Monthly Archives: May 2012

ಸಚಿವ ಅಶೋಕ ಮತ್ತು ಜಯಕುಮಾರ್ ಹಿರೇಮಠ

– ಬಿ.ಎಸ್. ಕುಸುಮ

ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಬೇಲಿಯೇ ಎದ್ದು ಹೋಲ ಮೇಯ್ದಂತೆ ಆಗಿದೆ. ಕಾನೂನು ಮತ್ತು ಸಂವಿಧಾನದ ನೀತಿ-ನಿರೂಪಣೆಗಳಿಗೆ ಅಧಿಕಾರಸ್ಥ ರಾಜಕಾರಣಿಗಳು ಕವಡೆ ಕಾಸಿನ ಕಿಮ್ಮತ್ತೂ ನೀಡದೆ ತಮಗೆ ಪ್ರಜೆಗಳು ನೀಡಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂದು ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

ಉದ್ಯಾಯನಗರಿಯ ಅಭಿವೃದ್ದಿಗಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) 1978ರಲ್ಲಿ ಲೊಟ್ಟೆಗೊಲ್ಲಹಳ್ಳಿ ಬಳಿ ಸ್ವಾಧೀನ ಪಡೆಸಿಕೊಂಡಿದ್ದ ಜಮೀನುಗಳಲ್ಲಿ ಸರ್ವೆ ನಂಬರ್ 10\1 ರಲ್ಲಿ 9 ಗುಂಟೆ ಹಾಗೂ 10\11\F ರಲ್ಲಿ 14 ಗುಂಟೆ ಜಮೀನನ್ನು ಹಾಲಿ ಮಂತ್ರಿ ಅರ್.ಅಶೋಕ ಕಾನೂನುಬಾಹಿರವಾಗಿ ಕೊಂಡುಕೊಂಡು ನಂತರ ಅದನ್ನು ಡಿ-ನೋಟಿಫೈ (ಭೂಸ್ವಾಧೀನ ಪ್ರಕ್ರಿಯೆಯಿಂದ ಬಿಡಿಸಿಕೊಂಡಿರುವುದು) ಮಾಡಿಸಿಕೊಂಡಿರುವ ಆರೋಪಕ್ಕೆ ಸಂಬಂದಿಸಿದಂತೆ ಈ ಹಿಂದೆ ವಿಜಯನಗರ ನಿವಾಸಿಯಾದ ಮಂಜುನಾಥ್ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ಆದರೆ ಅವರು ಈ ಮೊಕದ್ದಮೆ ವಿಚಾರಣೆಯ ಹಂತದಲ್ಲಿದ್ದಾಗಲೇ ದೂರನ್ನು ಹಿಂದಕ್ಕೆ ಪಡೆದಿದ್ದರು. ನಂತರ ಜಯಕುಮಾರ್ ಹಿರೇಮಠ್ ಎನ್ನುವವರು ರಾಜ್ಯಪಾಲರ ಅನುಮತಿ ಪಡೆದು 20.10.2011ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದರು. ಹಿರೇಮಠರಿಗೆ ಈ ದೂರಿನಲ್ಲಿ ವಕೀಲರಾಗಿರುವವರು ರಾಜ್ಯ ಬಿ.ಜೆ.ಪಿ.ಯ ಮಾಜಿ ಅಧ್ಯಕ್ಷರೂ, ಮಾಜಿ ಶಾಸಕರೂ ಆಗಿರುವ ಎ.ಕೆ.ಸುಬ್ಬಯ್ಯನವರು, ಮತ್ತವರ ಪುತ್ರ ಪೊನ್ನಣ್ಣ.

ಬೆಂಗಳೂರು ನಗರ ಜಿಲ್ಲೆಯ ಲೊಟ್ಟೆಗೊಲ್ಲಹಳ್ಳಿ ಬಳಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) ಸ್ವಾಧೀನ ಪಡೆಸಿಕೊಂಡಿದ್ದ ಸರ್ವೆ ನಂಬರ್ 10\1 ರಲ್ಲಿ 9 ಗುಂಟೆ ಹಾಗೂ 10\11\F ರಲ್ಲಿ 14 ಗುಂಟೆ ಜಮೀನನ್ನು ಶಾಮಣ್ಣ ಮತ್ತು ರಾಮಸ್ವಾಮಿಯವರಿಂದ ಸಚಿವ ಆರ್. ಅಶೋಕರವರು ಖರೀದಿಸಿ, 2009ರಲ್ಲಿ ತಮ್ಮ ಸಚಿವ ಪದವಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಡಿ-ನೋಟಿಫಿಕೇಷನ್ ಮಾಡಿಕೊಂಡಿರುವ ಹಿನ್ನೆಯಲ್ಲಿ ಸರ್ಕಾರಕ್ಕೆ 50 ಕೋಟಿ ನಷ್ಟವಾಗಿದೆ ಎಂದು ಈ ದೂರಿನಲ್ಲಿ ಹೇಳಲಾಗಿದೆ. ಆಗಿನ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಬಿಡಿಎ ಆಯಕ್ತರು ಸಹ ಈ ಡಿ-ನೋಟಿಫೈಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಗಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧೀನ ಅಧಿಕಾರಿಗಳ ಸಲಹೆಯನ್ನು ಧಿಕ್ಕರಿಸಿ ಡಿ-ನೋಟಿಫೈಗೆ ಅನುಮತಿ ನೀಡಿದ್ದರು. ಸಚಿವ ಅಶೋಕ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾರತೀಯ ದಂಡಸಂಹಿತೆ ಪ್ರಕಾರ ಸೆಕ್ಷನ್ 409, 420, ಹಾಗೂ 120(ಬಿ), ಭ್ರಷ್ಟಚಾರ ನಿಯಂತ್ರಣ ಕಾಯಿದೆ 13(11)(ಸಿ) ಮತ್ತು (ಬಿ) ಯ ಅಡಿಯಲ್ಲಿ ಅಪರಾಧವೆಸಗಿದ್ದಾರೆ, ಹಾಗೂ ಕರ್ನಾಟಕ ಭೂಸ್ವಾಧೀನ ನಿಯಂತ್ರಣ ಕಾಯಿದೆಯನ್ನು ಅಶೋಕ್ ಸಚಿವ ಸ್ಥಾನದಲ್ಲಿದ್ದು ಉಲ್ಲಂಘಿಸಿದ್ದಾರೆ, ಎಂದು ಹಿರೇಮಠರು ಆಪಾದಿಸಿದ್ದಾರೆ. ಈ ಹಿನ್ನೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 156(3) ಅಡಿಯಲ್ಲಿ ತನಿಖೆ ನಡೆಸಬೇಕು ಎಂಬುದು ದೂರುದಾರರಾದ ಹಿರೇಮಠ್‌ರವರ ಅಹವಾಲು ಆಗಿತ್ತು.

ಜಯಕುಮಾರ್ ಹಿರೇಮಠ್‌ ಮೂಲತ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಸಂತೆಬೆನ್ನೂರಿನವರು. ಜಯಕುಮಾರ್ ಹಿರೇಮಠ್‌‌‌ರ ತಂದೆಯವರಾದ ಚನ್ನಬಸಯ್ಯ ಹಿರೇಮಠ್‌ ವೃತ್ತಿಯಲ್ಲಿ ವೈದ್ಯರಾಗಿದ್ದರು. ಹಾಗೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಸಹ ಸಕ್ರಿಯವಾಗಿ ಭಾಗವಹಿಸಿದ್ದರು. ಇಂತಹ ಹೋರಾಟಗಾರರ ಮನೆತನದಿಂದ ಬಂದಿರುವ ಜಯಕುಮಾರ್ ಹಿರೇಮಠ್‌ ಚಿಕ್ಕವಯಸ್ಸಿನಲ್ಲೇ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿ ಒಮ್ಮೆ ಬಂಧನಕ್ಕೂ ಒಳಗಾಗಿದ್ದರು. ಈ ಹಿಂದೆ ಬಿಜೆಪಿಯಲ್ಲಿಯೂ ಕೂಡ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಹೆಲೆನ್ ಕೆಲರ್ ಅಂಗವಿಕಲರ ಸಂಘದ ಮುಖ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಜಯಕುಮಾರ್ ಹಲವು ಸಂಘಟನೆಗಳಲ್ಲಿ ಗುರುತಿಕೊಂಡಿದ್ದಾರೆ.

ಜಯಕುಮಾರ್ ಹಿರೇಮಠರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ನಂತರ ನ್ಯಾಯಾಲಯ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಲೋಕಯುಕ್ತ ಪೊಲೀಸರಿಗೆ ಆದೇಶಿಸಿತ್ತು, ಗೃಹಸಚಿವ ಆರ್.ಅಶೋಕ ವಿರುದ್ದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಹಿರೇಮಠರು ಹೇಳುವಂತೆ ಈ ಪ್ರಕರಣದಲ್ಲಿ ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ ಎಂದು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಕುಮಾರ್ ಹಿರೇಮಠ್‌ ಪರ ವಕೀಲರಾದ ಪೊನ್ನಣ್ಣ ಲೋಕಾಯುಕ್ತ ನ್ಯಾಯಾಲಯದಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಈಗ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರರಾವ್ ಈ ವರದಿಯ ಬಗ್ಗೆ ಮೇ 22 ರಂದು ತೀರ್ಪು ನೀಡುವುದಾಗಿ ಘೋಷಿಸಿದ್ದಾರೆ. ಅವರು ಲೋಕಾಯುಕ್ತ ಪೋಲಿಸರ ವರದಿಯನ್ನು ಸ್ವೀಕಾರ ಮಾಡಿ ದೂರನ್ನು ವಜಾಗೊಳಿಸುತ್ತಾರೋ, ಅಥವ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿ ಮುಂದಿನ ಕ್ರಮ ಏನು ಎಂದು ಪ್ರಕಟಿಸುತ್ತಾರೆ ಎನ್ನುವುದು ಅಂದು ಗೊತ್ತಾಗಲಿದೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 19)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿ ಕೊಲ್ಲಬೇಕು ಎಂದು ಅನಿಸಿದರೂ ಕೂಡ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದ ಕಾರಣ ಅವನು ಈ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆ ವೇಳೆಗಾಗಲೇ ಐವತ್ತು ವರ್ಷವನ್ನು ದಾಟಿದ್ದ ಕಾರ್ಬೆಟ್ ಮೊದಲಿನಂತೆ, ನರಭಕ್ಷಕ ಹುಲಿ ಅಥವಾ ಚಿರತೆಗಳನ್ನು ಬೆನ್ನಟ್ಟಿ ವಾರಗಟ್ಟಲೇ ಸರಿಯಾದ ಊಟ ತಿಂಡಿಯಿಲ್ಲದೆ, ರಾತ್ರಿಗಳನ್ನು ಮರದ ಮೇಲೆ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ಸರ್ಕಾರದ ಪರವಾಗಿ ರುದ್ರಪ್ರಯಾಗದ ಚಿರತೆಯನ್ನು ಬೇಟೆಯಾಡಲು ಮನವಿ ಪತ್ರ ಬರೆದ, ಜಿಲ್ಲಾಧಿಕಾರಿ ವಿಲಿಯಮ್ ಇಬ್ಸ್‌ಟನ್ ಕಾರ್ಬೆಟ್‌ನ ಆತ್ಮೀಯ ಗೆಳೆಯನಾಗಿದ್ದ.

ಇಬ್ಸ್‌ಟನ್ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ತನ್ನ ಪತ್ನಿ ಸಮೇತನಾಗಿ ಅಲ್ಲಿಗೆ ಬಂದಿದ್ದ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಕಾಲೇಜಿನ ಪದವೀಧರನಾದ ಆತ 1909 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ, ಭಾರತಕ್ಕೆ ಬಂದಿದ್ದ. ವಯಸ್ಸಿನಲ್ಲಿ ಕಾರ್ಬೆಟ್‌‍ಗಿಂತ ಹತ್ತುವರ್ಷ ಚಿಕ್ಕವನಾದರೂ ಆತನಿಗಿದ್ದ, ಮೀನು ಶಿಕಾರಿ, ಕುದುರೆ ಸವಾರಿ, ಮತ್ತು ಬಿಡುವಾದಾಗ ಕಾಡು ಅಲೆಯುವ ಹವ್ಯಾಸ ಇವುಗಳಿಂದ ಕಾರ್ಬೆಟ್‌ಗೆ ತೀರಾ ಹತ್ತಿರದ ಸ್ನೇಹಿತನಾಗಿದ್ದ. ಅಧಿಕಾರಿಗಳಲ್ಲಿ ವಿಂಧಮ್‌ನನ್ನು ಹೊರತುಪಡಿಸಿ, ಇಬ್ಸ್‌ಟನ್‌ನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕಾರ್ಬೆಟ್ ಅವನನ್ನು ಪ್ರೀತಿಯಿಂದ ಇಬ್ಬಿ ಎಂದು ಕರೆಯುತ್ತಿದ್ದ. ಈತ ಕೂಡ, ವಿಂದಮ್ ರೀತಿಯಲ್ಲಿ ಭಾರತೀಯರನ್ನು ತುಂಬು ಹೃದಯದಿಂದ ಕಾಣುತ್ತಿದ್ದುದ್ದು ಕಾರ್ಬೆಟ್‌ಗೆ ಆತನ ಬಗ್ಗೆ  ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು.

ಇಂತಹ ಸನ್ನೀವೇಶದಲ್ಲಿ ಇಬ್ಸ್‌ಟನ್ ಮನವಿಯನ್ನು ನಿರಾಕರಿಸಲಾರದೆ, ಚಿರತೆಯ ಬೇಟೆಗೆ ಹೊರಡಲು ಕಾರ್ಬೆಟ್ ನಿರ್ಧರಿಸಿದ. ಈ ಬಾರಿ ವಯಸ್ಸಿನ ಕಾರಣದಿಂದಾಗಿ ಬೇಟೆಗೆ ಹೋಗಲು ಅವನ ಸಹೋದರಿ ಮ್ಯಾಗಿ ಕೂಡ ಆಕ್ಷೇಪ ವ್ಯಕ್ತಪಡಿಸಿದಳು. ಅವಳನ್ನು ಸಮಾದಾನ ಪಡಿಸಿ. ಆರು ಮಂದಿ ಘರವಾಲ್ ಜನಾಂಗದ ಸೇವಕರು, ಹಾಗೂ ಬೇಟೆಯ ಸಂದರ್ಭದಲ್ಲಿ ತನ್ನ ಜೊತೆಯಿರಲು ನೆಚ್ಚಿನ ಭಂಟ ಮಾಧೂಸಿಂಗ್ ಜೊತೆ ಕಾರ್ಬೆಟ್ ಘರ್‍ವಾಲ್‌ನತ್ತ ಹೊರಟ. ಈ ಬಾರಿ ಜಿಲ್ಲಾಧಿಕಾರಿ ಇಬ್ಸ್‌‌‌ಟನ್ ಪ್ರಯಾಣಕ್ಕಾಗಿ ಕುದುರೆ ವ್ಯವಸ್ಥೆ ಮಾಡಿದ್ದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರ ಪ್ರಯಾಣ ತ್ರಾಸದಾಯಕವೆನಿಸಲಿಲ್ಲ.

ಕಾರ್ಬೆಟ್ ತನ್ನ ಸೇವಕರ ಜೊತೆ ಕುದುರೆ ಮತ್ತು ಕಾಲ್ನಡಿಗೆ ಮೂಲಕ ರಾಣಿಖೇತ್, ಅದ್‌ಬಾದ್ರಿ ಮತ್ತು ಕರ್ಣಪ್ರಯಾಗದ ಮೂಲಕ ರುದ್ರಪ್ರಯಾಗವನ್ನು ತಲುಪುವುದಕ್ಕೆ ಹತ್ತುದಿನಗಳು ಹಿಡಿಯಿತು. ಆ ವೇಳೆಗಾಗಲೇ ನರಭಕ್ಷಕ ಚಿರತೆ ಮತ್ತೊಬ್ಬನನ್ನು ಬಲಿತೆಗೆದುಕೊಂಡಿತ್ತು. ಕಮೇರ ಎಂಬ ಹಳ್ಳಿಯಲ್ಲಿ ಬದರಿನಾಥ್ ಯಾತ್ರಿಕರಿಗಾಗಿ ಹೊಟೇಲ್ ನಡೆಸುತ್ತಿದ್ದ ಪಂಡಿತನೊಬ್ಬನ ಮನೆಯಿಂದ ರಾತ್ರಿ ವೇಳೆ ಮಲಗಿದ್ದ ಓರ್ವ ಸಾಧುವನ್ನು ನರಭಕ್ಷಕ ಎಳೆದೊಯ್ದು ಕೊಂದುಹಾಕಿತ್ತು. ಆದಿನ ಸಂಜೆ ಇಪ್ಪತ್ತುಕ್ಕೂ ಹೆಚ್ಚು ಮಂದಿ ಇದ್ದ ಯಾತ್ರಿಕರು ಮಳೆಯ ಕಾರಣ ಪ್ರಯಾಣ ಮುಂದುವರಿಸಲಾರದೆ, ಪಂಡಿತನಲ್ಲಿ ವಸತಿ ವ್ಯವಸ್ಥೆಗೆ ಆಶ್ರಯ ಕೋರಿದ್ದರು. ಗುಡ್ಡಗಳ ಒರಟು ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಸುಮಾರು ಸುತ್ತಲೂ ಎಂಟು ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಿ ತಗಡಿನ ಶೀಟ್ ಹೊದಿಸಿದ್ದ ಅವನ ಹೊಟೇಲ್ ಹಿಂಭಾಗದ ಕೋಣೆಯನ್ನು ಪಂಡಿತ ಆ ರಾತ್ರಿ ಯಾತ್ರಿಕರಿಗೆ ತಂಗಲು ನೀಡಿದ್ದ. ಕಿಟಕಿ ಬಾಗಿಲುಗಳಿಲ್ಲದ ಆ ಕೋಣೆಗೆ ಹಲವೆಡೆ ಬೆಳಕು ಬರಲು ಗೋಡೆಯಲ್ಲಿ ದೊಡ್ಡ ಮಟ್ಟದ ರಂಧ್ರಗಳನ್ನು ಹಾಗೇ ಬಿಡಲಾಗಿತ್ತು. ಬಾಗಿಲಿಗೆ ತಗಡಿನ ಒಂದು ಹೊದಿಕೆಯನ್ನು ಮುಚ್ಚಿ ಅದು ಗಾಳಿಗೆ ಬೀಳದಂತೆ ಕಲ್ಲನ್ನು ಅದಕ್ಕೆ ಒರಗಿಸಿ ಇಡಲಾಗಿತ್ತು. ನರಭಕ್ಷಕ ಆ ರಾತ್ರಿ ಯಾವ ಸುಳಿವು ಸಿಗದಂತೆ ಬಾಗಿಲಿನ ಕಲ್ಲನ್ನು ಪಕ್ಕಕ್ಕೆ ಸರಿಸಿ, ಒಳಗೆ ಪ್ರವೇಶ ಮಾಡಿ, ಕೋಣೆಯೊಳಗೆ ಮಲಗಿದ್ದ ಇಪ್ಪತ್ತು ಜನರ ಪೈಕಿ ಸಾಧುವಿನ ಕುತ್ತಿಗೆಗೆ ಬಾಯಿ ಹಾಕಿ ಅವನಿಂದ ಯಾವುದೇ ಶಬ್ಧ ಬರದಂತೆ ಮಾಡಿ ಎತ್ತೊಯ್ದಿತ್ತು. ಹೋಟೇಲ್‌ನ ಅನತೀ ದೂರದಲ್ಲಿ ಹರಿಯುತ್ತಿದ್ದ ನದಿ ತೀರದ ಬಳಿ ಆತನ ದೇಹವನ್ನು ಅರೆ ಬರೆ ತಿಂದು ಬಿಸಾಡಿ ಹೋಗಿತ್ತು.

ಈ ಘಟನೆಯಿಂದ ಎಚ್ಚೆತ್ತು ಕೊಂಡ ಜಿಲ್ಲಾಧಿಕಾರಿ ಇಬ್ಸ್‌ಟನ್ ಚಿರತೆ ಇಲ್ಲೆ ಕಾಡಿನಲ್ಲಿರಬಹುದೆಂದು ಊಹಿಸಿ ಆದಿನ ತೂಗು ಸೇತುವೆಯನ್ನು ಬಂದ್ ಮಾಡಿಸಿ ಎರಡು ಸಾವಿರ ಜನರೊಂದಿಗೆ ಸುತ್ತಮುತ್ತಲಿನ ಕಾಡನ್ನು ಜಾಲಾಡಿದ. ಸ್ವತಃ ನುರಿತ ಶಿಕಾರಿಕಾರನಾದ ಇಬ್ಸ್‌ಟನ್ ನರಭಕ್ಷಕ ಸೇತುವೆ ದಾಟಿ ಆಚೆಕಡೆಗಿನ ಕಾಡು ಸೇರಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದ. ಆದರೆ, ಅವನು ಒಂದು ವಿಷಯದಲ್ಲಿ ಎಡವಿದ್ದ. ಅದೆನೇಂದರೆ,ಸಾಮಾನ್ಯವಾಗಿ ಹಸಿವಾದಾಗ ಬೇಟೆಯಾಡುವ ನರಭಕ್ಷಕ ಚಿರತೆ ಅಥವಾ ಹುಲಿಗಳು ತಮ್ಮ ಬೇಟೆಯನ್ನು ದೂರದ ಕಾಡಿಗೆ ಒಯ್ದು ಗುಪ್ತ ಸ್ಥಳವೊಂದರಲ್ಲಿ ಇಟ್ಟು ಎರಡರಿಂದ ಮೂರು ದಿನ ತಿನ್ನುವುದು ವಾಡಿಕೆ ಅವುಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಅಲ್ಲೆ ತಿಂದು ಬಿಸಾಡಿ ಹೋಗಿದ್ದರೆ, ಅವುಗಳು ಆ ಸ್ಥಳಕ್ಕೆ ಮತ್ತೇ ವಾಪಸ್ ಬರುವುದಿಲ್ಲ ಎಂದೇ ಅರ್ಥ. ಇಲ್ಲಿ ಕೂಡ ಚಿರತೆ ಆ ರಾತ್ರಿಯೇ ಸಾಧುವಿನ ಕಳೆಬರವನ್ನು ಅರ್ಧತಿಂದು, ತೂಗುಸೇತುವೆಯನ್ನು ದಾಟಿ ಬಹು ದೂರದವರೆಗೆ ಸಾಗಿಬಿಟ್ಟಿತ್ತು.

ಕಾರ್ಬೆಟ್ ರುದ್ರಪ್ರಯಾಗದ ತಲುಪಿದ ನಂತರ ಅವನಿಗೆ ನರಭಕ್ಷಕ ಬೇಟೆಯಾಡುತ್ತಿರುವ ಪ್ರದೇಶಗಳ ನಕ್ಷೆಯ ಹೊರತಾಗಿ ಬೇರೆ ಯಾವುದೇ ಮಾಹಿತಿ ದೊರಕಲಿಲ್ಲ. ನಕ್ಷೆಯನ್ನು ಮುಂದೆ ಹರಡಿಕೊಂಡು ಜನವಸತಿ ಪ್ರದೇಶಗಳನ್ನು ಕಾರ್ಬೆಟ್ ಗುರುತು ಮಾಡತೊಡಗಿದ. ಅಲಕಾನದಿಗೆ ಎರಡು ತೂಗು ಸೇತುವೆಗಳಿದ್ದದನ್ನು ಅವನು ಗಮನಿಸಿದ. ನದಿಯ ಒಂದು ಬದಿಯಲ್ಲಿ ಯಾವುದೇ ಹಳ್ಳಿಗಳು ಇಲ್ಲದ ಕಾರಣ ಚಿರತೆ ತನ್ನ ಬೇಟೆಗಾಗಿ ಸೇತುವೆ ದಾಟಿ ಜನರಿರುವ ವಸತಿ ಪ್ರದೇಶಕ್ಕೆ ಬರುತ್ತಿದೆ ಎಂದು ಊಹಿಸಿದ. ಅವನ ಈ ಊಹೆಗೆ ಚಿಟ್ಪಾವಲ್ ಹಳ್ಳಿ ಸಮೀಪದ ತೂಗು ಸೇತುವೆಯ ಸಮೀಪದ ಪಂಡಿತನ ಮನೆಯಲ್ಲಿ ಸಾಧು ನರಭಕ್ಷನಿಗೆ ಬಲಿಯಾದದ್ದು ಬಲವಾದ ಕಾರಣ ವಾಗಿತ್ತು. ಈ ಕಾರಣಕ್ಕಾಗಿ ಚಿರತೆ ಜನವಸತಿ ಪ್ರದೇಶದ ಅಂಚಿನ ಕಾಡಿನಲ್ಲೇ ಇರಬೇಕೆಂದು ಅಂದಾಜಿಸಿದ. ಇದಕ್ಕಾ ಗೋಲಬಾರಿ ಎಂಬ ಹಳ್ಳಿ ಸಮೀಪದ ಹೊರವಲಯದ ಕಾಡಿನ ನಡುವೆ ಇದ್ದ ಪ್ರವಾಸಿ ಬಂಗಲೆಯಲ್ಲಿ ತನ್ನ ಸೇವಕರೊಡನೆ ಉಳಿಯಲು ನಿರ್ಧರಿಸಿದ.

ಚಿರತೆಯ ಜಾಡು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡು ಮೇಕೆಗಳನ್ನು ಕೊಂಡು ತಂದು ಅವುಗಳಲ್ಲಿ ಒಂದನ್ನು ದಟ್ಟ ಕಾಡಿನ ನಡುವೆ, ಮತ್ತೊಂದನ್ನು ಗೋಲಬಾರಿ ಹಳ್ಳಿಗೆ ಕಾಡಿನಿಂದ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಮರಗಳಿಗೆ ಕಟ್ಟಿ ಹಾಕಿ ಬಂದ. ಮಾರನೇ ದಿನ ಮೇಕೆ ಕಟ್ಟಿ ಹಾಕಿದ ಸ್ಥಳಗಳಿಗೆ ಹೋಗಿ ನೋಡಿದಾಗ. ಕಾಡಿನಲ್ಲಿ ಕಟ್ಟಿ ಹಾಕಿದ್ದ ಮೇಕೆ ಚಿರತೆಗೆ ಬಲಿಯಾಗಿತ್ತು. ಆದರೆ, ಅದನ್ನು ತಿನ್ನದೇ ಹಾಗೆಯೇ ಉಳಿಸಿ ಹೋಗಿರುವುದು ಕಾರ್ಬೆಟ್‌ನ ಜಿಜ್ಙಾಸೆಗೆ ಕಾರಣವಾಯಿತು. ಬೇರೆ ಯಾವುದಾದರೂ ಪ್ರಾಣಿ ದಾಳಿ ಮಾಡಿರಬಹುದೆ? ಎಂಬ ಪ್ರಶ್ನೆಯೂ ಒಮ್ಮೆ ಅವನ ತಲೆಯಲ್ಲಿ ಸುಳಿದು ಹೋಯಿತು. ಆದರೂ ಪರೀಕ್ಷಿಸಿ ಬಿಡೋಣ ಎಂಬಂತೆ ಮೇಕೆಯ ಕಳೇಬರದ ಸ್ಥಳದಿಂದ ಸುಮಾರು ಐವತ್ತು ಅಡಿ ದೂರದಲ್ಲಿ ಮಧ್ಯಾಹದಿಂದ ಸಂಜೆ ಮಬ್ಬು ಕತ್ತಲೆ ಕವಿಯುವವರೆಗೂ ಬಂದೂಕ ಹಿಡಿದು ಕಾದು ಕುಳಿತ. ಆದರೆ, ಮೇಕೆಯ ಕಳೇಬರದ ಹತ್ತಿರಕ್ಕೆಯಾವ ಪ್ರಾಣಿಯೂ ಸುಳಿಯಲಿಲ್ಲ. ಕತ್ತಲು ಆವರಿಸುತಿದ್ದಂತೆ ಇಲ್ಲಿರುವುದು ಅಪಾಯ ಎಂದು ಭಾವಿಸಿದ ಕಾರ್ಬೆಟ್, ಪ್ರವಾಸಿ ಬಂಗಲೆಯತ್ತ ಹಿಂತಿರುಗಿದ. ಕಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಅಪಾಯಕಾರಿ ಪ್ರಾಣಿಗಳು ಇರುವ ಪ್ರದೇಶದಲ್ಲಿ ಎಡಬಲದ ಪ್ರದೇಶಗಳನ್ನು ಗಮನಿಸದೇ ನೇರವಾಗಿ ನಡೆಯುದು ಅಪಾಯಕಾರಿ ಎಂಬುದನ್ನು ಕಾರ್ಬೆಟ್ ಅರಿತ್ತಿದ್ದ. ಸಾಮಾನ್ಯವಾಗಿ ಹುಲಿ, ಚಿರತೆಗಳು ಹಿಂಬದಿಯಿಂದ ಆಕ್ರಮಣ ಮಾಡುವುದನ್ನು ಅರಿತ್ತಿದ್ದ ಅವನು ಪ್ರತಿ ಎರಡು ಮೂರು ಹೆಜ್ಜೆಗೊಮ್ಮೇ ನಿಂತು ಹಿಂತಿರುಗಿ ನೋಡುತ್ತಿದ್ದ. ನಡೆಯುವಾಗ ಕೂಡ ಎಡ ಬಲ ಗಮನ ಹರಿಸಿ ತನ್ನ ಇಡೀ ಶರೀರವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಳ್ಳುತ್ತಿದ್ದ. ಅದೃಷ್ಟವೆಂದರೆ, ಅವನ ಈ ಎಚ್ಚರಿಕೆಯೇ ಅಂದು ಅವನನ್ನು ನರಭಕ್ಷಕ ಚಿರತೆಯ ದಾಳಿಯಿಂದ ಪಾರು ಮಾಡಿತ್ತು. ಆದಿನ ರಾತ್ರಿ ಪ್ರವಾಸಿ ಬಂಗಲೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ನೋಡುವಾಗ, ಚಿರತೆ, ದಾರಿಯುದ್ದಕ್ಕೂ ಕಾರ್ಬೆಟ್‌‍ನನ್ನು ಹಿಂಬಾಲಿಸಿಕೊಂಡು ಪ್ರವಾಸಿ ಮಂದಿರದವರೆಗೂ ಬಂದು ಇಡೀ ಕಟ್ಟಡವನ್ನು ಎರಡು ಮೂರು ಬಾರಿ ಸುತ್ತು ಹಾಕಿ ವಾಪಸ್ ಹೋಗಿರುವುದನ್ನು ಅದರ ಹೆಜ್ಜೆ ಗುರುತುಗಳು ಹೇಳುತ್ತಿದ್ದವು. ಚಿರತೆಯ ಹೆಜ್ಜೆ ಗುರುತು ಗಮನಿಸಿದ ಕಾರ್ಬೆಟ್ ಇದೊಂದು ಯವ್ವನ ದಾಟಿದ ವಯಸ್ಸಾದ ನರಭಕ್ಷಕ ಚಿರತೆ ಎಂಬುದನ್ನು ಖಚಿತಪಡಿಸಿಕೊಂಡ.

  (ಮುಂದುವರಿಯುವುದು)

 

ಬಾಲಮಂದಿರಗಳು ಬಂದಿಖಾನೆಗಳಾದರೆ ಸಾಕೆ?

– ರೂಪ ಹಾಸನ

ಬಾಲಾಪರಾಧಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 2500 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವ ಕುರಿತು ಹೈಕೋರ್ಟ್‌ಗೆ ಅಧ್ಯಯನ ವರದಿಯೊಂದನ್ನು ಸಲ್ಲಿಸಿರುವುದು ಮೊನ್ನೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂತಹ ಮಕ್ಕಳು ಅನುಭವಿಸುತ್ತಿರುವ ಹಿಂಸೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಆಧಾರದ ಮೇಲೆ ಕೋರ್ಟ್ ಖುದ್ದಾಗಿ ದೂರು ದಾಖಲು ಮಾಡಿಕೊಂಡು, ಸರ್ಕಾರದ ವಿರುದ್ಧವಾಗಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸುತ್ತಿರುವುದು ನಿಜಕ್ಕೂ ಆಶಾದಾಯಕವಾದ ವಿಚಾರ.

ಮಕ್ಕಳು ಖಂಡಿತ ಸ್ವಯಂ ತಿಳಿವಳಿಕೆಯಿಂದಾಗಲಿ, ಉದ್ದೇಶಪೂರ್ವಕವಾಗಿಯಾಗಲಿ ಅಪರಾಧಗಳಲ್ಲಿ ತೊಡಗುವುದಿಲ್ಲ. ಮುಗ್ಧತೆ ಮತ್ತು ಅಸಹಾಯಕತೆಯಿಂದ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಬಲಿಪಶುಗಳಾಗುತ್ತಾರಷ್ಟೇ. ಹೆಚ್ಚಿನ ಸಂದರ್ಭಗಳಲ್ಲಿ ಹಿರಿಯರು ಮಕ್ಕಳ ಕೈಗಳಿಂದ ಅಪರಾಧಗಳನ್ನು ಮಾಡಿಸಿ ತಾವು ಕಾನೂನಿನ ಕೈಗಳಿಂದ ನುಣುಚಿಕೊಳ್ಳುವುದೂ ಉಂಟು. ಒಂದು ವೇಳೆ ಮಕ್ಕಳೇ ತಪ್ಪು ಮಾಡಿದ್ದರೂ ಅದಕ್ಕೆ ಅವರನ್ನು ಹಾಗೆ ರೂಪುಗೊಳಿಸುವುದು ನಮ್ಮ ಕಲುಷಿತವಾಗಿರುವ ವ್ಯವಸ್ಥೆ, ಮಕ್ಕಳ ಕಡೆಗೆ ನೀಡಲೇ ಬೇಕಾದಷ್ಟು ಪ್ರೀತಿ-ಗಮನ ಹಾಗೂ ಸಮಯವನ್ನು ನೀಡದಿರುವ ಪೋಷಕರ ಹೊಣೆಗೇಡಿತನವೂ ಕಾರಣವಾಗುತ್ತದೆ. ಹೀಗಾಗಿ ಅವರ ಮೇಲಿನ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸದೇ ನಿಧಾನಿಸುವುದರಿಂದ, ಆ ಮಕ್ಕಳನ್ನು ಈ ವಿಳಂಬ ಶಾಶ್ವತ ಅಪರಾಧಿಗಳನ್ನಾಗಿಸಿಬಿಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ವಿಳಂಬವೆಂದರೆ ಇಂಥ ಮಕ್ಕಳ ಅಮೂಲ್ಯ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆಯೇ ಸರಿ.

18 ವರ್ಷದೊಳಗಿನ ಮಕ್ಕಳು ಮಾಡಿದ ಅಪರಾಧಗಳು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲಾಪರಾಧಿಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವಾಗ ಅವರನ್ನು ಪೊಲೀಸ್ ಠಾಣೆಗಳಲ್ಲಿ ಇರಿಸಿಕೊಳ್ಳುವಂತಿಲ್ಲ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಬಾಲಮಂದಿರಗಳಲ್ಲೇ ಬೇರೆ ಮಕ್ಕಳಿಂದ ಪ್ರತ್ಯೇಕವಾಗಿ ಈ ಬಾಲಾಪರಾಧಿಗಳನ್ನೂ ಇರಿಸುವ ವ್ಯವಸ್ಥೆ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿದೆ. ಇವು ಅನಧಿಕೃತ ಜೈಲುಗಳು. ಆದರೆ ಅಲ್ಲಿ ಅವರನ್ನು ಗಮನಿಸಲು, ರಕ್ಷಣೆ ನೀಡಲು, ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿಯಿಲ್ಲದೇ, ಕೆಲವೊಮ್ಮೆ ಮಕ್ಕಳೊಂದಿಗಿನ ದುರ್ವರ್ತನೆಯಿಂದಲೂ ಆ ಮಕ್ಕಳು ಬಾಲಮಂದಿರಗಳಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಲೇ ಇರುತ್ತಾರೆ. ಹೀಗೆ ಓಡಿಹೋಗುವ ಮಕ್ಕಳ ಪ್ರಮಾಣ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕಕಾರಿಯಾಗಿದೆ. ಹೀಗೆ ಓಡಿ ಹೋದವರು ಹೊಟ್ಟೆಹೊರೆಯಲು ಅನಿವಾರ್ಯವಾಗಿ ಮತ್ತೆ ಕಳ್ಳತನದಲ್ಲಿ ತೊಡಗಿ ವಾಪಸ್ಸು ಬಾಲಮಂದಿರಗಳಿಗೇ ಹಿಂದಿರುಗುತ್ತಾರೆ! ಹೆಚ್ಚಿನವರಿಗೆ ಬೇಲ್ ದೊರಕಿ ಬಿಡುಗಡೆ ಹೊಂದುತ್ತಾರಾದರೂ ಮತ್ತೆ ಹಿಂದಿರುಗಿ ಅದೇ ಪರಿಸರ, ಕೆಟ್ಟ ಸಹವಾಸಗಳಿಗೆ ಬಿದ್ದು ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಂಥಹಾ ಬಾಲಾಪರಾಧಿಗಳು, ಬೆಳೆದಂತೆ ಮುಂದೆ ಇನ್ನೂ ಹೆಚ್ಚಿನ ಮತ್ತು ದೊಡ್ಡ ಅಪರಾಧಗಳಲ್ಲಿ ತೊಡಗಿಕೊಳ್ಳುವುದು ಅಸಹಜವೇನಲ್ಲ.

ಸದ್ಯಕ್ಕೆ ನಮ್ಮ ಬಾಲಮಂದಿರಗಳು ಬಾಲಾಪರಾಧಿಗಳನ್ನಲ್ಲದೇ ಬಹುಮುಖ್ಯವಾಗಿ ಅನಾಥ ಮಕ್ಕಳು, ಒಂಟಿ ಪೋಷಕರ-ಅಸಹಾಯಕರ ಮಕ್ಕಳು, ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡವರು, ವಿವಿಧ ಕಾರಣಗಳಿಂದ ಮನೆ ಬಿಟ್ಟು ಓಡಿ ಬಂದವರು, ಚಿಕ್ಕಪುಟ್ಟ ಕಳ್ಳತನಗಳಲ್ಲಿ ಭಾಗಿಯಾದವರನ್ನು ಒಳಗೊಂಡಿರುತ್ತದೆ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಮಕ್ಕಳು. ಪ್ರಸ್ತುತ ಬಾಲಮಂದಿರಗಳು ’ಪರಿವರ್ತನೆ’ಯ ಕೇಂದ್ರಗಳಾಗಿಲ್ಲ. ಬದಲಿಗೆ ’ಬಂದಿಖಾನೆ’ಗಳಾಗಿ ಮತ್ತು ’ಗಂಜಿಕೇಂದ್ರ’ಗಳಾಗಿ ಮಾತ್ರ ಕಾರ್ಯನಿರ್ವಹಿಸುತ್ತಿವೆ! ಬಾಲಮಂದಿರದಲ್ಲಿ ಮಕ್ಕಳಿಗೆ ಕನಿಷ್ಟ ಊಟ, ವಸತಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಅವರು ಇಲ್ಲಿಂದ ತಪ್ಪಿಸಿಕೊಂಡು ಓಡಿಹೋಗದಂತೆ  ರಕ್ಷಿಸುವ ಕೆಲಸವನ್ನಷ್ಟೇ ಇವು ಮಾಡುತ್ತಿವೆ. ಕೆಲವು  ಕಡೆ ಅದನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ.

ಆದರೆ ಇಂಥಹ ಮಕ್ಕಳ ಕುರಿತು ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಬಾಲಮಂದಿರಗಳ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗಬೇಕಿದೆ. ಬಾಲಮಂದಿರಗಳು ’ಮನಃ ಪರಿವರ್ತನಾ’ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕಿದೆ. ಬಾಲಾಪರಾಧಿಗಳು ಹಾಗೂ ಬಾಲಮಂದಿರದ ಮಕ್ಕಳೊಡನೆಯ ನಿಕಟ ಸಂಪರ್ಕದಿಂದ, ಸಾಮೂಹಿಕ ಹಾಗೂ ವೈಯಕ್ತಿಕ ಆಪ್ತ ಸಲಹೆಯ ಮೂಲಕ ಮನಃಶಾಸ್ತ್ರೀಯ ನೆಲೆಗಳಲ್ಲಿ ಅವರನ್ನು ಹಲವು ಪರೀಕ್ಷೆಗೊಳಪಡಿಸಿದಾಗ, ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿದಾಗ ಅವರಲ್ಲಿ ಹೆಚ್ಚಿನ ಮಕ್ಕಳ ಮೂಲಭೂತ ಗುಣ-ಸ್ವಭಾವಗಳಲ್ಲಿ ಹಿಂಸೆ-ಕ್ರೌರ್ಯದ ಭಾವಗಳು ಇಲ್ಲದಿರುವುದು ಗೋಚರಿಸಿತು. ಜೊತೆಗೆ ಅವರಿರುವ ಈ ಸದ್ಯದ ಸ್ಥಿತಿಯ ಬಗೆಗೆ ಅವರಿಗೆ ತೀವ್ರ ಪಶ್ಚಾತ್ತಾಪ ಹಾಗೂ ಅಪರಾಧಿ ಭಾವವಿರುವುದು ತಿಳಿದು ಬಂತು. ಹೀಗಾಗಿ ಸಹವಾಸ ಹಾಗೂ ಪರಿಸರದ ಪ್ರಭಾವದಿಂದ ದಾರಿ ತಪ್ಪಿರುವ ಇಂತಹ ಬಹಳಷ್ಟು ಮಕ್ಕಳನ್ನು ಖಂಡಿತಾ ಸರಿ ದಾರಿಗೆ ತರಲು, ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಾಧ್ಯವಿದೆ.

ಮುಖ್ಯವಾಗಿ ಇಂತಹ ಮಕ್ಕಳಿಗೆ ಹೆಚ್ಚಿನ ಪ್ರೀತಿ-ವಾತ್ಸಲ್ಯ, ವೈಯಕ್ತಿಕ ಗಮನ, ನಿರಂತರ ನೈತಿಕ ಶಿಕ್ಷಣ, ಆಪ್ತಸಲಹೆ, ಮನಸ್ಸನ್ನು ಶಾಂತ ಹಾಗೂ ಏಕಾಗ್ರಗೊಳಿಸಲು ವ್ಯಾಯಾಮ, ಯೋಗ, ಧ್ಯಾನದ ಪ್ರಯೋಗಗಳು ಆಗಬೇಕು. ಹೆಚ್ಚಿನ ಬಾಲಮಂದಿರಗಳಲ್ಲಿ ಗ್ರಂಥಾಲಯಗಳಿಲ್ಲ. ಕೆಲವೆಡೆ ಸಣ್ಣ ಪ್ರಮಾಣದ ಪುಸ್ತಕಗಳಿದ್ದರೂ ಅವುಗಳನ್ನು ಮಕ್ಕಳಿಗೆ ಓದಲು ಕೊಡುವ, ಓದಿದ್ದನ್ನು ಮನನ ಮಾಡಿಸುವ, ಇತರ ಮಕ್ಕಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುವಂತಾ ಕೆಲಸಗಳು ಆಗುತ್ತಿಲ್ಲ. ಮೊದಲಿಗೆ ಇಲ್ಲಿ ಗ್ರಂಥಾಲಯಗಳನ್ನು ಹುಟ್ಟು ಹಾಕಿ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವುದು ಅತ್ಯವಶ್ಯಕ. ಇಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಧೀಮಂತರ ಜೀವನ ಚರಿತ್ರೆಗಳು, ಸಾಧನೆ ಮತ್ತು ಸಾಧಕರ ಕುರಿತು ಮಾಹಿತಿ, ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ, ಮಕ್ಕಳ ಕಲ್ಪನಾಶಕ್ತಿಯನ್ನು, ವಿವೇಚನೆ, ವಿವೇಕಗಳನ್ನು ಅರಳಿಸುವಂತಾ ಪುಸ್ತಕಗಳನ್ನು ದಾನಿಗಳಿಂದಲಾದರೂ ಸಂಗ್ರಹಿಸಿ ಮಕ್ಕಳಿಗೆ ಒದಗಿಸುವಂತಹ ಕೆಲಸಗಳು ತುರ್ತಾಗಿ ಆಗಬೇಕಿದೆ.

ಇದರ ಜೊತೆಗೆ ಮುಖ್ಯವಾಗಿ ಈ ಮಕ್ಕಳಲ್ಲಿ, ಹುಟ್ಟಿನಿಂದ ಸಹಜವಾಗಿ ಬಂದಿರಬಹುದಾದ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮತ್ತು ಅದನ್ನು ಮತ್ತಷ್ಟು ವೃದ್ಧಿಗೊಳಿಸಲು ತರಬೇತಿ ನೀಡುವಂತಾ ವ್ಯವಸ್ಥೆ ಆಗಬೇಕಿದೆ. ಆಸಕ್ತ ಮಕ್ಕಳಿಗೆ ಚಿತ್ರಕಲೆ, ಹಾಡು, ನೃತ್ಯ, ಅಭಿನಯ, ಆಟೋಟಗಳನ್ನು ಕಲಿಸುವಂತಾ ಗುಣಾತ್ಮಕ ಪ್ರಯೋಗಗಳನ್ನು ಮಾಡಿದರೆ, ಮಕ್ಕಳ ಮನಸ್ಸು ಆ ದಿಕ್ಕಿನೆಡೆಗೆ ಕೇಂದ್ರೀಕೃತಗೊಂಡು ಅನಾರೋಗ್ಯಕರ ಆಲೋಚನೆಗಳಿಗೆ ಅವಕಾಶಗಳು ಇಲ್ಲದಂತಾಗುತ್ತದೆ. ಬಾಲಾಪರಾಧಿಗಳು ಹಾಗೂ ಬಾಲಮಂದಿರದ ಮಕ್ಕಳನ್ನು ಸೃಜನಶೀಲ-ಕ್ರಿಯಾಶೀಲ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿದರೆ, ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುವ ಸಾಧ್ಯತೆಯೂ ಇರುತ್ತದೆ.

ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ಮತ್ತು ಸಮರೋಪಾದಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಬಾಲಮಂದಿರಗಳ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲು ಖಂಡಿತ ಸಾಧ್ಯವಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬಾಲಮಂದಿರದ ಪರಿವೀಕ್ಷಕರು ಮತ್ತು ಸಿಬ್ಬಂದಿಗಳು ಒಂದಿಷ್ಟು ಶ್ರಮವಹಿಸಿದರೆ ಸಾಕು. ಇದರೊಂದಿಗೆ ಈಗಿರುವಂತೆ ಆ ಮಕ್ಕಳಿಗೆ ಯಾವಾಗಲಾದರೊಮ್ಮೆ ಕಾಟಾಚಾರದ ಕೌನ್ಸೆಲಿಂಗ್ ನೀಡುವ ಬದಲು, ದಿನನಿತ್ಯ ಆ ಮಕ್ಕಳೊಂದಿಗೇ ಇದ್ದು ವ್ಯಗ್ರಗೊಂಡ ಅವರ ಮನಸಿಗೆ ಸಾಂತ್ವನ ಹಾಗೂ ಆಪ್ತ ಸಲಹೆ ನೀಡುವ, ಅವರ ವ್ಯಕ್ತಿತ್ವ ನಿರ್ಮಾಣದ ಪ್ರತಿ ಹಂತದಲ್ಲಿ ಭಾಗಿಯಾಗುವಂತಹ ಆಪ್ತಸಮಾಲೋಚಕರನ್ನು ಪ್ರತಿ ಬಾಲಮಂದಿರಕ್ಕೆ ಒಬ್ಬರಂತೆ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಜೊತೆಗೆ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ವಿವಿಧ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಈ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ.

ಆ ಮಕ್ಕಳು ಸಕಾರಾತ್ಮಕವಾದ ದಾರಿಯನ್ನು ಆಯ್ದುಕೊಳ್ಳುವಂತೆ, ಅವರ ಬದುಕನ್ನು ರೂಪಿಸುವ ಹೊಣೆಗಾರಿಕೆ ಖಂಡಿತಾ ನಮ್ಮೆಲ್ಲರದೂ ಆಗಿದೆ. ಬಾಲಮಂದಿರಗಳು ಬಂದಿಖಾನೆಗಳಾಗದೇ, ದಿಕ್ಕುತಪ್ಪಿರುವ ಮಕ್ಕಳ ಆರೋಗ್ಯಪೂರ್ಣ ವ್ಯಕ್ತಿತ್ವ ನಿರ್ಮಾಣ ಕೇಂದ್ರಗಳಾಗುವತ್ತ ಸರ್ಕಾರ ಇನ್ನಾದರೂ ಗಮನಹರಿಸಬೇಕಾಗಿದೆ.

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸೃತ ರೂಪ)

ಯಡಿಯೂರಪ್ಪ ಮತ್ತು ಸಿ.ಎಚ್. ಹನುಮಂತರಾಯ

ಬಿ.ಎಸ್. ಕುಸುಮ

ಸಮಾಜದಲ್ಲಿ ’ನ್ಯಾಯ’ ಎಂಬ ಕಲ್ಪನೆಯೂ ಇತ್ತೀಚಿನ ದಿನಗಳಲ್ಲಿ ಬಹಳ ಸೂಕ್ಷ್ಮಗೊಳ್ಳುತ್ತಿದೆ. ಮನುಷ್ಯ-ಸಮಾಜ-ಕಾನೂನು ಇವುಗಳ ಸಂಬಂಧ ಬಹಳ ಸಂಕೀರ್ಣವಾದದ್ದು. ಸಮಾಜದ ಉನ್ನತ ಹುದ್ದೆಯಲ್ಲಿರುವ ಅನೇಕ ವ್ಯಕ್ತಿಗಳು ಭ್ರಷ್ಟಚಾರದ ಪಾಲ್ಗೊಂಡು ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನೇ ಮರೆತು ಮೆರೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳ ಅನ್ಯಾಯದ ವಿರುದ್ದ ಹೋರಾಡುವವರ ಪರವಾಗಿ ನಿಂತು ನ್ಯಾಯಾಲಯದಲ್ಲಿ ನ್ಯಾಯ ದೊರಕಿಸುವುದು ವಕೀಲರ ಕರ್ತವ್ಯ. ನಮ್ಮ ಉದ್ಯಾನನಗರಿಯಲ್ಲಿ ಸುಮಾರು 7000 ಕ್ಕೂ ಹೆಚ್ಚು ಮಂದಿ ವಕೀಲ ವೃತ್ತಿಯಲ್ಲಿದ್ದಾರೆ. ಇವರಲ್ಲಿ ಕ್ರಿಮಿನಲ್ ಕೇಸ್‌ಗಳಲ್ಲಿ ಪ್ರಾವೀಣ್ಯತೆ ಪಡೆದು ಅವುಗಳನ್ನು ಕೈಗೆತ್ತಿಕೊಳ್ಳುವ ವಕೀಲರು ಕೇವಲ 350 ಮಂದಿ ಮಾತ್ರ. ಈ 350 ವಕೀಲರಲ್ಲಿ ಅನೇಕ ಜನರು ತಮ್ಮ ವೃತ್ತಿಯಲ್ಲಿ ಹೆಸರು ಮಾಡಿದ್ದಾರೆ. ಇವರಲ್ಲಿ ಕಳೆದ ನಾಲ್ಕು ದಶಕಗಳಿಂದ ವಕೀಲಿ ವೃತ್ತಿಯಲ್ಲಿ ತೊಡಗಿರುವ ಸಿ.ಎಚ್. ಹನುಮಂತರಾಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹುದೇ ಭೂಹಗರಣಕ್ಕೆ (ಡಿ-ನೋಟಿಫಿಕೇಷನ್) ಸಂಬಂಧಿಸಿದಂತೆ 22.01.2011 ರಂದು ಶಿವಮೊಗ್ಗದ ವಕೀಲಾರದ ಸಿರಾಜಿನ್ ಪಾಷಾ ಮತ್ತು ಕೆ.ಎನ್, ಬಾಲ್‌ರಾಜ್‌‍ರವರು ಯಡಿಯೂರಪ್ಪರವರ ವಿರುದ್ದದ 1625 ಪುಟಗಳ ಪ್ರಕರಣವನ್ನು ರಾಜ್ಯಪಾಲರ ಅನುಮತಿ ಪಡೆದು ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದರು. 2 ಮತ್ತು 3ನೇ ಪ್ರಕರಣದ ಫಲವಾಗಿ 15.10.2011ರಂದು ಜೈಲು ಸೇರಿದ ಕರ್ನಾಟಕ ಮಾಜಿ ಮುಖ್ಯಮಂತ್ರಿಯೆಂಬ ಕುಖ್ಯಾತಿಗೆ ಯಡಿಯೂರಪ್ಪ ಪಾತ್ರವಾಗಿದ್ದಾರೆ. ಇದೇ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ ಜೈಲಿನಲ್ಲಿ ಜೊತೆಯಾಗಿದ್ದವರು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ. ಈ ಪ್ರಕರಣದಲ್ಲಿ ಯಡಿಯೂರಪ್ಪ 25 ದಿನಗಳ ಜೈಲುವಾಸವನ್ನು ಅನುಭವಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಮುಂದುವರೆಯುತ್ತಿದೆ.

ಈ ಮೊಕದ್ದಮೆಯಲ್ಲಿ ಸಿರಾಜಿನ್ ಪಾಷಾ ಮತ್ತು ಬಾಲ್‌ರಾಜ್‌ರ ಪರ ವಕೀಲರಾಗಿದ್ದವರು ಸಿ.ಎಚ್.ಹನುಮಂತರಾಯರು, ಮತ್ತವರ ಸಹೋದ್ಯೋಗಿ ನಿತಿನ್. ಒಟ್ಟು 5 ಖಾಸಗಿ ಪ್ರಕರಣಗಳಲ್ಲಿ 4 ಪ್ರಕರಣಗಳಿಗೆ ಕೋರ್ಟ್ ಈಗಾಗಲೇ ಸಮನ್ಸ್ ಜಾರಿಮಾಡಿದ್ದು, 5ನೇ ಖಾಸಗಿ ದೂರಿನ ವಿಚಾರಣೆ ನಡೆಸಲು ಲೋಕಾಯುಕ್ತ ಕೋರ್ಟ್‌ನ ನ್ಯಾಯಧೀಶರಾದ ಸುಧೀಂದ್ರರಾವ್ ಅವರು ಯಡಿಯೂರಪ್ಪ ಹಾಗೂ ಇನ್ನಿತರ ಆರೋಪಿಗಳಾದ ಧವಳಗಿರಿ ಪ್ರಾಪರ್ಟಿಸ್‌ನ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಆದರ್ಶ ಡೆವಲಪರ್ಸ್‌ನ ಜೈಶಂಕರ್ ಸೇರಿದಂತೆ ಆರೋಪಿತರೆಲ್ಲರಿಗೂ ಮೇ 24 ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಿಂದ ಬಂದ ಹನುಮಂತರಾಯರು ಹೈಸ್ಕೂಲ್ ತರಗತಿಯಲ್ಲಿದ್ದಾಗಲೇ ವಕೀಲನಾಗಬೇಕು ಎಂಬ ಆಕಾಂಕ್ಷೆ ಹೊತ್ತವರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿದರು. ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಹನುಮಂತರಾಯರು ಮುಂದೆ ಕಾನೂನಿನ ಕ್ಷೇತವನ್ನು ಆಯ್ದುಕೊಂಡರು. 1972ರಲ್ಲಿ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಹನುಮಂತರಾಯರು ಕರ್ನಾಟಕದ ಆಗಿನ ಖ್ಯಾತ ಕ್ರಿಮಿನಲ್ ವಕೀಲರಾದ ಪಿ,ಎಸ್. ದೇವದಾಸರ ಬಳಿ ಜೂನಿಯರ್ ಆಗಿ ಕೆಲಸ ಆರಂಭಿಸಿದರು. 1980ರಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಹನುಮಂತರಾಯರು ಈ 40 ವರ್ಷದ ವೃತ್ತಿ ಜೀವನದಲ್ಲಿ 1000ಕ್ಕೂ ಹೆಚ್ಚು ಖಾಸಗಿ ಕ್ರಿಮಿನಲ್ ಕೇಸ್‌ಗಳನ್ನು ನಡೆಸಿದ್ದಾರೆ. ಬಹುಶಃ ಕರ್ನಾಟಕದಲ್ಲಿ ಇಷ್ಟೊಂದು ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸಿದ ವಕೀಲರು ಅಪರೂಪವೆ. ಹನುಮಂತರಾಯರ ಅನೇಕ ಕೇಸುಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ ಡಿ.ಸಿ.ಪಿ. ಎನ್. ಸೋಮಶೇಖರ್ ಅವರ ಕೇಸ್, ಬೀನ ಕೊಲೆ ಕೇಸ್, ಶ್ರದ್ದಾನಂದಸ್ವಾಮಿ ಕೇಸ್, ನಗರಿ ಬಾಬಯ್ಯ ಕೇಸ್, ಇತ್ಯಾದಿ..

ಹನುಮಂತರಾಯರು ಸಾಹಿತ್ಯ ವಿದ್ಯಾರ್ಥಿ ಆಗಿದ್ದ ಕಾರಣ ಅವರ ವೃತ್ತಿ ಜೀವನದ ಅನುಭವಗಳನ್ನು ಆಗಾಗ ಅಕ್ಷರರೂಪದಲ್ಲೂ ದಾಖಲಿಸುತ್ತಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಪಿ.ಲಂಕೇಶರ ಶಿಷ್ಯರೂ ಆಗಿದ್ದ ಹನುಮಂತ ರಾಯರು ’ಲಂಕೇಶ್ ಪತ್ರಿಕೆ’ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ಜೊತೆಗೆ ಕೆಲವು ಪುಸ್ತಕಗಳನ್ನು ಸಹ ಬರೆದಿದ್ದಾರೆ. ’ರುದ್ರಮಣೀಯ ಬೆಟ್ಟದಲ್ಲಿ ಹೆಜ್ಜೇನಿನ ಹೊಳೆ’,’ದೆವ್ವದ ದಿಗಿಲಿನಲ್ಲಿ’,’ಮಾಯಾಡುವ ಸಸ್ಯಗಳ ಯಕ್ಷಲೋಕ’,’ತಾಜ್‌ಮಹಲ್ ಬಡವರ ಪ್ರೇಮವನ್ನು ಅಣಕಿಸುತ್ತದೆ’,’ಕುಮಾರನ ಚಿತ್ತ ಛಿದ್ರಗೊಳಿಸಿದ ಸಮುದ್ರವತಿ’,’ಗರುಡಗಣ್ಣುಗಳ ಗಾರುಡಿಗ’, ಇವು ಅವರ ಪ್ರಕಟಿತ ಪುಸ್ತಕಗಳು. ಲಂಕೇಶರ ನಿಧನಾನಂತರ ’ಲಂಕೇಶ್ ಪತ್ರಿಕೆ’ಯಲ್ಲಿ ಹನುಮಂತರಾಯರು ’ವಕೀಲರೊಬ್ಬರ ವಗೈರೆಗಳು’ ಎಂಬ ಅಂಕಣ/ಧಾರಾವಾಹಿ ರೂಪದ ಲೇಖನಗಳನ್ನು ಬರೆದರು. ನಂತರ ಈ ಲೇಖನ ಮಾಲೆ “ವಕೀಲರೊಬ್ಬರ ವಗೈರೆಗಳು” ಪುಸ್ತಕವಾಗಿ ಪ್ರಕಟವಾಗಿದೆ. ಈ ಕೃತಿ ಓದುಗರಲ್ಲಿ ಕುತೂಹಲವನ್ನು ಕಾಪಾಡಿಕೊಳ್ಳುತ್ತಾ ನ್ಯಾಯಶಾಸ್ತ್ರದ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತದೆ. ಕಾನೂನು ಅಭ್ಯಾಸ ಮಾಡಿದವರಿಗಷ್ಟೇ ಅಲ್ಲದೆ, ಕಾನೂನಿನ ಪರಿಚಯ ಇಲ್ಲದ ಸಾಮಾನ್ಯ ಓದುಗರ ಮನಸ್ಸನ್ನು ಸಹ ಸೆರೆಹಿಡಿಯುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರರಿಂದ ಪ್ರಕಟಗೊಂಡ ಈ ಕೃತಿಗೆ 2008ನೇ ಸಾಲಿನ ’ಸಂಕೀರ್ಣ’ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಮೂಲಭೂತ ಶಿಕ್ಷಣ ಒಂದು ಮರೀಚಿಕೆ


-ಬಿ. ಶ್ರೀಪಾದ ಭಟ್


 

ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಎಸ್.ಎಚ್.ಕಪಾಡಿಯ, ನ್ಯಾಯಾಧೀಶ ಕೆ.ಎಸ್.ರಾಧಾಕೃಷ್ಣ, ಮತ್ತು ನ್ಯಾಯಾಧೀಶ ಜೆ.ಜೆ. ಸ್ವತಂತ್ರ ಕುಮಾರ ಅವರು ನೀಡಿರುವ ಐತಿಹಾಸಿಕ ತೀರ್ಪಿನ ಪ್ರಕಾರ ಕಡ್ಡಾಯ ಮೂಲಭೂತ ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 25 ರಷ್ಟು ಮೀಸಲಾತಿಯನ್ನು ಅನುಮೋದಿಸಿ, ಈ ಕಾಯ್ದೆಯನ್ನು ಎತ್ತಿ ಹಿಡಿದು ಇದನ್ನು 2012 ರಿಂದಲೇ ಜಾರಿಗೆ ಬರುವಂತೆ ಅನುಷ್ಟಾನಗೊಳಿಸಲು ಆದೇಶಿಸಿದೆ. ಈ ತೀರ್ಪಿನ ಪ್ರಕಾರ ಸರ್ಕಾರಿ ಶಾಲೆಗಳು, ಅನುದಾನಿತ ಖಾಸಗಿ ಶಾಲೆಗಳು, ಅನುದಾನರಹಿತ ಖಾಸಗಿ ಶಾಲೆಗಳು ಈ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಅದರೆ ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ.

ಇಂದು ಸ್ವಾತಂತ್ರ್ಯ ಬಂದು 65 ವರ್ಷಗಳ ನಂತರವೂ ಮೂಲಭೂತ ಶಿಕ್ಷಣವು ಒಂದು ಮರೀಚಿಕೆಯಾಗಿರುವುದು, ಅದಕ್ಕಾಗಿ ನ್ಯಾಯಾಂಗವು ಪದೇ ಪದೇ ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿರುವುದು, ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲು ತಿಣುಕುತ್ತಿರುವುದು ಕಡೆಗೂ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳು (8ನೇ ತರಗತಿವರೆಗೆ) ಹಾಗೂ ಖಾಸಗೀ ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳು (8ನೇ ತರಗತಿಯವರೆಗೆ) ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 25 ರಷ್ಟು ಮೀಸಲಾತಿಯನ್ನು ಕೊಡಬೇಕೆನ್ನುವ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶಿಕ್ಷಣ ಹಕ್ಕು ಕಾಯ್ದೆಯ ಕರಡು ನೀತಿಯನ್ನು ಎತ್ತಿ ಹಿಡಿದು ಐತಿಹಾಸಿಕ ತೀರ್ಪು ನೀಡಿದೆ, ಇದು ಇದೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬೇಕೆಂದು ಸಹ ಆದೇಶಿಸಿದೆ. ಇದು ದೇಶದ ಎಲ್ಲಾ ಸಂಬಂಧಪಟ್ಟ ಮೇಲ್ಕಾಣಿಸಿದ ಶಾಲೆಗಳು ಸಂವಿಧಾನದ ಪ್ರಕಾರ ದೇಶದ ನ್ಯಾಯಾಂಗ ವ್ಯವಸ್ಥೆಯ ಆದೇಶವನ್ನು ಪಾಲಿಸಲೇಬೇಕು. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣದಲ್ಲಿ ಶೇಕಡ 25 ರಷ್ಟು ಮೀಸಲಾತಿಯ ಆದೇಶವನ್ನು ಕಾನೂನಿನ ಪ್ರಕಾರ ಪಾಲಿಸಬೇಕು ಎನ್ನುವುದು ಒಂದು ಕಡೆಯಾದರೆ, ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಲೇಬೇಕು ಎನ್ನುವ ಮಾನವೀಯ ನೆಲೆಗಟ್ಟಿನ ಹಕ್ಕೊತ್ತಾಯವೆನ್ನುವುದು ಮತ್ತೊಂದು ಪ್ರಮುಖ ನೀತಿ.

ಇದು ನೈತಿಕತೆಯ, ಮೌಲ್ಯಗಳ ಪ್ರಶ್ನೆ. ಆದರೆ ಈ ನೈತಿಕತೆ ಹಾಗೂ ಮೌಲ್ಯಗಳ ಅರ್ಥಗಳ ಅರಿವೇ ಇಲ್ಲದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ 65 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ರೂಪಿಸಿದ ನೀತಿಗಳು ಅತ್ಯಂತ ದುರ್ಬಲವಾಗಿದ್ದವು. ಏಕೆಂದರೆ ಇದು ಖಾಸಗೀ ಶಾಲೆಗಳಿಗೆ ಅನುಕೂಲಕರವಾಗುವಂತೆ ಇತ್ತು ಮತ್ತು ಇಲ್ಲಿ ರಾಜಕೀಯ ಇಚ್ಛಾಶಕ್ತಿ ಇರಲೇ ಇಲ್ಲ ಹಾಗೂ ಸಾಮಾಜಿಕ ಜವಬ್ದಾರಿ ಹಾಗೂ ಸಾಮಾಜಿಕ ನ್ಯಾಯದ ಪರವಾದ ಮನಸ್ಸು ಸರ್ಕಾರಗಳಿಗೆ ಅಸ್ಪೃಶ್ಯವಾಗಿತ್ತು. ಇನ್ನು ಕೇವಲ ಆರ್ಥಿಕ ಲಾಭವನ್ನೇ ತನ್ನ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿರುವ ನಮ್ಮ ದೇಶದ ಖಾಸಗಿ ಶಾಲೆಗಳು ಮೀಸಲಾತಿಯೆಂದರೆ ಬೆಚ್ಚಿ ಬೀಳುತ್ತವೆ. ಇನ್ನಿಲ್ಲದ ಆತಂಕವನ್ನೂ, ಇದರಿಂದ ದೇಶದ ಭವಿಷ್ಯವೇ ನಾಶವಾಗುತ್ತದೆ ಎಂದು ಕೀಳು ಮಟ್ಟದ ಪಿತೂರಿಯನ್ನೇ ಹುಟ್ಟು ಹಾಕುತ್ತವೆ. ಇದೆಲ್ಲದರ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣದಲ್ಲಿ ಶೇಕಡ 25 ರಷ್ಟು ಮೀಸಲಾತಿಯ ಆದೇಶವನ್ನು ಖಾಸಗೀ ಶಾಲೆಗಳು ಅತ್ಯಂತ ಅಮಾನವಿಯವಾಗಿ, ಅನೈತಿಕವಾಗಿ, ಆತ್ಮದ್ರೋಹದಿಂದ ಪ್ರಶ್ನಿಸುತ್ತಿದ್ದರೆ, ಸರ್ಕಾರ ಇನ್ನು ತನ್ನ ಜವಬ್ದಾರಿ ಮುಗಿಯಿತು ಏನಿದ್ದರೂ ಖಾಸಗೀ ಶಾಲೆಗಳುಂಟು ಹಾಗೂ ಸುಪ್ರೀಂಕೋರ್ಟ್‌ನ ಆದೇಶವುಂಟು ಎಂದು ಅತ್ಯಂತ ಬೇಜವಬ್ದಾರಿಯಿಂದ ವರ್ತಿಸುತ್ತಿವೆ.

ಮೊದಲು ಖಾಸಗೀ ಶಾಲೆಗಳ ಆಕ್ಷೇಪಣೆಗಳನ್ನು ನೋಡೋಣ:

1. ಈ ಮೀಸಲಾತಿಯು ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹಾಳು ಮಾಡುತ್ತವೆ. ಮಧ್ಯಮ ವರ್ಗದ ಹಾಗೂ ಮೇಲ್ವರ್ಗದ ಶ್ರೀಮಂತ ವಿದ್ಯಾರ್ಥಿಗಳು ಕೆಳವರ್ಗಗಳ ಬಡ ವಿದ್ಯಾರ್ಥಿಗಳೊಂದಿಗೆ ಬೆರೆಯುವುದಿಲ್ಲ. ಬಡ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುತ್ತಾರೆ. ಇದು ಶಾಲೆಯಲ್ಲಿ ತಾರತಮ್ಯ ನೀತಿಯನ್ನು ಹುಟ್ಟಿ ಹಾಕುತ್ತದೆ.

ಪ್ರಜ್ಞಾವಂತರ ಉತ್ತರ: ಪ್ರಾರಂಭದಲ್ಲಿ ವಿಭಿನ್ನ ವರ್ಗಗಳ ವಿದ್ಯಾರ್ಥಿಗಳು ಒಂದುಗೂಡಿ ಬೆರೆಯಲು ತೊಂದರೆ ಇರುತ್ತದೆ. ಇದು ಸಹಜ. ಆದರೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಯರು ಇಲ್ಲಿ ಅತ್ಯಂತ ಸೂಕ್ಷವಾಗಿ, ಜವಬ್ದಾರಿಯಿಂದ, ಹೆಚ್ಚಿನ ಹೊಣೆಗಾರಿಕೆಯಿಂದ ಈ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಇದು ಕಷ್ಟದ ಕೆಲಸವೇನಲ್ಲ. ಈ ನಡುವಳಿಕೆಗಳನ್ನು ಶಿಕ್ಷಣದ ತರಬೇತಿಯ ಸಂದರ್ಭದಲ್ಲಿ ಕಲಿಸಿಕೊಡಲಾಗುತ್ತದೆ. ಒಂದು ವೇಳೆ ಕಲಿಸಿಕೊಡದಿದ್ದರೆ ಕಲ್ಪಿಸಿಕೊಡಬೇಕು. ಈ ರೀತಿಯ ಸಾಮಾಜಿಕ ಹಿನ್ನೆಲೆಯ, ಶೈಕ್ಷಣಿಕ ಹಿನ್ನೆಲೆಯ ಅಸಮತೋಲನವನ್ನು ನಿಭಾಯಿಸಲು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ಅನೇಕ ಪರಿಕರಗಳು, ಉತ್ತರಗಳು, ಸಿದ್ಧ ಮಾದರಿಗಳು ದೊರಕುತ್ತವೆ. ಶಿಕ್ಷಕರು ಇವನ್ನು ಅಭ್ಯಸಿಸಬೇಕು. ಇದು ಬಹಳ ಸುಲಭ. ಕೇವಲ ಇಚ್ಛಾಶಕ್ತಿ ಬೇಕು. ಅಷ್ಟೇ. ಆದರೆ ಇವರೆಲ್ಲ ಸಾಮಾಜಿಕ ಜವಾಬ್ದಾರಿ ಹಾಗೂ ಸಾಮಾಜಿಕ ನ್ಯಾಯದ ಅರ್ಥವನ್ನು, ಅಗತ್ಯತೆಯನ್ನು ಮನದೊಳಗೆ ಪ್ರಾಮಾಣಿಕವಾಗಿ ಬಿಟ್ಟುಕೊಂಡರೆ ಕೆಲವೇ ತಿಂಗಳುಗಳೊಳಗೆ ತಮ್ಮ ಶಾಲೆಯನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬಹುದು.ಮಾಡಲೇಬೇಕು. ಇದು ನ್ಯಾಯಾಂಗದ ಆದೇಶ.ಒಂದು ವೇಳೆ ಹಾಗಾಗದಿದ್ದರೆ ಇದು ನ್ಯಾಯಾಂಗದ ನಿಂದನೆಯಾಗುತ್ತದೆ ಎಂದು ನಾವೆಲ್ಲ ಈ ಮುನುವಾದಿಗಳಿಗೆ ಪದೇ ಪದೇ ಎಚ್ಚರಿಸುತ್ತಿರಬೇಕು.

2. ಈ ಮೀಸಲಾತಿಯ ಮೂಲಕ ಕಳ್ಳರು, ರೌಡಿ ಹಿನ್ನೆಲೆಯವರು ಶಾಲೆಗಳಲ್ಲಿ ಪ್ರವೇಶವನ್ನು ಪಡೆದುಕೊಂಡು ಒಟ್ಟಾರೆಯಾಗಿ ಶಾಲೆಯ ಶಾಂತಿ ವ್ಯವಸ್ಥೆ ಹಾಳಾಗುತ್ತದೆ. ಅವರ ಊಟದ ವ್ಯವಸ್ಥೆಯಲ್ಲಿನ ತಾರತಮ್ಯದಿಂದ ಶಾಲೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಫಲಿತಾಂಶದ ಮಟ್ಟ ಕುಸಿಯುತ್ತದೆ.

ಪ್ರಜ್ಞಾವಂತರ ಉತ್ತರ: ಇಂತಹ ನೀಚತನದ, ದುರಹಂಕಾರದ ಅಭಿಪ್ರಾಯಗಳಿಗೆ ಒಂದೇ ಉತ್ತರ. ನಾವೆಲ್ಲ ಈ ಹೇಳಿಕೆಗಳನ್ನು ನೀಡಿದವರ ವಿರುದ್ಧ ನ್ಯಾಯಾಂಗನಿಂದನೆಯ, ವೈಯುಕ್ತಿಕ ಮಾನಹಾನಿ ಅಪಾದನೆಯಡಿಯಲ್ಲಿ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬೇಕು. ಕೆಲವು ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಛೀಮಾರಿ ಹಾಕಿಸಿ ಶಿಕ್ಷೆ ಕೊಡಿಸಿದರೆ ಮಿಕ್ಕವರು ತೆಪ್ಪಗಾಗುತ್ತಾರೆ. ಸುಮ್ಮನಾಗುತ್ತಾರೆ. ಸಾಮಾಜಿಕ ನ್ಯಾಯದ ಪರವಾಗಿ ಕೇವಲ ಮಾತನಾಡುವ ನಾವು ಸಾರ್ವಜನಿಕವಾಗಿ ಕ್ರಿಯಾಶೀಲರಾಬೇಕು ಅಷ್ಟೇ. ಇದು ಬಿಟ್ಟು ಮತ್ತೆ ವಾದ ಪ್ರತಿವಾದಗಳಲ್ಲಿ ತೊಡಗಿದರೆ ಅದು ನಮ್ಮನೀಚತನವನ್ನು, ಅನೈತಿಕತೆಯನ್ನು ತೆರೆದಿಡುತ್ತದೆ.

3. ಈ ಮೀಸಲಾತಿಯ ಮೂಲಕ ನಾವು ಕೆಳವರ್ಗದ ಬಡ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರೆ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಶೇಕಡಾ 25 ರಷ್ಟು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡಬೇಕಾದರೆ ಇದಕ್ಕೆ ಬೇಕಾದ ಹಣವನ್ನು ಎಲ್ಲಿಂದ ತರುವುದು? ಇದನ್ನು ಸರಿತೂಗಿಸಲು ಮಧ್ಯಮ ಹಾಗೂ ಮೇಲ್ವರ್ಗದ ಶ್ರೀಮಂತ ಪೋಷಕರಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಬೇಕು. ಇದನ್ನು ಪ್ರತಿಭಟಿಸಿ ಅವರು ನಮ್ಮ ಶಾಲೆಯನ್ನೇ ತೊರೆಯಬಹುದು.

ಪ್ರಜ್ಞಾವಂತರ ಉತ್ತರ: ಕಡ್ಡಾಯ ಶಿಕ್ಷಣ ಹಕ್ಕಿನ ಕರಡು ನೀತಿಯ ಪ್ರಕಾರ ವಿದ್ಯಾಭ್ಯಾಸದ ಶುಲ್ಕದ ಶೇಕಡ 35 ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಿದರೆ ಶೇಕಡ 65 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ಈ ಅನುಕೂಲ ಕಲ್ಪಿಸಕೊಡುವುದಕ್ಕಾಗಿ ಖಾಸಗೀ ಶಾಲೆಗಳು ಇತರೇ ಸೌಲಭ್ಯಗಳನ್ನು ಶೇಕಡ 25 ರಷ್ಟು ಹೆಚ್ಚುವರಿ ಬಡ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಬೇಕು. ಈ ಹೆಚ್ಚುವರಿಯಾದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುವು ಮಾಡಿಕೊಡಲು ತಮ್ಮ ಪೇಮೆಂಟ್ ವಿಭಾಗದ ಪ್ರವೇಶದಲ್ಲಿ ಶೇಕಡವಾರು 25 ರಷ್ಟು ಕಡಿತಗೊಳಿಸಲೇಬೇಕು. ಇದಕ್ಕಾಗಿ ತಮ್ಮ ಲಾಭಂಶದಲ್ಲಿ ಕೊಂಚ ಕಡಿಮೆಗಳಿಕೆ ಉಂಟಾಗಬಹುದು. ಈ ಮೂಲಕವಾದರೂ ಪ್ರಾಥಮಿಕ ಶಿಕ್ಷಣವೆನ್ನುವುದು ವ್ಯಾಪಾರದ ಸರಕಲ್ಲ ಬದಲಾಗಿ ಮೂಲಭೂತ ಅವಶ್ಯಕತೆ ಮತ್ತು ಇದನ್ನು ಉಚಿತವಾಗಿ ಪಡೆಯುವುದು ಬಡವರ ಹಕ್ಕು ಎನ್ನುವ ಜೀವಪರ ನೈಸರ್ಗಿಕ ನೀತಿಯನ್ನು ಖಾಸಗೀ ಶಿಕ್ಷಣ ಸಂಸ್ಥೆಗಳು ಗೌರವಿಸಲೇಬೇಕು. ಇದನ್ನೂ ಮಾಡಲಾಗದಿದ್ದರೆ ಅವರು ಈ ವಲಯವನ್ನೇ ಬಿಟ್ಟು ಹೋಗಬೇಕಾಗುತ್ತದೆ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರಗಳು ತಾಕೀತು ಮಾಡಲೇಬೇಕು.

4. ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನು ಜಾರಿಗೊಳಿಸಲು ತಮ್ಮ ಸರ್ವ ಶಿಕ್ಷಣದ ಅಭಿಯಾನದ ಅಡಿಯಲ್ಲಿ ಸರ್ಕಾರವೇ ಏತಕ್ಕೆ ಹೆಚ್ಚುವರಿ ಶಾಲೆಗಳನ್ನು ಆರಂಭಿಸಿ ಪ್ರವೇಶಕ್ಕಾಗಿ ಕಾದಿರುವ ಸುಮಾರು 10 ಲಕ್ಷದಷ್ಟು ಬಡ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಿಕೊಳ್ಳಬಾರದು ? ನಮ್ಮನ್ನೇಕೆ ಪೀಡಿಸುತ್ತೀರಿ?

ಪ್ರಜ್ಞಾವಂತರ ಉತ್ತರ: ನೋಡಿ ಇವರ ನೈತಿಕ ಪತನ!! ಕೆಳವರ್ಗಗಳ ಬಡಜನತೆಯೊಂದಿಗೆ ಮಾನಸಿಕ ಹಾಗೂ ಭೌತಿಕ ಸಂಪರ್ಕವನ್ನು ಸಂಪೂರ್ಣ ಕಡೆದುಕೊಂಡಿರುವ ಈ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು 30  ವರ್ಷಗಳ ಹಿಂದೆ ಹೀಗಿರಲಿಲ್ಲ. ಕಳೆದ 20 ವರ್ಷಗಳ ಖಾಸಗೀಕರಣದ ಲಾಭವನ್ನು ಏಕಪಕ್ಷೀಯವಾಗಿ ಹೊಡೆದುಕೊಂಡ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು ಆರ್ಥಿಕವಾಗಿ ಬಲವಾಗುತ್ತಾ ತಮ್ಮ ಮಾನಸಿಕ ಭ್ರಷ್ಟಾಚಾರವನ್ನೂ, ಬೌದ್ಧಿಕ ದಿವಾಳಿತನವನ್ನೂ ಕೂಡ ಅದೇ ವೇಗದಲ್ಲಿ ಬೆಳೆಸಿಕೊಂಡಿವೆ. ಈ ವರ್ಗಗಳು ತಮ್ಮ ಆರ್ಥಿಕ ಬಲದಿಂದ ಆಗಲೇ ಈ ಖಾಸಗೀ ಶಾಲೆಗಳ ಅನುಕೂಲತೆಗಳನ್ನು, ಗುಣಮಟ್ಟವನ್ನು ಬಳಸಿಕೊಂಡು ಜೀವನದಲ್ಲಿ ಮೇಲೇರಿದ್ದಾರೆ. ಉತ್ತಮ ಸಂಬಳ ತೆಗೆದುಕೊಳ್ಳುತಿದ್ದಾರೆ. ಇದನ್ನಾಗಲೇ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳ ಮೂರು ತಲೆಮಾರುಗಳು ಇದರ ಫಲವನ್ನು ಅನುಭವಿಸಿವೆ.ಆದರೆ ಇದೇ ಸೌಲಭ್ಯ, ದುಬಾರಿಯಾದ ಖಾಸಗೀ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೆಳವರ್ಗಗಳ, ದಲಿತರ ಬಡಮಕ್ಕಳು ಲಭ್ಯವಾಗಿಲ್ಲ. ಏಕೆಂದರೆ ದುಬಾರಿಯಾದ ಈ ಖಾಸಗೀ ಶಿಕ್ಷಣ ಮಾಧ್ಯಮ ಇವರಿಗೆ ಗಗನಕುಸುಮ ಎಂದು ಎಲ್ಲರಿಗೂ ಗೊತ್ತು. ಇದನ್ನು ಪಡೆದುಕೊಳ್ಳುವುದೇ ಸಾಮಾಜಿಕ ನ್ಯಾಯದ ಮೂಲ ತಿರುಳು ಇದನ್ನು ಅನುಷ್ಟಾನಗೊಳಿಸುವುದರ ಮೊದಲ ಹೆಜ್ಜೆಯೇ ಈ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಮೂಲ ನೀತಿ. ಇದನ್ನು ಶತಮಾನಗಳಿಂದ ಹೇಳುತ್ತಲೇ ಬಂದಿದ್ದರೂ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು ಅದನ್ನು ಒಪ್ಪಿಕೊಂಡು ಅನುಸರಿಸಲು ತಯಾರಿಲ್ಲವೆಂದರೆ ನಾವೆಲ್ಲ ಈ ಜನಗಳ ಮನಪರಿವರ್ತನೆಗೆ ಕಾಯುತ್ತಾ ಮತ್ತೆ ಶತಮಾನಗಳವರೆಗೆ ಕಾಯುತ್ತಾ ಕೂಡಬೇಕೇ (ಆತ್ಮವಂಚನೆಯ ಮಾರ್ಗ) ಅಥವಾ ಸುಪ್ರೀಂಕೋರ್ಟನ ಆದೇಶವನ್ನೇ ಒಂದು ದೊಡ ಅಸ್ತವನ್ನಾಗಿ ಬಳಸಿಕೊಂಡು (ಆತ್ಮಸಾಕ್ಷಿಯ ಮಾರ್ಗ) ಕ್ರಿಯಾಶೀಲರಾಗಬೇಕೇ.

ಇನ್ನು ಕಡೆಯದಾಗಿ ರಾಜ್ಯ ಸರ್ಕಾರಗಳ ಆತ್ಮವಂಚನೆ ಹಾಗೂ ಸಮಾಜದ್ರೋಹ. ಸುಪ್ರೀಂಕೋರ್ಟನ ಆದೇಶದಡಿಯಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದೇಶಗಳನ್ನು, ಗಡುವನ್ನೂ ಜಾರಿಗೊಳಿಸಬೇಕಲ್ಲವೇ? ಇದಕ್ಕಾಗಿ ಸಮಿತಿಯನ್ನು ರಚಿಸಿ ಈಗಾಗಲೇ ಇದರ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಇದಾವುದನ್ನೂ ಮಾಡದೆ ಸರ್ಕಾರಗಳು ನಿದ್ರಿಸುತ್ತಿವೆ. ಈ ಖಾಸಗೀ ಶಿಕ್ಷಣ ಸಂಸ್ಥೆಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲಿ ಎಂದು ಬಕಪಕ್ಷಿಯಂತೆ ಕಾಯುತ್ತಿವೆ. ಈಗಾಗಲೇ ಖಾಸಗೀ ಶಿಕ್ಷಣ ಸಂಸ್ಥೆಗಳು ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿತವಾಗಲು ವಾಮಮಾರ್ಗಗಳನ್ನು ಹುಡುಕುತ್ತಿವೆ. ಏಕೆಂದರೆ ಅಲ್ಲಿ ಈ ಕಾಯ್ದೆಗೆ ವಿನಾಯಿತಿ ಇದೆ. ಇದಕ್ಕೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಇದು ಎಂತಹ ನೀಚತನ !!!

ಕೇಂದ್ರ ಸರ್ಕಾರ ನಿಯೋಜಿಸಿದ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಸಮಿತಿಯು ಶಿಕ್ಷಣ ಕಾಯ್ದೆ ಹಕ್ಕು ಕಾನೂನಿಗೆ ಪೂರಕವಾಗಿ ದೇಶದ ಸರ್ಕಾರಿ ಶಾಲೆಗಳ ಬಗೆಗೆ ಒಂದು ವರದಿಯನ್ನು ನೀಡಲು ಇಲ್ಲಿನ ಕೆಲವು ಪ್ರಮುಖ ರಾಜ್ಯಗಳನ್ನು ತನ್ನ ಸಂಶೋಧನೆಗಾಗಿ ಆರಿಕೊಂಡು ಕೆಳಗಿನಂತೆ ವರದಿ ನೀಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಶೇಕಡಾ 55-60 ರಷ್ಟು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಧ್ಯದಲ್ಲೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಶೇಕಡಾ 30 ರಷ್ಟು ಶಾಲೆಗಳು ಏಕೋಪಾಧ್ಯಾಯ ಶಾಲೆಗಳು. ಇನ್ನೂ ಕನಿಷ್ಟ 6 ಲಕ್ಷ ಶಿಕ್ಷಕರ ಅವಶ್ಯಕತೆ ಇದೆ. ಉತ್ತರ ಭಾರತದ ಅನೇಕ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯನ್ನು ಹೊರ ಗುತ್ತಿಗೆ ನೀಡುತ್ತಾರೆ. ಶೇಕಡಾ 8 ರಷ್ಟು ಶಾಲೆಗಳಿಗೆ ಕಟ್ಟಡಗಳಿಲ್ಲ. ಶೇಕಡಾ 15 ರಷ್ಟು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೇಕಡಾ 60 ರಷ್ಟು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಶೇಕಡಾ 70 ರಷ್ಟು ಶಾಲೆಗಳಲ್ಲಿ ವಿದ್ಯುತ ವ್ಯವಸ್ಥೆ ಇಲ್ಲ. ಇದಕ್ಕೆ ಅತ್ಯಂತ ತೀವ್ರವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ ಸುಪ್ರೀಂಕೋರ್ಟ ರಾಜ್ಯ ಸರ್ಕಾರಗಳಿಗೆ ತಮ್ಮ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಇನ್ನಿತರ ಸೌಕರ್ಯಗಳ ಬಗೆಗೆ ತಕ್ಷಣ ವರದಿ ನೀಡಲು ಸೂಚಿಸಿದಾಗ ಆತ್ಮಸಾಕ್ಷಿ ಇಲ್ಲದ ಸರ್ಕಾಗಳು ಮೇಲ್ಕಾಣಿಸಿದ ಎಲ್ಲಾ ಸೌಲಭ್ಯಗಳು ಲಭ್ಯವಿದೆ ಎಂದು ಸುಪ್ರೀಂಕೋರ್ಟಗೆ ಸುಳ್ಳು ವರದಿಯನ್ನು ಸಲ್ಲಿಸಿತು ಅದೂ ಸುಳ್ಳು ಅಂಕಿ ಅಂಶಗಳೊಂದಿಗೆ. ಇದನ್ನು ಸಮ್ಮತಿಸದ ಸುಪ್ರೀಂಕೋರ್ಟ 2013 ರಲ್ಲಿ ಸಂಪೂರ್ಣ ಪರಿಶೋಧನೆ ನಡೆಸಲು ಸೂಚಿಸಿದೆ. ಇದು ನಮ್ಮ ಸರ್ಕಾರಿ ಶಾಲೆಗಳ ಎಂದೂ, ಎಂದೆಂದೂ ಮುಗಿಯದ ದುರಂತ ಕಥೆ. ಇದನ್ನು ವಿಸ್ರೃತವಾಗಿ ಬರೆದರೆ ನೂರಾರು ಪುಟಗಳು ಸಾಲದು. ನಿಜ ನಾನು ಮತ್ತು ನಮ್ಮ ತಲೆಮಾರು ಮತ್ತು ನಮ್ಮ ಹಿರಿಯ ತಲೆಮಾರಿನವರೆಲ್ಲ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ಓದಿದ್ದು.

ಆದರೆ ಅದು ಭೂತಕಾಲದ ಮಾಧ್ಯಮದಲ್ಲಿ ಓದಿಸಿ ಸಾರ್ವಜನಿಕವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣದ ಪರವಾಗಿ ಮಾತನಾಡಿದರೆ ಇದು ಕಂಡವರ ಮಕ್ಕಳನ್ನು ಬಾವಿಗೆ ದೂಡಿದಂತಲ್ಲದೇ ಮತ್ತಿನ್ನೇನು? ನಮಗೆಲ್ಲಾ ಕನ್ನಡ ಮಾಧ್ಯಮದ ಶಿಕ್ಷಣದ ಹೋರಾಟಕ್ಕೆ ಈ ಅಲ್ಪಸಂಖ್ಯಾತ, ದಲಿತ, ಕೆಳ ವರ್ಗಗಳ ಜನಾಂಗ ಒಂದು ಆಟಿಕೆ ಮಾತ್ರ. ನಮ್ಮ ಕನ್ನಡಾಭಿಮಾನಕ್ಕೆ, ನಾವು ಪಲಾಯನವಾದಿಗಳಲ್ಲ ಎಂದು ಇಡೀ ಜಗತ್ತಿಗೆ ತೋರ್ಪಡಿಸಿಕೊಳ್ಳುವುದಕ್ಕೆ, ಕಮ್ಮಟಗಳಲ್ಲಿ ನಾಡಿನ ಭಾಷೆಯ ಮಹತ್ವದ ಮೇಲೆ ಚಿಂತಿಸಿ, ಮಂಥಿಸಿ ಮಿಂಚುವುದಕ್ಕೆ ನಾವು ತಳ ಸಮುದಾಯಗಳ, ಅಲ್ಪ ಸಂಖ್ಯಾತರ ಮಕ್ಕಳನ್ನ, ಹಿಂದುಳಿದವರ, ಬಡವರ ಮಕ್ಕಳನ್ನ ಬಳಸಿಕೊಂಡು, ಅವರನ್ನು ಕನ್ನಡದ ಪರವಾದ ಹೋರಾಟಕ್ಕೆ ಎಳೆದು ತಂದು ನಮ್ಮ ಅಹಂನ ಕನ್ನಡ ಉಳಿಸಿಸಲು ಇವರನ್ನ ಹಾದಿ ತಪ್ಪಿಸಿ ವೇದಿಕೆಗಳ ಮೇಲೆ ನಮ್ಮ ಕನ್ನಡ ಉದ್ಧಾರ ಮಾಡಿಕೊಳ್ಳುವುದಾದರೆ, ಈ ರೀತಿ ಶೋಷಿಸುವುದೇ ಕನ್ನಡಪರ ಚಿಂತನೆ ಎನ್ನುವುದಾದರೆ ಇಂತಹ ಲೊಳಲೊಟ್ಟೆ, ಬುಡುಬುಡಿಕೆಯ ಹೋರಾಟಕ್ಕೆ ನನ್ನಂತಹವರ ವಿರೋಧವಿದೆ. ಇದು ಅತಿಯಾದ ಮಾತು ಎಂದು ನನಗೆ ಗೊತ್ತು. ಆದರೆ ದಯವಿಟ್ಟು ಇದನ್ನು ನಾವೆಲ್ಲ ಬಹಳ ಎಚ್ಚರಿಕೆಯಿಂದ, ಆತ್ಮಸಾಕ್ಷಿಯಿಂದ ಗಮನಿಸಬೇಕು. ಇಂದು ನಿಜಕ್ಕೂ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಅನ್ನ ತಂದುಕೊಡುವ ಸಿದ್ಧ ಸೂತ್ರಗಳಾಗಲೀ, ಮಂತ್ರದಂಡಗಳಾಗಲೀ, ದೇಸೀ ಮಾರ್ಗಗಳಾಗಲೀ, ಭವಿಷ್ಯದ ಕಾಣ್ಕೆಗಳಾಗಲೀ ಖಂಡಿತ ಇಲ್ಲವೇ ಇಲ್ಲ. ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಈ ಅನ್ನ ತಂದು ಕೊಡುವ ಮಾರ್ಗೋಪಾಯಗಳನ್ನು ಸರ್ಕಾರದ ಜೊತೆಗೆ ಸೇರಿ ನಾವೆಲ್ಲ ರೂಪಿಸಬೇಕು. ಅದಕ್ಕಾಗಿ ನಮ್ಮ ಖಾಸಗೀ ಸಮಯವನ್ನು ತ್ಯಾಗ ಮಾಡಲೇಬೇಕು. ಆಗ ಮಾತ್ರ ನಮ್ಮ ಕನ್ನಡಪರ ಹೋರಾಟಕ್ಕೆ ಮಾನ್ಯತೆ ದೊರಕುತ್ತದೆ. ನಮ್ಮ ಕನ್ನಡ ಮಾಧ್ಯಮದಲ್ಲಿನ ಶಿಕ್ಷಣದ ಬಗೆಗಿನ ಸಂವಾದದಲ್ಲಿ ದಲಿತ ಸಂಘಟನೆಗಳನ್ನೂ, ಅಲ್ಪಸಂಖ್ಯಾತ ಸಮುದಾಯದವರನ್ನೂ ಒಳಗೊಳ್ಳಬೇಕು. ಅವರ ನಿರ್ಣಯವೇ ನಿರ್ಣಾಯಕವಾಗಿರಬೇಕು. ಆಗಲೇ ಇದಕ್ಕೆ ನ್ಯಾಯ ದೊರಕುತ್ತದೆ. ಆಗ ನಮ್ಮ ಕನ್ನಡ ಮಾಧ್ಯಮದ ಪರವಾದ ನಿಲುವಿಗೆ ಸ್ವಯಂ ಮಾನ್ಯತೆ ದೊರಕುತ್ತದೆ.

ಈಗಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು 200 % ಸಾಧ್ಯವಿಲ್ಲ. ಇಲ್ಲಿನ ನೌಕರಶಾಹಿ, ಶಿಕ್ಷಣ ಮಂತ್ರಿ, ಶಿಕ್ಷಕರು, ಮತ್ತು ಶಿಕ್ಷಕರ ತರಬೇತಿ ಪರಿಕರಗಳು ಎಲ್ಲವೂ ಒಟ್ಟಿಗೇ ಈಗಿರುವ ಮಟ್ಟದಿಂದ ಕನಿಷ್ಟ ಶೇಕಡ 70ರಷ್ಟು ಮೇಲೇರಬೇಕು. ಇದು ಸಾಧ್ಯವೇ? ಅದಕ್ಕಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣಕ್ಕಾಗಿ ಅತ್ಯಂತ ನಿಷ್ಟುರ, ಸತ್ಯಪರ. ಅನಿವಾರ್ಯ ಕ್ರಾಂತಿಕಾರಿ ಕ್ರಮಗಳು (ಘನ ಸರ್ಕಾರ ಮನಸ್ಸಿದ್ದರೆ ತೆಗೆದುಕೊಳ್ಳಬೇಕಾದದ್ದು):

  1. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕುಹಕಿಗಳ ಪ್ರಕಾರ ಟಿಎ,ಡಿಎ ಪ್ರಾಧಿಕಾರ), ಕನ್ನಡ ಪುಸ್ತಕ ಪ್ರಾಧಿಕಾರ (ಕುಹಕಿಗಳ ಪ್ರಕಾರ ಸದ್ಯಕ್ಕೆ ಪುನರ್ವಸತಿ ಕೇಂದ್ರ), ಸಂಸ್ಕೃತ ವಿಶ್ವವಿದ್ಯಾಲಯ (ಕುಹಿಕಿಗಳ ಪ್ರಕಾರ ಸದ್ಯಕ್ಕೆ ಬಾಜಾ ಬಜಂತ್ರಿಗಳ, ಭಟ್ಟಂಗಿಗಳ, ಅನೇಕ ಬಾರಿ ಕೇಸರೀ ಪಡೆಗಳ, ಬಹುಮಾನ ವಿತರಕರ ಆಡೊಂಬಲ)ಗಳನ್ನು ಕೆಲವು ವರ್ಷಗಳಷ್ಟು ಕಾಲ ತಾತ್ಕಾಲಿಕವಾಗಿ ವಿಸರ್ಜಿಸಿ ಅಮಾನತ್ತಿನಲ್ಲಿಡಬೇಕು.
  2. ಮೇಲಿನ ಕನ್ನಡದ ಮೂರೂ ಬೇಜವಬ್ದಾರಿ ಸರ್ಕಾರಿ ಸಂಸ್ಥೆಗಳನ್ನು 4 ಕನ್ನಡ ಶಾಲಾ ಘಟಕಗಳಾಗಿ ಪರಿವರ್ತಿಸಬೇಕು. ಇವುಗಳನ್ನು ಹೈದರಾಬಾದ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು 4 ಘಟಕಗಳಾಗಿ ಪುನರ್ರಚಿಸಬೇಕು. ಮೂಲ ಸಂಸ್ಥೆಗಳಲ್ಲಿನ ಸಿಬ್ಬಂದಿಗಳನ್ನು ಈ ಕನ್ನಡ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಕೊರತೆಯಾದರೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎರವಲು ಪಡೆಯಬೇಕು.
  3. ಮೇಲಿನ 4 ಘಟಕಗಳಿಗೆ ಕನ್ನಡದ ಅತ್ಯುತ್ತಮ ಪ್ರಗತಿಪರ, ಜಾತ್ಯಾತೀತ ಶಿಕ್ಷಣ ತಜ್ಞರನ್ನು ಮುಖ್ಯಸ್ತರನ್ನಾಗಿ ನೇಮಿಸಬೇಕು. ಇವರಿಗೆ ಕನ್ನಡ ಮಾಧ್ಯಮದಲ್ಲಿನ ಅತ್ಯುತ್ತಮ ಶಿಕ್ಷಣಕ್ಕಾಗಿ ಅತ್ಯಂತ ತುರ್ತಿನ ಕರಡು ನೀತಿ ಮತ್ತು ಯೋಜನೆಗಳು (Short term plan)ಮತ್ತು ದೂರಗಾಮಿ ಕರಡು ನೀತಿ ಮತ್ತು ಯೋಜನೆಗಳು (Short term plan) ಸಿದ್ಧಪಡಿಸಲು ಕಾಲಮಿತಿಯನ್ನು ನಿಗದಿಪಡಿಸಬೇಕು.
  4. ಮೇಲಿನ ಶಿಕ್ಷಣ ತಜ್ಞರು ಮತ್ತು ಅವರ ಸಹಾಯಕರು ಕನ್ನಡ ಮಾಧ್ಯಮದ ಉನ್ನತೀಕರಣಕ್ಕೆ ತಯಾರಿಸಿದ ಕರಡು ನೀತಿ ಮತ್ತು ಯೋಜನೆಗಳ ಅನುಷ್ಟಾನಕ್ಕೆ ಸ್ವಯಂಸೇವಕರ ಪಡೆಯನ್ನು ಸರ್ಕಾರ ನೇಮಿಸಿಕೊಳ್ಳಬೇಕು. ಇದಕ್ಕೆ ಬುದ್ಧಿಜೀವಿಗಳು, ಕನ್ನಡಪರ ಉತ್ಸಾಹಿಗಳು ನೇರವಾಗಿ ಅಖಾಡಕ್ಕೆ ಧುಮುಕಬೇಕು. ಬೇಕಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮತ್ತು ಕನ್ನಡಪರ ಹೋರಾಟದ ಸಂಘಟನೆಗಳಿಂದ ಸೇವೆಯನ್ನು ಪಡೆದುಕೊಳ್ಳಬೇಕು.
  5. ಕಡೆಯದಾಗಿ ಸರ್ಕಾರ ಇದಕ್ಕೆ ಯಾವುದೇ ರೀತಿಯ ಕಾನೂನು ತೊಡಕು ಎದುರಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದು ಸುಮ್ಮನೇ ಯೋಚಿಸಿದಾಗ ಹೊಳೆದದ್ದು. ಇದು ನಿಜಕ್ಕೂ ಸೀಮಿತವಾದದ್ದು. ಇದಕ್ಕಿಂತಲೂ ಉತ್ತಮವಾದ ಅನೇಕ ಹೊಳಹುಗಳು, ಯೋಜನೆಗಳು ನೂರಾರು ಇದೆ. ಇದನ್ನು ಮುಕ್ತ ಸಂವಾದದ ಮೂಲಕ ಜಾರಿಗೊಳಿಸಬಹುದು. ಏಕೆಂದರೆ ಕನ್ನಡ ಮಾದ್ಯಮಗಳ ಉನ್ನತೀಕರಣವೆನ್ನುವ ಕತ್ತಲ ದಾರಿ ಬಲು ದೂರ. ನಾವು ಕಡೇ ಪಕ್ಷ ಮಿಣುಕು ದೀಪಗಳಾಗದಿದ್ದರೆ ಹೇಗೆ?