಗರ್‌ಗಳನ್ನು ಒತ್ತಿಕೊಂಡು ಸಮಯ ವ್ಯರ್ಥ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಕೂಗೆದ್ದಿರುವ ಡಬ್ಬಿಂಗ್ ಪರ ವಾದಮಂಡನೆಗಿಳಿದ ಪತ್ರಕರ್ತ ದಿನೇಶ್ ಕುಮಾರ್ ಮೇಲೆ ವೈಯಕ್ತಿಕ ವ್ಯಂಗ್ಯದಂತಹ ಮೊಂಡು ಬಾಣಗಳನ್ನು ಪ್ರಯೋಗಿಸುವಷ್ಟರ ಮಟ್ಟಿಗೆ ಸಿನಿಮಾಮಂದಿ ಹತಾಶರಾಗಿದ್ದುದು ಗೊಂದಲದ ಗೂಡಾಗಿದ್ದ ಕಾರ್ಯಕ್ರಮದಲ್ಲಿ ಎದ್ದು ಕಂಡು ಬಂತು.

ಡಬ್ಬಿಂಗ್ ವಿರೋಧಕ್ಕೆ ತಮ್ಮ ಸಮರ್ಥನೆಗಳನ್ನು ನೀಡಲು ಕನ್ನಡ ಸಿನಿಮಾಕ್ಷೇತ್ರದಿಂದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ಡಾ, ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾರಾ. ಗೋವಿಂದ್, ನಾಯಕನಟ ಪ್ರೇಮ್ ಕಟಕಟೆಯಲ್ಲಿ ನಿಂತಿದ್ದರೆ ಇನ್ನೊಂದು ಬದಿಯಲ್ಲಿ ಡಬ್ಬಿಂಗ್ ಪರ ವಾದಮಂಡನೆಗೆ ಪತ್ರಕರ್ತ ದಿನೇಶ್ ಕುಮಾರ್ ತಮ್ಮ ಮೊನಚಾದ ಹಾಗೂ ತರ್ಕ ಆಧಾರಿತ ಮಂಡನೆಗಳ ಕೂರಂಬುಗಳನ್ನು ಒಬ್ಬೊಂಟಿಯಾಗಿಯೇ ಅವರತ್ತ ಬೀಸುತ್ತಿದ್ದುದು ಕಂಡು ಬಂತು. ಅಷ್ಟೋ ಇಷ್ಟೋ ಚರ್ಚೆಯಾದ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಡಬ್ಬಿಂಗ್ ಪರ ಕನ್ನಡ ಕಾರ್ಯಕರ್ತರು ಮತ್ತು ಡಬ್ಬಿಂಗ್ ವಿರೋಧಿ ಶಿವರಾಜಕುಮಾರ್ ಅಭಿಮಾನಿ ಸಂಘದ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಯ ರಭಸದಲ್ಲಿ ಚರ್ಚೆ ದಾರಿ ತಪ್ಪಿತು. ಬೌದ್ಧಿಕ ಸಂವಾದದ ಹೊಳಹುಗಳಲ್ಲಿ ಡಬ್ಬಿಂಗ್‌ನ ಅವಶ್ಯಕತೆ ಮತ್ತು ಅನವಶ್ಯಕತೆಗಳ ಬಗ್ಗೆ ಬೆಳಕು ಚೆಲ್ಲಬಹುದಾಗಿದ್ದ ಈ ಬೆಂಕಿ-ಬಿರುಗಾಳಿ ಕಾರ್ಯಕ್ರಮದ ಉದ್ದೇಶ ಸಫಲವಾಗಲಿಲ್ಲವಾದರೂ ಇಷ್ಟರವರೆಗೆ ತಾವು ಆಡಿದ್ದೇ ಮಾತು ಮಾಡಿದ್ದೇ ಸಿನಿಮಾ ಎಂಬಂತೆ ವರ್ತಿಸುತ್ತಿದ್ದ ಸಿನಿಮಾಮಂದಿಯ ಅಹಂಗೆ ಡಬ್ಬಿಂಗ್ ಪರ ಇರುವ ದನಿಗಳ ಅಗಾಧ ವಿಸ್ತಾರದ ಸಮಾನಮನಸ್ಕರು ಸರಿಯಾದ ಕೊಡಲಿಪೆಟ್ಟನ್ನೇ ನೀಡಿರುವುದು ಸ್ವಾಗತಾರ್ಹವಾದ ಸಂಗತಿ.

ಚಿತ್ರರಂಗದ ಪ್ರತಿನಿಧಿಗಳು ತಮ್ಮ ವಾದಮಂಡನೆಯಲ್ಲಿ ಬಳಸಿದ ಬಹಳಷ್ಟು ವಿಷಯಗಳು ಅವರ ವಿರುದ್ಧವೇ ತಿರುಗುಬಾಣವಾಗುವಷ್ಟು ಪೇಲವವೂ ತಳಹದಿಯಿಲ್ಲವೂ ಆಗಿದ್ದುದು ಸಿನಿಮಾಮಂದಿಯ ಯೋಚನಾಗಡಿಗೆ ಬಿದ್ದಿರುವ ಕಟ್ಟುಪಾಡುಗಳ ದ್ಯೋತಕ. ಇಲ್ಲಿ ಸಿನಿಮಾ ವಲಯದವರು ಎತ್ತಿದ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾದರೆ ಮೊದಲಿಗೆ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ವಾದ ಮಂಡಿಸುತ್ತ ಡಬ್ಬಿಂಗ್ ವಿರೋಧ ಅ.ನ.ಕೃಷ್ಣರಾಯರಂತಹ ಸಾಹಿತ್ಯಿಕ ಹಿರಿಯರ ಪ್ರತಿರೋಧಗಳನ್ನು, ಭೈರಪ್ಪನವರ ಇತ್ತೀಚೆಗಿನ ವಿರೋಧವನ್ನೂ ಮುಂದು ಮಾಡುತ್ತಾರೆ. ಸಂಸ್ಸೃತಿಗೆ ಆಗುವ ಧಕ್ಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ, ಆಗಿನ ಶೈಶವಾವಸ್ಥೆಯ ಚಿತ್ರರಂಗಕ್ಕೆ ಬೇಕಾದ ಫೀಡಿಂಗ್ ಬಾಟಲಿಯ ಪೋಷಣೆಯ ಅವಶ್ಯಕತೆಗೆ ಪೂರಕವಾಗಿ ಖಂಡಿತವಾಗಿಯೂ ಡಬ್ಬಿಂಗ್ ನಿಷೇಧ ಆ ಕಾಲಕ್ಕೆ ಒಪ್ಪಬೇಕಾದ ವಿಷಯವೇ ಸರಿ. ಮಗು ಬೆಳೆದು ದೊಡ್ಡದಾಗಿ 45ರ ವಯಸ್ಸಿನಲ್ಲಿರುವಾಗಲೂ ಅದೇ ಫೀಡಿಂಗ್ ಬಾಟಲಿಯನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತ ತಿರುಗಬೇಕೆನ್ನುವ ವಾದ ನಗೆಪಾಟಲಿನ ಸಂಗತಿ ಎಂದು ದಿನೇಶ್ ಕುಮಾರ್ ಕುಟುಕಿದ್ದರಲ್ಲೂ ಅರ್ಥವಿತ್ತು.

ಇನ್ನೊಂದು ಸಂಗತಿ ಇಲ್ಲಿ ಸ್ಪಷ್ಟಪಡಿಸುವುದಾದರೆ ಇವತ್ತಿನ ಯಾವುದೇ ಕನ್ನಡ ಸಿನಿಮಾಪತ್ರಿಕೆಗಳನ್ನೋ, ಶುಕ್ರವಾರದ ಸಿನಿಮಾ ಪುರವಣಿಗಳನ್ನೋ, ಚಲನಚಿತ್ರ ಜಾಹಿರಾತುಗಳನ್ನೋ ನೋಡಿದರೆ ಅದರಲ್ಲಿ ಬಳಸಲಾದ ನಾಯಕಿಯರ ಮೈಮೇಲೆ ಒಂದೆಳೆಯ ಬಟ್ಟೆ ಮಾತ್ರವಿರುತ್ತದೆ. ಮನೆಮನಂದಿಯೆದುರು ಸಿನಿಮಾ ಪುರವಣಿಗಳನ್ನು ತೆರೆದು ನೋಡಲೇ ಮಜುಗರವೆನ್ನಿವಷ್ಟು ನಾಯಕಿಯರ ಅಂಗಾಂಗಪ್ರದರ್ಶನದ ಫೋಟೋಗಳು ಅದರೊಳಗೆ ತುಂಬಿ ತುಳುಕುತ್ತಿರುತ್ತವೆ, ಕನ್ನಡ ಚಿತ್ರಗಳಲ್ಲೂ ಬಿಕಿನಿ, ಟೂಪೀಸ್‌ಗಳ ಹಾಡುಗಳ ಪರಂಪರೆ ಶುರುವಾಗಿ ಯಾವುದೋ ಕಾಲವಾಗಿದೆ. ಅನಕೃ, ಭೈರಪ್ಪ, ಪ್ರೊ. ಜಿ.ಎಸ್.ಎಸ್ ಎಲ್ಲರೂ 40 ವರ್ಷಗಳಷ್ಟು ಹಿಂದೆಯೇ ಡಬ್ಬಿಂಗನ್ನು ವಿರೋಧಿಸಿ ಪ್ರತಿಪಾದಿಸಿದ್ದು ಬಿಕಿನಿ, ಟೂಪೀಸ್, ಅಂಗಾಂಗ ಪ್ರದರ್ಶನ, ಮಚ್ಚು ಲಾಂಗು, ಡವ್ವು, ಮಚ್ಚಾ, ಪೊಕರಿ ಥರದ ಸಂಸ್ಸೃತಿಯನ್ನಾ? ಎಂ.ಎಸ್. ರಮೇಶರೇ ಇತ್ತೀಚಿನ ತಮ್ಮ ಫ್ಲಾಪ್ ಚಿತ್ರ “ಶಂಕರ್ ಐ.ಪಿ.ಎಸ್”ನಲ್ಲಿ ನಾಯಕ ದುನಿಯಾ ವಿಜಯ್ ಗೆ ಬರಿಯ ಚಡ್ಡಿ ಹಾಕಿಸಿ, ನಟಿ ರಾಗಿಣಿಗೆ ಒಂದು ಶರ್ಟ್ ಮಾತ್ರ ತೊಡಿಸಿ ಮಾರಿಷಸ್ ಬೀಚಿನಲ್ಲಿ ಚಿತ್ರೀಕರಿಸಿದ ಕಾಮೋದ್ರೇಕಕಾರಿ ಹಾಡು ಕನ್ನಡ ಸಂಸ್ಕೃತಿಯೇ? ತಮಿಳಿನ ಬಿಚ್ಚುಗಾತಿಯೆಂದೇ ಹೆಸರಾದ ನಮಿತಾ ಎಂಬ ನಟಿಯ “ಬೆಂಕಿ ಬಿರುಗಾಳಿ” ಚಿತ್ರದ ಜಾಹಿರಾತಿನಲ್ಲಿ ಖ್ಯಾತ ನಿದೇಶಕರೊಬ್ಬರ ನಾಯಕಿಪುತ್ರಿಯೊಬ್ಬಾಕೆ ಮೈಮೇಲೆ ಒಂದೂ ನೂಲೂ ಇಲ್ಲದೆ ಮೈತುಂಬ ಕೆಸರು ಬಳಿದುಕೊಂಡು ಫೋಸು ಕೊಟ್ಟಿದ್ದರು. ಇದೇ ನಟಿಯ “ಕಂಠೀರವ” ಚಿತ್ರಕ್ಕೂ ಆಕೆ ಬಿಕಿನಿ ಉಡುಗೆ ತೊಟ್ಟಿದ್ದು, ಪೂಜಾಗಾಂಧಿಯೆಂಬ ಆಮದುನಟಿ ಸೊಂಟದಿಂದ ಮೇಲೆ ಬಟ್ಟೆ ಧರಿಸದೆ “ದಂಡುಪಾಳ್ಯ” ಚಿತ್ರದ ಜಾಹಿರಾತುಗಳಲ್ಲಿ ಫೋಸು ಕೊಟ್ಟಿದ್ದು… ಇತ್ತೀಚೆಗಿನ ಕಠಾರಿವೀರ ಚಿತ್ರವನ್ನು ಇಲ್ಲಿನ ಕಾರ್ಮಿಕರನ್ನು ಬಳಸದೆ ಸಂಪೂರ್ಣವಾಗಿ ಆಂಧ್ರಪ್ರದೇಶದಲ್ಲಿ ಚಿತ್ರೀಕರಿಸಿದ್ದು, ಇದನ್ನು ಮಾಡಿಕೊಂಡು ಕನ್ನಡ ಚಲನಚಿತ್ರರಂಗವನ್ನು ಉದ್ದಾರ ಮಾಡಿ ಎಂದು ಅನಕೃ, ಭೈರಪ್ಪ, ಪ್ರೊ.ಜಿಎಸ್ಸೆಸ್ ಏನಾದರೂ ಸಿನಿಮಾಮಂದಿಗೆ ಹೇಳಿದ್ದರೇ?

ಪರಭಾಷಾ ವ್ಯಾಮೋಹದ ಬಗ್ಗೆ ಪರಭಾಷೆಯ ನೆರೆರಾಜ್ಯಗಳ ಡಬ್ಬಿಂಗ್ ಆಕ್ರಮಣದ ಬಗ್ಗೆ ಭಾಷಣ ಹೊಡೆಯುವವರು ಡಬ್ಬಿಂಗ್ ಬೇಕು ಎನ್ನುವರು ಪರಭಾಷಾ ವ್ಯಾಮೋಹಿಗಳು ಎಂದು ಕಾರ್ಯಕ್ರಮದಲ್ಲಿ ಫರ್ಮಾನು ಹೊರಡಿಸಿದರು. ಪರಭಾಷೆಯ ವ್ಯಾಮೋಹವಿರುವುದು ಸಿನಿಮಾ ನೋಡುವ ಕನ್ನಡಿಗರಿಗೋ ಅಥವಾ ಕನ್ನಡ ಸಿನಿಮಾಮಂದಿಗೋ ಎಂಬ ಕುರಿತು ಇಲ್ಲೊಂದಿಷ್ಟು ಸಾಕ್ಷ್ಯಗಳಿವೆ. ನಿರ್ದೇಶಕರ ಸಂಘದ ಅಧ್ಯಕ್ಷ ಎಮ್.ಎಸ್. ರಮೇಶರ ಮೊದಲ ನಿರ್ದೇಶನದ ಫ್ಲಾಪ್ ಚಿತ್ರ “ಶ್ರೀರಾಂ” ತೆಲುಗಿನ “ಇಂದ್ರ” ಚಿತ್ರದ ಸ್ಫೂರ್ತಿಯಿಂದ ತೆಗೆದದ್ದು. ಚಿತ್ರದ ಇಬ್ಬರೂ ನಾಯಕಿಯರು ತಮಿಳಿನವರು, ಇದೇ ನಿರ್ದೇಶಕರು ನಿರ್ದೇಶಿಸಿದ ವಾಲ್ಮೀಕಿ ಚಿತ್ರದ ನಾಯಕಿ ಹಿಂದಿಯಾಕೆ, ಕಾರ್ಯಕ್ರಮದಲ್ಲಿ ತೋಳೇರಿಸಿಕೊಂಡು ಕನ್ನಡ ಸಂಸ್ಕೃತಿ, ಸಿನಿಮಾ ಬಗ್ಗೆ ಕೂಗಾಡುತ್ತಿದ್ದ ಗೀತರಚನೆಕಾರ ನಾಗೇಂದ್ರಪ್ರಸಾದ್ ನಿದೇಶಿಸಿದ ಮೊದಲ ಚಿತ್ರ “ನಲ್ಲ” ತಮಿಳಿನ “ಮೂನ್ರಾಂಪಿರೈ” ಸ್ಪೂರ್ತಿಯಿಂದ ತೆಗೆದದ್ದು, ಅದರ ನಾಯಕಿಯೂ ತಮಿಳಿನಾಕೆ. ಎರಡನೆಯ ಫ್ಲಾಫ್ ಚಿತ್ರ “ಮೇಘವೇ ಮೇಘವೇ” ಚಿತ್ರದ ನಾಯಕಿ ಹಿಂದಿಯಾಕೆ. ನಾಯಕ ಪ್ರೇಮ್ ರ ಮೊದಲ ಚಿತ್ರದ ನಾಯಕಿಯೇ ತಮಿಳಿನಾಕೆ, ಹೊಂಗನಸು ಚಿತ್ರದ ಇಬ್ಬರು ನಾಯಕಿಯರೂ ತಮಿಳಿನವರು, ರಾಜೇಂದ್ರಸಿಂಗ್ ಬಾಬುರವರು ತಮ್ಮ ಮಗನ ಮೊದಲ ಫ್ಲಾಪ್ ಚಿತ್ರ “ಲವ್” (ಶೀರ್ಷಿಕೆಯೇ ಆಂಗ್ಲ) ಸಂಗೀತ ನಿರ್ದೇಶನಕ್ಕಾಗಿ ಬಳಸಿದ್ದು ಹಿಂದಿಯ ಅನ್ನುಮಲ್ಲಿಕ್‌ರನ್ನು. ತನ್ಮಚಿತ್ರ ಪ್ರೊಡಕ್ಷನ್ನ ಮಾಲೀಕರಾದ ಸಾರಾ ಗೋವಿಂದು ಹಾಲಿವುಡ್‌ನ “ಡ್ಯೂಯಲ್”ನಿಂದ ಪ್ರೇರಿತವಾಗಿ ನಿರ್ಮಿಸಿದ ಫ್ಲಾಪ್ ಚಿತ್ರ “ಮಿಂಚಿನ ಓಟ” ಚಿತ್ರದ ಖಳನಾಯಕ ಹಿಂದಿಯವ. ಇನ್ನೊಂದು ಫ್ಲಾಪ್ ಚಿತ್ರ ಲಾಲಿಹಾಡು ಚಿತ್ರದ ನಾಯಕಿ ಮಲಯಾಳಂ ನಟಿ. ರವಿಚಂದ್ರನ್ ಹಾಕಿಕೊಂಡು ನಿರ್ಮಿಸಿದ “ಕನಸುಗಾರ” ತಮಿಳಿನ ರಿಮೇಕು, ಡಬ್ಬಿಂಗ್ ವಿರುದ್ಧ ತೊಡೆತಟ್ಟಿದ ಶಿವರಾಜಕುಮಾರ್‌ರವರ ಇತ್ತೀಚಿಗಿನ ಚಿತ್ರದ ಹೆಸರು “ಅಂದರ್ ಬಾಹರ್” (ಅಪ್ಪಟ ಕನ್ನಡ ಸೊಗಡಿನ ಶೀರ್ಷಿಕೆ!). ಹೀರೋಯಿನ್ ಮಲಯಾಳಂನಾಕೆ. ಇಲ್ಲಿ ಪರಭಾಷಾ ವ್ಯಾಮೋಹ, ಪರಭಾಷಾ ನಾಯಕಿಯರ ವ್ಯಾಮೋಹ ಯಾರದ್ದು? ಸಿನಿಮಾ ಮಂದಿಯದ್ದಾ? ಅಥವಾ ಕನ್ನಡ ಸಿನಿಮಾ ನೋಡುಗನದ್ದಾ ?

ಡಬ್ಬಿಂಗ್ ಸಿನಿಮಾಗಳು ಬಂದರೆ ಅಲ್ಲಿನ ಸಂಸ್ಕೃತಿ ಇಲ್ಲಿಗೆ ಒಗ್ಗುವುದಿಲ್ಲ ಎಂಬುದಕ್ಕೆ ಎಂ.ಎಸ್. ರಮೇಶರು ತಮಿಳುನಾಡಿನ ಗ್ರಾಮೀಣಭಾಗದ ಜಾತಿ ವೈಷಮ್ಯದ ನೈಜಕಥೆ ಆಧರಿಸಿದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ತಮಿಳಿನ “ಪರುತ್ತಿ ವೀರನ್” ಚಿತ್ರದ ಕ್ಲೈಮಾಕ್ಸ್‌ನಲ್ಲಿನ ಅತ್ಯಾಚಾರದ ಸನ್ನಿವೇಶವನ್ನು ಉದಾಹರಿಸುತ್ತಾರೆ. “ಸಾಕು ಬಿಡ್ರೋ, ನೋಯ್ತಾ ಇದೆ ಕಣ್ರೋ” ಎನ್ನುವ ಪದಗಳನ್ನು ಇಲ್ಲಿ ನಾವು ಡೈಲಾಗ್ ರೈಟರುಗಳು ಬರೆಲಾಗುತ್ತದೆಯೇ? ಇಲ್ಲಿನ ನೆಲಕ್ಕೆ ಅದು ಸೂಕ್ತವೇ? ಎನ್ನುತ್ತಾರೆ. ತೆಲುಗಿನ ಇಂದ್ರ, ತಮಿಳಿನ ಮೂನ್ರಾಂಪಿರೈ, ಹಾಲಿವುಡ್ಡಿನ ಡ್ಯೂಯಲ್, ಇತ್ತೀಚೆಗೆ ತಾನೇ ತೆರೆಕಂಡು ಮಕಾಡೆಬಿದ್ದ ಈ ನೆಲದ ಕಾನೂನಿಗೆ ಸಂಬಂಧವೇ ಪಡದ ದಶಮುಖ ಚಿತ್ರಗಳಿಗೆ ಡೈಲಾಗು ಬರೆದವರು ಕನ್ನಡದ ಸಿನಿಮಾಮಂದಿಯೇ ಅಲ್ಲವೇ ರಮೇಶರೇ? ತಮಿಳು ಚಿತ್ರನಾಯಕರ ಮೀಸೆ ಗಡ್ಡ, ಪೇಟ-ಪಂಚೆ, ಸಾರೋಟು-ಕುದುರೆಗಳ ಬಣ್ಣಗಳ ಸಮೇತ ರಿಮೇಕು ಮಾಡಿದ ಕನ್ನಡ ಚಿತ್ರಗಳಿಗೆ ಡೈಲಾಗು ಬರೆಯುವಾಗ ಎಂ.ಎಸ್. ರಮೇಶರಿಗೆ ಈ ಪ್ರಜ್ಞೆ ಎಲ್ಲಿ ಮಾಯವಾಗಿತ್ತು? ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಬೇಕಿದೆ.

ಡಬ್ಬಿಂಗ್ ಮದ್ಯಪಾನಕ್ಕೆ ಸಮ, ಅದರಿಂದ ಒಂದು ರಾಜ್ಯದ ಸಿನಿಮಾ ಕ್ಷೇತ್ರದ ಆರೋಗ್ಯ ಹದಗೆಡುತ್ತದೆ, ಡಬ್ಬಿಂಗ್ ಎನ್ನುವುದು ಪಿಶಾಚಿ ಅದು ಎಲ್ಲರನ್ನೂ ಹಾಳು ಮಾಡುತ್ತದೆ, ಕಾರ್ಮಿಕರಿಗೆ ಕೆಲಸ ಕಳೆಯುತ್ತದೆ, ಕನ್ನಡಭಾಷೆಯ ಒಟ್ಟಂದ ಹಾಳಾಗುತ್ತದೆ ಎಂದು ಡಬ್ಬಿಂಗಿನ ಕುರಿತು ಸಾಲುಸಾಲು ಆರೋಪಗಳನ್ನು ಕಾರ್ಯಕ್ರಮದಲ್ಲಿ ಡಬ್ಬಿಂಗ್ ಪರವಿದ್ದವರು ಮಾಡಿದರು. ಇವೆಲ್ಲವೂ ನಿಜವೇ, ಮತ್ತು ಡಬ್ಬಿಂಗ್ ಸಂಸ್ಕೃತಿ ಇನ್ನೊಂದು ನೆಲದ ಸಂಸ್ಕೃತಿಯನ್ನು ಕೊಂದು ಹಾಕುತ್ತದೆ ಎಂದಾದಲ್ಲಿ, ಕನ್ನಡದ ಉಪೇಂದ್ರ ನಟಿಸಿದ ಮಸ್ತಿ, ಸೂಪರ್ ಸೇರಿದಂತೆ ಬಹಳಷ್ಟು ನಟರ ಚಿತ್ರಗಳನ್ನು ತೆಲುಗು, ಮಲಯಾಳಂ, ಹಿಂದಿ, ತಮಿಳಿಗೆ ಈ ಮಂದಿಯೇಕೆ ಡಬ್ಬಿಂಗ್ ಮಾಡುತ್ತಿದ್ದಾರೆ? ಕನ್ನಡ ಚಿತ್ರರಂಗದವರು ತೆಲುಗು ತಮಿಳು ಮಲಯಾಳಂ ಚಿತ್ರರಂಗದ ಸಂಸ್ಕೃತಿಯನ್ನು ಕೊಲ್ಲಬಹುದೇ? ಅಲ್ಲಿನ ಕಾರ್ಮಿಕರ ಕೆಲಸವನ್ನು ಕಳೆಯಬಹುದೇ? ಅಲ್ಲಿನ ನೇಟಿವಿಟಿಗೆ ಅಪಾಯ ತಂದೊಡ್ಡಬಹುದೇ? ಡಬ್ಬಿಂಗ್ ಅನ್ನುವುದೇ ಹೆಂಡಕುಡಿಯುವುದಕ್ಕೆ ಸಮವೆಂದು ಹೇಳುವ ಮಂದಿಯೇ ಇತರೆ ರಾಜ್ಯಗಳಿಗೆ ತಮ್ಮ ಭಾಷೆಯ ಚಿತ್ರಗಳ ಡಬ್ಬಿಂಗ್ ಹೆಂಡವನ್ನು ಕುಡಿಸಬಹುದೇ? ಈ ಡಬಲ್ ಸ್ಟಾಂಡರ್ಡ್ ಯಾವ ರೀತಿ ಸಮರ್ಥನೀಯ? ಈ ಸಲದ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ “ಸೂಪರ್”ನಲ್ಲಿ ನಟಿಸಿದ್ದ ಪರಭಾಷೆಯ ನಟನಟಿಯರ ಪಟ್ಟಿ ನೋಡಿದರೆ ಮಲಯಾಳಂನ ನಯನತಾರಾ ನಾಯಕಿ, ತೆಲುಗಿನ ಹಾಸ್ಯನಟರಾದ ಆಲಿ ಮತ್ತು ವೇಣು, ವಿಲನ್ ಆಗಿ ತಮಿಳಿನ ಕಾದಲ್‌ಸತ್ಯವೇಲು.. ಪಟ್ಟಿ ಮುಂದುವರೆಯುತ್ತದೆ.. ಯಾರ ಸಂಸ್ಕೃತಿಯನ್ನು ರಕ್ಷಣೆ ಮಾಡಲಿಕ್ಕೆ ತೆಲುಗು ಮಲಯಾಳಂ ಮಿಶ್ರಿತ ಈ ಸ್ಯಾಂಡ್ವಿಚ್ ತಾರಾಗಣ? ಜೇಮ್ಸ್ ಬಾಂಡ್, ಅರ್ನಾಲ್ಡ್ ಸ್ಕಾರ್ಜ್ನೆಗ್ಗರ್ ಬಾಯಲ್ಲಿ ಕನ್ನಡ ಹೇಳಲು ಹಾಸ್ಯಾಸ್ಪದವಾಗುತ್ತದೆ ಎನ್ನುವ ಕನ್ನಡ ಸಿನಿಮಾಮಂದಿಗೆ ತೆಲುಗಿನ ಹಾಸ್ಯನಟರಾದ ಆಲಿ ಮತ್ತು ವೇಣುರವರ ಬಾಯಲ್ಲಿ, ಪರಭಾಷಾ ನಾಯಕಿಯರ ಬಾಯಲ್ಲಿ ಮೊಳಗುವ ಕನ್ನಡದ ಕೆಟ್ಟ ಉಚ್ಛಾರ ಕರ್ಣಾನಂದಕರವೇ?

ಕೊನೆಯಲ್ಲಿ ನಾಯಕ ಪ್ರೇಮ್ ಅವರು ತೀವ್ರ ಹತಾಶರಾದವರಂತೆ ಕನ್ನಡ ಚಿತ್ರವೀಕ್ಷಕರಿಗೆ “ಡಬ್ಬಿಂಗ್ ಚಿತ್ರಗಳ ಮೂಲಕ ಪರಭಾಷಾ ನಾಯಕರು ಇಲ್ಲಿ ಜನಪ್ರಿಯರಾದರೆ ನಾವೆಲ್ಲಿಗೆ ಹೋಗಬೇಕು, ಏನು ಮಾಡಬೇಕು” ಎಂಬ ಬಹುಮುಖ್ಯ ಪ್ರಶ್ನೆಯನ್ನೆತ್ತಿದರು. ಡಬ್ಬಿಂಗ್ ವಿರೋಧಿಸುತ್ತಿರುವರ ಹಿಡನ್ ಭಯವೂ ಪ್ರೇಮ್ ಕೇಳಿದ ಪ್ರಶ್ನೆಯಲ್ಲಿದೆ, “ಗುಣಮಟ್ಟದ ಚಿತ್ರಗಳು ಪರಭಾಷೆಯಿಂದ ಕನ್ನಡದ ಮಾರುಕಟ್ಟೆಗೆ ಬಂದರೆ ಕಳಪೆ ಚಿತ್ರಗಳನ್ನು ಸುತ್ತುತ್ತಿರುವ ಇಲ್ಲಿನ ಸೋಕಾಲ್ಡ್ ಸಂಸ್ಕೃತಿ ರಕ್ಷಕರು ಮತ್ತು ಹೊಸ ಅಲೆಗೆ ಜಾಗವನ್ನೇ ಬಿಡದಂತೆ ತಳವೂರಿಕೊಂಡು ಕುಳಿತಿರುವ ನಿರ್ದೇಶಕರು ಮತ್ತು 50+ ವಯಸ್ಸಿನ ನಾಯಕರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು” ಇದಷ್ಟೇ ಡಬ್ಬಿಂಗ್ ವಿರೋಧಿಸುತ್ತಿರುವವರ ಅಸಲು ಭಯ. ಜೊತೆಗೆ ಚಿತ್ರರಂಗದಲ್ಲಿ ಆದಿಕಾಲದಿಂದ ಝಾಂಡಾ ಊರಿಕೊಂಡು ಕುಳಿತಿರುವವರ ಬುಡಕ್ಕೇ ಬಿಸಿನೀರು ಬಿಟ್ಟಂತೆ ಡಬ್ಬಿಂಗ್ ಸಿನಿಮಾಗಳು ಈ ಪರಿ ದಿಗಿಲುಂಟುಮಾಡಿರುವುದು ಪಟ್ಟಭದ್ರರ ಪಾಳೇಗಾರಿಕೆಯ ಪಾಳೇಪಟ್ಟಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸತೊಡಗಿವೆ, ಸುಧಾ ಪತ್ರಿಕೆ ಡಬ್ಬಿಂಗ್ ವಿವಾದದ ಬಗ್ಗೆ ಮುಖಪುಟದ ವರದಿ ಪ್ರಕಟಿಸುತ್ತಿದೆ. ಈ ಹಿಂದಿನ ಡಬ್ಬಿಂಗ್ ತಿಕ್ಕಾಟಗಳು ಈ ಮಟ್ಟಕ್ಕೆ ಯಾವುದೂ ಹೋಗಿರಲಿಲ್ಲ, ಆದರೆ ಈ ಸಲದ ಡಬ್ಬಿಂಗ್ ಸಂಘರ್ಷಕ್ಕೆ ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳೂ, ಕನ್ನಡಪರ ಮನಸ್ಸುಗಳೂ, ಬರಹಗಾರರು, ಪತ್ರಕರ್ತರು ಮತ್ತು ದೊಡ್ಡಮಟ್ಟದ ಯುವ ಸಮೂಹ ದನಿ ತೆಗೆದಿದೆ. ಇದು ಸಿನಿಮಾ ನೋಡುಗ ಈಗ ಪ್ರಬುದ್ಧನಾಗಿರುವುದರ ಮತ್ತು “ಕೊಟ್ಟಿದ್ದನ್ನು ಮಾತ್ರ ನೋಡು” ಎಂಬ ಕನ್ನಡ ಸಿನಿಮಾಮಂದಿಯ ಕಟುಧೋರಣೆಗೆ ಬಿದ್ದ ಪರಿಣಾಮಕಾರಿ ಏಟಾಗಿರುವುದಂತೂ ಸತ್ಯ.

ಇವೆಲ್ಲದರ ನಡುವೆ.. ಡಬ್ಬಿಂಗ್ ಅವಶ್ಯಕತೆಯ ಬಗ್ಗೆ ದೊಡ್ಡಮಟ್ಟದ ಹುಯಿಲು ಏಳಲು ಕಾರಣವಾದ “ಸತ್ಯಮೇವ ಜಯತೆ” ಭಾನುವಾರ ಪ್ರಸಾರವಾಗಿದೆ. ಇಡೀ ಭಾರತೀಯ ಟಿವಿ ರಂಗದಲ್ಲಿ ಹಿಂದೆಂದೂ ನಿರ್ಮಾಣವಾಗದ ಮತ್ತು ಈ ವಲಯವು ಇಲ್ಲಿಯವರೆಗೂ ಮುಟ್ಟಲಿಕ್ಕೇ ಹೋಗದ 13 ಸಾಮಾಜಿಕ ಪಿಡುಗುಗಳ ಕುರಿತ ಸತ್ಯಮೇವ ಜಯತೆಯ ಮೊದಲಕಂತೇ ಹೃದಯಸ್ಪರ್ಶಿಯಾಗಿತ್ತು. ನೋಡಿದವರೆಲ್ಲರ ಕಣ್ಣಲ್ಲೂ ನೀರು ಜಿನುಗಿಸುವಲ್ಲಿ ಅಮೀರ್ ಖಾನ್‌ರ ಸಾಮಾಜಿಕ ಬದ್ದತೆ ಯಶಸ್ಸಾಗಿದೆ. ತನ್ನ ನಿರ್ಮಾಣದ ತಲಾಶ್ ಮತ್ತು ಧೂಮ್ 3 ಚಿತ್ರಗಳ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸ್ಥಗಿತಗೊಳಿಸಿ ಸತ್ಯಮೇವ ಜಯತೆಯ ಮೂಲಕ ದೇಶದಲ್ಲಿ ಸಾಮಾಜಿಕ ಪಿಡುಗುಗಳತ್ತ ದೊಡ್ಡಮಟ್ಟದ ಜಾಗೃತಿ ನಿರ್ಮಿಸಲು ಹೊರಟಿರುವ ಅಮೀರ್ ಖಾನ್ ನಿಜಕ್ಕೂ ಅಭಿನಂದನೆಗೆ ಅರ್ಹರು. ಇಂತಹದೊಂದು ಜನಪರ ಕಾಳಜಿಯ ಕಾರ್ಯಕ್ರಮವನ್ನು ನಿರ್ಮಿಸುವ ಒಳ್ಳೆಯ ಬುದ್ದಿ ಕರ್ನಾಟಕದ ಟಿವಿ ನಿರ್ಮಾಪಕರಿಗೂ, ಸಮಕಾಲೀನ ಸಾಮಾಜಿಕ ತಲ್ಲಣಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳನ್ನು ಮನರಂಜನಾತ್ಮಕ ಚಿತ್ರಗಳಲ್ಲೂ ಅಳವಡಿಸಿಕೊಳ್ಳುವ ಒಳ್ಳೆಯ ಬುದ್ದಿ ಕನ್ನಡ ಚಿತ್ರರಂಗದವರಿಗೂ ಆದಷ್ಟು ಬೇಗ ಬರಲಿ ಎಂಬ ಆಶಯವಷ್ಟೇ ಕನ್ನಡ ಸಿನಿಮಾ ನೋಡುಗರದ್ದು.