Monthly Archives: October 2012

“ಗಾಂಧಿ ಮರ” : ದ್ವಿತೀಯ ಬಹುಮಾನ ಪಡೆದ ಕತೆ

[ಗಾಂಧಿ ಜಯಂತಿ  ಕಥಾ ಸ್ಪರ್ಧೆ – 2012, ರಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ.]

– ಶ್ರೀನಿಧಿ.ಡಿ.ಎಸ್

“ಅಲ್ಲ ಮಾರಾಯಾ, ಪಾಸ್ಟು ಬಂದು ಎಂತ ಸಾದ್ನೆ ಮಾಡ್ಲಿಕ್ಕುಂಟು? ಮನೆಗೆ ಬೇಗ ಹೋಗಿ ನೀನು ಹೆಂಡ್ತಿಯ ಜಕ್ಕೆಲಲ್ಲಿ ಬೀಳುದಲ್ವಾ?” ಅಂತಂದು ವೆಂಕಟೇಶ್ವರ ಸ್ಟೋರಿನ ಕಿಣಿ ಮಾಮ್ ಜೋರು ನಗಾಡಿದಾಗ ಅದಕ್ಕೆ ಏನು ಉತ್ತರ ಕೊಡಬೇಕು ಎಂದು ದಾಮುವಿಗೆ ತಿಳಿಯಲಿಲ್ಲ. ಅಲ್ಲಿ ಕೂತಿದ್ದ ನಾಕಾರು ಮಂದಿ ಪಿಸಕ್ ಎಂದು ನಕ್ಕಾಗ ದಾಮುವಿಗೆ ಮತ್ತೂ ಮರ್ಯಾದಿ ಹೋದ ಹಾಗಾಯ್ತು. ಸ್ವಲ್ಪ ಹೊತ್ತಿಗಷ್ಟೇ ಮುಂಚೆ ಗ್ರಾಮಸಭೆ ಮುಗಿಸಿಕೊಂಡು ಬಂದಿದ್ದ ಪಂಚಾಯ್ತು ಮೆಂಬರ್ ದಾಮು ಗೋಳಿಬೈಲಿನ ಕಿಣಿಮಾಮ್ ನ ಅಂಗಡಿ ಮುಂದೆ ಕೂತಿದ್ದ ನಾಲ್ಕಾರು ಜನರಿಗೆ ಬ್ರೇಕಿಂಗ್ ನ್ಯೂಸೊಂದನ್ನು ಕೊಡುವ ಉದ್ದೇಶ ಹೊಂದಿದ್ದ. ಸರಕಾರದ ಹೊಸ ಯೋಜನೆಯೊಂದರ ಅನ್ವಯ, ಅವನ ಹಳ್ಳಿಗೆ ಕಾಂಕ್ರೀಟ್ ರಸ್ತೆ ಮಂಜೂರಾಗಿತ್ತು. ಆ ವಿಚಾರವನ್ನು ಊರಲ್ಲಿ ಸುದ್ದಿಯಾಗಿಸಿ ತನ್ನ ಲೆವೆಲ್ ಹೆಚ್ಚಿಗೆ ಮಾಡಿಕೊಳ್ಳಬೇಕು ಎಂಬುದಷ್ಟೇ ಅವನ ತಲೆಯಲ್ಲಿತ್ತು. ಅಂಗಡಿಯೆದುರು ಬಂದವನೇ “ನಮ್ಮೂರಿಗೆ ಕಾಂಕ್ರೀಟು ರೋಡು ಬರ್ಲಿಕ್ಕುಂಟು” ಎಂದು ಘೋಷಿಸಿದ . ಅವನ ಮಾತಿಗೆ ಯಾರಿಂದಲೂ ಪ್ರತಿಕ್ರಿಯೆಯೇ ಬರಲಿಲ್ಲ. ತಾನು ಹೇಳಿದ್ದು ಕೇಳಿಲ್ಲವೇನೋ ಅಂದುಕೊಂಡ ದಾಮು, ಅದನ್ನೇ ಮತ್ತೆ ದೊಡ್ಡದಾಗಿ ಹೇಳುತ್ತ, ಬೆಂಚಿನ ಮೇಲಿದ್ದ ಪೇಪರು ಕೈಗೆತ್ತಿಕೊಂಡು ಕೂತ. ಒಳಗೆ ಸಕ್ಕರೆ ತೂಗುತ್ತಿದ್ದ ಕಿಣಿ ಮಾಮ್, “ಆಯ್ತು ಮಾರಾಯ ಅದೆಂತ ದೊಡ್ಡ ಸಂಗ್ತಿ? ಮಂಗಳೂರು ಪೇಟೆ ತುಂಬ ಸಿಮೆಂಟಿಂದೇ ರಸ್ತೆ ಅಲ್ವಾ?ಮತ್ತೆ ನಮ್ಮ ಈಗಿನ ರಸ್ತೆಯೇ ಒಳ್ಳೆದುಂಟಲ್ಲ, ಕಾಂಕ್ರೀಟು ಯಾಕಂತೆ, ದುಡ್ಡು ತಿನ್ಲಿಕ್ಕಾ? ಅದೂ ಈ ಹುಚ್ಚು ಮಳೆಗಾಲದಲ್ಲಿ ಎಂತ ತೋಡಿಗೆ ಸಿಮೆಂಟು ಹಾಕ್ತಾರಾ ” ಎಂದಾಗ ದಾಮು “ಕಾಂಕ್ರೀಟು ರಸ್ತೆಯಲ್ಲಿ ಫಾಸ್ಟ್ ಹೋಗ್ಲಿಕ್ಕಾಗ್ತದೆ ಕಿಣಿಯವರೇ” ಎಂದು ಆ ಕ್ಷಣಕ್ಕೆ ತೋಚಿದ್ದನ್ನು ಹೇಳಿದ್ದ. ಹೊಸದಾಗಿ ಮದುವೆ ಆಗಿದ್ದ ಆತನನ್ನು ಲೇವಡಿ ಮಾಡಲೆಂದೇ ಕಿಣಿ ಮಾಮ್ ಹೆಂಡತಿಯ ತೊಡೆ ವಿಷಯ ಎತ್ತಿ ಮುಜುಗರಕ್ಕೆ ಈಡು ಮಾಡಿದ್ದರು. ದಾಮುವಿಗೆ ನಾಲ್ಕು ಜನರೆದುರು ತನ್ನ ಮರ್ಯಾದೆಯನ್ನು ತೂಕಕ್ಕೆ ಹಾಕಿದ ಕಿಣಿ ಮಾಮ್ ಮೇಲೆ ಸಿಟ್ಟು ಬಂದರೂ, ಏನೂ ಮಾಡುವ ಹಾಗಿರಲಿಲ್ಲ. ಪುಣ್ಯಕ್ಕೆ ಅಲ್ಲಿದ್ದ ಉಳಿದವರೂ ಆ ಮಾತಿಗೆ ಹೆಚ್ಚೇನೂ ಒಗ್ಗರಣೆ ಹಾಕದೇ, ದಾಮುವಿನ ಹೋಗುತ್ತಿದ್ದ ಮರ್ಯಾದೆಗೆ ಒಡ್ಡು ಹಾಕಿ ನಿಲ್ಲಿಸಿದ್ದರು. “ಕೆಲ್ಸ ಮಾಡದಿದ್ರೆ ಸರ್ಕಾರಕ್ಕೆ ಬಾಯಿಗೆ ಬಂದ ಹಾಗೆ ಬೈಯುದೂ ನೀವೇ, ಎಂಥದೋ ಒಂದು ಹೊಸ್ತು ಬಂದ್ರೆ ಅದನ್ನು ಪುಸ್ಕು ಮಾಡುದೂ ನೀವೇ” ಎಂದು ಗೊಣಗುತ್ತ ಪಿರಿಪಿರಿ ಮಳೆಯಲ್ಲಿಯೇ ಅಲ್ಲಿಂದ ಹೊರಟ ದಾಮು. ಹೊರಟ ಬೆನ್ನಲ್ಲಿ ಮತ್ತೆ ಕೇಳಿದ ನಗುವಿನ ಸದ್ದನ್ನು ಬೇಕೆಂದೇ ಅವನ ಕಿವಿ ಸ್ವೀಕರಿಸಲಿಲ್ಲ.

ಮಂಗಳೂರು ಹೊರವಲಯದ ಕೂಳೂರಿನಿಂದ ಪಶ್ಚಿಮಕ್ಕೆ ಐದು ಕಿಲೋಮೀಟರು ಹೋದರೆ ಸಿಗುವ ಗೋಳಿಬೈಲು ಸುತ್ತಲಿನ ಯಾವ ಮಹಾನಗರ ಪಾಲಿಕೆಯ, ಪುರಸಭೆಗಳ ವ್ಯಾಪ್ತಿಗೂ ಬರದೇ ಹಾಗೇ ಉಳಿದುಕೊಂಡಿರುವ ಮೂರ್ನಾಕು ಸಾವಿರ ಜನ ಇರುವ ಊರು. ಊರಿಗೆ ಬೇಕಾದ ಶಾಲೆ, ಪಂಚಾಯ್ತಿ , ನಾಲ್ಕಾರು ಅಂಗಡಿಗಳು, ಆರೋಗ್ಯ ಕೇಂದ್ರಗಳಿರುವ ಸಾದಾ ಸೀದಾ ಹಳ್ಳಿ. ಗೋಳಿಬೈಲಿನ ಜನಕ್ಕೆಲ್ಲ ಮಂಗಳೂರೇ ಮುಖ್ಯ ಪಟ್ಟಣ. ಏನೂ ಕೆಲ್ಸವಿಲ್ಲದೇ ಓಡಾಡಿಕೊಂಡಿರುವ ಒಂದಿಷ್ಟು ಜನರಲ್ಲಿ ದಾಮುವಿನಂತಹ ಕೆಲವರು. ಆದರೆ ದಾಮುವಿಗೆ ಪಂಚಾಯ್ತಿ ಮೆಂಬರು ಎಂಬ ಹಣೆಪಟ್ಟಿ ಅಂಟಿಕೊಂಡಿರುವುದರಿಂದ, ಸ್ವಲ್ಪ ತೂಕ.

ದಾಮು ಗ್ರಾಮ ಪಂಚಾಯತ್ ಮೆಂಬರಾದ್ದೇ ನಸೀಬಲ್ಲಿ. ಊರಲ್ಲಿ ಓಡಾಡಿಕೊಂಡಿದ್ದು ’ಒಳ್ಳೆ ಹೆಸರು’ ಮಾಡಿದ್ದ ಅವನ ಅಣ್ಣ ರಾಘವನಿಗೆ ದುಬೈಲಿ ಕೆಲಸ ಸಿಕ್ಕಿ, ಪೊಲಿಟಿಕ್ಸು ಬಿಟ್ಟು ಹೊರಟುಬಿಟ್ಟಿದ್ದ. ಅವ ಊರಲ್ಲಿದ್ರೆ ಎರಡು ಮೂರು ಕೇಸ್ ಜಡಿದು ಪೊಲೀಸ್ರು ಹಿಡ್ದು ಒಳಗೆ ಹಾಕುವ ಚಾನ್ಸಿತ್ತು ಅಂತ ಜನ ಮಾತಾಡಿಕೊಂಡಿದ್ದು ಹೌದಾದ್ರೂ, ಆಡಿಕೊಳ್ಳುವವರ ಮಾತು ಗಾಳಿಯಲ್ಲೇ ಕರಗಿಹೋಗಿತ್ತು. ಅರ್ಜೆಂಟಿಗೆ ಬೇರೆ ಯಾವ ಕ್ಯಾಂಡಿಡೇಟೂ ಸಿಗದೇ, ಅಲ್ಲಿ ಇಲ್ಲಿ ಓಡಾಡಿಕೊಂಡು ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ ಅವನ ತಮ್ಮ ದಾಮು ಎಲೆಕ್ಷನ್ನಿಗೆ ನಿಂತು, ಗೆದ್ದೂ ಬಿಟ್ಟಿದ್ದ. ಅದೃಷ್ಟದಲ್ಲಿ ಗೆದ್ದ ಅಂತ ಅಂದುಕೊಂಡರೂ, ದಾಮುವಿನ ಗೋವಿನಂತಹ ಸ್ವಭಾವ ಕೂಡ ಅದಕ್ಕೆ ಸಹಾಯ ಮಾಡಿತ್ತು. ಅಣ್ಣನ ಹಾಗೆ ಚಾಲೂ ಅಲ್ಲದಿದ್ದರೂ, ಗೋಳಿಬೈಲಿನ ಸಮಸ್ತ ಮನೆಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ದಾಮುವಿನ ಕಿಸೆಯಲ್ಲಿದ್ದ ಕಟಿಂಗ್ ಪ್ಲೇಯರ್, ಟೆಸ್ಟರುಗಳಲ್ಲಿತ್ತು. ಪಕಪಕ ಗುಡುವ ಟ್ಯೂಬ್ ಲೈಟಿಂದ ಹಿಡಿದು ಭಡ್ ಭಡ್ ಅನ್ನುವ ಎರಡೆಚ್ಪಿ ಪಂಪಿನವರೆಗಿನ ರಿಪೇರಿ ಆತನಿಗೆ ಕರತಲಾಮಲಕ. ರಿಪೇರಿ ದುಡ್ಡು ಕೊಟ್ಟರೂ ನಡೆದೀತು, ಮರೆತರೂ ಅವನಿಗೆ ಬೇಜಾರಿಲ್ಲ. “ಎಮ್ಮೆಗೆ ಹಾಕಿದ ಹಿಂಡಿ ಎಲ್ಲಿಗೆ ಹೋಗ್ತದೆ? ಇವತ್ತಲ್ಲ ನಾಳೆ ಹಾಲು ಕರೀಲೇ ಬೇಕು” ಎನ್ನುವ ಜಾಯಮಾನ. ನಾಳೆ ಮತ್ತೆ ತಾನೇ ಅವರ ಮನೆಗೆ ಹೋಗಬೇಕು ಎನ್ನುವುದು ಗೊತ್ತಿರುವುದರಿಂದ ಧೈರ್ಯ. ತಡದು ಹೋದರೆ ಹತ್ತಿಪ್ಪತ್ತು ಹೆಚ್ಚಿಗೆಯೇ ಸಿಕ್ಕೀತು.ಅವರಿವರು ಗಾಳಿ ಹಾಕಿ ಎಲೆಕ್ಷನ್ನಿಗೆ ನಿಲ್ಲಿಸಿದ ಮೇಲೂ ದಾಮುವಿಗೆ ತಾನು ಗೆಲ್ಲುತ್ತೇನೆ ಎಂಬ ಗ್ಯಾರೆಂಟಿ ಇರಲಿಲ್ಲ. ಕೈಯಿಂದ ಖರ್ಚು ಮಾಡುವಷ್ಟು ದುಡ್ಡು ಮೊದಲೇ ಇಲ್ಲ. ಹೀಗಾಗಿ ಬರೀ ೪೦೦ ರೂಪಾಯಿ ಖರ್ಚು ಮಾಡಿ ಪ್ಯಾಂಪ್ಲೆಟು ಹಂಚಿದ್ದ ಅವನು.

ರಾಜಕೀಯದ ತಲೆಬುಡ ತಿಳಿಯದ ಪುಣ್ಯಾತ್ಮ ದಾಮು ಆತನ ಎದುರು ನಿಂತಿದ್ಧ ಹಳೆತಲೆಗಳಾದ ಬಾಂಬೈ ಫೆರ್ನಾಂಡಿಸ್, ಬೀಡಿ ಅಬ್ಬಾಸನನ್ನೆಲ್ಲ ಸೋಲಿಸಿ ಗೆದ್ದದ್ದು ಊರಲ್ಲಿ ನಾಲ್ಕಾರು ದಿನ ನಿಂತ ಸುದ್ದಿ. ಗೆದ್ದ ಮಾತ್ರಕ್ಕೆ ತಾನೇನು ದೊಡ್ಡ ಜನ ಆದೆ ಅಂತ ದಾಮುವೂ ಅಂದುಕೊಂಡಿರಲಿಲ್ಲ. ಹಾಗಂತ ಒಂದಿಷ್ಟು ದಿನ ಗೆದ್ದ ಅಮಲು ತಲೆಯಲ್ಲಿ ತೂಗಿದ್ದು ಹೌದು. ’ಹ್ವಾ, ಎಂತ ಮಾರ್ರೆ ಪಂಚಾಯ್ತಿ ಮೆಂಬರಂತೆ ಈಗ, ಭಾರಿ ಒಳ್ಳೆದಾಯ್ತು, ಊರಿಗೆ ಎಂತಾರು ಮಾಡ್ಸಿ’ ಅಂತ ಕೆಲವೊಂದು ಜನ ಸಡನ್ನಾಗಿ ಗೌರವ ಕೊಟ್ಟಾಗ ಖುಷಿಯಾದ್ದು ಸತ್ಯ. ಪಂಚಾಯ್ತಿ ಸಭೆಗೆ ಆವಾಗೀವಾಗ ಹೋಗುತ್ತಿದ್ದನಾದರೂ ಅಲ್ಲಿ ಎಲ್ಲ ಸೇರಿ ಮಾಡುವ ಗಲಾಟೆ ಗೌಜು ಇವನ ತಲೆಗೇ ಹತ್ತುತ್ತಿರಲಿಲ್ಲ. ಆದ್ರೆ ದಾಮ ವಿರೋಧ ಪಕ್ಷದಲ್ಲಿದ್ದ ನಾಲ್ಕೇ ಮಂದಿಯಲ್ಲಿ ಒಬ್ಬನಾದದ್ದಕ್ಕೆ, ಉಳಿದ ಮೂವರ ಜೊತೆ ಸೇರಿ ಗಲಾಟೆ ಮಾಡಬೇಕಿತ್ತು. ಹೆಚ್ಚಿನ ಸಲ ವಿಷ್ಯ ಏನೂ ಇಲ್ಲದಿದ್ದರೂ ಬೊಬ್ಬೆ ಹಾಕಬೇಕಾಗಿ ಬರುವುದು ಅವನ ಜಾಯಮಾನಕ್ಕೆ ಹೇಳಿಸಿದ್ದಾಗಿರಲಿಲ್ಲ. ಗ್ರಾಮ ಪಂಚಾಯತ್ ಸದಸ್ಯನಾಗುವುದು ಎಂದರೆ ಎಂ.ಎಲ್.ಎ ಸ್ಥಾನಕ್ಕೆ ಏರುವ ಮೊದಲ ಮೆಟ್ಟಿಲು ಇತ್ಯಾದಿಯಾಗಿ ಅವನ ತಲೆ ತಿಂದಿದ್ದ ಪಕ್ಷದ ಮುಖಂಡರು ಈಗ ಆತನ ಸುದ್ದಿಗೇ ಬರುತ್ತಿರಲಿಲ್ಲ. ಪಂಚಾಯ್ತಿ ಮೆಂಬ್ರಾದ್ರೆ ತಿಂಗಳೂ ತಿಂಗಳೂ ಒಳ್ಳೆ ಕಮಾಯಿ ಮಾರಾಯ ಅಂದಿದ್ದ ಸ್ನೇಹಿತರು ಅಡ್ರೆಸ್ಸಿಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಿನಾ ಕೈತುಂಬ ಇರುತ್ತಿದ್ದ ಎಲೆಕ್ಟ್ರಿಕ್ ಕೆಲ್ಸ ಕಡಿಮೆಯಾಗಿತ್ತು. ಬಾಯಿಬಿಟ್ಟೇ ಯಾರಲ್ಲೋ ಕೇಳಿದಾಗ, “ನೀವೀಗ ಪಂಚಾಯ್ತು ಮೆಂಬ್ರು , ನಾವು ಹೇಗೆ ಸಣ್ಣ ಪುಟ್ಟ ಕೆಲ್ಸಕ್ಕೆಲ್ಲ ನಿಮ್ಮನ್ನು ಕರಿಯುದು?” ಎಂದು ಅಚಾನಕ್ ಬಹುವಚನದಲ್ಲಿ ಮಾತಾಡಿ ತಲೆ ಹಾಳು ಮಾಡಿದ್ದರು. ಹೀಗಾಗಿ ಪಂಚಾಯತ್ ರಾಜಕೀಯ ಮಾಡುವುದು ಬಿಟ್ಟು ಬೇರೇನೂ ಉಳಿಯಲಿಲ್ಲ ದಾಮುಗೆ. ಊರಿನ ದಾರಿಯ ಕರೆಂಟು ಕಂಬಕ್ಕೆ ಟ್ಯೂಬ್ ಲೈಟು ಹಾಕಿಸುವುದು, ಸಾರ್ವಜನಿಕ ಬೋರ್ ವೆಲ್ ತೋಡಿಸುವುದು ಇತ್ಯಾದಿ ಎಲ್ಲರಿಗೂ ಉಪಯುಕ್ತ ಕೆಲಸಗಳನ್ನ ಮಾಡಿಸಿಕೊಡುತ್ತ, ಅದರಲ್ಲೆ ಬಂದ ದುಡ್ಡು ಉಳಿಸಿಕೊಂಡು ಮದುವೆಯೂ ಆಗಿದ್ದ.

ಇಂತಹ ಸಂದರ್ಭದಲ್ಲೇ ಈ ಕಾಂಕ್ರೀಟು ರಸ್ತೆಯ ಹೊಸ ಯೋಜನೆ ಪ್ರಸ್ತಾಪಕ್ಕೆ ಬಂದದ್ದು. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಕಿಲೋಮೀಟರ್ ಉದ್ದದ ಕಾಂಕ್ರೀಟು ಮಾಡುವ ರಾಜ್ಯ ಸರಕಾರದ ಪ್ಲಾನಿಗೆ ಕೂಳೂರು ಗೋಳಿಬೈಲು ರಸ್ತೆ ಆಯ್ಕೆಯಾಗಿತ್ತು. ಸಾಮಾನ್ಯವಾಗಿ ಸಾವಿರಗಳಲ್ಲಿ ಖರ್ಚು ಮಾಡುವ ಪಂಚಾಯತಿನ ಮಿತಿಯನ್ನು ಮೀರಿ ಕೋಟಿಗಳಲ್ಲಿ ಕಾಣುತ್ತಿದ್ದ ದುಡ್ಡು ಎಲ್ಲ ಸದಸ್ಯರ ತಲೆ ಕೆಡಿಸಿತ್ತು. ಪಕ್ಷ ಬೇಧ ಮರೆತು ಎಲ್ಲ ಸದಸ್ಯರೂ ಒಟ್ಟಾಗಿ ರಸ್ತೆಯ ಅಭಿವೃದ್ಧಿಯೇ ತಮ್ಮ ಅಭಿವೃದ್ಧಿ ಎಂಬುದನ್ನ ಮನಗಂಡು, ಜೋರು ಮಳೆಗಾಲ ನಡೆಯುತ್ತಿದ್ದರೂ ಕೂಡ, ಕಾಂಕ್ರೀಟು ರಸ್ತೆಗೆ ಮಳೆಯ ತಲೆಬಿಸಿ ಇಲ್ಲ ಎಂದು ಹಸಿರು ನಿಶಾನೆ ತೋರಿಸಿದ್ದರು.

ದಾಮುವಿಗೆ ತಮಾಷೆ ಮಾಡಿದ್ದ ಕಿಣಿ ಮಾಮ್ ರಿಗೂ, ಅವರ ಅಂಗಡಿ ಕಟ್ಟೆಯ ಸಮಸ್ತ ಸದಸ್ಯರಿಗೂ ನಿಜಕ್ಕೂ ಆಶ್ಚರ್ಯ ಆದದ್ದು ಮರಳಿನ ಗುಪ್ಪೆ ಫರ್ಲಾಂಗು ದೂರಕ್ಕೆ ಒಂದೊಂದರಂತೆ ರಾಶಿ ಬಿದ್ದಾಗ. ಮಳೆಯಲ್ಲಿ ಚೂರು ಚೂರೇ ಮರಳು ತೋಡಿಗೂ ಸಮರ್ಪಣೆ ಆಗ ತೊಡಗಿತು. ಆದರೆ, ವಾರದೊಳಗೆ ಊರಿಗೆ ಬಸ್ಸು ಬರುವುದೂ ಬಂದ್ ಆಯಿತು. ಕಾಂಕ್ರೀಟು ರಸ್ತೆ ಹದಿನೈದೇ ದಿನದಲ್ಲಿ ಆಗ್ತದಂತೆ, ಅದ್ರದ್ದು ಫಾರಿನ್ ಮಿಶನ್ನಂತೆ, ರಸ್ತೆ ಆಗುವವರೆಗೆ ಎಂತ ವೆಹಿಕಲ್ ಸಾ ಓಡಾಡುದಿಲ್ಲ ಅಂತ ಕಿಣಿ ಮಾಮ್ ಖುದ್ದು ಎಲ್ಲರಿಗೆ ಹೇಳಲು ಶುರು ಮಾಡಿದ್ದರು. ಊರಿಗೆ ಬರುವವರು ಈಗ ೮-೧೦ ಕಿಲೋಮೀಟರು ಸುತ್ತು ಹಾಕಿಕೊಂಡು ಕೆಸರು ಮಣ್ಣು ರಸ್ತೆಯಲ್ಲಿ, ಉಲ್ಟಾ ದಿಕ್ಕಲ್ಲಿ ಬರುವ ಹಾಗೆ ಬೇರೆ ಆಗಿತ್ತು. ಕೂಳೂರಿಗೆ ಹೋದವರು, ಮಂಗಳೂರಿಂದ ಬರುವವರು ಮಳೆಯ ಮಧ್ಯವೇ ಕಾಂಕ್ರೀಟ್ ರಸ್ತೆ ಆಗುವ ಚಂದ ನೋಡಿಕೊಂಡು ಬಂದಿದ್ದರು. “ಜೆಸಿಬಿ ರಪ ರಪಾಂತ ಡಾಂಬರು ಕಿತ್ತು ಬಿಸಾಡುದು, ಅಲ್ಲೇ ತಯಾರು ಮಾಡಿದ ಕಾಂಕ್ರೀಟ್ ಬ್ಲಾಕು ಪಟಕ್ಕಂತೆ ಇಡುದು, ಎಂತ ಮಳೆ ಸಾ ಕ್ಯಾರೇ ಇಲ್ಲ ಮಾರಾಯ್ರೇ” ಎಂದು ದೂಜಪೊರ್ಬು ಕಿಣಿ ಮಾಮ್ ಗೆ ವಿವರಿಸಿದ್ದರು. ಮೂರೇ ದಿನದಲ್ಲಿ ಒಂದು ಕಿಲೋಮೀಟರ್ ಕಾಂಕ್ರೀಟಾಗಿ ಆಯ್ತು ಮಾರ್ರೇ ಅಂತ ಹೇಳಿದ ಪೊರ್ಬುಗಳು ಇನ್ನೇನು ನಾಳೆ ನಾಡಿದ್ದು ಊರೊಳಗೇ ಬರ್ತದೆ ನೋಡಿ ಅಂತಂದು ಎಂಥದೋ ಸೈನ್ಯ ಊರಿಗೆ ದಾಳಿ ಮಾಡಲು ಬರುವ ಹಾಗಿನ ಹೆದ್ರಿಕೆ ಹುಟ್ಟು ಹಾಕಿ ಹೋಗಿದ್ದರು.

ದಾಮುಗಂತೂ ಕೂರಲಿಕ್ಕೇ ಪುರ್ಸೊತ್ತು ಇರ್ಲಿಲ್ಲ. ಒಂದು ಎರಡು ಮೂರು ದಿನ ಇಡೀ ರಸ್ತೆಯ ಮೇಲ್ವಿಚಾರಣೆ ತನ್ನದೇ ಅನ್ನುವ ಹಾಗೆ ಬೆಳಗ್ಗಿಂದ ಸಂಜೆ ತನಕ ಓಡಾಟದ ಮೇಲೆ ಓಡಾಟ ಮಾಡಿದ್ದ. ಆದರೆ ಅವನ ಹಾರಾಟಕ್ಕೆ ಉಳಿದ ಮೆಂಬರುಗಳು ಸುಮಾರು ಕಡಿವಾಣ ಹಾಕಿದ್ದರು. ಶಾಲೆ ಮಕ್ಕಳು ಡೆಸ್ಕಿನಲ್ಲಿ ಗೆರೆ ಹಾಕಿ ಇದು ತಮ್ಮ ಜಾಗ ಎಂದು ಹೇಳುವ ಹಾಗೆ, ತಮ್ಮ ತಮ್ಮ ವಾರ್ಡಿನಲ್ಲಿ ಸಾಗಿ ಬರುವ ರಸ್ತೆಯ ಕೆಲ್ಸದ ಉಸ್ತುವಾರಿಯನ್ನ ಅವರವರೇ ವಹಿಸಿಕೊಂಡಿದ್ದರು. ರಸ್ತೆ ಇರದ ವಾರ್ಡಿನ ಸದಸ್ಯರು ಮಹಾಪಾಪ ಮಾಡಿದವರ ಮುಖ ಹೊತ್ತು ಓಡಾಡುತ್ತಿದ್ದರು. ದಾಮುಗೆ ಒಂದರ್ಧ ಕಿಲೋಮೀಟರು ದಕ್ಕಿತ್ತು. ತನ್ನ ಏರಿಯಾಕ್ಕೆ ಬಂದ ಕೂಡಲೇ ಮತ್ತೆ ಮೇಲುಸ್ತುವಾರಿ ಮಾಡುತ್ತೇನೆ ಅಂತ ಭೀಷ್ಮರ ಸೇನಾಧಿಪತ್ಯದಲ್ಲಿ ಯುದ್ಧಕ್ಕೆ ಹೋಗದ ಕರ್ಣನ ಹಾಗೆ ಸುಮ್ಮನಾದ. ಅವನ ಸರದಿಯೂ ಬಂತು.

ಕಿಣಿ ಮಾಮ್ ಅಂಗಡಿ ಎದುರು ಹಾದು ಹೋಗುವ ರಸ್ತೆ ದಾಮುವಿನ ವಾರ್ಡಿನ ಪಾಲಿಂದೇ ಆಗಿತ್ತು. ಹೀಗಾಗಿ ಕಿಣಿ ಮಾಮ್ ಅಂಗಡಿಯ ಸೋಡಾ ಕುಡಿದು, ಅವರನ್ನೇ ನೋಡಿ ಹುಬ್ಬು ಹಾರಿಸುತ್ತ “ಹೇಗೆ?” ಎಂಬಂತೆ ವ್ಯಂಗ್ಯ ಮಾಡುವುದು ದಾಮುಗೊಂದು ರೀತಿ ಆಟವಾಗಿತ್ತು. ಆವತ್ತು ಬೆಳಗಿಂದ ಸಂಜೆಯೊಳಗೆ ನಾಲ್ಕನೇ ಬಾರಿ ನಡೆದ ದಾಮುವಿನ ಹುಬ್ಬಿನ ನೃತ್ಯ ನೋಡಿ ಸಿಟ್ಟಿಗೆದ್ದ ಕಿಣಿ ಮಾಮ್, “ಬಿಡಾ ಮಾರಾಯ, ಅದೆಂತದೋ ಕೋಟಿಗಟ್ಲೆ ದುಡ್ಡು ಸ್ಯಾಂಕ್ಷನ್ ಆಗಿದೆ, ಅದ್ರಲ್ಲಿ ಒಂದಿಷ್ಟು ದುಡ್ಡು ಎಲ್ಲ ಸೇರಿ ಹೊಡಿವ ಅಂತ ರಸ್ತೆ ಮಾಡುದಲ್ಲ ನೀವು? ಮಾನ ಮರ್ಯಾದೆ ಇಲ್ಲದವ್ರು.. ಒಂದು ರುಪಾಯಿ ಸಿಗುದಿಲ್ಲ ಅಂತಾದ್ರೆ ಇದ್ನೆಲ್ಲ ಮಾಡ್ಲಿಕ್ಕುಂಟಾ ನೀವು.. ನಿಮ್ಮ ಜನ್ಮಕ್ಕಿಷ್ಟು.. ರಸ್ತೆಯ ಮತ್ತೆಂತದ.. ಈಗ ನಾಳೆ ನೀನು ರಸ್ತೆಗೆ ಬೇಕು ಅಂತ ಎದ್ರಿನ ಗಾಂಧಿ ನೆಟ್ಟ ಗೋಳಿಮರಸಾ ಬೀಳಿಸ್ತಿ.. ಮುಂದಿನ ಶಾಲೆಯ ಗೋಡೆಸಾ ಜರಿಸ್ತೀ..ಥತ್ ನಿಮ್ಮ” ಅಂದುಬಿಟ್ಟರು. ರಸ್ತೆಯಲ್ಲಿದ್ದವರೂ, ಅಕ್ಕಪಕ್ಕದವರೂ ಎಲ್ಲರೂ ಕಿಣಿಯವರ ಎತ್ತರಿಸಿದ ಧ್ವನಿ ಕೇಳಿ, ಒಮ್ಮೆ ನಿಂತು ಮತ್ತೆ ದಾಮುವನ್ನು ನೋಡಿ ಮುಂದುವರಿದರು. ದಾಮುವಿಗೆ ಕಿಣಿಯವರ ರೌದ್ರಾವತಾರ ನೋಡಿ ತಲೆಬಿಸಿಯಾದರೂ, “ಕಿಣಿ ಮಾಮ್ ಎಂತಕೆ ನೀವು ಇಷ್ಟೆಲ್ಲ ಬೊಬ್ಬೆ ಹಾಕುದು.. ಊರಿಗೆ ಒಳ್ಳೆದು ಮಾಡ್ಲಿಕ್ಕೆ ಅಲ್ವಾ ಮಾಡುದು ಇದನ್ನ, ಕೋಟಿ ರುಪಾಯಿ ಎಂತ ನಂಗೆ ಬಂದಿದಾ ತಿನ್ಲಿಕ್ಕೆ, ಅದು ಗೌರ್ಮೆಂಟಿದ್ದು” ಅಂತ ಹೇಳಿ ಮೆಲ್ಲ ಜಾಗ ಖಾಲಿ ಮಾಡಿದ. ಅವನು ಮುಖದಿಂದ ಒರೆಸಿಕೊಂಡು ಕಿಣಿಮಾಮ್ ಎಂಜಲಾ, ಅವರ ಅಂಗಡಿ ಮಾಡಿಂದ ಮಳೆಯ ನೀರಾ ಅಂತ ಸಮಾ ಗೊತ್ತಾಗಲಿಲ್ಲ.

ಆದರೆ ನಿಜಕ್ಕೂ ದಾಮುವಿನ ಗಂಟಲ ಪಸೆ ಆರಿದ್ದು ಮಾರನೇ ದಿನ ಬೆಳಿಗ್ಗೆ. “ರಸ್ತೆ ಅಗಲೀಕರಣ ವಿರೋಧ ಸಮಿತಿ ಗೋಳಿಬೈಲು” ಹೆಸರಿನ ಫ್ಲೆಕ್ಸ್ ಬ್ಯಾನರೊಂದು ಗೋಳಿಬೈಲಿನ ಬಸ್ಟ್ಯಾಂಡಿನ ಪಕ್ಕದ ಗೋಳಿ ಮರಕ್ಕೆ ನೇತು ಬಿದ್ದಿದ್ದು ಕಂಡಾಗ. “ಕಾಂಕ್ರೀಟೀಕರಣದ ನೆಪದಲ್ಲಿ ಮಹಾತ್ಮಾಗಾಂಧೀಜಿಯವರು ನೆಟ್ಟಿರುವ ನಮ್ಮೂರಿನ ಆಲದಮರವನ್ನು ಕಡಿಯಲಿದ್ದು ಇದನ್ನು ಗ್ರಾಮದ ಸಮಸ್ಥ ನಾಗರೀಕರ ಪರವಾಗಿ ವಿರೋಧಿಸುತ್ತಿದ್ದೇವೆ” ಎಂಬ ಬರಹವನ್ನು ಓದಿದ ದಾಮುವಿಗೆ ಏನೆಂದೇ ಅರ್ಥವಾಗಲಿಲ್ಲ. ಊರೆದುರಿನ ಗೋಳಿಮರವನ್ನು ಗಾಂಧೀಜಿ ೧೯೨೦ರಲ್ಲೋ ೧೯೨೯ರಲ್ಲೋ ಬಂದಾಗ ನೆಟ್ಟಿದ್ದರಂತೆ ಎಂಬ ಕಥೆ ಜನಜನಿತವಾಗಿದ್ದರೂ ಕೂಡ, ಕಾಂಕ್ರೀಟು ರಸ್ತೆ ಮಾಡುವಾಗ ರಸ್ತೆಯ ಪಕ್ಕದಲ್ಲೇ ಇದ್ದ ಮರವನ್ನು ಕಡಿಯುವ ಪ್ರಸ್ತಾಪವೂ ಬಂದಿತ್ತು. ಆ ಬಗ್ಗೆ ಒಬ್ಬೇ ಒಬ್ಬನೂ ಬೇಡ ಅಂದಿರಲಿಲ್ಲ. ಅದೂ ಅಲ್ಲದೇ ಆ ಗೋಳಿಮರದಡಿಯಲ್ಲೇ ಇದ್ದ ಚಪ್ಪಲಿ ಹೊಲಿಯುವ ಕೃಷ್ಣನಿಗೆ ಬಸ್ಟ್ಯಾಂಡಿನಲ್ಲಿ ಟೆಂಪರರಿ ವ್ಯವಸ್ಥೆ ಮಾಡಿಕೊಟ್ಟಾಗಿತ್ತು. ಆಗಲೂ ಯಾರೂ ಅಲ್ಲ ಅನ್ನಲಿಲ್ಲ. ಈಗಾಗಲೇ ಸುಮಾರು ಮಳೆಗಾಲ ಕಂಡಿದ್ದ ಮರ ಗೆಲ್ಲುಗಳನ್ನ ಪದೇ ಪದೇ ರಸ್ತೆಗೆ ಬೀಳಿಸಿ ತೊಂದರೆ ಕೊಡುತ್ತಿತ್ತು. ಈ ಹಿಂದೆಯೇ ಅದನ್ನ ಕಡಿಯಬೇಕು ಎನ್ನುವ ಪ್ರಸ್ತಾಪ ಬಂದಿದ್ದರೂ, ಯಾಕೋ ಯಾರೂ ಮನಸ್ಸು ಮಾಡಿರಲಿಲ್ಲ.

ವಿಷಯ ಏನಾಗಿತ್ತೆಂದರೆ, ಹಿಂದಿನ ದಿನ ದಾಮುವಿಗೆ ಕಿಣಿಮಾಮ್ ಬೈಯುವಾಗ ಅದನ್ನು ಕೇಳಿಸಿಕೊಂಡವರಲ್ಲಿ ಬಾಂಬೇ ಫೆರ್ನಾಂಡಿಸ್ ಕೂಡ ಒಬ್ಬರು. ಯಾವಾಗ ಗಾಂಧಿ ನೆಟ್ಟ ಮರ ಹೋಗ್ತದೆ ಅನ್ನುವ ಪಾಯಿಂಟು ಕಿವಿಗೆ ಬಿತ್ತೋ, ರಾಜಕೀಯದಲ್ಲಿ ಸುಮಾರು ಪಳಗಿದ ಫೆರ್ನಾಂಡಿಸರಿಗೆ ಹೋರಾಟದ ಐಡಿಯಾ ಹೊಳೆದಿತ್ತು. ಅಲ್ಲದೇ ಅವರ ಹೆಸರೇ ಬಾಂಬೆ ಫೆರ್ನಾಂಡಿಸ್. ಬಾಂಬೆಯಲ್ಲಿ ಗಿರಣಿ ಕಾರ್ಮಿಕರ ಒಕ್ಕೂಟದ ಹೋರಾಟದಲ್ಲಿ ಭಾಗವಹಿಸಿ, ಆ ಕಾಲಕ್ಕೇ ಹೆಸರು ಮಾಡಿ-ಆದರೆ ಕೆಲ್ಸ ಕಳೆದುಕೊಂಡ ಊರಿಗೆ ವಾಪಸು ಬಂದ ಜನ. ದಾಮುವಿನ ಕೈಲಿ ಸೋತ ಉರಿ ಇನ್ನೂ ಮಾಸಿಲ್ಲದ ಫೆರ್ನಾಂಡಿಸ್ ಸಾಹೇಬರು ಸಂಜೆಗೇ ಮಂಗಳೂರಿಗೆ ಹೋದವರೇ ಈ ಬ್ಯಾನರು ಮಾಡಿಸಿ ತಂದಿದ್ದರು. ಬೆಳಗ್ಗೆ ಬೆಳಗ್ಗೆಯೇ ಒಂದಿಷ್ಟು ಜನ ಹುಡುಗರನ್ನ ಮರದ ಎದುರು ನಿಲ್ಲಿಸಿಕೊಂಡು ಫೆರ್ನಾಂಡಿಸರು ಗಾಂಧಿ ತತ್ವಗಳ ಬಗ್ಗೆ ಮಾತನಾಡಿ ಮರವನ್ನು ಕಡಿಯುವುದು ಅಂದ್ರೆ ಗಾಂಧಿಯನ್ನ ಮತ್ತೊಮ್ಮೆ ಕೊಂದ ಹಾಗೆ ಎಂದೆಲ್ಲ ಮಾತನಾಡಿದರು. ಯಾವಾಗಲೂ ಅಲ್ಲೇ ಪಕ್ಕದ ಖಾಲಿ ಜಾಗದಲ್ಲಿ ವಾಲಿಬಾಲ್ ಆಡುತ್ತಿದ್ದ ಹುಡುಗರು ಮರವನ್ನು ನೋಡುತ್ತ ಗಾಂಧೀಜಿಗೆ ಜೈ ಅಂದರು. ಸಂಜೆ ಹೊತ್ತಿಗೆ ಒಂದೆರಡು ಲೋಕಲ್ ಚಾನಲ್ ನ ರಿಪೋರ್ಟರುಗಳೂ ಬಂದು ಹೋದರು. ಆವತ್ತು ಭಾನುವಾರ, ಕೆಲಸದವರಿಗೆ ರಜೆ ಇದ್ದದ್ದರಿಂದ ಏನೂ ವ್ಯತ್ಯಾಸವಾಗಲಿಲ್ಲ. ದಾಮು ಕೂಡ “ಇದೆಲ್ಲ ಎಂತ ಮರ್ಲ್..ಮುದುಕನಿಗೆ ಮಂಡೆ ಸರಿ ಇಲ್ಲ” ಎಂದು ಹೇಳಿಕೊಂಡು ಓಡಾಡಿದರೂ, ಒಳಗೇ ಅಳುಕು ಇದ್ದೇ ಇತ್ತು.

ಆ ಅಳುಕು ಮಾರನೇ ದಿನ ನಿಜವಾಯಿತು. ಬೆಳ್ಳಂಬೆಳಗ್ಗೆ ರಾಜ್ಯಮಟ್ಟದ ಸುದ್ದಿವಾಹಿನಿಯ ರಿಪೋರ್ಟರೊಬ್ಬ ಬಂದ. ಮರದ ಪಕ್ಕಕ್ಕೇ ನಿಂತುಕೊಂಡು “ಅಭಿವೃದ್ದಿಯ ಹೆಸರಲ್ಲಿ ಮಹಾತ್ಮನ ಸ್ಪರ್ಶ ಕಂಡಿದ್ದ ಮರವೊಂದು ಮಣ್ಣಾಗುತ್ತಿದೆ. ಕ್ಯಾಮರಾಪರ್ಸನ್ ಇಂತಿಂತವರ ಜೊತೆ ತಾನು ಇಂಥವನು” ಎಂದು ಹೇಳಿ ಹೋದ. ಬಾಂಬೇ ಫೆರ್ನಾಂಡಿಸ್ ಸಂರ್ದರ್ಶನದ ಜೊತೆಗೆ ಮಧ್ಯಾಹ್ನದ ನ್ಯೂಸಲ್ಲಿ ಗೋಳಿಬೈಲಿನ ಕಥೆ ಬಂತು. ಅದಾದ ಮೇಲೆ, ಸಂಜೆಗೆ ಇನ್ನೂ ನಾಲ್ಕು ಕ್ಯಾಮರಾ ಬಂತು. “ಹೀಗೆ ಮರದಿಂದ ತೊಟ್ಟಿಕ್ಕುತ್ತಾ ಇರುವುದು ಮಳೆಯ ನೀರೋ ಅಥವಾ ಮರದ ಕಣ್ಣೀರೋ” ಎಂದು ಹುಡುಗಿಯೊಬ್ಬಳು ಮೂರನೇ ಟೇಕಿನಲ್ಲಿ ಸರಿಯಾಗಿ ಹೇಳಿದಳು. ಇದನ್ನೆಲ್ಲ ನೋಡಲು ಹೋದ ಯಾರೋ ಒಬ್ಬಾತ ಬಂದು ದಾಮುವಿಗೂ ಮೈಕು ಹಿಡಿದನಾದರೂ, ಅವನು ಏನೂ ಉತ್ತರ ಕೊಡದೇ ಅಲ್ಲಿಂದ ಓಡಿ ಹೋದ. “ಜನಪ್ರತಿನಿಧಿಗಳು ಈ ಬಗ್ಗೆ ಉತ್ತರಿಸುತ್ತಿಲ್ಲ”..ಎಂದು ಮತ್ಯಾರೋ ಮಾತು ಶುರು ಮಾಡಿದ್ದರು. ಈ ಎಲ್ಲ ಗೊಂದಲದ ಮಧ್ಯ ಜೆಸಿಬಿ, ಸಿಮೆಂಟು ಕಲಸುವ ಯಂತ್ರಗಳು ಕೆಲಸ ನಿಲ್ಲಿಸಿದ್ದವು. ಕಂಟ್ರಾಕ್ಟರು ಕೆಲಸದ ಗುಂಪಿಗೆ ಇವತ್ತು ಪೇಮೆಂಟ್ ಕೊಡುವುದೋ ಬೇಡವೋ ಎಂಬ ಟೆನ್ಶನಲ್ಲಿ ಓಡಾಡುತ್ತಿದ್ದ. ಊರಿಗೊದಗಿದ ಹೊಸ ಸಂಭ್ರಮಕ್ಕೆ ಸಂಜೆ ಹೊತ್ತಿಗೆ ಜೋರಾದ ಮಳೆ ನಿಜಕ್ಕೂ ತಣ್ಣೀರನ್ನೇ ಎರಚಿತ್ತು.

ರಾತ್ರಿ ಮನೆಯ ಟಿವಿಯಲ್ಲಿ “ಗಾಂಧಿ ನೆಟ್ಟ ಮರ” ಚರ್ಚೆಯನ್ನು ಯಾವುದೋ ಚಾನಲಿನಲ್ಲಿ ನೋಡುತ್ತಿದ್ದ ದಾಮುಗೆ ತಲೆ ಕಲಸಿ ಹೋಗಿತ್ತು. ಪಂಚಾಯ್ತಿ ಪ್ರೆಸಿಡೆಂಟು ಫೋನ್ ಮಾಡಿ, ನಿನ್ನ ವಾರ್ಡಿನ ಗಲಾಟೆ, ನೀನೇ ಸುಧಾರಿಸಬೇಕು. ಇದ್ರಲ್ಲಿ ನಾವ್ಯಾರೂ ತಲೆ ಹಾಕುವುದಿಲ್ಲ. ರೋಡು ಕೆಲ್ಸ ಅಲ್ಲಿಗೇ ನಿಂತರೇ ನೀನೇ ಜವಾಬ್ದಾರಿ ಇತ್ಯಾದಿಯಾಗಿ ಮಂಗಳಾರತಿ ಮಾಡಿದ್ದರು. ಜೊತೆಗೆ, “ನೋಡು ಈ ರೋಡಿನ ಕೆಲಸ ಸರಿಯಾಗಿ ಮುಗಿದಿದ್ದರೆ ನಿನಗೆ ನಿನ್ನ ಪಾಲು ಅಂತ ಎರಡು ಲಕ್ಷದ ಹತ್ತಿರ ಹತ್ತಿರ ಸಿಗ್ತಿತ್ತು. ನಿನ್ನ ಗ್ರಹಚಾರ ಹೇಗಿದೆ ನೋಡುವ” ಎಂದಿದ್ದರು. ತನ್ನ ಪಾಲಿನ ದುಡ್ಡಿನ ಅಮೌಂಟು ಕೇಳಿ ಖುಶಿಯಾದರೂ ಅದು ಸಿಗುವುದು ಗ್ಯಾರೆಂಟಿ ಇಲ್ಲದ್ದಕ್ಕೆ, ಜೊತೆಗೆ ಇಷ್ಟೆಲ್ಲ ಗಲಾಟೆ ಗೌಜಿಗೆ ದಾಮು ದಿಕ್ಕೆಟ್ಟು ಹೋಗಿದ್ದ. ಟಿವಿಯಲ್ಲಿ ಫೆರ್ನಾಂಡಿಸ್ ಫೋನೋ ಬರ್ತಿತ್ತು. ಆಫ್ ಮಾಡಬೇಕೆಂದು ರಿಮೋಟ್ ಎತ್ತಿಕೊಳ್ಳುವುದಕ್ಕೂ, ಸಿಡಿಲು ಬಡಿದ ಸದ್ದು ಕೇಳುವುದಕ್ಕೂ, ಕರೆಂಟೂ ಹೋಗುವುದಕ್ಕೂ ಸರಿಯಾಯಿತು.

ಬೆಳಿಗ್ಗೆ ಎದ್ದವನಿಗೆ ತಲೆ ಹಿಡಿದುಕೊಂಡ ಹಾಗಾಗಿ, ದಾಮು ಹಾಸಿಗೆಯಲ್ಲೇ ಕೂತು ’ಚಾ ಕೊಡ” ಎಂದು ಕೂಗಿದರೆ ಊರು ಉದ್ಧಾರ ಮಾಡುವ ನಿಮಗೆ ಚಾಸೊಪ್ಪು ತರ್ಲಿಕ್ಕೆ ಟೈಮೆಲ್ಲಿ ಉಂಟು ಎಂಬ ಉರಿಉರಿ ಉತ್ತರ ಹೆಂಡತಿಯಿಂದ ವಾಪಾಸು ಬಂತು. ರಪಕ್ಕನೇ ಹಲ್ಲುಜ್ಜಿದವನೇ ಬೈಕು ಚಾಲು ಮಾಡಿ ಕಿಣಿಮಾಮ್ ಅಂಗಡಿ ಕಡೆಗೇ ಹೊರಟ. ಅಲ್ಲಿ ಹೋಗಿ ನೋಡಿದರೆ, ಕಂಡದ್ದೇನು! ಬೆಳಿಗ್ಗೆ ಬೆಳಿಗ್ಗೆಯೇ ಬಸ್ಟ್ಯಾಂಡಿನಲ್ಲಿ ನೂರು ಚಿಲ್ಲರೆ ಜನ ಸೇರಿದ್ದರು. ’ಗಾಂಧಿ ನೆಟ್ಟ ಮರ” ಜೋರು ಮಳೆಗೋ, ಹೊಡೆದ ಸಿಡಿಲಿಗೋ ಬಿದ್ದು ಹೋಗಿತ್ತು. ಮರದ ಕಾಂಡ ಬಿದ್ದು ಅದರ ಕೆಳಗೆ ನಿಲ್ಲಿಸಿದ್ದ ಜೇಸಿಬಿ ಜಜ್ಜಿ ಹೋಗಿದ್ದರೆ, ಕಿಣಿ ಮಾಮ್ ಅಂಗಡಿಯ ಗೋಡೆ ಹಂಚುಗಳನ್ನ ಗೆಲ್ಲುಗಳು ಲಗಾಡಿ ತೆಗೆದಿದ್ದವು.

ತನ್ನ ಸಮಸ್ಯೆ ಬಗೆಹರಿಯಿತೋ, ಮತ್ತೂ ಜಟಿಲವಾಯಿತೋ ಎಂದು ಅರ್ಥವಾಗದ ದಾಮು ಸದ್ಯ ಚಾಪುಡಿ ತರ್ಲಿಕ್ಕೆ ಎಲ್ಲಿಗೆ ಹೋಗಲಿ ಎಂದು ಯೋಚಿಸುತ್ತ ನಿಂತ.

ಕರ್ನಾಟಕದ ತಳಸಮುದಾಯಗಳು ಏರಿದ… ಏರಬೇಕಾದ ಎತ್ತರ.


-ಡಾ.ಎಸ್.ಬಿ. ಜೋಗುರ


ದೇಶದ ಉನ್ನತ ಶಿಕ್ಷಣದ ವಲಯದಲ್ಲಿ ಎರಡು ಪ್ರಮುಖ ಸಂಗತಿಗಳು ಎರಡು ವಿಭಿನ್ನ ಕಾರಣಗಳಿಗಾಗಿ ಗಮನ ಸೆಳೆದಿವೆ. ಒಂದನೆಯದು ಉನ್ನತ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ ಮೇಲೂ 2009 ರ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ 9 ಪ್ರತಿಶತ ದಾಟಿರಲಿಲ್ಲ. ಈಚೆಗಷ್ಟೇ ಮಾಡಲಾದ ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ ಆ ಪ್ರಮಾಣ ಈಗ 19.5 ರಷ್ಟಾಗಿದೆ. ಅಂದರೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ 10 ಪ್ರತಿಶತದಷ್ಟು ಹೆಚ್ಚಳ ಸಾಧಿಸಿದ್ದು ಸಾಮಾನ್ಯವೇನಲ್ಲ. ಆದರೆ ಅದರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರಮಾಣ ಕೇವಲ 10.2 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣ ಕೇವಲ 4.4 ಪ್ರತಿಶತದಷ್ಟಿದೆ ಎನ್ನುವುದು ಮಾತ್ರ ಆಘಾತಕಾರಿ. ಇದು ಕೇವಲ ಉನ್ನತ ಶಿಕ್ಷಣರಂಗ ಮಾತ್ರವಲ್ಲದೇ ಜೀವನದ ಹತ್ತಾರು ವಲಯಗಳಲ್ಲಿ ಇನ್ನೂ ಈ ತಳ ಸಮುದಾಯಗಳು ಹಿಂದೆಯೆ ಬಿದ್ದಿವೆ. ದೇಶ ಸ್ವಾಯತ್ತವಾಗಿ ಆರು ದಶಕಗಳು ಗತಿಸಿದ ಮೇಲೂ ಕಳೆದ ಅನೇಕ ದಶಕಗಳಿಂದಲೂ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಸೌಲಭ್ಯಗಳನ್ನು ನೀಡಿದ ಮೇಲೂ ಅವರ ಸಾಮಾಜಿಕ ಸ್ಥಿತಿಗತಿ ಮಹತ್ತರವಾದ ಪರಿವರ್ತನೆಗಳನ್ನು ಕಂಡುಕೊಂಡಿಲ್ಲ. ಅಲ್ಲಿ ಸಾಧ್ಯವಾದದ್ದು ಕೇವಲ ಸಮಾನಾಂತರ ಸಂಚಲನೆಯೆ ಹೊರತು ಲಂಬರೂಪದ ಸಂಚಲನೆ ಸಾಧ್ಯವಾಗಲಿಲ್ಲ.

ಕರ್ನಾಟಕ ರಾಜ್ಯದ ಚಿತ್ರಣವನ್ನು ಗಮನಿಸಿ ಮಾತನಾಡುವುದಾದರೆ, ದೇಶದ ಪ್ರಮುಖ ರಾಜ್ಯಗಳ ಸಾಲಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕದ ವಿಷಯವಾಗಿ ಅದು 12 ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಕೇರಳ ಮತ್ತು ಕೊನೆಯ ಸ್ಥಾನದಲ್ಲಿ ಚತ್ತೀಸಘಡ್ ರಾಜ್ಯಗಳಿವೆ. ಸದಾ ಸಮಸ್ಯೆಗಳ ರಾಜ್ಯ ಎಂದೇ ಬಿಂಬಿತವಾಗುವ ಬಿಹಾರ 20 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಡತನ ರೇಖೆಯ ಕೆಳಗಿರುವವರ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ 20.8 ಪ್ರತಿಶತದಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಅದು 32.6 ಪ್ರತಿಶತದಷ್ಟಿದೆ [ಪ್ಲ್ಯಾನಿಂಗ್ ಕಮಿಷನ್-2008]. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಿತಿ ಕೊಂಚ ವಿಭಿನ್ನವಾಗಿದೆ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಬಡತನದ ಪ್ರಮಾಣ 31.8 ರಷ್ಟಿದ್ದರೆ ಪರಿಶಿಷ್ಟ ಪಂಗಡಗಳಲ್ಲಿ ಆ ಪ್ರಮಾಣ 23.5 ರಷ್ಟಿದೆ. 5 ವರ್ಷದ ವಯೋಮಾನದ ಕೆಳಗಿರುವ ಮಕ್ಕಳ ಮರಣ ಪ್ರಮಾಣದ ಚಿತ್ರಣವಂತೂ ದಲಿತ ಮತ್ತು ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮಿಕ್ಕ ಎಲ್ಲ ಜನಸಮುದಾಯಗಳ ರಾಜ್ಯದಲ್ಲಿ ಆ ಪ್ರಮಾಣ 54.7 ಪ್ರತಿಶತದಷ್ಟಿದ್ದರೆ ಪರಿಶಿಷ್ಟ ಜಾತಿಯವರಲ್ಲಿ ಅದು 65.4 ಪ್ರತಿಶತ ಮತ್ತು ಪರಿಶಿಷ್ಟ ಪಂಗಡದವರಲ್ಲಿ 77.9 ಪ್ರತಿಶತದಷ್ಟಿದೆ. ಮುಸ್ಲಿಂ ಸಮುದಾಯದಲ್ಲಿ ಅದು 57.2 ರಷ್ಟಿದೆ. ಇದು 5 ವರ್ಷದ ಕೆಳಗಿನ ವಯೋಮಾನದ ಮಕ್ಕಳ ಮರಣ ಪ್ರಮಾಣದ ಚಿತ್ರಣವಾದರೆ ಇದೇ ವಯೋಮಾನದಲ್ಲಿ ಬರುವ ಕಡಿಮೆ ತೂಕದ ಮಕ್ಕಳ ಪ್ರಮಾಣ ಹೀಗಿದೆ:

ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 41.7 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು ಹೆಚ್ಚೂ ಕಡಿಮೆ ಅದೇ ಪ್ರಮಾಣದಲ್ಲಿ ಅಂದರೆ 41.9 ರಷ್ಟಿದೆ. ಮುಸ್ಲಿಂರಲ್ಲಿ ಆ ಪ್ರಮಾಣ ಸ್ವಲ್ಪ ಕಡಿಮೆಯಿದ್ದು ಅದು 36.8 ರಷ್ಟಿದೆ. ಸಾಕ್ಷರತೆಯ ವಿಷಯದಲ್ಲಿ ಮಾತ್ರ ರಾಜ್ಯ ದೇಶದ ಪ್ರಮಾಣವನ್ನು ಮೀರಿರುವುದು ಹೆಮ್ಮೆಯ ಸಂಗತಿ. ದೇಶದ ಒಟ್ಟು ಸಾಕ್ಷರತೆಯ ಪ್ರಮಾಣ [2011] ರ ವೇಳೆಗೆ 74 ಪ್ರತಿಶತ ಆದರೆ ರಾಜ್ಯದ ಸಾಕ್ಷರತೆ ಮಾತ್ರ 75.6 ಪ್ರತಿಶತ. 2005-06 ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 61.1 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು 57.4 ರಷ್ಟಿದೆ. ರಾಜ್ಯದ ಮುಸ್ಲಿಂ ಸಮುದಾಯ ಮಾತ್ರ ಅದಾಗಲೇ 74.2 ರಷ್ಟು ಸಾಕ್ಷರತೆಯನ್ನು ಸಾಧಿಸಿರುವುದಿದೆ. ಈ ಪ್ರಮಾಣ ಆ ಸಂದರ್ಭದ ದೇಶದ ಮುಸ್ಲಿಂ ಸಮುದಾಯದ ಒಟ್ಟು ಸಾಕ್ಷರತಾ ಪ್ರಮಾಣಕ್ಕಿಂತಲೂ ಜಾಸ್ತಿಯಾಗಿತ್ತು. ಇದನ್ನು ಗಮನಿಸಿದರೆ ಮುಸ್ಲಿಂ ಸಮುದಾಯದಲ್ಲಿ ಈಗೀಗ ಶಿಕ್ಷಣ ಒಂದು ಸಾರ್ವತ್ರಿಕ ಹಕ್ಕಾಗಿ ಬೆಳೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಸೈಯದ್ ಅಹ್ಮದ ಖಾನ್, ಬದ್ರುದ್ದೀನ್ ತ್ಯಾಯಬ್ಜಿ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಅಹೋರಾತ್ರಿ ಶ್ರಮಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ದೇಶದ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ಜಾರ್ಖಂಡ, ಉತ್ತರಪ್ರದೇಶ, ಓರಿಸ್ಸಾದಂತಹ ರಾಜ್ಯಗಳನ್ನು ನೋಡಿದಾಗ ಕರ್ನಾಟಕ ತುಂಬಾ ಆಶಾದಾಯಕ ಸ್ಥಿತಿಯಲ್ಲಿದೆ. ಅದೇ ವೇಳೆಗೆ ಕೇರಳ, ಗೋವಾ, ಹಿಮಾಚಲಪ್ರದೇಶ ದಂತಹ ರಾಜ್ಯಗಳನ್ನು ನೋಡಿದಾಗ ನಿರಾಶಾದಾಯಕ ಸ್ಥಿತಿಯಿದೆ. ರಾಜ್ಯದ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಹಕ್ಕು, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಾಗಲೂ ಇನ್ನೂ ಹಿಂದುಳಿದ ಸ್ಥಿತಿಯಲ್ಲಿರಲು ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಭಾಗವಾದ ಜಾತಿಪದ್ಧತಿ ಎನ್ನುವ ಸಂಸ್ಥೆ. ಅದು ಭೌತಿಕ ಸಂಗತಿಗಳು ಕೊಡಮಾಡುವ ಅವಕಾಶಗಳನ್ನು ಸಾಮಾಜಿಕ ಸನ್ನಿವೇಶದಲ್ಲಿ ಗೌರವಿಸುವ. ಗುರುತಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಆಗಿದೆ. ಅದೇ ವೇಳೆಗೆ ತೀರಾ ರಿಮೋಟ್ ಪ್ರದೇಶಗಳಲ್ಲಿ ಬದುಕುವ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಿಗೆ ಇನ್ನೂ ಈ ಬಗೆಯ ಸೌಲಭ್ಯಗಳ ಬಗ್ಗೆ ನೂರಕ್ಕೆ ನೂರರಷ್ಟು ತಿಳುವಳಿಕೆಯಿಲ್ಲ. ಇನ್ನು ಸೌಲಭ್ಯಗಳನ್ನು ಪಡೆದು ಸುಧಾರಿತರಾದವರು ತನ್ನ ಸಮುದಾಯದಲ್ಲಿಯೆ ಹಿಂದೆ ಬಿದ್ದವರ ಕಡೆಗೆ ಹೊರಳಿ ನೋಡುವುದಿಲ್ಲ. ಬದಲಾಗಿ ಸಂಸ್ಕೃತಾನುಕರಣದ ಭರಾಟೆಯಲ್ಲಿ ಆತ ತನ್ನ ಮೂಲವನ್ನೇ ಮರೆಯುತ್ತಾನೆ.

ಹಾಗಾಗಿಯೆ ಚಿಂತಕ ಪೆರಿಯಾರ್ ಹೀಗೆ ಹೇಳುತ್ತಾರೆ. ‘ಒಬ್ಬ ಬ್ರಾಹ್ಮಣ ನೂರು ಪ್ರತಿಶತ ಬ್ರಾಹ್ಮಣ. ಆದರೆ ಒಬ್ಬ ಶೂದ್ರ ಸಂಸ್ಕೃತಾನುಕರಣಕ್ಕೆ ಸಿಲುಕಿದರೆ ಆತ ನೂರಾ ಹತ್ತು ಪ್ರತಿಶತ ಬ್ರಾಹ್ಮಣ’ ಎನ್ನುವ ಮಾತು ನಿಜವೆನಿಸುತ್ತದೆ. ಸುಧಾರಿತ ದಲಿತ ಜನಸಮೂಹ ತಮ್ಮೊಂದಿಗೆ ತನ್ನ ಜನರನ್ನು ಕರೆದೊಯ್ಯುವ ಕೆಲಸ ಮಾಡಬೇಕಿದೆ. ಇವತ್ತಿಗೂ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಅವರ ಮೇಲೆ ನಡೆಯುವ ದೌರ್ಜನ್ಯಗಳು, ಅವರು ಬದುಕಿರುವ ರೀತಿ ಅವರ ಮನೆಗಳ ರಚನೆಯನ್ನು ನೋಡಿದರೆ ಅವರಿಗೆ ಯಾವ ಸೌಲಭ್ಯಗಳೂ ಸರಿಯಾಗಿ ದೊರೆತಿಲ್ಲ ಎನಿಸುತ್ತದೆ. ಗುಲ್ಬರ್ಗಾ ಜಿಲ್ಲೆಯ ಕೆಲ ಪರಿಶಿಷ್ಟ ಪಂಗಡಗಳು ಬಡತನಕ್ಕೆ ಹೆದರಿ ತಮ್ಮ ಕರಳು ಕುಡಿಗಳನ್ನೇ ಮಾರಾಟ ಮಾಡುವ ಧಾರುಣ ಘಟನೆಗಳು ದಂತಕಥೆಗಳಿಗಿಂತಲೂ ಭಯಂಕರವಾಗಿವೆ.

2008-09 ರ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 71.5 ಪ್ರತಿಶತ ಪರಿಶಿಷ್ಟ ಜಾತಿಯ ಜನರಿಗೆ ಶೌಚಾಲಯಗಳ ಸೌಲಭ್ಯವಿಲ್ಲ. ಗಂಡು-ಹೆಣ್ಣು ಇಬ್ಬರೂ ಕೈಯಲ್ಲಿ ತಂಬಿಗೆ ಹಿಡಿದು ಬಯಲು ಕಡಿಗೆ ನಡೆಯುವ ಪರಿಸ್ಥಿತಿಯಿದೆ. ಹಗಲು ಹೊತ್ತಿನಲ್ಲಿ ಶೌಚಕ್ಕೆ ತೆರಳದ ಸ್ಥಿತಿಯೂ ಇಲ್ಲದಿಲ್ಲ. ಹಾಗೆಯೆ ಸುಮಾರು 70 ಪ್ರತಿಶತ ಪ.ಪಂಗಡದ ಜನರಿಗೆ ಶೌಚಾಲಯಗಳಿಲ್ಲ. ಆದರೆ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಕೇವಲ 35.4 ಪ್ರತಿಶತ ಜನಸಮೂಹಕ್ಕೆ ಶೌಚಾಲಯಗಳಿಲ್ಲ. ಇದು ಇಡೀ ದೇಶದಲ್ಲಿರುವ 49.2 ಪ್ರತಿಶತ ಶೌಚಾಲಯಗಳ ಪ್ರಮಾಣವನ್ನು ಮೀರಿದುದಾಗಿದೆ. ಇದೇ ರೀತಿಯಲ್ಲಿ ಆಸ್ಪತ್ರೆಗಳಿಲ್ಲದಿರುವ, ಶಾಲೆಗಳಿಲ್ಲದಿರುವ, ಕುಡಿಯಲು ಶುದ್ಧವಾದ ನೀರಿಲ್ಲದ, ಸುರಕ್ಷಿತವಾದ ಮನೆಗಳಿಲ್ಲದ, ವಿದ್ಯುತ್ ಸೌಕರ್ಯವಿಲ್ಲದ ಇನ್ನೂ ಅನೇಕ ಕೊರತೆಗಳ ನಡುವೆ ಈ ಸಮುದಾಯಗಳು ಬದುಕಬೇಕಿದೆ.

ನಮ್ಮ ದೇಶದ ಧಾರ್ಮಿಕ ಸಮೂಹಗಳ ಪಾಲಲ್ಲಿ ಮುಸ್ಲಿಂ ಸಮುದಾಯವೇ ಸುಮಾರು 12 ಪ್ರತಿಶತದಷ್ಟಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಮುಸ್ಲಿಂರ ಸ್ಥಿತಿಗತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕಿಂತಲೂ ಚೆನ್ನಾಗಿವೆ. ಅವರಲ್ಲಿಯ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ, ಮನೆಗಳ ರಚನೆ, ಸಾಕ್ಷರತೆ ಮುಂತಾದ ವಿಷಯಗಳಲ್ಲಿ ಅವರು ಮಿಕ್ಕವರಿಗಿಂತಲೂ ಸುಧಾರಿತ ಸ್ಥಿತಿಯಲ್ಲಿದ್ದಾರೆ. ದೇಶದ ಮಿಕ್ಕ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕ ರಾಜ್ಯದ ಸ್ಥಿತಿ ಚೆನ್ನಾಗಿದೆ. 2000 ಸಂದರ್ಭದಲ್ಲಿಯೂ ಅದು ತನ್ನ ಸ್ಥಾನವನ್ನು 12 ಕ್ಕೆ ಸೀಮಿತಗೊಳಿಸಿಕೊಂಡಿದ್ದರೆ 2007-08 ರ ಸಂದರ್ಭದಲ್ಲಿಯೂ ಅದು ಆ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ಮಾನವ ಅಭಿವೃದ್ಧಿ ಎನ್ನುವುದು ಭೌತಿಕ ಸಂಗತಿಗಳಿಂದ ಅಳೆಯಬಹುದಾದರೂ ಸಾಮಾಜಿಕ ಬದುಕಿನ ಭಾಗವಾಗಿರುವ ಮಾನಸಿಕ ಅಂಶಗಳನ್ನು ನಿರ್ಲಕ್ಷಿಸಿ ಮಾನವ ಅಭಿವೃದ್ಧಿಯನ್ನು ಸಾಧಿಸಲಾಗದು. ಶೋಷಿತ ಸಮುದಾಯದ ಒಬ್ಬ ವ್ಯಕ್ತಿ ಅನುಭವಿಸಿದ. ಅನುಭವಿಸುವ ಸೌಲಭ್ಯಗಳನ್ನು ಕಂಡು ಅವನೊಂದಿಗೆ ಬದುಕುವ ಇತರರು ಕರಬುವಂತಾಗಬಾರದು. ಮೂದಲಿಕೆಯ ಮಾತುಗಳು ಮತ್ತು ಮಾನಸಿಕ ಕಿರಕಿರಿಯ ನಡುವೆ ದೊರೆಯಬಹುದಾದ ಯಾವ ಸೌಲಭ್ಯಗಳೂ ನೆಮ್ಮದಿಯನ್ನು ಒದಗಿಸಲಾರವು. ಶೋಷಿತರ, ದಮನಿತರ ಬಗೆಗೆ ಪೂರಕ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳುವ ಮೂಲಕ ತಳ ಸಮುದಾಯಗಳನ್ನು ಎತ್ತರಿಸಬೇಕಿದೆ.

ಪ್ರಜಾ ಸಮರ-5 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಇತಿಹಾಸವನ್ನು ನಕ್ಸಲ್‌ ಬಾರಿ ಎಂಬ ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್ ಪ್ರಾಂತ್ಯದ ಹಳ್ಳಿಯಲ್ಲಿ 1967ರ ಮೇ ತಿಂಗಳಿನಲ್ಲಿ ನಡೆದ ಘಟನೆಯೊಂದಿಗೆ ಗುರುತಿಸುವುದು ವಾಡಿಕೆಯಾಗಿದೆ. ವಾಸ್ತವವಾಗಿ ಈ ಘಟನೆಗೂ ಮುನ್ನ ಒಂದು ದಶಕದ ಹಿಂದೆಯೇ ಆಂಧ್ರದ ಉತ್ತರ ತೆಲಂಗಾಣ ಪ್ರಾಂತ್ಯದ ಶ್ರೀಕಾಕುಳಂ ಜಿಲ್ಲೆಯಲ್ಲಿ ರೈತ ಮತ್ತು ಕೂಲಿ ಕಾರ್ಮಿಕರ ಹೋರಾಟ ಆರಂಭಗೊಂಡಿತ್ತು.

1925 ರಲ್ಲಿ ಭಾರತಕ್ಕೆ ಕಾಲಿಟ್ಟ ಎಡಪಂಥಿಯ ಚಿಂತನೆಗಳು ಆ ಕಾಲದಲ್ಲಿ ಆಂಧ್ರ ಪ್ರದೇಶದುದ್ದಕ್ಕೂ ಹರಡಿದ್ದವು. ಆಗಿನ ಆಂಧ್ರಪ್ರಭ ಎಂಬ ತೆಲುಗು ದಿನಪತ್ರಿಕೆ ಕಮ್ಯೂನಿಷ್ಟ್ ಪಕ್ಷದ ವಿಚಾರಧಾರೆಯನ್ನು ಪ್ರಕಟಿಸುವುದರಲ್ಲಿ ಮುಂಚೂಣಿಯಲ್ಲಿತ್ತು. ಅಲ್ಲಿನ ಕಮ್ಯೂನಿಷ್ಟರ ಪ್ರಭಾವ ಮತ್ತು ಸಹಕಾರದೊಂದಿಗೆ ತೆಲಂಗಾಣ ಪ್ರಾಂತ್ಯದ ಅರಣ್ಯಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳು ಮತ್ತು ರೈತ ಹಾಗೂ ಕೂಲಿ ಕಾರ್ಮಿಕರು, ಆಂಧ್ರದಲ್ಲಿ ದೊರೆಗಳು ಎಂದು ಕರೆಸಿಕೊಳ್ಳುತ್ತಿದ್ದ ಜಮೀನ್ದಾರರ ದಬ್ಬಾಳಿಕೆ ಮತ್ತು ಕ್ರೌರ್ಯದ ವಿರುದ್ಧ ತಿರುಗಿಬಿದ್ದಿದ್ದರು. ಇವರಿಗೆ 1947ಕ್ಕೆ ಮುನ್ನವೇ ಅಂದಿನ ಹೈದರಾಬಾದ್ ನಿಜಾಮನ ವಿರುದ್ಧ ತಿರುಗಿ ಬಿದ್ದಿದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಹೋರಾಟ ಮಾದರಿಯಾಗಿತ್ತು.

ಸ್ವಾತಂತ್ಯಕ್ಕೆ ಪೂರ್ವದಲ್ಲಿ ತೆಲಂಗಾಣ ಪ್ರಾಂತ್ಯ ಕೂಡ ಹೈದರಾಬಾದ್ ಸಂಸ್ಥಾನವನ್ನು ಆಳುತ್ತಿದ್ದ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ತನ್ನ ರಾಜ್ಯದ ಜನರ ಹಿತಾಸಕ್ತಿಯನ್ನು ಬದಿಗೊತ್ತಿ ಸದಾ ಸುಖದ ಲೋಲುಪತೆಯಲ್ಲಿ ಮುಳುಗಿ ಅಕ್ಷರಶಃ ಸರ್ವಾಧಿಕಾರಿಯಂತೆ ಆಳಿದ ಈ ನಿಜಾಮನ ಬಗ್ಗೆ ಸಾಮಾನ್ಯ ಜನರ ಎದೆಯೊಳಗೆ ಸಹಜವಾಗಿ ಆಕ್ರೋಶ ಮಡುವುಗಟ್ಟಿತ್ತು. ಎಂಬತ್ತಾರು ಮಂದಿ ಪತ್ನಿಯರನ್ನು ಹೊಂದಿದ್ದ ಹಾಗೂ ಆ ಕಾಲದ ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬನಾಗಿದ್ದ ಇವನ ಕೈಕೆಳಗೆ ಇದ್ದ ಆಡಳಿತಗಾರರು, ಪ್ರಾಂತ್ಯಗಳ ಪಾಳೆಗಾರರು, ಜಮೀನ್ದಾರರು ಮತ್ತು ರಜಾಕಾರರು ನಿಜಾಮನಷ್ಟೇ ಕ್ರೂರಿಗಳಾಗಿದ್ದರು. ಆಳುವವರೆಲ್ಲಾ ಮುಸ್ಲಿಂರಾಗಿದ್ದುದು ಬಹು ಸಂಖ್ಯಾತರಾಗಿದ್ದ ಅಂದಿನ ಹೈದರಾಬಾದ್ ಸಂಸ್ಥಾನದ ಹಿಂದುಗಳಲ್ಲಿ ನಿಜಾಮನ ಆಡಳಿತ ಕುರಿತಂತೆ ಅಂತರಂಗದಲ್ಲಿ ಅಸಮಧಾನವಿದ್ದ ಕಾರಣಕ್ಕಾಗಿ ನಿಜಾಮನ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ ಜನಸಾಮಾನ್ಯರ ಪರ ಧ್ವನಿ ಎತ್ತಿದ ಕಮ್ಯೂನಿಷ್ಟ್ ಪಕ್ಷದ ಮೇಲೆ ಹೈದರಾಬಾದ್‌ ನಿಜಾಮ ನಿಷೇಧವನ್ನು ಹೇರಿದ್ದ.

1946ರಲ್ಲಿ ಆಂಧ್ರದ ಎಲ್ಲಾ ಕಮ್ಯೂನಿಷ್ಟ್ ನಾಯಕರು ಒಗ್ಗೂಡಿ ಆಂಧ್ರ ಮಹಾಸಭಾ ಸಂಘಟನೆಯ ಅಡಿಯಲ್ಲಿ ನಿಜಾಮನ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದರು. ಅಪಾರ ಪ್ರಮಾಣದಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಬೆಂಬಲ ಪಡೆದಿದ್ದ ಎಡಪಂಥಿಯ ಹೋರಾಟವನ್ನು ಬಗ್ಗು ಬಡಿಯುವುದು ನಿಜಾಮನಿಗೆ ಸುಲಭದ ಸಂಗತಿಯಾಗಿರಲಿಲ್ಲ. ಆಂಧ್ರದ ನೆಲದಲ್ಲಿ ಪ್ರಥಮಬಾರಿಗೆ ನಿಜಾಮನ ವಿರುದ್ಧ ಸಂಘಟಿತವಾಗಿ ಕಮ್ಯೂನಿಷ್ಟರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ನಲ್ಗೊಂಡ, ಕಮ್ಮಂ, ವಾರಂಗಲ್ ಜಿಲ್ಲೆಗಳಲ್ಲಿ ಸುಮಾರು ಐದು ಸಾವಿರ ರೈತರು ಮತ್ತು ಕೂಲಿಕಾರ್ಮಿಕರು ಸಹ ಸಂಘಟಿತರಾಗಿ ತಮ್ಮನ್ನು ಶೋಷಣೆ ಮಾಡುತ್ತಿದ್ದ ಭೂಮಾಲಿಕರ ವಿರುದ್ಧ ಸಿಡಿದೆದ್ದರು. ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ಭೂಮಾಲಿಕರ ಜಮೀನುಗಳಿಗೆ ನುಗ್ಗಿದ ರೈತರು ಬೆಳೆದು ನಿಂತಿದ್ದ ಫಸಲನ್ನು ಕುಯ್ಲು ಮಾಡಿ ಕೊಂಡೊಯ್ದು ನಂತರ ಎಲ್ಲರೂ ಸಮನಾಗಿ ಹಂಚಿಕೊಂಡರು.

ಆಂಧ್ರದ ಕ್ರಾಂತಿಕಾರಿ ಲೇಖಕ ಮತ್ತು ಕವಿಯಾಗಿರುವ ಹಾಗೂ ನಕ್ಸಲ್ ಚಳವಳಿಯ ಬೆಂಬಲಿಗರಲ್ಲಿ ಒಬ್ಬರಾಗಿರುವ ವರವರರಾವ್ ತಮ್ಮ ’ಸೆರೆಮನೆಯ ದಿನಚರ” ಎಂಬ ಕೃತಿಯಲ್ಲಿ ಭೂಮಾಲಿಕರ ದಬ್ಬಾಳಿಕೆ ಆಂಧ್ರಪ್ರದೇಶದಲ್ಲಿ ನಕ್ಸಲ್ ಹೋರಾಟ ಹುಟ್ಟಿಕೊಳ್ಳಲು ಪರೋಕ್ಷವಾಗಿ ಕಾರಣವಾಯಿತು ಎಂದಿದ್ದಾರೆ. ಅಲ್ಲದೆ, ಆಂಧ್ರದಲ್ಲಿ ಸಂಸ್ಥಾನಗಳ ಮಾಂಡಲೀಕರಂತೆ ಬದುಕಿದ ಭೂಮಾಲಿಕರ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಆ ಕಾಲದಲ್ಲಿ ಜಮೀನುಗಳಲ್ಲಿ ದುಡಿಯುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು ತಮ್ಮ ಹಸುಗೂಸುಗಳನ್ನು ಜೊತೆಯಲ್ಲಿ ಕೊಂಡೊಯ್ದು ಹೊಲದ ಬದಿಯಲ್ಲಿ ಗಿಡಗಳ ನೆರಳಲ್ಲಿ ಮಲಗಿಸಿ ದುಡಿಯುವುದು ಸಾಮಾನ್ಯವಾಗಿತ್ತು. ತಮ್ಮ ಮಕ್ಕಳಿಗೆ ಮಣ್ಣಿನ ಕುಡಿಕೆಯೊಂದರಲ್ಲಿ ಒಂದಿಷ್ಟು ಹಾಲನ್ನು ಜೊತೆಯಲ್ಲಿ ಕೊಂಡೊಯ್ಯುತ್ತಿದ್ದರು. ಮಕ್ಕಳು ಅತ್ತಾಗ, ಅವುಗಳಿಗೆ ಹಾಲುಣಿಸಲು ಬಿಡಲಾರದಷ್ಟು ಕ್ರೂರಿಗಳಾಗಿದ್ದ ಜಮೀನ್ದಾರರು ಹಲವು ವೇಳೆ ಹಾಲಿನ ಮಡಕೆಗಳಿಗೆ ಮಣ್ಣು ತುಂಬಿ ಅವುಗಳನ್ನು ಹೊಲದಲ್ಲಿ ಹರಡುತ್ತಿದ್ದರು. ಈ ಘಟನಾವಳಿಗಳನ್ನ ವರವರರಾವ್ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

1947ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾದರೂ ಹೈದರಾಬಾದ್ ಸಂಸ್ಥಾನಕ್ಕೆ ಮಾತ್ರ ಸ್ವಾತಂತ್ರ್ಯ ದೊರಕಿರಲಿಲ್ಲ. ಸ್ವತಂತ್ರ ಭಾರತದೊಂದಿಗೆ ಹೈದರಾಬಾದ್ ಸಂಸ್ಥಾನವನ್ನು ವಿಲೀನಗೊಳಿಸಲು ನಿರಾಕರಿಸಿದ್ದ ನಿಜಾಮ, ಹೈದರಾಬಾದ್ ಅನ್ನು ಪ್ರತ್ಯೇಕ ರಾಷ್ಟ್ರವಾಗಿಸಲು ಯತ್ನಿಸಿ ಬ್ರಿಟಿಷರ ನೆರವು ಕೋರಿದ್ದ. ಭಾರತದ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೊಡಗಿದ್ದ ಸ್ವತಂತ್ರ ಭಾರತದ ಗೃಹ ಮಂತ್ರಿ ಸರ್ದಾರ್ ವಲ್ಲಬಾಯ್ ಪಟೇಲ್ ನಿಜಾಮನ ವರ್ತನೆಯಿಂದ ಸಿಟ್ಟಿಗೆದ್ದು 1948ರಲ್ಲಿ ಭಾರತೀಯ ಸೇನೆಯನ್ನು ಹೈದರಾಬಾದ್ ಸಂಸ್ಥಾನದ ಮೇಲೆ ಮುತ್ತಿಗೆ ಹಾಕಲು ರವಾನಿಸಿದಾಗ, ಹೆದರಿದ ನಿಜಾಮ ಅಂತಿಮವಾಗಿ ಭಾರತ ಸರ್ಕಾರಕ್ಕೆ ಶರಣಾಗಿದ್ದನು. ಆ ವೇಳೆಗಾಗಲೇ ನಿಜಾಮನ ದುರಾಡಳಿತದಿಂದ ಬೇಸತ್ತಿದ್ದ ತೆಲಂಗಾಣ ಪ್ರಾಂತ್ಯದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಬಲಿಷ್ಠ ಸಂಘಟನೆಗಳನ್ನು ಹುಟ್ಟು ಹಾಕಿಕೊಂಡಿದ್ದರು ಜೊತೆಗೆ ಇವುಗಳನ್ನು ನೆರೆಯ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಿಗೂ ವಿಸ್ತರಿಸಿದ್ದರು.

1948 ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನಗೊಂಡ ನಂತರ ಸ್ವತಂತ್ರ ಭಾರತದ ನೂತನ ಸರ್ಕಾರದ ಆಳ್ವಿಕೆಯಲ್ಲಿ ಆಂಧ್ರದಲ್ಲಿ ಅಘೋಷಿತವಾಗಿ ಜಾರಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಯ ವಿರುದ್ಧದ ಹೋರಾಟ ಮುಂದುವರಿಸಬೇಕೆ ಅಥವಾ ಬೇಡವೆ? ಎಂಬ ಚರ್ಚೆ ಮತ್ತು ಜಿಜ್ಞಾಸೆ ಕಮ್ಯೂನಿಷ್ಟ್ ಹೋರಾಟಗಾರರಲ್ಲಿ ಹುಟ್ಟಿಕೊಂಡಿತು. ಮುಂದುವರಿಸುವುದಾದರೆ, ಹೋರಾಟವನ್ನು ಯಾವ ಪಥದಲ್ಲಿ ಕೊಂಡೊಯ್ಯಬೇಕೆಂಬ ಪ್ರಶ್ನೆ ಸಹ ಎದುರಾಯಿತು. ಇಂತಹ ಗೊಂದಲ ಮತ್ತು ಜಿಜ್ಞಾಸೆಗಳು ಹಲವು ವರ್ಷಗಳ ಕಾಲ ಆಂಧ್ರದ ಎಡಪಥೀಯ ಚಿಂತಕರಲ್ಲಿ ಮುಂದುವರಿದವು. ಆದರೆ, ಕೆಲವು ನಾಯಕರಿಗೆ ಯಾವ ಕಾರಣಕ್ಕೂ ಹೋರಾಟವನ್ನು ಸ್ಥಗಿತಗೊಳಿಸುವುದು ಬೇಕಾಗಿರಲಿಲ್ಲ. ಏಕೆಂದರೆ, ತೆಲಂಗಾಣ ಪ್ರಾಂತ್ಯದದಲ್ಲಿ ಬಲಿಷ್ಟರಾಗಿದ್ದ ರೆಡ್ಡಿ ಮತ್ತು ವೆಲಮ ಜನಾಂಗದ ಜಮೀನ್ದಾರರು,  ಶ್ರೀಮಂತರು, ಹಾಗೂ ಹಣದ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಪಟ್ವಾರಿಗಳು, ದಲಿತರು ಮತ್ತು ಆದಿವಾಸಿಗಳನ್ನು ಹಲವು ವರ್ಷಗಳಿಂದ ಇನ್ನಿಲ್ಲದಂತೆ ಶೋಷಿಸಿಕೊಂಡು ಬಂದಿದ್ದರು.

ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಬಡವ ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ನಾವು ಪಂಚೆ ಧರಿಸುವ ಹಾಗೆ ಕಚ್ಚೆ ಉಡುವ ಪದ್ಧತಿ ಆಚರಣೆಯಲ್ಲಿತ್ತು. (ಆಂಧ್ರದ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಇದೆ.) ಆದರೆ, ಯಾವೊಬ್ಬ ದಲಿತ ಅಥವಾ ಆದಿವಾಸಿ ಯಾವ ಕಾರಣಕ್ಕೂ ತನ್ನ ಮಂಡಿಯ ಕೆಳಕ್ಕೆ ಬರುವ ಹಾಗೆ ಕಚ್ಚೆ ಉಡಬಾರದು ಎಂಬ ಅಘೋಷಿತ ಕಾನೂನು ಜಾರಿಯಲ್ಲಿತ್ತು. ಅಲ್ಲದೆ, ಹೆಗಲ ಮೇಲೆ ಯಾವುದೇ ವಸ್ತ್ರ ಹಾಕಬಾರದು ಮತ್ತು ಶ್ರೀಮಂತರೆದುರು ತಲೆಗೆ ಮುಂಡಾಸು ಸುತ್ತಬಾರದು ಎಂಬ ನಿಯಮಗಳು ಸಹ ಜಾರಿಯಲ್ಲಿದ್ದವು. ರೆಡ್ಡಿ ಜನಾಂಗದ ಜಮೀನ್ದಾರರು, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಪಟ್ವಾರಿಗಳು ಮುಂತಾದವರು ಮಾತ್ರ ತಮ್ಮ ಮೊಣಕಾಲುಗಳು ಮುಚ್ಚಿ, ಪಾದ ಮಟ್ಟುವಂತೆ ಕಚ್ಚೆಗಳನ್ನು ಧರಿಸಿ, ಹೆಗಲ ಮೇಲೆ ಶಾಲು, ಅಥವಾ ಶಲ್ಯ ಹಾಕಬಹುದಿತ್ತು. ದಲಿತರ ಮತ್ತು ಆದಿವಾಸಿ ಕುಟುಂಬದ ಹೆಣ್ಣು ಮಕ್ಕಳು, ಅಥವಾ ಪತ್ನಿಯರು ತಮ್ಮ ಗಂಡಂದಿರ ಜೊತೆ ದೊರೆಗಳು ಎಂದು ಕರೆಸಿಕೊಳ್ಳುತ್ತಿದ್ದ ಜಮೀನ್ದಾರರ ಮನೆಗಳಲ್ಲಿ ವಾರ್ಷಿಕವಾಗಿ ನೀಡುತ್ತಿದ್ದ ಒಂದಿಷ್ಟು ಧವಸ, ಧಾನ್ಯ ಮತ್ತು ಬಟ್ಟೆಗಳಿಗಾಗಿ ಜೀತದಾಳುಗಳಾಗಿ ದುಡಿಯಬೇಕಿತ್ತು. ದೊರೆಗಳ ದೃಷ್ಟಿಯಲ್ಲಿ ದಲಿತರು ಮತ್ತು ಆದಿವಾಸಿಗಳು ಭೂಮಿಯ ಹಕ್ಕನ್ನು ಪಡೆಯುವುದು ಅಪರಾಧವಾಗಿತ್ತು. ಇಂತಹ ಹಲವಾರು ಅಮಾನುಷ ಅಲಿಖಿತ ಕಾನೂನುಗಳಿಂದ ನಲುಗಿದ್ದ ಆಂಧ್ರದ ಕೋಯಾ ಮತ್ತು ಗೊಂಡ ಬುಡಕಟ್ಟು ಜನಾಂಗ ಮತ್ತು ಕೃಷಿಕೂಲಿ ಕಾರ್ಮಿಕರಾದ ದಲಿತರು ಕಮ್ಯೂನಿಷ್ಟ್ ಕಾರ್ಯಕರ್ತರ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಇದರ ಪ್ರತಿಫಲವೆಂಬಂತೆ ಪರೋಕ್ಷವಾಗಿ ಅವರಿಗೆ ಜಮೀನ್ದಾರರ ಶೋಷಣೆಗಳು ಕಡಿಮೆಯಾಗತೊಡಗಿದವು. ಆದರೆ, ಆಂಧ್ರ ಸರ್ಕಾರ ಇವರುಗಳ ಹೋರಾಟ ಹತ್ತಿಕ್ಕಲು ಅನೈತಿಕ ಮಾರ್ಗವನ್ನು ಹಿಡಿಯತೊಡಗಿತು.

ತಮ್ಮ ಆತ್ಮ ರಕ್ಷಣೆಗಾಗಿ ಸಂಘಟಿತ ಗೊಂಡಿದ್ದ ರೈತ ಮತ್ತು ಕೂಲಿಕಾರ್ಮಿಕರು ಭೂಮಾಲಿಕರ ವಿರುದ್ಧ ತಮ್ಮ ಸಂಘರ್ಷವನ್ನು ಮುಂದುವರಿಸುವುದರ ಜೊತೆ ಜೊತೆಗೆ ಹೋರಾಟವನ್ನು ಗೋದಾವರಿ ನದಿ ತೀರದ ಎರಡು ಬದಿಯ ಜಿಲ್ಲೆಗಳಿಗೂ ವಿಸ್ತರಿಸಿದರು. ಅತಿ ಶೀಘ್ರದಲ್ಲಿ ಈ ಹೋರಾಟ ಕೃಷ್ಣಾ, ಕರೀಂನಗರ ನಲ್ಗೊಂಡ ಮತ್ತು ಅದಿಲಾಬಾದ್, ಶ್ರೀಕಾಕುಳಂ ಜಿಲ್ಲೆಗಳ ಅರಣ್ಯ ಪ್ರದೇಶಕ್ಕೆ ವಿಸ್ತರಿಸಿತು. ಇದರಿಂದ ಆತಂಕಗೊಂಡ ಸರ್ಕಾರ ಅರಣ್ಯದಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚುವುದರ ಮೂಲಕ ಅವರನ್ನು ಅರಣ್ಯದಿಂದ ಒಕ್ಕಲೆಬ್ಬಿಸಿತು. ಸರ್ಕಾರದ ಈ ಕ್ರಮದಿಂದಾಗಿ ಕೋಯಾ, ಗೊಂಡ ಮತ್ತು ಜಟಾಪು, ಮತ್ತು ಸವರ ಬುಡಕಟ್ಟು ಜನಾಂಗಗಳ ಸುಮಾರು ನಲವತ್ತು ಸಾವಿರ ಆದಿವಾಸಿಗಳು 60 ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ನೆಲೆ ಕಳೆದುಕೊಂಡು ಅತಂತ್ರರಾದರು.

ಇಂತಹ ವೇಳೆಯಲ್ಲಿ ಇವರ ನೆರವಿಗೆ ಬಂದವರು ಇಬ್ಬರು ಶಿಕ್ಷಕರು. ಅವರೆಂದರೆ, ವೆಂಪಟಾಪು ಸತ್ಯನಾರಾಯಣ ಮತ್ತು ಮತ್ತು ಕೈಲಾಸಂ. (ಇವರಿಬ್ಬರನ್ನು ಕುರಿತು, ಮತ್ತು ಹೋರಾಟದ ವಿವರಗಳನ್ನು ನಕ್ಸಲ್ ಕಥನದ ಮೊದಲ ಭಾಗವಾದ ಎಂದೂ ಮುಗಿಯದ ಯುದ್ದ ಸರಣಿಯ ಎಂಟು ಮತ್ತು ಒಂಬತ್ತರ ಅಧ್ಯಾಯಗಳಲ್ಲಿ ಸವಿವರವಾಗಿ ದಾಖಲಿಸಲಾಗಿದೆ. ಗಮನಿಸಿ.)

ಇತ್ತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ಹಣೆಪಟ್ಟಿಯಿಲ್ಲದೆ ರೈತರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟ ಮುಂದುವರಿಯುತ್ತಿದ್ದಾಗ, ಅತ್ತ ಎಡಪಂಥೀಯ ಚಿಂತನೆಗಳ ಕೇಂದ ಬಿಂದುವಾಗಿದ್ದ ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್ ಗುಡ್ಡಗಾಡು ಪ್ರಾಂತ್ಯದ ಚಹಾತೊಟಗಳಲ್ಲಿ ದುಡಿಯುತ್ತಿದ್ದ ಕೂಲಿಕಾರ್ಮಿಕರು ಸಹ ವೇತನ ಹೆಚ್ಚಳಕ್ಕಾಗಿ ಮತ್ತು ಶೋಷಣೆಯಿಲ್ಲದ ನೆಮ್ಮದಿಯ ಬದುಕಿಗೆ ಹೋರಾಟ ನಡೆಸಿದ್ದರು. ಅಲ್ಲಿಯೂ ಕೂಡ ಕಮ್ಯೂನಿಷ್ಟ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಚಾರು ಮುಜಂದಾರ್ ಮತ್ತು ಕನು ಸನ್ಯಾಲ್ ಹಾಗೂ ನಾಗಭೂಷಣ್ ಪಟ್ನಾಯಕ್ ಮುಂತಾದವರು ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ಕೃಷಿಕರು ಮತ್ತು ಕಾರ್ಮಿಕರ ಅಭ್ಯುದಯವನ್ನು ಮೂಲ ಮಂತ್ರವಾಗಿರಿಸಿಕೊಂಡಿದ್ದ ಕಮ್ಯೂನಿಷ್ಟ್ ಪಕ್ಷದಲ್ಲಿ ಸರ್ಕಾರದ ವಿರುದ್ಧ ಮತ್ತು ದೀನ ದಲಿತರು ಮತ್ತು ಕಾರ್ಮಿಕರನ್ನು ಶೋಷಿಸುತ್ತಿರುವ ಶ್ರೀಮಂತ ವರ್ಗದ ವಿರುದ್ಧ ಹೋರಾಟವನ್ನು ಮುಂದುವರಿಸುವ ಬಗ್ಗೆ ಪಶ್ಚಿಮ ಬಂಗಾಳದಲ್ಲೂ ಕೂಡ ಆಂಧ್ರ ಪ್ರದೇಶದ ಕಮ್ಯೂನಿಷ್ಟ್ ನಾಯಕರಿಗೆ ಇದ್ದ ಹಾಗೆ ಗೊಂದಲಗಳಿದ್ದವು. ಅಂತಿಮವಾಗಿ ಎರಡು ರಾಜ್ಯಗಳ ನಾಯಕರ ನಡುವೆ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಎಂಬ ಬಣಗಳು ಸೃಷ್ಟಿಯಾದವು. ಇದರ ಪ್ರಯುಕ್ತವಾಗಿ 1964ರಲ್ಲಿ ಕಮ್ಯೂನಿಷ್ಟ್ ಪಕ್ಷ ಅಧಿಕೃತವಾಗಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ, ಮತ್ತು ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ (ಮಾವೋ ಮತ್ತು ಲೆನಿನ್) ಎಂಬ ಎರಡು ಪಕ್ಷಗಳಾಗಿ ವಿಭಜನೆಗೊಂಡಿತು. ಪಶ್ಚಿಮ ಬಂಗಾಳದಲ್ಲಿ ಚಾರು ಮುಜುಂದಾರ್ ಉಗ್ರವಾದಿಗಳ ಬಣದ ನೇತೃತ್ವ ವಹಿಸಿದನು. ಆಂಧ್ರದಲ್ಲಿ ವೆಂಪಟಾಪು ಸತ್ಯನಾರಾಣ ಎಂಬ ಶಿಕ್ಷಕ ಮತ್ತು ಕೈಲಾಸಂ ಇಬ್ಬರೂ ಚಾರು ಮುಜುಂದಾರ್ ನೇತೃತ್ವದ ಸಿ.ಪಿ.ಐ. (ಎಂ.ಎಲ್.) ಬಣದ ಜೊತೆ ಗುರುತಿಸಿಕೊಂಡು ಹೋರಾಟ ಮುಂದುವರಿಸಿದರು.

1967 ರ ಮೇ ತಿಂಗಳ 23 ರಂದು ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಹಳ್ಳಿಯಲ್ಲಿ ಪ್ರಥಮ ಬಾರಿಗೆ ಪೊಲೀಸರು ಮತ್ತು ಕೃಷಿ ಕೂಲಿಕಾರ್ಮಿಕರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿಂದಂತೆ ಒಂಬತ್ತು ಆದಿವಾಸಿಗಳ (ಇವರಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮತ್ತು ಓರ್ವ ಆದಿವಾಸಿ ಪುರುಷ) ಸಾವಿನೊಂದಿಗೆ ಭಾರತದಲ್ಲಿ ನಕ್ಸಲ್ ಹೋರಾಟದ ರಕ್ತ ಚರಿತ್ರೆಯ ಮೊದಲ ಅಧ್ಯಾಯ ಆರಂಭಗೊಡಿತು. ಇದೇ ವರ್ಷ ಅಂದರೆ, 1967 ರ ಅಕ್ಟೋಬರ್ 31 ರಂದು ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಪಾರ್ವತಿ ಪುರಂ ತಾಲೂಕಿನ ಲೆವಿಡಿ ಎಂಬ ಗ್ರಾಮದಲ್ಲಿ ಜಮೀನ್ದಾರನೊಬ್ಬನ ಮನೆಗೆ ನುಗ್ಗಿದ ಆದಿವಾಸಿಗಳು ಮತ್ತು ಪೊಲೀಸರ ನಡುವೆ ಕಾಳಗ ನಡೆದು ಆಂಧ್ರದ ನೆಲದಲ್ಲಿ ಪ್ರಥಮ ಬಾರಿಗೆ ಇಬ್ಬರು ಆದಿವಾಸಿಗಳ ಹೆಣ ಬೀಳುವುದರೊಂದಿಗೆ ನಕ್ಸಲ್ ಯುದ್ಧದ ಎರಡನೇ ಅಧ್ಯಾಯ ಪ್ರಾರಂಭವಾಯಿತು. (ಈಘಟನೆಗಳ ಕುರಿತು ಈಗಾಗಲೇ ಎಂದೂ ಮುಗಿಯದ ಯುದ್ದ ಮೊದಲ ಭಾಗದಲ್ಲಿ ದಾಖಲಿಸಲಾಗಿದೆ. ಒಂದರಿಂದ ನಾಲ್ಕರ ವರೆಗಿನ ಅಧ್ಯಾಯಗಳನ್ನು ವರ್ತಮಾನ.ಕಾಮ್‌ನ ನಕ್ಸಲ್ ಕಥನದ ಸರಣಿ ಲೇಖನಗಳ ಮಾಲಿಕೆಯಲ್ಲಿ ಆಸಕ್ತರು ಗಮನಿಸಬಹುದು.)

ಈ ಎರಡು ರಾಜ್ಯಗಳಲ್ಲಿನ ಉಗ್ರವಾದಿ ಕಮ್ಯೂನಿಷ್ಟ್ ನಾಯಕರ ಬೆಂಬಲದ ಹೋರಾಟದ ಫಲವಾಗಿ 1970ರ ವೇಳೆಗೆ ಆಂಧ್ರದಲ್ಲಿ ಮುನ್ನೂರಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 160 ಗುಡ್ಡಗಾಡು ಪ್ರದೇಶದ ಗ್ರಾಮಗಳ ರೈತರು ಆದಿವಾಸಿಗಳು ಮತ್ತು ಕೃಷಿಕೂಲಿ ಕಾರ್ಮಿಕರು ಭೂಮಾಲೀಕರ ಕಪಿಮುಷ್ಟಿಯಿಂದ ಬಿಡುಗಡೆಗೊಂಡಿದ್ದರು. ಇಂತಹ ಗ್ರಾಮಗಳನ್ನು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸರ್ಕಾರಗಳು ರೆಡ್ ಏರಿಯಾ ಎಂದು ಗುರುತಿಸಿದ್ದವು.

ನಕ್ಸಲ್ ಹೋರಾಟದಿಂದ ವಿಚಲಿತಗೊಂಡ ಆಂಧ್ರ ಪೊಲೀಸರು 1969 ರ ಮೇ 27 ರಂದು ಆಂಧ್ರ ಯುವ ಕ್ರಾಂತಿಕಾರಕ ನಾಯಕರಲ್ಲಿ ಒಬ್ಬನಾಗಿದ್ದ ಪಂಚಡಿ ಕೃಷ್ಣಮೂರ್ತಿಯನ್ನು ಬಂಧಿಸಿ ಎನ್ ಕೌಂಟರ್ ಮೂಲಕ ಹತ್ಯೆಗೈದರು. ಮತ್ತೇ  ಮರುವರ್ಷ 1970ರ ಜುಲೈ 10ರಂದು ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇವರಿಬ್ಬರನ್ನು ಬಂಧಿಸಿ ಶ್ರೀಕಾಕುಳಂ ಜಿಲ್ಲೆಯ ಅರಣ್ಯ ಪ್ರದೇಶದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಗುಂಡಿಟ್ಟು ಕೊಲ್ಲುವುದರ ಮೂಲಕ ನಕ್ಸಲ್ ಚಳವಳಿಗೆ ತಾತ್ಕಾಲಿಕ ವಿರಾಮ ನೀಡಿದರು. ಅತ್ತ ಪಶ್ಚಿಮ ಬಂಗಾಳದಲ್ಲೂ ಕೂಡ ಚಾರು ಮುಜುಂದಾರನನ್ನು 1972 ರ ಜುಲೈ 16ರಂದು ಬಂದಿಸಿದ ಕೊಲ್ಕತ್ತ ನಗರದ ಪೊಲೀಸರು ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹನ್ನೆರೆಡು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಿ ಜುಲೈ 28ರಂದು ಕೊಲ್ಲುವುದರ ಮೂಲಕ ನಕ್ಸಲ್ ಹೋರಾಟಕ್ಕೆ ತೆರೆ ಎಳೆದರು.

ಕಮ್ಯೂನಿಷ್ಟ್ ನಾಯಕರ ಈ ಹತ್ಯೆಯಿಂದಾಗಿ ನಕ್ಸಲ್ ಹೋರಾಟಕ್ಕೆ ಉಂಟಾಗಿದ್ದ ಹಿನ್ನಡೆ ಕೇವಲ ತಾತ್ಕಾಲಿಕವಾಗಿತ್ತು. ಏಕೆಂದರೆ, ಅಷ್ಟರ ವೇಳೆಗಾಗಲೇ ನಕ್ಸಲ್ ಹೋರಾಟಗಾರರು ಹಚ್ಚಿದ್ದ ಕಿಚ್ಚಿನ ಜ್ವಾಲೆಯ ಪಂಜನ್ನು ಆರದಂತೆ ಕಾಪಾಡಲು ಆಂಧ್ರದ ವಾರಂಗಲ್ ಜಿಲ್ಲೆಯಲ್ಲಿ ಇಬ್ಬರು ನಾಯಕರು ಹೊರ ಹೊಮ್ಮಿದ್ದರು. ಅವರೆಂದರೆ, ಪೀಪಲ್ಸ್ ವಾರ್ ಗ್ರೂಪ್ (ಪ್ರಜಾ ಸಮರಂ) ಹೆಸರಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿ ಚಾರು ಮುಜಂದಾರ್ ಹಾದಿಯಲ್ಲಿ ನಕ್ಸಲ್ ಹೋರಾಟವನ್ನು ಮುನ್ನೆಡೆಸಿದ ಕೊಂಡಪಲ್ಲಿ ಸೀತಾರಾಮಯ್ಯ ಎಂಬ ಹಿಂದಿ ಶಿಕ್ಷಕ ಮತ್ತು ಕೆ.ಜಿ.ಸತ್ಯಮೂರ್ತಿ ಎಂಬ ದಲಿತ ಕವಿ ಮತ್ತು ಇಂಗ್ಲೀಷ್ ಶಿಕ್ಷಕ. ಈ ಇಬ್ಬರ ನಾಯಕರ ಹೋರಾಟದ ಫಲವಾಗಿ ನಕ್ಸಲ್ ಸಂಘಟನೆ ಇಂದು ಹಲವು ಶಾಖೆಗಳಾಗಿ ವಿಭಜನೆಗೊಂಡು ದೇಶಾದ್ಯಂತ ನಮ್ಮನ್ನಾಳುವ ಸರ್ಕಾರಗಳಿಗೆ ಮಗ್ಗುಲ ಮುಳ್ಳಾಗಿ ಬೆಳೆದು ನಿಂತಿದೆ.

(ಮುಂದುವರಿಯುವುದು)

ನವೀನ್ ಸೂರಿಂಜೆಗೆ ಜಾಮೀನುರಹಿತ ಅರೆಸ್ಟ್ ವಾರಂಟ್. ವರ್ತಮಾನ ಬಳಗದ ನೈತಿಕ ಬೆಂಬಲ…

ಸ್ನೇಹಿತರೆ,

ಮಂಗಳೂರಿನಲ್ಲಿ ಸಂಕುಚಿತ, ಪ್ರತಿಗಾಮಿ, ಮತ್ತು ದಾರಿತಪ್ಪಿಸಲ್ಪಟ್ಟ ಯುವಕರು ಮಾರ್ನಿಂಗ್ ಮಿಸ್ಟ್ ಹೋಮ್‍ಸ್ಟೇ ಮೇಲೆ ದಾಳಿ ಮಾಡಿ, ನವೀನ್ ಸೂರಿಂಜೆ ಮತ್ತವರ ಸಹೋದ್ಯೋಗಿಗಳ ಮೂಲಕ ಇಡೀ ರಾಜ್ಯ ಮತ್ತು ದೇಶದ ಜನತೆಯ ಮುಂದೆ ಸಿಕ್ಕಿಬಿದ್ದದ್ದು ನಿಮಗೆ ತಿಳಿದಿರುವ ವಿಷಯವೆ. ಇದರ ಬಗ್ಗೆ ಸ್ವತಃ ನವೀನ್ ಸೂರಿಂಜೆಯವರೆ ನಮ್ಮ ವರ್ತಮಾನ.ಕಾಮ್‌ನಲ್ಲಿ ವಿಸ್ತೃತವಾಗಿ ಬರೆದಿದ್ದಾರೆ. (ಇಲ್ಲಿ, ಇಲ್ಲಿ, ಮತ್ತು ಇಲ್ಲಿ.) ಇಂದು ಆ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‍ಶೀಟ್ ಆಧಾರದ ಮೇಲೆ ಅಲ್ಲಿಯ ನ್ಯಾಯಾಲಯ ನವೀನ್ ಸೂರಿಂಜೆಯವರಿಗೆ ಜಾಮೀನುರಹಿತ ಅರೆಸ್ಟ್ ವಾರಂಟ್ ಹೊರಡಿಸಿದೆ. ಈ ಸಂದರ್ಭದಲ್ಲಿ ನಮ್ಮ “ವರ್ತಮಾನ ಬಳಗ” ನವೀನ್ ಸೂರಿಂಜೆಯವರಿಗೆ ನೈತಿಕ ಬೆಂಬಲ ಸೂಚಿಸುತ್ತದೆ ಮತ್ತು ಅವರು ಕಾನೂನುರೀತ್ಯ ಮಾಡಲಿರುವ ಹೋರಾಟಕ್ಕೆ ಬೆಂಬಲ ಕೊಡುತ್ತದೆ. ಮತ್ತು, ನಿಮ್ಮ ಬೆಂಬಲವೂ ಅವರಿಗಿರಲೆಂದು ಈ ಮೂಲಕ ಕೋರುತ್ತೇವೆ.

ಈ ವಿಷಯ ಈಗಾಗಲೆ ನ್ಯಾಯಾಲಯದಲ್ಲಿದೆ. ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾತು ಬೇಡ. ಆದರೆ, ಈ ಇಡೀ ವಿದ್ಯಮಾನದಲ್ಲಿ ಮಂಗಳೂರಿನ ಪೋಲಿಸರ ನಡವಳಿಕೆ ಆಕ್ಷೇಪಾರ್ಹ ಮತ್ತು ಖಂಡನೀಯ. ಅಲ್ಲಿಯ ಪೋಲಿಸರು ಯಾವ ಒತ್ತಡಗಳ ಹಿನ್ನೆಲೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಈಗಾಗಲೆ ಗೊತ್ತಿರುವ ವಿಷಯ. ಕೋಮುವಾದ ಮತ್ತು ರಾಜಕೀಯ ಹಸ್ತಕ್ಷೇಪ ಮಂಗಳೂರಿನ ಪೋಲಿಸ್ ಇಲಾಖೆಯ ನ್ಯಾಯಾನ್ಯಾಯ ವಿಚಕ್ಷಣತಾ ಗುಣವನ್ನು ಸಂಪೂರ್ಣವಾಗಿ ಕೊಂದಿದೆ. ಹೋಮ್‍ಸ್ಟೇ ಘಟನೆಗೆ ತನ್ನ ಕರ್ತವ್ಯ ನಿರ್ವಹಣೆಯ ಕಾರಣದಿಂದಾಗಿ ಕೇವಲ ಸಾಕ್ಷಿಯಾಗಿದ್ದ ಪತ್ರಕರ್ತರೊಬ್ಬರನ್ನು ಅಪರಾಧಿ ಎಂದು ಆರೋಪಿಸಿ ನ್ಯಾಯಾಲಯಕ್ಕೆ ತಪ್ಪು ಚಾರ್ಜ್‍ಶೀಟ್ ಸಲ್ಲಿಸುವುದು ಪೋಲಿಸ್ ಇಲಾಖೆಗೆ ಮತ್ತು ಕರ್ನಾಟಕದ ನ್ಯಾಯವ್ಯವಸ್ಥೆಗೆ ಯಾವ ರೀತಿಯ ಘನತೆಯನ್ನೂ ತಂದುಕೊಡುವುದಿಲ್ಲ. ಈಗಾಗಲೆ ಅದು ಘನತೆ ಮತ್ತು ಕರ್ತವ್ಯ ನಿರ್ವಹಣೆ ವಿಷಯದಲ್ಲಿ ಗಂಭೀರ ಕೊರತೆ ಅನುಭವಿಸುತ್ತಿದೆ. ಆದರೂ ಪೋಲಿಸ್ ಇಲಾಖೆ ಮತ್ತು ಗೃಹ ಸಚಿವಾಲಯದಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಆತ್ಮವಿಮರ್ಶೆ ಆಗುತ್ತಿಲ್ಲ. ನಾಚಿಕೆಗೇಡು. ರಾಜ್ಯದ ಗೃಹ ಸಚಿವರ ಮೇಲೆಯೇ ಅನೇಕ ಆರೋಪಗಳಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ಅವರ ವಿರುದ್ಧ ಮೊಕದ್ದಮೆಗಳಿವೆ. ಅವರ ಕೈಕೆಳಗಿನ ಅಧಿಕಾರಿಗಳೇ ಅವರ ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡುತ್ತಾರೆ. ಬೆಂಗಳೂರಿನ ಲೋಕಾಯುಕ್ತ ಎಸ್‌ಪಿ ಮೇಲೆಯೇ ಒಂದು ಕರ್ತವ್ಯಲೋಪ ಮತ್ತು ಮಾಹಿತಿಸೋರಿಕೆಯ ಮೊಕದ್ದಮೆ ಹೂಡಲಾಗಿದ್ದು ಈಗ ಅವರ ಮೇಲೆಯೇ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಇನ್ನು ಕಾನೂನು ಉಲ್ಲಂಘಿಸುವ, ಸೌಹಾರ್ದತೆ ಹಾಳುಮಾಡುವ ಜನರಿಗೆ ಪೋಲಿಸ್ ಇಲಾಖೆ ಕ್ಲೀನ್ ಚಿಟ್ ನೀಡಿ ಅವರನ್ನು ರಕ್ಷಿಸುತ್ತಿದೆ. ಇದೇ ಮಂಗಳೂರಿನ ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಫ್ಯಾಸಿಸ್ಟ್ ಮನೋಭಾವದ ವ್ಯಕ್ತಿಯೊಬ್ಬರು ಮಾಡಿದ ಭಾಷಣದಲ್ಲಿ ಯಾವುದೇ ಪ್ರಚೋದನಾಕಾರಿ ಅಂಶಗಳಿಲ್ಲ ಎಂದು ಅವರ ಪರ ನೀಡಿದ್ದ ಕ್ಲೀನ್ ಚಿಟ್‌ಗೆ ಸ್ವತಃ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ರಾಜ್ಯ ಕಾನೂನು-ನ್ಯಾಯ-ನೀತಿ-ಮೌಲ್ಯಗಳ ವಿಚಾರಕ್ಕೆ ತಳವಿಲ್ಲದ ಪಾತಾಳದಲ್ಲಿ ಜಾರುತ್ತಿದೆ.

ಇಂತಹ ಕೆಟ್ಟ ಸಂದರ್ಭದಲ್ಲಿ “ವರ್ತಮಾನ ಬಳಗ” ಪತ್ರಕರ್ತ ನವೀನ್ ಸೂರಿಂಜೆಯವರ ಪರ ನಿಲ್ಲುತ್ತದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಮತಾಂತರ: ಕೆಲವು ಟಿಪ್ಪಣಿಗಳು

ಪ್ರೊ. ರಹಮತ್ ತರೀಕೆರೆ

1

ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿಯ ಕಾರ್ಯಕ್ರಮದ ನಂತರ ಮತಾಂತರದ ಚರ್ಚೆನ್ನು ಬಿರುಸಿನಿಂದ ಆರಂಭಿಸಲಾಯಿತು. ಇದರಿಂದ ಎಲ್ಲ ವೈಚಾರಿಕ ಕದನಗಳಲ್ಲಿ ಆಗುವಂತೆ ಒಂದು ಬಗೆಯ ಧ್ರುವೀಕರಣವೂ ಆಯಿತು. ಈ ಚರ್ಚೆಯೊಳಗೆ ಹಲವು ಬಗೆಯ ಪ್ರತಿಕ್ರಿಯೆಗಳು ಹೊರಹೊಮ್ಮಿದವು. ಅವುಗಳಲ್ಲಿ ಮುಖ್ಯವಾದವೆಂದರೆ-

  1. ಮತಾಂತರ ವಿರೋಧಿ ಅಭಿಪ್ರಾಯ. ಇದರ ಪ್ರಕಾರ `ಹಿಂದೂ’ ಎಂಬ ಒಂದು ಅಖಂಡ ಧರ್ಮವಿದೆ. ಹಿಂದೂಗಳು ಮೂಲತಃ ಮುಗ್ಧರು. ಕ್ರೈಸ್ತ ಮತ್ತು ಇಸ್ಲಾಂಗಳು ವಿದೇಶೀ ಧರ್ಮಗಳು. ಇವು ಅವರಿಗೆ ಆಮಿಷ ಇಲ್ಲವೇ ಬಲಾತ್ಕಾರದಿಂದ ಹಿಂದೂಗಳನ್ನು ಸೆಳೆಯುತ್ತಿವೆ. ಇದು ಹೀಗೇ ನಡೆದರೆ ಒಂದು ದಿನ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಆದ್ದರಿಂದ ಮತಾಂತರವನ್ನು ತಡೆಗಟ್ಟಬೇಕು. ಸಾಮಾನ್ಯವಾಗಿ ಹಿಂದುತ್ವವಾದವು ಮಂಡಿಸುವ ಈ ವಾದವು  ಆತಂಕದಿಂದ ಆರಂಭಗೊಂಡು, ಆಕ್ರೋಶ ಮತ್ತು ಸೇಡಿನಿಂದ ಮುಗಿಯುತ್ತದೆ.
  2. ಹಿಂದೂ ಧರ್ಮದಲ್ಲಿ ಕೆಳಜಾತಿಗಳಿಗೆ ಅಪಮಾನವಿದೆ. ಹಾಗೆಂದು ಮತಾಂತರದಿಂದ ದಮನಿತರ ಬಿಡುಗಡೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ. ಇದರ ಪ್ರಕಾರ, ಮತಾಂತರಗೊಂಡ ಬಳಿಕವೂ ಹೊಸ ಧರ್ಮದಲ್ಲಿ ಮತಾಂತರಿಗಳಿಗೆ ತಾರತಮ್ಯ ಮುಂದುವರೆಯುತ್ತದೆ. ಸಮಾನತೆ ಸಿಕ್ಕುವುದಿಲ್ಲ. ಆದ್ದರಿಂದ ಮೂಲಧರ್ಮದಲ್ಲಿ ಇದ್ದುಕೊಂಡೇ ಹೋರಾಡಬೇಕು. ದಲಿತ ಕವಿ ಸಿದ್ಧಲಿಂಗಯ್ಯ ಅಂಬೇಡ್ಕರರನ್ನು ಕುರಿತು `ಕಪ್ಪುಕ್ಕಿನ ವಜ್ರಗಳನ್ನು ಕಡಿದು ಎಸೆದ ವಜ್ರವೇ, ಬಂಗಾರದ ಕೋಳವೊಕ್ಕ ಮಹಾ ಬೌದ್ಧಭಿಕ್ಷುವೇ’ ಎನ್ನುವಲ್ಲಿ ಈ ಧ್ವನಿ ಇದ್ದಂತಿದೆ.
  3. ಮತಾಂತರ ಎಂಬ ಪರಿಭಾಷೆಯನ್ನೇ ಒಪ್ಪದ ಅಭಿಪ್ರಾಯ. ಇದರ ಪ್ರಕಾರ, ದಲಿತರು ಹಾಗೂ ಬುಡಕಟ್ಟು ಜನರನ್ನು ಹಿಂದೂಗಳೆಂದು ಭಾವಿಸಿ ಈ ಚರ್ಚೆ ಮಾಡಲಾಗುತ್ತಿದೆ. ಆದರೆ ಅವರನ್ನು ಹಿಂದೂಗಳೆಂದು ಸ್ವತಃ ಹಿಂದೂ ಧರ್ಮವೇ ಪರಿಗಣಿಸಿಲ್ಲ; ಅವರನ್ನು ದೂರವಿಟ್ಟಿದೆ. ಇದರ ಜತೆಗೆ ಭಾರತದ ಅನೇಕ ಸಮುದಾಯಗಳು ತಮ್ಮನ್ನು ಹಿಂದುಗಳೆಂದೇ ಕರೆದುಕೊಳ್ಳುವುದಿಲ್ಲ. ಹೀಗಿರುವಾಗ ಅವರು ಹೊಸದೊಂದು ಧರ್ಮ ಸ್ವೀಕರಿಸಿದರೆ ಅದು ಹಿಂದೂ ಧರ್ಮ ಬಿಟ್ಟು ಹೋದರು ಎಂದು ಹೇಗೆ ಹೇಳುವುದು?  ಧರ್ಮರಹಿತ ಜನ ತಮಗೆ ಬೇಕಾದ ಧರ್ಮವನ್ನು ಆರಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ಧರ್ಮ ಬದಲಾವಣೆಯ ವಿಷಯವು ಇತರರು ತಲೆಕೆಡಿಸಿಕೊಳ್ಳಬೇಕಾದ ಪ್ರಶ್ನೆಯೇ ಅಲ್ಲ. ಜತೆಗೆ ಇದು ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆ; ಧರ್ಮ ಬದಲಾವಣೆಯು ಸಂವಿಧಾನ ಕೊಟ್ಟಿರುವ ಹಕ್ಕು. ಜನ ತಮಗೆ ಸಮಾನತೆ ನೆಮ್ಮದಿ ದೊರೆಯುವ ಧರ್ಮಕ್ಕೆ ಹೋಗುವುದನ್ನು ತಡೆಯುವುದು ಸಾಧ್ಯವಿಲ್ಲ. ಈ ಅಭಿಪ್ರಾಯವು ತಾರ್ಕಿಕವಾಗಿ ಸರಿಯಿದೆ. ಆದರೆ ಈ ವಾದಕ್ರಮವು ವೈಯಕ್ತಿಕತೆ ಮತ್ತು ವ್ಯಕ್ತಿವಿಶಿಷ್ಟತೆಗಳು ಒಂದು ಮೌಲ್ಯವಾಗಿರುವ ನಾಗರಿಕ ಸಮಾಜಗಳಲ್ಲಿ, ಕಾನೂನಿನ ಆಡಳಿತವು ಅಂತಿಮವಾಗಿರುವ ದೇಶಗಳಲ್ಲಿ ಅರ್ಥವಾಗುತ್ತದೆ. ಆದರೆ, ರಾಜಕೀಯ ಮುಸುಕಿನಲ್ಲಿ ಧರ್ಮಗಳ ಭೀಕರ ಕದನ ನಡೆಯುವ ಸಮಾಜದಲ್ಲಿ ಇದು ಎಷ್ಟು ಪರಿಣಾಮ ಬೀರುತ್ತದೆಯೋ ತಿಳಿಯದು.
  4. ಮತಾಂತರವೇ ಪರಿಹಾರ ಎಂಬ ಅಭಿಪ್ರಾಯ. ಇದರ ಪ್ರಕಾರ, ಮತಾಂತರ ನಡೆಯಲು ನಿಜವಾದ ಕಾರಣ, ಅನ್ಯ ಧರ್ಮಗಳ ಆಮಿಷ ಅಥವಾ ಬಲಾತ್ಕಾರವಲ್ಲ. ಬದಲಿಗೆ ಸನಾತನ ಹಿಂದೂ ಧರ್ಮದ ಒಳಗಿರುವ ಜಾತಿ ಮತ್ತು ಅಸ್ಪೃಶ್ಯತೆಯ ಕ್ರೌರ್ಯ. ಈ ಮೂಲ ವೈರುಧ್ಯವು ಬಗೆಹರಿಯದೆ ಸಮಾನತೆಯಿಲ್ಲ. ಆದರೆ ಇದು ಬಗೆಹರಿಯುವುದಿಲ್ಲ. ಇದರಿಂದ ಮತಾಂತರ ಅನಿವಾರ್ಯ. ಅದರಲ್ಲೂ ದಲಿತರು ಬೌದ್ಧಧರ್ಮಕ್ಕೆ ಹೋಗುವುದು, ಮರಳಿ ಮಾತೃಧರ್ಮಕ್ಕೆ ಹೋಗುವುದಾಗಿದೆ. ಈ ವಾದವು ಮತಾಂತರವನ್ನು ದೇಶಕ್ಕೆ ಅಪಾಯ ಎಂದು ತಿಳಿಯುವುದಿಲ್ಲ. ಇದಕ್ಕೆ ಅಮೂರ್ತವಾದ ಧರ್ಮವು ಅಷ್ಟು ಮುಖ್ಯ ಸಂಗತಿಯಲ್ಲ. ಬದಲಿಗೆ ಜನ ಸ್ವಾಭಿಮಾನದಿಂದ ಬದುಕುವ ಪರಿಸರ ಮುಖ್ಯ. ಇದರ ಪ್ರಕಾರ ಧರ್ಮಸ್ವೀಕಾರವು ಧಾರ್ಮಿಕ ಸಂಗತಿಯಲ್ಲ. ಅದು ಪ್ರತಿಭಟನೆಯ ರಾಜಕೀಯ ಕ್ರಿಯೆ ಕೂಡ.

2

ಮೇಲಿನ ಅಭಿಪ್ರಾಯಗಳಿಗೆ ಅವುಗಳದ್ದೇ ಆದ ದೃಷ್ಟಿಕೋನಗಳಿವೆ. ತರ್ಕವಿದೆ. ಸಮರ್ಥನೆಗಳಿವೆ. ಆದರೆ ಮತಾಂತರ ಕುರಿತು ಇನ್ನೂ ಕೆಲವು ಸಮಸ್ಯೆ ಮತ್ತು ಸಂಗತಿಗಳು ಬಾಕಿ ಉಳಿಯುತ್ತವೆ. ಇವುಗಳನ್ನು ಅರಿಯಬೇಕಾದರೆ, ಮತಾಂತರವನ್ನು ಕೇವಲ ಧಾರ್ಮಿಕ ಸಾಮಾಜಿಕ ಪ್ರಶ್ನೆಯನ್ನಾಗಿ ಮಾತ್ರವಲ್ಲ, ಒಂದು ಚಾರಿತ್ರಿಕವಾದ ಮತ್ತು ಸಾಂಸ್ಕೃತಿಕ ಪ್ರಶ್ನೆಯನ್ನಾಗಿ ಕೂಡ ನೋಡಬೇಕಾಗುವುದು. ಹಾಗೆ ನೋಡಲು ಈ ಟಿಪ್ಪಣಿಗಳಲ್ಲಿ ಯತ್ನಿಸಲಾಗಿದೆ. ಚರ್ಚೆಯನ್ನು ಆರಂಭಿಸುವ ಮುನ್ನ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು.

  1. ಮತಾಂತರವನ್ನು ಮಾಡಲಾಗುತ್ತಿದೆಯೋ ಅಥವಾ ಜನ ಧರ್ಮ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆಯೋ? ‘ಮಾಡಲಾಗುತ್ತಿದೆ’ ಎನ್ನುವವರು ಜನರನ್ನು ಭಾವನೆಗಳಿಲ್ಲದ ನಿರ್ಜೀವ ವಸ್ತುಗಳೆಂಬಂತೆ ಗ್ರಹಿಸಿರುವರು. ಅವರ ಪಾಲಿಗೆ ಮತಾಂತರ ಮಾಡುವವರು ಪಿತೂರಿಗಾರರು. ಆದರೆ ಜನರೇ ಧರ್ಮ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಹಿಸಿದರೆ, ಅವರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ ಎಂಬರ್ಥ ಹೊಳೆಯುತ್ತದೆ. ಇವೆರಡರಲ್ಲಿ ಯಾವುದು ನಿಜ? ಅಥವಾ ಇವೆರಡೂ ಆಯಾಮಗಳು ಒಟ್ಟಿಗೇ ನಡೆಯುತ್ತಿವೆಯೇ?
  2. ಮತಾಂತರವನ್ನು ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮಗಳು ಮಾಡುತ್ತಿವೆ ಎನ್ನಲಾಗುತ್ತದೆ. ಆದರೆ ಹಿಂದೂ ಎನ್ನುವ ಧರ್ಮ ಕೂಡ ಯಾಕೆ ಪ್ರತಿಯಾಗಿ ಈ ಕೆಲಸವನ್ನು ಮಾಡುತ್ತಿಲ್ಲ? ಬೇರೆ ಧರ್ಮದಿಂದ ಜನರನ್ನು ಒಳಗೆ ತರಲು ಅದರಲ್ಲಿ ಅವಕಾಶವಿಲ್ಲವೇ? ಅಥವಾ ಹಿಂದೂ ಧರ್ಮದ ರಕ್ಷಣೆಯ ಕೆಲಸವನ್ನು ಸ್ವಯಂ ಹೊತ್ತುಕೊಂಡಿರುವ ಹಿಂದುತ್ವವು ಕೆಳಜಾತಿ ಜನರ ಸಾಂಪ್ರದಾಯಿಕ ಕುಲನಿಷ್ಠವಾದ ಧಾರ್ಮಿಕ ನಿಷ್ಠೆಯನ್ನು ಬದಲಿಸುವಲ್ಲಿ ತೊಡಗಿದ್ದು ಮತಾಂತರವಲ್ಲವೇ?
  3. ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳನ್ನು ಏಕರೂಪಿ ಎಂದು ಭಾವಿಸಲಾಗಿದೆ. ಆದರೆ ಅವು ಬಹುರೂಪಿಯಾಗಿದ್ದು, ಅವುಗಳ ಒಳಗೇ ಅನೇಕ ಬಣಗಳ ನಡುವೆ ಭಿನ್ನಮತಗಳಿವೆ. ಸಂಘರ್ಷಗಳಿವೆ. ಉದಾಹರಣೆಗೆ  ಮುಸ್ಲಿಮರಲ್ಲೇ ಇರುವ ಕೆಲವು ತಬ್ಲೀಗ್, ಅಹಲೆ ಹದೀಸ್, ಜಮಾತೆ ಇಸ್ಲಾಮಿ ಮುಂತಾದ ಪಂಥಗಳು, ಈಗಿರುವ ಮುಸ್ಲಿಮರನ್ನೇ ತಮ್ಮ ಪಂಥದ ಇಸ್ಲಾಮಿನ ರೂಪಕ್ಕೆ ಪರಿವರ್ತನೆ ಮಾಡುತ್ತಿವೆ. ಕ್ರೈಸ್ತರು ಮತಾಂತರದಲ್ಲಿ ತೊಡಗಿದ್ದಾರೆ ಎಂದು ಹಿಂದುತ್ವವಾದವು ಆಪಾದಿಸಿದಾಗ, ಕರಾವಳಿಯ ರೋಮನ್ ಕೆಥೋಲಿಕರು `ಮತಾಂತರ ತಪ್ಪು. ಅದನ್ನು ನಾವು ಮಾಡುವುದಿಲ್ಲ. ಅದನ್ನು ಮಾಡುವವರು ಪ್ರಾಟೆಸ್ಟಂಟರು’ ಎಂದರು. ಈ ಬಣಗಳ ಸಂಘರ್ಷವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
  4. ಭಾರತದ ಅವಧೂತ ಆರೂಢ ಎನ್ನಲಾಗುವ ಗುರುಪಂಥಗಳು ಶತಮಾನದಿಂದ ಎಲ್ಲ ಜಾತಿಧರ್ಮಗಳ ಜನರಿಗೆ ದೀಕ್ಷೆಯ ಮೂಲಕ ಹೊಸ 1.ಧಾರ್ಮಿಕ ಗುರುತನ್ನು ಕೊಡುವ ಕೆಲಸ ಮಾಡಿಕೊಂಡು ಬಂದಿವೆ. ಸಾಮಾಜಿಕ ಸಂಚಲನೆಯಲ್ಲಿ ಈ ದೀಕ್ಷಾಪಂಥಗಳ ಸ್ಥಾನ ಯಾವುದು?
  5. ಧರ್ಮ ಪರಿವರ್ತನೆಯು ನಿನಿರ್ದಿಷ್ಟ ಸಮುದಾಯದಲ್ಲಿ ನಡೆದಾಗ, ಅದು ಇಡೀ ಸಮುದಾಯದ ಆಶೋತ್ತರವಾಗಿರುತ್ತದೆಯೋ ಅಥವಾ ಆ ಸಮುದಾದಯಲ್ಲೇ ನಿರ್ದಿಷ್ಟ ವರ್ಗದ ಆಶಯವಾಗಿರುತ್ತದೆಯೋ? ಯಾಕೆಂದರೆ, ಬೌದ್ಧಧರ್ಮದ ದೀಕ್ಷೆ ತೆಗೆದುಕೊಳ್ಳುವ ವಿಷಯದಲ್ಲಿ ಕೆಳಸ್ತರದ ಜನರಿಗಿಲ್ಲದ ತವಕ ಮತ್ತು ತುರ್ತು ನಗರವಾಸಿ ಆಧುನಿಕ ಮತ್ತು ಮಧ್ಯಮವರ್ಗದವರಲ್ಲಿ ಹೆಚ್ಚು ಕಾಣುತ್ತದೆ. ಅದರಲ್ಲೂ ದಲಿತ ಮಧ್ಯಮವರ್ಗಕ್ಕೆ ಧರ್ಮ ಬದಲಾವಣೆಯು ಸಾಂಸ್ಕೃತಿಕ ಗುರುತಿನ ಪ್ರಶ್ನೆಯಾಗಿದ್ದರೆ, ಕೆಳಸ್ತರದಲ್ಲಿರುವ ದಲಿತರಿಗೆ ಧರ್ಮ ಬದಲಾವಣೆಯು ಅಷ್ಟು ಆದ್ಯತೆಯ ಸಂಗತಿಯಾಗಿಲ್ಲ. ಇದನ್ನು ಹೇಗೆ ನೋಡುವುದು?
  6. ಧರ್ಮದ ಪ್ರಸಾರಕ್ಕಾಗಿಯೇ ನಿಯಮಿತರಾದ ಮಿಶನರಿಗಳ ಹಾಗೆ, ತಮ್ಮ ದಿನನಿತ್ಯದ ಬದುಕಿಗಾಗಿ ಹೋರಾಡುವ ಮುಸ್ಲಿಮರು, ನಿಜವಾಗಿಯೂ ಮತಾಂತರದ ಮೂಲಕ ತಮ್ಮ ಧರ್ಮದ ಸಂಖ್ಯೆಯನ್ನು ಹೆಚ್ಚಿಸುವ ವಿಷಯದಲ್ಲಿ ಆಸಕ್ತರಾಗಿರುತ್ತಾರೆಯೇ?
  7. ಭಾರತದಲ್ಲಿ ಬಹುತೇಕ ಜಾತಿಗಳಿಗೆ ಹಾಗೆ ಇಸ್ಲಾಂ, ಕ್ರೈಸ್ತ, ಬೌದ್ಧಗಳ ಹಾಗೆ ಒಂದು ಧರ್ಮವಿಲ್ಲ. ಜಾತಿಕಟ್ಟುಗಳೇ ಅವುಗಳ ಧರ್ಮಗಳು. ದೈನಿಕ ಬದುಕಿನಲ್ಲಿ ಜಾತಿಕುಲ ವಿಶಿಷ್ಟವಾದ ಆಚರಣೆಗಳೇ ಅವರನ್ನು ನಿಯಂತ್ರಿಸುವುದು. ಎಂತಲೇ ಜನರಿಗೆ ಮತವನ್ನು ಕೇಳಿದರೆ ಅವರು ತಮ್ಮ ಕುಲ ಜಾತಿಯ ಹೆಸರು ಹೇಳುತ್ತಾರೆ. ಆದ್ದರಿಂದ ಹೊಸ ಧರ್ಮ ಸ್ವೀಕಾರವನ್ನು ಕುಲದಿಂದ ಧರ್ಮಕ್ಕೆ ಹೋಗುವುದು ಎಂದು ಕರೆಯಬಹುದೇ?
  8. ಧರ್ಮ ಪರಿವರ್ತನೆ ಆದ ಜನರು, ತಮ್ಮ ಹಿಂದಿನ ಧರ್ಮ ಅಥವಾ ಕುಲದ ಆಚರಣೆಗಳಿಂದ ಹಾಗೆ ತಟ್ಟನೆ ಕಡಿದುಕೊಳ್ಳುವುದಿಲ್ಲ. ಅವನ್ನು ಬೇರೆಬೇರೆ ರೂಪದಲ್ಲಿ ಮುಂದುವರೆಸುತ್ತಾರೆ. ಹೀಗಾಗಿ ಧರ್ಮ ಪರಿವರ್ತನೆ ಎನ್ನುವುದು ಕೇವಲ ಧಾರ್ಮಿಕ ಎನ್ನಬಹುದಾದ ರೂಪವನ್ನು ಕೆಲಮಟ್ಟಿಗೆ ಬದಲಿಸಬಹುದೇ ಹೊರತು ನಿತ್ಯ ಬದುಕಿನಲ್ಲಿ ಅನ್ವಯವಾಗುವ ಸಾಮಾಜಿಕವಾದ ಆಚರಣ ಲೋಕವನ್ನಲ್ಲ. ಈಗಲೂ ಮುಸ್ಲಿಮರಲ್ಲಿ ಕ್ರೈಸ್ತರಲ್ಲಿ ಇರುವ ಸಾಮಾಜಿಕ ನಡಾವಳಿಗಳು ಅರಬ್ ದೇಶದ ಇಲ್ಲವೇ ರೋಮಿನ ನಡಾವಳಿಗಳಲ್ಲ. ಅವರ ಧರ್ಮ ಪರಿವರ್ತನೆಯ ಪೂರ್ವದ ಸಮಾಜದವು. ದಲಿತರು ಬೌದ್ಧರಾದ ಬಳಿಕವೂ ದಲಿತ ಸಂಸ್ಕೃತಿಯ ಅನೇಕ ಆಚರಣೆಗಳನ್ನು ಬಿಟ್ಟುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮತಾಂತರವನ್ನು ಹೇಗೆ ನೋಡುವುದು?
  9. ಜನರು ಧರ್ಮ ಸ್ವೀಕಾರವನ್ನು ಅದು ತಮಗೆ ಬೇಕಾಗಿದೆ ಎಂದು ಆಕರ್ಷಣೆಯಿಂದ ಮಾಡುತ್ತಾರೊ ಅಥವಾ ತಮ್ಮನ್ನು ಸಮಾನವಾಗಿ ಪರಿಗಣಿಸದ ಧರ್ಮವನ್ನು ಧಿಕ್ಕರಿಸುವುದಕ್ಕೆಂದು ಮಾಡುತ್ತಾರೋ? ಅಂದರೆ ಜನ ಒಂದು ಧರ್ಮವನ್ನು ಅದೊಂದು ಪರ್ಯಾಯ  ಎಂದು ಸ್ವೀಕರಿಸದೆ, ತಮ್ಮ ಧಾರ್ಮಿಕ, ಸಾಮಾಜಿಕ, ಆರ್ಥಿಕ ದಮನಗಳಿಂದ ಬಿಡುಗಡೆ ಪಡೆಯುವ ಆಶಯದಲ್ಲಿ  ಸ್ವೀಕರಿಸುತ್ತಾರೆ. ಇಲ್ಲಿ ಕೆಲಸ ಮಾಡುವ ಮನೋಧರ್ಮ, ತಮ್ಮ ದಮನಕ್ಕೆ ಕಾರಣವಾಗಿರುವ ವ್ಯವಸ್ಥೆಯನ್ನು ಧಿಕ್ಕರಿಸುವಿಕೆ. ನಿರ್ದಿಷ್ಟ ಧರ್ಮವು ಬೇಕಾಗಿ ಸ್ವೀಕರಿಸುವುದಕ್ಕೂ, ನಿರ್ದಿಷ್ಟ ಧರ್ಮವು ಬೇಡವಾಗಿರುವುದಕ್ಕೆ ಅನಿವಾರ್ಯವಾಗಿ ಬೇರೆಯದನ್ನು ಸ್ವೀಕರಿಸುವುದಕ್ಕೂ ತಾತ್ವಿಕವಾಗಿ ವ್ಯತ್ಯಾಸವಿದೆಯಷ್ಟೆ. ಈ ನೇತ್ಯಾತ್ಮಕ ಆಯ್ಕೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?
  10. ಜಾತಿಪದ್ಧತಿಯ ಧರ್ಮದ ವಿರುದ್ಧ ಪ್ರತಿಭಟಿಸಲು ದಲಿತರು ಮತ್ತು ಕೆಳಜಾತಿಯವರು ಮತಾಂತರವನ್ನು ಒಂದು ಬೆದರಿಕೆಯ ಅಸ್ತ್ರವನ್ನಾಗಿ ಬಳಸುತ್ತಿದ್ದು, ಬೌದ್ಧರ, ಮುಸ್ಲಿಮರ ಮತ್ತು ಕ್ರೈಸ್ತರ ಮೇಲೆ ಹಿಂದುತ್ವವಾದಿಗಳ ದ್ವೇಷವನ್ನು ಪರೋಕ್ಷವಾಗಿ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆಯೇ?
  11. ದೀಕ್ಷೆಯ ಮೂಲಕ ಹೊಸ  ಧಾರ್ಮಿಕ ಗುರುತನ್ನು ಕೊಡುವ ಮತಗಳಲ್ಲೂ ಸಾಮಾನ್ಯವಾಗಿ ಅನ್ಯಧರ್ಮದ ಟೀಕೆಯ ಅಂಶ ಸಹಜವಾಗಿರುತ್ತದೆ. ಬೇರೆ ಧರ್ಮಗಳ ಬಗ್ಗೆ ಸಹನೆಯೇ ಇಲ್ಲದ ಅನೇಕ ಮಿಶನರಿಗಳು, ಮುಸ್ಲಿಂ ಮೂಲಭೂತವಾದಿಗಳು  ಸಾಕಷ್ಟು ಇದ್ದಾರೆ. ಜತೆಗೆ ಏಕದೇವತಾವಾದಿ ಧರ್ಮಗಳಲ್ಲಿ ಈ `ಅನ್ಯಮತ ನಿಂದೆ’ಯ ಆಯಾಮ ಸಹಜವಾಗಿರುತ್ತದೆ. ಹಿಂದುತ್ವವಾದಿಗಳಲ್ಲಿರುವ `ಅನ್ಯಧರ್ಮ’ದ ಅಸಹನೆಯು ಭಾರತದ ಬಹುಧರ್ಮಿಯ ಸಮಾಜದಲ್ಲಿ  ಅಪಾಯಕರ ಸಂಗತಿ ಆಗಿರುವಂತೆ, ಧರ್ಮ ಪರಿವರ್ತನೆಗೆ ಅವಕಾಶ ಕಲ್ಪಿಸುವವರಲ್ಲಿ ಇರುವ ಈ  ಅಸಹನೆಯ ಅಂಶವನ್ನು ಹೇಗೆ ನೋಡಬೇಕು?
  12. ಯಾಕೆ ಭಾರತದಲ್ಲಿ ಮತಾಂತರ ಎನ್ನಲಾಗುವ ಧರ್ಮಪರಿವರ್ತನೆ ಅಥವಾ ಧಮ್ಮದೀಕ್ಷೆಯ ಕೆಲಸವು ಅಲ್ಪಸಂಖ್ಯಾತರಾಗಿರುವ ಉಚ್ಚಜಾತಿಗಳ ಪಾಲಿಗೆ ಒಂದು ರಾಷ್ಟ್ರೀಯ ಸಮಸ್ಯೆಯಾಗಿದೆ ಮತ್ತು ನೋವು ಆಕ್ರೋಶಗಳ ಸಂಗತಿಯಾಗಿದೆ? ಆದರೆ ಬಹುಸಂಖ್ಯಾತ ಕೆಳಜಾತಿಯವರಿಗೆ ಇದೊಂದು ಸಮಸ್ಯೆಯೇ ಆಗಿಲ್ಲ ಮತ್ತು ಒಂದು ಪರಿಹಾರದ ಸಂಗತಿಯಾಗಿದೆ? ಧರ್ಮರಕ್ಷಣೆಯ ಹೊಣೆಯನ್ನು ಉಚ್ಚಜಾತಿಯವರ ಮೇಲೆ ಯಾರು ಹೊರಿಸಿರುವರು ಅಥವಾ ಅವರೇ ಯಾಕೆ ಹೊತ್ತುಕೊಂಡಿರುವರು.

ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ, ಮತಾಂತರ ಎನ್ನುವುದು ಹಿಂದುತ್ವವಾದವು ಹೇಳುವಷ್ಟು  ಸರಳವಾದ ವಿದ್ಯಮಾನವಲ್ಲ ಎಂದು ಹೊಳೆಯುತ್ತದೆ. ಸಮಸ್ಯೆಯೆಂದರೆ, ಹಿಂದುತ್ವವಾದವು ಇಡೀ ಸಮಸ್ಯೆಯನ್ನು ವೈಚಾರಿಕವಾಗಿ ಸಿದ್ಧಾಂತದ ನೆಲೆಯಲ್ಲಿ ಗ್ರಹಿಸಿದೆಯೇ ಹೊರತು ನಿತ್ಯ ಬದುಕಿನ ಮೂರ್ತ ವಾಸ್ತವಿಕ ವಿವರಗಳಲ್ಲಿ ಅಲ್ಲ.  ಸದ್ಯದ ಮತಾಂತರ ಚರ್ಚೆಯಲ್ಲಿ ಹಿಂದುತ್ವವಾದವು ಮತ್ತು ಬಹುಮಟ್ಟಿಗೆ ಅದರ ವಿರೋಧಿಗಳು ಬಳಸುತ್ತಿರುವ `ಧರ್ಮ’, `ಮತಾಂತರ’ ಮುಂತಾದ ಶಬ್ದಗಳು ಮೂಲತಃ ಹಿಂದುತ್ವವಾದದ ಅರ್ಥ ಮತ್ತು ದೃಷ್ಟಿಕೋನವನ್ನೇ ಒಳಗೊಂಡಿವೆ. ಉದಾಹರಣೆಗೆ, `ಮತಾಂತರ’ ಶಬ್ದವು  ದೇಶಾಂತರ, ಸ್ಥಳಾಂತರಗಳ ಹಾಗೆ ಮೂಲಸ್ಥಾನವನ್ನು ಬಿಟ್ಟು ಇನ್ನೊಂದೆಡೆಗೆ ಹೋಗುವುದು ಎಂಬರ್ಥವನ್ನು ಧ್ವನಿಸುತ್ತದೆ. ಆದರೆ ದಲಿತರು ತಮ್ಮನ್ನು ಹಿಂದೂಗಳೆಂದು ತಿಳಿದಿಲ್ಲ ಮತ್ತು ಬೌದ್ಧ ಧರ್ಮಕ್ಕೆ ಹೋಗುವುದನ್ನು ಅವರು `ಮರಳಿ ಮನೆಗೆ’ ಎಂದು ಭಾವಿಸಿದ್ದಾರೆ. ಆದ್ದರಿಂದ, ಹಿಂದುತ್ವವಾದವು ರೂಪಿಸಿರುವ `ಗೋಮಾಂಸ’, `ದೇಶಭಕ್ತಿ’, `ಭಾರತೀಯ ಸಂಸ್ಕೃತಿ’ ಮುಂತಾದ ರಾಜಕೀಯ ಪರಿಭಾಷೆಗಳಂತೆ `ಮತಾಂತರ’ ಎಂಬ ಪರಿಭಾಷೆಯನ್ನೇ ಪ್ರಶ್ನಿಸಬೇಕಿದೆ ಮತ್ತು ವಿಸರ್ಜಿಸಬೇಕಿದೆ.  ತಾತ್ವಿಕ ಚರ್ಚೆ ಯಲ್ಲಿ ಬಳಸುವ ಪರಿಭಾಷೆ ಮತ್ತು ಪರಿಕಲ್ಪನೆಗಳು ದೃಷ್ಟಿಕೋನವನ್ನೇ ನಿರ್ದೇಶಿಸುತ್ತಿರುತ್ತವೆ. ಆದ್ದರಿಂದ  ಕನ್ನಡದಲ್ಲಿ ಧರ್ಮದ ಚರ್ಚೆಗೆ ಪರ್ಯಾಯ ಪರಿಭಾಷೆಯನ್ನೇ ರೂಪಿಸಿಕೊಳ್ಳುವ ಅಗತ್ಯವಿದೆ.

3

ನಮ್ಮ ಸಮಾಜದಲ್ಲಿ `ಧಾರ್ಮಿಕ’ ಎನ್ನಲಾಗುವ ಲೋಕದಲ್ಲಿ ಸಂಚಲನಗಳು ಮೂರು ಮಾದರಿಯಲ್ಲಿ ನಡೆಯುತ್ತಿವೆ. ಅವನ್ನು ಹೊಸಧರ್ಮದ ಸ್ವೀಕಾರ, ತಾತ್ವಿಕ ಸೆಳೆತ, ದೀಕ್ಷೆ ಹಾಗೂ ಮತೀಯವಾದಿ ಹೇರಿಕೆ ಎಂದು ಕರೆಯಬಹುದು.

1. ಧರ್ಮಸ್ವೀಕಾರ: ವ್ಯಕ್ತಿ ಇಲ್ಲವೇ ಸಮುದಾಯಗಳು ತಮಗೆ ಇಷ್ಟವೆನಿಸಿದ ಧರ್ಮವನ್ನು ಸ್ವೀಕರಿಸುವುದನ್ನು ಧರ್ಮಸ್ವೀಕಾರ ಎನ್ನಬಹುದು. ಭಾರತದಲ್ಲಿ  ಜನರು ಸಾಮಾನ್ಯವಾಗಿ ಸ್ವೀಕರಿಸುವ ಧರ್ಮಗಳೆಂದರೆ ಬೌದ್ಧ, ಜೈನ, ಇಸ್ಲಾಂ, ಕ್ರೈಸ್ತ, ಸಿಖ್, ಲಿಂಗಾಯತ. ಗಮನಾರ್ಹವೆಂದರೆ, ಇವುಗಳಲ್ಲಿ ಹೆಚ್ಚಿನವು, ವೇದ ಪ್ರಮಾಣವನ್ನು, ಸವರ್ಣೀಯರ ಸಾಮಾಜಿಕ ಯಜಮಾನಿಕೆಯನ್ನು ಒಪ್ಪದ ಧರ್ಮಗಳಾಗಿರುವುದು. ಕೆಲವು ಗುಡಿಸಂಸ್ಕೃತಿ ಒಪ್ಪದೆ ನಿರ್ಗುಣ ದೈವೋಪಾಸನೆ ಮಾಡುತ್ತವೆ.  ಬೌದ್ಧರು ಮತ್ತು ಜೈನರು ಸಾಕಷ್ಟು ಬ್ರಾಹ್ಮಣೀಕರಣಗೊಂಡಿದ್ದರೂ, ವಿಗ್ರಹಾರಾಧನೆಯು ಅವರಲ್ಲಿ ಬಂದಿದ್ದರೂ, ತಾತ್ವಿಕವಾಗಿ ಅವು ನಾಸ್ತಿಕ ಧರ್ಮಗಳು. ಸಾಮಾನ್ಯವಾಗಿ ಏಕದೇವೋಪಾಸಕ ಆಗಿರುವ ಈ ಧರ್ಮಗಳ ಸ್ಥಾಪಕರು ಪುರಾಣದ ದೇವತೆಗಳಲ್ಲ. ಚಾರಿತ್ರಿಕ ಪುರುಷರು. ಕೆಲವು ವರ್ಗಗಳು ದೇವರು ಧರ್ಮಗಳನ್ನು ಸಮುದಾಯವನ್ನು ವಂಚಿಸಲು  ಬಳಸುತ್ತಿವೆಯೆಂದೇ ಬುದ್ಧ ದೇವರಿಲ್ಲದ ಧರ್ಮವನ್ನು ಸ್ಥಾಪಿಸಿದನು. ಬಸವಣ್ಣ ಗುಡಿ ಸಂಸ್ಕೃತಿಯನ್ನು ನಿರಾಕರಿಸಿದನು. ಗಾಂಧೀಜಿ ಗುಡಿ ಪ್ರವೇಶದ ಕಾರ್ಯಕ್ರಮ ಹಮ್ಮಿಕೊಂಡರು.ನಾರಾಯಣ ಗುರುಗಳು ಪರ್ಯಾಯ ಗುಡಿ ನಿರ್ಮಾಣದ ಕೆಲಸ ಮಾಡಿದರು. ಎಲ್ಲರೂ ತಮ್ಮದೇ ಆದ ನೆಲೆಯಲ್ಲಿ ಜಾತಿಪದ್ಧತಿಯಿಂದ ಜರ್ಜರಿತವಾಗಿದ್ದ ಹಿಂದೂ ಧರ್ಮವನ್ನು ಸುಧಾರಿಸಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಹುಟ್ಟಿನಿಂದ ಬರುವ ಜಾತಿಗೆ ಅಂಟಿಕೊಳ್ಳದೆ ದೀಕ್ಷೆಯ ಮೂಲಕ ಜನರನ್ನು ಧರ್ಮದ ಕಕ್ಷೆಗೆ ಬರಮಾಡಿಕೊಳ್ಳುವ ಈ `ಧರ್ಮ ಪರಿವರ್ತನೆ’ ಅವಕಾಶವುಳ್ಳ ಧರ್ಮಗಳು ಭಾರತದಲ್ಲಿ ಜನಪ್ರಿಯವಾಗಲು ಕಾರಣ ತನಗೆ ತಾನೇ ಸ್ಪಷ್ಟವಾಗಿದೆ. ಒಂದೊಮ್ಮೆ ಭಾರತದಲ್ಲಿ ಧರ್ಮ ಪರಿವರ್ತನೆಯ ಅವಕಾಶವಿರುವುದು ಕೆಟ್ಟದ್ದು ಎನ್ನುವುದಾದರೆ, ಮೇಲೆ ಉಲ್ಲೇಖಿಸಿದ ಧರ್ಮಗಳನ್ನೆಲ್ಲ ನಿರಾಕರಿಸಬೇಕಾಗುತ್ತದೆ. ಬುದ್ಧ ಬಸವ ಅಲ್ಲಮ ಕಬೀರ ರಾಮಾನುಜ ಮುಂತಾದ ಸಂತರು ಹಿಂದೂ ವಿರೋಧಿಗಳಾಗುವರು; ಈ ಧರ್ಮಗಳಿಗೆ ಸಂಬಂಧಿಸಿದ ಮಹಾಪುರಾಣವನ್ನು, ತ್ರಿಪಿಟಕಗಳನ್ನು, ಗ್ರಂಥಸಾಹೇಬವನ್ನು, ತತ್ವಪದಗಳೆಂದು ಕರೆಯುವ ಆರೂಢ ಸಾಹಿತ್ಯವನ್ನು, ಪಂಪ ರನ್ನ ವಡ್ಡಾರಾಧನೆ ಮುಂತಾದ ಕೃತಿಗಳನ್ನು ಹಾಗೂ ವಚನ ಸಾಹಿತ್ಯವನ್ನು ತಿರಸ್ಕರಿಸಬೇಕಾಗುತ್ತದೆ.

ಆದರೆ ಭಾರತದ ಸಮಾಜದಲ್ಲಿ ನಡೆದಿರುವ ಸಾಮಾಜಿಕ, ಧಾರ್ಮಿಕ  ಸಂಚಲನೆಗಳ ಚರಿತ್ರೆ ಬಲ್ಲ ಯಾರಿಗಾದರೂ ಧರ್ಮ ಪರಿವರ್ತನೆ ಅವಕಾಶವು ಜನರಿಗೆ ಮಾನವೀಯವಾದ ಪರ್ಯಾಯಗಳನ್ನು ಒದಗಿಸಿರುವುದು ಅರಿವಾಗುತ್ತದೆ. ಹಾಗೆಂದು ಧರ್ಮಪರಿವರ್ತನೆ ಇಲ್ಲವೇ  ಧರ್ಮಸ್ವೀಕಾರದಲ್ಲಿ ಧರ್ಮಪ್ರಚಾಕರ ಪಾತ್ರವೇ ಇರುವುದಿಲ್ಲ ಎಂದು ತಿಳಿಯುವಂತಿಲ್ಲ. ಅದು  ಇದ್ದೇ ಇದೆ; ಆದರೆ ಧರ್ಮಸ್ವೀಕಾರಕ್ಕೆ ಅದೂ ಒಂದು ಪ್ರೇರಣೆ ಅಷ್ಟೆ. ಅದಕ್ಕಿಂತ ಮುಖ್ಯವಾದ ಪ್ರೇರಣೆಗಳು ಬೇರೆಯಿವೆ. ಅವೆಂದರೆ- 1. ಕೆಲವು ವ್ಯಕ್ತಿ ಇಲ್ಲವೇ ಕುಟುಂಬಗಳಿಗೆ ಎದುರಾಗುವ ಬಾಳಿನ ಸಂಕಟಗಳು ಕೂಡ ಹೊಸ ಧರ್ಮಸ್ವೀಕಾರಕ್ಕೆ ಕಾರಣವಾಗಿರುವುದು. ಸಂಗೀತ  ನಿರ್ದೇಶಕ ಎ.ಆರ್. ರೆಹಮಾನ್ ಅವರ ಜೀವನದಲ್ಲಿ ಆಗಿರುವುದು ಹೀಗೆ. ಅನೇಕ ಮುಸ್ಲಿಮರು ಕೂಡ ಇಸ್ಲಾಮನ್ನು ಬಿಟ್ಟು ಬೇರೆ ಧರ್ಮಕ್ಕೆ ಹೋಗಲು ಪ್ರೇಮ ವಿವಾಹಗಳು ಕಾರಣವಾಗಿವೆ. 2. ಕೆಳಜಾತಿಯ ಜನರು ತಮ್ಮ ಧರ್ಮಗಳಲ್ಲಿ ಅನುಭವಿಸುತ್ತಿರುವ ಬೇಗೆಗಳು. ಅದರಲ್ಲೂ ದಲಿತ ಮತ್ತು ಕೆಳಜಾತಿಗಳ ವಿಷಯದಲ್ಲಿ ಇದು ನಿಜ. ಇದನ್ನೆಲ್ಲ  ಮತಾಂತರ ಎಂಬ ಪರಿಭಾಷೆಯ ಮೂಲಕ ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ.

2. ತಾತ್ವಿಕ ಸೆಳೆತ: ಇಲ್ಲಿ ಕೆಲವರ ಧರ್ಮ ಪರಿವರ್ತನೆಗೆ ಅನ್ಯರ ಒತ್ತಾಯವೋ, ಪ್ರೇರಣೆಯೋ ಇರುವುದಿಲ್ಲ. ಬದಲಿಗೆ ಆ ವ್ಯಕ್ತಿಗಳು ತಂತಮ್ಮ ಧರ್ಮಗಳಲ್ಲಿ ಇದ್ದುಕೊಂಡೇ ತಮಗಿಷ್ಟವಾದ ಪಂಥದ ಬಗ್ಗೆ ತಾತ್ವಿಕವಾದ ಸೆಳೆತ ಹೊಂದಿರುತ್ತಾರೆ. ಕರ್ನಾಟಕದಲ್ಲಿ ಅನೇಕ ವಿಚಾರವಂತರಲ್ಲಿ ಬೌದ್ಧಧರ್ಮದ ಬಗ್ಗೆ ವಿಚಿತ್ರವಾದ ಆಕರ್ಷಣೆಯಿದೆ. ಅವರು ಭಿಕ್ಕುಗಳಿಂದ ಶಾಸ್ತ್ರೋಕ್ತವಾಗಿ ಧಮ್ಮದೀಕ್ಷೆಯನ್ನೇನೂ ಪಡೆದಿರುವುದಿಲ್ಲ. ಆದರೆ ತಮ್ಮ ಮನೆಗಳಿಗೆ ಮತ್ತು ಮಕ್ಕಳಿಗೆ ಬೌದ್ಧ ಹೆಸರುಗಳನ್ನು ಇಟ್ಟುಕೊಂಡು, ತಾವು ಝೆನ್ಬೌದ್ಧರ ಧ್ಯಾನವನ್ನು ಮಾಡುತ್ತ, ತಮ್ಮ ಚಿಂತನೆ ಬರೆಹದಲ್ಲಿ ಬೌದ್ಧಚಿಂತನೆಯನ್ನು ಅಳವಡಿಸಿಕೊಂಡು ಬದುಕುತ್ತ ಇರುವರು. ಕೆಲವರು ಸೂಫಿ ಇಲ್ಲವೇ ಸಿದ್ಧಪಂಥಕ್ಕೆ ಸಂಬಂಧಿಸಿ ಇದೇ ರೀತಿಯ ಸಂಬಂಧವನ್ನು ಇರಿಸಿಕೊಂಡಿರುವರು. ಸಾಮಾನ್ಯವಾಗಿ ಈ ತಾತ್ವಿಕ ಸೆಳೆತವು ಸಮುದಾಯಗಳ ನೆಲೆಗಿಂತ, ವ್ಯಕ್ತಿ ಇಲ್ಲವೇ ಕುಟುಂಬಗಳ ನೆಲೆಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಎನ್ಲ್ಶೆಟನ್ಡ್ ಆಗಿರುವ ವ್ಯಕ್ತಿಗಳಿವರು. ಈ ಸೆಳೆತವನ್ನು ಈಗಿರುವ  `ಮತಾಂತರ’ ಎಂಬ ಶಬ್ದ ಬಳಸಿ ವಿಶ್ಲೇಷಿಸಲು ಆಗುವುದಿಲ್ಲ.

3. ದೀಕ್ಷೆ: ಭಾರತದಲ್ಲಿ ದೀಕ್ಷೆಯ ಮೂಲಕ ಜನರ ತಾತ್ವಿಕ ನಂಬಿಕೆ ಬದಲಿಸುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತ ಬಂದಿರುವುದು ಅನುಭಾವಿ ಪಂಥಗಳು. ಆರೂಢ, ಅವಧೂತ, ಸೂಫಿ, ಕಾಪಾಲಿಕ, ಶಾಕ್ತ, ದತ್ತ, ಕಬೀರ, ನಾಥ, ಅಘೋರಿ, ಕೌಳ ಮುಂತಾದ ಯೌಗಿಕ ಪಂಥಗಳು. ಎಲ್ಲ ಧರ್ಮದ ಜನರಿಗೆ ದೀಕ್ಷೆಕೊಡುತ್ತವೆ. ಗುರುಶಿಷ್ಯ ಪರಂಪರೆಯನ್ನುಳ್ಳ ಈ ಪಂಥಗಳು ಅನುಯಾಯಿಗಳನ್ನು ಪಡೆಯುವುದೇ ದೀಕ್ಷೆಯ ಮೂಲಕ. ಒಂದು ಕಾಲಘಟ್ಟದಲ್ಲಿ  ಜೈನ ಬೌದ್ಧ ವೀರಶೈವಗಳು ದಾರ್ಶನಿಕ ಪಂಥಗಳಾಗಿದ್ದವು. ಈಗಲೂ ಅಲ್ಲಿ ಹೊಸ ಸದಸ್ಯರ ಸ್ವೀಕಾರವನ್ನು `ಮತಾಂತರ’ ಎನ್ನಲಾಗುವುದಿಲ್ಲ. ಧಮ್ಮದೀಕ್ಷೆ ಜಿನದೀಕ್ಷೆ ಲಿಂಗದೀಕ್ಷೆ ಎಂದು ಕರೆಯುವರು. ದೀಕ್ಷೆಯನ್ನು ಆರೂಢರಲ್ಲಿ ಗುರುಬೋಧವೆಚಿದೂ, ಸೂಫಿಗಳಲ್ಲಿ ಬೈಯತ್ ಎಂದೂ ಕರೆಯುವರು. ಗುರುದೀಕ್ಷೆಯ ಬಳಿಕ ವ್ಯಕ್ತಿಯ ಹೆಸರು, ತಂದೆತಾಯಿ, ವೇಷ, ಬದಲಾಗುತ್ತದೆ. ಜಂಗಮರ ಚೆನ್ನವೀರಯ್ಯನು ಸೂಫಿದೀಕ್ಷೆ ಬಳಿಕ ಶಿರಹಟ್ಟಿಯ ಫಕೀರೇಶನಾಗುತ್ತಾನೆ. ಗೋನಾರೆ ಬಡೇಸಾಬನು ದಾಸದೀಕ್ಷೆಯ ಮೂಲಕ ಗೋನಾರೆ ರಾಮದಾಸನಾಗುತ್ತಾನೆ.

ಗುರುದೀಕ್ಷೆಗೆ ಸಾಮಾನ್ಯವಾಗಿ ಎರಡು ಆಶಯಗಳಿರುತ್ತವೆ. ಒಂದು: ಜ್ಞಾನಾರ್ಜನೆ ಮತ್ತು ಅನುಭಾವಿಕ ಸಾಧನೆ ಮಾಡುವುದು. ಉದಾಹರಣೆಗೆ, ಗೋವಿಂದಭಟ್ಟನ ಶಿಷ್ಯನಾದ ಶಿಶುನಾಳ ಶರೀಫ ಅಥವಾ ಸೂಫಿ ನಂಗಾಶಾಹನ ಶಿಷ್ಯನಾದ ಮಹಿಪತಿರಾಯ. ಎರಡು: ಆಧ್ಯಾತ್ಮಿಕ ಸಮಾನತೆಯ ಜತೆಗೆ ಸಾಮಾಜಿಕ ಸಮಾನತೆ ಪಡೆಯುವುದು. ಉದಾಹರಣೆಗೆ, ಶರಣರಾದ ಮಾದಾರ ಚನ್ನಯ್ಯ ಅಥವಾ ಡೋಹರ ಕಕ್ಕಯ್ಯ. ಎಂತಲೇ ಬಸವಣ್ಣ ಲಿಂಗದೀಕ್ಷೆಯನ್ನು ಪಡೆದವರು `ಬ್ರಾಹ್ಮಣ ಮೊದಲಾಗಿ ಅಂತ್ಯಜ ಕಡೆಯಾಗಿ ಶಿವಭಕ್ತರನ್ನೆಲ್ಲ ಒಂದೇ ಎಂಬೆ’ ಎಂದು ಹೇಳಿದನು; ದೀಕ್ಷಿತರ ನಡುವೆ ಸಮಾನತೆ ತರಲು ಸಹಭೋಜನ ಹಾಗೂ  ರಕ್ತಸಂಬಂಧಗಳನ್ನು ಉಪಾಯವಾಗಿ ಅಳವಡಿಸಿದನು. ನಾಥಪಂಥದಲ್ಲಿ ಅವಧೂತನು ದೀಕ್ಷೆ ಪಡೆದ ಬಳಿಕ ಎಲ್ಲ ಜಾತಿಯ ಮನೆಯಲ್ಲಿ ಭಿಕ್ಷೆ ಸ್ವೀಕರಿಸಬೇಕು. ಅವನಿಗೆ ಜಾತಿಕಟ್ಟಿಲ್ಲ. ಧರ್ಮಸ್ವೀಕಾರ ಮಾಡುತ್ತಿರುವ ದಲಿತರು ಇಂದು  ಸವರ್ಣೀಯರ ಮುಂದೆ ಇಡುತ್ತಿರುವ ಬೇಡಿಕೆಗಳಾದರೂ ಸಹಪಂಕ್ತಿ ಭೋಜನ, ವಿವಾಹಸಂಬಂಧ, ಮತ್ತು ಪೂಜೆಯ ಹಕ್ಕು ಇವೇ ಆಗಿರುವುದು ಗಮನಾರ್ಹ.

ವಿಚಿತ್ರವೆಂದರೆ, ದೀಕ್ಷೆಯನ್ನು ಸಮಾನತೆ ವಿರೋಧಕ್ಕಾಗಿ ಕೂಡ ಕೊಡುವುದುಂಟು. ಇದು ಭಾರತೀಯ ಸಮಾಜದ ಜಾತಿಪದ್ಧತಿಯ ವೈರುಧ್ಯಗಳಲ್ಲಿ ಒಂದು. ಕೆಳಜಾತಿಯಲ್ಲಿದ್ದು ಸಾಮಾಜಿಕ ಅಸಮಾನತೆಯಲ್ಲಿ ಇರುವವರು ಪ್ರತಿಭಟಿಸಬಾರದು,ತಮ್ಮ ಅವಸ್ಥೆಯಲ್ಲೆ ಹುಸಿ ಸಮಾನತೆಯಲ್ಲಿ ಬದುಕಬೇಕು ಎಂಬ ಆಶಯದಲ್ಲಿ ಈ ದೀಕ್ಷೆಯ ವ್ಯವಸ್ಥೆ ಹುಟ್ಟಿಕೊಂಡಂತಿದೆ.  ಸಾಮಾನ್ಯವಾಗಿ ಮೇಲ್ಜಾತಿಯ ಗುರುಗಳು ಕೆಳಜಾತಿಯ ಭಕ್ತರಿಗೆ ಕೊಡುವ ಮಂತ್ರದೀಕ್ಷೆ ಭಕ್ತಿದೀಕ್ಷೆ ಇಂತಹವು. ಕನಕದಾಸನು ಪಡೆದ ದಾಸದೀಕ್ಷೆ ಇಂತಹುದು. ಈ ದೀಕ್ಷೆಗೆ ಕೆಲವು ಮಿತಿಗಳಿವೆ. ಅದನ್ನು ಮೀರುವಂತಿಲ್ಲ. ಕನಕದಾಸನು ಕೃಷ್ಣಗುಡಿಯನ್ನು ಪ್ರವೇಶಿಸಲು ಹೋದಾಗ ತಡೆಯಲಾಯಿತು ಎಂಬುದು ಗಮನಾರ್ಹ. ಮತಾಂತರ ವಿರೋಧಿಸುವ ನೀವೇಕೆ ನಮ್ಮನ್ನು ಬ್ರಾಹ್ಮಣ ಜಾತಿಗೆ ಸೇರಿಸಿಕೊಳ್ಳಬಾರದು ಎಂದು ಕೇಳುವವರಿಗೆ, ಉಡುಪಿಯ ಪೇಜಾವರ ಶ್ರೀಯವರು, ’ಅದು ಸಾಧ್ಯವಿಲ್ಲ. ಅಂತಹವರಿಗೆ ನಾವು ಮಂತ್ರದೀಕ್ಷೆ ಕೊಡುತ್ತೇವೆ’ ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ ದೀಕ್ಷೆಯ ಮೂಲಕ ಸಾಮಾಜಿಕ ಸಮಾನತೆ ಮತ್ತು ಆಧ್ಯಾತ್ಮಿಕ ಹಕ್ಕನ್ನು ನೀಡುವ ಗುರುಪಂಥಗಳು ಭಾರತದಲ್ಲಿ ಬಹಳ ಜನಪ್ರಿಯವಾದವು. ಇಸ್ಲಾಂ ಕ್ರೈಸ್ತಧರ್ಮದ ಮಿಶನರಿಗಳಲ್ಲಿ ತಮ್ಮ ಧರ್ಮವೇ ಶ್ರೇಷ್ಠವೆಂಬ ಭಾವನೆಯಿದ್ದು, ಜನರನ್ನು ಪಾಪದಿಂದಲೂ ನರಕದಿಂದಲೂ ಉಳಿಸುವ ಕರುಣೆಯಿಂದ ಧರ್ಮಪರಿವರ್ತನೆ ಮಾಡುವ ಮನೋಧರ್ಮ ಕಾಣುತ್ತದೆ. ಆದರೆ ಗುರುಪಂಥಗಳಲ್ಲಿ ಅದಿಲ್ಲ. ಬದಲಿಗೆ ಇವು ಧರ್ಮ ದೇವರು ಸ್ವರ್ಗ ನರಕ ಕರ್ಮ ಜಾತಿ ವರ್ಣ ಮುಂತಾದ ಸಾಮಾಜಿಕ ಧಾರ್ಮಿಕವಾದ ಪೀಡೆಗಳಿಂದ ಜನರನ್ನು ಮುಕ್ತಗೊಳಿಸಿ, ಒಂದು ಬಗೆಯ ತಾತ್ವಿಕವಾದ ಸಾಧನೆಯ ಮಾರ್ಗದಲ್ಲಿ ಹಚ್ಚಿದವು. ಈಗಲೂ ಗುರುಪಂಥಗಳಲ್ಲಿ ಜಾತಿ ವರ್ಣ ಪದ್ಧತಿಯ ತಿರಸ್ಕಾರವಿದೆ. ಗುರುಪಂಥಗಳಲ್ಲಿ ಅಸ್ಪೃಶ್ಯತೆ ಆಚರಿಸುವವರಿಗೆ, ಸಹಪಂಕ್ತಿ ಊಟ ನಿರಾಕರಿಸುವವರಿಗೆ ಬಿಕ್ಕಟ್ಟು ಮತ್ತು ಸೋಲುಂಟಾಗುವ ಕತೆಗಳನ್ನು ಗಮನಿಸಬೇಕು; ದೀಕ್ಷೆ ಪಡೆದ ಅಸ್ಪೃಶ್ಯರಿಗೆ ಕೆಳಜಾತಿಯವರಿಗೆ ಮುಸ್ಲಿಮರಿಗೆ ಗೆಲುವು ಸಿಕ್ಕುವ ಕತೆಗಳನ್ನು ಗಮನಿಸಬೇಕು. ಗುರುಪಂಥಗಳಲ್ಲಿ ಕಡ್ಡಾಯವಾಗಿ ಪುರೋಹಿತಶಾಹಿಯ ಕಟು ಟೀಕೆಯಿದೆ. ವೇದವೇ ಮೊದಲಾಗಿ ಧರ್ಮಗಳ ಪವಿತ್ರಗ್ರಂಥಗಳ ನಿರಾಕರಣೆಯಿದೆ. ಮಸೀದಿ ಮತ್ತು ಗುಡಿಸಂಸ್ಕೃತಿಯ ನಿರಾಕರಣೆಯಿದೆ. ಅವು ಒಂದರ್ಥದಲ್ಲಿ ನಾಸ್ತಿಕ ಮತ್ತು  ವೈದಿಕ ವಿರೋಧಿಗಳು. ಇಲ್ಲಿ ಗುರು ಮುಖ್ಯ. ಜ್ಞಾನಸಾಧನೆ ಮುಖ್ಯ. ಇವು ದೇಹವಾದಿಗಳು. ದೇಹದ ಮೂಲಕವೇ ಸಾಧನೆಯನ್ನು ಮಾಡಿ ಮುಕ್ತಿಯನ್ನು ಪಡೆಯಬಹುದು ಎಂದು ಹೇಳುವಂತಹವು. ಸಾಧಕರು  ಗುರುವಿನ ಮಾರ್ಗದರ್ಶನದಿಂದ ತಮ್ಮನ್ನು ತಾವು ಅರಿಯಬೇಕು. ಹಾಗೆ ಅರಿತರೆ ಅವರಿಗೆ ಬೇರೆ ದೈವದ ಹಂಗೇ ಬೇಕಿಲ್ಲ. ಸ್ವತಃ ಅವರೇ ದೈವ ಸಮಾನನಾಗುತ್ತಾರೆ ಎಂದು ಈ ಪಂಥಗಳು ಹೇಳಿದವು. ಭಾರತದಲ್ಲಿ ಸಾಮಾಜಿಕವಾಗಿ ದಮನಿತ ಸಮುದಾಯಗಳಿಗೆ ಗುರುಪಂಥಗಳು ಪರ್ಯಾಯ  ಧರ್ಮವನ್ನು ಒದಗಿಸುವ ಮೂಲಕ ಸಾಮಾಜಿಕ ಸಂಚಲನವನ್ನು ಮಾಡಿದ ಬಗೆಯನ್ನು ನಾವಿನ್ನೂ ಅರಿಯಬೇಕಿದೆ. ಇದನ್ನೆಲ್ಲ `ಮತಾಂತರ’ವೆಂಬ ಪರಿಭಾಷೆಯಲ್ಲಿ ಗ್ರಹಿಸಲು ಮತ್ತು ವಿಶ್ಲೇಷಿಸಲು ಸಾಧ್ಯವಿಲ್ಲ. ದೀಕ್ಷೆಯ ಮೂಲಕ ಕೆಳವರ್ಗಗಳಿಗೆ ಸಾಮಾಜಿಕವಾದ ಮೇಲುಚಲನೆಯನ್ನು `ಭಕ್ತಿಪಂಥಗಳು’ ಎಂದು ತಪ್ಪಾಗಿ ಕರೆಯಲಾಗುವ ಗುರುಪಂಥಗಳು ನೀಡಿದವೆಂತಲೇ ಸಾಂಸ್ಥಿಕ ಧರ್ಮಗಳು ಅವನ್ನು ದ್ವೇಷಿಸಿದವು.  ಗುರುಪಂಥಗಳು ಕೂಡ ಸಾಂಸ್ಥಿಕ ಧರ್ಮಗಳ ಕಂತ್ರಾಟುದಾರರನ್ನು ವಿರೋಧಿಸಿದವು.

4. ಮತೀಯ ಹೇರಿಕೆ: ಸಾಂಸ್ಥಿಕ ಧರ್ಮಗಳಲ್ಲಿ ಜನಸಮುದಾಯವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಲು ಧರ್ಮ ದೇವರು ಗುಡಿ ಮಸೀದಿ, ಚರ್ಚ್, ಇವು ಒಂದು ಬಲೆಯಂತೆ ಕೆಲಸ ಮಾಡುತ್ತವೆ. ತಮ್ಮದೇ ಧರ್ಮದಲ್ಲಿರುವ ಬೇರೆಬೇರೆ ಸಮುದಾಯಗಳನ್ನು ನಿರ್ದಿಷ್ಟ ವಿಚಾರಧಾರೆಗೆ ಬದಲಿಸಲು ಯತ್ನಿಸುವ ಎಲ್ಲ ವಿಚಾರಧಾರೆಗಳಲ್ಲೂ ಒಂದು ಬಗೆಯ ತಂತ್ರಗಾರಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹಿಂದುತ್ವವಾದ ಇಲ್ಲವೇ ಮುಸ್ಲಿಮರಲ್ಲಿರುವ ತಬ್ಲೀಗ್ ಪಂಥವು ಬಹುದೊಡ್ಡ ಪ್ರಮಾಣದಲ್ಲಿ ಮತಾಂತರದ ಕೆಲಸದಲ್ಲಿ ತೊಡಗಿವೆ. ಇತರರ ಧಾರ್ಮಿಕ ನಂಬಿಕೆಗಳನ್ನು ಸಹಿಸದ ಇವು ಜನರನ್ನು ತಾವು ಭಾವಿಸುವ ಒಂದು ವಿಚಾರಧಾರೆಗೆ ಓರಿಯಂಟ್ ಮಾಡುತ್ತವೆ. ಹಿಂದುತ್ವವು ಕೆಳಜಾತಿಯ ಜನರನ್ನು ಮೇಲುಜಾತಿಪರವೂ ಪುರುಷವಾದಿಯೂ ಊಳಿಗಮಾನ್ಯ ಪದ್ಧತಿಯೂ ಇರುವ ಒಂದು ಚೌಕಟ್ಟಿನಲ್ಲಿ ಬಂಧಿಸಲು ಯತ್ನಿಸುತ್ತದೆ. ಅದರ ಪ್ರಕಾರ ಜಾತಿಪದ್ಧತಿಯಲ್ಲಿರುವ ಶ್ರೇಣೀಕರಣವು ನೈಸರ್ಗಿಕ. ಅದನ್ನೂ ಅದರ ಭಾಗವಾಗಿರುವ ಕಸುಬನ್ನೂ ಒಪ್ಪಿಕೊಂಡು ಅದರಲ್ಲೇ ತೃಪ್ತಿ ಕಾಣಬೇಕು. ಅದನ್ನು ಬದಲಿಸಲು ಯತ್ನಿಸಬಾರದು. ಬದಲಿಸಿದರೆ ವರ್ಣ ಇಲ್ಲವೆ ಜಾತಿಸಂಕರವಾಗುತ್ತದೆ. ಸಂಕರವು ಸಂಘರ್ಷಕ್ಕೆ ಕಾರಣವಾಗುತ್ತದೆ.  ಇದೊಂದು ಬಗೆಯ ಸಾಮಾಜಿಕ ಮತ್ತು ಆರ್ಥಿಕವಾದ ಚಲನರಹಿತ ಅವಸ್ಥೆ.

ಆದರೆ ಈ ಅವಸ್ಥೆಯಲ್ಲಿ ಉಸಿರುಗಟ್ಟಿದವರಿಗೆ ಕೆಲವು ತಾತ್ಕಾಲಿಕ ಪರಿಹಾರದ ಕಾರ್ಯಕ್ರಮಗಳಿವೆ. ಅವುಗಳಲ್ಲಿ ಒಂದು ಜಾತಿಸಾಮರಸ್ಯ. ಇದು ಅಸಮಾನತೆಯ ಸಂಘರ್ಷ ಹುಟ್ಟಿಸದಂತೆ ಸಹನೆಯನ್ನು ಕಲಿಸುತ್ತದೆ. ಆದರೆ ಯಾವಾಗ ಎಚ್ಚೆತ್ತ ದಲಿತರು ಕೆಳಜಾತಿಗಳು ಬೇರೆ ಧರ್ಮಗಳ ಸ್ವೀಕಾರದ ಮೂಲಕ ಸಮಾನತೆಯನ್ನು ಅರಸಿ ಹೊರಟವೋ, ಆಗ ಈ ಕಾರ್ಯಕ್ರಮಗಳೂ ಕೆಲಸಕ್ಕೆ ಬಾರದಾದವು. ಆಗ ಬ್ರಾಹ್ಮಣವಾದಿ ಹಿಂದುತ್ವವು ಧರ್ಮಪರಿವರ್ತನೆಗೆ ಅವಕಾಶ ಕಲ್ಪಿಸುವ ಎಲ್ಲ ಧರ್ಮಗಳನ್ನು ಹಿಂದೂಗಳ ಶತ್ರು ಎಂದು ಘೋಷಿಸಿತು. ಮುಖ್ಯವಾಗಿ ಇಸ್ಲಾಂ ಕ್ರೈಸ್ತ ಬೌದ್ಧ ಧರ್ಮಗಳು ಅದಕ್ಕೆ ಹಗೆಗಳಾದವು. ಬೌದ್ಧ ಧರ್ಮದ ಬಗ್ಗೆ ಹಿಂದುತ್ವವಾದಿಗಳಲ್ಲಿ ಇರುವ ಆಳವಾದ ಅಸಹನೆಯನ್ನು ಸಾರ್ವಕರ್, ಅರುಣ್ ಶೌರಿ ಮತ್ತು ಭೈರಪ್ಪನವರಲ್ಲಿ (`ಸಾರ್ಥ’ ಕಾದಂಬರಿ) ಕಾಣಬಹುದು. ಧರ್ಮಸ್ವೀಕಾರಗಳನ್ನು ತಡೆಯಲು ಅದು ಅನುಸರಿಸಿದ ಈ ಉಪಾಯವು ಅದರ ಧಾರ್ಮಿಕ ಸಾಮಾಜಿಕ ತಂತ್ರಗಾರಿಕೆಯಾಗಿತ್ತು. ಇದಕ್ಕಾಗಿ ಅದು ಕೆಳಜಾತಿಗಳಿಗೆ ತಮ್ಮ ಧಾರ್ಮಿಕ ನಂಬಿಕೆಗಳ ಬ್ರಾಹ್ಮಣೀಕರಣವನ್ನು ಹೇರಲು ಯತ್ನಿಸಿತು. ಅವುಗಳ ದೈವಪದ್ಧತಿಯನ್ನು, ಆಚರಣ ಲೋಕವನ್ನು ಹಾಗೂ ಆಹಾರ ಸಂಸ್ಕೃತಿಯನ್ನು ಅಂತಿಮವಾಗಿ ಆಲೋಚನಾ ವಿಧಾನವನ್ನು ಬದಲಿಸಲು ಯತ್ನಿಸಿತು. ಹಿಂದುತ್ವದ ಈ ಮತಾಂತರ ಪ್ರಕ್ರಿಯೆಯು ಶತಮಾನಗಳಿಂದ ನಡೆಯುತ್ತಿದೆ. ಇದರ ಪರಿಣಾಮವಾಗಿ ಉಚ್ಚಜಾತಿಯ ಹಿತಾಸಕ್ತಿಗಳಾಗಿ ದಲಿತರು ಕೆಳಜಾತಿಗಳು ಜೀತದವರಾಗಿ ಮಾರ್ಪಟ್ಟಿರುವರು. ಕಾರವಾರದಿಂದ ಹಿಡಿದು ಸುಳ್ಯ ಪುತ್ತೂರಿನ ತನಕ, ಕರ್ನಾಟಕದ ಕರಾವಳಿಯಲ್ಲಿ ಕೆಳಜಾತಿಯ ಜನರ ಬದುಕಿನಲ್ಲಿ ಬ್ರಾಹ್ಮಣ ಪುರೋಹಿತಶಾಹಿಯ ಪ್ರತಿಷ್ಠಾಪನೆಯಾಗಿದೆ. ಈಗ ಅಲ್ಲಿ ಶೂದ್ರರ ಮತ್ತು ದಲಿತರ ಬದುಕಿನಲ್ಲಿ ಹುಟ್ಟು ಮುಟ್ಟು ಲಗ್ನ ಪೂಜೆ ತಿಥಿಗಳಲ್ಲಿ ಅವರ ಕುಲವಿಶಿಷ್ಟವಾದ ಆಚರಣೆಗೆ ಬದಲು ಬ್ರಾಹ್ಮಣ ಪುರೋಹಿತಶಾಹಿ ಆಚರಣೆಗಳಿವೆ. ಅಲ್ಲಿನ ಭೂತಗಳ ದೈವಸ್ಥಾನಗಳ ಮೇಲೆ ಬ್ರಾಹ್ಮಣ ಪುರೋಹಿತಿಕೆಯಿರುವ ದೇವಸ್ಥಾನ ಸಂಸ್ಕೃತಿ ಬಂದಿದೆ; ಬಲಿ ಮತ್ತು ಮಾಂಸಾಹಾರವು ನಿಧಾನವಾಗಿ ಹಿಂಜರಿಯುತ್ತ ಬ್ರಾಹ್ಮಣ ಆಹಾರ ಪದ್ಧತಿ  ಬಂದಿದೆ. ಇದು ಜನರನ್ನು ಅವರ ಸಂಸ್ಕೃತಿಯ ಬೇರುಗಳಿಂದ ಕತ್ತರಿಸುತ್ತಿರುವ ಕ್ರಿಯೆಯಾಗಿದೆ. ಹಿಂದುತ್ವವು ವನವಾಸಿ ಸಂಘಟನೆಯ ಹೆಸರಲ್ಲಿ ಭಾರತದ ಬುಡಕಟ್ಟುಗಳ ಬದುಕಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ರಾಹ್ಮಣೀಕರಣವನ್ನು ತರುತ್ತಿದೆ. ಆರೋಗ್ಯಕರ ದೈವಪದ್ಧತಿ ಮತ್ತು ಆಚರಣೆಗಳನ್ನುಳ್ಳ  ಬುಡಕಟ್ಟುಗಳಲ್ಲಿ ಮೇಲ್ಜಾತಿಯ ಆಚರಣೆ ನಂಬಿಕೆ ಹೇರುವುದರ ವಿರುದ್ಧ, ಬುಡಕಟ್ಟುಗಳಿಗಾಗಿ ಬದುಕನ್ನೇ ಸವೆಸಿದ ವೆರಿಯರ್ ಎಲ್ವಿನ್ ಟೀಕಿಸಿದ್ದರು. ಇದು ಜನರನ್ನು ಅವರ ಸಂಸ್ಕೃತಿಗಳಿಂದ ಮೂಲೋತ್ಪಾಟನೆ ಮಾಡುವ ಮತಾಂತರ ಪ್ರಕ್ರಿಯೆಯಾಗಿದೆ.  ಇಂತಹ `ಮತಾಂತರ’ ಪ್ರಕ್ರಿಯೆ ಮುಸ್ಲಿಮರಲ್ಲೂ ಇದೆ. ತನ್ನದೇ ಆದ ಧಾರ್ಮಿಕ ಇಲ್ಲವೇ ರಾಜಕೀಯ ನಂಬಿಕೆಯನ್ನು ಪ್ರಚಾರ ಮಾಡುತ್ತ ಮುಸ್ಲಿಮರನ್ನು ಮುಸ್ಲಿಮರನ್ನಾಗಿಸುತ್ತೇವೆ ಎಂದು ಹೇಳುತ್ತಿರುವ ತಬ್ಲೀಗ್, ಜಮಾತೆ ಇಸ್ಲಾಮಿ ಹಾಗೂ ಅಹ್ಲೆಹದೀಸ್ ಮುಂತಾದ ಗುಂಪುಗಳು ಕೂಡ ಇದೇ ಕೆಲಸ ಮಾಡುತ್ತಿವೆ. ಇವು ವಿವಿಧ ನಂಬಿಕೆಯುಳ್ಳ ಮುಸ್ಲಿಮರನ್ನು ಒಂದು ನಿರ್ದಿಷ್ಟ ಗ್ರಹಿಕೆ ನಂಬಿಕೆಗೆ ಪರಿವರ್ತನೆ ಮಾಡುತ್ತಿವೆ. ಸೂಫಿ ಆಚರಣೆ ಮೊಹರಂ ಆಚರಣೆಯಿಂದ ವಿಮುಖವಾಗಿಸುತ್ತಿವೆ. ಇದು ಜನರು ಪ್ರತಿರೋಧಕ್ಕಾಗಿಯೋ, ಸ್ವಾಭಿಮಾನದಿಂದಲೋ, ಸಮಾನತೆಗಾಗಿಯೋ ತಮಗೆ ಬೇಕಾದ ಧರ್ಮಗಳನ್ನು ಸ್ವೀಕಾರ ಮಾಡುವುದಕ್ಕಿಂತ ಭಿನ್ನವಾದ ಕ್ರಿಯೆಯಾಗಿದೆ.

4

ಜನ  ತಮ್ಮ ಬದುಕಿನ ಬವಣೆಗಳಿಂದ ಪಾರಾಗಲು, ಜ್ಞಾನಕ್ಕಾಗಿ ಸಾಧನೆಗಾಗಿ ತತ್ವದ ಸೆಳೆತಕ್ಕಾಗಿ ತಮಗೆ ಇಷ್ಟ ಬಂದ ಧರ್ಮ ಇಲ್ಲವೇ ಪಂಥಗಳಿಗೆ ಹೋಗುವುದು ಒಂದು ಕ್ರಮವಾದರೆ, ಬಲಿಷ್ಠರು ದುರ್ಬಲರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮಾಡುವ ಹುನ್ನಾರದ ಭಾಗವಾಗಿರುವ ಮತಾಂತರವು ಇನ್ನೊಂದು ಕ್ರಮ. ಎರಡನೆಯ ಕ್ರಮದಲ್ಲಿ ಧರ್ಮವು ಒಂದು ಗಾಳದಂತೆ ಬಳಕೆಯಾಗುತ್ತದೆ. ಇದನ್ನು ಕುವೆಂಪು ಅವರು `ಬ್ರಾಹ್ಮಣ ಕೂಣಿಯಲ್ಲಿ ಶೂದ್ರಮೀನು’ ಎಂದು ಬರೆದರು. ಕುವೆಂಪು ಅವರು ಕ್ರೈಸ್ತಮಿಶನರಿಗಳನ್ನೂ ಜನರನ್ನು ಬೇಟೆಯಾಡುವ ಬೇಟೆಗಾರರಂತೆ ಚಿತ್ರಿಸಿದರು. ಸಾಮಾಜಿಕ ರಾಜಕೀಯ ಆರ್ಥಿಕ ಹಿತಾಸಕ್ತಿಗಳ ಭಾಗವಾಗಿ ನಡೆಯುವ ಈ ಹುನ್ನಾರದ `ಮತಾಂತರ’ದ ಪರಿಣಾಮವೆಂದರೆ, ದುರ್ಬಲ ವರ್ಗದ ಕೆಳಜಾತಿಯ ಜನರು, ಉಚ್ಚಜಾತಿ ಮತ್ತು ಉಚ್ಚವರ್ಗಗಳ ಹಿತರಕ್ಷಣೆಗಾಗಿ  ಬಂಟರಾಗಿ ಬದಲಾಗುವುದು. ಕರಾವಳಿಯಲ್ಲಿ ಈಚೆಗೆ ನಡೆದ  ಚರ್ಚ್ ದಾಳಿಗಳಲ್ಲಿ ಬಳಕೆಯಾದವರೆಲ್ಲ ಹೀಗೆ ಹಿಂದುತ್ವಕ್ಕೆ ಮತಾಂತರಗೊಂಡ ಕೆಳಜಾತಿಯವರು ಎಂಬುದು ಗಮನಾರ್ಹ. ಆದ್ದರಿಂದ ಭಾರತದ ಅಲ್ಪಸಂಖ್ಯಾತವೂ ತಾರತಮ್ಯವಾದಿಯೂ ಆದ ಹಿಂದುತ್ವಕ್ಕೆ ತನ್ನ ರಾಜಕೀಯ ಧರ್ಮಕ್ಕೆ ಜನರನ್ನು ಹಿಡಿದು ಪಳಗಿಸುವುದು ಒಂದು ರಾಜಕೀಯ ಸಾಮಾಜಿಕ ಕಾರ್ಯಕ್ರಮವಾಗಿದೆ.

ಧರ್ಮದ ಬಲೆಬೀಸಿ ಜನರನ್ನು ಹಿಡಿದು ಪ್ರಾಣಿಗಳಂತೆ ಪಳಗಿಸಿ ಉಪಯೋಗ ಮಾಡಿಕೊಳ್ಳುವ ಈ ಕ್ರಮವನ್ನು ಮನುಷ್ಯರ ಆಯುಧೀಕರಣ ಎನ್ನಬಹುದು. ಜನರನ್ನು ಆಯುಧವನ್ನಾಗಿ ಮಾಡುವುದಕ್ಕಾಗಿ ಹಿಂದುತ್ವವು ಈಚೆಗೆ ಏಕದೇವತಾವಾದವನ್ನು ಅವಲಂಬಿಸುತ್ತಿದೆ. ಇದರಿಂದ  ಬಹುದೇವತಾರಾಧಕ ಭಾರತೀಯ ಸಮಾಜದ ಮೇಲೆ ಏಕದೇವತಾವಾದದ  ಹೇರಿಕೆ ಕೂಡ ಆಗುತ್ತಿದೆ. ಸಂಘಪರಿವಾರದ  ಏಕನಾಯಕತ್ವದ ಕಲ್ಪನೆಗೂ, ಈ ಏಕದೇವತಾವಾದದ ಹೇರುವಿಕೆಗೂ ಆಂತರಿಕ ಸಂಬಂಧವಿದೆ. ವಿಚಿತ್ರವೆಂದರೆ, ಹಿಂದುತ್ವವು ಏಕದೇವತಾವಾದವನನ್ನು ಪಡೆದಿದ್ದು ತಾನೇ ದ್ವೇಷಿಸುವ ಕ್ರೈಸ್ತ ಮತ್ತು ಇಸ್ಲಾಂಗಳಿಂದ. ಹಿಂದುತ್ವ ಹೇರುತ್ತಿರುವ ಆ ಏಕದೈವವೆಂದರೆ ಅಯೋಧ್ಯೆಯ ರಾಮನಾಗಿದೆ. ಈ ರಾಮನು ಕಬೀರ ದಾಸರ, ತುಳಸೀ ದಾಸರ, ರಾಮಾಯಣದರ್ಶನದ ಅಥವಾ ಭಾರತದ ಜನಪದ ರಾಮಾಯಣಗಳಲ್ಲಿ ಇರುವ ಮಾನವೀಯ ರಾಮನಲ್ಲ. ಸಂಘಪರಿವಾರದ ರಾಜಕೀಯ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸಲು ರೂಪುಗೊಂಡ ಬಿಲ್ಲು ಸೆಳೆದ ತಲೆಕೆದರಿದ ರಾಮ. ಭಾರತದ ಬೇರೆಬೇರೆ ಸಮುದಾಯಗಳು ರೂಢಿಸಿಕೊಂಡಿರುವ ದೇವತೆಗಳನ್ನು ನಿಧಾನವಾಗಿ ಅಂಚಿಗೆ ಸರಿಸುತ್ತ ತಾನೊಬ್ಬನೇ ಮೆರೆಯುತ್ತಿರುವ ರಾಮ. ಹಿಂದುತ್ವವಾದವು ನಮ್ಮ ದೇವರುಗಳನ್ನೂ ಮತಾಂತರಗೊಳಿಸಿಬಿಟ್ಟಿದೆ. ಈ ಮಿಲಿಟಂಟ್ ರಾಮನ ಹೇರಿಕೆ ಎಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ, ಹಿಮಾಲಯದ ಶಿವಸಂಸ್ಕೃತಿಯ ಕ್ಷೇತ್ರಗಳಾದ ಹರಿದ್ವಾರ, ಹೃಷಿಕೇಶ, ಮಣಿಕರ್ಣಿಕಾಗಳಲ್ಲಿ ಕೂಡ `ಜೈಶ್ರೀರಾಂ’ ಘೋಷಣೆಯು ಕಾಣುತ್ತಿದೆ.

ಬಹುಶಃ ಈ ಉಗ್ರಗಾಮಿ ರಾಮನನ್ನು ಬಹುಧರ್ಮೀಯ ಭಾರತದ ಮೇಲೆ ಹಿಂದುತ್ವವು ಹೇರಲು ಆಳವಾದ ಯೋಜನಾಬದ್ಧವಾದ ಒಂದು ಸಾಮಾಜಿಕ ರಾಜಕೀಯ ಕಾರಣವಿದೆ. ಅದೆಂದರೆ ಈ ರಾಮನು ಬ್ರಾಹ್ಮಣ ಹಿತಕ್ಕಾಗಿ ಶೂದ್ರ ಶಂಬೂಕನನ್ನು ಸಂಹರಿಸಿದವನು; ವಾನರಕುಲವನ್ನು ಅವರೊಳಗಿನ ಅಂತಃಕಲಹ ಬಳಸಿಕೊಂಡು ಹಿತಾಸಕ್ತಿ ಸಾಧನೆಗಾಗಿ ಅವರನ್ನು ಆಯುಧವಾಗಿಸಿಕೊಂಡವನು. ಇದು ಆಧುನಿಕ ಕಾಲದ ಹಿಂದುತ್ವದ ಸಮಾಜಶಾಸ್ತ್ರಕ್ಕೆ ಪೂರಕವಾಗಿದೆ. ಭಾರತದ ಕೆಳಜಾತಿಯ ಜನರನ್ನು ರಾಮನ ಭಕ್ತರು ಇಲ್ಲವೇ ಸೈನಿಕರಾಗಿಸುವುದು ಎಂದರೆ, ಹನುಮನಂತೆ ತನ್ನ ಕುಲದವರಿಗೆ  ಹಗೆಯಾಗುವುದು ಮತ್ತು ಉಚ್ಚವರ್ಣದವರ ಸೇವೆಗಾಗಿ ತನ್ನನ್ನು ಸರ್ಮಪಿಸಿಕೊಳ್ಳುವುದು. ಹೀಗೆ ಉಚ್ಚಜಾತಿಯವರ ಹಿತರಕ್ಷಣೆಗೆ ತಮ್ಮನ್ನು ಸರ್ಮಪಿಸಿಸಕೊಂಡ ಶೂದ್ರರು ಇವತ್ತು ಭಜರಂಗದಳದಲ್ಲಿದ್ದಾರೆ. ಭಜರಂಗದಳವು ಹಿಂದುತ್ವ ಮಾಡಿರುವ ಮತಾಂತರ ಕಾರ್ಯಕ್ರಮದ ಬಹುದೊಡ್ಡ ಫಲವಾಗಿದೆ.

5

ಹಿಂದೂ ಸಮಾಜದೊಳಗಿನ ಸಾಮಾಜಿಕ ವೈರುಧ್ಯಗಳೇ ಧರ್ಮಪರಿವರ್ತನೆಗೆ ಮೂಲಭೂತ ಕಾರಣವೆಂಬುದು ಹಿಂದುತ್ವಕ್ಕೆ ತಿಳಿದಿದೆ. ಪೂರ್ವಬಂಗಾಲದಲ್ಲಿ (ಈಗಿನ ಬಾಂಗ್ಲಾದೇಶದಲ್ಲಿ) ಹುಟ್ಟಿ ಬೆಳೆದ ಸ್ವಾಮಿ ವಿವೇಕಾನಂದರ ಪ್ರಕಾರ, ಪೂರ್ವಬಂಗಾಳದಲ್ಲಿ ರೈತಾಪಿ ಮತ್ತು ದುಡಿಯುವ ವರ್ಗಗಳ ಮೇಲೆ ಅಲ್ಲಿನ ಪುರೋಹಿತಶಾಹಿ ಮತ್ತು ಜಮೀನುದಾರಿ ಪದ್ಧತಿ ಹಾಕಿದ ಅಸಹನೀಯ ಒತ್ತಡವೇ  ಜನಸಮುದಾಯಗಳು ಇಸ್ಲಾಂ ಸ್ವೀಕರಿಸಲು ಕಾರಣವಾಯಿತು. ಜಾತಿಪದ್ಧತಿಯ ತಾರತಮ್ಯವುಳ್ಳ ಸಮಾಜದಲ್ಲಿ ಸಣ್ಣಪುಟ್ಟ ಕಾರಣಕ್ಕಾಗಿ ವಿಧಿಸಲಾಗುವ ಬಹಿಷ್ಕಾರಗಳು ಕೂಡ ಹೊಸಧರ್ಮ ಸ್ವೀಕರಣೆಗೆ ಕಾರಣವಾಗುತ್ತವೆ. ಜಾತಿವ್ಯವಸ್ಥೆಯ ಹಿಂದೂ ಧರ್ಮದಲ್ಲಿ ಹೊರಹೋಗಲು ಬಹಳ ದಾರಿಗಳಿವೆ.  ಒಳನುಸಿಯಲು ಸಣ್ಣಕಿಂಡಿಯೂ ಇಲ್ಲ. ಈ ಏಕಮುಖಿ ವ್ಯವಸ್ಥೆಯೇ ಚಾರಿತ್ರಿಕವಾಗಿ ಭಾರತದಲ್ಲಿ ಹೊರಗಿನಿಂದ ಜನರನ್ನು ದೀಕ್ಷೆಯ ಮೂಲಕ ಸ್ವೀಕಾರ ಮಾಡುವ ಧರ್ಮ ಮತ್ತು ಪಂಥಗಳ ಹುಟ್ಟಿಗೆ ಕಾರಣವಾಯಿತು. ಈಗಲೂ ದೊಡ್ಡಕಾರಣವಾಗಿರುವುದು ಇದುವೇ. ಮಿಶನರಿಗಳ ಪ್ರಚಾರವು ಸಣ್ಣಕಾರಣವಾಗಿದೆ. ಇದು ಹಿಂದುತ್ವಕ್ಕೆ ಗೊತ್ತಿದೆ. ಜತೆಗೆ ಜಾತಿವ್ಯವಸ್ಥೆಯ ಸಮಾಜದಲ್ಲಿ ವ್ಯಕ್ತಿಗಳು ಎಷ್ಟೇ ಗಣ್ಯರಾಗಿರಬಹುದು, ಸಿರಿವಂತರಾಗಿರಬಹುದು, ಸಾಮಾಜಿಕವಾಗಿ ಅವರು ಮೇಲುಕೀಳಿನ ಮನೋಭಾವದಿಂದ ಬಿಡುಗಡೆ ಪಡೆಯುವುದು ಕಷ್ಟ. ಆದರೆ ಒಮ್ಮೆ ಧರ್ಮ ಬದಲಿಸಿದರೆ, ಮಾನಸಿಕವಾಗಿ ಈ ಶ್ರೇಣೀಕರಣದ ಮನೋಭಾವದಿಂದ ಬಹುಮಟ್ಟಿಗೆ ಹೊರಬರುತ್ತಾರೆ ಎನ್ನುವುದು ಕೂಡ ಹಿಂದುತ್ವಕ್ಕೆ ಮನವರಿಕೆಯಾಗಿದೆ.

ಭಾರತದ ಜಾತಿಪದ್ಧತಿಯ ಸಾಮಾಜಿಕ ವೈರುಧ್ಯವನ್ನು ಸಾಮಾಜಿಕ ಸಮಾನತೆಯ ನೆಲೆಯಲ್ಲಿ ಪ್ರಾಮಾಣಿಕವಾಗಿ ಬಿಡಿಸಬಹುದು. ಆದರೆ ಈ ಮೂಲಭೂತ ವೈರುಧ್ಯವನ್ನು ಬಿಡಿಸಲು ಹಿಂದುತ್ವವು ಮುಂದಾಗುತ್ತಿಲ್ಲ. ಯಾಕೆಂದರೆ, ಹಾಗೆ ಬಿಡಿಸಿದರೆ ಉಚ್ಚವರ್ಗಗಳ ಸಾಮಾಜಿಕ ಯಜಮಾನಿಕೆ ಕಳೆದುಹೋಗುತ್ತದೆ. ಅದರ ವರ್ಗಹಿತಾಸಕ್ತಿ ಇದನ್ನು ಆಗಗೊಡುತ್ತಿಲ್ಲ. ಆದರೆ ವೈರುಧ್ಯವನ್ನು ಬಗೆಹರಿಸದಿದ್ದರೆ ಧರ್ಮಸ್ವೀಕಾರದ ಪ್ರಕ್ರಿಯೆ ತಡೆಯಲು ಸಾಧ್ಯವಾಗುವುದಿಲ್ಲ. ಹಿಂದುತ್ವವು ಸರ್ವ ಹಿಂದೂಗಳಲ್ಲಿ ಸೋದರತೆಯ ಮಾತಾಡುತ್ತದೆ. ಅಸ್ಪೃಶ್ಯತೆಯು ಕಳಂಕ ಎಂದು ತಾತ್ವಿಕವಾಗಿ ಒಪ್ಪುತ್ತದೆ. ಆದರೆ ಕೆಳಜಾತಿಯವರು ಮತ್ತು ದಲಿತರು ಸಹಪಂಕ್ತಿ ಭೋಜನಕ್ಕೆ, ಮಠಗಳಿಗೆ ಉತ್ತರಾಧಿಕಾರಿಯಾಗುವುದಕ್ಕೆ, ಬ್ರಾಹ್ಮಣ ಜಾತಿಗೆ ಮತಾಂತರವಾಗುವುದಕ್ಕೆ, ರಕ್ತಸಂಬಂಧ ಬೆಳೆಸುವುದಕ್ಕೆ ಬೇಡಿಕೆ ಇಡುತ್ತಿದ್ದಂತೆ ಅಸಹಾಯಕಗೊಂಡು ಏನೇನೊ ನೆವಗಳನ್ನು ಹೇಳಿ ತಪ್ಪಿಸಿಕೊಳ್ಳತೊಡಗುತ್ತದೆ. ಇದು ನಿಜವಾಗಿ ಹಿಂದುತ್ವದ ಬಿಕ್ಕಟ್ಟು.

ಈ ಬಿಕ್ಕಟ್ಟಿನಿಂದ ಪಾರಾಗಲು ಅದು ಸಮಾನತಾ ನೆಲೆಯ ನಿಜವಾದ ಸಮಾಜ ಸುಧಾರಣೆಯ ಬದಲಿಗೆ ಎರಡು ಅಡ್ಡಮಾರ್ಗಗಳನ್ನು ಅನುಸರಿಸುತ್ತಿದೆ. 1. ಜಾತಿವ್ಯವಸ್ಥೆ ಇಟ್ಟುಕೊಂಡೇ ಅದರೊಳಗೆ ಸಂಘರ್ಷವಿಲ್ಲದೆ ಬದುಕುವ ಯಥಾಸ್ಥಿತಿವಾದಿ ಸಾಮರಸ್ಯವಾದದ ಪರ್ಯಾಯ ವನ್ನು ಮಂಡಿಸುವುದು. ಈ  ಪರ್ಯಾಯದ ಭಾಗವಾಗಿ, ಕಳೆದೊಂದು ದಶಕದಿಂದ ಭಾರತದ ತುಂಬ ರಾಮನು ಹನುಮಂತನನ್ನು ಅಪ್ಪಿಕೊಂಡಿರುವ ಚಿತ್ರಗಳು, ಶಿಲ್ಪಗಳು ದೊಡ್ಡಪ್ರಮಾಣದಲ್ಲಿ ಸೃಷ್ಟಿಯಾಗಿವೆ. ಹನುಮಂತನನ್ನು ದೊಡ್ಡ ಸಂಕೇತವಾಗಿ ಬೆಳೆಸುತ್ತಿರುವ ಹಿಂದೆ ಅಯೋಧ್ಯೆಯಲ್ಲಿ ರಾಮನ ಗುಡಿಕಟ್ಟುವ ಅಜೆಂಡಾ ಮಾತ್ರ ಇಲ್ಲ. ಉಚ್ಚಜಾತಿಗಳು ಕೆಳಜಾತಿಗಳನ್ನು ತಮ್ಮ ಹಿಡಿತದಲ್ಲೇ ಇರಿಸಿಕೊಳ್ಳುವ ಸೋಶಿಯಲ್ ಇಂಜಿನಿಯರಿಂಗ್ ಕೂಡ ಇದೆ. ಕೆಳಜಾತಿಯವರನ್ನು ಆಯುಧವಾಗಿಸಿಕೊಳ್ಳುವ ಆಶಯವಿದೆ. 2. ಹಿಂದೂಗಳಿಗೆ ಮತಾಂತರ ಮಾಡುವ ಧರ್ಮಗಳನ್ನು ಮತ್ತು ಆ ಧಾರ್ಮಿಕ ಸಮುದಾಯಗಳನ್ನು ಶತ್ರುವನ್ನಾಗಿ ಕಟ್ಟಿಕೊಡುವುದು. ಆದರೆ ಅದು ವೈರುಧ್ಯಗಳಿಂದ ಹೊರಬರಲು ಅನುಸರಿಸುತ್ತಿರುವ ಈ ಸಾಮಾಜಿಕ ರಾಜಕೀಯ ತಂತ್ರಗಳು ಮೂಲಭೂತ ಸಮಸ್ಯೆಯನ್ನು ಹಾಗೆಯೇ ಉಳಿಸುತ್ತವೆ ಮತ್ತು ಧರ್ಮಪರಿವರ್ತನೆಯ ಪ್ರಕ್ರಿಯೆ ಭಾರತದಲ್ಲಿ ಮುಂದುವರೆಯುತ್ತದೆ.

6

ಕೊನೆಗೂ ಕಾಡುವ ಪ್ರಶ್ನೆಯೆಂದರೆ, ಕರ್ನಾಟಕದಲ್ಲಿ ಮತಾಂತರದ  ಚರ್ಚೆಯನ್ನು ಈ ಕಾಲಘಟ್ಟದಲ್ಲಿ ಯಾಕೆ ಎಬ್ಬಿಸಲಾಗಿದೆ ಎನ್ನುವುದು. ಇದೊಂದು ಚಿದಂಬರ ರಹಸ್ಯದ ಪ್ರಶ್ನೆ. ಮತಾಂತರದ ಚರ್ಚೆ ನಿಜವಾಗಿಯೂ ದೇಶದ ಬಿಕ್ಕಟ್ಟಿನಿಂದ ಹುಟ್ಟಿದ್ದಲ್ಲ. ಕೆಳಜಾತಿಯವರ ತಲ್ಲಣಗಳಿಂದಲೂ ಹುಟ್ಟಿದ್ದಲ್ಲ. ಬದಲಿಗೆ ಅದು ಉಚ್ಚಜಾತಿಯವರ ಸಂಕಟಗಳಿಂದ ಹುಟ್ಟಿದ್ದು. ಹಿಂದುತ್ವದ ಬಿಕ್ಕಟ್ಟುಗಳಿಂದ ಹುಟ್ಟಿದ್ದು. ಈಗ ಸರ್ಕಾರ ನಡೆಸುತ್ತಿರುವ ಪಕ್ಷದ ಬಿಕ್ಕಟ್ಟಿನಿಂದ ಹುಟ್ಟಿದ್ದು. ವಿಚಿತ್ರವೆಂದರೆ, ತಮ್ಮ ಮಕ್ಕಳನ್ನು ಕ್ರೈಸ್ತ ಧರ್ಮವಿರುವ ಬಂಡವಾಳಶಾಹಿ ದೇಶಗಳಿಗೆ ಕಳಿಸಿ, ಅಲ್ಲಿಯೇ ನೆಲೆಸಲು ವ್ಯವಸ್ಥೆ ಮಾಡುವ ಜನರೇ, ಇವತ್ತು ಧರ್ಮ ಪರಿವರ್ತನೆಯ ಪ್ರಶ್ನೆಯನ್ನು ಎತ್ತುತ್ತಿರುವುದು. ಕ್ರೈಸ್ತರಾಗಿದ್ದ ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಚಾರಿತ್ರಿಕ ಕಾರಣದಿಂದ ನಮಗೆ ಬಂದಿರುವ ಆಧುನಿಕತೆ, ತಂತ್ರಜ್ಞಾನ, ವಿಜ್ಞಾನಗಳ ದೊಡ್ಡ ಫಲಾನುಭವಿ ವರ್ಗಗಳೇ ಇವತ್ತು ಕ್ರೈಸ್ತಧರ್ಮವು ಭಾರತಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಮನಗಾಣದೆ ಅದನ್ನು ಶತ್ರುವಾಗಿ ನೋಡುತ್ತಿರುವುದು; ಬಾಸೆಲ್ ಮಿಶನ್ನಿನ ಪಾದ್ರಿಗಳು ಬಾರದೆ ಇದ್ದಿದ್ದರೆ ಇವತ್ತಿನ ಕರಾವಳಿಯಲ್ಲಿರುವ ಆಧುನಿಕತೆ ಈ ಪ್ರಮಾಣದಲ್ಲಿ ಇರುತ್ತಿರಲಿಲ್ಲ. ನಿಜವಾಗಿಯೂ ಕರ್ನಾಟಕವು ಅನೇಕ ಮೂಲಭೂತವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವೆಂದರೆ, ರೈತರ ಆತ್ಮಹತ್ಯೆ,  ಗಣಿಲೂಟಿ, ಹಣಚೆಲ್ಲಿ ಮತದಾರರನ್ನು ಎಮ್ಮೆಲ್ಲೆಗಳನ್ನು ಖರೀದಿ ಮಾಡುವ ಪ್ರಜಾಪ್ರಭುತ್ವ. ಕೈಗಾರಿಕೆಗಳಿಗೆ ರೈತರ ಭೂಮಿ ಕಿತ್ತುಕೊಡುತ್ತಿರುವ ಎಸ್ಇಜೆಡ್ ಆರ್ಥಿಕ ನೀತಿ, ಜನ ಬಿಪಿಎಲ್ ಕಾರ್ಡನ್ನು ಜೀವನ್ಮರಣದ ಪ್ರಶ್ನೆಯನ್ನಾಗಿ ಮಾಡಿಕೊಂಡು ಹೋರಾಡುತ್ತಿರುವುದು ಇತ್ಯಾದಿ. ಇಂತಹ ಉರಿಯುವ ಸಮಸ್ಯೆಗಳನ್ನು ಬಿಟ್ಟು ಮತಾಂತರವನ್ನು ದೊಡ್ಡ ಸಮಸ್ಯೆಯೆಂದು ಮಂಡಿಸುವಲ್ಲಿಯೇ ಸಮಾಜವಿರೋಧಿ ರಾಜಕಾರಣವಿದೆ. ನಿಜವಾದ ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಆರಂಭಿಸುವುದೇ ಇದಕ್ಕೆ ಉತ್ತರವಾಗಿದೆ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.